ಮಂಗಳವಾರ, ಜೂನ್ 23, 2026

ಸುಂದರೀಶತಕ -೫೪

ಸಂಸ್ಕೃತ ಮೂಲ 

ಅವಧಿದಿವಸಪ್ರಯಾಣಾ: ಪ್ರಿಯತಮ ತಸ್ಯಾ ಮೃಗೀದೃಶ: ಪ್ರಾಣಾ: /
ತಿಷ್ಠಂತಿ ಕತಿಪಯಾಹಂ ಕೃತ್ವಾ ಪ್ರಸ್ಥಾನಮಧಿಕಂಠಮ್ //

ಕನ್ನಡ ಅನುವಾದ 

    ದೂತಿಯು ನಾಯಕನಿಗೆ ಹೇಳುತ್ತಾಳೆ, ' ಓ ಪ್ರಿಯತಮ! ನಿನ್ನ ಪ್ರಯಾಣದ ಅವಧಿಯ ವಿಯೋಗದ ದಿನಗಳು ಮುಗಿಯುತ್ತಾ ಬಂದಿವೆ! ಆ ಮೃಗನಯನಿಯ ಪ್ರಾಣಗಳು ಕಂಠದವರೆಗೂ ಬಂದು ನಿನ್ನ ಮಿಲನವಾಗಲೆಂದು ಇನ್ನು ಸ್ವಲ್ಪ ದಿನಗಳು ಉಳಿಯಲು ಪ್ರಯತ್ನ ಪಡುತ್ತಿವೆ!' 
    ಇಲ್ಲಿ ನಾಯಕನು ಪ್ರಯಾಣ ಹೋಗಿದ್ದಾನೆ. ಅವನ ಪ್ರಿಯತಮೆಯಾದ ನಾಯಿಕೆಯು ವಿರಹದಲ್ಲಿ ಬಳಲುತ್ತಿದ್ದಾಳೆ. ಅಂದಿನಿಂದಲೇ ಅವಳ ಪ್ರಾಣಗಳು ಹೋಗುವಂತಾಗಿವೆ. ಅವನ ಪ್ರಯಾಣದ ದಿನಗಳ ಅವಧಿ ಇನ್ನೇನು ಮುಗಿಯುತ್ತಾ ಬಂದಿದೆ. ಈ ಹೊತ್ತಿಗೆ ನಾಯಿಕೆಯ ಪ್ರಾಣಗಳು ಕಂಠದವರೆಗೂ ಬಂದಿವೆ ಹಾಗೂ ಇನ್ನೇನು ಹೋಗುವಂತಾಗಿವೆ!  ಅವನು ಬಂದರೆ, ಅವನ ಮಿಲನವಾಗುತ್ತಲೇ ಹೋಗಲೆಂದು ಇನ್ನು ಸ್ವಲ್ಪ ದಿನಗಳು ಉಳಿಯಲು ಪ್ರಯತ್ನ ಪಡುತ್ತಿವೆ. ಈ ವಿಷಯವನ್ನು ದೂತಿಯು ನಾಯಕನ ಬಳಿಗೆ ಹೋಗಿ ಹೇಳುತ್ತಿದ್ದಾಳೆ. ಇನ್ನು ಅವನು ಬಂದುಬಿಡಬೇಕೆಂದು ಅವಳ ಅಭಿಪ್ರಾಯ.
     ಇದು ಅತ್ಯಂತ ವಿರಹಾವಸ್ಥೆಯ ಒಂದು ಮನೋಜ್ಞ ಚಿತ್ರಣ. 
     

ಭಾನುವಾರ, ಜೂನ್ 21, 2026

ಶ್ರೀರಾಮನ ಕುರಿತ ಪ್ರೊ.ಭಗವಾನರ ಆಕ್ಷೇಪಗಳಿಗೆ ಉತ್ತರಗಳು

ಇತ್ತೀಚೆಗೆ ಪ್ರೊ.ಭಗವಾನರು ಶ್ರೀರಾಮನ ಕುರಿತು ಮತ್ತೆ ಆಕ್ಷೇಪ ಮಾಡಿ ಅನೇಕ ರಾಮಭಕ್ತರ ಮತ್ತು ಸಜ್ಜನರ ದು:ಖಕ್ಕೆ ಕಾರಣರಾಗಿದ್ದಾರೆ. ಇದು ಮೊದಲ ಬಾರಿಯಲ್ಲದೇ ಈ ಮೊದಲೂ ಹಲವಾರು ಬಾರಿ ಅವರು ಹೀಗೆ ಆಕ್ಷೇಪಗಳನ್ನು ಮಾಡುತ್ತಲೇ ಬಂದಿದ್ದು ರಾಮಮಂದಿರ ಬೇಡ ಎಂಬ ಪುಸ್ತಕವನ್ನೂ ಬರೆದಿದ್ದಾರೆ. ನಿಜ ಹೇಳಬೇಕೆಂದರೆ ಇಂಥವರ ಆಕ್ಷೇಪಗಳಿಗೆ ಉತ್ತರ ಕೊಟ್ಟು ಅವರನ್ನು ಸಮಾಧಾನಪಡಿಸಲಾಗುವುದಿಲ್ಲ. ಏಕೆಂದರೆ ಅವರು ತಮ್ಮ ಮನಸ್ಸನ್ನು ಆಕ್ಷೇಪ ಮಾಡಬೇಕೆಂದೇ ಸಿದ್ಧಪಡಿಸಿಕೊಂಡು ಇತರೆಲ್ಲಾ ಉತ್ತರಗಳಿಗೆ ಕಿವಿ ಮುಚ್ಚಿಕೊಂಡಿರುತ್ತಾರೆ. ಆದರೂ ಜನರಿಗೆ ಈ ಆಕ್ಷೇಪಗಳಿಗೆ ಉತ್ತರ ಗೊತ್ತಿರಬೇಕು. ಇಲ್ಲವಾದರೆ ಭಗವಾನರಿಂದ ಜನರು ತಪ್ಪು ತಿಳಿದು ರಾಮನನ್ನು ದ್ವೇಷಿಸಬಹುದು ಹಾಗೂ ಭಾರತೀಯ ಸಂಸ್ಕೃತಿಯ ಬಗ್ಗೆ ತಾತ್ಸಾರ ಭಾವನೆ ತಾಳಬಹುದು. ಹಾಗಾಗಿ ಇಂಥ ಆಕ್ಷೇಪಗಳಿಗೆ ಉತ್ತರಿಸಬೇಕಾಗುತ್ತದೆ.
      ಭಗವಾನರು ತಾವು ವಾಲ್ಮೀಕಿ ರಾಮಾಯಣವನ್ನೇ ನೇರವಾಗಿ ಓದಿ ಆಕ್ಷೇಪ ಮಾಡಿದ್ದೇನೆ, ಸುಳ್ಳು ಹೇಳಿಲ್ಲ ಎನ್ನುತ್ತಾರೆ. ಹಾಗಿದ್ದ ಮೇಲೆ ಅವರು ವಾಲ್ಮೀಕಿ ರಾಮಾಯಣದ ಕೆಲವು ಅಂಶಗಳನ್ನು ಮಾತ್ರ ಒಪ್ಪಿ ಇನ್ನಷ್ಟು ವಿಷಯಗಳನ್ನು ಬಿಡುವುದು, ಅಥವಾ ಅವರಿಗೆ ಮಾತ್ರ ಬೇಕಾಗಿರುವ ಅಂಶಗಳನ್ನು ಹೇಳುವುದು ಕವಿಗೆ ಮಾಡುವ ದ್ರೋಹ ಎಂದು ಹೇಳಬೇಕಾಗುತ್ತದೆ. ಹಾಗೆಂದು ಇವರು ವೈಚಾರಿಕವಾಗಿಯೂ ಹೇಳುತ್ತಿಲ್ಲ. ಆಕ್ಷೇಪ ಮಾತ್ರ ಮಾಡುತ್ತಿದ್ದಾರೆ. ಮುಖ್ಯವಾಗಿ ಶ್ರೀರಾಮನು ದಶರಥನ ಮಗನಲ್ಲ, ಅವನು ಒಬ್ಬ ಮದ್ಯಪಾನಿ, ಮಾಂಸಭಕ್ಷಕ, ಶಂಬೂಕನಂಥವರನ್ನು ಕೊಂದ ಕೊಲೆಗಡುಕ, ತನ್ನ ಹೆಂಡತಿ ಸೀತೆಯನ್ನು ಕಾಡಿಗಟ್ಟಿದ ಕಟುಕ, ತಮ್ಮ ಲಕ್ಷ್ಮಣನನ್ನು ಕೊಂದ, ತಂದೆಯನ್ನು ನಿಂದಿಸಿದ, ಮೊದಲಾದ 
 ' ಸತ್ಯ'ಗಳನ್ನು ವಾಲ್ಮೀಕಿ ರಾಮಾಯಣದಿಂದ ಕಂಡುಕೊಳ್ಳುವ ಭಗವಾನರು ಶ್ರೀರಾಮನು ವಿಷ್ಣುವಿನ ಅವತಾರ, ಸಕಲ ಕಲ್ಯಾಣಗುಣಗಳಿರುವವನು, ವೀರ್ಯವಂತ, ಧರ್ಮಜ್ಞ, ಕೃಚಜ್ಞ, ಸತ್ಯಭಾಷಿ, ದೃಢವಾದ ವ್ರತನಿಷ್ಠೆಯುಳ್ಳವನು, ಕುಲಾಚಾರವನ್ನು ಉಲ್ಲಂಘಿಸದೇ ಅನೂಚಾನವಾಗಿ ಬಂದಿರುವ ಆಚಾರ ವ್ಯವಹಾರಗಳನ್ನು ತಪ್ಪದೇ ನಡೆಸಿಕೊಂಡು ಬರುವವನು, ಸಕಲ ಪ್ರಾಣಿಗಳಲ್ಲಿ ದಯಾಪರನು, ಚತುರ್ದಶವಿದ್ಯೆಗಳಲ್ಲೂ ಪಾರಂಗತನು, ಸಕಲಕಾರ್ಯಧುರಂಧರನು, ಸಕಲ ಕಾಲದಲ್ಲೂ ಸರ್ವರಿಗೂ ಮೋಹನರೂಪನಾಗಿರುವವನು, ಅತ್ಯಂತ ಧೈರ್ಯವಂತನು, ಕೋಪವನ್ನು ಜಯಿಸಿರುವವನು, ಎಣೆಯಿಲ್ಲದ ಕಾಂತಿಯಿಲ್ಲದವನು, ಅಸೂಯಾರಹಿತನು, ಯುದ್ಧದಲ್ಲಿ ದೇವತೆಗಳೂ ಹೆದರುವಂಥವನು, ಇಂಥ ಗುಣಗಳಿರುವವನು ಎಂದು ಅದೇ ವಾಲ್ಮೀಕಿ ರಾಮಾಯಣದ ಮಾತನ್ನು ಕಂಡುಕೊಳ್ಳದ ಮೂರ್ಖರು ಎಂದು ಹೇಳಬೇಕಾಗುತ್ತದೆ!
     ಇರಲಿ! ಚಂದ್ರನನ್ನು ಕಂಡಾಗ ಬೆಳದಿಂಗಳನ್ನು ನೋಡುವ ಬದಲು ಕಪ್ಪು ಚುಕ್ಕೆಯನ್ನು ಮಾತ್ರ ನೋಡುವವರಿಗೆ ಏನು ಹೇಳುವುದು? 
     ಅದೇನೇ ಆದರೂ ಇವರ ಆಕ್ಷೇಪಣೆಗಳಿಗೆ ಉತ್ತರ ನೋಡೋಣ.
    ದಶರಥನಿಗೆ ಮೂರು ಪತ್ನಿಯರು ಅಥವಾ ವಾಲ್ಮೀಕಿ ರಾಮಾಯಣದ ಪ್ರಕಾರವೇ ಹಲವಾರು ಪತ್ನಿಯರಿದ್ದರೂ ಸಂತಾನವಾಗಲಿಲ್ಲ. ಈಗ ಹಾಗಾದರೆ ನಾವು ವೈದ್ಯರ ಬಳಿ ಹೋಗಿ ಹಾರ್ಮೋನ್ ಚಿಕಿತ್ಸೆ ಮೊದಲಾದವುಗಳನ್ನು ತೆಗೆದುಕೊಂಡು ಸಂತಾನಾಭಿವೃದ್ಧಿ ಮಾಡಿಕೊಳ್ಳುವಂತೆ ಅಂದಿನ ದಿನಗಳಲ್ಲಿ ಪುತ್ರಕಾಮೇಷ್ಠಿ ಯಜ್ಞ ಮಾಡಿದಾಗ ದಿವ್ಯ ಪುರುಷನೊಬ್ಬ ಬಂದು ದಿವ್ಯ ಪಾಯಸವನ್ನು ಕೊಟ್ಟ ಹಾಗೂ ದಷರಥ ಅದನ್ನು ತನ್ನ ಮೂರು ಪ್ರಮುಖ ರಾಣಿಯರಿಗೆ ಹಂಚಲು ಅವರು ಅದನ್ನು ಸೇವಿಸಿ ಗರ್ಭವತಿಯರಾದರು ಎಂಬುದು ಸಣ್ಣ ಮಗುವಿಗೂ ಗೊತ್ತಿರುವ ವಿಷಯ. ಪಾಯಸ ಒಂದು ಔಷಧೀಯ ಚಿಕಿತ್ಸೆ ಏಕಾಗಿರಬಾರದು? ಅದನ್ನು ರಾಣಿಯರು ಸೇವಿಸಿ ಸಂತಾನ ಶಕ್ತಿ ಪಡೆದ ಬಳಿಕ ದಶರಥ ನಿಂದಲೇ ಗರ್ಭ ಧರಿಸಿದರಲ್ಲವೇ? ದಶರಥನ ಪುತ್ರನಾದುದರಿಂದಲೇ ರಾಮನಿಗೆ ದಾಶರಥಿ ಎಂದು ಹೆಸರು ಬುದಿತು. ಭಗವಾನರು ದಶರಥನು ತನ್ನ ರಾಣಿಯರನ್ನು ಪುರೋಹಿತರಿಗೆ ಒಪ್ಪಿಸಿದನು ಎಂದು ಹೇಳಿರುವುದು ವಾಲ್ಮೀಕಿ ರಾಮಾಯಣದಲ್ಲಿ ಇಲ್ಲ. ಆದರೆ ಈ ಇನ್ನೊಬ್ಬರಿಂದ ಮಕ್ಕಳು ಹುಟ್ಟುವುದು ಇರಲಿಲ್ಲವೆಂದಲ್ಲ. ಅದು ಮಹಾಭಾರತ ಮತ್ತು ಇತರ ಪೌರಾಣಿಕ ಕಥೆಗಳಲ್ಲಿ ಕಾಣುವ ನಿಯೋಗ ಪದ್ಧತಿ.‌ ಮಕ್ಕಳಾಗುವುದು ಬಹಳ ಮುಖ್ಯವಾಗಿದ್ದ ಕಾಲದಲ್ಲಿ ಒಬ್ಬ ಯೋಗ್ಯ, ಜಿತೇಂದ್ರಿಯ ವಿದ್ವಾಂಸನನ್ನು ಕರೆಸಿ ಅವನಿಂದ ಹೆಂಡತಿಯಲ್ಲಿ ಸಂಪರ್ಕ ಮಾಡಿಸಿ ಅವಳು ಗರ್ಭವತಿಯಾದ ನಂತರ ಅವಳಲ್ಲಿ ಯಾವುದೇ ಕಾಮವನ್ನು ವ್ಯಕ್ತಪಡಿಸದಿರುವ ಒಂದು ಪದ್ಧತಿ ನಿಯೋಗ ಪದ್ಧತಿ. ಇದಲ್ಲದೆ, ಮಹಾಭಾರತದಲ್ಲಿ ಪಾಂಡುವು ಕುಂತಿಗೆ, ಕನ್ಯೆಗೆ ಮದುವೆಗೆ ಮೊದಲೇ ಹುಟ್ಟಿರುವ ಕಾನೀನ ಪುತ್ರ, ದತ್ತು ತೆಗೆದುಕೊಳ್ಳುವ ದತ್ತು ಪುತ್ರ, ಮೊದಲಾದ ಹಲವು ರೀತಿಯ ಪುತ್ರರಿಗೆ ಅವಕಾಶ ಇದೆ ಎಂದು ವೈದಿಕ ಧರ್ಮದ ಔದಾರ್ಯವನ್ನು ಹೇಳುತ್ತಾನೆ. ಆದರೆ ರಾಮನು ಈ ಯಾವ ರೀತಿಯೂ ಹುಟ್ಟದೆ, ದಶರಥ ಮತ್ತು ಕೌಸಲ್ಯೆಯರಿಗೆ ದಿವ್ಯ ಪಾಯಸದಿಂದ ಹುಟ್ಟಿದವನಾಗಿದ್ದಾನೆ. ವಾಲ್ಮೀಕಿ ರಾಮಾಯಣವನ್ನೇ ಓದಿದ್ದೇನೆ ಎನ್ನುವ ಭಗವಾನರು ಅದರಲ್ಲಿರುವ ಅಲೌಕಿಕತೆಯನ್ನೂ ಒಪ್ಪಿಕೊಳ್ಳಬೇಕು.‌ 
     ರಾಮನು ಮದ್ಯಪಾನಿ ಹಾಗೂ ಮಾಂಸಾಹಾರಿ ಎನ್ನುವುದು ಇನ್ನೊಂದು ಆಕ್ಷೇಪ. ನಿಜವೇ, ಶ್ರೀರಾಮನು ಸೀತೆಯೊಂದಿಗೆ ಮಧುಮೈರೇಯ ಎಂಬ ಪಾನೀಯವನ್ನು ಕುಡಿಯುತ್ತಾ ಸೇವಕರು ತಂದುಕೊಡುತ್ತಿದ್ದ ಮಾಂಸಭಕ್ಷ್ಯಗಳನ್ನು ಸೇವಿಸುತ್ತಾ ಅಪ್ಸರೆಯರ ನರ್ತನವನ್ನು ನೋಡುತ್ತಾ ಸಂತೋಷಪಡುತ್ತಿದ್ದ ಎಂದು ಉತ್ತರಕಾಂಡದಲ್ಲಿ ಹೇಳಿದೆ. ಅಷ್ಟೇ ಅಲ್ಲದೆ ಕಾಡಿನಲ್ಲಿ ಲಕ್ಷ್ಮಣ ಒಂದು ಪರ್ಣಕುಟಿ ಕಟ್ಟಿದಾಗ ಎಲ್ಲರೂ ಒಂದು ಕಸ್ತೂರಿಮೃಗವನ್ನು ಅರ್ಪಿಸಿ ಸೇವಿಸುತ್ತಾರೆ ಹಾಗೂ ರಾಮನೇ ಸೀತೆಗೆ ಒಮ್ಮೆ ಜಿಂಕೆಯ ಮಾಂಸವನ್ನು ಬೇಯಿಸಿ ತಿನ್ನಿಸಿದ ಎಂದು ಅರಣ್ಯಕಾಂಡದಲ್ಲೀದೆ.‌ ರಾಮ ಒಬ್ಬ ರಾಜನಲ್ಲವೇ? ರಾಜರು ಕ್ಷತ್ರಿಯರು. ಕ್ಷತ್ರಿಯರಿಗೆ ಮದ್ಯಮಾಂಸಗಳು ಸಹಜವಲ್ಲವೇ? ರಾಮ, ಕೃಷ್ಣ, ಪಾಂಡವರು, ಕೌರವರು, ಇವರೆಲ್ಲರೂ ಮಾಂಸಾಹಾರಿಗಳೇ ಆಗಿದ್ದರು. ಅಷ್ಟೇಕೆ? ಬ್ರಾಹ್ಮಣರೂ ಯಜ್ಞ ಯಾಗಗಳಲ್ಲಿ ಮಾಂಸಭಕ್ಷಣೆ ಮಾಡುತ್ತಿದ್ದರು. ಆಯುರ್ವೇದ ಗ್ರಂಥಗಳಲ್ಲಿ ಅನೇಕ ಮಾಂಸಗಳ ಔಷಧೀಯ ಗುಣಗಳೂ ಹೇಳಲಾಗಿದೆ. ಹಾಗೆಂದು ಸುಮ್ಮನೆ ಪ್ರಾಣಿಗಳನ್ನು ಕೊಲ್ಲುವುದನ್ನು ಪ್ರೋತ್ಸಾಹಿಸಿಲ್ಲ. ಬೇಟೆ, ಮದ್ಯಪಾನ, ಸ್ತ್ರೀ ವ್ಯಾಮೋಹ, ಮತ್ತು ಜೂಜು, ಈ ನಾಲ್ಕನ್ನೂ ರಾಜರ ದೋಷಗಳೆಂದೇ ಹೇಳಿದ್ದಾರೆ.‌ ಆದರೆ ರಾಜರು ಇವನ್ನು ಸ್ವಲ್ಪವಾದರೂ ಮಾಡುತ್ತಿದ್ದರು. ಹಾಗಾಗಿಯೇ ಮನುಸ್ಮೃತಿ ಹೇಳುತ್ತದೆ 
  ನ ಮಾಂಸಭಕ್ಷಣೇ ದೋಷೋ ನ ಮದ್ಯೇ ನ ಚ ಮೈಥುನೇ /
  ಪ್ರವೃತ್ತಿರೇಷಾ ಭೂತಾನಾಂ ನಿವೃತ್ತಿಸ್ತು ಮಹಾಫಲಾ//
        ' ಮಾಂಸಭಕ್ಷಣೆ, ಮದ್ಯಪಾನ, ಹಾಗೂ ಮೈಥುನದಲ್ಲಿ ದೋಷವಿಲ್ಲ. ಇದು ಜೀವಿಗಳ ಪ್ರವೃತ್ತಿಯೇ ಆಗಿದೆ. ಆದರೆ ಇವುಗಳ ನಿವೃತ್ತಿಯಿಂದ ಮಹಾಫಲವುಂಟು.' 
     ಇನ್ನು ಮಧು ಮೈರೇಯ ಎಂಬುದು ಮಧು ಅಥವಾ ಜೇನು ಮತ್ತು ಕೆಲವು ಹಣ್ಣುಗಳಿಂದ ಹಾಗೂ ಸಂಭಾರ ಪದಾರ್ಥಗಳಿಂದ ಮಾಡಿದ ಒಂದು ಪೇಯ. ಹೀಗೆಯೇ ಆಸವ, ವಾರುಣಿ, ಮೊದಲಾದ ಅನೇಕ ಪೇಯಗಳಿದ್ದವು. ಕೌಟಿಲ್ಯನು ತನ್ನ ಅರ್ಥಶಾಸ್ತ್ರದಲ್ಲಿ ಇಂಥ ಕೆಲವು ಪೇಯಗಳ ಉದಾಹರಣೆ ಕೊಡುತ್ತಾನೆ. ಭಾಗವತದಲ್ಲಿ ಕರ್ದಮರ ಪತ್ನಿ ದೇವಹೂತಿಗೆ ಸಖಿಯರು ಆಸವವೆಂಬ ಪಾನೀಯವನ್ನು ಕುಡಿಸುತ್ತಾರೆ. ಹಾಗೆಯೇ ಬಲರಾಮನು ವಾರುಣಿ ಎಂಬ ಪಾನೀಯವನ್ನು ಕುಡಿದ ಉಲ್ಲೇಖವಿದೆ. ಇವೆಲ್ಲವೂ ಮತ್ತು ಬರಿಸುವ ಪಾನೀಯಗಳೇ ಆದರೂ ಹೆಂಡ, ಸಾರಾಯಿಗಳಂಥ ಕ್ಷುಲ್ಲಕ ಮದ್ಯಗಳಲ್ಲ. ಅಂದಿನ ದಿನಗಳಲ್ಲಿ ರಾಜರು ಹೀಗೆ ಕೆಲವು ಪೇಯಗಳನ್ನು ಕುಡಿದು ಆನಂದಿಸುತ್ತಿದ್ದರು. ಈಗ ನಾವು ಕಾಫಿ, ಚಹಾ ಕುಡಿಯುವುದಿಲ್ಲವೇ? ಅವೂ ಸ್ವಲ್ಪ ಮತ್ತು ಬರಿಸುತ್ತವೆ. ಅಷ್ಟೇಕೆ? ಗಸಗಸೆ ಪಾಯಸ ಕುಡಿದರೂ ಸ್ವಲ್ಪ ಮತ್ತು ಬರುತ್ತದೆ. ರಾಮನು ಎಂಥ ಪರಾಕ್ರಮಿಯಾಗಿದ್ದ, ರಾವಣನಂಥ ವಿಶ್ವವನ್ನೇ ಗೆದ್ದ ರಾಕ್ಷಸನನ್ನು ಕೊಂದ ಎಂದು ಗೊತ್ತಿದ್ದ ಪ್ರಜೆಗಳು ಯಾವುದೇ ಅಪರಾಧಗಳನ್ನು ಮಾಡದೇ ಶಾಂತ ಜೀವನ ನಡೆಸುತ್ತಿದ್ದರು. ಹಾಗಾಗಿ ರಾಮನಿಗೆ ಆಡಳಿತ ಕಷ್ಟವಾಗದೇ ನರ್ತನ ನೋಡುತ್ತಾ ಆನಂದಿಸಿದರೆ ತಪ್ಪೇನು?
     ಇನ್ನು ಶ್ರೀರಾಮನು ಶಂಬೂಕನನ್ನು ಕೊಂದ ಆಕ್ಷೇಪ. ಶಂಬೂಕ ಒಬ್ಬ ಶೂದ್ರ ತಪಸ್ವಿ ಎನ್ನುವುದಕ್ಕಿಂತ ಅವನು ಸಶರೀರವಾಗಿ ಸ್ವರ್ಗಕ್ಕೆ ಹೋಗಲು ತಪಸ್ಸು ಮಾಡುತ್ತಿದ್ದ ಕಾರಣಕ್ಕೆ ರಾಮನು ಅವನನ್ನು ಕೊಂದ. ಹಿಂದೆ ಹರಿಶ್ಚಂದ್ರನ ತಂದೆ ಸತ್ಯವ್ರತ ಅಥವಾ ತ್ರಿಶಂಕು ಸಶರೀರವಾಗಿ ಸ್ವರ್ಗಕ್ಕೆ ಹೋಗಲು ಪ್ರಯತ್ನಿಸಿದಾಗ ವಸಿಷ್ಠರ ಮಕ್ಕಳು ಅವನಿಗೆ ಚಾಂಡಾಲತ್ವದ ಶಾಪ ಕೊಡಲಿಲ್ಲವೇ? ಹಾಗೂ ವಿಶ್ವಾಮಿತ್ರರು ಅವನನ್ನು ಯಜ್ಞ ಮಾಡಿ ಸ್ವರ್ಗಕ್ಕೆ ಕಳಿಸಲು ಅವನನ್ನು ಸ್ವರ್ಗದಿಂದ ತಳ್ಳಲಾಯಿತು. ಆಗ ವಿಶ್ವಾಮಿತ್ರರು ಅವನನ್ನು ತಲೆಕೆಳಗಾಗಿ ಅವರದೇ ಸೃಷ್ಟಿಯ ಒಂದು ಸ್ವರ್ಗದಲ್ಲಿ ನಿಲ್ಲಿಸಿದರು. ಅಂತೆಯೇ ರಾಮನು ಶಂಬೂಕನ ತಪ್ಪು ರೀತಿಯ ತಪಸ್ಸಿಗೆ ದಂಡನೆ ನೀಡಿದನು. ಅಲ್ಲದೆ, ವಾಲ್ಮೀಕಿ ರಾಮಾಯಣದಲ್ಲೇ ಮತಂಗ ಜಾತಿಯ ಶೂದ್ರಳೇ ಆದ ಶಬರಿ, ಹಾಗೂ ಶ್ರವಣಕುಮಾರನ ವೈಶ್ಯ ಮತ್ತು ಶೂದ್ರ ತಂದೆ ತಾಯಿಯರು ತಪಸ್ಸು ಮಾಡಿದ ವಿಷಯ ಇದೆ. ಅಷ್ಟೇ ಅಲ್ಲದೆ ಶಂಬೂಕನ ವಧೆಯಾದ ಕೂಡಲೇ ಬ್ರಾಹ್ಮಣ ಬಾಲಕ ಬದುಕಿದ ಅಲೌಕಿಕ ವಿಷಯವನ್ನೂ ಒಪ್ಪಬೇಕು. ಅವನು ಬದುಕಿದ ಹಾಗೂ ದೇವತೆಗಳು ಪುಷ್ಪವೃಷ್ಟಿ ಮಾಡಿದರು ಎಂದರೆ ರಾಮ ಮಾಡಿದ್ದು ಸರಿ ಎಂದೇ ಆಯಿತಲ್ಲವೇ? ಇಲ್ಲ, ಇಂಥ ಅಲೌಕಿಕ ವಿಷಯವನ್ನು ಒಪ್ಪಲಾಗದು ಎಂದರೆ ಇಡೀ ಕಥೆಯನ್ನು ಕಾಲ್ಪನಿಕ ಎಂದು ಹೇಳಬೇಕಾಗುತ್ತದೆ. ಆಗಲೂ ರಾಮನದು ಯಾವುದೇ ತಪ್ಪಿರುವುದಿಲ್ಲ. ಹಾಗೆ ನೋಡಿದರೆ ಕೆಲವು ವಿದ್ವಾಂಸರು ಉತ್ತರಕಾಂಡ ವಾಲ್ಮೀಕಿ ಕೃತವಲ್ಲ ಎಂದೂ ಹೇಳುತ್ತಾರೆ. ಹೀಗೂ ತೆಗೆದುಕೊಳ್ಳಬಹುದು.
     ಶ್ರೀ ರಾಮನು ಸೀತೆಯನ್ನು ಕಾಡಿಗೆ ಕಳುಹಿಸಿದ ಕಾರಣ ಅಗಸನ ಮಾತೆಂದು ತಿಳಿದಿರುವಂತೆ ವಾಲ್ಮೀಕಿ ರಾಮಾಯಣದಲ್ಲಿ ಇಲ್ಲ. ಅಲ್ಲಿರುವಂತೆ ಇಡೀ ಅಯೋಧ್ಯೆಯ ಜನರು ಸೀತೆಯ ಚಾರಿತ್ರ್ಯದ ಬಗ್ಗೆ ತಪ್ಪಾಗಿ ಮಾತನಾಡುತ್ತಿದ್ದರು ಹಾಗೂ ರಾಮನು ಅವಳನ್ನು ಪುನಃ ಕರೆದುಕೊಂಡಿದ್ದು ಸರಿಯಲ್ಲ ಎಂದು ಉದ್ಯಾನವನಗಳಲ್ಲಿ, ಬೀದಿಬೀದಿಗಳಲ್ಲಿ, ಎಲ್ಲೆಲ್ಲೂ ಮಾತನಾಡುತ್ತಿದ್ದರು ಎಂದು ಭದ್ರ ಎಂಬ ಗುಪ್ತಚರ ರಾಮನಿಗೆ ಹೇಳಿದಾಗ ರಾಮನು ಜನರ ಸಮಾಧಾನಕ್ಕಾಗಿ ಹಾಗೂ ತನಗೆ ಲೋಕಾಪವಾದ ಬರಬಾರದು ಎಂದು ಸೀತೆಯನ್ನು ಕಾಡಿಗೆ ಕಳಿಸಲೇಬೇಕಾಯಿತು. ಆದರೆ ಇಲ್ಲಿ ರಾಮನು ಸೊಗಸಾದ ಉಪಾಯ ಮಾಡಿದ್ದನ್ನು ಭಗವಾನರು ಗಮನಿಸಿಲ್ಲ. ಗರ್ಭವತಿಯಾಗಿದ್ದ ಸೀತೆಯು ಕಾಡಿನಲ್ಲಿ ಕಳೆದಂತೆ ಋಷಿಗಳ ಆಶ್ರಮದಲ್ಲಿ ಕಾಲ ಕಳೆಯಬೇಕೆಂದು ಆಸೆಯಾಗುತ್ತಿದೆ ಎಂದು ರಾಮನಿಗೆ ಹೇಳಿದ್ದಳು. ಇದೇ ನೆಪದಿಂದ ಅವನು ಲಕ್ಷ್ಮಣನಿಗೆ ಸೀತೆಯನ್ನು ವಾಲ್ಮೀಕಿ ಆಶ್ರಮದ ಬಳಿ ಬಿಟ್ಟು ಬರಲು ಹೇಳುತ್ತಾನೆ. ಇದರಿಂದ ಅವಳ ಆಸೆಯೂ ನೆರವೇರಿ, ಜನರ ಸಮಸ್ಯಯೂ ಪರಿಹಾರವಾಗುತ್ತದೆ ಎಂದು ಅವನು ಯೋಚಿಸಿದ್ದು ಹಾಗೂ ಈ ಸಮಸ್ಯೆ ಸರಿಹೋದ ಬಳಿಕ ಅವಳನ್ನು ಪುನಃ ಹೇಗೋ ಪಡೆದುಕೊಳ್ಳುವ ಯೋಚನೆ ಇದ್ದುದು ಸ್ಪಷ್ಟವಾಗಿ ಕಾಣುತ್ತದೆ. ಇದರೊಂದಿಗೆ ರಾಮನೂ ಬಹಳ ನೊಂದುಕೊಂಡ. ಸೀತೆಯ ಮೇಲೆ ಅವನಿಗೆಷ್ಟು ಪ್ರೀತಿಯಿತ್ತು ಎಂದು ಅರಣ್ಯಕಾಂಡದಲ್ಲಿ ಅವನ ವಿಲಾಪದಿಂದಲೇ ಗೊತ್ತಾಗುತ್ತದೆ. ಅಲ್ಲದೆ ಅವನು ಅವಳನ್ನು ಮರಳಿ ಪಡೆಯಲು ವಾನರರೊಂದಿಗೆ ಲಂಕೆಗೆ ಹೋಗಿ ರಾವಣನನ್ನು ಕೊಂದು ಎಷ್ಟು ಕಷ್ಟ ಪಟ್ಟ ಎಂದು ಗೊತ್ತಾಗುತ್ತದೆ. ಜನರಿಗೆ ಅವಳ ಪಾವಿತ್ರ್ಯತೆ ತಿಳಿಯಲೆಂದು ಅವನು ಅವಳನ್ನು ನಿರಾಕರಿಸುವ ನಾಟಕ ಆಡಿದ. ಪುನಃ ವಾಲ್ಮೀಕಿ ರಾಮಾಯಣ ಮೊದಲಾದ ಗ್ರಂಥಗಳಲ್ಲಿ ಅಗ್ನಿಪರೀಕ್ಷೆಯಂಥ ಅಲೌಕಿಕ ಘಟನೆಗಳನ್ನು ಒಪ್ಪಬೇಕು. ಇಲ್ಲವೇ ಎಲ್ಲಾ ಹಿರಿಯರು ರಾಮನಿಗೆ ಉಪದೇಶ ಮಾಡಿ ಅವನು ಸೀತೆಯನ್ನು ಸ್ವೀಕರಿಸಿದ ಎಂದು ಐತಿಹಾಸಿಕವಾಗಿಯೂ ತೆಗೆದುಕೊಳ್ಳಬಹುದು. ಸೀತೆಯ ಬಗ್ಗೆ ಅಯೋಧ್ಯೆಯಲ್ಲಿ ಅಪವಾದ ಬಂದಾಗ, ರಾಮನು ಹೀಗಾಗಬಾರದೆಂದು ಲಂಕೆಯಲ್ಲೇ ತೋರಿಸಿದೆನಲ್ಲ ಎಂದು ಕೊರಗುತ್ತಾನೆ. ಹೀಗೆ ಒಬ್ಬ ರಾಜನಾಗಿ ಪ್ರಜೆಗಳಿಗಾಗಿ ಸೀತಾಪರಿತ್ಯಾಗ ಮಾಡಿದ ಶ್ರೀರಾಮ ಮಹಾತ್ಯಾಗಿ.
    ರಾಮನು ತಂದೆಯನ್ನು ನಿಂದಿಸಿದ ಎನ್ನುವ ಆಕ್ಷೇಪ. ಕಾಡಿನಲ್ಲಿ ಒಂದೇ ಒಂದು ಬಾರಿ ಲಕ್ಷ್ಮಣನ ಬಳಿ, ತಾನು ಇಷ್ಟು ವಿಧೇಯ ಪುತ್ರನಾಗಿದ್ದರೂ ತನ್ನ ತಂದೆ ದಶರಥ ಕಾಮವಶನಾಗಿ ತನ್ನನ್ನು ಕಾಡಿಗೆ ಕಳಿಸಿದನಲ್ಲ ಎಂದು ಮನುಷ್ಯಸಹಜವಾಗಿ ನೊಂದುಕೊಳ್ಳುತ್ತಾನೆ. ಹಾಗೆಂದು ಅವನು ತಂದೆಯನ್ನು ನಿಂದಿಸಿಲ್ಲ. ತಂದೆಯು ಹೇಳಿದ ಕೂಡಲೇ ಕಾಡಿಗೆ ಹೋದ ಹಾಗೂ ಅವನ ಮದುವೆಯ ಸಮಯದಲ್ಲೂ ತಂದೆ ಬರಲಿ ಎಂದು ಹೇಳುತ್ತಾನೆ. ಅಂತೆಯೇ ಶ್ರದ್ಧೆಯಿಂದ ತಂದೆಯ ಶ್ರಾದ್ಧವನ್ನು ಮಾಡುತ್ತಾನೆ.
      ಲಕ್ಷ್ಮಣನನ್ನು ಕೊಂದ ಎಂಬ ಆರೋಪ. ರಾಮಾವತಾರದ ಕೊನೆಯಲ್ಲಿ ಕಾಲಪುರುಷ ಅವನಿಗೆ ನೆನಪಿಸಲು ಬಂದಾಗ ರಾಮನು ಲಕ್ಷ್ಮಣನನ್ನು ಕಾವಲಿಟ್ಟು ಯಾರನ್ನೂ ಒಳಗೆ ಬಿಡಬಾರದೆಂದಾಗ ಹಾಗೂ ದುರ್ವಾಸರು ಬಂದು ಒಳಗೆ ಬಿಡದಿದ್ದರೆ ಅಯೋಧ್ಯೆಗೆ ಶಾಪ ಕೊಡುತ್ತೇನೆ ಎಂದಾಗ ಲಕ್ಷ್ಮಣನು ಅವರನ್ನು ಒಳಗೆ ಬಿಡಲೇಬೇಕಾಯಿತು. ಆ ತಪ್ಪಿಗೆ ರಾಮನು ಅವನನ್ನು ದಂಡಿಸದಿದ್ದರೂ ಅವನೇ ರಾಜ್ಯತ್ಯಾಗ ಮಾಡಿ ಸರಯೂ ನದಿಯಲ್ಲಿ ಮುಳುಗಿ ಯೋಗಸಮಾಧಿಯಿಂದ ಪ್ರಾಣತ್ಯಾಗ ಮಾಡಿದ. ಅನಂತರ ದು:ಖಿತನಾದ ರಾಮನೂ ಹಾಗೆಯೇ ಸರಯೂ ನದಿಯಲ್ಲಿ ಮುಳುಗಿ ತನ್ನ ಅವತಾರ ಮುಗಿಸಿದ. ಇದನ್ನು ಭಗವಾನರು ಆತ್ಮಹತ್ಯೆ ಎಂದು ಬಿಂಬಿಸುತ್ತಾರೆ. ಆದರೆ ಸ್ವ ಇಚ್ಛೆಯಿಂದ ಹೀಗೆ ದೇಹತ್ಯಾಗ ಮಾಡುವ ಯೋಗದ ಕ್ರಮವನ್ನು ಭಾಗವತದಲ್ಲಿ ವಿಷ್ಣುವಿನ ಅವತಾರವಾದ ಕಪಿಲ ಮಹರ್ಷಿಗಳು ವಿವರಿಸಿದ್ದಾರೆ. ಹಾಗಾಗಿ ಇದು ಆತ್ಮಹತ್ಯೆ ಅಲ್ಲ. ಅಲ್ಲದೆ ರಾಮನು ಹನ್ನೊಂದು ಸಾವಿರ ವರ್ಷಗಳ ಸುದೀರ್ಘ ಕಾಲ ಆಳಿ ತನ್ನ ಕರ್ತವ್ಯಗಳನ್ನು ಮುಗಿಸಿ ದೇಹತ್ಯಾಗ ಮಾಡಿದ ಕಾರಣ ಅದು ತಪ್ಪಲ್ಲ. 
    ರಾಮನು ಹನ್ನೊಂದು ಸಾವಿರ ವರ್ಷಗಳ ಕಾಲ ಆಳಿದ್ದು ಸುಳ್ಳು ಎನ್ನುತ್ತಾರೆ ಭಗವಾನರು. ವಾಲ್ಮೀಕಿ ರಾಮಾಯಣದಲ್ಲಿ ಇರುವುದನ್ನೇ ಹೇಳುವೆ ಎನ್ನುವ ಅವರು ಪುನಃ ಅದರಿಲ್ಲುರುವುದನ್ನು ಒಪ್ಪುವುದಿಲ್ಲ. ಆದರೂ ಇಷ್ಟೊಂದು ಕಾಲ ಹೇಗೆ ಬದುಕಿರಲು, ಆಳಲು ಸಾಧ್ಯ ಎಂದು ಕೇಳಬಹುದು. ಇದಕ್ಕೆ ಪರಿಹಾರ ಇದೆ.‌ ವಿದ್ವಾಂಸರು ಹೇಳುವುದೇನೆಂದರೆ ಸಂಸ್ಕೃತದಲ್ಲಿ ಸಂಖ್ಯಾವಾಚಕ ಎಂಬ ಒಂದು ವಿಚಾರವಿದೆ. ಅದರಂತೆ ಇಂಥ ದೊಡ್ಡ ಸಂಖ್ಯೆಗಳನ್ನು ಯಥಾವತ್ತಾಗಿ ತೆಗೆದುಕೊಳ್ಳಬಾರದು. ಶ್ರೀಕೃಷ್ಣನ ಹದಿನಾರು ಸಾವಿರ ಪತ್ನಿಯರು, ಶ್ರೀ ರಾಮನ ಹನ್ನೊಂದು ಸಾವಿರ ವರ್ಷಗಳು, ಇವೆಲ್ಲವೂ ಹೀಗೆ ಸಂಖ್ಯಾವಾಚಕಗಳು. 
      ಇಷ್ಟೆಲ್ಲಾ ಹೇಳಿದರೂ ಶ್ರೀ ರಾಮನ ಕಾರ್ಯಗಳು ಆಕ್ಷೇಪಣೀಯ ಎನಿಸಿದರೆ ಅದಕ್ಕೆ ಕಾರಣ ಅವನು ಮಾನವನಾಗಿ ನಡೆದುಕೊಳ್ಳಬೇಕಾಗಿದ್ದ ಪರಿಸ್ಥಿತಿ. ರಾವಣನು ತಾನು ಮಾನವನನ್ನು ಹೊರತುಪಡಿಸಿ ಇನ್ನಾವ ಜೀವಿಯಿಂದಲೂ ಸಾಯಬಾರದೆಂದು ಬ್ರಹ್ಮನಿಂದ ವರ ಪಡೆದಿದ್ದನು.‌ ಮಾನವರನ್ನು ಅವನು ಲೆಕ್ಕಿಸಲಿಲ್ಲ. ಹಾಗಾಗಿ ವಿಷ್ಣುವು ಮನುಷ್ಯನ ರೂಪದಲ್ಲಿ ಅವತರಿಸಿ ಅವನನ್ನು ಕೊಂದನು. ಎಂದೆಂದೂ ಅವನು ತಾನೇ ವಿಷ್ಣು ಎಂದು ಕೃಷ್ಣನಂತೆ ಬಹಿರಂಗಪಡಿಸಲಿಲ್ಲ. ಅವನು ಸುದರ್ಶನ ಚಕ್ರ, ಶಾರ್ಙ್ಗ ಧನುಸ್ಸು, ಗರುಡ ವಾಹನ, ಮೊದಲಾದ ವಿಷ್ಣುವಿನ ಯಾವ ಲಾಂಛನಗಳನ್ನೂ ಬಳಸಲಿಲ್ಲ. ಸೀತೆಯ ಅಗ್ನಿಪರೀಕ್ಷೆಯಾದಾಗ ಬ್ರಹ್ಮಾದಿದೇವತೆಗಳೊಂದಿಗೆ ಸ್ವಯಂ ದಶರಥನೇ ಆಕಾಶದಲ್ಲಿ ಪ್ರತ್ಯಕ್ಷನಾಗಿ ರಾಮನನ್ನು ಸಾಕ್ಷಾತ್ ವಿಷ್ಣುವೆಂದು ಹೇಳಿದಾಗ ಅವನು ಈ ವಿಷಯ ತನಗೆ ತಿಳಿಯದೆನ್ನುತ್ತಾನೆ. ಅವನು ಹೇಳುತ್ತಾನೆ - ಆತ್ಮಾನಂ ಮಾನುಷಂ ಮನ್ಯೇ ರಾಮಂ ದಶರಥಾತ್ಮಜಮ್ ( ನಾನು ನನ್ನನ್ನು ಒಬ್ಬ ಮನುಷ್ಯ, ದಶರಥನ ಪುತ್ರನಾದ ರಾಮ ಎಂದು ಭಾವಿಸುತ್ತೇನೆ.). ಹೀಗೆ ಮನುಷ್ಯನ ರೀತಿ ಇರಬೇಕೆಂದಾಗ ಕೆಲವು ಮಾನವದೌರ್ಬಲ್ಯಗಳು ಇದ್ದೇ ಇರುತ್ತವೆ. ಆದರೆ ಇವುಗಳೊಂದಿಗೆ ರಾಮನು ತಾನು ಆದರ್ಶ ಪುರುಷ, ಮರ್ಯಾದಾ ಪುರುಷೋತ್ತಮ ಎಂದು ತೋರಿಸಿದ.
    ಇನ್ನು ಪೌರಾಣಿಕವಾಗಿ ನೋಡುವುದಾದರೆ, ರಾಮನು ಸೀತೆ ಮತ್ತು ಲಕ್ಷ್ಮಣರ ತ್ಯಾಗ ಮಾಡುವುದಕ್ಕೆ ಒಂದು ಸ್ವಾರಸ್ಯಕರ ಕಥೆಯಿದೆ. ಇದೂ ವಾಲ್ಮೀಕಿ ರಾಮಾಯಣದಲ್ಲೇ ಇದೆ. ವಸಿಷ್ಠರು ಇದನ್ನು ದಶರಥನಿಗೆ ಮೊದಲೇ ಹೇಳಿದ್ದರು.‌ ಅದನ್ನು ಕೇಳಿದ ಸುಮಂತ್ರನು ಲಕ್ಷ್ಮಣನಿಗೆ ಹೇಳಿದನು. ಆ ಕಥೆಯಂತೆ, ಹಿಂದೆ ದೇವಾಸುರರ ಯುದ್ಧವಾದಾಗ, ಸೋಲುತ್ತಿದ್ದ ರಾಕ್ಷಸರು, ತಮ್ಮ ಗುರು ಶುಕ್ರಾಚಾರ್ಯರು ತಪಸ್ಸಿಗೆ ಹೋಗಿದ್ದು ಅಲ್ಲಿ ಇರಲಿಲ್ಲದ ಕಾರಣ, ಅವರ ತಂದೆ ಭೃಗು ಮಹರ್ಷಿಗಳ ಆಶ್ರಮಕ್ಕೆ ಓಡಿದರು. ಅವರೂ ಇಲ್ಲದೆ, ಅವರ ಪತ್ನಿ ಖ್ಯಾತಿ ರಾಕ್ಷಸರಿಗೆ ಆಶ್ರಯ ಕೊಟ್ಟಳು. ಆಗ ವಿಷ್ಣುವು ಅವಳನ್ನು ರಾಕ್ಷಸರನ್ನು ಒಪ್ಪಿಸುವಂತೆ ಹೇಳಲು ಅವಳು ಒಪ್ಪದಿದ್ದಾಗ, ಅವನು ತನ್ನ ಚಕ್ರದಿಂದ ಅವಳ ಶಿರಚ್ಛೇದನ ಮಾಡಿ ಕೊಂದನು! ದೇವತೆಗಳು ರಾಕ್ಷಸರನ್ನು ಸೋಲಿಸಿದರು.‌ ಅನಂತರ ಭೃಗು ಮಹರ್ಷಿಗಳು ತಮ್ಮ ಪತ್ನಿಯ ಸಾವಿನಿಂದ ದುಃಖಗೊಂಡು ತಮ್ಮ ದಿವ್ಯ ದೃಷ್ಟಿಯಿಂದ ಇದು ವಿಷ್ಣುವಿನ ಕಾರ್ಯ ಎಂದು ತಿಳಿದು ಅವನಿಗೆ ತಮ್ಮಂತೆಯೇ ಪತ್ನೀವಿಯೋಗ ಅನುಭವಿಸುವಂತೆ ಶಾಪ ಕೊಟ್ಟರು. ಅನಂತರ ತಮ್ಮ ತಪಶ್ಶಕ್ತಿಯಿಂದ ತಮ್ಮ ಪತ್ನಿಯನ್ನು ಬದುಕಿಸಿ, ವಿಷ್ಣುವನ್ನು ಶಪಿಸಿದ್ದಕ್ಕಾಗಿ ಪಶ್ಚಾತ್ತಾಪ ಪಟ್ಟರು. ಆಗ ವಿಷ್ಣುವು ಪ್ರತ್ಯಕ್ಷನಾಗಿ ರಾಮಾವತಾರದಲ್ಲಿ ಅವರ ಶಾಪವನ್ನು ಸ್ವೀಕರಿಸುವೆನೆಂದು ಹೇಳಿ ಅವರನ್ನು ಸಮಾಧಾನಪಡಿಸಿದರು. ಈ ಕಾರಣದಿಂದ ವಿಷ್ಣುವಿನ ಅವತಾರವಾದ ರಾಮನು ಸೀತೆಯ ವಿಯೋಗವನ್ನು ಮತ್ತೆ ಮತ್ತೆ ಅನುಭವಿಸಬೇಕಾಯಿತು. 
    ಇಷ್ಟೆಲ್ಲಾ ಆದರೂ ರಾಮನನ್ನು ದೇವರೆಂದು ಒಪ್ಪುವುದಿಲ್ಲ ಎನ್ನಬಹುದು. ಆದರೆ ರಾಮಾಯಣ ಪರಂಪರೆ ಬಹಳ ದೊಡ್ಡದಿದೆ. ಶ್ರೀ ರಾಮ ಒಬ್ಬ ಆದರ್ಶ ಪುರುಷ. ಅವನು ನಿಜವಾಗಿಯೂ ಆಕಾಶದಲ್ಲಿ ಇರುವ ದೇವರಲ್ಲ ಅಥವಾ ದೇವರೇ ಇಲ್ಲ ಎಂದರೂ ನಮ್ಮ ಭಾರತೀಯ ಸಂಸ್ಕೃತಿಯ ಭಾಗವಾಗಿದ್ದಾನೆ. ಹೌದು, ಇಂದು ಮಾನವನೂ ಒಂದು ಪ್ರಾಣಿ, ಮಂಗ ಜಾತಿಯ ಪ್ರಾಣಿಯಿಂದ ವಿಕಾಸ ಹೊಂದಿದ್ದಾನೆ ಎನ್ನುವುದಕ್ಕೆ ಸಾಕಷ್ಟು ಸಾಕ್ಷಿಗಳು ಇವೆ. ಅಂದಮಾತ್ರಕ್ಕೆ ಮಾನವನು ಪ್ರಾಣಿಯಂತೆ ಬದುಕಬೇಕೇ? ಮಾನವನು ಇತರ ಪ್ರಾಣಿಗಳಿಗಿಂತ ವಿಭಿನ್ನವಾಗಿರುವುದು ಕಲ್ಪನೆ ಎಂಬ ವಿಶೇಷ ಶಕ್ತಿಯಿಂದ. ಸೆಪಿಯನ್ಸ್ ಗ್ರಂಥದಲ್ಲಿ ಆಧುನಿಕ ಇಸ್ರೇಲ್ ಚಿಂತಕ ಯುವಾಲ್ ನೋಹ್ ಹರಾರಿ ಇದನ್ನೇ ಹೇಳುತ್ತಾನೆ. ಪ್ರಾಣಿಗಳು ಕೇವಲ ಪ್ರಕೃತಿಯಲ್ಲಿ ಇರುವುದಷ್ಟನ್ನೇ ಕಾಣುತ್ತವೆ ಹಾಗೂ ಅರಿಯುತ್ತವೆ. ಆದರೆ ಮನುಷ್ಯ ಪ್ರಕೃತಿಯನ್ನು ಮೀರಿ ಕಲ್ಪನೆ ಮಾಡುತ್ತಾನೆ ಹಾಗೂ ಆ ಕಲ್ಪನೆಯ ದೆಸೆಯಿಂದ ಹಲವಾರು ಇತರ ಮನುಷ್ಯರೊಂದಿಗೆ ಸಹಕಾರಿಯಾಗಿ ಸಮಾಜ ಕಟ್ಟುತ್ತಾನೆ. ಹಾಗಾಗಿಯೇ ಸಭ್ಯತೆಗಳು ( civilizations) ಬಂದಿವೆ. ನಮ್ಮ ಭಾಷೆ, ಬಟ್ಟೆ, ಕಥೆ, ಪುರಾಣ, ಕೊನೆಗೆ ದೇವರು ಎಲ್ಲವೂ ಮನುಷ್ಯನ ಕಲ್ಪನೆಗಳೇ ನಿಜ! ಇವುಗಳಲ್ಲಿ ಒಳ್ಳೆಯ ಕಲ್ಪನೆಗಳು ಉಳಿಯಬೇಕು. ಸಭ್ಯತೆಗಳ ಪೈಕಿ ಅತ್ಯಂತ ಹಳೆಯ ಮತ್ತು ಇನ್ನೂ ಉಳಿದಿರುವ ಸಭ್ಯತೆ ನಮ್ಮ ಭಾರತೀಯ ಸಭ್ಯತೆ ಅಥವಾ ಸಂಸ್ಕೃತಿ. ಇಂಥ ಸಂಸ್ಕೃತಿಯ ಭಾಗವಾದ ಶ್ರೀ ರಾಮನಿಗೆ ದೇವಾಲಯ ಬೇಡವೇ? ಅದೂ ಹಿಂದೆ ಇದ್ದು ಮುಸಲ್ಮಾನ ದಾಳಿಕೋರ ಬಾಬರನಿಂದ ನಾಶವಾದ ದೇವಾಲಯದ ಪುನರ್ನಿರ್ಮಾಣ ಬೇಡವೇ? ಈ ದೇವಾಲಯದಿಂದ ನಮ್ಮ ಭಾರತೀಯ ಸಂಸ್ಕೃತಿಯ ಉಳಿವಿದೆ ಅಲ್ಲವೇ? ಹಾಗಾಗಿ ರಾಮಮಂದಿರ ಬೇಕೇ ಬೇಕು.
     

