ಮಂಗಳವಾರ, ಆಗಸ್ಟ್ 4, 2026

ಸುಂದರೀಶತಕ-೭೩

ಸಂಸ್ಕೃತ ಮೂಲ 

ಅತಿಮಂದವರ್ಷದಂಬುದಶೀಕರಶಿಶಿರಾರ್ದ್ರಸಾಂದ್ರವಸನಾಯಾ: /
ಆಕಸ್ಮಿಕಾಗತಾಯಾ: ಕಂಠಗ್ರಹಣಫಲಂ ಜನುಷ: //

ಕನ್ನಡ ಅನುವಾದ 

   ' ಮೇಘಗಳು ಬಹು ಮೆಲ್ಲನೆ ಮಳೆ ಸುರಿಸುತ್ತಿರಲು, ತನುವು ತಂಪಾಗಿ, ಆರ್ದ್ರವಾಗಿ, ವಸ್ತ್ರಗಳು ಮೈಗೆ ಅಂಟಿಕೊಳ್ಳುವಂತಾಗಿದ್ದ ಸ್ಥಿತಿಯಲ್ಲಿ ಆಕಸ್ಮಿಕವಾಗಿ ಆಗಮಿಸಿದ ಪ್ರಿಯತಮೆಯನ್ನು ಕಂಠಾಲಿಂಗನ ಮಾಡಿಕೊಂಡ ಪ್ರಿಯತಮನಿಗೆ ಅದು ಅವನ ಜನ್ಮದ ಪುಣ್ಯಫಲ!' 
     ಕವಿಯು ಇಲ್ಲಿ ಸೊಗಸಾದ ಉತ್ಕಟ ಪ್ರೇಮದ ರಮ್ಯ ಶೃಂಗಾರ ಸನ್ನಿವೇಶವನ್ನು ಕಲ್ಪಿಸಿದ್ದಾನೆ! ಬಹಳ ಸಣ್ಣಗೆ ಮಳೆ ಬರುತ್ತಿದೆ. ಜೋರಾದ ಮಳೆಯಲ್ಲಿ ಹೊರಗೆ ಹೋಗಲು ಕಷ್ಟವಾಗುತ್ತದೆ ಹಾಗೂ ಭಯವೂ ಆಗುತ್ತದೆ. ಆದರೆ ಇಂಥ ಮಂದಮಳೆಯಲ್ಲಿ ವಿಹಾರ ಹೋಗುವುದು ಹಿತವಾಗಿರುತ್ತದೆ. ಅದರಲ್ಲೂ ಸಂಗಾತಿಯೊಂದಿಗೆ ವಿಹರಿಸಿದರೆ ಅದರ ಸೊಗಸೇ ಬೇರೆ! ಇಲ್ಲಿ ತನ್ನ ಪ್ರಿಯತಮನನ್ನು ನೋಡಲು ಅವನ ಪ್ರಿಯತಮೆಯು ಅವರ ನಿತ್ಯ ಸಂಕೇತ ಸ್ಥಳಕ್ಕೆ ಬಂದಿದ್ದಾಳೆ. ಆದರೆ ಅವನು ಅವಳಿಗೆ ಬರಲು ಹೇಳಿಲ್ಲ. ಹಾಗಾಗಿ ಅವಳು ಆಕಸ್ಮಿಕವಾಗಿ ಬಂದಿದ್ದಾಳೆ. ಮೊದಲೇ ರಮ್ಯ ವಾತಾವರಣ. ಈಗ ಪ್ರಿಯತಮೆಯೂ ಬಂದಿದ್ದಾಳೆ! ಮಳಯಿಂದ ನೆನೆದು ತಂಪಾಗಿ, ಆರ್ದ್ರವಾಗಿ, ವಸ್ತ್ರಗಳು ಮೈಗೆ ಅಂಟಿಕೊಂಡಿರುವಂಥ ಮುದ್ದಾದ ಸ್ಥಿತಿಯಲ್ಲಿ ಬಂದಿದ್ದಾಳೆ! ಆಗ ಪ್ರಿಯತಮನಿಗೆ ಶೃಂಗಾರ ಭಾವೋದ್ದೀಪನವಾಗಿ ಅವನು ಅವಳನ್ನು ಕಂಠಾಲಿಂಗನ ಮಾಡಿಕೊಂಡಿದ್ದಾನೆ! ಇದು ಅವನ ಜನ್ಮದ ಪುಣ್ಯಫಲ ಎನ್ನುತ್ತಾನೆ ಕವಿ. ಅಲ್ಲವೇ? ಒಲಿದ ಪ್ರಿಯತಮೆಯನ್ನು ಗಾಢವಾಗಿ ಆಲಂಗಿಸಿದಾಗ ಆಗುವ ಆನಂದ ಅಷ್ಟಿಷ್ಟಲ್ಲ! ಲೋಕವೇ ಮರೆಯುವಂಥ, ಮೋಕ್ಷದಂಥ ಅದ್ವೈತ ಭಾವದ ಅದ್ಭುತ ಸ್ಥಿತಿ ಉಂಟಾಗುತ್ತದೆ ಆಗ! ಹೀಗೆ ಒಲಿದ ಪ್ರೇಮಿಗಳು ಗಾಢಾಲಿಂಗನ ಮಾಡಿಕೊಳ್ಳುವುದು ಒಂದು ಪುಣ್ಯಫಲವಲ್ಲದೇ ಮತ್ತೇನು? 

