ಬುಧವಾರ, ಮೇ 6, 2026

ಐತಿಹಾಸಿಕ ಸ್ವಾರಸ್ಯಗಳು - ಕಾಲಾಶೋಕ ಯಾರು?

ಕಾಲಾಶೋಕನ ಹೆಸರು ಕೇಳಿರುವಿರಾ? ಚಂಡಾಶೋಕ ಗೊತ್ತು, ಧರ್ಮಾಶೋಕ ಗೊತ್ತು, ವೀತಶೋಕ ಗೊತ್ತು......ಈ ಕಾಲಾಶೋಕ ಯಾರು?! ಚಂಡಾಶೋಕ ಎಂದರೆ ಸಮ್ರಾಟ್ ಅಶೋಕನು ಬಹಳ ಆವೇಶದ ಸ್ವಭಾವದವನಾಗಿದ್ದಾಗ ಅವನನ್ನು ಕರೆಯುತ್ತಿದ್ದ ಹೆಸರು. ಧರ್ಮಾಶೋಕ ಎಂಬುದು ಅವನು ಬೌದ್ಧ ಧರ್ಮದ ಅನುಯಾಯಿಯಾದಾಗ ಧರ್ಮವನ್ನು ಪಾಲಿಸುತ್ತಿದ್ದುದರಿಂದ ಅವನನ್ನು ಕರೆಯುತ್ತಿದ್ದ ಹೆಸರು. ವೀತಶೋಕ ಅವನ ಸಹೋದರರಲ್ಲಿ ಉಳಿದುಕೊಂಡ ಏಕೈಕನು. ಹಾಗಿದ್ದರೆ ಕಾಲಾಶೋಕ ಯಾರು?
     ಕಾಲಾಶೋಕ, ಅಶೋಕನಿಗೆ ಸಂಬಂಧಿಸಿರದ ಬೇರೊಬ್ಬ ರಾಜ. ಅಶೋಕನಿಗಿಂತಲೂ ಮುಂಚಿನವನು. ಅವನು ಶಿಶುನಾಗ ವಂಶದ ಕೊನೆಯ ರಾಜ.‌ ಕಾಲಾಶೋಕ ಎಂದರೆ ಕಪ್ಪು ಅಶೋಕ ಎಂದು ಅರ್ಥ ಬರುತ್ತದೆ. ಅವನಿಗೆ ಕಾಕವರ್ಣ ಎಂದೂ ಹೆಸರಿತ್ತು. ಪ್ರಾಯಶಃ ಅವನು ಕಪ್ಪಗಿದ್ದುದರಿಂದ ಈ ಹೆಸರನ್ನಿಟ್ಟಿದ್ದರೋ ಏನೋ! 
     ಪ್ರಾಚೀನ ಭಾರತದ ರಾಜ್ಯಗಳನ್ನು ಮಹಾಜನಪದಗಳೆಂದು ಕರೆಯುತ್ತಿದ್ದರು. ಬೌದ್ಧ ಗ್ರಂಥಗಳು ಅಂಥ ಹದಿನಾರು ಮಹಾಜನಪದಗಳನ್ನು ಹೆಸರಿಸುತ್ತವೆ. ಗಾಂಧಾರ, ಮತ್ಸ್ಯ, ಕೋಸಲ, ಶೂರಸೇನ, ಕಾಂಭೋಜ, ವತ್ಸ, ಕುರು, ಪಾಂಚಾಲ, ಕಾಶಿ, ಅವಂತಿ, ಮಲ್ಲ, ವೃಜ್ಜಿ, ಅಂಗ, ಮಗಧ, ಚೇದಿ, ಅಶ್ಮಕ, ಇವೇ ಆ ಹದಿನಾಲ್ಕು ಮಹಾಜನಪದಗಳು. ಇವಲ್ಲದೆ ಇನ್ನೂ ಅನೇಕ ರಾಜ್ಯಗಳಿದ್ದವು. ಇವುಗಳಲ್ಲಿ ಮಗಧವು ದೊಡ್ಡ ಸಾಮ್ರಾಜ್ಯವಾಗಿ ಬೆಳೆಯಿತು. ಮಗಧ ದೇಶದಲ್ಲಿ ಹರ್ಯಂಕ ಸಾಮ್ರಾಜ್ಯ ಅಳುತ್ತಿತ್ತು. ಅದರ ಪ್ರಮುಖ ರಾಜ ಬಿಂಬಿಸಾರ. ಅವನು ಬುದ್ಧನ ಸಮಕಾಲೀನನಾಗಿದ್ದನು. ಅವನು ಒಳ್ಳೆಯ ರಾಜನಾಗಿದ್ದರೂ ದುರದೃಷ್ಟವಶಾತ್, ಅವನ ಮಗ ಅಜಾತಶತ್ರು ಅವನನ್ನು ಕೊಂದುಬಿಟ್ಟನು! ಅದಕ್ಕೆ ಕಾರಣ, ಬುದ್ಧನ ದಾಯಾದಿ ದೇವದತ್ತನ ದುರ್ಬೋಧೆ ಎನ್ನುತ್ತವೆ ಬೌದ್ಧ ಗ್ರಂಥಗಳು. ಆದರೆ ಜೈನ ಗ್ರಂಥಗಳ ಪ್ರಕಾರ, ಅಜಾತಶತ್ರು ಅವನನ್ನು ಬಂಧಿಸಿದ್ದು, ಕೊನೆಗೆ ತನ್ನ ತಾಯಿ ಚೆಲ್ಲನಳಿಂದ ತನ್ನ ತಪ್ಪನ್ನರಿತು, ತಂದೆಯ ಸರಪಣಿಗಳನ್ನು ಕತ್ತರಿಸಿ ಅವನನ್ನು ಬಂಧಮುಕ್ತನನ್ನಾಗಿಸಲು ಕಬ್ಬಿಣದ ದೊಣ್ಣೆ ಹಿಡಿದು ಕಾರಾಗೃಹಕ್ಕೆ ಅವನು ಓಡಿ ಬರುವಾಗ, ಅದನ್ನು ನೋಡಿ ತಪ್ಪು ತಿಳಿದು ಬಿಂಬಿಸಾರ ತಾನೇ ಆತ್ಮಹತ್ಯೆ ಮಾಡಿಕೊಂಡ! ಒಟ್ಟಿನಲ್ಲಿ ಮಗನ ದೆಸೆಯಿಂದ ತಂದೆ ಮೃತ್ಯುವಶನಾದ! 
      ಅಜಾತಶತ್ರುವಿಗೆ ಉದಯಭದ್ರ ಅಥವಾ ಉದಾಯಿನ್ ಎಂಬ ಪುತ್ರನಿದ್ದ. ಇವನೇ ಪಾಟಲಿಪುತ್ರ ನಗರವನ್ನು ನಿರ್ಮಿಸಿ ತನ್ನ ರಾಜಧಾನಿಯನ್ನು ರಾಜಗೃಹದಿಂದ ಅಲ್ಲಿಗೆ ವರ್ಗಾಯಿಸಿದ. ದುರದೃಷ್ಟವಶಾತ್ ಇವನೂ ತನ್ನ ತಂದೆ ಅಜಾತಶತ್ರುವನ್ನು ಕೊಂದ! ಅನಂತರ ಇವನ ಮಗ ಅನುರುದ್ಧ, ಅವನು ಮಗ ಮುಂಡ, ಮತ್ತು ಅವನ ಮಗ ನಾಗದಾಸಕ, ಮಗ ಅಪ್ಪನನ್ನು ಕೊಲ್ಲುವ ಅದೇ ದಾರಿಯಲ್ಲಿ ನಡೆದರು! ಇದರಿಂದ ಪ್ರಜೆಗಳು ರೋಸಿಹೋಗಿ ನಾಗದಾಸಕನನ್ನು ರಾಜ್ಯದಿಂದಲೇ ಓಡಿಸಿ ಒಬ್ಬ ಅಮಾತ್ಯನನ್ನು ಪಟ್ಟಕ್ಕೇರಿಸಿದರು. ಅವನೇ ಶಿಶುನಾಗ.‌ ಶಿಶುನಾಗನು ಪ್ರದ್ಯೋತರನ್ನು ಸೋಲಿಸಿ ಅವಂತಿಯನ್ನು ಗೆದ್ದು ವಶಪಡಿಸಿಕೊಂಡನು.‌ಈ ಶಿಶುನಾಗನ ಮಗನೇ ಕಾಲಾಶೋಕ. ಈ ಕಾಲಾಶೋಕ ಅಥವಾ ಕಾಕವರ್ಣ. ಕಾಲಾಶೋಕ, ತನ್ನ ರಾಜಧಾನಿಯನ್ನು ಗಿರಿವ್ರಜದಿಂದ ( ರಾಜಗೃಹ) ಪಾಟಲಿಪುತ್ರಕ್ಕೆ ಬದಲಿಸಿದ. ಆದರೆ ಆಗಾಗ ಅವನು ತನಗೆ ಪ್ರಿಯವಾಗಿದ್ದ ವೈಶಾಲಿಗೆ ಹೋಗುತ್ತಿದ್ದ.
 ಕಾಲಾಶೋಕ ನಮಗೆ ಏಕೆ ಮುಖ್ಯನಾಗುವನೆಂದರೆ, ಇವನ ಆಳ್ವಿಕೆಯ ಸಮಯದಲ್ಲೇ ಎರಡನೇ ಬೌದ್ಧ ಸಂಗೀತಿ ವೈಶಾಲಿಯಲ್ಲಿ ನಡೆಯಿತು. ಆಗ ಬುದ್ಧನು ಪರಿನಿರ್ವಾಣ ಹೊಂದಿ ನೂರು ವರ್ಷಗಳಾಗಿದ್ದವು. ವೃಜ್ಜಿ ಗಣದ ಕೆಲವು ಬೌದ್ಧ ಸಂನ್ಯಾಸಿಗಳು ಸಂಘದ ನಿಯಮಗಳನ್ನು ಸಡಿಲಗೊಳಿಸಬೇಕೆಂದು ತಗಾದೆ ತೆಗೆದಿದ್ದರು. ಅದನ್ನು ಚರ್ಚಿಸಲೆಂದೇ ಈ ಎರಡನೆಯ ಬೌದ್ಧ ಸಂಗೀತಿಯನ್ನು ನಡೆಸಲಾಯಿತು. ನಾಲ್ಕು ಬೌದ್ಧ ಸಂಗೀತಿಗಳು ನಡೆದವೆಂದು ಇಲ್ಲಿ ಸ್ಮರಿಸಬಹುದು. ಮೊದಲನೆಯದು ಅಜಾತಶತ್ರುವಿನ ಆಳ್ವಿಕೆಯಲ್ಲಿ ರಾಜಗೃಹದಲ್ಲಿ ನಡೆಯಿತು. ಎರಡನೆಯದು ಈಗ ಹೇಳಲಾಯಿತು. ಮೂರನೆಯದು ಸಮ್ರಾಟ್ ಅಶೋಕನ ಆಳ್ವಿಕೆಯಲ್ಲಿ ಪಾಟಲಿಪುತ್ರದಲ್ಲಿ ನಡೆದರೆ, ನಾಲ್ಕನೆಯದು ಕಾಶ್ಮೀರದಲ್ಲಿ ಕನಿಷ್ಕ ರಾಜನ ಆಳ್ವಿಕೆಯಲ್ಲಿ ನಡೆಯಿತು.‌
