ಶುಕ್ರವಾರ, ಮೇ 29, 2026

ಸುಂದರೀಶತಕ -೪೩

ಸಂಸ್ಕೃತ ಮೂಲ 

ಕಿಂಚಿದುದಂಚಯ ಚಂಚಲಮಂಚಲಮಚಿರೇಣ ಲೋಚನಾಂಶುಕಯೋ: /
ಸುಂದರಿ ಕರ್ಣಾವತಂಸ: ಕೈರವಮಿಂದೀವರಂ ಭವತು //

ಕನ್ನಡ ಅನುವಾದ 

     ' ಎಲೈ ಸುಂದರಿ! ನಿನ್ನ ಕಂಗಳನ್ನು ಆವರಿಸಿ ಚಂಚಲವಾಗಿ ಹಾರಾಡುತ್ತಿರುವ ಸೆರಗಿನ ಅಂಚನ್ನು ಬೇಗನೆ ಸ್ವಲ್ಪ ಮೇಲೆತ್ತು! ನಿನ್ನ ನೀಲ ದೃಷ್ಟಿಯಿಂದ ನಿನ್ನ ಕಿವಿಯ ಮೇಲಿರುವ ಕೈರವ ಅಥವಾ ಬಿಳಿ ಕಮಲದ ಆಭರಣ, ಇಂದೀವರ ಅಥವಾ ನೀಲಕಮಲವಾಗಲಿ!' 
     ಸುಂದರಿಯ ಕಂಗಳು ನೀಲವರ್ಣದಿಂದ ಕೂಡಿ ಬಹು ಸುಂದರವಾಗಿವೆ! ಹಾಗಾಗಿ ಕವಿ ಅಥವಾ ಅವಳ ಪ್ರಿಯತಮನು ಅವಳಿಗೆ ಅವಳ ಕಂಗಳ ಮೇಲೆ ಹಾರಾಡುತ್ತಿರುವ ಅವಳ ಸೆರಗಿನ ಅಂಚನ್ನು ಸ್ವಲ್ಪ ಮೇಲೆತ್ತಲು ಹೇಳುತ್ತಿದ್ದಾನೆ. ಅವಳು ಹಾಗೆ ತನ್ನ ಕಂಗಳನ್ನು ಆವರಿಸಿರುವ ಸೆರಗಿನ ಅಂಚನ್ನು ಮೇಲೆತ್ತಿದಾಗ ಅವಳ ಕಂಗಳ ನೀಲದೃಷ್ಟಿ ಅವಳು ಧರಿಸಿರುವ ಕೈರವ ಅಥವಾ ಬಿಳಿಕಮಲದ ಕರ್ಣಾಭರಣದ ಮೇಲೆ ಬಿದ್ದು ಅದು ನೀಲಕಮಲ ಅಥವಾ ನೀಲೋತ್ಪಲ ಅಥವಾ ಇಂದೀವರವಾಗಲಿ ಎಂದು ಅವನ ಆಶಯವಾಗಿದೆ. ಹೀಗೆ ಅವಳ ಕಣ್ಣ ದೃಷ್ಟಿಯಿಂದ ಅವಳ ಕರ್ಣಾಭರಣದ ಬಣ್ಣವೇ ಬದಲಾಗುವುದೆಂದು ಹೇಳುವ ಮೂಲಕ, ಅವಳ ಕಂಗಳು ಎಷ್ಟು ಸುಂದರವಾಗಿವೆ ಎಂದು ಹೇಳುತ್ತಿದ್ದಾನೆ.

ಸುಂದರೀಶತಕ -೪೨

ಸಂಸ್ಕೃತ ಮೂಲ 

ತವ ನಯನಪುಂಡರೀಕಾತ್ಪ್ರಿಯೇ ಕಟಾಕ್ಷಕ್ರಮಾ ವಿರಾಜತೇ /
ವಿಕಸಿತವಿಚಕಿಲಕುಸುಮಾತ್ಕುಸುಮಾನೀವಾವತೀರ್ಣಾನಿ //

ಕನ್ನಡ ಅನುವಾದ 

   ' ಪ್ರಿಯೆ! ನಿನ್ನ ನಯನಕಮಲದಿಂದ ಹೊರಡುತ್ತಿರುವ ಕುಡಿನೋಟಗಳು, ಅರಳಿದ ಮಲ್ಲಿಗೆ ಹೂವಿನಿಂದ ದಳಗಳು ಉದುರುವಂತೆ ವಿರಾಜಿಸುತ್ತಿವೆ! '
    ಇಲ್ಲಿ ಕವಿಯು ಹೆಣ್ಣಿನ ಕಣ್ಣನ್ನು ಕಮಲ ಪುಷ್ಪಕ್ಕೆ ಹೋಲಿಸಿದರೆ, ಅವಳ ಕುಡಿನೋಟಗಳನ್ನು ಮಲ್ಲಿಗೆ ಹೂವಿನಿಂದ ಉದುರುತ್ತಿರುವ ದಳಗಳಿಗೆ ಹೋಲಿಸಿದ್ದಾನೆ! ನಯನಪುಂಡರೀಕ ಎನ್ನುವಲ್ಲಿ ಕಣ್ಣೇ ಕಮಲ ಎಂದು ರೂಪಕಾಲಂಕಾರ ಬಳಸಿದ್ದರೆ, ಅವಳ ಕುಡಿನೋಟಗಳು ಮಲ್ಲಿಗೆ ಹೂವಿನಿಂದ ಉದುರುತ್ತಿರುವ ದಳಗಳಂತಿವೆ ಎನ್ನುವಲ್ಲಿ ಉಪಮಾಲಂಕಾರ ಬಳಸಿದ್ದಾನೆ. ಹೆಣ್ಣಿನ ಕಡೆಗಣ್ಣಿನ ಕುಡಿನೋಟಗಳು ಅದೆಷ್ಟು ಆಕರ್ಷಕ ಎಂದರೆ ಕವಿಗೆ ಅವನ್ನು ಎಷ್ಟು ಹೊಗಳಿದರೂ ಸಾಲದು! ಬೇರೆ ಬೇರೆ ರೀತಿಯ ಹೋಲಿಕೆಗಳನ್ನು ಬಳಸುತ್ತಾ ಹೆಣ್ಣಿನ ಕಡೆಗಣ್ಣಿನ ಕುಡಿನೋಟಗಳನ್ನು ಮತ್ತೆ ಮತ್ತೆ ವರ್ಣಿಸುತ್ತಿದ್ದಾನೆ. ಇಲ್ಲಿ ಹೆಣ್ಣಿನ ಪ್ರಿಯತಮನ ಮೂಲಕ ಅವಳಿಗೆ ಪ್ರಶಂಸೆ ಹೇಳಿಸಿದ್ದಾನೆ.

