ಸೋಮವಾರ, ಜುಲೈ 20, 2026

ಶ್ರೀ ಶಂಕರಾಚಾರ್ಯರ ನಿಂದನೆ ಏಕೆ?

ಇತ್ತೀಚೆಗೆ ಉಡುಪಿಯ ರಾಜಾಂಗಣದಲ್ಲಿ ಹರಿಕಥೆ ಮಾಡುವಾಗ ಶ್ರೀ ಶಂಕರಾಚಾರ್ಯರ ಬಗ್ಗೆ ನಿಂದನೆ ಮಾಡಲಾದ ವಿಷಯ ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ವಿಷಯವಾಗಿ ಶಿರೂರು ಮಠದವರು ಕ್ಷಮಾಪಣೆ ಕೇಳಿದರೂ ಕೆಲವು ಮಾಧ್ವರು ಅದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಈ ರೀತಿ ಮಾಧ್ವರಲ್ಲಿ ಶಂಕರಾಚಾರ್ಯರನ್ನು ಮಹಾಭಾರತದಲ್ಲಿ ಭೀಮನಿಂದ ಹತನಾದ ಮಣಿಮಂತ ದೈತ್ಯನ ಪುನರ್ಜನ್ಮವೆಂದು ಹೇಳುವುದು, ಆ ಹಿಂದಿನ ಕೋಪಕ್ಕೆ ಅವರು ಅಸಚ್ಛಾಸ್ತ್ರಗಳನ್ನು ರಚಿಸಿದರೆಂದೂ ಅದನ್ನು ವಾಯುದೇವನ ಅವತಾರವಾದ ಮಧ್ವಾಚಾರ್ಯರು ಖಂಡಿಸಿದರೆಂದೂ ಹೇಳುತ್ತಾರೆಂದು ಕೇಳಿದ್ದೆ. ಆದರೆ ಈಗ ನಿಜಕ್ಕೂ ಇದು ಮಾಧ್ವರಲ್ಲಿ ಪ್ರಚಲಿತವಿದೆ ಹಾಗೂ ಇದಕ್ಕೆ ಸಮರ್ಥನೆ ಕೂಡ ಮಾಡಿಕೊಳ್ಳುತ್ತಾರೆ ಎಂದು ಗೊತ್ತಾಗುತ್ತಿದೆ. ನಿಜಕ್ಕೂ ಇದು ಮಾಧ್ವರ ವಿಷಯದಲ್ಲಿ ನಗೆಪಾಟಲಿನ ವಿಷಯವೆಂದು ಹೇಳಬೇಕಾಗುತ್ತದೆ. ಏಕೆಂದರೆ, ಒಬ್ಬ ಶ್ರೇಷ್ಠ ಗುರುವನ್ನು ವೈಯಕ್ತಿಕ ಮಟ್ಟದಲ್ಲಿ ನಿಂದಿಸುವುದು ಅವರಿಗೆ ಶೋಭೆ ತರುವಂಥದ್ದಲ್ಲ.
     ಹೀಗೆ ಮಧ್ವಾಚಾರ್ಯರು ಹೇಳಿರುವರಾ? ಅವರ ಮಹಾಭಾರತ ತಾತ್ಪರ್ಯ ನಿರ್ಣಯವೆಂಬ ಗ್ರಂಥದಲ್ಲಿ ಮಣಿಮಂತ ದೈತ್ಯನು ಭೀಮನಿಂದ ಹತನಾದ ಬಳಿಕ ಪುನಃ ಕಲಿಯುಗದಲ್ಲಿ ಹುಟ್ಟಿ ಜಗನ್ಮಿಥ್ಯಾವಾದ ಹರಡುವನೆಂದು ಹೇಳಿದ್ದಾರೆ ನಿಜ. ಆದರೆ ಅದು ಶಂಕರಾಚಾರ್ಯರು ಎಂದು ಹೇಳಿಲ್ಲ. ಅಂತೆಯೇ ಇದಕ್ಕೆ ಮಹಾಭಾರತದಲ್ಲಿ ಆಧಾರವಿಲ್ಲ. ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ ಮೂಲ ಮಹಾಭಾರತದಲ್ಲಿ ಇಲ್ಲದ ಇಂಥ ಇನ್ನೂ ಕೆಲವು ಅಭಿಪ್ರಾಯಗಳೂ ಕಥೆಗಳೂ ಇವೆ. ಇಂಥ ಕಾಲ್ಪನಿಕ ಕಥೆಗಳು ತಪ್ಪಲ್ಲ ಎಂದರೂ ಇತರರಿಗೆ ತೊಂದರೆಯಾಗುವ ಕಥೆಗಳನ್ನು ಕೈಬಿಡಬೇಕು. ತೊಂದರೆಯಿಲ್ಲದ ಪಕ್ಷದಲ್ಲಿ ಮೂಲದಲ್ಲಿಲ್ಲದ ಕಥೆಗಳನ್ನು ಮೂಲದ್ದೇ ಎಂದು ಹೇಳಬಾರದು ಹಾಗೂ ಗಂಭೀರವಾಗಿ ತೆಗೆದುಕೊಳ್ಳಬಾರದು. 
     ಯಾವುದಾದರೂ ಪುರಾಣ ಅಥವಾ ಪ್ರಮಾಣ ಗ್ರಂಥದಲ್ಲಿ ಈ ವಿಷಯ ಇದೆಯೇ? ಖಂಡಿತ ಇಲ್ಲ!
    ಹಾಗಾದರೆ ಈ ವಿಚಿತ್ರ,ಅಸಂಬದ್ಧ, ಅಶ್ಲೀಲ ಕಥೆ ಎಲ್ಲಿಂದ ಬಂತು?
    ನಾರಾಯಣ ಪಂಡಿತರೆಂಬುವರು ರಚಿಸಿರುವ ಮಣಿಮಂಜರಿ ಎಂಬ ಗ್ರಂಥದಲ್ಲಿ ಈ ಕಥೆಯಿದೆ. ಇನ್ನೂ ಸಾಕಷ್ಟು ಅಶ್ಲೀಲ, ಅವಾಚ್ಯ ವಿಷಯಗಳಿವೆ. ಅವರು ಮಧ್ವಾಚಾರ್ಯರ ಶಿಷ್ಯರಾದ್ದರಿಂದ ಅವರ ಈ ಕಥೆ ಮಾನ್ಯ ಎಂದು ಮಾಧ್ವರ ಒಂದು ನಂಬಿಕೆಯಾಗಿದೆ. ಆದರೆ ಈ ಕಥೆಗೆ ಆಧಾರ? ಏನೇನೊ ಇಲ್ಲ! ಇದೊಂದು ಕಪೋಲಕಲ್ಪಿತ ಸುಳ್ಳು ಕಥೆ! ನಾರಾಯಣ ಪಂಡಿತರು ಎಷ್ಟೇ ವಿದ್ವಾಂಸರಾದರೂ ಅವರೇನು ವೇದವ್ಯಾಸರಲ್ಲ! ನೇರವಾಗಿ ಮಾಧ್ವರ ಗುರುಗಳಲ್ಲ! ಭಗವಂತನಂತೂ ಅಲ್ಲವೇ ಅಲ್ಲ! ಮತ್ತೇಕೆ ಅವರ ಈ ಸುಳ್ಳು ಕಥೆಗೆ ಮಾನ್ಯತೆ ಕೊಡಬೇಕೋ ಗೊತ್ತಾಗುವುದಿಲ್ಲ! ಇದರಿಂದ ಶಂಕರಾಚಾರ್ಯರ ನಿಂದನೆ ಮಾಡಿದರೆ ಅದರಿಂದ ಸ್ಮಾರ್ತರಿಗೆ ತೊಂದರೆಯಾಗುವುದಕ್ಕಿಂತ ಮಾಧ್ವರಿಗೇ ಆಗುತ್ತದೆ! ಏಕೆಂದರೆ ಹರಿಧ್ಯಾನ, ನಾಮ ಸಂಕೀರ್ತನೆ, ಪುರಾಣ ಶ್ರವಣಾದಿಗಳನ್ನು ಬಿಟ್ಟು ಇನ್ನೊಬ್ಬ ಶ್ರೇಷ್ಠ ಸಂತರನ್ನು ನಿಂದಿಸಿದರೆ ಅವರ ಸಾಧನೆಗೇ ಅಡ್ಡಿಯಾಗುವುದಲ್ಲವೇ? ಅದೂ ಯಾವುದೇ ಆಧಾರವಿಲ್ಲದೇ! 
    ಎಲ್ಲಿಯ ಮಣಿಮಂತ, ಎಲ್ಲಿಯ ಶಂಕರಾಚಾರ್ಯರು? ಕಾಡಿನಲ್ಲಿ ಭೀಮನಿಂದ ಹಚನಾಗುವ ಮಣಿಮಂತನದು ಮಹಾಭಾರತದ ಒಂದು ಸಣ್ಣ ಘಟನೆ! ಒಬ್ಬ ರಾಕ್ಷಸನು ವೇದ,ಶಾಸ್ತ್ರಾದಿಗಳಲ್ಲಿ ದೊಡ್ಡ ವಿದ್ವಾಂಸನಾಗಿ, ಅದೂ ದ್ವಾಪರ ಯುಗ ಮುಗಿದು ಯಾವುದೋ ಕಾಲದ ಬಳಿಕ ಹುಟ್ಟಿ, ಅನಂತರ ನೂರು ವರ್ಷಗಳ ನಂತರ ಮಧ್ವರು ಅವನ ವಾದವನ್ನು ಖಂಡಿಸಲು ಅವತರಿಸುವುದು ಎಂಥ ಹಾಸ್ಯಾಸ್ಪದ ತಿರುಳಿಲ್ಲದ ಕಥೆ ಎಂದು ಯಾರಾದರೂ ಹೇಳಬಹುದು! ಹೀಗೆ ಇನ್ನಾರೋ ಇನ್ನೇನೋ ಹೇಳಿಬಿಟ್ಟರೆ ಅದನ್ನೂ ನಂಬಬಹುದೇ? ಇಂಥವನ್ನು ಶತಾವಧಾನಿ ಗಣೇಶ್ ಅವರು Religious Pornography , ಮತೀಯ ಅಶ್ಲೀಲತೆ ಎಂದು ಕಟುವಾಗಿ ಟೀಕಿಸುತ್ತಾರೆ.‌ ಹೇಮಚಂದ್ರನೆಂಬ ದೊಡ್ಡ ಜೈನ ಸಂಸ್ಕೃತ ಕವಿ ತನ್ನ ಪರಿಶಿಷ್ಟ ಪರ್ವವೆಂಬ ಗ್ರಂಥದಲ್ಲಿ ಇಂಥದ್ದೇ ಅಸಂಬದ್ಧ ಕಥೆಯನ್ನು ಚಾಣಕ್ಯನ ವಿಷಯದಲ್ಲಿ ಬರೆದಿದ್ದಾನೆ.‌ ಆ ಕಥೆಯ ಪ್ರಕಾರ, ಚಂದ್ರಗುಪ್ತ ಮೌರ್ಯ ನು ಒಮ್ಮೆ ಬಹಳ ಹಸಿದಿದ್ದಾಗ ಚಾಣಕ್ಯನು ಚೆನ್ನಾಗಿ ಪಾಯಸದೂಟ ಮಾಡಿ ಬರುತ್ತಿದ್ದ ಒಬ್ಬ ಬ್ರಾಹ್ಮಣನ ಹೊಟ್ಟೆಯನ್ನು ಸೀಳಿ ಅದರಲ್ಲಿದ್ದ ಪಾಯಸವನ್ನು ತೆಗೆದು ಚಂದ್ರಗುಪ್ತನಿಗೆ ಕೊಟ್ಟನಂತೆ! ಈ ಕಥೆಗೆ ಏನು ಹೇಳುವುದು? ಹೇಮಚಂದ್ರನ ಪರಿಶಿಷ್ಟ ಪರ್ವ ತುಂಬಾ ಸೊಗಸಾದ ಕಥಾಗ್ರಂಥವೇ ಹೌದು! ಆದರೆ ಅದರಲ್ಲಿ ಇಂಥ ಕಥೆಗಳೂ ಇವೆ! ಇಂಥವನ್ನೆಲ್ಲಾ ಸತ್ಯ, ಐತಿಹಾಸಿಕ ಎಂದು ನಂಬಿದರೆ ಹೇಗೆ? ಹೀಗೆಯೇ ಶಂಕರವಿಜಯಗಳು, ಮಧ್ವವಿಜಯ, ಇವೆಲ್ಲವುಗಳಲ್ಲಿರುವುದನ್ನು ಸಂಪೂರ್ಣ ಐತಿಹಾಸಿಕ, ಸತ್ಯ ಎಂದು ಹೇಳಲಾಗುವುದಿಲ್ಲ. ಶಂಕರಾಚಾರ್ಯರು ಒಬ್ಬ ರಾಜನ ಮೂಲಕ ಬೌದ್ಧ ಸ್ತೂಪಗಳನ್ನು ಕೆಡವಿಸಿದರು ಎಂದೂ ಒಂದು ಕಥೆಯಿದೆ. ಇದಕ್ಕೆ ಐತಿಹಾಸಿಕ ಆಧಾರ ಇಲ್ಲ. ಇಂಥ ಅನೇಕ ಕಥೆಗಳಲ್ಲಿ ಸ್ವಾರಸ್ಯಕರವಾದ, ಉಪಯುಕ್ತವಾದ ಕೆಲವನ್ನು ಐತಿಹ್ಯಗಳೆಂದು ತೆಗೆದುಕೊಂಡರೂ ಐತಿಹಾಸಿಕ ಸತ್ಯ ಎಂದು ಹೇಳಲಾಗುವುದಿಲ್ಲ. ಕಲ್ಪಿತ ಕಥೆಗಳು ಪೂರ್ತಿ ತಪ್ಪಲ್ಲ. ಕೆಲವು ಒಳ್ಳೆಯ ಕಥೆಗಳನ್ನು ಮನರಂಜನೆಗೆ, ನೀತಿಬೋಧೆಗೆ ತೆಗೆದುಕೊಳ್ಳಬಹುದು. ಆದರೆ ಅವನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು. ವಿಚಾರಿಸಿ ನೋಡಬೇಕು.‌ ಅತಿಯಾದ ಕುರುಡು ನಂಬಿಕೆ ವಿಚಾರಶಕ್ತಿಯನ್ನು ಮಂಕುಮಾಡುತ್ತದೆ! 
     ಪುರಾಣಗಳಲ್ಲೂ ಅನೇಕ ಕಥೆಗಳನ್ನು ಪ್ರಕ್ಷಿಪ್ತಗಳೆಂದು ವಿದ್ವಾಂಸರು ತೋರಿಸಿದ್ದಾರೆ. ಭವಿಷ್ಯ ಪುರಾಣದಲ್ಲಿ ಈಗಿನ ಕಾಲದ ಅನೇಕ ಮಹನೀಯರು ಪೌರಾಣಿಕ ವ್ಯಕ್ತಿಗಳ ಪುನರ್ಜನ್ಮಗಳೆಂದು ಹೇಳಲಾಗಿದೆ. ಇವನ್ನು ಐತಿಹಾಸಿಕವಾಗಿ, ಗಂಭೀರವಾಗಿ ತೆಗೆದುಕೊಳ್ಳಲಾಗುವುದಿಲ್ಲ. ಶಂಕರಾಚಾರ್ಯರ ಜನನಕ್ಕೆ ಸಂಬಂಧಿಸಿದಂತೆ ಏನಾದರೂ ಪುರಾಣ ವಾಕ್ಯಗಳಿವೆಯೇ ಎಂದರೆ ಇವೆ. ಅವನ್ನೂ ಸ್ವಲ್ಪ ನೋಡೋಣ.

