ಶನಿವಾರ, ಜುಲೈ 4, 2026

ಭೋಜರಾಜನ ಸಮಸ್ಯೆ

ಭೋಜರಾಜ ಮತ್ತು ಕಾಳಿದಾಸರ ಕಥಾಪ್ರಸಂಗಗಳು ಜನಪ್ರಿಯವಾಗಿವೆ. ಇಂಥ ಕಥಾಪ್ರಸಂಗಗಳನ್ಧು ಬಲ್ಲಾಳಸೇನನೆಂಬ ಕವಿ ತನ್ನ ಭೋಜಪ್ರಬಂಧವೆಂಬ ಸ್ವಾರಸ್ಯಕರ ಸಂಸ್ಕೃತ ಗ್ರಂಥದಲ್ಲಿ ಸಂಕಲಿಸಿದ್ದಾನೆ.‌ ಅಲ್ಲಿ ನಾವು ನೋಡುವಂತೆ, ಹೊರಗಿನಿಂದ ಬಂದ ಇತರ ಪಂಡಿತರು, ವಿದ್ವಾಂಸರಷ್ಟೇ ಅಲ್ಲದೇ ಸ್ವಯಂ ಭೋಜರಾಜನೇ ಅನೇಕ ಬಾರಿ ತನ್ನ ಆಸ್ಥಾನದ ಕವಿಗಳಿಗೆ ಒಗಟುಗಳನ್ನು, ಸಮಸ್ಯೆಗಳನ್ನು ಕೊಟ್ಟು ಪೂರೈಸಲು ಹೇಳುತ್ತಿದ್ದ. ಹೀಗೆಯೇ ಒಮ್ಮೆ ತನ್ನದೇ ಅನುಭವದಿಂದ ಒಂದು ಸಮಸ್ಯೆಯನ್ನು ಸಭೆಯಲ್ಲಿ ಹೇಳಿ ಕಾಳಿದಾಸನಿಗೆ ಅದನ್ನು ಪೂರೈಸಲು ಹೇಳಿದ. ಸಮಸ್ಯೆ ಹೀಗಿತ್ತು-
ಟಟಂಟಟಂಟಂಟಟಟಂಟಟಂಟಂ 
ಇದು ಒಂದು ಸಂಸ್ಕೃತ ಶ್ಲೋಕದ ಒಂದು ಪಾದವಾಗಿ ಇರುವಂತೆ ಇತರ ಮೂರು ಪಾದಗಳನ್ನು ರಚಿಸಿ ಸಮಸ್ಯೆಯನ್ನು ಪೂರೈಸಬೇಕಿತ್ತು. 
ಸಭಿಕರಿಗೆ ಹಾಗೂ ಇತರ ಕವಿಗಳಿಗೆ ದಿಗ್ಭ್ರಮೆಯಾಯಿತು! ಇದೆಂಥ ಸಮಸ್ಯೆ? ಇದನ್ನು ಹೇಗೆ ಪೂರೈಸಲು ಸಾಧ್ಯ? ಕಾಳಿದಾಸನಾದರೋ ಹೇಗೆ ಪೂರೈಸುತ್ತಾನೆ? ಇಂದಿಗೆ ಮುಗಿಯಿತು ಕಾಳಿದಾಸನ ಕಥೆ ಎನಿಸಿತು ಎಲ್ಲರಿಗೂ! 
    ಭೋಜರಾಜನು ತನ್ನ ಸ್ವಂತ ಅನುಭವದಿಂದಲೇ ಈ ಸಮಸ್ಯೆಯನ್ನು ಕೊಟ್ಟಿದ್ದ. ಅಂದು ಬೆಳಿಗ್ಗೆ ಅವನು ಒಂದು ಸರೋವರದಲ್ಲಿ ಸ್ನಾನ ಮಾಡುತ್ತಿದ್ದ. ಆಗ ಮೆಟ್ಟಿಲುಗಳ ಮೇಲೆ ನಿಂತು ನೋಡುತ್ತಿದ್ದ ಒಬ್ಬ ಮದಿರಾಕ್ಷಿ ಯುವತಿ, ಅವನ ರೂಪದಿಂದ ಮದನಪರವಶಳಾದಳು. ಅವಳು ನೀರು ತರಲು ಒಂದು ಚಿನ್ನದ ಬಿಂದಿಗೆ ತಂದಿದ್ದಳು. ರಾಜನನ್ನು ನೋಡುತ್ತಾ ಮೈಮರೆತ ಅವಳು ತಿಳಿಯದೆ ತನ್ನ ಕೈಯಿಂದ ಆ ಚಿನ್ನದ ಬಿಂದಿಗೆಯನ್ನು ಜಾರಿಬೀಳಿಸಿಕೊಂಡಳು! ಆಗ ಅದು ಮೆಟ್ಟಿಲುಗಳಿಂದ ಇಳಿಯುತ್ತಾ ಮಾಡಿದ ಶಬ್ದವೇ ಈ ಟಟಂ ಟಟಂ........
     ಆ ಶಬ್ದವನ್ನೇ ಸಮಸ್ಯೆಯಾಗಿ ಕೊಟ್ಟಿದ್ದ ಭೋಜರಾಜ! ಆದರೆ ಇದನ್ನು ಕಾಳಿದಾಸನು ಹೇಗೆ ಪೂರೈಸಿಯಾನು? ಮಹಾಕವಿಯಲ್ಲವೇ? ಕೂಡಲೇ ಪೂರೈಸಿದ -
     ರಾಜಾಭಿಷೇಕೇ ಮದವಿಹ್ವಲಾಯಾ 
     ಹಸ್ತಾಚ್ಚ್ಯುತೋ ಹೇಮಘಟೋ ಯುವತ್ಯಾ:  /
     ಸೋಪಾನಮಾರ್ಗೇಷು ಕರೋತಿ ಶಬ್ದಂ 
     ಟಟಂಟಟಂಟಂಟಟಟಂಟಟಂಟಮ್ //
     ' ರಾಜನು ಅಭಿಷೇಕ ( ಸ್ನಾನ) ಮಾಡಿಕೊಳ್ಳುತ್ತಿರಲು, ಯೌವನದ ಮದದಿಂದ ವಿಹ್ವಲಳಾದ ಯುವತಿ ನಿಂತು ನೋಡುತ್ತಿರಲು, ಅವಳ ಕೈಯಿಂದ ಜಾರಿ ಬಿದ್ದ ಬಂಗಾರದ ಬಿಂದಿಗೆ ಸೋಪಾನಮಾರ್ಗದಲ್ಲಿ ಇಳಿಯುತ್ತಾ ಮಾಡಿತು ಶಬ್ದ -ಟಟಂಟಟಂಟಂಟಟಟಂಟಟಂಟಂ' 
      ಕಾಳಿದಾಸನು ಘಟನೆಯನ್ನು ನೋಡದೆಯೂ ತನ್ನ ಮನಸ್ಸಿನಲ್ಲಿದ್ದುದನ್ನು ಊಹಿಸಿ ಸಮಸ್ಯೆಯನ್ನು ಪೂರೈಸಿದುದನ್ನು ನೋಡಿ ಭೋಜರಾಜನು ಸುಪ್ರೀತನಾಗಿ ಅವನಿಗೆ ಒಂದೊಂದು ಅಕ್ಷರಕ್ಕೂ ಒಂದೊಂದು ಲಕ್ಷ ಹಣ ಕೊಟ್ಟು ಸನ್ಮಾನಿಸಿದನು.
      ಭೋಜಪ್ರಬಂಧದಲ್ಲಿ ಇಂಥ ಹಲವಾರು ಸ್ವಾರಸ್ಯಕರ ಪ್ರಸಂಗಗಳಿವೆ.