     ಇಂಥ ಕಾಲಾಶೋಕ ದುರಂತ ಅಂತ್ಯವನ್ನು ಕಂಡನು! ನೋಡಲು ಸುಂದರನಾಗಿ, ಕಟ್ಟುಮಸ್ತಾದ ದೇಹವನ್ನು ಹೊಂದಿದ್ದ ಒಬ್ಬ ಪುರುಷ, ಕಾಲಾಶೋಕನ ರಾಣಿಯನ್ನು ಒಮ್ಮೆ ಆಕರ್ಷಿಸಿದ! ಇವನು ಒಬ್ಬ ಕ್ಷೌರಿಕ ಹಾಗೂ ವೇಶ್ಯೆಯರಿಗೆ ಹುಟ್ಟಿದ ಮಗನಾಗಿದ್ದ! ಅವನು ರಾಣಿಯ ಪ್ರಿಯಕರನಾಗಿ ಅವಳ ಬೆಂಬಲದಿಂದ ಅರಮನೆಗೆ ಬಂದು ರಾಜನಿಗೆ ಹತ್ತಿರವಾದ. ರಾಜನ ವಿಶ್ವಾಸಗಳಿಸಿ, ಒಂದು ದಿನ, ಅವನನ್ನು ಪಾಟಲಿಪುತ್ರದ ಬಳಿ, ಅವನ ಕುತ್ತಿಗೆಯನ್ನು ಕಠಾರಿಯಿಂದ ಸೀಳಿ ಕೊಂದುಬಿಟ್ಟ! ಅನಂತರ, ಅವನ ಹತ್ತು ಪುತ್ರರಿಗೆ ಮೇಲ್ವಿಚಾರಕನಂತೆ ನಟಿಸುತ್ತಾ ಅವರೆಲ್ಲರನ್ನೂ ನಿಧಾನವಾಗಿ ಕೊಂದುಬಿಟ್ಟ! ರಾಣಿಯನ್ನು ವರಿಸಿ ರಾಜ್ಯವನ್ನು ವಶಪಡಿಸಿಕೊಂಡ! ಇವನು ಬೇರಾರೂ ಅಲ್ಲ! ಮಹಾಪದ್ಮನಂದ! ಇವನಿಗೆ ಎಂಟು ಪುತ್ರರು ಜನಿಸಿದರು! ಇವರೆಲ್ಲರೂ ಸೇರಿ ನವನಂದರೆನಿಸಿದರು ಹಾಗೂ ಇವರಿಂದ ನಂದ ವಂಶ ಆರಂಭವಾಯಿತು! ಇವರಲ್ಲಿ ಕೊನೆಯವನೇ ಧನನಂದ! ದೊಡ್ಡ ಸೈನ್ಯವನ್ನು ಇಟ್ಟುಕೊಂಡಿದ್ದ ಈ ನಂದರು ದುರಾಸೆಯ ಪ್ರವೃತ್ತಿಯುಳ್ಳವರಾಗಿದ್ದು ಪ್ರಜೆಗಳನ್ನು ಶೋಷಣೆ ಮಾಡಿದರು! ಇದರಿಂದ ಪ್ರಜೆಗಳು ಇವರನ್ನು ಇಷ್ಟಪಡಲಿಲ್ಲ. ಮುಂದೆ, ಆಚಾರ್ಯ ಚಾಣಕ್ಯನು ಚಂದ್ರಗುಪ್ತ ಮೌರ್ಯನ ಸಹಾಯದಿಂದ ಇವರ ದುರಾಡಳಿತವನ್ನು ಕೊನೆಗೊಳಿಸಿ, ಚಂದ್ರಗುಪ್ತ ಮೌರ್ಯನನ್ನು ರಾಜನಾಗಿ ಸ್ಥಾಪಿಸುವುದರ ಮೂಲಕ ಮೌರ್ಯ ಸಾಮ್ರಾಜ್ಯವನ್ನು ಆರಂಭಿಸಿದನು. ಅದು ಇನ್ನೊಂದು ರೋಚಕ ಕಥೆ.
    ಇದು ಬೌದ್ಧ,ಜೈನ ಗ್ರಂಥಗಳು ಹಾಗೂ ನಮ್ಮ ಪುರಾಣಗಳಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸಗಳಿಂದ ಕಂಡುಬರುತ್ತದೆ. ನಮ್ಮ ಪುರಾಣಗಳಲ್ಲಿ ಶಿಶುನಾಗ ಮತ್ತು ಕಾಕವರ್ಣ ( ಕಾಲಾಶೋಕ) ರನ್ನು ಬಿಂಬಿಸಾರ, ಅಜಾತಶತ್ರುಗಳಿಗೂ ಮೊದಲಿನವರೆಂದು ಹೇಳಲಾಗಿದ್ದು ಈ ಪಟ್ಟಿಯಲ್ಲಿ ಕೊನೆಯದಾಗಿ ನಂದಿವರ್ಧನ ಮತ್ತು ಮಹಾನಂದಿ ಎಂಬ ರಾಜರು ಬರುತ್ತಾರೆ. ಮಹಾನಂದಿಯು ಒಬ್ಬ ಶೂದ್ರ ಸ್ತ್ರೀಯಿಂದ ಪಡೆದ ಪುತ್ರನೇ ಮಹಾಪದ್ಮಪತಿ ಅಥವಾ ಮಹಾಪದ್ಮನಂದ. ಅವನು ಎಲ್ಲಾ ಕ್ಷತ್ರಿಯರನ್ನೂ ನಾಶಮಾಡಿ ನಂದವಂಶವನ್ನು ಆರಂಭಿಸಿದ. ಜೈನ ಗ್ರಂಥ ಪರಿಶಿಷ್ಟ ಪರ್ವದ ಪ್ರಕಾರ, ಮಹಾಪದ್ಮನಂದನು ಒಬ್ಬ ಕ್ಷೌರಿಕ ಹಾಗೂ ವೇಶ್ಯೆಯರಿಗೆ ಹುಟ್ಟಿದ ಮಗನಾಗಿದ್ದ. ಕುರ್ಟಿಯಸ್ ಎಂಬ ಗ್ರೀಕ್ ಇತಿಹಾಸಕಾರನೂ ಅವನು ಒಬ್ಬ ಕ್ಷೌರಿಕ ಎಂದು ಹೇಳುತ್ತಾ ಮೇಲಿನ ಕಥೆ ಕೊಡುತ್ತಾನೆ. ಬೌದ್ಧ ಗ್ರಂಥ ಮಹಾವಂಶದ ಪ್ರಕಾರ, ಅವನು ಉಗ್ರಸೇನನೆಂಬ ಗಡಿಯಲ್ಲಿನ ಕಳ್ಳರ ದೊರೆಯಾಗಿದ್ದು ರಾಜ್ಯಗಳ ಮೇಲೆ ಆಕ್ರಮಣ ಮಾಡುತ್ತಾ ಅವುಗಳನ್ನು ಕಿತ್ತುಕೊಳ್ಳುತ್ತಿದ್ದ. ಹಾಗೆಯೇ ಮಗಧವನ್ನೂ ಆಕ್ರಮಿಸಿ ವಶಪಡಿಸಿಕೊಂಡ. ಇತರ ಎಂಟು ನಂದರು ಅವನ ಸಹೋದರರು. ‌ಹೀಗೆ ನವನಂದರ ಬಗ್ಗೆ ಪುರಾಣಗಳು, ಬೌದ್ಧ ಮತ್ತು ಜೈನ ಗ್ರಂಥಗಳಲ್ಲಿ ಸ್ವಲ್ಪ ವ್ಯತ್ಯಾಸಗಳಿವೆ. ಬಾಣಭಟ್ಟನ ಹರ್ಷಚರಿತೆಯಲ್ಲಿ ಕಾಲಾಶೋಕ ಅಥವಾ ಕಾಕವರ್ಣನು ಕಠಾರಿಯ ಇರಿತದಿಂದ ಸತ್ತ ಉಲ್ಲೇಖವಿದೆ. ಅವಂತಿಯ ಪ್ರದ್ಯೋತನು ಬಿಂಬಿಸಾರನ ಸಮಕಾಲೀನನಾಗಿದ್ದು ಪ್ರದ್ಯೋತರೆಂಬ ವಂಶಾವಳಿಯನ್ನು ಆರಂಭಿಸಿದ.‌ ಇವನಿಗೂ ಬಿಂಬಿಸಾರನಿಗೂ ವೈರತ್ವವಿತ್ತು. ಅಂದರೆ ಮಗಧಕ್ಕೂ ಅವಂತಿಗೂ ವೈರತ್ವವಿತ್ತು. ಶಿಶುನಾಗನು ಪ್ರದ್ಯೋತರನ್ನು ಸೋಲಿಸಿ ಅವಂತಿಯನ್ನು ವಶಪಡಿಸಿಕೊಂಡನೆಂದು ಪುರಾಣಗಳಲ್ಲಿ ಹೇಳಲಾಗಿದೆ. ಆದರೆ ಅದೇ ಪುರಾಣಗಳ ಪ್ರಕಾರ ಅವನು ಬಿಂಬಿಸಾರನಿಗೂ ಪೂರ್ವದಲ್ಲಿದ್ದಿದ್ದರೆ ಹಾಗೆ ಮಾಡಲಾಗುತ್ತಿರಲಿಲ್ಲ. ಹಾಗಾಗಿ, ಅವನು ಮತ್ತು ಅವನ ಪುತ್ರ ಕಾಲಾಶೋಕ, ಬಿಂಬಿಸಾರ, ಅಜಾತಶತ್ರುಗಳ ನಂತರ ಇರುವ ಬೌದ್ಧ ಗ್ರಂಥಗಳ ಪಟ್ಟಿಯೇ ಹೆಚ್ಚು ಸಮರ್ಪಕ ಎಂದು ಇತಿಹಾಸಕಾರರಾದ ಆರ್.ಸಿ.ಮಜುಂದಾರರು ಅಭಿಪ್ರಾಯಪಡುತ್ತಾರೆ.
      ಹೀಗೆ ಕಾಲಾಶೋಕ ನಮಗೆ ಅಷ್ಟು ಪರಿಚಿತವಲ್ಲದ ಹೆಸರು. ಅವನ ಹೆಂಡತಿಯ ಮೋಸದಿಂದ ಅವಳ ಪ್ರಿಯಕರ ಮಹಾಪದ್ಮನಂದನಿಂದ ಕೊಲ್ಲಲ್ಪಟ್ಟ ಅವನಿಂದ ಶಿಶುನಾಗ ವಂಶ ಕೊನೆಯಾಗಿ ನಂದವಂಶ ಆರಂಭವಾಯಿತು. 

