ಶನಿವಾರ, ಜೂನ್ 20, 2026

ಸುಂದರೀಶತಕ -೫೩

ಸಂಸ್ಕೃತ ಮೂಲ 

ಸಹಚರ ಕುಶಲಂ ತಸ್ಯಾ: ಕುಶಲವತೀ ಕಥಯ ಕಿಮಪಿ ಸಂದಿಷ್ಟಮ್ /
ಕಂ ಸಂದಿಶತು ಕೃಶಾಂಗೀ ನ ತತ್ರ ಮರುತೋsಪಿ ಯದ್ಗಮನಮ್ //

ಕನ್ನಡ ಅನುವಾದ 

    ಇಬ್ಬರು ಪ್ರಯಾಣಿಕರ ನಡುವಿನ ಒಂದು ಸಂವಾದ 
ಮೊದಲನೆಯ ಪ್ರಯಾಣಿಕ: ಅಯ್ಯ ಸಹಚರ! ಅವಳು ಕುಶಲವೇ?
ಎರಡನೆಯ ಪ್ರಯಾಣಿಕ: ಹಾ......ಕುಶಲವಾಗಿದ್ದಾಳೆ.
ಮೊದಲನೆಯ ಪ್ರಯಾಣಿಕ: ಹೇಳು! ಏನಾದರೂ ಸಂದೇಶ ಕಳಿಸಿದ್ದಾಳೆಯೇ? 
ಎರಡನೆಯ ಪ್ರಯಾಣಿಕ: ಯಾರಿಗೆ ಸಂದೇಶ ಕಳಿಸಿಯಾಳು ಆ ಕೃಶಾಂಗಿ? ಅಲ್ಲಿ ಗಾಳಿಯೂ ಹೋಗಲಾರದು! 
      ಇಲ್ಲಿ ಕವಿಯು ಇನ್ನೊಂದು ವಿರಹ ಚಿತ್ರಣವನ್ನು ಅದ್ಭುತವಾಗಿ ನಿರೂಪಿಸಿದ್ದಾನೆ. ಇಲ್ಲಿ ಇಬ್ಬರು ಪ್ರಯಾಣಿಕರು ಭೇಟಿಯಾಗಿದ್ದಾರೆ. ಮೊದಲನೆಯ ಪ್ರಯಾಣಿಕನಿಗೆ ಎರಡನೆಯ ಪ್ರಯಾಣಿಕ ತನ್ನ ಊರಿನವನೇ ಎಂದು ಗೊತ್ತಾಗಿದೆ. ತಾನು ಊರು ಬಿಟ್ಟು ಪ್ರಯಾಣ ಹೊರಟು ಎಷ್ಟೋ ದಿನಗಳಾಗಿವೆಯೆಂದು ಯೋಚಿಸಿ ತನ್ನ ಹೆಂಡತಿ ಹೇಗಿರುವಳೋ ಎಂಬ ಚಿಂತೆ ಅವನನ್ನು ಕಾಡಿದೆ. ಹಾಗಾಗಿ, ತನ್ನ ಸಹಚರ ತನ್ನ ಊರಿನವನೇ ಆಗಿರುವುದರಿಂದ ಅವನನ್ನು ತನ್ನ ಹೆಂಡತಿಯ ಕುಶಲದ ಬಗ್ಗೆ ವಿಚಾರಿಸಿದ್ದಾನೆ. ಅದಕ್ಕೆ ಅವನು ಅವಳು ಕುಶಲವಾಗಿದ್ದಾಳೆ ಎಂದಿದ್ದಾನೆ. ಆಗ ಮೊದಲ ಪ್ರಯಾಣಿಕ, ಎರಡನೆಯವನು ಪ್ರಯಾಣ ಹೊರಟಾಗ ತನ್ನ ಹೆಂಡತಿ ಅವನ ಮೂಲಕ ತನಗೇನಾದರೂ ಸಂದೇಶ ಕಳಿಸಿರಬಹುದು ಎಂದು ಯೋಚಿಸಿ," ಹೇಳು! ಏನಾದರೂ ಸಂದೇಶ ಕಳಿಸಿರುವಳೇ?" ಎಂದು ಕೇಳಿದ್ದಾನೆ. ಅದಕ್ಕೆ ಅವನು," ಆ ಕೃಶಾಂಗಿ ಯಾರಿಗೆ ಸಂದೇಶ ಕಳಿಸಿಯಾಳು? ಅಲ್ಲಿ ಗಾಳಿಯೂ ಹೋಗಲಾಗುತ್ತಿಲ್ಲ!" ಎಂದಿದ್ದಾನೆ! ಅಂದರೆ, ಅವಳು ಎಷ್ಟು ವಿರಹತಪ್ತಳಾಗಿದ್ದಾಳೆಂದರೆ ಮನೆಯಲ್ಲಿ ಬಾಗಿಲು ಹಾಕಿಕೊಂಡು ಯಾರನ್ನೂ ಒಳಗೆ ಬಿಡದೇ ಒಬ್ಬಳೇ ದು:ಖದಿಂದ ಸೊರಗುತ್ತಿದ್ದಾಳೆ! 
    ಇಲ್ಲಿ ಸಹಚರನು ಅವಳಿಗೆ ಕೃಶಾಂಗಿ ಎಂಬ ಪದವನ್ನು ಬಳಸುವುದರ ಮೂಲಕ ಅವಳು ಊಟ, ನಿದ್ರೆಗಳಿಲ್ಲದೆ ಸೊರಗಿ ಸೊರಗಿ ಅವಳ ಅಂಗಾಂಗಗಳು ಬಹಳ ಕೃಶವಾಗಿವೆ ಎಂದು ಸೂಚಿಸುತ್ತಿದ್ದಾನೆ. ಅವಳ ಮನೆಯೊಳಗೆ ಗಾಳಿಯೂ ಹೋಗಲಾರದು ಎನ್ನುವುದು ಉತ್ಪ್ರೇಕ್ಷೆಯೆನಿಸಿದರೂ ಅವಳು ಯಾರನ್ನೂ ಒಳಗೆ ಬಿಡದೆ ಒಂಟಿಯಾಗಿರುವಷ್ಟು ವಿರಹತಪ್ತಳಾಗಿದ್ದಾಳೆ ಎಂದು ತೋರಿಸುತ್ತದೆ.
    ಸಂಸ್ಕೃತ ಸಾಹಿತ್ಯವನ್ನು ಓದುತ್ತಿದ್ದರೆ ಒಂದು ವಿಷಯವನ್ನು ಹೇಳಲು ಇರುವ ಅನಂತ ಸಾಧ್ಯತೆಗಳ ಪರಿಚಯವಾಗುತ್ತದೆ.