    ಕೂರ್ಮ ಪುರಾಣದಲ್ಲಿ ಶಂಕರಾಚಾರ್ಯರು ಸಾಕ್ಷಾತ್ ಶಿವನ ಅವತಾರವೆಂದು ಹೇಳಿದೆ:

     ಕಲೌ ರುದ್ರೋ ಮಹಾದೇವೋ ಲೋಕಾನಾಮೀಶ್ವರ: ಪರ: /
ತದೇವ ಸಾಧಯೇನ್ನೃಣಾಂ ದೇವತಾನಾಂ ಚ ದೈವತಮ್ //
ಕರಿಷ್ಯತ್ಯವತಾರಂ ಸ್ವಂ ಶಂಕರೋ ನೀಲಲೋಹಿತ: /
ಶ್ರೌತಸ್ಮಾರ್ತಪ್ರತಿಷ್ಠಾರ್ಥೇ ಭಕ್ತಾನಾಂ ಹಿತಕಾಮ್ಯಯಾ //
ಉಪದೇಕ್ಷ್ಯತಿ ತಜ್ಜ್ಞಾನಂ ಶಿಷ್ಯಾಣಾಂ ಬ್ರಹ್ಮಸಮ್ಮಿತಂ /
ಸರ್ವವೇದಾಂತಸಾರಂ ಹಿ ಧರ್ಮಾನ್ ವೇದಾಂತದರ್ಶನಾತ್ //
ಯೇ ತಂ ಪ್ರೀತ್ಯಾ ನಿಷೇವಂತೇ ಯೇನಕೇನೋಪಚಾರತ: /
ವಿಜಿತ್ಯ ಕಲಿಜಾನ್ ದೋಷಾನ್ ಯಾನ್ತಿ ತೇ ಪರಮಂ ಪದಮ್ //
    ' ಕಲಿಯುಗದಲ್ಲಿ ರುದ್ರ ಮಹಾದೇವನು ಲೋಕಗಳ ಈಶ್ವರನೂ ಪರದೈವವೂ ದೇವತೆಗಳ ದೈವವೂ ಆಗಿರುವುದರಿಂದ ಜನರು ಅವನನ್ನು ಒಲಿಸಿಕೊಳ್ಳಬೇಕು. ನೀಲಲೋಹಿತನಾದ ಅವನು ಭಕ್ತರ ಹಿತಕಾಮನೆಗಾಗಿ ಶ್ರೌತ, ಸ್ಮಾರ್ತ ವಿಚಾರಗಳನ್ನು ಪ್ರತಿಷ್ಠಾಪಿಸಲು ತಾನೇ ಅವತಾರವೆತ್ತುತ್ತಾನೆ. ಅವನು ತನ್ನ ಶಿಷ್ಯರಿಗೆ ವೇದಾಂತದರ್ಶನದಿಂದ ಉದ್ಧರಿಸಿದ ಸರ್ವವೇದಾಂತಸಾರವಾದ ಧರ್ಮಗಳನ್ನು ಉಪದೇಶಿಸುತ್ತಾನೆ. ಅವನನ್ನು ಯಾರು ಯಾವುದಾದರೂ ಪ್ರಕಾರದ ಉಪಚಾರಗಳಿಂದ ಸೇವಿಸುವರೋ ಅವರು ಕಲಿಯುಗದ ದೋಷಗಳನ್ನು ಜಯಿಸಿ ಪರಮಪದವನ್ನು ಪಡೆಯುತ್ತಾರೆ.' 