ಗುರುವಾರ, ಜುಲೈ 2, 2026

ಸುಂದರೀಶತಕ -೫೯

ಸಂಸ್ಕೃತ ಮೂಲ 

ವಿರಹಾರ್ತಿದಲನಮೌಷಧಮೇಕಂ ಚೇಷ್ಟಾಸು ತಾಸು ತಾದಾತ್ಮ್ಯಮ್ /
ಸುಂದರಿ ಯಸ್ಮಿಞ್ಜಾತೇ ಬ್ರಹ್ಮಾನಂದೋsಪಿ ನಾಕಾಂಕ್ಷ್ಯ: //

ಕನ್ನಡ ಅನುವಾದ 

    ' ಎಲೈ ಸುಂದರಿ! ವಿರಹದ ಬಾಧೆಯನ್ನು ನಾಶಮಾಡಲು ಇರುವ ಏಕೈಕ ಔಷಧವೆಂದರೆ ಪ್ರಿಯತಮನ ಪ್ರಣಯಕಲಾಪಗಳಲ್ಲಿ ತಾದಾತ್ಮ್ಯ ಹೊಂದುವುದು! ಅವನು ಪ್ರಕಟವಾದರೆ ಬ್ರಹ್ಮಾನಂದವೂ ಬೇಕಾಗುವುದಿಲ್ಲ!'
    ಇದು ಸಖಿಯು ರಾಧೆಗೆ ಹೇಳುತ್ತಿರುವಂತಿದೆ. ಶ್ಲೋಕದ ಚಿತ್ರಣ ಹಾಗಿದೆ. ರಾಧೆಯ ಪ್ರಿಯತಮ ಶ್ರೀಕೃಷ್ಣನು ಅವಳನ್ನು ಬಿಟ್ಟು ಹೋಗಿದ್ದಾನೆ ಹಾಗೂ ಅವಳಿಗೆ ವಿರಹಬಾಧೆ ಕಾಡುತ್ತಿದೆ. ಆಗ ಅವಳ ಸಖಿ ಅವಳಿಗೆ ಈ ಮಾತನ್ನು ಹೇಳುತ್ತಿರುವಂತಿದೆ. ಅವಳು ಹೇಳುವಂತೆ ವಿರಹಬಾಧೆಯನ್ನು ಹೋಗಲಾಡಿಸಲು ಇರುವುದು ಒಂದೇ ಔಷಧಿ. ಅದೇನೆಂದರೆ ಪ್ರಿಯತಮನ ಪ್ರಣಯಚೇಷ್ಟೆಗಳನ್ನು, ಪ್ರಣಯಲೀಲೆಗಳನ್ನು ಸ್ಮರಿಸಿಕೊಳ್ಳುತ್ತಾ ಅವುಗಳಲ್ಲೇ ತಾದಾತ್ಮ್ಯ ಹೊಂದುವುದು. ಆಗ ಅವನೇ ಪ್ರಕಟವಾದಂತಾಗುತ್ತದೆ! ಅವನು ಪ್ರಕಟವಾದರೆ ಬ್ರಹ್ಮಾನಂದವೂ ಬೇಕಾಗುವುದಿಲ್ಲ.‌ ಹೌದಲ್ಲವೇ? ಶ್ರೀಕೃಷ್ಣನು ಸಾಕಾರ ಪರಬ್ರಹ್ಮನೇ ಆಗಿದ್ದಾನೆ. ಅವನ ಸಾಕಾರ ಶೃಂಗಾರ ಪ್ರೇಮದ ಆನಂದದ ಮುಂದೆ ನಿರಾಕಾರ ಬ್ರಹ್ಮಾನಂದ ರುಚಿಸುವುದೇ ಇಲ್ಲ! 

