ಭಾನುವಾರ, ಆಗಸ್ಟ್ 9, 2026

ರಾಷ್ಟ್ರೀಯ ( ವಿಶ್ವ) ಪುಸ್ತಕ ಪ್ರೇಮಿಗಳ ದಿನದ ಶುಭಾಶಯಗಳು

ವಿಶ್ವ ಪುಸ್ತಕ ಪ್ರೇಮಿಗಳ ದಿನದ ಶುಭಾಶಯಗಳೊಂದಿಗೆ 

ನನ್ನ ಪುಸ್ತಕ ಪ್ರೇಮದ......ಅಥವಾ ಪುಸ್ತಕ ಹುಚ್ಚಿನ ಒಂದು ಸಣ್ಣ ಝಲಕ್!

ನಿಜ, ಪುಸ್ತಕ ಪ್ರೇಮ ಅಥವಾ ಹುಚ್ಚು, ಎಲ್ಲಾ ಪ್ರೇಮಗಳಿಗಿಂತಲೂ ದೊಡ್ಡದಾಗಿ ಬೆಳೆಯಬಲ್ಲದು. ಅದು ಮದ್ಯವ್ಯಸನಕ್ಕಿಂತಲೂ ಹೆಚ್ಚಿನ ವ್ಯಸನ ಎಂಬ ಪದ ಸರಿಹೋಗದಿದ್ದರೂ ಗೀಳು ಅಥವಾ ಆಸಕ್ತಿ ಎಂದು ಹೇಳಬಹುದು. ಆದರೆ ಮದ್ಯಪಾನದಲ್ಲಿರುವಂತೆ ಆರೋಗ್ಯ ಸಮಸ್ಯೆಗಳಿರುವುದಿಲ್ಲ. ಶೇಖರಿಸಲು ಜಾಗದ ಸಮಸ್ಯೆ, ಮತ್ತು ಓದಲು ಸಮಯದ ಸಮಸ್ಯೆ ಇರುತ್ತವೆ. ಪುಸ್ತಕ ಸಂಗ್ರಹ, ಓದು, ಕರಕುಶಲ ವಸ್ತುಗಳ ಸಂಗ್ರಹ, ಬರವಣಿಗೆ, ಪ್ರವಾಸ, ಛಾಯಾಗ್ರಹಣ, ಹಾಡುಗಾರಿಕೆ, ಇಂಥ ಹಲವು ಹವ್ಯಾಸಗಳ ನಡುವೆ ನನ್ನ ಚರ್ಮವೈದ್ಯಕೀಯ ವೃತ್ತಿಯನ್ನೂ ಮುಂದುವರೆಸಿಕೊಂಡು ಹೋಗುತ್ತಿದ್ದೇನೆ, ಹಾಗೂ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದೇನೆ ಎಂದು ಧೈರ್ಯವಾಗಿ ಹೇಳಿಕೊಳ್ಳಬಲ್ಲೆ. ಆದರೆ, ಇಷ್ಟೊಂದನ್ನು ನೋಡಿದಾಗ ನಾನು ಏನೂ ಮಾಡಿಲ್ಲವೆನಿಸುವುದು ಸಹಜ ಮತ್ತು ನಿಜ ಕೂಡ! ಆದರೆ ಅದಕ್ಕೇನೂ ಬೇಸರ ಪಟ್ಟುಕೊಳ್ಳಬೇಕಿಲ್ಲ. ಏಕೆಂದರೆ ಇಲ್ಲಿ ಎಲ್ಲವೂ ಸಾಪೇಕ್ಷ! ಪುಸ್ತಕ ಸಂಗ್ರಹದಲ್ಲಿ ಒಂದು ತುದಿಯಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಅಂಕೇಗೌಡರಿದ್ದರೆ ಇನ್ನೊಂದು ತುದಿಯಲ್ಲಿ ನನ್ನಂಥ ಎಷ್ಟೋ ಜನರಿರುತ್ತಾರೆ. ಆದರೆ ಪುಸ್ತಕ ಸಂಗ್ರಹ ಮತ್ತು ಓದಿನ ಹವ್ಯಾಸ ಅತ್ಯಂತ ಹೆಚ್ಚಿನ ಸಂತೋಷ ಕೊಡುತ್ತದೆಂದು ಖಂಡಿತವಾಗಿ ಹೇಳಬಲ್ಲೆ. 
     ಅದೇಕೋ ಗೊತ್ತಿಲ್ಲ. ನನಗೆ ಮೊದಲಿನಿಂದಲೂ ಪುಸ್ತಕ ಸಂಗ್ರಹ ಮತ್ತು ಓದಿನ ವಿಪರೀತ ಹುಚ್ಚಿದೆ. ಚಿಕ್ಕ ವಯಸ್ಸಿನಲ್ಲಿ ನಮ್ಮ ತಂದೆಯವರು ಪರಿಚಯಿಸಿದ ಅಮರ ಚಿತ್ರ ಕಥಾ ಮಾಲಿಕೆಯ ಪುಸ್ತಕಗಳು, ಇಕೋ ಪುಸ್ತಕಗಳು, ಭಾರತ ಭಾರತಿ ಪುಸ್ತಕಗಳು, ಚಂದಮಾಮ, ಬಾಲಮಿತ್ರ, ಬೊಂಬೆಮನೆ, ಟಿಂಕಲ್, ಗೋಕುಲಂ, ಚಂಪಕ್, ಬಾಲಮಂಗಳ ಮೊದಲಾದ ಮಕ್ಕಳ, ಅಷ್ಟೇಕೆ ದೊಡ್ಡವರಿಗೂ ಬಹಳ ಪ್ರಿಯವಾದ ಪತ್ರಿಕೆಗಳು, ತರಂಗ, ಸುಧಾ, ಕರ್ಮವೀರ, ಕಸ್ತೂರಿ, ರೀಡರ್ಸ್ ಡೈಜೆಸ್ಟ್, ವಿಸ್ಡಮ್, ವಾರಪತ್ರಿಕೆ, ಪ್ರಜಾಮತ, ಮುಂತಾದ ಹಲವಾರು ಪತ್ರಿಕೆಗಳು ನನ್ನ ಮನಸೆಳೆದು ಈ ಅಭಿರುಚಿ ಬೆಳೆಸಿದವೇನೋ! ಆಗಲೇ ಹತ್ತನೇ ತರಗತಿಯ ವೇಳೆಗೆ ನಾನು ಮಂಗಳ, ತರಂಗ, ಪ್ರಜಾಮತ, ಕರ್ಮವೀರ, ಕಸ್ತೂರಿ, ಮುಂತಾದ ಪತ್ರಿಕೆಗಳಲ್ಲಿ ಕಥೆಗಳನ್ನೂ ಲೇಖನಗಳನ್ನೂ ಬರೆದು ಪ್ರಕಟಿಸಿದ್ದೆ. ಚಿಕ್ಕ ವಯಸ್ಸಿನ ನನ್ನ ಎರಡು ಘಟನೆಗಳು ಪುಸ್ತಕ ಪ್ರೇಮದ ವಿಷಯವಾಗಿ ಇನ್ನೂ ನನಗೆ ನೆನಪಿದೆ. ಒಂದು, ಐದನೇ ತರಗತಿಯಲ್ಲಿ ಪ್ರತಿ ವರ್ಷದಂತೆ ನಮ್ಮ ತರಗತಿಯ ಗ್ರೂಪ್ ಫೋಟೋ ತೆಗೆದಾಗ ಅದನ್ನು ಕೊಳ್ಳಲು ಐದು ರೂಪಾಯಿ ಕೊಡುವ ಬದಲಿಗೆ ಅದೇ ಐದು ರೂಪಾಯಿಗೆ ಸೈಫನ್ ಎಂಬ ಆಂಗ್ಲ ವೈಜ್ಞಾನಿಕ ಮಾಸಪತ್ರಿಕೆಯನ್ನು ಕೊಳ್ಳಲು ಯೋಚಿಸಿ ಆ ಫೋಟೋ ಬೇಡವೆಂದು ನಿರಾಕರಿಸಿದ್ದೆ. ಆಗೆಲ್ಲಾ ಐದು ರೂಪಾಯಿ ಕೂಡ ಸ್ವಲ್ಪ ದುಬಾರಿಯೇ ಇತ್ತು. ಆಗ ನಮ್ಮ ಅಧ್ಯಾಪಕರು, ಸ್ನೇಹಿತರೊಂದಿಗಿರುವ ಫೋಟೋ ಮುಂದೆ ಸಿಗುವುದಿಲ್ಲ, ಅದ್ಯಾವ ಪತ್ರಿಕೆ ಬಿಡು, ಅಷ್ಟೊಂದು ಓದುವುದೇನು ಬೇಡ ಎಂದು ಛೇಡಿಸಿದ್ದರು! ಕೊನೆಗೆ ಐದು ರೂಪಾಯಿಗೆ ಯಾಕೆ ಇಷ್ಟು ಚಿಂತೆ ಎಂದು ನನ್ನ ತಂದೆ, ತಾಯಿಯರು ಫೋಟೋ ಮತ್ತು ಪತ್ರಿಕೆ ಎರಡನ್ನೂ ಕೊಡಿಸಿದ್ದರು. ಇನ್ನೊಂದು ಘಟನೆಯಲ್ಲಿ, ಅದೇ ಐದನೇ ಅಥವಾ ಆರನೇ ತರಗತಿಯಲ್ಲಿದ್ದಾಗ, ಒಮ್ಮೆ ನಾವು ಕುಟುಂಬಸಮೇತವಾಗಿ ಮಲ್ಲೇಶ್ವರಂ ಆಟದ ಮೈದಾನದಲ್ಲಿ ನಡೆದ ಒಂದು ಬೃಹತ್ ಪುಸ್ತಕ ಪ್ರದರ್ಶನಕ್ಕೆ ಹೋಗಿದ್ದೆವು. ಆಗ ಒಂದಷ್ಟು ಪುಸ್ತಕಗಳನ್ನು ಖರೀದಿಸಿದ ಬಳಿಕ, ನಮ್ಮ ತಂದೆಯವರು ನನಗೂ ನನ್ನ ತಂಗಿಗೂ ಐಸ್ ಕ್ರೀಮ್ ಕೊಡಿಸಲು ಹೊರಟರು. ಆಗ ನಾನು ಐಸ್ ಕ್ರೀಮ್ ಬದಲಿಗೆ ಇನ್ನೊಂದು ಪುಸ್ತಕವನ್ನೇ ತೆಗೆದುಕೊಳ್ಳುವೆನೆಂದು ಐಸ್ ಕ್ರೀಮ್ ತೆಗೆದುಕೊಳ್ಳಲೇ ಇಲ್ಲ! ಆಗ ನಮ್ಮ ತಂದೆ, ಪುಸ್ತಕ ಪ್ರೇಮ ಇರಬೇಕು, ಆದರೆ ಹೀಗೆ ಎಲ್ಲವನ್ನೂ ಬಿಡುವಷ್ಟು ಹುಚ್ಚು ಇರಬಾರದೆಂದು‌ ಹೇಳುತ್ತಾ ಕೊನೆಗೆ ಎಲ್ಲರೂ ಹಂಚಿಕೊಂಡು ತಿನ್ನುವ ಪಾಪ್ ಕಾರ್ನ್ ತೆಗೆದುಕೊಂಡರು. ಆಮೇಲೆ ನನಗೂ ಅನಿಸಿತು. ಹೌದು, ಪುಸ್ತಕಗಳಿಗಾಗಿ ಹೀಗೆ ಬೇರೆ ಎಲ್ಲವನ್ನೂ ಬಿಡುವಂತಾಗಬಾರದು ಎಂದು. ಆದರೂ ಏನೇ ಆಕರ್ಷಣೆಗಳನ್ನು ನೋಡಿದರೂ ಮೊದಲು ನನಗೆ ಕಣ್ಣಿಗೆ ಬೀಳುವುದು ಪುಸ್ತಕಗಳೇ! ಆಗೆಲ್ಲಾ ಚಿಕ್ಕ ವಯಸ್ಸಿನಲ್ಲಿ ನಾವು ರಾಕ್ಷಸರ ಕಥೆಗಳನ್ನು ಓದುತ್ತಾ ಹೇಳುತ್ತಿದ್ದಾಗ, ರಾಕ್ಷಸರು ತಮ್ಮ ಜೀವಗಳನ್ನು ಗಿಣಿಗಳಲ್ಲೋ ಇನ್ನಾವುದೋ ಪ್ರಾಣಿಗಳಲ್ಲೋ ಇಡುತ್ತಿದ್ದರೆಂದು ನೋಡುತ್ತಿದ್ದೆವು. ಆಗ ನಾನು, ನನ್ನ ಜೀವ ಪುಸ್ತಕಗಳಲ್ಲಿರುತ್ತದೆ ಎನ್ನುತ್ತಿದ್ದೆ! 
     ಚಿಕ್ಕ ವಯಸ್ಸಿನಲ್ಲಿ ಅನೇಕ ಬಾರಿ ನನ್ನ ತಂದೆಯವರೊಂದಿಗೆ ಪುಸ್ತಕ ಮೇಳಗಳು, ಪುಸ್ತಕ ಮಳಿಗೆಗಳಿಗೆ ಹೋಗಿದ್ದುಂಟು. ಅವರು ಅನೇಕ ಕ್ವಿಜ್ ಪುಸ್ತಕಗಳನ್ನು ರಚಿಸುವಾಗ ಸಹಾಯ ಮಾಡಿದ್ದೂ ಉಂಟು. ಮಧ್ಯಾಹ್ನದ ಹೊತ್ತು, ರಜಾ ಸಮಯಗಳಲ್ಲಿ ಓದುವುದು ಬಿಟ್ಟರೆ ಇನ್ನೇನೂ ಮನರಂಜನೆ ಆಗ ಇರಲಿಲ್ಲ. ಕೆಲವೊಮ್ಮೆ ಶಾಲೆಗೂ ಅಮರ ಚಿತ್ರ ಕಥೆ, ಟಿಂಕಲ್ ಮುಂತಾದವನ್ನು ತೆಗೆದುಕೊಂಡು ಹೋದಾಗ ಅವನ್ನು ನೋಡಿದ ಗೆಳೆಯರಿಗೆ ಅವನ್ನು ಓದುವವರೆಗೂ ಸಮಾಧಾನವಿರುತ್ತಿರಲಿಲ್ಲ. ಅವರೂ ಹಾಗೆ ತರುತ್ತಿದ್ದುದುಂಟು. ಹಾಗೆ ಅವರಿಂದ ನೋಡಿದ ಪುಸ್ತಕಗಳು ನನಗೆ ಬೇಕೆಂದು ಮನೆಯಲ್ಲಿ ಕೇಳಿದಾಗ ಅವನ್ನು ನಮ್ಮ ತಂದೆ ತಂದುಕೊಡುತ್ತಿದ್ದರು. ಕೆಲವೊಮ್ಮೆ ಶಾಲೆಯಲ್ಲಿ ಹೀಗೆ ಇತರ ಪುಸ್ತಕಗಳು ನಮ್ಮ ಬಳಿಯಿರುವುದನ್ನು ನೋಡಿ ನಮ್ಮ ಮೇಡಂಗಳು, ಮೇಷ್ಟ್ರುಗಳು ಕಿತ್ತುಕೊಂಡದ್ದು, ಅನಂತರ ನಾವು ಬೇಡಿಕೊಂಡು ಹಿಂದಿರುಗಿಸಿಕೊಂಡಿದ್ದೂ ಇದೆ. ಕೆಲವೊಮ್ಮೆ ಅವರು ನನ್ನ ಬಳಿ ಪುಸ್ತಕಗಳನ್ನು ಓದಲೆಂದು ತೆಗೆದುಕೊಂಡು ಬಹಳ ದಿನಗಳಾದರೂ ಕೊಡದೆ, ನಾನು ಅವರ ಮನೆಗೇ ಹೋಗಿ ಹಿಂದಕ್ಕೆ ಪಡೆದದ್ದಿದೆ. ಆಗೆಲ್ಲಾ ಹಿರಿಯರೂ ಎಲ್ಲರೂ ಹೇಳುತ್ತಿದ್ದುದು ಪುಸ್ತಕಗಳನ್ನು ಯಾರಿಗೂ ಕೊಡಬೇಡಿ, ಮತ್ತೆ ಸಿಗುವುದಿಲ್ಲ ಎಂದು! ನಮ್ಮ ಸಂಸ್ಕೃತ ಮೇಷ್ಟ್ರು ಒಂದು ಶ್ಲೋಕವನ್ನೇ ಹೇಳಿಕೊಟ್ಟಿದ್ದರು -

