ಶುಕ್ರವಾರ, ಆಗಸ್ಟ್ 7, 2026

ಸುಂದರೀಶತಕ -೭೫

ಸಂಸ್ಕೃತ ಮೂಲ 

ಯಾವತ್ಪತತಿ ನ ಚರಣಂ ಛಾಯಾ ದುರ್ವಾರವೈರಿಣೀ ಶಿರಸಿ /
ಜ್ಯೋತ್ಸ್ನಾಭಿಸಾರವೇಷ: ಸಹಚರಿ ನೇಶ: ಕೃತಾರ್ಥಯಿತುಮ್ //

ಕನ್ನಡ ಅನುವಾದ 

   ನಾಯಕಿಯು ತನ್ನ ಸಖಿಗೆ ಹೇಳುತ್ತಾಳೆ, ' ಎಲೈ ಸಹಚರಿ! ಎಲ್ಲಿಯವರೆಗೆ ತಡೆಯಲಾಗದ ವೈರಿಯಾದ ನನ್ನ ನೆರಳು, ಅದರ ತಲೆಯಲ್ಲಿ ನನ್ನ ಪಾದವಿರುವಂತೆ ಬೀಳುವುದಿಲ್ಲವೋ, ಅಲ್ಲಿಯವರೆಗೆ ನನ್ನ ಈ ಜ್ಯೋತ್ಸ್ನಾಭಿಸಾರವೇಷ ನನ್ನ ಪ್ರಿಯತಮನನ್ನು ಭೇಟಿಯಾಗುವ ನನ್ನ ಆಸೆಯನ್ನು ಕೃತಾರ್ಥಗೊಳಿಸುವುದಿಲ್ಲ!

    ಇಲ್ಲಿ ಕವಿಯು ಹಿಂದಿನ ಶ್ಲೋಕದ ಭಾವವನ್ನೇ ಮುಂದುವರೆಸಿದ್ದಾನೆ. ನಾಯಕಿಯು ಬೆಳದಿಂಗಳ ರಾತ್ರಿಯಲ್ಲಿ ತಾನು ಅದಕ್ಕೆ ಒಪ್ಪುವಂತೆ ಬಿಳಿಯ ವೇಷದಲ್ಲಿ ಜ್ಯೋತ್ಸ್ನಾಭಿಸಾರಿಣಿಯಾಗಿ ಹೊರಟರೂ ಅವಳ ನೆರಳನ್ನೇ ಯಾರಾದರೂ ನೋಡಿ ಅವಳನ್ನು ಗುರುತಿಸಬಹುದೆಂದು ಅವಳಿಗೆ ಅನಿಸಿದೆ. ಹಾಗಾಗಿ ಆ ನೆರಳನ್ನೇ ತನ್ನ ತಡೆಯಲಾಗದ ಶತ್ರು ಎಂದು ಭಾವಿಸುತ್ತಾ ಆ ನೆರಳು ಅಡಗುವವರೆಗೂ ತಾನು ಹೋಗಲಾಗುವುದಿಲ್ಲವೆಂದು ಸಖಿಗೆ ಹೇಳುತ್ತಿದ್ದಾಳೆ. ಅವಳ ನೆರಳು ಅದರ ತಲೆಯಲ್ಲಿ ತನ್ನ ಪಾದ ಇರುವಂತೆ ಬೀಳುವುದು ಎಂದರೆ ತನ್ನ ಬುಡಕ್ಕೇ ಬಂದು ಇತರರಿಗೆ ಕಾಣದಂತಾಗುವುದು ಎಂದು ಅರ್ಥ. ಅದು ಆಗಬೇಕಾದರೆ ಚಂದ್ರನು ಅವಳ ನೆತ್ತಿಯ ಮೇಲೆ ಬರಬೇಕು. ಅಂದರೆ ಸುಮಾರು ಮಧ್ಯರಾತ್ರಿ ಆಗಬೇಕು. ಅಲ್ಲಿಯವರೆಗೂ ತಾನು ಈ ಜ್ಯೋತ್ಸ್ನಾಭಿಸಾರವೇಷದಲ್ಲಿದ್ದರೂ ತನ್ನ ಪ್ರಿಯತಮನನ್ನು ನೋಡಲು ಹೋಗಲಾಗುವುದಿಲ್ಲ ಎಂದು ತನ್ನ ಸಖಿಗೆ ನಾಯಕಿಯು ಖಿನ್ನಳಾಗಿ ಹೇಳುತ್ತಿದ್ದಾಳೆ. ಚಂದ್ರನು ಅವಳ ನೆತ್ತಿಯ ಮೇಲೆ ಬಂದಾಗ, ಹಾಗೂ ಅವಳ ಶತ್ರುವಿನಂತಿರುವ ನೆರಳು ಅವಳ ಬುಡಕ್ಕೆ ಬಂದಾಗ, ಅವಳು ಆ ತನ್ನ ಶತ್ರು ನೆರಳಿನ ತಲೆಯ ಮೇಲೆ ತನ್ನ ಪಾದವನ್ನು ಇರಿಸಿ ಜಯ ಸಾಧಿಸಿದಂತೆಯೂ ಇಲ್ಲಿ ಸೊಗಸಾದ ಕಲ್ಪನೆ ಮಾಡಿದ್ದಾನೆ ಕವಿ!

ಸುಂದರೀಶತಕ -೭೪

ಸಂಸ್ಕೃತ ಮೂಲ 

ಸಿತವಸನಮೌಕ್ತಿಕಾವಲಿಚಂದನಚರ್ಚಾಸಹಾಯಶಾಲಿನ್ಯಾ: /
ಜ್ಯೋತ್ಸ್ನಾಭಿಸಾರಿಣಿ ತವ ಚ್ಛಾಯಾ ಪರಿಪಂಥಿನೀ ಭವತಿ //

ಕನ್ನಡ ಅನುವಾದ 

   ' ಬಿಳಿಯ ವಸ್ತ್ರವನ್ನುಟ್ಟು, ಬಿಳಿಯ ಮುತ್ತಿನ ಹಾರ ಧರಿಸಿ, ಚಂದನವನ್ನು ಪೂಸಿಕೊಂಡು ಹೋಗುತ್ತಿರುವ ಎಲೈ ಜ್ಯೋತ್ಸ್ನಾಭಿಸಾರಿಣಿ! ನಿನ್ನ ನೆರಳೇ ನಿನಗೆ ಶತ್ರುವಾಗುತ್ತದೆ!'
    ಅಭಿಸಾರಿಕೆಯರನ್ನು ವರ್ಣಿಸುತ್ತಾ ಕವಿಯು ಇನ್ನೊಂದು ಸ್ವಾರಸ್ಯಕರ ಶೃಂಗಾರ ಪದ್ಯವನ್ನು ರಚಿಸಿದ್ದಾನೆ. ಅಭಿಸಾರಿಕೆಯೆಂದರೆ ಯಾರಿಗೂ ತಿಳಿಯದಂತೆ ತನ್ನ ಪ್ರಿಯತಮನನ್ನು ಗುಟ್ಟಾಗಿ ಭೇಟಿಯಾಗಲು ಸಂಕೇತ ಸ್ಥಳಕ್ಕೆ ಹೋಗುವ ನಾಯಕಿ.‌ ಇಲ್ಲಿ ಒಬ್ಬ ನಾಯಕಿಯು ಬೆಳದಿಂಗಳ ರಾತ್ರಿಯಲ್ಲಿ ಹಾಗೆ ಹೋಗುತ್ತಿದ್ದಾಳೆ. ಸಾಮಾನ್ಯವಾಗಿ ಅಭಿಸಾರಿಕೆಯರಿಗೆ ಬೆಳದಿಂಗಳೆಂದರೆ ಭಯ ಹಾಗೂ ದ್ವೇಷ! ಏಕೆಂದರೆ ಚಂದ್ರನ ಬೆಳದಿಂಗಳಲ್ಲಿ ತಾವು ಹೋಗುತ್ತಿರುವುದು ಇತರರಿಗೆ ಕಂಡುಬಿಡುತ್ತದೆ! ಆದ್ದರಿಂದ ಅವರು ಆದಷ್ಟು ಕತ್ತಲಿನಲ್ಲೇ ಹೋಗುತ್ತಾರೆ. ಆದರೆ ಇಲ್ಲಿ ನಾಯಕಿಯು ಒಂದು ಉಪಾಯ ಮಾಡಿದ್ದಾಳೆ. ಬೆಳದಿಂಗಳಗೆ ಸರಿಹೊಂದುವಂತೆ ಬಿಳಿಯ ವಸ್ತ್ರವನ್ನುಟ್ಟು, ಬಿಳಿಯ ಮುತ್ತಿನ ಹಾರ ಧರಿಸಿ, ಬಿಳಿಯ ಚಂದನವನ್ನು ಮೈಗೆ ಪೂಸಿಕೊಂಡು, ತಾನು ಬೆಳದಿಂಗಳಿನೊಂದಿಗೆ ಒಂದಾಗಿ ಕಾಣುತ್ತಾ ಹೋಗುತ್ತಿದ್ದಾಳೆ! ಇದರಿಂದ ಅವಳು ತಾನು ಪ್ರತ್ಯೇಕವಾಗಿ ಯಾರಿಗೂ ಕಾಣುವುದಿಲ್ಲ ಎಂದು ಭಾವಿಸಿದ್ದಾಳೆ. ಹಾಗಾಗಿಯೇ ಕವಿಯು ಅವಳನ್ನು ಜ್ಯೋತ್ಸ್ನಾಭಿಸಾರಿಣಿ ಎಂದು ಕರೆದಿದ್ದಾನೆ. ಆದರೆ ಅವಳ ನೆರಳು ಬೀಳುವುದಲ್ಲ! ಅದನ್ನು ಯಾರಾದರೂ ನೋಡಬಹುದು! ಅದನ್ನೇ ಕವಿ ಇಲ್ಲಿ ಅವಳಿಗೆ ನಿನ್ನ ನೆರಳೇ ನಿನಗೆ ಶತ್ರುವಾಗುತ್ತದೆ ಎಂದು ಹೇಳುತ್ತಾನೆ! ಅವಳಿಗೂ ತನ್ನ ನೆರಳನ್ನು ನೋಡಿ ಸ್ವಲ್ಪ ಭಯವಾಗಿರುತ್ತದೆ! 

ಮಂಗಳವಾರ, ಆಗಸ್ಟ್ 4, 2026

ಸುಂದರೀಶತಕ-೭೩

ಸಂಸ್ಕೃತ ಮೂಲ 

ಅತಿಮಂದವರ್ಷದಂಬುದಶೀಕರಶಿಶಿರಾರ್ದ್ರಸಾಂದ್ರವಸನಾಯಾ: /
ಆಕಸ್ಮಿಕಾಗತಾಯಾ: ಕಂಠಗ್ರಹಣಫಲಂ ಜನುಷ: //

ಕನ್ನಡ ಅನುವಾದ 

   ' ಮೇಘಗಳು ಬಹು ಮೆಲ್ಲನೆ ಮಳೆ ಸುರಿಸುತ್ತಿರಲು, ತನುವು ತಂಪಾಗಿ, ಆರ್ದ್ರವಾಗಿ, ವಸ್ತ್ರಗಳು ಮೈಗೆ ಅಂಟಿಕೊಳ್ಳುವಂತಾಗಿದ್ದ ಸ್ಥಿತಿಯಲ್ಲಿ ಆಕಸ್ಮಿಕವಾಗಿ ಆಗಮಿಸಿದ ಪ್ರಿಯತಮೆಯನ್ನು ಕಂಠಾಲಿಂಗನ ಮಾಡಿಕೊಂಡ ಪ್ರಿಯತಮನಿಗೆ ಅದು ಅವನ ಜನ್ಮದ ಪುಣ್ಯಫಲ!' 
     ಕವಿಯು ಇಲ್ಲಿ ಸೊಗಸಾದ ಉತ್ಕಟ ಪ್ರೇಮದ ರಮ್ಯ ಶೃಂಗಾರ ಸನ್ನಿವೇಶವನ್ನು ಕಲ್ಪಿಸಿದ್ದಾನೆ! ಬಹಳ ಸಣ್ಣಗೆ ಮಳೆ ಬರುತ್ತಿದೆ. ಜೋರಾದ ಮಳೆಯಲ್ಲಿ ಹೊರಗೆ ಹೋಗಲು ಕಷ್ಟವಾಗುತ್ತದೆ ಹಾಗೂ ಭಯವೂ ಆಗುತ್ತದೆ. ಆದರೆ ಇಂಥ ಮಂದಮಳೆಯಲ್ಲಿ ವಿಹಾರ ಹೋಗುವುದು ಹಿತವಾಗಿರುತ್ತದೆ. ಅದರಲ್ಲೂ ಸಂಗಾತಿಯೊಂದಿಗೆ ವಿಹರಿಸಿದರೆ ಅದರ ಸೊಗಸೇ ಬೇರೆ! ಇಲ್ಲಿ ತನ್ನ ಪ್ರಿಯತಮನನ್ನು ನೋಡಲು ಅವನ ಪ್ರಿಯತಮೆಯು ಅವರ ನಿತ್ಯ ಸಂಕೇತ ಸ್ಥಳಕ್ಕೆ ಬಂದಿದ್ದಾಳೆ. ಆದರೆ ಅವನು ಅವಳಿಗೆ ಬರಲು ಹೇಳಿಲ್ಲ. ಹಾಗಾಗಿ ಅವಳು ಆಕಸ್ಮಿಕವಾಗಿ ಬಂದಿದ್ದಾಳೆ. ಮೊದಲೇ ರಮ್ಯ ವಾತಾವರಣ. ಈಗ ಪ್ರಿಯತಮೆಯೂ ಬಂದಿದ್ದಾಳೆ! ಮಳಯಿಂದ ನೆನೆದು ತಂಪಾಗಿ, ಆರ್ದ್ರವಾಗಿ, ವಸ್ತ್ರಗಳು ಮೈಗೆ ಅಂಟಿಕೊಂಡಿರುವಂಥ ಮುದ್ದಾದ ಸ್ಥಿತಿಯಲ್ಲಿ ಬಂದಿದ್ದಾಳೆ! ಆಗ ಪ್ರಿಯತಮನಿಗೆ ಶೃಂಗಾರ ಭಾವೋದ್ದೀಪನವಾಗಿ ಅವನು ಅವಳನ್ನು ಕಂಠಾಲಿಂಗನ ಮಾಡಿಕೊಂಡಿದ್ದಾನೆ! ಇದು ಅವನ ಜನ್ಮದ ಪುಣ್ಯಫಲ ಎನ್ನುತ್ತಾನೆ ಕವಿ. ಅಲ್ಲವೇ? ಒಲಿದ ಪ್ರಿಯತಮೆಯನ್ನು ಗಾಢವಾಗಿ ಆಲಂಗಿಸಿದಾಗ ಆಗುವ ಆನಂದ ಅಷ್ಟಿಷ್ಟಲ್ಲ! ಲೋಕವೇ ಮರೆಯುವಂಥ, ಮೋಕ್ಷದಂಥ ಅದ್ವೈತ ಭಾವದ ಅದ್ಭುತ ಸ್ಥಿತಿ ಉಂಟಾಗುತ್ತದೆ ಆಗ! ಹೀಗೆ ಒಲಿದ ಪ್ರೇಮಿಗಳು ಗಾಢಾಲಿಂಗನ ಮಾಡಿಕೊಳ್ಳುವುದು ಒಂದು ಪುಣ್ಯಫಲವಲ್ಲದೇ ಮತ್ತೇನು? 

ಸೋಮವಾರ, ಆಗಸ್ಟ್ 3, 2026

ಸುಂದರೀಶತಕ -೭೨

ಸಂಸ್ಕೃತ ಮೂಲ 

ದ್ವಿಗುಣೀಕೃತಾಂಧತಮಸಂ ವರ್ಷತಿ ರುದ್ಧಾನಿಲಂ ಪಯೋವಾಹೇ /
ಆಕಸ್ಮಿಕಮಾಗಮನಂ ಕಾಂತ್ಯಾನುಮಿತಂ ಸಖೇ ತಸ್ಯಾ: //

ಕನ್ನಡ ಅನುವಾದ 

   ನಾಯಕನು ತನ್ನ ಸ್ನೇಹಿತನಿಗೆ ಹೇಳುತ್ತಾನೆ," ಹೇ ಸಖ! ಮೇಘಗಳು ಗಾಳಿಯನ್ನು ತಡೆದು ಮಳೆ ಸುರಿಸುತ್ತಾ ಕತ್ತಲನ್ನು ದ್ವಿಗುಣೀಕರಿಸಿದೆ! ಇಂಥ ಸಮಯದಲ್ಲಿ, ನನ್ನ ಪ್ರಿಯತಮೆಯು ಆಕಸ್ಮಿಕವಾಗಿ ಆಗಮಿಸಲು, ಅವಳ ಕಾಂತಿಯಿಂದಲೇ ಅವಳ ಆಗಮನವನ್ನು ನಾನು ಊಹಿಸಿದೆ!" 
    ಮಳೆ ಸುರಿಸುತ್ತಾ ಮೇಘಗಳು ಗಾಳಿಯನ್ನು ತಡೆದು ಕತ್ತಲನ್ನು ಹೆಚ್ಚಿಸುತ್ತಿದೆ! ನಾಯಕನು ತನ್ನ ಸ್ನೇಹಿತನೊಂದಿಗೆ ಒಂದು ಕಡೆ ನಿಂತಿದ್ದಾನೆ. ಅದು ಅವನಿಗೂ ನಾಯಕಿಗೂ ನಿತ್ಯ ಭೇಟಿಯ ಸಂಕೇತಸ್ಥಳವಿರಬಹುದು. ಆದರೆ ನಾಯಕನು ನಾಯಕಿಗೆ ಬರಲು ಹೇಳಿಲ್ಲ. ಆದರೂ ಅವಳು ಆಕಸ್ಮಿಕವಾಗಿ ಬಂದಿದ್ದಾಳೆ! ಆದರೆ ಕತ್ತಲು ಎಷ್ಟಿದೆಯೆಂದರೆ ಅವಳು ಕಾಣಿಸುತ್ತಲೇ ಇಲ್ಲ! ಆದರೂ ನಾಯಕನು ಅವಳು ಬಂದುದನ್ನು ಊಹಿಸಿದ್ದಾನೆ! ಹೇಗೆಂದರೆ ಅವಳ ಕಾಂತಿಯಿಂದ! ಅದನ್ನು ತನ್ನ ಸ್ನೇಹಿತನಿಗೆ ಹೇಳುತ್ತಿದ್ದಾನೆ.‌ ಇಲ್ಲಿ ಸ್ವಲ್ಪ ಉತ್ಪ್ರೇಕ್ಷೆಯಿದ್ದರೂ ನಾಯಕಿಯ ಕಾಂತಿ ಅಂಥ ದಟ್ಟ ಕತ್ತಲಿನಲ್ಲೂ ಪ್ರಕಾಶಿಸುತ್ತಾ ನಾಯಕನಿಗೆ ಅವಳ ಆಗಮನದ ವಿಷಯ ತಿಳಿಯುತ್ತಿದೆ ಎನ್ನುವುದರ ಮೂಲಕ ಅವಳ ಸೌಂದರ್ಯವನ್ನು ಕವಿಯು ಪ್ರಶಂಸಿಸುತ್ತಿದ್ದಾನೆ. 

ಸುಂದರೀಶತಕ -೭೧

ಸಂಸ್ಕೃತ ಮೂಲ 

ಆಸಾರಸ್ನಪಿತೇ ಯತ್ಪ್ರಯಾಸಿ ಪಥಿ ದುಸ್ತರೇ ಪಯೋದಜಲೈ: /
ಪ್ರಾಕ್ತನಮುದವಾಸತಪ: ಫಲೋನ್ಮುಖಂ ಕಸ್ಯಚಿತ್ಕೃತಿನ: //

ಕನ್ನಡ ಅನುವಾದ 

   ' ಎಲೈ ಸುಂದರಿ! ಮಳೆಯಲ್ಲಿ ಸಂಪೂರ್ಣ ನೆನೆದು ಮೇಘಗಳ ಜಲದಿಂದ ದುಸ್ತರವಾಗಿರುವ ಪಥದಲ್ಲಿ ನೀನು ಪಯಣಿಸುತ್ತಿರುವೆಯಲ್ಲ!  ಇಂಥ ಪುಣ್ಯಫಲವನ್ನು ಅನುಭವಿಸಲು ಆ ನಿನ್ನ ಪ್ರಿಯತಮನು ಪೂರ್ವಜನ್ಮದಲ್ಲಿ ಜಲದಲ್ಲಿ ನಿಂತು ತಪಸ್ಸು ಮಾಡಿದ ಯಾರೋ ಪುಣ್ಯಾತ್ಮನಿರಬೇಕು!' 
    ಪುನಃ ಇಲ್ಲಿ ಒಬ್ಬ ಅಭಿಸಾರಿಕೆಗೆ ಅವಳ ಸಖಿ ಅಥವಾ ಕವಿ ಹೇಳುತ್ತಿರುವ ಸ್ವಾರಸ್ಯಕರ ಮಾತಿದೆ. ಇಲ್ಲಿ ಒಬ್ಬ ಅಭಿಸಾರಿಕೆ ಜೋರಾಗಿ ಮಳೆ ಸುರಿಯುತ್ತಿದ್ದರೂ  ಮೈಯೆಲ್ಲಾ ನೆನೆಯುತ್ತಿದ್ದರೂ ದಾರಿಯು ಮಳೆನೀರಿನಿಂದ ಕೊಚ್ಚೆಯಾಗಿ ನಡೆಯಲು ಕಷ್ಟವಾಗಿದ್ದರೂ ಲೆಕ್ಕಿಸದೆ ತನ್ನ ಪ್ರಿಯತಮನನ್ನು ಭೇಟಿಯಾಗಲು ಹೋಗುತ್ತಿದ್ದಾಳೆ! ಇಂಥ ಕಷ್ಟದಲ್ಲೂ ಅವಳು ಹೋಗುತ್ತಿರುವಳೆಂದರೆ, ಅವಳು ಅವನನ್ನು ಅಷ್ಟು ಗಾಢವಾಗಿ ಪ್ರೀತಿಸುತ್ತಿದ್ದಾಳೆ! ಇಂಥ ಪ್ರೀತಿಯನ್ನು ಪಡೆಯಲು ಅವಳ ಆ ಪ್ರಿಯತಮನು ನಿಜಕ್ಕೂ ಪುಣ್ಯಶಾಲಿ! ಇಂಥ ಪ್ರೀತಿಯನ್ನು ಪಡೆಯಲು ಅವನು ತನ್ನ ಹಿಂದಿನ ಜನ್ಮದಲ್ಲಿ ನೀರಿನಲ್ಲಿ ನಿಂತು ತಪಸ್ಸು ಮಾಡಿರಬೇಕು ಎಂದು ನಾಯಕಿಗೆ ಅವಳ ಸಖಿ ಅಥವಾ ಕವಿ ಹೇಳುತ್ತಿದ್ದಾರೆ.

ಶುಕ್ರವಾರ, ಜುಲೈ 31, 2026

ಸುಂದರೀಶತಕ -೭೦

ಸಂಸ್ಕೃತ ಮೂಲ 

ಮಂತ್ರೋ ಮನಸಾ ದ್ವೇಷಶ್ಚಂದ್ರಮಸಾ ಹಂತ ಪರಿಚಯಸ್ತಮಸಾ /
ಸುಂದರಿ ತವಾಭಿಸಾರೇ ಪರಿಪಾಟೀ ಕಾಚಿದನ್ಯೈವ //

ಕನ್ನಡ ಅನುವಾದ 

   'ಎಲೈ ಸುಂದರಿ! ನಿನ್ನ ಮಂತ್ರಾಲೋಚನೆ ನಿನ್ನ ಮನಸ್ಸಿನೊಂದಿಗೆ! ನಿನ್ನ ದ್ವೇಷ ಚಂದ್ರಮನೊಂದಿಗೆ! ಆಹಾ! ನಿನ್ನ ಪರಿಚಯ ಕತ್ತಲಿನೊಂದಿಗೆ! ನಿನ್ನ ಅಭಿಸಾರದ ರೀತಿ ಬೇರೆಯೇ ಆಗಿದೆ!'
     ಇದೊಂದು ಸ್ವಾರಸ್ಯಕರ ಶೃಂಗಾರ ಪದ್ಯ. ಅಭಿಸಾರ ಎಂದರೆ ನಾಯಕಿಯು ತನ್ನ ಪ್ರಿಯತಮನನ್ನು ಭೇಟಿಯಾಗಲು ಸಂಕೇತ ಸ್ಥಳಕ್ಕೆ ಒಬ್ಬಳೇ ಅಥವಾ ಸಖಿಯೊಂದಿಗೆ ಧೈರ್ಯವಾಗಿ ಹೋಗುವುದು.‌ ಅಂಥ ನಾಯಕಿಗೆ ಅಭಿಸಾರಿಕೆ ಎನ್ನುತ್ತಾರೆ. ಸಾಮಾನ್ಯವಾಗಿ ಅಭಿಸಾರಿಕೆಯರು ರಾತ್ರಿಯ ವೇಳೆ ಯಾರಿಗೂ ಕಾಣದಂತೆ ಗುಪ್ತವಾಗಿ ಹೋಗುತ್ತಾರೆ. ಇಲ್ಲಿ ಅಂಥ ಒಬ್ಬ ಅಭಿಸಾರಿಕೆಗೆ ಸಖಿ ಅಥವಾ ಕವಿ ತಮಾಷೆಯಾಗಿ ಹೇಳುತ್ತಿದ್ದಾರೆ.‌ ಇವಳಿಗೆ ಮನಸ್ಸಿನೊಂದಿಗೆ ಮಂತ್ರಾಲೋಚನೆ. ಇನ್ನಾರೊಂದಿಗೂ ಇವಳು ತನ್ನ ರಹಸ್ಯವನ್ನು ಚರ್ಚಿಸದೆ ತನ್ನ ಮನಸ್ಸಿನೊಂದಿಗೆ ಮಾತ್ರ ಚರ್ಚಿಸುತ್ತಾಳೆ. ಚಂದ್ರಮನೊಂದಿಗೆ ಇವಳಿಗೆ ದ್ವೇಷ! ಅಂದರೆ ಚಂದ್ರನನ್ನು ಕಂಡರೆ ಇವಳಿಗೆ ಇಷ್ಟವಿಲ್ಲ. ಏಕೆಂದರೆ ಚಂದ್ರನ ಬೆಳಕಿದ್ದರೆ ಇವಳ ರಹಸ್ಯ ಪ್ರಯಾಣ ಯಾರಿಗಾದರೂ ಕಂಡು ಗೊತ್ತಾಗಿಬಿಡುತ್ತದೆ! ಹಾಗಾಗಿ ಇವಳ ಪರಿಚಯ ಕತ್ತಲಿನೊಂದಿಗೆ! ಇತರರ ವರ್ತನೆಗೆ ವಿರುದ್ಧವಾಗಿದೆಯಲ್ಲ ಇವಳ ಅಭಿಸಾರದ ರೀತಿ ಎಂದು ಸಖಿ ಅಥವಾ ಕವಿ ಇವಳಿಗೆ ಹೇಳುತ್ತಿದ್ದಾರೆ. 

