ಶುಕ್ರವಾರ, ಜುಲೈ 31, 2026

ಸುಂದರೀಶತಕ -೭೦

ಸಂಸ್ಕೃತ ಮೂಲ 

ಮಂತ್ರೋ ಮನಸಾ ದ್ವೇಷಶ್ಚಂದ್ರಮಸಾ ಹಂತ ಪರಿಚಯಸ್ತಮಸಾ /
ಸುಂದರಿ ತವಾಭಿಸರೇ ಪರಿಪಾಟೀ ಕಾಚಿದನ್ಯೈವ //

ಕನ್ನಡ ಅನುವಾದ 

   'ಎಲೈ ಸುಂದರಿ! ನಿನ್ನ ಮಂತ್ರಾಲೋಚನೆ ನಿನ್ನ ಮನಸ್ಸಿನೊಂದಿಗೆ! ನಿನ್ನ ದ್ವೇಷ ಚಂದ್ರಮನೊಂದಿಗೆ! ಆಹಾ! ನಿನ್ನ ಪರಿಚಯ ಕತ್ತಲಿನೊಂದಿಗೆ! ನಿನ್ನ ಅಭಿಸಾರದ ರೀತಿ ಬೇರೆಯೇ ಆಗಿದೆ!'
     ಇದೊಂದು ಸ್ವಾರಸ್ಯಕರ ಶೃಂಗಾರ ಪದ್ಯ. ಅಭಿಸಾರ ಎಂದರೆ ನಾಯಕಿಯು ತನ್ನ ಪ್ರಿಯತಮನನ್ನು ಭೇಟಿಯಾಗಲು ಸಂಕೇತ ಸ್ಥಳಕ್ಕೆ ಒಬ್ಬಳೇ ಅಥವಾ ಸಖಿಯೊಂದಿಗೆ ಧೈರ್ಯವಾಗಿ ಹೋಗುವುದು.‌ ಅಂಥ ನಾಯಕಿಗೆ ಅಭಿಸಾರಿಕೆ ಎನ್ನುತ್ತಾರೆ. ಸಾಮಾನ್ಯವಾಗಿ ಅಭಿಸಾರಿಕೆಯರು ರಾತ್ರಿಯ ವೇಳೆ ಯಾರಿಗೂ ಕಾಣದಂತೆ ಗುಪ್ತವಾಗಿ ಹೋಗುತ್ತಾರೆ. ಇಲ್ಲಿ ಅಂಥ ಒಬ್ಬ ಅಭಿಸಾರಿಕೆಗೆ ಸಖಿ ಅಥವಾ ಕವಿ ತಮಾಷೆಯಾಗಿ ಹೇಳುತ್ತಿದ್ದಾರೆ.‌ ಇವಳಿಗೆ ಮನಸ್ಸಿನೊಂದಿಗೆ ಮಂತ್ರಾಲೋಚನೆ. ಇನ್ನಾರೊಂದಿಗೂ ಇವಳು ತನ್ನ ರಹಸ್ಯವನ್ನು ಚರ್ಚಿಸದೆ ತನ್ನ ಮನಸ್ಸಿನೊಂದಿಗೆ ಮಾತ್ರ ಚರ್ಚಿಸುತ್ತಾಳೆ. ಚಂದ್ರಮನೊಂದಿಗೆ ಇವಳಿಗೆ ದ್ವೇಷ! ಅಂದರೆ ಚಂದ್ರನನ್ನು ಕಂಡರೆ ಇವಳಿಗೆ ಇಷ್ಟವಿಲ್ಲ. ಏಕೆಂದರೆ ಚಂದ್ರನ ಬೆಳಕಿದ್ದರೆ ಇವಳ ರಹಸ್ಯ ಪ್ರಯಾಣ ಯಾರಿಗಾದರೂ ಕಂಡು ಗೊತ್ತಾಗಿಬಿಡುತ್ತದೆ! ಹಾಗಾಗಿ ಇವಳ ಪರಿಚಯ ಕತ್ತಲಿನೊಂದಿಗೆ! ಇತರರ ವರ್ತನೆಗೆ ವಿರುದ್ಧವಾಗಿದೆಯಲ್ಲ ಇವಳ ಅಭಿಸಾರದ ರೀತಿ ಎಂದು ಸಖಿ ಅಥವಾ ಕವಿ ಇವಳಿಗೆ ಹೇಳುತ್ತಿದ್ದಾರೆ. 

ಬುಧವಾರ, ಜುಲೈ 29, 2026

ಪೌರಾಣಿಕ ಸ್ವಾರಸ್ಯಗಳು- ಶಾಂತನುವಿನ ಕಥೆಯ ಎರಡು ಪಾಠಗಳು

ಮಹಾಭಾರತದ ಕಥೆಯನ್ನು ಬರೆಯುವವರು ಸಾಮಾನ್ಯವಾಗಿ ಆರಂಭಿಸುವುದು ಶಾಂತನುವಿನ ( ಅಥವಾ ಶಂತನು) ಕಥೆಯಿಂದ. ಶಾಂತನುವೆಂಬ ರಾಜನು ಹಸ್ತಿನಾಪುರವನ್ನು ಆಳುತ್ತಿದ್ದನು ಎಂದು ಆರಂಭವಾಗುತ್ತದೆ ಬಹುತೇಕ ಲೇಖಕರ ಮಹಾಭಾರತ. ಆದರೆ ಅದಕ್ಕೂ ಮೊದಲು ಸಾಕಷ್ಟು ಕಥೆಯಿದೆ. ಎಷ್ಟೋ ಜನರಿಗೆ ಶಾಂತನುವಿನ ತಂದೆ ಯಾರು, ಅವನ ಹಿಂದಿನ ಕಥೆಯೇನು ಎಂದು ತಿಳಿದಿರುವುದಿಲ್ಲ. ಇವು ಬಹಳ ಸ್ವಾರಸ್ಯಕರವಾಗಿವೆ. ಅಷ್ಟೇ ಅಲ್ಲದೆ, ಮಹಾಭಾರತದ ಖಿಲಗ್ರಂಥವಾದ ಹರಿವಂಶದಲ್ಲಿ ಶಾಂತನುವಿನ ಕಥೆ ಬೇರೆಯೇ ರೀತಿಯಲ್ಲಿದೆ. ಹೀಗೆ ಒಂದೇ ಕಥೆ, ಅಥವಾ ಒಬ್ಬನೇ ವ್ಯಕ್ತಿಯ ಕಥೆ ಬೇರೆ ಬೇರೆ ರೀತಿಗಳಲ್ಲಿರುವುದು ಒಂದು ಪೌರಾಣಿಕ ವೈಶಿಷ್ಟ್ಯ. ಈಗ ಈ ಎರಡೂ ಕಥೆಗಳನ್ನು ನೋಡೋಣ.
    ಶಾಂತನು ತನ್ನ ಹಿಂದಿನ ಜನ್ಮದಲ್ಲಿ ಮಹಾಭಿಷ ಎಂಬ ರಾಜನಾಗಿದ್ದ. ಆಗ ಅವನು ಗಳಿಸಿದ ಪುಣ್ಯಗಳಿಂದ ಬ್ರಹ್ಮಲೋಕವನ್ನೇ ಪಡೆದುಕೊಂಡ. ಒಂದು ದಿನ, ಬ್ರಹ್ಮಲೋಕದಲ್ಲಿ ದೇವಾನುದೇವತೆಗಳ ಸಮ್ಮುಖದಲ್ಲಿ ಬ್ರಹ್ಮನ ಪೂಜೆ ನಡೆಯುತ್ತಿದ್ದಾಗ, ಗಂಗೆ ಸಭೆಯನ್ನು ಪ್ರವೇಶಿಸಿದಳು. ಆಗ ಗಾಳಿ ಬೀಸಿ ಅವಳ ಸೀರೆ ಹಾರಿಹೋಯಿತು! ಎಲ್ಲರೂ ತಲೆ ತಗ್ಗಿಸಿದರೆ, ಮಹಾಭಿಷನು ಮಾತ್ರ ಅವಳ ಸೌಂದರ್ಯವನ್ನು ಕಣ್ಣೆವೆಯಿಕ್ಕದೆ ನೋಡುತ್ತಿದ್ದ. ಇದರಿಂದ ಕುಪಿತಗೊಂಡ ಬ್ರಹ್ಮನು ಅವನನ್ನು ಶಪಿಸಿದ, " ಎಲೈ ಮಹಾಭಿಷನೇ! ಸಕಲಕಾಮನೆಗಳನ್ನು ಜಯಿಸಿದವರಿಗೆ ಮಾತ್ರ ಈ ಲೋಕ ದೊರೆಯುವುದು! ಆದರೆ ನೀನಿನ್ನೂ ಸ್ತ್ರೀ ಕಾಮವನ್ನು ಜಯಿಸಿಲ್ಲ! ಗಂಗೆಯನ್ನು ನೋಡಿದೊಡನೆಯೇ ನೀನು ಆಕರ್ಷಿತನಾದೆ! ಹಾಗಾಗಿ ಇನ್ನಷ್ಟು ವರ್ಷ ಭೂಲೋಕದಲ್ಲಿದ್ದು ಸಕಲ ಕಾಮನೆಗಳನ್ನು ಪೂರೈಸಿಕೊಂಡು ಇಲ್ಲಿಗೆ ಬಾ! ನೀನು ಗಂಗೆಗೆ ಮಾಡಿದ ಈ ಅಪರಾಧದಿಂದ ಅವಳೇ ನಿನ್ನ ಪತ್ನಿಯಾಗಿ ನಿನಗೆ ಅಪ್ರಿಯವಾದ ಕಾರ್ಯಗಳನ್ನು ಮಾಡುವಳು! ಆದರೆ ನೀನು ಅವನ್ನೆಲ್ಲಾ ಸಹಿಸಸಿಕೊಳ್ಳುವೆ! ಕೊನೆಗೆ ಆ ಅಪ್ರಿಯ ಕಾರ್ಯಗಳಿಗೆ ಕುಪಿತನಾಗಿ ವಿರೋಧ ವ್ಯಕ್ತಪಡಿಸಿದ ದಿನ ನಿನಗೆ ಈ ಶಾಪದಿಂದ ವಿಮುಕ್ತಿಯಾಗುತ್ತದೆ!" 
    ಹೀಗೆ ಶಾಪ ಪಡೆದ ಮಹಾಭಿಷನು ಭೂಲೋಕದಲ್ಲಿ ಯಾರಿಗೆ ಹುಟ್ಟಬೇಕೆಂದು ಬಹಳ ಯೋಚಿಸಿ, ಭರತವಂಶೀಯನಾದ ಪ್ರತೀಪ ಎಂಬ ರಾಜ ತನಗೆ ತಂದೆಯಾಗಲು ಯೋಗ್ಯನೆಂದು ಭಾವಿಸಿ ಅವನಿಗೆ ಹುಟ್ಟಲು ನಿಶ್ಚಯಿಸಿದನು. 
   ಇತ್ತ, ಗಂಗೆಯೂ ಮಹಾಭಿಷನನ್ನೇ ಚಿಂತಿಸುತ್ತಾ ಭೂಲೋಕದ ಕಡೆ ಹೊರಟಳು. ಆಗ ಅಷ್ಟವಸುಗಳೆಂಬ ಎಂಟು ದೇವತೆಗಳು ಕಳೆಗುಂದಿದ ಮುಖವುಳ್ಳವರಾಗಿ ಕೆಳಗೆ ಬೀಳುತ್ತಿರುವುದನ್ನು ನೋಡಿದಳು. ಏಕೆ ಹಾಗೆ ಬೀಳುತ್ತಿರುವರೆಂದು ಕೇಳಿದಾಗ ಅವರು ತಮ್ಮ ಕಥೆಯನ್ನು ಹೇಳಿಕೊಂಡರು. ಅದರಂತೆ ಅವರು ವಸಿಷ್ಠ ಮಹರ್ಷಿಗಳ ಗೋವು ನಂದಿನಿಯೆಂಬ ಕಾಮಧೇನುವನ್ನು ಕದ್ದು ಅವರಿಂದ ಶಾಪಗ್ರಸ್ತರಾಗಿದ್ದರು. ಅವರಲ್ಲಿ ದ್ಯು ಎಂಬ ವಸುವಿನ ಹೆಂಡತಿಗೆ ಭೂಲೋಕದಲ್ಲಿರುವ ತನ್ನ ಗೆಳತಿ ಚಿರಯುವತಿಯಾಗಿರಬೇಕೆಂಬ ಆಸೆಯಿಂದ ಅವಳಿಗೆ ಕಾಮಧೇನುವಿನ ಹಾಲು ಕುಡಿಸಬೇಕೆನಿಸಿತು.‌ ಅದಕ್ಕಾಗಿ ಅವಳು ತನ್ನ ಗಂಡನನ್ನು ಆ ಕಾಮಧೇನುವನ್ನು ಕದಿಯಲು ಪ್ರಚೋದಿಸಿದಳು. ಅವನು ಇತರ ವಸುಗಳೊಂದಿಗೆ ವಸಿಷ್ಠರ ಕಾಮಧೇನುವನ್ನು ಕದ್ದನು! ಇದರಿಂದ ವಸಿಷ್ಠರು ಕ್ರುದ್ಧರಾಗಿ ಅವರಿಗೆ ಭೂಲೋಕದಲ್ಲಿ ಜನಿಸುವಂತೆ ಶಪಿಸಿದರು. ಆಗ ಅವರೆಲ್ಲರೂ ಪಶ್ಚಾತ್ತಾಪ ಪಟ್ಟು ಕ್ಷಮೆಯಾಚಿಸಲು ವಸಿಷ್ಠರು ತಮ್ಮ ಶಾಪದಂತೆ ಅವರು ಭೂಲೋಕದಲ್ಲಿ ಹುಟ್ಟಿದರೂ ಒಂದು ವರ್ಷದೊಳಗೆ ಶಾಪವನ್ನು ನೀಗಿ ಪುನಃ ಸ್ವರ್ಗಕ್ಕೆ ಬರುವರೆಂದೂ ಆದರೆ ಯಾರ ಕಾರಣದಿಂದ ಅವರು ಕಾಮಧೇನುವನ್ನು ಕದ್ದರೋ ಆ ದ್ಯು ಎಂಬುವನು ಮಾತ್ರ ಬಹುಕಾಲ ಭೂಲೋಕದಲ್ಲಿದ್ದು ಜ್ಞಾನಿಯೂ ಪಿತೃವಾಕ್ಯಪರಿಪಾಲಕನೂ ಆದರೂ ಸ್ತ್ರೀ ಸುಖವನ್ನು ತ್ಯಜಿಸಿ ಅಪುತ್ರವಂತನಾಗಿ ಹಿಂದಿರುಗುತ್ತಾನೆಂದರು. ಈ ವಿಷಯವನ್ನು ಹೇಳಿ ಅಷ್ಟವಸುಗಳು ಗಂಗೆಯನ್ನೇ ತಮ್ಮ ತಾಯಿಯಾಗುವಂತೆಯೂ ಹುಟ್ಟಿದ ಕೂಡಲೇ ತಮ್ಮನ್ನು ನೀರಲ್ಲಿ ಹಾಕಿ ಮುಳುಗಿಸಿ ಶಾಪವಿಮುಕ್ತಿ ಮಾಡಬೇಕೆಂದೂ ಬೇಡಿಕೊಂಡರು.‌ ಆಗ ಗಂಗೆಯು ಅವರನ್ನು ತಂದೆಯಾಗಿ ಯಾರನ್ನು ಆರಿಸಿಕೊಳ್ಳುವರೆಂದು ಕೇಳಿದಾಗ, ಭರತವಂಶದ ಪ್ರತೀಪನೆಂಬ ರಾಜನಿಗೆ ಹುಟ್ಟುವ ಶಾಂತನುವನ್ನು ತಂದೆಯಾಗಿ ಆರಿಸಿಕೊಳ್ಳುವೆವೆಂದರು. ಆಗ ಗಂಗೆಯು, ಆ ಶಾಂತನು, ಈಗ ಬ್ರಹ್ಮನಿಂದ ಶಾಪಗ್ರಸ್ತನಾಗಿ ಹುಟ್ಟುವ ಮಹಾಭಿಷನೇ ಎಂದು ಅರಿತು, ತನ್ನ ಮತ್ತು ಅವನ ಮಿಲನ ವ್ಯರ್ಥವಾಗಬಾರದೆಂದು ಹೇಳಲು, ಅವರು ತಮ್ಮಲ್ಲಿ ಒಬ್ಬನು ಅವರ ಮಗನಾಗಿ ಭೂಮಿಯಲ್ಲಿ ಉಳಿಯುವನೆಂದು ಹೇಳಿದರು. ಗಂಗೆ ಎಲ್ಲಕ್ಕೂ ಒಪ್ಪಿದಳು. 
    ಈ ಸಂದರ್ಭದಲ್ಲಿ ಭರತವಂಶದ ವೃದ್ಧ ರಾಜನಾದ ಪ್ರತೀಪನೆಂಬುವನು ತಪಸ್ಸು ಮಾಡುತ್ತಿದ್ದನು. ಗಂಗೆಯು ಸುಂದರವಾದ ಮಾನುಷ ಸ್ತ್ರೀಯ ರೂಪ ಧರಿಸಿ ಹೋಗಿ ಅವನ ಬಲತೊಡೆಯ ಮೇಲೆ ಕುಳಿತು," ನಾನು ನಿನ್ನನ್ನು ಕಾಮಿಸಿ ಬಂದಿದ್ದೇನೆ! ನನ್ನನ್ನು ಪರಿಗ್ರಹಿಸು! ತಾನಾಗಿ ಕಾಮಿಸಿ ಬಂದ ಸ್ತ್ರೀಯನ್ನು ಬಿಡುವುದು ಪಾಪ!" ಎಂದಳು! ಆಗ ಪ್ರತೀಪನು," ನೀನು ಹೇಳುವುದು ನಿಜವಾದರೂ ನೀನು ಮಾಡಿದ ಕಾರ್ಯ ಅದನ್ನು ಸಮರ್ಥಿಸುತ್ತಿಲ್ಲ! ನೀನು ನನ್ನ ಬಲತೊಡೆಯ ಮೇಲೆ ಕುಳಿತಿರುವೆ! ಶಾಸ್ತ್ರದ ಪ್ರಕಾರ, ಬಲತೊಡೆಯಿರುವುದು ಹೆಣ್ಣು ಮಕ್ಕಳು ಅಥವಾ ಸೊಸೆಯರು ಕುಳಿತುಕೊಳ್ಳಲಾದರೆ, ಎಡತೊಡೆಯಿರುವುದು ಪ್ರೇಯಸಿ ಅಥವಾ ಪತ್ನಿ ಕುಳಿತುಕೊಳ್ಳಲು! ನೀನು ನನ್ನ ಬಲತೊಡೆಯ ಮೇಲೆ ಕುಳಿತಿರುವುದರಿಂದ ನಾನು ನಿನ್ನನ್ನು ಪತ್ನಿಯಾಗಿ ಪರಿಗ್ರಹಿಸಲಾರೆ! ಆದರೆ ನನ್ನ ಸೊಸೆಯಾಗಿ ಪರಿಗ್ರಹಿಸುತ್ತೇನೆ! ನೀನು ನನ್ನ ಮಗನ ಪತ್ನಿಯಾಗು!" ಎಂದನು. ಗಂಗೆಯು ಅದಕ್ಕೆ ಒಪ್ಪಿ, ಅವನ ಮಗನನ್ನು ತಾನು ವರಿಸಿದರೂ ಅವನು ತಾನು ಮಾಡುವ ಪ್ರಿಯ ಅಥವಾ ಅಪ್ರಿಯ ಕಾರ್ಯಗಳನ್ನು ಒಪ್ಪಬೇಕೆಂದು ನಿಬಂಧನೆ ಹಾಕಿದಳು. ಅದಕ್ಕೆ ಪ್ರತೀಪನು ಒಪ್ಪಿದನು. 
    ಆದರೆ ಈ ಸಂದರ್ಭದಲ್ಲಿ ಪ್ರತೀಪನಿಗೆ ಮಕ್ಕಳೇ ಇರಲಿಲ್ಲ! ಹಾಗಾಗಿ ಅವನು ಕೊಟ್ಟ ಮಾತನ್ನು ನಡೆಸಲು ಮಕ್ಕಳಾಗಲೆಂದು ತನ್ನ ಪತ್ನಿಯೊಂದಿಗೆ ತಪಸ್ಸು ಮಾಡಿದ. ಆಗ ಅವನಿಗೆ ಮಹಾಭಿಷನು ಮಗನಾಗಿ ಜನಿಸಿದ. ವಂಶವೇ ಶಾಂತವಾಗುವುದರಲ್ಲಿದ್ದಾಗ ಹುಟ್ಟಿದ್ದರಿಂದ ಅವನಿಗೆ ಶಾಂತನು ಎಂದು ಹೆಸರಿಡಲಾಯಿತು. 
      ಶಾಂತಸ್ಯ ಜಜ್ಞೇ ಸಂತಾನಸ್ತಸ್ಮಾದಾಸೀತ್ಸ ಶಾಂತನು:
  ಪ್ರಾಯಶಃ ಪ್ರತೀಪನಿಗೆ ಪುತ್ರಸಂತಾನವಾಗಲೆಂದೇ ಗಂಗೆಯು ಬಂದು ಅವನ ಬಲತೊಡೆಯ ಮೇಲೆ ಕುಳಿತುಕೊಳ್ಳುವ ನಾಟಕವಾಡಿದಳೇನೋ! 
   ಶಾಂತನುವು ದೊಡ್ಡವನಾದಾಗ ಪ್ರತೀಪನು ಹಿಂದೆ ಒಬ್ಬ ಸ್ತ್ರೀಯು ತನ್ನ ಬಳಿ ಬಂದಿದ್ದ ವಿಷಯ ಹೇಳಿ ಅವನ ಬಳಿಯೂ ಬರುತ್ತಾಳೆಂದು ಹೇಳಿದ. ಅವಳು ಹಾಗೆ ಬಂದರೆ ಅವಳು ನಿಬಂಧನೆ ಹಾಕಿದರೂ ಹೆಚ್ಚು ವಿಚಾರಿಸದೆ ಅವಳನ್ನು ಮದುವೆಯಾಗುವಂತೆ ಹೇಳಿದ. 
   ಅಂತೆಯೇ ಮುಂದೆ ಶಾಂತನುವೇ ಗಂಗೆಯನ್ನು ನೋಡಿ ಮೋಹಿಸಿದ. ಅವಳನ್ನು ದೇವತೆಯೋ ಯಕ್ಷಿಯೋ ಅಪ್ಸರೆಯೋ ಯಾರೇ ಆಗಿದ್ದರೂ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡ. ಅದಕ್ಕೆ ಗಂಗೆಯು ತಾನು ಪ್ರಿಯವಾಗಲಿ ಅಪ್ರಿಯವಾಗಲಿ ಏನೇ ಕಾರ್ಯ ಮಾಡಿದರೂ ಅವನು ಪ್ರಶ್ನೆ ಮಾಡಬಾರದೆಂದೂ ಹಾಗೆ ಮಾಡಿದಂದೇ ತಮ್ಮ ಸಂಬಂಧ ಮುಗಿಯುವುದೆಂದೂ ನಿಬಂಧನೆ ಹಾಕಿದಳು. ಶಾಂತನುವು ಅದಕ್ಕೆ ಒಪ್ಪಿ ಅವಳನ್ನು ವರಿಸಿದ. ಅವಳೊಂದಿಗೆ ಸುಖವಾಗಿ ರಮಿಸಿದ. ಶಾಂತನುವಿನಿಂದ ಅವಳಿಗೆ ಅಷ್ಟ ವಸುಗಳು ಒಬ್ಬೊಬ್ಬರಾಗಿ ಹುಟ್ಟಿದರು. ಹುಟ್ಟಿದ ಕೂಡಲೇ ಅವಳು ಆ ಮಕ್ಕಳನ್ನು," ನಿನಗೆ ಪ್ರಿಯವಾದುದನ್ನು ಮಾಡುತ್ತಿರುವೆ!" ಎನ್ನುತ್ತಾ ಗಂಗಾ ನದಿಯಲ್ಲಿ ಹಾಕಿಬಿಟ್ಟಳು! ಅದನ್ನು ನೋಡಿ ಶಾಂತನುವಿನ ಮನಸ್ಸಿಗೆ ಬಹಳ ನೋವಾದರೂ ಪ್ರಶ್ನಿಸಿದರೆ ಎಲ್ಲಿ ಅವಳು ತನ್ನನ್ನು ಬಿಟ್ಟು ಹೋಗುವಳೋ ಎಂದು ಕೇಳಲಿಲ್ಲ. ಹೀಗೆ ಏಳು ಮಕ್ಕಳನ್ನು ನೀರುಪಾಲು ಮಾಡಿದ ಬಳಿಕ, ಎಂಟನೆಯ ಮಗುವನ್ನೂ ನೀರಿನಲ್ಲಿ ಹಾಕಲು ಅವಳು ಹೊರಟಾಗ, ಶಾಂತನುವು ತಡೆಯಲಾರದೆ, "ಇಂಥ ಪಾಪವನ್ನು ಏಕೆ ಮಾಡುತ್ತಿರುವೆ? ಈ ಒಂದು ಮಗುವನ್ನಾದರೂ ಕೊಲ್ಲಬೇಡ! ಯಾರು ನೀನು?" ಎಂದು ಕೇಳಿದ. ಅದಕ್ಕೆ ಅವಳು ನಗುತ್ತಾ," ಈ ಮಗುವನ್ನು ನಾನು ಕೊಲ್ಲುವುದಿಲ್ಲ! ಆದರೆ ನಮ್ಮ ಸಂಬಂಧ ಇಲ್ಲಿಗೆ ಮುಗಿಯುತ್ತದೆ! ನಾನು ಋಷಿಮುನಿಗಳೆಲ್ಲಾ ಪಾಪಹಾರಿಣಿ ಎಂದು ಪೂಜಿಸುನ ಗಂಗೆ! ಅಷ್ಟವಸುಗಳ ಶಾಪವಿಮುಕ್ತಿಗಾಗಿ ಹೀಗೆ ಮಾಡಬೇಕಾಯಿತು!" ಎಂದು ಎಲ್ಲಾ ವಿಷಯವನ್ನು ಹೇಳಿ ಆ ಮಗುವನ್ನು ತನ್ನೊಂದಿಗೆ ಸ್ವರ್ಗಕ್ಕೆ ಕರೆದೊಯ್ದು ಬೃಹಸ್ಪತಿಗಳು , ಶುಕ್ರಾಚಾರ್ಯರು, ವಸಿಷ್ಠರು, ಪರಶುರಾಮರಿಂದ ಎಲ್ಲಾ ಶಿಕ್ಷಣಗಳನ್ನು ಕೊಡಿಸಿ ಅವನು ತರುಣನಾದಾಗ ಹಿಂದಕ್ಕೆ ಕರೆತಂದು ಶಾಂತನುವಿಗೊಪ್ಪಿಸಿದಳು. ಅವನೇ ದೇವವ್ರತ. 
     ಮುಂದೆ ಶಾಂತನು ಬೇಟೆಯಲ್ಲಿ ಕಾಲ ಕಳೆಯುತ್ತಿದ್ದಾಗ, ಒಮ್ಮೆ ಯಮುನಾನದಿಯ ಬಳಿ ಒಂದು ಸೊಗಸಾದ ಸುಗಂಧ ತೇಲಿಬಂದಂತೆ ಅದನ್ನು ಅನುಸರಿಸುತ್ತಾ ಹೋದನು. ಆಗ ನಾವೆಯನ್ನು ನಡೆಸುತ್ತಿದ್ದ ಸತ್ಯವತಿ ಎಂಬ ಸುಂದರ ಹುಡುಗಿಯನ್ನು ಕಂಡು ಅವಳಲ್ಲಿ ಮೋಹಗೊಂಡ. ಆ ಸುಗಂಧ ಅವಳ ಮೈಯಿಂದಲೇ ಹೊರಡುತ್ತಿತ್ತು! ಅವಳು ಬೆಸ್ತರ ರಾಜನ ಸಾಕುಮಗಳಾಗಿದ್ದಳು. ಹಿಂದೊಮ್ಮೆ, ಪರಾಶರ ಮುನಿಗಳ ಸಂಗಮವಾಗಿ ಅವರಿಂದ ಮಹರ್ಷಿ ವೇದವ್ಯಾಸರನ್ನು ಹೆತ್ತಿದ್ದ ಅವಳು, ಪರಾಶರರ ವರದಿಂದ ಕನ್ಯೆಯಾಗಿಯೇ ಇದ್ದಳು ಹಾಗೂ ಮೀನಿನ ವಾಸನೆಯಿದ್ದ ಅವಳ ಮೈಯಿಂದ ಸುಗಂಧ ಬರುವಂತೆ ಹಾಗೂ ಅದು ಒಂದು ಯೋಜನ ದೂರ ಹರಡುವಂತೆ ವರ ಪಡೆದಿದ್ದಳು! ಹಾಗಾಗಿಯೇ ಅವಳಿಗೆ ಹಿಂದೆ ಮತ್ಸ್ಯಗಂಧಿ ಎಂಬ ಹೆಸರಿದ್ದು ಈಗ ಯೋಜನಗಂಧಿ ಎಂಬ ಹೆಸರು ಬಂದಿತ್ತು. ಶಾಂತನು ದಾಶರಾಜನ ಬಳಿ ಹೋಗಿ ಅವನ ಮಗಳನ್ನು ತನಗೆ ಮದುವೆ ಮಾಡಿಕೊಡಲು ಕೇಳಲು ಅವನು ಸಂತೋಷದಿಂದ ಒಪ್ಪಿದರೂ ಅವಳಿಂದ ಹುಟ್ಟುವ ಮಗನೇ ಮುಂದೆ ರಾಜನಾಗಬೇಕೆಂದು ನಿಬಂಧನೆ ಹಾಕಿದನು. ಆದರೆ ಶಾಂತನು ತನ್ನ ಮಗ ದೇವವ್ರತನನ್ನು ಮುಂದಿನ ರಾಜನನ್ನಾಗಿ ಮಾಡಬೇಕೆಂದಿದ್ದನು. ಈಗ ದಾಶರಾಜನ ನಿಬಂಧನೆಗೊಪ್ಪಿದರೆ ತನ್ನ ಮಗನಿಗೆ ಅನ್ಯಾಯ ಮಾಡಿದಂತಾಗುವುದಿಲ್ಲವೇ? ಹಾಗಾಗಿ ಅವನು ಮನೆಗೆ ಹೋಗಿ ಚಿಂತಾಗ್ರಸ್ತನಾಗಿ ಕುಳಿತನು. ಇದನ್ನು ಗಮನಿಸಿದ ದೇವವ್ರತನು ಅವನನ್ನು ವಿಚಾರಿಸಲು, ಒಬ್ಬನೇ ಪುತ್ರನಾದ ಅವನು ಸದಾ ಯುದ್ಧಗಳಲ್ಲಿ ತೊಡಗಿರುವುದೇ ಅವನಿಗೆ ಚಿಂತೆ ಎಂದು ಹಾರಿಕೆಯ ಉತ್ತರ ಕೊಟ್ಟನು. ಆಗ ದೇವವ್ರತನು ಶಾಂತನುವಿನ ಸಾರಥಿಯನ್ನು ವಿಚಾರಿಸಿ ವಿಷಯ ತಿಳಿದುಕೊಂಡು ತಾನೇ ದಾಶರಾಜನ ಬಳಿಗೆ ಮಾತುಕತೆಗೆ ಹೋದನು. ದಾಶರಾಜನ ನಿಬಂಧನೆಗೆ ಒಪ್ಪಿ ತಾನು ರಾಜನಾಗುವುದಿಲ್ಲವೆಂದು ಪ್ರತಿಜ್ಞೆ ಮಾಡಿದನು. ಆದರೆ ಅವನ ಮಕ್ಕಳು ರಾಜ್ಯ ಕೇಳಬಹುದು ಎಂದು ಪುನಃ ದಾಶರಾಜನು ಹೇಳಲು, ದೇವವ್ರತನು ತಾನು ಜೀವನದಲ್ಲಿ ಮದುವೆಯೇ ಆಗುವುದಿಲ್ಲ ಎಂಬ ಭೀಕರ ಅಥವಾ ಭೀಷ್ಮಪ್ರತಿಜ್ಞೆ ಮಾಡಿದನು. ಆಗ ದೇವತೆಗಳು ಅವನ ಮೇಲೆ ಪುಷ್ಪವೃಷ್ಟಿಗೈದು "ಇವನು ಭೀಷ್ಮ!" ಎಂದು ಘೋಷಿಸಿದರು! ಅಂದಿನಿಂದ ಅವನ ಹೆಸರು ಭೀಷ್ಮನೆಂದಾಯಿತು! ದಾಶರಾಜನು ಈಗ ತನ್ನ ಮಗಳನ್ನು ಶಾಂತನುವಿಗೆ ಕೊಡಲು ಒಪ್ಪಿ ಭೀಷ್ಮನೊಂದಿಗೆ ಕಳಿಸಿದನು. ಹೀಗೆ ತಾನು ತನ್ನ ವೈವಾಹಿಕ ಸುಖವನ್ನು ತ್ಯಜಿಸಿ ತಂದೆ ಶಾಂತನುವಿಗೆ ಸತ್ಯವತಿಯೊಂದಿಗೆ ಮದುವೆ ಮಾಡಿಸಿದನು. ಇದರಿಂದ ಸುಪ್ರೀತನಾದ ಶಾಂತನು, ಅವನಿಗೆ ಇಚ್ಛಾಮರಣಿಯಾಗುವಂತೆ ವರ ನೀಡಿದನು 
