ಗುರುವಾರ, ಏಪ್ರಿಲ್ 30, 2026

ನರಸಿಂಹಾವತಾರ ಕಥೆಯ ಮೂರು ಪಾಠಗಳು

ನಾವು ಪುರಾಣ ಪ್ರಪಂಚದಲ್ಲಿ ವಿಹರಿಸುತ್ತಿದ್ದಂತೆ ನಮಗೆ ಅಗಾಧ ಪ್ರಮಾಣದಲ್ಲಿ ಮುತ್ತು ರತ್ನಗಳಂತೆ ಕಥೆಗಳು ದೊರೆಯುತ್ತವೆ! ಈ ಮುತ್ತು ರತ್ನಗಳಲ್ಲಿ ಕೆಲವು ಬಹುತೇಕ ಒಂದೇ ರೀತಿ ಇದ್ದು, ಸ್ವಲ್ಪ ಮಾತ್ರ ವ್ಯತ್ಯಾಸ ಹೊಂದಿದ್ದಾರೆ ಹೇಗನಿಸುತ್ತದೆ? ಆ ಸಣ್ಣ ವ್ಯತ್ಯಾಸದಲ್ಲೂ ನಾವು ಸಂತೋಷಪಡುತ್ತೇವೆ! ಹಾಗೆಯೇ ಪೌರಾಣಿಕ ಕಥೆಗಳಲ್ಲೂ ಪಾಠಾಂತರಗಳಿದ್ದರೆ ಒಂದು ರೀತಿ ಸೊಗಸಾಗಿರುತ್ತದೆ! ಒಂದೇ ಕಥೆಯನ್ನು ಎರಡು ಮೂರು ರೀತಿಗಳಲ್ಲಿ ಹೇಳಬಹುದಲ್ಲಾ ಎಂದು ವಿಸ್ಮಯವಾಗುತ್ಚದೆ! ಅವುಗಳ ತೌಲನಿಕ ಅಧ್ಯಯನ ಮಾಡುವುದು ಸ್ವಾರಸ್ಯಕರವಾಗಿರುತ್ತದೆ! ಈ ಕಥೆಗಳು ಹೀಗೇಕೆ ಒಂದೊಂದು ಪುರಾಣದಲ್ಲಿ ಒಂದೊಂದು ರೀತಿಯಿದೆ ಎಂದು ಕೇಳಿದರೆ, ಪುರಾಣಕಾರರು ಅವು ಬೇರೆ ಬೇರೆ ಕಲ್ಪಗಳಲ್ಲಿ ನಡೆದಿದ್ದು ಎಂದು ಉತ್ತರ ಕೊಡುತ್ತಾರೆ. ಕಲ್ಪ ಎಂದರೆ ಬ್ರಹ್ಮನ ಒಂದು ದಿನ.‌ ಇತಿಹಾಸ ಪುನರಾವರ್ತನೆಯಾಗುತ್ತದೆ ಎನ್ನುವಂತೆ, ಪುರಾಣ ಕಥೆಗಳೂ ಮತ್ತೆ ಮತ್ತೆ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಮತ್ತೆ ಮತ್ತೆ ನಡೆಯುತ್ತವೆ.