       ಪುಸ್ತಕಂ ವನಿತಾ ವಿತ್ತಂ ಪರಹಸ್ತಗತಂ/
      ಯದಿ ಚೇತ್ ಪುನರಾಯಾತಿ ನಷ್ಟಂ ಭ್ರಷ್ಟಂ ಚ ಖಂಡಶ: //

    ' ಪುಸ್ತಕವೂ ಹೆಣ್ಣೂ, ಹಾಗೂ ಹಣವೂ ಇತರರ ಕೈಗೆ ಹೋದರೆ ಹೋದಂತೆಯೇ! ಒಂದು ವೇಳೆ ಪುನಃ ಬಂದರೆ ಹಾಳಾಗಿ ಬರುತ್ತವೆ!' 
      ಹಾಗಾಗಿ ಪುಸ್ತಕಗಳನ್ನು ಇತರರಿಗೆ ಕೊಡುವುದರ ಬಗ್ಗೆ, ಅಷ್ಟೇಕೆ ಅವು ನನ್ನ ಬಳಿ ಇದೆಯೆಂದು ಹೇಳುವುದರ ಬಗ್ಗೆಯೂ ಭಯ ಬೆಳೆಯಿತು! ಅದು ಈಗಲೂ ಇದೆ! 
     ಪುಸ್ತಕ ಲೋಕ ತುಂಬಾ ದೊಡ್ಡದು! ಹಲವರಿಗೆ ಹಲವು ಬಗೆಯ ಪುಸ್ತಕಗಳು ಇಷ್ಟವಾಗುತ್ತವೆ. ನನಗಾದರೆ ಮುಖ್ಯವಾಗಿ ಭಾರತೀಯ ಸಂಸ್ಕೃತಿ, ರಾಮಾಯಣ, ಮಹಾಭಾರತ, ಭಾಗವತಾದಿ ಹದಿನೆಂಟು ಪುರಾಣಗಳು, ವೇದೋಪನಿಷತ್ತುಗಳು, ಮೊದಲಾದ ಆಧ್ಯಾತ್ಮಿಕ ಪುಸ್ತಕಗಳು ಒಂದು ಕಡೆಯಾದರೆ, ಸಂಸ್ಕೃತ ಸಾಹಿತ್ಯದ ಕಾವ್ಯ, ಶೃಂಗಾರ, ಸುಭಾಷಿತ ಮೊದಲಾದ ವೈವಿಧ್ಯಮಯ ಪುಸ್ತಕಗಳು, ಭಾರತೀಯ ಪರಂಪರೆ, ಕಲೆ, ಇತಿಹಾಸ, ಜಾನಪದ ಕಥೆಗಳು, ವಿಶ್ವ ಪೌರಾಣಿಕ ಕಥೆಗಳು, ಪ್ರವಾಸತಾಣಗಳ ಪರಿಚಯಾತ್ಮಕ ಕಾಫಿ ಟೇಬಲ್ ಪುಸ್ತಕಗಳು, ಪ್ರಾಣಿ ಪ್ರಪಂಚ, ಕಾಡಿನ ವಿಷಯಗಳು, ಪ್ರಕೃತಿ ಸೌಂದರ್ಯಗಳ ವೈವಿಧ್ಯಮಯ ಕಾಫಿ ಟೇಬಲ್ ವಿಶ್ವಕೋಶಗಳು, ಕುವೆಂಪು ,ಭೈರಪ್ಪ , ಮುಂತಾದವರ ಕಾದಂಬರಿಗಳು, ವೈದ್ಯಕೀಯ, ಮಾನವ ಸ್ವಭಾವ, ಮೊದಲಾದ ವೈಜ್ಞಾನಿಕ ವಿಷಯದ ಪುಸ್ತಕಗಳು, ಕುತೂಹಲ ಕೆರಳಿಸುವ ಭೂತ ಪ್ರೇತಾದಿ ಹಾರರ್ ಮತ್ತು ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಕಥೆಗಳು, ಹೀಗೆ ಹಲವಾರಿವೆ. 
      ಹೀಗೆ ಓದುವ ಹವ್ಯಾಸ ಹೆಚ್ಚಿರುವುದರಿಂದಲೇ ನಾನು ವೈದ್ಯನೂ ಬರಹಗಾರನೂ ಆದೆನೇನೋ! ವೈದ್ಯಕೀಯ ಕೋರ್ಸ್ ಗೆ ಸೇರ್ಪಡೆಯಾಗಲು, ವೈದ್ಯನಾಗಲು ಬಹಳ ಬಹಳ ಓದಬೇಕು ಮತ್ತು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದೇನೋ ನಿಜವೇ! ಅದಕ್ಕೆ ಹೀಗೆ ಚಿಕ್ಕ ವಯಸ್ಸಿನಿಂದ ಓದುವ ಅಭ್ಯಾಸವಿದ್ದರೆ ತುಂಬಾ ಒಳ್ಳೆಯದು. ಆದರೆ ಈ ಕಾಲದಲ್ಲಿ ತಂದೆ ತಾಯಿಯರು ತಮ್ಮ ಮಕ್ಕಳಿಗೆ ಎಷ್ಟು ಪುಸ್ತಕಗಳನ್ನು ಕೊಡಿಸುವರೋ ಗೊತ್ತಿಲ್ಲ! ಈ ಮೊಬೈಲ್ ಕಾಲದಲ್ಲಿ ಅದೆಷ್ಟು ಮಕ್ಕಳು ಆಸಕ್ತಿಯಿಂದ ಪುಸ್ತಕ ಹಿಡಿಯುತ್ತಾರೋ ಗೊತ್ತಿಲ್ಲ! 
     ನನ್ನ ಪುಸ್ತಕಗಳು ಬೆಳೆಯುತ್ತಲೇ ಇವೆ! ಬೇರೆ ಬೇರೆ ಕೋಣೆಗಳಲ್ಲಿ ಅವುಗಳನ್ನು ಜೋಡಿಸುತ್ತಲೇ ಇದ್ದೇನೆ. ಆದರೂ ಜಾಗ ಸಾಲುತ್ತಿಲ್ಲ. ಆಸೆ ಬತ್ತುತ್ತಿಲ್ಲ. ನನಗೇ ಪುಸ್ತಕಗಳನ್ನು ಹುಡುಕಲಾಗದಂತೆ ಸಾಗರೋಪಾದಿಯಲ್ಲಿ ಅವು ತುಂಬುತ್ತಿವೆ! ಮುಂದಿನ ವರ್ಷದ ಪುಸ್ತಕ ಪ್ರೇಮಿಗಳ ದಿನದ ಹೊತ್ತಿಗೆ ನನಗಾದರೂ ಪುಸ್ತಕಗಳು ಸುಲಭವಾಗಿ ಸಿಗುವಂತೆ ಇತರ ಕೋಣೆಗಳಿಗೆ ಪುಸ್ತಕಗಳನ್ನು ವರ್ಗಾಯಿಸಿ, ಸ್ವಲ್ಪ ಸುಸಜ್ಜಿತಗೊಳಿಸಿ ಸಾಧ್ಯವಾದಷ್ಟು ಓದಿ, ಇನ್ನಷ್ಟು ಒಳ್ಳೆಯ ಪುಸ್ತಕಗಳನ್ನು ಬರೆಯುವೆನೆಂದು ನನಗೆ ನಾನೇ ಆಶ್ವಾಸನೆ ಕೊಟ್ಟುಕೊಳ್ಳುತ್ತಾ ಈ ಬರಹವನ್ನು ಸದ್ಯಕ್ಕೆ ನಿಲ್ಲಿಸುತ್ತೇನೆ.

ಪುಸ್ತಕಿರಲವ್ವ ಮನೆತುಂಬ.....
ಪುಸ್ತಕಿರಲವ್ವ ಮನೆತುಂಬ.....

ಸುಂದರೀಶತಕ -೭೬

ಸಂಸ್ಕೃತ ಮೂಲ 

ವಚನರಚನೈ: ಕೃತಂ ತವ ಕಿತವ ಪ್ರಣಿಪಾತಮಾತ್ರಸಾಧ್ಯಾಯಾ: /
ಅಸ್ಯಾ ಮಾನಕದಲ್ಯಾ: ಫಲಾವಸಾನ: ಪರೀಪಾಕ: //.