ಬುಧವಾರ, ಜುಲೈ 29, 2026

ಪೌರಾಣಿಕ ಸ್ವಾರಸ್ಯಗಳು- ಶಾಂತನುವಿನ ಕಥೆಯ ಎರಡು ಪಾಠಗಳು

ಮಹಾಭಾರತದ ಕಥೆಯನ್ನು ಬರೆಯುವವರು ಸಾಮಾನ್ಯವಾಗಿ ಆರಂಭಿಸುವುದು ಶಾಂತನುವಿನ ( ಅಥವಾ ಶಂತನು) ಕಥೆಯಿಂದ. ಶಾಂತನುವೆಂಬ ರಾಜನು ಹಸ್ತಿನಾಪುರವನ್ನು ಆಳುತ್ತಿದ್ದನು ಎಂದು ಆರಂಭವಾಗುತ್ತದೆ ಬಹುತೇಕ ಲೇಖಕರ ಮಹಾಭಾರತ. ಆದರೆ ಅದಕ್ಕೂ ಮೊದಲು ಸಾಕಷ್ಟು ಕಥೆಯಿದೆ. ಎಷ್ಟೋ ಜನರಿಗೆ ಶಾಂತನುವಿನ ತಂದೆ ಯಾರು, ಅವನ ಹಿಂದಿನ ಕಥೆಯೇನು ಎಂದು ತಿಳಿದಿರುವುದಿಲ್ಲ. ಇವು ಬಹಳ ಸ್ವಾರಸ್ಯಕರವಾಗಿವೆ. ಅಷ್ಟೇ ಅಲ್ಲದೆ, ಮಹಾಭಾರತದ ಖಿಲಗ್ರಂಥವಾದ ಹರಿವಂಶದಲ್ಲಿ ಶಾಂತನುವಿನ ಕಥೆ ಬೇರೆಯೇ ರೀತಿಯಲ್ಲಿದೆ. ಹೀಗೆ ಒಂದೇ ಕಥೆ, ಅಥವಾ ಒಬ್ಬನೇ ವ್ಯಕ್ತಿಯ ಕಥೆ ಬೇರೆ ಬೇರೆ ರೀತಿಗಳಲ್ಲಿರುವುದು ಒಂದು ಪೌರಾಣಿಕ ವೈಶಿಷ್ಟ್ಯ. ಈಗ ಈ ಎರಡೂ ಕಥೆಗಳನ್ನು ನೋಡೋಣ.
    ಶಾಂತನು ತನ್ನ ಹಿಂದಿನ ಜನ್ಮದಲ್ಲಿ ಮಹಾಭಿಷ ಎಂಬ ರಾಜನಾಗಿದ್ದ. ಆಗ ಅವನು ಗಳಿಸಿದ ಪುಣ್ಯಗಳಿಂದ ಬ್ರಹ್ಮಲೋಕವನ್ನೇ ಪಡೆದುಕೊಂಡ. ಒಂದು ದಿನ, ಬ್ರಹ್ಮಲೋಕದಲ್ಲಿ ದೇವಾನುದೇವತೆಗಳ ಸಮ್ಮುಖದಲ್ಲಿ ಬ್ರಹ್ಮನ ಪೂಜೆ ನಡೆಯುತ್ತಿದ್ದಾಗ, ಗಂಗೆ ಸಭೆಯನ್ನು ಪ್ರವೇಶಿಸಿದಳು. ಆಗ ಗಾಳಿ ಬೀಸಿ ಅವಳ ಸೀರೆ ಹಾರಿಹೋಯಿತು! ಎಲ್ಲರೂ ತಲೆ ತಗ್ಗಿಸಿದರೆ, ಮಹಾಭಿಷನು ಮಾತ್ರ ಅವಳ ಸೌಂದರ್ಯವನ್ನು ಕಣ್ಣೆವೆಯಿಕ್ಕದೆ ನೋಡುತ್ತಿದ್ದ. ಇದರಿಂದ ಕುಪಿತಗೊಂಡ ಬ್ರಹ್ಮನು ಅವನನ್ನು ಶಪಿಸಿದ, " ಎಲೈ ಮಹಾಭಿಷನೇ! ಸಕಲಕಾಮನೆಗಳನ್ನು ಜಯಿಸಿದವರಿಗೆ ಮಾತ್ರ ಈ ಲೋಕ ದೊರೆಯುವುದು! ಆದರೆ ನೀನಿನ್ನೂ ಸ್ತ್ರೀ ಕಾಮವನ್ನು ಜಯಿಸಿಲ್ಲ! ಗಂಗೆಯನ್ನು ನೋಡಿದೊಡನೆಯೇ ನೀನು ಆಕರ್ಷಿತನಾದೆ! ಹಾಗಾಗಿ ಇನ್ನಷ್ಟು ವರ್ಷ ಭೂಲೋಕದಲ್ಲಿದ್ದು ಸಕಲ ಕಾಮನೆಗಳನ್ನು ಪೂರೈಸಿಕೊಂಡು ಇಲ್ಲಿಗೆ ಬಾ! ನೀನು ಗಂಗೆಗೆ ಮಾಡಿದ ಈ ಅಪರಾಧದಿಂದ ಅವಳೇ ನಿನ್ನ ಪತ್ನಿಯಾಗಿ ನಿನಗೆ ಅಪ್ರಿಯವಾದ ಕಾರ್ಯಗಳನ್ನು ಮಾಡುವಳು! ಆದರೆ ನೀನು ಅವನ್ನೆಲ್ಲಾ ಸಹಿಸಸಿಕೊಳ್ಳುವೆ! ಕೊನೆಗೆ ಆ ಅಪ್ರಿಯ ಕಾರ್ಯಗಳಿಗೆ ಕುಪಿತನಾಗಿ ವಿರೋಧ ವ್ಯಕ್ತಪಡಿಸಿದ ದಿನ ನಿನಗೆ ಈ ಶಾಪದಿಂದ ವಿಮುಕ್ತಿಯಾಗುತ್ತದೆ!" 
    ಹೀಗೆ ಶಾಪ ಪಡೆದ ಮಹಾಭಿಷನು ಭೂಲೋಕದಲ್ಲಿ ಯಾರಿಗೆ ಹುಟ್ಟಬೇಕೆಂದು ಬಹಳ ಯೋಚಿಸಿ, ಭರತವಂಶೀಯನಾದ ಪ್ರತೀಪ ಎಂಬ ರಾಜ ತನಗೆ ತಂದೆಯಾಗಲು ಯೋಗ್ಯನೆಂದು ಭಾವಿಸಿ ಅವನಿಗೆ ಹುಟ್ಟಲು ನಿಶ್ಚಯಿಸಿದನು. 
   ಇತ್ತ, ಗಂಗೆಯೂ ಮಹಾಭಿಷನನ್ನೇ ಚಿಂತಿಸುತ್ತಾ ಭೂಲೋಕದ ಕಡೆ ಹೊರಟಳು. ಆಗ ಅಷ್ಟವಸುಗಳೆಂಬ ಎಂಟು ದೇವತೆಗಳು ಕಳೆಗುಂದಿದ ಮುಖವುಳ್ಳವರಾಗಿ ಕೆಳಗೆ ಬೀಳುತ್ತಿರುವುದನ್ನು ನೋಡಿದಳು. ಏಕೆ ಹಾಗೆ ಬೀಳುತ್ತಿರುವರೆಂದು ಕೇಳಿದಾಗ ಅವರು ತಮ್ಮ ಕಥೆಯನ್ನು ಹೇಳಿಕೊಂಡರು. ಅದರಂತೆ ಅವರು ವಸಿಷ್ಠ ಮಹರ್ಷಿಗಳ ಗೋವು ನಂದಿನಿಯೆಂಬ ಕಾಮಧೇನುವನ್ನು ಕದ್ದು ಅವರಿಂದ ಶಾಪಗ್ರಸ್ತರಾಗಿದ್ದರು. ಅವರಲ್ಲಿ ದ್ಯು ಎಂಬ ವಸುವಿನ ಹೆಂಡತಿಗೆ ಭೂಲೋಕದಲ್ಲಿರುವ ತನ್ನ ಗೆಳತಿ ಚಿರಯುವತಿಯಾಗಿರಬೇಕೆಂಬ ಆಸೆಯಿಂದ ಅವಳಿಗೆ ಕಾಮಧೇನುವಿನ ಹಾಲು ಕುಡಿಸಬೇಕೆನಿಸಿತು.‌ ಅದಕ್ಕಾಗಿ ಅವಳು ತನ್ನ ಗಂಡನನ್ನು ಆ ಕಾಮಧೇನುವನ್ನು ಕದಿಯಲು ಪ್ರಚೋದಿಸಿದಳು. ಅವನು ಇತರ ವಸುಗಳೊಂದಿಗೆ ವಸಿಷ್ಠರ ಕಾಮಧೇನುವನ್ನು ಕದ್ದನು! ಇದರಿಂದ ವಸಿಷ್ಠರು ಕ್ರುದ್ಧರಾಗಿ ಅವರಿಗೆ ಭೂಲೋಕದಲ್ಲಿ ಜನಿಸುವಂತೆ ಶಪಿಸಿದರು. ಆಗ ಅವರೆಲ್ಲರೂ ಪಶ್ಚಾತ್ತಾಪ ಪಟ್ಟು ಕ್ಷಮೆಯಾಚಿಸಲು ವಸಿಷ್ಠರು ತಮ್ಮ ಶಾಪದಂತೆ ಅವರು ಭೂಲೋಕದಲ್ಲಿ ಹುಟ್ಟಿದರೂ ಒಂದು ವರ್ಷದೊಳಗೆ ಶಾಪವನ್ನು ನೀಗಿ ಪುನಃ ಸ್ವರ್ಗಕ್ಕೆ ಬರುವರೆಂದೂ ಆದರೆ ಯಾರ ಕಾರಣದಿಂದ ಅವರು ಕಾಮಧೇನುವನ್ನು ಕದ್ದರೋ ಆ ದ್ಯು ಎಂಬುವನು ಮಾತ್ರ ಬಹುಕಾಲ ಭೂಲೋಕದಲ್ಲಿದ್ದು ಜ್ಞಾನಿಯೂ ಪಿತೃವಾಕ್ಯಪರಿಪಾಲಕನೂ ಆದರೂ ಸ್ತ್ರೀ ಸುಖವನ್ನು ತ್ಯಜಿಸಿ ಅಪುತ್ರವಂತನಾಗಿ ಹಿಂದಿರುಗುತ್ತಾನೆಂದರು. ಈ ವಿಷಯವನ್ನು ಹೇಳಿ ಅಷ್ಟವಸುಗಳು ಗಂಗೆಯನ್ನೇ ತಮ್ಮ ತಾಯಿಯಾಗುವಂತೆಯೂ ಹುಟ್ಟಿದ ಕೂಡಲೇ ತಮ್ಮನ್ನು ನೀರಲ್ಲಿ ಹಾಕಿ ಮುಳುಗಿಸಿ ಶಾಪವಿಮುಕ್ತಿ ಮಾಡಬೇಕೆಂದೂ ಬೇಡಿಕೊಂಡರು.‌ ಆಗ ಗಂಗೆಯು ಅವರನ್ನು ತಂದೆಯಾಗಿ ಯಾರನ್ನು ಆರಿಸಿಕೊಳ್ಳುವರೆಂದು ಕೇಳಿದಾಗ, ಭರತವಂಶದ ಪ್ರತೀಪನೆಂಬ ರಾಜನಿಗೆ ಹುಟ್ಟುವ ಶಾಂತನುವನ್ನು ತಂದೆಯಾಗಿ ಆರಿಸಿಕೊಳ್ಳುವೆವೆಂದರು. ಆಗ ಗಂಗೆಯು, ಆ ಶಾಂತನು, ಈಗ ಬ್ರಹ್ಮನಿಂದ ಶಾಪಗ್ರಸ್ತನಾಗಿ ಹುಟ್ಟುವ ಮಹಾಭಿಷನೇ ಎಂದು ಅರಿತು, ತನ್ನ ಮತ್ತು ಅವನ ಮಿಲನ ವ್ಯರ್ಥವಾಗಬಾರದೆಂದು ಹೇಳಲು, ಅವರು ತಮ್ಮಲ್ಲಿ ಒಬ್ಬನು ಅವರ ಮಗನಾಗಿ ಭೂಮಿಯಲ್ಲಿ ಉಳಿಯುವನೆಂದು ಹೇಳಿದರು. ಗಂಗೆ ಎಲ್ಲಕ್ಕೂ ಒಪ್ಪಿದಳು. 
    ಈ ಸಂದರ್ಭದಲ್ಲಿ ಭರತವಂಶದ ವೃದ್ಧ ರಾಜನಾದ ಪ್ರತೀಪನೆಂಬುವನು ತಪಸ್ಸು ಮಾಡುತ್ತಿದ್ದನು. ಗಂಗೆಯು ಸುಂದರವಾದ ಮಾನುಷ ಸ್ತ್ರೀಯ ರೂಪ ಧರಿಸಿ ಹೋಗಿ ಅವನ ಬಲತೊಡೆಯ ಮೇಲೆ ಕುಳಿತು," ನಾನು ನಿನ್ನನ್ನು ಕಾಮಿಸಿ ಬಂದಿದ್ದೇನೆ! ನನ್ನನ್ನು ಪರಿಗ್ರಹಿಸು! ತಾನಾಗಿ ಕಾಮಿಸಿ ಬಂದ ಸ್ತ್ರೀಯನ್ನು ಬಿಡುವುದು ಪಾಪ!" ಎಂದಳು! ಆಗ ಪ್ರತೀಪನು," ನೀನು ಹೇಳುವುದು ನಿಜವಾದರೂ ನೀನು ಮಾಡಿದ ಕಾರ್ಯ ಅದನ್ನು ಸಮರ್ಥಿಸುತ್ತಿಲ್ಲ! ನೀನು ನನ್ನ ಬಲತೊಡೆಯ ಮೇಲೆ ಕುಳಿತಿರುವೆ! ಶಾಸ್ತ್ರದ ಪ್ರಕಾರ, ಬಲತೊಡೆಯಿರುವುದು ಹೆಣ್ಣು ಮಕ್ಕಳು ಅಥವಾ ಸೊಸೆಯರು ಕುಳಿತುಕೊಳ್ಳಲಾದರೆ, ಎಡತೊಡೆಯಿರುವುದು ಪ್ರೇಯಸಿ ಅಥವಾ ಪತ್ನಿ ಕುಳಿತುಕೊಳ್ಳಲು! ನೀನು ನನ್ನ ಬಲತೊಡೆಯ ಮೇಲೆ ಕುಳಿತಿರುವುದರಿಂದ ನಾನು ನಿನ್ನನ್ನು ಪತ್ನಿಯಾಗಿ ಪರಿಗ್ರಹಿಸಲಾರೆ! ಆದರೆ ನನ್ನ ಸೊಸೆಯಾಗಿ ಪರಿಗ್ರಹಿಸುತ್ತೇನೆ! ನೀನು ನನ್ನ ಮಗನ ಪತ್ನಿಯಾಗು!" ಎಂದನು. ಗಂಗೆಯು ಅದಕ್ಕೆ ಒಪ್ಪಿ, ಅವನ ಮಗನನ್ನು ತಾನು ವರಿಸಿದರೂ ಅವನು ತಾನು ಮಾಡುವ ಪ್ರಿಯ ಅಥವಾ ಅಪ್ರಿಯ ಕಾರ್ಯಗಳನ್ನು ಒಪ್ಪಬೇಕೆಂದು ನಿಬಂಧನೆ ಹಾಕಿದಳು. ಅದಕ್ಕೆ ಪ್ರತೀಪನು ಒಪ್ಪಿದನು. 
    ಆದರೆ ಈ ಸಂದರ್ಭದಲ್ಲಿ ಪ್ರತೀಪನಿಗೆ ಮಕ್ಕಳೇ ಇರಲಿಲ್ಲ! ಹಾಗಾಗಿ ಅವನು ಕೊಟ್ಟ ಮಾತನ್ನು ನಡೆಸಲು ಮಕ್ಕಳಾಗಲೆಂದು ತನ್ನ ಪತ್ನಿಯೊಂದಿಗೆ ತಪಸ್ಸು ಮಾಡಿದ. ಆಗ ಅವನಿಗೆ ಮಹಾಭಿಷನು ಮಗನಾಗಿ ಜನಿಸಿದ. ವಂಶವೇ ಶಾಂತವಾಗುವುದರಲ್ಲಿದ್ದಾಗ ಹುಟ್ಟಿದ್ದರಿಂದ ಅವನಿಗೆ ಶಾಂತನು ಎಂದು ಹೆಸರಿಡಲಾಯಿತು. 
      ಶಾಂತಸ್ಯ ಜಜ್ಞೇ ಸಂತಾನಸ್ತಸ್ಮಾದಾಸೀತ್ಸ ಶಾಂತನು:
  ಪ್ರಾಯಶಃ ಪ್ರತೀಪನಿಗೆ ಪುತ್ರಸಂತಾನವಾಗಲೆಂದೇ ಗಂಗೆಯು ಬಂದು ಅವನ ಬಲತೊಡೆಯ ಮೇಲೆ ಕುಳಿತುಕೊಳ್ಳುವ ನಾಟಕವಾಡಿದಳೇನೋ! 
   ಶಾಂತನುವು ದೊಡ್ಡವನಾದಾಗ ಪ್ರತೀಪನು ಹಿಂದೆ ಒಬ್ಬ ಸ್ತ್ರೀಯು ತನ್ನ ಬಳಿ ಬಂದಿದ್ದ ವಿಷಯ ಹೇಳಿ ಅವನ ಬಳಿಯೂ ಬರುತ್ತಾಳೆಂದು ಹೇಳಿದ. ಅವಳು ಹಾಗೆ ಬಂದರೆ ಅವಳು ನಿಬಂಧನೆ ಹಾಕಿದರೂ ಹೆಚ್ಚು ವಿಚಾರಿಸದೆ ಅವಳನ್ನು ಮದುವೆಯಾಗುವಂತೆ ಹೇಳಿದ. 
   ಅಂತೆಯೇ ಮುಂದೆ ಶಾಂತನುವೇ ಗಂಗೆಯನ್ನು ನೋಡಿ ಮೋಹಿಸಿದ. ಅವಳನ್ನು ದೇವತೆಯೋ ಯಕ್ಷಿಯೋ ಅಪ್ಸರೆಯೋ ಯಾರೇ ಆಗಿದ್ದರೂ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡ. ಅದಕ್ಕೆ ಗಂಗೆಯು ತಾನು ಪ್ರಿಯವಾಗಲಿ ಅಪ್ರಿಯವಾಗಲಿ ಏನೇ ಕಾರ್ಯ ಮಾಡಿದರೂ ಅವನು ಪ್ರಶ್ನೆ ಮಾಡಬಾರದೆಂದೂ ಹಾಗೆ ಮಾಡಿದಂದೇ ತಮ್ಮ ಸಂಬಂಧ ಮುಗಿಯುವುದೆಂದೂ ನಿಬಂಧನೆ ಹಾಕಿದಳು. ಶಾಂತನುವು ಅದಕ್ಕೆ ಒಪ್ಪಿ ಅವಳನ್ನು ವರಿಸಿದ. ಅವಳೊಂದಿಗೆ ಸುಖವಾಗಿ ರಮಿಸಿದ. ಶಾಂತನುವಿನಿಂದ ಅವಳಿಗೆ ಅಷ್ಟ ವಸುಗಳು ಒಬ್ಬೊಬ್ಬರಾಗಿ ಹುಟ್ಟಿದರು. ಹುಟ್ಟಿದ ಕೂಡಲೇ ಅವಳು ಆ ಮಕ್ಕಳನ್ನು," ನಿನಗೆ ಪ್ರಿಯವಾದುದನ್ನು ಮಾಡುತ್ತಿರುವೆ!" ಎನ್ನುತ್ತಾ ಗಂಗಾ ನದಿಯಲ್ಲಿ ಹಾಕಿಬಿಟ್ಟಳು! ಅದನ್ನು ನೋಡಿ ಶಾಂತನುವಿನ ಮನಸ್ಸಿಗೆ ಬಹಳ ನೋವಾದರೂ ಪ್ರಶ್ನಿಸಿದರೆ ಎಲ್ಲಿ ಅವಳು ತನ್ನನ್ನು ಬಿಟ್ಟು ಹೋಗುವಳೋ ಎಂದು ಕೇಳಲಿಲ್ಲ. ಹೀಗೆ ಏಳು ಮಕ್ಕಳನ್ನು ನೀರುಪಾಲು ಮಾಡಿದ ಬಳಿಕ, ಎಂಟನೆಯ ಮಗುವನ್ನೂ ನೀರಿನಲ್ಲಿ ಹಾಕಲು ಅವಳು ಹೊರಟಾಗ, ಶಾಂತನುವು ತಡೆಯಲಾರದೆ, "ಇಂಥ ಪಾಪವನ್ನು ಏಕೆ ಮಾಡುತ್ತಿರುವೆ? ಈ ಒಂದು ಮಗುವನ್ನಾದರೂ ಕೊಲ್ಲಬೇಡ! ಯಾರು ನೀನು?" ಎಂದು ಕೇಳಿದ. ಅದಕ್ಕೆ ಅವಳು ನಗುತ್ತಾ," ಈ ಮಗುವನ್ನು ನಾನು ಕೊಲ್ಲುವುದಿಲ್ಲ! ಆದರೆ ನಮ್ಮ ಸಂಬಂಧ ಇಲ್ಲಿಗೆ ಮುಗಿಯುತ್ತದೆ! ನಾನು ಋಷಿಮುನಿಗಳೆಲ್ಲಾ ಪಾಪಹಾರಿಣಿ ಎಂದು ಪೂಜಿಸುನ ಗಂಗೆ! ಅಷ್ಟವಸುಗಳ ಶಾಪವಿಮುಕ್ತಿಗಾಗಿ ಹೀಗೆ ಮಾಡಬೇಕಾಯಿತು!" ಎಂದು ಎಲ್ಲಾ ವಿಷಯವನ್ನು ಹೇಳಿ ಆ ಮಗುವನ್ನು ತನ್ನೊಂದಿಗೆ ಸ್ವರ್ಗಕ್ಕೆ ಕರೆದೊಯ್ದು ಬೃಹಸ್ಪತಿಗಳು , ಶುಕ್ರಾಚಾರ್ಯರು, ವಸಿಷ್ಠರು, ಪರಶುರಾಮರಿಂದ ಎಲ್ಲಾ ಶಿಕ್ಷಣಗಳನ್ನು ಕೊಡಿಸಿ ಅವನು ತರುಣನಾದಾಗ ಹಿಂದಕ್ಕೆ ಕರೆತಂದು ಶಾಂತನುವಿಗೊಪ್ಪಿಸಿದಳು. ಅವನೇ ದೇವವ್ರತ. 
     ಮುಂದೆ ಶಾಂತನು ಬೇಟೆಯಲ್ಲಿ ಕಾಲ ಕಳೆಯುತ್ತಿದ್ದಾಗ, ಒಮ್ಮೆ ಯಮುನಾನದಿಯ ಬಳಿ ಒಂದು ಸೊಗಸಾದ ಸುಗಂಧ ತೇಲಿಬಂದಂತೆ ಅದನ್ನು ಅನುಸರಿಸುತ್ತಾ ಹೋದನು. ಆಗ ನಾವೆಯನ್ನು ನಡೆಸುತ್ತಿದ್ದ ಸತ್ಯವತಿ ಎಂಬ ಸುಂದರ ಹುಡುಗಿಯನ್ನು ಕಂಡು ಅವಳಲ್ಲಿ ಮೋಹಗೊಂಡ. ಆ ಸುಗಂಧ ಅವಳ ಮೈಯಿಂದಲೇ ಹೊರಡುತ್ತಿತ್ತು! ಅವಳು ಬೆಸ್ತರ ರಾಜನ ಸಾಕುಮಗಳಾಗಿದ್ದಳು. ಹಿಂದೊಮ್ಮೆ, ಪರಾಶರ ಮುನಿಗಳ ಸಂಗಮವಾಗಿ ಅವರಿಂದ ಮಹರ್ಷಿ ವೇದವ್ಯಾಸರನ್ನು ಹೆತ್ತಿದ್ದ ಅವಳು, ಪರಾಶರರ ವರದಿಂದ ಕನ್ಯೆಯಾಗಿಯೇ ಇದ್ದಳು ಹಾಗೂ ಮೀನಿನ ವಾಸನೆಯಿದ್ದ ಅವಳ ಮೈಯಿಂದ ಸುಗಂಧ ಬರುವಂತೆ ಹಾಗೂ ಅದು ಒಂದು ಯೋಜನ ದೂರ ಹರಡುವಂತೆ ವರ ಪಡೆದಿದ್ದಳು! ಹಾಗಾಗಿಯೇ ಅವಳಿಗೆ ಹಿಂದೆ ಮತ್ಸ್ಯಗಂಧಿ ಎಂಬ ಹೆಸರಿದ್ದು ಈಗ ಯೋಜನಗಂಧಿ ಎಂಬ ಹೆಸರು ಬಂದಿತ್ತು. ಶಾಂತನು ದಾಶರಾಜನ ಬಳಿ ಹೋಗಿ ಅವನ ಮಗಳನ್ನು ತನಗೆ ಮದುವೆ ಮಾಡಿಕೊಡಲು ಕೇಳಲು ಅವನು ಸಂತೋಷದಿಂದ ಒಪ್ಪಿದರೂ ಅವಳಿಂದ ಹುಟ್ಟುವ ಮಗನೇ ಮುಂದೆ ರಾಜನಾಗಬೇಕೆಂದು ನಿಬಂಧನೆ ಹಾಕಿದನು. ಆದರೆ ಶಾಂತನು ತನ್ನ ಮಗ ದೇವವ್ರತನನ್ನು ಮುಂದಿನ ರಾಜನನ್ನಾಗಿ ಮಾಡಬೇಕೆಂದಿದ್ದನು. ಈಗ ದಾಶರಾಜನ ನಿಬಂಧನೆಗೊಪ್ಪಿದರೆ ತನ್ನ ಮಗನಿಗೆ ಅನ್ಯಾಯ ಮಾಡಿದಂತಾಗುವುದಿಲ್ಲವೇ? ಹಾಗಾಗಿ ಅವನು ಮನೆಗೆ ಹೋಗಿ ಚಿಂತಾಗ್ರಸ್ತನಾಗಿ ಕುಳಿತನು. ಇದನ್ನು ಗಮನಿಸಿದ ದೇವವ್ರತನು ಅವನನ್ನು ವಿಚಾರಿಸಲು, ಒಬ್ಬನೇ ಪುತ್ರನಾದ ಅವನು ಸದಾ ಯುದ್ಧಗಳಲ್ಲಿ ತೊಡಗಿರುವುದೇ ಅವನಿಗೆ ಚಿಂತೆ ಎಂದು ಹಾರಿಕೆಯ ಉತ್ತರ ಕೊಟ್ಟನು. ಆಗ ದೇವವ್ರತನು ಶಾಂತನುವಿನ ಸಾರಥಿಯನ್ನು ವಿಚಾರಿಸಿ ವಿಷಯ ತಿಳಿದುಕೊಂಡು ತಾನೇ ದಾಶರಾಜನ ಬಳಿಗೆ ಮಾತುಕತೆಗೆ ಹೋದನು. ದಾಶರಾಜನ ನಿಬಂಧನೆಗೆ ಒಪ್ಪಿ ತಾನು ರಾಜನಾಗುವುದಿಲ್ಲವೆಂದು ಪ್ರತಿಜ್ಞೆ ಮಾಡಿದನು. ಆದರೆ ಅವನ ಮಕ್ಕಳು ರಾಜ್ಯ ಕೇಳಬಹುದು ಎಂದು ಪುನಃ ದಾಶರಾಜನು ಹೇಳಲು, ದೇವವ್ರತನು ತಾನು ಜೀವನದಲ್ಲಿ ಮದುವೆಯೇ ಆಗುವುದಿಲ್ಲ ಎಂಬ ಭೀಕರ ಅಥವಾ ಭೀಷ್ಮಪ್ರತಿಜ್ಞೆ ಮಾಡಿದನು. ಆಗ ದೇವತೆಗಳು ಅವನ ಮೇಲೆ ಪುಷ್ಪವೃಷ್ಟಿಗೈದು "ಇವನು ಭೀಷ್ಮ!" ಎಂದು ಘೋಷಿಸಿದರು! ಅಂದಿನಿಂದ ಅವನ ಹೆಸರು ಭೀಷ್ಮನೆಂದಾಯಿತು! ದಾಶರಾಜನು ಈಗ ತನ್ನ ಮಗಳನ್ನು ಶಾಂತನುವಿಗೆ ಕೊಡಲು ಒಪ್ಪಿ ಭೀಷ್ಮನೊಂದಿಗೆ ಕಳಿಸಿದನು. ಹೀಗೆ ತಾನು ತನ್ನ ವೈವಾಹಿಕ ಸುಖವನ್ನು ತ್ಯಜಿಸಿ ತಂದೆ ಶಾಂತನುವಿಗೆ ಸತ್ಯವತಿಯೊಂದಿಗೆ ಮದುವೆ ಮಾಡಿಸಿದನು. ಇದರಿಂದ ಸುಪ್ರೀತನಾದ ಶಾಂತನು, ಅವನಿಗೆ ಇಚ್ಛಾಮರಣಿಯಾಗುವಂತೆ ವರ ನೀಡಿದನು 
     ಮಹಾಭಾರತದ ಆದಿಪರ್ವದ ಸಂಭವಪರ್ವವೆಂಬ ಉಪಪರ್ವದಲ್ಲಿ ಈ ಕಥೆ ಬರುತ್ತದೆ.‌ ಆದರೆ ಇದಕ್ಕೂ ಮೊದಲು ಶಾಂತನುವಿನ ಹೆಸರಿನ ವ್ಯುತ್ಪತ್ತಿಗೆ ಬೇರೆಯೇ ಕಾರಣವನ್ನು ಕೊಡಲಾಗಿದೆ. ಅದು ಹೀಗಿದೆ -
  ಯಂ ಯಂ ಕರಾಭ್ಯಾಂ ಸ್ಪೃಶತಿ ಜೀರ್ಣಂ ಸುಖಮಶ್ನುತೇ /
  ಪುನರ್ಯುವಾ ಚ ಭವತಿ ತಸ್ಮಾತ್ತಂ ಶಾಂತನುಂ ವಿದು: //
     ' ಶಂತನುವು ಯಾರು ಯಾರು ವಯಸ್ಸಾದವರನ್ನು ತನ್ನ ಕೈಗಳಿಂದ ಸ್ಪರ್ಶಿಸಿದರೂ ಅವರು ಕೂಡಲೇ ಸುಖವನ್ನು ಹೊಂದಿ ನವಯುವಕರಾಗುತ್ತಿದ್ದರು! ಆದ್ದರಿಂದಲೇ ಅವನು ಶಾಂತನು ಎಂದು ಪ್ರಸಿದ್ಧನಾದನು.' 
     ಇದೇ ಅಭಿಪ್ರಾಯವೇ ಭಾಗವತದಲ್ಲೂ ಇದೆ -
ಯಂ ಯಂ ಕರಾಭ್ಯಾಂ ಸ್ಪೃಶತಿ ಜೀರ್ಣಂ ಯೌವನಮೇತಿ ಸ: /
ಶಾಂತಿಮಾಪ್ನೋತಿ ಚೈವಾಗ್ರ್ಯಾಂ ಕರ್ಮಣಾ ತೇನ ಶಂತನು: //
    ' ಶಂತನುವು ಯಾರು ಯಾರು ವೃದ್ಧರನ್ನು ಸ್ಪರ್ಶಿಸುತ್ತಿದ್ದನೋ ಅವರು ಯೌವನವನ್ನು ಪಡೆಯುತ್ತಿದ್ದರು ಹಾಗೂ ಪರಮಶಾಂತಿಯನ್ನು ಪಡೆಯುತ್ತಿದ್ದರು! ಆದ್ದರಿಂದಲೇ ಅವನಿಗೆ ಶಂತನು ಎಂದು ಹೆಸರಾಯಿತು.' 
  ಅಲ್ಲದೇ ಮಹಾಭಾರತದ ಆರಂಭದಲ್ಲಿ ಪ್ರತೀಪ ರಾಜನು ಶಿಬಿದೇಶದ ರಾಜಕುಮಾರಿಯ ಸುನಂದಾಳನ್ನು ಮದುವೆಯಾಗಿ ದೇವಾಪಿ, ಶಾಂತನು, ಬಾಹ್ಲೀಕ ಎಂಬ ಮೂರು ಮಕ್ಕಳನ್ನು ಪಡೆದಿದ್ದನು ಎಂದಿದೆ. ಹಿರಿಯನಾದ ದೇವಾಪಿಯು ಬಾಲ್ಯದಲ್ಲೇ ಐಹಿಕ ಜೀವನದಲ್ಲಿ ವಿರಕ್ತಿ ಹೊಂದಿ ತಪಸ್ಸು ಮಾಡಲು ಕಾಡಿಗೆ ಹೊರಟುಹೋದನು. ಹಾಗಾಗಿ ಸಾಮ್ರಾಜ್ಯವು ಶಾಂತನು ಮತ್ತು ಬಾಹ್ಲೀಕರಿಗೆ ಉಳಿಯಿತು. 
    ಮಹಾಭಾರತದ ಉದ್ಯೋಗಪರ್ವದಲ್ಲಿ, ಧೃತರಾಷ್ಟ್ರನು ತನ್ನ ಮಗ ದುರ್ಯೋಧನನಿಗೆ ತನ್ನ ವಂಶದ ಕಥೆಯನ್ನು ಹೇಳುತ್ತಾ ಶಾಂತನು ಮತ್ತು ಅವನ ಅಣ್ಣಂದಿರ ಬಗ್ಗೆ ಹೇಳುತ್ತಾನೆ. ಅದರಂತೆ, ಪ್ರತೀಪ ಮಹಾರಾಜನಿಗೆ ದೇವಾಪಿ, ಬಾಹ್ಲೀಕ, ಮತ್ತು ಶಾಂತನು ಎಂಬ ಮೂರು ಪುತ್ರರು. ಶಾಂತನು ಕೊನೆಯವನು. ದೇವಾಪಿಯು ಶಕ್ತಿವಂತನೂ ಧಾರ್ಮಿಕನೂ ಆಗಿದ್ದರೂ ಅವನಿಗೆ ಚರ್ಮರೋಗವಿದ್ದುದರಿಂದ ಬ್ರಾಹ್ಮಣರು, ಮಂತ್ರಿಗಳು, ಪ್ರಜೆಗಳು, ಯಾರೂ ಅವನು ರಾಜನಾಗುವುದನ್ನು ಒಪ್ಪಲಿಲ್ಲ. ಹಾಗಾಗಿ ಅವನು ವಿರಕ್ತನಾಗಿ ತಪಸ್ಸು ಮಾಡಲು ಕಾಡಿಗೆ ಹೋದನು. ಅನಂತರ ಎರಡನೆಯವನಾದ ಬಾಹ್ಲೀಕನು ಹಸ್ತಿನಾಪುರವನ್ನು ಬಿಟ್ಟು ತನ್ನ ಸೋದರಮಾವನ ವಂಶವನ್ನು ಸೇರಿ ಬೇರೊಂದು ನಗರಕ್ಕೆ ರಾಜನಾದನು. ಅನಂತರ, ಪ್ರತೀಪನು ಸ್ವರ್ಗಸ್ಥನಾದ ಬಳಿಕ, ಬಾಹ್ಲೀಕನು ಶಾಂತನುವಿಗೆ ರಾಜ್ಯಭಾರವನ್ನು ವಹಿಸಿಕೊಳ್ಳಲು ಹೇಳಿದನು. ಮುಂದೆ, ಬಾಹ್ಲೀಕನು ಕೌರವರ ಕಡೆ ನಿಂತು ಕುರುಕ್ಷೇತ್ರ ಯುದ್ಧದಲ್ಲಿ ಭಾಗವಹಿಸಿ ಭೀಮನಿಂದ ಹತನಾದನು. ಭೀಷ್ಮನ ಪ್ರಕಾರ ಅತಿರಥನಾಗಿದ್ದ ಅವನು ಕುರುಕ್ಷೇತ್ರದಲ್ಲಿ ಭಾಗವಹಿಸಿದ ಅತ್ಯಂತ ಹಿರಿಯ ವೀರನಾಗಿದ್ದನು. 
     ಭಾಗವತದಲ್ಲಿ ಶಂತನುವಿನ ಇನ್ನೊಂದು ಸ್ವಾರಸ್ಯಕರ ಕಥೆ ಬರುತ್ತದೆ. ಅದರಂತೆ, ಒಮ್ಮೆ, ಶಂತನುವಿನ ರಾಜ್ಯದಲ್ಲಿ ದೇವೇಂದ್ರನು ಹನ್ನೆರಡು ವರ್ಷಗಳ ಕಾಲ ಮಳೆಗರೆಯಲೇ ಇಲ್ಲ! ಆಗ ಶಂತನುವು ಬ್ರಾಹ್ಮಣರನ್ನು ಕರೆಸಿ ಇದಕ್ಕೆ ಕಾರಣವೇನೆಂದು ಕೇಳಲು, ಅವರು ಶಾಸ್ತ್ರವನ್ನು ಪರಿಶೀಲಿಸಿ, " ಮಹಾರಾಜ! ನೀನು ನಿನ್ನ ಅಣ್ಣ ದೇವಾಪಿಯು ವಿವಾಹವಾಗುವ ಮೊದಲೇ ವಿವಾಹವಾಗಿ ಅಗ್ನಿಹೋತ್ರ ಮಾಡುತ್ತಿರುವೆ ಹಾಗೂ ರಾಜ್ಯವನ್ನೂ ಪಡೆದಿರುವೆ! ಇದರಿಂದ ನಿನಗೆ ಪರಿವೇತ್ತೃತ್ವದ ದೋಷ ಬಂದಿದೆ! ಆದ್ದರಿಂದಲೇ ಮಳೆ, ಬೆಳೆ ಆಗಿಲ್ಲ! ನೀನು ರಾಜ್ಯದ ಅಭ್ಯುದಯ ಬಯಸುವುದಾದರೆ ಬೇಗನೆ ನಿನ್ನ ಅಣ್ಣನ ಬಳಿ ಹೋಗಿ ರಾಜ್ಯವನ್ನು ಅವನಿಗೊಪ್ಪಿಸು!" ಎಂದರು. ಆಗ ಶಂತನುವು ಕಾಡಿಗೆ ಹೋಗಿ ರಾಜ್ಯವನ್ನು ಸ್ವೀಕರಿಸುವಂತೆ ತನ್ನ ಅಣ್ಣನನ್ನು ಪ್ರಾರ್ಥಿಸಿದನು. ಆದರೆ ಅಷ್ಟರಲ್ಲಿ ಶಂತನುವಿನ ಮಂತ್ರಿಯಾದ ಅಶ್ಮರಾತನು ದೇವಾಪಿಯ ಬಳಿಗೆ ಕೆಲವು ಬ್ರಾಹ್ಮಣರನ್ನು ಕಳಿಸಿ ನಾಸ್ತಿಕ್ಯವಾದದ ಪಾಷಂಡಮತವನ್ನು ಬೋಧಿಸಿದ್ದನು. ಇದರಿಂದ ದೇವಾಪಿಯ ಮನಸ್ಸು ಕೆಟ್ಟು ಅವನು ವೇದಮಾರ್ಗದಿಂದ ದೂರಾಗಿದ್ದನು! ಹಾಗಾಗಿ ಅವನು ಶಂತನುವಿನ ಮಾತನ್ನು ಕೇಳದೆ ಅವನಿಗೂ ನಾಸ್ತಿಕ್ಯವನ್ನು ಬೋಧಿಸತೊಡಗಿದನು. ಅಣ್ಣನಿಗಿಂತ ಮೊದಲು ತಮ್ಮನು ಮದುವೆಯಾಗಬಾರದೆಂಬ ಹಾಗೂ ಅಗ್ನಿಹೋತ್ರ ಮಾಡಬಾರದೆಂಬ ವೇದದ ದಾರಿಯನ್ನು ಅವನು ಒಪ್ಪಲಿಲ್ಲ. ಹಾಗಾಗಿ ಅವನು ವೇದಭ್ರಷ್ಟನಾಗಿ ರಾಜ್ಯವನ್ನು ಪಡೆಯಲು ಅನರ್ಹನಾದನು. ಇದರಿಂದ ಶಂತನುವಿಗೆ ಪರಿವೇತ್ತೃತ್ವದ ದೋಷ ಪರಿಹಾರವಾಗಿ ಇಂದ್ರನು ಮಳೆಗರೆದನು! ಹೀಗೆ ಶಂತನುವೇ ರಾಜನಾಗಿ ಮುಂದುವರೆದನು. ಇತ್ತ ದೇವಾಪಿಯೂ ಯೋಗಿಯಾಗಿ ಕಲಾಪಗ್ರಾಮದಲ್ಲಿ ಯೋಗಸಾಧನೆ ಮಾಡತೊಡಗಿದನು. ಆ ದೇವಾಪಿಯು ಈಗಲೂ ಕಲಾಪಗ್ರಾಮದಲ್ಲಿದ್ದು, ಕಲಿಯುಗದಲ್ಲಿ ಚಂದ್ರವಂಶದ ನಾಶವಾದಾಗ, ಸತ್ಯಯುಗದಲ್ಲಿ ಪುನಃ ಆರಂಭಿಸುವನಂತೆ! 
    ಮಹಾಭಾರತದ ಖಿಲಗ್ರಂಥವಾದ ಹರಿವಂಶದಲ್ಲಿ ಶಾಂತನುವಿನ ಕಥೆ ಬೇರೆಯೇ ರೀತಿಯಲ್ಲಿದೆ. ಅದರಂತೆ ಒಮ್ಮೆ, ಮೇರುಪರ್ವತದಲ್ಲಿ ಮಹಾವಿಷ್ಣುವೂ ಬ್ರಹ್ಮಾದಿದೇವತೆಗಳೂ ಸಭೆ ಸೇರಲು, ಭೂದೇವಿಯು ದುಷ್ಟರಾಜರಿಂದ ಆಗಿರುವ ತನ್ನ ಭಾರವನ್ನು ಇಳಿಸಲು ಮಹಾವಿಷ್ಣುವನ್ನು ಪ್ರಾರ್ಥಿಸಿದಳು. ಆಗ ದೇವತೆಗಳು ತಾವು ತಮ್ಮ ಅಂಶಗಳಿಂದ ಹೇಗೆ ಅವತರಿಸಬೇಕೆಂದು ಬ್ರಹ್ಮನನ್ನು ಕೇಳಿದರು. ಅದಕ್ಕೆ ಬ್ರಹ್ಮನು ಭೂಭಾರವನ್ನಿಳಿಸಲು ಭರತವಂಶವನ್ನು ಆರಿಸಿಕೊಂಡಿರುವುದಾಗಿ ಹೇಳಿ ತನ್ನ ಹಿಂದಿನ ಒಂದು ಕಥೆ ಹೇಳಿದನು. ಅದರಂತೆ, ಒಮ್ಮೆ ಬ್ರಹ್ಮನು ಪೂರ್ವಸಮುದ್ರದ ಪಶ್ಚಿಮ ತೀರದಲ್ಲಿ, ತನ್ನ ಪುತ್ರನಾದ ಕಶ್ಯಪ ಋಷಿಯೊಂದಿಗೆ ಕುಳಿತುಕೊಂಡು ಲೌಕಿಕ ಮತ್ತು ವೈದಿಕ ಮಾರ್ಗಗಳನ್ನು ಅನುಸರಿಸುತ್ತಿದ್ದವರ ಪ್ರಾಚೀನ ಕಥೆಗಳನ್ನೂ ಉತ್ತಮ ಗುಣಗಳ ಪೌರಾಣಿಕ ಇತಿಹಾಸಗಳನ್ನೂ ಚರ್ಚಿಸುತ್ತಿದ್ದನು.‌ಆಗ ಸಮುದ್ರರಾಜನು ಗಂಗೆಯೊಡನೆ ಅವನ ಬಳಿಗೆ ಮೂರ್ತಿಮತ್ತಾಗಿ ಅವಸರದಿಂದ ಬಂದನು! ಅವನೊಂದಿಗೆ ಮೇಘಗಳ ಸಮೂಹಗಳೂ ವಾಯುದೇವತೆಗಳೂ ಆಗಮಿಸಿದರು. ಜಲರೂಪದ ವಸ್ತ್ರ ಧರಿಸಿ, ಪೂರ್ಣಚಂದ್ರನೊಂದಿಗೆ ಕೂಡಿದ್ದು, ಅಲೆಗಳನ್ನು ಭಯಂಕರವಾಗಿ ಏರುಪೇರು ಮಾಡುತ್ತಾ ಮೇಘದಂತೆ ಗಂಭೀರ ಶಬ್ದ ಮಾಡುತ್ತಾ ಸಮುದ್ರರಾಜನು ಬರುತ್ತಾ ಬ್ರಹ್ಮನನ್ನೇ ತಿರಸ್ಕಾರ ಭಾವದಿಂದ ಆವರಿಸಿ ಉಪ್ಪುಪ್ಪಾಗಿದ್ದ ಜಲಬಿಂದುಗಳಿಂದ ತೋಯಿಸಿದ! ಬ್ರಹ್ಮನು ಕುಳಿತಿದ್ದ ಸ್ಥಳವನ್ನೇ ಕೊಚ್ಚಿಕೊಂಡು ಹೋಗುವಂತೆ ಭೋರ್ಗರೆಯುವ ಅಲೆಗಳೊಂದಿಗೆ ಅವನು ಬರುತ್ತಿರಲು, ಬ್ರಹ್ಮನು ಕುಪಿತಗೊಂಡು, " ಶಾಂತೋsಸಿ ( ನೀನು ಶಾಂತನಾಗುವೆ)!" ಎಂದನು.‌ ಬ್ರಹ್ಮನು ಹಾಗೆ ಹೇಳಿದಾಕ್ಷಣ, ಸಮುದ್ರರಾಜನು ಸೂಕ್ಷ್ಮ ರೂಪ ತಾಳಿದನು.‌ ಅವನ ಅಲೆಗಳ ಭೋರ್ಗರೆತ ಉಡುಗಿಹೋಗಿ ಅವನು ರಾಜ್ಯಲಕ್ಷ್ಮಿಯಿಂದ ಕೂಡಿ ಬ್ರಹ್ಮನ ಬಳಿ ನಿಂತನು. 
    ಆಗ ಭೂಭಾರವನ್ನಿಳಿಸಲು ಹಾಗೂ ದೇವತೆಗಳ ಹಿತಕ್ಕಾಗಿ ಬ್ರಹ್ಮನು ಸಮುದ್ರ ರಾಜನನ್ನು ಶಪಿಸಿದನು," ನೀನು ರಾಜನ ರೂಪವನ್ನು ಧರಿಸಿ ಬಂದಿರುವುದರಿಂದ ಭರತವಂಶದ ರಾಜನಾಗಿ ಹುಟ್ಟಿ ಜನರನ್ನು ಪಾಲಿಸುವೆ! ನಾನು ' ಶಾಂತೋsಸಿ ( ಶಾಂತನಾಗುವೆ)' ಎಂದು ಹೇಳಿದ ಕೂಡಲೇ ನೀನು ಸೂಕ್ಷ್ಮ ರೂಪ ಧರಿಸಿದುದರಿಂದ ಭೂಲೋಕದಲ್ಲಿ ನೀನು ಸುಂದರ ಶರೀರದ ರಾಜನಾಗಿ ಶಾಂತನು ಎಂದು ಪ್ರಸಿದ್ಧನಾಗುವೆ! ಸರ್ವಾಂಗಸುಂದರಿಯೂ ನದಿಗಳಲ್ಲಿ ಶ್ರೇಷ್ಠಳೂ ಆದ ಈ ಗಂಗೆಯೇ ಸಶರೀರಳಾಗಿ ನಿನ್ನನ್ನು ಸೇವಿಸುತ್ತಾಳೆ! " 
   ಇದನ್ನು ಕೇಳಿ ಸಮುದ್ರರಾಜನು, " ದೇವದೇವನೇ! ನನಗೇಕೆ ಹೀಗೆ ಶಾಪ ಕೊಟ್ಟೆ? ನಿನ್ನ ಆಜ್ಞೆಯನ್ನು ಸದಾ ಪಾಲಿಸುವ ನಿನ್ನ ಪುತ್ರನೇ ನಾನಲ್ಲವೇ? ನೀನೇ ಈ ಶರೀರವನ್ನು ಸೃಷ್ಟಿಸಿರುವೆ ಹಾಗೂ ಹುಣ್ಣಿಮೆಯ ದಿನ ಚಂಡಮಾರುತವು ನನ್ನನ್ನು ಪ್ರಚೋದಿಸುವುದರಿಂದ ನಾನು ವರ್ಧಿಸಿ ಎಲ್ಲೆ ಮೀರಿ ಹರಿಯುವೆ! ಆಗ ಕಾರಣದಿಂದ ನಿನ್ನನ್ನು ನಾನು ಸ್ಪರ್ಶಿಸಲು ನೀನು ಒದ್ದೆಯಾದೆ! ಇದರಲ್ಲಿ ನನ್ನದೇನು ತಪ್ಪಿದೆ? ದಯವಿಟ್ಟು ಶಾಪವನ್ನು ಹಿಂತೆಗೆದುಕೋ!" ಎಂದನು. ಅದಕ್ಕೆ ಬ್ರಹ್ಮನು," ಹೆದರಬೇಡ! ಶಾಂತನಾಗು! ನೀನು ನಿನ್ನ ಶರೀರವನ್ನು ಎರಡಾಗಿ ವಿಂಗಡಿಸಿಕೊಂಡು ಒಂದರಲ್ಲಿ ಇಲ್ಲೇ ಇರುತ್ತಾ ಇನ್ನೊಂದರ ಮೂಲಕ ಭರತವಂಶದಲ್ಲಿ ಜನಿಸು! ನಿನಗೆ ಪರಮಪ್ರಿಯಳಾದ ಗಂಗೆಯೊಂದಿಗೆ ರಮಿಸು! ಶಾಪಗ್ರಸ್ತರಾದ ಅಷ್ಟವಸುಗಳಿಗೂ ಈ ಗಂಗೆಯ ಮೂಲಕ ನಿನ್ನಿಂದ ಜನನವಾಗಿ ಅವರಿಗೆ ಶಾಪ ವಿಮುಕ್ತಿಯಾಗಲೆಂದೂ ಹೀಗೆ ಮಾಡಿದ್ದೇನೆ! ಅನಂತರ ಭರತವಂಶದಲ್ಲಿ ನಿನ್ನ ಅಂಶವನ್ನು ಭದ್ರಪಡಿಸಿ ಸಮುದ್ರರಾಜನ ರೂಪಕ್ಕೆ ಹಿಂದಿರುಗು!" ಎಂದನು. ಅದಕ್ಕೆ ಸಮುದ್ರರಾಜನು ಒಪ್ಪಿ ಶಾಂತನುವಾಗಿ ಜನಿಸಿದನು.
    ಈ ಪೂರ್ವ ಕಥೆಯನ್ನು ಬ್ರಹ್ಮನು ದೇವತೆಗಳಿಗೆ ಹೇಳಿ," ದೇವತೆಗಳೇ! ಈಗಾಗಲೇ ಶಾಂತನುವು ಹುಟ್ಟಿ ಅಷ್ಟವಸುಗಳಿಗೂ ಜನ್ಮಕೊಟ್ಟು ಅವರಿಗೂ ಶಾಪ ವಿಮೋಚನೆ ಆಗಿದೆ. ಅವರಲ್ಲಿ ಒಬ್ಬನು ಮಾತ್ರ ಭೀಷ್ಮನೆಂಬ ಹೆಸರಿನಲ್ಲಿ ಉಳಿದಿದ್ದಾನೆ. ಶಾಂತನುವಿನ ಇನ್ನೊಬ್ಬ ಪುತ್ರನಿಗೆ ಹುಟ್ಟುವ ಮಕ್ಕಳಿಂದ ಎರಡು ಪಕ್ಷಗಳಾಗಿ ಅವರಿಗೆ ಯುದ್ಧವಾಗುತ್ತದೆ. ಆಗ ಯುದ್ಧದಲ್ಲಿ ಭಾಗವಹಿಸುವ ಅಪಾರ ಸಂಖ್ಯೆಯ ಯೋಧರ ವಧೆಯಾಗಿ ಭೂಭಾರಹರಣವಾಗುತ್ತದೆ! ಹಾಗಾಗಿ ನೀವು ನಿಮ್ಮ ಅಂಶಗಳಿಂದ ಭರತವಂಶದಲ್ಲಿ ಜನಿಸಿ!" ಎಂದು ಹೇಳಿದ. ಅನಂತರ ಅವನು ನಾರದರೊಂದಿಗೆ ಮಹಾವಿಷ್ಣುವನ್ನು ಕೃಷ್ಣಾವತಾರ ಕೈಗೊಳ್ಳಲು ಪ್ರೇರೇಪಿಸಿದ.
    ಹೀಗೆ ಹರಿವಂಶದಲ್ಲಿ ಶಾಂತನುವಿನ ಕಥೆ ಬೇರೆಯೇ ರೀತಿಯಲ್ಲಿದೆ.
   ಹೀಗೆ ಪೌರಾಣಿಕ ಕಥೆಗಳಲ್ಲಿ ಒಂದೇ ಕಥೆಯು ಬೇರೆ ಬೇರೆ ಗ್ರಂಥಗಳಲ್ಲಿ ವಿಭಿನ್ನ ರೂಪಗಳನ್ನು ತಳೆದಿರುವುದು ಒಂದು ಸ್ವಾರಸ್ಯ. 