ಸೋಮವಾರ, ಮೇ 4, 2026

ಸುಂದರೀಶತಕ -೩೩

ಸಂಸ್ಕೃತ ಮೂಲ 

ಅಂಗಂ ಕೋಮಲಮಂಗಾದಧರೋsಧರತೋsಪಿ ಚಂದ್ರಮುಖಿ ವಚನಮ್ /
ವಚನಾದಪಿ ಸ್ಮಿತಂ ತೇ ತತ್ಕಥಮಂತರ್ಭಿನತ್ತಿ ಮಮ //

ಕನ್ನಡ ಅನುವಾದ 

     ' ಎಲೈ ಚಂದ್ರಮುಖಿ! ನಿನ್ನ ದೇಹವು ಬಹಳ ಕೋಮಲವಾಗಿದೆ! ನಿನ್ನ ದೇಹಕ್ಕಿಂತಲೂ ನಿನ್ನ ಅಧರ ಬಹಳ ಕೋಮಲವಾಗಿದೆ! ಆ ಅಧರಕ್ಕಿಂತಲೂ ನಿನ್ನ ಮಾತು ಕೋಮಲವಾಗಿದೆ! ಇಷ್ಟು ಕೋಮಲವಾಗಿದ್ದರೂ ನಿನ್ನ ನಗುವು ಏಕೆ ನನ್ನ ಹೃದಯವನ್ನು ಸೀಳುತ್ತಿದೆ?!' 
    ಅತ್ಯಂತ ಕೋಮಲವಾದ ಸುಂದರಿಯ ನಗುವು ಪ್ರೇಮಿಯ ಹೃದಯಕ್ಕೆ ಹಿತವನ್ನುಂಟುಮಾಡಬೇಕು. ಆದರೆ ಅದು ಪ್ರೇಮಿಗೆ ಸಿಗದೇ ದೂರವಾಗಿದ್ದಾಗ ವಿರಹವೇದನೆಯುಂಟುಮಾಡಿ ಹೃದಯವನ್ನು ಸೀಳುವಂತಾಗುತ್ತದೆ! ಇಷ್ಟು ಕೋಮಲವಾದ ಸುಂದರಿಯ ನಗುವು ಹೇಗೆ ನನ್ನ ಹೃದಯವನ್ನು ಸೀಳುತ್ತಿದೆ ಎಂದು ಪ್ರೇಮಿಯ ಮೂಲಕ ಹೇಳಿಸುತ್ತಾ ಕವಿಯು ಸಂದೇಹಾಲಂಕಾರದ ಮೂಲಕ ಸುಂದರಿಯ ನಗುವನ್ನು ವರ್ಣಿಸುತ್ತಾನೆ 

ಭಾನುವಾರ, ಮೇ 3, 2026

ಸುಂದರೀಶತಕ -೩೨

ಸಂಸ್ಕೃತ ಮೂಲ 

ಸುಂದರಿ ತವ ಸ್ಮಿತೇನ ಸ್ಫುರಿತಾಧರಪಲ್ಲವಾಂಕಮಿಲಿತೇನ /
ಮಕರಧ್ವಜನೃಪಹಸ್ತೇ ವದ ಕಸ್ಯ ಮನೋ ನ ವಿಕ್ರೀತಮ್ //

ಕನ್ನಡ ಅನುವಾದ 

     ಎಲೈ ಸುಂದರಿ! ಅದುರುತ್ತಿರುವ ನಿನ್ನ ಪಲ್ಲವಾಧರದೊಂದಿಗೆ ಮಿಳಿತವಾಗಿರುವ ನಿನ್ನ ನಗುವಿನಿಂದ ಯಾರ ಮನಸ್ಸು ತಾನೇ ಕಾಮದೇವ ಮಹಾರಾಜನ ಹಸ್ತಕ್ಕೆ ವಿಕ್ರೀತವಾಗುವುದಿಲ್ಲ ಹೇಳು!' 
      ಸುಂದರಿಯ ಸುಂದರ ನಗುವಿನ ಮೂಲಕ ಮಹಾರಾಜ ಕಾಮದೇವನು ಯುವಜನರ ಮನಸ್ಸನ್ನು ಖರೀದಿಸುತ್ತಿದ್ದಾನೆ! ಇಂಥ ನಗುವಿನ ಮೂಲಕ ಯಾರ ಮನಸ್ಸು ತಾನೇ ವಿಕ್ರೀತವಾಗುವುದಿಲ್ಲ ಎಂದು ಕೇಳುತ್ತಾ ಕವಿಯು ಸುಂದರಿಯ ನಗುವನ್ನು ವರ್ಣಿಸುತ್ತಾನೆ.

ಸುಂದರೀಶತಕ -೩೧

ಸಂಸ್ಕೃತ ಮೂಲ 

ಜಯತಿ ಸ್ಮಿತಪ್ರಕಾರ: ಸ್ಫುರದಧರೋಪಾಂತವಿಶ್ರಮಸ್ತಸ್ಯಾ: /
ಕುಸುಮಾಂಜಲಿರಿವ ದತ್ತೋ ನವೇನ ವಯಸಾ ರತೀಶಾಯ //

ಕನ್ನಡ ಅನುವಾದ 

    ' ಈ ಸುಂದರಿಯ ಅದುರುತ್ತಿರುವ ಅಧರದ ಅಂಚಿನಲ್ಲಿ ಮೂಡಿರುವ ನಗು, ಇವಳ ನವಯೌವನವು ರತಿಪತಿಯಾದ ಕಾಮದೇವನಿಗೆ ನೀಡಿದ ಪುಷ್ಪಾಂಜಲಿಯಂತಿದ್ದು ವಿಜಯಶಾಲಿಯಾಗುತ್ತದೆ!' 
      ಸುಂದರಿಯ ಅದುರುತ್ತಿರುವ ಅಧರದ ಅಂಚಿನಲ್ಲಿ ಮೂಡಿರುವ ನಗು ಒಂದು ಪುಷ್ಪಾಂಜಲಿ, ಅಂದರೆ ಹೂವಿನ ಅರ್ಪಣೆಯಂತಿದೆ ಎನ್ನುತ್ತಾನೆ ಕವಿ. ಆ ಹೂವಿನ ಅರ್ಪಣೆಯನ್ನು ಯಾರು ಯಾರಿಗೆ ಮಾಡುತ್ತಿದ್ದಾರೆ? ಅವಳ ನವಯೌವನವೇ ರತಿಪತಿಯಾದ ಕಾಮದೇವನಿಗೆ ಅರ್ಪಣೆ ಮಾಡುತ್ತಿದೆ! ಇಂಥ ನಗು ವಿಜಯಶಾಲಿಯಾಗುತ್ತದೆ ಎನ್ನುತ್ತಾ, ಕವಿಯು ಸುಂದರಿಯ ಸುಂದರ ನಗು ಹಾಗೂ ನವಯೌವನವನ್ನು ವರ್ಣಿಸುತ್ತಾನೆ.

ಸುಂದರೀಶತಕ -೩೦

ಸಂಸ್ಕೃತ ಮೂಲ 

ಕುಸುಮಶರನೃಪತಿಶಾಸನಮಭಿನವಸೌಂದರ್ಯಸಾರಸೌಭಾಗ್ಯಮ್  /
ಯುವಜನಮನೋವಿನೋದೋ ಜಯತಿ ಪ್ರಥಮಂ ವಯಸ್ತಸ್ಯಾ:  //

ಕನ್ನಡ ಅನುವಾದ 

      ಕಾಮದೇವ ಮಹಾರಾಜನ ಶಾಸನವು ಈ ಸುಂದರಿಯ ನವಯೌವನ ಸೌಂದರ್ಯಸಾರಸೌಭಾಗ್ಯ! ಯುವಜನರ ಮನಸ್ಸಿಗೆ ವಿನೋದವಾಗಿರುವ ಇವಳ ಈ ಪ್ರಥಮ ವಯಸ್ಸು ಜಯಶಾಲಿಯಾಗುತ್ತದೆ! ' 
      ಸುಂದರಿಯಲ್ಲಿ ಬಂದಿರುವ ನವಯೌವನದ ಸೌಂದರ್ಯವನ್ನು ಕಾಮದೇವನೆಂಬ ರಾಜನ ಶಾಸನಕ್ಕೆ ಹೋಲಿಸುತ್ತಾನೆ ಕವಿ.‌ ಈ ಶಾಸನವೆಂಬ ಸೌಂದರ್ಯ, ಯುವಜನರ ಮನಸ್ಸಿಗೆ ವಿನೋದವುಂಟುಮಾಡುತ್ತಿದೆ! ಇವಳ‌ ಸೌಂದರ್ಯವನ್ನು ನೋಡಿ ಅವರು ಸಂತೋಷಪಡುತ್ತಿದ್ದಾರೆ! ಇಂಥ ಸೌಂದರ್ಯ, ವಿಜಯಶಾಲಿಯಾಗುತ್ತದೆ ಎನ್ನುತ್ತಾನೆ. 