ಸುಂದರೀಶತಕ -೪೧

ಸಂಸ್ಕೃತ ಮೂಲ 

ನಿಷ್ಠುರಪಂಜರಕೋಷೇ ನವಸಂಯಮಿತಸ್ಯ ಖಂಜನಸ್ಯೇವ /
ಗುರುಜನಸಮಕ್ಷಮಕ್ಷಿವ್ಯಾಪಾರೋ ಜಯತಿ ಮುಗ್ಧಾಕ್ಷ್ಯಾ: //

ಕನ್ನಡ ಅನುವಾದ 

ಆ ಮುಗ್ಧನಯನೆಯು ಹಿರಿಯರ ಸಮಕ್ಷಮದಲ್ಲಿ ತನ್ನ ಪ್ರಿಯತಮನೊಂದಿಗೆ ನಡೆಸುವ ಕಣ್ಣೋಟದ ವ್ಯಾಪಾರ (ಚಲನವಲನಗಳು), ಗಟ್ಟಿಯಾದ ಪಂಜರದಲ್ಲಿ ಹೊಸದಾಗಿ ಬಂಧಿಸಿರುವ ಖಂಜನ ಪಕ್ಷಿಯ ತೀಕ್ಷ್ಣ ಕಣ್ಣೋಟದ ಚಲನವಲನಗಳಂತೆ ವಿಜಯಶಾಲಿಯಾಗುತ್ತದೆ!' 
    ಇದೊಂದು ಸುಂದರವಾದ, ರಮ್ಯವಾದ ಚಿತ್ರಣ. ಮನೆಗೆ ಹಿರಿಯರು ಬಂದಿದ್ದಾರೆ. ನವವಿವಾಹಿತೆಯಾದ ಮುಗ್ಧ ಕಣ್ಣುಗಳ ಹೆಣ್ಣೊಬ್ಬಳು ತನ್ನ ಪ್ರಿಯಪತಿಯನ್ನು ಅರೆಕ್ಷಣವೂ ಬಿಟ್ಟಿರಲಾರಳು. ಹಿರಿಯರ ನಡುವೆ ಅವಳ ಗಂಡನೂ ಕುಳಿತಿದ್ದಾನೆ. ಅವರು ಅವನೊಂದಿಗೆ ಏನೋ ಮಾತುಕತೆ ನಡೆಸುತ್ತಿದ್ದಾರೆ. ಇವಳು ಸಿಹಿತಿಂಡಿಗಳು, ಪಾನೀಯಗಳು ಇತ್ಯಾದಿಗಳನ್ನು ತಂದುಕೊಡುತ್ತಿದ್ದಾಳೆ ಹಾಗೂ ಅಲ್ಲೇ ಇದ್ದಾಳೆ. ಅವಳಿಗೆ ಅವನನ್ನು ನೋಡಬೇಕೆಂಬ ಆಸೆ. ಆದರೆ ಅವರೆಲ್ಲರೂ ಇರುವಾಗ ಧೈರ್ಯವಾಗಿ ಮುಕ್ತವಾಗಿ ನೋಡಲಾರಳು. ಹಾಗಾಗಿ ತಲೆತಗ್ಗಿಸಿ ವೇಗವಾಗಿ ಅವನ ಕಡೆ ನೋಡುತ್ತಾಳೆ ಮತ್ತು ಹೆದರಿ ಪುನಃ ಬೇಗನೆ ಹಿರಿಯರ ಕಡೆ ನೋಡುತ್ತಾಳೆ. ಅವಳ ಕಣ್ಣೋಟದ ಈ ಚಲನವಲನಗಳು, ಗಟ್ಟಿಯಾದ ಪಂಜರದಲ್ಲಿ ಹೊಸದಾಗಿ ಬಂಧಿಸಲಾಗಿರುವ ಖಂಜನ ಪಕ್ಷಿಯ ತೀಕ್ಷ್ಣ ನೋಟಗಳಂತಿವೆ ಎಂದು ಕವಿಯು ಹೋಲಿಸುತ್ತಾನೆ. ಖಂಜನ ಪಕ್ಷಿ ಅಥವಾ ಕದಂಬ ಪಕ್ಷಿಯನ್ನು ಹೊಸದಾಗಿ ಪಂಜರದಲ್ಲಿ ಬಂಧಿಸಿದಾಗ ಅದು ಚಡಪಡಿಸುತ್ತಾ ಅತ್ತಿತ್ತ ಚುರುಕಾಗಿ ಕಣ್ಣುಗಳನ್ನು ಆಡಿಸುತ್ತಿರುತ್ತದೆ. ಅದೇ ರೀತಿ ಈಗ ಮುಗ್ಧೆಯಾದ ಈ ಹೆಣ್ಣೂ ಹಿರಿಯರ ಪಂಜರದಲ್ಲಿ ಸಿಕ್ಕಿಕೊಂಡು ತನ್ನ ಪ್ರಿಯತಮನನ್ನು ಕದ್ದು ನೋಡುತ್ತಾ ಮರುಕ್ಷಣವೇ ಅವರನ್ನೂ ನೋಡುತ್ತಾ ಒಂದು ಆಕರ್ಷಕ ಚಿತ್ರಣವುಂಟುಮಾಡಿದ್ದಾಳೆ! ಇಂಥ ಅವಳ ಕಣ್ಣೋಟ ಅತ್ಯಂತ ಸೊಗಸಾಗಿದ್ದು ಅದು ವಿಜಯಶಾಲಿಯಾಗುತ್ತದೆ ಎನ್ನುತ್ತಾನೆ ಕವಿ! 