ಸೋಮವಾರ, ಆಗಸ್ಟ್ 3, 2026

ಸುಂದರೀಶತಕ -೭೨

ಸಂಸ್ಕೃತ ಮೂಲ 

ದ್ವಿಗುಣೀಕೃತಾಂಧತಮಸಂ ವರ್ಷತಿ ರುದ್ಧಾನಿಲಂ ಪಯೋವಾಹೇ /
ಆಕಸ್ಮಿಕಮಾಗಮನಂ ಕಾಂತ್ಯಾನುಮಿತಂ ಸಖೇ ತಸ್ಯಾ: //

ಕನ್ನಡ ಅನುವಾದ 

   ನಾಯಕನು ತನ್ನ ಸ್ನೇಹಿತನಿಗೆ ಹೇಳುತ್ತಾನೆ," ಹೇ ಸಖ! ಮೇಘಗಳು ಗಾಳಿಯನ್ನು ತಡೆದು ಮಳೆ ಸುರಿಸುತ್ತಾ ಕತ್ತಲನ್ನು ದ್ವಿಗುಣೀಕರಿಸಿದೆ! ಇಂಥ ಸಮಯದಲ್ಲಿ, ನನ್ನ ಪ್ರಿಯತಮೆಯು ಆಕಸ್ಮಿಕವಾಗಿ ಆಗಮಿಸಲು, ಅವಳ ಕಾಂತಿಯಿಂದಲೇ ಅವಳ ಆಗಮನವನ್ನು ನಾನು ಊಹಿಸಿದೆ!" 
    ಮಳೆ ಸುರಿಸುತ್ತಾ ಮೇಘಗಳು ಗಾಳಿಯನ್ನು ತಡೆದು ಕತ್ತಲನ್ನು ಹೆಚ್ಚಿಸುತ್ತಿದೆ! ನಾಯಕನು ತನ್ನ ಸ್ನೇಹಿತನೊಂದಿಗೆ ಒಂದು ಕಡೆ ನಿಂತಿದ್ದಾನೆ. ಅದು ಅವನಿಗೂ ನಾಯಕಿಗೂ ನಿತ್ಯ ಭೇಟಿಯ ಸಂಕೇತಸ್ಥಳವಿರಬಹುದು. ಆದರೆ ನಾಯಕನು ನಾಯಕಿಗೆ ಬರಲು ಹೇಳಿಲ್ಲ. ಆದರೂ ಅವಳು ಆಕಸ್ಮಿಕವಾಗಿ ಬಂದಿದ್ದಾಳೆ! ಆದರೆ ಕತ್ತಲು ಎಷ್ಟಿದೆಯೆಂದರೆ ಅವಳು ಕಾಣಿಸುತ್ತಲೇ ಇಲ್ಲ! ಆದರೂ ನಾಯಕನು ಅವಳು ಬಂದುದನ್ನು ಊಹಿಸಿದ್ದಾನೆ! ಹೇಗೆಂದರೆ ಅವಳ ಕಾಂತಿಯಿಂದ! ಅದನ್ನು ತನ್ನ ಸ್ನೇಹಿತನಿಗೆ ಹೇಳುತ್ತಿದ್ದಾನೆ.‌ ಇಲ್ಲಿ ಸ್ವಲ್ಪ ಉತ್ಪ್ರೇಕ್ಷೆಯಿದ್ದರೂ ನಾಯಕಿಯ ಕಾಂತಿ ಅಂಥ ದಟ್ಟ ಕತ್ತಲಿನಲ್ಲೂ ಪ್ರಕಾಶಿಸುತ್ತಾ ನಾಯಕನಿಗೆ ಅವಳ ಆಗಮನದ ವಿಷಯ ತಿಳಿಯುತ್ತಿದೆ ಎನ್ನುವುದರ ಮೂಲಕ ಅವಳ ಸೌಂದರ್ಯವನ್ನು ಕವಿಯು ಪ್ರಶಂಸಿಸುತ್ತಿದ್ದಾನೆ. 