ಕನ್ನಡ ಅನುವಾದ 

  ಸಖಿಯು ನಾಯಕನಿಗೆ ಹೇಳುತ್ತಾಳೆ,"ಎಲೈ ಶಠನೇ! ಈ ನಿನ್ನ ಚಮತ್ಕಾರದ ಮಾತುಗಳನ್ನು ಹೇಳಿಯಾಯಿತು! ಅವನ್ನು ಸಾಕುಮಾಡು! ಇವಳಿಗೆ ಈಗ ಕಾಲಿಗೆ ಬೀಳುವುದರಿಂದಷ್ಟೇ ಕೋಪವು ಶಾಂತವಾಗುವುದು! ಇವಳ ಕೋಪವೆಂಬ ಬಾಳೇಗಿಡವು ನಿನ್ನ ಪ್ರಣಿಪಾತವೆಂಬ ಪರಿಪಕ್ವ ಫಲದಿಂದ ತಾನಾಗಿಯೇ ನಷ್ಟವಾಗುತ್ತದೆ!" 
     ಇಲ್ಲಿ ನಾಯಕನು ನಾಯಕಿಗೆ ಏನೋ ಮೋಸ ಮಾಡಿ ಕೋಪ ಬರುವಂತೆ ಮಾಡಿದ್ದಾನೆ. ಪ್ರಾಯಶಃ ಅವನು ತನ್ನ ಇನ್ನೊಬ್ಬ ಪ್ರಿಯೆಯ ಬಳಿ ಹೋಗಿರುವುದರಿಂದ ಅವಳಿಗೆ ಮೋಸ ಮಾಡಿದಂತಾಗಿ ಅವಳಿಗೆ ಕೋಪ ಬಂದಿದೆ. ಶೃಂಗಾರ ಸಾಹಿತ್ಯದಲ್ಲಿ ಇಂಥ ನಾಯಕನಿಗೆ ಶಠ ನಾಯಕ ಎನ್ನುತ್ತಾರೆ. ಇಂಥ ಶಠನಾಯಕನು ಅನಂತರ ತನ್ನ ಪ್ರಿಯತಮೆಯನ್ನು ಸಮಾಧಾನಪಡಿಸಲು ಬಹಳ ಪ್ರಯತ್ನಿಸಿದ್ದಾನೆ.‌ ಚಮತ್ಕಾರದ ಮಾತುಗಳನ್ನಾಡಿದ್ದಾನೆ. ಆದರೆ ಅವಳು ಏನು ಮಾಡಿದರೂ ಸಮಾಧಾನಗೊಳ್ಳುತ್ತಿಲ್ಲ. ಆಗ ಅವಳ ಸಖಿಯು ಅವನ ಬಳಿ ಬಂದು ಇಂಥ ಚಮತ್ಕಾರದ ಮಾತುಗಳನ್ನು ಹೇಳಿಯಾಗಿದೆ, ಈಗ ಸಾಕು ಮಾಡು ಎನ್ನುತ್ತಾ ಅವಳ ಕಾಲಿಗೆ ಬೀಳಲು ಹೇಳುತ್ತಾಳೆ ಹಾಗೂ ಅದೊಂದರಿಂದಲೇ ಅವಳ ಕೋಪ ಶಮನವಾಗುವುದೆಂದು ಹೇಳುತ್ತಾಳೆ. ನಾಯಕಿಯ ಕೋಪವನ್ನು ಅವಳು ಒಂದು ಬಾಳೇಗಿಡಕ್ಕೆ ಹೋಲಿಸುತ್ತಾಳೆ. ಬಾಳೇಗಿಡವು ಪರಿಪಕ್ವವಾದ ಫಲ ಬಿಟ್ಟ ಮೇಲೆ ತಾನಾಗಿಯೇ ನಷ್ಟವಾಗಿಹೋಗುತ್ತದೆ. ಹಾಗೆಯೇ ನಾಯಕನ ಪ್ರಣಿಪಾತವೆಂಬ ( ಕಾಲಿಗೆ ಬೀಳುವುದು) ಪರಿಪಕ್ವವಾದ ಫಲವುಂಟಾದ ಬಳಿಕ, ನಾಯಕಿಯ ಬಾಳೇಗಿಡವೆಂಬ ಕೋಪವು ತಾನಾಗಿಯೇ ನಷ್ಟವಾಗುವುದೆಂದು ಹೇಳುತ್ತಾಳೆ. ಪ್ರಾಚೀನ ಶೃಂಗಾರ ಸಾಹಿತ್ಯದಲ್ಲಿ ನಾಯಕನು ನಾಯಕಿಯ ಕಾಲಿಗೆ ಬೀಳುವ ಉದಾಹರಣೆಗಳು ಬಹಳ ಇವೆ.
     

ಶುಕ್ರವಾರ, ಆಗಸ್ಟ್ 7, 2026

ಸುಂದರೀಶತಕ -೭೫

ಸಂಸ್ಕೃತ ಮೂಲ 

ಯಾವತ್ಪತತಿ ನ ಚರಣಂ ಛಾಯಾ ದುರ್ವಾರವೈರಿಣೀ ಶಿರಸಿ /
ಜ್ಯೋತ್ಸ್ನಾಭಿಸಾರವೇಷ: ಸಹಚರಿ ನೇಶ: ಕೃತಾರ್ಥಯಿತುಮ್ //

ಕನ್ನಡ ಅನುವಾದ 

   ನಾಯಕಿಯು ತನ್ನ ಸಖಿಗೆ ಹೇಳುತ್ತಾಳೆ, ' ಎಲೈ ಸಹಚರಿ! ಎಲ್ಲಿಯವರೆಗೆ ತಡೆಯಲಾಗದ ವೈರಿಯಾದ ನನ್ನ ನೆರಳು, ಅದರ ತಲೆಯಲ್ಲಿ ನನ್ನ ಪಾದವಿರುವಂತೆ ಬೀಳುವುದಿಲ್ಲವೋ, ಅಲ್ಲಿಯವರೆಗೆ ನನ್ನ ಈ ಜ್ಯೋತ್ಸ್ನಾಭಿಸಾರವೇಷ ನನ್ನ ಪ್ರಿಯತಮನನ್ನು ಭೇಟಿಯಾಗುವ ನನ್ನ ಆಸೆಯನ್ನು ಕೃತಾರ್ಥಗೊಳಿಸುವುದಿಲ್ಲ!

    ಇಲ್ಲಿ ಕವಿಯು ಹಿಂದಿನ ಶ್ಲೋಕದ ಭಾವವನ್ನೇ ಮುಂದುವರೆಸಿದ್ದಾನೆ. ನಾಯಕಿಯು ಬೆಳದಿಂಗಳ ರಾತ್ರಿಯಲ್ಲಿ ತಾನು ಅದಕ್ಕೆ ಒಪ್ಪುವಂತೆ ಬಿಳಿಯ ವೇಷದಲ್ಲಿ ಜ್ಯೋತ್ಸ್ನಾಭಿಸಾರಿಣಿಯಾಗಿ ಹೊರಟರೂ ಅವಳ ನೆರಳನ್ನೇ ಯಾರಾದರೂ ನೋಡಿ ಅವಳನ್ನು ಗುರುತಿಸಬಹುದೆಂದು ಅವಳಿಗೆ ಅನಿಸಿದೆ. ಹಾಗಾಗಿ ಆ ನೆರಳನ್ನೇ ತನ್ನ ತಡೆಯಲಾಗದ ಶತ್ರು ಎಂದು ಭಾವಿಸುತ್ತಾ ಆ ನೆರಳು ಅಡಗುವವರೆಗೂ ತಾನು ಹೋಗಲಾಗುವುದಿಲ್ಲವೆಂದು ಸಖಿಗೆ ಹೇಳುತ್ತಿದ್ದಾಳೆ. ಅವಳ ನೆರಳು ಅದರ ತಲೆಯಲ್ಲಿ ತನ್ನ ಪಾದ ಇರುವಂತೆ ಬೀಳುವುದು ಎಂದರೆ ತನ್ನ ಬುಡಕ್ಕೇ ಬಂದು ಇತರರಿಗೆ ಕಾಣದಂತಾಗುವುದು ಎಂದು ಅರ್ಥ. ಅದು ಆಗಬೇಕಾದರೆ ಚಂದ್ರನು ಅವಳ ನೆತ್ತಿಯ ಮೇಲೆ ಬರಬೇಕು. ಅಂದರೆ ಸುಮಾರು ಮಧ್ಯರಾತ್ರಿ ಆಗಬೇಕು. ಅಲ್ಲಿಯವರೆಗೂ ತಾನು ಈ ಜ್ಯೋತ್ಸ್ನಾಭಿಸಾರವೇಷದಲ್ಲಿದ್ದರೂ ತನ್ನ ಪ್ರಿಯತಮನನ್ನು ನೋಡಲು ಹೋಗಲಾಗುವುದಿಲ್ಲ ಎಂದು ತನ್ನ ಸಖಿಗೆ ನಾಯಕಿಯು ಖಿನ್ನಳಾಗಿ ಹೇಳುತ್ತಿದ್ದಾಳೆ. ಚಂದ್ರನು ಅವಳ ನೆತ್ತಿಯ ಮೇಲೆ ಬಂದಾಗ, ಹಾಗೂ ಅವಳ ಶತ್ರುವಿನಂತಿರುವ ನೆರಳು ಅವಳ ಬುಡಕ್ಕೆ ಬಂದಾಗ, ಅವಳು ಆ ತನ್ನ ಶತ್ರು ನೆರಳಿನ ತಲೆಯ ಮೇಲೆ ತನ್ನ ಪಾದವನ್ನು ಇರಿಸಿ ಜಯ ಸಾಧಿಸಿದಂತೆಯೂ ಇಲ್ಲಿ ಸೊಗಸಾದ ಕಲ್ಪನೆ ಮಾಡಿದ್ದಾನೆ ಕವಿ!

