ಭಾನುವಾರ, ಜೂನ್ 14, 2026

ಸುಂದರೀಶತಕ -೫೧

ಸಂಸ್ಕೃತ ಮೂಲ 

ಪ್ರೇಮಾಸವೋನ್ಮದಿಷ್ಣೋ: ಪ್ರಣಯತನೀಯಾಂಸಿ ತಾನಿ ವಚನಾನಿ /
ಕರಣೀಯಾನಿ ನ ಹೃದಯೇ ದಯಿತೇ ಯದಯಂ ದಯಾವಸರ: // 

ಕನ್ನಡ ಅನುವಾದ 

      ' ಪ್ರಿಯೇ! ಪ್ರೇಮವೆಂಬ ಮದಿರೆಯನ್ನು ಕುಡಿದು ಮತ್ತನಾದ ನಾನು ಪ್ರೇಮೋನ್ಮಾದದಲ್ಲಿ ಆಡಿದ ಹಗುರವಾದ ಮಾತುಗಳನ್ನು ಹೃದಯದಲ್ಲಿ ಇಟ್ಟುಕೊಳ್ಳಬೇಡ! ದಯೆ ತೋರಿಸಲು ಇದೇ ಸರಿಯಾದ ಸಮಯ!' 
    ಇಲ್ಲಿ ನಾಯಕನು ತನ್ನ ಪ್ರಿಯತಮೆಯ ಪ್ರೇಮವೆಂಬ ಮದಿರೆಯನ್ನು ಕುಡಿದು ಮತ್ತನಾಗಿ ಅವಳ ಬಳಿ ಏನೋ ಹಗುರವಾದ ಮಾತುಗಳನ್ನಾಡಿದ್ದಾನೆ ಹಾಗೂ ಕೀಟಲೆ ಮಾಡಿದ್ದಾನೆ. ಅಂದರೆ ಪ್ರೇಮದ ಸಲಿಗೆಯಲ್ಲಿ ಅವಳನ್ನು ಅಣಕಿಸಿದ್ದಾನೆ. ಕುಡಿದ ಮತ್ತಿನಲ್ಲಿ ಹಗುರವಾಗಿ ಮಾತನಾಡುವಂತೆ ಪ್ರೇಮಮದ್ಯವನ್ನು ಕುಡಿದ ಮತ್ತಿನಲ್ಲಿ ಇವನು ಅವಳನ್ನು ಅಣಕಿಸಿದ್ದಾನೆ. ಇದರಿಂದ ಅವಳು ಕೋಪಗೊಂಡಿದ್ದಾಳೆ! ಆಗ ಇವನಿಗೆ ತನ್ನ ತಪ್ಪು ಅರಿವಾಗಿ ತಾನು ಪ್ರೇಮಮದಿರೆಯ ಮತ್ತಿನಲ್ಲಿ ಆಡಿದ ಹಗುರವಾದ ಮಾತುಗಳನ್ನು ಹೃದಯದಲ್ಲಿ ಇಟ್ಟುಕೊಳ್ಳಬಾರದು, ಅವು ಮೈಮರೆತು ಹೇಳಿದ ಮಾತುಗಳು, ಹಾಗಾಗಿ ಗಣನೆಗೆ ತೆಗೆದುಕೊಳ್ಳಬಾರದು, ಎಂದು ಬೇಡಿಕೊಳ್ಳುತ್ತಾ ದಯೆ ತೋರಿಸಲು ಇದೇ ಸರಿಯಾದ ಸಮಯ ಎನ್ನುತ್ತಿದ್ದಾನೆ. ತಪ್ಪು ಮಾಡದಿದ್ದಾಗ ದಯೆ ತೋರಿದರೆ ಏನು ಪ್ರಯೋಜನ, ತಪ್ಪು ಮಾಡಿದಾಗ ದಯೆ ತೋರಿದರೆ ಅದು ಹೆಚ್ಚಿನದು ಎಂದು ಅವನ ಅಭಿಪ್ರಾಯ. ಹೀಗೆ ಪ್ರೇಮಿಗಳ ನಡುವೆ ಆಗಾಗ ಪ್ರಮಯಕಲಹ ಇದ್ದರೆ ಚೆನ್ನ.