    ಹಾಗೆಯೇ ಲಿಂಗಪುರಾಣದಲ್ಲೂ ಹೀಗೆ ಹೇಳಿದೆ -

  ನಿಂದಂತಿ ವೇದವಿದ್ಯಾಂ ಚ ದ್ವಿಜಾ: ಕರ್ಮಾಣಿ ವೈ ಕಲೌ /
  ಕಲೌ ರುದ್ರೋ ಮಹಾದೇವ: ಶಂಕರೋ ನೀಲಲೋಹಿತ: /
   ಪ್ರಕಾಶತೇ ಪ್ರತಿಷ್ಠಾರ್ಥಂ ಧರ್ಮಸ್ಯ ವಿಕೃತಾಕೃತೇ//

' ಕಲಿಯುಗದಲ್ಲಿ ದ್ವಿಜರು ವೇದವಿದ್ಯೆಯನ್ನು ನಿಂದಿಸುತ್ತಾರೆ. ಆಗ ನೀಲಲೋಹಿತನಾದ ರುದ್ರ ಮಹಾದೇವ ಶಂಕರನು ವಿಕೃತವಾದ ಧರ್ಮವನ್ನು ಪುನಃ ಪ್ರತಿಷ್ಠಾಪಿಸಲು ಪ್ರಕಟಗೊಳ್ಳುತ್ತಾನೆ.' 

    ಭವಿಷ್ಯೋತ್ತರ ಪುರಾಣದಲ್ಲಿ ಹೀಗಿದೆ -

  ಕಲ್ಯಾದೌ ದ್ವಿಸಹಸ್ರಾಂತೇ ಲೋಕಾನುಗ್ರಹಕಾಮ್ಯಯಾ /
  ಚತುರ್ಭಿ: ಸಹ ಶಿಷ್ಯೈಸ್ತು ಶಂಕರೋsವತರಿಷ್ಯತಿ //