ಭಾನುವಾರ, ಜುಲೈ 26, 2026

ಸುಂದರೀಶತಕ -೬೯

ಸಂಸ್ಕೃತ ಮೂಲ 

ಶಿತಿಕಂಠಕಂಠಕಾಂತಿಪ್ರತಿಮಲ್ಲೇ ಸ್ಫುರತಿ ಸರ್ವತಸ್ತಿಮಿರೇ /
ಧನ್ಯಾಯ ವದತಿ ಸುಂದರಿ ತವಾಗಮಂ ಪರಿಮಲೋತ್ಕರ್ಷ: //

ಕನ್ನಡ ಅನುವಾದ 

   ' ಹೇ ಸುಂದರಿ! ಶಿತಿಕಂಠ ( ನೀಲಕಂಠ)ನ ಕಂಠದ ಕಾಂತಿಯನ್ನು ಸ್ಪರ್ಧಿಸುವಂತೆ ಎಲ್ಲೆಲ್ಲೂ ಅಂಧಕಾರ ಕವಿದಿರುವಾಗ, ನಿನ್ನ ಉತ್ಕರ್ಷ ಪರಿಮಳವೇ ಆ ನಿನ್ನ ಧನ್ಯ ಪ್ರಿಯತಮನಿಗೆ ನಿನ್ನ ಆಗಮನದ ವಿಷಯವನ್ನು ಹೇಳುತ್ತಿದೆ!' 
    ಇದೊಂದು ಉತ್ಪ್ರೇಕ್ಷಿತ ಸ್ವಾರಸ್ಯಕರ ಶೃಂಗಾರ ಪದ್ಯ! ಇಲ್ಲಿ ನಾಯಕನು ರಾತ್ರಿ ತನ್ನ ಪ್ರಿಯತಮೆಗಾಗಿ ಕಾಯುತ್ತಿದ್ದಾನೆ. ರಾತ್ರಿಯ ಕತ್ತಲು ಹೇಗಿದೆಯೆಂದರೆ, ಶಿತಿಕಂಠ ಅಥವಾ ನೀಲಕಂಠನ, ಅಂದರೆ ಶಿವನ ಕಂಠದ ಕಾಂತಿಯನ್ನು ಸ್ಪರ್ಧಿಸುವಂತಿದೆ! ಶಿವನು ವಿಷ ಕುಡಿದು ಅದು ಅವನ ಕಂಠದಲ್ಲೇ ನಿಂತಿದ್ದರಿಂದ ಅದು ನೀಲಿ ಅಥವಾ ಕಪ್ಪಾಯಿತೆಂದು ಎಲ್ಲರಿಗೂ ಗೊತ್ತಿದೆ. ಹಾಗಾಗಿಯೇ ಅವನಿಗೆ ನೀಲಕಂಠ ಅಥವಾ ಶಿತಿಕಂಠ ಎಂಬ ಹೆಸರುಗಳು ಬಂದಿವೆ. ಆ ಶಿವನ ಕಂಠದ ಕಪ್ಪನ್ನೂ ಮೀರಿಸಿ ರಾತ್ರಿಯ ಕತ್ತಲು ಎಲ್ಲೆಲ್ಲೂ ಹರಡಿದೆ! ಯಾರೂ ಯಾರಿಗೂ ಕಾಣಿಸುತ್ತಿಲ್ಲ! ಇಂಥ ಸಂದರ್ಭದಲ್ಲಿ ನಾಯಕಿಯು ತನ್ನ ಸಖಿಯೊಂದಿಗೆ ಬಂದಿದ್ದಾಳೆ. ಆದರೆ ಕತ್ತಲಿನಲ್ಲಿ ಅವಳು ಬಂದಳೆಂದು ನಾಯಕನಿಗೆ ಗೊತ್ತಾಗುವುದಾದರೂ ಹೇಗೆ? ಅದಕ್ಕೆ ಅವಳ ಸಖಿಯು, ಅವಳ ಉತ್ಕರ್ಷ ಪರಿಮಳವೇ ಅವಳು ಬಂದಳೆಂದು ಅವಳ ಧನ್ಯ ಪ್ರಿಯತಮನಿಗೆ ಹೇಳುತ್ತಿದೆ ಎಂದು ಹೇಳುತ್ತಿದ್ದಾಳೆ! ಅಂದರೆ ನಾಯಕಿಯ ಮೈ ಪರಿಮಳ ಅಷ್ಟು ಸೊಗಸಾಗಿದೆ ಹಾಗೂ ಹೆಚ್ಚಾಗಿ ಪಸರಿಸುತ್ತಿದೆ! ನಾಯಕಿಯು ಕಾಣದಿದ್ದರೂ ಅವಳು ಬೀರುತ್ತಿರುವ ಪರಿಮಳದಿಂದಲೇ ಅವನಿಗೆ ಅವಳ ಬರುವಿಕೆಯು ತಿಳಿಯುತ್ತಿದೆ! ಎಂಥ ಸೊಗಸಾದ ಉತ್ಪ್ರೇಕ್ಷೆ! 

ಶನಿವಾರ, ಜುಲೈ 25, 2026

ಸುಂದರೀಶತಕ -೬೮

ಸಂಸ್ಕೃತ ಮೂಲ 

ಸಾಹಸಭವನಮದೂತಿಕಮವಲೋಕನದಾನವರ್ಧಮಾನಮಿದಮ್/
ಜಯತಿ ಕ್ವಚಿದಪಿ ಧನ್ಯೇ ಸುಂದರಿ ಸಹಜಂ ತವ ಪ್ರೇಮ //

ಕನ್ನಡ ಅನುವಾದ 

   ' ಎಲೈ ಸುಂದರಿ! ನಿನ್ನ ಸಹಜ ಪ್ರೇಮ ನನಗೊಂದು ಸಾಹಸಭವನ! ಅದು ದೂತಿಯಿಲ್ಲದೆ ಉಂಟಾಗಿದೆ! ನಿತ್ಯವೂ ನಿನ್ನ ನೋಟದಿಂದ ಅದು ವರ್ಧಿಸುತ್ತಿದೆ! ಹೇ ಧನ್ಯೆ! ಅದು ಎಂದೆಂದಿಗೂ ಜಯಿಸುತ್ತದೆ!' 
    ಇಲ್ಲಿ ಒಬ್ಬ ನಾಯಕನು ತನ್ನ ಪ್ರೇಮವು ಗೆದ್ದಿರುವುದಕ್ಕೆ ಸಂತೋಷಪಡುತ್ತಾ ತನ್ನ ಪ್ರಿಯತಮೆಯ ಬಳಿ ಈ ವಿಷಯವನ್ನು ಹೇಳುತ್ತಿದ್ದಾನೆ. ಪ್ರೇಮವು ಗೆಲ್ಲುವುದು ಅಷ್ಟು ಸುಲಭವಲ್ಲ. ಹಿಂದಿನ ಕಾಲದಲ್ಲಿ ಪ್ರೇಮಸಂದೇಶವನ್ನು ಕಳಿಸಲು ದೂತಿಯ ಸಹಾಯ ಪಡೆಯುತ್ತಿದ್ದರು.‌ ಆ ದೂತಿಯೂ ಯಾರಿಗೂ ತಿಳಿಯದಂತೆ ಹೋಗಿ ಪ್ರೇಮಸಂದೇಶವನ್ನು ನಾಯಕಿಯ ಬಳಿ ಅಥವಾ ನಾಯಕನ ಬಳಿ ಹೇಳುವುದು ಒಂದು ಕಷ್ಟಕರ ಕೆಲಸವೇ ಆಗಿತ್ತು! ಆದರೂ ಪ್ರೇಮವನ್ನು ನಾಯಕಿ ಅಥವಾ ನಾಯಕ ಒಪ್ಪುತ್ತಿದ್ದರೆಂದು ಹೇಳಲಾಗುತ್ತಿರಲಿಲ್ಲ. ಹಾಗಾಗಿ ದೂತಿಯು ಚೆನ್ನಾಗಿ ಮಾತನಾಡಬೇಕಾಗುತ್ತಿತ್ತು! ಭವಭೂತಿಯ ಮಾಲತಿಮಾಧವ ಮೊದಲಾದ ಅನೇಕ ಸಂಸ್ಕೃತ ನಾಟಕಗಳಲ್ಲಿ ಬೌದ್ಧ ಸಂನ್ಯಾಸಿನಿಯರು ದೂತಿಯ ಕೆಲಸ ಮಾಡುತ್ತಿದ್ದುದನ್ನು ನೋಡಬಹುದು! ನಾಯಕನ ಸ್ನೇಹಿತನೂ ನಾಯಕಿಯ ಸಖಿಯೂ ಅನೇಕ ಬಾರಿ ಸಹಾಯ ಮಾಡುತ್ತಿದ್ದರು. ಕೆಲವೊಮ್ಮೆ ನಾಯಕನ ಚಿತ್ರಪಟವನ್ನು ನಾಯಕಿಗೆ ತಲುಪುವಂತೆ ಮಾಡುವುದೋ ಇಲ್ಲವೇ ನಾಯಕಿಯ ಚಿತ್ರಪಟವನ್ನು ನಾಯಕನಿಗೆ ತಲುಪುವಂತೆ ಮಾಡುವುದೋ, ಹೂಮಾಲೆಯಲ್ಲಿ ಪತ್ರ ತಲುಪುವಂತೆ ಮಾಡುವುದೋ, ಹೀಗೆ ಅನೇಕ ಉಪಾಯಗಳನ್ನು ಮಾಡಬೇಕಿತ್ತು. ಆದರೆ ಇಲ್ಲಿ ಈ ಯಾವುವೂ ಇಲ್ಲದೆ ಪ್ರೇಮವು ಒಲಿದಿರುವುದು ನಾಯಕನಿಗೆ ಸಂತೋಷ ತಂದಿದೆ! ಅದು ಸಹಜವಾಗಿಯೇ ಉಂಟಾಗಿದೆ! ಹಾಗಾಗಿ ಅದೊಂದು ಸಾಹಸಭವನ ಎನ್ನುತ್ತಿದ್ದಾನೆ! ಅವಳ ನೋಟದಿಂದ ಅದು ನಿತ್ಯವೂ ವರ್ಧಿಸುತ್ತಿದೆ! ಹಾಗಾಗಿ ಅದು ಎಂದಿದ್ದರೂ ಗೆಲ್ಲುತ್ತದೆ ಎಂದು ತನಗೆ ತಾನೇ ಆಶ್ವಾಸನೆ ಕೊಟ್ಟುಕೊಳ್ಳುತ್ತಾ ಅವಳಿಗೂ ಆಶ್ವಾಸನೆ ಕೊಡುತ್ತಿದ್ದಾನೆ.

ಗುರುವಾರ, ಜುಲೈ 23, 2026

ಸುಂದರೀಶತಕ -೬೭

ಸಂಸ್ಕೃತ ಮೂಲ 

ತವ ರಥ್ಯಾ ರಾಜಗೃಹಂ ಪ್ರೇಮಧನಂ ಕಿಂ ಚ ಪರಿಜನೋ ಬಂಧು: /
ಸಖ್ಯೋ ಮೂರ್ತಾ: ಪ್ರಾಣಾ: ಸುಂದರಿ ಕಿಮತೋ ಮಮಾಕಾಂಕ್ಷ್ಯಮ್ //

ಕನ್ನಡ ಅನುವಾದ 

    ' ನಿನ್ನ ಮಾರ್ಗವೇ ನನಗೆ ರಾಜಗೃಹ! ನಿನ್ನ ಪ್ರೇಮವೇ ನನಗೆ ಧನ! ನಿನ್ನ ಪರಿಜನರೇ ನನಗೆ ಬಂಧುಗಳು! ನಿನ್ನ ಸಖಿಯರೇ ನನ್ನ ಮೂರ್ತರೂಪದ ಪ್ರಾಣಗಳು! ಹೇ ಸುಂದರಿ! ನನಗೆ ಇನ್ನಾವ ಆಕಾಂಕ್ಷೆ ಬೇಕು?' 
    ಇದು ಒಬ್ಬ ಪತಿಯು ತನ್ನ ನೂತನ ಪತ್ನಿಗೆ ಏಕಾಂತದಲ್ಲಿ ಹೇಳುತ್ತಿರುವಂತಿದೆ! ಹೊಸದಾಗಿ ಮದುವೆಯಾದ ಹೆಣ್ಣಿಗೆ ಪತಿಯು ಹೀಗೆ ಆಶ್ವಾಸನೆ ಕೊಟ್ಟು ಅವಳನ್ನು ಒಲಿಸಿಕೊಳ್ಳಬೇಕು. ಹೆಣ್ಣಿಗೆ ಗಂಡು ಸಂಪೂರ್ಣ ಅವಳ ಕಡೆಯಿದ್ದಾನೆ ಎಂದು ಆಶ್ವಾಸನೆ ಸಿಕ್ಕಿದರೆ ಅವಳು ಅವನನ್ನು ಚೆನ್ನಾಗಿ ಪ್ರೀತಿಸಿ ಅವನ ಸೇವೆ ಮಾಡುತ್ತಾಳೆ. ಅವನೂ ಕೇವಲ ಔಪಚಾರಿಕವಾಗಿಯಲ್ಲದೆ ನಿಜವಾಗಿಯೂ ಅವಳನ್ನು ಗಮನಿಸಿಕೊಳ್ಳಬೇಕು. ಅವಳ ಆಸಕ್ತಿಗಳನ್ನು ಅವನು ತನ್ನವೆಂಬಂತೆ ಇಷ್ಟಪಡಬೇಕು. ಅಂತೆಯೇ ಇಲ್ಲಿ ಪತಿಯು ತನ್ನ ಪತ್ನಿಗೆ ಅವಳ ಮಾರ್ಗವೇ ತನಗೆ ರಾಜಗೃಹದಂತೆ, ಅವಳ ಪ್ರೇಮವೇ ತನಗೆ ಧನ, ಅವಳ ಪರಿಜನರೇ ತನಗೆ ಬಂಧುಗಳು, ಅವಳ ಸಖಿಯರೇ ತನ್ನ ಪ್ರಾಣಗಳು, ಅವಳನ್ನು ಬಿಟ್ಟು ತನಗೆ ಇನ್ನಾವ ಆಕಾಂಕ್ಷೆ ಬೇಕು ಎನ್ನುತ್ತಿದ್ದಾನೆ. ಹೀಗೆ ಅವನಿಗೆ ಅವಳೇ ಎಲ್ಲವೂ ಆಗಿದ್ದಾಳೆ. ಅವಳ ಪ್ರೇಮದಲ್ಲಿ ಅವನು ಪೂರ್ತಿ ಒಂದಾಗಿದ್ದಾನೆ.‌ ಅವನಿಗೆ ಅವಳನ್ನು ಬಿಟ್ಟು ಇನ್ನೇನೂ ಆಸೆಯಿಲ್ಲ. ಇಂಥ ಪತಿ ಸಿಗುವುದು ಕಷ್ಪವಲ್ಲವೇ? ಇಂಥ ಪತಿಯಿದ್ದರೆ ಅವನ ಪತ್ನಿಯೂ ಅವನನ್ನು ಹಾಗೆಯೇ ಪ್ರೀತಿಸುತ್ತಾಳೆ. ಇದೊಂದು ಮಾದರಿ ಎನ್ನಬಹುದಾದರೂ, ಯಾವಾಗಲೂ ಹಾಗೆ ಇರುವುದಿಲ್ಲ ಎನ್ನಬಹುದಾದರೂ ಕವಿಯು ಅಂಥ ಒಂದು ಮಾದರಿಯನ್ನು ಇಲ್ಲಿ ತೋರಿಸಿದ್ದಾನೆ.‌

ಮಂಗಳವಾರ, ಜುಲೈ 21, 2026

ಸುಂದರೀಶತಕ -೬೬

ಅಯಿ ಪಥಿಕ ರಕ್ಷ ಜೀವಂ ಪರಿಹರ ದೂರೇಣ ಕೇತಕೀಕುಸುಮಮ್ /
ಇಹ ವಸತಿ ಪುಷ್ಪಧನ್ವಾ ಸ್ಮರಹರನಯನಾನ್ನಿರಾತಂಕ: //

ಕನ್ನಡ ಅನುವಾದ 

    ಒಬ್ಬ ಪ್ರಯಾಣಿಕ ಇನ್ನೊಬ್ಬ ಪ್ರಯಾಣಿಕನಿಗೆ ಹೇಳುತ್ತಾನೆ, ' ಎಲೈ ಪ್ರಯಾಣಿಕ! ನಿನ್ನ ಜೀವವನ್ನು ರಕ್ಷಿಸಿಕೋ! ಈ ಕೇತಕೀ ಪುಷ್ಪವನ್ನು ದೂರದಿಂದಲೇ ಪರಿತ್ಯಜಿಸು! ಏಕೆಂದರೆ ಇದರಲ್ಲಿ ಶಿವನಿಂದ ಭಸ್ಮನಾದ ಕಾಮದೇವನು ಅವನ ನಯನದ ಭಯದಿಂದ ದೂರವಾಗಿ ನಿರಾತಂಕದಿಂದ ನೆಲೆಸಿದ್ದಾನೆ!' 
    ಇಲ್ಲಿ ಕವಿಯು ಬಹಳ ಸೊಗಸಾದ ಕಲ್ಪನೆಯನ್ನು ಮಾಡಿದ್ದಾನೆ. ಕೇತಕಿ ಪುಷ್ಪ ಅಥವಾ ಕೇದಗೆ ಅಥವಾ ತಾಳೆ ಹೂವು ಬಹಳ ಸುಗಂಧಿತವಾದ, ಸಮ್ಮೋಹನಗೊಳಿಸುವಂಥ ಒಂದು ಹೂವು. ಒಬ್ಬ ಪ್ರಯಾಣಿಕ ಇನ್ನೊಬ್ಬ ಪ್ರಯಾಣಿಕನಿಗೆ, ಇದರಲ್ಲಿ ಕಾಮದೇವನಿದ್ದಾನೆ, ಹಾಗಾಗಿ ಈ ಹೂವನ್ನು ದೂರದಿಂದಲೇ ಪರಿತ್ಯಜಿಸಿ ಜೀವವನ್ನು ರಕ್ಷಿಸಿಕೋ ಎಂದು ಸ್ವಾರಸ್ಯಕರವಾಗಿ ಹೇಳುತ್ತಿದ್ದಾನೆ. ಆ ಹೂವಿನಲ್ಲಿರುವ ಕಾಮದೇವನ ಸಂಪರ್ಕಕ್ಕೆ ಬಂದರೆ ಅವನು ತನ್ನ ಪುಷ್ಪ ಬಾಣಗಳನ್ನು ಬಿಟ್ಟು ನಿನ್ನನ್ನು ಪ್ರೇಮದಲ್ಲಿ ಬೀಳಿಸುತ್ತಾನೆ ಜೋಪಾನ ಎಂಬ ಧಾಟಿಯಲ್ಲಿ ಹೇಳುತ್ತಿದ್ದಾನೆ. ಕಾಮದೇವನು ಈ ಹೂವಿನಲ್ಲಿ ಏಕಿದ್ದಾನೆ ಎಂದರೆ, ತನ್ನನ್ನು ಮೂರನೆಯ ಕಣ್ಣಿನಿಂದ ಭಸ್ಮ ಮಾಡಿದ ಶಿವನಿಂದ, ಅವನ ಭಯದಿಂದ ದೂರವಾಗಿ ಇಲ್ಲಿ ನಿರಾತಂಕವಾಗಿ ಇದ್ದಾನೆ ಎಂದು ಹೇಳುತ್ತಿದ್ದಾನೆ! ಇದೇಕೆ ಎಂದು ಅರ್ಥ ಮಾಡಿಕೊಳ್ಳಲು ಎರಡು ಪೌರಾಣಿಕ ಪ್ರಸಂಗಗಳನ್ನು ತಿಳಿದಿರಬೇಕು. 
     ಒಂದು, ದೇವತೆಗಳು ತಾರಕಾಸುರನನ್ನು ಸಂಹರಿಸಲು ಶಿವನಿಂದ ಪುತ್ರಜನನವಾಗಲೆಂದೂ ಅದಕ್ಕೆ ಅವನಿಗೆ ಪಾರ್ವತಿಯ ಮೇಲೆ ಮನಸ್ಸಾಗಲೆಂದೂ ಅವನ ತಪಸ್ಸನ್ನು ಕೆಡಿಸಲು ಮನ್ಮಥನನ್ನು ಕಳಿಸಿದ ಕಥೆ. ಮನ್ಮಥನು ಶಿವನ ಮೇಲೆ ಬಾಣ ಬಿಡಲು ಹೊರಟಾಗ, ಮನಸ್ಸು ಕಲಕಿದಂತಾಗಿ ಶಿವನು ಕೋಪದಿಂದ ತನ್ನ ಮೂರನೆಯ ಕಣ್ಣಿನಿಂದ ಅವನನ್ನು ಭಸ್ಮ ಮಾಡಿದ. ಹೀಗಾಗಿ ಕಾಮದೇವನಿಗೆ ಶಿವನೆಂದರೆ ಭಯ. ಆದರೆ ಅವನು ಶಿವನಿಂದ ತಪ್ಪಿಸಿಕೊಳ್ಳುವುದು ಹೇಗೆ?  ಶಿವನು ಬರಲಾಗದ, ಅಥವಾ ಬರಲು ಇಷ್ಟಪಡದ ಸ್ಥಳಕ್ಕೆ ಹೋಗುವುದರ ಮೂಲಕ. ಅದು ಕೇತಕಿ ಪುಷ್ಪ. ಶಿವನಿಗೆ ಇಷ್ಟವಿಲ್ಲದ ಪುಷ್ಪ. ಅದೇಕೆ? ಅದಕ್ಕೆ ಇನ್ನೊಂದು ಪೌರಾಣಿಕ ಪ್ರಸಂಗವನ್ನು ನೋಡಬೇಕು. 
      ಅದರಂತೆ, ಒಮ್ಮೆ, ಬ್ರಹ್ಮನಿಗೂ ವಿಷ್ಣುವಿಗೂ ಯಾರು ಹೆಚ್ಚೆಂದು ವಾದವುಂಟಾಗಲು, ಅವರ ಮಧ್ಯೆ ಒಂದು ದೊಡ್ಡ ಜ್ಯೋತಿರ್ಲಿಂಗ ಉದ್ಭವವಾಯಿತು! ಅದರ ಆದಿಯನ್ನು ಪತ್ತೆಮಾಡಲು ಬ್ರಹ್ಮನು ಹಂಸದ ರೂಪದಲ್ಲಿ ಮೇಲೆ ಹಾರಿಹೋಗಲು, ಅದರ ಅಂತ್ಯವನ್ನು ಪತ್ತೆಮಾಡಲು ವಿಷ್ಣುವು ವರಾಹ ರೂಪದಲ್ಲಿ ಭೂಮಿಯನ್ನು ಅಗೆಯುತ್ತಾ ಹೋದನು. ಇಬ್ಬರಿಗೂ ಆದಿ, ಅಂತ್ಯಗಳು ಪತ್ತೆಯಾಗಲಿಲ್ಲ! ಆಗ ಮೇಲಿನಿಂದ ಒಂದು ಕೇತಕಿ ಪುಷ್ಪ ಬೀಳುತ್ತಿರಲು, ಅದನ್ನು ನೋಡಿದ ಬ್ರಹ್ಮನು ತಾನು ಜ್ಯೋತಿರ್ಲಿಂಗದ ಆದಿಯನ್ನು ನೋಡಿರುವುದಾಗಿ ಅದಕ್ಕೆ ಸಾಕ್ಷಿ ಹೇಳುವಂತೆ ಕೇಳಿದನು. ಅದಕ್ಕೆ ಕೇತಕಿ ಪುಷ್ಪ ಒಪ್ಪಿತು. ವಿಷ್ಣುವು ಅಂತ್ಯವನ್ನು ಕಾಣಲಾರದೆ ಮೇಲೆ ಬಂದು ಬ್ರಹ್ಮನ ಬಳಿ ಸತ್ಯವನ್ನು ಒಪ್ಪಿಕೊಂಡನು. ಆಗ ಬ್ರಹ್ಮನು ತಾನು ಆದಿಯನ್ನು ನೋಡಿರುವುದಾಗಿ ಹೇಳಿ ಅದಕ್ಕೆ ಕೇತಕಿ ಪುಷ್ಪವೇ ಸಾಕ್ಷಿ ಎಂದನು. ಕೇತಕಿ ಪುಷ್ಪವೂ ಸುಳ್ಳು ಸಾಕ್ಷಿ ಹೇಳಿತು. ಆಗ ವಿಷ್ಣುವು ಬ್ರಹ್ಮನೇ ಹೆಚ್ಚೆಂದು ಒಪ್ಪಿಕೊಂಡನು. ಆಗ ಶಿವನು ಜ್ಯೋತಿರ್ಲಿಂಗದ ಸ್ಥಾನದಲ್ಲಿ ಪ್ರತ್ಯಕ್ಷನಾಗಿ ಬ್ರಹ್ಮನ ವಿಷಯದಲ್ಲಿ ಅವನು ಸುಳ್ಳು ಹೇಳಿದ್ದಕ್ಕೆ ಕ್ರುದ್ಧನಾಗಿ ಅವನಿಗೆ ಪೂಜೆಯಿರದಂತೆ ಶಪಿಸಿದನು! ವಿಷ್ಣುವು ಸತ್ಯ ಹೇಳಿದ್ದಕ್ಕೆ ಅವನಿಗೆ ತನ್ನ ಸಮಾನತೆ ಕೊಟ್ಟನು. ಸುಳ್ಳು ಸಾಕ್ಷಿ ಹೇಳಿದ್ದಕ್ಕೆ ಕೇತಕಿ ಪುಷ್ಪಕ್ಕೆ ತನ್ನ ಪೂಜೆಗೆ ಅನರ್ಹವಾಗುವಂತೆ ಶಪಿಸಿದನು! ಹೀಗೆ ಶಿವನಿಗೆ ಕೇತಕಿ ಪುಷ್ಪ ಇಷ್ಟವಾಗುವುದಿಲ್ಲ.‌ ಹಾಗಾಗಿ ಅವನು ಕೇತಕಿ ಪುಷ್ಪದ ಬಳಿ ಬರುವುದಿಲ್ಲವೆಂದು ಕಾಮದೇವನು ಅದರಲ್ಲಿ ನಿಶ್ಚಿಂತೆಯಿಂದ ನೆಲೆಸಿದ್ದಾನೆ ಎಂದು ಕವಿಯು ಇಲ್ಲಿ ಸುಂದರವಾದ ಉತ್ಪ್ರೇಕ್ಷಿತ ಕಲ್ಪನೆ ಮಾಡಿದ್ದಾನೆ. ಹೀಗೆ ಅದರಲ್ಲಿ ಕಾಮದೇವನು ಇರುವುದರಿಂದ ಅದರ ಬಳಿ ಹೋಗಬೇಡ ಎಂದು ಒಬ್ಬ ಪ್ರಯಾಣಿಕ ಇನ್ನೊಬ್ಬ ಪ್ರಯಾಣಿಕನಿಗೆ ಹೇಳುತ್ತಿರುವಂತೆ ಸೊಗಸಾದ ಕಲ್ಪನೆ ಮಾಡಿದ್ದಾನೆ. 