ಶುಕ್ರವಾರ, ಜೂನ್ 12, 2026

ಸುಂದರೀಶತಕ -೫೦

ಸಂಸ್ಕೃತ ಮೂಲ 

ಜ್ಞಾತಾಸಿ ಗೃಹಜನೈರಿತಿ ಕಥಿತೇ ಸಂಭ್ರಾಂತತಾರಕಂ ದೂತ್ಯಾ /
ಅರುಣಮಪಿ ಮಾನವತ್ಯಾ: ಸ್ಮರಾಮಿ ಪಾಂಡೂಭವದ್ವದನಮ್ //

ಕನ್ನಡ ಅನುವಾದ 

      ' ನಿನ್ನ ರಹಸ್ಯ ಪ್ರೇಮದ ವಿಷಯ ಮನೆಯವರಿಗೆಲ್ಲಾ ಗೊತ್ತಾಗಿದೆ ಎಂದು ದೂತಿಯು ನನ್ನ ಪ್ರಿಯತಮೆಗೆ ಹೇಳಲು, ಅವಳ ಕಣ್ಣುಗಳ ಪಾಪೆಗಳು ಸಂಭ್ರಾಂತಗೊಂಡವು ಹಾಗೂ ಕೋಪಗೊಂಡಿದ್ದ ಅವಳ ಮುಖ ಕೆಂಪಾಗಿದ್ದರೂ ಬಿಳುಚಿಕೊಂಡಿದ್ದನ್ನು ನಾನು ಈಗಲೂ ಸ್ಮರಿಸುತ್ತೇನೆ!' 
    ಇಲ್ಲಿ ನಾಯಿಕೆಯು ನಾಯಕನಲ್ಲಿ ಕುಪಿತಗೊಂಡು ಕುಳಿತಿದ್ದಾಳೆ. ಆಗ ಅವಳ ದೂತಿಯು ಬಂದು ಅವಳ ರಹಸ್ಯ ಪ್ರೇಮದ ವಿಷಯ ಮನೆಯವರಿಗೆಲ್ಲಾ ಗೊತ್ತಾಗಿದೆ ಎಂದು ಹೇಳಿದ್ದಾಳೆ.‌ ಇದರಿಂದ ಅವಳು ಗಾಬರಿಗೊಳ್ಳಲು ಅವಳ ಕಣ್ಣುಗಳ ಪಾಪೆಗಳು ಸಂಭ್ರಾಂತಗೊಂಡಿವೆ! ಕೋಪದಿಂದ ಕೆಂಪಾಗಿದ್ದ ಅವಳ ಮುಖವು ಕೂಡಲೇ ಭಯದಿಂದ ಬಿಳುಚಿಕೊಂಡಿದೆ! ಕೋಪವು ಭಯಕ್ಕೆ ತಿರುಗುವ ಹಾಗೂ ಕೆಂಪಾದ ಮುಖ ಬಿಳುಚಿಕೊಳ್ಳುವ ಈ ಸುಂದರ ಮುಖಭಾವವನ್ನು ಈಗಲೂ ಸ್ಮರಿಸುತ್ತೇನೆ ಎಂದು ನಾಯಕನು ಹೇಳುತ್ತಿದ್ದಾನೆ. 