ಸುಂದರೀಶತಕ -೭೪

ಸಂಸ್ಕೃತ ಮೂಲ 

ಸಿತವಸನಮೌಕ್ತಿಕಾವಲಿಚಂದನಚರ್ಚಾಸಹಾಯಶಾಲಿನ್ಯಾ: /
ಜ್ಯೋತ್ಸ್ನಾಭಿಸಾರಿಣಿ ತವ ಚ್ಛಾಯಾ ಪರಿಪಂಥಿನೀ ಭವತಿ //

ಕನ್ನಡ ಅನುವಾದ 

   ' ಬಿಳಿಯ ವಸ್ತ್ರವನ್ನುಟ್ಟು, ಬಿಳಿಯ ಮುತ್ತಿನ ಹಾರ ಧರಿಸಿ, ಚಂದನವನ್ನು ಪೂಸಿಕೊಂಡು ಹೋಗುತ್ತಿರುವ ಎಲೈ ಜ್ಯೋತ್ಸ್ನಾಭಿಸಾರಿಣಿ! ನಿನ್ನ ನೆರಳೇ ನಿನಗೆ ಶತ್ರುವಾಗುತ್ತದೆ!'
    ಅಭಿಸಾರಿಕೆಯರನ್ನು ವರ್ಣಿಸುತ್ತಾ ಕವಿಯು ಇನ್ನೊಂದು ಸ್ವಾರಸ್ಯಕರ ಶೃಂಗಾರ ಪದ್ಯವನ್ನು ರಚಿಸಿದ್ದಾನೆ. ಅಭಿಸಾರಿಕೆಯೆಂದರೆ ಯಾರಿಗೂ ತಿಳಿಯದಂತೆ ತನ್ನ ಪ್ರಿಯತಮನನ್ನು ಗುಟ್ಟಾಗಿ ಭೇಟಿಯಾಗಲು ಸಂಕೇತ ಸ್ಥಳಕ್ಕೆ ಹೋಗುವ ನಾಯಕಿ.‌ ಇಲ್ಲಿ ಒಬ್ಬ ನಾಯಕಿಯು ಬೆಳದಿಂಗಳ ರಾತ್ರಿಯಲ್ಲಿ ಹಾಗೆ ಹೋಗುತ್ತಿದ್ದಾಳೆ. ಸಾಮಾನ್ಯವಾಗಿ ಅಭಿಸಾರಿಕೆಯರಿಗೆ ಬೆಳದಿಂಗಳೆಂದರೆ ಭಯ ಹಾಗೂ ದ್ವೇಷ! ಏಕೆಂದರೆ ಚಂದ್ರನ ಬೆಳದಿಂಗಳಲ್ಲಿ ತಾವು ಹೋಗುತ್ತಿರುವುದು ಇತರರಿಗೆ ಕಂಡುಬಿಡುತ್ತದೆ! ಆದ್ದರಿಂದ ಅವರು ಆದಷ್ಟು ಕತ್ತಲಿನಲ್ಲೇ ಹೋಗುತ್ತಾರೆ. ಆದರೆ ಇಲ್ಲಿ ನಾಯಕಿಯು ಒಂದು ಉಪಾಯ ಮಾಡಿದ್ದಾಳೆ. ಬೆಳದಿಂಗಳಗೆ ಸರಿಹೊಂದುವಂತೆ ಬಿಳಿಯ ವಸ್ತ್ರವನ್ನುಟ್ಟು, ಬಿಳಿಯ ಮುತ್ತಿನ ಹಾರ ಧರಿಸಿ, ಬಿಳಿಯ ಚಂದನವನ್ನು ಮೈಗೆ ಪೂಸಿಕೊಂಡು, ತಾನು ಬೆಳದಿಂಗಳಿನೊಂದಿಗೆ ಒಂದಾಗಿ ಕಾಣುತ್ತಾ ಹೋಗುತ್ತಿದ್ದಾಳೆ! ಇದರಿಂದ ಅವಳು ತಾನು ಪ್ರತ್ಯೇಕವಾಗಿ ಯಾರಿಗೂ ಕಾಣುವುದಿಲ್ಲ ಎಂದು ಭಾವಿಸಿದ್ದಾಳೆ. ಹಾಗಾಗಿಯೇ ಕವಿಯು ಅವಳನ್ನು ಜ್ಯೋತ್ಸ್ನಾಭಿಸಾರಿಣಿ ಎಂದು ಕರೆದಿದ್ದಾನೆ. ಆದರೆ ಅವಳ ನೆರಳು ಬೀಳುವುದಲ್ಲ! ಅದನ್ನು ಯಾರಾದರೂ ನೋಡಬಹುದು! ಅದನ್ನೇ ಕವಿ ಇಲ್ಲಿ ಅವಳಿಗೆ ನಿನ್ನ ನೆರಳೇ ನಿನಗೆ ಶತ್ರುವಾಗುತ್ತದೆ ಎಂದು ಹೇಳುತ್ತಾನೆ! ಅವಳಿಗೂ ತನ್ನ ನೆರಳನ್ನು ನೋಡಿ ಸ್ವಲ್ಪ ಭಯವಾಗಿರುತ್ತದೆ! 