' ಕಲಿಯುಗವು ಆರಂಭವಾಗಿ ಎರಡು ಸಾವಿರ ವರ್ಷಗಳ ನಂತರ, ಲೋಕಾನುಗ್ರಹ ಮಾಡಲೆಂದು ಶಂಕರನು ತನ್ನ ನಾಲ್ಕು ಶಿಷ್ಯರೊಂದಿಗೆ ಅವತರಿಸುತ್ತಾನೆ.'
   ಇದೇ ರೀತಿ ವಾಯು ಪುರಾಣ ಹಾಗೂ ಸೌರ ಪುರಾಣಗಳಲ್ಲೂ ಹೇಳಿದೆ. 
    ಆದರೆ ಪದ್ಮ ಪುರಾಣದಲ್ಲಿ ಶಂಕರರನ್ನು ಕುರಿತ ನಿಂದನೀಯ ವಾಕ್ಯಗಳಿವೆ. ಆದರೆ ಅದು ಮಣಿಮಂತನ ಪುನರ್ಜನ್ಮವೆಂದಲ್ಲ. ಇಲ್ಲಿ ಶಿವ,ಪಾರ್ವತಿಯರ ಒಂದು ಸಂವಾದದಲ್ಲಿ ಶಿವನು, ತಾನೇ ಹೇಳಿದ ಪಾಶುಪತಾದಿ ಶೈವ ಶಾಸ್ತ್ರಗಳು, ಕಣಾದನ ವೈಶೇಷಿಕ, ಗೌತಮನ ನ್ಯಾಯ, ಕಪಿಲನ ಸಾಂಖ್ಯ, ಜೈಮಿನಿಯ ಪೂರ್ವಮೀಮಾಂಸೆ, ಇವೆಲ್ಲವೂ ತಾಮಸ ಶಾಸ್ತ್ರಗಳೆಂದು ಹೇಳುತ್ತಾ ಕೊನೆಗೆ ವಿಷ್ಣುವಿನ ಬೌದ್ಧ ಮತ್ತು ತನ್ನದೇ ರೂಪದ ಶಂಕರರ ಉಪದೇಶವಾದ ಮಾಯಾವಾದ ಮತ್ತು ಅದ್ವೈತಗಳನ್ನೂ ಸೇರಿಸುತ್ತಾನೆ!
   ದೈತ್ಯಾನಾಂ ನಾಶನಾರ್ಥಾಯ ವಿಷ್ಣುನಾ ಬುದ್ಧರೂಪಿಣಾ/
   ಬೌದ್ಧಶಾಸ್ತ್ರಮಸತ್ಪ್ರೋಕ್ತಂ ನಗ್ನನೀಲಪಟಾದಿಕಮ್//
   ಮಾಯಾವಾದಮಸಚ್ಛಾಸ್ತ್ರಂ ಪ್ರಚ್ಛನ್ನಂ ಬೌದ್ಧಮೇವ ಚ/
    ಮಯೈವ ಕಥಿತಂ ದೇವಿ ಕಲೌ ಬ್ರಾಹ್ಮಣರೂಪಿಣಾ //
    ಕರ್ಮಸ್ವರೂಪತ್ಯಾಜ್ಯತ್ವಮತ್ರ ಚ ಪ್ರತಿಪಾದ್ಯತೇ /
    ಸರ್ವಕರ್ಮಪರಿಭ್ರಂಶಾನ್ನೈಷ್ಕರ್ಮ್ಯಂ ತತ್ರ ಚೋಚ್ಯತೇ//
    ಪರಾತ್ಮ ಜೀವಯೋರೈಕ್ಯಂ ಮಯಾ ತು ಪ್ರತಿಪಾದ್ಯತೇ /
    ಬ್ರಹ್ಮಣೋsಸ್ಯ ಪರಂ ರೂಪಂ ನಿರ್ಗುಣಂ ದರ್ಶಿತಂ ಮಯಾ //
      ' ದೈತ್ಯರ ನಾಶಕ್ಕಾಗಿ ವಿಷ್ಣುವು ಬುದ್ಧನ ರೂಪದಿಂದ ಅಸಚ್ಛಾಸ್ತ್ರವಾದ ಬೌದ್ಧ ಶಾಸ್ತ್ರವನ್ನೂ ನಗ್ನತೆ ( ಪ್ರಾಯಶಃ ಜೈನ), ನೀಲಪಟ ( ತಾಂತ್ರಿಕ ಶಾಸ್ತ್ರ) ಮೊದಲಾದವುಗಳನ್ನು ಬೋಧಿಸುತ್ತಾನೆ. ಹೇ ದೇವಿ! ಸ್ವಯಂ ನಾನೇ ಪ್ರಚ್ಛನ್ನ ಬೌದ್ಧ ಎನಿಸುವ ಮಾಯಾವಾದವೆಂಬ ಅಸಚ್ಛಾಸ್ತ್ರವನ್ನು ಕಲಿಯುಗದಲ್ಲಿ ಒಬ್ಬ ಬ್ರಾಹ್ಮಣನ ರೂಪದಲ್ಲಿ ಬೋಧಿಸುತ್ತೇನೆ. ಕರ್ಮಸ್ವರೂಪವನ್ನು ತ್ಯಜಿಸುವುದನ್ನು ಇಲ್ಲಿ ಪ್ರತಿಪಾದಿಸುತ್ತೇನೆ. ಸರ್ವ ಕರ್ಮಗಳನ್ನೂ ಬಿಡಲಾಗುವ ನೈಷ್ಕರ್ಮ್ಯವನ್ನು ಹೇಳುತ್ತೇನೆ. ಪರಮಾತ್ಮ ಮತ್ತು ಜೀವಾತ್ಮರ ಐಕ್ಯವನ್ನೂ ಹೇಳಿ ಪರಬ್ರಹ್ಮನ ಪರಮ ರೂಪ ನಿರ್ಗುಣವೆಂದೂ ತೋರಿಸುತ್ತೇನೆ.' 
     ಇಲ್ಲಿ ಸ್ವಯಂ ಶಿವನೇ ಶಂಕರರಾಗಿ ಅವತರಿಸಿ ಪ್ರಚ್ಛನ್ನ ಬೌದ್ಧವಾದ ಮಾಯಾವಾದ ಹಾಗೂ ಅದ್ವೈತಗಳನ್ನು ಬೋಧಿಸುತ್ತಾನೆ ಎಂದು ಅವನೇ ಹೇಳಿಕೊಂಡಂತೆ ಚಿತ್ರಿಸಿರುವುದು ವಿಚಿತ್ರವಾಗಿದೆ! ಶಂಕರರೆಂಬ ಹೆಸರಿಲ್ಲದಿದ್ದರೂ ಇದು ಅವರನ್ನೇ ಸೂಚಿಸುತ್ತದೆ ಎಂದು ಗೊತ್ತಾಗುತ್ತದೆ.ಇಲ್ಲಿ ವಿಷ್ಣುವು ಬುದ್ಧನ ರೂಪದಲ್ಲಿ ದೈತ್ಯರನ್ನು ಬೌದ್ಧ ಶಾಸ್ತ್ರ ಉಪದೇಶಿಸಿ ನಾಶಮಾಡಿದ ಎಂದೂ ಹೇಳಿದೆ.‌ ಹೀಗೆ ವಿಷ್ಣುವು ಬೌದ್ಧ ರೂಪದಲ್ಲಿ ತ್ರಿಪುರ ದೈತ್ಯರನ್ನು ವಿಮೋಹಗೊಳಿಸಿ ವೇದಗಳಿಂದ ದೂರ ಮಾಡಿ ದುರ್ಬಲಗೊಳಿಸಿದ ಎಂದು ವಿಷ್ಣು ಪುರಾಣ, ಭಾಗವತ, ಶಿವ ಪುರಾಣ, ಮೊದಲಾದ ಪುರಾಣಗಳಲ್ಲಿ ಹೇಳಲಾಗಿದೆ ಹಾಗೂ ಬಹುತೇಕ ಮಾಧ್ವ ಹರಿದಾಸರ ಹಾಡುಗಳಲ್ಲಿ ಹೀಗೆಯೇ ಇದೆ.‌ ಶೃಂಗೇರಿಯ ವಿದ್ಯಾಶಂಕರ ದೇವಾಲಯದ ದಶಾವತಾರ ಚಿತ್ರಣದಲ್ಲಿ ಬುದ್ಧನನ್ನು ನಗ್ನನಾಗಿ ತೋರಿಸಿರುವುದಲ್ಲದೆ ಶಿವನು ತ್ರಿಪುರಾಸುರರನ್ನು ಕೊಲ್ಲಲು ಹೂಡಿದ ಬಾಣದಲ್ಲೂ ಇರುವಂತೆ ತೋರಿಸಲಾಗಿದೆ. ಹಾಗಾಗಿ ಬುದ್ಧಾವತಾರದ ವಿಷಯದಲ್ಲಿ ಇದು ಬಹಳ ಕಡೆ ಇದೆ. ಆದರೆ ಈ ಪೌರಾಣಿಕ ಬುದ್ಧ ಚಾರಿತ್ರಿಕ ಬುದ್ಧ ಎಂದು ಹೇಳಲಾಗುವುದಿಲ್ಲ. ಆದರೆ ಶಂಕರರ ವಿಷಯದಲ್ಲಿ ಇಲ್ಲಿ ಹೇಳಿರುವಂತೆ ಬೇರೆಲ್ಲೂ ಇಲ್ಲ. ಇಲ್ಲಿನ ಅಭಿಪ್ರಾಯ, ಬೌದ್ಧರಾಗಿದ್ದ ಜನರನ್ನು ಪುನಃ ವೇದಗಳ ಕಡೆಗೆ ತರಲು ಬೌದ್ಧ ಧರ್ಮವನ್ನೇ ಇನ್ನೊಂದು ರೀತಿಯಲ್ಲಿ ಮಾಯಾವಾದ, ಅದ್ವೈತಗಳ ಮೂಲಕ ಶಿವನೇ ಶಂಕರರ ರೂಪದಲ್ಲಿ ಬೋಧಿಸಿದ, ಹಾಗಾಗಿ ಇದು ಪ್ರಚ್ಛನ್ನ ಬೌದ್ಧ ಎಂಬುದು. ಇದನ್ನು ಚೈತನ್ಯ ಸಂಪ್ರದಾಯದ ಇಸ್ಕಾನ್ ಸಂಸ್ಥಾಪನಾಚಾರ್ಯರಾದ ಶ್ರೀಲ ಪ್ರಭುಪಾದರು ತಮ್ಮ ಗ್ರಂಥಗಳಲ್ಲಿ ಉದಾಹರಿಸುತ್ತಾರೆ. ಹಾಗಾಗಿ ಇವರು ಶಂಕರರನ್ನು ನಿಂದಿಸುವುದಿಲ್ಲ. ಆದರೆ ಪೂರ್ಣವಾಗಿ ಒಪ್ಪುವುದಿಲ್ಲ. ಶಂಕರರು ಹಾಗೆ ಮಾಡಲೇಬೇಕಾಗಿತ್ತಂತೆ. ಆದರೆ ಪದ್ಮ ಪುರಾಣದ ವಿವಿಧ ಪಾಠಗಳಿದ್ದು ಎಲ್ಲಾ ಪಾಠಗಳಲ್ಲಿ ಈ ಶ್ಲೋಕಗಳಿಲ್ಲ. ಹಾಗಾಗಿ ಇವು ಪ್ರಕ್ಷಿಪ್ತ ಎಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಆದರೆ ಇಲ್ಲಿ ಶಂಕರರನ್ನು ದೈತ್ಯರೆಂದು ನಿಂದಿಸಿಲ್ಲ. ಶಿವನ ಅವತಾರವೆಂದು ಗೌರವದಿಂದಲೇ ಕಂಡಿದ್ದು ತಾತ್ವಿಕ ವಿರೋಧವಿದೆ ಮತ್ತು ಅದಕ್ಕೆ ಸಮರ್ಥನೆ ಇದೆ.‌