ಸೋಮವಾರ, ಜುಲೈ 20, 2026

ಶ್ರೀ ಶಂಕರಾಚಾರ್ಯರ ನಿಂದನೆ ಏಕೆ?

ಇತ್ತೀಚೆಗೆ ಉಡುಪಿಯ ರಾಜಾಂಗಣದಲ್ಲಿ ಹರಿಕಥೆ ಮಾಡುವಾಗ ಶ್ರೀ ಶಂಕರಾಚಾರ್ಯರ ಬಗ್ಗೆ ನಿಂದನೆ ಮಾಡಲಾದ ವಿಷಯ ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ವಿಷಯವಾಗಿ ಶಿರೂರು ಮಠದವರು ಕ್ಷಮಾಪಣೆ ಕೇಳಿದರೂ ಕೆಲವು ಮಾಧ್ವರು ಅದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಈ ರೀತಿ ಮಾಧ್ವರಲ್ಲಿ ಶಂಕರಾಚಾರ್ಯರನ್ನು ಮಹಾಭಾರತದಲ್ಲಿ ಭೀಮನಿಂದ ಹತನಾದ ಮಣಿಮಂತ ದೈತ್ಯನ ಪುನರ್ಜನ್ಮವೆಂದು ಹೇಳುವುದು, ಆ ಹಿಂದಿನ ಕೋಪಕ್ಕೆ ಅವರು ಅಸಚ್ಛಾಸ್ತ್ರಗಳನ್ನು ರಚಿಸಿದರೆಂದೂ ಅದನ್ನು ವಾಯುದೇವನ ಅವತಾರವಾದ ಮಧ್ವಾಚಾರ್ಯರು ಖಂಡಿಸಿದರೆಂದೂ ಹೇಳುತ್ತಾರೆಂದು ಕೇಳಿದ್ದೆ. ಆದರೆ ಈಗ ನಿಜಕ್ಕೂ ಇದು ಮಾಧ್ವರಲ್ಲಿ ಪ್ರಚಲಿತವಿದೆ ಹಾಗೂ ಇದಕ್ಕೆ ಸಮರ್ಥನೆ ಕೂಡ ಮಾಡಿಕೊಳ್ಳುತ್ತಾರೆ ಎಂದು ಗೊತ್ತಾಗುತ್ತಿದೆ. ನಿಜಕ್ಕೂ ಇದು ಮಾಧ್ವರ ವಿಷಯದಲ್ಲಿ ನಗೆಪಾಟಲಿನ ವಿಷಯವೆಂದು ಹೇಳಬೇಕಾಗುತ್ತದೆ. ಏಕೆಂದರೆ, ಒಬ್ಬ ಶ್ರೇಷ್ಠ ಗುರುವನ್ನು ವೈಯಕ್ತಿಕ ಮಟ್ಟದಲ್ಲಿ ನಿಂದಿಸುವುದು ಅವರಿಗೆ ಶೋಭೆ ತರುವಂಥದ್ದಲ್ಲ.
     ಹೀಗೆ ಮಧ್ವಾಚಾರ್ಯರು ಹೇಳಿರುವರಾ? ಅವರ ಮಹಾಭಾರತ ತಾತ್ಪರ್ಯ ನಿರ್ಣಯವೆಂಬ ಗ್ರಂಥದಲ್ಲಿ ಮಣಿಮಂತ ದೈತ್ಯನು ಭೀಮನಿಂದ ಹತನಾದ ಬಳಿಕ ಪುನಃ ಕಲಿಯುಗದಲ್ಲಿ ಹುಟ್ಟಿ ಜಗನ್ಮಿಥ್ಯಾವಾದ ಹರಡುವನೆಂದು ಹೇಳಿದ್ದಾರೆ ನಿಜ. ಆದರೆ ಅದು ಶಂಕರಾಚಾರ್ಯರು ಎಂದು ಹೇಳಿಲ್ಲ. ಅಂತೆಯೇ ಇದಕ್ಕೆ ಮಹಾಭಾರತದಲ್ಲಿ ಆಧಾರವಿಲ್ಲ. ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ ಮೂಲ ಮಹಾಭಾರತದಲ್ಲಿ ಇಲ್ಲದ ಇಂಥ ಇನ್ನೂ ಕೆಲವು ಅಭಿಪ್ರಾಯಗಳೂ ಕಥೆಗಳೂ ಇವೆ. ಇಂಥ ಕಾಲ್ಪನಿಕ ಕಥೆಗಳು ತಪ್ಪಲ್ಲ ಎಂದರೂ ಇತರರಿಗೆ ತೊಂದರೆಯಾಗುವ ಕಥೆಗಳನ್ನು ಕೈಬಿಡಬೇಕು. ತೊಂದರೆಯಿಲ್ಲದ ಪಕ್ಷದಲ್ಲಿ ಮೂಲದಲ್ಲಿಲ್ಲದ ಕಥೆಗಳನ್ನು ಮೂಲದ್ದೇ ಎಂದು ಹೇಳಬಾರದು ಹಾಗೂ ಗಂಭೀರವಾಗಿ ತೆಗೆದುಕೊಳ್ಳಬಾರದು. 
     ಯಾವುದಾದರೂ ಪುರಾಣ ಅಥವಾ ಪ್ರಮಾಣ ಗ್ರಂಥದಲ್ಲಿ ಈ ವಿಷಯ ಇದೆಯೇ? ಖಂಡಿತ ಇಲ್ಲ!
    ಹಾಗಾದರೆ ಈ ವಿಚಿತ್ರ,ಅಸಂಬದ್ಧ, ಅಶ್ಲೀಲ ಕಥೆ ಎಲ್ಲಿಂದ ಬಂತು?
    ನಾರಾಯಣ ಪಂಡಿತರೆಂಬುವರು ರಚಿಸಿರುವ ಮಣಿಮಂಜರಿ ಎಂಬ ಗ್ರಂಥದಲ್ಲಿ ಈ ಕಥೆಯಿದೆ. ಇನ್ನೂ ಸಾಕಷ್ಟು ಅಶ್ಲೀಲ, ಅವಾಚ್ಯ ವಿಷಯಗಳಿವೆ. ಅವರು ಮಧ್ವಾಚಾರ್ಯರ ಶಿಷ್ಯರಾದ್ದರಿಂದ ಅವರ ಈ ಕಥೆ ಮಾನ್ಯ ಎಂದು ಮಾಧ್ವರ ಒಂದು ನಂಬಿಕೆಯಾಗಿದೆ. ಆದರೆ ಈ ಕಥೆಗೆ ಆಧಾರ? ಏನೇನೊ ಇಲ್ಲ! ಇದೊಂದು ಕಪೋಲಕಲ್ಪಿತ ಸುಳ್ಳು ಕಥೆ! ನಾರಾಯಣ ಪಂಡಿತರು ಎಷ್ಟೇ ವಿದ್ವಾಂಸರಾದರೂ ಅವರೇನು ವೇದವ್ಯಾಸರಲ್ಲ! ನೇರವಾಗಿ ಮಾಧ್ವರ ಗುರುಗಳಲ್ಲ! ಭಗವಂತನಂತೂ ಅಲ್ಲವೇ ಅಲ್ಲ! ಮತ್ತೇಕೆ ಅವರ ಈ ಸುಳ್ಳು ಕಥೆಗೆ ಮಾನ್ಯತೆ ಕೊಡಬೇಕೋ ಗೊತ್ತಾಗುವುದಿಲ್ಲ! ಇದರಿಂದ ಶಂಕರಾಚಾರ್ಯರ ನಿಂದನೆ ಮಾಡಿದರೆ ಅದರಿಂದ ಸ್ಮಾರ್ತರಿಗೆ ತೊಂದರೆಯಾಗುವುದಕ್ಕಿಂತ ಮಾಧ್ವರಿಗೇ ಆಗುತ್ತದೆ! ಏಕೆಂದರೆ ಹರಿಧ್ಯಾನ, ನಾಮ ಸಂಕೀರ್ತನೆ, ಪುರಾಣ ಶ್ರವಣಾದಿಗಳನ್ನು ಬಿಟ್ಟು ಇನ್ನೊಬ್ಬ ಶ್ರೇಷ್ಠ ಸಂತರನ್ನು ನಿಂದಿಸಿದರೆ ಅವರ ಸಾಧನೆಗೇ ಅಡ್ಡಿಯಾಗುವುದಲ್ಲವೇ? ಅದೂ ಯಾವುದೇ ಆಧಾರವಿಲ್ಲದೇ! 
    ಎಲ್ಲಿಯ ಮಣಿಮಂತ, ಎಲ್ಲಿಯ ಶಂಕರಾಚಾರ್ಯರು? ಕಾಡಿನಲ್ಲಿ ಭೀಮನಿಂದ ಹಚನಾಗುವ ಮಣಿಮಂತನದು ಮಹಾಭಾರತದ ಒಂದು ಸಣ್ಣ ಘಟನೆ! ಒಬ್ಬ ರಾಕ್ಷಸನು ವೇದ,ಶಾಸ್ತ್ರಾದಿಗಳಲ್ಲಿ ದೊಡ್ಡ ವಿದ್ವಾಂಸನಾಗಿ, ಅದೂ ದ್ವಾಪರ ಯುಗ ಮುಗಿದು ಯಾವುದೋ ಕಾಲದ ಬಳಿಕ ಹುಟ್ಟಿ, ಅನಂತರ ನೂರು ವರ್ಷಗಳ ನಂತರ ಮಧ್ವರು ಅವನ ವಾದವನ್ನು ಖಂಡಿಸಲು ಅವತರಿಸುವುದು ಎಂಥ ಹಾಸ್ಯಾಸ್ಪದ ತಿರುಳಿಲ್ಲದ ಕಥೆ ಎಂದು ಯಾರಾದರೂ ಹೇಳಬಹುದು! ಹೀಗೆ ಇನ್ನಾರೋ ಇನ್ನೇನೋ ಹೇಳಿಬಿಟ್ಟರೆ ಅದನ್ನೂ ನಂಬಬಹುದೇ? ಇಂಥವನ್ನು ಶತಾವಧಾನಿ ಗಣೇಶ್ ಅವರು Religious Pornography , ಮತೀಯ ಅಶ್ಲೀಲತೆ ಎಂದು ಕಟುವಾಗಿ ಟೀಕಿಸುತ್ತಾರೆ.‌ ಹೇಮಚಂದ್ರನೆಂಬ ದೊಡ್ಡ ಜೈನ ಸಂಸ್ಕೃತ ಕವಿ ತನ್ನ ಪರಿಶಿಷ್ಟ ಪರ್ವವೆಂಬ ಗ್ರಂಥದಲ್ಲಿ ಇಂಥದ್ದೇ ಅಸಂಬದ್ಧ ಕಥೆಯನ್ನು ಚಾಣಕ್ಯನ ವಿಷಯದಲ್ಲಿ ಬರೆದಿದ್ದಾನೆ.‌ ಆ ಕಥೆಯ ಪ್ರಕಾರ, ಚಂದ್ರಗುಪ್ತ ಮೌರ್ಯ ನು ಒಮ್ಮೆ ಬಹಳ ಹಸಿದಿದ್ದಾಗ ಚಾಣಕ್ಯನು ಚೆನ್ನಾಗಿ ಪಾಯಸದೂಟ ಮಾಡಿ ಬರುತ್ತಿದ್ದ ಒಬ್ಬ ಬ್ರಾಹ್ಮಣನ ಹೊಟ್ಟೆಯನ್ನು ಸೀಳಿ ಅದರಲ್ಲಿದ್ದ ಪಾಯಸವನ್ನು ತೆಗೆದು ಚಂದ್ರಗುಪ್ತನಿಗೆ ಕೊಟ್ಟನಂತೆ! ಈ ಕಥೆಗೆ ಏನು ಹೇಳುವುದು? ಹೇಮಚಂದ್ರನ ಪರಿಶಿಷ್ಟ ಪರ್ವ ತುಂಬಾ ಸೊಗಸಾದ ಕಥಾಗ್ರಂಥವೇ ಹೌದು! ಆದರೆ ಅದರಲ್ಲಿ ಇಂಥ ಕಥೆಗಳೂ ಇವೆ! ಇಂಥವನ್ನೆಲ್ಲಾ ಸತ್ಯ, ಐತಿಹಾಸಿಕ ಎಂದು ನಂಬಿದರೆ ಹೇಗೆ? ಹೀಗೆಯೇ ಶಂಕರವಿಜಯಗಳು, ಮಧ್ವವಿಜಯ, ಇವೆಲ್ಲವುಗಳಲ್ಲಿರುವುದನ್ನು ಸಂಪೂರ್ಣ ಐತಿಹಾಸಿಕ, ಸತ್ಯ ಎಂದು ಹೇಳಲಾಗುವುದಿಲ್ಲ. ಶಂಕರಾಚಾರ್ಯರು ಒಬ್ಬ ರಾಜನ ಮೂಲಕ ಬೌದ್ಧ ಸ್ತೂಪಗಳನ್ನು ಕೆಡವಿಸಿದರು ಎಂದೂ ಒಂದು ಕಥೆಯಿದೆ. ಇದಕ್ಕೆ ಐತಿಹಾಸಿಕ ಆಧಾರ ಇಲ್ಲ. ಇಂಥ ಅನೇಕ ಕಥೆಗಳಲ್ಲಿ ಸ್ವಾರಸ್ಯಕರವಾದ, ಉಪಯುಕ್ತವಾದ ಕೆಲವನ್ನು ಐತಿಹ್ಯಗಳೆಂದು ತೆಗೆದುಕೊಂಡರೂ ಐತಿಹಾಸಿಕ ಸತ್ಯ ಎಂದು ಹೇಳಲಾಗುವುದಿಲ್ಲ. ಕಲ್ಪಿತ ಕಥೆಗಳು ಪೂರ್ತಿ ತಪ್ಪಲ್ಲ. ಕೆಲವು ಒಳ್ಳೆಯ ಕಥೆಗಳನ್ನು ಮನರಂಜನೆಗೆ, ನೀತಿಬೋಧೆಗೆ ತೆಗೆದುಕೊಳ್ಳಬಹುದು. ಆದರೆ ಅವನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು. ವಿಚಾರಿಸಿ ನೋಡಬೇಕು.‌ ಅತಿಯಾದ ಕುರುಡು ನಂಬಿಕೆ ವಿಚಾರಶಕ್ತಿಯನ್ನು ಮಂಕುಮಾಡುತ್ತದೆ! 
     ಪುರಾಣಗಳಲ್ಲೂ ಅನೇಕ ಕಥೆಗಳನ್ನು ಪ್ರಕ್ಷಿಪ್ತಗಳೆಂದು ವಿದ್ವಾಂಸರು ತೋರಿಸಿದ್ದಾರೆ. ಭವಿಷ್ಯ ಪುರಾಣದಲ್ಲಿ ಈಗಿನ ಕಾಲದ ಅನೇಕ ಮಹನೀಯರು ಪೌರಾಣಿಕ ವ್ಯಕ್ತಿಗಳ ಪುನರ್ಜನ್ಮಗಳೆಂದು ಹೇಳಲಾಗಿದೆ. ಇವನ್ನು ಐತಿಹಾಸಿಕವಾಗಿ, ಗಂಭೀರವಾಗಿ ತೆಗೆದುಕೊಳ್ಳಲಾಗುವುದಿಲ್ಲ. ಶಂಕರಾಚಾರ್ಯರ ಜನನಕ್ಕೆ ಸಂಬಂಧಿಸಿದಂತೆ ಏನಾದರೂ ಪುರಾಣ ವಾಕ್ಯಗಳಿವೆಯೇ ಎಂದರೆ ಇವೆ. ಅವನ್ನೂ ಸ್ವಲ್ಪ ನೋಡೋಣ.

    ಕೂರ್ಮ ಪುರಾಣದಲ್ಲಿ ಶಂಕರಾಚಾರ್ಯರು ಸಾಕ್ಷಾತ್ ಶಿವನ ಅವತಾರವೆಂದು ಹೇಳಿದೆ:

     ಕಲೌ ರುದ್ರೋ ಮಹಾದೇವೋ ಲೋಕಾನಾಮೀಶ್ವರ: ಪರ: /
ತದೇವ ಸಾಧಯೇನ್ನೃಣಾಂ ದೇವತಾನಾಂ ಚ ದೈವತಮ್ //
ಕರಿಷ್ಯತ್ಯವತಾರಂ ಸ್ವಂ ಶಂಕರೋ ನೀಲಲೋಹಿತ: /
ಶ್ರೌತಸ್ಮಾರ್ತಪ್ರತಿಷ್ಠಾರ್ಥೇ ಭಕ್ತಾನಾಂ ಹಿತಕಾಮ್ಯಯಾ //
ಉಪದೇಕ್ಷ್ಯತಿ ತಜ್ಜ್ಞಾನಂ ಶಿಷ್ಯಾಣಾಂ ಬ್ರಹ್ಮಸಮ್ಮಿತಂ /
ಸರ್ವವೇದಾಂತಸಾರಂ ಹಿ ಧರ್ಮಾನ್ ವೇದಾಂತದರ್ಶನಾತ್ //
ಯೇ ತಂ ಪ್ರೀತ್ಯಾ ನಿಷೇವಂತೇ ಯೇನಕೇನೋಪಚಾರತ: /
ವಿಜಿತ್ಯ ಕಲಿಜಾನ್ ದೋಷಾನ್ ಯಾನ್ತಿ ತೇ ಪರಮಂ ಪದಮ್ //
    ' ಕಲಿಯುಗದಲ್ಲಿ ರುದ್ರ ಮಹಾದೇವನು ಲೋಕಗಳ ಈಶ್ವರನೂ ಪರದೈವವೂ ದೇವತೆಗಳ ದೈವವೂ ಆಗಿರುವುದರಿಂದ ಜನರು ಅವನನ್ನು ಒಲಿಸಿಕೊಳ್ಳಬೇಕು. ನೀಲಲೋಹಿತನಾದ ಅವನು ಭಕ್ತರ ಹಿತಕಾಮನೆಗಾಗಿ ಶ್ರೌತ, ಸ್ಮಾರ್ತ ವಿಚಾರಗಳನ್ನು ಪ್ರತಿಷ್ಠಾಪಿಸಲು ತಾನೇ ಅವತಾರವೆತ್ತುತ್ತಾನೆ. ಅವನು ತನ್ನ ಶಿಷ್ಯರಿಗೆ ವೇದಾಂತದರ್ಶನದಿಂದ ಉದ್ಧರಿಸಿದ ಸರ್ವವೇದಾಂತಸಾರವಾದ ಧರ್ಮಗಳನ್ನು ಉಪದೇಶಿಸುತ್ತಾನೆ. ಅವನನ್ನು ಯಾರು ಯಾವುದಾದರೂ ಪ್ರಕಾರದ ಉಪಚಾರಗಳಿಂದ ಸೇವಿಸುವರೋ ಅವರು ಕಲಿಯುಗದ ದೋಷಗಳನ್ನು ಜಯಿಸಿ ಪರಮಪದವನ್ನು ಪಡೆಯುತ್ತಾರೆ.' 

    ಹಾಗೆಯೇ ಲಿಂಗಪುರಾಣದಲ್ಲೂ ಹೀಗೆ ಹೇಳಿದೆ -

  ನಿಂದಂತಿ ವೇದವಿದ್ಯಾಂ ಚ ದ್ವಿಜಾ: ಕರ್ಮಾಣಿ ವೈ ಕಲೌ /
  ಕಲೌ ರುದ್ರೋ ಮಹಾದೇವ: ಶಂಕರೋ ನೀಲಲೋಹಿತ: /
   ಪ್ರಕಾಶತೇ ಪ್ರತಿಷ್ಠಾರ್ಥಂ ಧರ್ಮಸ್ಯ ವಿಕೃತಾಕೃತೇ//

' ಕಲಿಯುಗದಲ್ಲಿ ದ್ವಿಜರು ವೇದವಿದ್ಯೆಯನ್ನು ನಿಂದಿಸುತ್ತಾರೆ. ಆಗ ನೀಲಲೋಹಿತನಾದ ರುದ್ರ ಮಹಾದೇವ ಶಂಕರನು ವಿಕೃತವಾದ ಧರ್ಮವನ್ನು ಪುನಃ ಪ್ರತಿಷ್ಠಾಪಿಸಲು ಪ್ರಕಟಗೊಳ್ಳುತ್ತಾನೆ.' 

    ಭವಿಷ್ಯೋತ್ತರ ಪುರಾಣದಲ್ಲಿ ಹೀಗಿದೆ -

  ಕಲ್ಯಾದೌ ದ್ವಿಸಹಸ್ರಾಂತೇ ಲೋಕಾನುಗ್ರಹಕಾಮ್ಯಯಾ /
  ಚತುರ್ಭಿ: ಸಹ ಶಿಷ್ಯೈಸ್ತು ಶಂಕರೋsವತರಿಷ್ಯತಿ //

' ಕಲಿಯುಗವು ಆರಂಭವಾಗಿ ಎರಡು ಸಾವಿರ ವರ್ಷಗಳ ನಂತರ, ಲೋಕಾನುಗ್ರಹ ಮಾಡಲೆಂದು ಶಂಕರನು ತನ್ನ ನಾಲ್ಕು ಶಿಷ್ಯರೊಂದಿಗೆ ಅವತರಿಸುತ್ತಾನೆ.'
   ಇದೇ ರೀತಿ ವಾಯು ಪುರಾಣ ಹಾಗೂ ಸೌರ ಪುರಾಣಗಳಲ್ಲೂ ಹೇಳಿದೆ. 
    ಆದರೆ ಪದ್ಮ ಪುರಾಣದಲ್ಲಿ ಶಂಕರರನ್ನು ಕುರಿತ ನಿಂದನೀಯ ವಾಕ್ಯಗಳಿವೆ. ಆದರೆ ಅದು ಮಣಿಮಂತನ ಪುನರ್ಜನ್ಮವೆಂದಲ್ಲ. ಇಲ್ಲಿ ಶಿವ,ಪಾರ್ವತಿಯರ ಒಂದು ಸಂವಾದದಲ್ಲಿ ಶಿವನು, ತಾನೇ ಹೇಳಿದ ಪಾಶುಪತಾದಿ ಶೈವ ಶಾಸ್ತ್ರಗಳು, ಕಣಾದನ ವೈಶೇಷಿಕ, ಗೌತಮನ ನ್ಯಾಯ, ಕಪಿಲನ ಸಾಂಖ್ಯ, ಜೈಮಿನಿಯ ಪೂರ್ವಮೀಮಾಂಸೆ, ಇವೆಲ್ಲವೂ ತಾಮಸ ಶಾಸ್ತ್ರಗಳೆಂದು ಹೇಳುತ್ತಾ ಕೊನೆಗೆ ವಿಷ್ಣುವಿನ ಬೌದ್ಧ ಮತ್ತು ತನ್ನದೇ ರೂಪದ ಶಂಕರರ ಉಪದೇಶವಾದ ಮಾಯಾವಾದ ಮತ್ತು ಅದ್ವೈತಗಳನ್ನೂ ಸೇರಿಸುತ್ತಾನೆ!
   ದೈತ್ಯಾನಾಂ ನಾಶನಾರ್ಥಾಯ ವಿಷ್ಣುನಾ ಬುದ್ಧರೂಪಿಣಾ/
   ಬೌದ್ಧಶಾಸ್ತ್ರಮಸತ್ಪ್ರೋಕ್ತಂ ನಗ್ನನೀಲಪಟಾದಿಕಮ್//
   ಮಾಯಾವಾದಮಸಚ್ಛಾಸ್ತ್ರಂ ಪ್ರಚ್ಛನ್ನಂ ಬೌದ್ಧಮೇವ ಚ/
    ಮಯೈವ ಕಥಿತಂ ದೇವಿ ಕಲೌ ಬ್ರಾಹ್ಮಣರೂಪಿಣಾ //
    ಕರ್ಮಸ್ವರೂಪತ್ಯಾಜ್ಯತ್ವಮತ್ರ ಚ ಪ್ರತಿಪಾದ್ಯತೇ /
    ಸರ್ವಕರ್ಮಪರಿಭ್ರಂಶಾನ್ನೈಷ್ಕರ್ಮ್ಯಂ ತತ್ರ ಚೋಚ್ಯತೇ//
    ಪರಾತ್ಮ ಜೀವಯೋರೈಕ್ಯಂ ಮಯಾ ತು ಪ್ರತಿಪಾದ್ಯತೇ /
    ಬ್ರಹ್ಮಣೋsಸ್ಯ ಪರಂ ರೂಪಂ ನಿರ್ಗುಣಂ ದರ್ಶಿತಂ ಮಯಾ //
      ' ದೈತ್ಯರ ನಾಶಕ್ಕಾಗಿ ವಿಷ್ಣುವು ಬುದ್ಧನ ರೂಪದಿಂದ ಅಸಚ್ಛಾಸ್ತ್ರವಾದ ಬೌದ್ಧ ಶಾಸ್ತ್ರವನ್ನೂ ನಗ್ನತೆ ( ಪ್ರಾಯಶಃ ಜೈನ), ನೀಲಪಟ ( ತಾಂತ್ರಿಕ ಶಾಸ್ತ್ರ) ಮೊದಲಾದವುಗಳನ್ನು ಬೋಧಿಸುತ್ತಾನೆ. ಹೇ ದೇವಿ! ಸ್ವಯಂ ನಾನೇ ಪ್ರಚ್ಛನ್ನ ಬೌದ್ಧ ಎನಿಸುವ ಮಾಯಾವಾದವೆಂಬ ಅಸಚ್ಛಾಸ್ತ್ರವನ್ನು ಕಲಿಯುಗದಲ್ಲಿ ಒಬ್ಬ ಬ್ರಾಹ್ಮಣನ ರೂಪದಲ್ಲಿ ಬೋಧಿಸುತ್ತೇನೆ. ಕರ್ಮಸ್ವರೂಪವನ್ನು ತ್ಯಜಿಸುವುದನ್ನು ಇಲ್ಲಿ ಪ್ರತಿಪಾದಿಸುತ್ತೇನೆ. ಸರ್ವ ಕರ್ಮಗಳನ್ನೂ ಬಿಡಲಾಗುವ ನೈಷ್ಕರ್ಮ್ಯವನ್ನು ಹೇಳುತ್ತೇನೆ. ಪರಮಾತ್ಮ ಮತ್ತು ಜೀವಾತ್ಮರ ಐಕ್ಯವನ್ನೂ ಹೇಳಿ ಪರಬ್ರಹ್ಮನ ಪರಮ ರೂಪ ನಿರ್ಗುಣವೆಂದೂ ತೋರಿಸುತ್ತೇನೆ.' 
     ಇಲ್ಲಿ ಸ್ವಯಂ ಶಿವನೇ ಶಂಕರರಾಗಿ ಅವತರಿಸಿ ಪ್ರಚ್ಛನ್ನ ಬೌದ್ಧವಾದ ಮಾಯಾವಾದ ಹಾಗೂ ಅದ್ವೈತಗಳನ್ನು ಬೋಧಿಸುತ್ತಾನೆ ಎಂದು ಅವನೇ ಹೇಳಿಕೊಂಡಂತೆ ಚಿತ್ರಿಸಿರುವುದು ವಿಚಿತ್ರವಾಗಿದೆ! ಶಂಕರರೆಂಬ ಹೆಸರಿಲ್ಲದಿದ್ದರೂ ಇದು ಅವರನ್ನೇ ಸೂಚಿಸುತ್ತದೆ ಎಂದು ಗೊತ್ತಾಗುತ್ತದೆ.ಇಲ್ಲಿ ವಿಷ್ಣುವು ಬುದ್ಧನ ರೂಪದಲ್ಲಿ ದೈತ್ಯರನ್ನು ಬೌದ್ಧ ಶಾಸ್ತ್ರ ಉಪದೇಶಿಸಿ ನಾಶಮಾಡಿದ ಎಂದೂ ಹೇಳಿದೆ.‌ ಹೀಗೆ ವಿಷ್ಣುವು ಬೌದ್ಧ ರೂಪದಲ್ಲಿ ತ್ರಿಪುರ ದೈತ್ಯರನ್ನು ವಿಮೋಹಗೊಳಿಸಿ ವೇದಗಳಿಂದ ದೂರ ಮಾಡಿ ದುರ್ಬಲಗೊಳಿಸಿದ ಎಂದು ವಿಷ್ಣು ಪುರಾಣ, ಭಾಗವತ, ಶಿವ ಪುರಾಣ, ಮೊದಲಾದ ಪುರಾಣಗಳಲ್ಲಿ ಹೇಳಲಾಗಿದೆ ಹಾಗೂ ಬಹುತೇಕ ಮಾಧ್ವ ಹರಿದಾಸರ ಹಾಡುಗಳಲ್ಲಿ ಹೀಗೆಯೇ ಇದೆ.‌ ಶೃಂಗೇರಿಯ ವಿದ್ಯಾಶಂಕರ ದೇವಾಲಯದ ದಶಾವತಾರ ಚಿತ್ರಣದಲ್ಲಿ ಬುದ್ಧನನ್ನು ನಗ್ನನಾಗಿ ತೋರಿಸಿರುವುದಲ್ಲದೆ ಶಿವನು ತ್ರಿಪುರಾಸುರರನ್ನು ಕೊಲ್ಲಲು ಹೂಡಿದ ಬಾಣದಲ್ಲೂ ಇರುವಂತೆ ತೋರಿಸಲಾಗಿದೆ. ಹಾಗಾಗಿ ಬುದ್ಧಾವತಾರದ ವಿಷಯದಲ್ಲಿ ಇದು ಬಹಳ ಕಡೆ ಇದೆ. ಆದರೆ ಈ ಪೌರಾಣಿಕ ಬುದ್ಧ ಚಾರಿತ್ರಿಕ ಬುದ್ಧ ಎಂದು ಹೇಳಲಾಗುವುದಿಲ್ಲ. ಆದರೆ ಶಂಕರರ ವಿಷಯದಲ್ಲಿ ಇಲ್ಲಿ ಹೇಳಿರುವಂತೆ ಬೇರೆಲ್ಲೂ ಇಲ್ಲ. ಇಲ್ಲಿನ ಅಭಿಪ್ರಾಯ, ಬೌದ್ಧರಾಗಿದ್ದ ಜನರನ್ನು ಪುನಃ ವೇದಗಳ ಕಡೆಗೆ ತರಲು ಬೌದ್ಧ ಧರ್ಮವನ್ನೇ ಇನ್ನೊಂದು ರೀತಿಯಲ್ಲಿ ಮಾಯಾವಾದ, ಅದ್ವೈತಗಳ ಮೂಲಕ ಶಿವನೇ ಶಂಕರರ ರೂಪದಲ್ಲಿ ಬೋಧಿಸಿದ, ಹಾಗಾಗಿ ಇದು ಪ್ರಚ್ಛನ್ನ ಬೌದ್ಧ ಎಂಬುದು. ಇದನ್ನು ಚೈತನ್ಯ ಸಂಪ್ರದಾಯದ ಇಸ್ಕಾನ್ ಸಂಸ್ಥಾಪನಾಚಾರ್ಯರಾದ ಶ್ರೀಲ ಪ್ರಭುಪಾದರು ತಮ್ಮ ಗ್ರಂಥಗಳಲ್ಲಿ ಉದಾಹರಿಸುತ್ತಾರೆ. ಹಾಗಾಗಿ ಇವರು ಶಂಕರರನ್ನು ನಿಂದಿಸುವುದಿಲ್ಲ. ಆದರೆ ಪೂರ್ಣವಾಗಿ ಒಪ್ಪುವುದಿಲ್ಲ. ಶಂಕರರು ಹಾಗೆ ಮಾಡಲೇಬೇಕಾಗಿತ್ತಂತೆ. ಆದರೆ ಪದ್ಮ ಪುರಾಣದ ವಿವಿಧ ಪಾಠಗಳಿದ್ದು ಎಲ್ಲಾ ಪಾಠಗಳಲ್ಲಿ ಈ ಶ್ಲೋಕಗಳಿಲ್ಲ. ಹಾಗಾಗಿ ಇವು ಪ್ರಕ್ಷಿಪ್ತ ಎಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಆದರೆ ಇಲ್ಲಿ ಶಂಕರರನ್ನು ದೈತ್ಯರೆಂದು ನಿಂದಿಸಿಲ್ಲ. ಶಿವನ ಅವತಾರವೆಂದು ಗೌರವದಿಂದಲೇ ಕಂಡಿದ್ದು ತಾತ್ವಿಕ ವಿರೋಧವಿದೆ ಮತ್ತು ಅದಕ್ಕೆ ಸಮರ್ಥನೆ ಇದೆ.‌
     ಶಂಕರಾಚಾರ್ಯರು ಅದ್ವೈತ ಸಿದ್ಧಾಂತ ಸ್ಥಾಪಕರಾದರೂ ಅವರು ಮಹಾನ್ ವಿಷ್ಣು ಭಕ್ತರೇ ಆಗಿದ್ದರು. ಅವರ ಮನೆದೇವರು ಶ್ರೀಕೃಷ್ಣನೇ! ಅವರ ಭಾಷ್ಯಗಳಲ್ಲೆಲ್ಲಾ ವಿಷ್ಣುವನ್ನೇ ಕೀರ್ತಿಸಿದ್ದಾರೆ. ಭಜ ಗೋವಿಂದಂ ಸ್ತೋತ್ರ ರಚಿಸಿರುವರಲ್ಲದೇ ವಿಷ್ಣುಸಹಸ್ರನಾಮಕ್ಕೆ ಭಾಷ್ಯ ಬರೆದಿದ್ದಾರೆ. ಅವರು ಹೇಳಿದ ಅಹಂ ಬ್ರಹ್ಮಾಸ್ಮಿ ( ನಾನು ಬ್ರಹ್ಮ) ಅವರ ಹೇಳಿಕೆಯಲ್ಲ. ಅದು ಬೃಹದಾರಣ್ಯಕ ಉಪನಿಷತ್ತಿನಲ್ಲಿ ಬರುತ್ತದೆ. ಅಂತೆಯೇ ತತ್ ತ್ವಮಸಿ ( ಅದು ನೀನು ಆಗಿದ್ದೀಯೆ), ಛಾಂದೋಗ್ಯ ಉಪನಿಷತ್ತಿನಲ್ಲಿ ಬರುತ್ತದೆ. ಪ್ರಜ್ಞಾನಂ ಬ್ರಹ್ಮ ( ಪ್ರಜ್ಞಾನವೇ ಬ್ರಹ್ಮ) ಐತರೇಯ ಉಪನಿಷತ್ತಿನದು. ಅಯಮಾತ್ಮಾ ಬ್ರಹ್ಮ ( ಈ ಆತ್ಮನೇ ಬ್ರಹ್ಮ), ಮಾಂಡೂಕ್ಯ ಉಪನಿಷತ್ತಿನದು, ಹಾಗೂ ಸರ್ವಂ ಖಲ್ವಿದಂ ಬ್ರಹ್ಮ ( ಎಲ್ಲವೂ ಬ್ರಹ್ಮ) ಛಾಂದೋಗ್ಯ ಉಪನಿಷತ್ತಿನದು. ಇವನ್ನು ಪಂಚಮಹಾವಾಕ್ಯಗಳೆನ್ನುತ್ತಾರೆ. ಉಪನಿಷತ್ತುಗಳಲ್ಲಿರುವ ಅದ್ವೈತ ತತ್ವವನ್ನೇ ಅವರು ಪ್ರತಿಪಾದಿಸಿದರು. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳುತ್ತಾನೆ -
 ಮಮೈವಾಂಶೋ ಜೀವಲೋಕೇ ಜೀವಭೂತ: ಸನಾತನ: /
ಮನ: ಷಷ್ಠಾಣೀಂದ್ರಿಯಾಣಿ ಪ್ರಕೃತಿಸ್ಥಾನಿ ಕರ್ಷತಿ //
   ' ಸನಾತನನಾದ ಈ ಜೀವಾತ್ಮನು ನನ್ನದೇ ಅಂಶವಾಗಿದ್ದಾನೆ.‌ ಪ್ರಕೃತಿಯಲ್ಲಿರುವ ಮನಸ್ಸೂ ಸೇರಿದಂತೆ ಆರು ಇಂದ್ರಿಯಗಳನ್ನು ಆಕರ್ಷಿಸುತ್ತಾನೆ.' 
    ಹಾಗಾಗಿ ಜೀವಾತ್ಮನು ಪ್ರಕೃತಿಗಿಂತ ಬೇರೆಯಾಗಿದ್ದು ಅಮರನಾಗಿದ್ದಾನೆ ಹಾಗೂ ಪರಮಾತ್ಮನ ಅಂಶವೇ ಆಗಿದ್ದಾನೆ. ಆದ್ದರಿಂದ ಜೀವಾತ್ಮನಿಗೂ ಪರಮಾತ್ಮನಿಗೂ ವಸ್ತುತಃ ಭೇದವಿಲ್ಲ.‌ ಇದೇ ತಾನೇ ಅದ್ವೈತ? ಬೃಹದಾರಣ್ಯಕ ಉಪನಿಷತ್ತಿನಲ್ಲಿ ಪರಮಾತ್ಮನಿಗೆ ಒಬ್ಬನೇ ರಮಿಸಲಾಗಲಿಲ್ಲ, ಹಾಗಾಗಿ ಅವನೇ ಹಲವಾದನು ಎಂದಿದೆ. ಭಾಗವತದ ಚತು:ಶ್ಲೋಕೀ ಭಾಗವತವೆಂಬ ನಾಲ್ಕು ಶ್ಲೋಕಗಳಲ್ಲಿ ಅವನೊಬ್ಬನೇ ಇದ್ದ, ಈಗಲೂ ಅವನೊಬ್ಬನೇ ಇದ್ದಾನೆ, ಮುಂದೆಯೂ ಅವನೊಬ್ಬನೇ ಇರುತ್ತಾನೆ ಎಂದಿರುವುದು ಅದ್ವೈತವೇ ಹೌದು. ವಿಷ್ಣು ಪುರಾಣದಲ್ಲಿ ಅದ್ವೈತವೆಂಬ ಪದವೇ ಹಲವಾರು ಬಾರಿ ಬಂದಿದೆ. ಅಲ್ಲಿ ಪ್ರಹ್ಲಾದನ ಕಥೆಯಲ್ಲಿ ಪ್ರಹ್ಲಾದನು ವಿಷ್ಣುವನ್ನು ಧ್ಯಾನಿಸುತ್ತಾ ಅವನೊಂದಿಗೆ ತಾದಾತ್ಮ್ಯ ಹೊಂದಿ ಅವನನ್ನು ಬಿಟ್ಟು ಬೇರೇನಿಲ್ಲ ಎಂದು ತನ್ನನ್ನೂ ಮರೆತುಬಿಡುತ್ತಾನೆ. ಭಗವದ್ಗೀತೆಯಲ್ಲಿ 'ವಾಸುದೇವ: ಸರ್ವಮಿತಿ ಸ ಮಹಾತ್ಮಾ ಸುದುರ್ಲಭ: ( ವಾಸುದೇವನೇ ಎಲ್ಲ ಎಂದು ತಿಳಿಯುವ ಮಹಾತ್ಮ ಬಹಳ ದುರ್ಲಭ)' ಎಂದಿದೆ. ಇಲ್ಲೆಲ್ಲಾ ಇರುವ ಅದ್ವೈತವನ್ನೇ ಶಂಕರರು ಪ್ರತಿಪಾದಿಸಿದರು. ಇನ್ನು ಜಗತ್ತು ಮಿಥ್ಯೆಯೆಂದರೆ ಅವರ ಅಭಿಪ್ರಾಯ, ಅದು ಸದಾ ಬದಲಾಗುತ್ತಿರುವುದರಿಂದ ನಾವು ನೋಡುವ ಅದರ ರೂಪವೇ ಯಥಾವತ್ತಲ್ಲ ಎಂದು ಅರ್ಥ. ಈಗ ಮರವಾಗಿದ್ದುದು ನಾಳೆ ಕುರ್ಚಿ, ಮೇಜು, ಏನು ಬೇಕಾದರೂ ಆಗಬಹುದು. ಆದರೆ ಈ ರೂಪಗಳು ಅವುಗಳ ಯಥಾವತ್ತಿನ ರೂಪವಲ್ಲ, ಹಾಗಾಗಿ ಮಿಥ್ಯ. ಇದನ್ನು ವ್ಯಾವಹಾರಿಕವಾಗಿ ತೆಗೆದುಕೊಂಡು ತಲೆ ಕೆಡಿಸಿಕೊಳ್ಳಬಾರದು. ಇದು ಅರಿವಿಗಾಗಿ ಮಾತ್ರ. ಯಾರೋ ಒಬ್ಬ ಶಿಷ್ಯ , ಎಲ್ಲಾ ಒಂದೇ ಎಂದು ಗುರುಗಳು ಹೇಳಿದರು ಎಂಬ ಭಾವನೆಯಿಂದ, ಮತ್ತಿನಲ್ಲಿದ್ದ ಆನೆ ಬರುತ್ತಿದ್ದರೂ ಮಾವುತ ಎಚ್ಚರಿಸುತ್ತಿದ್ದರೂ ಸುಮ್ಮನಿದ್ದ. ಆಗ ಆನೆ ಅವನನ್ನು ಗುದ್ದಿ ತಳ್ಳಿತು! ಅನಂತರ ಅವನು ತನ್ನ ಗುರುವನ್ನು," ನಿಮ್ಮ ಅದ್ವೈತದ ಉಪದೇಶದಿಂದ ನೋಡಿ ನನ್ನ ದುಸ್ಥಿತಿ!" ಎಂದ. ಅದಕ್ಕೆ ಗುರು," ಸರಿ! ಎಲ್ಲಾ ಭಗವಂತ ಎಂದಮೇಲೆ ಆ ಮಾವುತನೆಂಬ ಭಗವಂತನ ಮಾತನ್ನೇಕೆ ಕೇಳಲಿಲ್ಲ?" ಎಂದ. ಹೀಗೆ ಅದ್ವೈತವನ್ನು ವ್ಯಾವಹಾರಿಕವಾಗಿ ಬಳಸಬಾರದು. ಅದೊಂದು ಪಾರಮಾರ್ಥಿಕ ಸತ್ಯ. ಇಷ್ಟಕ್ಕೂ ಅದು ಇಷ್ಟವಿಲ್ಲದಿದ್ದರೆ, ಒಪ್ಪಲಾಗದಿದ್ದರೆ ತೆಗೆದುಕೊಳ್ಳಬೇಕಿಲ್ಲ. ಹಾಗಾಗಿಯೇ ರಾಮಾನುಜಾಚಾರ್ಯರು ಅದ್ವೈತವನ್ನು ಒಪ್ಪಿದರೂ ವಿಶಿಷ್ಟವಾದ ಅದ್ವೈತ ಎಂದು ಜೀವಾತ್ಮರ ಬಾಹುಳ್ಯವನ್ನೂ ಹೇಳಿದರು. ಜೀವಾತ್ಮರೆಲ್ಲ ಪರಮಾತ್ಮನ ಶರೀರ ಎಂದರು. ಪರಮಾತ್ಮ ಮರವಾದರೆ ಜೀವಾತ್ಮರು ಎಲೆಗಳಂತೆ. ಅಂತೆಯೇ ಚೈತನ್ಯ ಮಹಾಪ್ರಭುಗಳು ಭೇದ, ಅಭೇದ ಎರಡೂ ಇರುವ ಅಚಿಂತ್ಯ ಭೇದಾಭೇದ ತತ್ವವನ್ನು ಪ್ರತಿಪಾದಿಸಿದರು. ಅಂತೆಯೇ ನಿಂಬಾರ್ಕರು ದ್ವೈತಾದ್ವೈತ, ವಲ್ಲಭಾಚಾರ್ಯರು ಶುದ್ಧಾದ್ವೈತ ತತ್ವಗಳನ್ನು ಪ್ರತಿಪಾದಿಸಿದರು. ಇವರೆಲ್ಲರೂ ಜಗತ್ತಿನ ಸತ್ಯತ್ವವನ್ನು ಹೇಳಿದರು. ಅಂತೆಯೇ ಮಧ್ವರು ದ್ವೈತವನ್ನು ಪ್ರತಿಪಾದಿಸಿದರು. ಅಲ್ಲಿಯೂ ಪರಮಾತ್ಮ ಬಿಂಬ ಹಾಗೂ ಜೀವಾತ್ಮನು ಪ್ರತಿಬಿಂಬ ಎಂದು ಒಂದು ರೀತಿಯ ಅದ್ವೈತವೇ ಕಾಣುತ್ತದೆ. ದ್ವೈತಮತ ಪುರಂದರ, ಕನಕದಾಸಾದಿ ಹರಿದಾಸರ ಅದ್ಭುತ ಕೊಡುಗೆ ನೀಡಿರುವ ಸುಂದರ ಭಕ್ತಿ ಬಾಹುಳ್ಯದ ಮತವೇ ಹೌದು. ಹೀಗಿರುವಾಗ ಏಕೆ ಶಂಕರರನ್ನು ನಿಂದಿಸಬೇಕು? ಅದಿಲ್ಲದೆಯೂ ದ್ವೈತಮತ ಸೊಗಸಾಗಿದೆಯಲ್ಲ! 
   ಶಂಕರಾಚಾರ್ಯರ ತಾತ್ವಿಕ ವಿಚಾರಗಳ ಖಂಡನೆ ತಪ್ಪಲ್ಲ. ಆದರೆ ಅವರ ಚಾರಿತ್ರ್ಯ ವಧೆ ತಪ್ಪು. ತಾತ್ವಿಕ ಖಂಡನೆ ಮಾಡಲಾಗದಿದ್ದಾಗ ಹೀಗೆ ಮಾಡುವುದು ಸರಿಯಲ್ಲ. 