ಸುಂದರೀಶತಕ -೨೯

ಸಂಸ್ಕೃತ ಮೂಲ 

ಶರಣಮಿವ ಯಾಚಮಾನಂ ಕ್ವಚಿತ್ಕ್ವಚಿತದ್ಬಾಲ್ಯಮಂಗೇಷು /
ಭ್ರಮತಿ ಮನೋಜನಿದೇಶಾದಧಿಕಾರಿಣಿ ಯೌವನೇ ಭವತಿ //

ಕನ್ನಡ ಅನುವಾದ 

     ' ಮನೋಜನಾದ ಕಾಮದೇವನ ಆಜ್ಞೆಯಂತೆ ಯೌವನವು ಈ ಸುಂದರಿಯ ಶರೀರದಲ್ಲಿ ಆಗಮಿಸಿ ಅಧಿಕಾರಿಣಿಯಾದಾಗ, ಅದರಿಂದ ಉಳಿಯಲು ಬಾಲ್ಯವು ಆಶ್ರಯ ಬೇಡುವಂತೆ ಕೆಲವಾರು ಅಂಗಾಂಗಗಳಲ್ಲಿ ಪರಿಭ್ರಮಿಸುತ್ತಿದೆ!' 
      ಸುಂದರಿಯ ಶರೀರಕ್ಕೆ ಈಗಷ್ಟೇ ಯೌವನವು ಬಂದಿದೆ! ಆದರೆ ಬಾಲ್ಯವು ಇನ್ನೂ ಪೂರ್ತಿ ಹೋಗಿಲ್ಲ. ಹಾಗಾಗಿ ಇದು ವಾಯು:ಸಂಧಿಕಾಲದ ಚಿತ್ರಣ. ಯೌವನವು ಬಂದರೂ ಬಾಲ್ಯದ ಆ ಮುಗ್ಧ ಭಾವ, ಕಂಗಳ ಚಂಚಲತೆ, ತುಂಟು ಮುಖ, ಮುದ್ದು ಮಾತು, ಮೊದಲಾದವು ಇನ್ನೂ ಸ್ವಲ್ಪ ಸ್ವಲ್ಪ ಇವೆ. ಹೀಗೆ, ಇದು ನವಯೌವನವು ಬಾಲ್ಯದೊಂದಿಗೆ ಬೆರೆತಿರುವ ಮಧುರ ಭಾವ! ಇದನ್ನು ಕವಿಯು ಸ್ವಾರಸ್ಯಕರವಾಗಿ ಚಿತ್ರಿಸುತ್ತಾನೆ. ಕಾಮದೇವನ ಆಜ್ಞೆಯಂತೆ ದೇಹಕ್ಕೆ ಯೌವನವು ಬಂದು ಅಧಿಕಾರಿಣಿಯಾದಾಗ, ಬಾಲ್ಯವು ತಾನು ನಾಶವಾಗುವೆನೆಂದು ಹೆದರಿ, ಹೇಗಾದರೂ ಉಳಿಯಲು ಕೆಲವು ಅಂಗಾಂಗಗಳಲ್ಲಿ ತನ್ನನ್ನು ಉಳಿಸಿಕೊಳ್ಳಲು ಆಶ್ರಯ ಬೇಡುವಂತೆ ಅಲ್ಲಲ್ಲಿ ಪರಿಭ್ರಮಿಸುತ್ತಿದೆ ಎಂದು ವರ್ಣಿಸುತ್ತಾನೆ! 