ಬುಧವಾರ, ಮೇ 27, 2026

ಮಹಾಭಾರತದ ಸ್ವಾರಸ್ಯಗಳು - ಜಿಂಕೆಗಳ ಕನಸು

                ನಾವು ಪ್ರಾಣಿ ಪ್ರಪಂಚದ ಇತಿಹಾಸವನ್ನು ಅವಲೋಕಿಸುತ್ತಾ ಹೋದರೆ ಮಾನವರು ಅದೆಷ್ಟೋ ಪ್ರಾಣಿ, ಪಕ್ಷಿಗಳನ್ನು ನಿರ್ದಯವಾಗಿ ಬೇಟೆಯಾಡಿ ನಿರ್ನಾಮ ಮಾಡಿರುವುದು ಕಾಣುತ್ತದೆ. ಅದರಲ್ಲೂ ಯುರೋಪಿಯನ್ನರು ಕ್ರೌರ್ಯದಲ್ಲಿ ಹೆಸರೆತ್ತಿದವರು. ಅವರು ಹೋದಲ್ಲೆಲ್ಲಾ ನೆಲೆಗಳನ್ನು ವಶಪಡಿಸಿಕೊಂಡು, ಮೂಲನಿವಾಸಿಗಳನ್ನು ಬಗ್ಗುಬಡಿದು ಇಲ್ಲವೇ ದಾಸ್ಯಕ್ಕೊಳಪಡಿಸಿ ಶೋಷಿಸಿದ್ದಷ್ಟೇ ಅಲ್ಲದೆ, ಅಲ್ಲಿನ ಪ್ರಾಣಿ ಪಕ್ಷಿಗಳನ್ನೂ ಅನಗತ್ಯವಾಗಿ ಬೇಟೆಯಾಡಿದರು. ಹಾಗಾಗಿಯೇ ಡೋಡೋ, ಪ್ಯಾಸೆಂಜರ್ ಪಿಜನ್, ಕ್ವಗ್ಗ ( ಜೀಬ್ರಾದಂಥ ಒಂದು ಪ್ರಾಣಿ) ಇನ್ನೆಂದೂ ಕಾಣದಂತೆ ನಾಮಾವಶೇಷವಾದವು! ಈಗಲೂ ಆಫ್ರಿಕಾದಲ್ಲಿ ಅರಣ್ಯ ಸಂರಕ್ಷಣೆಗೆ ಧನಸಹಾಯ ಮಾಡುವವರಿಗೆ ಬೇಟೆಯಾಡಲು ಅವಕಾಶ ಕೊಡುವುದು ಒಂದು ದೊಡ್ಡ ವಿಡಂಬನೆಯ ವಿಷಯವಾಗಿದೆ! 
    ಈ ರೀತಿ ಬೇಟೆಯಾಡುವ ಪ್ರವೃತ್ತಿ ಭಾರತದಲ್ಲೂ ಇತ್ತೇ ಎಂದು ಕೇಳಿದರೆ ಹೌದು ಎಂದೇ ಹೇಳಬೇಕಾಗುತ್ತದೆ. ಆದಿಮಾನವ ತನ್ನ ಆಹಾರಕ್ಕಾಗಿ ಬೇಟೆಯಾಡುತ್ತಿದ್ದ ನಿಜ. ಅಂತೆಯೇ ಅಂದಿನಿಂದ ಇಂದಿನವರೆಗೂ ಬಹುತೇಕ ಮಾನವರಲ್ಲಿ ಮಾಂಸಾಹಾರ ಸಹಜವಾದ ಒಂದು ಪ್ರವೃತ್ತಿಯೇ ಆಗಿದೆ. ಈ ಮಾಂಸ ಸಿಗಲು ಪ್ರಾಣಿಗಳನ್ನು ಬೇಟೆಯಾಡಬೇಕಾದುದರಿಂದ ಅದೊಂದು ಕ್ರೀಡೆಯೇ ಆಯಿತು! ಓಡುತ್ತಿರುವ, ಹಾರುತ್ತಿರುವ ಅಥವಾ ದೂರದಲ್ಲಿ ಮೇಯುತ್ತಿರುವ ಇಲ್ಲವೇ ವಿಶ್ರಮಿಸುತ್ತಿರುವ ಪ್ರಾಣಿ ಪಕ್ಷಿಗಳನ್ನು ಗುರಿಯಿಟ್ಟು ಹೊಡೆದು ಕೊಂದರೆ ಅದೇನೋ ಸಾಧನೆ ಮಾಡಿದ ಆನಂದ ಅನೇಕ ರಾಜರುಗಳಿಗಿತ್ತು! ಯುದ್ಧಗಳಲ್ಲಿ ತೊಡಗುವ ಬಹುತೇಕ ರಾಜರು ಕ್ಷತ್ರಿಯರಾಗಿದ್ದು ಮಾಂಸಾಹಾರ ಅವರಿಗೆ ಸಹಜವಾಗಿತ್ತು. ಅಂತೆಯೇ ಶೂದ್ರರು, ಶ್ರಮಜೀವಿಗಳಿಗೂ ಮಾಂಸಾಹಾರವಿಲ್ಲದೇ ಆಗುತ್ತಿರಲಿಲ್ಲ. ಆದರೆ ಅಷ್ಟೇ ಅಲ್ಲದೇ ಬ್ರಾಹ್ಮಣರು