ಸುಂದರೀಶತಕ -೫೮

ಸಂಸ್ಕೃತ ಮೂಲ 

ಅಗ್ನಿಶ್ಚಂದನಲೇಪೋ ವಿಷಮಮೃತಂ ಮರಣಮೇವ ಜೀವಾತು: /
ಸುಂದರಿ ವಿರಹಿಜನಾನಾಂ ಕಾಚನ ಲೋಕೋತ್ತರಾ ರೀತಿ: //

ಕನ್ನಡ ಅನುವಾದ 

   ಚಂದನದ ಲೇಪನವು ಅಗ್ನಿಯಂತೆ ಸುಡುತ್ತದೆ! ಅಮೃತವು ವಿಷದಂತೆ ಭಾಸವಾಗುತ್ತದೆ! ಜೀವಿಕೆಯು ಮರಣವೇ ಆಗಿದೆ! ಎಲೈ ಸುಂದರಿ! ವಿರಹಿಗಳ ರೀತಿ ಸ್ವಲ್ಪ ಲೋಕೋತ್ತರವಾಗಿರುತ್ತದೆ!' 
    ವಿರಹಿಗಳ ಚಿತ್ರಣವನ್ನು ಕವಿಯು ಮುಂದುವರೆಸುತ್ತಿದ್ದಾನೆ.‌ ಅವರ ರೀತಿಗಳು ಲೋಕೋತ್ತರವಾಗಿರುತ್ತವೆ ಎನ್ನುತ್ತಾನೆ. ಇಲ್ಲಿ ಲೋಕೋತ್ತರ ಎಂದರೆ ವಿಲಕ್ಷಣ ಎಂದು ಅರ್ಥ. ಲೋಕದ ರೀತಿಗೆ ವಿರುದ್ಧ. ಸಾಮಾನ್ಯವಾಗಿ ಚಂದನದ ಲೇಪನವು ತಂಪಾಗಿದ್ದರೆ ವಿರಹಿಗಳಿಗೆ ಅದು ಅಗ್ನಿಯಂತೆ ಸುಡುತ್ತದೆ! ಅಮೃತವು ಜೀವವರ್ಧನೆ ಮಾಡುವ ಬದಲು ವಿಷದಂತೆ ಭಾಸವಾಗುತ್ತದೆ. ಜೀವಿಕೆಯು ಮರಣವೇ ಎನಿಸುತ್ತದೆ! ಇದನ್ನು ವಿರಹಿಣಿಯ ಸಖಿಯೇ ಅವಳಿಗೆ ಹೇಳುತ್ತಿರುವಂತಿದೆ. ಅಥವಾ ಕವಿಯೇ ಸುಂದರಿಗೆ ಹೇಳುತ್ತಿದ್ದಾನೆ.

ಮಂಗಳವಾರ, ಜೂನ್ 30, 2026

ಸುಂದರೀಶತಕ -೫೭

ಸಂಸ್ಕೃತ ಮೂಲ 

ಕಿಂ ವಾ ಕೃತೈ: ಪ್ರಯತ್ನೈರೇತೈಸ್ತುಹಿನೋಪಚಾರಸಮವೇತೈ: /
ಉಷ್ಣೀಭವತಿ ಯದಸ್ಯಾ: ಪರಿತ: ಶೀತೋsಪಿ ಸಂಚರನ್ಪವನ: //