ಗುರುವಾರ, ಏಪ್ರಿಲ್ 30, 2026

ನರಸಿಂಹಾವತಾರ ಕಥೆಯ ಮೂರು ಪಾಠಗಳು

ನಾವು ಪುರಾಣ ಪ್ರಪಂಚದಲ್ಲಿ ವಿಹರಿಸುತ್ತಿದ್ದಂತೆ ನಮಗೆ ಅಗಾಧ ಪ್ರಮಾಣದಲ್ಲಿ ಮುತ್ತು ರತ್ನಗಳಂತೆ ಕಥೆಗಳು ದೊರೆಯುತ್ತವೆ! ಈ ಮುತ್ತು ರತ್ನಗಳಲ್ಲಿ ಕೆಲವು ಬಹುತೇಕ ಒಂದೇ ರೀತಿ ಇದ್ದು, ಸ್ವಲ್ಪ ಮಾತ್ರ ವ್ಯತ್ಯಾಸ ಹೊಂದಿದ್ದಾರೆ ಹೇಗನಿಸುತ್ತದೆ? ಆ ಸಣ್ಣ ವ್ಯತ್ಯಾಸದಲ್ಲೂ ನಾವು ಸಂತೋಷಪಡುತ್ತೇವೆ! ಹಾಗೆಯೇ ಪೌರಾಣಿಕ ಕಥೆಗಳಲ್ಲೂ ಪಾಠಾಂತರಗಳಿದ್ದರೆ ಒಂದು ರೀತಿ ಸೊಗಸಾಗಿರುತ್ತದೆ! ಒಂದೇ ಕಥೆಯನ್ನು ಎರಡು ಮೂರು ರೀತಿಗಳಲ್ಲಿ ಹೇಳಬಹುದಲ್ಲಾ ಎಂದು ವಿಸ್ಮಯವಾಗುತ್ಚದೆ! ಅವುಗಳ ತೌಲನಿಕ ಅಧ್ಯಯನ ಮಾಡುವುದು ಸ್ವಾರಸ್ಯಕರವಾಗಿರುತ್ತದೆ! ಈ ಕಥೆಗಳು ಹೀಗೇಕೆ ಒಂದೊಂದು ಪುರಾಣದಲ್ಲಿ ಒಂದೊಂದು ರೀತಿಯಿದೆ ಎಂದು ಕೇಳಿದರೆ, ಪುರಾಣಕಾರರು ಅವು ಬೇರೆ ಬೇರೆ ಕಲ್ಪಗಳಲ್ಲಿ ನಡೆದಿದ್ದು ಎಂದು ಉತ್ತರ ಕೊಡುತ್ತಾರೆ. ಕಲ್ಪ ಎಂದರೆ ಬ್ರಹ್ಮನ ಒಂದು ದಿನ.‌ ಇತಿಹಾಸ ಪುನರಾವರ್ತನೆಯಾಗುತ್ತದೆ ಎನ್ನುವಂತೆ, ಪುರಾಣ ಕಥೆಗಳೂ ಮತ್ತೆ ಮತ್ತೆ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಮತ್ತೆ ಮತ್ತೆ ನಡೆಯುತ್ತವೆ.‌ ವಿಷ್ಣು ಪುರಾಣದಲ್ಲಿ, ಪರಾಶರರು ಮೈತ್ರೇಯ ಮಹರ್ಷಿಗಳಿಗೆ ಕಥೆ ಹೇಳುತ್ತಾ ಲಕ್ಷ್ಮಿ ಭೃಗು ಮಹರ್ಷಿ ಮತ್ತು ಖ್ಯಾತಿಯ ಪುತ್ರಿಯಾಗಿ ಹುಟ್ಟಿದಳು ಎನ್ನುತ್ತಾರೆ. ಆಗ ಮೈತ್ರೇಯರು ಲಕ್ಷ್ಮಿಯು ಸಮುದ್ರಮಥನ ಮಾಡಿದಾಗ ಹುಟ್ಟಿದಳೆಂದು ತಾವು ಕೇಳಿದ್ದೇವಲ್ಲಾ ಎಂದಾಗ, ಪರಾಶರರು ಬೇರೆ ಬೇರೆ ಕಲ್ಪಗಳಲ್ಲಿ ಲಕ್ಷಿ ಬೇರೆ ಬೇರೆ ರೀತಿಗಳಲ್ಲಿ ಹುಟ್ಟಿ ಬರುತ್ತಾಳೆ, ಹಾಗೆಯೇ ಅನೇಕ ಪೌರಾಣಿಕ ಕಥೆಗಳೂ ಬೇರೆ ಬೇರೆ ಕಲ್ಪಗಳಲ್ಲಿ ಬೇರೆ ಬೇರೆ ರೀತಿಗಳಲ್ಲಿ ನಡೆಯುತ್ತವೆ ಎಂದು ಸಮಾಧಾನ ಹೇಳುತ್ತಾರೆ. ಹೀಗೆ ನಮ್ಮ ಶ್ರದ್ಧೆಯ ಪ್ರಕಾರ, ಎಲ್ಲಾ ಪುರಾಣಗಳನ್ನೂ ಮಹಾಭಾರತವನ್ನೂ ವೇದವ್ಯಾಸರೇ ರಚಿಸಿದರೂ ಕೆಲವು ಕಥೆಗಳು ಬೇರೆ ಬೇರೆ ಗ್ರಂಥಗಳಲ್ಲಿ ಸ್ವಲ್ಪ ವಿಭಿನ್ನವಾಗಿರುತ್ತವೆ. ಇವು ಬಾಯಿಂದ ಬಾಯಿಗೆ ಹರಡಿದುದರಿಂದ ಬೇರೆ ಬೇರೆ ರೀತಿಯಲ್ಲಿ ಹೇಳಲಾಗಿವೆಯೆಂದೂ, ವ್ಯಾಸರು ಮೂಲತಃ ಮಹಾಭಾರತದೊಂದಿಗೆ ಪುರಾಣ ಸಂಹಿತೆ ಎಂದು ಒಂದು ಗ್ರಂಥ ರಚಿಸಿರಬಹುದೆಂದೂ ಅದೇ ಕಥೆಗಾರರ ಮೂಲಕ ಹದಿನೆಂಟು ಮಹಾಪುರಾಣಗಳು ಹಾಗೂ ಹದಿನೆಂಟು ಉಪಪುರಾಣಗಳಾಗಿ ಕವಲೊಡೆದಿರಬಹುದೆಂದೂ ಆಧುನಿಕ ವಿದ್ವಾಂಸರ ಅಂಬೋಣ. ಅದೇನೇ ಇದ್ದರೂ ಕೆಲವು ಕಥೆಗಳಲ್ಲಿನ ವಿಭಿನ್ನತೆಗಳು ಸ್ವಾರಸ್ಯಕರವಾಗಿರುತ್ತವೆ.
      ಈಗ ನರಸಿಂಹಾವತಾರದ ಮೂರು ವಿಭಿನ್ನ ರೀತಿಯ ಕಥೆಗಳನ್ನು ನೋಡೋಣ. ಹೆಚ್ಚು ಪ್ರಚಲಿತವೂ ಪ್ರಸಿದ್ಧವೂ ಆಗಿರುವುದು ಭಾಗವತ ಪುರಾಣದ ಕಥೆ. ವಿಷ್ಣುವು ವರಾಹಾವತಾರ ತಾಳಿ ಹಿರಣ್ಯಾಕ್ಷ ದೈತ್ಯನನ್ನು ವಧಿಸಲು, ಕುಪಿತಗೊಂಡ ಅವನ ಅಣ್ಣ ಹಿರಣ್ಯಕಶಿಪುವು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ, ಹಗಲಿನಲ್ಲಾಗಲಿ ರಾತ್ರಿಯಲ್ಲಾಗಲಿ, ಮನೆಯ ಒಳಗಾಗಲಿ ಹೊರಗಾಗಲಿ, ಆಕಾಶದಲ್ಲಾಗಲಿ ಭೂಮಿಯ ಮೇಲಾಗಲಿ, ಯಾವುದೇ ಆಯುಧದಿಂದಾಗಲಿ, ಸುರನರೋರಗಯಕ್ಷರಾಕ್ಷಸಗಂಧರ್ವಕಿನ್ನರಕಿಂಪುರುಷರಿಂದಾಗಲಿ, ಪಶುಪಕ್ಷಿಕ್ರಿಮಿಕೀಟಾದಿ ಬ್ರಹ್ಮ ಸೃಷ್ಟಿಯ ಯಾವುದೇ ಜೀವಿಯಿಂದಾಗಲಿ ತನಗೆ ಮರಣವುಂಟಾಗಬಾರದೆಂಬ ವರವನ್ನು ಪಡೆದ. ಈ ವರದಿಂದ ಗರ್ವಿತನಾಗಿ ಮೂರು ಲೋಕಗಳಿಗೂ ಕಂಟಕಪ್ರಾಯನಾಗಿ ಸ್ವರ್ಗವನ್ನೂ ಆಕ್ರಮಿಸಿಕೊಂಡ! ಋಷಿಮುನಿಗಳನ್ನು ಹಿಂಸಿಸಿ ಎಲ್ಲೆಲ್ಲೂ ಹರಿ ಪೂಜೆಯನ್ನು ನಿಷೇಧಿಸಿ ತನ್ನ ಪೂಜೆಯನ್ನು ಮಾಡಬೇಕೆಂದು ಆದೇಶ ಹೊರಡಿಸಿದ! 
     ಹಿರಣ್ಯಕಶಿಪು ತಪಸ್ಸಿಗೆ ಹೋಗಿದ್ದಾಗ ಅವನ ಪತ್ನಿ ಕಯಾದುವು ಗರ್ಭಣಿಯಾಗಿದ್ದಳು. ಅವಳಿಗೆ ಮಗು ಹುಟ್ಟಿದರೆ ಅವನು ಹಿರಣ್ಯಕಶಿಪುವಿನಂತೆ ಇನ್ನೊಬ್ಬ ಲೋಕಕಂಟಕನಾಗುವನೆಂದು ಬಗೆದು ದೇವೇಂದ್ರನು ಅವಳನ್ನು ಅಪಹರಿಸಿ ಕೋಲ್ಲಲು ಹೊರಟನು. ಆಗ ನಾರದರು ಅಡ್ಡ ಬಂದು, ಅವಳ ಹೊಟ್ಟೆಯಲ್ಲಿ ಬೆಳೆಯುತ್ತಿರುವುದು ಒಬ್ಬ ಮಹಾಭಾಗವತನೆಂದು ಆಶ್ವಾಸಿಸಿ ಅವಳನ್ನು ತಮ್ಮ ಆಶ್ರಮಕ್ಕೆ ಕರೆದೊಯ್ದು ಉಪಚರಿಸಿದರು. ಅಲ್ಲಿ ಅವರು ಅವಳಿಗೆ ನಿತ್ಯವೂ ಹರಿಕಥೆಗಳನ್ನು ಹೇಳುತ್ತಾ ಹರಿಭಕ್ತಿಯ ಬಗ್ಗೆ ಉಪದೇಶ ಮಾಡುತ್ತಿರಲು, ಅವಳು ಅಷ್ಟಾಗಿ ಅವನ್ನು ಕೇಳದೆ ನಿದ್ರೆ ಹೋಗುತ್ತಿದ್ದಳು. ಆದರೆ ಅವಳ ಗರ್ಭದಲ್ಲಿದ್ದ ಮಗು ಎಲ್ಲವನ್ನೂ ಕೇಳಿ ಮಹಾಭಕ್ತನಾದನು. ಅವನೇ ಪ್ರಹ್ಲಾದ.‌
     ಹಿರಣ್ಯಕಶಿಪು ಲೋಕಕಂಟಕನಾಗಿರಲು, ದೇವತೆಗಳು ವಿಷ್ಣುವಿನ ಮೊರೆ ಹೊಕ್ಕು ತಮ್ಮನ್ನು ಕಾಪಾಡುವಂತೆ ಬೇಡಿದರು. ಆಗ ವಿಷ್ಣುವು, ಯಾವಾಗ ಹಿರಣ್ಯಕಶಿಪುವು ತನ್ನ ಮಗನನ್ನೇ ಹಿಂಸಿಸುವನೋ ಆಗ ತಾನು ಅವತಾರವೆತ್ತಿ ಅವನನ್ನು ವಧಿಸುವೆನೆಂದು ಆಶ್ವಾಸನೆಯಿತ್ತನು.
     ಮುಂದೆ, ಹಿರಣ್ಯಕಶಿಪುವು ಷಂಡ, ಅಮರ್ಕ ಎಂಬ ಶುಕ್ರಾಚಾರ್ಯರ ಇಬ್ಬರು ಪುತ್ರರ ಬಳಿಗೆ ಪ್ರಹ್ಲಾದನನ್ನು ವಿದ್ಯಾಭ್ಯಾಸಕ್ಕೆ ಕಳಿಸಿದ. ಬಹುಕಾಲದ ನಂತರ ಅವನು ಪ್ರಹ್ಲಾದನನ್ನು ಮನೆಗೆ ಕರೆಸಿಕೊಂಡು ಒಂದು ಸುಭಾಷಿತ ಹೇಳಲು ಕೇಳಿದಾಗ, ಪ್ರಹ್ಲಾದನು ಸಂಸಾರಕೂಪದಿಂದ ಪಾರಾಗಲು ಹರಿ ಸ್ಮರಣೆ ಮಾಡಬೇಕೆಂದನು. ಇದರಿಂದ ಕುಪಿತಗೊಂಡ ಹಿರಣ್ಯಕಶಿಪುವು ಯಾರೋ ಅವನ ತಲೆ ಕೆಡಿಸಿರಬೇಕೆಂದು ಯೋಚಿಸಿ, ಅವನಿಗೆ ಸರಿಯಾದ ಶಿಕ್ಷಣ ಕೊಡಬೇಕೆಂದು ಷಂಡಾಮರ್ಕರಿಗೆ ಆಗ್ರಹಿಸಿದ. ಅವರು ಅವನನ್ನು ಬೈದು, ಹೊಡೆದು, ಎಲ್ಲಾ ಮಾಡಿ, ಹಿರಣ್ಯಕಶಿಪುವನ್ನೇ ದೇವರೆಂದು ಪೂಜಿಸಬೇಕೆಂದು ಬೋಧಿಸಿದರೂ ಪ್ರಹ್ಲಾದನು ತನ್ನ ಪಟ್ಟು ಬಿಡಲಿಲ್ಲ. ನಾರಾಯಣನೇ ಭಗವಂತ, ಅವನನ್ನೇ ಭಜಿಸಬೇಕು ಎಂದು ಹೇಳುತ್ತಿದ್ದ. ಗುರುಗಳು ಅವನನ್ನು ಹಿರಣ್ಯಕಶಿಪುವಿನ ಬಳಿಗೆ ಕರೆತಂದು ಅವನು ಹೇಳುತ್ತಿರುವುದನ್ನು ತಾವು ಕಲಿಸಿಲ್ಲವೆಂದೂ ಅದು ಎಲ್ಲಿಂದ ಬರುತ್ತಿದೆಯೋ ಗೊತ್ತಿಲ್ಲ ಎಂದೂ ಹೇಳಿದರು. ಆಗ ಹಿರಣ್ಯಕಶಿಪುವು ಪ್ರಹ್ಲಾದನನ್ನು ಕೊಲ್ಲಿಸಲು ರಾಕ್ಷಸರಿಂದ ಹಿಂಸೆಗೊಳಿಸಿದನು, ಬೆಟ್ಟದಿಂದ ಬೀಳಿಸಿದನು, ಸಮುದ್ರಕ್ಕೆ ತಳ್ಳಿಸಿದನು, ಬೆಂಕಿಗೆ ದೂಡಿಸಿದನು, ಸರ್ಪಗಳಿಂದ ಕಚ್ಚಿಸಲು ಹಾಗೂ ಆನೆಯಿಂದ ತುಳಿಸಲು ಪ್ರಯತ್ನಿಸಿದನು. ಆದರೆ ಪ್ರಹ್ಲಾದನು ಹರಿದಯೆಯಿಂದ ಕೂದಲೂ ಕೊಂಕದೆ ಪಾರಾದನು. ಕೊನೆಗೆ ಅವನನ್ನು ಪುನಃ ಗುರುಕುಲಕ್ಕೆ ಕಳಿಸಲು ಅವನು ಇತರ ರಾಕ್ಷಸ ಬಾಲಕರಿಗೂ ಹರಿಭಜನೆ ಕಲಿಸಿ ಅವರನ್ನೂ ಭಕ್ತರನ್ನಾಗಿ ಮಾಡಿದನು. ಅವರಿಗೆ ಅನೇಕ ಆಧ್ಯಾತ್ಮಿಕ ಉಪದೇಶಗಳನ್ನು ನೀಡಿದನು. ಈ ಹರಿಭಕ್ತಿ, ಆಧ್ಯಾತ್ಮಿಕ ವಿಚಾರಗಳು ಅವನಿಗೆ ಹೇಗೆ ತಿಳಿದವೆಂದು ರಾಕ್ಷಸ ಬಾಲಕರು ಕೇಳಲು, ಅವನು ಗರ್ಭದಲ್ಲಿದ್ದಾಗ ನಾರದರು ಮಾಡಿದ ಉಪದೇಶದ ಕಥೆಯನ್ನು ಹೇಳಿದನು. ಇದೆಲ್ಲವನ್ನು ನೋಡಿ ರೋಸಿಹೋದ ಗುರುಗಳು ಪುನಃ ಅವನನ್ನು ತಂದೆಯ ಬಳಿಗೆ ಕರೆದುತರಲು, ಹಿರಣ್ಯಕಶಿಪುವು ಅವನಿಗೆ ವಿಷಪ್ರಾಶನ ಮಾಡಿಸಿದನು. ಆಗಲೂ ಪ್ರಹ್ಲಾದನು ಸಾಯಲಿಲ್ಲ.