‌ ವಿಷ್ಣು ಪುರಾಣದಲ್ಲಿ, ಪರಾಶರರು ಮೈತ್ರೇಯ ಮಹರ್ಷಿಗಳಿಗೆ ಕಥೆ ಹೇಳುತ್ತಾ ಲಕ್ಷ್ಮಿ ಭೃಗು ಮಹರ್ಷಿ ಮತ್ತು ಖ್ಯಾತಿಯ ಪುತ್ರಿಯಾಗಿ ಹುಟ್ಟಿದಳು ಎನ್ನುತ್ತಾರೆ. ಆಗ ಮೈತ್ರೇಯರು ಲಕ್ಷ್ಮಿಯು ಸಮುದ್ರಮಥನ ಮಾಡಿದಾಗ ಹುಟ್ಟಿದಳೆಂದು ತಾವು ಕೇಳಿದ್ದೇವಲ್ಲಾ ಎಂದಾಗ, ಪರಾಶರರು ಬೇರೆ ಬೇರೆ ಕಲ್ಪಗಳಲ್ಲಿ ಲಕ್ಷಿ ಬೇರೆ ಬೇರೆ ರೀತಿಗಳಲ್ಲಿ ಹುಟ್ಟಿ ಬರುತ್ತಾಳೆ, ಹಾಗೆಯೇ ಅನೇಕ ಪೌರಾಣಿಕ ಕಥೆಗಳೂ ಬೇರೆ ಬೇರೆ ಕಲ್ಪಗಳಲ್ಲಿ ಬೇರೆ ಬೇರೆ ರೀತಿಗಳಲ್ಲಿ ನಡೆಯುತ್ತವೆ ಎಂದು ಸಮಾಧಾನ ಹೇಳುತ್ತಾರೆ. ಹೀಗೆ ನಮ್ಮ ಶ್ರದ್ಧೆಯ ಪ್ರಕಾರ, ಎಲ್ಲಾ ಪುರಾಣಗಳನ್ನೂ ಮಹಾಭಾರತವನ್ನೂ ವೇದವ್ಯಾಸರೇ ರಚಿಸಿದರೂ ಕೆಲವು ಕಥೆಗಳು ಬೇರೆ ಬೇರೆ ಗ್ರಂಥಗಳಲ್ಲಿ ಸ್ವಲ್ಪ ವಿಭಿನ್ನವಾಗಿರುತ್ತವೆ. ಇವು ಬಾಯಿಂದ ಬಾಯಿಗೆ ಹರಡಿದುದರಿಂದ ಬೇರೆ ಬೇರೆ ರೀತಿಯಲ್ಲಿ ಹೇಳಲಾಗಿವೆಯೆಂದೂ, ವ್ಯಾಸರು ಮೂಲತಃ ಮಹಾಭಾರತದೊಂದಿಗೆ ಪುರಾಣ ಸಂಹಿತೆ ಎಂದು ಒಂದು ಗ್ರಂಥ ರಚಿಸಿರಬಹುದೆಂದೂ ಅದೇ ಕಥೆಗಾರರ ಮೂಲಕ ಹದಿನೆಂಟು ಮಹಾಪುರಾಣಗಳು ಹಾಗೂ ಹದಿನೆಂಟು ಉಪಪುರಾಣಗಳಾಗಿ ಕವಲೊಡೆದಿರಬಹುದೆಂದೂ ಆಧುನಿಕ ವಿದ್ವಾಂಸರ ಅಂಬೋಣ. ಅದೇನೇ ಇದ್ದರೂ ಕೆಲವು ಕಥೆಗಳಲ್ಲಿನ ವಿಭಿನ್ನತೆಗಳು ಸ್ವಾರಸ್ಯಕರವಾಗಿರುತ್ತವೆ.