ಕನ್ನಡ ಅನುವಾದ 

    ' ಈ ವಿರಹಿಣಿಯ ವಿರಹತಾಪವನ್ನು ಹೋಗಲಾಡಿಸಲು ಅವಳಿಗೆ ಈ ಶೀತೋಪತಚಾರಗಳನ್ನು ಮಾಡಿ ಏನು ಪ್ರಯೋಜನ? ಅವಳ ನಾಲ್ಕೂ ಕಡೆಗಳಲ್ಲಿ ಚಲಿಸುತ್ತಿರುವ ಶೀತಲ ಗಾಳಿಯೂ ಬಿಸಿಯಾಗುತ್ತಿದೆ!' 
    ಕವಿಯು ಪುನಃ ಒಂದು ಅತಿ ವಿರಹದ ಚಿತ್ರಣವನ್ನು ನೀಡಿದ್ದಾನೆ. ಇಲ್ಲಿ ನಾಯಿಕೆಯು ತನ್ನ ಪ್ರಿಯತಮನಿಂದ ದೂರವಾಗಿ ವಿರಹಿಣಿಯಾಗಿದ್ದಾಳೆ. ಅವಳು ವಿರಹತಾಪದಿಂದ ಬೆಂದುಹೋಗುತ್ತಿದ್ದಾಳೆ! ಅವಳ ವಿರಹತಾಪವನ್ನು ಹೋಗಲಾಡಿಸಲು ಅವಳ ಸಖಿಯರು ಕಮಲಪತ್ರಗಳನ್ನು ಹಾಸಿಗೆಯ ಮೇಲೆ ಹಾಸಿ ಅವುಗಳ ಮೇಲೆ ಅವಳನ್ನು ಮಲಗಿಸುವುದು, ಕಮಲಪತ್ರಗಳ ಬೀಸಣಿಕೆಯಿಂದ ಗಾಳಿ ಬೀಸುವುದು, ಕಮಲಪುಷ್ಪಗಳಿಂದ ಅವಳನ್ನು ಮೆಲ್ಲನೆ ತೀಡುವುದು, ಅವಳ ಮೈಗೆ ಚಂದನವನ್ನು ಪೂಸುವುದು, ಮೊದಲಾದ ಶೀತೋಪಚಾರಗಳನ್ನು ಮಾಡುತ್ತಿದ್ದಾರೆ. ಆದರೆ ಅವಳ ವಿರಹತಾಪ ಹೋಗುತ್ತಿಲ್ಲ. ಅವಳ ವಿರಹತಾಪ ಎಷ್ಟಿದೆಯೆಂದರೆ, ಅದರಿಂದ ಅವಳ ಸುತ್ತಲೂ ಬೀಸುತ್ತಿರುವ ಶೀತಲ ಗಾಳಿಯೂ ಬಿಸಿಯಾಗುತ್ತಿದೆ! ಹಾಗಾಗಿ ಇಂಥ ಶೀತೋಪಚಾರಗಳಿಂದ ಪ್ರಯೋಜನವೇನು ಎನ್ನುತ್ತಿದ್ದಾನೆ ಕವಿ. 

ಭಾನುವಾರ, ಜೂನ್ 28, 2026

ಸುಂದರೀಶತಕ -೫೬

ಸಂಸ್ಕೃತ ಮೂಲ 

ನದತಿ ಕಲಾಪಿಕಲಾಪೇ ನವಜಲದಚ್ಛಾಯಶಾಂತಸಂತಾಪೇ /
ಸಂಶಯದೋಲಾರೂಢಂ ಜೀವಿತಮಸ್ಯಾ: ಸ್ಮರೇಣ ಕೃತಮ್ //

ಕನ್ನಡ ಅನುವಾದ 

  ' ವರ್ಷಋತುವಿನ ಆಗಮನವಾಗಲು, ನವಿಲುಗಳ ಸಮೂಹವು ಕೂಗುತ್ತಿದೆ ಹಾಗೂ ಹೊಸ ಮೇಘಗಳ ಛಾಯೆ ಎಲ್ಲರ ಸಂತಾಪವನ್ನು ಕಳೆದಿದೆ. ಆದರೆ ಕಾಮದೇವನು ಇವಳ ಜೀವಿತವನ್ನು ಮಾತ್ರ ಸಂಶಯದ ಉಯ್ಯಾಲೆಯ ಮೇಲೆ ತೂಗಾಡಿಸುತ್ತಿದ್ದಾನೆ! ' 