  ಅತ್ಯಂತ ವಿಸ್ಮಿತನಾದ ಹಿರಣ್ಯಕಶಿಪು ಆಕ್ರೋಶದಿಂದ ತಾನೇ ಪ್ರಹ್ಲಾದನನ್ನು ಕೊಲ್ಲಲು ಮುಂದೆ ಬಂದು, "ಎಲ್ಲಿದ್ದಾನೆ ಆ ನಿನ್ನ ಹರಿ? ನಿನ್ನನ್ನು ಕಾಪಾಡಲು ಅವನನ್ನು ಕರೆ!" ಎಂದು ಆರ್ಭಟಿಸಿದನು. ಆಗ ಪ್ರಹ್ಲಾದನು ಹರಿಯು ಅಣು ರೇಣು ತೃಣ ಕಾಷ್ಠಾದಿ ಸಕಲ ಚರಾಚರ ವಸ್ತುಗಳಲ್ಲೂ ಇರುವನೆಂದು ದೃಢಭಕ್ತಿಯಿಂದ ಹೇಳಿದಾಗ, ಹಿರಣ್ಯಕಶಿಪುವು, ಹಾಗಿದ್ದರೆ ಅರಮನೆಯ ಕಂಬದಲ್ಲಿರುವನೇ ನೋಡೋಣ ಎಂದು ಒಂದು ಕಂಬವನ್ನು ಒಡೆಯಲು, ಪ್ರಹ್ಲಾದನ ಭಕ್ತಿ, ನಂಬಿಕೆಗಳನ್ನು ಉಳಿಸಲು ವಿಷ್ಣುವು ನರಸಿಂಹಸ್ವಾಮಿಯಾಗಿ ಅವತರಿಸಿ, ಹಿರಣ್ಯಕಶಿಪುವನ್ನು ತನ್ನ ತೊಡೆಯ ಮೇಲೆ ಹಾಕಿಕೊಂಡು, ಅರಮನೆಯ ಹೊಸ್ತಿಲ ಮೇಲೆ ಕುಳಿತು, ತನ್ನ ನಖಗಳಿಂದಲೇ ಅವನ ಉದರವನ್ನು ಬಗೆದು ಕೊಂದು ಅವನ ಕರುಳುಗಳನ್ನು ಮಾಲೆ ಹಾಕಿಕೊಂಡನು. ಆಗ ಸಂಜೆಯ ವೇಳೆಯಾಗಿತ್ತು. ಹಿರಣ್ಯಕಶಿಪುವಿನ ವರದಂತೆಯೇ ಎಲ್ಲವೂ ನಡೆದಿತ್ತು. ಆಗ ಹಗಲೂ ಅಲ್ಲದೇ ರಾತ್ರಿಯೂ ಅಲ್ಲದೆ, ಸಂಜೆಯಾಗಿತ್ತು. ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಹಿರಣ್ಯಕಶಿಪು ಸಾಯದೆ, ಮಧ್ಯದಲ್ಲಿ ನರಸಿಂಹನ ತೊಡೆಯ ಮೇಲೆ ಸತ್ತಿದ್ದನು. ಮನುಷ್ಯ, ದೇವ, ದೈತ್ಯ, ಮೃಗ, ಪಕ್ಷಿ ಇದಾವುದೂ ಅಲ್ಲದೆ, ಬ್ರಹ್ಮ ಸೃಷ್ಟಿಯಲ್ಲಿಯೇ ಇರದ ಮನುಷ್ಯ ದೇಹ ಹಾಗೂ ಸಿಂಹದ ಮುಖ ಇರುವ ಬ್ರಹ್ಮ ಸೃಷ್ಟಿಗೂ ಮೇಲಿನ ವಿಷ್ಣುವಿನ ನರಸಿಂಹಾವತಾರದಿಂದ ಅವನು ಸತ್ತಿದ್ದನು. ಆಯುಧಗಳಿಂದ ಅವನು ಸಾಯದೆ, ನರಸಿಂಹನ ನಖಗಳಿಂದಲೇ ಸತ್ತಿದ್ದನು. ಹೀಗೆ ಬ್ರಹ್ಮನ ವರಗಳನ್ನು ಪೂರೈಸಿಯೇ ವಿಷ್ಣು ಅವನನ್ನು ವಧಿಸಿದ್ದನು! ಆಗ ಅನೇಕ ದೈತ್ಯರು ನರಸಿಂಹನನ್ನು ಆಕ್ರಮಿಸಲು, ನರಸಿಂಹನು ಅವರೆಲ್ಲರನ್ನೂ ಸಂಹರಿಸಿದನು! ಅನಂತರ, ದೇವತೆಗಳೂ ಲಕ್ಷ್ಮಿಯೂ ಬಂದರೂ ನರಸಿಂಹನ ಉಗ್ರ ಕೋಪ ಆರದಿರಲು, ಬ್ರಹ್ಮನ ಮಾತಿನಂತೆ ಪ್ರಹ್ಲಾದನು ನರಸಿಂಹನನ್ನು ಸ್ತುತಿಸಿ ಸಮಾಧಾನಗೊಳಿಸಿದನು. ಸಮಾಧಾನಗೊಂಡ ನರಸಿಂಹನು ವರಗಳನ್ನು ಬೇಡಲು ಹೇಳಲು, ಪ್ರಹ್ಲಾದನು, ತನಗೆ ಯಾವುದೇ ಕಾಮನೆಯು ಹುಟ್ಟದಿರುವಂಥ ವರವನ್ನು ಕೊಡುವಂತೆಯೂ ಹರಿದ್ವೇಷಿಯಾಗಿದ್ದ ತನ್ನ ತಂದೆ ಪಾಪಗಳನ್ನು ಕಳೆದು ಪರಿಶುದ್ಧನಾಗಲೆಂದೂ ವರ ಬೇಡಿದನು. ಅದಕ್ಕೆ ನರಸಿಂಹಸ್ವಾಮಿಯು, ತನ್ನ ಸ್ಪರ್ಶದಿಂದಲೇ ಹಿರಣ್ಯಕಶಿಪುವು ಪವಿತ್ರನಾಗಿರುವನೆಂದೂ, ಪ್ರಹ್ಲಾದನಂಥ ಭಕ್ತನು ಅವನ ಕುಟುಂಬದಲ್ಲಿ ಹುಟ್ಟಿರುವುದರಿಂದ ಅವನಿಗೆ ಮೊದಲು ಇಪ್ಪತ್ತೊಂದು ತಲೆಮಾರುಗಳಿದ್ದಿದ್ದರೆ ಅವರೆಲ್ಲರೂ ಮುಕ್ತರಾಗುತ್ತಿದ್ದರು ಎಂದು ಹೇಳುತ್ತಾ ಪ್ರಹ್ಲಾದನಿಗೆ ದೈತ್ಯ ಚಕ್ರವರ್ತಿಯ ಪಟ್ಟಗಟ್ಟಿ ಅಂತರ್ಧಾನನಾದನು. 
     ಇದು ಭಾಗವತದಲ್ಲಿನ ನರಸಿಂಹಾವತಾರದ ಸಂಕ್ಷಿಪ್ತ ಕಥೆ. ವಿಷ್ಣುಪುರಾಣದಲ್ಲೂ ಕಥೆ ಬಹುತೇಕ ಹೀಗೆಯೇ ಇದ್ದರೂ, ಕೊನೆಯಲ್ಲಿ ನರಸಿಂಹನು ಕಂಬದಿಂದ ಬಂದ ಕಥೆಯೇ ಇಲ್ಲದೇ ಒಮ್ಮೆ ವಿಷ್ಣುವು ನರಸಿಂಹಾವತಾರ ತಾಳಿ ಹಿರಣ್ಯಕಶಿಪುವನ್ನು ಸಂಹರಿಸಿದನೆಂದು ಒಂದೇ ವಾಕ್ಯದಲ್ಲಿ ಹೇಳಲಾಗಿದೆ! ಇನ್ನೊಂದು ಸ್ವಾರಸ್ಯವೆಂದರೆ, ಇಲ್ಲಿ ಪ್ರಹ್ಲಾದನು ವಿಷ್ಣುವನ್ನು ಧ್ಯಾನಿಸುತ್ತಾ ಪೂರ್ತಿ ಅವನಲ್ಲಿ ತನ್ಮಯನಾಗಿ ತಾನು ಅವನಿಂದ ಅಭಿನ್ನ ಎಂಬ ಅದ್ವೈತಾತ್ಮಕ ಭಾವವನ್ನು ತಾಳುತ್ತಾನೆ. ಹಿರಣ್ಯಕಶಿಪು ಅವನನ್ನು ಸಮುದ್ರಕ್ಕೆ ತಳ್ಳಿಸಿದಾಗ, ಹರಿಧ್ಯಾನದಲ್ಲಿ ಮೈಮರೆತ ಪ್ರಹ್ಲಾದನು ಏನು ಆಗದೆ ಪಾರಾಗಿ ಸ್ವಲ್ಪ ಹೊತ್ತು ತಾನು ಪ್ರಹ್ಲಾದನೆಂದೂ ಮರೆತು, ಅನಂತರ ತಾನು ಪ್ರಹ್ಲಾದನೆಂದು ಸ್ಮರಿಸಿ ಅರಮನೆಗೆ ಹಿಂದಿರುಗುತ್ತಾನೆ. ಅವನು ಆ ಮಟ್ಟಿಗೆ ಹರಿಯೊಂದಿಗೆ ತಾದಾತ್ಮ್ಯ ಹೊಂದಿರುತ್ತಾನೆ. ಆಗ ಅವನು ಹರಿಯನ್ನು ಸ್ತುತಿಸಲು, ವಿಷ್ಣುವು ಪ್ರತ್ಯಕ್ಷನಾಗಿ ವರಗಳನ್ನು ಬೇಡಲು ಹೇಳುತ್ತಾನೆ. ಆಗ ಪ್ರಹ್ಲಾದನು ತಾನು ಯಾವುದೇ ಜನ್ಮದಲ್ಲಿ ಹುಟ್ಟಿದರೂ ಸದಾ ತನಗೆ ಹರಿಭಕ್ತಿಯಿರಲಿ ಹಾಗೂ ತನ್ನ ತಂದೆ ಹರಿದ್ವೇಷ ಹಾಗೂ ತನ್ನ ದ್ವೇಷ ಮತ್ತು ಹಿಂಸಾಚಾರದಿಂದ ಪಡೆದ ಪಾಪಗಳಿಂದ ಮುಕ್ತನಾಗಲಿ ಎಂದು ವರಗಳನ್ನು ಬೇಡುತ್ತಾನೆ ಹಾಗೂ ವಿಷ್ಣುವು ಮೂರನೆಯ ವರವನ್ನು ಬೇಡು ಎನ್ನಲು, ಪ್ರಹ್ಲಾದನು, ಹರಿಭಕ್ತಿ ಇರುವಾಗ, ಧರ್ಮಾರ್ಥಕಾಮಗಳಿಂದೇನು, ಅವನಿಗೆ ಮುಕ್ತಿಯೇ ಕರಸ್ಥಿತವಾಗಿರುತ್ತದೆ ಎನ್ನಲು, ವಿಷ್ಣುವು