      ಈಗ ನರಸಿಂಹಾವತಾರದ ಮೂರು ವಿಭಿನ್ನ ರೀತಿಯ ಕಥೆಗಳನ್ನು ನೋಡೋಣ. ಹೆಚ್ಚು ಪ್ರಚಲಿತವೂ ಪ್ರಸಿದ್ಧವೂ ಆಗಿರುವುದು ಭಾಗವತ ಪುರಾಣದ ಕಥೆ. ವಿಷ್ಣುವು ವರಾಹಾವತಾರ ತಾಳಿ ಹಿರಣ್ಯಾಕ್ಷ ದೈತ್ಯನನ್ನು ವಧಿಸಲು, ಕುಪಿತಗೊಂಡ ಅವನ ಅಣ್ಣ ಹಿರಣ್ಯಕಶಿಪುವು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ, ಹಗಲಿನಲ್ಲಾಗಲಿ ರಾತ್ರಿಯಲ್ಲಾಗಲಿ, ಮನೆಯ ಒಳಗಾಗಲಿ ಹೊರಗಾಗಲಿ, ಆಕಾಶದಲ್ಲಾಗಲಿ ಭೂಮಿಯ ಮೇಲಾಗಲಿ, ಯಾವುದೇ ಆಯುಧದಿಂದಾಗಲಿ, ಸುರನರೋರಗಯಕ್ಷರಾಕ್ಷಸಗಂಧರ್ವಕಿನ್ನರಕಿಂಪುರುಷರಿಂದಾಗಲಿ, ಪಶುಪಕ್ಷಿಕ್ರಿಮಿಕೀಟಾದಿ ಬ್ರಹ್ಮ ಸೃಷ್ಟಿಯ ಯಾವುದೇ ಜೀವಿಯಿಂದಾಗಲಿ ತನಗೆ ಮರಣವುಂಟಾಗಬಾರದೆಂಬ ವರವನ್ನು ಪಡೆದ. ಈ ವರದಿಂದ ಗರ್ವಿತನಾಗಿ ಮೂರು ಲೋಕಗಳಿಗೂ ಕಂಟಕಪ್ರಾಯನಾಗಿ ಸ್ವರ್ಗವನ್ನೂ ಆಕ್ರಮಿಸಿಕೊಂಡ! ಋಷಿಮುನಿಗಳನ್ನು ಹಿಂಸಿಸಿ ಎಲ್ಲೆಲ್ಲೂ ಹರಿ ಪೂಜೆಯನ್ನು ನಿಷೇಧಿಸಿ ತನ್ನ ಪೂಜೆಯನ್ನು ಮಾಡಬೇಕೆಂದು ಆದೇಶ ಹೊರಡಿಸಿದ! 
     ಹಿರಣ್ಯಕಶಿಪು ತಪಸ್ಸಿಗೆ ಹೋಗಿದ್ದಾಗ ಅವನ ಪತ್ನಿ ಕಯಾದುವು ಗರ್ಭಣಿಯಾಗಿದ್ದಳು. ಅವಳಿಗೆ ಮಗು ಹುಟ್ಟಿದರೆ ಅವನು ಹಿರಣ್ಯಕಶಿಪುವಿನಂತೆ ಇನ್ನೊಬ್ಬ ಲೋಕಕಂಟಕನಾಗುವನೆಂದು ಬಗೆದು ದೇವೇಂದ್ರನು ಅವಳನ್ನು ಅಪಹರಿಸಿ ಕೋಲ್ಲಲು ಹೊರಟನು. ಆಗ ನಾರದರು ಅಡ್ಡ ಬಂದು, ಅವಳ ಹೊಟ್ಟೆಯಲ್ಲಿ ಬೆಳೆಯುತ್ತಿರುವುದು ಒಬ್ಬ ಮಹಾಭಾಗವತನೆಂದು ಆಶ್ವಾಸಿಸಿ ಅವಳನ್ನು ತಮ್ಮ ಆಶ್ರಮಕ್ಕೆ ಕರೆದೊಯ್ದು ಉಪಚರಿಸಿದರು. ಅಲ್ಲಿ ಅವರು ಅವಳಿಗೆ ನಿತ್ಯವೂ ಹರಿಕಥೆಗಳನ್ನು ಹೇಳುತ್ತಾ ಹರಿಭಕ್ತಿಯ ಬಗ್ಗೆ ಉಪದೇಶ ಮಾಡುತ್ತಿರಲು, ಅವಳು ಅಷ್ಟಾಗಿ ಅವನ್ನು ಕೇಳದೆ ನಿದ್ರೆ ಹೋಗುತ್ತಿದ್ದಳು. ಆದರೆ ಅವಳ ಗರ್ಭದಲ್ಲಿದ್ದ ಮಗು ಎಲ್ಲವನ್ನೂ ಕೇಳಿ ಮಹಾಭಕ್ತನಾದನು. ಅವನೇ ಪ್ರಹ್ಲಾದ.‌
     ಹಿರಣ್ಯಕಶಿಪು ಲೋಕಕಂಟಕನಾಗಿರಲು, ದೇವತೆಗಳು ವಿಷ್ಣುವಿನ ಮೊರೆ ಹೊಕ್ಕು ತಮ್ಮನ್ನು ಕಾಪಾಡುವಂತೆ ಬೇಡಿದರು. ಆಗ ವಿಷ್ಣುವು, ಯಾವಾಗ ಹಿರಣ್ಯಕಶಿಪುವು ತನ್ನ ಮಗನನ್ನೇ ಹಿಂಸಿಸುವನೋ ಆಗ ತಾನು ಅವತಾರವೆತ್ತಿ ಅವನನ್ನು ವಧಿಸುವೆನೆಂದು ಆಶ್ವಾಸನೆಯಿತ್ತನು.