    ಕವಿಯು ಇಲ್ಲೊಂದು ಸುಂದರ ವಿರಹಚಿತ್ರಣವನ್ನು ಕಟ್ಟಿಕೊಡುತ್ತಲೇ ಒಂದು ಸೊಗಸಾದ ವೈರುಧ್ಯವನ್ನೂ ತೋರಿಸಿದ್ದಾನೆ. ವರ್ಷಾಕಾಲ ಆಗಮಿಸಿದೆ. ಆಕಾಶದಲ್ಲಿ ಕಪ್ಪನೆಯ ಹೊಸ ಮೋಡಗಳು ತುಂಬಿಕೊಂಡು ತಮ್ಮ ಛಾಯೆಯನ್ನು ಬೀರುತ್ತಾ ಎಲ್ಲ ಪಶುಪಕ್ಷಿಗಳಿಗೂ ಜನರಿಗೂ ಬೇಸಿಗೆಯ ಸಂತಾಪವನ್ನು ಕಳೆದಿದೆ. ನವಿಲುಗಳ ಸಮೂಹವು ಆನಂದದಿಂದ ಕೇಕೆ ಹಾಕುತ್ತಿದೆ! ಎಲ್ಲೆಲ್ಲೂ ಹಸಿರು! ಸುಂದರ ಪುಷ್ಪಗಳಿಂದ ಕೂಡಿದ ಮರಗಿಡಬಳ್ಳಿಗಳು! ತಂಗಾಳಿ ಹಿತವಾಗಿ ಬೀಸುತ್ತಿದೆ! ಇದು ಎಂಥ ಆಹ್ಲಾದಕರ, ಕಾಮೋದ್ದೀಪನಗೊಳಿಸುವ ವಾತಾವರಣ! ಆದರೆ ಎಲ್ಲರೂ ಸಂತೋಷವಾಗಿದ್ದರೂ ಇಲ್ಲೊಬ್ಬ ಸುಂದರಿ ಅತ್ಯಂತ ದುಃಖಿತಳಾಗಿದ್ದಾಳೆ! ಏಕೆಂದರೆ ಅವಳ ಪ್ರಿಯತಮನು ಅವಳ ಜೊತೆಯಲ್ಲಿಲ್ಲ! ಅವಳು ವಿರಹಿಣಿಯಾಗಿದ್ದಾಳೆ. ಯಾವ ಕಾಮನು ಎಲ್ಲರನ್ನೂ ಆಹ್ಲಾದಗೊಳಿಸುತ್ತಿದ್ದಾನೋ ಅವನೇ ಇವಳನ್ನು ಬಾಧಿಸುತ್ತಿದ್ದಾನೆ! ಕಾಮೋದ್ದೀಪನಗೊಳಿಸುವ ಈ ಸುಂದರ ವಾತಾವರಣ ಅವಳಿಗೆ ಹಿಂಸೆ ಕೊಡುತ್ತಿದೆ! ಇದು ಎಂಥ ವೈರುಧ್ಯವಲ್ಲವೇ? ಕಾಮದೇವನು ಅವಳ ಜೀವಿತವನ್ನೇ ಸಂದೇಹದ ಉಯ್ಯಾಲೆಯ ಮೇಲೆ ತೂಗಾಡಿಸುತ್ತಿದ್ದಾನೆ ಎನ್ನುತ್ತಾನೆ ಕವಿ! ಇದು ವಿರಹದ ಚರಮಾವಸ್ಥೆ! 

ಸುಂದರೀಶತಕ -೫೫

ಸಂಸ್ಕೃತ ಮೂಲ 

ಗಚ್ಛತಿ ವರ್ಷಾಕಾಲೇ ಜಲಧರಪಟಲೀ ಯಥಾ ಯಥಾ ರಿಕ್ತಾ /
ವರ್ಷತಿ ಲೋಚನಯುಗಲೀ ತಥಾ ತಥಾ ಪುಂಡರೀಕದೃಶ: //

ಕನ್ನಡ ಅನುವಾದ 

    ' ವರ್ಷಾಕಾಲ ಕಳೆದಂತೆ, ಹೇಗೆ ಹೇಗೆ ಮೇಘಗಳ ಸಾಲು ನೀರು ಸುರಿಸಿ ಖಾಲಿಯಾಗುತ್ತಿವೆಯೋ, ಹಾಗೆ ಹಾಗೆ ಈ ಕಮಲನಯನೆಯ ಕಂಗಳು ನೀರು ಸುರಿಸುತ್ತಿವೆ!'