ಅವನಿಗೆ ಖಂಡಿತವಾಗಿಯೂ ಮುಕ್ತಿ ಸಿಗುತ್ತದೆ ಎಂದು ಹೇಳಿ ಅಂತರ್ಧಾನನಾಗುತ್ತಾನೆ. ಭಾಗವತದಲ್ಲಿ ನರಸಿಂಹಾವತಾರಕ್ಕೆ ಮೊದಲು ಪ್ರಹ್ಲಾದನು ಹೀಗೆ ವಿಷ್ಣುವನ್ನು ನೇರವಾಗಿ ಕಂಡಿರುವುದಿಲ್ಲ ಹಾಗೂ ವರಗಳನ್ನು ಪಡೆದಿರುವುದಿಲ್ಲ. ಇನ್ನೊಂದು ಸ್ವಾರಸ್ಯವೆಂದರೆ, ಪ್ರಹ್ಲಾದನು ಹೀಗೆ ಬದುಕಿ ಬರಲು, ಹಿರಣ್ಯಕಶಿಪುವು ಆನಂದಗೊಂಡು ಅವನನ್ನು ಅಪ್ಪಿಕೊಳ್ಳುತ್ತಾನೆ ಹಾಗೂ ಪಶ್ಚಾತ್ತಾಪ ಪಡುತ್ತಾನೆ. ಅನಂತರ, ಪ್ರಹ್ಲಾದನು ತಂದೆ ಮತ್ತು ಗುರುಗಳ ಸೇವೆ ಮಾಡಿಕೊಂಡಿದ್ದ ಎಂದು ಕಥೆ ಮುಂದುವರಿದು, ಮುಂದೊಂದು ದಿನ ವಿಷ್ಣುವು ನರಸಿಂಹಾವತಾರದ ಮೂಲಕ ಹಿರಣ್ಯಕಶಿಪುವನ್ನು ಸಂಹರಿಸಲು, ಪ್ರಹ್ಲಾದನು ದೈತ್ಯರಾಜನಾದನು ಎಂದು ಹಠಾತ್ತನೆ ಮುಗಿಯುತ್ತದೆ! 
      ಹರಿವಂಶದಲ್ಲಿ ನರಸಿಂಹಾವತಾರದ ಕಥೆ ಬಹಳ ವಿಭಿನ್ನವಾಗಿದೆ. ಹರಿವಂಶವು ಮಹಾಭಾರತದ ಖಿಲಭಾಗವಾಗಿದೆ. ಮಹಾಭಾರತದ ಕಥೆಯನ್ನು ಕೇಳಿದ ನಂತರ, ಜನಮೇಜಯನು ವೈಶಂಪಾಯನರನ್ನು ಶ್ರೀಕೃಷ್ಣನ ವಂಶಾವಳಿಯ ಕಥೆ ಹೇಳಲು ಕೇಳಲು, ಅವರು ಅದನ್ನು ಹೇಳುತ್ತಾ ವಿಷ್ಣುವಿನ ವಿವಿಧ ಅವತಾರಗಳ ಕಥೆಗಳನ್ನೂ ಹೇಳುತ್ತಾರೆ. ಹಾಗಾಗಿ, ಹರಿವಂಶವನ್ನು ವಿದ್ವಾಂಸರು ಒಂದು ಪುರಾಣವೆಂದೂ ಪರಿಗಣಿಸುತ್ತಾರೆ. ಇಲ್ಲಿನ ಕಥೆಯಂತೆ, ಹಿರಣ್ಯಕಶಿಪುವು ಹನ್ನೊಂದು ಸಾವಿರದ ಐನೂರು ವರ್ಷಗಳ ಕಾಲ ನೀರಿನಲ್ಲಿ ಘೋರ ತಪಸ್ಸು ಮಾಡಲು, ಬ್ರಹ್ಮನು ಸುಪ್ರೀತನಾಗಿ ಪ್ರತ್ಯಕ್ಷನಾದನು. ಆಗ ಹಿರಣ್ಯಕಶಿಪು ಕೇಳಿದ ವರ ಬಹುತೇಕ ಭಾಗವತದಲ್ಲಿರುವಂತೆಯೇ ಇದ್ದರೂ ತನ್ನನ್ನು ಸಂಹರಿಸುವಶನು ಒಂದೇ ಕೈ ಏಟಿನಿಂದ ಹೊಡೆದು ಸಂಹರಿಸಲು ಸಮರ್ಥವಾಗಿರಬೇಕು ಎಂಬ ಅಧಿಕಾಂಶವನ್ನು ಕೇಳುತ್ತಾನೆ. ಅನಂತರ, ಅವನು ತಾನೇ ಸೂರ್ಯ, ಚಂದ್ರ, ವಾಯು, ಅಗ್ನಿ, ಜಲ, ಆಕಾಶ, ನಕ್ಷತ್ರ, ದಿಕ್ಕುಗಳು,  ಇಂದ್ರ, ಯಮ, ವರುಣ, ಕುಬೇರ, ಎಲ್ಲವೂ ಆಗಿರಬೇಕೆಂದೂ ( ತಾನೇ ಎಲ್ಲಕ್ಕೂ ಒಡೆಯನಾಗಿರಬೇಕೆಂದು ತಾತ್ಪರ್ಯ) ತಾನು ಶತ್ರುಗಳೊಂದಿಗೆ ಯುದ್ಧ ಮಾಡುವಾಗ ದಿವ್ಯಾಸ್ತ್ರಗಳು ತನ್ನ ಮುಂದೆ ಮೂರ್ತಿಮತ್ತಾಗಿ ಬಂದು ನಿಲ್ಲಬೇಕೆಂದೂ ವರ ಬೇಡಿದನು. ಬ್ರಹ್ಮನು ಈ ವರಗಳನ್ನು ನೀಡಿ ಹೊರಟಾಗ, ದೇವತೆಗಳು ಹಿರಣ್ಯಕಶಿಪುವಿನ ಮೃತ್ಯು ಹೇಗೆಂದು ಕೇಳಿದರು. ಅದಕ್ಕೆ ಬ್ರಹ್ಮನು, ಅವನ ತಪಸ್ಸಿನ ಫಲವೆಲ್ಲವೂ ಅನುಭವಿಸಿ ಮುಗಿದಾಗ, ವಿಷ್ಣುವು ಅವನನ್ನು ಸಂಹರಿಸುವನೆಂದು ಹೇಳಿದನು.
     ವರಗರ್ವಿತನಾದ ಹಿರಣ್ಯಕಶಿಪುವು ಲೋಕಕಂಟಕನಾದನು ಹಾಗೂ ದೇವಲೋಕವನ್ನು ವಶಪಡಿಸಿಕೊಂಡನು! ಆಗ ದೇವತೆಗಳು ವಿಷ್ಣುವನ್ನು ಶರಣು ಹೊಂದಿ ಸ್ತುತಿಸಲು, ವಿಷ್ಣುವು ಹಿರಣ್ಯಕಶಿಪುವನ್ನು ಪರಿವಾರಸಹಿತವಾಗಿ ಸಂಹರಿಸುವೆನೆಂದು ಅಭಯವಿತ್ತು ಹಾಗೆಯೇ ಸಂಕಲ್ಪ ಮಾಡಿ ಹಿಮವತ್ಪರ್ವತದ ತಪ್ಪಲಿಗೆ ಬಂದನು. ಹಿರಣ್ಯಕಶಿಪುವನ್ನು ಸಂಹರಿಸಲು ಬೇಗನೆ ಕಾರ್ಯಸಿದ್ಧಿ ಮಾಡುವ ಯಾವ ರೂಪವನ್ನು ಧರಿಸಲೆಂದು ಯೋಚಿಸುತ್ತಾ ವಿಷ್ಣುವು ಹಿಂದೆಂದೂ ಹುಟ್ಟಿರದ ನರ ದೇಹ ಮತ್ತು ಸಿಂಹ ಮುಖದ, ದೈತ್ಯರಿಗೆ ಎದುರಿಸಲಾಗದ ನರಸಿಂಹ ರೂಪವನ್ನು ಧರಿಸಿ, ಓಂಕಾರವನ್ನು ಸಹಾಯಕ್ಕೆ ತೆಗೆದುಕೊಂಡು ( ಓಂಕಾರವನ್ನು ಧ್ಯಾನಿಸಿ ಶಕ್ತಿ, ಉತ್ಸಾಹ ಪಡೆದು) ಚಪ್ಪಾಳೆ ತಟ್ಟುತ್ತಾ ಹೊರಟನು. ಹಾಗೆ ಹೋಗಿ ನರಸಿಂಹನು ಹಿರಣ್ಯಕಶಿಪುವಿನ ಸಭಾಮಂದಿರವನ್ನು ಪ್ರವೇಶಿಸಿದನು. ಇಲ್ಲಿ ಹಿರಣ್ಯಕಶಿಪುವಿನ ಸಭಾಮಂದಿರದ ವಿಸ್ತೃತ ವರ್ಣನೆ ಬರುತ್ತದೆ. ಸ್ವರ್ಗದ ಪೃಷ್ಠಭಾಗದಲ್ಲಿದ್ದ ಆ ಸಭಾಮಂದಿರವು ನೂರೈವತ್ತು ಯೋಜನಗಳಷ್ಟು ಉದ್ದವೂ ನೂರು ಯೋಜನಗಳಷ್ಟು ಅಗಲವೂ ಐದು ಯೋಜನಗಳಷ್ಟು ಎತ್ತರವೂ ಇದ್ದು, ಅದು ಸದಾ ಆಕಾಶದಲ್ಲಿರುತ್ತಾ ಸಭಾಸದರ ಇಚ್ಛಾನುಸಾರ ಸಂಚರಿಸುತ್ತಿತ್ತು! ಅತ್ಯಂತ ರಮಣೀಯವಾಗಿದ್ದ ಆ ಸಭೆಯಲ್ಲಿದ್ದವರಿಗೆ ಹಸಿವು, ಬಾಯಾರಿಕೆ, ಮುಪ್ಪು, ಶೋಕ, ಆಯಾಸಗಳು ಆಗುತ್ತಿರಲಿಲ್ಲ! ಅಗ್ನಿಯ ತೇಜಸ್ಸಿನಂತೆ ಬೆಳಗುತ್ತಿದ್ದ ಆ ಸಭೆಯಲ್ಲಿ ಮಣಿಮಯವಾದ ಸ್ತಂಭಗಳೂ ಭವ್ಯವಾದ ಆಸನಗಳೂ ಇದ್ದವು! ಫಲಪುಷ್ಪಗಳಿಂದ ತುಂಬಿದ್ದ ಸುಂದರ ಲತಾವೃಕ್ಷಗಳು, ಎಲ್ಲೆಲ್ಲೂ ಸುಗಂಧ, ಸೊಗಸಾದ ಜಲಾಶಯ, ಕಮಲಪುಷ್ಷಗಳಿಂದಲೂ ಹಂಸಕಾರಂಡವ ಪಕ್ಷಿಗಳಿಂದಲೂ ಕೂಡಿದ್ದ ಸರೋವರಗಳು, ಇವೆಲ್ಲವೂ ಇದ್ದವು ಆ ಸಭೆಯಲ್ಲಿ! ಅಲ್ಲಿ ರಸವತ್ತಾದ ಭಕ್ಷ್ಯ ಭೋಜ್ಯಗಳೂ ಇದ್ದವು! ಇಂಥ ಸಭೆಯಲ್ಲಿ, ದೇವಗಂಧರ್ವಾಪ್ಸರೆಯರಿಂದಲೂ ದೈತ್ಯರಿಂದಲೂ ಸೇವಿಸಲ್ಪಡುತ್ತಾ ನಾಲ್ಕು ಮಾರುಗಳಷ್ಟು ದೊಡ್ಡದಾದ ಸಿಂಹಾಸನದಲ್ಲಿ ಹಿರಣ್ಯಕಶಿಪುವು ವಿರಾಜಮಾನನಾಗಿದ್ದನು! 