ಕೂಡ ಯಜ್ಞ ಯಾಗಗಳನ್ನು ಮಾಡಿದಾಗ ಬಲಿಪಶುವಿನ ಮಾಂಸಾಹಾರ ಸೇವಿಸುತ್ತಿದ್ದರು. ಇವುಗಳಿಗೆ ಅನೇಕ ದಾಖಲೆಗಳು ಪ್ರಾಚೀನ ಗ್ರಂಥಗಳಲ್ಲಿ ಇವೆ. ಆದರೆ ಮಾಂಸಾಹಾರಕ್ಕಲ್ಲದೇ ಸುಖಾಸುಮ್ಮನೆ ಬೇಟೆಯಾಡಿ ಪ್ರಾಣಿಗಳನ್ನು ಕೊಲ್ಲುವುದೆಂದರೇನು? ಆದರೆ ಅದೂ ತೀರಾ ಇತ್ತೀಚಿನವರೆಗೂ ಇತ್ತು. ಮೈಸೂರು ಮಹಾರಾಜರೇ ಮೊದಲಾಗಿ ಅನೇಕ ಮಹಾರಾಜರು ಕಾಡುಗಳನ್ನು ಬೇಟೆಗೆಂದೇ ಬೆಳೆಸಿದ್ದಲ್ಲದೇ ಕಾಡುಗಳಲ್ಲಿ ಬೇಟೆಯಾಡಲು ಉಳಿದುಕೊಳ್ಳಲು ಸುಂದರ ಗೃಹಗಳನ್ನು ನಿರ್ಮಿಸಿದರು. ಬ್ರಿಟಿಷರು ಬಂದಮೇಲೆ ಅವರ ಜೊತೆ ನಮ್ಮ ರಾಜರೂ ಸೇರಿಕೊಂಡು ಈ ಕ್ರೀಡೆಯನ್ನು ಆನಂದಿಸುತ್ತಿದ್ದರು! 
      ಆದರೆ ಪ್ರಾಚೀನ ಭಾರತದಲ್ಲಿ ಬೇಟೆಯಾಡುವ ಪ್ರವೃತ್ತಿ ಇದ್ದರೂ ಅದನ್ನು ನಿಯಂತ್ರಿಸಲು ಪ್ರಯತ್ನಿಸಿದ್ದುದು ಕಾಣುತ್ತದೆ. ಉದಾಹರಣೆಗೆ ಶ್ರೀಕೃಷ್ಣನು ಮಹಾಭಾರತದಲ್ಲಿ ರಾಜರಿಗೆ ಬೇಟೆ, ಮದ್ಯಪಾನ, ಜೂಜು, ಮತ್ತು ಸ್ತ್ರೀ ವ್ಯಾಮೋಹ, ಇವು ನಾಲ್ಕೂ ವ್ಯಸನಗಳು ಎಂದು ಹೇಳುತ್ತಾನೆ. ಜೂಜಿನಿಂದ ಯುಧಿಷ್ಠಿರ, ನಳ ಮಹಾರಾಜ, ಮೊದಲಾದವರು ತೊಂದರೆಗೊಳಗಾದರೆ, ಬೇಟೆಯಿಂದ ಪಾಂಡು ಮಹಾರಾಜನು  ನಾಶವಾದ. ಬೇಟೆಯ ವ್ಯಾಮೋಹದಿಂದ ಅವನು ಜಿಂಕೆಗಳ ರೂಪದಲ್ಲಿ ರತಿಕ್ರೀಡೆಯಾಡುತ್ತಿದ್ದ ಕಿಂದಮ ಋಷಿದಂಪತಿಗಳನ್ನು ಕೊಂದು ಸ್ತ್ರೀಯನ್ನು ಸಂಭೋಗಿಸಿದರೆ ಸಾಯುವಂತೆ ಅವರಿಂದ ಶಾಪಗ್ರಸ್ತನಾದ. ವಿಚಿತ್ರವೀರ್ಯನು ಅತಿಯಾದ ಸ್ತ್ರೀ ಸಂಭೋಗದಿಂದ ಯಕ್ಷ್ಮ ಕ್ಷಯರೋಗವೆಂಬ ಕ್ಷೀಣಿಸುವ  ರೋಗಕ್ಕೊಳಗಾಗಿ ಸತ್ತ. ಇಂಥ ಉದಾಹರಣೆಗಳಿಂದ ಬೇಟೆ ಮತ್ತು ಪ್ರಾಣಿಗಳನ್ನು ಕೊಲ್ಲುವುದನ್ನು ನಿಯಂತ್ರಿಸಲಾಗಿದೆ. ಮುಂದೆ ಬೌದ್ಧ, ಜೈನ ಧರ್ಮಗಳಲ್ಲಂತೂ ಇದು ಬೇಡವೇ ಬೇಡ ಎಂದು ಒತ್ತು ಕೊಡಲಾಗಿದೆ. ಬೌದ್ಧ ಜಾತಕ ಕಥೆಗಳಲ್ಲಿ ಬೇಟೆಯನ್ನು ವಿರೋಧಿಸುವ ಚಿನ್ನದ ಜಿಂಕೆಯ ಕಥೆಯಿದೆ. ಬುದ್ಧನು ಮೊದಲ ಪ್ರವಚನ ನೀಡಿದ ಸಾರನಾಥದ ಮಿಗದಾಯ ( ಮೃಗದಾವ) ಜಿಂಕೆಗಳನ್ನು ಸಂರಕ್ಷಿಸಿದ ಉಪವನವಾಗಿತ್ತು.