     ಮಹಾಭಾರತದ ಆದಿಪರ್ವದ ಸಂಭವಪರ್ವವೆಂಬ ಉಪಪರ್ವದಲ್ಲಿ ಈ ಕಥೆ ಬರುತ್ತದೆ.‌ ಆದರೆ ಇದಕ್ಕೂ ಮೊದಲು ಶಾಂತನುವಿನ ಹೆಸರಿನ ವ್ಯುತ್ಪತ್ತಿಗೆ ಬೇರೆಯೇ ಕಾರಣವನ್ನು ಕೊಡಲಾಗಿದೆ. ಅದು ಹೀಗಿದೆ -
  ಯಂ ಯಂ ಕರಾಭ್ಯಾಂ ಸ್ಪೃಶತಿ ಜೀರ್ಣಂ ಸುಖಮಶ್ನುತೇ /
  ಪುನರ್ಯುವಾ ಚ ಭವತಿ ತಸ್ಮಾತ್ತಂ ಶಾಂತನುಂ ವಿದು: //
     ' ಶಂತನುವು ಯಾರು ಯಾರು ವಯಸ್ಸಾದವರನ್ನು ತನ್ನ ಕೈಗಳಿಂದ ಸ್ಪರ್ಶಿಸಿದರೂ ಅವರು ಕೂಡಲೇ ಸುಖವನ್ನು ಹೊಂದಿ ನವಯುವಕರಾಗುತ್ತಿದ್ದರು! ಆದ್ದರಿಂದಲೇ ಅವನು ಶಾಂತನು ಎಂದು ಪ್ರಸಿದ್ಧನಾದನು.' 
     ಇದೇ ಅಭಿಪ್ರಾಯವೇ ಭಾಗವತದಲ್ಲೂ ಇದೆ -
ಯಂ ಯಂ ಕರಾಭ್ಯಾಂ ಸ್ಪೃಶತಿ ಜೀರ್ಣಂ ಯೌವನಮೇತಿ ಸ: /
ಶಾಂತಿಮಾಪ್ನೋತಿ ಚೈವಾಗ್ರ್ಯಾಂ ಕರ್ಮಣಾ ತೇನ ಶಂತನು: //
    ' ಶಂತನುವು ಯಾರು ಯಾರು ವೃದ್ಧರನ್ನು ಸ್ಪರ್ಶಿಸುತ್ತಿದ್ದನೋ ಅವರು ಯೌವನವನ್ನು ಪಡೆಯುತ್ತಿದ್ದರು ಹಾಗೂ ಪರಮಶಾಂತಿಯನ್ನು ಪಡೆಯುತ್ತಿದ್ದರು! ಆದ್ದರಿಂದಲೇ ಅವನಿಗೆ ಶಂತನು ಎಂದು ಹೆಸರಾಯಿತು.' 
  ಅಲ್ಲದೇ ಮಹಾಭಾರತದ ಆರಂಭದಲ್ಲಿ ಪ್ರತೀಪ ರಾಜನು ಶಿಬಿದೇಶದ ರಾಜಕುಮಾರಿಯ ಸುನಂದಾಳನ್ನು ಮದುವೆಯಾಗಿ ದೇವಾಪಿ, ಶಾಂತನು, ಬಾಹ್ಲೀಕ ಎಂಬ ಮೂರು ಮಕ್ಕಳನ್ನು ಪಡೆದಿದ್ದನು ಎಂದಿದೆ. ಹಿರಿಯನಾದ ದೇವಾಪಿಯು ಬಾಲ್ಯದಲ್ಲೇ ಐಹಿಕ ಜೀವನದಲ್ಲಿ ವಿರಕ್ತಿ ಹೊಂದಿ ತಪಸ್ಸು ಮಾಡಲು ಕಾಡಿಗೆ ಹೊರಟುಹೋದನು. ಹಾಗಾಗಿ ಸಾಮ್ರಾಜ್ಯವು ಶಾಂತನು ಮತ್ತು ಬಾಹ್ಲೀಕರಿಗೆ ಉಳಿಯಿತು. 
    ಮಹಾಭಾರತದ ಉದ್ಯೋಗಪರ್ವದಲ್ಲಿ, ಧೃತರಾಷ್ಟ್ರನು ತನ್ನ ಮಗ ದುರ್ಯೋಧನನಿಗೆ ತನ್ನ ವಂಶದ ಕಥೆಯನ್ನು ಹೇಳುತ್ತಾ ಶಾಂತನು ಮತ್ತು ಅವನ ಅಣ್ಣಂದಿರ ಬಗ್ಗೆ ಹೇಳುತ್ತಾನೆ. ಅದರಂತೆ, ಪ್ರತೀಪ ಮಹಾರಾಜನಿಗೆ ದೇವಾಪಿ, ಬಾಹ್ಲೀಕ, ಮತ್ತು ಶಾಂತನು ಎಂಬ ಮೂರು ಪುತ್ರರು. ಶಾಂತನು ಕೊನೆಯವನು. ದೇವಾಪಿಯು ಶಕ್ತಿವಂತನೂ ಧಾರ್ಮಿಕನೂ ಆಗಿದ್ದರೂ ಅವನಿಗೆ ಚರ್ಮರೋಗವಿದ್ದುದರಿಂದ ಬ್ರಾಹ್ಮಣರು, ಮಂತ್ರಿಗಳು, ಪ್ರಜೆಗಳು, ಯಾರೂ ಅವನು ರಾಜನಾಗುವುದನ್ನು ಒಪ್ಪಲಿಲ್ಲ. ಹಾಗಾಗಿ ಅವನು ವಿರಕ್ತನಾಗಿ ತಪಸ್ಸು ಮಾಡಲು ಕಾಡಿಗೆ ಹೋದನು. ಅನಂತರ ಎರಡನೆಯವನಾದ ಬಾಹ್ಲೀಕನು ಹಸ್ತಿನಾಪುರವನ್ನು ಬಿಟ್ಟು ತನ್ನ ಸೋದರಮಾವನ ವಂಶವನ್ನು ಸೇರಿ ಬೇರೊಂದು ನಗರಕ್ಕೆ ರಾಜನಾದನು. ಅನಂತರ, ಪ್ರತೀಪನು ಸ್ವರ್ಗಸ್ಥನಾದ ಬಳಿಕ, ಬಾಹ್ಲೀಕನು ಶಾಂತನುವಿಗೆ ರಾಜ್ಯಭಾರವನ್ನು ವಹಿಸಿಕೊಳ್ಳಲು ಹೇಳಿದನು. ಮುಂದೆ, ಬಾಹ್ಲೀಕನು ಕೌರವರ ಕಡೆ ನಿಂತು ಕುರುಕ್ಷೇತ್ರ ಯುದ್ಧದಲ್ಲಿ ಭಾಗವಹಿಸಿ ಭೀಮನಿಂದ ಹತನಾದನು. ಭೀಷ್ಮನ ಪ್ರಕಾರ ಅತಿರಥನಾಗಿದ್ದ ಅವನು ಕುರುಕ್ಷೇತ್ರದಲ್ಲಿ ಭಾಗವಹಿಸಿದ ಅತ್ಯಂತ ಹಿರಿಯ ವೀರನಾಗಿದ್ದನು. 
     ಭಾಗವತದಲ್ಲಿ ಶಂತನುವಿನ ಇನ್ನೊಂದು ಸ್ವಾರಸ್ಯಕರ ಕಥೆ ಬರುತ್ತದೆ. ಅದರಂತೆ, ಒಮ್ಮೆ, ಶಂತನುವಿನ ರಾಜ್ಯದಲ್ಲಿ ದೇವೇಂದ್ರನು ಹನ್ನೆರಡು ವರ್ಷಗಳ ಕಾಲ ಮಳೆಗರೆಯಲೇ ಇಲ್ಲ! ಆಗ ಶಂತನುವು ಬ್ರಾಹ್ಮಣರನ್ನು ಕರೆಸಿ ಇದಕ್ಕೆ ಕಾರಣವೇನೆಂದು ಕೇಳಲು, ಅವರು ಶಾಸ್ತ್ರವನ್ನು ಪರಿಶೀಲಿಸಿ, " ಮಹಾರಾಜ! ನೀನು ನಿನ್ನ ಅಣ್ಣ ದೇವಾಪಿಯು ವಿವಾಹವಾಗುವ ಮೊದಲೇ ವಿವಾಹವಾಗಿ ಅಗ್ನಿಹೋತ್ರ ಮಾಡುತ್ತಿರುವೆ ಹಾಗೂ ರಾಜ್ಯವನ್ನೂ ಪಡೆದಿರುವೆ! ಇದರಿಂದ ನಿನಗೆ ಪರಿವೇತ್ತೃತ್ವದ ದೋಷ ಬಂದಿದೆ! ಆದ್ದರಿಂದಲೇ ಮಳೆ, ಬೆಳೆ ಆಗಿಲ್ಲ! ನೀನು ರಾಜ್ಯದ ಅಭ್ಯುದಯ ಬಯಸುವುದಾದರೆ ಬೇಗನೆ ನಿನ್ನ ಅಣ್ಣನ ಬಳಿ ಹೋಗಿ ರಾಜ್ಯವನ್ನು ಅವನಿಗೊಪ್ಪಿಸು!" ಎಂದರು. ಆಗ ಶಂತನುವು ಕಾಡಿಗೆ ಹೋಗಿ ರಾಜ್ಯವನ್ನು ಸ್ವೀಕರಿಸುವಂತೆ ತನ್ನ ಅಣ್ಣನನ್ನು ಪ್ರಾರ್ಥಿಸಿದನು. ಆದರೆ ಅಷ್ಟರಲ್ಲಿ ಶಂತನುವಿನ ಮಂತ್ರಿಯಾದ ಅಶ್ಮರಾತನು ದೇವಾಪಿಯ ಬಳಿಗೆ ಕೆಲವು ಬ್ರಾಹ್ಮಣರನ್ನು ಕಳಿಸಿ ನಾಸ್ತಿಕ್ಯವಾದದ ಪಾಷಂಡಮತವನ್ನು ಬೋಧಿಸಿದ್ದನು. ಇದರಿಂದ ದೇವಾಪಿಯ ಮನಸ್ಸು ಕೆಟ್ಟು ಅವನು ವೇದಮಾರ್ಗದಿಂದ ದೂರಾಗಿದ್ದನು! ಹಾಗಾಗಿ ಅವನು ಶಂತನುವಿನ ಮಾತನ್ನು ಕೇಳದೆ ಅವನಿಗೂ ನಾಸ್ತಿಕ್ಯವನ್ನು ಬೋಧಿಸತೊಡಗಿದನು. ಅಣ್ಣನಿಗಿಂತ ಮೊದಲು ತಮ್ಮನು ಮದುವೆಯಾಗಬಾರದೆಂಬ ಹಾಗೂ ಅಗ್ನಿಹೋತ್ರ ಮಾಡಬಾರದೆಂಬ ವೇದದ ದಾರಿಯನ್ನು ಅವನು ಒಪ್ಪಲಿಲ್ಲ. ಹಾಗಾಗಿ ಅವನು ವೇದಭ್ರಷ್ಟನಾಗಿ ರಾಜ್ಯವನ್ನು ಪಡೆಯಲು ಅನರ್ಹನಾದನು. ಇದರಿಂದ ಶಂತನುವಿಗೆ ಪರಿವೇತ್ತೃತ್ವದ ದೋಷ ಪರಿಹಾರವಾಗಿ ಇಂದ್ರನು ಮಳೆಗರೆದನು! ಹೀಗೆ ಶಂತನುವೇ ರಾಜನಾಗಿ ಮುಂದುವರೆದನು. ಇತ್ತ ದೇವಾಪಿಯೂ ಯೋಗಿಯಾಗಿ ಕಲಾಪಗ್ರಾಮದಲ್ಲಿ ಯೋಗಸಾಧನೆ ಮಾಡತೊಡಗಿದನು. ಆ ದೇವಾಪಿಯು ಈಗಲೂ ಕಲಾಪಗ್ರಾಮದಲ್ಲಿದ್ದು, ಕಲಿಯುಗದಲ್ಲಿ ಚಂದ್ರವಂಶದ ನಾಶವಾದಾಗ, ಸತ್ಯಯುಗದಲ್ಲಿ ಪುನಃ ಆರಂಭಿಸುವನಂತೆ! 
    ಮಹಾಭಾರತದ ಖಿಲಗ್ರಂಥವಾದ ಹರಿವಂಶದಲ್ಲಿ ಶಾಂತನುವಿನ ಕಥೆ ಬೇರೆಯೇ ರೀತಿಯಲ್ಲಿದೆ. ಅದರಂತೆ ಒಮ್ಮೆ, ಮೇರುಪರ್ವತದಲ್ಲಿ ಮಹಾವಿಷ್ಣುವೂ ಬ್ರಹ್ಮಾದಿದೇವತೆಗಳೂ ಸಭೆ ಸೇರಲು, ಭೂದೇವಿಯು ದುಷ್ಟರಾಜರಿಂದ ಆಗಿರುವ ತನ್ನ ಭಾರವನ್ನು ಇಳಿಸಲು ಮಹಾವಿಷ್ಣುವನ್ನು ಪ್ರಾರ್ಥಿಸಿದಳು. ಆಗ ದೇವತೆಗಳು ತಾವು ತಮ್ಮ ಅಂಶಗಳಿಂದ ಹೇಗೆ ಅವತರಿಸಬೇಕೆಂದು ಬ್ರಹ್ಮನನ್ನು ಕೇಳಿದರು. ಅದಕ್ಕೆ ಬ್ರಹ್ಮನು ಭೂಭಾರವನ್ನಿಳಿಸಲು ಭರತವಂಶವನ್ನು ಆರಿಸಿಕೊಂಡಿರುವುದಾಗಿ ಹೇಳಿ ತನ್ನ ಹಿಂದಿನ ಒಂದು ಕಥೆ ಹೇಳಿದನು. ಅದರಂತೆ, ಒಮ್ಮೆ ಬ್ರಹ್ಮನು ಪೂರ್ವಸಮುದ್ರದ ಪಶ್ಚಿಮ ತೀರದಲ್ಲಿ, ತನ್ನ ಪುತ್ರನಾದ ಕಶ್ಯಪ ಋಷಿಯೊಂದಿಗೆ ಕುಳಿತುಕೊಂಡು ಲೌಕಿಕ ಮತ್ತು ವೈದಿಕ ಮಾರ್ಗಗಳನ್ನು ಅನುಸರಿಸುತ್ತಿದ್ದವರ ಪ್ರಾಚೀನ ಕಥೆಗಳನ್ನೂ ಉತ್ತಮ ಗುಣಗಳ ಪೌರಾಣಿಕ ಇತಿಹಾಸಗಳನ್ನೂ ಚರ್ಚಿಸುತ್ತಿದ್ದನು.‌ಆಗ ಸಮುದ್ರರಾಜನು ಗಂಗೆಯೊಡನೆ ಅವನ ಬಳಿಗೆ ಮೂರ್ತಿಮತ್ತಾಗಿ ಅವಸರದಿಂದ ಬಂದನು! ಅವನೊಂದಿಗೆ ಮೇಘಗಳ ಸಮೂಹಗಳೂ ವಾಯುದೇವತೆಗಳೂ ಆಗಮಿಸಿದರು. ಜಲರೂಪದ ವಸ್ತ್ರ ಧರಿಸಿ, ಪೂರ್ಣಚಂದ್ರನೊಂದಿಗೆ ಕೂಡಿದ್ದು, ಅಲೆಗಳನ್ನು ಭಯಂಕರವಾಗಿ ಏರುಪೇರು ಮಾಡುತ್ತಾ ಮೇಘದಂತೆ ಗಂಭೀರ ಶಬ್ದ ಮಾಡುತ್ತಾ ಸಮುದ್ರರಾಜನು ಬರುತ್ತಾ ಬ್ರಹ್ಮನನ್ನೇ ತಿರಸ್ಕಾರ ಭಾವದಿಂದ ಆವರಿಸಿ ಉಪ್ಪುಪ್ಪಾಗಿದ್ದ ಜಲಬಿಂದುಗಳಿಂದ ತೋಯಿಸಿದ! ಬ್ರಹ್ಮನು ಕುಳಿತಿದ್ದ ಸ್ಥಳವನ್ನೇ ಕೊಚ್ಚಿಕೊಂಡು ಹೋಗುವಂತೆ ಭೋರ್ಗರೆಯುವ ಅಲೆಗಳೊಂದಿಗೆ ಅವನು ಬರುತ್ತಿರಲು, ಬ್ರಹ್ಮನು ಕುಪಿತಗೊಂಡು, " ಶಾಂತೋsಸಿ ( ನೀನು ಶಾಂತನಾಗುವೆ)!" ಎಂದನು.‌ ಬ್ರಹ್ಮನು ಹಾಗೆ ಹೇಳಿದಾಕ್ಷಣ, ಸಮುದ್ರರಾಜನು ಸೂಕ್ಷ್ಮ ರೂಪ ತಾಳಿದನು.‌ ಅವನ ಅಲೆಗಳ ಭೋರ್ಗರೆತ ಉಡುಗಿಹೋಗಿ ಅವನು ರಾಜ್ಯಲಕ್ಷ್ಮಿಯಿಂದ ಕೂಡಿ ಬ್ರಹ್ಮನ ಬಳಿ ನಿಂತನು. 
    ಆಗ ಭೂಭಾರವನ್ನಿಳಿಸಲು ಹಾಗೂ ದೇವತೆಗಳ ಹಿತಕ್ಕಾಗಿ ಬ್ರಹ್ಮನು ಸಮುದ್ರ ರಾಜನನ್ನು ಶಪಿಸಿದನು," ನೀನು ರಾಜನ ರೂಪವನ್ನು ಧರಿಸಿ ಬಂದಿರುವುದರಿಂದ ಭರತವಂಶದ ರಾಜನಾಗಿ ಹುಟ್ಟಿ ಜನರನ್ನು ಪಾಲಿಸುವೆ! ನಾನು ' ಶಾಂತೋsಸಿ ( ಶಾಂತನಾಗುವೆ)' ಎಂದು ಹೇಳಿದ ಕೂಡಲೇ ನೀನು ಸೂಕ್ಷ್ಮ ರೂಪ ಧರಿಸಿದುದರಿಂದ ಭೂಲೋಕದಲ್ಲಿ ನೀನು ಸುಂದರ ಶರೀರದ ರಾಜನಾಗಿ ಶಾಂತನು ಎಂದು ಪ್ರಸಿದ್ಧನಾಗುವೆ! ಸರ್ವಾಂಗಸುಂದರಿಯೂ ನದಿಗಳಲ್ಲಿ ಶ್ರೇಷ್ಠಳೂ ಆದ ಈ ಗಂಗೆಯೇ ಸಶರೀರಳಾಗಿ ನಿನ್ನನ್ನು ಸೇವಿಸುತ್ತಾಳೆ! " 
   ಇದನ್ನು ಕೇಳಿ ಸಮುದ್ರರಾಜನು, " ದೇವದೇವನೇ! ನನಗೇಕೆ ಹೀಗೆ ಶಾಪ ಕೊಟ್ಟೆ? ನಿನ್ನ ಆಜ್ಞೆಯನ್ನು ಸದಾ ಪಾಲಿಸುವ ನಿನ್ನ ಪುತ್ರನೇ ನಾನಲ್ಲವೇ? ನೀನೇ ಈ ಶರೀರವನ್ನು ಸೃಷ್ಟಿಸಿರುವೆ ಹಾಗೂ ಹುಣ್ಣಿಮೆಯ ದಿನ ಚಂಡಮಾರುತವು ನನ್ನನ್ನು ಪ್ರಚೋದಿಸುವುದರಿಂದ ನಾನು ವರ್ಧಿಸಿ ಎಲ್ಲೆ ಮೀರಿ ಹರಿಯುವೆ! ಆಗ ಕಾರಣದಿಂದ ನಿನ್ನನ್ನು ನಾನು ಸ್ಪರ್ಶಿಸಲು ನೀನು ಒದ್ದೆಯಾದೆ! ಇದರಲ್ಲಿ ನನ್ನದೇನು ತಪ್ಪಿದೆ? ದಯವಿಟ್ಟು ಶಾಪವನ್ನು ಹಿಂತೆಗೆದುಕೋ!" ಎಂದನು. ಅದಕ್ಕೆ ಬ್ರಹ್ಮನು," ಹೆದರಬೇಡ! ಶಾಂತನಾಗು! ನೀನು ನಿನ್ನ ಶರೀರವನ್ನು ಎರಡಾಗಿ ವಿಂಗಡಿಸಿಕೊಂಡು ಒಂದರಲ್ಲಿ ಇಲ್ಲೇ ಇರುತ್ತಾ ಇನ್ನೊಂದರ ಮೂಲಕ ಭರತವಂಶದಲ್ಲಿ ಜನಿಸು! ನಿನಗೆ ಪರಮಪ್ರಿಯಳಾದ ಗಂಗೆಯೊಂದಿಗೆ ರಮಿಸು! ಶಾಪಗ್ರಸ್ತರಾದ ಅಷ್ಟವಸುಗಳಿಗೂ ಈ ಗಂಗೆಯ ಮೂಲಕ ನಿನ್ನಿಂದ ಜನನವಾಗಿ ಅವರಿಗೆ ಶಾಪ ವಿಮುಕ್ತಿಯಾಗಲೆಂದೂ ಹೀಗೆ ಮಾಡಿದ್ದೇನೆ! ಅನಂತರ ಭರತವಂಶದಲ್ಲಿ ನಿನ್ನ ಅಂಶವನ್ನು ಭದ್ರಪಡಿಸಿ ಸಮುದ್ರರಾಜನ ರೂಪಕ್ಕೆ ಹಿಂದಿರುಗು!" ಎಂದನು. ಅದಕ್ಕೆ ಸಮುದ್ರರಾಜನು ಒಪ್ಪಿ ಶಾಂತನುವಾಗಿ ಜನಿಸಿದನು.
    ಈ ಪೂರ್ವ ಕಥೆಯನ್ನು ಬ್ರಹ್ಮನು ದೇವತೆಗಳಿಗೆ ಹೇಳಿ," ದೇವತೆಗಳೇ! ಈಗಾಗಲೇ ಶಾಂತನುವು ಹುಟ್ಟಿ ಅಷ್ಟವಸುಗಳಿಗೂ ಜನ್ಮಕೊಟ್ಟು ಅವರಿಗೂ ಶಾಪ ವಿಮೋಚನೆ ಆಗಿದೆ. ಅವರಲ್ಲಿ ಒಬ್ಬನು ಮಾತ್ರ ಭೀಷ್ಮನೆಂಬ ಹೆಸರಿನಲ್ಲಿ ಉಳಿದಿದ್ದಾನೆ. ಶಾಂತನುವಿನ ಇನ್ನೊಬ್ಬ ಪುತ್ರನಿಗೆ ಹುಟ್ಟುವ ಮಕ್ಕಳಿಂದ ಎರಡು ಪಕ್ಷಗಳಾಗಿ ಅವರಿಗೆ ಯುದ್ಧವಾಗುತ್ತದೆ. ಆಗ ಯುದ್ಧದಲ್ಲಿ ಭಾಗವಹಿಸುವ ಅಪಾರ ಸಂಖ್ಯೆಯ ಯೋಧರ ವಧೆಯಾಗಿ ಭೂಭಾರಹರಣವಾಗುತ್ತದೆ! ಹಾಗಾಗಿ ನೀವು ನಿಮ್ಮ ಅಂಶಗಳಿಂದ ಭರತವಂಶದಲ್ಲಿ ಜನಿಸಿ!" ಎಂದು ಹೇಳಿದ. ಅನಂತರ ಅವನು ನಾರದರೊಂದಿಗೆ ಮಹಾವಿಷ್ಣುವನ್ನು ಕೃಷ್ಣಾವತಾರ ಕೈಗೊಳ್ಳಲು ಪ್ರೇರೇಪಿಸಿದ.
    ಹೀಗೆ ಹರಿವಂಶದಲ್ಲಿ ಶಾಂತನುವಿನ ಕಥೆ ಬೇರೆಯೇ ರೀತಿಯಲ್ಲಿದೆ.
   ಹೀಗೆ ಪೌರಾಣಿಕ ಕಥೆಗಳಲ್ಲಿ ಒಂದೇ ಕಥೆಯು ಬೇರೆ ಬೇರೆ ಗ್ರಂಥಗಳಲ್ಲಿ ವಿಭಿನ್ನ ರೂಪಗಳನ್ನು ತಳೆದಿರುವುದು ಒಂದು ಸ್ವಾರಸ್ಯ. 

ಭಾನುವಾರ, ಜುಲೈ 26, 2026

ಸುಂದರೀಶತಕ -೬೯

ಸಂಸ್ಕೃತ ಮೂಲ 

ಶಿತಿಕಂಠಕಂಠಕಾಂತಿಪ್ರತಿಮಲ್ಲೇ ಸ್ಫುರತಿ ಸರ್ವತಸ್ತಿಮಿರೇ /
ಧನ್ಯಾಯ ವದತಿ ಸುಂದರಿ ತವಾಗಮಂ ಪರಿಮಲೋತ್ಕರ್ಷ: //

ಕನ್ನಡ ಅನುವಾದ 

   ' ಹೇ ಸುಂದರಿ! ಶಿತಿಕಂಠ ( ನೀಲಕಂಠ)ನ ಕಂಠದ ಕಾಂತಿಯನ್ನು ಸ್ಪರ್ಧಿಸುವಂತೆ ಎಲ್ಲೆಲ್ಲೂ ಅಂಧಕಾರ ಕವಿದಿರುವಾಗ, ನಿನ್ನ ಉತ್ಕರ್ಷ ಪರಿಮಳವೇ ಆ ನಿನ್ನ ಧನ್ಯ ಪ್ರಿಯತಮನಿಗೆ ನಿನ್ನ ಆಗಮನದ ವಿಷಯವನ್ನು ಹೇಳುತ್ತಿದೆ!' 
    ಇದೊಂದು ಉತ್ಪ್ರೇಕ್ಷಿತ ಸ್ವಾರಸ್ಯಕರ ಶೃಂಗಾರ ಪದ್ಯ! ಇಲ್ಲಿ ನಾಯಕನು ರಾತ್ರಿ ತನ್ನ ಪ್ರಿಯತಮೆಗಾಗಿ ಕಾಯುತ್ತಿದ್ದಾನೆ. ರಾತ್ರಿಯ ಕತ್ತಲು ಹೇಗಿದೆಯೆಂದರೆ, ಶಿತಿಕಂಠ ಅಥವಾ ನೀಲಕಂಠನ, ಅಂದರೆ ಶಿವನ ಕಂಠದ ಕಾಂತಿಯನ್ನು ಸ್ಪರ್ಧಿಸುವಂತಿದೆ! ಶಿವನು ವಿಷ ಕುಡಿದು ಅದು ಅವನ ಕಂಠದಲ್ಲೇ ನಿಂತಿದ್ದರಿಂದ ಅದು ನೀಲಿ ಅಥವಾ ಕಪ್ಪಾಯಿತೆಂದು ಎಲ್ಲರಿಗೂ ಗೊತ್ತಿದೆ. ಹಾಗಾಗಿಯೇ ಅವನಿಗೆ ನೀಲಕಂಠ ಅಥವಾ ಶಿತಿಕಂಠ ಎಂಬ ಹೆಸರುಗಳು ಬಂದಿವೆ. ಆ ಶಿವನ ಕಂಠದ ಕಪ್ಪನ್ನೂ ಮೀರಿಸಿ ರಾತ್ರಿಯ ಕತ್ತಲು ಎಲ್ಲೆಲ್ಲೂ ಹರಡಿದೆ! ಯಾರೂ ಯಾರಿಗೂ ಕಾಣಿಸುತ್ತಿಲ್ಲ! ಇಂಥ ಸಂದರ್ಭದಲ್ಲಿ ನಾಯಕಿಯು ತನ್ನ ಸಖಿಯೊಂದಿಗೆ ಬಂದಿದ್ದಾಳೆ. ಆದರೆ ಕತ್ತಲಿನಲ್ಲಿ ಅವಳು ಬಂದಳೆಂದು ನಾಯಕನಿಗೆ ಗೊತ್ತಾಗುವುದಾದರೂ ಹೇಗೆ? ಅದಕ್ಕೆ ಅವಳ ಸಖಿಯು, ಅವಳ ಉತ್ಕರ್ಷ ಪರಿಮಳವೇ ಅವಳು ಬಂದಳೆಂದು ಅವಳ ಧನ್ಯ ಪ್ರಿಯತಮನಿಗೆ ಹೇಳುತ್ತಿದೆ ಎಂದು ಹೇಳುತ್ತಿದ್ದಾಳೆ! ಅಂದರೆ ನಾಯಕಿಯ ಮೈ ಪರಿಮಳ ಅಷ್ಟು ಸೊಗಸಾಗಿದೆ ಹಾಗೂ ಹೆಚ್ಚಾಗಿ ಪಸರಿಸುತ್ತಿದೆ! ನಾಯಕಿಯು ಕಾಣದಿದ್ದರೂ ಅವಳು ಬೀರುತ್ತಿರುವ ಪರಿಮಳದಿಂದಲೇ ಅವನಿಗೆ ಅವಳ ಬರುವಿಕೆಯು ತಿಳಿಯುತ್ತಿದೆ! ಎಂಥ ಸೊಗಸಾದ ಉತ್ಪ್ರೇಕ್ಷೆ! 