    ಕವಿಯು ಇಲ್ಲಿ ಇನ್ನೊಂದು ಸೊಗಸಾದ ವಿರಹ ಚಿತ್ರಣವನ್ನು ನೀಡಿದ್ದಾನೆ. ಹಿಂದೆ ಹೇಳಿದಂತೆ, ಶೃಂಗಾರ ಸಾಹಿತ್ಯದಲ್ಲಿ ಸಂಭೋಗ ಶೃಂಗಾರ ( ಜೊತೆಯಲ್ಲಿ ಅನುಭವಿಸುವ ಪ್ರೇಮ ಶೃಂಗಾರ) ಹಾಗೂ ವಿಪ್ರಲಂಭ ಶೃಂಗಾರ ( ಪ್ರೇಮಿಗಳು ಬೇರೆಯಾಗಿ ಅನುಭವಿಸುವ ವಿರಹ ಶೃಂಗಾರ) ಎಂಬ ಎರಡು ವಿಧಗಳಿವೆ. ಸಂಭೋಗ ಶೃಂಗಾರಕ್ಕೆ ಎಷ್ಟು ಪ್ರಾಮುಖ್ಯತೆ ಇದೆಯೋ ವಿಪ್ರಲಂಭ ಶೃಂಗಾರಕ್ಕೂ ಅಷ್ಟೇ ಪ್ರಾಮುಖ್ಯತೆ ಇದೆ. ಈ ಶ್ಲೋಕ ವಿಪ್ರಲಂಭ ಶೃಂಗಾರಕ್ಕೆ ಒಳ್ಳೆಯ ಉದಾಹರಣೆ. ಇಲ್ಲಿ ನಾಯಿಕೆಯು ತನ್ನ ಪ್ರಿಯತಮನಿಗಾಗಿ ಬಹುಕಾಲದಿಂದ ಕಾಯುತ್ತಿದ್ದಾಳೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಯಾರೂ ಪ್ರಯಾಣ ಹೋಗುವುದಿಲ್ಲ ಹಾಗೂ ಪ್ರಯಾಣ ಹೋಗಿರುವವರು ಮಳೆಗಾಲಕ್ಕೆ ಮೊದಲು ಬಂದುಬಿಡುತ್ತಾರೆ. ಆದರೆ ಇಲ್ಲಿ ಮಳೆಗಾಲ ಕಳೆದರೂ ನಾಯಕನು ಬಂದಿಲ್ಲ! ಮೋಡಗಳೆಲ್ಲಾ ಮಳೆ ನೀರು ಸುರಿಸಿ ಖಾಲಿಯಾಗಿವೆ! ಅವು ಖಾಲಿಯಾದಂತೆ ನಾಯಿಕೆಯ ಕಂಗಳಲ್ಲಿ ಮಳೆ ಸುರಿಯುತ್ತಿದೆ! ಅಂದರೆ ಕಣ್ಣೀರು ಸುರಿಯತೊಡಗಿದೆ! ನಾಯಕನು ಬರುವನೆಂಬ ಭರವಸೆ ಅವಳಿಗೆ ಹೊರಟುಹೋಗಿ ಅವಳು ಅಳತೊಡಗಿದ್ದಾಳೆ! ಪ್ರವಾಸದಲ್ಲಿರುವ ನಾಯಕನ ವಿರಹಿಣಿ ನಾಯಿಕೆಗೆ ಪ್ರೋಷಿತ್ಪತಿಕೆ ಅಥವಾ ಪ್ರೋಷಿತಭರ್ತೃಕೆ ಎಂದು ಹೆಸರು. ಸಂಸ್ಕೃತ ಶೃಂಗಾರ ಸಾಹಿತ್ಯದ ಅಷ್ಟನಾಯಿಕೆಯರಲ್ಲಿ ಇವಳು ಒಬ್ಬಳು. 