ಶನಿವಾರ, ಜೂನ್ 20, 2026

ಸುಂದರೀಶತಕ -೫೩

ಸಂಸ್ಕೃತ ಮೂಲ 

ಸಹಚರ ಕುಶಲಂ ತಸ್ಯಾ: ಕುಶಲವತೀ ಕಥಯ ಕಿಮಪಿ ಸಂದಿಷ್ಟಮ್ /
ಕಂ ಸಂದಿಶತು ಕೃಶಾಂಗೀ ನ ತತ್ರ ಮರುತೋsಪಿ ಯದ್ಗಮನಮ್ //

ಕನ್ನಡ ಅನುವಾದ 

    ಇಬ್ಬರು ಪ್ರಯಾಣಿಕರ ನಡುವಿನ ಒಂದು ಸಂವಾದ 
ಮೊದಲನೆಯ ಪ್ರಯಾಣಿಕ: ಅಯ್ಯ ಸಹಚರ! ಅವಳು ಕುಶಲವೇ?
ಎರಡನೆಯ ಪ್ರಯಾಣಿಕ: ಹಾ......ಕುಶಲವಾಗಿದ್ದಾಳೆ.
ಮೊದಲನೆಯ ಪ್ರಯಾಣಿಕ: ಹೇಳು! ಏನಾದರೂ ಸಂದೇಶ ಕಳಿಸಿದ್ದಾಳೆಯೇ? 
ಎರಡನೆಯ ಪ್ರಯಾಣಿಕ: ಯಾರಿಗೆ ಸಂದೇಶ ಕಳಿಸಿಯಾಳು ಆ ಕೃಶಾಂಗಿ? ಅಲ್ಲಿ ಗಾಳಿಯೂ ಹೋಗಲಾರದು! 
      ಇಲ್ಲಿ ಕವಿಯು ಇನ್ನೊಂದು ವಿರಹ ಚಿತ್ರಣವನ್ನು ಅದ್ಭುತವಾಗಿ ನಿರೂಪಿಸಿದ್ದಾನೆ. ಇಲ್ಲಿ ಇಬ್ಬರು ಪ್ರಯಾಣಿಕರು ಭೇಟಿಯಾಗಿದ್ದಾರೆ. ಮೊದಲನೆಯ ಪ್ರಯಾಣಿಕನಿಗೆ ಎರಡನೆಯ ಪ್ರಯಾಣಿಕ ತನ್ನ ಊರಿನವನೇ ಎಂದು ಗೊತ್ತಾಗಿದೆ. ತಾನು ಊರು ಬಿಟ್ಟು ಪ್ರಯಾಣ ಹೊರಟು ಎಷ್ಟೋ ದಿನಗಳಾಗಿವೆಯೆಂದು ಯೋಚಿಸಿ ತನ್ನ ಹೆಂಡತಿ ಹೇಗಿರುವಳೋ ಎಂಬ ಚಿಂತೆ ಅವನನ್ನು ಕಾಡಿದೆ. ಹಾಗಾಗಿ, ತನ್ನ ಸಹಚರ ತನ್ನ ಊರಿನವನೇ ಆಗಿರುವುದರಿಂದ ಅವನನ್ನು ತನ್ನ ಹೆಂಡತಿಯ ಕುಶಲದ ಬಗ್ಗೆ ವಿಚಾರಿಸಿದ್ದಾನೆ. ಅದಕ್ಕೆ ಅವನು ಅವಳು ಕುಶಲವಾಗಿದ್ದಾಳೆ ಎಂದಿದ್ದಾನೆ. ಆಗ ಮೊದಲ ಪ್ರಯಾಣಿಕ, ಎರಡನೆಯವನು ಪ್ರಯಾಣ ಹೊರಟಾಗ ತನ್ನ ಹೆಂಡತಿ ಅವನ ಮೂಲಕ ತನಗೇನಾದರೂ ಸಂದೇಶ ಕಳಿಸಿರಬಹುದು ಎಂದು ಯೋಚಿಸಿ," ಹೇಳು! ಏನಾದರೂ ಸಂದೇಶ ಕಳಿಸಿರುವಳೇ?" ಎಂದು ಕೇಳಿದ್ದಾನೆ. ಅದಕ್ಕೆ ಅವನು," ಆ ಕೃಶಾಂಗಿ ಯಾರಿಗೆ ಸಂದೇಶ ಕಳಿಸಿಯಾಳು? ಅಲ್ಲಿ ಗಾಳಿಯೂ ಹೋಗಲಾಗುತ್ತಿಲ್ಲ!" ಎಂದಿದ್ದಾನೆ! ಅಂದರೆ, ಅವಳು ಎಷ್ಟು ವಿರಹತಪ್ತಳಾಗಿದ್ದಾಳೆಂದರೆ ಮನೆಯಲ್ಲಿ ಬಾಗಿಲು ಹಾಕಿಕೊಂಡು ಯಾರನ್ನೂ ಒಳಗೆ ಬಿಡದೇ ಒಬ್ಬಳೇ ದು:ಖದಿಂದ ಸೊರಗುತ್ತಿದ್ದಾಳೆ! 
    ಇಲ್ಲಿ ಸಹಚರನು ಅವಳಿಗೆ ಕೃಶಾಂಗಿ ಎಂಬ ಪದವನ್ನು ಬಳಸುವುದರ ಮೂಲಕ ಅವಳು ಊಟ, ನಿದ್ರೆಗಳಿಲ್ಲದೆ ಸೊರಗಿ ಸೊರಗಿ ಅವಳ ಅಂಗಾಂಗಗಳು ಬಹಳ ಕೃಶವಾಗಿವೆ ಎಂದು ಸೂಚಿಸುತ್ತಿದ್ದಾನೆ. ಅವಳ ಮನೆಯೊಳಗೆ ಗಾಳಿಯೂ ಹೋಗಲಾರದು ಎನ್ನುವುದು ಉತ್ಪ್ರೇಕ್ಷೆಯೆನಿಸಿದರೂ ಅವಳು ಯಾರನ್ನೂ ಒಳಗೆ ಬಿಡದೆ ಒಂಟಿಯಾಗಿರುವಷ್ಟು ವಿರಹತಪ್ತಳಾಗಿದ್ದಾಳೆ ಎಂದು ತೋರಿಸುತ್ತದೆ.
    ಸಂಸ್ಕೃತ ಸಾಹಿತ್ಯವನ್ನು ಓದುತ್ತಿದ್ದರೆ ಒಂದು ವಿಷಯವನ್ನು ಹೇಳಲು ಇರುವ ಅನಂತ ಸಾಧ್ಯತೆಗಳ ಪರಿಚಯವಾಗುತ್ತದೆ.

ಬುಧವಾರ, ಜೂನ್ 17, 2026

ಸುಂದರೀಶತಕ -೫೨

ಸಂಸ್ಕೃತ ಮೂಲ 

ತವ ವಿರಹಾನಲತಪ್ತಂ ಸ್ನೇಹಕಟಾಹಂ ಮದಂತರಾತ್ಮಾನಮ್ /
ಸುಂದರಿ ಚಂದನಶಾಖೇ ಶೀತಲಯ ಸ್ಪರ್ಶಮಾತ್ರೇಣ //

ಕನ್ನಡ ಅನುವಾದ 

    ' ಎಲೈ ಸುಂದರಿ! ನಿನ್ನ ವಿರಹಾಗ್ನಿಯಿಂದ ಬೆಂದುಹೋಗಿರುವ, ನಿನ್ನ ಪ್ರೇಮದ ಪಾತ್ರೆಯಾಗಿರುವ ನನ್ನ ಅಂತರಾತ್ಮವನ್ನು ಚಂದನಶಾಖೆಯಾಗಿರುವ ನೀನು ಕೇವಲ ನಿನ್ನ ಸ್ಪರ್ಶಮಾತ್ರದಿಂದ ತಂಪಾಗಿಸು!'
    ಕವಿಯು ಇಲ್ಲಿ ಸುಂದರವಾದ ವಿರಹ ಚಿತ್ರಣವನ್ನು ಕೊಟ್ಟಿದ್ದಾನೆ.‌ ನಾಯಕನು ತನ್ನ ಪ್ರಿಯೆಯ ವಿರಹಾಗ್ನಿಯಿಂದ ಪ್ರೇಮಪಾತ್ರೆಯಂತಿರುವ ಅವನ ಅಂತರಾತ್ಮವು ಬೆಂದುಹೋಗಿದೆ ಎನ್ನುತ್ತಾನೆ. ಸೊಗಸಾದ ಉಪಮೆಗಳು! ವಿರಹಬಾಧೆಯು ಅಗ್ನಿಯಂತೆ ಸುಡುತ್ತಿದೆ! ಅವನ ಅಂತರಾತ್ಮವು ಪ್ರೇಮದ ಪಾತ್ರೆಯಂತಾಗಿ ಆ ಅಗ್ನಿಯಿಂದ ಸುಡುತ್ತಿದೆ! ಹಾಗಾಗಿ ಅವನು ತನ್ನ ಪ್ರಿಯತಮೆಯನ್ನು ಚಂದನಶಾಖೆಗೆ ಹೋಲಿಸಿ ಕೇವಲ ತನ್ನನ್ನು ಸ್ಪರ್ಶಿಸಲು ಕೇಳಿಕೊಳ್ಳುತ್ತಿದ್ದಾನೆ. ಅವಳನ್ನು ಅವಳ ಸ್ಪರ್ಶಮಾತ್ರದಿಂದ ತನ್ನ ಅಂತರಾತ್ಮವನ್ನು ತಂಪಾಗಿಸಲು ಬೇಡಿಕೊಳ್ಳುತ್ತಿದ್ದಾನೆ! 
     ಶೃಂಗಾರ ರಸದಲ್ಲಿ ಎರಡು ವಿಧಗಳಿವೆ.‌ ಒಂದು, ಸಂಭೋಗ ಶೃಂಗಾರ ಹಾಗೂ ಇನ್ನೊಂದು, ವಿಪ್ರಲಂಭ ಶೃಂಗಾರ. ಸಂಭೋಗ ಶೃಂಗಾರ, ಪ್ರೇಮಿಗಳು ಒಟ್ಟಿಗಿದ್ದು ಅನುಭವಿಸುವುದಾದರೆ, ವಿಪ್ರಲಂಭ ಶೃಂಗಾರ, ಪ್ರೇಮಿಗಳು ದೂರವಾಗಿದ್ದು ವಿರಹವನ್ನು ಅನುಭವಿಸುವುದಾಗಿರುತ್ತದೆ. ರಾಧಾಕೃಷ್ಣರ ಶೃಂಗಾರ ಲೀಲೆಗಳು ಸಂಭೋಗ ಶೃಂಗಾರಕ್ಕೆ ಒಳ್ಳೆಯ ಉದಾಹರಣೆಯಾದರೆ, ರಾಧೆಯು ಶ್ರೀಕೃಷ್ಣನ ವಿರಹವನ್ನು ಅನುಭವಿಸುವುದು, ಹಾಗೂ ಶ್ರೀರಾಮನು ಸೀತೆಯ ವಿರಹವನ್ನು ಅನುಭವಿಸುವುದು, ವಿಪ್ರಲಂಭ ಶೃಂಗಾರಕ್ಕೆ ಒಳ್ಳೆಯ ಉದಾಹರಣೆಗಳಾಗಿವೆ. 
      ಈ ಶ್ಲೋಕದ ಸ್ವಾರಸ್ಯವೆಂದರೆ, ಇದು ವಿಪ್ರಲಂಭ ಶೃಂಗಾರವಾದರೂ ಇಲ್ಲಿ ಪ್ರಿಯತಮೆಯು ನಾಯಕನ ಬಳಿ ಇದ್ದಾಳೆ. ಆದರೆ ಅವನಿನ್ನೂ ವಿರಹದಲ್ಲಿದ್ದು ಅವಳ ಸ್ಪರ್ಶಕ್ಕಾಗಿ, ಜೊತೆಗೂಡುವಿಕೆಗಾಗಿ ಬೇಡುತ್ತಿದ್ದಾನೆ. ಅವನ ವಿರಹದ ಸ್ಥಿತಿಯನ್ನು ಪ್ರಾಯಶಃ ಅವನ ಸಖನಿಂದ ತಿಳಿದು ಹಾಗೂ ನೋಡಿ, ನಾಯಿಕೆಯ ಸಖಿಯು ನಾಯಿಕೆಗೆ ಹೇಳಿ ಅವಳನ್ನು ಕರೆತಂದಿದ್ದಾಳೆ. ಆಗ ನಾಯಕನು ಅವಳನ್ನು ಹೀಗೆ ಬೇಡುತ್ತಿದ್ದಾನೆ.

ಭಾನುವಾರ, ಜೂನ್ 14, 2026

ಸುಂದರೀಶತಕ -೫೧

ಸಂಸ್ಕೃತ ಮೂಲ 

ಪ್ರೇಮಾಸವೋನ್ಮದಿಷ್ಣೋ: ಪ್ರಣಯತನೀಯಾಂಸಿ ತಾನಿ ವಚನಾನಿ /
ಕರಣೀಯಾನಿ ನ ಹೃದಯೇ ದಯಿತೇ ಯದಯಂ ದಯಾವಸರ: // 

ಕನ್ನಡ ಅನುವಾದ 

      ' ಪ್ರಿಯೇ! ಪ್ರೇಮವೆಂಬ ಮದಿರೆಯನ್ನು ಕುಡಿದು ಮತ್ತನಾದ ನಾನು ಪ್ರೇಮೋನ್ಮಾದದಲ್ಲಿ ಆಡಿದ ಹಗುರವಾದ ಮಾತುಗಳನ್ನು ಹೃದಯದಲ್ಲಿ ಇಟ್ಟುಕೊಳ್ಳಬೇಡ! ದಯೆ ತೋರಿಸಲು ಇದೇ ಸರಿಯಾದ ಸಮಯ!' 
    ಇಲ್ಲಿ ನಾಯಕನು ತನ್ನ ಪ್ರಿಯತಮೆಯ ಪ್ರೇಮವೆಂಬ ಮದಿರೆಯನ್ನು ಕುಡಿದು ಮತ್ತನಾಗಿ ಅವಳ ಬಳಿ ಏನೋ ಹಗುರವಾದ ಮಾತುಗಳನ್ನಾಡಿದ್ದಾನೆ ಹಾಗೂ ಕೀಟಲೆ ಮಾಡಿದ್ದಾನೆ. ಅಂದರೆ ಪ್ರೇಮದ ಸಲಿಗೆಯಲ್ಲಿ ಅವಳನ್ನು ಅಣಕಿಸಿದ್ದಾನೆ. ಕುಡಿದ ಮತ್ತಿನಲ್ಲಿ ಹಗುರವಾಗಿ ಮಾತನಾಡುವಂತೆ ಪ್ರೇಮಮದ್ಯವನ್ನು ಕುಡಿದ ಮತ್ತಿನಲ್ಲಿ ಇವನು ಅವಳನ್ನು ಅಣಕಿಸಿದ್ದಾನೆ. ಇದರಿಂದ ಅವಳು ಕೋಪಗೊಂಡಿದ್ದಾಳೆ! ಆಗ ಇವನಿಗೆ ತನ್ನ ತಪ್ಪು ಅರಿವಾಗಿ ತಾನು ಪ್ರೇಮಮದಿರೆಯ ಮತ್ತಿನಲ್ಲಿ ಆಡಿದ ಹಗುರವಾದ ಮಾತುಗಳನ್ನು ಹೃದಯದಲ್ಲಿ ಇಟ್ಟುಕೊಳ್ಳಬಾರದು, ಅವು ಮೈಮರೆತು ಹೇಳಿದ ಮಾತುಗಳು, ಹಾಗಾಗಿ ಗಣನೆಗೆ ತೆಗೆದುಕೊಳ್ಳಬಾರದು, ಎಂದು ಬೇಡಿಕೊಳ್ಳುತ್ತಾ ದಯೆ ತೋರಿಸಲು ಇದೇ ಸರಿಯಾದ ಸಮಯ ಎನ್ನುತ್ತಿದ್ದಾನೆ. ತಪ್ಪು ಮಾಡದಿದ್ದಾಗ ದಯೆ ತೋರಿದರೆ ಏನು ಪ್ರಯೋಜನ, ತಪ್ಪು ಮಾಡಿದಾಗ ದಯೆ ತೋರಿದರೆ ಅದು ಹೆಚ್ಚಿನದು ಎಂದು ಅವನ ಅಭಿಪ್ರಾಯ. ಹೀಗೆ ಪ್ರೇಮಿಗಳ ನಡುವೆ ಆಗಾಗ ಪ್ರಮಯಕಲಹ ಇದ್ದರೆ ಚೆನ್ನ.

ಶುಕ್ರವಾರ, ಜೂನ್ 12, 2026

ಸುಂದರೀಶತಕ -೫೦

ಸಂಸ್ಕೃತ ಮೂಲ 

ಜ್ಞಾತಾಸಿ ಗೃಹಜನೈರಿತಿ ಕಥಿತೇ ಸಂಭ್ರಾಂತತಾರಕಂ ದೂತ್ಯಾ /
ಅರುಣಮಪಿ ಮಾನವತ್ಯಾ: ಸ್ಮರಾಮಿ ಪಾಂಡೂಭವದ್ವದನಮ್ //

ಕನ್ನಡ ಅನುವಾದ 

      ' ನಿನ್ನ ರಹಸ್ಯ ಪ್ರೇಮದ ವಿಷಯ ಮನೆಯವರಿಗೆಲ್ಲಾ ಗೊತ್ತಾಗಿದೆ ಎಂದು ದೂತಿಯು ನನ್ನ ಪ್ರಿಯತಮೆಗೆ ಹೇಳಲು, ಅವಳ ಕಣ್ಣುಗಳ ಪಾಪೆಗಳು ಸಂಭ್ರಾಂತಗೊಂಡವು ಹಾಗೂ ಕೋಪಗೊಂಡಿದ್ದ ಅವಳ ಮುಖ ಕೆಂಪಾಗಿದ್ದರೂ ಬಿಳುಚಿಕೊಂಡಿದ್ದನ್ನು ನಾನು ಈಗಲೂ ಸ್ಮರಿಸುತ್ತೇನೆ!' 
    ಇಲ್ಲಿ ನಾಯಿಕೆಯು ನಾಯಕನಲ್ಲಿ ಕುಪಿತಗೊಂಡು ಕುಳಿತಿದ್ದಾಳೆ. ಆಗ ಅವಳ ದೂತಿಯು ಬಂದು ಅವಳ ರಹಸ್ಯ ಪ್ರೇಮದ ವಿಷಯ ಮನೆಯವರಿಗೆಲ್ಲಾ ಗೊತ್ತಾಗಿದೆ ಎಂದು ಹೇಳಿದ್ದಾಳೆ.‌ ಇದರಿಂದ ಅವಳು ಗಾಬರಿಗೊಳ್ಳಲು ಅವಳ ಕಣ್ಣುಗಳ ಪಾಪೆಗಳು ಸಂಭ್ರಾಂತಗೊಂಡಿವೆ! ಕೋಪದಿಂದ ಕೆಂಪಾಗಿದ್ದ ಅವಳ ಮುಖವು ಕೂಡಲೇ ಭಯದಿಂದ ಬಿಳುಚಿಕೊಂಡಿದೆ! ಕೋಪವು ಭಯಕ್ಕೆ ತಿರುಗುವ ಹಾಗೂ ಕೆಂಪಾದ ಮುಖ ಬಿಳುಚಿಕೊಳ್ಳುವ ಈ ಸುಂದರ ಮುಖಭಾವವನ್ನು ಈಗಲೂ ಸ್ಮರಿಸುತ್ತೇನೆ ಎಂದು ನಾಯಕನು ಹೇಳುತ್ತಿದ್ದಾನೆ. 

ಗುರುವಾರ, ಜೂನ್ 11, 2026

ಸುಂದರೀಶತಕ -೪೯

ಸಂಸ್ಕೃತ ಮೂಲ 

ಸಸ್ಮಿತಮರುಣಕಪೋಲಂ ರಚಿತಭ್ರೂಭಂಗಮಂಚಿತವ್ರೀಡಮ್ /
ಸಂಪೃಕ್ತಭಾವರುಚಿರಂ ವದನಂ ತಸ್ಯಾ: ಸ್ಮರಾಮಿ ಸಖೇ //

ಕನ್ನಡ ಅನುವಾದ 

    ' ಹೇ ಸಖ!  ನಗುವಿನೊಂದಿಗೆ ಕೆಂಪಾದ ಅವಳ ಕೆನ್ನೆಗಳು, ಕೋಪದಿಂದ ಗಂಟಿಕ್ಕಿದ ಹುಬ್ಬುಗಳು, ನಾಚಿಕೆಯಿಂದ ಬಾಗಿದ ಮುಖ, ಈ ಮಿಶ್ರ ಭಾವಗಳಿಂದ ಸುಂದರವಾದ ಆ  ನನ್ನ ಪ್ರಿಯತಮೆಯ ಮುಖವನ್ನು ಈಗಲೂ ಸ್ಮರಿಸುತ್ತೇನೆ!'
     ಇಲ್ಲಿ ಪ್ರಾಯಶಃ ನಾಯಕನು ಕೋಪಗೊಂಡ ತನ್ನ ನಾಯಕಿಯನ್ನು ಸಮಾಧಾನ ಮಾಡಿದಾಗ ಮೂಡಿದ ಚಿತ್ರಣವನ್ನು ತನ್ನ ಸಖನಿಗೆ ವರ್ಣಿಸುತ್ತಿದ್ದಾನೆ. ಅವನು ಅವಳನ್ನು ಸಮಾಧಾನಗೊಳಿಸುತ್ತಾ ಪ್ರಾಯಶಃ ಚುಂಬಿಸಿದ್ದಾನೆ.  ಆಗ ಅವಳು ಕೋಪವನ್ನು ಬಿಟ್ಟರೂ ಇನ್ನೂ ಅವಳ ಹುಬ್ಬುಗಳು ಗಂಟಿಕ್ಕಿಕೊಂಡಿವೆ. ಆದರೆ ಅವನ ಪ್ರೀತಿಗೆ ಕರಗಿ ಅವನ ಚುಂಬನದಿಂದ ಕಿರುನಗೆ ಮೂಡಿಸಿದ್ದಾಳೆ ಹಾಗೂ ಅವಳ ಕೆನ್ನೆಗಳು ಕೆಂಪಾಗಿವೆ. ಜೊತೆಗೆ ನಾಚಿ ತಲೆ ತಗ್ಗಿಸಿದ್ದಾಳೆ. ಈ ಎಲ್ಲ ಮಿಶ್ರಿತ ಭಾವಗಳ ಅವಳ ಮುಖ ಬಹಳ ಸುಂದರವಾಗಿ ಕಾಣುತ್ತಿದ್ದು ಈಗಲೂ ಅದನ್ನು ಸ್ಮರಿಸುತ್ತೇನೆ ಎಂದು ಅವನು ತನ್ನ ಸಖನಿಗೆ ಹೇಳುತ್ತಿದ್ದಾನೆ. 

ಸೋಮವಾರ, ಜೂನ್ 8, 2026

ಸುಂದರೀಶತಕ -೪೮

ಸಂಸ್ಕೃತ ಮೂಲ 

ಸಾಗಸಿ ಮಯಿ ಮಂದಪದಂ ಪಶ್ಚಾದೇತ್ಯ ಸ್ಥಿತೇ ಸರೋಜದೃಶಮ್ /
ಮುಕುರಂ ಪ್ರದರ್ಶಯಿತ್ವಾ ತತ್ಸಖ್ಯಾ ಕಿಮಿವ ನೋಪಕೃತಮ್ //

ಕನ್ನಡ ಅನುವಾದ 

     ' ಪ್ರಿಯತಮೆಯ ವಿಷಯದಲ್ಲಿ ಅಪರಾಧ ಮಾಡಿದ್ದ ನಾನು ಮೆಲ್ಲ ಮೆಲ್ಲನೆ ಹೆಜ್ಜೆಯಿಟ್ಟು ಆ ಕಮಲನಯನೆಯ ಹಿಂದೆ ಹೋಗಿ ನಿಂತೆ! ಆಗ ಅವಳ ಸಖಿಯು ಅವಳಿಗೆ ಒಂದು ಕನ್ನಡಿ ತೋರಿಸಿ ಯಾವ ಉಪಕಾರ ತಾನೇ ಮಾಡಲಿಲ್ಲ?'
      ಪ್ರಿಯತಮೆಯ ವಿಷಯದಲ್ಲಿ ಏನೋ ತಪ್ಪು ಮಾಡಿದ್ದ ನಾಯಕನು ಅವಳು ಕೋಪಿಸಿಕೊಂಡು ಕುಳಿತಿದ್ದಾಗ ಮೆಲ್ಲ ಮೆಲ್ಲನೆ ಹೆಜ್ಜೆಯಿಡುತ್ತಾ ಅವಳ ಹಿಂದೆ ಹೋಗಿ ಕ್ಷಮೆಯಾಚಿಸಲು ನಿಂತಿದ್ದಾನೆ. ಆದರೆ ಅವಳು ಮುಖ ತಿರುಗಿಸಿ ನೋಡುತ್ತಲೇ ಇಲ್ಲ! ಅವನಿಗೂ ಮಾತನಾಡಲು ಧೈರ್ಯ ಸಾಲದೇ ಸುಮ್ಮನೆ ನಿಂತಿದ್ದಾನೆ. ಇದನ್ನು ಗಮನಿಸಿದ ನಾಯಕಿಯ ಸಖಿಯೊಬ್ಬಳು ಒಂದು ಕನ್ನಡಿಯನ್ನು ತಂದು ಅವಳಿಗೆ ತೋರಿಸಿದ್ದಾಳೆ. ಆಗ ಅವಳಿಗೆ ತನ್ನ ಹಿಂದೆ ನಿಂತಿರುವ ತನ್ನ ಪತಿ ಕಾಣಿಸಿದ್ದಾನೆ. ಆಗ ಅವನ ಪಶ್ಚಾತ್ತಾಪದ ಮುಖ ಕಾಣಿಸಿ ಅವನನ್ನು ಕ್ಷಮಿಸಿದ್ದಾಳೆ. ಹೀಗೆ ಕನ್ನಡಿ ತೋರಿಸಿ ಸಖಿಯು ಯಾವ ಉಪಕಾರ ತಾನೇ ಮಾಡಲಿಲ್ಲ ಎಂದು ನಾಯಕನು ಸ್ಮರಿಸಿಕೊಂಡು ಹೇಳುತ್ತಿದ್ದಾನೆ. 