ಶುಕ್ರವಾರ, ಜುಲೈ 17, 2026

ಸುಂದರೀಶತಕ -೬೫

ಸಂಸ್ಕೃತ ಮೂಲ 

ಪ್ರತ್ಯೇಕಮಿಂದ್ರಿಯಾಣಾಮಾಸ್ತಾಂ ಭಿನ್ನೈವ ದೇವತಾನ್ಯಸ್ಯ /
ಪರಿಣಮತಿ ಮಮ ತು ಸೈಕಾ ಸಕಲೇಂದ್ರಿಯದೇವತಾತ್ವೇನ //

ಕನ್ನಡ ಅನುವಾದ 

   ' ಇತರರಿಗೆ ಬೇರೆ ಬೇರೆ ಇಂದ್ರಿಯಗಳಿಗೆ ಬೇರೆ ಬೇರೆಯೇ ದೇವತೆಯೇ ಇದ್ದರೂ, ನನಗೆ ಮಾತ್ರ ಅವಳೊಬ್ಬಳೇ ನನ್ನ ಸಕಲೇಂದ್ರಿಯಗಳಿಗೂ ದೇವತೆಯಾಗಿ ಪರಿಣಮಿಸುತ್ತಾಳೆ!' 
    ಇದೊಂದು ಸ್ವಾರಸ್ಯಕರ ಶೃಂಗಾರ ಪದ್ಯ.‌ ನಮ್ಮ ಹಿಂದೂ ಅಥವಾ ವೈದಿಕ ಸಂಪ್ರದಾಯದ ಪ್ರಕಾರ, ನಮ್ಮ ದೇಹದ ಪ್ರತಿಯೊಂದು ಇಂದ್ರಿಯವನ್ನೂ ಒಬ್ಬೊಬ್ಬ ದೇವತೆ ನಡೆಸುತ್ತಾನೆ. ನಮ್ಮ ಇಂದ್ರಿಯಗಳನ್ನು ಪಂಚ ಜ್ಞಾನೇಂದ್ರಿಯಗಳು ಮತ್ತು ಪಂಚ ಕರ್ಮೇಂದ್ರಿಯಗಳು ಎಂದು ವಿಂಗಡಿಸಲಾಗಿದೆ. ಪಂಚಜ್ಞಾನೇಂದ್ರಿಯಗಳ ವಿಷಯಕ್ಕೆ ಬಂದರೆ, ಕಣ್ಣಿಗೆ ಸೂರ್ಯ, ಮೂಗಿಗೆ ಅಶ್ವಿನೀ ದೇವತೆಗಳು, ನಾಲಿಗೆಗೆ ವರುಣ, ಕಿವಿಗೆ ದಿಗ್ದೇವತೆಗಳು, ಹಾಗೂ ಚರ್ಮಕ್ಕೆ ವಾಯು, ಈ ದೇವತೆಗಳು ಅಧಿದೇವತೆಗಳಾಗಿರುತ್ತಾರೆ. ಅಂತೆಯೇ, ಪಂಚ ಕರ್ಮೇಂದ್ರಿಯಗಳ ವಿಷಯಕ್ಕೆ ಬಂದರೆ, ಕೈಗಳಿಗೆ ಇಂದ್ರ, ಕಾಲುಗಳಿಗೆ ವಿಷ್ಣು, ಬಾಯಿಗೆ ಅಗ್ನಿ, ಗುದದ್ವಾರಕ್ಕೆ ಯಮ, ಹಾಗೂ ಜನನೇಂದ್ರಿಯಗಳಿಗೆ ಪ್ರಜಾಪತಿ, ಅಧಿದೇವತೆಗಳಾಗಿರುತ್ತಾರೆ. ಹೀಗೆ ವಿವಿಧ ಇಂದ್ರಿಯಗಳಿಗೆ ವಿವಿಧ ದೇವತೆಗಳಿರುತ್ತಾರೆ. ಆದರೆ ಇಲ್ಲಿ ಕವಿ ಅಥವಾ ನಾಯಕ, ಬೇರೆಯವರ ವಿಷಯದಲ್ಲಿ ಹಾಗಿದ್ದರೂ ತನಗೆ ಮಾತ್ರ ತನ್ನ ಪ್ರಿಯತಮೆಯೊಬ್ಬಳೇ ತನ್ನ ಎಲ್ಲಾ ಇಂದ್ರಿಯಗಳಿಗೂ ದೇವತೆಯಾಗಿ ಪರಿಣಮಿಸುತ್ತಾಳೆ ಎನ್ನುತ್ತಿದ್ದಾನೆ! ಅಂದರೆ ಎಲ್ಲಾ ದೇವತೆಗಳೂ ಅವಳೊಬ್ಬಳಲ್ಲೇ ಅಂತರ್ಗತರಾಗಿ ಅವಳೊಬ್ಬಳೇ ಅವನ ಎಲ್ಲಾ ಇಂದ್ರಿಯಗಳನ್ನೂ ನಡೆಸುವವಳಾಗಿದ್ದಾಳೆ! ಅವಳನ್ನು ಬಿಟ್ಟು ಅವನಿಗೆ ಬೇರಾವ ದೇವತೆಯೂ ಇಲ್ಲವೆನ್ನುವಷ್ಟು ಅವನು ಅವಳ ಪ್ರೇಮದಲ್ಲಿ ಒಂದಾಗಿದ್ದಾನೆ! ಇದೊಂದು ರೀತಿಯ ಶೃಂಗಾರ ಅದ್ವೈತ ಸ್ಥಿತಿ! 

ಬುಧವಾರ, ಜುಲೈ 15, 2026

ವಯನಾಡಿನ ವೃದ್ಧೆ

ನಾನು ಕೇರಳದ ವಯನಾಡು ಪ್ರವಾಸಕ್ಕೆ ಹೋಗಿದ್ದಾಗ ವೈತ್ರಿ ಪ್ರದೇಶದಲ್ಲಿ ಈ ವೃದ್ಧ ಮಹಿಳೆಯನ್ನು ನೋಡಿದೆ. ಅವಳ ಉದ್ದವಾದ ಕಿವಿಯ ಹಾಲೆಗಳನ್ನು ನೋಡಿ ವಿಸ್ಮಯಗೊಂಡು ಅವಳ ಅನುಮತಿಯಿಂದ ಅವಳ ಫೋಟೋಗಳನ್ನು ತೆಗೆದೆ. ಈ ಮಹಿಳೆ ಪನಿಯ ಎಂಬ ಬುಡಕಟ್ಟು ಜನಾಂಗಕ್ಕೆ ಸೇರಿದವಳಾಗಿದ್ದು, ಅದು ವಯನಾಡಿನಲ್ಲೇ ಅತ್ಯಂತ ದೊಡ್ಡ ಜನಾಂಗವಾಗಿದೆ. ಈ ಜನಾಂಗದವರು ಬೆಟ್ಟ ಗುಡ್ಡಗಳ ಹಾಗೂ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಾರೆ ಹಾಗೂ ವಯನಾಡಲ್ಲದೇ ಸನಿಹದ ಕಣ್ಣೂರು, ಕೋಜಿಕೋಡೆ, ಮಲಪ್ಪುರಂಗಳಲ್ಲೂ ಕಂಡುಬರುತ್ತಾರೆ ಹಾಗೂ ತಮಿಳುನಾಡು ಮತ್ತು ಕರ್ನಾಟಕದ ಭಾಗಗಳಲ್ಲೂ ಕಂಡು ಬರುತ್ತಾರೆ. ಇವರು ಚಿಕ್ಕ ವಯಸ್ಸಿನಲ್ಲೇ ಕಿವಿಯ ಹಾಲೆಯನ್ನು ಚುಚ್ಚಿ, ದೊಡ್ಡ ದೊಡ್ಡ ಭಾರದ ಆಭರಣಗಳನ್ನು ತೊಡಿಸಿ ದೀರ್ಘ ಕಾಲಾವಧಿಯಲ್ಲಿ ಆ ಕಿವಿಯ ಹಾಲೆ ಹೀಗೆ ಉದ್ದವಾಗುವಂತೆ ಮಾಡುತ್ತಾರೆ. ಇವರ ಕಥೆಗಳ ಪ್ರಕಾರ, ಇವರ ಮೂಲ, ವಯನಾಡಿನ ಬಾಣಾಸುರ ಶಿಖರದ ಬಳಿಯ ಇಪ್ಪಿಮಲ ಪರ್ವತ. ಐತಿಹಾಸಿಕವಾಗಿ ಇವರು ನಿಪುಣ ಕೃಷಿ ಕಾರ್ಮಿಕರಾಗಿದ್ದು , ಭತ್ತವನ್ನು ಬೆಳೆಯುವುದರಲ್ಲಿ ನಿಷ್ಣಾತರಾಗಿದ್ದರು. ಇವರು ಪನಿಯಭಾಷಾ ಎಂಬ ಮಲಯಾಳಂ, ತಮಿಳು ಮತ್ತು ತುಳು ಮಿಶ್ರಿತ ವಿಶಿಷ್ಟವಾದ ಭಾಷೆಯನ್ನು ಮಾತನಾಡುತ್ತಾರೆ. 
                                       
                                        
            

ಮಂಗಳವಾರ, ಜುಲೈ 14, 2026

ಸುಂದರೀಶತಕ -೬೪

ಸಂಸ್ಕೃತ ಮೂಲ 

ಅಶ್ರುಪ್ಲುತಮತಿಕಾತರಮನಿಮಿಷಮಸ್ಪಂದತಾರಕಂ ತಸ್ಯಾ: /
ಲೋಚನಯುಗಲಂ ಸ್ಮರತ: ಸ್ಮರತೋ ಮಮ ಕೇವಲಂ ಭೀತಿ: //

ಕನ್ನಡ ಅನುವಾದ 

    ' ಅಶ್ರುಗಳಿಂದ ತುಂಬಿ, ಬಹಳ ಭಯಗೊಂಡ, ರೆಪ್ಪೆ ಮಿಟುಕಿಸದ, ಪಾಪೆಗಳು ಸ್ಪಂದಿಸದೆ ಸ್ಥಿರವಾಗಿರುವ ಆ ನನ್ನ ಪ್ರಿಯತಮೆಯ ಕಂಗಳನ್ನು ಸ್ಮರಿಸುತ್ತಾ ನನಗೆ ಕೇವಲ ಭಯವಾಗುತ್ತಿದೆ!' 
     ಇಲ್ಲಿ ಕವಿಯು ಇನ್ನೊಂದು ವಿರಹ ಶೃಂಗಾರದ ಪದ್ಯ ರಚಿಸಿದ್ದಾನೆ.‌ ನಾಯಕನು ತಾನು ತನ್ನ ಪ್ರಿಯತಮೆಯನ್ನು ಬಿಟ್ಟು ಪ್ರಯಾಣ ಹೊರಟಾಗ ಅವಳಿದ್ದ ಸ್ಥಿತಿಯನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಭಯಪಡುತ್ತಿದ್ದಾನೆ. ಅವಳ ಆತಂಕ ಮತ್ತು ವಿರಹದ ಸ್ಥಿತಿಯನ್ನು ಅವಳ ಕಂಗಳಲ್ಲೇ ಚಿತ್ರಿಸಿದ್ದಾನೆ. ಅವಳ ಕಂಗಳು ಅಶ್ರುಗಳಿಂದ ತುಂಬಿವೆ. ಅವು ಬಹಳ ಭಯದಿಂದ ಕೂಡಿವೆ. ಕಣ್ರೆಪ್ಪೆಗಳು ಮಿಟುಕಿಸದೆ ಅವಳು ಒಂದೇ ಸಮನೆ ನಾಯಕನನ್ನು ದಿಟ್ಟಿಸುತ್ತಿದ್ದಾಳೆ. ಅವಳ ಕಣ್ಣುಗಳ ಪಾಪೆಗಳು ಸ್ಪಂದಿಸದೆ ಸ್ಥಿರವಾಗಿವೆ! ಹೀಗೆ ಕಣ್ಣಲ್ಲೇ ಅವಳ ಭಾವನೆಗಳನ್ನು ಕವಿಯು ಅದ್ಭುತವಾಗಿ ಸೆರೆಹಿಡಿದಿದ್ದಾನೆ! ಇಂಥ ಸ್ಥಿತಿಯಲ್ಲಿ ನಾಯಕನು ಅವಳನ್ನು ಬಿಟ್ಟು ಬಂದಿದ್ದಾನೆ. ಅದನ್ನು ಮತ್ತೆ ಮತ್ತೆ ನೆನೆದು ಅವಳ ಬಗ್ಗೆ ಅವನಿಗೆ ಭಯವಾಗುತ್ತಿದೆ! ವಿರಹದಲ್ಲಿ ಅವಳಿಗೆ ಏನಾಗುವುದೋ ಎಂದು ಅವನಿಗೆ ಭಯವಾಗುತ್ತಿದೆ. ಇದನ್ನು ಅವನೇ ಹೇಳುತ್ತಿದ್ದಾನೆ. 

ಶುಕ್ರವಾರ, ಜುಲೈ 10, 2026

ಸುಂದರೀಶತಕ -೬೩

ಸಂಸ್ಕೃತ ಮೂಲ 

ಪರ್ಯಂಕಪಾರ್ಶ್ವಲಗ್ನಾಂ ಗಲದಶ್ರುಪ್ಲಾವಿತೈಕಭುಜಮೂಲಮ್ /
ಅಂಚಲಸಂವೃತವದನಾಂ ತಾಮಂತಶ್ಚಿಂತಯಾಮಿ ಚಿರಮ್ //

ಕನ್ನಡ ಅನುವಾದ 

    ' ನನ್ನ ಪ್ರಿಯತಮೆಯು ಮಂಚದ ತುದಿಯ ಮೇಲೆ ಮಲಗಿ ಸೆರಗಿನಿಂದ ಮುಖ ಮುಚ್ಚಿಕೊಂಡು ಅಳುತ್ತಿರಲು, ಅವಳ ಕಣ್ಣೀರು ಹರಿದು ಅವಳ ಒಂದು ಭುಜಮೂಲವನ್ನು ನೆನೆಸಿದುದನ್ನು ನಾನು ಸದಾ ನನ್ನ ಹೃದಯದಲ್ಲಿ ನೆನೆಯುತ್ತೇನೆ!' 
    ಇಲ್ಲಿ ಕವಿಯು ಮತ್ತೊಂದು ವಿರಹದ ಚಿತ್ರಣ ನೀಡಿದ್ದಾನೆ. ಅದನ್ನು ನಾಯಕನೇ ಹೇಳುತ್ತಿದ್ದಾನೆ. ಅವನು ಹಿಂದೆ ಪ್ರಯಾಣದಿಂದ ಹಿಂದಿರುಗಿದಾಗ ನೋಡಿದ ದೃಶ್ಯವನ್ನು ಈಗಲೂ ಸದಾ ನೆನೆಯುವೆ ಎಂದು ಹೇಳುತ್ತಿರುವಂತಿದೆ. ಅವನು ಅವಳನ್ನು ನೋಡಿದ ಸ್ಥಿತಿ ಹೀಗಿದೆ. ಅವಳು ಮಂಚದ ತುದಿಯಲ್ಲಿ ಮುದುಡಿಕೊಂಡು ಮಲಗಿದ್ದಾಳೆ ಹಾಗೂ ತನ್ನ ಮುಖವನ್ನು ಸೆರಗಿನಿಂದ ಮುಚ್ಚಿಕೊಂಡು ತನ್ನ ಮುಖವನ್ನು ಒಂದು ಭುಜಕ್ಕೆ ಒರಗಿಸಿಕೊಂಡು ಮಲಗಿದ್ದಾಳೆ. ಅವಳು ವಿರಹಬಾಧೆಯಿಂದ ಅತ್ತೂ ಅತ್ತೂ ಅವಳ ಕಣ್ಣೀರ ಧಾರೆ ಸೆರಗಿನ ಮೂಲಕವೇ ಹರಿದು ಅವಳ ಭುಜಮೂಲವನ್ನು ನೆನೆಸಿದೆ. ಹೀಗಿರುವ ಅವಳ ಸ್ಥಿತಿಯನ್ನು ನೋಡಿದ ನಾಯಕನಿಗೆ ಅದನ್ನು ಮರೆಯಲಾಗುತ್ತಿಲ್ಲ! ಅದನ್ನು ಸದಾ ನೆನೆಯುತ್ತೇನೆ ಎಂದು ಹೇಳುತ್ತಿದ್ದಾನೆ. 

ಬುಧವಾರ, ಜುಲೈ 8, 2026

ಸುಂದರೀಶತಕ -೬೨

ಸಂಸ್ಕೃತ ಮೂಲ 

ಸುಂದರಿ ಸಮುದಿತಶಶಿಕರಧೌತತಮಾ ನೇಯಮಷ್ಟಮೀ ರಾತ್ರಿ: /
ವಿರಹಿಜನಮಸಿತಭುಜಂಗೀ ವಿದೃಶ್ಯ ಪರಿವರ್ತಿತೋತ್ತಾನಾ //

ಕನ್ನಡ ಅನುವಾದ 

   ' ಎಲೈ ಸುಂದರಿ! ಉದಿಸಿದ ಚಂದಿರನ ಕಿರಣಗಳಿಂದ ಅತ್ಯಂತ ಬೆಳ್ಳಗೆ ಉಜ್ವಲವಾಗಿರುವ ಈ ರಾತ್ರಿ ಅಷ್ಟಮಿಯ ಬೆಳದಿಂಗಳ ರಾತ್ರಿಯಲ್ಲ! ವಿರಹಿಗಳ ಪಾಲಿಗೆ ಇದು ಅವರನ್ನು ನೋಡಿ ಹೆಡೆಯೆತ್ತಿ ತಿರುಗಿಸಿದ ಮೈಯ ಕೃಷ್ಣಸರ್ಪವಾಗಿದೆ!' 
    ಇಲ್ಲಿ ಕವಿಯು ಸುಂದರವಾದ ಬೆಳದಿಂಗಳ ರಾತ್ರಿಯನ್ನು ಒಂದು ಕೃಷ್ಣಸರ್ಪಕ್ಕೆ ಹೋಲಿಸಿದ್ದಾನೆ.‌ ಬೆಳದಿಂಗಳ ರಾತ್ರಿ ಕತ್ತಲಿನ ಜೊತೆಗೆ ಚಂದ್ರನ ಬಿಳಿಯ ಕಿರಣಗಳಿಂದ ಹೊಳೆಯುವ ಸುಂದರ ರಾತ್ರಿಯಾಗಿರುತ್ತದೆ. ಇದು ಶೃಂಗಾರ ಭಾವನೆಗಳನ್ನು ಉದ್ದೀಪನಗೊಳಿಸುತ್ತದೆ. ಆದರೆ ವಿರಹಿಗಳ ಪಾಲಿಗೆ ಇದು ಬಾಧೆ ನೀಡುವ ರಾತ್ರಿಯಾಗಿರುತ್ತದೆ! ಇದು ಒಂದು ಕೃಷ್ಣಸರ್ಪದಂತೆ ಎನ್ನುತ್ತಾನೆ ಕವಿ. ವಿರಹಿಗಳನ್ನು ನೋಡಿದ ಕೂಡಲೇ ಹೆಡೆಯೆತ್ತಿ ಮೈ ತಿರುಗಿಸಿ ನಿಂತಿದೆ! ಅದರ ಮೈ ಕಪ್ಪಾಗಿದ್ದು ಅದರ ಒಳಭಾಗ ಬೆಳ್ಳಗಿದೆ.‌ ಹಾಗಾಗಿ ಅದು ಕಪ್ಪು, ಬಿಳುಪುಗಳಿಂದ ಬೆಳದಿಂಗಳ ರಾತ್ರಿಗೆ ಹೋಲಿಕೆಯಾಗಿದೆ! ಹೀಗೆ ಆ ಬೆಳದಿಂಗಳ ಅಷ್ಟಮಿ ರಾತ್ರಿ, ಅಷ್ಟಮಿ ರಾತ್ರಿಯಲ್ಲದೇ ಹೆಡೆಯೆತ್ತಿ ಮೈತಿರುಗಿಸಿದ, ಕಚ್ಚಿ ಬಾಧಿಸುವ ಕೃಷ್ಣಸರ್ಪವಾಗಿದೆ ಎನ್ನುತ್ತಾ ಕವಿಯು ವಿರಹಿಗಳ ಪಾಲಿಗೆ ಅಂಥ ರಾತ್ರಿಯು ಎಷ್ಟು ಬಾಧೆ ನೀಡುತ್ತದೆ ಎಂದು ಸೂಚಿಸಿದ್ದಾನೆ.

ಮಂಗಳವಾರ, ಜುಲೈ 7, 2026

ಸುಂದರೀಶತಕ -೬೧

ಸಂಸ್ಕೃತ ಮೂಲ 

ಸುಂದರಿ ವಸಂತಪಥಿಕಾನ್ ರಜನಿಭುಜಂಗೀ ಯಥಾ ಯಥಾ ದಶತಿ /
ತದ್ವಿಷಸಂಕ್ರಾಂತಿವಶಾತ್ತಥಾ ತಥಾ ಕ್ಷೀಯತೇ ದೈರ್ವ್ಯಾತ್ //

ಕನ್ನಡ ಅನುವಾದ 

    ' ಎಲೈ ಸುಂದರಿ! ವಸಂತಕಾಲದ ಪ್ರಯಾಣಿಕರನ್ನು ರಾತ್ರಿಯೆಂಬ ಸರ್ಪಿಣಿ ಹೇಗೆ ಹೇಗೆ ಕಚ್ಚುವುದೋ, ಅದರ ವಿಷವು ಅವರ ಮೈಯಲ್ಲಿ ಹರಡಿ ಅವರು ಅದರ ವಶವಾದಂತೆಲ್ಲಾ ದೈವವಶಾತ್ ಅವರು ಕ್ಷೀಣಿಸುತ್ತಾರೆ!' 
    ಇದೊಂದು ಸೊಗಸಾದ ಮತ್ತು ಉತ್ಪ್ರೇಕ್ಷಿತವಾದ ವಿರಹ ಪದ್ಯ. ವಸಂತಕಾಲವೆಂದರೆ ಯಾರಿಗಾದರೂ ಶೃಂಗಾರದ ಬಯಕೆ ಹೆಚ್ಚಾಗುತ್ತದೆ.‌ ಅಂಥ ಸುಂದರ ಕಾಲದಲ್ಲಿ ಯಾರಿಗಾದರೂ ತಮ್ಮ ಪ್ರಿಯರು ಜೊತೆಗಿರಬೇಕೆನಿಸುತ್ತದೆ. ಅಂಥ ಸುಂದರ ಋತುವಿನ ರಾತ್ರಿ, ಶೃಂಗಾರದ ಬಯಕೆಗಳನ್ನು ಚೆನ್ನಾಗಿ ಉದ್ದೀಪನಗೊಳಿಸುತ್ತದೆ. ಆದರೆ ಅಂಥ ಸಂದರ್ಭದಲ್ಲಿ ಪ್ರಿಯತಮೆಯಿಂದ ದೂರಾಗಿ ಪ್ರಯಾಣ ಮಾಡುತ್ತಿದ್ದರೆ ಹೇಗಾಗುತ್ತದೆ? ಆ ಸುಂದರ ರಾತ್ರಿಯೇ ಹಿಂಸೆ ಕೊಡುವ ಕಾಳರಾತ್ರಿಯಂತಾಗುತ್ತದೆ! ಇಲ್ಲಿ ಕವಿಯು ಅಂಥ ರಾತ್ರಿಯನ್ನು ಒಂದು ಸರ್ಪಿಣಿಗೆ ಹೋಲಿಸುತ್ತಾನೆ. ಅದು ಉಂಟುಮಾಡುವ ವಿರಹಬಾಧೆಯನ್ನು ಆ ಸರ್ಪಿಣಿಯ ಕಚ್ಚುವಿಕೆಗೆ ಹೋಲಿಸುತ್ತಾನೆ! ಅದು ಕಚ್ಚಿದಂತೆಲ್ಲಾ ಹಾಗೂ ಅದರ ವಿಷ ಈ ವಸಂತಕಾಲದ ಪ್ರಯಾಣಿಕರ ದೇಹದೆಲ್ಲೆಡೆ ಹರಡಿದಂತೆಲ್ಲಾ ಅವರು ಕ್ಷೀಣಿಸುತ್ತಾರೆ ಎಂದು ವಸಂತ ಕಾಲದ ಪ್ರಯಾಣಿಕರ ರಾತ್ರಿಯ ವಿರಹಬಾಧೆಯನ್ನು ಕವಿಯು ಉತ್ಪ್ರೇಕ್ಷೆಯಿಂದ ವರ್ಣಿಸುತ್ತಾನೆ. 