ಬುಧವಾರ, ಜೂನ್ 17, 2026

ಸುಂದರೀಶತಕ -೫೨

ಸಂಸ್ಕೃತ ಮೂಲ 

ತವ ವಿರಹಾನಲತಪ್ತಂ ಸ್ನೇಹಕಟಾಹಂ ಮದಂತರಾತ್ಮಾನಮ್ /
ಸುಂದರಿ ಚಂದನಶಾಖೇ ಶೀತಲಯ ಸ್ಪರ್ಶಮಾತ್ರೇಣ //

ಕನ್ನಡ ಅನುವಾದ 

    ' ಎಲೈ ಸುಂದರಿ! ನಿನ್ನ ವಿರಹಾಗ್ನಿಯಿಂದ ಬೆಂದುಹೋಗಿರುವ, ನಿನ್ನ ಪ್ರೇಮದ ಪಾತ್ರೆಯಾಗಿರುವ ನನ್ನ ಅಂತರಾತ್ಮವನ್ನು ಚಂದನಶಾಖೆಯಾಗಿರುವ ನೀನು ಕೇವಲ ನಿನ್ನ ಸ್ಪರ್ಶಮಾತ್ರದಿಂದ ತಂಪಾಗಿಸು!'
    ಕವಿಯು ಇಲ್ಲಿ ಸುಂದರವಾದ ವಿರಹ ಚಿತ್ರಣವನ್ನು ಕೊಟ್ಟಿದ್ದಾನೆ.‌ ನಾಯಕನು ತನ್ನ ಪ್ರಿಯೆಯ ವಿರಹಾಗ್ನಿಯಿಂದ ಪ್ರೇಮಪಾತ್ರೆಯಂತಿರುವ ಅವನ ಅಂತರಾತ್ಮವು ಬೆಂದುಹೋಗಿದೆ ಎನ್ನುತ್ತಾನೆ. ಸೊಗಸಾದ ಉಪಮೆಗಳು! ವಿರಹಬಾಧೆಯು ಅಗ್ನಿಯಂತೆ ಸುಡುತ್ತಿದೆ! ಅವನ ಅಂತರಾತ್ಮವು ಪ್ರೇಮದ ಪಾತ್ರೆಯಂತಾಗಿ ಆ ಅಗ್ನಿಯಿಂದ ಸುಡುತ್ತಿದೆ! ಹಾಗಾಗಿ ಅವನು ತನ್ನ ಪ್ರಿಯತಮೆಯನ್ನು ಚಂದನಶಾಖೆಗೆ ಹೋಲಿಸಿ ಕೇವಲ ತನ್ನನ್ನು ಸ್ಪರ್ಶಿಸಲು ಕೇಳಿಕೊಳ್ಳುತ್ತಿದ್ದಾನೆ. ಅವಳನ್ನು ಅವಳ ಸ್ಪರ್ಶಮಾತ್ರದಿಂದ ತನ್ನ ಅಂತರಾತ್ಮವನ್ನು ತಂಪಾಗಿಸಲು ಬೇಡಿಕೊಳ್ಳುತ್ತಿದ್ದಾನೆ! 
     ಶೃಂಗಾರ ರಸದಲ್ಲಿ ಎರಡು ವಿಧಗಳಿವೆ.‌ ಒಂದು, ಸಂಭೋಗ ಶೃಂಗಾರ ಹಾಗೂ ಇನ್ನೊಂದು, ವಿಪ್ರಲಂಭ ಶೃಂಗಾರ. ಸಂಭೋಗ ಶೃಂಗಾರ, ಪ್ರೇಮಿಗಳು ಒಟ್ಟಿಗಿದ್ದು ಅನುಭವಿಸುವುದಾದರೆ, ವಿಪ್ರಲಂಭ ಶೃಂಗಾರ, ಪ್ರೇಮಿಗಳು ದೂರವಾಗಿದ್ದು ವಿರಹವನ್ನು ಅನುಭವಿಸುವುದಾಗಿರುತ್ತದೆ. ರಾಧಾಕೃಷ್ಣರ ಶೃಂಗಾರ ಲೀಲೆಗಳು ಸಂಭೋಗ ಶೃಂಗಾರಕ್ಕೆ ಒಳ್ಳೆಯ ಉದಾಹರಣೆಯಾದರೆ, ರಾಧೆಯು ಶ್ರೀಕೃಷ್ಣನ ವಿರಹವನ್ನು ಅನುಭವಿಸುವುದು, ಹಾಗೂ ಶ್ರೀರಾಮನು ಸೀತೆಯ ವಿರಹವನ್ನು ಅನುಭವಿಸುವುದು, ವಿಪ್ರಲಂಭ ಶೃಂಗಾರಕ್ಕೆ ಒಳ್ಳೆಯ ಉದಾಹರಣೆಗಳಾಗಿವೆ. 
      ಈ ಶ್ಲೋಕದ ಸ್ವಾರಸ್ಯವೆಂದರೆ, ಇದು ವಿಪ್ರಲಂಭ ಶೃಂಗಾರವಾದರೂ ಇಲ್ಲಿ ಪ್ರಿಯತಮೆಯು ನಾಯಕನ ಬಳಿ ಇದ್ದಾಳೆ. ಆದರೆ ಅವನಿನ್ನೂ ವಿರಹದಲ್ಲಿದ್ದು ಅವಳ ಸ್ಪರ್ಶಕ್ಕಾಗಿ, ಜೊತೆಗೂಡುವಿಕೆಗಾಗಿ ಬೇಡುತ್ತಿದ್ದಾನೆ. ಅವನ ವಿರಹದ ಸ್ಥಿತಿಯನ್ನು ಪ್ರಾಯಶಃ ಅವನ ಸಖನಿಂದ ತಿಳಿದು ಹಾಗೂ ನೋಡಿ, ನಾಯಿಕೆಯ ಸಖಿಯು ನಾಯಿಕೆಗೆ ಹೇಳಿ ಅವಳನ್ನು ಕರೆತಂದಿದ್ದಾಳೆ. ಆಗ ನಾಯಕನು ಅವಳನ್ನು ಹೀಗೆ ಬೇಡುತ್ತಿದ್ದಾನೆ.