ಭಾನುವಾರ, ಜೂನ್ 7, 2026

ಸುಂದರೀಶತಕ -೪೭

ಸಂಸ್ಕೃತ ಮೂಲ 

ಅರವಿಂದದ್ಯುತಿಶೋಣಂ ಲೋಚನಕೋಣಂ ಸರೋಜಾಕ್ಷ್ಯಾ: /
ಪ್ರಣಮತಿ ಮಯ್ಯಥ ಸದಯಂ ಹರಿಹರಿ ಹೃದಯಂ ನ ವಿಸ್ಮರತಿ //

ಕನ್ನಡ ಅನುವಾದ 

     ' ಆ ಸರೋಜಾಕ್ಷಿಯ ಕೋಪವನ್ನು ತಣಿಸಲು ನಾನು ಅವಳ ಕಾಲಿಗೆ ಬಿದ್ದಾಗ, ಕಮಲದ ಕಾಂತಿಯಂತೆ ಕೆಂಪಾಗಿದ್ದ ಅವಳ ಕಣ್ಣುಗಳ ಅಂಚುಗಳಲ್ಲಿ ದಯೆಯು ಕಾಣಿಸಿತು! ಹರಿ ಹರಿ! ಇದನ್ನು ನನ್ನ ಹೃದಯವು ಮರೆಯುವುದಿಲ್ಲ!' 
    ಇಲ್ಲಿ ಪತಿಯು ತನ್ನ ಪ್ರಿಯ ಪತ್ನಿಯ ವಿಷಯದಲ್ಲಿ ಏನೋ ತಪ್ಪು ಮಾಡಿದ್ದಾನೆ. ಅದರಿಂದ ಅವಳು ಕೋಪಗೊಂಡಿದ್ದಾಳೆ.‌ ಆದರೆ ಅವಳು ಅವನು ಎಷ್ಟೇ ಸಮಾಧಾನಪಡಿಸಿದರೂ ಕೋಪ ಬಿಡುತ್ತಿಲ್ಲ.‌ ಕೊನೆಗೆ ಅವನು ಅವಳ ಕಾಲಿಗೆ ಬಿದ್ದಾಗ ಅವಳ ಕೋಪ ಕರಗಿ ಕಮಲದಂತೆ ಕೆಂಪಾದ ಅವಳ ಕಣ್ತುದಿಯಲ್ಲಿ ದಯೆಯು ಮೂಡಿದೆ! ಇದನ್ನು ಕವಿ ಅಥವಾ ಆ ಪತಿಯು ನೆನಪಿಸಿಕೊಂಡು ಎಂದಿಗೂ ಮರೆಯಲಾರೆ ಎನ್ನುತ್ತಿದ್ದಾನೆ! ಹೆಂಡತಿಯು ಗಂಡನ ಕಾಲಿಗೆ ಬೀಳುವುದು ಸಾಮಾನ್ಯ. ಆದರೆ ಪ್ರಾಚೀನ ಸಂಸ್ಕೃತ ಶೃಂಗಾರ ಕಾವ್ಯಗಳಲ್ಲಿ ತಪ್ಪು ಮಾಡಿದಾಗ ಗಂಡನೂ ಹೆಂಡತಿಯನ್ನು ಸಮಾಧಾನಗೊಳಿಸಲು ಅವಳ ಕಾಲಿಗೆ ಬೀಳುವುದನ್ನು ಕಾಣುತ್ತೇವೆ! ಕೃಷ್ಣನೂ ಕೋಪಗೊಂಡ ಸತ್ಯಭಾಮೆಯ ಪಾದಗಳಿಗೆ ನಮಸ್ಕಾರ ಮಾಡಿ ಅವನ್ನು ಒತ್ತುವುದನ್ನು ಕಾಣುತ್ತೇವೆ! ಗಂಡನು ಏಷ್ಟೇ ಅನುನಯಗೊಳಿಸಿದರೂ ಸಮಾಧಾನಗೊಳ್ಳದ ಹೆಂಡತಿ, ಅವನು ಅವಳ ಕಾಲಿಗೆ ಬಿದ್ದಾಗ ಥಟ್ಟನೆ ಸಮಾಧಾನಗೊಳ್ಳುತ್ತಾಳೆ! ಅವಳಿಗಿಂತ ದೊಡ್ಡವನಾದ ಅವನು ತನ್ನ ಅಭಿಮಾನ ಬಿಟ್ಟು ಅವಳ ಕಾಲಿಗೆ ಬೀಳುವುದು ಸುಲಭದ ಮಾತಲ್ಲ ಅಲ್ಲವೇ? ಆದರೆ ಅವನು ಪ್ರೇಮಕ್ಕಾಗಿ ಹಾಗೆ ಮಾಡಿದಾಗ ಅವಳು ಕರಗಿಹೋಗುತ್ತಾಳೆ! ಅಂಥ ಒಂದು ಸುಂದರ ಸನ್ನಿವೇಶವನ್ನು ಕವಿ ಇಲ್ಲಿ ಚಿತ್ರಿಸಿದ್ದಾನೆ.

ಬುಧವಾರ, ಜೂನ್ 3, 2026

ಸುಂದರೀಶತಕ -೪೬

ಸಂಸ್ಕೃತ ಮೂಲ 

ಸಂಸದಿ ಸಖೀಜನಾನಾಂ ಗೋಷ್ಠೀಂ ಕರ್ತುಂ ಪುರ: ಪ್ರವೃತ್ತಾಯಾ: /
ಗೋತ್ರಸ್ಖಲನವಿಲಕ್ಷಂ ಸುಂದರಿ ಮುಖಮೀಕ್ಷಣೀಯಂ ತೇ //

ಕನ್ನಡ ಅನುವಾದ 

     ' ಎಲೈ ಸುಂದರಿ! ಸಖಿಯರ ಸಮಕ್ಷಮದಲ್ಲಿ ನೀನು ಮಾತುಕತೆಯಾಡಲು ಆರಂಭಿಸಿದಾಗ, ನಿನ್ನ ಪತಿಯು ಗೋತ್ರಸ್ಖಲನವಾಗಿ ನಿನ್ನ ಹೆಸರನ್ನು ಕರೆಯುವ ಬದಲಿಗೆ ಬೇರೊಬ್ಬ ಪ್ರೇಯಸಿಯ ಹೆಸರನ್ನು ಕರೆದಾಗ, ನಿನ್ನ ಮುಖದಲ್ಲಾದ ವ್ಯಾಕುಲತೆ, ಕೋಪ, ಆಶ್ಚರ್ಯ, ಮತ್ತು ಲಜ್ಜೆಗಳ ವಿಲಕ್ಷಣ ಭಾವ ನೋಡಲು ಸುಂದರವಾಗಿತ್ತು!' 
     ಹೆಣ್ಣಿನ ವಿವಿಧ ಭಾವಗಳನ್ನು ಕವಿಯು ಚಿತ್ರಿಸುತ್ತಿದ್ದಾನೆ. ಹೆಣ್ಣು, ಕೋಪ, ಲಜ್ಜೆ, ಸಂಕೋಚ, ಆಶ್ಚರ್ಯ , ವ್ಯಾಕುಲತೆ, ಮೊದಲಾದ ಮುಖಭಾವಗಳಲ್ಲಿ ಬಹಳ ಸುಂದರವಾಗಿ, ಮುದ್ದಾಗಿ ಕಾಣುತ್ತಾಳೆ! ಇಲ್ಲಿ ಕವಿಯು ಅಂಥ ಒಂದು ಸಂದರ್ಭವನ್ನು ಚಿತ್ರಿಸಿದ್ದಾನೆ. ಸುಂದರ ಹೆಣ್ಣೊಬ್ಬಳು ತನ್ನ ಸಖಿಯರೊಂದಿಗೆ ಒಂದು ಮಾತುಕತೆಯ ಗೋಷ್ಠಿಯನ್ನು ಆರಂಭಿಸುತ್ತಿದ್ದಾಳೆ. ಅವಳ ಪತಿ ಅಥವಾ ಪ್ರಿಯತಮನೂ ಅಲ್ಲಿದ್ದಾನೆ.‌ ಆದರೆ ಅವನು ಬಾಯಿತಪ್ಪಿ ಅವಳ ಹೆಸರನ್ನು ಕರೆಯುವ ಬದಲಿಗೆ ಬೇರೊಬ್ಬ ಪ್ರೇಯಸಿಯ ಹೆಸರನ್ನು ಕರೆದಿದ್ದಾನೆ! ಇದಕ್ಕೆ ಗೋತ್ರಸ್ಖಲನವೆಂದು ಹೆಸರು. ಗೋತ್ರಸ್ಖಲನದ ವಿಷಯವು ಸಂಸ್ಕೃತದ ಶೃಂಗಾರ ಸಾಹಿತ್ಯದಲ್ಲಿ ಪ್ರಮುಖ ಸ್ಥಾನ ವಹಿಸುತ್ತದೆ.‌ ಗೋತ್ರಸ್ಖಲನವೆಂದರೆ ನಾಯಕನು ತನ್ನ ಪ್ರಿಯತಮೆಯ ಹೆಸರನ್ನು ಕರೆಯುವ ಬದಲಿಗೆ ಬೇರೊಬ್ಬ ಪ್ರೇಯಸಿಯ ಹೆಸರನ್ನು ಕರೆಯುವುದು. ಆಗ ನಾಯಕಿಗೆ ಆಗುವ ಸಂಕೋಚ, ಲಜ್ಜೆ, ವ್ಯಾಕುಲತೆ, ಆಶ್ಚರ್ಯ, ಕೋಪ, ಮೊದಲಾದ ಮಿಶ್ರ ವಿಲಕ್ಷಣ ಭಾವಗಳು ಒಂದು ಮೆರುಗು ನೀಡುತ್ತವೆ. ಅದೂ ಸಖಿಯರ ಮುಂದೆ ಅವಳ ಪತಿ ಬೇರೊಬ್ಬಳ ಹೆಸರನ್ನು ಕರೆದರೆ ಅವಳಿಗೆ ಹೇಗಾಗಬೇಡ? ಅವಳ ಆ ಮಿಶ್ರ ವಿಲಕ್ಷಣ ಮುಖಭಾವ ಸುಂದರವಾಗಿದೆ ಎಂದು ಹೇಳುತ್ತಾನೆ ಕವಿ.

ಸುಂದರೀಶತಕ -೪೫

ಸಂಸ್ಕೃತ ಮೂಲ 

ಕಾತರನಯನನಿವೇದಿತನಿರ್ದಯಕಂದರ್ಪವೇದನಾತಿಶಯಮ್/
ದೃಷ್ಟಂ ನಿಖಾತಮಂತ: ಪ್ರಿಯಯಾ ಪ್ರಸ್ಥಾನವೇಲಾಯಾಮ್//

ಕನ್ನಡ ಅನುವಾದ 

    ' ನಾನು ಪ್ರಯಾಣ ಹೊರಡುವ ಸಮಯದಲ್ಲಿ ನನ್ನ ಪ್ರಿಯತಮೆಯ ಕಾತರ ನಯನಗಳು ನಿವೇದಿಸಿದ ನಿರ್ದಯ ಕಾಮವೇದನೆಯ ಅತಿಶಯದ ನೋಟ ನನ್ನ ಹೃದಯಾಂತರಾಳದಲ್ಲಿ ಹೊಕ್ಕಿ ನೆಲೆಸಿದೆ!'
     ಪ್ರಿಯನು ಕಾರಣಾಂತರದಿಂದ ಪ್ರಯಾಣ ಹೊರಟಾಗ ಅವನ ಪ್ರಿಯತಮೆಗೆ ಆಗುವ ವಿರಹವೇದನೆ ಅಷ್ಟಿಷ್ಟಲ್ಲ! ಕಾಮದೇವನು ನಿರ್ದಯವಾಗಿ ಅವಳನ್ನು ಬಾಧಿಸುತ್ತಾನೆ! ಆದರೆ ಅವಳು ಅದನ್ನು ಯಾವ ಮಾತಿನಿಂದಲೂ ವ್ಯಕ್ತಪಡಿಸುವುದಿಲ್ಲ! ಕೇವಲ ತನ್ನ ಕಣ್ಣ ನೋಟದಿಂದಲೇ ತೋರಿಸುತ್ತಾಳೆ! ಅದು ಅವಳ ಪ್ರಿಯನ ಹೃದಯವನ್ನು ಬಾಣದಂತೆ ಹೊಕ್ಕು ಅಂತರಂಗದಲ್ಲಿ ನೆಲೆಸುತ್ತದೆ! ಅದನ್ನು ಅವನು ಮರೆಯಲು ಸಾಧ್ಯವೇ ಇಲ್ಲ! ಹಾಗಾಗಿ ಅವನು ಅನಂತರ ಅದನ್ನು ನೆನೆಯುತ್ತಿದ್ದಾನೆ. 

ಭಾನುವಾರ, ಮೇ 31, 2026

ಸುಂದರೀಶತಕ -೪೪

ಸಂಸ್ಕೃತ ಮೂಲ 

ಚಕ್ಷುರಪಾಂಗಮಪಾಂಗ: ಕರ್ಣಂ ಕರ್ಣೋsಪಿ ದೂತಿಕಾವಚನಮ್ /
ಅವಧತ್ತೇ ಮಮ ತಪಸಾಮುದಾರಸಾರ: ಕ್ರಮ: ಸೋsಯಮ್ //

ಕನ್ನಡ ಅನುವಾದ 

     ' ಆ ಸುಂದರಿಯ ಕಣ್ಣು ( ದೃಷ್ಟಿ) ಅವಳ ಕಣ್ಣಿನ ತುದಿಗೆ ಹೋಯಿತು! ಅವಳ ಕಣ್ಣಿನ ತುದಿಯು ಅವಳ ಕಿವಿಯ ಕಡೆಗೆ ಹೋಯಿತು! ಅವಳ ಕಿವಿಯು ದೂತಿಯ ಮಾತನ್ನು ಕೇಳಿತು! ಆಹಾ! ಈ ಪ್ರೇಮದ ಕ್ರಮವು ನನ್ನ ತಪಸ್ಸಿನ ಉದಾರ ಫಲ!' 
     ಇಲ್ಲಿ ಒಬ್ಬ ಪ್ರೇಮಿಯು ತನ್ನ ಪ್ರೇಮದ ಕ್ರಮ ಕ್ರಮವಾದ ಬೆಳವಣಿಗೆಯನ್ನು ಸುಂದರವಾಗಿ ವರ್ಣಿಸಿದ್ದಾನೆ. ಮೊದಲಿಗೆ ಅವನ ಪ್ರಿಯತಮೆಯ ಕಣ್ಣೋಟ ಅವಳ ಕಣ್ಣಿನ ತುದಿಗೆ ಬಂದು ಅವಳ ಕಿವಿಯವರೆಗೆ ಹೋಗುವುದು. ಇದರಿಂದ ಅವಳು ಅವನನ್ನು ತನ್ನ ಕಡೆಗಣ್ಣಿನಿಂದ ನೋಡಿದಳು. ಆಗ ತನ್ನ ಪ್ರೇಮವನ್ನು ವ್ಯಕ್ತಪಡಿಸಲು ಅವನು ಅವಳ ಬಳಿಗೆ ಒಬ್ಬ ದೂತಿಯನ್ನು ಕಳಿಸುವನು. ಆಗ ಅವನ ಪ್ರಿಯತಮೆಯ ಕಿವಿ, ಆ ದೂತಿಯ ಮಾತನ್ನು ಕೇಳುವುದು. ಹೀಗೆ ಅವಳ ದೃಷ್ಟಿಯು ಕಣ್ಣಿನ ತುದಿಗೆ ಬರುವುದು, ಕಣ್ಣಿನ ತುದಿಯ ನೋಟ ಕಿವಿಯವರೆಗೆ ಬರುವುದು, ಹಾಗೂ ಕಿವಿಯು ದೂತಿಯ ಮಾತನ್ನು ಕೇಳುವುದು, ಈ ಪ್ರೇಮದ ಕ್ರಮವು, ತನ್ನ ತಪಸ್ಸಿನ ಉದಾರ ಫಲವೆಂದು ಅವಳ ಪ್ರೇಮಿಯು ಸಂತೋಷದಿಂದ ಹೇಳಿಕೊಳ್ಳುತ್ತಿದ್ದಾನೆ! 

ಶುಕ್ರವಾರ, ಮೇ 29, 2026

ಸುಂದರೀಶತಕ -೪೩

ಸಂಸ್ಕೃತ ಮೂಲ 

ಕಿಂಚಿದುದಂಚಯ ಚಂಚಲಮಂಚಲಮಚಿರೇಣ ಲೋಚನಾಂಶುಕಯೋ: /
ಸುಂದರಿ ಕರ್ಣಾವತಂಸ: ಕೈರವಮಿಂದೀವರಂ ಭವತು //

ಕನ್ನಡ ಅನುವಾದ 

     ' ಎಲೈ ಸುಂದರಿ! ನಿನ್ನ ಕಂಗಳನ್ನು ಆವರಿಸಿ ಚಂಚಲವಾಗಿ ಹಾರಾಡುತ್ತಿರುವ ಸೆರಗಿನ ಅಂಚನ್ನು ಬೇಗನೆ ಸ್ವಲ್ಪ ಮೇಲೆತ್ತು! ನಿನ್ನ ನೀಲ ದೃಷ್ಟಿಯಿಂದ ನಿನ್ನ ಕಿವಿಯ ಮೇಲಿರುವ ಕೈರವ ಅಥವಾ ಬಿಳಿ ಕಮಲದ ಆಭರಣ, ಇಂದೀವರ ಅಥವಾ ನೀಲಕಮಲವಾಗಲಿ!' 
     ಸುಂದರಿಯ ಕಂಗಳು ನೀಲವರ್ಣದಿಂದ ಕೂಡಿ ಬಹು ಸುಂದರವಾಗಿವೆ! ಹಾಗಾಗಿ ಕವಿ ಅಥವಾ ಅವಳ ಪ್ರಿಯತಮನು ಅವಳಿಗೆ ಅವಳ ಕಂಗಳ ಮೇಲೆ ಹಾರಾಡುತ್ತಿರುವ ಅವಳ ಸೆರಗಿನ ಅಂಚನ್ನು ಸ್ವಲ್ಪ ಮೇಲೆತ್ತಲು ಹೇಳುತ್ತಿದ್ದಾನೆ. ಅವಳು ಹಾಗೆ ತನ್ನ ಕಂಗಳನ್ನು ಆವರಿಸಿರುವ ಸೆರಗಿನ ಅಂಚನ್ನು ಮೇಲೆತ್ತಿದಾಗ ಅವಳ ಕಂಗಳ ನೀಲದೃಷ್ಟಿ ಅವಳು ಧರಿಸಿರುವ ಕೈರವ ಅಥವಾ ಬಿಳಿಕಮಲದ ಕರ್ಣಾಭರಣದ ಮೇಲೆ ಬಿದ್ದು ಅದು ನೀಲಕಮಲ ಅಥವಾ ನೀಲೋತ್ಪಲ ಅಥವಾ ಇಂದೀವರವಾಗಲಿ ಎಂದು ಅವನ ಆಶಯವಾಗಿದೆ. ಹೀಗೆ ಅವಳ ಕಣ್ಣ ದೃಷ್ಟಿಯಿಂದ ಅವಳ ಕರ್ಣಾಭರಣದ ಬಣ್ಣವೇ ಬದಲಾಗುವುದೆಂದು ಹೇಳುವ ಮೂಲಕ, ಅವಳ ಕಂಗಳು ಎಷ್ಟು ಸುಂದರವಾಗಿವೆ ಎಂದು ಹೇಳುತ್ತಿದ್ದಾನೆ.

ಸುಂದರೀಶತಕ -೪೨

ಸಂಸ್ಕೃತ ಮೂಲ 

ತವ ನಯನಪುಂಡರೀಕಾತ್ಪ್ರಿಯೇ ಕಟಾಕ್ಷಕ್ರಮಾ ವಿರಾಜತೇ /
ವಿಕಸಿತವಿಚಕಿಲಕುಸುಮಾತ್ಕುಸುಮಾನೀವಾವತೀರ್ಣಾನಿ //

ಕನ್ನಡ ಅನುವಾದ 

   ' ಪ್ರಿಯೆ! ನಿನ್ನ ನಯನಕಮಲದಿಂದ ಹೊರಡುತ್ತಿರುವ ಕುಡಿನೋಟಗಳು, ಅರಳಿದ ಮಲ್ಲಿಗೆ ಹೂವಿನಿಂದ ದಳಗಳು ಉದುರುವಂತೆ ವಿರಾಜಿಸುತ್ತಿವೆ! '
    ಇಲ್ಲಿ ಕವಿಯು ಹೆಣ್ಣಿನ ಕಣ್ಣನ್ನು ಕಮಲ ಪುಷ್ಪಕ್ಕೆ ಹೋಲಿಸಿದರೆ, ಅವಳ ಕುಡಿನೋಟಗಳನ್ನು ಮಲ್ಲಿಗೆ ಹೂವಿನಿಂದ ಉದುರುತ್ತಿರುವ ದಳಗಳಿಗೆ ಹೋಲಿಸಿದ್ದಾನೆ! ನಯನಪುಂಡರೀಕ ಎನ್ನುವಲ್ಲಿ ಕಣ್ಣೇ ಕಮಲ ಎಂದು ರೂಪಕಾಲಂಕಾರ ಬಳಸಿದ್ದರೆ, ಅವಳ ಕುಡಿನೋಟಗಳು ಮಲ್ಲಿಗೆ ಹೂವಿನಿಂದ ಉದುರುತ್ತಿರುವ ದಳಗಳಂತಿವೆ ಎನ್ನುವಲ್ಲಿ ಉಪಮಾಲಂಕಾರ ಬಳಸಿದ್ದಾನೆ. ಹೆಣ್ಣಿನ ಕಡೆಗಣ್ಣಿನ ಕುಡಿನೋಟಗಳು ಅದೆಷ್ಟು ಆಕರ್ಷಕ ಎಂದರೆ ಕವಿಗೆ ಅವನ್ನು ಎಷ್ಟು ಹೊಗಳಿದರೂ ಸಾಲದು! ಬೇರೆ ಬೇರೆ ರೀತಿಯ ಹೋಲಿಕೆಗಳನ್ನು ಬಳಸುತ್ತಾ ಹೆಣ್ಣಿನ ಕಡೆಗಣ್ಣಿನ ಕುಡಿನೋಟಗಳನ್ನು ಮತ್ತೆ ಮತ್ತೆ ವರ್ಣಿಸುತ್ತಿದ್ದಾನೆ. ಇಲ್ಲಿ ಹೆಣ್ಣಿನ ಪ್ರಿಯತಮನ ಮೂಲಕ ಅವಳಿಗೆ ಪ್ರಶಂಸೆ ಹೇಳಿಸಿದ್ದಾನೆ.

ಸುಂದರೀಶತಕ -೪೧

ಸಂಸ್ಕೃತ ಮೂಲ 

ನಿಷ್ಠುರಪಂಜರಕೋಷೇ ನವಸಂಯಮಿತಸ್ಯ ಖಂಜನಸ್ಯೇವ /
ಗುರುಜನಸಮಕ್ಷಮಕ್ಷಿವ್ಯಾಪಾರೋ ಜಯತಿ ಮುಗ್ಧಾಕ್ಷ್ಯಾ: //

ಕನ್ನಡ ಅನುವಾದ 

ಆ ಮುಗ್ಧನಯನೆಯು ಹಿರಿಯರ ಸಮಕ್ಷಮದಲ್ಲಿ ತನ್ನ ಪ್ರಿಯತಮನೊಂದಿಗೆ ನಡೆಸುವ ಕಣ್ಣೋಟದ ವ್ಯಾಪಾರ (ಚಲನವಲನಗಳು), ಗಟ್ಟಿಯಾದ ಪಂಜರದಲ್ಲಿ ಹೊಸದಾಗಿ ಬಂಧಿಸಿರುವ ಖಂಜನ ಪಕ್ಷಿಯ ತೀಕ್ಷ್ಣ ಕಣ್ಣೋಟದ ಚಲನವಲನಗಳಂತೆ ವಿಜಯಶಾಲಿಯಾಗುತ್ತದೆ!' 
    ಇದೊಂದು ಸುಂದರವಾದ, ರಮ್ಯವಾದ ಚಿತ್ರಣ. ಮನೆಗೆ ಹಿರಿಯರು ಬಂದಿದ್ದಾರೆ. ನವವಿವಾಹಿತೆಯಾದ ಮುಗ್ಧ ಕಣ್ಣುಗಳ ಹೆಣ್ಣೊಬ್ಬಳು ತನ್ನ ಪ್ರಿಯಪತಿಯನ್ನು ಅರೆಕ್ಷಣವೂ ಬಿಟ್ಟಿರಲಾರಳು. ಹಿರಿಯರ ನಡುವೆ ಅವಳ ಗಂಡನೂ ಕುಳಿತಿದ್ದಾನೆ. ಅವರು ಅವನೊಂದಿಗೆ ಏನೋ ಮಾತುಕತೆ ನಡೆಸುತ್ತಿದ್ದಾರೆ. ಇವಳು ಸಿಹಿತಿಂಡಿಗಳು, ಪಾನೀಯಗಳು ಇತ್ಯಾದಿಗಳನ್ನು ತಂದುಕೊಡುತ್ತಿದ್ದಾಳೆ ಹಾಗೂ ಅಲ್ಲೇ ಇದ್ದಾಳೆ. ಅವಳಿಗೆ ಅವನನ್ನು ನೋಡಬೇಕೆಂಬ ಆಸೆ. ಆದರೆ ಅವರೆಲ್ಲರೂ ಇರುವಾಗ ಧೈರ್ಯವಾಗಿ ಮುಕ್ತವಾಗಿ ನೋಡಲಾರಳು. ಹಾಗಾಗಿ ತಲೆತಗ್ಗಿಸಿ ವೇಗವಾಗಿ ಅವನ ಕಡೆ ನೋಡುತ್ತಾಳೆ ಮತ್ತು ಹೆದರಿ ಪುನಃ ಬೇಗನೆ ಹಿರಿಯರ ಕಡೆ ನೋಡುತ್ತಾಳೆ. ಅವಳ ಕಣ್ಣೋಟದ ಈ ಚಲನವಲನಗಳು, ಗಟ್ಟಿಯಾದ ಪಂಜರದಲ್ಲಿ ಹೊಸದಾಗಿ ಬಂಧಿಸಲಾಗಿರುವ ಖಂಜನ ಪಕ್ಷಿಯ ತೀಕ್ಷ್ಣ ನೋಟಗಳಂತಿವೆ ಎಂದು ಕವಿಯು ಹೋಲಿಸುತ್ತಾನೆ. ಖಂಜನ ಪಕ್ಷಿ ಅಥವಾ ಕದಂಬ ಪಕ್ಷಿಯನ್ನು ಹೊಸದಾಗಿ ಪಂಜರದಲ್ಲಿ ಬಂಧಿಸಿದಾಗ ಅದು ಚಡಪಡಿಸುತ್ತಾ ಅತ್ತಿತ್ತ ಚುರುಕಾಗಿ ಕಣ್ಣುಗಳನ್ನು ಆಡಿಸುತ್ತಿರುತ್ತದೆ. ಅದೇ ರೀತಿ ಈಗ ಮುಗ್ಧೆಯಾದ ಈ ಹೆಣ್ಣೂ ಹಿರಿಯರ ಪಂಜರದಲ್ಲಿ ಸಿಕ್ಕಿಕೊಂಡು ತನ್ನ ಪ್ರಿಯತಮನನ್ನು ಕದ್ದು ನೋಡುತ್ತಾ ಮರುಕ್ಷಣವೇ ಅವರನ್ನೂ ನೋಡುತ್ತಾ ಒಂದು ಆಕರ್ಷಕ ಚಿತ್ರಣವುಂಟುಮಾಡಿದ್ದಾಳೆ! ಇಂಥ ಅವಳ ಕಣ್ಣೋಟ ಅತ್ಯಂತ ಸೊಗಸಾಗಿದ್ದು ಅದು ವಿಜಯಶಾಲಿಯಾಗುತ್ತದೆ ಎನ್ನುತ್ತಾನೆ ಕವಿ! 