     ಪ್ರಾಣಿಗಳ, ಮುಖ್ಯವಾಗಿ ಜಿಂಕೆಗಳ ಸಂರಕ್ಷಣೆ ಹಾಗೂ ಅನಗತ್ಯ ಬೇಟೆಯನ್ನು ನಿಯಂತ್ರಿಸುವ ಸ್ವಾರಸ್ಯಕರ ಪ್ರಸಂಗವೊಂದು ಮಹಾಭಾರತದಲ್ಲಿದೆ. ಅದು ವನಪರ್ವದ ಮೃಗಸವಪ್ನೋದ್ಭವಪರ್ವವೆಂಬ ಚಿಕ್ಕ ಉಪಪರ್ವದಲ್ಲಿದೆ.‌ ಅದನ್ನು ಈಗ ನೋಡೋಣ.
  ಪಾಂಡವರು ಆಗ ದ್ವೈತವನದಲ್ಲಿ ವಾಸಿಸುತ್ತಿದ್ದರು.  ಒಮ್ಮೆ ಯುಧಿಷ್ಠಿರನು ಆಶ್ರಮದಲ್ಲಿ ಮಲಗಿ ನಿದ್ರಿಸುತ್ತಿದ್ದಾಗ ಅವನಿಗೆ ಒಂದು ವಿಚಿತ್ರ ಕನಸು ಬಿತ್ತು.‌ ಅದರಲ್ಲಿ ಕೆಲವು ಜಿಂಕೆಗಳು ಮುಂಗಾಲುಗಳನ್ನು ಜೋಡಿಸಿಕೊಂಡು ಕಣ್ಣೀರು ಸುರಿಸುತ್ತಾ ಗದ್ಗದ ಸ್ವರದಿಂದ ಅಳುತ್ತಿದ್ದವು. ಅದನ್ನು ನೋಡಿ ಯುಧಿಷ್ಠಿರನು ಕೇಳಿದನು," ಮೃಗಶ್ರೇಷ್ಖರೇ! ಯಾರು ನೀವು? ನಿಮ್ಮ ಇಚ್ಛೆ ಏನು? ಅದೇನು ಹೇಳಬೇಕೆಂದಿರುವಿರೋ ನಿರ್ಭಯವಾಗಿ ಹೇಳಿ!" 
    ಅದಕ್ಕೆ ಆ ಜಿಂಕೆಗಳು ಹೇಳಿದವು," ನೀವುಗಳು ಆಹಾರಕ್ಕಾಗಿ ನಮ್ಮನ್ನು ಬೇಟೆಯಾಡುವಾಗ ನಿಮ್ಮ ಬಾಣಾಘಾತಕ್ಕೆ ಸಿಕ್ಕದೇ ತಪ್ಪಿಸಿಕೊಂಡು ಉಳಿದ ಬಡಪಾಯಿ ಜಿಂಕೆಗಳು ನಾವು! ಆದರೆ ಇನ್ನು ಕೆಲವೇ ದಿನಗಳಲ್ಲಿ ನಾವೂ ನಿಮ್ಮ ಆಹಾರವಾಗಿ ಪರಿವರ್ತನೆ ಹೊಂದುವುದು ಖಚಿತ! ಮಹಾರಾಜ! ನಿನ್ನ ತಮ್ಮಂದಿರು ಮಹಾಶೂರರು! ಬಿಲ್ವಿದ್ಯೆಯಲ್ಲಿ ಅಸಮಾನರು! ನಮ್ಮ ಉಚ್ಛ್ವಾಸ, ನಿ:ಶ್ವಾಸಗಳನ್ನು ಕೇಳಿಯೇ ಗುರಿಯಿಟ್ಟು ಬಾಣ ಬಿಡಬಲ್ಲರು! ಹೀಗಾಗಿ ದ್ವೈತವನದಲ್ಲಿ ನಮ್ಮ ವಂಶವೇ ಕ್ಷೀಣಿಸಿಹೋಗುತ್ತಿದೆ! ಅಲ್ಪಸಂಖ್ಯಾತರಾಗಿರುವ ನಾವಿಂದು ನಮ್ಮ ವಂಶಕ್ಕೆ ಬೀಜಪ್ರಾಯರಾಗಿರುವೆವು! ನಿನ್ನ ಅನುಗ್ರಹದಿಂದ ಮಾತ್ರ ನಮ್ಮ ವಂಶವು ಪುನಃ ಅಭಿವೃದ್ಧಿ ಹೊಂದಬಹುದು. ಹಾಗಾಗಿ ದಯವಿಟ್ಟು ನೀವು ಈ ಅರಣ್ಯ ಬಿಟ್ಟು ಬೇರೆ ಅರಣ್ಯಕ್ಕೆ ಪ್ರಯಾಣ ಮಾಡಿ! " 
    ಗಡಗಡನೆ ನಡುಗುತ್ತಾ ಕಣ್ಣೀರು ಸುರಿಸುತ್ತಾ ಹೇಳಿದ ಜಿಂಕೆಗಳ ಮಾತುಗಳನ್ನು ಕೇಳಿ ಯುಧಿಷ್ಠಿರನಿಗೆ ಬಹಳ ದು:ಖವಾಯಿತು. ಅವನು ಸಕಲಪ್ರಾಣಿಗಳ ಯೋಗಕ್ಷೇಮದಲ್ಲೂ ಆಸಕ್ತಿ ಹೊಂದಿದ್ದನು. ಹಾಗಾಗಿ ಅವನು," ತಥಾಸ್ತು! ನೀವು ಹೇಳಿದಂತೆಯೇ ಮಾಡುತ್ತೇನೆ!" ಎಂದು ಅಭಯವಿತ್ತನು.