ಸುಂದರೀಶತಕ -೬೦

ಸಂಸ್ಕೃತ ಮೂಲ 

ಸುಂದರಿ ರಹಸ್ಯಮಾಲಿಷು ಕಲ್ಯಾಣೀ ಸ್ಫೂರ್ತಿರೇವ ತವ ವೇದ /
ಗೋತ್ರಸ್ಖಲನಭಯೇನ ತ್ಯಕ್ತಾ ಯದ್ಗೌರವೀ ಸಂಸದ್ //

ಕನ್ನಡ ಅನುವಾದ 

   ' ಎಲೈ ಸುಂದರಿ! ಈ ರಹಸ್ಯ ಕೂಟಗಳಲ್ಲಿ ನಿನ್ನ ಶೋಭಾಯಮಾನವಾದ ಸ್ಫೂರ್ತಿಯೇ ನಿನ್ನ ವಿಷಯವನ್ನು ಹೇಳುತ್ತದೆ! ನೀನು ಎಲ್ಲಿ ನಿನ್ನ ಪ್ರಿಯತಮನ ಹೆಸರನ್ನು ಬಾಯಿ ತಪ್ಪಿ ಹೇಳಿಬಿಡುವೆಯೋ ಎಂಬ ಭಯದಿಂದ ನೀನು ಹಿರಿಯರ ಸಮಕ್ಷಮವನ್ನು ತೊರೆದಿರುವೆ!' 
   ಇದೊಂದು ಸ್ವಾರಸ್ಯಕರ ಶೃಂಗಾರ ಪದ್ಯ.‌ ಇಲ್ಲಿ ನಾಯಿಕೆಯು ರಹಸ್ಯವಾಗಿ ಒಬ್ಬ ನಾಯಕನನ್ನು ಪ್ರೀತಿಸುತ್ತಿದ್ದಾಳೆ. ಅದು ಅವಳು ಹೇಳದಿದ್ದರೂ ಅವಳು ಸಖಿಯರೊಂದಿಗೆ ಗುಟ್ಟಾಗಿ ಸೇರುವ ರಹಸ್ಯ ಕೂಟಗಳಲ್ಲಿ ಮೊದಲಿಗಿಂತ ಹೆಚ್ಚಾಗಿರುವ ಅವಳ ಲವಲವಿಕೆ, ಸ್ಫೂರ್ತಿಗಳಿಂದಲೇ ಗೊತ್ತಾಗುತ್ತದೆ! ಪ್ರೀತಿಯಲ್ಲಿ ಬಿದ್ದಿರುವ ಅವಳು ಅದೊಂದು ರೀತಿಯ ಶೋಭೆಯ ಸ್ಫೂರ್ತಿ ತೋರುತ್ತಿದ್ದಾಳೆ! ಆದರೆ ಅದು ಅವಳ ಹಿರಿಯರಾರಿಗೂ  ಗೊತ್ತಿಲ್ಲ. ಹಿರಿಯರ ಜೊತೆ ಕುಳಿತರೆ ಎಲ್ಲಿ ಅವಳು ತನ್ನ ಪ್ರಿಯತಮನ ಹೆಸರನ್ನು ಹೇಳಿಬಿಡುವಳೋ ಎಂಬ ಭಯದಿಂದ ಅವಳು ಹಿರಿಯರೊಂದಿಗೆ ಕೂರುತ್ತಲೇ ಇಲ್ಲ! ಅವರ ಸಮಕ್ಷಮವನ್ನು ತೊರೆದು ಸದಾ ಸಖಿಯರೊಂದಿಗೆ ರಹಸ್ಯ ಕೂಟಗಳಲ್ಲಿ ಸೇರುತ್ತಿದ್ದಾಳೆ! ಇದನ್ನು ಇಂದಿನ ಹರೆಯದವರಲ್ಲೂ ಕಾಣಬಹುದು! ಹರೆಯಕ್ಕೆ ಬಂದ ತರುಣಿಯರು ತಮ್ಮ ಹಿರಿಯರೊಂದಿಗೆ ಕುಳಿತುಕೊಳ್ಳಲು ಇಷ್ಟಪಡದೆ ತಮ್ಮ ಗೆಳತಿಯರೊಂದಿಗೆ ಗುಟ್ಟಾಗಿ ಸಂಭಾಷಣೆ ಮಾಡುವುದರಲ್ಲಿ ತೊಡಗುತ್ತಾರೆ. ಇದನ್ನು ಕವಿಯು ಅಂದಿನ ದಿನಗಳಲ್ಲೇ ಗಮನಿಸಿ ಈ ಪದ್ಯದಲ್ಲಿ ಸೂಕ್ಷ್ಮವಾಗಿ ಸೊಗಸಾಗಿ ಚಿತ್ರಿಸಿದ್ದಾನೆ! ಜೀವನದ ಘಟನಾವಳಿಗಳು ಸಾಹಿತ್ಯದಲ್ಲಿ ರಸರೂಪಿಯಾಗಿ ವ್ಯಕ್ತವಾದಾಗ ಅವು ಸೊಗಸಾಗಿರುತ್ತವೆ! ಅದನ್ನು ಕವಿಯು ತನ್ನ ಕಾವ್ಯದ ಮೂಲಕ ಮಾಡುತ್ತಾನೆ.

ಶನಿವಾರ, ಜುಲೈ 4, 2026

ಭೋಜರಾಜನ ಸಮಸ್ಯೆ

ಭೋಜರಾಜ ಮತ್ತು ಕಾಳಿದಾಸರ ಕಥಾಪ್ರಸಂಗಗಳು ಜನಪ್ರಿಯವಾಗಿವೆ. ಇಂಥ ಕಥಾಪ್ರಸಂಗಗಳನ್ಧು ಬಲ್ಲಾಳಸೇನನೆಂಬ ಕವಿ ತನ್ನ ಭೋಜಪ್ರಬಂಧವೆಂಬ ಸ್ವಾರಸ್ಯಕರ ಸಂಸ್ಕೃತ ಗ್ರಂಥದಲ್ಲಿ ಸಂಕಲಿಸಿದ್ದಾನೆ.‌ ಅಲ್ಲಿ ನಾವು ನೋಡುವಂತೆ, ಹೊರಗಿನಿಂದ ಬಂದ ಇತರ ಪಂಡಿತರು, ವಿದ್ವಾಂಸರಷ್ಟೇ ಅಲ್ಲದೇ ಸ್ವಯಂ ಭೋಜರಾಜನೇ ಅನೇಕ ಬಾರಿ ತನ್ನ ಆಸ್ಥಾನದ ಕವಿಗಳಿಗೆ ಒಗಟುಗಳನ್ನು, ಸಮಸ್ಯೆಗಳನ್ನು ಕೊಟ್ಟು ಪೂರೈಸಲು ಹೇಳುತ್ತಿದ್ದ. ಹೀಗೆಯೇ ಒಮ್ಮೆ ತನ್ನದೇ ಅನುಭವದಿಂದ ಒಂದು ಸಮಸ್ಯೆಯನ್ನು ಸಭೆಯಲ್ಲಿ ಹೇಳಿ ಕಾಳಿದಾಸನಿಗೆ ಅದನ್ನು ಪೂರೈಸಲು ಹೇಳಿದ. ಸಮಸ್ಯೆ ಹೀಗಿತ್ತು-
ಟಟಂಟಟಂಟಂಟಟಟಂಟಟಂಟಂ 
ಇದು ಒಂದು ಸಂಸ್ಕೃತ ಶ್ಲೋಕದ ಒಂದು ಪಾದವಾಗಿ ಇರುವಂತೆ ಇತರ ಮೂರು ಪಾದಗಳನ್ನು ರಚಿಸಿ ಸಮಸ್ಯೆಯನ್ನು ಪೂರೈಸಬೇಕಿತ್ತು. 
ಸಭಿಕರಿಗೆ ಹಾಗೂ ಇತರ ಕವಿಗಳಿಗೆ ದಿಗ್ಭ್ರಮೆಯಾಯಿತು! ಇದೆಂಥ ಸಮಸ್ಯೆ? ಇದನ್ನು ಹೇಗೆ ಪೂರೈಸಲು ಸಾಧ್ಯ? ಕಾಳಿದಾಸನಾದರೋ ಹೇಗೆ ಪೂರೈಸುತ್ತಾನೆ? ಇಂದಿಗೆ ಮುಗಿಯಿತು ಕಾಳಿದಾಸನ ಕಥೆ ಎನಿಸಿತು ಎಲ್ಲರಿಗೂ! 
    ಭೋಜರಾಜನು ತನ್ನ ಸ್ವಂತ ಅನುಭವದಿಂದಲೇ ಈ ಸಮಸ್ಯೆಯನ್ನು ಕೊಟ್ಟಿದ್ದ. ಅಂದು ಬೆಳಿಗ್ಗೆ ಅವನು ಒಂದು ಸರೋವರದಲ್ಲಿ ಸ್ನಾನ ಮಾಡುತ್ತಿದ್ದ. ಆಗ ಮೆಟ್ಟಿಲುಗಳ ಮೇಲೆ ನಿಂತು ನೋಡುತ್ತಿದ್ದ ಒಬ್ಬ ಮದಿರಾಕ್ಷಿ ಯುವತಿ, ಅವನ ರೂಪದಿಂದ ಮದನಪರವಶಳಾದಳು. ಅವಳು ನೀರು ತರಲು ಒಂದು ಚಿನ್ನದ ಬಿಂದಿಗೆ ತಂದಿದ್ದಳು. ರಾಜನನ್ನು ನೋಡುತ್ತಾ ಮೈಮರೆತ ಅವಳು ತಿಳಿಯದೆ ತನ್ನ ಕೈಯಿಂದ ಆ ಚಿನ್ನದ ಬಿಂದಿಗೆಯನ್ನು ಜಾರಿಬೀಳಿಸಿಕೊಂಡಳು! ಆಗ ಅದು ಮೆಟ್ಟಿಲುಗಳಿಂದ ಇಳಿಯುತ್ತಾ ಮಾಡಿದ ಶಬ್ದವೇ ಈ ಟಟಂ ಟಟಂ........
     ಆ ಶಬ್ದವನ್ನೇ ಸಮಸ್ಯೆಯಾಗಿ ಕೊಟ್ಟಿದ್ದ ಭೋಜರಾಜ! ಆದರೆ ಇದನ್ನು ಕಾಳಿದಾಸನು ಹೇಗೆ ಪೂರೈಸಿಯಾನು? ಮಹಾಕವಿಯಲ್ಲವೇ? ಕೂಡಲೇ ಪೂರೈಸಿದ -
     ರಾಜಾಭಿಷೇಕೇ ಮದವಿಹ್ವಲಾಯಾ 
     ಹಸ್ತಾಚ್ಚ್ಯುತೋ ಹೇಮಘಟೋ ಯುವತ್ಯಾ:  /
     ಸೋಪಾನಮಾರ್ಗೇಷು ಕರೋತಿ ಶಬ್ದಂ 
     ಟಟಂಟಟಂಟಂಟಟಟಂಟಟಂಟಮ್ //
     ' ರಾಜನು ಅಭಿಷೇಕ ( ಸ್ನಾನ) ಮಾಡಿಕೊಳ್ಳುತ್ತಿರಲು, ಯೌವನದ ಮದದಿಂದ ವಿಹ್ವಲಳಾದ ಯುವತಿ ನಿಂತು ನೋಡುತ್ತಿರಲು, ಅವಳ ಕೈಯಿಂದ ಜಾರಿ ಬಿದ್ದ ಬಂಗಾರದ ಬಿಂದಿಗೆ ಸೋಪಾನಮಾರ್ಗದಲ್ಲಿ ಇಳಿಯುತ್ತಾ ಮಾಡಿತು ಶಬ್ದ -ಟಟಂಟಟಂಟಂಟಟಟಂಟಟಂಟಂ' 
      ಕಾಳಿದಾಸನು ಘಟನೆಯನ್ನು ನೋಡದೆಯೂ ತನ್ನ ಮನಸ್ಸಿನಲ್ಲಿದ್ದುದನ್ನು ಊಹಿಸಿ ಸಮಸ್ಯೆಯನ್ನು ಪೂರೈಸಿದುದನ್ನು ನೋಡಿ ಭೋಜರಾಜನು ಸುಪ್ರೀತನಾಗಿ ಅವನಿಗೆ ಒಂದೊಂದು ಅಕ್ಷರಕ್ಕೂ ಒಂದೊಂದು ಲಕ್ಷ ಹಣ ಕೊಟ್ಟು ಸನ್ಮಾನಿಸಿದನು.
      ಭೋಜಪ್ರಬಂಧದಲ್ಲಿ ಇಂಥ ಹಲವಾರು ಸ್ವಾರಸ್ಯಕರ ಪ್ರಸಂಗಗಳಿವೆ.

ಗುರುವಾರ, ಜುಲೈ 2, 2026

ಸುಂದರೀಶತಕ -೫೯

ಸಂಸ್ಕೃತ ಮೂಲ 

ವಿರಹಾರ್ತಿದಲನಮೌಷಧಮೇಕಂ ಚೇಷ್ಟಾಸು ತಾಸು ತಾದಾತ್ಮ್ಯಮ್ /
ಸುಂದರಿ ಯಸ್ಮಿಞ್ಜಾತೇ ಬ್ರಹ್ಮಾನಂದೋsಪಿ ನಾಕಾಂಕ್ಷ್ಯ: //

ಕನ್ನಡ ಅನುವಾದ 

    ' ಎಲೈ ಸುಂದರಿ! ವಿರಹದ ಬಾಧೆಯನ್ನು ನಾಶಮಾಡಲು ಇರುವ ಏಕೈಕ ಔಷಧವೆಂದರೆ ಪ್ರಿಯತಮನ ಪ್ರಣಯಕಲಾಪಗಳಲ್ಲಿ ತಾದಾತ್ಮ್ಯ ಹೊಂದುವುದು! ಅವನು ಪ್ರಕಟವಾದರೆ ಬ್ರಹ್ಮಾನಂದವೂ ಬೇಕಾಗುವುದಿಲ್ಲ!'
    ಇದು ಸಖಿಯು ರಾಧೆಗೆ ಹೇಳುತ್ತಿರುವಂತಿದೆ. ಶ್ಲೋಕದ ಚಿತ್ರಣ ಹಾಗಿದೆ. ರಾಧೆಯ ಪ್ರಿಯತಮ ಶ್ರೀಕೃಷ್ಣನು ಅವಳನ್ನು ಬಿಟ್ಟು ಹೋಗಿದ್ದಾನೆ ಹಾಗೂ ಅವಳಿಗೆ ವಿರಹಬಾಧೆ ಕಾಡುತ್ತಿದೆ. ಆಗ ಅವಳ ಸಖಿ ಅವಳಿಗೆ ಈ ಮಾತನ್ನು ಹೇಳುತ್ತಿರುವಂತಿದೆ. ಅವಳು ಹೇಳುವಂತೆ ವಿರಹಬಾಧೆಯನ್ನು ಹೋಗಲಾಡಿಸಲು ಇರುವುದು ಒಂದೇ ಔಷಧಿ. ಅದೇನೆಂದರೆ ಪ್ರಿಯತಮನ ಪ್ರಣಯಚೇಷ್ಟೆಗಳನ್ನು, ಪ್ರಣಯಲೀಲೆಗಳನ್ನು ಸ್ಮರಿಸಿಕೊಳ್ಳುತ್ತಾ ಅವುಗಳಲ್ಲೇ ತಾದಾತ್ಮ್ಯ ಹೊಂದುವುದು. ಆಗ ಅವನೇ ಪ್ರಕಟವಾದಂತಾಗುತ್ತದೆ! ಅವನು ಪ್ರಕಟವಾದರೆ ಬ್ರಹ್ಮಾನಂದವೂ ಬೇಕಾಗುವುದಿಲ್ಲ.‌ ಹೌದಲ್ಲವೇ? ಶ್ರೀಕೃಷ್ಣನು ಸಾಕಾರ ಪರಬ್ರಹ್ಮನೇ ಆಗಿದ್ದಾನೆ. ಅವನ ಸಾಕಾರ ಶೃಂಗಾರ ಪ್ರೇಮದ ಆನಂದದ ಮುಂದೆ ನಿರಾಕಾರ ಬ್ರಹ್ಮಾನಂದ ರುಚಿಸುವುದೇ ಇಲ್ಲ! 

ಸುಂದರೀಶತಕ -೫೮

ಸಂಸ್ಕೃತ ಮೂಲ 

ಅಗ್ನಿಶ್ಚಂದನಲೇಪೋ ವಿಷಮಮೃತಂ ಮರಣಮೇವ ಜೀವಾತು: /
ಸುಂದರಿ ವಿರಹಿಜನಾನಾಂ ಕಾಚನ ಲೋಕೋತ್ತರಾ ರೀತಿ: //

ಕನ್ನಡ ಅನುವಾದ 

   ಚಂದನದ ಲೇಪನವು ಅಗ್ನಿಯಂತೆ ಸುಡುತ್ತದೆ! ಅಮೃತವು ವಿಷದಂತೆ ಭಾಸವಾಗುತ್ತದೆ! ಜೀವಿಕೆಯು ಮರಣವೇ ಆಗಿದೆ! ಎಲೈ ಸುಂದರಿ! ವಿರಹಿಗಳ ರೀತಿ ಸ್ವಲ್ಪ ಲೋಕೋತ್ತರವಾಗಿರುತ್ತದೆ!' 
    ವಿರಹಿಗಳ ಚಿತ್ರಣವನ್ನು ಕವಿಯು ಮುಂದುವರೆಸುತ್ತಿದ್ದಾನೆ.‌ ಅವರ ರೀತಿಗಳು ಲೋಕೋತ್ತರವಾಗಿರುತ್ತವೆ ಎನ್ನುತ್ತಾನೆ. ಇಲ್ಲಿ ಲೋಕೋತ್ತರ ಎಂದರೆ ವಿಲಕ್ಷಣ ಎಂದು ಅರ್ಥ. ಲೋಕದ ರೀತಿಗೆ ವಿರುದ್ಧ. ಸಾಮಾನ್ಯವಾಗಿ ಚಂದನದ ಲೇಪನವು ತಂಪಾಗಿದ್ದರೆ ವಿರಹಿಗಳಿಗೆ ಅದು ಅಗ್ನಿಯಂತೆ ಸುಡುತ್ತದೆ! ಅಮೃತವು ಜೀವವರ್ಧನೆ ಮಾಡುವ ಬದಲು ವಿಷದಂತೆ ಭಾಸವಾಗುತ್ತದೆ. ಜೀವಿಕೆಯು ಮರಣವೇ ಎನಿಸುತ್ತದೆ! ಇದನ್ನು ವಿರಹಿಣಿಯ ಸಖಿಯೇ ಅವಳಿಗೆ ಹೇಳುತ್ತಿರುವಂತಿದೆ. ಅಥವಾ ಕವಿಯೇ ಸುಂದರಿಗೆ ಹೇಳುತ್ತಿದ್ದಾನೆ.

ಮಂಗಳವಾರ, ಜೂನ್ 30, 2026

ಸುಂದರೀಶತಕ -೫೭

ಸಂಸ್ಕೃತ ಮೂಲ 

ಕಿಂ ವಾ ಕೃತೈ: ಪ್ರಯತ್ನೈರೇತೈಸ್ತುಹಿನೋಪಚಾರಸಮವೇತೈ: /
ಉಷ್ಣೀಭವತಿ ಯದಸ್ಯಾ: ಪರಿತ: ಶೀತೋsಪಿ ಸಂಚರನ್ಪವನ: //

ಕನ್ನಡ ಅನುವಾದ 

    ' ಈ ವಿರಹಿಣಿಯ ವಿರಹತಾಪವನ್ನು ಹೋಗಲಾಡಿಸಲು ಅವಳಿಗೆ ಈ ಶೀತೋಪತಚಾರಗಳನ್ನು ಮಾಡಿ ಏನು ಪ್ರಯೋಜನ? ಅವಳ ನಾಲ್ಕೂ ಕಡೆಗಳಲ್ಲಿ ಚಲಿಸುತ್ತಿರುವ ಶೀತಲ ಗಾಳಿಯೂ ಬಿಸಿಯಾಗುತ್ತಿದೆ!' 
    ಕವಿಯು ಪುನಃ ಒಂದು ಅತಿ ವಿರಹದ ಚಿತ್ರಣವನ್ನು ನೀಡಿದ್ದಾನೆ. ಇಲ್ಲಿ ನಾಯಿಕೆಯು ತನ್ನ ಪ್ರಿಯತಮನಿಂದ ದೂರವಾಗಿ ವಿರಹಿಣಿಯಾಗಿದ್ದಾಳೆ. ಅವಳು ವಿರಹತಾಪದಿಂದ ಬೆಂದುಹೋಗುತ್ತಿದ್ದಾಳೆ! ಅವಳ ವಿರಹತಾಪವನ್ನು ಹೋಗಲಾಡಿಸಲು ಅವಳ ಸಖಿಯರು ಕಮಲಪತ್ರಗಳನ್ನು ಹಾಸಿಗೆಯ ಮೇಲೆ ಹಾಸಿ ಅವುಗಳ ಮೇಲೆ ಅವಳನ್ನು ಮಲಗಿಸುವುದು, ಕಮಲಪತ್ರಗಳ ಬೀಸಣಿಕೆಯಿಂದ ಗಾಳಿ ಬೀಸುವುದು, ಕಮಲಪುಷ್ಪಗಳಿಂದ ಅವಳನ್ನು ಮೆಲ್ಲನೆ ತೀಡುವುದು, ಅವಳ ಮೈಗೆ ಚಂದನವನ್ನು ಪೂಸುವುದು, ಮೊದಲಾದ ಶೀತೋಪಚಾರಗಳನ್ನು ಮಾಡುತ್ತಿದ್ದಾರೆ. ಆದರೆ ಅವಳ ವಿರಹತಾಪ ಹೋಗುತ್ತಿಲ್ಲ. ಅವಳ ವಿರಹತಾಪ ಎಷ್ಟಿದೆಯೆಂದರೆ, ಅದರಿಂದ ಅವಳ ಸುತ್ತಲೂ ಬೀಸುತ್ತಿರುವ ಶೀತಲ ಗಾಳಿಯೂ ಬಿಸಿಯಾಗುತ್ತಿದೆ! ಹಾಗಾಗಿ ಇಂಥ ಶೀತೋಪಚಾರಗಳಿಂದ ಪ್ರಯೋಜನವೇನು ಎನ್ನುತ್ತಿದ್ದಾನೆ ಕವಿ. 

ಭಾನುವಾರ, ಜೂನ್ 28, 2026

ಸುಂದರೀಶತಕ -೫೬

ಸಂಸ್ಕೃತ ಮೂಲ 

ನದತಿ ಕಲಾಪಿಕಲಾಪೇ ನವಜಲದಚ್ಛಾಯಶಾಂತಸಂತಾಪೇ /
ಸಂಶಯದೋಲಾರೂಢಂ ಜೀವಿತಮಸ್ಯಾ: ಸ್ಮರೇಣ ಕೃತಮ್ //

ಕನ್ನಡ ಅನುವಾದ 

  ' ವರ್ಷಋತುವಿನ ಆಗಮನವಾಗಲು, ನವಿಲುಗಳ ಸಮೂಹವು ಕೂಗುತ್ತಿದೆ ಹಾಗೂ ಹೊಸ ಮೇಘಗಳ ಛಾಯೆ ಎಲ್ಲರ ಸಂತಾಪವನ್ನು ಕಳೆದಿದೆ. ಆದರೆ ಕಾಮದೇವನು ಇವಳ ಜೀವಿತವನ್ನು ಮಾತ್ರ ಸಂಶಯದ ಉಯ್ಯಾಲೆಯ ಮೇಲೆ ತೂಗಾಡಿಸುತ್ತಿದ್ದಾನೆ! ' 

    ಕವಿಯು ಇಲ್ಲೊಂದು ಸುಂದರ ವಿರಹಚಿತ್ರಣವನ್ನು ಕಟ್ಟಿಕೊಡುತ್ತಲೇ ಒಂದು ಸೊಗಸಾದ ವೈರುಧ್ಯವನ್ನೂ ತೋರಿಸಿದ್ದಾನೆ. ವರ್ಷಾಕಾಲ ಆಗಮಿಸಿದೆ. ಆಕಾಶದಲ್ಲಿ ಕಪ್ಪನೆಯ ಹೊಸ ಮೋಡಗಳು ತುಂಬಿಕೊಂಡು ತಮ್ಮ ಛಾಯೆಯನ್ನು ಬೀರುತ್ತಾ ಎಲ್ಲ ಪಶುಪಕ್ಷಿಗಳಿಗೂ ಜನರಿಗೂ ಬೇಸಿಗೆಯ ಸಂತಾಪವನ್ನು ಕಳೆದಿದೆ. ನವಿಲುಗಳ ಸಮೂಹವು ಆನಂದದಿಂದ ಕೇಕೆ ಹಾಕುತ್ತಿದೆ! ಎಲ್ಲೆಲ್ಲೂ ಹಸಿರು! ಸುಂದರ ಪುಷ್ಪಗಳಿಂದ ಕೂಡಿದ ಮರಗಿಡಬಳ್ಳಿಗಳು! ತಂಗಾಳಿ ಹಿತವಾಗಿ ಬೀಸುತ್ತಿದೆ! ಇದು ಎಂಥ ಆಹ್ಲಾದಕರ, ಕಾಮೋದ್ದೀಪನಗೊಳಿಸುವ ವಾತಾವರಣ! ಆದರೆ ಎಲ್ಲರೂ ಸಂತೋಷವಾಗಿದ್ದರೂ ಇಲ್ಲೊಬ್ಬ ಸುಂದರಿ ಅತ್ಯಂತ ದುಃಖಿತಳಾಗಿದ್ದಾಳೆ! ಏಕೆಂದರೆ ಅವಳ ಪ್ರಿಯತಮನು ಅವಳ ಜೊತೆಯಲ್ಲಿಲ್ಲ! ಅವಳು ವಿರಹಿಣಿಯಾಗಿದ್ದಾಳೆ. ಯಾವ ಕಾಮನು ಎಲ್ಲರನ್ನೂ ಆಹ್ಲಾದಗೊಳಿಸುತ್ತಿದ್ದಾನೋ ಅವನೇ ಇವಳನ್ನು ಬಾಧಿಸುತ್ತಿದ್ದಾನೆ! ಕಾಮೋದ್ದೀಪನಗೊಳಿಸುವ ಈ ಸುಂದರ ವಾತಾವರಣ ಅವಳಿಗೆ ಹಿಂಸೆ ಕೊಡುತ್ತಿದೆ! ಇದು ಎಂಥ ವೈರುಧ್ಯವಲ್ಲವೇ? ಕಾಮದೇವನು ಅವಳ ಜೀವಿತವನ್ನೇ ಸಂದೇಹದ ಉಯ್ಯಾಲೆಯ ಮೇಲೆ ತೂಗಾಡಿಸುತ್ತಿದ್ದಾನೆ ಎನ್ನುತ್ತಾನೆ ಕವಿ! ಇದು ವಿರಹದ ಚರಮಾವಸ್ಥೆ! 

ಸುಂದರೀಶತಕ -೫೫

ಸಂಸ್ಕೃತ ಮೂಲ 

ಗಚ್ಛತಿ ವರ್ಷಾಕಾಲೇ ಜಲಧರಪಟಲೀ ಯಥಾ ಯಥಾ ರಿಕ್ತಾ /
ವರ್ಷತಿ ಲೋಚನಯುಗಲೀ ತಥಾ ತಥಾ ಪುಂಡರೀಕದೃಶ: //

ಕನ್ನಡ ಅನುವಾದ 

    ' ವರ್ಷಾಕಾಲ ಕಳೆದಂತೆ, ಹೇಗೆ ಹೇಗೆ ಮೇಘಗಳ ಸಾಲು ನೀರು ಸುರಿಸಿ ಖಾಲಿಯಾಗುತ್ತಿವೆಯೋ, ಹಾಗೆ ಹಾಗೆ ಈ ಕಮಲನಯನೆಯ ಕಂಗಳು ನೀರು ಸುರಿಸುತ್ತಿವೆ!'

    ಕವಿಯು ಇಲ್ಲಿ ಇನ್ನೊಂದು ಸೊಗಸಾದ ವಿರಹ ಚಿತ್ರಣವನ್ನು ನೀಡಿದ್ದಾನೆ. ಹಿಂದೆ ಹೇಳಿದಂತೆ, ಶೃಂಗಾರ ಸಾಹಿತ್ಯದಲ್ಲಿ ಸಂಭೋಗ ಶೃಂಗಾರ ( ಜೊತೆಯಲ್ಲಿ ಅನುಭವಿಸುವ ಪ್ರೇಮ ಶೃಂಗಾರ) ಹಾಗೂ ವಿಪ್ರಲಂಭ ಶೃಂಗಾರ ( ಪ್ರೇಮಿಗಳು ಬೇರೆಯಾಗಿ ಅನುಭವಿಸುವ ವಿರಹ ಶೃಂಗಾರ) ಎಂಬ ಎರಡು ವಿಧಗಳಿವೆ. ಸಂಭೋಗ ಶೃಂಗಾರಕ್ಕೆ ಎಷ್ಟು ಪ್ರಾಮುಖ್ಯತೆ ಇದೆಯೋ ವಿಪ್ರಲಂಭ ಶೃಂಗಾರಕ್ಕೂ ಅಷ್ಟೇ ಪ್ರಾಮುಖ್ಯತೆ ಇದೆ. ಈ ಶ್ಲೋಕ ವಿಪ್ರಲಂಭ ಶೃಂಗಾರಕ್ಕೆ ಒಳ್ಳೆಯ ಉದಾಹರಣೆ. ಇಲ್ಲಿ ನಾಯಿಕೆಯು ತನ್ನ ಪ್ರಿಯತಮನಿಗಾಗಿ ಬಹುಕಾಲದಿಂದ ಕಾಯುತ್ತಿದ್ದಾಳೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಯಾರೂ ಪ್ರಯಾಣ ಹೋಗುವುದಿಲ್ಲ ಹಾಗೂ ಪ್ರಯಾಣ ಹೋಗಿರುವವರು ಮಳೆಗಾಲಕ್ಕೆ ಮೊದಲು ಬಂದುಬಿಡುತ್ತಾರೆ. ಆದರೆ ಇಲ್ಲಿ ಮಳೆಗಾಲ ಕಳೆದರೂ ನಾಯಕನು ಬಂದಿಲ್ಲ! ಮೋಡಗಳೆಲ್ಲಾ ಮಳೆ ನೀರು ಸುರಿಸಿ ಖಾಲಿಯಾಗಿವೆ! ಅವು ಖಾಲಿಯಾದಂತೆ ನಾಯಿಕೆಯ ಕಂಗಳಲ್ಲಿ ಮಳೆ ಸುರಿಯುತ್ತಿದೆ! ಅಂದರೆ ಕಣ್ಣೀರು ಸುರಿಯತೊಡಗಿದೆ! ನಾಯಕನು ಬರುವನೆಂಬ ಭರವಸೆ ಅವಳಿಗೆ ಹೊರಟುಹೋಗಿ ಅವಳು ಅಳತೊಡಗಿದ್ದಾಳೆ! ಪ್ರವಾಸದಲ್ಲಿರುವ ನಾಯಕನ ವಿರಹಿಣಿ ನಾಯಿಕೆಗೆ ಪ್ರೋಷಿತ್ಪತಿಕೆ ಅಥವಾ ಪ್ರೋಷಿತಭರ್ತೃಕೆ ಎಂದು ಹೆಸರು. ಸಂಸ್ಕೃತ ಶೃಂಗಾರ ಸಾಹಿತ್ಯದ ಅಷ್ಟನಾಯಿಕೆಯರಲ್ಲಿ ಇವಳು ಒಬ್ಬಳು. 

ಮಂಗಳವಾರ, ಜೂನ್ 23, 2026

ಸುಂದರೀಶತಕ -೫೪

ಸಂಸ್ಕೃತ ಮೂಲ 

ಅವಧಿದಿವಸಪ್ರಯಾಣಾ: ಪ್ರಿಯತಮ ತಸ್ಯಾ ಮೃಗೀದೃಶ: ಪ್ರಾಣಾ: /
ತಿಷ್ಠಂತಿ ಕತಿಪಯಾಹಂ ಕೃತ್ವಾ ಪ್ರಸ್ಥಾನಮಧಿಕಂಠಮ್ //

ಕನ್ನಡ ಅನುವಾದ 

    ದೂತಿಯು ನಾಯಕನಿಗೆ ಹೇಳುತ್ತಾಳೆ, ' ಓ ಪ್ರಿಯತಮ! ನಿನ್ನ ಪ್ರಯಾಣದ ಅವಧಿಯ ವಿಯೋಗದ ದಿನಗಳು ಮುಗಿಯುತ್ತಾ ಬಂದಿವೆ! ಆ ಮೃಗನಯನಿಯ ಪ್ರಾಣಗಳು ಕಂಠದವರೆಗೂ ಬಂದು ನಿನ್ನ ಮಿಲನವಾಗಲೆಂದು ಇನ್ನು ಸ್ವಲ್ಪ ದಿನಗಳು ಉಳಿಯಲು ಪ್ರಯತ್ನ ಪಡುತ್ತಿವೆ!' 
    ಇಲ್ಲಿ ನಾಯಕನು ಪ್ರಯಾಣ ಹೋಗಿದ್ದಾನೆ. ಅವನ ಪ್ರಿಯತಮೆಯಾದ ನಾಯಿಕೆಯು ವಿರಹದಲ್ಲಿ ಬಳಲುತ್ತಿದ್ದಾಳೆ. ಅಂದಿನಿಂದಲೇ ಅವಳ ಪ್ರಾಣಗಳು ಹೋಗುವಂತಾಗಿವೆ. ಅವನ ಪ್ರಯಾಣದ ದಿನಗಳ ಅವಧಿ ಇನ್ನೇನು ಮುಗಿಯುತ್ತಾ ಬಂದಿದೆ. ಈ ಹೊತ್ತಿಗೆ ನಾಯಿಕೆಯ ಪ್ರಾಣಗಳು ಕಂಠದವರೆಗೂ ಬಂದಿವೆ ಹಾಗೂ ಇನ್ನೇನು ಹೋಗುವಂತಾಗಿವೆ!  ಅವನು ಬಂದರೆ, ಅವನ ಮಿಲನವಾಗುತ್ತಲೇ ಹೋಗಲೆಂದು ಇನ್ನು ಸ್ವಲ್ಪ ದಿನಗಳು ಉಳಿಯಲು ಪ್ರಯತ್ನ ಪಡುತ್ತಿವೆ. ಈ ವಿಷಯವನ್ನು ದೂತಿಯು ನಾಯಕನ ಬಳಿಗೆ ಹೋಗಿ ಹೇಳುತ್ತಿದ್ದಾಳೆ. ಇನ್ನು ಅವನು ಬಂದುಬಿಡಬೇಕೆಂದು ಅವಳ ಅಭಿಪ್ರಾಯ.
     ಇದು ಅತ್ಯಂತ ವಿರಹಾವಸ್ಥೆಯ ಒಂದು ಮನೋಜ್ಞ ಚಿತ್ರಣ. 
     