ಭಾನುವಾರ, ಜೂನ್ 14, 2026

ಸುಂದರೀಶತಕ -೫೧

ಸಂಸ್ಕೃತ ಮೂಲ 

ಪ್ರೇಮಾಸವೋನ್ಮದಿಷ್ಣೋ: ಪ್ರಣಯತನೀಯಾಂಸಿ ತಾನಿ ವಚನಾನಿ /
ಕರಣೀಯಾನಿ ನ ಹೃದಯೇ ದಯಿತೇ ಯದಯಂ ದಯಾವಸರ: // 

ಕನ್ನಡ ಅನುವಾದ 

      ' ಪ್ರಿಯೇ! ಪ್ರೇಮವೆಂಬ ಮದಿರೆಯನ್ನು ಕುಡಿದು ಮತ್ತನಾದ ನಾನು ಪ್ರೇಮೋನ್ಮಾದದಲ್ಲಿ ಆಡಿದ ಹಗುರವಾದ ಮಾತುಗಳನ್ನು ಹೃದಯದಲ್ಲಿ ಇಟ್ಟುಕೊಳ್ಳಬೇಡ! ದಯೆ ತೋರಿಸಲು ಇದೇ ಸರಿಯಾದ ಸಮಯ!' 
    ಇಲ್ಲಿ ನಾಯಕನು ತನ್ನ ಪ್ರಿಯತಮೆಯ ಪ್ರೇಮವೆಂಬ ಮದಿರೆಯನ್ನು ಕುಡಿದು ಮತ್ತನಾಗಿ ಅವಳ ಬಳಿ ಏನೋ ಹಗುರವಾದ ಮಾತುಗಳನ್ನಾಡಿದ್ದಾನೆ ಹಾಗೂ ಕೀಟಲೆ ಮಾಡಿದ್ದಾನೆ. ಅಂದರೆ ಪ್ರೇಮದ ಸಲಿಗೆಯಲ್ಲಿ ಅವಳನ್ನು ಅಣಕಿಸಿದ್ದಾನೆ. ಕುಡಿದ ಮತ್ತಿನಲ್ಲಿ ಹಗುರವಾಗಿ ಮಾತನಾಡುವಂತೆ ಪ್ರೇಮಮದ್ಯವನ್ನು ಕುಡಿದ ಮತ್ತಿನಲ್ಲಿ ಇವನು ಅವಳನ್ನು ಅಣಕಿಸಿದ್ದಾನೆ. ಇದರಿಂದ ಅವಳು ಕೋಪಗೊಂಡಿದ್ದಾಳೆ! ಆಗ ಇವನಿಗೆ ತನ್ನ ತಪ್ಪು ಅರಿವಾಗಿ ತಾನು ಪ್ರೇಮಮದಿರೆಯ ಮತ್ತಿನಲ್ಲಿ ಆಡಿದ ಹಗುರವಾದ ಮಾತುಗಳನ್ನು ಹೃದಯದಲ್ಲಿ ಇಟ್ಟುಕೊಳ್ಳಬಾರದು, ಅವು ಮೈಮರೆತು ಹೇಳಿದ ಮಾತುಗಳು, ಹಾಗಾಗಿ ಗಣನೆಗೆ ತೆಗೆದುಕೊಳ್ಳಬಾರದು, ಎಂದು ಬೇಡಿಕೊಳ್ಳುತ್ತಾ ದಯೆ ತೋರಿಸಲು ಇದೇ ಸರಿಯಾದ ಸಮಯ ಎನ್ನುತ್ತಿದ್ದಾನೆ. ತಪ್ಪು ಮಾಡದಿದ್ದಾಗ ದಯೆ ತೋರಿದರೆ ಏನು ಪ್ರಯೋಜನ, ತಪ್ಪು ಮಾಡಿದಾಗ ದಯೆ ತೋರಿದರೆ ಅದು ಹೆಚ್ಚಿನದು ಎಂದು ಅವನ ಅಭಿಪ್ರಾಯ. ಹೀಗೆ ಪ್ರೇಮಿಗಳ ನಡುವೆ ಆಗಾಗ ಪ್ರಮಯಕಲಹ ಇದ್ದರೆ ಚೆನ್ನ.