ಗುರುವಾರ, ಜೂನ್ 11, 2026

ಸುಂದರೀಶತಕ -೪೯

ಸಂಸ್ಕೃತ ಮೂಲ 

ಸಸ್ಮಿತಮರುಣಕಪೋಲಂ ರಚಿತಭ್ರೂಭಂಗಮಂಚಿತವ್ರೀಡಮ್ /
ಸಂಪೃಕ್ತಭಾವರುಚಿರಂ ವದನಂ ತಸ್ಯಾ: ಸ್ಮರಾಮಿ ಸಖೇ //

ಕನ್ನಡ ಅನುವಾದ 

    ' ಹೇ ಸಖ!  ನಗುವಿನೊಂದಿಗೆ ಕೆಂಪಾದ ಅವಳ ಕೆನ್ನೆಗಳು, ಕೋಪದಿಂದ ಗಂಟಿಕ್ಕಿದ ಹುಬ್ಬುಗಳು, ನಾಚಿಕೆಯಿಂದ ಬಾಗಿದ ಮುಖ, ಈ ಮಿಶ್ರ ಭಾವಗಳಿಂದ ಸುಂದರವಾದ ಆ  ನನ್ನ ಪ್ರಿಯತಮೆಯ ಮುಖವನ್ನು ಈಗಲೂ ಸ್ಮರಿಸುತ್ತೇನೆ!'
     ಇಲ್ಲಿ ಪ್ರಾಯಶಃ ನಾಯಕನು ಕೋಪಗೊಂಡ ತನ್ನ ನಾಯಕಿಯನ್ನು ಸಮಾಧಾನ ಮಾಡಿದಾಗ ಮೂಡಿದ ಚಿತ್ರಣವನ್ನು ತನ್ನ ಸಖನಿಗೆ ವರ್ಣಿಸುತ್ತಿದ್ದಾನೆ. ಅವನು ಅವಳನ್ನು ಸಮಾಧಾನಗೊಳಿಸುತ್ತಾ ಪ್ರಾಯಶಃ ಚುಂಬಿಸಿದ್ದಾನೆ.  ಆಗ ಅವಳು ಕೋಪವನ್ನು ಬಿಟ್ಟರೂ ಇನ್ನೂ ಅವಳ ಹುಬ್ಬುಗಳು ಗಂಟಿಕ್ಕಿಕೊಂಡಿವೆ. ಆದರೆ ಅವನ ಪ್ರೀತಿಗೆ ಕರಗಿ ಅವನ ಚುಂಬನದಿಂದ ಕಿರುನಗೆ ಮೂಡಿಸಿದ್ದಾಳೆ ಹಾಗೂ ಅವಳ ಕೆನ್ನೆಗಳು ಕೆಂಪಾಗಿವೆ. ಜೊತೆಗೆ ನಾಚಿ ತಲೆ ತಗ್ಗಿಸಿದ್ದಾಳೆ. ಈ ಎಲ್ಲ ಮಿಶ್ರಿತ ಭಾವಗಳ ಅವಳ ಮುಖ ಬಹಳ ಸುಂದರವಾಗಿ ಕಾಣುತ್ತಿದ್ದು ಈಗಲೂ ಅದನ್ನು ಸ್ಮರಿಸುತ್ತೇನೆ ಎಂದು ಅವನು ತನ್ನ ಸಖನಿಗೆ ಹೇಳುತ್ತಿದ್ದಾನೆ. 

ಸೋಮವಾರ, ಜೂನ್ 8, 2026

ಸುಂದರೀಶತಕ -೪೮

ಸಂಸ್ಕೃತ ಮೂಲ 

ಸಾಗಸಿ ಮಯಿ ಮಂದಪದಂ ಪಶ್ಚಾದೇತ್ಯ ಸ್ಥಿತೇ ಸರೋಜದೃಶಮ್ /
ಮುಕುರಂ ಪ್ರದರ್ಶಯಿತ್ವಾ ತತ್ಸಖ್ಯಾ ಕಿಮಿವ ನೋಪಕೃತಮ್ //