ಮಂಗಳವಾರ, ಆಗಸ್ಟ್ 4, 2026

ಸುಂದರೀಶತಕ-೭೩

ಸಂಸ್ಕೃತ ಮೂಲ 

ಅತಿಮಂದವರ್ಷದಂಬುದಶೀಕರಶಿಶಿರಾರ್ದ್ರಸಾಂದ್ರವಸನಾಯಾ: /
ಆಕಸ್ಮಿಕಾಗತಾಯಾ: ಕಂಠಗ್ರಹಣಫಲಂ ಜನುಷ: //

ಕನ್ನಡ ಅನುವಾದ 

   ' ಮೇಘಗಳು ಬಹು ಮೆಲ್ಲನೆ ಮಳೆ ಸುರಿಸುತ್ತಿರಲು, ತನುವು ತಂಪಾಗಿ, ಆರ್ದ್ರವಾಗಿ, ವಸ್ತ್ರಗಳು ಮೈಗೆ ಅಂಟಿಕೊಳ್ಳುವಂತಾಗಿದ್ದ ಸ್ಥಿತಿಯಲ್ಲಿ ಆಕಸ್ಮಿಕವಾಗಿ ಆಗಮಿಸಿದ ಪ್ರಿಯತಮೆಯನ್ನು ಕಂಠಾಲಿಂಗನ ಮಾಡಿಕೊಂಡ ಪ್ರಿಯತಮನಿಗೆ ಅದು ಅವನ ಜನ್ಮದ ಪುಣ್ಯಫಲ!' 
     ಕವಿಯು ಇಲ್ಲಿ ಸೊಗಸಾದ ಉತ್ಕಟ ಪ್ರೇಮದ ರಮ್ಯ ಶೃಂಗಾರ ಸನ್ನಿವೇಶವನ್ನು ಕಲ್ಪಿಸಿದ್ದಾನೆ! ಬಹಳ ಸಣ್ಣಗೆ ಮಳೆ ಬರುತ್ತಿದೆ. ಜೋರಾದ ಮಳೆಯಲ್ಲಿ ಹೊರಗೆ ಹೋಗಲು ಕಷ್ಟವಾಗುತ್ತದೆ ಹಾಗೂ ಭಯವೂ ಆಗುತ್ತದೆ. ಆದರೆ ಇಂಥ ಮಂದಮಳೆಯಲ್ಲಿ ವಿಹಾರ ಹೋಗುವುದು ಹಿತವಾಗಿರುತ್ತದೆ. ಅದರಲ್ಲೂ ಸಂಗಾತಿಯೊಂದಿಗೆ ವಿಹರಿಸಿದರೆ ಅದರ ಸೊಗಸೇ ಬೇರೆ! ಇಲ್ಲಿ ತನ್ನ ಪ್ರಿಯತಮನನ್ನು ನೋಡಲು ಅವನ ಪ್ರಿಯತಮೆಯು ಅವರ ನಿತ್ಯ ಸಂಕೇತ ಸ್ಥಳಕ್ಕೆ ಬಂದಿದ್ದಾಳೆ. ಆದರೆ ಅವನು ಅವಳಿಗೆ ಬರಲು ಹೇಳಿಲ್ಲ. ಹಾಗಾಗಿ ಅವಳು ಆಕಸ್ಮಿಕವಾಗಿ ಬಂದಿದ್ದಾಳೆ. ಮೊದಲೇ ರಮ್ಯ ವಾತಾವರಣ. ಈಗ ಪ್ರಿಯತಮೆಯೂ ಬಂದಿದ್ದಾಳೆ! ಮಳಯಿಂದ ನೆನೆದು ತಂಪಾಗಿ, ಆರ್ದ್ರವಾಗಿ, ವಸ್ತ್ರಗಳು ಮೈಗೆ ಅಂಟಿಕೊಂಡಿರುವಂಥ ಮುದ್ದಾದ ಸ್ಥಿತಿಯಲ್ಲಿ ಬಂದಿದ್ದಾಳೆ! ಆಗ ಪ್ರಿಯತಮನಿಗೆ ಶೃಂಗಾರ ಭಾವೋದ್ದೀಪನವಾಗಿ ಅವನು ಅವಳನ್ನು ಕಂಠಾಲಿಂಗನ ಮಾಡಿಕೊಂಡಿದ್ದಾನೆ! ಇದು ಅವನ ಜನ್ಮದ ಪುಣ್ಯಫಲ ಎನ್ನುತ್ತಾನೆ ಕವಿ. ಅಲ್ಲವೇ? ಒಲಿದ ಪ್ರಿಯತಮೆಯನ್ನು ಗಾಢವಾಗಿ ಆಲಂಗಿಸಿದಾಗ ಆಗುವ ಆನಂದ ಅಷ್ಟಿಷ್ಟಲ್ಲ! ಲೋಕವೇ ಮರೆಯುವಂಥ, ಮೋಕ್ಷದಂಥ ಅದ್ವೈತ ಭಾವದ ಅದ್ಭುತ ಸ್ಥಿತಿ ಉಂಟಾಗುತ್ತದೆ ಆಗ! ಹೀಗೆ ಒಲಿದ ಪ್ರೇಮಿಗಳು ಗಾಢಾಲಿಂಗನ ಮಾಡಿಕೊಳ್ಳುವುದು ಒಂದು ಪುಣ್ಯಫಲವಲ್ಲದೇ ಮತ್ತೇನು? 

ಸೋಮವಾರ, ಆಗಸ್ಟ್ 3, 2026

ಸುಂದರೀಶತಕ -೭೨

ಸಂಸ್ಕೃತ ಮೂಲ 

ದ್ವಿಗುಣೀಕೃತಾಂಧತಮಸಂ ವರ್ಷತಿ ರುದ್ಧಾನಿಲಂ ಪಯೋವಾಹೇ /
ಆಕಸ್ಮಿಕಮಾಗಮನಂ ಕಾಂತ್ಯಾನುಮಿತಂ ಸಖೇ ತಸ್ಯಾ: //