     ಶಂಕರಾಚಾರ್ಯರು ಅದ್ವೈತ ಸಿದ್ಧಾಂತ ಸ್ಥಾಪಕರಾದರೂ ಅವರು ಮಹಾನ್ ವಿಷ್ಣು ಭಕ್ತರೇ ಆಗಿದ್ದರು. ಅವರ ಮನೆದೇವರು ಶ್ರೀಕೃಷ್ಣನೇ! ಅವರ ಭಾಷ್ಯಗಳಲ್ಲೆಲ್ಲಾ ವಿಷ್ಣುವನ್ನೇ ಕೀರ್ತಿಸಿದ್ದಾರೆ. ಭಜ ಗೋವಿಂದಂ ಸ್ತೋತ್ರ ರಚಿಸಿರುವರಲ್ಲದೇ ವಿಷ್ಣುಸಹಸ್ರನಾಮಕ್ಕೆ ಭಾಷ್ಯ ಬರೆದಿದ್ದಾರೆ. ಅವರು ಹೇಳಿದ ಅಹಂ ಬ್ರಹ್ಮಾಸ್ಮಿ ( ನಾನು ಬ್ರಹ್ಮ) ಅವರ ಹೇಳಿಕೆಯಲ್ಲ. ಅದು ಬೃಹದಾರಣ್ಯಕ ಉಪನಿಷತ್ತಿನಲ್ಲಿ ಬರುತ್ತದೆ. ಅಂತೆಯೇ ತತ್ ತ್ವಮಸಿ ( ಅದು ನೀನು ಆಗಿದ್ದೀಯೆ), ಛಾಂದೋಗ್ಯ ಉಪನಿಷತ್ತಿನಲ್ಲಿ ಬರುತ್ತದೆ. ಪ್ರಜ್ಞಾನಂ ಬ್ರಹ್ಮ ( ಪ್ರಜ್ಞಾನವೇ ಬ್ರಹ್ಮ) ಐತರೇಯ ಉಪನಿಷತ್ತಿನದು. ಅಯಮಾತ್ಮಾ ಬ್ರಹ್ಮ ( ಈ ಆತ್ಮನೇ ಬ್ರಹ್ಮ), ಮಾಂಡೂಕ್ಯ ಉಪನಿಷತ್ತಿನದು, ಹಾಗೂ ಸರ್ವಂ ಖಲ್ವಿದಂ ಬ್ರಹ್ಮ ( ಎಲ್ಲವೂ ಬ್ರಹ್ಮ) ಛಾಂದೋಗ್ಯ ಉಪನಿಷತ್ತಿನದು. ಇವನ್ನು ಪಂಚಮಹಾವಾಕ್ಯಗಳೆನ್ನುತ್ತಾರೆ. ಉಪನಿಷತ್ತುಗಳಲ್ಲಿರುವ ಅದ್ವೈತ ತತ್ವವನ್ನೇ ಅವರು ಪ್ರತಿಪಾದಿಸಿದರು. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳುತ್ತಾನೆ -
 ಮಮೈವಾಂಶೋ ಜೀವಲೋಕೇ ಜೀವಭೂತ: ಸನಾತನ: /
ಮನ: ಷಷ್ಠಾಣೀಂದ್ರಿಯಾಣಿ ಪ್ರಕೃತಿಸ್ಥಾನಿ ಕರ್ಷತಿ //
   ' ಸನಾತನನಾದ ಈ ಜೀವಾತ್ಮನು ನನ್ನದೇ ಅಂಶವಾಗಿದ್ದಾನೆ.‌ ಪ್ರಕೃತಿಯಲ್ಲಿರುವ ಮನಸ್ಸೂ ಸೇರಿದಂತೆ ಆರು ಇಂದ್ರಿಯಗಳನ್ನು ಆಕರ್ಷಿಸುತ್ತಾನೆ.' 
    ಹಾಗಾಗಿ ಜೀವಾತ್ಮನು ಪ್ರಕೃತಿಗಿಂತ ಬೇರೆಯಾಗಿದ್ದು ಅಮರನಾಗಿದ್ದಾನೆ ಹಾಗೂ ಪರಮಾತ್ಮನ ಅಂಶವೇ ಆಗಿದ್ದಾನೆ. ಆದ್ದರಿಂದ ಜೀವಾತ್ಮನಿಗೂ ಪರಮಾತ್ಮನಿಗೂ ವಸ್ತುತಃ ಭೇದವಿಲ್ಲ.‌ ಇದೇ ತಾನೇ ಅದ್ವೈತ? ಬೃಹದಾರಣ್ಯಕ ಉಪನಿಷತ್ತಿನಲ್ಲಿ ಪರಮಾತ್ಮನಿಗೆ ಒಬ್ಬನೇ ರಮಿಸಲಾಗಲಿಲ್ಲ, ಹಾಗಾಗಿ ಅವನೇ ಹಲವಾದನು ಎಂದಿದೆ. ಭಾಗವತದ ಚತು:ಶ್ಲೋಕೀ ಭಾಗವತವೆಂಬ ನಾಲ್ಕು ಶ್ಲೋಕಗಳಲ್ಲಿ ಅವನೊಬ್ಬನೇ ಇದ್ದ, ಈಗಲೂ ಅವನೊಬ್ಬನೇ ಇದ್ದಾನೆ, ಮುಂದೆಯೂ ಅವನೊಬ್ಬನೇ ಇರುತ್ತಾನೆ ಎಂದಿರುವುದು ಅದ್ವೈತವೇ ಹೌದು. ವಿಷ್ಣು ಪುರಾಣದಲ್ಲಿ ಅದ್ವೈತವೆಂಬ ಪದವೇ ಹಲವಾರು ಬಾರಿ ಬಂದಿದೆ. ಅಲ್ಲಿ ಪ್ರಹ್ಲಾದನ ಕಥೆಯಲ್ಲಿ ಪ್ರಹ್ಲಾದನು ವಿಷ್ಣುವನ್ನು ಧ್ಯಾನಿಸುತ್ತಾ ಅವನೊಂದಿಗೆ ತಾದಾತ್ಮ್ಯ ಹೊಂದಿ ಅವನನ್ನು ಬಿಟ್ಟು ಬೇರೇನಿಲ್ಲ ಎಂದು ತನ್ನನ್ನೂ ಮರೆತುಬಿಡುತ್ತಾನೆ. ಭಗವದ್ಗೀತೆಯಲ್ಲಿ 'ವಾಸುದೇವ: ಸರ್ವಮಿತಿ ಸ ಮಹಾತ್ಮಾ ಸುದುರ್ಲಭ: ( ವಾಸುದೇವನೇ ಎಲ್ಲ ಎಂದು ತಿಳಿಯುವ ಮಹಾತ್ಮ ಬಹಳ ದುರ್ಲಭ)' ಎಂದಿದೆ. ಇಲ್ಲೆಲ್ಲಾ ಇರುವ ಅದ್ವೈತವನ್ನೇ ಶಂಕರರು ಪ್ರತಿಪಾದಿಸಿದರು. ಇನ್ನು ಜಗತ್ತು ಮಿಥ್ಯೆಯೆಂದರೆ ಅವರ ಅಭಿಪ್ರಾಯ, ಅದು ಸದಾ ಬದಲಾಗುತ್ತಿರುವುದರಿಂದ ನಾವು ನೋಡುವ ಅದರ ರೂಪವೇ ಯಥಾವತ್ತಲ್ಲ ಎಂದು ಅರ್ಥ. ಈಗ ಮರವಾಗಿದ್ದುದು ನಾಳೆ ಕುರ್ಚಿ, ಮೇಜು, ಏನು ಬೇಕಾದರೂ ಆಗಬಹುದು. ಆದರೆ ಈ ರೂಪಗಳು ಅವುಗಳ ಯಥಾವತ್ತಿನ ರೂಪವಲ್ಲ, ಹಾಗಾಗಿ ಮಿಥ್ಯ. ಇದನ್ನು ವ್ಯಾವಹಾರಿಕವಾಗಿ ತೆಗೆದುಕೊಂಡು ತಲೆ ಕೆಡಿಸಿಕೊಳ್ಳಬಾರದು. ಇದು ಅರಿವಿಗಾಗಿ ಮಾತ್ರ. ಯಾರೋ ಒಬ್ಬ ಶಿಷ್ಯ , ಎಲ್ಲಾ ಒಂದೇ ಎಂದು ಗುರುಗಳು ಹೇಳಿದರು ಎಂಬ ಭಾವನೆಯಿಂದ, ಮತ್ತಿನಲ್ಲಿದ್ದ ಆನೆ ಬರುತ್ತಿದ್ದರೂ ಮಾವುತ ಎಚ್ಚರಿಸುತ್ತಿದ್ದರೂ ಸುಮ್ಮನಿದ್ದ. ಆಗ ಆನೆ ಅವನನ್ನು ಗುದ್ದಿ ತಳ್ಳಿತು! ಅನಂತರ ಅವನು ತನ್ನ ಗುರುವನ್ನು," ನಿಮ್ಮ ಅದ್ವೈತದ ಉಪದೇಶದಿಂದ ನೋಡಿ ನನ್ನ ದುಸ್ಥಿತಿ!" ಎಂದ. ಅದಕ್ಕೆ ಗುರು," ಸರಿ! ಎಲ್ಲಾ ಭಗವಂತ ಎಂದಮೇಲೆ ಆ ಮಾವುತನೆಂಬ ಭಗವಂತನ ಮಾತನ್ನೇಕೆ ಕೇಳಲಿಲ್ಲ?" ಎಂದ. ಹೀಗೆ ಅದ್ವೈತವನ್ನು ವ್ಯಾವಹಾರಿಕವಾಗಿ ಬಳಸಬಾರದು. ಅದೊಂದು ಪಾರಮಾರ್ಥಿಕ ಸತ್ಯ. ಇಷ್ಟಕ್ಕೂ ಅದು ಇಷ್ಟವಿಲ್ಲದಿದ್ದರೆ, ಒಪ್ಪಲಾಗದಿದ್ದರೆ ತೆಗೆದುಕೊಳ್ಳಬೇಕಿಲ್ಲ. ಹಾಗಾಗಿಯೇ ರಾಮಾನುಜಾಚಾರ್ಯರು ಅದ್ವೈತವನ್ನು ಒಪ್ಪಿದರೂ ವಿಶಿಷ್ಟವಾದ ಅದ್ವೈತ ಎಂದು ಜೀವಾತ್ಮರ ಬಾಹುಳ್ಯವನ್ನೂ ಹೇಳಿದರು. ಜೀವಾತ್ಮರೆಲ್ಲ ಪರಮಾತ್ಮನ ಶರೀರ ಎಂದರು. ಪರಮಾತ್ಮ ಮರವಾದರೆ ಜೀವಾತ್ಮರು ಎಲೆಗಳಂತೆ. ಅಂತೆಯೇ ಚೈತನ್ಯ ಮಹಾಪ್ರಭುಗಳು ಭೇದ, ಅಭೇದ ಎರಡೂ ಇರುವ ಅಚಿಂತ್ಯ ಭೇದಾಭೇದ ತತ್ವವನ್ನು ಪ್ರತಿಪಾದಿಸಿದರು. ಅಂತೆಯೇ ನಿಂಬಾರ್ಕರು ದ್ವೈತಾದ್ವೈತ, ವಲ್ಲಭಾಚಾರ್ಯರು ಶುದ್ಧಾದ್ವೈತ ತತ್ವಗಳನ್ನು ಪ್ರತಿಪಾದಿಸಿದರು. ಇವರೆಲ್ಲರೂ ಜಗತ್ತಿನ ಸತ್ಯತ್ವವನ್ನು ಹೇಳಿದರು. ಅಂತೆಯೇ ಮಧ್ವರು ದ್ವೈತವನ್ನು ಪ್ರತಿಪಾದಿಸಿದರು. ಅಲ್ಲಿಯೂ ಪರಮಾತ್ಮ ಬಿಂಬ ಹಾಗೂ ಜೀವಾತ್ಮನು ಪ್ರತಿಬಿಂಬ ಎಂದು ಒಂದು ರೀತಿಯ ಅದ್ವೈತವೇ ಕಾಣುತ್ತದೆ. ದ್ವೈತಮತ ಪುರಂದರ, ಕನಕದಾಸಾದಿ ಹರಿದಾಸರ ಅದ್ಭುತ ಕೊಡುಗೆ ನೀಡಿರುವ ಸುಂದರ ಭಕ್ತಿ ಬಾಹುಳ್ಯದ ಮತವೇ ಹೌದು. ಹೀಗಿರುವಾಗ ಏಕೆ ಶಂಕರರನ್ನು ನಿಂದಿಸಬೇಕು? ಅದಿಲ್ಲದೆಯೂ ದ್ವೈತಮತ ಸೊಗಸಾಗಿದೆಯಲ್ಲ! 
   ಶಂಕರಾಚಾರ್ಯರ ತಾತ್ವಿಕ ವಿಚಾರಗಳ ಖಂಡನೆ ತಪ್ಪಲ್ಲ. ಆದರೆ ಅವರ ಚಾರಿತ್ರ್ಯ ವಧೆ ತಪ್ಪು. ತಾತ್ವಿಕ ಖಂಡನೆ ಮಾಡಲಾಗದಿದ್ದಾಗ ಹೀಗೆ ಮಾಡುವುದು ಸರಿಯಲ್ಲ. 