ಕನ್ನಡ ಅನುವಾದ 

     ' ಪ್ರಿಯತಮೆಯ ವಿಷಯದಲ್ಲಿ ಅಪರಾಧ ಮಾಡಿದ್ದ ನಾನು ಮೆಲ್ಲ ಮೆಲ್ಲನೆ ಹೆಜ್ಜೆಯಿಟ್ಟು ಆ ಕಮಲನಯನೆಯ ಹಿಂದೆ ಹೋಗಿ ನಿಂತೆ! ಆಗ ಅವಳ ಸಖಿಯು ಅವಳಿಗೆ ಒಂದು ಕನ್ನಡಿ ತೋರಿಸಿ ಯಾವ ಉಪಕಾರ ತಾನೇ ಮಾಡಲಿಲ್ಲ?'
      ಪ್ರಿಯತಮೆಯ ವಿಷಯದಲ್ಲಿ ಏನೋ ತಪ್ಪು ಮಾಡಿದ್ದ ನಾಯಕನು ಅವಳು ಕೋಪಿಸಿಕೊಂಡು ಕುಳಿತಿದ್ದಾಗ ಮೆಲ್ಲ ಮೆಲ್ಲನೆ ಹೆಜ್ಜೆಯಿಡುತ್ತಾ ಅವಳ ಹಿಂದೆ ಹೋಗಿ ಕ್ಷಮೆಯಾಚಿಸಲು ನಿಂತಿದ್ದಾನೆ. ಆದರೆ ಅವಳು ಮುಖ ತಿರುಗಿಸಿ ನೋಡುತ್ತಲೇ ಇಲ್ಲ! ಅವನಿಗೂ ಮಾತನಾಡಲು ಧೈರ್ಯ ಸಾಲದೇ ಸುಮ್ಮನೆ ನಿಂತಿದ್ದಾನೆ. ಇದನ್ನು ಗಮನಿಸಿದ ನಾಯಕಿಯ ಸಖಿಯೊಬ್ಬಳು ಒಂದು ಕನ್ನಡಿಯನ್ನು ತಂದು ಅವಳಿಗೆ ತೋರಿಸಿದ್ದಾಳೆ. ಆಗ ಅವಳಿಗೆ ತನ್ನ ಹಿಂದೆ ನಿಂತಿರುವ ತನ್ನ ಪತಿ ಕಾಣಿಸಿದ್ದಾನೆ. ಆಗ ಅವನ ಪಶ್ಚಾತ್ತಾಪದ ಮುಖ ಕಾಣಿಸಿ ಅವನನ್ನು ಕ್ಷಮಿಸಿದ್ದಾಳೆ. ಹೀಗೆ ಕನ್ನಡಿ ತೋರಿಸಿ ಸಖಿಯು ಯಾವ ಉಪಕಾರ ತಾನೇ ಮಾಡಲಿಲ್ಲ ಎಂದು ನಾಯಕನು ಸ್ಮರಿಸಿಕೊಂಡು ಹೇಳುತ್ತಿದ್ದಾನೆ. 

ಭಾನುವಾರ, ಜೂನ್ 7, 2026

ಸುಂದರೀಶತಕ -೪೭

ಸಂಸ್ಕೃತ ಮೂಲ 

ಅರವಿಂದದ್ಯುತಿಶೋಣಂ ಲೋಚನಕೋಣಂ ಸರೋಜಾಕ್ಷ್ಯಾ: /
ಪ್ರಣಮತಿ ಮಯ್ಯಥ ಸದಯಂ ಹರಿಹರಿ ಹೃದಯಂ ನ ವಿಸ್ಮರತಿ //