ಬುಧವಾರ, ಮೇ 27, 2026

ಮಹಾಭಾರತದ ಸ್ವಾರಸ್ಯಗಳು - ಜಿಂಕೆಗಳ ಕನಸು

                ನಾವು ಪ್ರಾಣಿ ಪ್ರಪಂಚದ ಇತಿಹಾಸವನ್ನು ಅವಲೋಕಿಸುತ್ತಾ ಹೋದರೆ ಮಾನವರು ಅದೆಷ್ಟೋ ಪ್ರಾಣಿ, ಪಕ್ಷಿಗಳನ್ನು ನಿರ್ದಯವಾಗಿ ಬೇಟೆಯಾಡಿ ನಿರ್ನಾಮ ಮಾಡಿರುವುದು ಕಾಣುತ್ತದೆ. ಅದರಲ್ಲೂ ಯುರೋಪಿಯನ್ನರು ಕ್ರೌರ್ಯದಲ್ಲಿ ಹೆಸರೆತ್ತಿದವರು. ಅವರು ಹೋದಲ್ಲೆಲ್ಲಾ ನೆಲೆಗಳನ್ನು ವಶಪಡಿಸಿಕೊಂಡು, ಮೂಲನಿವಾಸಿಗಳನ್ನು ಬಗ್ಗುಬಡಿದು ಇಲ್ಲವೇ ದಾಸ್ಯಕ್ಕೊಳಪಡಿಸಿ ಶೋಷಿಸಿದ್ದಷ್ಟೇ ಅಲ್ಲದೆ, ಅಲ್ಲಿನ ಪ್ರಾಣಿ ಪಕ್ಷಿಗಳನ್ನೂ ಅನಗತ್ಯವಾಗಿ ಬೇಟೆಯಾಡಿದರು. ಹಾಗಾಗಿಯೇ ಡೋಡೋ, ಪ್ಯಾಸೆಂಜರ್ ಪಿಜನ್, ಕ್ವಗ್ಗ ( ಜೀಬ್ರಾದಂಥ ಒಂದು ಪ್ರಾಣಿ) ಇನ್ನೆಂದೂ ಕಾಣದಂತೆ ನಾಮಾವಶೇಷವಾದವು! ಈಗಲೂ ಆಫ್ರಿಕಾದಲ್ಲಿ ಅರಣ್ಯ ಸಂರಕ್ಷಣೆಗೆ ಧನಸಹಾಯ ಮಾಡುವವರಿಗೆ ಬೇಟೆಯಾಡಲು ಅವಕಾಶ ಕೊಡುವುದು ಒಂದು ದೊಡ್ಡ ವಿಡಂಬನೆಯ ವಿಷಯವಾಗಿದೆ! 
    ಈ ರೀತಿ ಬೇಟೆಯಾಡುವ ಪ್ರವೃತ್ತಿ ಭಾರತದಲ್ಲೂ ಇತ್ತೇ ಎಂದು ಕೇಳಿದರೆ ಹೌದು ಎಂದೇ ಹೇಳಬೇಕಾಗುತ್ತದೆ. ಆದಿಮಾನವ ತನ್ನ ಆಹಾರಕ್ಕಾಗಿ ಬೇಟೆಯಾಡುತ್ತಿದ್ದ ನಿಜ. ಅಂತೆಯೇ ಅಂದಿನಿಂದ ಇಂದಿನವರೆಗೂ ಬಹುತೇಕ ಮಾನವರಲ್ಲಿ ಮಾಂಸಾಹಾರ ಸಹಜವಾದ ಒಂದು ಪ್ರವೃತ್ತಿಯೇ ಆಗಿದೆ. ಈ ಮಾಂಸ ಸಿಗಲು ಪ್ರಾಣಿಗಳನ್ನು ಬೇಟೆಯಾಡಬೇಕಾದುದರಿಂದ ಅದೊಂದು ಕ್ರೀಡೆಯೇ ಆಯಿತು! ಓಡುತ್ತಿರುವ, ಹಾರುತ್ತಿರುವ ಅಥವಾ ದೂರದಲ್ಲಿ ಮೇಯುತ್ತಿರುವ ಇಲ್ಲವೇ ವಿಶ್ರಮಿಸುತ್ತಿರುವ ಪ್ರಾಣಿ ಪಕ್ಷಿಗಳನ್ನು ಗುರಿಯಿಟ್ಟು ಹೊಡೆದು ಕೊಂದರೆ ಅದೇನೋ ಸಾಧನೆ ಮಾಡಿದ ಆನಂದ ಅನೇಕ ರಾಜರುಗಳಿಗಿತ್ತು! ಯುದ್ಧಗಳಲ್ಲಿ ತೊಡಗುವ ಬಹುತೇಕ ರಾಜರು ಕ್ಷತ್ರಿಯರಾಗಿದ್ದು ಮಾಂಸಾಹಾರ ಅವರಿಗೆ ಸಹಜವಾಗಿತ್ತು. ಅಂತೆಯೇ ಶೂದ್ರರು, ಶ್ರಮಜೀವಿಗಳಿಗೂ ಮಾಂಸಾಹಾರವಿಲ್ಲದೇ ಆಗುತ್ತಿರಲಿಲ್ಲ. ಆದರೆ ಅಷ್ಟೇ ಅಲ್ಲದೇ ಬ್ರಾಹ್ಮಣರು ಕೂಡ ಯಜ್ಞ ಯಾಗಗಳನ್ನು ಮಾಡಿದಾಗ ಬಲಿಪಶುವಿನ ಮಾಂಸಾಹಾರ ಸೇವಿಸುತ್ತಿದ್ದರು. ಇವುಗಳಿಗೆ ಅನೇಕ ದಾಖಲೆಗಳು ಪ್ರಾಚೀನ ಗ್ರಂಥಗಳಲ್ಲಿ ಇವೆ. ಆದರೆ ಮಾಂಸಾಹಾರಕ್ಕಲ್ಲದೇ ಸುಖಾಸುಮ್ಮನೆ ಬೇಟೆಯಾಡಿ ಪ್ರಾಣಿಗಳನ್ನು ಕೊಲ್ಲುವುದೆಂದರೇನು? ಆದರೆ ಅದೂ ತೀರಾ ಇತ್ತೀಚಿನವರೆಗೂ ಇತ್ತು. ಮೈಸೂರು ಮಹಾರಾಜರೇ ಮೊದಲಾಗಿ ಅನೇಕ ಮಹಾರಾಜರು ಕಾಡುಗಳನ್ನು ಬೇಟೆಗೆಂದೇ ಬೆಳೆಸಿದ್ದಲ್ಲದೇ ಕಾಡುಗಳಲ್ಲಿ ಬೇಟೆಯಾಡಲು ಉಳಿದುಕೊಳ್ಳಲು ಸುಂದರ ಗೃಹಗಳನ್ನು ನಿರ್ಮಿಸಿದರು. ಬ್ರಿಟಿಷರು ಬಂದಮೇಲೆ ಅವರ ಜೊತೆ ನಮ್ಮ ರಾಜರೂ ಸೇರಿಕೊಂಡು ಈ ಕ್ರೀಡೆಯನ್ನು ಆನಂದಿಸುತ್ತಿದ್ದರು! 
      ಆದರೆ ಪ್ರಾಚೀನ ಭಾರತದಲ್ಲಿ ಬೇಟೆಯಾಡುವ ಪ್ರವೃತ್ತಿ ಇದ್ದರೂ ಅದನ್ನು ನಿಯಂತ್ರಿಸಲು ಪ್ರಯತ್ನಿಸಿದ್ದುದು ಕಾಣುತ್ತದೆ. ಉದಾಹರಣೆಗೆ ಶ್ರೀಕೃಷ್ಣನು ಮಹಾಭಾರತದಲ್ಲಿ ರಾಜರಿಗೆ ಬೇಟೆ, ಮದ್ಯಪಾನ, ಜೂಜು, ಮತ್ತು ಸ್ತ್ರೀ ವ್ಯಾಮೋಹ, ಇವು ನಾಲ್ಕೂ ವ್ಯಸನಗಳು ಎಂದು ಹೇಳುತ್ತಾನೆ. ಜೂಜಿನಿಂದ ಯುಧಿಷ್ಠಿರ, ನಳ ಮಹಾರಾಜ, ಮೊದಲಾದವರು ತೊಂದರೆಗೊಳಗಾದರೆ, ಬೇಟೆಯಿಂದ ಪಾಂಡು ಮಹಾರಾಜನು  ನಾಶವಾದ. ಬೇಟೆಯ ವ್ಯಾಮೋಹದಿಂದ ಅವನು ಜಿಂಕೆಗಳ ರೂಪದಲ್ಲಿ ರತಿಕ್ರೀಡೆಯಾಡುತ್ತಿದ್ದ ಕಿಂದಮ ಋಷಿದಂಪತಿಗಳನ್ನು ಕೊಂದು ಸ್ತ್ರೀಯನ್ನು ಸಂಭೋಗಿಸಿದರೆ ಸಾಯುವಂತೆ ಅವರಿಂದ ಶಾಪಗ್ರಸ್ತನಾದ. ವಿಚಿತ್ರವೀರ್ಯನು ಅತಿಯಾದ ಸ್ತ್ರೀ ಸಂಭೋಗದಿಂದ ಯಕ್ಷ್ಮ ಕ್ಷಯರೋಗವೆಂಬ ಕ್ಷೀಣಿಸುವ  ರೋಗಕ್ಕೊಳಗಾಗಿ ಸತ್ತ. ಇಂಥ ಉದಾಹರಣೆಗಳಿಂದ ಬೇಟೆ ಮತ್ತು ಪ್ರಾಣಿಗಳನ್ನು ಕೊಲ್ಲುವುದನ್ನು ನಿಯಂತ್ರಿಸಲಾಗಿದೆ. ಮುಂದೆ ಬೌದ್ಧ, ಜೈನ ಧರ್ಮಗಳಲ್ಲಂತೂ ಇದು ಬೇಡವೇ ಬೇಡ ಎಂದು ಒತ್ತು ಕೊಡಲಾಗಿದೆ. ಬೌದ್ಧ ಜಾತಕ ಕಥೆಗಳಲ್ಲಿ ಬೇಟೆಯನ್ನು ವಿರೋಧಿಸುವ ಚಿನ್ನದ ಜಿಂಕೆಯ ಕಥೆಯಿದೆ. ಬುದ್ಧನು ಮೊದಲ ಪ್ರವಚನ ನೀಡಿದ ಸಾರನಾಥದ ಮಿಗದಾಯ ( ಮೃಗದಾವ) ಜಿಂಕೆಗಳನ್ನು ಸಂರಕ್ಷಿಸಿದ ಉಪವನವಾಗಿತ್ತು.
     ಪ್ರಾಣಿಗಳ, ಮುಖ್ಯವಾಗಿ ಜಿಂಕೆಗಳ ಸಂರಕ್ಷಣೆ ಹಾಗೂ ಅನಗತ್ಯ ಬೇಟೆಯನ್ನು ನಿಯಂತ್ರಿಸುವ ಸ್ವಾರಸ್ಯಕರ ಪ್ರಸಂಗವೊಂದು ಮಹಾಭಾರತದಲ್ಲಿದೆ. ಅದು ವನಪರ್ವದ ಮೃಗಸವಪ್ನೋದ್ಭವಪರ್ವವೆಂಬ ಚಿಕ್ಕ ಉಪಪರ್ವದಲ್ಲಿದೆ.‌ ಅದನ್ನು ಈಗ ನೋಡೋಣ.
  ಪಾಂಡವರು ಆಗ ದ್ವೈತವನದಲ್ಲಿ ವಾಸಿಸುತ್ತಿದ್ದರು.  ಒಮ್ಮೆ ಯುಧಿಷ್ಠಿರನು ಆಶ್ರಮದಲ್ಲಿ ಮಲಗಿ ನಿದ್ರಿಸುತ್ತಿದ್ದಾಗ ಅವನಿಗೆ ಒಂದು ವಿಚಿತ್ರ ಕನಸು ಬಿತ್ತು.‌ ಅದರಲ್ಲಿ ಕೆಲವು ಜಿಂಕೆಗಳು ಮುಂಗಾಲುಗಳನ್ನು ಜೋಡಿಸಿಕೊಂಡು ಕಣ್ಣೀರು ಸುರಿಸುತ್ತಾ ಗದ್ಗದ ಸ್ವರದಿಂದ ಅಳುತ್ತಿದ್ದವು. ಅದನ್ನು ನೋಡಿ ಯುಧಿಷ್ಠಿರನು ಕೇಳಿದನು," ಮೃಗಶ್ರೇಷ್ಖರೇ! ಯಾರು ನೀವು? ನಿಮ್ಮ ಇಚ್ಛೆ ಏನು? ಅದೇನು ಹೇಳಬೇಕೆಂದಿರುವಿರೋ ನಿರ್ಭಯವಾಗಿ ಹೇಳಿ!" 
    ಅದಕ್ಕೆ ಆ ಜಿಂಕೆಗಳು ಹೇಳಿದವು," ನೀವುಗಳು ಆಹಾರಕ್ಕಾಗಿ ನಮ್ಮನ್ನು ಬೇಟೆಯಾಡುವಾಗ ನಿಮ್ಮ ಬಾಣಾಘಾತಕ್ಕೆ ಸಿಕ್ಕದೇ ತಪ್ಪಿಸಿಕೊಂಡು ಉಳಿದ ಬಡಪಾಯಿ ಜಿಂಕೆಗಳು ನಾವು! ಆದರೆ ಇನ್ನು ಕೆಲವೇ ದಿನಗಳಲ್ಲಿ ನಾವೂ ನಿಮ್ಮ ಆಹಾರವಾಗಿ ಪರಿವರ್ತನೆ ಹೊಂದುವುದು ಖಚಿತ! ಮಹಾರಾಜ! ನಿನ್ನ ತಮ್ಮಂದಿರು ಮಹಾಶೂರರು! ಬಿಲ್ವಿದ್ಯೆಯಲ್ಲಿ ಅಸಮಾನರು! ನಮ್ಮ ಉಚ್ಛ್ವಾಸ, ನಿ:ಶ್ವಾಸಗಳನ್ನು ಕೇಳಿಯೇ ಗುರಿಯಿಟ್ಟು ಬಾಣ ಬಿಡಬಲ್ಲರು! ಹೀಗಾಗಿ ದ್ವೈತವನದಲ್ಲಿ ನಮ್ಮ ವಂಶವೇ ಕ್ಷೀಣಿಸಿಹೋಗುತ್ತಿದೆ! ಅಲ್ಪಸಂಖ್ಯಾತರಾಗಿರುವ ನಾವಿಂದು ನಮ್ಮ ವಂಶಕ್ಕೆ ಬೀಜಪ್ರಾಯರಾಗಿರುವೆವು! ನಿನ್ನ ಅನುಗ್ರಹದಿಂದ ಮಾತ್ರ ನಮ್ಮ ವಂಶವು ಪುನಃ ಅಭಿವೃದ್ಧಿ ಹೊಂದಬಹುದು. ಹಾಗಾಗಿ ದಯವಿಟ್ಟು ನೀವು ಈ ಅರಣ್ಯ ಬಿಟ್ಟು ಬೇರೆ ಅರಣ್ಯಕ್ಕೆ ಪ್ರಯಾಣ ಮಾಡಿ! " 
    ಗಡಗಡನೆ ನಡುಗುತ್ತಾ ಕಣ್ಣೀರು ಸುರಿಸುತ್ತಾ ಹೇಳಿದ ಜಿಂಕೆಗಳ ಮಾತುಗಳನ್ನು ಕೇಳಿ ಯುಧಿಷ್ಠಿರನಿಗೆ ಬಹಳ ದು:ಖವಾಯಿತು. ಅವನು ಸಕಲಪ್ರಾಣಿಗಳ ಯೋಗಕ್ಷೇಮದಲ್ಲೂ ಆಸಕ್ತಿ ಹೊಂದಿದ್ದನು. ಹಾಗಾಗಿ ಅವನು," ತಥಾಸ್ತು! ನೀವು ಹೇಳಿದಂತೆಯೇ ಮಾಡುತ್ತೇನೆ!" ಎಂದು ಅಭಯವಿತ್ತನು.
   ಇದಿಷ್ಟು ಕನಸು ಮುಗಿದ ಬಳಿಕ ಯುಧಿಷ್ಠಿರನಿಗೆ ನಿದ್ರೆ ಕಳೆದು ಎಚ್ಚರವಾಯಿತು.‌ ಅವನಿಗೆ ಆಗ ಕನಸಿನ ವಿಷಯ ಕಾಡತೊಡಗಿತು. ಪ್ರಾತರ್ವಿಧಿಗಳು ಮುಗಿದ ಬಳಿಕ ತನ್ನ ತಮ್ಮಂದಿರ ಮಧ್ಯೆ ಕುಳಿತುಕೊಂಡು ತನಗಾದ ಕನಸಿನ ಅನುಭವವನ್ನು ಹೇಳಿ," ತಮ್ಮಂದಿರೇ! ಆ ಜಿಂಕೆಗಳ ಮಾತು ಸತ್ಯ! ನಾವು ಈ ಕಾಡಿನ ಪ್ರಾಣಿಗಳ ಮೇಲೆ ಈಗಲಾದರೂ ದಯೆ ತೋರಬೇಕು. ನಾವಿಲ್ಲಿಗೆ ಬಂದು ಒಂದು ವರ್ಷ ಎಂಟು ತಿಂಗಳುಗಳು ಕಳೆದುಹೋಗಿವೆ! ನಾವು ಈ ಪ್ರಾಣಿಗಳಿಂದಲೇ ಜೀವಿಸುತ್ತಿದ್ದೇವೆ! ಆದ್ದರಿಂದ ನಾವೀಗ ಬೇರೆ ಕಾಡಿಗೆ ಹೋಗಬೇಕು. ಅನೇಕಾನೇಕ ಮೃಗಗಳಿಂದಲೂ ಲತಾವೃಕ್ಷಗಳಿಂಜಲೂ ಸಮೃದ್ಧವಾಗಿರುವ, ತೃಣಬಿಂದು ಸರೋವರದ ದಡದಲ್ಲಿರುವ ಕಾಮ್ಯಕವನಕ್ಕೆ ಹೋಗೋಣ!" 
   ಯುಧಿಷ್ಠಿರನು ಹೀಗೆ ಹೇಳಲು, ಎಲ್ಲರೂ ಒಪ್ಪಿದರು. ಅದರಂತೆ ಅವರೆಲ್ಲರೂ ಕಾಮ್ಯಕವನಕ್ಕೆ ಹೋದರು.‌
     ಹೀಗೆ ಪ್ರಾಚೀನ ಭಾರತದಲ್ಲಿ ಬೇಟೆಯಾಡುವುದು ಹಾಗೂ ಮಾಂಸಾಹಾರ ಕಂಡುಬಂದರೂ ಅವುಗಳ ನಿಯಂತ್ರಣವೂ ಕಂಡುಬರುತ್ತದೆ. ಮನುಸ್ಮೃತಿಯ ಒಂದು ಮಾತು ಇಲ್ಲಿ ಮನನೀಯ:
    ನ ಮಾಂಸಭಕ್ಷಣೇ ದೋಷೋ ನಾ ಮದ್ಯೇ ನ ಚ ಮೈಥುನೇ /
ಪ್ರವೃತ್ತಿರೇಷಾ ಭೂತಾನಾಂ ನಿವೃತ್ತಿಸ್ತು ಮಹಾಫಲಾ //
    ' ಮಾಂಸಭಕ್ಷಣೆಯಲ್ಲಿ, ಮದ್ಯಪಾನದಲ್ಲಿ ಹಾಗೂ ಮೈಥುನದಲ್ಲಿ ದೋಷವಿಲ್ಲ. ಏಕೆಂದರೆ ಇದು ಮನುಷ್ಯರಿಗೆ ಸಹಜವಾದ ಪ್ರವೃತ್ತಿ. ಆದರೆ ಇದರ ನಿವೃತ್ತಿಯಿಂದ ಮಹಾಫಲವುಂಟಾಗುತ್ತದೆ.' 
   ಹೀಗೆ ಕೆಲವರಿಗೆ ಮಾಂಸಾಹಾರ ಬೇಕಾಗುತ್ತದೆ. ಅದು ತಪ್ಪಲ್ಲ. ಆದರೆ ಅದನ್ನು ಬಿಟ್ಟರೆ ಅಥವಾ ಕಡಿಮೆ ಮಾಡಿದರೆ ಒಳ್ಳೆಯದು. ಹೀಗೆ ನಾವು ಪ್ರಾಚೀನ ಭಾರತದ ಗ್ರಂಥಗಳಲ್ಲಿ, ಸಂದರ್ಭಗಳಲ್ಲಿ ಪ್ರಾಣಿಗಳ ಸಂರಕ್ಷಣೆಯ ವಿಚಾರವನ್ನು ನೋಡಬಹುದು.

ಸೋಮವಾರ, ಮೇ 18, 2026

ಸುಂದರೀಶತಕ -೪೦

ಸಂಸ್ಕೃತ ಮೂಲ 

ಕುಂಚನ್ಮೃದುಕರಶಾಖಾಕೃಷ್ಟಾಂಚಲಕೋಣತಿರ್ಯಗುಲ್ಲಸಿತ: /
ಲಕ್ಷೀಕರೋತಿ ಧನ್ಯಂ ಸುಂದರಿ ದೀರ್ಘ: ಕಟಾಕ್ಷಸ್ತೇ //

ಕನ್ನಡ ಅನುವಾದ 

       ' ಎಲೈ ಸುಂದರಿ! ಬಾಗಿದ ನಿನ್ನ ಮೃದುವಾದ ಕರಶಾಖೆಗಳಿಂದ ( ಬೆರಳುಗಳಿಂದ) ನಿನ್ನ ಸೆರಗಿನ ಅಂಚನ್ನು ಎಳೆಯುತ್ತಾ ಕಣ್ಣಿನ ಕೋನದಿಂದ ಓರೆಯಾದ ದೀರ್ಘ ಕಟಾಕ್ಷದ ಹೊಳೆಯುವ ನೋಟ ಬೀರುತ್ತಾ ಧನ್ಯನಾದ ಪುರುಷನೊಬ್ಬನನ್ನು ನಿನ್ನ ಲಕ್ಷ್ಯಕ್ಕೆ ತರುತ್ತಿರುವೆ!' 
     ಹೆಣ್ಣು ಓರೆ ನೋಟ ಬೀರಿ ನೋಡುವ ಸೌಂದರ್ಯವನ್ನು ಎಷ್ಟು ಹೊಗಳದರೂ ಕವಿಗೆ ತೃಪ್ತಿಯಿಲ್ಲ! ಮತ್ತೆ ಮತ್ತೆ ಬೇರೆ ಬೇರೆ ರೀತಿಯಲ್ಲಿ ಅವನು ಅದೇ ವಿಷಯವನ್ನು ಹೊಗಳುತ್ತಿದ್ದಾನೆ! ಅಂಥ ನೋಟಕ್ಕೆ ಗುರಿಯಾಗಿರುವ ಪುರುಷ ನಿಜಕ್ಕೂ ಧನ್ಯ ಎಂದು ಹೇಳುತ್ತಿದ್ದಾನೆ! ಇಲ್ಲಿ ಸುಂದರಿಯ ಮೃದುವಾದ ಕೈಬೆರಳುಗಳನ್ನು ಕೋಮಲವಾದ ಎಳೆ ಶಾಖೆಗಳಿಗೆ ಹೋಲಿಸಿರುವುದು ರಮ್ಯವಾಗಿದೆ! ಹೆಣ್ಣಿನ ಎಲ್ಲಾ ಅಂಗಗಳೂ ಅತ್ಯಂತ ಕೋಮಲ! ಅಷ್ಟೇ ಅಲ್ಲದೆ ಅವಳ ಮಾತು, ನಗೆ, ನೋಟ, ಎಲ್ಲವೂ ಕೋಮಲ ಹಾಗೂ ರಮ್ಯ! ಇಂಥ ಸುಂದರ ಹೆಣ್ಣಿನ ಕಣ್ಣೋಟ ಬಿದ್ದರೂ ಪುರುಷ ಧನ್ಯನಲ್ಲವೇ? 

ಸುಂದರೀಶತಕ -೩೯

ಸಂಸ್ಕೃತ ಮೂಲ 

ಸುಂದರಿ ವಿವೃತ್ಯ ದೃಷ್ಟ: ಕಷ್ಟಮಪಾಂಗೇನ ಭುಜಗೇನ /
ಅಧರಾಮೃತೇನ ಜೀವತಿ ಸೋsಯಮುಪಾಯಾಂತರಾಸಾಧ್ಯ: //

ಕನ್ನಡ ಅನುವಾದ 

     ' ಎಲೈ ಸುಂದರಿ! ನೀನು ಹಿಂದೆ ತಿರುಗಿ ನಿನ್ನ ಸರ್ಪವೆಂಬ ಕಡೆಗಣ್ಣ ಕುಡಿನೋಟ ಬೀರಿ ಇವನಿಗೆ ( ನಿನ್ನ ಪ್ರೇಮಿಗೆ) ಕಷ್ಟ ತಂದಿರುವೆ! ಈಗ ಇವನು ನಿನ್ನ ಅಧರಾಮೃತದಿಂದಷ್ಟೇ ಜೀವಿಸುತ್ತಾನೆ! ಬೇರಾವ ಉಪಾಯದಿಂದಲೂ ಸಾಧ್ಯವಿಲ್ಲ!'
       ಇಲ್ಲಿ ಕವಿಯು ಹೆಣ್ಣಿನ ಕಡೆಗಣ್ಣ ಕುಡಿನೋಟವನ್ನು ಸರ್ಪಕ್ಕೆ ಹೋಲಿಸಿದ್ದಾನೆ! ಅದು ಸರ್ಪವೇ ಎಂದು ಹೇಳಿರುವುದರಿಂದ ಇಲ್ಲಿ ರೂಪಕಾಲಂಕಾರವಿದೆ. ಆ ನೋಟ ಅವಳ ಪ್ರೇಮಿಗೆ ಸರ್ಪ ಕಚ್ಚಿದಂತಾಗಿ ಮೈಯೆಲ್ಲಾ ಪ್ರೇಮದ ವಿಷವೇರಿದೆ! ಈಗ ಅವನನ್ನು ಬದುಕಿಸುವುದು ಹೇಗೆ? ಅದಕ್ಕೆ ಇರುವ ಒಂದೇ ಉಪಾಯವೆಂದರೆ ಅವಳ ಅಧರಾಮೃತಪಾನ! ಬೇರಾವ ಉಪಾಯದಿಂದಲೂ ಸಾಧ್ಯವಿಲ್ಲ ಎನ್ನುತ್ತಾನೆ ಕವಿ! ಹೌದಲ್ಲವೇ?

ಸುಂದರೀಶತಕ -೩೮

ಸಂಸ್ಕೃತ ಮೂಲ 

ತವ ಸುಂದರಿ ಮಧುರಸ್ಮಿತಮೇದುರಮಚ್ಚಕ್ಷುರಭಿಮುಖಂ ಚಕ್ಷು: /
ಶರದಿಂದುಕಿರಣತುಂದಿಲಕುಮುದೋನ್ಮುಖಮಧುಪಮನುಹರತೇ //

ಕನ್ನಡ ಅನುವಾದ 

    ' ಎಲೈ ಸುಂದರಿ! ಮಧುರವಾದ ನಗುವಿನಿಂದ ಕೂಡಿರುವ ನಿನ್ನ ಕಣ್ಣು ನನ್ನ ಕಣ್ಣಿನ ಮುಂದಿರಲು, ಶರತ್ಕಾಲದ ಚಂದಿರನ ಕಿರಣಗಳಿಂದ ಅರಳಿದ ಕುಮುದ ಪುಷ್ಪದ ಮುಂದೆ ಇರುವ ಭ್ರಮರದಂತಿದೆ! ' 
       ಪ್ರೇಮಿಗಳು ಒಬ್ಬರನ್ನೊಬ್ಬರು ನೋಡುತ್ತಾ ಕುಳಿತರೆ ಜಗತ್ತನ್ನೇ ಮರೆಯುವರು! ಹಾಗೆಯೇ ಇಲ್ಲಿ ಇಬ್ಬರು ಪ್ರೇಮಿಗಳು ಪರಸ್ಪರ ನೋಡುತ್ತಾ ಕುಳಿತಿದ್ದಾರೆ.‌ ನಗುವಿನಿಂದ ಕೂಡಿರುವ ಸುಂದರಿಯ ಕಣ್ಣು ಪ್ರಿಯತಮನ ಕಣ್ಣಿನ ಮುಂದಿದ್ದರೆ, ಪ್ರಿಯತಮನ ಮುಖ, ಶರತ್ಕಾಲದ ಚಂದ್ರಮನ ಕಿರಣಗಳಿಂದ ಅರಳಿದ ಕುಮುದ ಪುಷ್ಪದಂತೆ ಅರಳಿದೆ. ಅದನ್ನು ನೋಡುತ್ತಿರುವ ಪ್ರಿಯತಮೆಯ ಕಣ್ಣು, ಭ್ರಮರದಂತೆ ಆಉರ್ಷಿತವಾಗಿದೆ! ಹೀಗೆ ಕವಿಯು ಪ್ರಿಯತಮನ ಮುಖವನ್ನು ಅರಳಿದ ಕುಮುದ ಪುಷ್ಪಕ್ಕೂ ಪ್ರಿಯತಮೆಯ ಕಣ್ಣನ್ನು ಭ್ರಮರಕ್ಕೂ ಹೋಲಿಸಿ ಅವನ ಬಾಯಲ್ಲೇ ಹೇಳಿಸಿದ್ದಾನೆ. ಇಲ್ಲಿ ಉಪಮಾಲಂಕಾರವಿದೆ. ಕಮಲ ಪುಷ್ಪಗಳು ಸೂರ್ಯನ ಕಿರಣಗಳಿಗೆ ಅರಳಿದರೆ ಕುಮುದ ಪುಷ್ಪಗಳು ಅಥವಾ ಬಿಳಿ ನೈದಿಲೆಗಳು ಚಂದ್ರಕಿರಣಗಳಿಗೆ ಅರಳುತ್ತವೆ.

ಬುಧವಾರ, ಮೇ 13, 2026

ಸುಂದರೀಶತಕ -೩೭

ಸಂಸ್ಕೃತ ಮೂಲ 

ಪಶ್ಯತ್ಯಸಮ್ಮುಖಂ ಮಾಂ ಮಯಿ ಪಶ್ಯತಿ ಸಾಥ ಸಮ್ಮುಖೀಭವತಿ /
ಸ್ಮರಮೇಕತೋsವರೋಹೈ: ಶ್ರಮಯತಿ ಕೋಟಿದ್ವಯೇ ಮೌರ್ವೀ //

ಕನ್ನಡ ಅನುವಾದ 

     ' ನಾನು ಅವಳ ಕಡೆ ನೋಡುವಾಗ ಅವಳು ಬೇರೆ ಕಡೆ ನೋಡುತ್ತಾಳೆ! ನಾನು ಬೇರೆ ಕಡೆ ನೋಡುವಾಗ ಅವಳು ನನ್ನ ಕಡೆ ನೋಡುತ್ತಾಳೆ! ಹೀಗೆ ನಾನು ಅವಳತ್ತ ನೋಡಿದಾಗ ತನ್ನ ಕಂಗಳನ್ನು ಕೆಳಗೆ ಮಾಡುತ್ತಾ ಮತ್ತು ಬೇರೆ ಕಡೆ ನೋಡಿದಾಗ ಮೇಲೆ ಮಾಡುತ್ತಾ ಅವಳು ಕಾಮದೇವನ ಬಿಲ್ಲಿನ ಎರಡೂ ತುದಿಗಳಲ್ಲಿ ಅದರ ಶಿಂಜಿನಿಗೆ ಶ್ರಮವುಂಟುಮಾಡುತ್ತಾಳೆ!' 
     ಹೆಣ್ಣಿಗೆ ತನ್ನ ನಲ್ಲನನ್ನು ನೋಡುವ ಆಸೆ. ಆದರೆ ನಾಚಿಕೆ ಅಡ್ಡ ಬರುತ್ತಿದೆ. ಹಾಗಾಗಿ ಅವನು ಅವಳತ್ತ ನೋಡಿದಾಗ ಅವಳು ಬೇರೆ ಕಡೆ ನೋಡುತ್ತಾಳೆ! ಆದರೆ ಅವನು ಬೇರೆ ಕಡೆ ನೋಡಿದಾಗ ಅವಳು ಅವನತ್ತ ನೋಡುತ್ತಾಳೆ. ತಾನು ನೋಡಿದ್ದು ಅವನಿಗೆ ತಿಳಿಯಬಾರದೆಂದು ಕದ್ದು ಕದ್ದು ನೋಡುತ್ತಾಳೆ! ಹುಡುಗಿಯರ ಈ ನಾಚಿಕೆಯ ಸ್ವಭಾವ ಬಹಳ ಸ್ವಾರಸ್ಯಕರವಾಗಿರುತ್ತದೆ ಹಾಗೂ ಆನಂದ ಕೊಡುತ್ತದೆ. ಹೆಣ್ಣಿಗೆ ಸಹಜವಾಗಿರುವ ನಾಚಿಕೆಯ ಸ್ವಭಾವ ಒಂದು ಕಲಾತ್ಮಕ ಸ್ಥಿತಿ ತರುತ್ತದೆ ಕೂಡ! ಅದನ್ನು ಕವಿಯು ಗಮನಿಸಿ ಸೊಗಸಾಗಿ ಚಿತ್ರಿಸಿದ್ದಾನೆ. ಅದು ಮನ್ಮಥನು ತನ್ನ ಬಿಲ್ಲಿನ ಶಿಂಜಿನಿಯನ್ನು ಹಿಂದೆ ಮುಂದೆ ಎಳೆಯುವಂತಿದೆ ಹಾಗೂ ಆ ಬಿಲ್ಲಿನ ಎರಡೂ ತುದಿಗಳಲ್ಲಿ ಶಿಂಜಿನಿಗೆ ಶ್ರಮವುಂಟುಮಾಡುವಂತಿದೆ ಎಂದು ಹೇಳುತ್ತಾನೆ ಕವಿ. ಇಲ್ಲಿ ಕವಿಯು ಅವಳ ಡೊಂಕಾದ ಹುಬ್ಬುಗಳನ್ನು ಬಿಲ್ಲಿಗೆ ಹೋಲಿಸಿ ಹಾಗೂ ಅವಳ ನೋಟಗಳನ್ನು ಶಿಂಜಿನಿಗೆ ಹೋಲಿಸಿ, ಅವಳು ಕಂಗಳನ್ನು ಮೇಲೆ ಕೆಳಗೆ ಮಾಡುವುದು ಆ ಶಿಂಜಿನಿಯನ್ನು ಹಿಂದೆ ಮುಂದೆ ಎಳೆಯುವಂತೆ ಹಾಗೂ ಬಿಲ್ಲಿನ ಎರಡೂ ತುದಿಗಳಲ್ಲಿ ಅದಕ್ಕೆ ಶ್ರಮವುಂಟುಮಾಡುವಂತಿದೆ ಎಂದು ಹೇಳುತ್ತಾನೆ.

ಮಂಗಳವಾರ, ಮೇ 12, 2026

ಸುಂದರೀಶತಕ -೩೬

ಸಂಸ್ಕೃತ ಮೂಲ 

ತರುಣಿ ತರಲನಯನಾಂತಂ ವಲಿತಗ್ರೀವಂ ವಧೂತಚೇಲಾಂತಮ್ /
ಭವನದ್ವಾರಿ ವಿಶಂತ್ಯಾಸ್ತವ ದೃಷ್ಟಂ ದ್ರಷ್ಟುಮುತ್ಕಂಠೇ //

ಕನ್ನಡ ಅನುವಾದ 

    ' ಎಲೈ ತರುಣಿ! ನೀನು ಭವನದ ದ್ವಾರವನ್ನು ಪ್ರವೇಶಿಸುವಾಗ, ನಿನ್ನ ಸೆರಗಿನ ಅಂಚು ಗಾಳಿಗೆ ಹಾರುತ್ತಿರಲು, ನಿನ್ನ ಕುತ್ತಿಗೆಯನ್ನು ಸ್ವಲ್ಪ ತಿರುಗಿಸಿ, ಚಂಚಲವಾದ ನಿನ್ನ ಕಂಗಳಿಂದ ನನ್ನನ್ನು ನೋಡಿದ ಆ ನೋಟವನ್ನು ಮತ್ತೊಮ್ಮೆ ನೋಡಲು ನಾನು ಉತ್ಕಂಠಿತನಾಗಿದ್ದೇನೆ!' 
      ಪ್ರೇಮಿಯೊಂದಿಗೆ ಅವನ ಪ್ರಿಯತಮೆಯು ತನ್ನ ಭೇಟಿಯನ್ನು ಮುಗಿಸಿಕೊಂಡು ಮನೆಗೆ ಹೋಗಿ ಅದರ ದ್ವಾರವನ್ನು ಪ್ರವೇಶಿಸುವಾಗ ಅಥವಾ ಇನ್ನಾವುದೋ ಸಂದರ್ಭದಲ್ಲಿ ಹೊರಗೆ ಹೋಗಿದ್ದ ಅವಳು ಮನೆಯ ದ್ವಾರವನ್ನು ಪ್ರವೇಶಿಸುವಾಗ ಅವನನ್ನು ಕಂಡು ಕುತ್ತಿಗೆಯನ್ನು ಸ್ವಲ್ಪ ತಿರುಗಿಸಿ ಚಂಚಲವಾದ ಕಂಗಳಿಂದ ಅವನನ್ನು ನೋಡಿದ್ದಾಳೆ! ಆಗ ಅವಳ ಸೆರಗು ಗಾಳಿಗೆ ಹಾರಾಡುತ್ತಿತ್ತು! ಅವಳು ಇನ್ನೇನು ಒಳಗೆ ಹೋಗಬೇಕು, ಅಷ್ಟರಲ್ಲಿ ಅವನನ್ನು ನೋಡುವ ಕಾತುರತೆಯಿಂದ ಅಲ್ಲೇ ನಿಂತು ನೋಡಿದ್ದಾಳೆ! ಆ ದೃಶ್ಯ ಅವನಲ್ಲಿ ಒಂದು ಚಿತ್ರದಂತೆ ನೆಟ್ಟಿದೆ! ಅದನ್ನು ಅವನು ಮರೆಯಲು ಸಾಧ್ಯವೇ ಇಲ್ಲ! ಪ್ರಾಯದ ಹುಡುಗಿಯರು ಆಡುವ ಮಾತು, ನೋಡುವ ನೋಟ, ಅವರ ನಗು, ಕಂಗಳ ಚಂಚಲತೆ, ಎಲ್ಲವೂ ಅತ್ಯಂತ ಸುಂದರವಾದ ಚರ್ಯೆಗಳು! ಮಧುರಾತಿಮಧುರವಾದವುಗಳು! ಅಂಥ ಸುಂದರ ನೋಟವನ್ನು ಮತ್ತೊಮ್ಮೆ ನೋಡಲು ಪ್ರೇಮಿಯು ಉತ್ಕಂಠಿತನಾಗಿದ್ದು ಅದನ್ನು ಅವನು ಅವಳಿಗೇ ಹೇಳುತ್ತಿದ್ದಾನೆ! ಇಂಥ ಸುಂದರ ಚರ್ಯೆಗಳನ್ನು ಕವಿಯು ಗಮನಿಸಿ ಪದ್ಯಗಳ ರೂಪದಲ್ಲಿ ನಮಗೆ ಸೊಗಸಾಗಿ ಕಟ್ಟಿಕೊಟ್ಟಿದ್ದಾನೆ.

ಭಾನುವಾರ, ಮೇ 10, 2026

ಸುಂದರೀಶತಕ -೩೫

ಸಂಸ್ಕೃತ ಮೂಲ 

ಸಸ್ಮಿತಮುಖಮವಧೀರಿತಚೇಲಾಂಚಲಮೀಷದಾನತಗ್ರೀವಮ್ /
ತಿರ್ಯಗ್ವಿಲೋಕಯಂತ್ಯಾ ಕೋsಪಿ ಕೃತೀ ಲಕ್ಷಿತ: ಕ್ರಿಯತೇ //

ಕನ್ನಡ ಅನುವಾದ 

     ' ಆ ಸುಂದರಿಯು ತನ್ನ ಸೆರಗು ಜಾರಿರಲು, ಅದರ ಕಡೆಗೆ ಗಮನವಿಲ್ಲದೆ, ಕುತ್ತಿಗೆಯನ್ನು ಸ್ವಲ್ಪ ಬಾಗಿಸಿ, ನಗುವಿನಿಂದ ಕೂಡಿದ ಮುಖವುಳ್ಳವಳಾಗಿ, ಕಡೆಗಣ್ಣಿನಿಂದ ನೋಡುತ್ತಾ, ಯಾರೋ ಭಾಗ್ಯವಂತನನ್ನು ತನ್ನ ಲಕ್ಷ್ಯಕ್ಕೆ ತರುತ್ತಿದ್ದಾಳೆ!' 
    ಹೆಣ್ಣಿನ ನಗುಮುಖದ ನಾಚಿಕೆಯ ಈ ನೋಟ ಯಾವ ಗಂಡಿನ ಮೇಲಾದರೂ ಬಿದ್ದರೆ, ಆ ಗಂಡು ಭಾಗ್ಯವಂತನಲ್ಲದೇ ಮತ್ತೇನು? ಹೀಗೆ ಗಂಡನ್ನು ನೇರವಾಗಿ ನೋಡದೇ, ಓರೆ ನೋಟದಲ್ಲಿ ನಗುತ್ತಾ ನೋಡುವ ಹೆಣ್ಣಿನ ಈ ಸುಂದರ ಚಿತ್ರಣವನ್ನು ಯಾರೂ ಅನುಕರಿಸಲಾಗುವುದಿಲ್ಲ! ಅದು ಹೆಣ್ಣಿಗಷ್ಟೇ ಸೀಮಿತವಾಗಿರುವ ಕಲೆ. ಅಂಥ ಸುಂದರ ಕಲಾತ್ಮಕ ನೋಟವನ್ನು ಚಿತ್ರಿಸುತ್ತಾ ಕವಿಯು, ಯಾರೋ ಭಾಗ್ಯವಂತ ಪುರುಷ ಅವಳ ಲಕ್ಷ್ಯಕ್ಕೆ ಬೀಳುತ್ತಿದ್ದಾನೆ ಎನ್ನುತ್ತಾನೆ. 

ಸುಂದರೀಶತಕ -೩೪

ಸಂಸ್ಕೃತ ಮೂಲ 

ಅಧರದಲೋಪರಿ ನಿಹಿತಂ ಮುಕ್ತಾಚೂರ್ಣೇ ದರಸ್ಮಿತಂ ತಸ್ಯಾ: /
ಆಸ್ವಾದ್ಯೋಚ್ಛೂನಮಿದಂ ಮನೋ ಮಮ ಸ್ನೇಹಮಭಿಲಷತಿ //

ಕನ್ನಡ ಅನುವಾದ 
    ' ಈ ಸುಂದರಿಯ ನಗು, ಇವಳ ಅಧರದಳದ ಮೇಲಿರುವ ಮುತ್ತಿನ ಚೂರ್ಣದಂತಿದೆ! ಅದನ್ನು ಆಸ್ವಾದಿಸಿ ಪ್ರಫುಲ್ಲಿತವಾಗಿರುವ ನನ್ನ ಮನಸ್ಸು ಈಗ ಅವಳ ಸಂಪೂರ್ಣ ಪ್ರೇಮವನ್ನು ಆಶಿಸುತ್ತಿದೆ!' 
     ಹೆಣ್ಣಿನ ಸುಂದರ ನಗುವನ್ನು ಕವಿಯು ಇಲ್ಲಿ ಅವಳ ಅಧರವೆಂಬ ದಳದ ಮೇಲಿರುವ ಮುತ್ತಿನ ಚೂರ್ಣಕ್ಕೆ ಹೋಲಿಸುತ್ತಾನೆ! ಇಂಥ ಅದ್ಭುತ ನಗುವನ್ನು ಆಸ್ವಾದಿಸಿದ ಪ್ರೇಮಿಗೆ ಮನಸ್ಸು ಅರಳಿದ ಹೂವಿನಂತೆ ತುಂಬಿ ಬಂದಿದೆ! ಅವಳ ನಗುವೇ ಅಷ್ಟು ಆಪ್ಯಾಯಮಾನವಾಗಿರುವಾಗ ಇನ್ನು ಅವಳ ಪೂರ್ಣ ಪ್ರೇಮ ಹೇಗಿರಬೇಡ? ಅಂತೆಯೇ ಪ್ರೇಮಿಯು ಅವಳ ಪೂರ್ಣ ಪ್ರೇಮವನ್ನು ಈಗ ಅಪೇಕ್ಷಿಸುತ್ತಿದ್ದಾನೆ! ಎಂಥ ಜಡ ವ್ಯಕ್ತಿಯಲ್ಲೂ ಪ್ರೇಮದ ತರಂಗಗಳನ್ನು ಎಬ್ಬಿಸಬಲ್ಲದು ಹೆಣ್ಣಿನ ನಗು!

ಬುಧವಾರ, ಮೇ 6, 2026

ಐತಿಹಾಸಿಕ ಸ್ವಾರಸ್ಯಗಳು - ಕಾಲಾಶೋಕ ಯಾರು?