ಶುಕ್ರವಾರ, ಜುಲೈ 17, 2026

ಸುಂದರೀಶತಕ -೬೫

ಸಂಸ್ಕೃತ ಮೂಲ 

ಪ್ರತ್ಯೇಕಮಿಂದ್ರಿಯಾಣಾಮಾಸ್ತಾಂ ಭಿನ್ನೈವ ದೇವತಾನ್ಯಸ್ಯ /
ಪರಿಣಮತಿ ಮಮ ತು ಸೈಕಾ ಸಕಲೇಂದ್ರಿಯದೇವತಾತ್ವೇನ //

ಕನ್ನಡ ಅನುವಾದ 

   ' ಇತರರಿಗೆ ಬೇರೆ ಬೇರೆ ಇಂದ್ರಿಯಗಳಿಗೆ ಬೇರೆ ಬೇರೆಯೇ ದೇವತೆಯೇ ಇದ್ದರೂ, ನನಗೆ ಮಾತ್ರ ಅವಳೊಬ್ಬಳೇ ನನ್ನ ಸಕಲೇಂದ್ರಿಯಗಳಿಗೂ ದೇವತೆಯಾಗಿ ಪರಿಣಮಿಸುತ್ತಾಳೆ!' 
    ಇದೊಂದು ಸ್ವಾರಸ್ಯಕರ ಶೃಂಗಾರ ಪದ್ಯ.‌ ನಮ್ಮ ಹಿಂದೂ ಅಥವಾ ವೈದಿಕ ಸಂಪ್ರದಾಯದ ಪ್ರಕಾರ, ನಮ್ಮ ದೇಹದ ಪ್ರತಿಯೊಂದು ಇಂದ್ರಿಯವನ್ನೂ ಒಬ್ಬೊಬ್ಬ ದೇವತೆ ನಡೆಸುತ್ತಾನೆ. ನಮ್ಮ ಇಂದ್ರಿಯಗಳನ್ನು ಪಂಚ ಜ್ಞಾನೇಂದ್ರಿಯಗಳು ಮತ್ತು ಪಂಚ ಕರ್ಮೇಂದ್ರಿಯಗಳು ಎಂದು ವಿಂಗಡಿಸಲಾಗಿದೆ. ಪಂಚಜ್ಞಾನೇಂದ್ರಿಯಗಳ ವಿಷಯಕ್ಕೆ ಬಂದರೆ, ಕಣ್ಣಿಗೆ ಸೂರ್ಯ, ಮೂಗಿಗೆ ಅಶ್ವಿನೀ ದೇವತೆಗಳು, ನಾಲಿಗೆಗೆ ವರುಣ, ಕಿವಿಗೆ ದಿಗ್ದೇವತೆಗಳು, ಹಾಗೂ ಚರ್ಮಕ್ಕೆ ವಾಯು, ಈ ದೇವತೆಗಳು ಅಧಿದೇವತೆಗಳಾಗಿರುತ್ತಾರೆ. ಅಂತೆಯೇ, ಪಂಚ ಕರ್ಮೇಂದ್ರಿಯಗಳ ವಿಷಯಕ್ಕೆ ಬಂದರೆ, ಕೈಗಳಿಗೆ ಇಂದ್ರ, ಕಾಲುಗಳಿಗೆ ವಿಷ್ಣು, ಬಾಯಿಗೆ ಅಗ್ನಿ, ಗುದದ್ವಾರಕ್ಕೆ ಯಮ, ಹಾಗೂ ಜನನೇಂದ್ರಿಯಗಳಿಗೆ ಪ್ರಜಾಪತಿ, ಅಧಿದೇವತೆಗಳಾಗಿರುತ್ತಾರೆ. ಹೀಗೆ ವಿವಿಧ ಇಂದ್ರಿಯಗಳಿಗೆ ವಿವಿಧ ದೇವತೆಗಳಿರುತ್ತಾರೆ. ಆದರೆ ಇಲ್ಲಿ ಕವಿ ಅಥವಾ ನಾಯಕ, ಬೇರೆಯವರ ವಿಷಯದಲ್ಲಿ ಹಾಗಿದ್ದರೂ ತನಗೆ ಮಾತ್ರ ತನ್ನ ಪ್ರಿಯತಮೆಯೊಬ್ಬಳೇ ತನ್ನ ಎಲ್ಲಾ ಇಂದ್ರಿಯಗಳಿಗೂ ದೇವತೆಯಾಗಿ ಪರಿಣಮಿಸುತ್ತಾಳೆ ಎನ್ನುತ್ತಿದ್ದಾನೆ! ಅಂದರೆ ಎಲ್ಲಾ ದೇವತೆಗಳೂ ಅವಳೊಬ್ಬಳಲ್ಲೇ ಅಂತರ್ಗತರಾಗಿ ಅವಳೊಬ್ಬಳೇ ಅವನ ಎಲ್ಲಾ ಇಂದ್ರಿಯಗಳನ್ನೂ ನಡೆಸುವವಳಾಗಿದ್ದಾಳೆ! ಅವಳನ್ನು ಬಿಟ್ಟು ಅವನಿಗೆ ಬೇರಾವ ದೇವತೆಯೂ ಇಲ್ಲವೆನ್ನುವಷ್ಟು ಅವನು ಅವಳ ಪ್ರೇಮದಲ್ಲಿ ಒಂದಾಗಿದ್ದಾನೆ! ಇದೊಂದು ರೀತಿಯ ಶೃಂಗಾರ ಅದ್ವೈತ ಸ್ಥಿತಿ! 