ಶುಕ್ರವಾರ, ಜೂನ್ 12, 2026

ಸುಂದರೀಶತಕ -೫೦

ಸಂಸ್ಕೃತ ಮೂಲ 

ಜ್ಞಾತಾಸಿ ಗೃಹಜನೈರಿತಿ ಕಥಿತೇ ಸಂಭ್ರಾಂತತಾರಕಂ ದೂತ್ಯಾ /
ಅರುಣಮಪಿ ಮಾನವತ್ಯಾ: ಸ್ಮರಾಮಿ ಪಾಂಡೂಭವದ್ವದನಮ್ //

ಕನ್ನಡ ಅನುವಾದ 

      ' ನಿನ್ನ ರಹಸ್ಯ ಪ್ರೇಮದ ವಿಷಯ ಮನೆಯವರಿಗೆಲ್ಲಾ ಗೊತ್ತಾಗಿದೆ ಎಂದು ದೂತಿಯು ನನ್ನ ಪ್ರಿಯತಮೆಗೆ ಹೇಳಲು, ಅವಳ ಕಣ್ಣುಗಳ ಪಾಪೆಗಳು ಸಂಭ್ರಾಂತಗೊಂಡವು ಹಾಗೂ ಕೋಪಗೊಂಡಿದ್ದ ಅವಳ ಮುಖ ಕೆಂಪಾಗಿದ್ದರೂ ಬಿಳುಚಿಕೊಂಡಿದ್ದನ್ನು ನಾನು ಈಗಲೂ ಸ್ಮರಿಸುತ್ತೇನೆ!' 
    ಇಲ್ಲಿ ನಾಯಿಕೆಯು ನಾಯಕನಲ್ಲಿ ಕುಪಿತಗೊಂಡು ಕುಳಿತಿದ್ದಾಳೆ. ಆಗ ಅವಳ ದೂತಿಯು ಬಂದು ಅವಳ ರಹಸ್ಯ ಪ್ರೇಮದ ವಿಷಯ ಮನೆಯವರಿಗೆಲ್ಲಾ ಗೊತ್ತಾಗಿದೆ ಎಂದು ಹೇಳಿದ್ದಾಳೆ.‌ ಇದರಿಂದ ಅವಳು ಗಾಬರಿಗೊಳ್ಳಲು ಅವಳ ಕಣ್ಣುಗಳ ಪಾಪೆಗಳು ಸಂಭ್ರಾಂತಗೊಂಡಿವೆ! ಕೋಪದಿಂದ ಕೆಂಪಾಗಿದ್ದ ಅವಳ ಮುಖವು ಕೂಡಲೇ ಭಯದಿಂದ ಬಿಳುಚಿಕೊಂಡಿದೆ! ಕೋಪವು ಭಯಕ್ಕೆ ತಿರುಗುವ ಹಾಗೂ ಕೆಂಪಾದ ಮುಖ ಬಿಳುಚಿಕೊಳ್ಳುವ ಈ ಸುಂದರ ಮುಖಭಾವವನ್ನು ಈಗಲೂ ಸ್ಮರಿಸುತ್ತೇನೆ ಎಂದು ನಾಯಕನು ಹೇಳುತ್ತಿದ್ದಾನೆ. 