ಕಾಲಾಶೋಕನ ಹೆಸರು ಕೇಳಿರುವಿರಾ? ಚಂಡಾಶೋಕ ಗೊತ್ತು, ಧರ್ಮಾಶೋಕ ಗೊತ್ತು, ವೀತಶೋಕ ಗೊತ್ತು......ಈ ಕಾಲಾಶೋಕ ಯಾರು?! ಚಂಡಾಶೋಕ ಎಂದರೆ ಸಮ್ರಾಟ್ ಅಶೋಕನು ಬಹಳ ಆವೇಶದ ಸ್ವಭಾವದವನಾಗಿದ್ದಾಗ ಅವನನ್ನು ಕರೆಯುತ್ತಿದ್ದ ಹೆಸರು. ಧರ್ಮಾಶೋಕ ಎಂಬುದು ಅವನು ಬೌದ್ಧ ಧರ್ಮದ ಅನುಯಾಯಿಯಾದಾಗ ಧರ್ಮವನ್ನು ಪಾಲಿಸುತ್ತಿದ್ದುದರಿಂದ ಅವನನ್ನು ಕರೆಯುತ್ತಿದ್ದ ಹೆಸರು. ವೀತಶೋಕ ಅವನ ಸಹೋದರರಲ್ಲಿ ಉಳಿದುಕೊಂಡ ಏಕೈಕನು. ಹಾಗಿದ್ದರೆ ಕಾಲಾಶೋಕ ಯಾರು?
     ಕಾಲಾಶೋಕ, ಅಶೋಕನಿಗೆ ಸಂಬಂಧಿಸಿರದ ಬೇರೊಬ್ಬ ರಾಜ. ಅಶೋಕನಿಗಿಂತಲೂ ಮುಂಚಿನವನು. ಅವನು ಶಿಶುನಾಗ ವಂಶದ ಕೊನೆಯ ರಾಜ.‌ ಕಾಲಾಶೋಕ ಎಂದರೆ ಕಪ್ಪು ಅಶೋಕ ಎಂದು ಅರ್ಥ ಬರುತ್ತದೆ. ಅವನಿಗೆ ಕಾಕವರ್ಣ ಎಂದೂ ಹೆಸರಿತ್ತು. ಪ್ರಾಯಶಃ ಅವನು ಕಪ್ಪಗಿದ್ದುದರಿಂದ ಈ ಹೆಸರನ್ನಿಟ್ಟಿದ್ದರೋ ಏನೋ! 
     ಪ್ರಾಚೀನ ಭಾರತದ ರಾಜ್ಯಗಳನ್ನು ಮಹಾಜನಪದಗಳೆಂದು ಕರೆಯುತ್ತಿದ್ದರು. ಬೌದ್ಧ ಗ್ರಂಥಗಳು ಅಂಥ ಹದಿನಾರು ಮಹಾಜನಪದಗಳನ್ನು ಹೆಸರಿಸುತ್ತವೆ. ಗಾಂಧಾರ, ಮತ್ಸ್ಯ, ಕೋಸಲ, ಶೂರಸೇನ, ಕಾಂಭೋಜ, ವತ್ಸ, ಕುರು, ಪಾಂಚಾಲ, ಕಾಶಿ, ಅವಂತಿ, ಮಲ್ಲ, ವೃಜ್ಜಿ, ಅಂಗ, ಮಗಧ, ಚೇದಿ, ಅಶ್ಮಕ, ಇವೇ ಆ ಹದಿನಾಲ್ಕು ಮಹಾಜನಪದಗಳು. ಇವಲ್ಲದೆ ಇನ್ನೂ ಅನೇಕ ರಾಜ್ಯಗಳಿದ್ದವು. ಇವುಗಳಲ್ಲಿ ಮಗಧವು ದೊಡ್ಡ ಸಾಮ್ರಾಜ್ಯವಾಗಿ ಬೆಳೆಯಿತು. ಮಗಧ ದೇಶದಲ್ಲಿ ಹರ್ಯಂಕ ಸಾಮ್ರಾಜ್ಯ ಅಳುತ್ತಿತ್ತು. ಅದರ ಪ್ರಮುಖ ರಾಜ ಬಿಂಬಿಸಾರ. ಅವನು ಬುದ್ಧನ ಸಮಕಾಲೀನನಾಗಿದ್ದನು. ಅವನು ಒಳ್ಳೆಯ ರಾಜನಾಗಿದ್ದರೂ ದುರದೃಷ್ಟವಶಾತ್, ಅವನ ಮಗ ಅಜಾತಶತ್ರು ಅವನನ್ನು ಕೊಂದುಬಿಟ್ಟನು! ಅದಕ್ಕೆ ಕಾರಣ, ಬುದ್ಧನ ದಾಯಾದಿ ದೇವದತ್ತನ ದುರ್ಬೋಧೆ ಎನ್ನುತ್ತವೆ ಬೌದ್ಧ ಗ್ರಂಥಗಳು. ಆದರೆ ಜೈನ ಗ್ರಂಥಗಳ ಪ್ರಕಾರ, ಅಜಾತಶತ್ರು ಅವನನ್ನು ಬಂಧಿಸಿದ್ದು, ಕೊನೆಗೆ ತನ್ನ ತಾಯಿ ಚೆಲ್ಲನಳಿಂದ ತನ್ನ ತಪ್ಪನ್ನರಿತು, ತಂದೆಯ ಸರಪಣಿಗಳನ್ನು ಕತ್ತರಿಸಿ ಅವನನ್ನು ಬಂಧಮುಕ್ತನನ್ನಾಗಿಸಲು ಕಬ್ಬಿಣದ ದೊಣ್ಣೆ ಹಿಡಿದು ಕಾರಾಗೃಹಕ್ಕೆ ಅವನು ಓಡಿ ಬರುವಾಗ, ಅದನ್ನು ನೋಡಿ ತಪ್ಪು ತಿಳಿದು ಬಿಂಬಿಸಾರ ತಾನೇ ಆತ್ಮಹತ್ಯೆ ಮಾಡಿಕೊಂಡ! ಒಟ್ಟಿನಲ್ಲಿ ಮಗನ ದೆಸೆಯಿಂದ ತಂದೆ ಮೃತ್ಯುವಶನಾದ! 
      ಅಜಾತಶತ್ರುವಿಗೆ ಉದಯಭದ್ರ ಅಥವಾ ಉದಾಯಿನ್ ಎಂಬ ಪುತ್ರನಿದ್ದ. ಇವನೇ ಪಾಟಲಿಪುತ್ರ ನಗರವನ್ನು ನಿರ್ಮಿಸಿ ತನ್ನ ರಾಜಧಾನಿಯನ್ನು ರಾಜಗೃಹದಿಂದ ಅಲ್ಲಿಗೆ ವರ್ಗಾಯಿಸಿದ. ದುರದೃಷ್ಟವಶಾತ್ ಇವನೂ ತನ್ನ ತಂದೆ ಅಜಾತಶತ್ರುವನ್ನು ಕೊಂದ! ಅನಂತರ ಇವನ ಮಗ ಅನುರುದ್ಧ, ಅವನು ಮಗ ಮುಂಡ, ಮತ್ತು ಅವನ ಮಗ ನಾಗದಾಸಕ, ಮಗ ಅಪ್ಪನನ್ನು ಕೊಲ್ಲುವ ಅದೇ ದಾರಿಯಲ್ಲಿ ನಡೆದರು! ಇದರಿಂದ ಪ್ರಜೆಗಳು ರೋಸಿಹೋಗಿ ನಾಗದಾಸಕನನ್ನು ರಾಜ್ಯದಿಂದಲೇ ಓಡಿಸಿ ಒಬ್ಬ ಅಮಾತ್ಯನನ್ನು ಪಟ್ಟಕ್ಕೇರಿಸಿದರು. ಅವನೇ ಶಿಶುನಾಗ.‌ ಶಿಶುನಾಗನು ಪ್ರದ್ಯೋತರನ್ನು ಸೋಲಿಸಿ ಅವಂತಿಯನ್ನು ಗೆದ್ದು ವಶಪಡಿಸಿಕೊಂಡನು.‌ಈ ಶಿಶುನಾಗನ ಮಗನೇ ಕಾಲಾಶೋಕ. ಈ ಕಾಲಾಶೋಕ ಅಥವಾ ಕಾಕವರ್ಣ. ಕಾಲಾಶೋಕ, ತನ್ನ ರಾಜಧಾನಿಯನ್ನು ಗಿರಿವ್ರಜದಿಂದ ( ರಾಜಗೃಹ) ಪಾಟಲಿಪುತ್ರಕ್ಕೆ ಬದಲಿಸಿದ. ಆದರೆ ಆಗಾಗ ಅವನು ತನಗೆ ಪ್ರಿಯವಾಗಿದ್ದ ವೈಶಾಲಿಗೆ ಹೋಗುತ್ತಿದ್ದ.
 ಕಾಲಾಶೋಕ ನಮಗೆ ಏಕೆ ಮುಖ್ಯನಾಗುವನೆಂದರೆ, ಇವನ ಆಳ್ವಿಕೆಯ ಸಮಯದಲ್ಲೇ ಎರಡನೇ ಬೌದ್ಧ ಸಂಗೀತಿ ವೈಶಾಲಿಯಲ್ಲಿ ನಡೆಯಿತು. ಆಗ ಬುದ್ಧನು ಪರಿನಿರ್ವಾಣ ಹೊಂದಿ ನೂರು ವರ್ಷಗಳಾಗಿದ್ದವು. ವೃಜ್ಜಿ ಗಣದ ಕೆಲವು ಬೌದ್ಧ ಸಂನ್ಯಾಸಿಗಳು ಸಂಘದ ನಿಯಮಗಳನ್ನು ಸಡಿಲಗೊಳಿಸಬೇಕೆಂದು ತಗಾದೆ ತೆಗೆದಿದ್ದರು. ಅದನ್ನು ಚರ್ಚಿಸಲೆಂದೇ ಈ ಎರಡನೆಯ ಬೌದ್ಧ ಸಂಗೀತಿಯನ್ನು ನಡೆಸಲಾಯಿತು. ನಾಲ್ಕು ಬೌದ್ಧ ಸಂಗೀತಿಗಳು ನಡೆದವೆಂದು ಇಲ್ಲಿ ಸ್ಮರಿಸಬಹುದು. ಮೊದಲನೆಯದು ಅಜಾತಶತ್ರುವಿನ ಆಳ್ವಿಕೆಯಲ್ಲಿ ರಾಜಗೃಹದಲ್ಲಿ ನಡೆಯಿತು. ಎರಡನೆಯದು ಈಗ ಹೇಳಲಾಯಿತು. ಮೂರನೆಯದು ಸಮ್ರಾಟ್ ಅಶೋಕನ ಆಳ್ವಿಕೆಯಲ್ಲಿ ಪಾಟಲಿಪುತ್ರದಲ್ಲಿ ನಡೆದರೆ, ನಾಲ್ಕನೆಯದು ಕಾಶ್ಮೀರದಲ್ಲಿ ಕನಿಷ್ಕ ರಾಜನ ಆಳ್ವಿಕೆಯಲ್ಲಿ ನಡೆಯಿತು.‌
     ಇಂಥ ಕಾಲಾಶೋಕ ದುರಂತ ಅಂತ್ಯವನ್ನು ಕಂಡನು! ನೋಡಲು ಸುಂದರನಾಗಿ, ಕಟ್ಟುಮಸ್ತಾದ ದೇಹವನ್ನು ಹೊಂದಿದ್ದ ಒಬ್ಬ ಪುರುಷ, ಕಾಲಾಶೋಕನ ರಾಣಿಯನ್ನು ಒಮ್ಮೆ ಆಕರ್ಷಿಸಿದ! ಇವನು ಒಬ್ಬ ಕ್ಷೌರಿಕ ಹಾಗೂ ವೇಶ್ಯೆಯರಿಗೆ ಹುಟ್ಟಿದ ಮಗನಾಗಿದ್ದ! ಅವನು ರಾಣಿಯ ಪ್ರಿಯಕರನಾಗಿ ಅವಳ ಬೆಂಬಲದಿಂದ ಅರಮನೆಗೆ ಬಂದು ರಾಜನಿಗೆ ಹತ್ತಿರವಾದ. ರಾಜನ ವಿಶ್ವಾಸಗಳಿಸಿ, ಒಂದು ದಿನ, ಅವನನ್ನು ಪಾಟಲಿಪುತ್ರದ ಬಳಿ, ಅವನ ಕುತ್ತಿಗೆಯನ್ನು ಕಠಾರಿಯಿಂದ ಸೀಳಿ ಕೊಂದುಬಿಟ್ಟ! ಅನಂತರ, ಅವನ ಹತ್ತು ಪುತ್ರರಿಗೆ ಮೇಲ್ವಿಚಾರಕನಂತೆ ನಟಿಸುತ್ತಾ ಅವರೆಲ್ಲರನ್ನೂ ನಿಧಾನವಾಗಿ ಕೊಂದುಬಿಟ್ಟ! ರಾಣಿಯನ್ನು ವರಿಸಿ ರಾಜ್ಯವನ್ನು ವಶಪಡಿಸಿಕೊಂಡ! ಇವನು ಬೇರಾರೂ ಅಲ್ಲ! ಮಹಾಪದ್ಮನಂದ! ಇವನಿಗೆ ಎಂಟು ಪುತ್ರರು ಜನಿಸಿದರು! ಇವರೆಲ್ಲರೂ ಸೇರಿ ನವನಂದರೆನಿಸಿದರು ಹಾಗೂ ಇವರಿಂದ ನಂದ ವಂಶ ಆರಂಭವಾಯಿತು! ಇವರಲ್ಲಿ ಕೊನೆಯವನೇ ಧನನಂದ! ದೊಡ್ಡ ಸೈನ್ಯವನ್ನು ಇಟ್ಟುಕೊಂಡಿದ್ದ ಈ ನಂದರು ದುರಾಸೆಯ ಪ್ರವೃತ್ತಿಯುಳ್ಳವರಾಗಿದ್ದು ಪ್ರಜೆಗಳನ್ನು ಶೋಷಣೆ ಮಾಡಿದರು! ಇದರಿಂದ ಪ್ರಜೆಗಳು ಇವರನ್ನು ಇಷ್ಟಪಡಲಿಲ್ಲ. ಮುಂದೆ, ಆಚಾರ್ಯ ಚಾಣಕ್ಯನು ಚಂದ್ರಗುಪ್ತ ಮೌರ್ಯನ ಸಹಾಯದಿಂದ ಇವರ ದುರಾಡಳಿತವನ್ನು ಕೊನೆಗೊಳಿಸಿ, ಚಂದ್ರಗುಪ್ತ ಮೌರ್ಯನನ್ನು ರಾಜನಾಗಿ ಸ್ಥಾಪಿಸುವುದರ ಮೂಲಕ ಮೌರ್ಯ ಸಾಮ್ರಾಜ್ಯವನ್ನು ಆರಂಭಿಸಿದನು. ಅದು ಇನ್ನೊಂದು ರೋಚಕ ಕಥೆ.
    ಇದು ಬೌದ್ಧ,ಜೈನ ಗ್ರಂಥಗಳು ಹಾಗೂ ನಮ್ಮ ಪುರಾಣಗಳಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸಗಳಿಂದ ಕಂಡುಬರುತ್ತದೆ. ನಮ್ಮ ಪುರಾಣಗಳಲ್ಲಿ ಶಿಶುನಾಗ ಮತ್ತು ಕಾಕವರ್ಣ ( ಕಾಲಾಶೋಕ) ರನ್ನು ಬಿಂಬಿಸಾರ, ಅಜಾತಶತ್ರುಗಳಿಗೂ ಮೊದಲಿನವರೆಂದು ಹೇಳಲಾಗಿದ್ದು ಈ ಪಟ್ಟಿಯಲ್ಲಿ ಕೊನೆಯದಾಗಿ ನಂದಿವರ್ಧನ ಮತ್ತು ಮಹಾನಂದಿ ಎಂಬ ರಾಜರು ಬರುತ್ತಾರೆ. ಮಹಾನಂದಿಯು ಒಬ್ಬ ಶೂದ್ರ ಸ್ತ್ರೀಯಿಂದ ಪಡೆದ ಪುತ್ರನೇ ಮಹಾಪದ್ಮಪತಿ ಅಥವಾ ಮಹಾಪದ್ಮನಂದ. ಅವನು ಎಲ್ಲಾ ಕ್ಷತ್ರಿಯರನ್ನೂ ನಾಶಮಾಡಿ ನಂದವಂಶವನ್ನು ಆರಂಭಿಸಿದ. ಜೈನ ಗ್ರಂಥ ಪರಿಶಿಷ್ಟ ಪರ್ವದ ಪ್ರಕಾರ, ಮಹಾಪದ್ಮನಂದನು ಒಬ್ಬ ಕ್ಷೌರಿಕ ಹಾಗೂ ವೇಶ್ಯೆಯರಿಗೆ ಹುಟ್ಟಿದ ಮಗನಾಗಿದ್ದ. ಕುರ್ಟಿಯಸ್ ಎಂಬ ಗ್ರೀಕ್ ಇತಿಹಾಸಕಾರನೂ ಅವನು ಒಬ್ಬ ಕ್ಷೌರಿಕ ಎಂದು ಹೇಳುತ್ತಾ ಮೇಲಿನ ಕಥೆ ಕೊಡುತ್ತಾನೆ. ಬೌದ್ಧ ಗ್ರಂಥ ಮಹಾವಂಶದ ಪ್ರಕಾರ, ಅವನು ಉಗ್ರಸೇನನೆಂಬ ಗಡಿಯಲ್ಲಿನ ಕಳ್ಳರ ದೊರೆಯಾಗಿದ್ದು ರಾಜ್ಯಗಳ ಮೇಲೆ ಆಕ್ರಮಣ ಮಾಡುತ್ತಾ ಅವುಗಳನ್ನು ಕಿತ್ತುಕೊಳ್ಳುತ್ತಿದ್ದ. ಹಾಗೆಯೇ ಮಗಧವನ್ನೂ ಆಕ್ರಮಿಸಿ ವಶಪಡಿಸಿಕೊಂಡ. ಇತರ ಎಂಟು ನಂದರು ಅವನ ಸಹೋದರರು. ‌ಹೀಗೆ ನವನಂದರ ಬಗ್ಗೆ ಪುರಾಣಗಳು, ಬೌದ್ಧ ಮತ್ತು ಜೈನ ಗ್ರಂಥಗಳಲ್ಲಿ ಸ್ವಲ್ಪ ವ್ಯತ್ಯಾಸಗಳಿವೆ. ಬಾಣಭಟ್ಟನ ಹರ್ಷಚರಿತೆಯಲ್ಲಿ ಕಾಲಾಶೋಕ ಅಥವಾ ಕಾಕವರ್ಣನು ಕಠಾರಿಯ ಇರಿತದಿಂದ ಸತ್ತ ಉಲ್ಲೇಖವಿದೆ. ಅವಂತಿಯ ಪ್ರದ್ಯೋತನು ಬಿಂಬಿಸಾರನ ಸಮಕಾಲೀನನಾಗಿದ್ದು ಪ್ರದ್ಯೋತರೆಂಬ ವಂಶಾವಳಿಯನ್ನು ಆರಂಭಿಸಿದ.‌ ಇವನಿಗೂ ಬಿಂಬಿಸಾರನಿಗೂ ವೈರತ್ವವಿತ್ತು. ಅಂದರೆ ಮಗಧಕ್ಕೂ ಅವಂತಿಗೂ ವೈರತ್ವವಿತ್ತು. ಶಿಶುನಾಗನು ಪ್ರದ್ಯೋತರನ್ನು ಸೋಲಿಸಿ ಅವಂತಿಯನ್ನು ವಶಪಡಿಸಿಕೊಂಡನೆಂದು ಪುರಾಣಗಳಲ್ಲಿ ಹೇಳಲಾಗಿದೆ. ಆದರೆ ಅದೇ ಪುರಾಣಗಳ ಪ್ರಕಾರ ಅವನು ಬಿಂಬಿಸಾರನಿಗೂ ಪೂರ್ವದಲ್ಲಿದ್ದಿದ್ದರೆ ಹಾಗೆ ಮಾಡಲಾಗುತ್ತಿರಲಿಲ್ಲ. ಹಾಗಾಗಿ, ಅವನು ಮತ್ತು ಅವನ ಪುತ್ರ ಕಾಲಾಶೋಕ, ಬಿಂಬಿಸಾರ, ಅಜಾತಶತ್ರುಗಳ ನಂತರ ಇರುವ ಬೌದ್ಧ ಗ್ರಂಥಗಳ ಪಟ್ಟಿಯೇ ಹೆಚ್ಚು ಸಮರ್ಪಕ ಎಂದು ಇತಿಹಾಸಕಾರರಾದ ಆರ್.ಸಿ.ಮಜುಂದಾರರು ಅಭಿಪ್ರಾಯಪಡುತ್ತಾರೆ.
      ಹೀಗೆ ಕಾಲಾಶೋಕ ನಮಗೆ ಅಷ್ಟು ಪರಿಚಿತವಲ್ಲದ ಹೆಸರು. ಅವನ ಹೆಂಡತಿಯ ಮೋಸದಿಂದ ಅವಳ ಪ್ರಿಯಕರ ಮಹಾಪದ್ಮನಂದನಿಂದ ಕೊಲ್ಲಲ್ಪಟ್ಟ ಅವನಿಂದ ಶಿಶುನಾಗ ವಂಶ ಕೊನೆಯಾಗಿ ನಂದವಂಶ ಆರಂಭವಾಯಿತು. 

ಸೋಮವಾರ, ಮೇ 4, 2026

ಸುಂದರೀಶತಕ -೩೩

ಸಂಸ್ಕೃತ ಮೂಲ 

ಅಂಗಂ ಕೋಮಲಮಂಗಾದಧರೋsಧರತೋsಪಿ ಚಂದ್ರಮುಖಿ ವಚನಮ್ /
ವಚನಾದಪಿ ಸ್ಮಿತಂ ತೇ ತತ್ಕಥಮಂತರ್ಭಿನತ್ತಿ ಮಮ //

ಕನ್ನಡ ಅನುವಾದ 

     ' ಎಲೈ ಚಂದ್ರಮುಖಿ! ನಿನ್ನ ದೇಹವು ಬಹಳ ಕೋಮಲವಾಗಿದೆ! ನಿನ್ನ ದೇಹಕ್ಕಿಂತಲೂ ನಿನ್ನ ಅಧರ ಬಹಳ ಕೋಮಲವಾಗಿದೆ! ಆ ಅಧರಕ್ಕಿಂತಲೂ ನಿನ್ನ ಮಾತು ಕೋಮಲವಾಗಿದೆ! ಇಷ್ಟು ಕೋಮಲವಾಗಿದ್ದರೂ ನಿನ್ನ ನಗುವು ಏಕೆ ನನ್ನ ಹೃದಯವನ್ನು ಸೀಳುತ್ತಿದೆ?!' 
    ಅತ್ಯಂತ ಕೋಮಲವಾದ ಸುಂದರಿಯ ನಗುವು ಪ್ರೇಮಿಯ ಹೃದಯಕ್ಕೆ ಹಿತವನ್ನುಂಟುಮಾಡಬೇಕು. ಆದರೆ ಅದು ಪ್ರೇಮಿಗೆ ಸಿಗದೇ ದೂರವಾಗಿದ್ದಾಗ ವಿರಹವೇದನೆಯುಂಟುಮಾಡಿ ಹೃದಯವನ್ನು ಸೀಳುವಂತಾಗುತ್ತದೆ! ಇಷ್ಟು ಕೋಮಲವಾದ ಸುಂದರಿಯ ನಗುವು ಹೇಗೆ ನನ್ನ ಹೃದಯವನ್ನು ಸೀಳುತ್ತಿದೆ ಎಂದು ಪ್ರೇಮಿಯ ಮೂಲಕ ಹೇಳಿಸುತ್ತಾ ಕವಿಯು ಸಂದೇಹಾಲಂಕಾರದ ಮೂಲಕ ಸುಂದರಿಯ ನಗುವನ್ನು ವರ್ಣಿಸುತ್ತಾನೆ 

ಭಾನುವಾರ, ಮೇ 3, 2026

ಸುಂದರೀಶತಕ -೩೨

ಸಂಸ್ಕೃತ ಮೂಲ 

ಸುಂದರಿ ತವ ಸ್ಮಿತೇನ ಸ್ಫುರಿತಾಧರಪಲ್ಲವಾಂಕಮಿಲಿತೇನ /
ಮಕರಧ್ವಜನೃಪಹಸ್ತೇ ವದ ಕಸ್ಯ ಮನೋ ನ ವಿಕ್ರೀತಮ್ //

ಕನ್ನಡ ಅನುವಾದ 

     ಎಲೈ ಸುಂದರಿ! ಅದುರುತ್ತಿರುವ ನಿನ್ನ ಪಲ್ಲವಾಧರದೊಂದಿಗೆ ಮಿಳಿತವಾಗಿರುವ ನಿನ್ನ ನಗುವಿನಿಂದ ಯಾರ ಮನಸ್ಸು ತಾನೇ ಕಾಮದೇವ ಮಹಾರಾಜನ ಹಸ್ತಕ್ಕೆ ವಿಕ್ರೀತವಾಗುವುದಿಲ್ಲ ಹೇಳು!' 
      ಸುಂದರಿಯ ಸುಂದರ ನಗುವಿನ ಮೂಲಕ ಮಹಾರಾಜ ಕಾಮದೇವನು ಯುವಜನರ ಮನಸ್ಸನ್ನು ಖರೀದಿಸುತ್ತಿದ್ದಾನೆ! ಇಂಥ ನಗುವಿನ ಮೂಲಕ ಯಾರ ಮನಸ್ಸು ತಾನೇ ವಿಕ್ರೀತವಾಗುವುದಿಲ್ಲ ಎಂದು ಕೇಳುತ್ತಾ ಕವಿಯು ಸುಂದರಿಯ ನಗುವನ್ನು ವರ್ಣಿಸುತ್ತಾನೆ.

ಸುಂದರೀಶತಕ -೩೧

ಸಂಸ್ಕೃತ ಮೂಲ 

ಜಯತಿ ಸ್ಮಿತಪ್ರಕಾರ: ಸ್ಫುರದಧರೋಪಾಂತವಿಶ್ರಮಸ್ತಸ್ಯಾ: /
ಕುಸುಮಾಂಜಲಿರಿವ ದತ್ತೋ ನವೇನ ವಯಸಾ ರತೀಶಾಯ //

ಕನ್ನಡ ಅನುವಾದ 

    ' ಈ ಸುಂದರಿಯ ಅದುರುತ್ತಿರುವ ಅಧರದ ಅಂಚಿನಲ್ಲಿ ಮೂಡಿರುವ ನಗು, ಇವಳ ನವಯೌವನವು ರತಿಪತಿಯಾದ ಕಾಮದೇವನಿಗೆ ನೀಡಿದ ಪುಷ್ಪಾಂಜಲಿಯಂತಿದ್ದು ವಿಜಯಶಾಲಿಯಾಗುತ್ತದೆ!' 
      ಸುಂದರಿಯ ಅದುರುತ್ತಿರುವ ಅಧರದ ಅಂಚಿನಲ್ಲಿ ಮೂಡಿರುವ ನಗು ಒಂದು ಪುಷ್ಪಾಂಜಲಿ, ಅಂದರೆ ಹೂವಿನ ಅರ್ಪಣೆಯಂತಿದೆ ಎನ್ನುತ್ತಾನೆ ಕವಿ. ಆ ಹೂವಿನ ಅರ್ಪಣೆಯನ್ನು ಯಾರು ಯಾರಿಗೆ ಮಾಡುತ್ತಿದ್ದಾರೆ? ಅವಳ ನವಯೌವನವೇ ರತಿಪತಿಯಾದ ಕಾಮದೇವನಿಗೆ ಅರ್ಪಣೆ ಮಾಡುತ್ತಿದೆ! ಇಂಥ ನಗು ವಿಜಯಶಾಲಿಯಾಗುತ್ತದೆ ಎನ್ನುತ್ತಾ, ಕವಿಯು ಸುಂದರಿಯ ಸುಂದರ ನಗು ಹಾಗೂ ನವಯೌವನವನ್ನು ವರ್ಣಿಸುತ್ತಾನೆ.

ಸುಂದರೀಶತಕ -೩೦

ಸಂಸ್ಕೃತ ಮೂಲ 

ಕುಸುಮಶರನೃಪತಿಶಾಸನಮಭಿನವಸೌಂದರ್ಯಸಾರಸೌಭಾಗ್ಯಮ್  /
ಯುವಜನಮನೋವಿನೋದೋ ಜಯತಿ ಪ್ರಥಮಂ ವಯಸ್ತಸ್ಯಾ:  //

ಕನ್ನಡ ಅನುವಾದ 

      ಕಾಮದೇವ ಮಹಾರಾಜನ ಶಾಸನವು ಈ ಸುಂದರಿಯ ನವಯೌವನ ಸೌಂದರ್ಯಸಾರಸೌಭಾಗ್ಯ! ಯುವಜನರ ಮನಸ್ಸಿಗೆ ವಿನೋದವಾಗಿರುವ ಇವಳ ಈ ಪ್ರಥಮ ವಯಸ್ಸು ಜಯಶಾಲಿಯಾಗುತ್ತದೆ! ' 
      ಸುಂದರಿಯಲ್ಲಿ ಬಂದಿರುವ ನವಯೌವನದ ಸೌಂದರ್ಯವನ್ನು ಕಾಮದೇವನೆಂಬ ರಾಜನ ಶಾಸನಕ್ಕೆ ಹೋಲಿಸುತ್ತಾನೆ ಕವಿ.‌ ಈ ಶಾಸನವೆಂಬ ಸೌಂದರ್ಯ, ಯುವಜನರ ಮನಸ್ಸಿಗೆ ವಿನೋದವುಂಟುಮಾಡುತ್ತಿದೆ! ಇವಳ‌ ಸೌಂದರ್ಯವನ್ನು ನೋಡಿ ಅವರು ಸಂತೋಷಪಡುತ್ತಿದ್ದಾರೆ! ಇಂಥ ಸೌಂದರ್ಯ, ವಿಜಯಶಾಲಿಯಾಗುತ್ತದೆ ಎನ್ನುತ್ತಾನೆ. 

ಸುಂದರೀಶತಕ -೨೯

ಸಂಸ್ಕೃತ ಮೂಲ 

ಶರಣಮಿವ ಯಾಚಮಾನಂ ಕ್ವಚಿತ್ಕ್ವಚಿತದ್ಬಾಲ್ಯಮಂಗೇಷು /
ಭ್ರಮತಿ ಮನೋಜನಿದೇಶಾದಧಿಕಾರಿಣಿ ಯೌವನೇ ಭವತಿ //

ಕನ್ನಡ ಅನುವಾದ 

     ' ಮನೋಜನಾದ ಕಾಮದೇವನ ಆಜ್ಞೆಯಂತೆ ಯೌವನವು ಈ ಸುಂದರಿಯ ಶರೀರದಲ್ಲಿ ಆಗಮಿಸಿ ಅಧಿಕಾರಿಣಿಯಾದಾಗ, ಅದರಿಂದ ಉಳಿಯಲು ಬಾಲ್ಯವು ಆಶ್ರಯ ಬೇಡುವಂತೆ ಕೆಲವಾರು ಅಂಗಾಂಗಗಳಲ್ಲಿ ಪರಿಭ್ರಮಿಸುತ್ತಿದೆ!' 
      ಸುಂದರಿಯ ಶರೀರಕ್ಕೆ ಈಗಷ್ಟೇ ಯೌವನವು ಬಂದಿದೆ! ಆದರೆ ಬಾಲ್ಯವು ಇನ್ನೂ ಪೂರ್ತಿ ಹೋಗಿಲ್ಲ. ಹಾಗಾಗಿ ಇದು ವಾಯು:ಸಂಧಿಕಾಲದ ಚಿತ್ರಣ. ಯೌವನವು ಬಂದರೂ ಬಾಲ್ಯದ ಆ ಮುಗ್ಧ ಭಾವ, ಕಂಗಳ ಚಂಚಲತೆ, ತುಂಟು ಮುಖ, ಮುದ್ದು ಮಾತು, ಮೊದಲಾದವು ಇನ್ನೂ ಸ್ವಲ್ಪ ಸ್ವಲ್ಪ ಇವೆ. ಹೀಗೆ, ಇದು ನವಯೌವನವು ಬಾಲ್ಯದೊಂದಿಗೆ ಬೆರೆತಿರುವ ಮಧುರ ಭಾವ! ಇದನ್ನು ಕವಿಯು ಸ್ವಾರಸ್ಯಕರವಾಗಿ ಚಿತ್ರಿಸುತ್ತಾನೆ. ಕಾಮದೇವನ ಆಜ್ಞೆಯಂತೆ ದೇಹಕ್ಕೆ ಯೌವನವು ಬಂದು ಅಧಿಕಾರಿಣಿಯಾದಾಗ, ಬಾಲ್ಯವು ತಾನು ನಾಶವಾಗುವೆನೆಂದು ಹೆದರಿ, ಹೇಗಾದರೂ ಉಳಿಯಲು ಕೆಲವು ಅಂಗಾಂಗಗಳಲ್ಲಿ ತನ್ನನ್ನು ಉಳಿಸಿಕೊಳ್ಳಲು ಆಶ್ರಯ ಬೇಡುವಂತೆ ಅಲ್ಲಲ್ಲಿ ಪರಿಭ್ರಮಿಸುತ್ತಿದೆ ಎಂದು ವರ್ಣಿಸುತ್ತಾನೆ! 

ಗುರುವಾರ, ಏಪ್ರಿಲ್ 30, 2026

ನರಸಿಂಹಾವತಾರ ಕಥೆಯ ಮೂರು ಪಾಠಗಳು

ನಾವು ಪುರಾಣ ಪ್ರಪಂಚದಲ್ಲಿ ವಿಹರಿಸುತ್ತಿದ್ದಂತೆ ನಮಗೆ ಅಗಾಧ ಪ್ರಮಾಣದಲ್ಲಿ ಮುತ್ತು ರತ್ನಗಳಂತೆ ಕಥೆಗಳು ದೊರೆಯುತ್ತವೆ! ಈ ಮುತ್ತು ರತ್ನಗಳಲ್ಲಿ ಕೆಲವು ಬಹುತೇಕ ಒಂದೇ ರೀತಿ ಇದ್ದು, ಸ್ವಲ್ಪ ಮಾತ್ರ ವ್ಯತ್ಯಾಸ ಹೊಂದಿದ್ದಾರೆ ಹೇಗನಿಸುತ್ತದೆ? ಆ ಸಣ್ಣ ವ್ಯತ್ಯಾಸದಲ್ಲೂ ನಾವು ಸಂತೋಷಪಡುತ್ತೇವೆ! ಹಾಗೆಯೇ ಪೌರಾಣಿಕ ಕಥೆಗಳಲ್ಲೂ ಪಾಠಾಂತರಗಳಿದ್ದರೆ ಒಂದು ರೀತಿ ಸೊಗಸಾಗಿರುತ್ತದೆ! ಒಂದೇ ಕಥೆಯನ್ನು ಎರಡು ಮೂರು ರೀತಿಗಳಲ್ಲಿ ಹೇಳಬಹುದಲ್ಲಾ ಎಂದು ವಿಸ್ಮಯವಾಗುತ್ಚದೆ! ಅವುಗಳ ತೌಲನಿಕ ಅಧ್ಯಯನ ಮಾಡುವುದು ಸ್ವಾರಸ್ಯಕರವಾಗಿರುತ್ತದೆ! ಈ ಕಥೆಗಳು ಹೀಗೇಕೆ ಒಂದೊಂದು ಪುರಾಣದಲ್ಲಿ ಒಂದೊಂದು ರೀತಿಯಿದೆ ಎಂದು ಕೇಳಿದರೆ, ಪುರಾಣಕಾರರು ಅವು ಬೇರೆ ಬೇರೆ ಕಲ್ಪಗಳಲ್ಲಿ ನಡೆದಿದ್ದು ಎಂದು ಉತ್ತರ ಕೊಡುತ್ತಾರೆ. ಕಲ್ಪ ಎಂದರೆ ಬ್ರಹ್ಮನ ಒಂದು ದಿನ.‌ ಇತಿಹಾಸ ಪುನರಾವರ್ತನೆಯಾಗುತ್ತದೆ ಎನ್ನುವಂತೆ, ಪುರಾಣ ಕಥೆಗಳೂ ಮತ್ತೆ ಮತ್ತೆ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಮತ್ತೆ ಮತ್ತೆ ನಡೆಯುತ್ತವೆ.‌ ವಿಷ್ಣು ಪುರಾಣದಲ್ಲಿ, ಪರಾಶರರು ಮೈತ್ರೇಯ ಮಹರ್ಷಿಗಳಿಗೆ ಕಥೆ ಹೇಳುತ್ತಾ ಲಕ್ಷ್ಮಿ ಭೃಗು ಮಹರ್ಷಿ ಮತ್ತು ಖ್ಯಾತಿಯ ಪುತ್ರಿಯಾಗಿ ಹುಟ್ಟಿದಳು ಎನ್ನುತ್ತಾರೆ. ಆಗ ಮೈತ್ರೇಯರು ಲಕ್ಷ್ಮಿಯು ಸಮುದ್ರಮಥನ ಮಾಡಿದಾಗ ಹುಟ್ಟಿದಳೆಂದು ತಾವು ಕೇಳಿದ್ದೇವಲ್ಲಾ ಎಂದಾಗ, ಪರಾಶರರು ಬೇರೆ ಬೇರೆ ಕಲ್ಪಗಳಲ್ಲಿ ಲಕ್ಷಿ ಬೇರೆ ಬೇರೆ ರೀತಿಗಳಲ್ಲಿ ಹುಟ್ಟಿ ಬರುತ್ತಾಳೆ, ಹಾಗೆಯೇ ಅನೇಕ ಪೌರಾಣಿಕ ಕಥೆಗಳೂ ಬೇರೆ ಬೇರೆ ಕಲ್ಪಗಳಲ್ಲಿ ಬೇರೆ ಬೇರೆ ರೀತಿಗಳಲ್ಲಿ ನಡೆಯುತ್ತವೆ ಎಂದು ಸಮಾಧಾನ ಹೇಳುತ್ತಾರೆ. ಹೀಗೆ ನಮ್ಮ ಶ್ರದ್ಧೆಯ ಪ್ರಕಾರ, ಎಲ್ಲಾ ಪುರಾಣಗಳನ್ನೂ ಮಹಾಭಾರತವನ್ನೂ ವೇದವ್ಯಾಸರೇ ರಚಿಸಿದರೂ ಕೆಲವು ಕಥೆಗಳು ಬೇರೆ ಬೇರೆ ಗ್ರಂಥಗಳಲ್ಲಿ ಸ್ವಲ್ಪ ವಿಭಿನ್ನವಾಗಿರುತ್ತವೆ. ಇವು ಬಾಯಿಂದ ಬಾಯಿಗೆ ಹರಡಿದುದರಿಂದ ಬೇರೆ ಬೇರೆ ರೀತಿಯಲ್ಲಿ ಹೇಳಲಾಗಿವೆಯೆಂದೂ, ವ್ಯಾಸರು ಮೂಲತಃ ಮಹಾಭಾರತದೊಂದಿಗೆ ಪುರಾಣ ಸಂಹಿತೆ ಎಂದು ಒಂದು ಗ್ರಂಥ ರಚಿಸಿರಬಹುದೆಂದೂ ಅದೇ ಕಥೆಗಾರರ ಮೂಲಕ ಹದಿನೆಂಟು ಮಹಾಪುರಾಣಗಳು ಹಾಗೂ ಹದಿನೆಂಟು ಉಪಪುರಾಣಗಳಾಗಿ ಕವಲೊಡೆದಿರಬಹುದೆಂದೂ ಆಧುನಿಕ ವಿದ್ವಾಂಸರ ಅಂಬೋಣ. ಅದೇನೇ ಇದ್ದರೂ ಕೆಲವು ಕಥೆಗಳಲ್ಲಿನ ವಿಭಿನ್ನತೆಗಳು ಸ್ವಾರಸ್ಯಕರವಾಗಿರುತ್ತವೆ.
      ಈಗ ನರಸಿಂಹಾವತಾರದ ಮೂರು ವಿಭಿನ್ನ ರೀತಿಯ ಕಥೆಗಳನ್ನು ನೋಡೋಣ. ಹೆಚ್ಚು ಪ್ರಚಲಿತವೂ ಪ್ರಸಿದ್ಧವೂ ಆಗಿರುವುದು ಭಾಗವತ ಪುರಾಣದ ಕಥೆ. ವಿಷ್ಣುವು ವರಾಹಾವತಾರ ತಾಳಿ ಹಿರಣ್ಯಾಕ್ಷ ದೈತ್ಯನನ್ನು ವಧಿಸಲು, ಕುಪಿತಗೊಂಡ ಅವನ ಅಣ್ಣ ಹಿರಣ್ಯಕಶಿಪುವು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ, ಹಗಲಿನಲ್ಲಾಗಲಿ ರಾತ್ರಿಯಲ್ಲಾಗಲಿ, ಮನೆಯ ಒಳಗಾಗಲಿ ಹೊರಗಾಗಲಿ, ಆಕಾಶದಲ್ಲಾಗಲಿ ಭೂಮಿಯ ಮೇಲಾಗಲಿ, ಯಾವುದೇ ಆಯುಧದಿಂದಾಗಲಿ, ಸುರನರೋರಗಯಕ್ಷರಾಕ್ಷಸಗಂಧರ್ವಕಿನ್ನರಕಿಂಪುರುಷರಿಂದಾಗಲಿ, ಪಶುಪಕ್ಷಿಕ್ರಿಮಿಕೀಟಾದಿ ಬ್ರಹ್ಮ ಸೃಷ್ಟಿಯ ಯಾವುದೇ ಜೀವಿಯಿಂದಾಗಲಿ ತನಗೆ ಮರಣವುಂಟಾಗಬಾರದೆಂಬ ವರವನ್ನು ಪಡೆದ. ಈ ವರದಿಂದ ಗರ್ವಿತನಾಗಿ ಮೂರು ಲೋಕಗಳಿಗೂ ಕಂಟಕಪ್ರಾಯನಾಗಿ ಸ್ವರ್ಗವನ್ನೂ ಆಕ್ರಮಿಸಿಕೊಂಡ! ಋಷಿಮುನಿಗಳನ್ನು ಹಿಂಸಿಸಿ ಎಲ್ಲೆಲ್ಲೂ ಹರಿ ಪೂಜೆಯನ್ನು ನಿಷೇಧಿಸಿ ತನ್ನ ಪೂಜೆಯನ್ನು ಮಾಡಬೇಕೆಂದು ಆದೇಶ ಹೊರಡಿಸಿದ! 
     ಹಿರಣ್ಯಕಶಿಪು ತಪಸ್ಸಿಗೆ ಹೋಗಿದ್ದಾಗ ಅವನ ಪತ್ನಿ ಕಯಾದುವು ಗರ್ಭಣಿಯಾಗಿದ್ದಳು. ಅವಳಿಗೆ ಮಗು ಹುಟ್ಟಿದರೆ ಅವನು ಹಿರಣ್ಯಕಶಿಪುವಿನಂತೆ ಇನ್ನೊಬ್ಬ ಲೋಕಕಂಟಕನಾಗುವನೆಂದು ಬಗೆದು ದೇವೇಂದ್ರನು ಅವಳನ್ನು ಅಪಹರಿಸಿ ಕೋಲ್ಲಲು ಹೊರಟನು. ಆಗ ನಾರದರು ಅಡ್ಡ ಬಂದು, ಅವಳ ಹೊಟ್ಟೆಯಲ್ಲಿ ಬೆಳೆಯುತ್ತಿರುವುದು ಒಬ್ಬ ಮಹಾಭಾಗವತನೆಂದು ಆಶ್ವಾಸಿಸಿ ಅವಳನ್ನು ತಮ್ಮ ಆಶ್ರಮಕ್ಕೆ ಕರೆದೊಯ್ದು ಉಪಚರಿಸಿದರು. ಅಲ್ಲಿ ಅವರು ಅವಳಿಗೆ ನಿತ್ಯವೂ ಹರಿಕಥೆಗಳನ್ನು ಹೇಳುತ್ತಾ ಹರಿಭಕ್ತಿಯ ಬಗ್ಗೆ ಉಪದೇಶ ಮಾಡುತ್ತಿರಲು, ಅವಳು ಅಷ್ಟಾಗಿ ಅವನ್ನು ಕೇಳದೆ ನಿದ್ರೆ ಹೋಗುತ್ತಿದ್ದಳು. ಆದರೆ ಅವಳ ಗರ್ಭದಲ್ಲಿದ್ದ ಮಗು ಎಲ್ಲವನ್ನೂ ಕೇಳಿ ಮಹಾಭಕ್ತನಾದನು. ಅವನೇ ಪ್ರಹ್ಲಾದ.‌
     ಹಿರಣ್ಯಕಶಿಪು ಲೋಕಕಂಟಕನಾಗಿರಲು, ದೇವತೆಗಳು ವಿಷ್ಣುವಿನ ಮೊರೆ ಹೊಕ್ಕು ತಮ್ಮನ್ನು ಕಾಪಾಡುವಂತೆ ಬೇಡಿದರು. ಆಗ ವಿಷ್ಣುವು, ಯಾವಾಗ ಹಿರಣ್ಯಕಶಿಪುವು ತನ್ನ ಮಗನನ್ನೇ ಹಿಂಸಿಸುವನೋ ಆಗ ತಾನು ಅವತಾರವೆತ್ತಿ ಅವನನ್ನು ವಧಿಸುವೆನೆಂದು ಆಶ್ವಾಸನೆಯಿತ್ತನು.
     ಮುಂದೆ, ಹಿರಣ್ಯಕಶಿಪುವು ಷಂಡ, ಅಮರ್ಕ ಎಂಬ ಶುಕ್ರಾಚಾರ್ಯರ ಇಬ್ಬರು ಪುತ್ರರ ಬಳಿಗೆ ಪ್ರಹ್ಲಾದನನ್ನು ವಿದ್ಯಾಭ್ಯಾಸಕ್ಕೆ ಕಳಿಸಿದ. ಬಹುಕಾಲದ ನಂತರ ಅವನು ಪ್ರಹ್ಲಾದನನ್ನು ಮನೆಗೆ ಕರೆಸಿಕೊಂಡು ಒಂದು ಸುಭಾಷಿತ ಹೇಳಲು ಕೇಳಿದಾಗ, ಪ್ರಹ್ಲಾದನು ಸಂಸಾರಕೂಪದಿಂದ ಪಾರಾಗಲು ಹರಿ ಸ್ಮರಣೆ ಮಾಡಬೇಕೆಂದನು. ಇದರಿಂದ ಕುಪಿತಗೊಂಡ ಹಿರಣ್ಯಕಶಿಪುವು ಯಾರೋ ಅವನ ತಲೆ ಕೆಡಿಸಿರಬೇಕೆಂದು ಯೋಚಿಸಿ, ಅವನಿಗೆ ಸರಿಯಾದ ಶಿಕ್ಷಣ ಕೊಡಬೇಕೆಂದು ಷಂಡಾಮರ್ಕರಿಗೆ ಆಗ್ರಹಿಸಿದ. ಅವರು ಅವನನ್ನು ಬೈದು, ಹೊಡೆದು, ಎಲ್ಲಾ ಮಾಡಿ, ಹಿರಣ್ಯಕಶಿಪುವನ್ನೇ ದೇವರೆಂದು ಪೂಜಿಸಬೇಕೆಂದು ಬೋಧಿಸಿದರೂ ಪ್ರಹ್ಲಾದನು ತನ್ನ ಪಟ್ಟು ಬಿಡಲಿಲ್ಲ. ನಾರಾಯಣನೇ ಭಗವಂತ, ಅವನನ್ನೇ ಭಜಿಸಬೇಕು ಎಂದು ಹೇಳುತ್ತಿದ್ದ. ಗುರುಗಳು ಅವನನ್ನು ಹಿರಣ್ಯಕಶಿಪುವಿನ ಬಳಿಗೆ ಕರೆತಂದು ಅವನು ಹೇಳುತ್ತಿರುವುದನ್ನು ತಾವು ಕಲಿಸಿಲ್ಲವೆಂದೂ ಅದು ಎಲ್ಲಿಂದ ಬರುತ್ತಿದೆಯೋ ಗೊತ್ತಿಲ್ಲ ಎಂದೂ ಹೇಳಿದರು. ಆಗ ಹಿರಣ್ಯಕಶಿಪುವು ಪ್ರಹ್ಲಾದನನ್ನು ಕೊಲ್ಲಿಸಲು ರಾಕ್ಷಸರಿಂದ ಹಿಂಸೆಗೊಳಿಸಿದನು, ಬೆಟ್ಟದಿಂದ ಬೀಳಿಸಿದನು, ಸಮುದ್ರಕ್ಕೆ ತಳ್ಳಿಸಿದನು, ಬೆಂಕಿಗೆ ದೂಡಿಸಿದನು, ಸರ್ಪಗಳಿಂದ ಕಚ್ಚಿಸಲು ಹಾಗೂ ಆನೆಯಿಂದ ತುಳಿಸಲು ಪ್ರಯತ್ನಿಸಿದನು. ಆದರೆ ಪ್ರಹ್ಲಾದನು ಹರಿದಯೆಯಿಂದ ಕೂದಲೂ ಕೊಂಕದೆ ಪಾರಾದನು. ಕೊನೆಗೆ ಅವನನ್ನು ಪುನಃ ಗುರುಕುಲಕ್ಕೆ ಕಳಿಸಲು ಅವನು ಇತರ ರಾಕ್ಷಸ ಬಾಲಕರಿಗೂ ಹರಿಭಜನೆ ಕಲಿಸಿ ಅವರನ್ನೂ ಭಕ್ತರನ್ನಾಗಿ ಮಾಡಿದನು. ಅವರಿಗೆ ಅನೇಕ ಆಧ್ಯಾತ್ಮಿಕ ಉಪದೇಶಗಳನ್ನು ನೀಡಿದನು. ಈ ಹರಿಭಕ್ತಿ, ಆಧ್ಯಾತ್ಮಿಕ ವಿಚಾರಗಳು ಅವನಿಗೆ ಹೇಗೆ ತಿಳಿದವೆಂದು ರಾಕ್ಷಸ ಬಾಲಕರು ಕೇಳಲು, ಅವನು ಗರ್ಭದಲ್ಲಿದ್ದಾಗ ನಾರದರು ಮಾಡಿದ ಉಪದೇಶದ ಕಥೆಯನ್ನು ಹೇಳಿದನು. ಇದೆಲ್ಲವನ್ನು ನೋಡಿ ರೋಸಿಹೋದ ಗುರುಗಳು ಪುನಃ ಅವನನ್ನು ತಂದೆಯ ಬಳಿಗೆ ಕರೆದುತರಲು, ಹಿರಣ್ಯಕಶಿಪುವು ಅವನಿಗೆ ವಿಷಪ್ರಾಶನ ಮಾಡಿಸಿದನು. ಆಗಲೂ ಪ್ರಹ್ಲಾದನು ಸಾಯಲಿಲ್ಲ.