ಶನಿವಾರ, ಜುಲೈ 25, 2026

ಸುಂದರೀಶತಕ -೬೮

ಸಂಸ್ಕೃತ ಮೂಲ 

ಸಾಹಸಭವನಮದೂತಿಕಮವಲೋಕನದಾನವರ್ಧಮಾನಮಿದಮ್/
ಜಯತಿ ಕ್ವಚಿದಪಿ ಧನ್ಯೇ ಸುಂದರಿ ಸಹಜಂ ತವ ಪ್ರೇಮ //

ಕನ್ನಡ ಅನುವಾದ 

   ' ಎಲೈ ಸುಂದರಿ! ನಿನ್ನ ಸಹಜ ಪ್ರೇಮ ನನಗೊಂದು ಸಾಹಸಭವನ! ಅದು ದೂತಿಯಿಲ್ಲದೆ ಉಂಟಾಗಿದೆ! ನಿತ್ಯವೂ ನಿನ್ನ ನೋಟದಿಂದ ಅದು ವರ್ಧಿಸುತ್ತಿದೆ! ಹೇ ಧನ್ಯೆ! ಅದು ಎಂದೆಂದಿಗೂ ಜಯಿಸುತ್ತದೆ!' 
    ಇಲ್ಲಿ ಒಬ್ಬ ನಾಯಕನು ತನ್ನ ಪ್ರೇಮವು ಗೆದ್ದಿರುವುದಕ್ಕೆ ಸಂತೋಷಪಡುತ್ತಾ ತನ್ನ ಪ್ರಿಯತಮೆಯ ಬಳಿ ಈ ವಿಷಯವನ್ನು ಹೇಳುತ್ತಿದ್ದಾನೆ. ಪ್ರೇಮವು ಗೆಲ್ಲುವುದು ಅಷ್ಟು ಸುಲಭವಲ್ಲ. ಹಿಂದಿನ ಕಾಲದಲ್ಲಿ ಪ್ರೇಮಸಂದೇಶವನ್ನು ಕಳಿಸಲು ದೂತಿಯ ಸಹಾಯ ಪಡೆಯುತ್ತಿದ್ದರು.‌ ಆ ದೂತಿಯೂ ಯಾರಿಗೂ ತಿಳಿಯದಂತೆ ಹೋಗಿ ಪ್ರೇಮಸಂದೇಶವನ್ನು ನಾಯಕಿಯ ಬಳಿ ಅಥವಾ ನಾಯಕನ ಬಳಿ ಹೇಳುವುದು ಒಂದು ಕಷ್ಟಕರ ಕೆಲಸವೇ ಆಗಿತ್ತು! ಆದರೂ ಪ್ರೇಮವನ್ನು ನಾಯಕಿ ಅಥವಾ ನಾಯಕ ಒಪ್ಪುತ್ತಿದ್ದರೆಂದು ಹೇಳಲಾಗುತ್ತಿರಲಿಲ್ಲ. ಹಾಗಾಗಿ ದೂತಿಯು ಚೆನ್ನಾಗಿ ಮಾತನಾಡಬೇಕಾಗುತ್ತಿತ್ತು! ಭವಭೂತಿಯ ಮಾಲತಿಮಾಧವ ಮೊದಲಾದ ಅನೇಕ ಸಂಸ್ಕೃತ ನಾಟಕಗಳಲ್ಲಿ ಬೌದ್ಧ ಸಂನ್ಯಾಸಿನಿಯರು ದೂತಿಯ ಕೆಲಸ ಮಾಡುತ್ತಿದ್ದುದನ್ನು ನೋಡಬಹುದು! ನಾಯಕನ ಸ್ನೇಹಿತನೂ ನಾಯಕಿಯ ಸಖಿಯೂ ಅನೇಕ ಬಾರಿ ಸಹಾಯ ಮಾಡುತ್ತಿದ್ದರು. ಕೆಲವೊಮ್ಮೆ ನಾಯಕನ ಚಿತ್ರಪಟವನ್ನು ನಾಯಕಿಗೆ ತಲುಪುವಂತೆ ಮಾಡುವುದೋ ಇಲ್ಲವೇ ನಾಯಕಿಯ ಚಿತ್ರಪಟವನ್ನು ನಾಯಕನಿಗೆ ತಲುಪುವಂತೆ ಮಾಡುವುದೋ, ಹೂಮಾಲೆಯಲ್ಲಿ ಪತ್ರ ತಲುಪುವಂತೆ ಮಾಡುವುದೋ, ಹೀಗೆ ಅನೇಕ ಉಪಾಯಗಳನ್ನು ಮಾಡಬೇಕಿತ್ತು. ಆದರೆ ಇಲ್ಲಿ ಈ ಯಾವುವೂ ಇಲ್ಲದೆ ಪ್ರೇಮವು ಒಲಿದಿರುವುದು ನಾಯಕನಿಗೆ ಸಂತೋಷ ತಂದಿದೆ! ಅದು ಸಹಜವಾಗಿಯೇ ಉಂಟಾಗಿದೆ! ಹಾಗಾಗಿ ಅದೊಂದು ಸಾಹಸಭವನ ಎನ್ನುತ್ತಿದ್ದಾನೆ! ಅವಳ ನೋಟದಿಂದ ಅದು ನಿತ್ಯವೂ ವರ್ಧಿಸುತ್ತಿದೆ! ಹಾಗಾಗಿ ಅದು ಎಂದಿದ್ದರೂ ಗೆಲ್ಲುತ್ತದೆ ಎಂದು ತನಗೆ ತಾನೇ ಆಶ್ವಾಸನೆ ಕೊಟ್ಟುಕೊಳ್ಳುತ್ತಾ ಅವಳಿಗೂ ಆಶ್ವಾಸನೆ ಕೊಡುತ್ತಿದ್ದಾನೆ.

ಗುರುವಾರ, ಜುಲೈ 23, 2026

ಸುಂದರೀಶತಕ -೬೭

ಸಂಸ್ಕೃತ ಮೂಲ 

ತವ ರಥ್ಯಾ ರಾಜಗೃಹಂ ಪ್ರೇಮಧನಂ ಕಿಂ ಚ ಪರಿಜನೋ ಬಂಧು: /
ಸಖ್ಯೋ ಮೂರ್ತಾ: ಪ್ರಾಣಾ: ಸುಂದರಿ ಕಿಮತೋ ಮಮಾಕಾಂಕ್ಷ್ಯಮ್ //

ಕನ್ನಡ ಅನುವಾದ 

    ' ನಿನ್ನ ಮಾರ್ಗವೇ ನನಗೆ ರಾಜಗೃಹ! ನಿನ್ನ ಪ್ರೇಮವೇ ನನಗೆ ಧನ! ನಿನ್ನ ಪರಿಜನರೇ ನನಗೆ ಬಂಧುಗಳು! ನಿನ್ನ ಸಖಿಯರೇ ನನ್ನ ಮೂರ್ತರೂಪದ ಪ್ರಾಣಗಳು! ಹೇ ಸುಂದರಿ! ನನಗೆ ಇನ್ನಾವ ಆಕಾಂಕ್ಷೆ ಬೇಕು?' 
    ಇದು ಒಬ್ಬ ಪತಿಯು ತನ್ನ ನೂತನ ಪತ್ನಿಗೆ ಏಕಾಂತದಲ್ಲಿ ಹೇಳುತ್ತಿರುವಂತಿದೆ! ಹೊಸದಾಗಿ ಮದುವೆಯಾದ ಹೆಣ್ಣಿಗೆ ಪತಿಯು ಹೀಗೆ ಆಶ್ವಾಸನೆ ಕೊಟ್ಟು ಅವಳನ್ನು ಒಲಿಸಿಕೊಳ್ಳಬೇಕು. ಹೆಣ್ಣಿಗೆ ಗಂಡು ಸಂಪೂರ್ಣ ಅವಳ ಕಡೆಯಿದ್ದಾನೆ ಎಂದು ಆಶ್ವಾಸನೆ ಸಿಕ್ಕಿದರೆ ಅವಳು ಅವನನ್ನು ಚೆನ್ನಾಗಿ ಪ್ರೀತಿಸಿ ಅವನ ಸೇವೆ ಮಾಡುತ್ತಾಳೆ. ಅವನೂ ಕೇವಲ ಔಪಚಾರಿಕವಾಗಿಯಲ್ಲದೆ ನಿಜವಾಗಿಯೂ ಅವಳನ್ನು ಗಮನಿಸಿಕೊಳ್ಳಬೇಕು. ಅವಳ ಆಸಕ್ತಿಗಳನ್ನು ಅವನು ತನ್ನವೆಂಬಂತೆ ಇಷ್ಟಪಡಬೇಕು. ಅಂತೆಯೇ ಇಲ್ಲಿ ಪತಿಯು ತನ್ನ ಪತ್ನಿಗೆ ಅವಳ ಮಾರ್ಗವೇ ತನಗೆ ರಾಜಗೃಹದಂತೆ, ಅವಳ ಪ್ರೇಮವೇ ತನಗೆ ಧನ, ಅವಳ ಪರಿಜನರೇ ತನಗೆ ಬಂಧುಗಳು, ಅವಳ ಸಖಿಯರೇ ತನ್ನ ಪ್ರಾಣಗಳು, ಅವಳನ್ನು ಬಿಟ್ಟು ತನಗೆ ಇನ್ನಾವ ಆಕಾಂಕ್ಷೆ ಬೇಕು ಎನ್ನುತ್ತಿದ್ದಾನೆ. ಹೀಗೆ ಅವನಿಗೆ ಅವಳೇ ಎಲ್ಲವೂ ಆಗಿದ್ದಾಳೆ. ಅವಳ ಪ್ರೇಮದಲ್ಲಿ ಅವನು ಪೂರ್ತಿ ಒಂದಾಗಿದ್ದಾನೆ.‌ ಅವನಿಗೆ ಅವಳನ್ನು ಬಿಟ್ಟು ಇನ್ನೇನೂ ಆಸೆಯಿಲ್ಲ. ಇಂಥ ಪತಿ ಸಿಗುವುದು ಕಷ್ಪವಲ್ಲವೇ? ಇಂಥ ಪತಿಯಿದ್ದರೆ ಅವನ ಪತ್ನಿಯೂ ಅವನನ್ನು ಹಾಗೆಯೇ ಪ್ರೀತಿಸುತ್ತಾಳೆ. ಇದೊಂದು ಮಾದರಿ ಎನ್ನಬಹುದಾದರೂ, ಯಾವಾಗಲೂ ಹಾಗೆ ಇರುವುದಿಲ್ಲ ಎನ್ನಬಹುದಾದರೂ ಕವಿಯು ಅಂಥ ಒಂದು ಮಾದರಿಯನ್ನು ಇಲ್ಲಿ ತೋರಿಸಿದ್ದಾನೆ.‌

ಮಂಗಳವಾರ, ಜುಲೈ 21, 2026

ಸುಂದರೀಶತಕ -೬೬

ಅಯಿ ಪಥಿಕ ರಕ್ಷ ಜೀವಂ ಪರಿಹರ ದೂರೇಣ ಕೇತಕೀಕುಸುಮಮ್ /
ಇಹ ವಸತಿ ಪುಷ್ಪಧನ್ವಾ ಸ್ಮರಹರನಯನಾನ್ನಿರಾತಂಕ: //

ಕನ್ನಡ ಅನುವಾದ 

    ಒಬ್ಬ ಪ್ರಯಾಣಿಕ ಇನ್ನೊಬ್ಬ ಪ್ರಯಾಣಿಕನಿಗೆ ಹೇಳುತ್ತಾನೆ, ' ಎಲೈ ಪ್ರಯಾಣಿಕ! ನಿನ್ನ ಜೀವವನ್ನು ರಕ್ಷಿಸಿಕೋ! ಈ ಕೇತಕೀ ಪುಷ್ಪವನ್ನು ದೂರದಿಂದಲೇ ಪರಿತ್ಯಜಿಸು! ಏಕೆಂದರೆ ಇದರಲ್ಲಿ ಶಿವನಿಂದ ಭಸ್ಮನಾದ ಕಾಮದೇವನು ಅವನ ನಯನದ ಭಯದಿಂದ ದೂರವಾಗಿ ನಿರಾತಂಕದಿಂದ ನೆಲೆಸಿದ್ದಾನೆ!' 
    ಇಲ್ಲಿ ಕವಿಯು ಬಹಳ ಸೊಗಸಾದ ಕಲ್ಪನೆಯನ್ನು ಮಾಡಿದ್ದಾನೆ. ಕೇತಕಿ ಪುಷ್ಪ ಅಥವಾ ಕೇದಗೆ ಅಥವಾ ತಾಳೆ ಹೂವು ಬಹಳ ಸುಗಂಧಿತವಾದ, ಸಮ್ಮೋಹನಗೊಳಿಸುವಂಥ ಒಂದು ಹೂವು. ಒಬ್ಬ ಪ್ರಯಾಣಿಕ ಇನ್ನೊಬ್ಬ ಪ್ರಯಾಣಿಕನಿಗೆ, ಇದರಲ್ಲಿ ಕಾಮದೇವನಿದ್ದಾನೆ, ಹಾಗಾಗಿ ಈ ಹೂವನ್ನು ದೂರದಿಂದಲೇ ಪರಿತ್ಯಜಿಸಿ ಜೀವವನ್ನು ರಕ್ಷಿಸಿಕೋ ಎಂದು ಸ್ವಾರಸ್ಯಕರವಾಗಿ ಹೇಳುತ್ತಿದ್ದಾನೆ. ಆ ಹೂವಿನಲ್ಲಿರುವ ಕಾಮದೇವನ ಸಂಪರ್ಕಕ್ಕೆ ಬಂದರೆ ಅವನು ತನ್ನ ಪುಷ್ಪ ಬಾಣಗಳನ್ನು ಬಿಟ್ಟು ನಿನ್ನನ್ನು ಪ್ರೇಮದಲ್ಲಿ ಬೀಳಿಸುತ್ತಾನೆ ಜೋಪಾನ ಎಂಬ ಧಾಟಿಯಲ್ಲಿ ಹೇಳುತ್ತಿದ್ದಾನೆ. ಕಾಮದೇವನು ಈ ಹೂವಿನಲ್ಲಿ ಏಕಿದ್ದಾನೆ ಎಂದರೆ, ತನ್ನನ್ನು ಮೂರನೆಯ ಕಣ್ಣಿನಿಂದ ಭಸ್ಮ ಮಾಡಿದ ಶಿವನಿಂದ, ಅವನ ಭಯದಿಂದ ದೂರವಾಗಿ ಇಲ್ಲಿ ನಿರಾತಂಕವಾಗಿ ಇದ್ದಾನೆ ಎಂದು ಹೇಳುತ್ತಿದ್ದಾನೆ! ಇದೇಕೆ ಎಂದು ಅರ್ಥ ಮಾಡಿಕೊಳ್ಳಲು ಎರಡು ಪೌರಾಣಿಕ ಪ್ರಸಂಗಗಳನ್ನು ತಿಳಿದಿರಬೇಕು. 
     ಒಂದು, ದೇವತೆಗಳು ತಾರಕಾಸುರನನ್ನು ಸಂಹರಿಸಲು ಶಿವನಿಂದ ಪುತ್ರಜನನವಾಗಲೆಂದೂ ಅದಕ್ಕೆ ಅವನಿಗೆ ಪಾರ್ವತಿಯ ಮೇಲೆ ಮನಸ್ಸಾಗಲೆಂದೂ ಅವನ ತಪಸ್ಸನ್ನು ಕೆಡಿಸಲು ಮನ್ಮಥನನ್ನು ಕಳಿಸಿದ ಕಥೆ. ಮನ್ಮಥನು ಶಿವನ ಮೇಲೆ ಬಾಣ ಬಿಡಲು ಹೊರಟಾಗ, ಮನಸ್ಸು ಕಲಕಿದಂತಾಗಿ ಶಿವನು ಕೋಪದಿಂದ ತನ್ನ ಮೂರನೆಯ ಕಣ್ಣಿನಿಂದ ಅವನನ್ನು ಭಸ್ಮ ಮಾಡಿದ. ಹೀಗಾಗಿ ಕಾಮದೇವನಿಗೆ ಶಿವನೆಂದರೆ ಭಯ. ಆದರೆ ಅವನು ಶಿವನಿಂದ ತಪ್ಪಿಸಿಕೊಳ್ಳುವುದು ಹೇಗೆ?  ಶಿವನು ಬರಲಾಗದ, ಅಥವಾ ಬರಲು ಇಷ್ಟಪಡದ ಸ್ಥಳಕ್ಕೆ ಹೋಗುವುದರ ಮೂಲಕ. ಅದು ಕೇತಕಿ ಪುಷ್ಪ. ಶಿವನಿಗೆ ಇಷ್ಟವಿಲ್ಲದ ಪುಷ್ಪ. ಅದೇಕೆ? ಅದಕ್ಕೆ ಇನ್ನೊಂದು ಪೌರಾಣಿಕ ಪ್ರಸಂಗವನ್ನು ನೋಡಬೇಕು. 
      ಅದರಂತೆ, ಒಮ್ಮೆ, ಬ್ರಹ್ಮನಿಗೂ ವಿಷ್ಣುವಿಗೂ ಯಾರು ಹೆಚ್ಚೆಂದು ವಾದವುಂಟಾಗಲು, ಅವರ ಮಧ್ಯೆ ಒಂದು ದೊಡ್ಡ ಜ್ಯೋತಿರ್ಲಿಂಗ ಉದ್ಭವವಾಯಿತು! ಅದರ ಆದಿಯನ್ನು ಪತ್ತೆಮಾಡಲು ಬ್ರಹ್ಮನು ಹಂಸದ ರೂಪದಲ್ಲಿ ಮೇಲೆ ಹಾರಿಹೋಗಲು, ಅದರ ಅಂತ್ಯವನ್ನು ಪತ್ತೆಮಾಡಲು ವಿಷ್ಣುವು ವರಾಹ ರೂಪದಲ್ಲಿ ಭೂಮಿಯನ್ನು ಅಗೆಯುತ್ತಾ ಹೋದನು. ಇಬ್ಬರಿಗೂ ಆದಿ, ಅಂತ್ಯಗಳು ಪತ್ತೆಯಾಗಲಿಲ್ಲ! ಆಗ ಮೇಲಿನಿಂದ ಒಂದು ಕೇತಕಿ ಪುಷ್ಪ ಬೀಳುತ್ತಿರಲು, ಅದನ್ನು ನೋಡಿದ ಬ್ರಹ್ಮನು ತಾನು ಜ್ಯೋತಿರ್ಲಿಂಗದ ಆದಿಯನ್ನು ನೋಡಿರುವುದಾಗಿ ಅದಕ್ಕೆ ಸಾಕ್ಷಿ ಹೇಳುವಂತೆ ಕೇಳಿದನು. ಅದಕ್ಕೆ ಕೇತಕಿ ಪುಷ್ಪ ಒಪ್ಪಿತು. ವಿಷ್ಣುವು ಅಂತ್ಯವನ್ನು ಕಾಣಲಾರದೆ ಮೇಲೆ ಬಂದು ಬ್ರಹ್ಮನ ಬಳಿ ಸತ್ಯವನ್ನು ಒಪ್ಪಿಕೊಂಡನು. ಆಗ ಬ್ರಹ್ಮನು ತಾನು ಆದಿಯನ್ನು ನೋಡಿರುವುದಾಗಿ ಹೇಳಿ ಅದಕ್ಕೆ ಕೇತಕಿ ಪುಷ್ಪವೇ ಸಾಕ್ಷಿ ಎಂದನು. ಕೇತಕಿ ಪುಷ್ಪವೂ ಸುಳ್ಳು ಸಾಕ್ಷಿ ಹೇಳಿತು. ಆಗ ವಿಷ್ಣುವು ಬ್ರಹ್ಮನೇ ಹೆಚ್ಚೆಂದು ಒಪ್ಪಿಕೊಂಡನು. ಆಗ ಶಿವನು ಜ್ಯೋತಿರ್ಲಿಂಗದ ಸ್ಥಾನದಲ್ಲಿ ಪ್ರತ್ಯಕ್ಷನಾಗಿ ಬ್ರಹ್ಮನ ವಿಷಯದಲ್ಲಿ ಅವನು ಸುಳ್ಳು ಹೇಳಿದ್ದಕ್ಕೆ ಕ್ರುದ್ಧನಾಗಿ ಅವನಿಗೆ ಪೂಜೆಯಿರದಂತೆ ಶಪಿಸಿದನು! ವಿಷ್ಣುವು ಸತ್ಯ ಹೇಳಿದ್ದಕ್ಕೆ ಅವನಿಗೆ ತನ್ನ ಸಮಾನತೆ ಕೊಟ್ಟನು. ಸುಳ್ಳು ಸಾಕ್ಷಿ ಹೇಳಿದ್ದಕ್ಕೆ ಕೇತಕಿ ಪುಷ್ಪಕ್ಕೆ ತನ್ನ ಪೂಜೆಗೆ ಅನರ್ಹವಾಗುವಂತೆ ಶಪಿಸಿದನು! ಹೀಗೆ ಶಿವನಿಗೆ ಕೇತಕಿ ಪುಷ್ಪ ಇಷ್ಟವಾಗುವುದಿಲ್ಲ.‌ ಹಾಗಾಗಿ ಅವನು ಕೇತಕಿ ಪುಷ್ಪದ ಬಳಿ ಬರುವುದಿಲ್ಲವೆಂದು ಕಾಮದೇವನು ಅದರಲ್ಲಿ ನಿಶ್ಚಿಂತೆಯಿಂದ ನೆಲೆಸಿದ್ದಾನೆ ಎಂದು ಕವಿಯು ಇಲ್ಲಿ ಸುಂದರವಾದ ಉತ್ಪ್ರೇಕ್ಷಿತ ಕಲ್ಪನೆ ಮಾಡಿದ್ದಾನೆ. ಹೀಗೆ ಅದರಲ್ಲಿ ಕಾಮದೇವನು ಇರುವುದರಿಂದ ಅದರ ಬಳಿ ಹೋಗಬೇಡ ಎಂದು ಒಬ್ಬ ಪ್ರಯಾಣಿಕ ಇನ್ನೊಬ್ಬ ಪ್ರಯಾಣಿಕನಿಗೆ ಹೇಳುತ್ತಿರುವಂತೆ ಸೊಗಸಾದ ಕಲ್ಪನೆ ಮಾಡಿದ್ದಾನೆ. 