ಗುರುವಾರ, ಜೂನ್ 11, 2026

ಸುಂದರೀಶತಕ -೪೯

ಸಂಸ್ಕೃತ ಮೂಲ 

ಸಸ್ಮಿತಮರುಣಕಪೋಲಂ ರಚಿತಭ್ರೂಭಂಗಮಂಚಿತವ್ರೀಡಮ್ /
ಸಂಪೃಕ್ತಭಾವರುಚಿರಂ ವದನಂ ತಸ್ಯಾ: ಸ್ಮರಾಮಿ ಸಖೇ //

ಕನ್ನಡ ಅನುವಾದ 

    ' ಹೇ ಸಖ!  ನಗುವಿನೊಂದಿಗೆ ಕೆಂಪಾದ ಅವಳ ಕೆನ್ನೆಗಳು, ಕೋಪದಿಂದ ಗಂಟಿಕ್ಕಿದ ಹುಬ್ಬುಗಳು, ನಾಚಿಕೆಯಿಂದ ಬಾಗಿದ ಮುಖ, ಈ ಮಿಶ್ರ ಭಾವಗಳಿಂದ ಸುಂದರವಾದ ಆ  ನನ್ನ ಪ್ರಿಯತಮೆಯ ಮುಖವನ್ನು ಈಗಲೂ ಸ್ಮರಿಸುತ್ತೇನೆ!'
     ಇಲ್ಲಿ ಪ್ರಾಯಶಃ ನಾಯಕನು ಕೋಪಗೊಂಡ ತನ್ನ ನಾಯಕಿಯನ್ನು ಸಮಾಧಾನ ಮಾಡಿದಾಗ ಮೂಡಿದ ಚಿತ್ರಣವನ್ನು ತನ್ನ ಸಖನಿಗೆ ವರ್ಣಿಸುತ್ತಿದ್ದಾನೆ. ಅವನು ಅವಳನ್ನು ಸಮಾಧಾನಗೊಳಿಸುತ್ತಾ ಪ್ರಾಯಶಃ ಚುಂಬಿಸಿದ್ದಾನೆ.  ಆಗ ಅವಳು ಕೋಪವನ್ನು ಬಿಟ್ಟರೂ ಇನ್ನೂ ಅವಳ ಹುಬ್ಬುಗಳು ಗಂಟಿಕ್ಕಿಕೊಂಡಿವೆ. ಆದರೆ ಅವನ ಪ್ರೀತಿಗೆ ಕರಗಿ ಅವನ ಚುಂಬನದಿಂದ ಕಿರುನಗೆ ಮೂಡಿಸಿದ್ದಾಳೆ ಹಾಗೂ ಅವಳ ಕೆನ್ನೆಗಳು ಕೆಂಪಾಗಿವೆ. ಜೊತೆಗೆ ನಾಚಿ ತಲೆ ತಗ್ಗಿಸಿದ್ದಾಳೆ. ಈ ಎಲ್ಲ ಮಿಶ್ರಿತ ಭಾವಗಳ ಅವಳ ಮುಖ ಬಹಳ ಸುಂದರವಾಗಿ ಕಾಣುತ್ತಿದ್ದು ಈಗಲೂ ಅದನ್ನು ಸ್ಮರಿಸುತ್ತೇನೆ ಎಂದು ಅವನು ತನ್ನ ಸಖನಿಗೆ ಹೇಳುತ್ತಿದ್ದಾನೆ. 