ಭಾನುವಾರ, ಜೂನ್ 21, 2026

ಶ್ರೀರಾಮನ ಕುರಿತ ಪ್ರೊ.ಭಗವಾನರ ಆಕ್ಷೇಪಗಳಿಗೆ ಉತ್ತರಗಳು

ಇತ್ತೀಚೆಗೆ ಪ್ರೊ.ಭಗವಾನರು ಶ್ರೀರಾಮನ ಕುರಿತು ಮತ್ತೆ ಆಕ್ಷೇಪ ಮಾಡಿ ಅನೇಕ ರಾಮಭಕ್ತರ ಮತ್ತು ಸಜ್ಜನರ ದು:ಖಕ್ಕೆ ಕಾರಣರಾಗಿದ್ದಾರೆ. ಇದು ಮೊದಲ ಬಾರಿಯಲ್ಲದೇ ಈ ಮೊದಲೂ ಹಲವಾರು ಬಾರಿ ಅವರು ಹೀಗೆ ಆಕ್ಷೇಪಗಳನ್ನು ಮಾಡುತ್ತಲೇ ಬಂದಿದ್ದು ರಾಮಮಂದಿರ ಬೇಡ ಎಂಬ ಪುಸ್ತಕವನ್ನೂ ಬರೆದಿದ್ದಾರೆ. ನಿಜ ಹೇಳಬೇಕೆಂದರೆ ಇಂಥವರ ಆಕ್ಷೇಪಗಳಿಗೆ ಉತ್ತರ ಕೊಟ್ಟು ಅವರನ್ನು ಸಮಾಧಾನಪಡಿಸಲಾಗುವುದಿಲ್ಲ. ಏಕೆಂದರೆ ಅವರು ತಮ್ಮ ಮನಸ್ಸನ್ನು ಆಕ್ಷೇಪ ಮಾಡಬೇಕೆಂದೇ ಸಿದ್ಧಪಡಿಸಿಕೊಂಡು ಇತರೆಲ್ಲಾ ಉತ್ತರಗಳಿಗೆ ಕಿವಿ ಮುಚ್ಚಿಕೊಂಡಿರುತ್ತಾರೆ. ಆದರೂ ಜನರಿಗೆ ಈ ಆಕ್ಷೇಪಗಳಿಗೆ ಉತ್ತರ ಗೊತ್ತಿರಬೇಕು. ಇಲ್ಲವಾದರೆ ಭಗವಾನರಿಂದ ಜನರು ತಪ್ಪು ತಿಳಿದು ರಾಮನನ್ನು ದ್ವೇಷಿಸಬಹುದು ಹಾಗೂ ಭಾರತೀಯ ಸಂಸ್ಕೃತಿಯ ಬಗ್ಗೆ ತಾತ್ಸಾರ ಭಾವನೆ ತಾಳಬಹುದು. ಹಾಗಾಗಿ ಇಂಥ ಆಕ್ಷೇಪಗಳಿಗೆ ಉತ್ತರಿಸಬೇಕಾಗುತ್ತದೆ.
      ಭಗವಾನರು ತಾವು ವಾಲ್ಮೀಕಿ ರಾಮಾಯಣವನ್ನೇ ನೇರವಾಗಿ ಓದಿ ಆಕ್ಷೇಪ ಮಾಡಿದ್ದೇನೆ, ಸುಳ್ಳು ಹೇಳಿಲ್ಲ ಎನ್ನುತ್ತಾರೆ. ಹಾಗಿದ್ದ ಮೇಲೆ ಅವರು ವಾಲ್ಮೀಕಿ ರಾಮಾಯಣದ ಕೆಲವು ಅಂಶಗಳನ್ನು ಮಾತ್ರ ಒಪ್ಪಿ ಇನ್ನಷ್ಟು ವಿಷಯಗಳನ್ನು ಬಿಡುವುದು, ಅಥವಾ ಅವರಿಗೆ ಮಾತ್ರ ಬೇಕಾಗಿರುವ ಅಂಶಗಳನ್ನು ಹೇಳುವುದು ಕವಿಗೆ ಮಾಡುವ ದ್ರೋಹ ಎಂದು ಹೇಳಬೇಕಾಗುತ್ತದೆ. ಹಾಗೆಂದು ಇವರು ವೈಚಾರಿಕವಾಗಿಯೂ ಹೇಳುತ್ತಿಲ್ಲ. ಆಕ್ಷೇಪ ಮಾತ್ರ ಮಾಡುತ್ತಿದ್ದಾರೆ. ಮುಖ್ಯವಾಗಿ ಶ್ರೀರಾಮನು ದಶರಥನ ಮಗನಲ್ಲ, ಅವನು ಒಬ್ಬ ಮದ್ಯಪಾನಿ, ಮಾಂಸಭಕ್ಷಕ, ಶಂಬೂಕನಂಥವರನ್ನು ಕೊಂದ ಕೊಲೆಗಡುಕ, ತನ್ನ ಹೆಂಡತಿ ಸೀತೆಯನ್ನು ಕಾಡಿಗಟ್ಟಿದ ಕಟುಕ, ತಮ್ಮ ಲಕ್ಷ್ಮಣನನ್ನು ಕೊಂದ, ತಂದೆಯನ್ನು ನಿಂದಿಸಿದ, ಮೊದಲಾದ 
 ' ಸತ್ಯ'ಗಳನ್ನು ವಾಲ್ಮೀಕಿ ರಾಮಾಯಣದಿಂದ ಕಂಡುಕೊಳ್ಳುವ ಭಗವಾನರು ಶ್ರೀರಾಮನು ವಿಷ್ಣುವಿನ ಅವತಾರ, ಸಕಲ ಕಲ್ಯಾಣಗುಣಗಳಿರುವವನು, ವೀರ್ಯವಂತ, ಧರ್ಮಜ್ಞ, ಕೃಚಜ್ಞ, ಸತ್ಯಭಾಷಿ, ದೃಢವಾದ ವ್ರತನಿಷ್ಠೆಯುಳ್ಳವನು, ಕುಲಾಚಾರವನ್ನು ಉಲ್ಲಂಘಿಸದೇ ಅನೂಚಾನವಾಗಿ ಬಂದಿರುವ ಆಚಾರ ವ್ಯವಹಾರಗಳನ್ನು ತಪ್ಪದೇ ನಡೆಸಿಕೊಂಡು ಬರುವವನು, ಸಕಲ ಪ್ರಾಣಿಗಳಲ್ಲಿ ದಯಾಪರನು, ಚತುರ್ದಶವಿದ್ಯೆಗಳಲ್ಲೂ ಪಾರಂಗತನು, ಸಕಲಕಾರ್ಯಧುರಂಧರನು, ಸಕಲ ಕಾಲದಲ್ಲೂ ಸರ್ವರಿಗೂ ಮೋಹನರೂಪನಾಗಿರುವವನು, ಅತ್ಯಂತ ಧೈರ್ಯವಂತನು, ಕೋಪವನ್ನು ಜಯಿಸಿರುವವನು, ಎಣೆಯಿಲ್ಲದ ಕಾಂತಿಯಿಲ್ಲದವನು, ಅಸೂಯಾರಹಿತನು, ಯುದ್ಧದಲ್ಲಿ ದೇವತೆಗಳೂ ಹೆದರುವಂಥವನು, ಇಂಥ ಗುಣಗಳಿರುವವನು ಎಂದು ಅದೇ ವಾಲ್ಮೀಕಿ ರಾಮಾಯಣದ ಮಾತನ್ನು ಕಂಡುಕೊಳ್ಳದ ಮೂರ್ಖರು ಎಂದು ಹೇಳಬೇಕಾಗುತ್ತದೆ!
     ಇರಲಿ! ಚಂದ್ರನನ್ನು ಕಂಡಾಗ ಬೆಳದಿಂಗಳನ್ನು ನೋಡುವ ಬದಲು ಕಪ್ಪು ಚುಕ್ಕೆಯನ್ನು ಮಾತ್ರ ನೋಡುವವರಿಗೆ ಏನು ಹೇಳುವುದು? 
     ಅದೇನೇ ಆದರೂ ಇವರ ಆಕ್ಷೇಪಣೆಗಳಿಗೆ ಉತ್ತರ ನೋಡೋಣ.
    ದಶರಥನಿಗೆ ಮೂರು ಪತ್ನಿಯರು ಅಥವಾ ವಾಲ್ಮೀಕಿ ರಾಮಾಯಣದ ಪ್ರಕಾರವೇ ಹಲವಾರು ಪತ್ನಿಯರಿದ್ದರೂ ಸಂತಾನವಾಗಲಿಲ್ಲ. ಈಗ ಹಾಗಾದರೆ ನಾವು ವೈದ್ಯರ ಬಳಿ ಹೋಗಿ ಹಾರ್ಮೋನ್ ಚಿಕಿತ್ಸೆ ಮೊದಲಾದವುಗಳನ್ನು ತೆಗೆದುಕೊಂಡು ಸಂತಾನಾಭಿವೃದ್ಧಿ ಮಾಡಿಕೊಳ್ಳುವಂತೆ ಅಂದಿನ ದಿನಗಳಲ್ಲಿ ಪುತ್ರಕಾಮೇಷ್ಠಿ ಯಜ್ಞ ಮಾಡಿದಾಗ ದಿವ್ಯ ಪುರುಷನೊಬ್ಬ ಬಂದು ದಿವ್ಯ ಪಾಯಸವನ್ನು ಕೊಟ್ಟ ಹಾಗೂ ದಷರಥ ಅದನ್ನು ತನ್ನ ಮೂರು ಪ್ರಮುಖ ರಾಣಿಯರಿಗೆ ಹಂಚಲು ಅವರು ಅದನ್ನು ಸೇವಿಸಿ ಗರ್ಭವತಿಯರಾದರು ಎಂಬುದು ಸಣ್ಣ ಮಗುವಿಗೂ ಗೊತ್ತಿರುವ ವಿಷಯ. ಪಾಯಸ ಒಂದು ಔಷಧೀಯ ಚಿಕಿತ್ಸೆ ಏಕಾಗಿರಬಾರದು? ಅದನ್ನು ರಾಣಿಯರು ಸೇವಿಸಿ ಸಂತಾನ ಶಕ್ತಿ ಪಡೆದ ಬಳಿಕ ದಶರಥ ನಿಂದಲೇ ಗರ್ಭ ಧರಿಸಿದರಲ್ಲವೇ? ದಶರಥನ ಪುತ್ರನಾದುದರಿಂದಲೇ ರಾಮನಿಗೆ ದಾಶರಥಿ ಎಂದು ಹೆಸರು ಬುದಿತು. ಭಗವಾನರು ದಶರಥನು ತನ್ನ ರಾಣಿಯರನ್ನು ಪುರೋಹಿತರಿಗೆ ಒಪ್ಪಿಸಿದನು ಎಂದು ಹೇಳಿರುವುದು ವಾಲ್ಮೀಕಿ ರಾಮಾಯಣದಲ್ಲಿ ಇಲ್ಲ. ಆದರೆ ಈ ಇನ್ನೊಬ್ಬರಿಂದ ಮಕ್ಕಳು ಹುಟ್ಟುವುದು ಇರಲಿಲ್ಲವೆಂದಲ್ಲ. ಅದು ಮಹಾಭಾರತ ಮತ್ತು ಇತರ ಪೌರಾಣಿಕ ಕಥೆಗಳಲ್ಲಿ ಕಾಣುವ ನಿಯೋಗ ಪದ್ಧತಿ.‌ ಮಕ್ಕಳಾಗುವುದು ಬಹಳ ಮುಖ್ಯವಾಗಿದ್ದ ಕಾಲದಲ್ಲಿ ಒಬ್ಬ ಯೋಗ್ಯ, ಜಿತೇಂದ್ರಿಯ ವಿದ್ವಾಂಸನನ್ನು ಕರೆಸಿ ಅವನಿಂದ ಹೆಂಡತಿಯಲ್ಲಿ ಸಂಪರ್ಕ ಮಾಡಿಸಿ ಅವಳು ಗರ್ಭವತಿಯಾದ ನಂತರ ಅವಳಲ್ಲಿ ಯಾವುದೇ ಕಾಮವನ್ನು ವ್ಯಕ್ತಪಡಿಸದಿರುವ ಒಂದು ಪದ್ಧತಿ ನಿಯೋಗ ಪದ್ಧತಿ. ಇದಲ್ಲದೆ, ಮಹಾಭಾರತದಲ್ಲಿ ಪಾಂಡುವು ಕುಂತಿಗೆ, ಕನ್ಯೆಗೆ ಮದುವೆಗೆ ಮೊದಲೇ ಹುಟ್ಟಿರುವ ಕಾನೀನ ಪುತ್ರ, ದತ್ತು ತೆಗೆದುಕೊಳ್ಳುವ ದತ್ತು ಪುತ್ರ, ಮೊದಲಾದ ಹಲವು ರೀತಿಯ ಪುತ್ರರಿಗೆ ಅವಕಾಶ ಇದೆ ಎಂದು ವೈದಿಕ ಧರ್ಮದ ಔದಾರ್ಯವನ್ನು ಹೇಳುತ್ತಾನೆ. ಆದರೆ ರಾಮನು ಈ ಯಾವ ರೀತಿಯೂ ಹುಟ್ಟದೆ, ದಶರಥ ಮತ್ತು ಕೌಸಲ್ಯೆಯರಿಗೆ ದಿವ್ಯ ಪಾಯಸದಿಂದ ಹುಟ್ಟಿದವನಾಗಿದ್ದಾನೆ. ವಾಲ್ಮೀಕಿ ರಾಮಾಯಣವನ್ನೇ ಓದಿದ್ದೇನೆ ಎನ್ನುವ ಭಗವಾನರು ಅದರಲ್ಲಿರುವ ಅಲೌಕಿಕತೆಯನ್ನೂ ಒಪ್ಪಿಕೊಳ್ಳಬೇಕು.‌ 
     ರಾಮನು ಮದ್ಯಪಾನಿ ಹಾಗೂ ಮಾಂಸಾಹಾರಿ ಎನ್ನುವುದು ಇನ್ನೊಂದು ಆಕ್ಷೇಪ. ನಿಜವೇ, ಶ್ರೀರಾಮನು ಸೀತೆಯೊಂದಿಗೆ ಮಧುಮೈರೇಯ ಎಂಬ ಪಾನೀಯವನ್ನು ಕುಡಿಯುತ್ತಾ ಸೇವಕರು ತಂದುಕೊಡುತ್ತಿದ್ದ ಮಾಂಸಭಕ್ಷ್ಯಗಳನ್ನು ಸೇವಿಸುತ್ತಾ ಅಪ್ಸರೆಯರ ನರ್ತನವನ್ನು ನೋಡುತ್ತಾ ಸಂತೋಷಪಡುತ್ತಿದ್ದ ಎಂದು ಉತ್ತರಕಾಂಡದಲ್ಲಿ ಹೇಳಿದೆ. ಅಷ್ಟೇ ಅಲ್ಲದೆ ಕಾಡಿನಲ್ಲಿ ಲಕ್ಷ್ಮಣ ಒಂದು ಪರ್ಣಕುಟಿ ಕಟ್ಟಿದಾಗ ಎಲ್ಲರೂ ಒಂದು ಕಸ್ತೂರಿಮೃಗವನ್ನು ಅರ್ಪಿಸಿ ಸೇವಿಸುತ್ತಾರೆ ಹಾಗೂ ರಾಮನೇ ಸೀತೆಗೆ ಒಮ್ಮೆ ಜಿಂಕೆಯ ಮಾಂಸವನ್ನು ಬೇಯಿಸಿ ತಿನ್ನಿಸಿದ ಎಂದು ಅರಣ್ಯಕಾಂಡದಲ್ಲೀದೆ.‌ ರಾಮ ಒಬ್ಬ ರಾಜನಲ್ಲವೇ? ರಾಜರು ಕ್ಷತ್ರಿಯರು. ಕ್ಷತ್ರಿಯರಿಗೆ ಮದ್ಯಮಾಂಸಗಳು ಸಹಜವಲ್ಲವೇ? ರಾಮ, ಕೃಷ್ಣ, ಪಾಂಡವರು, ಕೌರವರು, ಇವರೆಲ್ಲರೂ ಮಾಂಸಾಹಾರಿಗಳೇ ಆಗಿದ್ದರು. ಅಷ್ಟೇಕೆ? ಬ್ರಾಹ್ಮಣರೂ ಯಜ್ಞ ಯಾಗಗಳಲ್ಲಿ ಮಾಂಸಭಕ್ಷಣೆ ಮಾಡುತ್ತಿದ್ದರು. ಆಯುರ್ವೇದ ಗ್ರಂಥಗಳಲ್ಲಿ ಅನೇಕ ಮಾಂಸಗಳ ಔಷಧೀಯ ಗುಣಗಳೂ ಹೇಳಲಾಗಿದೆ. ಹಾಗೆಂದು ಸುಮ್ಮನೆ ಪ್ರಾಣಿಗಳನ್ನು ಕೊಲ್ಲುವುದನ್ನು ಪ್ರೋತ್ಸಾಹಿಸಿಲ್ಲ. ಬೇಟೆ, ಮದ್ಯಪಾನ, ಸ್ತ್ರೀ ವ್ಯಾಮೋಹ, ಮತ್ತು ಜೂಜು, ಈ ನಾಲ್ಕನ್ನೂ ರಾಜರ ದೋಷಗಳೆಂದೇ ಹೇಳಿದ್ದಾರೆ.‌ ಆದರೆ ರಾಜರು ಇವನ್ನು ಸ್ವಲ್ಪವಾದರೂ ಮಾಡುತ್ತಿದ್ದರು. ಹಾಗಾಗಿಯೇ ಮನುಸ್ಮೃತಿ ಹೇಳುತ್ತದೆ 
  ನ ಮಾಂಸಭಕ್ಷಣೇ ದೋಷೋ ನ ಮದ್ಯೇ ನ ಚ ಮೈಥುನೇ /
  ಪ್ರವೃತ್ತಿರೇಷಾ ಭೂತಾನಾಂ ನಿವೃತ್ತಿಸ್ತು ಮಹಾಫಲಾ//
        ' ಮಾಂಸಭಕ್ಷಣೆ, ಮದ್ಯಪಾನ, ಹಾಗೂ ಮೈಥುನದಲ್ಲಿ ದೋಷವಿಲ್ಲ. ಇದು ಜೀವಿಗಳ ಪ್ರವೃತ್ತಿಯೇ ಆಗಿದೆ. ಆದರೆ ಇವುಗಳ ನಿವೃತ್ತಿಯಿಂದ ಮಹಾಫಲವುಂಟು.' 
     ಇನ್ನು ಮಧು ಮೈರೇಯ ಎಂಬುದು ಮಧು ಅಥವಾ ಜೇನು ಮತ್ತು ಕೆಲವು ಹಣ್ಣುಗಳಿಂದ ಹಾಗೂ ಸಂಭಾರ ಪದಾರ್ಥಗಳಿಂದ ಮಾಡಿದ ಒಂದು ಪೇಯ. ಹೀಗೆಯೇ ಆಸವ, ವಾರುಣಿ, ಮೊದಲಾದ ಅನೇಕ ಪೇಯಗಳಿದ್ದವು. ಕೌಟಿಲ್ಯನು ತನ್ನ ಅರ್ಥಶಾಸ್ತ್ರದಲ್ಲಿ ಇಂಥ ಕೆಲವು ಪೇಯಗಳ ಉದಾಹರಣೆ ಕೊಡುತ್ತಾನೆ. ಭಾಗವತದಲ್ಲಿ ಕರ್ದಮರ ಪತ್ನಿ ದೇವಹೂತಿಗೆ ಸಖಿಯರು ಆಸವವೆಂಬ ಪಾನೀಯವನ್ನು ಕುಡಿಸುತ್ತಾರೆ. ಹಾಗೆಯೇ ಬಲರಾಮನು ವಾರುಣಿ ಎಂಬ ಪಾನೀಯವನ್ನು ಕುಡಿದ ಉಲ್ಲೇಖವಿದೆ. ಇವೆಲ್ಲವೂ ಮತ್ತು ಬರಿಸುವ ಪಾನೀಯಗಳೇ ಆದರೂ ಹೆಂಡ, ಸಾರಾಯಿಗಳಂಥ ಕ್ಷುಲ್ಲಕ ಮದ್ಯಗಳಲ್ಲ. ಅಂದಿನ ದಿನಗಳಲ್ಲಿ ರಾಜರು ಹೀಗೆ ಕೆಲವು ಪೇಯಗಳನ್ನು ಕುಡಿದು ಆನಂದಿಸುತ್ತಿದ್ದರು. ಈಗ ನಾವು ಕಾಫಿ, ಚಹಾ ಕುಡಿಯುವುದಿಲ್ಲವೇ? ಅವೂ ಸ್ವಲ್ಪ ಮತ್ತು ಬರಿಸುತ್ತವೆ. ಅಷ್ಟೇಕೆ? ಗಸಗಸೆ ಪಾಯಸ ಕುಡಿದರೂ ಸ್ವಲ್ಪ ಮತ್ತು ಬರುತ್ತದೆ. ರಾಮನು ಎಂಥ ಪರಾಕ್ರಮಿಯಾಗಿದ್ದ, ರಾವಣನಂಥ ವಿಶ್ವವನ್ನೇ ಗೆದ್ದ ರಾಕ್ಷಸನನ್ನು ಕೊಂದ ಎಂದು ಗೊತ್ತಿದ್ದ ಪ್ರಜೆಗಳು ಯಾವುದೇ ಅಪರಾಧಗಳನ್ನು ಮಾಡದೇ ಶಾಂತ ಜೀವನ ನಡೆಸುತ್ತಿದ್ದರು. ಹಾಗಾಗಿ ರಾಮನಿಗೆ ಆಡಳಿತ ಕಷ್ಟವಾಗದೇ ನರ್ತನ ನೋಡುತ್ತಾ ಆನಂದಿಸಿದರೆ ತಪ್ಪೇನು?
     ಇನ್ನು ಶ್ರೀರಾಮನು ಶಂಬೂಕನನ್ನು ಕೊಂದ ಆಕ್ಷೇಪ. ಶಂಬೂಕ ಒಬ್ಬ ಶೂದ್ರ ತಪಸ್ವಿ ಎನ್ನುವುದಕ್ಕಿಂತ ಅವನು ಸಶರೀರವಾಗಿ ಸ್ವರ್ಗಕ್ಕೆ ಹೋಗಲು ತಪಸ್ಸು ಮಾಡುತ್ತಿದ್ದ ಕಾರಣಕ್ಕೆ ರಾಮನು ಅವನನ್ನು ಕೊಂದ. ಹಿಂದೆ ಹರಿಶ್ಚಂದ್ರನ ತಂದೆ ಸತ್ಯವ್ರತ ಅಥವಾ ತ್ರಿಶಂಕು ಸಶರೀರವಾಗಿ ಸ್ವರ್ಗಕ್ಕೆ ಹೋಗಲು ಪ್ರಯತ್ನಿಸಿದಾಗ ವಸಿಷ್ಠರ ಮಕ್ಕಳು ಅವನಿಗೆ ಚಾಂಡಾಲತ್ವದ ಶಾಪ ಕೊಡಲಿಲ್ಲವೇ? ಹಾಗೂ ವಿಶ್ವಾಮಿತ್ರರು ಅವನನ್ನು ಯಜ್ಞ ಮಾಡಿ ಸ್ವರ್ಗಕ್ಕೆ ಕಳಿಸಲು ಅವನನ್ನು ಸ್ವರ್ಗದಿಂದ ತಳ್ಳಲಾಯಿತು. ಆಗ ವಿಶ್ವಾಮಿತ್ರರು ಅವನನ್ನು ತಲೆಕೆಳಗಾಗಿ ಅವರದೇ ಸೃಷ್ಟಿಯ ಒಂದು ಸ್ವರ್ಗದಲ್ಲಿ ನಿಲ್ಲಿಸಿದರು. ಅಂತೆಯೇ ರಾಮನು ಶಂಬೂಕನ ತಪ್ಪು ರೀತಿಯ ತಪಸ್ಸಿಗೆ ದಂಡನೆ ನೀಡಿದನು. ಅಲ್ಲದೆ, ವಾಲ್ಮೀಕಿ ರಾಮಾಯಣದಲ್ಲೇ ಮತಂಗ ಜಾತಿಯ ಶೂದ್ರಳೇ ಆದ ಶಬರಿ, ಹಾಗೂ ಶ್ರವಣಕುಮಾರನ ವೈಶ್ಯ ಮತ್ತು ಶೂದ್ರ ತಂದೆ ತಾಯಿಯರು ತಪಸ್ಸು ಮಾಡಿದ ವಿಷಯ ಇದೆ. ಅಷ್ಟೇ ಅಲ್ಲದೆ ಶಂಬೂಕನ ವಧೆಯಾದ ಕೂಡಲೇ ಬ್ರಾಹ್ಮಣ ಬಾಲಕ ಬದುಕಿದ ಅಲೌಕಿಕ ವಿಷಯವನ್ನೂ ಒಪ್ಪಬೇಕು. ಅವನು ಬದುಕಿದ ಹಾಗೂ ದೇವತೆಗಳು ಪುಷ್ಪವೃಷ್ಟಿ ಮಾಡಿದರು ಎಂದರೆ ರಾಮ ಮಾಡಿದ್ದು ಸರಿ ಎಂದೇ ಆಯಿತಲ್ಲವೇ? ಇಲ್ಲ, ಇಂಥ ಅಲೌಕಿಕ ವಿಷಯವನ್ನು ಒಪ್ಪಲಾಗದು ಎಂದರೆ ಇಡೀ ಕಥೆಯನ್ನು ಕಾಲ್ಪನಿಕ ಎಂದು ಹೇಳಬೇಕಾಗುತ್ತದೆ. ಆಗಲೂ ರಾಮನದು ಯಾವುದೇ ತಪ್ಪಿರುವುದಿಲ್ಲ. ಹಾಗೆ ನೋಡಿದರೆ ಕೆಲವು ವಿದ್ವಾಂಸರು ಉತ್ತರಕಾಂಡ ವಾಲ್ಮೀಕಿ ಕೃತವಲ್ಲ ಎಂದೂ ಹೇಳುತ್ತಾರೆ. ಹೀಗೂ ತೆಗೆದುಕೊಳ್ಳಬಹುದು.
     ಶ್ರೀ ರಾಮನು ಸೀತೆಯನ್ನು ಕಾಡಿಗೆ ಕಳುಹಿಸಿದ ಕಾರಣ ಅಗಸನ ಮಾತೆಂದು ತಿಳಿದಿರುವಂತೆ ವಾಲ್ಮೀಕಿ ರಾಮಾಯಣದಲ್ಲಿ ಇಲ್ಲ. ಅಲ್ಲಿರುವಂತೆ ಇಡೀ ಅಯೋಧ್ಯೆಯ ಜನರು ಸೀತೆಯ ಚಾರಿತ್ರ್ಯದ ಬಗ್ಗೆ ತಪ್ಪಾಗಿ ಮಾತನಾಡುತ್ತಿದ್ದರು ಹಾಗೂ ರಾಮನು ಅವಳನ್ನು ಪುನಃ ಕರೆದುಕೊಂಡಿದ್ದು ಸರಿಯಲ್ಲ ಎಂದು ಉದ್ಯಾನವನಗಳಲ್ಲಿ, ಬೀದಿಬೀದಿಗಳಲ್ಲಿ, ಎಲ್ಲೆಲ್ಲೂ ಮಾತನಾಡುತ್ತಿದ್ದರು ಎಂದು ಭದ್ರ ಎಂಬ ಗುಪ್ತಚರ ರಾಮನಿಗೆ ಹೇಳಿದಾಗ ರಾಮನು ಜನರ ಸಮಾಧಾನಕ್ಕಾಗಿ ಹಾಗೂ ತನಗೆ ಲೋಕಾಪವಾದ ಬರಬಾರದು ಎಂದು ಸೀತೆಯನ್ನು ಕಾಡಿಗೆ ಕಳಿಸಲೇಬೇಕಾಯಿತು. ಆದರೆ ಇಲ್ಲಿ ರಾಮನು ಸೊಗಸಾದ ಉಪಾಯ ಮಾಡಿದ್ದನ್ನು ಭಗವಾನರು ಗಮನಿಸಿಲ್ಲ. ಗರ್ಭವತಿಯಾಗಿದ್ದ ಸೀತೆಯು ಕಾಡಿನಲ್ಲಿ ಕಳೆದಂತೆ ಋಷಿಗಳ ಆಶ್ರಮದಲ್ಲಿ ಕಾಲ ಕಳೆಯಬೇಕೆಂದು ಆಸೆಯಾಗುತ್ತಿದೆ ಎಂದು ರಾಮನಿಗೆ ಹೇಳಿದ್ದಳು. ಇದೇ ನೆಪದಿಂದ ಅವನು ಲಕ್ಷ್ಮಣನಿಗೆ ಸೀತೆಯನ್ನು ವಾಲ್ಮೀಕಿ ಆಶ್ರಮದ ಬಳಿ ಬಿಟ್ಟು ಬರಲು ಹೇಳುತ್ತಾನೆ. ಇದರಿಂದ ಅವಳ ಆಸೆಯೂ ನೆರವೇರಿ, ಜನರ ಸಮಸ್ಯಯೂ ಪರಿಹಾರವಾಗುತ್ತದೆ ಎಂದು ಅವನು ಯೋಚಿಸಿದ್ದು ಹಾಗೂ ಈ ಸಮಸ್ಯೆ ಸರಿಹೋದ ಬಳಿಕ ಅವಳನ್ನು ಪುನಃ ಹೇಗೋ ಪಡೆದುಕೊಳ್ಳುವ ಯೋಚನೆ ಇದ್ದುದು ಸ್ಪಷ್ಟವಾಗಿ ಕಾಣುತ್ತದೆ. ಇದರೊಂದಿಗೆ ರಾಮನೂ ಬಹಳ ನೊಂದುಕೊಂಡ. ಸೀತೆಯ ಮೇಲೆ ಅವನಿಗೆಷ್ಟು ಪ್ರೀತಿಯಿತ್ತು ಎಂದು ಅರಣ್ಯಕಾಂಡದಲ್ಲಿ ಅವನ ವಿಲಾಪದಿಂದಲೇ ಗೊತ್ತಾಗುತ್ತದೆ. ಅಲ್ಲದೆ ಅವನು ಅವಳನ್ನು ಮರಳಿ ಪಡೆಯಲು ವಾನರರೊಂದಿಗೆ ಲಂಕೆಗೆ ಹೋಗಿ ರಾವಣನನ್ನು ಕೊಂದು ಎಷ್ಟು ಕಷ್ಟ ಪಟ್ಟ ಎಂದು ಗೊತ್ತಾಗುತ್ತದೆ. ಜನರಿಗೆ ಅವಳ ಪಾವಿತ್ರ್ಯತೆ ತಿಳಿಯಲೆಂದು ಅವನು ಅವಳನ್ನು ನಿರಾಕರಿಸುವ ನಾಟಕ ಆಡಿದ. ಪುನಃ ವಾಲ್ಮೀಕಿ ರಾಮಾಯಣ ಮೊದಲಾದ ಗ್ರಂಥಗಳಲ್ಲಿ ಅಗ್ನಿಪರೀಕ್ಷೆಯಂಥ ಅಲೌಕಿಕ ಘಟನೆಗಳನ್ನು ಒಪ್ಪಬೇಕು. ಇಲ್ಲವೇ ಎಲ್ಲಾ ಹಿರಿಯರು ರಾಮನಿಗೆ ಉಪದೇಶ ಮಾಡಿ ಅವನು ಸೀತೆಯನ್ನು ಸ್ವೀಕರಿಸಿದ ಎಂದು ಐತಿಹಾಸಿಕವಾಗಿಯೂ ತೆಗೆದುಕೊಳ್ಳಬಹುದು. ಸೀತೆಯ ಬಗ್ಗೆ ಅಯೋಧ್ಯೆಯಲ್ಲಿ ಅಪವಾದ ಬಂದಾಗ, ರಾಮನು ಹೀಗಾಗಬಾರದೆಂದು ಲಂಕೆಯಲ್ಲೇ ತೋರಿಸಿದೆನಲ್ಲ ಎಂದು ಕೊರಗುತ್ತಾನೆ. ಹೀಗೆ ಒಬ್ಬ ರಾಜನಾಗಿ ಪ್ರಜೆಗಳಿಗಾಗಿ ಸೀತಾಪರಿತ್ಯಾಗ ಮಾಡಿದ ಶ್ರೀರಾಮ ಮಹಾತ್ಯಾಗಿ.
    ರಾಮನು ತಂದೆಯನ್ನು ನಿಂದಿಸಿದ ಎನ್ನುವ ಆಕ್ಷೇಪ. ಕಾಡಿನಲ್ಲಿ ಒಂದೇ ಒಂದು ಬಾರಿ ಲಕ್ಷ್ಮಣನ ಬಳಿ, ತಾನು ಇಷ್ಟು ವಿಧೇಯ ಪುತ್ರನಾಗಿದ್ದರೂ ತನ್ನ ತಂದೆ ದಶರಥ ಕಾಮವಶನಾಗಿ ತನ್ನನ್ನು ಕಾಡಿಗೆ ಕಳಿಸಿದನಲ್ಲ ಎಂದು ಮನುಷ್ಯಸಹಜವಾಗಿ ನೊಂದುಕೊಳ್ಳುತ್ತಾನೆ. ಹಾಗೆಂದು ಅವನು ತಂದೆಯನ್ನು ನಿಂದಿಸಿಲ್ಲ. ತಂದೆಯು ಹೇಳಿದ ಕೂಡಲೇ ಕಾಡಿಗೆ ಹೋದ ಹಾಗೂ ಅವನ ಮದುವೆಯ ಸಮಯದಲ್ಲೂ ತಂದೆ ಬರಲಿ ಎಂದು ಹೇಳುತ್ತಾನೆ. ಅಂತೆಯೇ ಶ್ರದ್ಧೆಯಿಂದ ತಂದೆಯ ಶ್ರಾದ್ಧವನ್ನು ಮಾಡುತ್ತಾನೆ.
      ಲಕ್ಷ್ಮಣನನ್ನು ಕೊಂದ ಎಂಬ ಆರೋಪ. ರಾಮಾವತಾರದ ಕೊನೆಯಲ್ಲಿ ಕಾಲಪುರುಷ ಅವನಿಗೆ ನೆನಪಿಸಲು ಬಂದಾಗ ರಾಮನು ಲಕ್ಷ್ಮಣನನ್ನು ಕಾವಲಿಟ್ಟು ಯಾರನ್ನೂ ಒಳಗೆ ಬಿಡಬಾರದೆಂದಾಗ ಹಾಗೂ ದುರ್ವಾಸರು ಬಂದು ಒಳಗೆ ಬಿಡದಿದ್ದರೆ ಅಯೋಧ್ಯೆಗೆ ಶಾಪ ಕೊಡುತ್ತೇನೆ ಎಂದಾಗ ಲಕ್ಷ್ಮಣನು ಅವರನ್ನು ಒಳಗೆ ಬಿಡಲೇಬೇಕಾಯಿತು. ಆ ತಪ್ಪಿಗೆ ರಾಮನು ಅವನನ್ನು ದಂಡಿಸದಿದ್ದರೂ ಅವನೇ ರಾಜ್ಯತ್ಯಾಗ ಮಾಡಿ ಸರಯೂ ನದಿಯಲ್ಲಿ ಮುಳುಗಿ ಯೋಗಸಮಾಧಿಯಿಂದ ಪ್ರಾಣತ್ಯಾಗ ಮಾಡಿದ. ಅನಂತರ ದು:ಖಿತನಾದ ರಾಮನೂ ಹಾಗೆಯೇ ಸರಯೂ ನದಿಯಲ್ಲಿ ಮುಳುಗಿ ತನ್ನ ಅವತಾರ ಮುಗಿಸಿದ. ಇದನ್ನು ಭಗವಾನರು ಆತ್ಮಹತ್ಯೆ ಎಂದು ಬಿಂಬಿಸುತ್ತಾರೆ. ಆದರೆ ಸ್ವ ಇಚ್ಛೆಯಿಂದ ಹೀಗೆ ದೇಹತ್ಯಾಗ ಮಾಡುವ ಯೋಗದ ಕ್ರಮವನ್ನು ಭಾಗವತದಲ್ಲಿ ವಿಷ್ಣುವಿನ ಅವತಾರವಾದ ಕಪಿಲ ಮಹರ್ಷಿಗಳು ವಿವರಿಸಿದ್ದಾರೆ. ಹಾಗಾಗಿ ಇದು ಆತ್ಮಹತ್ಯೆ ಅಲ್ಲ. ಅಲ್ಲದೆ ರಾಮನು ಹನ್ನೊಂದು ಸಾವಿರ ವರ್ಷಗಳ ಸುದೀರ್ಘ ಕಾಲ ಆಳಿ ತನ್ನ ಕರ್ತವ್ಯಗಳನ್ನು ಮುಗಿಸಿ ದೇಹತ್ಯಾಗ ಮಾಡಿದ ಕಾರಣ ಅದು ತಪ್ಪಲ್ಲ. 
    ರಾಮನು ಹನ್ನೊಂದು ಸಾವಿರ ವರ್ಷಗಳ ಕಾಲ ಆಳಿದ್ದು ಸುಳ್ಳು ಎನ್ನುತ್ತಾರೆ ಭಗವಾನರು. ವಾಲ್ಮೀಕಿ ರಾಮಾಯಣದಲ್ಲಿ ಇರುವುದನ್ನೇ ಹೇಳುವೆ ಎನ್ನುವ ಅವರು ಪುನಃ ಅದರಿಲ್ಲುರುವುದನ್ನು ಒಪ್ಪುವುದಿಲ್ಲ. ಆದರೂ ಇಷ್ಟೊಂದು ಕಾಲ ಹೇಗೆ ಬದುಕಿರಲು, ಆಳಲು ಸಾಧ್ಯ ಎಂದು ಕೇಳಬಹುದು. ಇದಕ್ಕೆ ಪರಿಹಾರ ಇದೆ.‌ ವಿದ್ವಾಂಸರು ಹೇಳುವುದೇನೆಂದರೆ ಸಂಸ್ಕೃತದಲ್ಲಿ ಸಂಖ್ಯಾವಾಚಕ ಎಂಬ ಒಂದು ವಿಚಾರವಿದೆ. ಅದರಂತೆ ಇಂಥ ದೊಡ್ಡ ಸಂಖ್ಯೆಗಳನ್ನು ಯಥಾವತ್ತಾಗಿ ತೆಗೆದುಕೊಳ್ಳಬಾರದು. ಶ್ರೀಕೃಷ್ಣನ ಹದಿನಾರು ಸಾವಿರ ಪತ್ನಿಯರು, ಶ್ರೀ ರಾಮನ ಹನ್ನೊಂದು ಸಾವಿರ ವರ್ಷಗಳು, ಇವೆಲ್ಲವೂ ಹೀಗೆ ಸಂಖ್ಯಾವಾಚಕಗಳು. 
      ಇಷ್ಟೆಲ್ಲಾ ಹೇಳಿದರೂ ಶ್ರೀ ರಾಮನ ಕಾರ್ಯಗಳು ಆಕ್ಷೇಪಣೀಯ ಎನಿಸಿದರೆ ಅದಕ್ಕೆ ಕಾರಣ ಅವನು ಮಾನವನಾಗಿ ನಡೆದುಕೊಳ್ಳಬೇಕಾಗಿದ್ದ ಪರಿಸ್ಥಿತಿ. ರಾವಣನು ತಾನು ಮಾನವನನ್ನು ಹೊರತುಪಡಿಸಿ ಇನ್ನಾವ ಜೀವಿಯಿಂದಲೂ ಸಾಯಬಾರದೆಂದು ಬ್ರಹ್ಮನಿಂದ ವರ ಪಡೆದಿದ್ದನು.‌ ಮಾನವರನ್ನು ಅವನು ಲೆಕ್ಕಿಸಲಿಲ್ಲ. ಹಾಗಾಗಿ ವಿಷ್ಣುವು ಮನುಷ್ಯನ ರೂಪದಲ್ಲಿ ಅವತರಿಸಿ ಅವನನ್ನು ಕೊಂದನು. ಎಂದೆಂದೂ ಅವನು ತಾನೇ ವಿಷ್ಣು ಎಂದು ಕೃಷ್ಣನಂತೆ ಬಹಿರಂಗಪಡಿಸಲಿಲ್ಲ. ಅವನು ಸುದರ್ಶನ ಚಕ್ರ, ಶಾರ್ಙ್ಗ ಧನುಸ್ಸು, ಗರುಡ ವಾಹನ, ಮೊದಲಾದ ವಿಷ್ಣುವಿನ ಯಾವ ಲಾಂಛನಗಳನ್ನೂ ಬಳಸಲಿಲ್ಲ. ಸೀತೆಯ ಅಗ್ನಿಪರೀಕ್ಷೆಯಾದಾಗ ಬ್ರಹ್ಮಾದಿದೇವತೆಗಳೊಂದಿಗೆ ಸ್ವಯಂ ದಶರಥನೇ ಆಕಾಶದಲ್ಲಿ ಪ್ರತ್ಯಕ್ಷನಾಗಿ ರಾಮನನ್ನು ಸಾಕ್ಷಾತ್ ವಿಷ್ಣುವೆಂದು ಹೇಳಿದಾಗ ಅವನು ಈ ವಿಷಯ ತನಗೆ ತಿಳಿಯದೆನ್ನುತ್ತಾನೆ. ಅವನು ಹೇಳುತ್ತಾನೆ - ಆತ್ಮಾನಂ ಮಾನುಷಂ ಮನ್ಯೇ ರಾಮಂ ದಶರಥಾತ್ಮಜಮ್ ( ನಾನು ನನ್ನನ್ನು ಒಬ್ಬ ಮನುಷ್ಯ, ದಶರಥನ ಪುತ್ರನಾದ ರಾಮ ಎಂದು ಭಾವಿಸುತ್ತೇನೆ.). ಹೀಗೆ ಮನುಷ್ಯನ ರೀತಿ ಇರಬೇಕೆಂದಾಗ ಕೆಲವು ಮಾನವದೌರ್ಬಲ್ಯಗಳು ಇದ್ದೇ ಇರುತ್ತವೆ. ಆದರೆ ಇವುಗಳೊಂದಿಗೆ ರಾಮನು ತಾನು ಆದರ್ಶ ಪುರುಷ, ಮರ್ಯಾದಾ ಪುರುಷೋತ್ತಮ ಎಂದು ತೋರಿಸಿದ.
    ಇನ್ನು ಪೌರಾಣಿಕವಾಗಿ ನೋಡುವುದಾದರೆ, ರಾಮನು ಸೀತೆ ಮತ್ತು ಲಕ್ಷ್ಮಣರ ತ್ಯಾಗ ಮಾಡುವುದಕ್ಕೆ ಒಂದು ಸ್ವಾರಸ್ಯಕರ ಕಥೆಯಿದೆ. ಇದೂ ವಾಲ್ಮೀಕಿ ರಾಮಾಯಣದಲ್ಲೇ ಇದೆ. ವಸಿಷ್ಠರು ಇದನ್ನು ದಶರಥನಿಗೆ ಮೊದಲೇ ಹೇಳಿದ್ದರು.‌ ಅದನ್ನು ಕೇಳಿದ ಸುಮಂತ್ರನು ಲಕ್ಷ್ಮಣನಿಗೆ ಹೇಳಿದನು. ಆ ಕಥೆಯಂತೆ, ಹಿಂದೆ ದೇವಾಸುರರ ಯುದ್ಧವಾದಾಗ, ಸೋಲುತ್ತಿದ್ದ ರಾಕ್ಷಸರು, ತಮ್ಮ ಗುರು ಶುಕ್ರಾಚಾರ್ಯರು ತಪಸ್ಸಿಗೆ ಹೋಗಿದ್ದು ಅಲ್ಲಿ ಇರಲಿಲ್ಲದ ಕಾರಣ, ಅವರ ತಂದೆ ಭೃಗು ಮಹರ್ಷಿಗಳ ಆಶ್ರಮಕ್ಕೆ ಓಡಿದರು. ಅವರೂ ಇಲ್ಲದೆ, ಅವರ ಪತ್ನಿ ಖ್ಯಾತಿ ರಾಕ್ಷಸರಿಗೆ ಆಶ್ರಯ ಕೊಟ್ಟಳು. ಆಗ ವಿಷ್ಣುವು ಅವಳನ್ನು ರಾಕ್ಷಸರನ್ನು ಒಪ್ಪಿಸುವಂತೆ ಹೇಳಲು ಅವಳು ಒಪ್ಪದಿದ್ದಾಗ, ಅವನು ತನ್ನ ಚಕ್ರದಿಂದ ಅವಳ ಶಿರಚ್ಛೇದನ ಮಾಡಿ ಕೊಂದನು! ದೇವತೆಗಳು ರಾಕ್ಷಸರನ್ನು ಸೋಲಿಸಿದರು.‌ ಅನಂತರ ಭೃಗು ಮಹರ್ಷಿಗಳು ತಮ್ಮ ಪತ್ನಿಯ ಸಾವಿನಿಂದ ದುಃಖಗೊಂಡು ತಮ್ಮ ದಿವ್ಯ ದೃಷ್ಟಿಯಿಂದ ಇದು ವಿಷ್ಣುವಿನ ಕಾರ್ಯ ಎಂದು ತಿಳಿದು ಅವನಿಗೆ ತಮ್ಮಂತೆಯೇ ಪತ್ನೀವಿಯೋಗ ಅನುಭವಿಸುವಂತೆ ಶಾಪ ಕೊಟ್ಟರು. ಅನಂತರ ತಮ್ಮ ತಪಶ್ಶಕ್ತಿಯಿಂದ ತಮ್ಮ ಪತ್ನಿಯನ್ನು ಬದುಕಿಸಿ, ವಿಷ್ಣುವನ್ನು ಶಪಿಸಿದ್ದಕ್ಕಾಗಿ ಪಶ್ಚಾತ್ತಾಪ ಪಟ್ಟರು. ಆಗ ವಿಷ್ಣುವು ಪ್ರತ್ಯಕ್ಷನಾಗಿ ರಾಮಾವತಾರದಲ್ಲಿ ಅವರ ಶಾಪವನ್ನು ಸ್ವೀಕರಿಸುವೆನೆಂದು ಹೇಳಿ ಅವರನ್ನು ಸಮಾಧಾನಪಡಿಸಿದರು. ಈ ಕಾರಣದಿಂದ ವಿಷ್ಣುವಿನ ಅವತಾರವಾದ ರಾಮನು ಸೀತೆಯ ವಿಯೋಗವನ್ನು ಮತ್ತೆ ಮತ್ತೆ ಅನುಭವಿಸಬೇಕಾಯಿತು. 
    ಇಷ್ಟೆಲ್ಲಾ ಆದರೂ ರಾಮನನ್ನು ದೇವರೆಂದು ಒಪ್ಪುವುದಿಲ್ಲ ಎನ್ನಬಹುದು. ಆದರೆ ರಾಮಾಯಣ ಪರಂಪರೆ ಬಹಳ ದೊಡ್ಡದಿದೆ. ಶ್ರೀ ರಾಮ ಒಬ್ಬ ಆದರ್ಶ ಪುರುಷ. ಅವನು ನಿಜವಾಗಿಯೂ ಆಕಾಶದಲ್ಲಿ ಇರುವ ದೇವರಲ್ಲ ಅಥವಾ ದೇವರೇ ಇಲ್ಲ ಎಂದರೂ ನಮ್ಮ ಭಾರತೀಯ ಸಂಸ್ಕೃತಿಯ ಭಾಗವಾಗಿದ್ದಾನೆ. ಹೌದು, ಇಂದು ಮಾನವನೂ ಒಂದು ಪ್ರಾಣಿ, ಮಂಗ ಜಾತಿಯ ಪ್ರಾಣಿಯಿಂದ ವಿಕಾಸ ಹೊಂದಿದ್ದಾನೆ ಎನ್ನುವುದಕ್ಕೆ ಸಾಕಷ್ಟು ಸಾಕ್ಷಿಗಳು ಇವೆ. ಅಂದಮಾತ್ರಕ್ಕೆ ಮಾನವನು ಪ್ರಾಣಿಯಂತೆ ಬದುಕಬೇಕೇ? ಮಾನವನು ಇತರ ಪ್ರಾಣಿಗಳಿಗಿಂತ ವಿಭಿನ್ನವಾಗಿರುವುದು ಕಲ್ಪನೆ ಎಂಬ ವಿಶೇಷ ಶಕ್ತಿಯಿಂದ. ಸೆಪಿಯನ್ಸ್ ಗ್ರಂಥದಲ್ಲಿ ಆಧುನಿಕ ಇಸ್ರೇಲ್ ಚಿಂತಕ ಯುವಾಲ್ ನೋಹ್ ಹರಾರಿ ಇದನ್ನೇ ಹೇಳುತ್ತಾನೆ. ಪ್ರಾಣಿಗಳು ಕೇವಲ ಪ್ರಕೃತಿಯಲ್ಲಿ ಇರುವುದಷ್ಟನ್ನೇ ಕಾಣುತ್ತವೆ ಹಾಗೂ ಅರಿಯುತ್ತವೆ. ಆದರೆ ಮನುಷ್ಯ ಪ್ರಕೃತಿಯನ್ನು ಮೀರಿ ಕಲ್ಪನೆ ಮಾಡುತ್ತಾನೆ ಹಾಗೂ ಆ ಕಲ್ಪನೆಯ ದೆಸೆಯಿಂದ ಹಲವಾರು ಇತರ ಮನುಷ್ಯರೊಂದಿಗೆ ಸಹಕಾರಿಯಾಗಿ ಸಮಾಜ ಕಟ್ಟುತ್ತಾನೆ. ಹಾಗಾಗಿಯೇ ಸಭ್ಯತೆಗಳು ( civilizations) ಬಂದಿವೆ. ನಮ್ಮ ಭಾಷೆ, ಬಟ್ಟೆ, ಕಥೆ, ಪುರಾಣ, ಕೊನೆಗೆ ದೇವರು ಎಲ್ಲವೂ ಮನುಷ್ಯನ ಕಲ್ಪನೆಗಳೇ ನಿಜ! ಇವುಗಳಲ್ಲಿ ಒಳ್ಳೆಯ ಕಲ್ಪನೆಗಳು ಉಳಿಯಬೇಕು. ಸಭ್ಯತೆಗಳ ಪೈಕಿ ಅತ್ಯಂತ ಹಳೆಯ ಮತ್ತು ಇನ್ನೂ ಉಳಿದಿರುವ ಸಭ್ಯತೆ ನಮ್ಮ ಭಾರತೀಯ ಸಭ್ಯತೆ ಅಥವಾ ಸಂಸ್ಕೃತಿ. ಇಂಥ ಸಂಸ್ಕೃತಿಯ ಭಾಗವಾದ ಶ್ರೀ ರಾಮನಿಗೆ ದೇವಾಲಯ ಬೇಡವೇ? ಅದೂ ಹಿಂದೆ ಇದ್ದು ಮುಸಲ್ಮಾನ ದಾಳಿಕೋರ ಬಾಬರನಿಂದ ನಾಶವಾದ ದೇವಾಲಯದ ಪುನರ್ನಿರ್ಮಾಣ ಬೇಡವೇ? ಈ ದೇವಾಲಯದಿಂದ ನಮ್ಮ ಭಾರತೀಯ ಸಂಸ್ಕೃತಿಯ ಉಳಿವಿದೆ ಅಲ್ಲವೇ? ಹಾಗಾಗಿ ರಾಮಮಂದಿರ ಬೇಕೇ ಬೇಕು.
     