  ಅತ್ಯಂತ ವಿಸ್ಮಿತನಾದ ಹಿರಣ್ಯಕಶಿಪು ಆಕ್ರೋಶದಿಂದ ತಾನೇ ಪ್ರಹ್ಲಾದನನ್ನು ಕೊಲ್ಲಲು ಮುಂದೆ ಬಂದು, "ಎಲ್ಲಿದ್ದಾನೆ ಆ ನಿನ್ನ ಹರಿ? ನಿನ್ನನ್ನು ಕಾಪಾಡಲು ಅವನನ್ನು ಕರೆ!" ಎಂದು ಆರ್ಭಟಿಸಿದನು. ಆಗ ಪ್ರಹ್ಲಾದನು ಹರಿಯು ಅಣು ರೇಣು ತೃಣ ಕಾಷ್ಠಾದಿ ಸಕಲ ಚರಾಚರ ವಸ್ತುಗಳಲ್ಲೂ ಇರುವನೆಂದು ದೃಢಭಕ್ತಿಯಿಂದ ಹೇಳಿದಾಗ, ಹಿರಣ್ಯಕಶಿಪುವು, ಹಾಗಿದ್ದರೆ ಅರಮನೆಯ ಕಂಬದಲ್ಲಿರುವನೇ ನೋಡೋಣ ಎಂದು ಒಂದು ಕಂಬವನ್ನು ಒಡೆಯಲು, ಪ್ರಹ್ಲಾದನ ಭಕ್ತಿ, ನಂಬಿಕೆಗಳನ್ನು ಉಳಿಸಲು ವಿಷ್ಣುವು ನರಸಿಂಹಸ್ವಾಮಿಯಾಗಿ ಅವತರಿಸಿ, ಹಿರಣ್ಯಕಶಿಪುವನ್ನು ತನ್ನ ತೊಡೆಯ ಮೇಲೆ ಹಾಕಿಕೊಂಡು, ಅರಮನೆಯ ಹೊಸ್ತಿಲ ಮೇಲೆ ಕುಳಿತು, ತನ್ನ ನಖಗಳಿಂದಲೇ ಅವನ ಉದರವನ್ನು ಬಗೆದು ಕೊಂದು ಅವನ ಕರುಳುಗಳನ್ನು ಮಾಲೆ ಹಾಕಿಕೊಂಡನು. ಆಗ ಸಂಜೆಯ ವೇಳೆಯಾಗಿತ್ತು. ಹಿರಣ್ಯಕಶಿಪುವಿನ ವರದಂತೆಯೇ ಎಲ್ಲವೂ ನಡೆದಿತ್ತು. ಆಗ ಹಗಲೂ ಅಲ್ಲದೇ ರಾತ್ರಿಯೂ ಅಲ್ಲದೆ, ಸಂಜೆಯಾಗಿತ್ತು. ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಹಿರಣ್ಯಕಶಿಪು ಸಾಯದೆ, ಮಧ್ಯದಲ್ಲಿ ನರಸಿಂಹನ ತೊಡೆಯ ಮೇಲೆ ಸತ್ತಿದ್ದನು. ಮನುಷ್ಯ, ದೇವ, ದೈತ್ಯ, ಮೃಗ, ಪಕ್ಷಿ ಇದಾವುದೂ ಅಲ್ಲದೆ, ಬ್ರಹ್ಮ ಸೃಷ್ಟಿಯಲ್ಲಿಯೇ ಇರದ ಮನುಷ್ಯ ದೇಹ ಹಾಗೂ ಸಿಂಹದ ಮುಖ ಇರುವ ಬ್ರಹ್ಮ ಸೃಷ್ಟಿಗೂ ಮೇಲಿನ ವಿಷ್ಣುವಿನ ನರಸಿಂಹಾವತಾರದಿಂದ ಅವನು ಸತ್ತಿದ್ದನು. ಆಯುಧಗಳಿಂದ ಅವನು ಸಾಯದೆ, ನರಸಿಂಹನ ನಖಗಳಿಂದಲೇ ಸತ್ತಿದ್ದನು. ಹೀಗೆ ಬ್ರಹ್ಮನ ವರಗಳನ್ನು ಪೂರೈಸಿಯೇ ವಿಷ್ಣು ಅವನನ್ನು ವಧಿಸಿದ್ದನು! ಆಗ ಅನೇಕ ದೈತ್ಯರು ನರಸಿಂಹನನ್ನು ಆಕ್ರಮಿಸಲು, ನರಸಿಂಹನು ಅವರೆಲ್ಲರನ್ನೂ ಸಂಹರಿಸಿದನು! ಅನಂತರ, ದೇವತೆಗಳೂ ಲಕ್ಷ್ಮಿಯೂ ಬಂದರೂ ನರಸಿಂಹನ ಉಗ್ರ ಕೋಪ ಆರದಿರಲು, ಬ್ರಹ್ಮನ ಮಾತಿನಂತೆ ಪ್ರಹ್ಲಾದನು ನರಸಿಂಹನನ್ನು ಸ್ತುತಿಸಿ ಸಮಾಧಾನಗೊಳಿಸಿದನು. ಸಮಾಧಾನಗೊಂಡ ನರಸಿಂಹನು ವರಗಳನ್ನು ಬೇಡಲು ಹೇಳಲು, ಪ್ರಹ್ಲಾದನು, ತನಗೆ ಯಾವುದೇ ಕಾಮನೆಯು ಹುಟ್ಟದಿರುವಂಥ ವರವನ್ನು ಕೊಡುವಂತೆಯೂ ಹರಿದ್ವೇಷಿಯಾಗಿದ್ದ ತನ್ನ ತಂದೆ ಪಾಪಗಳನ್ನು ಕಳೆದು ಪರಿಶುದ್ಧನಾಗಲೆಂದೂ ವರ ಬೇಡಿದನು. ಅದಕ್ಕೆ ನರಸಿಂಹಸ್ವಾಮಿಯು, ತನ್ನ ಸ್ಪರ್ಶದಿಂದಲೇ ಹಿರಣ್ಯಕಶಿಪುವು ಪವಿತ್ರನಾಗಿರುವನೆಂದೂ, ಪ್ರಹ್ಲಾದನಂಥ ಭಕ್ತನು ಅವನ ಕುಟುಂಬದಲ್ಲಿ ಹುಟ್ಟಿರುವುದರಿಂದ ಅವನಿಗೆ ಮೊದಲು ಇಪ್ಪತ್ತೊಂದು ತಲೆಮಾರುಗಳಿದ್ದಿದ್ದರೆ ಅವರೆಲ್ಲರೂ ಮುಕ್ತರಾಗುತ್ತಿದ್ದರು ಎಂದು ಹೇಳುತ್ತಾ ಪ್ರಹ್ಲಾದನಿಗೆ ದೈತ್ಯ ಚಕ್ರವರ್ತಿಯ ಪಟ್ಟಗಟ್ಟಿ ಅಂತರ್ಧಾನನಾದನು. 
     ಇದು ಭಾಗವತದಲ್ಲಿನ ನರಸಿಂಹಾವತಾರದ ಸಂಕ್ಷಿಪ್ತ ಕಥೆ. ವಿಷ್ಣುಪುರಾಣದಲ್ಲೂ ಕಥೆ ಬಹುತೇಕ ಹೀಗೆಯೇ ಇದ್ದರೂ, ಕೊನೆಯಲ್ಲಿ ನರಸಿಂಹನು ಕಂಬದಿಂದ ಬಂದ ಕಥೆಯೇ ಇಲ್ಲದೇ ಒಮ್ಮೆ ವಿಷ್ಣುವು ನರಸಿಂಹಾವತಾರ ತಾಳಿ ಹಿರಣ್ಯಕಶಿಪುವನ್ನು ಸಂಹರಿಸಿದನೆಂದು ಒಂದೇ ವಾಕ್ಯದಲ್ಲಿ ಹೇಳಲಾಗಿದೆ! ಇನ್ನೊಂದು ಸ್ವಾರಸ್ಯವೆಂದರೆ, ಇಲ್ಲಿ ಪ್ರಹ್ಲಾದನು ವಿಷ್ಣುವನ್ನು ಧ್ಯಾನಿಸುತ್ತಾ ಪೂರ್ತಿ ಅವನಲ್ಲಿ ತನ್ಮಯನಾಗಿ ತಾನು ಅವನಿಂದ ಅಭಿನ್ನ ಎಂಬ ಅದ್ವೈತಾತ್ಮಕ ಭಾವವನ್ನು ತಾಳುತ್ತಾನೆ. ಹಿರಣ್ಯಕಶಿಪು ಅವನನ್ನು ಸಮುದ್ರಕ್ಕೆ ತಳ್ಳಿಸಿದಾಗ, ಹರಿಧ್ಯಾನದಲ್ಲಿ ಮೈಮರೆತ ಪ್ರಹ್ಲಾದನು ಏನು ಆಗದೆ ಪಾರಾಗಿ ಸ್ವಲ್ಪ ಹೊತ್ತು ತಾನು ಪ್ರಹ್ಲಾದನೆಂದೂ ಮರೆತು, ಅನಂತರ ತಾನು ಪ್ರಹ್ಲಾದನೆಂದು ಸ್ಮರಿಸಿ ಅರಮನೆಗೆ ಹಿಂದಿರುಗುತ್ತಾನೆ. ಅವನು ಆ ಮಟ್ಟಿಗೆ ಹರಿಯೊಂದಿಗೆ ತಾದಾತ್ಮ್ಯ ಹೊಂದಿರುತ್ತಾನೆ. ಆಗ ಅವನು ಹರಿಯನ್ನು ಸ್ತುತಿಸಲು, ವಿಷ್ಣುವು ಪ್ರತ್ಯಕ್ಷನಾಗಿ ವರಗಳನ್ನು ಬೇಡಲು ಹೇಳುತ್ತಾನೆ. ಆಗ ಪ್ರಹ್ಲಾದನು ತಾನು ಯಾವುದೇ ಜನ್ಮದಲ್ಲಿ ಹುಟ್ಟಿದರೂ ಸದಾ ತನಗೆ ಹರಿಭಕ್ತಿಯಿರಲಿ ಹಾಗೂ ತನ್ನ ತಂದೆ ಹರಿದ್ವೇಷ ಹಾಗೂ ತನ್ನ ದ್ವೇಷ ಮತ್ತು ಹಿಂಸಾಚಾರದಿಂದ ಪಡೆದ ಪಾಪಗಳಿಂದ ಮುಕ್ತನಾಗಲಿ ಎಂದು ವರಗಳನ್ನು ಬೇಡುತ್ತಾನೆ ಹಾಗೂ ವಿಷ್ಣುವು ಮೂರನೆಯ ವರವನ್ನು ಬೇಡು ಎನ್ನಲು, ಪ್ರಹ್ಲಾದನು, ಹರಿಭಕ್ತಿ ಇರುವಾಗ, ಧರ್ಮಾರ್ಥಕಾಮಗಳಿಂದೇನು, ಅವನಿಗೆ ಮುಕ್ತಿಯೇ ಕರಸ್ಥಿತವಾಗಿರುತ್ತದೆ ಎನ್ನಲು, ವಿಷ್ಣುವು ಅವನಿಗೆ ಖಂಡಿತವಾಗಿಯೂ ಮುಕ್ತಿ ಸಿಗುತ್ತದೆ ಎಂದು ಹೇಳಿ ಅಂತರ್ಧಾನನಾಗುತ್ತಾನೆ. ಭಾಗವತದಲ್ಲಿ ನರಸಿಂಹಾವತಾರಕ್ಕೆ ಮೊದಲು ಪ್ರಹ್ಲಾದನು ಹೀಗೆ ವಿಷ್ಣುವನ್ನು ನೇರವಾಗಿ ಕಂಡಿರುವುದಿಲ್ಲ ಹಾಗೂ ವರಗಳನ್ನು ಪಡೆದಿರುವುದಿಲ್ಲ. ಇನ್ನೊಂದು ಸ್ವಾರಸ್ಯವೆಂದರೆ, ಪ್ರಹ್ಲಾದನು ಹೀಗೆ ಬದುಕಿ ಬರಲು, ಹಿರಣ್ಯಕಶಿಪುವು ಆನಂದಗೊಂಡು ಅವನನ್ನು ಅಪ್ಪಿಕೊಳ್ಳುತ್ತಾನೆ ಹಾಗೂ ಪಶ್ಚಾತ್ತಾಪ ಪಡುತ್ತಾನೆ. ಅನಂತರ, ಪ್ರಹ್ಲಾದನು ತಂದೆ ಮತ್ತು ಗುರುಗಳ ಸೇವೆ ಮಾಡಿಕೊಂಡಿದ್ದ ಎಂದು ಕಥೆ ಮುಂದುವರಿದು, ಮುಂದೊಂದು ದಿನ ವಿಷ್ಣುವು ನರಸಿಂಹಾವತಾರದ ಮೂಲಕ ಹಿರಣ್ಯಕಶಿಪುವನ್ನು ಸಂಹರಿಸಲು, ಪ್ರಹ್ಲಾದನು ದೈತ್ಯರಾಜನಾದನು ಎಂದು ಹಠಾತ್ತನೆ ಮುಗಿಯುತ್ತದೆ! 
      ಹರಿವಂಶದಲ್ಲಿ ನರಸಿಂಹಾವತಾರದ ಕಥೆ ಬಹಳ ವಿಭಿನ್ನವಾಗಿದೆ. ಹರಿವಂಶವು ಮಹಾಭಾರತದ ಖಿಲಭಾಗವಾಗಿದೆ. ಮಹಾಭಾರತದ ಕಥೆಯನ್ನು ಕೇಳಿದ ನಂತರ, ಜನಮೇಜಯನು ವೈಶಂಪಾಯನರನ್ನು ಶ್ರೀಕೃಷ್ಣನ ವಂಶಾವಳಿಯ ಕಥೆ ಹೇಳಲು ಕೇಳಲು, ಅವರು ಅದನ್ನು ಹೇಳುತ್ತಾ ವಿಷ್ಣುವಿನ ವಿವಿಧ ಅವತಾರಗಳ ಕಥೆಗಳನ್ನೂ ಹೇಳುತ್ತಾರೆ. ಹಾಗಾಗಿ, ಹರಿವಂಶವನ್ನು ವಿದ್ವಾಂಸರು ಒಂದು ಪುರಾಣವೆಂದೂ ಪರಿಗಣಿಸುತ್ತಾರೆ. ಇಲ್ಲಿನ ಕಥೆಯಂತೆ, ಹಿರಣ್ಯಕಶಿಪುವು ಹನ್ನೊಂದು ಸಾವಿರದ ಐನೂರು ವರ್ಷಗಳ ಕಾಲ ನೀರಿನಲ್ಲಿ ಘೋರ ತಪಸ್ಸು ಮಾಡಲು, ಬ್ರಹ್ಮನು ಸುಪ್ರೀತನಾಗಿ ಪ್ರತ್ಯಕ್ಷನಾದನು. ಆಗ ಹಿರಣ್ಯಕಶಿಪು ಕೇಳಿದ ವರ ಬಹುತೇಕ ಭಾಗವತದಲ್ಲಿರುವಂತೆಯೇ ಇದ್ದರೂ ತನ್ನನ್ನು ಸಂಹರಿಸುವಶನು ಒಂದೇ ಕೈ ಏಟಿನಿಂದ ಹೊಡೆದು ಸಂಹರಿಸಲು ಸಮರ್ಥವಾಗಿರಬೇಕು ಎಂಬ ಅಧಿಕಾಂಶವನ್ನು ಕೇಳುತ್ತಾನೆ. ಅನಂತರ, ಅವನು ತಾನೇ ಸೂರ್ಯ, ಚಂದ್ರ, ವಾಯು, ಅಗ್ನಿ, ಜಲ, ಆಕಾಶ, ನಕ್ಷತ್ರ, ದಿಕ್ಕುಗಳು,  ಇಂದ್ರ, ಯಮ, ವರುಣ, ಕುಬೇರ, ಎಲ್ಲವೂ ಆಗಿರಬೇಕೆಂದೂ ( ತಾನೇ ಎಲ್ಲಕ್ಕೂ ಒಡೆಯನಾಗಿರಬೇಕೆಂದು ತಾತ್ಪರ್ಯ) ತಾನು ಶತ್ರುಗಳೊಂದಿಗೆ ಯುದ್ಧ ಮಾಡುವಾಗ ದಿವ್ಯಾಸ್ತ್ರಗಳು ತನ್ನ ಮುಂದೆ ಮೂರ್ತಿಮತ್ತಾಗಿ ಬಂದು ನಿಲ್ಲಬೇಕೆಂದೂ ವರ ಬೇಡಿದನು. ಬ್ರಹ್ಮನು ಈ ವರಗಳನ್ನು ನೀಡಿ ಹೊರಟಾಗ, ದೇವತೆಗಳು ಹಿರಣ್ಯಕಶಿಪುವಿನ ಮೃತ್ಯು ಹೇಗೆಂದು ಕೇಳಿದರು. ಅದಕ್ಕೆ ಬ್ರಹ್ಮನು, ಅವನ ತಪಸ್ಸಿನ ಫಲವೆಲ್ಲವೂ ಅನುಭವಿಸಿ ಮುಗಿದಾಗ, ವಿಷ್ಣುವು ಅವನನ್ನು ಸಂಹರಿಸುವನೆಂದು ಹೇಳಿದನು.
     ವರಗರ್ವಿತನಾದ ಹಿರಣ್ಯಕಶಿಪುವು ಲೋಕಕಂಟಕನಾದನು ಹಾಗೂ ದೇವಲೋಕವನ್ನು ವಶಪಡಿಸಿಕೊಂಡನು! ಆಗ ದೇವತೆಗಳು ವಿಷ್ಣುವನ್ನು ಶರಣು ಹೊಂದಿ ಸ್ತುತಿಸಲು, ವಿಷ್ಣುವು ಹಿರಣ್ಯಕಶಿಪುವನ್ನು ಪರಿವಾರಸಹಿತವಾಗಿ ಸಂಹರಿಸುವೆನೆಂದು ಅಭಯವಿತ್ತು ಹಾಗೆಯೇ ಸಂಕಲ್ಪ ಮಾಡಿ ಹಿಮವತ್ಪರ್ವತದ ತಪ್ಪಲಿಗೆ ಬಂದನು. ಹಿರಣ್ಯಕಶಿಪುವನ್ನು ಸಂಹರಿಸಲು ಬೇಗನೆ ಕಾರ್ಯಸಿದ್ಧಿ ಮಾಡುವ ಯಾವ ರೂಪವನ್ನು ಧರಿಸಲೆಂದು ಯೋಚಿಸುತ್ತಾ ವಿಷ್ಣುವು ಹಿಂದೆಂದೂ ಹುಟ್ಟಿರದ ನರ ದೇಹ ಮತ್ತು ಸಿಂಹ ಮುಖದ, ದೈತ್ಯರಿಗೆ ಎದುರಿಸಲಾಗದ ನರಸಿಂಹ ರೂಪವನ್ನು ಧರಿಸಿ, ಓಂಕಾರವನ್ನು ಸಹಾಯಕ್ಕೆ ತೆಗೆದುಕೊಂಡು ( ಓಂಕಾರವನ್ನು ಧ್ಯಾನಿಸಿ ಶಕ್ತಿ, ಉತ್ಸಾಹ ಪಡೆದು) ಚಪ್ಪಾಳೆ ತಟ್ಟುತ್ತಾ ಹೊರಟನು. ಹಾಗೆ ಹೋಗಿ ನರಸಿಂಹನು ಹಿರಣ್ಯಕಶಿಪುವಿನ ಸಭಾಮಂದಿರವನ್ನು ಪ್ರವೇಶಿಸಿದನು. ಇಲ್ಲಿ ಹಿರಣ್ಯಕಶಿಪುವಿನ ಸಭಾಮಂದಿರದ ವಿಸ್ತೃತ ವರ್ಣನೆ ಬರುತ್ತದೆ. ಸ್ವರ್ಗದ ಪೃಷ್ಠಭಾಗದಲ್ಲಿದ್ದ ಆ ಸಭಾಮಂದಿರವು ನೂರೈವತ್ತು ಯೋಜನಗಳಷ್ಟು ಉದ್ದವೂ ನೂರು ಯೋಜನಗಳಷ್ಟು ಅಗಲವೂ ಐದು ಯೋಜನಗಳಷ್ಟು ಎತ್ತರವೂ ಇದ್ದು, ಅದು ಸದಾ ಆಕಾಶದಲ್ಲಿರುತ್ತಾ ಸಭಾಸದರ ಇಚ್ಛಾನುಸಾರ ಸಂಚರಿಸುತ್ತಿತ್ತು! ಅತ್ಯಂತ ರಮಣೀಯವಾಗಿದ್ದ ಆ ಸಭೆಯಲ್ಲಿದ್ದವರಿಗೆ ಹಸಿವು, ಬಾಯಾರಿಕೆ, ಮುಪ್ಪು, ಶೋಕ, ಆಯಾಸಗಳು ಆಗುತ್ತಿರಲಿಲ್ಲ! ಅಗ್ನಿಯ ತೇಜಸ್ಸಿನಂತೆ ಬೆಳಗುತ್ತಿದ್ದ ಆ ಸಭೆಯಲ್ಲಿ ಮಣಿಮಯವಾದ ಸ್ತಂಭಗಳೂ ಭವ್ಯವಾದ ಆಸನಗಳೂ ಇದ್ದವು! ಫಲಪುಷ್ಪಗಳಿಂದ ತುಂಬಿದ್ದ ಸುಂದರ ಲತಾವೃಕ್ಷಗಳು, ಎಲ್ಲೆಲ್ಲೂ ಸುಗಂಧ, ಸೊಗಸಾದ ಜಲಾಶಯ, ಕಮಲಪುಷ್ಷಗಳಿಂದಲೂ ಹಂಸಕಾರಂಡವ ಪಕ್ಷಿಗಳಿಂದಲೂ ಕೂಡಿದ್ದ ಸರೋವರಗಳು, ಇವೆಲ್ಲವೂ ಇದ್ದವು ಆ ಸಭೆಯಲ್ಲಿ! ಅಲ್ಲಿ ರಸವತ್ತಾದ ಭಕ್ಷ್ಯ ಭೋಜ್ಯಗಳೂ ಇದ್ದವು! ಇಂಥ ಸಭೆಯಲ್ಲಿ, ದೇವಗಂಧರ್ವಾಪ್ಸರೆಯರಿಂದಲೂ ದೈತ್ಯರಿಂದಲೂ ಸೇವಿಸಲ್ಪಡುತ್ತಾ ನಾಲ್ಕು ಮಾರುಗಳಷ್ಟು ದೊಡ್ಡದಾದ ಸಿಂಹಾಸನದಲ್ಲಿ ಹಿರಣ್ಯಕಶಿಪುವು ವಿರಾಜಮಾನನಾಗಿದ್ದನು! 
     ಆಗ ಸಾವಿರ ಚಂದ್ರರಿಗೆ ಸಮಾನವಾದ ಸೌಂದರ್ಯದಿಂದ ಕಂಗೊಳಿಸುತ್ತಿದ್ದ ನರಸಿಂಹನನ್ನು ನೋಡಿ ಹಿರಣ್ಯಕಶಿಪುವೂ ಇತರ ದೈತ್ಯರೂ ವಿಸ್ಮಿತರಾದರು! ಆದರೆ ಅವನ ಪುತ್ರನಾದ ಪ್ರಹ್ಲಾದನು ದಿವ್ಯದೃಷ್ಟಿಯಿಂದ ನರಸಿಂಹನನ್ನು ನೋಡಿ, ಅವನ ಶರೀರದಲ್ಲಿ ಸಮಸ್ತ ದೇವತೆಗಳು, ರಾಕ್ಷಸರು, ನದಿಸಮುದ್ರಗಳು, ಹಿಮಾಲಯವೇ ಮೊದಲಾದ ಪರ್ವತಗಳು, ಹೀಗೆ ಮೂರು ಲೋಕಗಳೊಂದಿಗೆ ಆ ಸಭೆಯನ್ನೂ ಕೊನೆಗೆ ತನ್ನನ್ನೂ ತಂದೆಯನ್ನೂ ಕಾಣುತ್ತಿರುವೆನೆಂದು ತಂದೆಗೆ ಹೇಳಿದನು. ಆಗ ಹಿರಣ್ಯಕಶಿಪುವು ಅಪೂರ್ವ ಶರೀರದ ಆ ಕಾಡಿನ ಸಿಂಹವನ್ನು ಹಿಡಿಯಬೇಕೆಂದೂ ಆಗ ಪ್ರಾಣಕ್ಕೆ ಆಪತ್ತು ಬಂದರೆ ಕೊಲ್ಲುವಂತೆಯೂ ದೈತ್ಯರಿಗೆ ಆಜ್ಞಾಪಿಸಿದನು. ಆಗ ದೈತ್ಯರು ನರಸಿಂಹನ ಮೇಲೆ ಹಲವಾರು ಅಸ್ತ್ರ ಶಸ್ತ್ರಗಳನ್ನು ಪ್ರಯೋಗಿಸುತ್ತಾ ಅವನನ್ನು ಪೀಡಿಸಿದರು! ಆಗ ನರಸಿಂಹನು ಸಿಂಹನಾದ ಮಾಡುತ್ತಾ ಆ ಸಭಾಭವನವನ್ನು ಧ್ವಂಸಮಾಡಿಬಿಟ್ಟನು! ಇದರಿಂದ ಹಿರಣ್ಯಕಶಿಪುವು ಕ್ರುದ್ಧನಾಗಿ ನರಸಿಂಹನ ಮೇಲೆ ವಿವಿಧ ಅಸ್ತ್ರಗಳನ್ನು ಪ್ರಯೋಗಿಸಿದನು! ಅಂತೆಯೇ ಇತರ ದೈತ್ಯರೂ ಅವನನ್ನು ಪೀಡಿಸುತ್ತಾ ಎಲ್ಲಾ ಕಡೆಗಳಿಂದಲೂ ಸುತ್ತುವರೆದರು! ಆದರೆ ಅವರಾರಿಗೂ ನರಸಿಂಹನ ಶರೀರದಲ್ಲಿ ಒಂದು ಗಾಯವನ್ನೂ ಮಾಡಲಾಗಲಿಲ್ಲ! ದೈತ್ಯರು ಪ್ರಯೋಗಿಸಿದ ಚಕ್ರಗಳನ್ನು ನರಸಿಂಹನು ನುಂಗಿಹಾಕಿದನು! ಹಿರಣ್ಯಕಶಿಪುವು ಪ್ರಯೋಗಿಸಿದ ಶಕ್ತ್ಯಾಯುಧವನ್ನು ಹುಂಕಾರದಿಂದಲೇ ತುಂಡರಿಸಿದನು! ಅನಂತರ, ದೈತ್ಯರು ಆಕಾಶಕ್ಕೇರಿ ಶಿಲಾವರ್ಷ, ಜಲವರ್ಷ, ಮತ್ತು ಅಗ್ನಿವರ್ಷಗಳನ್ನು ಮಾಡಿದರು! ಆದರೆ ಅವು ನರಸಿಂಹನನ್ನು ಸ್ಪರ್ಶಿಸಲೂ ಆಗಲಿಲ್ಲ! 
    ಹೀಗೆ ದೈತ್ಯರ ಮಾಯಾಯುದ್ಧ ವಿಫಲವಾಗಲು ಹಿರಣ್ಯಕಶಿಪುವು ಅತ್ಯಂತ ಕ್ರುದ್ಧನಾಗಿ ತನ್ನ ತೇಜಸ್ಸಿನಿಂದ ಭೂಮಿಯನ್ನೇ ದಹಿಸುವಂತೆ ಹೆಜ್ಜೆಯಿಡುತ್ತಾ ಭೂಮಿಯನ್ನೇ ಅಲ್ಲಾಡಿಸಿದನು! ನದಿ,ಸರೋವರ, ಸಮುದ್ರಗಳಲ್ಲಿ ಅಲ್ಲೋಲಕಲ್ಲೋಲವಾಯಿತು! ಪರ್ವತಗಳು ಚಲಿಸತೊಡಗಿದವು! ಜಗತ್ತೇ ಕತ್ತಲಿನಿಂದ ತುಂಬಿಹೋಯಿತು! ವಾಯುವು ಕ್ಷೋಭೆಗೊಂಡಿತು! ಪ್ರಳಯಕಾಲದಲ್ಲಿ ಕಾಣಿಸಿಕೊಳ್ಳುವ ಗ್ರಹಗಳು ಕಾಣಿಸಿಕೊಂಡು ಹರ್ಷದಿಂದ ಸಂಚರಿಸತೊಡಗಿದವು! ಉಲ್ಕಾಪಾತ, ಪ್ರಾಣಿಗಳ ಆರ್ತನಾದ, ಇಂಥ ಉತ್ಪಾತಗಳಾಗಲು, ಏಕೆ ಇವು ಆಗುತ್ತಿವೆ ಎಂದು ಹಿರಣ್ಯಕಶಿಪುವು ಗುರು ಶುಕ್ರಾಚಾರ್ಯರನ್ನು ಕೇಳಿದನು. ಅದಕ್ಕೆ ಅವರು,"ಯಾವ ರಾಜನ ರಾಜ್ಯದಲ್ಲಿ ಇಂಥ ಉತ್ಪಾತಗಳಾಗುವವೋ ಆ ರಾಜನ ರಾಜ್ಯವನ್ನು ಶತ್ರುಗಳು ಅಪಹರಿಸುತ್ತಾರೆ! ಹಾಗಾಗಿ ಬೇಗನೆ ಬುದ್ಧಿಯಿಂದ ಸಮಾಲೋಚಿಸಿ ಹಾಗಾಗದಂತೆ ಏನು ಮಾಡಬೇಕೋ ಮಾಡು!" ಎಂದು ಹೇಳಿ ತಮ್ಮ ಮನೆಗೆ ಹೊರಟುಹೋದರು! 
       ಆಗ ಹಿರಣ್ಯಕಶಿಪುವು ತನ್ನ ಗದೆಯನ್ನು ಹಿಡಿದು ಗರ್ಜಿಸುತ್ತಾ ನರಸಿಂಹನತ್ತ ಧಾವಿಸಿದನು! ಆಗ ಬ್ರಹ್ಮಾದಿ ದೇವತೆಗಳು ಹಿರಣ್ಯಕಶಿಪುವನ್ನು ಬೇಗನೆ ಸಂಹರಿಸುವಂತೆ ನರಸಿಂಹನನ್ನು ಸ್ತುತಿಸಿದರು. ಆಗ ನೃಸಿಂಹನು ಛಂಗನೆ ಹಾರಿ ಹಿರಣ್ಯಕಶಿಪುವಿನ ವಕ್ಷಸ್ಥಳವನ್ನು ತನ್ನ ಉಗುರುಗಳಿಂದ ಸೀಳಿ ಅವನನ್ನು ಸಂಹರಿಸಿದನು! ಇದರಿಂದ ಸಂತೋಷಗೊಂಡ ದೇವತೆಗಳು ಪುನಃ ನೃಸಿಂಹಸ್ವಾಮಿಯನ್ನು ಸ್ತುತಿಸಿ ತಮ್ಮ ಲೋಕಗಳಿಗೆ ತೆರಳಿದರು. ಅನಂತರ, ಅಪ್ಸರೆಯರು ನರ್ತಿಸುತ್ತಿದ್ದಂತೆ ನರಸಿಂಹದೇವನು ಕ್ಷೀರಸಮುದ್ರಕ್ಕೆ ತೆರಳಿ,‌ ಅದರ ತೀರದಲ್ಲಿ ನರಸಿಂಹರೂಪವನ್ನು ತ್ಯಜಿಸಿ, ಅದರ ಪ್ರತಿಮೆಯನ್ನು ಲೋಕದಲ್ಲಿ ಪ್ರತಿಷ್ಠಾಪಿಸಿ, ತನ್ನ ಚತುರ್ಭುಜ ರೂಪದಿಂದ ತನ್ನ ಪರಮಧಾಮಕ್ಕೆ ಹೋದನು.
     ಹೀಗೆ ಹರಿವಂಶದಲ್ಲಿ ಹಿರಣ್ಯಕಶಿಪುವು ಪ್ರಹ್ಲಾದನನ್ನು ಹಿಂಸಿಸುವುದು, ಕಂಬವನ್ನು ಒಡೆಯುವುದು, ಅದರಿಂದ ನರಸಿಂಹನು ಬರುವುದು ಇವೆಲ್ಲವೂ ಇಲ್ಲವೇ ಇಲ್ಲ! ಬದಲಿಗೆ ನರಸಿಂಹನು ಹಠಾತ್ತನೆ ಹಿರಣ್ಯಕಶಿಪುವಿನ ಸಭೆಗೆ ಬಂದು ಅವನನ್ನು ಸಂಹರಿಸುತ್ತಾನೆ! ಈ ಕಥಾಪಾಠ ಬಹಳ ವಿಭಿನ್ನವಾಗಿದೆ! 
       ಹೀಗೆ ನರಸಿಂಹಾವತಾರದ ಕಥೆ ಮೂರು ಗ್ರಂಥಗಳಲ್ಲಿ ವಿಭಿನ್ನವಾಗಿ ಚಿತ್ರಿಸಲ್ಪಟ್ಪು ಸ್ವಾರಸ್ಯಕರವಾಗಿದೆ. 