ಬುಧವಾರ, ಜುಲೈ 15, 2026

ವಯನಾಡಿನ ವೃದ್ಧೆ

ನಾನು ಕೇರಳದ ವಯನಾಡು ಪ್ರವಾಸಕ್ಕೆ ಹೋಗಿದ್ದಾಗ ವೈತ್ರಿ ಪ್ರದೇಶದಲ್ಲಿ ಈ ವೃದ್ಧ ಮಹಿಳೆಯನ್ನು ನೋಡಿದೆ. ಅವಳ ಉದ್ದವಾದ ಕಿವಿಯ ಹಾಲೆಗಳನ್ನು ನೋಡಿ ವಿಸ್ಮಯಗೊಂಡು ಅವಳ ಅನುಮತಿಯಿಂದ ಅವಳ ಫೋಟೋಗಳನ್ನು ತೆಗೆದೆ. ಈ ಮಹಿಳೆ ಪನಿಯ ಎಂಬ ಬುಡಕಟ್ಟು ಜನಾಂಗಕ್ಕೆ ಸೇರಿದವಳಾಗಿದ್ದು, ಅದು ವಯನಾಡಿನಲ್ಲೇ ಅತ್ಯಂತ ದೊಡ್ಡ ಜನಾಂಗವಾಗಿದೆ. ಈ ಜನಾಂಗದವರು ಬೆಟ್ಟ ಗುಡ್ಡಗಳ ಹಾಗೂ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಾರೆ ಹಾಗೂ ವಯನಾಡಲ್ಲದೇ ಸನಿಹದ ಕಣ್ಣೂರು, ಕೋಜಿಕೋಡೆ, ಮಲಪ್ಪುರಂಗಳಲ್ಲೂ ಕಂಡುಬರುತ್ತಾರೆ ಹಾಗೂ ತಮಿಳುನಾಡು ಮತ್ತು ಕರ್ನಾಟಕದ ಭಾಗಗಳಲ್ಲೂ ಕಂಡು ಬರುತ್ತಾರೆ. ಇವರು ಚಿಕ್ಕ ವಯಸ್ಸಿನಲ್ಲೇ ಕಿವಿಯ ಹಾಲೆಯನ್ನು ಚುಚ್ಚಿ, ದೊಡ್ಡ ದೊಡ್ಡ ಭಾರದ ಆಭರಣಗಳನ್ನು ತೊಡಿಸಿ ದೀರ್ಘ ಕಾಲಾವಧಿಯಲ್ಲಿ ಆ ಕಿವಿಯ ಹಾಲೆ ಹೀಗೆ ಉದ್ದವಾಗುವಂತೆ ಮಾಡುತ್ತಾರೆ. ಇವರ ಕಥೆಗಳ ಪ್ರಕಾರ, ಇವರ ಮೂಲ, ವಯನಾಡಿನ ಬಾಣಾಸುರ ಶಿಖರದ ಬಳಿಯ ಇಪ್ಪಿಮಲ ಪರ್ವತ. ಐತಿಹಾಸಿಕವಾಗಿ ಇವರು ನಿಪುಣ ಕೃಷಿ ಕಾರ್ಮಿಕರಾಗಿದ್ದು , ಭತ್ತವನ್ನು ಬೆಳೆಯುವುದರಲ್ಲಿ ನಿಷ್ಣಾತರಾಗಿದ್ದರು. ಇವರು ಪನಿಯಭಾಷಾ ಎಂಬ ಮಲಯಾಳಂ, ತಮಿಳು ಮತ್ತು ತುಳು ಮಿಶ್ರಿತ ವಿಶಿಷ್ಟವಾದ ಭಾಷೆಯನ್ನು ಮಾತನಾಡುತ್ತಾರೆ. 
                                       
                                        
            

ಮಂಗಳವಾರ, ಜುಲೈ 14, 2026

ಸುಂದರೀಶತಕ -೬೪

ಸಂಸ್ಕೃತ ಮೂಲ 

ಅಶ್ರುಪ್ಲುತಮತಿಕಾತರಮನಿಮಿಷಮಸ್ಪಂದತಾರಕಂ ತಸ್ಯಾ: /
ಲೋಚನಯುಗಲಂ ಸ್ಮರತ: ಸ್ಮರತೋ ಮಮ ಕೇವಲಂ ಭೀತಿ: //

ಕನ್ನಡ ಅನುವಾದ 

    ' ಅಶ್ರುಗಳಿಂದ ತುಂಬಿ, ಬಹಳ ಭಯಗೊಂಡ, ರೆಪ್ಪೆ ಮಿಟುಕಿಸದ, ಪಾಪೆಗಳು ಸ್ಪಂದಿಸದೆ ಸ್ಥಿರವಾಗಿರುವ ಆ ನನ್ನ ಪ್ರಿಯತಮೆಯ ಕಂಗಳನ್ನು ಸ್ಮರಿಸುತ್ತಾ ನನಗೆ ಕೇವಲ ಭಯವಾಗುತ್ತಿದೆ!' 
     ಇಲ್ಲಿ ಕವಿಯು ಇನ್ನೊಂದು ವಿರಹ ಶೃಂಗಾರದ ಪದ್ಯ ರಚಿಸಿದ್ದಾನೆ.‌ ನಾಯಕನು ತಾನು ತನ್ನ ಪ್ರಿಯತಮೆಯನ್ನು ಬಿಟ್ಟು ಪ್ರಯಾಣ ಹೊರಟಾಗ ಅವಳಿದ್ದ ಸ್ಥಿತಿಯನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಭಯಪಡುತ್ತಿದ್ದಾನೆ. ಅವಳ ಆತಂಕ ಮತ್ತು ವಿರಹದ ಸ್ಥಿತಿಯನ್ನು ಅವಳ ಕಂಗಳಲ್ಲೇ ಚಿತ್ರಿಸಿದ್ದಾನೆ. ಅವಳ ಕಂಗಳು ಅಶ್ರುಗಳಿಂದ ತುಂಬಿವೆ. ಅವು ಬಹಳ ಭಯದಿಂದ ಕೂಡಿವೆ. ಕಣ್ರೆಪ್ಪೆಗಳು ಮಿಟುಕಿಸದೆ ಅವಳು ಒಂದೇ ಸಮನೆ ನಾಯಕನನ್ನು ದಿಟ್ಟಿಸುತ್ತಿದ್ದಾಳೆ. ಅವಳ ಕಣ್ಣುಗಳ ಪಾಪೆಗಳು ಸ್ಪಂದಿಸದೆ ಸ್ಥಿರವಾಗಿವೆ! ಹೀಗೆ ಕಣ್ಣಲ್ಲೇ ಅವಳ ಭಾವನೆಗಳನ್ನು ಕವಿಯು ಅದ್ಭುತವಾಗಿ ಸೆರೆಹಿಡಿದಿದ್ದಾನೆ! ಇಂಥ ಸ್ಥಿತಿಯಲ್ಲಿ ನಾಯಕನು ಅವಳನ್ನು ಬಿಟ್ಟು ಬಂದಿದ್ದಾನೆ. ಅದನ್ನು ಮತ್ತೆ ಮತ್ತೆ ನೆನೆದು ಅವಳ ಬಗ್ಗೆ ಅವನಿಗೆ ಭಯವಾಗುತ್ತಿದೆ! ವಿರಹದಲ್ಲಿ ಅವಳಿಗೆ ಏನಾಗುವುದೋ ಎಂದು ಅವನಿಗೆ ಭಯವಾಗುತ್ತಿದೆ. ಇದನ್ನು ಅವನೇ ಹೇಳುತ್ತಿದ್ದಾನೆ. 

ಶುಕ್ರವಾರ, ಜುಲೈ 10, 2026

ಸುಂದರೀಶತಕ -೬೩

ಸಂಸ್ಕೃತ ಮೂಲ 

ಪರ್ಯಂಕಪಾರ್ಶ್ವಲಗ್ನಾಂ ಗಲದಶ್ರುಪ್ಲಾವಿತೈಕಭುಜಮೂಲಮ್ /
ಅಂಚಲಸಂವೃತವದನಾಂ ತಾಮಂತಶ್ಚಿಂತಯಾಮಿ ಚಿರಮ್ //

ಕನ್ನಡ ಅನುವಾದ 

    ' ನನ್ನ ಪ್ರಿಯತಮೆಯು ಮಂಚದ ತುದಿಯ ಮೇಲೆ ಮಲಗಿ ಸೆರಗಿನಿಂದ ಮುಖ ಮುಚ್ಚಿಕೊಂಡು ಅಳುತ್ತಿರಲು, ಅವಳ ಕಣ್ಣೀರು ಹರಿದು ಅವಳ ಒಂದು ಭುಜಮೂಲವನ್ನು ನೆನೆಸಿದುದನ್ನು ನಾನು ಸದಾ ನನ್ನ ಹೃದಯದಲ್ಲಿ ನೆನೆಯುತ್ತೇನೆ!' 
    ಇಲ್ಲಿ ಕವಿಯು ಮತ್ತೊಂದು ವಿರಹದ ಚಿತ್ರಣ ನೀಡಿದ್ದಾನೆ. ಅದನ್ನು ನಾಯಕನೇ ಹೇಳುತ್ತಿದ್ದಾನೆ. ಅವನು ಹಿಂದೆ ಪ್ರಯಾಣದಿಂದ ಹಿಂದಿರುಗಿದಾಗ ನೋಡಿದ ದೃಶ್ಯವನ್ನು ಈಗಲೂ ಸದಾ ನೆನೆಯುವೆ ಎಂದು ಹೇಳುತ್ತಿರುವಂತಿದೆ. ಅವನು ಅವಳನ್ನು ನೋಡಿದ ಸ್ಥಿತಿ ಹೀಗಿದೆ. ಅವಳು ಮಂಚದ ತುದಿಯಲ್ಲಿ ಮುದುಡಿಕೊಂಡು ಮಲಗಿದ್ದಾಳೆ ಹಾಗೂ ತನ್ನ ಮುಖವನ್ನು ಸೆರಗಿನಿಂದ ಮುಚ್ಚಿಕೊಂಡು ತನ್ನ ಮುಖವನ್ನು ಒಂದು ಭುಜಕ್ಕೆ ಒರಗಿಸಿಕೊಂಡು ಮಲಗಿದ್ದಾಳೆ. ಅವಳು ವಿರಹಬಾಧೆಯಿಂದ ಅತ್ತೂ ಅತ್ತೂ ಅವಳ ಕಣ್ಣೀರ ಧಾರೆ ಸೆರಗಿನ ಮೂಲಕವೇ ಹರಿದು ಅವಳ ಭುಜಮೂಲವನ್ನು ನೆನೆಸಿದೆ. ಹೀಗಿರುವ ಅವಳ ಸ್ಥಿತಿಯನ್ನು ನೋಡಿದ ನಾಯಕನಿಗೆ ಅದನ್ನು ಮರೆಯಲಾಗುತ್ತಿಲ್ಲ! ಅದನ್ನು ಸದಾ ನೆನೆಯುತ್ತೇನೆ ಎಂದು ಹೇಳುತ್ತಿದ್ದಾನೆ. 