ಸೋಮವಾರ, ಜುಲೈ 20, 2026

ಶ್ರೀ ಶಂಕರಾಚಾರ್ಯರ ನಿಂದನೆ ಏಕೆ?

ಇತ್ತೀಚೆಗೆ ಉಡುಪಿಯ ರಾಜಾಂಗಣದಲ್ಲಿ ಹರಿಕಥೆ ಮಾಡುವಾಗ ಶ್ರೀ ಶಂಕರಾಚಾರ್ಯರ ಬಗ್ಗೆ ನಿಂದನೆ ಮಾಡಲಾದ ವಿಷಯ ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ವಿಷಯವಾಗಿ ಶಿರೂರು ಮಠದವರು ಕ್ಷಮಾಪಣೆ ಕೇಳಿದರೂ ಕೆಲವು ಮಾಧ್ವರು ಅದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಈ ರೀತಿ ಮಾಧ್ವರಲ್ಲಿ ಶಂಕರಾಚಾರ್ಯರನ್ನು ಮಹಾಭಾರತದಲ್ಲಿ ಭೀಮನಿಂದ ಹತನಾದ ಮಣಿಮಂತ ದೈತ್ಯನ ಪುನರ್ಜನ್ಮವೆಂದು ಹೇಳುವುದು, ಆ ಹಿಂದಿನ ಕೋಪಕ್ಕೆ ಅವರು ಅಸಚ್ಛಾಸ್ತ್ರಗಳನ್ನು ರಚಿಸಿದರೆಂದೂ ಅದನ್ನು ವಾಯುದೇವನ ಅವತಾರವಾದ ಮಧ್ವಾಚಾರ್ಯರು ಖಂಡಿಸಿದರೆಂದೂ ಹೇಳುತ್ತಾರೆಂದು ಕೇಳಿದ್ದೆ. ಆದರೆ ಈಗ ನಿಜಕ್ಕೂ ಇದು ಮಾಧ್ವರಲ್ಲಿ ಪ್ರಚಲಿತವಿದೆ ಹಾಗೂ ಇದಕ್ಕೆ ಸಮರ್ಥನೆ ಕೂಡ ಮಾಡಿಕೊಳ್ಳುತ್ತಾರೆ ಎಂದು ಗೊತ್ತಾಗುತ್ತಿದೆ. ನಿಜಕ್ಕೂ ಇದು ಮಾಧ್ವರ ವಿಷಯದಲ್ಲಿ ನಗೆಪಾಟಲಿನ ವಿಷಯವೆಂದು ಹೇಳಬೇಕಾಗುತ್ತದೆ. ಏಕೆಂದರೆ, ಒಬ್ಬ ಶ್ರೇಷ್ಠ ಗುರುವನ್ನು ವೈಯಕ್ತಿಕ ಮಟ್ಟದಲ್ಲಿ ನಿಂದಿಸುವುದು ಅವರಿಗೆ ಶೋಭೆ ತರುವಂಥದ್ದಲ್ಲ.
     ಹೀಗೆ ಮಧ್ವಾಚಾರ್ಯರು ಹೇಳಿರುವರಾ? ಅವರ ಮಹಾಭಾರತ ತಾತ್ಪರ್ಯ ನಿರ್ಣಯವೆಂಬ ಗ್ರಂಥದಲ್ಲಿ ಮಣಿಮಂತ ದೈತ್ಯನು ಭೀಮನಿಂದ ಹತನಾದ ಬಳಿಕ ಪುನಃ ಕಲಿಯುಗದಲ್ಲಿ ಹುಟ್ಟಿ ಜಗನ್ಮಿಥ್ಯಾವಾದ ಹರಡುವನೆಂದು ಹೇಳಿದ್ದಾರೆ ನಿಜ. ಆದರೆ ಅದು ಶಂಕರಾಚಾರ್ಯರು ಎಂದು ಹೇಳಿಲ್ಲ. ಅಂತೆಯೇ ಇದಕ್ಕೆ ಮಹಾಭಾರತದಲ್ಲಿ ಆಧಾರವಿಲ್ಲ. ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ ಮೂಲ ಮಹಾಭಾರತದಲ್ಲಿ ಇಲ್ಲದ ಇಂಥ ಇನ್ನೂ ಕೆಲವು ಅಭಿಪ್ರಾಯಗಳೂ ಕಥೆಗಳೂ ಇವೆ. ಇಂಥ ಕಾಲ್ಪನಿಕ ಕಥೆಗಳು ತಪ್ಪಲ್ಲ ಎಂದರೂ ಇತರರಿಗೆ ತೊಂದರೆಯಾಗುವ ಕಥೆಗಳನ್ನು ಕೈಬಿಡಬೇಕು. ತೊಂದರೆಯಿಲ್ಲದ ಪಕ್ಷದಲ್ಲಿ ಮೂಲದಲ್ಲಿಲ್ಲದ ಕಥೆಗಳನ್ನು ಮೂಲದ್ದೇ ಎಂದು ಹೇಳಬಾರದು ಹಾಗೂ ಗಂಭೀರವಾಗಿ ತೆಗೆದುಕೊಳ್ಳಬಾರದು. 
     ಯಾವುದಾದರೂ ಪುರಾಣ ಅಥವಾ ಪ್ರಮಾಣ ಗ್ರಂಥದಲ್ಲಿ ಈ ವಿಷಯ ಇದೆಯೇ? ಖಂಡಿತ ಇಲ್ಲ!
    ಹಾಗಾದರೆ ಈ ವಿಚಿತ್ರ,ಅಸಂಬದ್ಧ, ಅಶ್ಲೀಲ ಕಥೆ ಎಲ್ಲಿಂದ ಬಂತು?
    ನಾರಾಯಣ ಪಂಡಿತರೆಂಬುವರು ರಚಿಸಿರುವ ಮಣಿಮಂಜರಿ ಎಂಬ ಗ್ರಂಥದಲ್ಲಿ ಈ ಕಥೆಯಿದೆ. ಇನ್ನೂ ಸಾಕಷ್ಟು ಅಶ್ಲೀಲ, ಅವಾಚ್ಯ ವಿಷಯಗಳಿವೆ. ಅವರು ಮಧ್ವಾಚಾರ್ಯರ ಶಿಷ್ಯರಾದ್ದರಿಂದ ಅವರ ಈ ಕಥೆ ಮಾನ್ಯ ಎಂದು ಮಾಧ್ವರ ಒಂದು ನಂಬಿಕೆಯಾಗಿದೆ. ಆದರೆ ಈ ಕಥೆಗೆ ಆಧಾರ? ಏನೇನೊ ಇಲ್ಲ! ಇದೊಂದು ಕಪೋಲಕಲ್ಪಿತ ಸುಳ್ಳು ಕಥೆ! ನಾರಾಯಣ ಪಂಡಿತರು ಎಷ್ಟೇ ವಿದ್ವಾಂಸರಾದರೂ ಅವರೇನು ವೇದವ್ಯಾಸರಲ್ಲ! ನೇರವಾಗಿ ಮಾಧ್ವರ ಗುರುಗಳಲ್ಲ! ಭಗವಂತನಂತೂ ಅಲ್ಲವೇ ಅಲ್ಲ! ಮತ್ತೇಕೆ ಅವರ ಈ ಸುಳ್ಳು ಕಥೆಗೆ ಮಾನ್ಯತೆ ಕೊಡಬೇಕೋ ಗೊತ್ತಾಗುವುದಿಲ್ಲ! ಇದರಿಂದ ಶಂಕರಾಚಾರ್ಯರ ನಿಂದನೆ ಮಾಡಿದರೆ ಅದರಿಂದ ಸ್ಮಾರ್ತರಿಗೆ ತೊಂದರೆಯಾಗುವುದಕ್ಕಿಂತ ಮಾಧ್ವರಿಗೇ ಆಗುತ್ತದೆ! ಏಕೆಂದರೆ ಹರಿಧ್ಯಾನ, ನಾಮ ಸಂಕೀರ್ತನೆ, ಪುರಾಣ ಶ್ರವಣಾದಿಗಳನ್ನು ಬಿಟ್ಟು ಇನ್ನೊಬ್ಬ ಶ್ರೇಷ್ಠ ಸಂತರನ್ನು ನಿಂದಿಸಿದರೆ ಅವರ ಸಾಧನೆಗೇ ಅಡ್ಡಿಯಾಗುವುದಲ್ಲವೇ? ಅದೂ ಯಾವುದೇ ಆಧಾರವಿಲ್ಲದೇ! 
    ಎಲ್ಲಿಯ ಮಣಿಮಂತ, ಎಲ್ಲಿಯ ಶಂಕರಾಚಾರ್ಯರು? ಕಾಡಿನಲ್ಲಿ ಭೀಮನಿಂದ ಹಚನಾಗುವ ಮಣಿಮಂತನದು ಮಹಾಭಾರತದ ಒಂದು ಸಣ್ಣ ಘಟನೆ! ಒಬ್ಬ ರಾಕ್ಷಸನು ವೇದ,ಶಾಸ್ತ್ರಾದಿಗಳಲ್ಲಿ ದೊಡ್ಡ ವಿದ್ವಾಂಸನಾಗಿ, ಅದೂ ದ್ವಾಪರ ಯುಗ ಮುಗಿದು ಯಾವುದೋ ಕಾಲದ ಬಳಿಕ ಹುಟ್ಟಿ, ಅನಂತರ ನೂರು ವರ್ಷಗಳ ನಂತರ ಮಧ್ವರು ಅವನ ವಾದವನ್ನು ಖಂಡಿಸಲು ಅವತರಿಸುವುದು ಎಂಥ ಹಾಸ್ಯಾಸ್ಪದ ತಿರುಳಿಲ್ಲದ ಕಥೆ ಎಂದು ಯಾರಾದರೂ ಹೇಳಬಹುದು! ಹೀಗೆ ಇನ್ನಾರೋ ಇನ್ನೇನೋ ಹೇಳಿಬಿಟ್ಟರೆ ಅದನ್ನೂ ನಂಬಬಹುದೇ? ಇಂಥವನ್ನು ಶತಾವಧಾನಿ ಗಣೇಶ್ ಅವರು Religious Pornography , ಮತೀಯ ಅಶ್ಲೀಲತೆ ಎಂದು ಕಟುವಾಗಿ ಟೀಕಿಸುತ್ತಾರೆ.‌ ಹೇಮಚಂದ್ರನೆಂಬ ದೊಡ್ಡ ಜೈನ ಸಂಸ್ಕೃತ ಕವಿ ತನ್ನ ಪರಿಶಿಷ್ಟ ಪರ್ವವೆಂಬ ಗ್ರಂಥದಲ್ಲಿ ಇಂಥದ್ದೇ ಅಸಂಬದ್ಧ ಕಥೆಯನ್ನು ಚಾಣಕ್ಯನ ವಿಷಯದಲ್ಲಿ ಬರೆದಿದ್ದಾನೆ.‌ ಆ ಕಥೆಯ ಪ್ರಕಾರ, ಚಂದ್ರಗುಪ್ತ ಮೌರ್ಯ ನು ಒಮ್ಮೆ ಬಹಳ ಹಸಿದಿದ್ದಾಗ ಚಾಣಕ್ಯನು ಚೆನ್ನಾಗಿ ಪಾಯಸದೂಟ ಮಾಡಿ ಬರುತ್ತಿದ್ದ ಒಬ್ಬ ಬ್ರಾಹ್ಮಣನ ಹೊಟ್ಟೆಯನ್ನು ಸೀಳಿ ಅದರಲ್ಲಿದ್ದ ಪಾಯಸವನ್ನು ತೆಗೆದು ಚಂದ್ರಗುಪ್ತನಿಗೆ ಕೊಟ್ಟನಂತೆ! ಈ ಕಥೆಗೆ ಏನು ಹೇಳುವುದು? ಹೇಮಚಂದ್ರನ ಪರಿಶಿಷ್ಟ ಪರ್ವ ತುಂಬಾ ಸೊಗಸಾದ ಕಥಾಗ್ರಂಥವೇ ಹೌದು! ಆದರೆ ಅದರಲ್ಲಿ ಇಂಥ ಕಥೆಗಳೂ ಇವೆ! ಇಂಥವನ್ನೆಲ್ಲಾ ಸತ್ಯ, ಐತಿಹಾಸಿಕ ಎಂದು ನಂಬಿದರೆ ಹೇಗೆ? ಹೀಗೆಯೇ ಶಂಕರವಿಜಯಗಳು, ಮಧ್ವವಿಜಯ, ಇವೆಲ್ಲವುಗಳಲ್ಲಿರುವುದನ್ನು ಸಂಪೂರ್ಣ ಐತಿಹಾಸಿಕ, ಸತ್ಯ ಎಂದು ಹೇಳಲಾಗುವುದಿಲ್ಲ. ಶಂಕರಾಚಾರ್ಯರು ಒಬ್ಬ ರಾಜನ ಮೂಲಕ ಬೌದ್ಧ ಸ್ತೂಪಗಳನ್ನು ಕೆಡವಿಸಿದರು ಎಂದೂ ಒಂದು ಕಥೆಯಿದೆ. ಇದಕ್ಕೆ ಐತಿಹಾಸಿಕ ಆಧಾರ ಇಲ್ಲ. ಇಂಥ ಅನೇಕ ಕಥೆಗಳಲ್ಲಿ ಸ್ವಾರಸ್ಯಕರವಾದ, ಉಪಯುಕ್ತವಾದ ಕೆಲವನ್ನು ಐತಿಹ್ಯಗಳೆಂದು ತೆಗೆದುಕೊಂಡರೂ ಐತಿಹಾಸಿಕ ಸತ್ಯ ಎಂದು ಹೇಳಲಾಗುವುದಿಲ್ಲ. ಕಲ್ಪಿತ ಕಥೆಗಳು ಪೂರ್ತಿ ತಪ್ಪಲ್ಲ. ಕೆಲವು ಒಳ್ಳೆಯ ಕಥೆಗಳನ್ನು ಮನರಂಜನೆಗೆ, ನೀತಿಬೋಧೆಗೆ ತೆಗೆದುಕೊಳ್ಳಬಹುದು. ಆದರೆ ಅವನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು. ವಿಚಾರಿಸಿ ನೋಡಬೇಕು.‌ ಅತಿಯಾದ ಕುರುಡು ನಂಬಿಕೆ ವಿಚಾರಶಕ್ತಿಯನ್ನು ಮಂಕುಮಾಡುತ್ತದೆ! 
     ಪುರಾಣಗಳಲ್ಲೂ ಅನೇಕ ಕಥೆಗಳನ್ನು ಪ್ರಕ್ಷಿಪ್ತಗಳೆಂದು ವಿದ್ವಾಂಸರು ತೋರಿಸಿದ್ದಾರೆ. ಭವಿಷ್ಯ ಪುರಾಣದಲ್ಲಿ ಈಗಿನ ಕಾಲದ ಅನೇಕ ಮಹನೀಯರು ಪೌರಾಣಿಕ ವ್ಯಕ್ತಿಗಳ ಪುನರ್ಜನ್ಮಗಳೆಂದು ಹೇಳಲಾಗಿದೆ. ಇವನ್ನು ಐತಿಹಾಸಿಕವಾಗಿ, ಗಂಭೀರವಾಗಿ ತೆಗೆದುಕೊಳ್ಳಲಾಗುವುದಿಲ್ಲ. ಶಂಕರಾಚಾರ್ಯರ ಜನನಕ್ಕೆ ಸಂಬಂಧಿಸಿದಂತೆ ಏನಾದರೂ ಪುರಾಣ ವಾಕ್ಯಗಳಿವೆಯೇ ಎಂದರೆ ಇವೆ. ಅವನ್ನೂ ಸ್ವಲ್ಪ ನೋಡೋಣ.