     ಆಗ ಸಾವಿರ ಚಂದ್ರರಿಗೆ ಸಮಾನವಾದ ಸೌಂದರ್ಯದಿಂದ ಕಂಗೊಳಿಸುತ್ತಿದ್ದ ನರಸಿಂಹನನ್ನು ನೋಡಿ ಹಿರಣ್ಯಕಶಿಪುವೂ ಇತರ ದೈತ್ಯರೂ ವಿಸ್ಮಿತರಾದರು! ಆದರೆ ಅವನ ಪುತ್ರನಾದ ಪ್ರಹ್ಲಾದನು ದಿವ್ಯದೃಷ್ಟಿಯಿಂದ ನರಸಿಂಹನನ್ನು ನೋಡಿ, ಅವನ ಶರೀರದಲ್ಲಿ ಸಮಸ್ತ ದೇವತೆಗಳು, ರಾಕ್ಷಸರು, ನದಿಸಮುದ್ರಗಳು, ಹಿಮಾಲಯವೇ ಮೊದಲಾದ ಪರ್ವತಗಳು, ಹೀಗೆ ಮೂರು ಲೋಕಗಳೊಂದಿಗೆ ಆ ಸಭೆಯನ್ನೂ ಕೊನೆಗೆ ತನ್ನನ್ನೂ ತಂದೆಯನ್ನೂ ಕಾಣುತ್ತಿರುವೆನೆಂದು ತಂದೆಗೆ ಹೇಳಿದನು. ಆಗ ಹಿರಣ್ಯಕಶಿಪುವು ಅಪೂರ್ವ ಶರೀರದ ಆ ಕಾಡಿನ ಸಿಂಹವನ್ನು ಹಿಡಿಯಬೇಕೆಂದೂ ಆಗ ಪ್ರಾಣಕ್ಕೆ ಆಪತ್ತು ಬಂದರೆ ಕೊಲ್ಲುವಂತೆಯೂ ದೈತ್ಯರಿಗೆ ಆಜ್ಞಾಪಿಸಿದನು. ಆಗ ದೈತ್ಯರು ನರಸಿಂಹನ ಮೇಲೆ ಹಲವಾರು ಅಸ್ತ್ರ ಶಸ್ತ್ರಗಳನ್ನು ಪ್ರಯೋಗಿಸುತ್ತಾ ಅವನನ್ನು ಪೀಡಿಸಿದರು! ಆಗ ನರಸಿಂಹನು ಸಿಂಹನಾದ ಮಾಡುತ್ತಾ ಆ ಸಭಾಭವನವನ್ನು ಧ್ವಂಸಮಾಡಿಬಿಟ್ಟನು! ಇದರಿಂದ ಹಿರಣ್ಯಕಶಿಪುವು ಕ್ರುದ್ಧನಾಗಿ ನರಸಿಂಹನ ಮೇಲೆ ವಿವಿಧ ಅಸ್ತ್ರಗಳನ್ನು ಪ್ರಯೋಗಿಸಿದನು! ಅಂತೆಯೇ ಇತರ ದೈತ್ಯರೂ ಅವನನ್ನು ಪೀಡಿಸುತ್ತಾ ಎಲ್ಲಾ ಕಡೆಗಳಿಂದಲೂ ಸುತ್ತುವರೆದರು! ಆದರೆ ಅವರಾರಿಗೂ ನರಸಿಂಹನ ಶರೀರದಲ್ಲಿ ಒಂದು ಗಾಯವನ್ನೂ ಮಾಡಲಾಗಲಿಲ್ಲ! ದೈತ್ಯರು ಪ್ರಯೋಗಿಸಿದ ಚಕ್ರಗಳನ್ನು ನರಸಿಂಹನು ನುಂಗಿಹಾಕಿದನು! ಹಿರಣ್ಯಕಶಿಪುವು ಪ್ರಯೋಗಿಸಿದ ಶಕ್ತ್ಯಾಯುಧವನ್ನು ಹುಂಕಾರದಿಂದಲೇ ತುಂಡರಿಸಿದನು! ಅನಂತರ, ದೈತ್ಯರು ಆಕಾಶಕ್ಕೇರಿ ಶಿಲಾವರ್ಷ, ಜಲವರ್ಷ, ಮತ್ತು ಅಗ್ನಿವರ್ಷಗಳನ್ನು ಮಾಡಿದರು! ಆದರೆ ಅವು ನರಸಿಂಹನನ್ನು ಸ್ಪರ್ಶಿಸಲೂ ಆಗಲಿಲ್ಲ! 
    ಹೀಗೆ ದೈತ್ಯರ ಮಾಯಾಯುದ್ಧ ವಿಫಲವಾಗಲು ಹಿರಣ್ಯಕಶಿಪುವು ಅತ್ಯಂತ ಕ್ರುದ್ಧನಾಗಿ ತನ್ನ ತೇಜಸ್ಸಿನಿಂದ ಭೂಮಿಯನ್ನೇ ದಹಿಸುವಂತೆ ಹೆಜ್ಜೆಯಿಡುತ್ತಾ ಭೂಮಿಯನ್ನೇ ಅಲ್ಲಾಡಿಸಿದನು! ನದಿ,ಸರೋವರ, ಸಮುದ್ರಗಳಲ್ಲಿ ಅಲ್ಲೋಲಕಲ್ಲೋಲವಾಯಿತು! ಪರ್ವತಗಳು ಚಲಿಸತೊಡಗಿದವು! ಜಗತ್ತೇ ಕತ್ತಲಿನಿಂದ ತುಂಬಿಹೋಯಿತು! ವಾಯುವು ಕ್ಷೋಭೆಗೊಂಡಿತು! ಪ್ರಳಯಕಾಲದಲ್ಲಿ ಕಾಣಿಸಿಕೊಳ್ಳುವ ಗ್ರಹಗಳು ಕಾಣಿಸಿಕೊಂಡು ಹರ್ಷದಿಂದ ಸಂಚರಿಸತೊಡಗಿದವು! ಉಲ್ಕಾಪಾತ, ಪ್ರಾಣಿಗಳ ಆರ್ತನಾದ, ಇಂಥ ಉತ್ಪಾತಗಳಾಗಲು, ಏಕೆ ಇವು ಆಗುತ್ತಿವೆ ಎಂದು ಹಿರಣ್ಯಕಶಿಪುವು ಗುರು ಶುಕ್ರಾಚಾರ್ಯರನ್ನು ಕೇಳಿದನು. ಅದಕ್ಕೆ ಅವರು,"ಯಾವ ರಾಜನ ರಾಜ್ಯದಲ್ಲಿ ಇಂಥ ಉತ್ಪಾತಗಳಾಗುವವೋ ಆ ರಾಜನ ರಾಜ್ಯವನ್ನು ಶತ್ರುಗಳು ಅಪಹರಿಸುತ್ತಾರೆ! ಹಾಗಾಗಿ ಬೇಗನೆ ಬುದ್ಧಿಯಿಂದ ಸಮಾಲೋಚಿಸಿ ಹಾಗಾಗದಂತೆ ಏನು ಮಾಡಬೇಕೋ ಮಾಡು!" ಎಂದು ಹೇಳಿ ತಮ್ಮ ಮನೆಗೆ ಹೊರಟುಹೋದರು! 
       ಆಗ ಹಿರಣ್ಯಕಶಿಪುವು ತನ್ನ ಗದೆಯನ್ನು ಹಿಡಿದು ಗರ್ಜಿಸುತ್ತಾ ನರಸಿಂಹನತ್ತ ಧಾವಿಸಿದನು! ಆಗ ಬ್ರಹ್ಮಾದಿ ದೇವತೆಗಳು ಹಿರಣ್ಯಕಶಿಪುವನ್ನು ಬೇಗನೆ ಸಂಹರಿಸುವಂತೆ ನರಸಿಂಹನನ್ನು ಸ್ತುತಿಸಿದರು. ಆಗ ನೃಸಿಂಹನು ಛಂಗನೆ ಹಾರಿ ಹಿರಣ್ಯಕಶಿಪುವಿನ ವಕ್ಷಸ್ಥಳವನ್ನು ತನ್ನ ಉಗುರುಗಳಿಂದ ಸೀಳಿ ಅವನನ್ನು ಸಂಹರಿಸಿದನು! ಇದರಿಂದ ಸಂತೋಷಗೊಂಡ ದೇವತೆಗಳು ಪುನಃ ನೃಸಿಂಹಸ್ವಾಮಿಯನ್ನು ಸ್ತುತಿಸಿ ತಮ್ಮ ಲೋಕಗಳಿಗೆ ತೆರಳಿದರು. ಅನಂತರ, ಅಪ್ಸರೆಯರು ನರ್ತಿಸುತ್ತಿದ್ದಂತೆ ನರಸಿಂಹದೇವನು ಕ್ಷೀರಸಮುದ್ರಕ್ಕೆ ತೆರಳಿ,‌ ಅದರ ತೀರದಲ್ಲಿ ನರಸಿಂಹರೂಪವನ್ನು ತ್ಯಜಿಸಿ, ಅದರ ಪ್ರತಿಮೆಯನ್ನು ಲೋಕದಲ್ಲಿ ಪ್ರತಿಷ್ಠಾಪಿಸಿ, ತನ್ನ ಚತುರ್ಭುಜ ರೂಪದಿಂದ ತನ್ನ ಪರಮಧಾಮಕ್ಕೆ ಹೋದನು.
     ಹೀಗೆ ಹರಿವಂಶದಲ್ಲಿ ಹಿರಣ್ಯಕಶಿಪುವು ಪ್ರಹ್ಲಾದನನ್ನು ಹಿಂಸಿಸುವುದು, ಕಂಬವನ್ನು ಒಡೆಯುವುದು, ಅದರಿಂದ ನರಸಿಂಹನು ಬರುವುದು ಇವೆಲ್ಲವೂ ಇಲ್ಲವೇ ಇಲ್ಲ! ಬದಲಿಗೆ ನರಸಿಂಹನು ಹಠಾತ್ತನೆ ಹಿರಣ್ಯಕಶಿಪುವಿನ ಸಭೆಗೆ ಬಂದು ಅವನನ್ನು ಸಂಹರಿಸುತ್ತಾನೆ! ಈ ಕಥಾಪಾಠ ಬಹಳ ವಿಭಿನ್ನವಾಗಿದೆ! 
       ಹೀಗೆ ನರಸಿಂಹಾವತಾರದ ಕಥೆ ಮೂರು ಗ್ರಂಥಗಳಲ್ಲಿ ವಿಭಿನ್ನವಾಗಿ ಚಿತ್ರಿಸಲ್ಪಟ್ಪು ಸ್ವಾರಸ್ಯಕರವಾಗಿದೆ.