     ಮುಂದೆ, ಹಿರಣ್ಯಕಶಿಪುವು ಷಂಡ, ಅಮರ್ಕ ಎಂಬ ಶುಕ್ರಾಚಾರ್ಯರ ಇಬ್ಬರು ಪುತ್ರರ ಬಳಿಗೆ ಪ್ರಹ್ಲಾದನನ್ನು ವಿದ್ಯಾಭ್ಯಾಸಕ್ಕೆ ಕಳಿಸಿದ. ಬಹುಕಾಲದ ನಂತರ ಅವನು ಪ್ರಹ್ಲಾದನನ್ನು ಮನೆಗೆ ಕರೆಸಿಕೊಂಡು ಒಂದು ಸುಭಾಷಿತ ಹೇಳಲು ಕೇಳಿದಾಗ, ಪ್ರಹ್ಲಾದನು ಸಂಸಾರಕೂಪದಿಂದ ಪಾರಾಗಲು ಹರಿ ಸ್ಮರಣೆ ಮಾಡಬೇಕೆಂದನು. ಇದರಿಂದ ಕುಪಿತಗೊಂಡ ಹಿರಣ್ಯಕಶಿಪುವು ಯಾರೋ ಅವನ ತಲೆ ಕೆಡಿಸಿರಬೇಕೆಂದು ಯೋಚಿಸಿ, ಅವನಿಗೆ ಸರಿಯಾದ ಶಿಕ್ಷಣ ಕೊಡಬೇಕೆಂದು ಷಂಡಾಮರ್ಕರಿಗೆ ಆಗ್ರಹಿಸಿದ. ಅವರು ಅವನನ್ನು ಬೈದು, ಹೊಡೆದು, ಎಲ್ಲಾ ಮಾಡಿ, ಹಿರಣ್ಯಕಶಿಪುವನ್ನೇ ದೇವರೆಂದು ಪೂಜಿಸಬೇಕೆಂದು ಬೋಧಿಸಿದರೂ ಪ್ರಹ್ಲಾದನು ತನ್ನ ಪಟ್ಟು ಬಿಡಲಿಲ್ಲ. ನಾರಾಯಣನೇ ಭಗವಂತ, ಅವನನ್ನೇ ಭಜಿಸಬೇಕು ಎಂದು ಹೇಳುತ್ತಿದ್ದ. ಗುರುಗಳು ಅವನನ್ನು ಹಿರಣ್ಯಕಶಿಪುವಿನ ಬಳಿಗೆ ಕರೆತಂದು ಅವನು ಹೇಳುತ್ತಿರುವುದನ್ನು ತಾವು ಕಲಿಸಿಲ್ಲವೆಂದೂ ಅದು ಎಲ್ಲಿಂದ ಬರುತ್ತಿದೆಯೋ ಗೊತ್ತಿಲ್ಲ ಎಂದೂ ಹೇಳಿದರು. ಆಗ ಹಿರಣ್ಯಕಶಿಪುವು ಪ್ರಹ್ಲಾದನನ್ನು ಕೊಲ್ಲಿಸಲು ರಾಕ್ಷಸರಿಂದ ಹಿಂಸೆಗೊಳಿಸಿದನು, ಬೆಟ್ಟದಿಂದ ಬೀಳಿಸಿದನು, ಸಮುದ್ರಕ್ಕೆ ತಳ್ಳಿಸಿದನು, ಬೆಂಕಿಗೆ ದೂಡಿಸಿದನು, ಸರ್ಪಗಳಿಂದ ಕಚ್ಚಿಸಲು ಹಾಗೂ ಆನೆಯಿಂದ ತುಳಿಸಲು ಪ್ರಯತ್ನಿಸಿದನು. ಆದರೆ ಪ್ರಹ್ಲಾದನು ಹರಿದಯೆಯಿಂದ ಕೂದಲೂ ಕೊಂಕದೆ ಪಾರಾದನು. ಕೊನೆಗೆ ಅವನನ್ನು ಪುನಃ ಗುರುಕುಲಕ್ಕೆ ಕಳಿಸಲು ಅವನು ಇತರ ರಾಕ್ಷಸ ಬಾಲಕರಿಗೂ ಹರಿಭಜನೆ ಕಲಿಸಿ ಅವರನ್ನೂ ಭಕ್ತರನ್ನಾಗಿ ಮಾಡಿದನು. ಅವರಿಗೆ ಅನೇಕ ಆಧ್ಯಾತ್ಮಿಕ ಉಪದೇಶಗಳನ್ನು ನೀಡಿದನು. ಈ ಹರಿಭಕ್ತಿ, ಆಧ್ಯಾತ್ಮಿಕ ವಿಚಾರಗಳು ಅವನಿಗೆ ಹೇಗೆ ತಿಳಿದವೆಂದು ರಾಕ್ಷಸ ಬಾಲಕರು ಕೇಳಲು, ಅವನು ಗರ್ಭದಲ್ಲಿದ್ದಾಗ ನಾರದರು ಮಾಡಿದ ಉಪದೇಶದ ಕಥೆಯನ್ನು ಹೇಳಿದನು. ಇದೆಲ್ಲವನ್ನು ನೋಡಿ ರೋಸಿಹೋದ ಗುರುಗಳು ಪುನಃ ಅವನನ್ನು ತಂದೆಯ ಬಳಿಗೆ ಕರೆದುತರಲು, ಹಿರಣ್ಯಕಶಿಪುವು ಅವನಿಗೆ ವಿಷಪ್ರಾಶನ ಮಾಡಿಸಿದನು. ಆಗಲೂ ಪ್ರಹ್ಲಾದನು ಸಾಯಲಿಲ್ಲ.

  ಅತ್ಯಂತ ವಿಸ್ಮಿತನಾದ ಹಿರಣ್ಯಕಶಿಪು ಆಕ್ರೋಶದಿಂದ ತಾನೇ ಪ್ರಹ್ಲಾದನನ್ನು ಕೊಲ್ಲಲು ಮುಂದೆ ಬಂದು, "ಎಲ್ಲಿದ್ದಾನೆ ಆ ನಿನ್ನ ಹರಿ? ನಿನ್ನನ್ನು ಕಾಪಾಡಲು ಅವನನ್ನು ಕರೆ!" ಎಂದು ಆರ್ಭಟಿಸಿದನು. ಆಗ ಪ್ರಹ್ಲಾದನು ಹರಿಯು ಅಣು ರೇಣು ತೃಣ ಕಾಷ್ಠಾದಿ ಸಕಲ ಚರಾಚರ ವಸ್ತುಗಳಲ್ಲೂ ಇರುವನೆಂದು ದೃಢಭಕ್ತಿಯಿಂದ ಹೇಳಿದಾಗ, ಹಿರಣ್ಯಕಶಿಪುವು, ಹಾಗಿದ್ದರೆ ಅರಮನೆಯ ಕಂಬದಲ್ಲಿರುವನೇ ನೋಡೋಣ ಎಂದು ಒಂದು ಕಂಬವನ್ನು ಒಡೆಯಲು, ