ಶುಕ್ರವಾರ, ಜುಲೈ 17, 2026

ಸುಂದರೀಶತಕ -೬೫

ಸಂಸ್ಕೃತ ಮೂಲ 

ಪ್ರತ್ಯೇಕಮಿಂದ್ರಿಯಾಣಾಮಾಸ್ತಾಂ ಭಿನ್ನೈವ ದೇವತಾನ್ಯಸ್ಯ /
ಪರಿಣಮತಿ ಮಮ ತು ಸೈಕಾ ಸಕಲೇಂದ್ರಿಯದೇವತಾತ್ವೇನ //

ಕನ್ನಡ ಅನುವಾದ 

   ' ಇತರರಿಗೆ ಬೇರೆ ಬೇರೆ ಇಂದ್ರಿಯಗಳಿಗೆ ಬೇರೆ ಬೇರೆಯೇ ದೇವತೆಯೇ ಇದ್ದರೂ, ನನಗೆ ಮಾತ್ರ ಅವಳೊಬ್ಬಳೇ ನನ್ನ ಸಕಲೇಂದ್ರಿಯಗಳಿಗೂ ದೇವತೆಯಾಗಿ ಪರಿಣಮಿಸುತ್ತಾಳೆ!' 
    ಇದೊಂದು ಸ್ವಾರಸ್ಯಕರ ಶೃಂಗಾರ ಪದ್ಯ.‌ ನಮ್ಮ ಹಿಂದೂ ಅಥವಾ ವೈದಿಕ ಸಂಪ್ರದಾಯದ ಪ್ರಕಾರ, ನಮ್ಮ ದೇಹದ ಪ್ರತಿಯೊಂದು ಇಂದ್ರಿಯವನ್ನೂ ಒಬ್ಬೊಬ್ಬ ದೇವತೆ ನಡೆಸುತ್ತಾನೆ. ನಮ್ಮ ಇಂದ್ರಿಯಗಳನ್ನು ಪಂಚ ಜ್ಞಾನೇಂದ್ರಿಯಗಳು ಮತ್ತು ಪಂಚ ಕರ್ಮೇಂದ್ರಿಯಗಳು ಎಂದು ವಿಂಗಡಿಸಲಾಗಿದೆ. ಪಂಚಜ್ಞಾನೇಂದ್ರಿಯಗಳ ವಿಷಯಕ್ಕೆ ಬಂದರೆ, ಕಣ್ಣಿಗೆ ಸೂರ್ಯ, ಮೂಗಿಗೆ ಅಶ್ವಿನೀ ದೇವತೆಗಳು, ನಾಲಿಗೆಗೆ ವರುಣ, ಕಿವಿಗೆ ದಿಗ್ದೇವತೆಗಳು, ಹಾಗೂ ಚರ್ಮಕ್ಕೆ ವಾಯು, ಈ ದೇವತೆಗಳು ಅಧಿದೇವತೆಗಳಾಗಿರುತ್ತಾರೆ. ಅಂತೆಯೇ, ಪಂಚ ಕರ್ಮೇಂದ್ರಿಯಗಳ ವಿಷಯಕ್ಕೆ ಬಂದರೆ, ಕೈಗಳಿಗೆ ಇಂದ್ರ, ಕಾಲುಗಳಿಗೆ ವಿಷ್ಣು, ಬಾಯಿಗೆ ಅಗ್ನಿ, ಗುದದ್ವಾರಕ್ಕೆ ಯಮ, ಹಾಗೂ ಜನನೇಂದ್ರಿಯಗಳಿಗೆ ಪ್ರಜಾಪತಿ, ಅಧಿದೇವತೆಗಳಾಗಿರುತ್ತಾರೆ. ಹೀಗೆ ವಿವಿಧ ಇಂದ್ರಿಯಗಳಿಗೆ ವಿವಿಧ ದೇವತೆಗಳಿರುತ್ತಾರೆ. ಆದರೆ ಇಲ್ಲಿ ಕವಿ ಅಥವಾ ನಾಯಕ, ಬೇರೆಯವರ ವಿಷಯದಲ್ಲಿ ಹಾಗಿದ್ದರೂ ತನಗೆ ಮಾತ್ರ ತನ್ನ ಪ್ರಿಯತಮೆಯೊಬ್ಬಳೇ ತನ್ನ ಎಲ್ಲಾ ಇಂದ್ರಿಯಗಳಿಗೂ ದೇವತೆಯಾಗಿ ಪರಿಣಮಿಸುತ್ತಾಳೆ ಎನ್ನುತ್ತಿದ್ದಾನೆ! ಅಂದರೆ ಎಲ್ಲಾ ದೇವತೆಗಳೂ ಅವಳೊಬ್ಬಳಲ್ಲೇ ಅಂತರ್ಗತರಾಗಿ ಅವಳೊಬ್ಬಳೇ ಅವನ ಎಲ್ಲಾ ಇಂದ್ರಿಯಗಳನ್ನೂ ನಡೆಸುವವಳಾಗಿದ್ದಾಳೆ! ಅವಳನ್ನು ಬಿಟ್ಟು ಅವನಿಗೆ ಬೇರಾವ ದೇವತೆಯೂ ಇಲ್ಲವೆನ್ನುವಷ್ಟು ಅವನು ಅವಳ ಪ್ರೇಮದಲ್ಲಿ ಒಂದಾಗಿದ್ದಾನೆ! ಇದೊಂದು ರೀತಿಯ ಶೃಂಗಾರ ಅದ್ವೈತ ಸ್ಥಿತಿ! 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