ಮಂಗಳವಾರ, ಜೂನ್ 23, 2026

ಸುಂದರೀಶತಕ -೫೪

ಸಂಸ್ಕೃತ ಮೂಲ 

ಅವಧಿದಿವಸಪ್ರಯಾಣಾ: ಪ್ರಿಯತಮ ತಸ್ಯಾ ಮೃಗೀದೃಶ: ಪ್ರಾಣಾ: /
ತಿಷ್ಠಂತಿ ಕತಿಪಯಾಹಂ ಕೃತ್ವಾ ಪ್ರಸ್ಥಾನಮಧಿಕಂಠಮ್ //

ಕನ್ನಡ ಅನುವಾದ 

    ದೂತಿಯು ನಾಯಕನಿಗೆ ಹೇಳುತ್ತಾಳೆ, ' ಓ ಪ್ರಿಯತಮ! ನಿನ್ನ ಪ್ರಯಾಣದ ಅವಧಿಯ ವಿಯೋಗದ ದಿನಗಳು ಮುಗಿಯುತ್ತಾ ಬಂದಿವೆ! ಆ ಮೃಗನಯನಿಯ ಪ್ರಾಣಗಳು ಕಂಠದವರೆಗೂ ಬಂದು ನಿನ್ನ ಮಿಲನವಾಗಲೆಂದು ಇನ್ನು ಸ್ವಲ್ಪ ದಿನಗಳು ಉಳಿಯಲು ಪ್ರಯತ್ನ ಪಡುತ್ತಿವೆ!' 
    ಇಲ್ಲಿ ನಾಯಕನು ಪ್ರಯಾಣ ಹೋಗಿದ್ದಾನೆ. ಅವನ ಪ್ರಿಯತಮೆಯಾದ ನಾಯಿಕೆಯು ವಿರಹದಲ್ಲಿ ಬಳಲುತ್ತಿದ್ದಾಳೆ. ಅಂದಿನಿಂದಲೇ ಅವಳ ಪ್ರಾಣಗಳು ಹೋಗುವಂತಾಗಿವೆ. ಅವನ ಪ್ರಯಾಣದ ದಿನಗಳ ಅವಧಿ ಇನ್ನೇನು ಮುಗಿಯುತ್ತಾ ಬಂದಿದೆ. ಈ ಹೊತ್ತಿಗೆ ನಾಯಿಕೆಯ ಪ್ರಾಣಗಳು ಕಂಠದವರೆಗೂ ಬಂದಿವೆ ಹಾಗೂ ಇನ್ನೇನು ಹೋಗುವಂತಾಗಿವೆ!  ಅವನು ಬಂದರೆ, ಅವನ ಮಿಲನವಾಗುತ್ತಲೇ ಹೋಗಲೆಂದು ಇನ್ನು ಸ್ವಲ್ಪ ದಿನಗಳು ಉಳಿಯಲು ಪ್ರಯತ್ನ ಪಡುತ್ತಿವೆ. ಈ ವಿಷಯವನ್ನು ದೂತಿಯು ನಾಯಕನ ಬಳಿಗೆ ಹೋಗಿ ಹೇಳುತ್ತಿದ್ದಾಳೆ. ಇನ್ನು ಅವನು ಬಂದುಬಿಡಬೇಕೆಂದು ಅವಳ ಅಭಿಪ್ರಾಯ.
     ಇದು ಅತ್ಯಂತ ವಿರಹಾವಸ್ಥೆಯ ಒಂದು ಮನೋಜ್ಞ ಚಿತ್ರಣ.