ಸೋಮವಾರ, ಜೂನ್ 8, 2026

ಸುಂದರೀಶತಕ -೪೮

ಸಂಸ್ಕೃತ ಮೂಲ 

ಸಾಗಸಿ ಮಯಿ ಮಂದಪದಂ ಪಶ್ಚಾದೇತ್ಯ ಸ್ಥಿತೇ ಸರೋಜದೃಶಮ್ /
ಮುಕುರಂ ಪ್ರದರ್ಶಯಿತ್ವಾ ತತ್ಸಖ್ಯಾ ಕಿಮಿವ ನೋಪಕೃತಮ್ //

ಕನ್ನಡ ಅನುವಾದ 

     ' ಪ್ರಿಯತಮೆಯ ವಿಷಯದಲ್ಲಿ ಅಪರಾಧ ಮಾಡಿದ್ದ ನಾನು ಮೆಲ್ಲ ಮೆಲ್ಲನೆ ಹೆಜ್ಜೆಯಿಟ್ಟು ಆ ಕಮಲನಯನೆಯ ಹಿಂದೆ ಹೋಗಿ ನಿಂತೆ! ಆಗ ಅವಳ ಸಖಿಯು ಅವಳಿಗೆ ಒಂದು ಕನ್ನಡಿ ತೋರಿಸಿ ಯಾವ ಉಪಕಾರ ತಾನೇ ಮಾಡಲಿಲ್ಲ?'
      ಪ್ರಿಯತಮೆಯ ವಿಷಯದಲ್ಲಿ ಏನೋ ತಪ್ಪು ಮಾಡಿದ್ದ ನಾಯಕನು ಅವಳು ಕೋಪಿಸಿಕೊಂಡು ಕುಳಿತಿದ್ದಾಗ ಮೆಲ್ಲ ಮೆಲ್ಲನೆ ಹೆಜ್ಜೆಯಿಡುತ್ತಾ ಅವಳ ಹಿಂದೆ ಹೋಗಿ ಕ್ಷಮೆಯಾಚಿಸಲು ನಿಂತಿದ್ದಾನೆ. ಆದರೆ ಅವಳು ಮುಖ ತಿರುಗಿಸಿ ನೋಡುತ್ತಲೇ ಇಲ್ಲ! ಅವನಿಗೂ ಮಾತನಾಡಲು ಧೈರ್ಯ ಸಾಲದೇ ಸುಮ್ಮನೆ ನಿಂತಿದ್ದಾನೆ. ಇದನ್ನು ಗಮನಿಸಿದ ನಾಯಕಿಯ ಸಖಿಯೊಬ್ಬಳು ಒಂದು ಕನ್ನಡಿಯನ್ನು ತಂದು ಅವಳಿಗೆ ತೋರಿಸಿದ್ದಾಳೆ. ಆಗ ಅವಳಿಗೆ ತನ್ನ ಹಿಂದೆ ನಿಂತಿರುವ ತನ್ನ ಪತಿ ಕಾಣಿಸಿದ್ದಾನೆ. ಆಗ ಅವನ ಪಶ್ಚಾತ್ತಾಪದ ಮುಖ ಕಾಣಿಸಿ ಅವನನ್ನು ಕ್ಷಮಿಸಿದ್ದಾಳೆ. ಹೀಗೆ ಕನ್ನಡಿ ತೋರಿಸಿ ಸಖಿಯು ಯಾವ ಉಪಕಾರ ತಾನೇ ಮಾಡಲಿಲ್ಲ ಎಂದು ನಾಯಕನು ಸ್ಮರಿಸಿಕೊಂಡು ಹೇಳುತ್ತಿದ್ದಾನೆ. 

ಭಾನುವಾರ, ಜೂನ್ 7, 2026

ಸುಂದರೀಶತಕ -೪೭

ಸಂಸ್ಕೃತ ಮೂಲ 

ಅರವಿಂದದ್ಯುತಿಶೋಣಂ ಲೋಚನಕೋಣಂ ಸರೋಜಾಕ್ಷ್ಯಾ: /
ಪ್ರಣಮತಿ ಮಯ್ಯಥ ಸದಯಂ ಹರಿಹರಿ ಹೃದಯಂ ನ ವಿಸ್ಮರತಿ //