    ಕೂರ್ಮ ಪುರಾಣದಲ್ಲಿ ಶಂಕರಾಚಾರ್ಯರು ಸಾಕ್ಷಾತ್ ಶಿವನ ಅವತಾರವೆಂದು ಹೇಳಿದೆ:

     ಕಲೌ ರುದ್ರೋ ಮಹಾದೇವೋ ಲೋಕಾನಾಮೀಶ್ವರ: ಪರ: /
ತದೇವ ಸಾಧಯೇನ್ನೃಣಾಂ ದೇವತಾನಾಂ ಚ ದೈವತಮ್ //
ಕರಿಷ್ಯತ್ಯವತಾರಂ ಸ್ವಂ ಶಂಕರೋ ನೀಲಲೋಹಿತ: /
ಶ್ರೌತಸ್ಮಾರ್ತಪ್ರತಿಷ್ಠಾರ್ಥೇ ಭಕ್ತಾನಾಂ ಹಿತಕಾಮ್ಯಯಾ //
ಉಪದೇಕ್ಷ್ಯತಿ ತಜ್ಜ್ಞಾನಂ ಶಿಷ್ಯಾಣಾಂ ಬ್ರಹ್ಮಸಮ್ಮಿತಂ /
ಸರ್ವವೇದಾಂತಸಾರಂ ಹಿ ಧರ್ಮಾನ್ ವೇದಾಂತದರ್ಶನಾತ್ //
ಯೇ ತಂ ಪ್ರೀತ್ಯಾ ನಿಷೇವಂತೇ ಯೇನಕೇನೋಪಚಾರತ: /
ವಿಜಿತ್ಯ ಕಲಿಜಾನ್ ದೋಷಾನ್ ಯಾನ್ತಿ ತೇ ಪರಮಂ ಪದಮ್ //
    ' ಕಲಿಯುಗದಲ್ಲಿ ರುದ್ರ ಮಹಾದೇವನು ಲೋಕಗಳ ಈಶ್ವರನೂ ಪರದೈವವೂ ದೇವತೆಗಳ ದೈವವೂ ಆಗಿರುವುದರಿಂದ ಜನರು ಅವನನ್ನು ಒಲಿಸಿಕೊಳ್ಳಬೇಕು. ನೀಲಲೋಹಿತನಾದ ಅವನು ಭಕ್ತರ ಹಿತಕಾಮನೆಗಾಗಿ ಶ್ರೌತ, ಸ್ಮಾರ್ತ ವಿಚಾರಗಳನ್ನು ಪ್ರತಿಷ್ಠಾಪಿಸಲು ತಾನೇ ಅವತಾರವೆತ್ತುತ್ತಾನೆ. ಅವನು ತನ್ನ ಶಿಷ್ಯರಿಗೆ ವೇದಾಂತದರ್ಶನದಿಂದ ಉದ್ಧರಿಸಿದ ಸರ್ವವೇದಾಂತಸಾರವಾದ ಧರ್ಮಗಳನ್ನು ಉಪದೇಶಿಸುತ್ತಾನೆ. ಅವನನ್ನು ಯಾರು ಯಾವುದಾದರೂ ಪ್ರಕಾರದ ಉಪಚಾರಗಳಿಂದ ಸೇವಿಸುವರೋ ಅವರು ಕಲಿಯುಗದ ದೋಷಗಳನ್ನು ಜಯಿಸಿ ಪರಮಪದವನ್ನು ಪಡೆಯುತ್ತಾರೆ.' 

    ಹಾಗೆಯೇ ಲಿಂಗಪುರಾಣದಲ್ಲೂ ಹೀಗೆ ಹೇಳಿದೆ -

  ನಿಂದಂತಿ ವೇದವಿದ್ಯಾಂ ಚ ದ್ವಿಜಾ: ಕರ್ಮಾಣಿ ವೈ ಕಲೌ /
  ಕಲೌ ರುದ್ರೋ ಮಹಾದೇವ: ಶಂಕರೋ ನೀಲಲೋಹಿತ: /
   ಪ್ರಕಾಶತೇ ಪ್ರತಿಷ್ಠಾರ್ಥಂ ಧರ್ಮಸ್ಯ ವಿಕೃತಾಕೃತೇ//

' ಕಲಿಯುಗದಲ್ಲಿ ದ್ವಿಜರು ವೇದವಿದ್ಯೆಯನ್ನು ನಿಂದಿಸುತ್ತಾರೆ. ಆಗ ನೀಲಲೋಹಿತನಾದ ರುದ್ರ ಮಹಾದೇವ ಶಂಕರನು ವಿಕೃತವಾದ ಧರ್ಮವನ್ನು ಪುನಃ ಪ್ರತಿಷ್ಠಾಪಿಸಲು ಪ್ರಕಟಗೊಳ್ಳುತ್ತಾನೆ.' 

    ಭವಿಷ್ಯೋತ್ತರ ಪುರಾಣದಲ್ಲಿ ಹೀಗಿದೆ -

  ಕಲ್ಯಾದೌ ದ್ವಿಸಹಸ್ರಾಂತೇ ಲೋಕಾನುಗ್ರಹಕಾಮ್ಯಯಾ /
  ಚತುರ್ಭಿ: ಸಹ ಶಿಷ್ಯೈಸ್ತು ಶಂಕರೋsವತರಿಷ್ಯತಿ //