ಕನ್ನಡ ಅನುವಾದ 

   ನಾಯಕನು ತನ್ನ ಸ್ನೇಹಿತನಿಗೆ ಹೇಳುತ್ತಾನೆ," ಹೇ ಸಖ! ಮೇಘಗಳು ಗಾಳಿಯನ್ನು ತಡೆದು ಮಳೆ ಸುರಿಸುತ್ತಾ ಕತ್ತಲನ್ನು ದ್ವಿಗುಣೀಕರಿಸಿದೆ! ಇಂಥ ಸಮಯದಲ್ಲಿ, ನನ್ನ ಪ್ರಿಯತಮೆಯು ಆಕಸ್ಮಿಕವಾಗಿ ಆಗಮಿಸಲು, ಅವಳ ಕಾಂತಿಯಿಂದಲೇ ಅವಳ ಆಗಮನವನ್ನು ನಾನು ಊಹಿಸಿದೆ!" 
    ಮಳೆ ಸುರಿಸುತ್ತಾ ಮೇಘಗಳು ಗಾಳಿಯನ್ನು ತಡೆದು ಕತ್ತಲನ್ನು ಹೆಚ್ಚಿಸುತ್ತಿದೆ! ನಾಯಕನು ತನ್ನ ಸ್ನೇಹಿತನೊಂದಿಗೆ ಒಂದು ಕಡೆ ನಿಂತಿದ್ದಾನೆ. ಅದು ಅವನಿಗೂ ನಾಯಕಿಗೂ ನಿತ್ಯ ಭೇಟಿಯ ಸಂಕೇತಸ್ಥಳವಿರಬಹುದು. ಆದರೆ ನಾಯಕನು ನಾಯಕಿಗೆ ಬರಲು ಹೇಳಿಲ್ಲ. ಆದರೂ ಅವಳು ಆಕಸ್ಮಿಕವಾಗಿ ಬಂದಿದ್ದಾಳೆ! ಆದರೆ ಕತ್ತಲು ಎಷ್ಟಿದೆಯೆಂದರೆ ಅವಳು ಕಾಣಿಸುತ್ತಲೇ ಇಲ್ಲ! ಆದರೂ ನಾಯಕನು ಅವಳು ಬಂದುದನ್ನು ಊಹಿಸಿದ್ದಾನೆ! ಹೇಗೆಂದರೆ ಅವಳ ಕಾಂತಿಯಿಂದ! ಅದನ್ನು ತನ್ನ ಸ್ನೇಹಿತನಿಗೆ ಹೇಳುತ್ತಿದ್ದಾನೆ.‌ ಇಲ್ಲಿ ಸ್ವಲ್ಪ ಉತ್ಪ್ರೇಕ್ಷೆಯಿದ್ದರೂ ನಾಯಕಿಯ ಕಾಂತಿ ಅಂಥ ದಟ್ಟ ಕತ್ತಲಿನಲ್ಲೂ ಪ್ರಕಾಶಿಸುತ್ತಾ ನಾಯಕನಿಗೆ ಅವಳ ಆಗಮನದ ವಿಷಯ ತಿಳಿಯುತ್ತಿದೆ ಎನ್ನುವುದರ ಮೂಲಕ ಅವಳ ಸೌಂದರ್ಯವನ್ನು ಕವಿಯು ಪ್ರಶಂಸಿಸುತ್ತಿದ್ದಾನೆ. 

ಸುಂದರೀಶತಕ -೭೧

ಸಂಸ್ಕೃತ ಮೂಲ 

ಆಸಾರಸ್ನಪಿತೇ ಯತ್ಪ್ರಯಾಸಿ ಪಥಿ ದುಸ್ತರೇ ಪಯೋದಜಲೈ: /
ಪ್ರಾಕ್ತನಮುದವಾಸತಪ: ಫಲೋನ್ಮುಖಂ ಕಸ್ಯಚಿತ್ಕೃತಿನ: //

ಕನ್ನಡ ಅನುವಾದ 

   ' ಎಲೈ ಸುಂದರಿ! ಮಳೆಯಲ್ಲಿ ಸಂಪೂರ್ಣ ನೆನೆದು ಮೇಘಗಳ ಜಲದಿಂದ ದುಸ್ತರವಾಗಿರುವ ಪಥದಲ್ಲಿ ನೀನು ಪಯಣಿಸುತ್ತಿರುವೆಯಲ್ಲ!  ಇಂಥ ಪುಣ್ಯಫಲವನ್ನು ಅನುಭವಿಸಲು ಆ ನಿನ್ನ ಪ್ರಿಯತಮನು ಪೂರ್ವಜನ್ಮದಲ್ಲಿ ಜಲದಲ್ಲಿ ನಿಂತು ತಪಸ್ಸು ಮಾಡಿದ ಯಾರೋ ಪುಣ್ಯಾತ್ಮನಿರಬೇಕು!' 
    ಪುನಃ ಇಲ್ಲಿ ಒಬ್ಬ ಅಭಿಸಾರಿಕೆಗೆ ಅವಳ ಸಖಿ ಅಥವಾ ಕವಿ ಹೇಳುತ್ತಿರುವ ಸ್ವಾರಸ್ಯಕರ ಮಾತಿದೆ. ಇಲ್ಲಿ ಒಬ್ಬ ಅಭಿಸಾರಿಕೆ ಜೋರಾಗಿ ಮಳೆ ಸುರಿಯುತ್ತಿದ್ದರೂ  ಮೈಯೆಲ್ಲಾ ನೆನೆಯುತ್ತಿದ್ದರೂ ದಾರಿಯು ಮಳೆನೀರಿನಿಂದ ಕೊಚ್ಚೆಯಾಗಿ ನಡೆಯಲು ಕಷ್ಟವಾಗಿದ್ದರೂ ಲೆಕ್ಕಿಸದೆ ತನ್ನ ಪ್ರಿಯತಮನನ್ನು ಭೇಟಿಯಾಗಲು ಹೋಗುತ್ತಿದ್ದಾಳೆ! ಇಂಥ ಕಷ್ಟದಲ್ಲೂ ಅವಳು ಹೋಗುತ್ತಿರುವಳೆಂದರೆ, ಅವಳು ಅವನನ್ನು ಅಷ್ಟು ಗಾಢವಾಗಿ ಪ್ರೀತಿಸುತ್ತಿದ್ದಾಳೆ! ಇಂಥ ಪ್ರೀತಿಯನ್ನು ಪಡೆಯಲು ಅವಳ ಆ ಪ್ರಿಯತಮನು ನಿಜಕ್ಕೂ ಪುಣ್ಯಶಾಲಿ! ಇಂಥ ಪ್ರೀತಿಯನ್ನು ಪಡೆಯಲು ಅವನು ತನ್ನ ಹಿಂದಿನ ಜನ್ಮದಲ್ಲಿ ನೀರಿನಲ್ಲಿ ನಿಂತು ತಪಸ್ಸು ಮಾಡಿರಬೇಕು ಎಂದು ನಾಯಕಿಗೆ ಅವಳ ಸಖಿ ಅಥವಾ ಕವಿ ಹೇಳುತ್ತಿದ್ದಾರೆ.