ಶನಿವಾರ, ಜೂನ್ 20, 2026

ಸುಂದರೀಶತಕ -೫೩

ಸಂಸ್ಕೃತ ಮೂಲ 

ಸಹಚರ ಕುಶಲಂ ತಸ್ಯಾ: ಕುಶಲವತೀ ಕಥಯ ಕಿಮಪಿ ಸಂದಿಷ್ಟಮ್ /
ಕಂ ಸಂದಿಶತು ಕೃಶಾಂಗೀ ನ ತತ್ರ ಮರುತೋsಪಿ ಯದ್ಗಮನಮ್ //

ಕನ್ನಡ ಅನುವಾದ 

    ಇಬ್ಬರು ಪ್ರಯಾಣಿಕರ ನಡುವಿನ ಒಂದು ಸಂವಾದ 
ಮೊದಲನೆಯ ಪ್ರಯಾಣಿಕ: ಅಯ್ಯ ಸಹಚರ! ಅವಳು ಕುಶಲವೇ?
ಎರಡನೆಯ ಪ್ರಯಾಣಿಕ: ಹಾ......ಕುಶಲವಾಗಿದ್ದಾಳೆ.
ಮೊದಲನೆಯ ಪ್ರಯಾಣಿಕ: ಹೇಳು! ಏನಾದರೂ ಸಂದೇಶ ಕಳಿಸಿದ್ದಾಳೆಯೇ? 
ಎರಡನೆಯ ಪ್ರಯಾಣಿಕ: ಯಾರಿಗೆ ಸಂದೇಶ ಕಳಿಸಿಯಾಳು ಆ ಕೃಶಾಂಗಿ? ಅಲ್ಲಿ ಗಾಳಿಯೂ ಹೋಗಲಾರದು! 
      ಇಲ್ಲಿ ಕವಿಯು ಇನ್ನೊಂದು ವಿರಹ ಚಿತ್ರಣವನ್ನು ಅದ್ಭುತವಾಗಿ ನಿರೂಪಿಸಿದ್ದಾನೆ. ಇಲ್ಲಿ ಇಬ್ಬರು ಪ್ರಯಾಣಿಕರು ಭೇಟಿಯಾಗಿದ್ದಾರೆ. ಮೊದಲನೆಯ ಪ್ರಯಾಣಿಕನಿಗೆ ಎರಡನೆಯ ಪ್ರಯಾಣಿಕ ತನ್ನ ಊರಿನವನೇ ಎಂದು ಗೊತ್ತಾಗಿದೆ. ತಾನು ಊರು ಬಿಟ್ಟು ಪ್ರಯಾಣ ಹೊರಟು ಎಷ್ಟೋ ದಿನಗಳಾಗಿವೆಯೆಂದು ಯೋಚಿಸಿ ತನ್ನ ಹೆಂಡತಿ ಹೇಗಿರುವಳೋ ಎಂಬ ಚಿಂತೆ ಅವನನ್ನು ಕಾಡಿದೆ. ಹಾಗಾಗಿ, ತನ್ನ ಸಹಚರ ತನ್ನ ಊರಿನವನೇ ಆಗಿರುವುದರಿಂದ ಅವನನ್ನು ತನ್ನ ಹೆಂಡತಿಯ ಕುಶಲದ ಬಗ್ಗೆ ವಿಚಾರಿಸಿದ್ದಾನೆ. ಅದಕ್ಕೆ ಅವನು ಅವಳು ಕುಶಲವಾಗಿದ್ದಾಳೆ ಎಂದಿದ್ದಾನೆ. ಆಗ ಮೊದಲ ಪ್ರಯಾಣಿಕ, ಎರಡನೆಯವನು ಪ್ರಯಾಣ ಹೊರಟಾಗ ತನ್ನ ಹೆಂಡತಿ ಅವನ ಮೂಲಕ ತನಗೇನಾದರೂ ಸಂದೇಶ ಕಳಿಸಿರಬಹುದು ಎಂದು ಯೋಚಿಸಿ," ಹೇಳು! ಏನಾದರೂ ಸಂದೇಶ ಕಳಿಸಿರುವಳೇ?" ಎಂದು ಕೇಳಿದ್ದಾನೆ. ಅದಕ್ಕೆ ಅವನು," ಆ ಕೃಶಾಂಗಿ ಯಾರಿಗೆ ಸಂದೇಶ ಕಳಿಸಿಯಾಳು? ಅಲ್ಲಿ ಗಾಳಿಯೂ ಹೋಗಲಾಗುತ್ತಿಲ್ಲ!" ಎಂದಿದ್ದಾನೆ! ಅಂದರೆ, ಅವಳು ಎಷ್ಟು ವಿರಹತಪ್ತಳಾಗಿದ್ದಾಳೆಂದರೆ ಮನೆಯಲ್ಲಿ ಬಾಗಿಲು ಹಾಕಿಕೊಂಡು ಯಾರನ್ನೂ ಒಳಗೆ ಬಿಡದೇ ಒಬ್ಬಳೇ ದು:ಖದಿಂದ ಸೊರಗುತ್ತಿದ್ದಾಳೆ! 
    ಇಲ್ಲಿ ಸಹಚರನು ಅವಳಿಗೆ ಕೃಶಾಂಗಿ ಎಂಬ ಪದವನ್ನು ಬಳಸುವುದರ ಮೂಲಕ ಅವಳು ಊಟ, ನಿದ್ರೆಗಳಿಲ್ಲದೆ ಸೊರಗಿ ಸೊರಗಿ ಅವಳ ಅಂಗಾಂಗಗಳು ಬಹಳ ಕೃಶವಾಗಿವೆ ಎಂದು ಸೂಚಿಸುತ್ತಿದ್ದಾನೆ. ಅವಳ ಮನೆಯೊಳಗೆ ಗಾಳಿಯೂ ಹೋಗಲಾರದು ಎನ್ನುವುದು ಉತ್ಪ್ರೇಕ್ಷೆಯೆನಿಸಿದರೂ ಅವಳು ಯಾರನ್ನೂ ಒಳಗೆ ಬಿಡದೆ ಒಂಟಿಯಾಗಿರುವಷ್ಟು ವಿರಹತಪ್ತಳಾಗಿದ್ದಾಳೆ ಎಂದು ತೋರಿಸುತ್ತದೆ.
    ಸಂಸ್ಕೃತ ಸಾಹಿತ್ಯವನ್ನು ಓದುತ್ತಿದ್ದರೆ ಒಂದು ವಿಷಯವನ್ನು ಹೇಳಲು ಇರುವ ಅನಂತ ಸಾಧ್ಯತೆಗಳ ಪರಿಚಯವಾಗುತ್ತದೆ.

ಬುಧವಾರ, ಜೂನ್ 17, 2026

ಸುಂದರೀಶತಕ -೫೨

ಸಂಸ್ಕೃತ ಮೂಲ 

ತವ ವಿರಹಾನಲತಪ್ತಂ ಸ್ನೇಹಕಟಾಹಂ ಮದಂತರಾತ್ಮಾನಮ್ /
ಸುಂದರಿ ಚಂದನಶಾಖೇ ಶೀತಲಯ ಸ್ಪರ್ಶಮಾತ್ರೇಣ //

ಕನ್ನಡ ಅನುವಾದ 

    ' ಎಲೈ ಸುಂದರಿ! ನಿನ್ನ ವಿರಹಾಗ್ನಿಯಿಂದ ಬೆಂದುಹೋಗಿರುವ, ನಿನ್ನ ಪ್ರೇಮದ ಪಾತ್ರೆಯಾಗಿರುವ ನನ್ನ ಅಂತರಾತ್ಮವನ್ನು ಚಂದನಶಾಖೆಯಾಗಿರುವ ನೀನು ಕೇವಲ ನಿನ್ನ ಸ್ಪರ್ಶಮಾತ್ರದಿಂದ ತಂಪಾಗಿಸು!'
    ಕವಿಯು ಇಲ್ಲಿ ಸುಂದರವಾದ ವಿರಹ ಚಿತ್ರಣವನ್ನು ಕೊಟ್ಟಿದ್ದಾನೆ.‌ ನಾಯಕನು ತನ್ನ ಪ್ರಿಯೆಯ ವಿರಹಾಗ್ನಿಯಿಂದ ಪ್ರೇಮಪಾತ್ರೆಯಂತಿರುವ ಅವನ ಅಂತರಾತ್ಮವು ಬೆಂದುಹೋಗಿದೆ ಎನ್ನುತ್ತಾನೆ. ಸೊಗಸಾದ ಉಪಮೆಗಳು! ವಿರಹಬಾಧೆಯು ಅಗ್ನಿಯಂತೆ ಸುಡುತ್ತಿದೆ! ಅವನ ಅಂತರಾತ್ಮವು ಪ್ರೇಮದ ಪಾತ್ರೆಯಂತಾಗಿ ಆ ಅಗ್ನಿಯಿಂದ ಸುಡುತ್ತಿದೆ! ಹಾಗಾಗಿ ಅವನು ತನ್ನ ಪ್ರಿಯತಮೆಯನ್ನು ಚಂದನಶಾಖೆಗೆ ಹೋಲಿಸಿ ಕೇವಲ ತನ್ನನ್ನು ಸ್ಪರ್ಶಿಸಲು ಕೇಳಿಕೊಳ್ಳುತ್ತಿದ್ದಾನೆ. ಅವಳನ್ನು ಅವಳ ಸ್ಪರ್ಶಮಾತ್ರದಿಂದ ತನ್ನ ಅಂತರಾತ್ಮವನ್ನು ತಂಪಾಗಿಸಲು ಬೇಡಿಕೊಳ್ಳುತ್ತಿದ್ದಾನೆ! 
     ಶೃಂಗಾರ ರಸದಲ್ಲಿ ಎರಡು ವಿಧಗಳಿವೆ.‌ ಒಂದು, ಸಂಭೋಗ ಶೃಂಗಾರ ಹಾಗೂ ಇನ್ನೊಂದು, ವಿಪ್ರಲಂಭ ಶೃಂಗಾರ. ಸಂಭೋಗ ಶೃಂಗಾರ, ಪ್ರೇಮಿಗಳು ಒಟ್ಟಿಗಿದ್ದು ಅನುಭವಿಸುವುದಾದರೆ, ವಿಪ್ರಲಂಭ ಶೃಂಗಾರ, ಪ್ರೇಮಿಗಳು ದೂರವಾಗಿದ್ದು ವಿರಹವನ್ನು ಅನುಭವಿಸುವುದಾಗಿರುತ್ತದೆ. ರಾಧಾಕೃಷ್ಣರ ಶೃಂಗಾರ ಲೀಲೆಗಳು ಸಂಭೋಗ ಶೃಂಗಾರಕ್ಕೆ ಒಳ್ಳೆಯ ಉದಾಹರಣೆಯಾದರೆ, ರಾಧೆಯು ಶ್ರೀಕೃಷ್ಣನ ವಿರಹವನ್ನು ಅನುಭವಿಸುವುದು, ಹಾಗೂ ಶ್ರೀರಾಮನು ಸೀತೆಯ ವಿರಹವನ್ನು ಅನುಭವಿಸುವುದು, ವಿಪ್ರಲಂಭ ಶೃಂಗಾರಕ್ಕೆ ಒಳ್ಳೆಯ ಉದಾಹರಣೆಗಳಾಗಿವೆ. 
      ಈ ಶ್ಲೋಕದ ಸ್ವಾರಸ್ಯವೆಂದರೆ, ಇದು ವಿಪ್ರಲಂಭ ಶೃಂಗಾರವಾದರೂ ಇಲ್ಲಿ ಪ್ರಿಯತಮೆಯು ನಾಯಕನ ಬಳಿ ಇದ್ದಾಳೆ. ಆದರೆ ಅವನಿನ್ನೂ ವಿರಹದಲ್ಲಿದ್ದು ಅವಳ ಸ್ಪರ್ಶಕ್ಕಾಗಿ, ಜೊತೆಗೂಡುವಿಕೆಗಾಗಿ ಬೇಡುತ್ತಿದ್ದಾನೆ. ಅವನ ವಿರಹದ ಸ್ಥಿತಿಯನ್ನು ಪ್ರಾಯಶಃ ಅವನ ಸಖನಿಂದ ತಿಳಿದು ಹಾಗೂ ನೋಡಿ, ನಾಯಿಕೆಯ ಸಖಿಯು ನಾಯಿಕೆಗೆ ಹೇಳಿ ಅವಳನ್ನು ಕರೆತಂದಿದ್ದಾಳೆ. ಆಗ ನಾಯಕನು ಅವಳನ್ನು ಹೀಗೆ ಬೇಡುತ್ತಿದ್ದಾನೆ.

ಭಾನುವಾರ, ಜೂನ್ 14, 2026

ಸುಂದರೀಶತಕ -೫೧

ಸಂಸ್ಕೃತ ಮೂಲ 

ಪ್ರೇಮಾಸವೋನ್ಮದಿಷ್ಣೋ: ಪ್ರಣಯತನೀಯಾಂಸಿ ತಾನಿ ವಚನಾನಿ /
ಕರಣೀಯಾನಿ ನ ಹೃದಯೇ ದಯಿತೇ ಯದಯಂ ದಯಾವಸರ: // 

ಕನ್ನಡ ಅನುವಾದ 

      ' ಪ್ರಿಯೇ! ಪ್ರೇಮವೆಂಬ ಮದಿರೆಯನ್ನು ಕುಡಿದು ಮತ್ತನಾದ ನಾನು ಪ್ರೇಮೋನ್ಮಾದದಲ್ಲಿ ಆಡಿದ ಹಗುರವಾದ ಮಾತುಗಳನ್ನು ಹೃದಯದಲ್ಲಿ ಇಟ್ಟುಕೊಳ್ಳಬೇಡ! ದಯೆ ತೋರಿಸಲು ಇದೇ ಸರಿಯಾದ ಸಮಯ!' 
    ಇಲ್ಲಿ ನಾಯಕನು ತನ್ನ ಪ್ರಿಯತಮೆಯ ಪ್ರೇಮವೆಂಬ ಮದಿರೆಯನ್ನು ಕುಡಿದು ಮತ್ತನಾಗಿ ಅವಳ ಬಳಿ ಏನೋ ಹಗುರವಾದ ಮಾತುಗಳನ್ನಾಡಿದ್ದಾನೆ ಹಾಗೂ ಕೀಟಲೆ ಮಾಡಿದ್ದಾನೆ. ಅಂದರೆ ಪ್ರೇಮದ ಸಲಿಗೆಯಲ್ಲಿ ಅವಳನ್ನು ಅಣಕಿಸಿದ್ದಾನೆ. ಕುಡಿದ ಮತ್ತಿನಲ್ಲಿ ಹಗುರವಾಗಿ ಮಾತನಾಡುವಂತೆ ಪ್ರೇಮಮದ್ಯವನ್ನು ಕುಡಿದ ಮತ್ತಿನಲ್ಲಿ ಇವನು ಅವಳನ್ನು ಅಣಕಿಸಿದ್ದಾನೆ. ಇದರಿಂದ ಅವಳು ಕೋಪಗೊಂಡಿದ್ದಾಳೆ! ಆಗ ಇವನಿಗೆ ತನ್ನ ತಪ್ಪು ಅರಿವಾಗಿ ತಾನು ಪ್ರೇಮಮದಿರೆಯ ಮತ್ತಿನಲ್ಲಿ ಆಡಿದ ಹಗುರವಾದ ಮಾತುಗಳನ್ನು ಹೃದಯದಲ್ಲಿ ಇಟ್ಟುಕೊಳ್ಳಬಾರದು, ಅವು ಮೈಮರೆತು ಹೇಳಿದ ಮಾತುಗಳು, ಹಾಗಾಗಿ ಗಣನೆಗೆ ತೆಗೆದುಕೊಳ್ಳಬಾರದು, ಎಂದು ಬೇಡಿಕೊಳ್ಳುತ್ತಾ ದಯೆ ತೋರಿಸಲು ಇದೇ ಸರಿಯಾದ ಸಮಯ ಎನ್ನುತ್ತಿದ್ದಾನೆ. ತಪ್ಪು ಮಾಡದಿದ್ದಾಗ ದಯೆ ತೋರಿದರೆ ಏನು ಪ್ರಯೋಜನ, ತಪ್ಪು ಮಾಡಿದಾಗ ದಯೆ ತೋರಿದರೆ ಅದು ಹೆಚ್ಚಿನದು ಎಂದು ಅವನ ಅಭಿಪ್ರಾಯ. ಹೀಗೆ ಪ್ರೇಮಿಗಳ ನಡುವೆ ಆಗಾಗ ಪ್ರಮಯಕಲಹ ಇದ್ದರೆ ಚೆನ್ನ.

ಶುಕ್ರವಾರ, ಜೂನ್ 12, 2026

ಸುಂದರೀಶತಕ -೫೦

ಸಂಸ್ಕೃತ ಮೂಲ 

ಜ್ಞಾತಾಸಿ ಗೃಹಜನೈರಿತಿ ಕಥಿತೇ ಸಂಭ್ರಾಂತತಾರಕಂ ದೂತ್ಯಾ /
ಅರುಣಮಪಿ ಮಾನವತ್ಯಾ: ಸ್ಮರಾಮಿ ಪಾಂಡೂಭವದ್ವದನಮ್ //

ಕನ್ನಡ ಅನುವಾದ 

      ' ನಿನ್ನ ರಹಸ್ಯ ಪ್ರೇಮದ ವಿಷಯ ಮನೆಯವರಿಗೆಲ್ಲಾ ಗೊತ್ತಾಗಿದೆ ಎಂದು ದೂತಿಯು ನನ್ನ ಪ್ರಿಯತಮೆಗೆ ಹೇಳಲು, ಅವಳ ಕಣ್ಣುಗಳ ಪಾಪೆಗಳು ಸಂಭ್ರಾಂತಗೊಂಡವು ಹಾಗೂ ಕೋಪಗೊಂಡಿದ್ದ ಅವಳ ಮುಖ ಕೆಂಪಾಗಿದ್ದರೂ ಬಿಳುಚಿಕೊಂಡಿದ್ದನ್ನು ನಾನು ಈಗಲೂ ಸ್ಮರಿಸುತ್ತೇನೆ!' 
    ಇಲ್ಲಿ ನಾಯಿಕೆಯು ನಾಯಕನಲ್ಲಿ ಕುಪಿತಗೊಂಡು ಕುಳಿತಿದ್ದಾಳೆ. ಆಗ ಅವಳ ದೂತಿಯು ಬಂದು ಅವಳ ರಹಸ್ಯ ಪ್ರೇಮದ ವಿಷಯ ಮನೆಯವರಿಗೆಲ್ಲಾ ಗೊತ್ತಾಗಿದೆ ಎಂದು ಹೇಳಿದ್ದಾಳೆ.‌ ಇದರಿಂದ ಅವಳು ಗಾಬರಿಗೊಳ್ಳಲು ಅವಳ ಕಣ್ಣುಗಳ ಪಾಪೆಗಳು ಸಂಭ್ರಾಂತಗೊಂಡಿವೆ! ಕೋಪದಿಂದ ಕೆಂಪಾಗಿದ್ದ ಅವಳ ಮುಖವು ಕೂಡಲೇ ಭಯದಿಂದ ಬಿಳುಚಿಕೊಂಡಿದೆ! ಕೋಪವು ಭಯಕ್ಕೆ ತಿರುಗುವ ಹಾಗೂ ಕೆಂಪಾದ ಮುಖ ಬಿಳುಚಿಕೊಳ್ಳುವ ಈ ಸುಂದರ ಮುಖಭಾವವನ್ನು ಈಗಲೂ ಸ್ಮರಿಸುತ್ತೇನೆ ಎಂದು ನಾಯಕನು ಹೇಳುತ್ತಿದ್ದಾನೆ. 

ಗುರುವಾರ, ಜೂನ್ 11, 2026

ಸುಂದರೀಶತಕ -೪೯

ಸಂಸ್ಕೃತ ಮೂಲ 

ಸಸ್ಮಿತಮರುಣಕಪೋಲಂ ರಚಿತಭ್ರೂಭಂಗಮಂಚಿತವ್ರೀಡಮ್ /
ಸಂಪೃಕ್ತಭಾವರುಚಿರಂ ವದನಂ ತಸ್ಯಾ: ಸ್ಮರಾಮಿ ಸಖೇ //

ಕನ್ನಡ ಅನುವಾದ 

    ' ಹೇ ಸಖ!  ನಗುವಿನೊಂದಿಗೆ ಕೆಂಪಾದ ಅವಳ ಕೆನ್ನೆಗಳು, ಕೋಪದಿಂದ ಗಂಟಿಕ್ಕಿದ ಹುಬ್ಬುಗಳು, ನಾಚಿಕೆಯಿಂದ ಬಾಗಿದ ಮುಖ, ಈ ಮಿಶ್ರ ಭಾವಗಳಿಂದ ಸುಂದರವಾದ ಆ  ನನ್ನ ಪ್ರಿಯತಮೆಯ ಮುಖವನ್ನು ಈಗಲೂ ಸ್ಮರಿಸುತ್ತೇನೆ!'
     ಇಲ್ಲಿ ಪ್ರಾಯಶಃ ನಾಯಕನು ಕೋಪಗೊಂಡ ತನ್ನ ನಾಯಕಿಯನ್ನು ಸಮಾಧಾನ ಮಾಡಿದಾಗ ಮೂಡಿದ ಚಿತ್ರಣವನ್ನು ತನ್ನ ಸಖನಿಗೆ ವರ್ಣಿಸುತ್ತಿದ್ದಾನೆ. ಅವನು ಅವಳನ್ನು ಸಮಾಧಾನಗೊಳಿಸುತ್ತಾ ಪ್ರಾಯಶಃ ಚುಂಬಿಸಿದ್ದಾನೆ.  ಆಗ ಅವಳು ಕೋಪವನ್ನು ಬಿಟ್ಟರೂ ಇನ್ನೂ ಅವಳ ಹುಬ್ಬುಗಳು ಗಂಟಿಕ್ಕಿಕೊಂಡಿವೆ. ಆದರೆ ಅವನ ಪ್ರೀತಿಗೆ ಕರಗಿ ಅವನ ಚುಂಬನದಿಂದ ಕಿರುನಗೆ ಮೂಡಿಸಿದ್ದಾಳೆ ಹಾಗೂ ಅವಳ ಕೆನ್ನೆಗಳು ಕೆಂಪಾಗಿವೆ. ಜೊತೆಗೆ ನಾಚಿ ತಲೆ ತಗ್ಗಿಸಿದ್ದಾಳೆ. ಈ ಎಲ್ಲ ಮಿಶ್ರಿತ ಭಾವಗಳ ಅವಳ ಮುಖ ಬಹಳ ಸುಂದರವಾಗಿ ಕಾಣುತ್ತಿದ್ದು ಈಗಲೂ ಅದನ್ನು ಸ್ಮರಿಸುತ್ತೇನೆ ಎಂದು ಅವನು ತನ್ನ ಸಖನಿಗೆ ಹೇಳುತ್ತಿದ್ದಾನೆ.