ಸುಂದರೀಶತಕ -೭೧

ಸಂಸ್ಕೃತ ಮೂಲ 

ಆಸಾರಸ್ನಪಿತೇ ಯತ್ಪ್ರಯಾಸಿ ಪಥಿ ದುಸ್ತರೇ ಪಯೋದಜಲೈ: /
ಪ್ರಾಕ್ತನಮುದವಾಸತಪ: ಫಲೋನ್ಮುಖಂ ಕಸ್ಯಚಿತ್ಕೃತಿನ: //

ಕನ್ನಡ ಅನುವಾದ 

   ' ಎಲೈ ಸುಂದರಿ! ಮಳೆಯಲ್ಲಿ ಸಂಪೂರ್ಣ ನೆನೆದು ಮೇಘಗಳ ಜಲದಿಂದ ದುಸ್ತರವಾಗಿರುವ ಪಥದಲ್ಲಿ ನೀನು ಪಯಣಿಸುತ್ತಿರುವೆಯಲ್ಲ!  ಇಂಥ ಪುಣ್ಯಫಲವನ್ನು ಅನುಭವಿಸಲು ಆ ನಿನ್ನ ಪ್ರಿಯತಮನು ಪೂರ್ವಜನ್ಮದಲ್ಲಿ ಜಲದಲ್ಲಿ ನಿಂತು ತಪಸ್ಸು ಮಾಡಿದ ಯಾರೋ ಪುಣ್ಯಾತ್ಮನಿರಬೇಕು!' 
    ಪುನಃ ಇಲ್ಲಿ ಒಬ್ಬ ಅಭಿಸಾರಿಕೆಗೆ ಅವಳ ಸಖಿ ಅಥವಾ ಕವಿ ಹೇಳುತ್ತಿರುವ ಸ್ವಾರಸ್ಯಕರ ಮಾತಿದೆ. ಇಲ್ಲಿ ಒಬ್ಬ ಅಭಿಸಾರಿಕೆ ಜೋರಾಗಿ ಮಳೆ ಸುರಿಯುತ್ತಿದ್ದರೂ  ಮೈಯೆಲ್ಲಾ ನೆನೆಯುತ್ತಿದ್ದರೂ ದಾರಿಯು ಮಳೆನೀರಿನಿಂದ ಕೊಚ್ಚೆಯಾಗಿ ನಡೆಯಲು ಕಷ್ಟವಾಗಿದ್ದರೂ ಲೆಕ್ಕಿಸದೆ ತನ್ನ ಪ್ರಿಯತಮನನ್ನು ಭೇಟಿಯಾಗಲು ಹೋಗುತ್ತಿದ್ದಾಳೆ! ಇಂಥ ಕಷ್ಟದಲ್ಲೂ ಅವಳು ಹೋಗುತ್ತಿರುವಳೆಂದರೆ, ಅವಳು ಅವನನ್ನು ಅಷ್ಟು ಗಾಢವಾಗಿ ಪ್ರೀತಿಸುತ್ತಿದ್ದಾಳೆ! ಇಂಥ ಪ್ರೀತಿಯನ್ನು ಪಡೆಯಲು ಅವಳ ಆ ಪ್ರಿಯತಮನು ನಿಜಕ್ಕೂ ಪುಣ್ಯಶಾಲಿ! ಇಂಥ ಪ್ರೀತಿಯನ್ನು ಪಡೆಯಲು ಅವನು ತನ್ನ ಹಿಂದಿನ ಜನ್ಮದಲ್ಲಿ ನೀರಿನಲ್ಲಿ ನಿಂತು ತಪಸ್ಸು ಮಾಡಿರಬೇಕು ಎಂದು ನಾಯಕಿಗೆ ಅವಳ ಸಖಿ ಅಥವಾ ಕವಿ ಹೇಳುತ್ತಿದ್ದಾರೆ.