      
     






 

ಗುರುವಾರ, ಏಪ್ರಿಲ್ 23, 2026

ಸುಂದರೀಶತಕ -೨೮


ಸಂಸ್ಕೃತ ಮೂಲ 

ಕುಸುಮಶರನೃಪನಿದೇಶಾತ್ಸುತನೌ ಚಕಿತಂ ನವಂ ವಯೋ ವಿಶತಿ /
ನವಸೇವಕ ಇವ ಪಾರ್ಥಿವಸದ್ಮನಿ ದತ್ತಪ್ರವೇಶೋsಪಿ //

ಕನ್ನಡ ಅನುವಾದ 

     ' ಕಾಮದೇವರಾಜನ ಆಜ್ಞಾನುಸಾರ, ಈ ಸುಂದರಿಯ
 ಶರೀರದಲ್ಲಿ ಯೌವನವು ಭಯಗೊಂಡು ಹೇಗೆ ಪ್ರವೇಶಿಸುತ್ತಿದೆಯೆಂದರೆ, ರಾಜನ ಅರಮನೆಯೊಳಗೆ ಹೋಗಲು ಅನುಮತಿ ಸಿಕ್ಕರೂ ಹೊಸ ಸೇವಕನು ನಿಧಾನವಾಗಿ ಹೆದರುತ್ತಾ ಒಳಗೆ ಹೋಗುವ ಹಾಗೆ ಪ್ರವೇಶಿಸುತ್ತಿದೆ!'
    ಕವಿಯು ಹೆಣ್ಣಿನ ದೇಹದಲ್ಲಿ ಯೌವನದ ಆಗಮನವನ್ನು ಸ್ವಾರಸ್ಯಕರವಾಗಿ ವರ್ಣಿಸುತ್ತಿದ್ದಾನೆ! ಅದು ಮಹಾರಾಜ ಕಾಮದೇವನ ಆಜ್ಞೆಯಂತೆ ಅವಳ ದೇಹವನ್ನು ಪ್ರವೇಶಿಸುತ್ತಿದೆ. ಆದರೆ ಅದು ಹೇಗಿದೆಯೆಂದರೆ, ಒಬ್ಬ ಹೊಸ ಸೇವಕನಿಗೆ ರಾಜನ ಅರಮನೆಯೊಳಗೆ ಪ್ರವೇಶಿಸಲು ಅನುಮತಿ ಸಿಕ್ಕರೂ ಅರಮನೆಯ ವೈಭವವನ್ನು ನೋಡಿ, ಅವನು ನಿಧಾನವಾಗಿ ಹೆದರುತ್ತಾ ಬರುವಂತೆ, ಯೌವನವೂ ಭಯಗೊಂಡು ನಿಧಾನವಾಗಿ ಬರುತ್ತಿದೆ! ಈ ಸಮಯದಲ್ಲಿ ಹುಡುಗಿಗೆ ಆಗುವ ಸಂಕೋಚ, ನಾಚಿಕೆ, ಇತ್ಯಾದಿಗಳು ಇದನ್ನು ತೋರಿಸುತ್ತವೆ.' 

ಬುಧವಾರ, ಏಪ್ರಿಲ್ 22, 2026

ಸುಂದರೀಶತಕ -೨೭

ಸಂಸ್ಕೃತ ಮೂಲ 

ಯುವಜನಮಾರಣಶಾಲಾ ಸುಂದರಿ ವೇಣೀಕೃಪಾಣಿಕೋಪೇತಾ /
ತವ ಚರಮಮಂಗಮೇತತ್ಕವಯಿತ್ವಾ ಪಾತಕೀ ಕ: ಸ್ಯಾತ್ //

ಕನ್ನಡ ಅನುವಾದ 

     ' ಎಲೈ ಸುಂದರಿ! ನಿನ್ನ ಜಡೆಯೆಂಬ ಕಠಾರಿಯೊಂದಿಗೆ ನೀನು ನಿಜಕ್ಕೂ ಯುವಕರಿಗೆ ಮಾರಣಶಾಲೆಯೇ ಆಗಿರುವೆ! ನಿನ್ನ ಈ ಚರಮಾಂಗವನ್ನು ಕವಿತ್ವದಿಂದ ವರ್ಣಿಸಿ ಯಾರು ತಾನೇ ಪಾತಕಿಯಾಗುವನು?' 

    ಸುಂದರಿಯ ಜಡೆ ಅದೆಷ್ಟು ಸುಂದರವಾಗಿದೆಯೆಂದರೆ ಅದು ಯುವಜನರ ಮನಸ್ಸನ್ನು ವಶಪಡಿಸಿಕೊಳ್ಳುತ್ತಿದೆ! ಹಾಗಾಗಿ ಕವಿಯು ಆ ಜಡೆಯನ್ನು ಯುವಕರನ್ನು ಕೊಲ್ಲುವ ಕಠಾರಿಗೆ ಹೋಲಿಸುತ್ತಾನೆ! ಇಂಥ ಕಠಾರಿಯಂಥ ಕೇಶಪಾಶವನ್ನು ಹೊಂದಿರುವ ಅವಳು ಯುವಕರನ್ನು ಕೊಲ್ಲುವ ಮಾರಣಶಾಲೆಯೇ ಹೌದು ಎನ್ನುತ್ತಾನೆ! ಅವಳ ಈ ಚರಮಾಂಗವನ್ನು, ಅಂದರೆ ದುಷ್ಟ ಅಂಗವನ್ನು ( ಅಂತ್ಯವನ್ನು ತರುವ) ಅಥವಾ ಕೊನೆಯ ಅಂಗವನ್ನು ( ನಖಶಿಖಾಂತ ವರ್ಣನೆಯಲ್ಲಿ ಕೊನೆಯ ಅಂಗ) ವರ್ಣಿಸಿ ಪಾತಕಿಯಾಗುವ ಕವಿ ಯಾರು ತಾನೇ ಇದ್ದಾರೆ ಎಂದು ಕವಿಯೇ ಕೇಳುತ್ತಾನೆ! ಅಂದರೆ ಯುವಕರನ್ನು ಕೊಲ್ಲುತ್ತಿರುವ ಅವಳ ಕಠಾರಿಯಂಥ ಕೇಶಪಾಶವನ್ನು ವರ್ಣಿಸಿದರೆ ಕವಿಯು ಪಾಪಿಯಾಗುತ್ತಾನೆ ಎಂದು ವಿರೋಧಾತ್ಮಕವಾಗಿ ಅವಳ ಕೇಶ ಸೌಂದರ್ಯವನ್ನು ವರ್ಣಿಸುತ್ತಾನೆ.

ಸುಂದರೀಶತಕ - ೨೬

ಸಂಸ್ಕೃತ ಮೂಲ 

ಸೀಮಂತಿನಿ ತವ ಕುಟಿಲಸ್ನಿಗ್ಧಾಯತಮೇಚಕ: ಕಟಾಕ್ಷ ಇವ / ಹಾ ಹಂತ ಕೇಶಹಸ್ತೋ ಹೃದಯಂ ಹಸ್ತಾದ್ವಿಹಸ್ತಯತಿ //

ಕನ್ನಡ ಅನುವಾದ 

        ' ಸುಂದರ ಕೇಶದ ಸುಂದರಿ! ನಿನ್ನ ಕೇಶಹಸ್ತವು ( ಕೇಶಪಾಶ) ನಿನ್ನ ಕಡೆಗಣ್ಣ ಕುಡಿನೋಟದಂತೆ ಕುಟಿಲವೂ ಸ್ನಿಗ್ಧವೂ ಉದ್ದವಾಗಿಯೂ ಕಡುಕಪ್ಪಾಗಿಯೂ ಇದ್ದು, ಅಯ್ಯೋ! ನನ್ನ ಹೃದಯವನ್ನು ನನ್ನ ಹಸ್ತದಿಂದ ವಿಹಸ್ತಗೊಳಿಸುತ್ತಿದೆ!' 
      ಇಲ್ಲಿ ಕವಿಯು ಹೆಣ್ಣಿನ ಕೇಶಪಾಶವನ್ನು ಅವಳ ಕಟಾಕ್ಷ ಅಥವಾ ಕಡೆಗಣ್ಣ ಕುಡಿನೋಟಕ್ಕೆ ಹೋಲಿಸಿದ್ದಾನೆ. ಹಾಗಾಗಿ ಅವಳ ಕೇಶಪಾಶವು ಅವಳ ಕಟಾಕ್ಷದಂತೆ ಕುಟಿಲವೂ ( ವಕ್ರವೂ) ಸ್ನಿಗ್ಧವೂ ( ಕೋಮಲ ಹಾಗೂ ತೈಲಯುಕ್ತ ಹಾಗೂ ಸ್ನೇಹಯುಕ್ತ), ಉದ್ದವಾಗಿಯೂ ಕಡುಕಪ್ಪಾಗಿಯೂ ಇದೆ! ಇಂಥ ಸುಂದರ ಕೇಶಪಾಶವು ಹಸ್ತದಂತಿದ್ದು, ನನ್ನ ಹಸ್ತದಿಂದ ನನ್ನ ಹೃದಯವನ್ನು ಅಪಹರಿಸುತ್ತಾ ಅದನ್ನು ವಿಹಸ್ತಗೊಳಿಸುತ್ತಿದೆ ಎಂದು ಉತ್ಪ್ರೇಕ್ಷೆಯಿಂದ ಕವಿಯು ಅವಳ ಕೇಶವನ್ನು ವರ್ಣಿಸುತ್ತಾನೆ. 