' ಕಲಿಯುಗವು ಆರಂಭವಾಗಿ ಎರಡು ಸಾವಿರ ವರ್ಷಗಳ ನಂತರ, ಲೋಕಾನುಗ್ರಹ ಮಾಡಲೆಂದು ಶಂಕರನು ತನ್ನ ನಾಲ್ಕು ಶಿಷ್ಯರೊಂದಿಗೆ ಅವತರಿಸುತ್ತಾನೆ.'
   ಇದೇ ರೀತಿ ವಾಯು ಪುರಾಣ ಹಾಗೂ ಸೌರ ಪುರಾಣಗಳಲ್ಲೂ ಹೇಳಿದೆ. 
    ಆದರೆ ಪದ್ಮ ಪುರಾಣದಲ್ಲಿ ಶಂಕರರನ್ನು ಕುರಿತ ನಿಂದನೀಯ ವಾಕ್ಯಗಳಿವೆ. ಆದರೆ ಅದು ಮಣಿಮಂತನ ಪುನರ್ಜನ್ಮವೆಂದಲ್ಲ. ಇಲ್ಲಿ ಶಿವ,ಪಾರ್ವತಿಯರ ಒಂದು ಸಂವಾದದಲ್ಲಿ ಶಿವನು, ತಾನೇ ಹೇಳಿದ ಪಾಶುಪತಾದಿ ಶೈವ ಶಾಸ್ತ್ರಗಳು, ಕಣಾದನ ವೈಶೇಷಿಕ, ಗೌತಮನ ನ್ಯಾಯ, ಕಪಿಲನ ಸಾಂಖ್ಯ, ಜೈಮಿನಿಯ ಪೂರ್ವಮೀಮಾಂಸೆ, ಇವೆಲ್ಲವೂ ತಾಮಸ ಶಾಸ್ತ್ರಗಳೆಂದು ಹೇಳುತ್ತಾ ಕೊನೆಗೆ ವಿಷ್ಣುವಿನ ಬೌದ್ಧ ಮತ್ತು ತನ್ನದೇ ರೂಪದ ಶಂಕರರ ಉಪದೇಶವಾದ ಮಾಯಾವಾದ ಮತ್ತು ಅದ್ವೈತಗಳನ್ನೂ ಸೇರಿಸುತ್ತಾನೆ!
   ದೈತ್ಯಾನಾಂ ನಾಶನಾರ್ಥಾಯ ವಿಷ್ಣುನಾ ಬುದ್ಧರೂಪಿಣಾ/
   ಬೌದ್ಧಶಾಸ್ತ್ರಮಸತ್ಪ್ರೋಕ್ತಂ ನಗ್ನನೀಲಪಟಾದಿಕಮ್//
   ಮಾಯಾವಾದಮಸಚ್ಛಾಸ್ತ್ರಂ ಪ್ರಚ್ಛನ್ನಂ ಬೌದ್ಧಮೇವ ಚ/
    ಮಯೈವ ಕಥಿತಂ ದೇವಿ ಕಲೌ ಬ್ರಾಹ್ಮಣರೂಪಿಣಾ //
    ಕರ್ಮಸ್ವರೂಪತ್ಯಾಜ್ಯತ್ವಮತ್ರ ಚ ಪ್ರತಿಪಾದ್ಯತೇ /
    ಸರ್ವಕರ್ಮಪರಿಭ್ರಂಶಾನ್ನೈಷ್ಕರ್ಮ್ಯಂ ತತ್ರ ಚೋಚ್ಯತೇ//
    ಪರಾತ್ಮ ಜೀವಯೋರೈಕ್ಯಂ ಮಯಾ ತು ಪ್ರತಿಪಾದ್ಯತೇ /
    ಬ್ರಹ್ಮಣೋsಸ್ಯ ಪರಂ ರೂಪಂ ನಿರ್ಗುಣಂ ದರ್ಶಿತಂ ಮಯಾ //
      ' ದೈತ್ಯರ ನಾಶಕ್ಕಾಗಿ ವಿಷ್ಣುವು ಬುದ್ಧನ ರೂಪದಿಂದ ಅಸಚ್ಛಾಸ್ತ್ರವಾದ ಬೌದ್ಧ ಶಾಸ್ತ್ರವನ್ನೂ ನಗ್ನತೆ ( ಪ್ರಾಯಶಃ ಜೈನ), ನೀಲಪಟ ( ತಾಂತ್ರಿಕ ಶಾಸ್ತ್ರ) ಮೊದಲಾದವುಗಳನ್ನು ಬೋಧಿಸುತ್ತಾನೆ. ಹೇ ದೇವಿ! ಸ್ವಯಂ ನಾನೇ ಪ್ರಚ್ಛನ್ನ ಬೌದ್ಧ ಎನಿಸುವ ಮಾಯಾವಾದವೆಂಬ ಅಸಚ್ಛಾಸ್ತ್ರವನ್ನು ಕಲಿಯುಗದಲ್ಲಿ ಒಬ್ಬ ಬ್ರಾಹ್ಮಣನ ರೂಪದಲ್ಲಿ ಬೋಧಿಸುತ್ತೇನೆ. ಕರ್ಮಸ್ವರೂಪವನ್ನು ತ್ಯಜಿಸುವುದನ್ನು ಇಲ್ಲಿ ಪ್ರತಿಪಾದಿಸುತ್ತೇನೆ. ಸರ್ವ ಕರ್ಮಗಳನ್ನೂ ಬಿಡಲಾಗುವ ನೈಷ್ಕರ್ಮ್ಯವನ್ನು ಹೇಳುತ್ತೇನೆ. ಪರಮಾತ್ಮ ಮತ್ತು ಜೀವಾತ್ಮರ ಐಕ್ಯವನ್ನೂ ಹೇಳಿ ಪರಬ್ರಹ್ಮನ ಪರಮ ರೂಪ ನಿರ್ಗುಣವೆಂದೂ ತೋರಿಸುತ್ತೇನೆ.' 
     ಇಲ್ಲಿ ಸ್ವಯಂ ಶಿವನೇ ಶಂಕರರಾಗಿ ಅವತರಿಸಿ ಪ್ರಚ್ಛನ್ನ ಬೌದ್ಧವಾದ ಮಾಯಾವಾದ ಹಾಗೂ ಅದ್ವೈತಗಳನ್ನು ಬೋಧಿಸುತ್ತಾನೆ ಎಂದು ಅವನೇ ಹೇಳಿಕೊಂಡಂತೆ ಚಿತ್ರಿಸಿರುವುದು ವಿಚಿತ್ರವಾಗಿದೆ! ಶಂಕರರೆಂಬ ಹೆಸರಿಲ್ಲದಿದ್ದರೂ ಇದು ಅವರನ್ನೇ ಸೂಚಿಸುತ್ತದೆ ಎಂದು ಗೊತ್ತಾಗುತ್ತದೆ.ಇಲ್ಲಿ ವಿಷ್ಣುವು ಬುದ್ಧನ ರೂಪದಲ್ಲಿ ದೈತ್ಯರನ್ನು ಬೌದ್ಧ ಶಾಸ್ತ್ರ ಉಪದೇಶಿಸಿ ನಾಶಮಾಡಿದ ಎಂದೂ ಹೇಳಿದೆ.‌ ಹೀಗೆ ವಿಷ್ಣುವು ಬೌದ್ಧ ರೂಪದಲ್ಲಿ ತ್ರಿಪುರ ದೈತ್ಯರನ್ನು ವಿಮೋಹಗೊಳಿಸಿ ವೇದಗಳಿಂದ ದೂರ ಮಾಡಿ ದುರ್ಬಲಗೊಳಿಸಿದ ಎಂದು ವಿಷ್ಣು ಪುರಾಣ, ಭಾಗವತ, ಶಿವ ಪುರಾಣ, ಮೊದಲಾದ ಪುರಾಣಗಳಲ್ಲಿ ಹೇಳಲಾಗಿದೆ ಹಾಗೂ ಬಹುತೇಕ ಮಾಧ್ವ ಹರಿದಾಸರ ಹಾಡುಗಳಲ್ಲಿ ಹೀಗೆಯೇ ಇದೆ.‌ ಶೃಂಗೇರಿಯ ವಿದ್ಯಾಶಂಕರ ದೇವಾಲಯದ ದಶಾವತಾರ ಚಿತ್ರಣದಲ್ಲಿ ಬುದ್ಧನನ್ನು ನಗ್ನನಾಗಿ ತೋರಿಸಿರುವುದಲ್ಲದೆ ಶಿವನು ತ್ರಿಪುರಾಸುರರನ್ನು ಕೊಲ್ಲಲು ಹೂಡಿದ ಬಾಣದಲ್ಲೂ ಇರುವಂತೆ ತೋರಿಸಲಾಗಿದೆ. ಹಾಗಾಗಿ ಬುದ್ಧಾವತಾರದ ವಿಷಯದಲ್ಲಿ ಇದು ಬಹಳ ಕಡೆ ಇದೆ. ಆದರೆ ಈ ಪೌರಾಣಿಕ ಬುದ್ಧ ಚಾರಿತ್ರಿಕ ಬುದ್ಧ ಎಂದು ಹೇಳಲಾಗುವುದಿಲ್ಲ. ಆದರೆ ಶಂಕರರ ವಿಷಯದಲ್ಲಿ ಇಲ್ಲಿ ಹೇಳಿರುವಂತೆ ಬೇರೆಲ್ಲೂ ಇಲ್ಲ. ಇಲ್ಲಿನ ಅಭಿಪ್ರಾಯ, ಬೌದ್ಧರಾಗಿದ್ದ ಜನರನ್ನು ಪುನಃ ವೇದಗಳ ಕಡೆಗೆ ತರಲು ಬೌದ್ಧ ಧರ್ಮವನ್ನೇ ಇನ್ನೊಂದು ರೀತಿಯಲ್ಲಿ ಮಾಯಾವಾದ, ಅದ್ವೈತಗಳ ಮೂಲಕ ಶಿವನೇ ಶಂಕರರ ರೂಪದಲ್ಲಿ ಬೋಧಿಸಿದ, ಹಾಗಾಗಿ ಇದು ಪ್ರಚ್ಛನ್ನ ಬೌದ್ಧ ಎಂಬುದು. ಇದನ್ನು ಚೈತನ್ಯ ಸಂಪ್ರದಾಯದ ಇಸ್ಕಾನ್ ಸಂಸ್ಥಾಪನಾಚಾರ್ಯರಾದ ಶ್ರೀಲ ಪ್ರಭುಪಾದರು ತಮ್ಮ ಗ್ರಂಥಗಳಲ್ಲಿ ಉದಾಹರಿಸುತ್ತಾರೆ. ಹಾಗಾಗಿ ಇವರು ಶಂಕರರನ್ನು ನಿಂದಿಸುವುದಿಲ್ಲ. ಆದರೆ ಪೂರ್ಣವಾಗಿ ಒಪ್ಪುವುದಿಲ್ಲ. ಶಂಕರರು ಹಾಗೆ ಮಾಡಲೇಬೇಕಾಗಿತ್ತಂತೆ. ಆದರೆ ಪದ್ಮ ಪುರಾಣದ ವಿವಿಧ ಪಾಠಗಳಿದ್ದು ಎಲ್ಲಾ ಪಾಠಗಳಲ್ಲಿ ಈ ಶ್ಲೋಕಗಳಿಲ್ಲ. ಹಾಗಾಗಿ ಇವು ಪ್ರಕ್ಷಿಪ್ತ ಎಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಆದರೆ ಇಲ್ಲಿ ಶಂಕರರನ್ನು ದೈತ್ಯರೆಂದು ನಿಂದಿಸಿಲ್ಲ. ಶಿವನ ಅವತಾರವೆಂದು ಗೌರವದಿಂದಲೇ ಕಂಡಿದ್ದು ತಾತ್ವಿಕ ವಿರೋಧವಿದೆ ಮತ್ತು ಅದಕ್ಕೆ ಸಮರ್ಥನೆ ಇದೆ.‌
     ಶಂಕರಾಚಾರ್ಯರು ಅದ್ವೈತ ಸಿದ್ಧಾಂತ ಸ್ಥಾಪಕರಾದರೂ ಅವರು ಮಹಾನ್ ವಿಷ್ಣು ಭಕ್ತರೇ ಆಗಿದ್ದರು. ಅವರ ಮನೆದೇವರು ಶ್ರೀಕೃಷ್ಣನೇ! ಅವರ ಭಾಷ್ಯಗಳಲ್ಲೆಲ್ಲಾ ವಿಷ್ಣುವನ್ನೇ ಕೀರ್ತಿಸಿದ್ದಾರೆ. ಭಜ ಗೋವಿಂದಂ ಸ್ತೋತ್ರ ರಚಿಸಿರುವರಲ್ಲದೇ ವಿಷ್ಣುಸಹಸ್ರನಾಮಕ್ಕೆ ಭಾಷ್ಯ ಬರೆದಿದ್ದಾರೆ. ಅವರು ಹೇಳಿದ ಅಹಂ ಬ್ರಹ್ಮಾಸ್ಮಿ ( ನಾನು ಬ್ರಹ್ಮ) ಅವರ ಹೇಳಿಕೆಯಲ್ಲ. ಅದು ಬೃಹದಾರಣ್ಯಕ ಉಪನಿಷತ್ತಿನಲ್ಲಿ ಬರುತ್ತದೆ. ಅಂತೆಯೇ ತತ್ ತ್ವಮಸಿ ( ಅದು ನೀನು ಆಗಿದ್ದೀಯೆ), ಛಾಂದೋಗ್ಯ ಉಪನಿಷತ್ತಿನಲ್ಲಿ ಬರುತ್ತದೆ. ಪ್ರಜ್ಞಾನಂ ಬ್ರಹ್ಮ ( ಪ್ರಜ್ಞಾನವೇ ಬ್ರಹ್ಮ) ಐತರೇಯ ಉಪನಿಷತ್ತಿನದು. ಅಯಮಾತ್ಮಾ ಬ್ರಹ್ಮ ( ಈ ಆತ್ಮನೇ ಬ್ರಹ್ಮ), ಮಾಂಡೂಕ್ಯ ಉಪನಿಷತ್ತಿನದು, ಹಾಗೂ ಸರ್ವಂ ಖಲ್ವಿದಂ ಬ್ರಹ್ಮ ( ಎಲ್ಲವೂ ಬ್ರಹ್ಮ) ಛಾಂದೋಗ್ಯ ಉಪನಿಷತ್ತಿನದು. ಇವನ್ನು ಪಂಚಮಹಾವಾಕ್ಯಗಳೆನ್ನುತ್ತಾರೆ. ಉಪನಿಷತ್ತುಗಳಲ್ಲಿರುವ ಅದ್ವೈತ ತತ್ವವನ್ನೇ ಅವರು ಪ್ರತಿಪಾದಿಸಿದರು. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳುತ್ತಾನೆ -
 ಮಮೈವಾಂಶೋ ಜೀವಲೋಕೇ ಜೀವಭೂತ: ಸನಾತನ: /
ಮನ: ಷಷ್ಠಾಣೀಂದ್ರಿಯಾಣಿ ಪ್ರಕೃತಿಸ್ಥಾನಿ ಕರ್ಷತಿ //
   ' ಸನಾತನನಾದ ಈ ಜೀವಾತ್ಮನು ನನ್ನದೇ ಅಂಶವಾಗಿದ್ದಾನೆ.‌ ಪ್ರಕೃತಿಯಲ್ಲಿರುವ ಮನಸ್ಸೂ ಸೇರಿದಂತೆ ಆರು ಇಂದ್ರಿಯಗಳನ್ನು ಆಕರ್ಷಿಸುತ್ತಾನೆ.' 
    ಹಾಗಾಗಿ ಜೀವಾತ್ಮನು ಪ್ರಕೃತಿಗಿಂತ ಬೇರೆಯಾಗಿದ್ದು ಅಮರನಾಗಿದ್ದಾನೆ ಹಾಗೂ ಪರಮಾತ್ಮನ ಅಂಶವೇ ಆಗಿದ್ದಾನೆ. ಆದ್ದರಿಂದ ಜೀವಾತ್ಮನಿಗೂ ಪರಮಾತ್ಮನಿಗೂ ವಸ್ತುತಃ ಭೇದವಿಲ್ಲ.‌ ಇದೇ ತಾನೇ ಅದ್ವೈತ? ಬೃಹದಾರಣ್ಯಕ ಉಪನಿಷತ್ತಿನಲ್ಲಿ ಪರಮಾತ್ಮನಿಗೆ ಒಬ್ಬನೇ ರಮಿಸಲಾಗಲಿಲ್ಲ, ಹಾಗಾಗಿ ಅವನೇ ಹಲವಾದನು ಎಂದಿದೆ. ಭಾಗವತದ ಚತು:ಶ್ಲೋಕೀ ಭಾಗವತವೆಂಬ ನಾಲ್ಕು ಶ್ಲೋಕಗಳಲ್ಲಿ ಅವನೊಬ್ಬನೇ ಇದ್ದ, ಈಗಲೂ ಅವನೊಬ್ಬನೇ ಇದ್ದಾನೆ, ಮುಂದೆಯೂ ಅವನೊಬ್ಬನೇ ಇರುತ್ತಾನೆ ಎಂದಿರುವುದು ಅದ್ವೈತವೇ ಹೌದು. ವಿಷ್ಣು ಪುರಾಣದಲ್ಲಿ ಅದ್ವೈತವೆಂಬ ಪದವೇ ಹಲವಾರು ಬಾರಿ ಬಂದಿದೆ. ಅಲ್ಲಿ ಪ್ರಹ್ಲಾದನ ಕಥೆಯಲ್ಲಿ ಪ್ರಹ್ಲಾದನು ವಿಷ್ಣುವನ್ನು ಧ್ಯಾನಿಸುತ್ತಾ ಅವನೊಂದಿಗೆ ತಾದಾತ್ಮ್ಯ ಹೊಂದಿ ಅವನನ್ನು ಬಿಟ್ಟು ಬೇರೇನಿಲ್ಲ ಎಂದು ತನ್ನನ್ನೂ ಮರೆತುಬಿಡುತ್ತಾನೆ. ಭಗವದ್ಗೀತೆಯಲ್ಲಿ 'ವಾಸುದೇವ: ಸರ್ವಮಿತಿ ಸ ಮಹಾತ್ಮಾ ಸುದುರ್ಲಭ: ( ವಾಸುದೇವನೇ ಎಲ್ಲ ಎಂದು ತಿಳಿಯುವ ಮಹಾತ್ಮ ಬಹಳ ದುರ್ಲಭ)' ಎಂದಿದೆ. ಇಲ್ಲೆಲ್ಲಾ ಇರುವ ಅದ್ವೈತವನ್ನೇ ಶಂಕರರು ಪ್ರತಿಪಾದಿಸಿದರು. ಇನ್ನು ಜಗತ್ತು ಮಿಥ್ಯೆಯೆಂದರೆ ಅವರ ಅಭಿಪ್ರಾಯ, ಅದು ಸದಾ ಬದಲಾಗುತ್ತಿರುವುದರಿಂದ ನಾವು ನೋಡುವ ಅದರ ರೂಪವೇ ಯಥಾವತ್ತಲ್ಲ ಎಂದು ಅರ್ಥ. ಈಗ ಮರವಾಗಿದ್ದುದು ನಾಳೆ ಕುರ್ಚಿ, ಮೇಜು, ಏನು ಬೇಕಾದರೂ ಆಗಬಹುದು. ಆದರೆ ಈ ರೂಪಗಳು ಅವುಗಳ ಯಥಾವತ್ತಿನ ರೂಪವಲ್ಲ, ಹಾಗಾಗಿ ಮಿಥ್ಯ. ಇದನ್ನು ವ್ಯಾವಹಾರಿಕವಾಗಿ ತೆಗೆದುಕೊಂಡು ತಲೆ ಕೆಡಿಸಿಕೊಳ್ಳಬಾರದು. ಇದು ಅರಿವಿಗಾಗಿ ಮಾತ್ರ. ಯಾರೋ ಒಬ್ಬ ಶಿಷ್ಯ , ಎಲ್ಲಾ ಒಂದೇ ಎಂದು ಗುರುಗಳು ಹೇಳಿದರು ಎಂಬ ಭಾವನೆಯಿಂದ, ಮತ್ತಿನಲ್ಲಿದ್ದ ಆನೆ ಬರುತ್ತಿದ್ದರೂ ಮಾವುತ ಎಚ್ಚರಿಸುತ್ತಿದ್ದರೂ ಸುಮ್ಮನಿದ್ದ. ಆಗ ಆನೆ ಅವನನ್ನು ಗುದ್ದಿ ತಳ್ಳಿತು! ಅನಂತರ ಅವನು ತನ್ನ ಗುರುವನ್ನು," ನಿಮ್ಮ ಅದ್ವೈತದ ಉಪದೇಶದಿಂದ ನೋಡಿ ನನ್ನ ದುಸ್ಥಿತಿ!" ಎಂದ. ಅದಕ್ಕೆ ಗುರು," ಸರಿ! ಎಲ್ಲಾ ಭಗವಂತ ಎಂದಮೇಲೆ ಆ ಮಾವುತನೆಂಬ ಭಗವಂತನ ಮಾತನ್ನೇಕೆ ಕೇಳಲಿಲ್ಲ?" ಎಂದ. ಹೀಗೆ ಅದ್ವೈತವನ್ನು ವ್ಯಾವಹಾರಿಕವಾಗಿ ಬಳಸಬಾರದು. ಅದೊಂದು ಪಾರಮಾರ್ಥಿಕ ಸತ್ಯ. ಇಷ್ಟಕ್ಕೂ ಅದು ಇಷ್ಟವಿಲ್ಲದಿದ್ದರೆ, ಒಪ್ಪಲಾಗದಿದ್ದರೆ ತೆಗೆದುಕೊಳ್ಳಬೇಕಿಲ್ಲ. ಹಾಗಾಗಿಯೇ ರಾಮಾನುಜಾಚಾರ್ಯರು ಅದ್ವೈತವನ್ನು ಒಪ್ಪಿದರೂ ವಿಶಿಷ್ಟವಾದ ಅದ್ವೈತ ಎಂದು ಜೀವಾತ್ಮರ ಬಾಹುಳ್ಯವನ್ನೂ ಹೇಳಿದರು. ಜೀವಾತ್ಮರೆಲ್ಲ ಪರಮಾತ್ಮನ ಶರೀರ ಎಂದರು. ಪರಮಾತ್ಮ ಮರವಾದರೆ ಜೀವಾತ್ಮರು ಎಲೆಗಳಂತೆ. ಅಂತೆಯೇ ಚೈತನ್ಯ ಮಹಾಪ್ರಭುಗಳು ಭೇದ, ಅಭೇದ ಎರಡೂ ಇರುವ ಅಚಿಂತ್ಯ ಭೇದಾಭೇದ ತತ್ವವನ್ನು ಪ್ರತಿಪಾದಿಸಿದರು. ಅಂತೆಯೇ ನಿಂಬಾರ್ಕರು ದ್ವೈತಾದ್ವೈತ, ವಲ್ಲಭಾಚಾರ್ಯರು ಶುದ್ಧಾದ್ವೈತ ತತ್ವಗಳನ್ನು ಪ್ರತಿಪಾದಿಸಿದರು. ಇವರೆಲ್ಲರೂ ಜಗತ್ತಿನ ಸತ್ಯತ್ವವನ್ನು ಹೇಳಿದರು. ಅಂತೆಯೇ ಮಧ್ವರು ದ್ವೈತವನ್ನು ಪ್ರತಿಪಾದಿಸಿದರು. ಅಲ್ಲಿಯೂ ಪರಮಾತ್ಮ ಬಿಂಬ ಹಾಗೂ ಜೀವಾತ್ಮನು ಪ್ರತಿಬಿಂಬ ಎಂದು ಒಂದು ರೀತಿಯ ಅದ್ವೈತವೇ ಕಾಣುತ್ತದೆ. ದ್ವೈತಮತ ಪುರಂದರ, ಕನಕದಾಸಾದಿ ಹರಿದಾಸರ ಅದ್ಭುತ ಕೊಡುಗೆ ನೀಡಿರುವ ಸುಂದರ ಭಕ್ತಿ ಬಾಹುಳ್ಯದ ಮತವೇ ಹೌದು. ಹೀಗಿರುವಾಗ ಏಕೆ ಶಂಕರರನ್ನು ನಿಂದಿಸಬೇಕು? ಅದಿಲ್ಲದೆಯೂ ದ್ವೈತಮತ ಸೊಗಸಾಗಿದೆಯಲ್ಲ! 
   ಶಂಕರಾಚಾರ್ಯರ ತಾತ್ವಿಕ ವಿಚಾರಗಳ ಖಂಡನೆ ತಪ್ಪಲ್ಲ. ಆದರೆ ಅವರ ಚಾರಿತ್ರ್ಯ ವಧೆ ತಪ್ಪು. ತಾತ್ವಿಕ ಖಂಡನೆ ಮಾಡಲಾಗದಿದ್ದಾಗ ಹೀಗೆ ಮಾಡುವುದು ಸರಿಯಲ್ಲ.