   ಇದಿಷ್ಟು ಕನಸು ಮುಗಿದ ಬಳಿಕ ಯುಧಿಷ್ಠಿರನಿಗೆ ನಿದ್ರೆ ಕಳೆದು ಎಚ್ಚರವಾಯಿತು.‌ ಅವನಿಗೆ ಆಗ ಕನಸಿನ ವಿಷಯ ಕಾಡತೊಡಗಿತು. ಪ್ರಾತರ್ವಿಧಿಗಳು ಮುಗಿದ ಬಳಿಕ ತನ್ನ ತಮ್ಮಂದಿರ ಮಧ್ಯೆ ಕುಳಿತುಕೊಂಡು ತನಗಾದ ಕನಸಿನ ಅನುಭವವನ್ನು ಹೇಳಿ," ತಮ್ಮಂದಿರೇ! ಆ ಜಿಂಕೆಗಳ ಮಾತು ಸತ್ಯ! ನಾವು ಈ ಕಾಡಿನ ಪ್ರಾಣಿಗಳ ಮೇಲೆ ಈಗಲಾದರೂ ದಯೆ ತೋರಬೇಕು. ನಾವಿಲ್ಲಿಗೆ ಬಂದು ಒಂದು ವರ್ಷ ಎಂಟು ತಿಂಗಳುಗಳು ಕಳೆದುಹೋಗಿವೆ! ನಾವು ಈ ಪ್ರಾಣಿಗಳಿಂದಲೇ ಜೀವಿಸುತ್ತಿದ್ದೇವೆ! ಆದ್ದರಿಂದ ನಾವೀಗ ಬೇರೆ ಕಾಡಿಗೆ ಹೋಗಬೇಕು. ಅನೇಕಾನೇಕ ಮೃಗಗಳಿಂದಲೂ ಲತಾವೃಕ್ಷಗಳಿಂಜಲೂ ಸಮೃದ್ಧವಾಗಿರುವ, ತೃಣಬಿಂದು ಸರೋವರದ ದಡದಲ್ಲಿರುವ ಕಾಮ್ಯಕವನಕ್ಕೆ ಹೋಗೋಣ!" 
   ಯುಧಿಷ್ಠಿರನು ಹೀಗೆ ಹೇಳಲು, ಎಲ್ಲರೂ ಒಪ್ಪಿದರು. ಅದರಂತೆ ಅವರೆಲ್ಲರೂ ಕಾಮ್ಯಕವನಕ್ಕೆ ಹೋದರು.‌
     ಹೀಗೆ ಪ್ರಾಚೀನ ಭಾರತದಲ್ಲಿ ಬೇಟೆಯಾಡುವುದು ಹಾಗೂ ಮಾಂಸಾಹಾರ ಕಂಡುಬಂದರೂ ಅವುಗಳ ನಿಯಂತ್ರಣವೂ ಕಂಡುಬರುತ್ತದೆ. ಮನುಸ್ಮೃತಿಯ ಒಂದು ಮಾತು ಇಲ್ಲಿ ಮನನೀಯ:
    ನ ಮಾಂಸಭಕ್ಷಣೇ ದೋಷೋ ನಾ ಮದ್ಯೇ ನ ಚ ಮೈಥುನೇ /
ಪ್ರವೃತ್ತಿರೇಷಾ ಭೂತಾನಾಂ ನಿವೃತ್ತಿಸ್ತು ಮಹಾಫಲಾ //
    ' ಮಾಂಸಭಕ್ಷಣೆಯಲ್ಲಿ, ಮದ್ಯಪಾನದಲ್ಲಿ ಹಾಗೂ ಮೈಥುನದಲ್ಲಿ ದೋಷವಿಲ್ಲ. ಏಕೆಂದರೆ ಇದು ಮನುಷ್ಯರಿಗೆ ಸಹಜವಾದ ಪ್ರವೃತ್ತಿ. ಆದರೆ ಇದರ ನಿವೃತ್ತಿಯಿಂದ ಮಹಾಫಲವುಂಟಾಗುತ್ತದೆ.' 
   ಹೀಗೆ ಕೆಲವರಿಗೆ ಮಾಂಸಾಹಾರ ಬೇಕಾಗುತ್ತದೆ. ಅದು ತಪ್ಪಲ್ಲ. ಆದರೆ ಅದನ್ನು ಬಿಟ್ಟರೆ ಅಥವಾ ಕಡಿಮೆ ಮಾಡಿದರೆ ಒಳ್ಳೆಯದು. ಹೀಗೆ ನಾವು ಪ್ರಾಚೀನ ಭಾರತದ ಗ್ರಂಥಗಳಲ್ಲಿ, ಸಂದರ್ಭಗಳಲ್ಲಿ ಪ್ರಾಣಿಗಳ ಸಂರಕ್ಷಣೆಯ ವಿಚಾರವನ್ನು ನೋಡಬಹುದು.

ಸೋಮವಾರ, ಮೇ 18, 2026

ಸುಂದರೀಶತಕ -೪೦

ಸಂಸ್ಕೃತ ಮೂಲ 

ಕುಂಚನ್ಮೃದುಕರಶಾಖಾಕೃಷ್ಟಾಂಚಲಕೋಣತಿರ್ಯಗುಲ್ಲಸಿತ: /
ಲಕ್ಷೀಕರೋತಿ ಧನ್ಯಂ ಸುಂದರಿ ದೀರ್ಘ: ಕಟಾಕ್ಷಸ್ತೇ //

ಕನ್ನಡ ಅನುವಾದ 

       ' ಎಲೈ ಸುಂದರಿ! ಬಾಗಿದ ನಿನ್ನ ಮೃದುವಾದ ಕರಶಾಖೆಗಳಿಂದ ( ಬೆರಳುಗಳಿಂದ) ನಿನ್ನ ಸೆರಗಿನ ಅಂಚನ್ನು ಎಳೆಯುತ್ತಾ ಕಣ್ಣಿನ ಕೋನದಿಂದ ಓರೆಯಾದ ದೀರ್ಘ ಕಟಾಕ್ಷದ ಹೊಳೆಯುವ ನೋಟ ಬೀರುತ್ತಾ ಧನ್ಯನಾದ ಪುರುಷನೊಬ್ಬನನ್ನು ನಿನ್ನ ಲಕ್ಷ್ಯಕ್ಕೆ ತರುತ್ತಿರುವೆ!' 
     ಹೆಣ್ಣು ಓರೆ ನೋಟ ಬೀರಿ ನೋಡುವ ಸೌಂದರ್ಯವನ್ನು ಎಷ್ಟು ಹೊಗಳದರೂ ಕವಿಗೆ ತೃಪ್ತಿಯಿಲ್ಲ! ಮತ್ತೆ ಮತ್ತೆ ಬೇರೆ ಬೇರೆ ರೀತಿಯಲ್ಲಿ ಅವನು ಅದೇ ವಿಷಯವನ್ನು ಹೊಗಳುತ್ತಿದ್ದಾನೆ! ಅಂಥ ನೋಟಕ್ಕೆ ಗುರಿಯಾಗಿರುವ ಪುರುಷ ನಿಜಕ್ಕೂ ಧನ್ಯ ಎಂದು ಹೇಳುತ್ತಿದ್ದಾನೆ! ಇಲ್ಲಿ ಸುಂದರಿಯ ಮೃದುವಾದ ಕೈಬೆರಳುಗಳನ್ನು ಕೋಮಲವಾದ ಎಳೆ ಶಾಖೆಗಳಿಗೆ ಹೋಲಿಸಿರುವುದು ರಮ್ಯವಾಗಿದೆ! ಹೆಣ್ಣಿನ ಎಲ್ಲಾ ಅಂಗಗಳೂ ಅತ್ಯಂತ ಕೋಮಲ! ಅಷ್ಟೇ ಅಲ್ಲದೆ ಅವಳ ಮಾತು, ನಗೆ, ನೋಟ, ಎಲ್ಲವೂ ಕೋಮಲ ಹಾಗೂ ರಮ್ಯ! ಇಂಥ ಸುಂದರ ಹೆಣ್ಣಿನ ಕಣ್ಣೋಟ ಬಿದ್ದರೂ ಪುರುಷ ಧನ್ಯನಲ್ಲವೇ? 