ಕನ್ನಡ ಅನುವಾದ 

     ' ಆ ಸರೋಜಾಕ್ಷಿಯ ಕೋಪವನ್ನು ತಣಿಸಲು ನಾನು ಅವಳ ಕಾಲಿಗೆ ಬಿದ್ದಾಗ, ಕಮಲದ ಕಾಂತಿಯಂತೆ ಕೆಂಪಾಗಿದ್ದ ಅವಳ ಕಣ್ಣುಗಳ ಅಂಚುಗಳಲ್ಲಿ ದಯೆಯು ಕಾಣಿಸಿತು! ಹರಿ ಹರಿ! ಇದನ್ನು ನನ್ನ ಹೃದಯವು ಮರೆಯುವುದಿಲ್ಲ!' 
    ಇಲ್ಲಿ ಪತಿಯು ತನ್ನ ಪ್ರಿಯ ಪತ್ನಿಯ ವಿಷಯದಲ್ಲಿ ಏನೋ ತಪ್ಪು ಮಾಡಿದ್ದಾನೆ. ಅದರಿಂದ ಅವಳು ಕೋಪಗೊಂಡಿದ್ದಾಳೆ.‌ ಆದರೆ ಅವಳು ಅವನು ಎಷ್ಟೇ ಸಮಾಧಾನಪಡಿಸಿದರೂ ಕೋಪ ಬಿಡುತ್ತಿಲ್ಲ.‌ ಕೊನೆಗೆ ಅವನು ಅವಳ ಕಾಲಿಗೆ ಬಿದ್ದಾಗ ಅವಳ ಕೋಪ ಕರಗಿ ಕಮಲದಂತೆ ಕೆಂಪಾದ ಅವಳ ಕಣ್ತುದಿಯಲ್ಲಿ ದಯೆಯು ಮೂಡಿದೆ! ಇದನ್ನು ಕವಿ ಅಥವಾ ಆ ಪತಿಯು ನೆನಪಿಸಿಕೊಂಡು ಎಂದಿಗೂ ಮರೆಯಲಾರೆ ಎನ್ನುತ್ತಿದ್ದಾನೆ! ಹೆಂಡತಿಯು ಗಂಡನ ಕಾಲಿಗೆ ಬೀಳುವುದು ಸಾಮಾನ್ಯ. ಆದರೆ ಪ್ರಾಚೀನ ಸಂಸ್ಕೃತ ಶೃಂಗಾರ ಕಾವ್ಯಗಳಲ್ಲಿ ತಪ್ಪು ಮಾಡಿದಾಗ ಗಂಡನೂ ಹೆಂಡತಿಯನ್ನು ಸಮಾಧಾನಗೊಳಿಸಲು ಅವಳ ಕಾಲಿಗೆ ಬೀಳುವುದನ್ನು ಕಾಣುತ್ತೇವೆ! ಕೃಷ್ಣನೂ ಕೋಪಗೊಂಡ ಸತ್ಯಭಾಮೆಯ ಪಾದಗಳಿಗೆ ನಮಸ್ಕಾರ ಮಾಡಿ ಅವನ್ನು ಒತ್ತುವುದನ್ನು ಕಾಣುತ್ತೇವೆ! ಗಂಡನು ಏಷ್ಟೇ ಅನುನಯಗೊಳಿಸಿದರೂ ಸಮಾಧಾನಗೊಳ್ಳದ ಹೆಂಡತಿ, ಅವನು ಅವಳ ಕಾಲಿಗೆ ಬಿದ್ದಾಗ ಥಟ್ಟನೆ ಸಮಾಧಾನಗೊಳ್ಳುತ್ತಾಳೆ! ಅವಳಿಗಿಂತ ದೊಡ್ಡವನಾದ ಅವನು ತನ್ನ ಅಭಿಮಾನ ಬಿಟ್ಟು ಅವಳ ಕಾಲಿಗೆ ಬೀಳುವುದು ಸುಲಭದ ಮಾತಲ್ಲ ಅಲ್ಲವೇ? ಆದರೆ ಅವನು ಪ್ರೇಮಕ್ಕಾಗಿ ಹಾಗೆ ಮಾಡಿದಾಗ ಅವಳು ಕರಗಿಹೋಗುತ್ತಾಳೆ! ಅಂಥ ಒಂದು ಸುಂದರ ಸನ್ನಿವೇಶವನ್ನು ಕವಿ ಇಲ್ಲಿ ಚಿತ್ರಿಸಿದ್ದಾನೆ.