ಕನ್ನಡ ಅನುವಾದ 

     ' ಆ ಸರೋಜಾಕ್ಷಿಯ ಕೋಪವನ್ನು ತಣಿಸಲು ನಾನು ಅವಳ ಕಾಲಿಗೆ ಬಿದ್ದಾಗ, ಕಮಲದ ಕಾಂತಿಯಂತೆ ಕೆಂಪಾಗಿದ್ದ ಅವಳ ಕಣ್ಣುಗಳ ಅಂಚುಗಳಲ್ಲಿ ದಯೆಯು ಕಾಣಿಸಿತು! ಹರಿ ಹರಿ! ಇದನ್ನು ನನ್ನ ಹೃದಯವು ಮರೆಯುವುದಿಲ್ಲ!' 
    ಇಲ್ಲಿ ಪತಿಯು ತನ್ನ ಪ್ರಿಯ ಪತ್ನಿಯ ವಿಷಯದಲ್ಲಿ ಏನೋ ತಪ್ಪು ಮಾಡಿದ್ದಾನೆ. ಅದರಿಂದ ಅವಳು ಕೋಪಗೊಂಡಿದ್ದಾಳೆ.‌ ಆದರೆ ಅವಳು ಅವನು ಎಷ್ಟೇ ಸಮಾಧಾನಪಡಿಸಿದರೂ ಕೋಪ ಬಿಡುತ್ತಿಲ್ಲ.‌ ಕೊನೆಗೆ ಅವನು ಅವಳ ಕಾಲಿಗೆ ಬಿದ್ದಾಗ ಅವಳ ಕೋಪ ಕರಗಿ ಕಮಲದಂತೆ ಕೆಂಪಾದ ಅವಳ ಕಣ್ತುದಿಯಲ್ಲಿ ದಯೆಯು ಮೂಡಿದೆ! ಇದನ್ನು ಕವಿ ಅಥವಾ ಆ ಪತಿಯು ನೆನಪಿಸಿಕೊಂಡು ಎಂದಿಗೂ ಮರೆಯಲಾರೆ ಎನ್ನುತ್ತಿದ್ದಾನೆ! ಹೆಂಡತಿಯು ಗಂಡನ ಕಾಲಿಗೆ ಬೀಳುವುದು ಸಾಮಾನ್ಯ. ಆದರೆ ಪ್ರಾಚೀನ ಸಂಸ್ಕೃತ ಶೃಂಗಾರ ಕಾವ್ಯಗಳಲ್ಲಿ ತಪ್ಪು ಮಾಡಿದಾಗ ಗಂಡನೂ ಹೆಂಡತಿಯನ್ನು ಸಮಾಧಾನಗೊಳಿಸಲು ಅವಳ ಕಾಲಿಗೆ ಬೀಳುವುದನ್ನು ಕಾಣುತ್ತೇವೆ! ಕೃಷ್ಣನೂ ಕೋಪಗೊಂಡ ಸತ್ಯಭಾಮೆಯ ಪಾದಗಳಿಗೆ ನಮಸ್ಕಾರ ಮಾಡಿ ಅವನ್ನು ಒತ್ತುವುದನ್ನು ಕಾಣುತ್ತೇವೆ! ಗಂಡನು ಏಷ್ಟೇ ಅನುನಯಗೊಳಿಸಿದರೂ ಸಮಾಧಾನಗೊಳ್ಳದ ಹೆಂಡತಿ, ಅವನು ಅವಳ ಕಾಲಿಗೆ ಬಿದ್ದಾಗ ಥಟ್ಟನೆ ಸಮಾಧಾನಗೊಳ್ಳುತ್ತಾಳೆ! ಅವಳಿಗಿಂತ ದೊಡ್ಡವನಾದ ಅವನು ತನ್ನ ಅಭಿಮಾನ ಬಿಟ್ಟು ಅವಳ ಕಾಲಿಗೆ ಬೀಳುವುದು ಸುಲಭದ ಮಾತಲ್ಲ ಅಲ್ಲವೇ? ಆದರೆ ಅವನು ಪ್ರೇಮಕ್ಕಾಗಿ ಹಾಗೆ ಮಾಡಿದಾಗ ಅವಳು ಕರಗಿಹೋಗುತ್ತಾಳೆ! ಅಂಥ ಒಂದು ಸುಂದರ ಸನ್ನಿವೇಶವನ್ನು ಕವಿ ಇಲ್ಲಿ ಚಿತ್ರಿಸಿದ್ದಾನೆ.