ಬುಧವಾರ, ಜುಲೈ 8, 2026

ಸುಂದರೀಶತಕ -೬೨

ಸಂಸ್ಕೃತ ಮೂಲ 

ಸುಂದರಿ ಸಮುದಿತಶಶಿಕರಧೌತತಮಾ ನೇಯಮಷ್ಟಮೀ ರಾತ್ರಿ: /
ವಿರಹಿಜನಮಸಿತಭುಜಂಗೀ ವಿದೃಶ್ಯ ಪರಿವರ್ತಿತೋತ್ತಾನಾ //

ಕನ್ನಡ ಅನುವಾದ 

   ' ಎಲೈ ಸುಂದರಿ! ಉದಿಸಿದ ಚಂದಿರನ ಕಿರಣಗಳಿಂದ ಅತ್ಯಂತ ಬೆಳ್ಳಗೆ ಉಜ್ವಲವಾಗಿರುವ ಈ ರಾತ್ರಿ ಅಷ್ಟಮಿಯ ಬೆಳದಿಂಗಳ ರಾತ್ರಿಯಲ್ಲ! ವಿರಹಿಗಳ ಪಾಲಿಗೆ ಇದು ಅವರನ್ನು ನೋಡಿ ಹೆಡೆಯೆತ್ತಿ ತಿರುಗಿಸಿದ ಮೈಯ ಕೃಷ್ಣಸರ್ಪವಾಗಿದೆ!' 
    ಇಲ್ಲಿ ಕವಿಯು ಸುಂದರವಾದ ಬೆಳದಿಂಗಳ ರಾತ್ರಿಯನ್ನು ಒಂದು ಕೃಷ್ಣಸರ್ಪಕ್ಕೆ ಹೋಲಿಸಿದ್ದಾನೆ.‌ ಬೆಳದಿಂಗಳ ರಾತ್ರಿ ಕತ್ತಲಿನ ಜೊತೆಗೆ ಚಂದ್ರನ ಬಿಳಿಯ ಕಿರಣಗಳಿಂದ ಹೊಳೆಯುವ ಸುಂದರ ರಾತ್ರಿಯಾಗಿರುತ್ತದೆ. ಇದು ಶೃಂಗಾರ ಭಾವನೆಗಳನ್ನು ಉದ್ದೀಪನಗೊಳಿಸುತ್ತದೆ. ಆದರೆ ವಿರಹಿಗಳ ಪಾಲಿಗೆ ಇದು ಬಾಧೆ ನೀಡುವ ರಾತ್ರಿಯಾಗಿರುತ್ತದೆ! ಇದು ಒಂದು ಕೃಷ್ಣಸರ್ಪದಂತೆ ಎನ್ನುತ್ತಾನೆ ಕವಿ. ವಿರಹಿಗಳನ್ನು ನೋಡಿದ ಕೂಡಲೇ ಹೆಡೆಯೆತ್ತಿ ಮೈ ತಿರುಗಿಸಿ ನಿಂತಿದೆ! ಅದರ ಮೈ ಕಪ್ಪಾಗಿದ್ದು ಅದರ ಒಳಭಾಗ ಬೆಳ್ಳಗಿದೆ.‌ ಹಾಗಾಗಿ ಅದು ಕಪ್ಪು, ಬಿಳುಪುಗಳಿಂದ ಬೆಳದಿಂಗಳ ರಾತ್ರಿಗೆ ಹೋಲಿಕೆಯಾಗಿದೆ! ಹೀಗೆ ಆ ಬೆಳದಿಂಗಳ ಅಷ್ಟಮಿ ರಾತ್ರಿ, ಅಷ್ಟಮಿ ರಾತ್ರಿಯಲ್ಲದೇ ಹೆಡೆಯೆತ್ತಿ ಮೈತಿರುಗಿಸಿದ, ಕಚ್ಚಿ ಬಾಧಿಸುವ ಕೃಷ್ಣಸರ್ಪವಾಗಿದೆ ಎನ್ನುತ್ತಾ ಕವಿಯು ವಿರಹಿಗಳ ಪಾಲಿಗೆ ಅಂಥ ರಾತ್ರಿಯು ಎಷ್ಟು ಬಾಧೆ ನೀಡುತ್ತದೆ ಎಂದು ಸೂಚಿಸಿದ್ದಾನೆ.

ಮಂಗಳವಾರ, ಜುಲೈ 7, 2026

ಸುಂದರೀಶತಕ -೬೧

ಸಂಸ್ಕೃತ ಮೂಲ 

ಸುಂದರಿ ವಸಂತಪಥಿಕಾನ್ ರಜನಿಭುಜಂಗೀ ಯಥಾ ಯಥಾ ದಶತಿ /
ತದ್ವಿಷಸಂಕ್ರಾಂತಿವಶಾತ್ತಥಾ ತಥಾ ಕ್ಷೀಯತೇ ದೈರ್ವ್ಯಾತ್ //

ಕನ್ನಡ ಅನುವಾದ 

    ' ಎಲೈ ಸುಂದರಿ! ವಸಂತಕಾಲದ ಪ್ರಯಾಣಿಕರನ್ನು ರಾತ್ರಿಯೆಂಬ ಸರ್ಪಿಣಿ ಹೇಗೆ ಹೇಗೆ ಕಚ್ಚುವುದೋ, ಅದರ ವಿಷವು ಅವರ ಮೈಯಲ್ಲಿ ಹರಡಿ ಅವರು ಅದರ ವಶವಾದಂತೆಲ್ಲಾ ದೈವವಶಾತ್ ಅವರು ಕ್ಷೀಣಿಸುತ್ತಾರೆ!' 
    ಇದೊಂದು ಸೊಗಸಾದ ಮತ್ತು ಉತ್ಪ್ರೇಕ್ಷಿತವಾದ ವಿರಹ ಪದ್ಯ. ವಸಂತಕಾಲವೆಂದರೆ ಯಾರಿಗಾದರೂ ಶೃಂಗಾರದ ಬಯಕೆ ಹೆಚ್ಚಾಗುತ್ತದೆ.‌ ಅಂಥ ಸುಂದರ ಕಾಲದಲ್ಲಿ ಯಾರಿಗಾದರೂ ತಮ್ಮ ಪ್ರಿಯರು ಜೊತೆಗಿರಬೇಕೆನಿಸುತ್ತದೆ. ಅಂಥ ಸುಂದರ ಋತುವಿನ ರಾತ್ರಿ, ಶೃಂಗಾರದ ಬಯಕೆಗಳನ್ನು ಚೆನ್ನಾಗಿ ಉದ್ದೀಪನಗೊಳಿಸುತ್ತದೆ. ಆದರೆ ಅಂಥ ಸಂದರ್ಭದಲ್ಲಿ ಪ್ರಿಯತಮೆಯಿಂದ ದೂರಾಗಿ ಪ್ರಯಾಣ ಮಾಡುತ್ತಿದ್ದರೆ ಹೇಗಾಗುತ್ತದೆ? ಆ ಸುಂದರ ರಾತ್ರಿಯೇ ಹಿಂಸೆ ಕೊಡುವ ಕಾಳರಾತ್ರಿಯಂತಾಗುತ್ತದೆ! ಇಲ್ಲಿ ಕವಿಯು ಅಂಥ ರಾತ್ರಿಯನ್ನು ಒಂದು ಸರ್ಪಿಣಿಗೆ ಹೋಲಿಸುತ್ತಾನೆ. ಅದು ಉಂಟುಮಾಡುವ ವಿರಹಬಾಧೆಯನ್ನು ಆ ಸರ್ಪಿಣಿಯ ಕಚ್ಚುವಿಕೆಗೆ ಹೋಲಿಸುತ್ತಾನೆ! ಅದು ಕಚ್ಚಿದಂತೆಲ್ಲಾ ಹಾಗೂ ಅದರ ವಿಷ ಈ ವಸಂತಕಾಲದ ಪ್ರಯಾಣಿಕರ ದೇಹದೆಲ್ಲೆಡೆ ಹರಡಿದಂತೆಲ್ಲಾ ಅವರು ಕ್ಷೀಣಿಸುತ್ತಾರೆ ಎಂದು ವಸಂತ ಕಾಲದ ಪ್ರಯಾಣಿಕರ ರಾತ್ರಿಯ ವಿರಹಬಾಧೆಯನ್ನು ಕವಿಯು ಉತ್ಪ್ರೇಕ್ಷೆಯಿಂದ ವರ್ಣಿಸುತ್ತಾನೆ.