ಬುಧವಾರ, ಜೂನ್ 3, 2026

ಸುಂದರೀಶತಕ -೪೬

ಸಂಸ್ಕೃತ ಮೂಲ 

ಸಂಸದಿ ಸಖೀಜನಾನಾಂ ಗೋಷ್ಠೀಂ ಕರ್ತುಂ ಪುರ: ಪ್ರವೃತ್ತಾಯಾ: /
ಗೋತ್ರಸ್ಖಲನವಿಲಕ್ಷಂ ಸುಂದರಿ ಮುಖಮೀಕ್ಷಣೀಯಂ ತೇ //

ಕನ್ನಡ ಅನುವಾದ 

     ' ಎಲೈ ಸುಂದರಿ! ಸಖಿಯರ ಸಮಕ್ಷಮದಲ್ಲಿ ನೀನು ಮಾತುಕತೆಯಾಡಲು ಆರಂಭಿಸಿದಾಗ, ನಿನ್ನ ಪತಿಯು ಗೋತ್ರಸ್ಖಲನವಾಗಿ ನಿನ್ನ ಹೆಸರನ್ನು ಕರೆಯುವ ಬದಲಿಗೆ ಬೇರೊಬ್ಬ ಪ್ರೇಯಸಿಯ ಹೆಸರನ್ನು ಕರೆದಾಗ, ನಿನ್ನ ಮುಖದಲ್ಲಾದ ವ್ಯಾಕುಲತೆ, ಕೋಪ, ಆಶ್ಚರ್ಯ, ಮತ್ತು ಲಜ್ಜೆಗಳ ವಿಲಕ್ಷಣ ಭಾವ ನೋಡಲು ಸುಂದರವಾಗಿತ್ತು!' 
     ಹೆಣ್ಣಿನ ವಿವಿಧ ಭಾವಗಳನ್ನು ಕವಿಯು ಚಿತ್ರಿಸುತ್ತಿದ್ದಾನೆ. ಹೆಣ್ಣು, ಕೋಪ, ಲಜ್ಜೆ, ಸಂಕೋಚ, ಆಶ್ಚರ್ಯ , ವ್ಯಾಕುಲತೆ, ಮೊದಲಾದ ಮುಖಭಾವಗಳಲ್ಲಿ ಬಹಳ ಸುಂದರವಾಗಿ, ಮುದ್ದಾಗಿ ಕಾಣುತ್ತಾಳೆ! ಇಲ್ಲಿ ಕವಿಯು ಅಂಥ ಒಂದು ಸಂದರ್ಭವನ್ನು ಚಿತ್ರಿಸಿದ್ದಾನೆ. ಸುಂದರ ಹೆಣ್ಣೊಬ್ಬಳು ತನ್ನ ಸಖಿಯರೊಂದಿಗೆ ಒಂದು ಮಾತುಕತೆಯ ಗೋಷ್ಠಿಯನ್ನು ಆರಂಭಿಸುತ್ತಿದ್ದಾಳೆ. ಅವಳ ಪತಿ ಅಥವಾ ಪ್ರಿಯತಮನೂ ಅಲ್ಲಿದ್ದಾನೆ.‌ ಆದರೆ ಅವನು ಬಾಯಿತಪ್ಪಿ ಅವಳ ಹೆಸರನ್ನು ಕರೆಯುವ ಬದಲಿಗೆ ಬೇರೊಬ್ಬ ಪ್ರೇಯಸಿಯ ಹೆಸರನ್ನು ಕರೆದಿದ್ದಾನೆ! ಇದಕ್ಕೆ ಗೋತ್ರಸ್ಖಲನವೆಂದು ಹೆಸರು. ಗೋತ್ರಸ್ಖಲನದ ವಿಷಯವು ಸಂಸ್ಕೃತದ ಶೃಂಗಾರ ಸಾಹಿತ್ಯದಲ್ಲಿ ಪ್ರಮುಖ ಸ್ಥಾನ ವಹಿಸುತ್ತದೆ.‌ ಗೋತ್ರಸ್ಖಲನವೆಂದರೆ ನಾಯಕನು ತನ್ನ ಪ್ರಿಯತಮೆಯ ಹೆಸರನ್ನು ಕರೆಯುವ ಬದಲಿಗೆ ಬೇರೊಬ್ಬ ಪ್ರೇಯಸಿಯ ಹೆಸರನ್ನು ಕರೆಯುವುದು. ಆಗ ನಾಯಕಿಗೆ ಆಗುವ ಸಂಕೋಚ, ಲಜ್ಜೆ, ವ್ಯಾಕುಲತೆ, ಆಶ್ಚರ್ಯ, ಕೋಪ, ಮೊದಲಾದ ಮಿಶ್ರ ವಿಲಕ್ಷಣ ಭಾವಗಳು ಒಂದು ಮೆರುಗು ನೀಡುತ್ತವೆ. ಅದೂ ಸಖಿಯರ ಮುಂದೆ ಅವಳ ಪತಿ ಬೇರೊಬ್ಬಳ ಹೆಸರನ್ನು ಕರೆದರೆ ಅವಳಿಗೆ ಹೇಗಾಗಬೇಡ? ಅವಳ ಆ ಮಿಶ್ರ ವಿಲಕ್ಷಣ ಮುಖಭಾವ ಸುಂದರವಾಗಿದೆ ಎಂದು ಹೇಳುತ್ತಾನೆ ಕವಿ.