ಸುಂದರೀಶತಕ -೩೯

ಸಂಸ್ಕೃತ ಮೂಲ 

ಸುಂದರಿ ವಿವೃತ್ಯ ದೃಷ್ಟ: ಕಷ್ಟಮಪಾಂಗೇನ ಭುಜಗೇನ /
ಅಧರಾಮೃತೇನ ಜೀವತಿ ಸೋsಯಮುಪಾಯಾಂತರಾಸಾಧ್ಯ: //

ಕನ್ನಡ ಅನುವಾದ 

     ' ಎಲೈ ಸುಂದರಿ! ನೀನು ಹಿಂದೆ ತಿರುಗಿ ನಿನ್ನ ಸರ್ಪವೆಂಬ ಕಡೆಗಣ್ಣ ಕುಡಿನೋಟ ಬೀರಿ ಇವನಿಗೆ ( ನಿನ್ನ ಪ್ರೇಮಿಗೆ) ಕಷ್ಟ ತಂದಿರುವೆ! ಈಗ ಇವನು ನಿನ್ನ ಅಧರಾಮೃತದಿಂದಷ್ಟೇ ಜೀವಿಸುತ್ತಾನೆ! ಬೇರಾವ ಉಪಾಯದಿಂದಲೂ ಸಾಧ್ಯವಿಲ್ಲ!'
       ಇಲ್ಲಿ ಕವಿಯು ಹೆಣ್ಣಿನ ಕಡೆಗಣ್ಣ ಕುಡಿನೋಟವನ್ನು ಸರ್ಪಕ್ಕೆ ಹೋಲಿಸಿದ್ದಾನೆ! ಅದು ಸರ್ಪವೇ ಎಂದು ಹೇಳಿರುವುದರಿಂದ ಇಲ್ಲಿ ರೂಪಕಾಲಂಕಾರವಿದೆ. ಆ ನೋಟ ಅವಳ ಪ್ರೇಮಿಗೆ ಸರ್ಪ ಕಚ್ಚಿದಂತಾಗಿ ಮೈಯೆಲ್ಲಾ ಪ್ರೇಮದ ವಿಷವೇರಿದೆ! ಈಗ ಅವನನ್ನು ಬದುಕಿಸುವುದು ಹೇಗೆ? ಅದಕ್ಕೆ ಇರುವ ಒಂದೇ ಉಪಾಯವೆಂದರೆ ಅವಳ ಅಧರಾಮೃತಪಾನ! ಬೇರಾವ ಉಪಾಯದಿಂದಲೂ ಸಾಧ್ಯವಿಲ್ಲ ಎನ್ನುತ್ತಾನೆ ಕವಿ! ಹೌದಲ್ಲವೇ?

ಸುಂದರೀಶತಕ -೩೮

ಸಂಸ್ಕೃತ ಮೂಲ 

ತವ ಸುಂದರಿ ಮಧುರಸ್ಮಿತಮೇದುರಮಚ್ಚಕ್ಷುರಭಿಮುಖಂ ಚಕ್ಷು: /
ಶರದಿಂದುಕಿರಣತುಂದಿಲಕುಮುದೋನ್ಮುಖಮಧುಪಮನುಹರತೇ //

ಕನ್ನಡ ಅನುವಾದ 

    ' ಎಲೈ ಸುಂದರಿ! ಮಧುರವಾದ ನಗುವಿನಿಂದ ಕೂಡಿರುವ ನಿನ್ನ ಕಣ್ಣು ನನ್ನ ಕಣ್ಣಿನ ಮುಂದಿರಲು, ಶರತ್ಕಾಲದ ಚಂದಿರನ ಕಿರಣಗಳಿಂದ ಅರಳಿದ ಕುಮುದ ಪುಷ್ಪದ ಮುಂದೆ ಇರುವ ಭ್ರಮರದಂತಿದೆ! ' 
       ಪ್ರೇಮಿಗಳು ಒಬ್ಬರನ್ನೊಬ್ಬರು ನೋಡುತ್ತಾ ಕುಳಿತರೆ ಜಗತ್ತನ್ನೇ ಮರೆಯುವರು! ಹಾಗೆಯೇ ಇಲ್ಲಿ ಇಬ್ಬರು ಪ್ರೇಮಿಗಳು ಪರಸ್ಪರ ನೋಡುತ್ತಾ ಕುಳಿತಿದ್ದಾರೆ.‌ ನಗುವಿನಿಂದ ಕೂಡಿರುವ ಸುಂದರಿಯ ಕಣ್ಣು ಪ್ರಿಯತಮನ ಕಣ್ಣಿನ ಮುಂದಿದ್ದರೆ, ಪ್ರಿಯತಮನ ಮುಖ, ಶರತ್ಕಾಲದ ಚಂದ್ರಮನ ಕಿರಣಗಳಿಂದ ಅರಳಿದ ಕುಮುದ ಪುಷ್ಪದಂತೆ ಅರಳಿದೆ. ಅದನ್ನು ನೋಡುತ್ತಿರುವ ಪ್ರಿಯತಮೆಯ ಕಣ್ಣು, ಭ್ರಮರದಂತೆ ಆಉರ್ಷಿತವಾಗಿದೆ! ಹೀಗೆ ಕವಿಯು ಪ್ರಿಯತಮನ ಮುಖವನ್ನು ಅರಳಿದ ಕುಮುದ ಪುಷ್ಪಕ್ಕೂ ಪ್ರಿಯತಮೆಯ ಕಣ್ಣನ್ನು ಭ್ರಮರಕ್ಕೂ ಹೋಲಿಸಿ ಅವನ ಬಾಯಲ್ಲೇ ಹೇಳಿಸಿದ್ದಾನೆ. ಇಲ್ಲಿ ಉಪಮಾಲಂಕಾರವಿದೆ. ಕಮಲ ಪುಷ್ಪಗಳು ಸೂರ್ಯನ ಕಿರಣಗಳಿಗೆ ಅರಳಿದರೆ ಕುಮುದ ಪುಷ್ಪಗಳು ಅಥವಾ ಬಿಳಿ ನೈದಿಲೆಗಳು ಚಂದ್ರಕಿರಣಗಳಿಗೆ ಅರಳುತ್ತವೆ.