ಸೋಮವಾರ, ಏಪ್ರಿಲ್ 20, 2026

ಗೋಪೀನಾಥಂನಲ್ಲಿ ಒಂದು ದಿನ

ಗೋಪೀನಾಥಂ ಎಂದಕೂಡಲೇ ನಮಗೆ ನೆನಪಾಗುವುದು ವೀರಪ್ಪನ್! ಹೌದು, ಅದೇ ದಪ್ಪ ಮೀಸೆಯ, ಒಣಕಲು ಶರೀರದ, ಗಜಹಂತಕ, ದಂತಚೋರ, ನರಹಂತಕ, ಕ್ರೂರ ವೀರಪ್ಪನ್! ಅವನು ಹುಟ್ಟಿದ ಹಳ್ಳಿ, ಈ ಗೋಪೀನಾಥಂ! ಆ ಕಾರಣದಿಂದಲೇ ಯಾರೂ ಇತ್ತ ಮುಖ ಮಾಡುತ್ತಿರಲಿಲ್ಲ! ಆದರೆ ಒಂದು ಕರಾಳ ಅಧ್ಯಾಯ ಮುಗಿದ ನಂತರ ಹೊಸ ಅಧ್ಯಾಯ ತೆರೆದುಕೊಳ್ಳುವಂತೆ, ಕರಾಳ ಕತ್ತಲೆಯ ಛಾಯೆ, ಬೆಳಕಿನ ಪ್ರಕಾಶದಿಂದ ನಿವಾರಣೆಯಾಗುವಂತೆ, ಈಗ ವೀರಪ್ಪನ್ ಅಧ್ಯಾಯ ಮುಗಿದು, ಗೋಪೀನಾಥಂನ ಪ್ರಕೃತಿ ಸೌಂದರ್ಯದ ನಿಧಿ ಅನಾವರಣಗೊಳ್ಳುತ್ತಿದೆ!
    ಅಂಥದ್ದೇನಿದೆ ಈ ಗೋಪೀನಾಥಂನಲ್ಲಿ ಎಂದು ನೀವು ಕೇಳಬಹುದು. ಅದನ್ನು ಇಲ್ಲಿಗೆ ಬಂದು ಅನುಭವಿಸಿದರಷ್ಟೇ ತಿಳಿಯುತ್ತದೆ ಎನ್ನಬಹುದು! ಇಲ್ಲೊಂದು ಅಲೌಕಿಕ ಮತ್ತು ನಿಗೂಢವೆನಿಸುವ ಪ್ರಕೃತಿ ಸೌಂದರ್ಯವಿದೆ! ಮನಸ್ಸಿಗೆ ಮುದ ತಂದು ಮೈಮರೆಯುವಂತೆ ಮಾಡುವ ದಿವ್ಯಾನುಭವ ಸಿಗುತ್ತದೆ ಇಲ್ಲಿ! ಹಾಗಾಗಿಯೇ ಜಂಗಲ್ ಲಾಡ್ಜಸ್ ನವರು ಇಲ್ಲಿನ ಕ್ಯಾಂಪ್ ಗೆ ಗೋಪೀನಾಥಂ ಮಿಸ್ಟ್ರಿ ಟ್ರೇಲ್ಸ್ ಎಂದು ಹೆಸರಿಟ್ಟಿದ್ದಾರೆ. ಅಂದರೆ ಗೋಪೀನಾಥಂ ನ ನಿಗೂಢ ಪಥಗಳು ಎಂದರ್ಥ. 
     ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ನ ವಸತಿಯಲ್ಲಿ ಉಳಿದುಕೊಂಡು ಅದರ ಸಿಬ್ಬಂದಿಯ ಮಾರ್ಗದರ್ಶನದಲ್ಲಿ ಗೋಪೀನಾಥಂ ಅನ್ನು ನೋಡಿ, ಸುತ್ತಲಿನ ಕಾವೇರಿ ವನ್ಯಜೀವಿ ಅಭಯಾರಣ್ಯದ ಸೌಂದರ್ಯವನ್ನು ಅನುಭವಿಸಿದರೆ ನಮಗೆ ಆ ಸೌಂದರ್ಯಾನುಭವ ಚೆನ್ನಾಗಿ ಆಗುತ್ತದೆ. ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್, ನಮ್ಮ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ ಬರುವ ಸಂಸ್ಥೆಯಾಗಿದ್ದು, ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳೇ ಇದನ್ನು ನಡೆಸುತ್ತಾರೆ. ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಸಂಸ್ಥೆಯಡಿಯಲ್ಲಿ ಅರಣ್ಯಧಾಮಗಳ ಬಳಿಯೇ ಇರುವ ಹಲವಾರು ಕೇಂದ್ರಗಳಿದ್ದು ಇವು ನಮಗೆ ಅರಣ್ಯಗಳಲ್ಲಿ ಸಫಾರಿ ಮಾಡಿಸುವುದೇ ಮೊದಲಾಗಿ ಅನೇಕ ಶೈಕ್ಷಣಿಕ ಚಟುವಟಿಕೆಗಳನ್ನು ಮಾಡಿಸುತ್ತವೆ. ನಗರದ ಜಂಜಾಟದಿಂದ ದೂರವಾಗಿ ಪ್ರಕೃತಿಯ ಮಡಿಲಲ್ಲಿ ವನ್ಯಜೀವಿಗಳನ್ನು ನೋಡಿ ನಲಿದು, ಅವುಗಳ ಬಗ್ಗೆ ಕಲಿತು, ಸ್ವಾದಿಷ್ಟ ಭೋಜನ ಸವಿದು, ಮನಸ್ಸನ್ನು ಉಲ್ಲಾಸಗೊಳಿಸಲು ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಕೇಂದ್ರಗಳು ಬಹಳ ಅನುಕೂಲ ಮಾಡಿಕೊಡುತ್ತವೆ.‌ ಗೋಪೀನಾಥಂ ಮಿಸ್ಟ್ರಿ ಟ್ರೇಲ್ಸ್ ಕೂಡ ಇವುಗಳಲ್ಲಿ ಒಂದು. ಎಲ್ಲಾ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಕೇಂದ್ರಗಳಂತೆ ಇಲ್ಲಿಗೆ ಹೋಗಲು ಕೂಡ ಇವರ ಅಂತರ್ಜಾಲ ತಾಣದಲ್ಲಿ ನಮ್ಮ ಸ್ಥಳವನ್ನು ಮೊದಲೇ ಹಣ ಪಾವತಿಸಿ ಕಾಯ್ದಿರಿಸಿಕೊಂಡು ಹೋಗಬೇಕು.‌ ಇವರ ಅಂತರ್ಜಾಲ ತಾಣ, www.junglelodges.com ಆಗಿರುತ್ತದೆ. ಅದರಲ್ಲಿ ಗೋಪೀನಾಥಂ ಮಿಸ್ಟ್ರಿ ಟ್ರೇಲ್ಸ್ ವಿಷಯವನ್ನು ಹುಡುಕಿ ನಮ್ಮ ಸ್ಥಳವನ್ನು ಬೇಕಾದ ದಿನಾಂಕದಂದು ಕಾಯ್ದಿರಿಸಿಕೊಳ್ಳಬೇಕು. ನಿಗದಿತ ದಿನ, ಮಧ್ಯಾಹ್ನ ಹನ್ನೆರಡುವರೆ ಗಂಟೆಗೆ ಚೆಕ್ ಇನ್, ಅಂದರೆ ಪ್ರವೇಶವಿದ್ದರೆ, ಮರುದಿನ ಬೆಳಿಗ್ಗೆ ಹತ್ತುವರೆ ಗಂಟೆಯ ಹೊತ್ತಿಗೆ, ಉಪಾಹಾರದ ಬಳಿಕ ಚೆಕ್ ಔಟ್, ಅಂದರೆ ನಿರ್ಗಮನವಾಗಬೇಕು. ಇಲ್ಲಿಗೆ ಸ್ವಂತ ಇಲ್ಲವೇ ಖಾಸಗಿ ವಾಹನದಲ್ಲಿ ಹೋಗುವುದು ಒಳ್ಳೆಯದು. ಅಂತೆಯೇ ನಾನೂ ಖಾಸಗಿ ಕಾರ್ ನಲ್ಲಿ ಬೆಳಿಗ್ಗೆ ಆರುವರೆ ಗಂಟೆಗೆ ಹೊರಟೆ. ಕರ್ನಾಟಕ,ತಮಿಳುನಾಡುಗಳ ಅಂಚಿನಲ್ಲಿರುವ, ಚಾಮರಾಜನಗರ ಜಿಲ್ಲೆಯಲ್ಲಿರುವ ಈ ಪುಟ್ಟ ಹಳ್ಳಿಗೆ ಹೋಗಲು ಬೆಂಗಳೂರಿನಿಂದ ಸುಮಾರು 250 ಕಿ.ಮೀ. ದೂರವಾಗುತ್ತದೆ ಹಾಗೂ ಸುಮಾರು ಐದು ಗಂಟೆಗಳಾಗುತ್ತವೆ. ಮದ್ದೂರಿನ ಮೇಲೆ ಹೋಗುತ್ತಾ, ದಾರಿಯಲ್ಲಿ ಮದ್ದೂರು ಟಿಫಾನಿಸ್ ಉಪಾಹಾರ ಮಂದಿರದಲ್ಲಿ ಉಪಾಹಾರ ಮುಗಿಸಿಕೊಂಡು ಹೊರಟೆ. ಮುಂದೆ ಮಲೆಮಹದೇಶ್ವರ ಬೆಟ್ಟದ ಮೇಲೆ ಹೋಗಿ ಈ ಬೆಟ್ಟದ ಪ್ರಕೃತಿ ಸೌಂದರ್ಯವನ್ನು ಸವಿಯುವಂತಾಯಿತು. ಒಂದು ಸುಂದರ ವ್ಯೂ ಪಾಯಿಂಟ್ ನಲ್ಲಿ ನಿಲ್ಲಿಸಿ ತಂಗಾಳಿಯೊಂದಿಗಿನ ಸುತ್ತಮುತ್ತಲಿನ ಬೆಟ್ಟಗುಡ್ಡಗಳ ಹಾಗೂ ಹಸಿರು ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ ಸೊಗಸಾದ ಫೋಟೋಗಳನ್ನು ಕ್ಲಿಕ್ಕಿಸಿದೆ. ದೂರದಲ್ಲಿ ಮಲೆಮಹದೇಶ್ವರ ಸ್ವಾಮಿ ಹುಲಿಯ ಮೇಲೇರಿ ಬರುತ್ತಿರುವ ಸುಂದರ ವಿಗ್ರಹ ಕಾಣಿಸಿತು! ಮುಂದೆ ಹೋಗುತ್ತಿದ್ದಂತೆ ದಾರಿಯುದ್ದಕ್ಕೂ ಹಸಿರು ಪ್ರಕೃತಿಯ ಸೌಂದರ್ಯವನ್ನು ಕಣ್ಮನ ತುಂಬಿಕೊಳ್ಳಬಹುದು! ಅಷ್ಟು ಸೊಗಸಾಗಿದೆ ದಾರಿ! ಮಳೆಗಾಲ ಅಥವಾ ಮಳೆಗಾಲ ಕಳೆದ ಕೂಡಲೇ ಹೋದರೆ ಒಳ್ಳೆಯ ಅನುಭವವಾಗುತ್ತದೆ. 
     ಮುಂದೆ, ಗೋಪೀನಾಥಂ ವಲಯದ ಕಾವೇರಿ ವನ್ಯಜೀವಿ ಅಭಯಾರಣ್ಯದ ಚೆಕ್ ಪೋಸ್ಟ್ ತಲುಪಿ, ಶುಲ್ಕ ಕಟ್ಟಲು ಗಾಡಿ ನಿಲ್ಲಿಸಲಾಯಿತು. ಇಲ್ಲಿ ಕಾಡಿನ ಜುಂಯ್ ಗುಟ್ಟುವ ಶಬ್ದ, ಅಲ್ಲಲ್ಲಿ ನವಿಲಿನ ಶಬ್ದಗಳು, ಸುತ್ತಲಿನ ಹಸಿರು ವನರಾಜಿ, ತಂಪಾದ ಹವೆ, ಬಹಳ ಮುದ ತಂದವು! ಇಲ್ಲಿ ಹೊಗೇನಕಲ್ ಜಲಪಾತದ ಬಗ್ಗೆ ಒಂದು ಫಲಕ ಹಾಕಿದ್ದಾರೆ. ಹೊಗೇನಕಲ್ ಜಲಪಾತ ಗೋಪೀನಾಥಂನಿಂದ ಕೇವಲ ಹತ್ತು ಹನ್ನೆರಡು ಕಿ.ಮೀ. ದೂರವಿರೂವುದರಿಂದ, ಈ ಜಾಗ ನೋಡಿದ ಬಳಿಕ ಅಲ್ಲಿಗೆ ಹೋಗಬಹುದು.
    ಚೆಕ್ ಪೋಸ್ಟ್ ದಾಟಿ ಮುಂದೆ ಹೋಗುತ್ತಿದ್ದಂತೆ ದಾರಿಯಲ್ಲೇ ಚುಕ್ಕಿ ಜಿಂಕೆಗಳ ಒಂದು ಹಿಂಡು ಕಾಣಿಸಿತು! ಜಿಂಕೆಗಳ ಫೋಟೋ ಹಿಡಿದು ಮುಂದೆ ಹೋಗುತ್ತಿದ್ದಂತೆ, ಪಾಲಾರ್ ಹಳ್ಳಿ ಸಿಕ್ಕಿತು.‌ ದೂರದಲ್ಲಿ ಕಾವೇರಿ ನದಿ ಸಣ್ಣಗೆ ಹರಿಯುತ್ತಿದ್ದುದನ್ನು ನನ್ನ ಡ್ರೈವರ್ ತೋರಿಸಿದರು. ಇಲ್ಲಿನ ಪ್ರಕೃತಿ ಸೌಂದರ್ಯ ಅಮೋಘ! ಪಾಲಾರ್- ಗೋಪೀನಾಥಂ ರಸ್ತೆಯೆಂಬ ಈ ರಸ್ತೆಯಲ್ಲಿ ಹೋಗುತ್ತಾ ಎರಡೂ ಬದಿಗಳಲ್ಲಿನ ಬಂಡೆಗಲ್ಲು ಸಹಿತವಾದ ಹಸಿರು ಅರಣ್ಯದ ಸೊಬಗನ್ನು ಸವಿಯುತ್ತಾ ಸಾಗಿದೆ. ಇನ್ನು ಸುಮಾರು ಇಪ್ಪತ್ತು ಕಿ.ಮೀ.ಗಳಲ್ಲಿ ಗೋಪೀನಾಥಂ ತಲುಪುವವರಿದ್ದೆವು. ದಾರಿಯಲ್ಲಿ ನವಿಲುಗಳು ಓಡಾಡುತ್ತಿದ್ದುದನ್ನು ಕಂಡು ಆನಂದದಿಂದ ಫೋಟೋ ಕ್ಲಿಕ್ಕಿಸಿ ದೆ! ಅಂತೆಯೇ ಹದ್ದುವಿನಂಥ ಒಂದು ಪಕ್ಷಿ ಕುಳಿತದ್ದು ಕಾಣಿಸಿತು! ಕೂಡಲೇ ಫೋಟೋ ತೆಗೆದು ವಿಡಿಯೋ ಮಾಡಿದೆ.‌ಆಮೇಲೆ ಇದು ಶಿಕ್ರ ಎಂಬ ಪಕ್ಷಿ ಎಂದು ತಿಳಿಯಿತು.‌ ಇಂಥ ಪಕ್ಷಿಗಳನ್ನು ರಾಪ್ಟರ್ ಅಥವಾ ಬರ್ಡ್ ಆಫ್ ಪ್ರೇ ಎನ್ನುತ್ತಾರೆ.‌ ಅಂದರೆ ಇತರ ಪಕ್ಷಿಗಳನ್ನೂ ಪ್ರಾಣಿಗಳನ್ನೂ ಹಿಡಿದು ತಿನ್ನುವ ಪಕ್ಷಿಗಳು.‌
      ಮುಂದೆ ಹೋದಂತೆ, ಆನೆಯ ಚಿಹ್ನೆಯಿರುವ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಅವರ ಫಲಕ ಕಾಣಿಸಿತು. ಅದು ಗೋಪೀನಾಥಂ ಶಿಬಿರಕ್ಕೆ ದಾರಿ ತೋರಿಸುತ್ತಿತ್ತು. ಆ ದಾರಿಯಲ್ಲಿ ಹೋದಂತೆ ನಾವು ಗೋಪೀನಾಥಂ ಶಿಬಿರವನ್ನು ತಲುಪಿದೆವು. ಗೋಪೀನಾಥಂ ಮಿಸ್ಟ್ರಿ ಟ್ರೇಲ್ಸ್ ಎಂಬ ದೊಡ್ಡ ಫಲಕ ನಮ್ಮನ್ನು ಸ್ವಾಗತಿಸಿತು! ಗೇಟಿನೊಳಗಿಂದ ಮುಂದೆ ಹೋಗಿ ಶಿಬಿರದ ಕಛೇರಿಗೆ ಬಂದೆವು. ಕಛೇರಿ ಹಾಗೂ ಸಭಾಂಗಣ ಒಟ್ಟಿಗಿದ್ದು ಇದಕ್ಕೆ ಸುಪ್ರಸಿದ್ಧ ಅರಣ್ಯಾಧಿಕಾರಿಗಳಾಗಿದ್ದ ದಿ.ಪಿ.ಶ್ರೀನಿವಾಸ್ ಅವರ ಹೆಸರನ್ನಿಟ್ಟಿದ್ದಾರೆ. ವೀರಪ್ಪನ್ ನಿಂದ ದುರ್ಮರಣಕ್ಕೀಡಾದ ಇವರು ಗೋಪೀನಾಥಂ ಗ್ರಾಮಕ್ಕೆ ಬಹಳ ಅನುಕೂಲಗಳನ್ನು ಮಾಡಿಕೊಟ್ಟಿದ್ದರು. ಕಛೇರಿಯ ಎದುರಿಗೇ ಇವರ ಒಂದು ಪುತ್ಥಳಿಯನ್ನು ಇರಿಸಲಾಗಿದೆ. ಕಛೇರಿಯ ಗೋಡೆಗಳ ಮೇಲೆ ಇಲ್ಲಿನ ಕಾಡಿನಲ್ಲೇ ಸಿಕ್ಕ ಚಿರತೆಗಳೇ ಮೊದಲಾದ ಪ್ರಾಣಿಗಳ ಸುಂದರವಾದ ಛಿಯಾಚಿತ್ರಗಳನ್ನು ಹಾಕಿದ್ದಾರೆ. ಕಛೇರಿಯಲ್ಲಿ ನಾವು ಮೊದಲು ನಮ್ಮ ಹೆಸರು, ವಿಳಾಸ, ಮೊದಲಾದ ವಿವರಗಳನ್ನು ಒಂದು ಪುಸ್ತಕದಲ್ಲಿ ಬರೆದು, ಆಧಾರ್ ಕಾರ್ಡ್ ಅಥವಾ ಯಾವುದಾದರೂ ಗುರುತಿನ ಚೀಟಿಯನ್ನು ಸಿಬ್ಬಂದಿಯವರಿಗೆ ತೋರಿಸಬೇಕು. ಇವೆಲ್ಲವನ್ನೂ ನಾನು ಮಾಡಿದ ಬಳಿಕ, ಇಲ್ಲಿನ ಸಿಬ್ಬಂದಿಯವರು ಸ್ವಾಗತ ಪಾನೀಯವಾಗಿ ( ವೆಲ್ಕಂ ಡ್ರಿಂಕ್) ನಿಂಬೆಹಣ್ಣಿನ ರಸವನ್ನು ನೀಡಿ, ಒಂದು ಕಾಟೇಜ್ ಅನ್ನು ನನಗೆ ನಿಗದಿಪಡಿಸಿದರು. ಅನಂತರ, ಆ ದಿನದ ಹಾಗೂ ಮರುದಿನದ ಚಟುವಟಿಕೆಗಳ ವಿವರಗಳನ್ನು ಹೇಳಿದರು. ಡ್ರೈವರ್ ಗೆ ಪ್ರತ್ಯೇಕ ಊಟ ಹಾಗೂ ಮಲಗಲು ಡಾರ್ಮಿಟರಿ ಕೊಡುವುದಾಗಿ ಹೇಳಿದರು. ನಾನು ಕಂಡಂತೆ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ನ ಎಲ್ಲಾ ಕೇಂದ್ರಗಳಲ್ಲೂ ಸಿಬ್ಬಂದಿಯವರು ಬಹಳ ಸ್ನೇಹದಿಂದ ವರ್ತಿಸುತ್ತಾರೆ. ಅವರಲ್ಲೊಬ್ಬರು ನನ್ನ ಲಗೇಜನ್ನು ತೆಗೆದುಕೊಂಡು ಕಾಟೇಜ್ ಗೆ ಕರೆದೊಯ್ದರು. ವೀರಪ್ಪನ್ ಒಬ್ಬ ದುಷ್ಟನಾದರೂ ಗೋಪೀನಾಥಂ ಗ್ರಾಮಕ್ಕೆ ಅನುಕೂಲಗಳನ್ನು ಮಾಡಿಕೊಟ್ಟುದರಿಂದ ಇಲ್ಲಿನ ಜನರು ಅವನನ್ನು ಆದರಿಸುತ್ತಾರೆಂದು ಸಿಬ್ಬಂದಿಯವರು ಹೇಳಿದಾಗ ನನಗೆ ಆಶ್ಚರ್ಯವಾಯಿತು!
     ಇಲ್ಲಿನ ಕಾಟೇಜ್ ಗಳು ಬಹಳ ಅಂದವಾಗಿವೆ! ಮುದ್ದಾದ ಪುಟ್ಟ ಗುಡಿಸಲಿನ ಆಕಾರದಲ್ಲಿರುವ ಇವು, ವಾಸ್ತವವಾಗಿ ಟೆಂಟ್ ಕಾಟೇಜ್ ಗಳು. ಹುಲ್ಲಿನ ಮೇಲ್ಛಾವಣಿ ಹೊಂದಿದ್ದು, ಗೋಡೆಗಳೆಲ್ಲವೂ ಟಾರ್ಪಾಲಿನಿಂದ ಮಾಡಲಾಗಿದ್ದು, ಶೌಚಾಲಯದ ಗೋಡೆ ಹಾಗೂ ಕಾಟೇಜ್ ನಿಂತಿರುವ ಎತ್ತರದ ತಳಹದಿ ಮಾತ್ರ ಇಟ್ಟಿಗೆಯದ್ದಾಗಿವೆ. ಇದಕ್ಕೆ ಮರದ ಬಾಗಿಲು, ಒಳಗೆ ಚಿಲಕ ಹಾಗೂ ಹೊರಗೆ ಬೀಗ ಇವೆ. ಕಾಟೇಜ್ ನ ಒಳಗೆ ಶೌಚಾಲಯ ಸೇರಿದಂತೆ ಎಲ್ಲವೂ ಸ್ವಚವಾಗಿವೆ. ಎರಡು ಶುಭ್ರ ಹಾಸಿಗೆಗಳು, ಮರದ ಕುರ್ಚಿಗಳು ಮತ್ತು ಒಂದು ಸ್ಟ್ಯಾಂಡ್, ಒಂದು ನೀರಿನ ಜಗ್, ಒಂದು ಕಾಫಿ ಮೇಕರ್, ಲೋಟಗಳು, ಚಾರ್ಜ್ ಮಾಡಲು ಪ್ಲಗ್ ಪಾಯಿಂಟ್ ಹಾಗೂ ವಿದ್ಯುತ್ ದೀಪಗಳು, ಫ್ಯಾನ್, ಹಾಗೂ ಏರ್ ಕೂಲರ್ ಇವೆಲ್ಲವೂ ಇವೆ ಇಲ್ಲಿ. ಒಟ್ಟು ಹತ್ತು ಕಾಟೇಜ್ ಗಳಿದ್ದು ಇವುಗಳ ಸುತ್ತಲೂ ಬಂಡೆ ಕಲ್ಲುಗಳ ಸೊಗಸಾದ ದಿಬ್ಬವಿದೆ. ಕಾಟೇಜ್ ನ ತಳಹದಿಯ ಮೇಲೆ ನಡೆಯುತ್ತಾ ಒಂದು ಸುತ್ತು ಹಾಕಲು ಬಹಳ ಹಿತವಾಗಿರುತ್ತದೆ. ಸುತ್ತಲೂ ಮರಗಿಡಗಳ ಹಸಿರು ಪ್ರಕೃತಿಯ ಸೊಬಗು, ತಂಪಾಗಿ ಬೀಸುವ ಗಾಳಿ, ಸ್ವಚ್ಛ ವಾತಾವರಣ, ನಮಗೆ ಆಹ್ಲಾದ ನೀಡುತ್ತವೆ! ಕ್ಯಾಂಪಸ್ ನ ಎದುರಿಗೇ ಇರುವ ಗೋಪೀನಾಥಂ ಕೆರೆ ಎಂಬ ದೊಡ್ಡ ಕೆರೆ ಹಾಗೂ ಅದರ ಸುತ್ತಲೂ ಇರುವ ದೊಡ್ಡ ಬೆಟ್ಟ ಈ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ! ಇವುಗಳೊಂದಿಗೆ ಕಾಡಿನ ಜುಂಯ್ ಗುಟ್ಟುವ ಶಬ್ದ, ಇವೆಲ್ಲವೂ ಸೇರಿ ನಮಗೆ ಯಾವುದೋ ಲೋಕಕ್ಕೆ ಬಂದ ಅನುಭವ ನೀಡುತ್ತವೆ! 
      ಮುಖ ತೊಳೆದು ದಣಿವಾರಿಸಿಕೊಂಡು ಕ್ಯಾಂಪಸ್ ನಲ್ಲಿ ಒಂದು ಸಣ್ಣ ಸುತ್ತು ಹಾಕುವ ಹೊತ್ತಿಗೆ ಮಧ್ಯಾಹ್ನ ಒಂದುವರೆ ಗಂಟೆಯಾಗಿ ಭೋಜನದ ಹೊತ್ತಾಯಿತು.‌ ಎಲ್ಲಾ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಕೇಂದ್ರಗಳಂತೆ ಭೋಜನ ಮಾಡುವ ತಾಣ, ಗೋಲ್ ಘರ್ ಎಂಬ ಮಂದಿರ. ಗೋಳಾಕಾರದಲ್ಲಿರುವುದರಿಂದ ಇದನ್ನು ಗೋಲ್ ಘರ್ ಎನ್ನುತ್ತಾರೆ. ಸೊಗಸಾದ, ರುಚಿಯಾದ, ಶುಚಿಯಾದ, ತಾಜಾ ಊಟಕ್ಕೆ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಹೆಸರುವಾಸಿ! ಮುಖ್ಯವಾಗಿ ಸಸ್ಯಾಹಾರದ ಖಾದ್ಯಗಳಿದ್ದರೂ ಒಂದೆರಡು ಮಾಂಸಾಹಾರದ ಖಾದ್ಯಗಳೂ ಇರುತ್ತವೆ. ಅಂದು, ತರಕಾರಿ ಸಲಾಡ್, ಚಪಾತಿ, ಪಲ್ಯ, ಸಾಗು, ಪಲಾವ್, ಬಿಳಿ ಅನ್ನ, ಸಾಂಬಾರ್, ರಸಂ, ಪಾಯಸ, ಮೊಸರು, ಉಪ್ಪಿನಕಾಯಿ, ನಾನ್ ವೆಜ್ ಖಾದ್ಯಗಳು, ಕೊನೆಗೆ ಬಾಳೆಹಣ್ಣು, ಇವಿಷ್ಟೂ ಇದ್ದವು. ಗೋಲ್ ಘರ್ ಅರೆತೆರೆದ ಮಂದಿರವಾದ್ದರಿಂದ ಪ್ರಕೃತಿಯ ಮಧ್ಯೆ ಕುಳಿತು ಊಟ ಮಾಡುವ ಅನುಭವ ಸೊಗಸಾಗಿರುತ್ತದೆ. ಜೊತೆಗೆ ಕುಶನ್ ಸಹಿತವಾದ ಮರದ ಕುರ್ಚಿಗಳು, ಮರದ ಮೇಜು, ಬಿಸಿಲಿನ ಝಳ ಬರದಿರಲೆಂದು ಹಾಕಿರುವ ರಂಧ್ರಗಳ ಕರ್ಟನ್ ಗಳು, ಇವುಗಳಿಂದ ಒಂದು ರೀತಿಯ ಗ್ರಾಮೀಣ ಸೊಗಡಿನ ವಾತಾವರಣ ಮೂಡಿ ಹಿತವೆನಿಸುತ್ತದೆ.
      ಮುಂದಿನ ಚಟುವಟಿಕೆ, ವನ್ಯಜೀವಿ ಸಫಾರಿ. ಅಂದರೆ ತೆರೆದ ಜೀಪಿನಲ್ಲಿ ಕಾಡಿನೊಳಗೆ ಕರೆದೊಯ್ಯುವುದು. ಇದಕ್ಕೆ ನಾವು ಹೊರಡುವಾಗ ಪ್ರತ್ಯೇಕವಾಗಿ ಹಣ ಕೊಡಬೇಕಿತ್ತು. ಜಂಗಲ್ ಲಾಡ್ಜಸ್ ನ ಬಂಡೀಪುರ , ನಾಗರಹೊಳೆ, ಮೊದಲಾದ ಕೆಲವು ಕೇಂದ್ರಗಳಲ್ಲಿ ಸಫಾರಿಯೂ ಪ್ಯಾಕೇಜ್ ನಲ್ಲಿ ಸೇರಿರುತ್ತದೆ. ಗೋಪೀನಾಥಂನಂಥ ಕೆಲವು ಕೇಂದ್ರಗಳಲ್ಲಿ ಸಫಾರಿಗೆ ಪ್ರತ್ಯೇಕ ಹಣ ಕೊಡಬೇಕಾಗುತ್ತದೆ. ಸಫಾರಿ ಇದ್ದದ್ದು ನಾಲ್ಕು ಗಂಟೆಗಾದ್ದರಿಂದ ಸಾಕಷ್ಟು ಸಮಯವಿತ್ತು. ಪುಷ್ಕಳ ಭೋಜನದ ನಂತರ ಕೆಲವರು ಕಾಟೇಜ್ ನಲ್ಲಿ ವಿಶ್ರಾಂತಿ ಪಡೆಯಲು ಹೋದರೆ ಕೆಲವರು ಮಕ್ಕಳಿಗೆ ಆಡಿಸಲು ಆಟದ ಮೈದಾನಕ್ಕೆ ಹೋದರು. ಇಲ್ಲಿ ಮಕ್ಕಳು ಆಡಲು ಹಲವು ಆಟದ ಚಟುವಟಿಕೆಗಳಿರುವ ಸೊಗಸಾದ ಮೈದಾನವಿದೆ. ಅಂತೆಯೇ ಇಲ್ಲಿ ಅನೇಕ ಸಾಹಸ ಕ್ರೀಡೆಗಳಿವೆ. ಹಾಗೆಯೇ ಇಲ್ಲಿ ಕಂಬಗಳಿಗೆ ಕಟ್ಟಿರುವ ಹ್ಯಮೋಕ್ ಅಥವಾ ತೂಗುಯ್ಯಲೆ ಇದ್ದು ಅದರ ಮೇಲೆ ಮಲಗಿ ಸುಖವಾಗಿ ವಿಶ್ರಾಂತಿ ಪಡೆಯಬಹುದು.ನಾನು ಪ್ರಕೃತಿ ಸೌಂದರ್ಯದ ಅನ್ವೇಷಣೆ ಮಾಡತೊಡಗಿದೆ.‌ ಇಲ್ಲಿ ಹಲವಾರು ಹೂಗಿಡಗಳೂ ಬಣ್ಣಬಣ್ಣದ ಚಿಟ್ಟೆಗಳೂ ಪಕ್ಷಿಗಳೂ ಇವೆ.‌ ಅವುಗಳನ್ನು ಹುಡುಕುತ್ತಾ ಫೋಟೋ ಹಿಡಿಯತೊಡಗಿದೆ. ಮುಖ್ಯವಾಗಿ, ಕಾಮನ್ ಮಾರ್ಮಾನ್ ಚಿಟ್ಟೆ, ಪ್ಲೇನ್ ಟೈಗರ್ ಚಿಟ್ಟೆ, ಆರೆಂಜ್ ಟಿಪ್ ಚಿಟ್ಟೆ, ಮೊದಲಾದ ಸುಂದರ ಚಿಟ್ಟೆಗಳು ನನ್ನ ಕ್ಯಾಮೆರಾದಲ್ಲಿ ಸೆರೆಯಾದವು! ಅಂತೆಯೇ ಥ್ರೆಡ್ ವೇಯ್ಸ್ಟೆಡ್ ವ್ಯಾಸ್ಪ್ ( ದಾರದ ಸೊಂಟದ ಕಣಜ) ಎಂಬ ಮಣ್ಣಿನ ಕಣಜ, ಸ್ಪ್ಲೆಂಡರ್ ಸ್ಕಿಮ್ಮರ್ ಡ್ರ್ಯಾಗನ್ ಫ್ಲೈ ಎಂಬ ಸುಂದರವಾದ ಡ್ರ್ಯಾಗನ್ ಫ್ಲೈ ಅಥವಾ ಕೊಡತಿ ಕೀಟ ಕೂಡ ನೋಡಲು ಸಿಕ್ಕಿದವು. ಇಲ್ಲಿನ ಸಿಬ್ಬಂದಿಯವರು ಮರವೊಂದರ ಮೇಲೆ ಇಲ್ಲಿಯೇ ನೆಲೆಸಿದ್ದ ಚುಕ್ಕಿ ಗೂಬೆ ದಂಪತಿಗಳನ್ನು ತೋರಿಸಿದರು. ಮೈತುಂಬಾ ಚುಕ್ಕಿಗಳನ್ನು ಹೊಂದಿರುವ ಪುಟ್ಟ ಗೂಬೆಗಳಿವು. ಇವನ್ನು ಸ್ಪಾಟೆಡ್ ಔಲೆಟ್ ಗಳೆನ್ನುತ್ತಾರೆ. ನಾವು ಇವನ್ನೇ ಹಾಲಕ್ಕಿಗಳೆಂದು ಕರೆಯುವುದು. ಇವುಗಳ ಕೂಗು ಶಕುನ ಹೇಳುವುದೆಂದೂ ಅದನ್ನು ಬುಡುಬುಡಿಕೆಯವರು ಬಿಡಿಸಿ ಹೇಳುವರೆಂದೂ ನಂಬಿಕೆಯಿದೆ. ದೂರದಲ್ಲಿ ಕುಳಿತಿದ್ದ ಇವುಗಳ ಫೋಟೋಗಳನ್ನು ಕಷ್ಟಪಟ್ಟು ತೆಗೆದೆ. ಇಲ್ಲಿ ಅನೇಕ ಮರಗಳಿವೆ ಹಾಗೂ ಅವುಗಳ ಮೇಲೆ ಅವುಗಳ ಹೆಸರುಗಳ ಫಲಕಗಳನ್ನು ಹಾಕಿದ್ದಾರೆ. ಇಂಡಿಯನ್ ಬೀಚ್ (ಹೊಂಗೆ ಮರ), ಆಲದ ಮರ, ಬೋಗನ್ ವಿಲ್ಲ ಮರ, ಗುಲ್ ಮೊಹರು ( ಕತ್ತಿ ಕಾಯಿ ಮರ), ಅರಳಿ ಮರ, ಮೊದಲಾದ ಅನೇಕ ಮರಗಳಿವೆ ಇಲ್ಲಿ. ಹೀಗೆ ಕ್ಯಾಂಪಸ್ ನಲ್ಲಿ ಸುತ್ತಾಡುತ್ತಾ ಪ್ರಕೃತಿಯ ಹಲವಾರು ಜೀವಿಗಳನ್ನೂ ವೈಶಿಷ್ಟ್ಯಗಳನ್ನೂ ಇಲ್ಲಿ ನೋಡಬಹುದು! ಇಲ್ಲಿನ ಪರಿಸರವಾದಿಗಳನ್ನು ಕೇಳಿದರೆ ಅವರು ಅನೇಕ ವಿಚಾರಗಳನ್ನು ತಿಳಿಸಿಕೊಡುತ್ತಾರೆ. ಹಾಗೆಯೇ ನಡೆಯುತ್ತಾ ಗೋಪೀನಾಥಂ ಕೆರೆಯವರೆಗೂ ಹೋಗಬಹುದು. ಇಲ್ಲಿ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ ನಡೆಯುವುದು ಆಹ್ಲಾದಕರ ಹಾಗೂ ಆರೋಗ್ಯಕರವಾಗಿರುತ್ತದೆ. ಇಲ್ಲೊಂದು ಶಿಬಿರದ ಧ್ಯೇಯ ವಾಕ್ಯವನ್ನು ಹಾಕಿದ್ದಾರೆ.‌ ಅದೇನೆಂದರೆ, ಕ್ಯಾಂಪಿಂಗ್ ಮತ್ತು ಟ್ರೇಲ್ಸ್ ಸೌಲಭ್ಯಗಳ ಮುಖೇನ ನಿಸರ್ಗದೊಂದಿಗೆ ಸಂಬಂಧ ಬೆಸೆಯುವ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ಉತ್ತೇಜಿಸುವುದು. ಹೌದಲ್ಲವೇ? ಇಂಥ ಕ್ಯಾಂಪ್ ಗಳಿಂದ ನಮಗೆ ನಿಸರ್ಗದೊಂದಿಗೆ ಸಂಬಂಧ ಹೆಚ್ಚುತ್ತದೆ, ನಿಸರ್ಗದ ಮಹತ್ವ ತಿಳಿಯುತ್ತದೆ, ಹಾಗೂ ಅದರ ಮೇಲಿನ ಪ್ರೀತಿ ಹೆಚ್ಚಾಗಿ ವನ್ಯಜೀವಿ ಸಂರಕ್ಷಣೆಗೆ ನಾವೂ ಕೈಜೋಡಿಸುತ್ತೇವೆ. ಹಾಗಾಗಿ ಎಲ್ಲರೂ ಇಂಥ ಪ್ರಕೃತಿ ಶಿಬಿರಗಳಿಗೆ ಬರಬೇಕು.
      ಸಂಜೆ ನಾಲ್ಕು ಗಂಟೆಗೆ ಜೀಪ್ ಸಫಾರಿ ಆರಂಭವಾಯಿತು. ಜೀಪ್ ಗೋಪೀನಾಥಂ ಕೆರೆಯ ಸನಿಹದಿಂದ ಹೋಗುವಾಗ ದೃಶ್ಯ ಬಹಳ ಸೊಗಸಾಗಿ ಕಾಣುತ್ತದೆ. ಕಾವೇರಿ ವನ್ಯಜೀವಿ ಅಭಯಾರಣ್ಯದೊಳಗೆ ಹೋದಂತೆ ನಮಗೆ ಮೊದಲಿಗೆ, ಮರದ ಒಂದು ಕೊಂಬೆಯ ಮೇಲೆ ಕುಳಿತಿದ್ದ ಹಸಿರು ಇಂಪೀರಿಯಲ್ ಪಾರಿವಾಳ ಎಂಬ ಪಕ್ಷಿ ನೋಡಲು ಸಿಕ್ಕಿತು. ಇದು ನೀಲಿ ಹಸಿರು ಬಣ್ಣದ ಒಂದು ಪಾರಿವಾಳ. ಅದರ ಸನಿಹದಲ್ಲೇ ಚುಕ್ಕಿ ಪಾರಿವಾಳ ( ಸ್ಪಾಟೆಡ್ ಡವ್) ಕುಳಿತಿತ್ತು. ಇದು ಚುಕ್ಕಿಗಳಿರುವ ಒಂದು ಬಗೆಯ ಪಾರಿವಾಳ. ಮುಂದೆ ಹೋದಂತೆ ನವಿಲು ಗರಿಬಿಚ್ಚಿ ನರ್ತಿಸುತ್ತಿದ್ದುದು ಕಂಡಿತು! ಕಾಡಿನಲ್ಲಿ ಈ ದೃಶ್ಯ ನೋಡಿ ಆನಂದವಾಯಿತು! ಮುಂದೆ ನಮಗೆ ಮರಕ್ಕೆ ಒತ್ತಿಕೊಂಡಿದ್ದ ಮಾನೀಟರ್ ಲಿಜರ್ಡ್ ಅಥವಾ ಉಡ ಎಂದು ಕನ್ನಡದಲ್ಲಿ ಹೇಳಲಾಗುವ ಒಂದು ದೊಡ್ಡ ಹಲ್ಲಿ ನೋಡಲು ಸಿಕ್ಕಿತು! ಮರದ ಬಣ್ಣವೇ ಅದಕ್ಕೂ ಇದ್ದುದರಿಂದ ಪರಿಸರವಾದಿಗಳು ತೋರಿಸುವವರೆಗೂ ನಮಗೆ ಅದನ್ನು ಗುರುತಿಸಲೇ ಆಗಲಿಲ್ಲ. ಅದನ್ನು ಫೋಕಸ್ ಮಾಡಿ ಫೋಟೋ ತೆಗೆಯುವುದೂ ಕಷ್ಟವಾಯಿತು! ಕಾವೇರಿ ವನ್ಯಜೀವಿಧಾಮ, ಬಂಡೆಗಲ್ಲಗಳು, ಚಿಕ್ಕ ಪುಟ್ಟ ಹೊಂಡಗಳು, ಹಸಿರು ಗಿಡಮರಗಳಿಂದ ಅತ್ಯಂತ ಸೊಗಸಾಗಿ ಕಂಗೊಳಿಸುತ್ತಿತ್ತು! ಮುಂದೆ ಹೋದಂತೆ ರೆಡ್ ವ್ಯಾಟಲ್ಡ್ ಲ್ಯಾಪ್ ವಿಂಗ್ ಎಂಬ, ಕನ್ನಡದಲ್ಲಿ ಟಿಟ್ಟಿಭ ಎಂದು ಕರೆಯಲಾಗುವ ಸುಂದರವಾದ ಪಕ್ಷಿ ನೆಲದ ಮೇಲೆಯೇ ನೋಡಲು ಸಿಕ್ಕಿತು! ಕಂದು, ಬಿಳಿ, ಕಪ್ಪು ಬಣ್ಣಗಳ, ಹಳದಿ ಕಾಲುಗಳ ಈ ಪಕ್ಷಿಯ ಕಣ್ಣುಗಳ‌ಮುಂದೆ ಮಾಂಸಲವಾದ ಕೆಂಪು ಚರ್ಮದ ಮಡಿಕೆಯಿರುತ್ತದೆ. ಅದೇ ರೆಡ್ ವ್ಯಾಟಲ್. ಇದನ್ನು ಗಂಡು, ಹೆಣ್ಣುಗಳೆರಡೂ ಪರಸ್ಪರ ಆಕರ್ಷಿಸಲು ಬಳಸುತ್ತವೆ. ನಾವು ನೋಡಿದಾಗ ಆ ಒಂದು ಪಕ್ಷಿ ಕೂಗುತ್ತಿತ್ತು. ಅದರ ಸಂಗಾತಿ ಇನ್ನೊಂದು ಕಡೆಯಿಂದ ಕೂಗಿ ಉತ್ತರಿಸುತ್ತಿತ್ತು. ಪ್ರಾಣಿ ಪಕ್ಷಿಗಳಲ್ಲಿನ ಈ ಸಂವೇದನೆ ನೋಡಿ ನಮಗೆ ಆಶ್ಚರ್ಯವಾಯಿತು! ಮುಂದೆ ಹೋದಂತೆ ಕಠಿಣವಾದ ಕಲ್ಲುಗಳ ದಾರಿಯಲ್ಲಿ ನಮ್ಮನ್ನು ಕರೆದೊಯ್ಯಲು, ತುಳುಕಾಡುವ ಜೀಪ್ ನಲ್ಲಿ ಹೋಗುತ್ತಾ ನಮಗೆ ಆಯಾಸವಾಗುತ್ತಿತ್ತು! ಆದರೆ ಸುತ್ತಲಿನ ಪ್ರಕೃತಿಯನ್ನು ನೋಡುತ್ತಾ ಆಹ್ಲಾದವೂ ಆಗುತ್ತಿತ್ತು! ಹೀಗೆ ಹೋದಂತೆ ನಮಗೆ ಒಂದು ಗೌರ್ ಅಥವಾ ಇಂಡಿಯನ್ ಬೈಸನ್ ಎಂದು ಕರೆಯಲ್ಪಡುವ ಪ್ರಾಣಿ ನೋಡಲು ಸಿಕ್ಕಿತು! ನೋಡಲು ಬೈಸನ್ ನಂತಿದ್ದರೂ ಇದು ಬೈಸನ್ ಅಲ್ಲ. ಇದು ಕಾಡಿನ ಹಸು ಜಾತಿಗೆ ಸೇರಿದ ಪ್ರಾಣಿಯಾಗಿದ್ದು ಇದನ್ನು ಕಾಟಿ ಎಂದೂ ಕರೆಯುತ್ತಾರೆ. ಮುಂದೆ, ಚುಕ್ಕಿ ಜಿಂಕೆಗಳ ಒಂದು ಹಿಂಡು ಸಿಕ್ಕಿತು. ಬಿಳಿಯ ಚುಕ್ಕಿಗಳಿರುವ ಕಂದು ಬಣ್ಣದ ಈ ಜಿಂಕೆಗಳನ್ನು ಸ್ಪಾಟೆಡ್ ಡೀರ್ ಅಥವಾ ಚೀತಲ್ ಎಂದು ಕರೆಯುತ್ತಾರೆ. ಕಾಡುಗಳಲ್ಲಿ ಇವು ಸಾಮಾನ್ಯವಾಗಿ ನೋಡಲು ಸಿಗುತ್ತವೆ.‌ ಮುಂದೆ ಹೋದಂತೆ, ಸೂರ್ಯಾಸ್ತದ ಸಮಯ ಹತ್ತಿರವಾಗುತ್ತಾ, ಪ್ರಕೃತಿಯ ವಿವಿಧ ಬಣ್ಣಗಳು ಕಾಡಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸತೊಡಗಿದವು!
      ಮುಂದೆ ಹೋದಂತೆ ನಾವು ಹೂಪೋ ಎಂಬ ಪಕ್ಷಿ ಮಣ್ಣಿನ ಸ್ನಾನ ಮಾಡುತ್ತಿದ್ದುದನ್ನು ಕಂಡೆವು.‌ಕಂದು ಬಣ್ಣದ ದೇಹ, ಕಪ್ಪು ಮತ್ತು ಬಿಳಿಯ ಪಟ್ಟೆಗಳುಳ್ಳ ರೆಕ್ಕೆಗಳು, ಉದ್ದವಾದ ಕೊಕ್ಕು, ಹಾಗೂ ತಲೆಯ ಮೇಲೊಂದು ಕಿರೀಟ ಹೊಂದಿರುವ ಇದನ್ನು ಕನ್ನಡದಲ್ಲಿ ಚಂದ್ರಮುಕುಟ ಪಕ್ಷಿ ಎಂದು ಕರೆಯುತ್ತಾರೆ. ಮುಂದೆ, ಫ್ರಾಂಕೋಲಿನ್ ಎಂಬ ಕೋಳಿಯಂಥ ಪಕ್ಷಿಗಳು ನೋಡಲು ಸಿಕ್ಕಿದವು.‌ ಹೆಚ್ಚಾಗಿ ಹಾರದೇ ನೆಲದ ಮೇಲೆಯೇ ಓಡಾಡುವ , ಕಂದು ಬಣ್ಣದ, ಬಿಳಿ ಪಟ್ಟಿಗಳಿರುವ ಪಕ್ಷಿಗಳಿವು. ಕಾಡಿನಲ್ಲಿ ಚಿರತೆಗಳೋ ಆನೆಗಳೋ ಬರಬಹುದೆಂದು ಅಲ್ಲಲ್ಲಿ ನಿಲ್ಲಿಸಿ ಕಾದೆವು. ಬುಲ್ ಬುಲ್ ಪಕ್ಷಿಗಳ ಕೂಗುಗಳು ಕೇಳುತ್ತಿದ್ದವು.ಆದರೆ ಕಾಣುತ್ತಿರಲಿಲ್ಲ 
      ಸಫಾರಿಯಿಂದ ಹಿಂದಿರುಗುತ್ತಾ, ದಿ. ಪಿ.ಶ್ರೀನಿವಾಸ್ ಅವರ ಸ್ಮಾರಕವನ್ನು ನೋಡಲೆಂದು ನಿಲ್ಲಿಸಲಾಯಿತು.ಇಲ್ಲಿ ಮೆಟ್ಟಿಲಿಳಿದು ಕೆಳಗೆ ಹೋದೆವು. ಇಲ್ಲಿ ದಿ. ಪಿ.ಶ್ರೀನಿವಾಸ್ ಅವರ ಸ್ಮಾರಕವನ ಮತ್ತು ಸ್ಮಾರಕವಿದೆ. ಇಲ್ಲಿಂದ ಪುನಃ ಕೆಳಗಿಳಿದು ಹೋದರೆ ಅವರು ಹುತಾತ್ಮರಾದ ಸ್ಥಳದಲ್ಲಿ ಇನ್ನೊಂದು ಸ್ಮಾರಕ ಇರುವುದನ್ನು ಕಾಣಬಹುದು. ಇಂಡಿಯನ್ ಫಾರೆಸ್ಟ್ ಸರ್ವಿಸ್ ನಲ್ಲಿ ಇದ್ದ ಪಿ. ಶ್ರೀನಿವಾಸ್ ಅವರು ಡಿ.ಸಿ.ಎಫ್.( ಡೆಪ್ಯೂಟಿ ಕನ್ಸರ್ವೇಟರ್ ಆಫ್ ಫಾರೆಸ್ಟ್) ಆಗಿದ್ದರು ಹಾಗೂ ವೀರಪ್ಪನ್ ನನ್ನು ಹಿಡಿಯಲು ಸ್ಪೆಷಲ್ ಟಾಸ್ಕ್ ಫೋರ್ಸ್ ನಲ್ಲೂ ಇದ್ದರು. ಇವರು ಗೋಪೀನಾಥಂನ ಜನರಿಗೆ ಮಾರಿಯಮ್ಮನ ದೇವಸ್ಥಾನ ಕಟ್ಟಿಸಿಕೊಟ್ಟು, ಸಂಚಾರಿ ಔಷಧಾಲಯವನ್ನು ಮಾಡಿಕೊಟ್ಟಿದ್ದರು ಹಾಗೂ ಅನೇಕ ಜನರಿಗೆ ಮನೆಗಳನ್ನೂ ಕಟ್ಟಿಸಿಕೊಟ್ಟಿದ್ದರು. ಹಿಂದೊಮ್ಮೆ ಇವರು ವೀರಪ್ಪನ್ ನನ್ನು ಹಿಡಿದಾಗ ಅವನು ತಪ್ಪಿಸಿಕೊಂಡಿದ್ದ. ಇವರಿಗೆ 1991ರಲ್ಲಿ ನಿರಾಯುಧರಾಗಿ ಬಂದರೆ ಶರಣಾಗುವೆನೆಂಬ ಸಂದೇಶವನ್ನು ವೀರಪ್ಪನ್ ಕಳಿಸಲು ಇವರು ಅದನ್ನು ನಂಬಿ ಈ ಜಾಗಕ್ಕೆ ಅವನ ತಮ್ಮ ಅರ್ಜುನನೊಂದಿಗೆ ಬಂದಾಗ ವೀರಪ್ಪನ್ ನಿಂದ ದುರ್ಮರಣಕ್ಕೀಡಾದರು! ಇವರ ಸೇವೆಯನ್ನು ಮೆಚ್ಚಿ ನಮ್ಮ ಕರ್ನಾಟಕ ಸರ್ಕಾರ ಇವರಿಗೆ ಕೀರ್ತಿಚಕ್ರ ಎಂಬ ಬಿರುದು ನೀಡಿ ಇಲ್ಲಿ ಎರಡು ಸ್ಮಾರಕಗಳನ್ನು ನಿರ್ಮಿಸಿದೆ. ಇಲ್ಲಿ ಅವರು ಯಾವ ತೊರೆಯನ್ನು ದಾಟಿ ಹೋಗುವಾಗ ವೀರಪ್ಪನ್ ನ ಗುಂಡಿಗೆ ಬಲಿಯಾದರೋ ಆ ತೊರೆಯನ್ನೇ ನೋಡಬಹುದು. ಇದನ್ನು ಎರ್ಕಾಯಂ ಹಳ್ಳ ಎನ್ನುತ್ತಾರೆ.‌ ಇಲ್ಲಿ ಅವರು ಹುತಾತ್ಮರಾದರೆಂದು ಬರೆದಿರುವ ಎರಡನೆಯ ಸ್ಮಾರಕವನ್ನು ನೋಡಬಹುದು. ಈ ಸ್ಥಳ, ಗೋಪೀನಾಥಂನಿಂದ ಕೇವಲ ಆರು ಕಿ.ಮೀ. ದೂರದಲ್ಲಿದೆ. ಇಲ್ಲಿನ ಪ್ರಕೃತಿ ಸೌಂದರ್ಯ ಅವರ್ಣನೀಯ! ಇಂಥ ಸುಂದರ ಸ್ಥಳದಲ್ಲಿ ಇಂಥ ದಾರುಣ ಹತ್ಯೆ ನಡೆದಿದೆಯೆಂದರೆ ನಂಬುವುದು ಕಷ್ಟ! 
   ನಾವು ನಮ್ಮ ಶಿಬಿರಕ್ಕೆ ಬರುವ ಹೊತ್ತಿಗೆ ಸೂರ್ಯಾಸ್ತ ಪೂರ್ತಿಯಾಗಿದ್ದು, ಗೋಪೀನಾಥಂ ಕೆರೆ, ಕಡುನೀಲಿ ಬಣ್ಣದಲ್ಲೂ ಆಕಾಶದಲ್ಲಿ ಹೊಂಬಣ್ಣದ ಛಾಯೆಯೊಂದಿಗೂ ಕೂಡಿದ್ದು ಯಾವುದೋ ಅಲೌಕಿಕ ಚಿತ್ರ ನೋಡಿದಂತಾಯಿತು! 
     ಸಫಾರಿಯಿಂದ ಬರುವುದು ತಡವಾದುದರಿಂದ ಮುಂದಿನ ಚಟುವಟಿಕೆಯಾದ ಕೊರಕಲ್ ರೈಡ್ ಅಥವಾ ತೆಪ್ಪದ ವಿಹಾರ ಮಾಡಲಾಗಲಿಲ್ಲ. ಹಾಗಾಗಿ ನಾವು ನೇರವಾಗಿ ಗೋಲ್ ಘರ್ ಗೆ ಬಂದೆವು. ಅಲ್ಲಿ ನಮಗೆ ಬಿಸಿಬಿಸಿಯಾದ ಮಂಗಳೂರು ಬೋಂಡಗಳು ಹಾಗೂ ಚಹಾ, ಕಾಫಿಗಳು ಕಾದಿದ್ದವು.‌ ನಾವು ಅವುಗಳನ್ನು ಸೇವಿಸಿ ದಣಿವಾರಿಸಿಕೊಂಡೆವು. ಅನಂತರ, ಏಳುವರೆ ಗಂಟೆಗೆ ಕಾವೇರಿ ವನ್ಯಜೀವಿ ಅಭಯಾರಣ್ಯವನ್ನು ಕುರಿತ ಒಂದು ಸಾಕ್ಷ್ಯಚಿತ್ರವನ್ನು ಸಭಾಂಗಣದಲ್ಲಿ ಪ್ರದರ್ಶಿಸಲಾಯಿತು. ಇಂಥ ಶಿಬಿರದಲ್ಲಿ ವನ್ಯಜೀವಿ ಸಾಕ್ಷ್ಯಚಿತ್ರ ನೋಡುವುದೂ ಸೊಗಸಾಗಿತ್ತು. ಅನಂತರ, ರಾತ್ರಿ ಎಂಟುವರೆ ಗಂಟೆಗೆ ಗೋಲ್ ಘರ್ ನಲ್ಲಿ ಪುಷ್ಕಳವಾದ ಭೋಜನವಿತ್ತು. ಪುನಃ ಬೆಳಗಿನ ಭೋಜನದಂತೆಯೇ ವಿಧವಿಧವಾದ ತಿನಿಸುಗಳೊಂದಿಗೆ ಸೂಪ್ ಕೂಡ ಇತ್ತು. ಭೋಜನದ ನಂತರ, ಕಾಟೇಜ್ ಗೆ ಹಿಂದಿರುಗಿ ನಿದ್ರೆ ಮಾಡುವುದರೊಂದಿಗೆ ಅಂದಿನ ಚಟುವಟಿಕೆಗಳ ಮುಕ್ತಾಯ ಹಾಡಬೇಕಾಗಿತ್ತು. ಇಲ್ಲಿ ರಾತ್ರಿ ಪೂರ್ತಿ ಕತ್ತಲಿದ್ದು ಕಾಡಿನ ವಾತಾವರಣವೇ ಇರಲೆಂದು ಪುಟ್ಟ ದೀಪಗಳನ್ನು ಮಾತ್ರ ಹಾಕಿರುತ್ತಾರೆ. ನಮಗೆ ದಾರಿಯಲ್ಲಿ ನಡೆಯಲು ತೊಂದರೆಯಾಗದಿದ್ದರೂ ಕತ್ತಲು ಮತ್ತು ಜೀರುಂಡೆಗಳ ಶಬ್ದಗಳು ಮಾತ್ರ ಕೇಳುತ್ತಾ ರೋಚಕತೆಯ ಅನುಭವವಾಯಿತು! ಕಾಟೇಜ್ ನಲ್ಲಿ ಹಾಸಿಗೆಯ ಮೇಲೆ ಉರುಳಿದಾಗ, ಸಫಾರಿಯ ಆಯಾಸದ ಕಾರಣ, ಒಳ್ಳೆಯ ನಿದ್ರೆ ಹತ್ತಿತು.
     ಮರುದಿನ ಬೆಳಿಗ್ಗೆ ಐದು ಗಂಟೆಗೆ ಗುಕ್ ಗುಕ್ ಗುಕ್ ಎಂಬ ಸೊಗಸಾದ ಪಕ್ಷಿಯ ಧ್ವನಿ ನನ್ನನ್ನು ಎಚ್ಚರಿಸಿತು! ಅದು ಗ್ರೇಟರ್ ಕೂಕಾಲ್ ಅಥವಾ ಕೆಂಬೂತದ ಧ್ವನಿಯೆಂದು ಗೊತ್ತಾಯಿತು! ಇನ್ನೂ ಹಲವಾರು ಪಕ್ಷಿಗಳ ಧ್ವನಿಗಳು ಕೇಳುತ್ತಾ ಮನಸ್ಸಿಗೆ ಉಲ್ಲಾಸ ತರುತ್ತಿದ್ದವು! ಕೂಡಲೇ ಮುಖ ತೊಳೆದು ಕ್ಯಾಮೆರಾದೊಂದಿಗೆ ಅವುಗಳ ಸೆರೆಹಿಡಿಯಲು ಹೊರಗೆ ಹೋದೆ. ಆದರೆ ಇನ್ನೂ ಮಬ್ಬುಗತ್ತಲಿತ್ತು! ಪಕ್ಷಿಗಳು ಅಷ್ಟು ಸುಲಭವಾಗಿ ಕಾಣಲಿಲ್ಲ! ಸರಿ, ಸ್ನಾನ ಮಾಡಿ ಆರು ಗಂಟೆಗೆ ಕೊರೆಕಲ್ ಸವಾರಿ ಅಥವಾ ತೆಪ್ಪದ ವಿಹಾರಕ್ಕೆ ಹೊರಟೆ. ಸಿಬ್ಬಂದಿಯವರು ಲೈಫ್ ಜಾಕೆಟ್ ಧರಿಸಲು ಕೊಟ್ಟು, ತೆಪ್ಪದಲ್ಲಿ ಕೂರಲು ಸಹಾಯ ಮಾಡಿ, ಗೋಪೀನಾಥಂ ಕೆರೆಯ ಮೇಲೆ ತೆಪ್ಪ ನಡೆಸುತ್ತಾ ತೆಪ್ಪದ ವಿಹಾರ ಮಾಡಿಸಿದರು. ತಣ್ಣನೆಯ ನೀರಿನ ಮೇಲೆ, ಬೆಳಗಿನ ಹಿತವಾದ ತಂಗಾಳಿಯನ್ನು ಸವಿಯುತ್ತಾ, ಆಗಷ್ಟೇ ಆಗುತ್ತಿದ್ದ ಸೂರ್ಯೋದಯದೊಂದಿಗೆ ಸುತ್ತಮುತ್ತಲಿನ ಬೆಟ್ಟಗುಡ್ಡಗಳ, ಹಸಿರು ಮರಗಿಡಗಳ, ಹೊಂಬಣ್ಣದ ನೀರಿನ ಸೌಂದರ್ಯ ಸವಿಯುತ್ತಾ, ಫೋಟೋ, ವಿಡಿಯೋಗಳನ್ನು ತೆಗೆಯುತ್ತಾ ಮಾಡಿದ ತೆಪ್ಪದ ವಿಹಾರ ಅತ್ಯಂತ ಸೊಗಸಾಗಿತ್ತು! ದೂರದಲ್ಲಿ ನವಿಲುಗಳ ಮತ್ತಿತರ ಪಕ್ಷಿಗಳ ಶಬ್ದಗಳು ಕೇಳುತ್ತಿದ್ದವು! ಸ್ಪಾಟ್ ಬಿಲ್ಡ್ ಡಕ್ ಗಳು ( ಚುಕ್ಕೆ ಕೊಕ್ಕಿನ ಬಾತುಗಳು) ಹಾಗೂ ಚಿಕ್ಕ ಎಗ್ರೆಟ್ ಅಥವಾ ಬೆಳ್ಳಕ್ಕಿಗಳು ಕಂಡವು! 
     ತೆಪ್ಪದ ವಿಹಾರದ ಬಳಿಕ, ನಾನು, ಸಿಬ್ಬಂದಿಯವರ ಮಾರ್ಗದರ್ಶನದಲ್ಲಿ ವೀರಪ್ಪನ್ ಪೂಜಿಸುತ್ತಿದ್ದ ಮುನೀಶ್ವರ ಸ್ವಾಮಿಯ ವಿಗ್ರಹದವರೆಗೂ ಒಬ್ಬನೇ ನಡೆದು ಹೋದೆ. ಇತರರು ಪರಿಸರವಾದಿಗಳೊಂದಿಗೆ ಪುನಃ ಬೆಳಗಿನ ಸಫಾರಿಗೆ ಹೋಗಿದ್ದರು. ಆ ವಿಗ್ರಹ ಒಂದು ಪುಟ್ಟ ದಿಬ್ಬದ ಮೇಲಿತ್ತು. ಹಳ್ಳಿಯ ಸುಂದರ ವಾತಾವರಣವನ್ನು ಆಸ್ವಾದಿಸುತ್ತಾ ಹೊರಟೆ. ದಾರಿಯಲ್ಲಿ, ಇಂಡಿಯನ್ ರಾಬಿನ್, ಗ್ರೀನ್ ಬೀ ಈಟರ್ ( ಹಸಿರು ಕಳ್ಳಿ ಪೀರ), ಸಾಮಾನ್ಯ ಮೈನಾ, ಡ್ರೋಂಗೋ ( ಕಾಜಾಣ), ಮೊದಲಾದ ಪಕ್ಷಿಗಳೂ ಪ್ಲೇನ್ ಟೈಗರ್, ಆರೆಂಜ್ ಟಿಪ್, ಡನಾಯ್ಡ್ ಎಗ್ ಫ್ಲೈ ಮೊದಲಾದ ಚಿಟ್ಟೆಗಳೂ ಕಾಣಸಿಕ್ಕವು! ದಾರಿಯುದ್ದಕ್ಕೂ ಕಾಮನ್ ಹಾವ್ಕ್ ಕುಕ್ಕೂ ಅಥವಾ ಬ್ರೈನ್ ಫೀವರ್ ಪಕ್ಷಿಯ ವಿಶಿಷ್ಟ ಕೂಗು ಕೇಳಿಸುತ್ತಿತ್ತು! ಅದೊಂದು ರೀತಿ ದೈನ್ಯದಿಂದ ಕೂಗುತ್ತದೆ! ಆ ಕೂಗು ಬ್ರೈನ್ ಫೀವರ್ ಎಂದು ಕೂಗಿದಂತೆ ಇರುವುದಂತೆ! ಅದಕ್ಕೇ ಈ ವಿಚಿತ್ರ ಹೆಸರು! ಹಿಂದಿಯಲ್ಲಿ ಇದನ್ನು ಪಪಿಹ ಎನ್ನುತ್ತಾರೆ. 
      ಕಲ್ಲುಗಳಿಂದಾದ ಉಂಟಾದ ಮೆಟ್ಟಿಲುಗಳನ್ನು ಹತ್ತಿ ದಿಬ್ಬವೇರಿ ಕುದುರೆಯೊಂದಿಗಿನ ಮುನೀಶ್ವರ ಸ್ವಾಮಿಯ ಭವ್ಯ ವಿಗ್ರಹವನ್ನು ನೋಡಿದೆ ಹಾಗೂ ಫೋಟೋಗಳನ್ನು ತೆಗೆದೆ! ಇಲ್ಲಿಂದ ಸುತ್ತಲಿನ ಬೆಟ್ಟಗುಡ್ಡಗಳ ಹಾಗೂ ಗೋಪೀನಾಥಂ ಕೆರೆಯ ಸೌಂದರ್ಯ ಅತ್ಯದ್ಭುತವಾಗಿ ಕಾಣುತ್ತಿತ್ತು! ಇಲ್ಲಿ ಎಲೆಗಳನ್ನು ಮೆಲ್ಲುತ್ತಿದ್ದ ಬ್ಲಿಸ್ಟರ್ ಬೀಟಲ್ ಎಂಬ ಆಕರ್ಷಕ ಜೀರುಂಡೆಯನ್ನು ನೋಡಿ ಚಿತ್ರೀಕರಿಸಿದೆ! ಕೆಂಪು ಮತ್ತು ಕಪ್ಪು ಪಟ್ಟಿಗಳ ಈ ಜೀರುಂಡೆಯನ್ನು ಕೆಣಕಿದರೆ ಕ್ಯಾಂಥರಡಿನ್ ಎಂಬ ರಾಸಾಯನಿಕವನ್ನು ಸ್ರವಿಸಿ ಅಪಾರ ನೋವಿನ ಬೊಬ್ಬೆಗಳನ್ನುಂಟುಮಾಡುತ್ತದೆ! ಹಾಗಾಗಿ ಇದಕ್ಕೆ ಬ್ಲಿಸ್ಟರ್ ಬೀಟಲ್ ಎಂಬ ಹೆಸರು ಬಂದಿದೆ!
     ಬೆಳಗಿನ ನಡಿಗೆಯಿಂದ ರೆಸಾರ್ಟ್ ಗೆ ಹಿಂದಿರುಗಿದಾಗ ಗೋಲ್ ಘರ್ ನಲ್ಲಿ ಬಿಸಿ ಬಿಸಿ ಉಪಾಹಾರ ತಯಾರಾಗಿತ್ತು! ಕೇಸರೀಬಾತ್, ಬ್ರೆಡ್ , ಜ್ಯಾಂ, ಪಲಾವ್, ಅವಲಕ್ಕಿ, ದೋಸೆ, ಆಲೂಗಡ್ಡೆ ಪಲ್ಯ, ಸಾಂಬಾರ್, ಚಟ್ನಿ, ಪಪ್ಪಾಯಿ ಹಣ್ಣಿನ ತೊಳೆಗಳು, ಎಗ್ ಆಮ್ಲೆಟ್, ಮೊದಲಾದ ವಿವಿಧ ತಿನಿಸುಗಳೊಂದಿಗೆ ಚಹಾ, ಕಾಫೀ ಕೂಡ ಇದ್ದವು! ಸೊಗಸಾದ ಉಪಾಹಾರ ಮುಗಿಸಿ ಸ್ವಲ್ಪ ಹೊತ್ತು ಸಿಬ್ಬಂದಿಯವರೊಂದಿಗೆ ಸ್ನೇಹದಿಂದ ನನ್ನ ಅನುಭವಗಳನ್ನು ಹಂಚಿಕೊಳ್ಳುವ ಹೊತ್ತಿಗೆ ಹತ್ತುವರೆ ಗಂಟೆಯಾಯಿತು. ಚೆಕ್ ಔಟ್ ನ ಸಮಯವಾಗಿತ್ತು. ಹಾಗಾಗಿ ನಾನು ಚೆಕ್ ಔಟ್ ಆಗಿ, ಸಫಾರಿಯ ಹೆಚ್ಚುವರಿ ಶುಲ್ಕವನ್ನು ನೀಡಿ, ಸಿಬ್ಬಂದಿಯವರಿಗೆ ನನ್ನ ಧನ್ಯವಾದಗಳನ್ನು ಅರ್ಪಿಸುತ್ತಾ ಹತ್ತಿರದಲ್ಲೇ ಇದ್ದ ಹೊಗೇನಕಲ್ ಜಲಪಾತದ ದಾರಿ ವಿಚಾರಿಸಿದೆ. ಸಾಕಷ್ಟು ಸಮಯವಿದ್ದುದರಿಂದ ಹೊಗೇನಕಲ್ ಜಲಪಾತದ ಕಡೆ ಹೊರಟೆ. ಅದು ಇನ್ನೊಂದು ರೋಚಕ ಅನುಭವ! 
      ಗೆಳೆಯರೇ, ಈ ಗೋಪೀನಾಥಂ ಮಿಸ್ಟ್ರಿ ಟ್ರೇಲ್ಸ್ ನನಗೆ ಒಳ್ಳೆಯ, ಅದ್ಭುತ ಅನುಭವ ನೀಡಿತು! ನಿಸರ್ಗಕ್ಕೆ ಬಹಳ ಹತ್ತಿರವಿದ್ದಂತಾಯಿತು! ಅಪರೂಪದ ಪ್ರಾಣಿಪಕ್ಷಿಗಳು, ಕೀಟಗಳು, ಮರಗಿಡಗಳು, ಮೊದಲಾದವುಗಳನ್ನು ಕಂಡು ಬೆಕ್ಕಸ ಬೆರಗಾಗುವಂತಾಯಿತು! ಪ್ರಕೃತಿ ಸೌಂದರ್ಯ ಕಣ್ಮನಗಳನ್ನು ಸೂರೆಗೊಂಡಿತು! ನೀವೂ ಈ ಸುಂದರ ತಾಣಕ್ಕೆ ಭೇಟಿ ನೀಡಿ! ನಿಮ್ಮ ಅನುಭವಗಳನ್ನೂ ಹಂಚಿಕೊಳ್ಳಿ! 
                                     ಡಾ.ಬಿ.ಆರ್.ಸುಹಾಸ್
                                     ಬೆಂಗಳೂರು