ಸುಂದರೀಶತಕ -೪೫

ಸಂಸ್ಕೃತ ಮೂಲ 

ಕಾತರನಯನನಿವೇದಿತನಿರ್ದಯಕಂದರ್ಪವೇದನಾತಿಶಯಮ್/
ದೃಷ್ಟಂ ನಿಖಾತಮಂತ: ಪ್ರಿಯಯಾ ಪ್ರಸ್ಥಾನವೇಲಾಯಾಮ್//

ಕನ್ನಡ ಅನುವಾದ 

    ' ನಾನು ಪ್ರಯಾಣ ಹೊರಡುವ ಸಮಯದಲ್ಲಿ ನನ್ನ ಪ್ರಿಯತಮೆಯ ಕಾತರ ನಯನಗಳು ನಿವೇದಿಸಿದ ನಿರ್ದಯ ಕಾಮವೇದನೆಯ ಅತಿಶಯದ ನೋಟ ನನ್ನ ಹೃದಯಾಂತರಾಳದಲ್ಲಿ ಹೊಕ್ಕಿ ನೆಲೆಸಿದೆ!'
     ಪ್ರಿಯನು ಕಾರಣಾಂತರದಿಂದ ಪ್ರಯಾಣ ಹೊರಟಾಗ ಅವನ ಪ್ರಿಯತಮೆಗೆ ಆಗುವ ವಿರಹವೇದನೆ ಅಷ್ಟಿಷ್ಟಲ್ಲ! ಕಾಮದೇವನು ನಿರ್ದಯವಾಗಿ ಅವಳನ್ನು ಬಾಧಿಸುತ್ತಾನೆ! ಆದರೆ ಅವಳು ಅದನ್ನು ಯಾವ ಮಾತಿನಿಂದಲೂ ವ್ಯಕ್ತಪಡಿಸುವುದಿಲ್ಲ! ಕೇವಲ ತನ್ನ ಕಣ್ಣ ನೋಟದಿಂದಲೇ ತೋರಿಸುತ್ತಾಳೆ! ಅದು ಅವಳ ಪ್ರಿಯನ ಹೃದಯವನ್ನು ಬಾಣದಂತೆ ಹೊಕ್ಕು ಅಂತರಂಗದಲ್ಲಿ ನೆಲೆಸುತ್ತದೆ! ಅದನ್ನು ಅವನು ಮರೆಯಲು ಸಾಧ್ಯವೇ ಇಲ್ಲ! ಹಾಗಾಗಿ ಅವನು ಅನಂತರ ಅದನ್ನು ನೆನೆಯುತ್ತಿದ್ದಾನೆ.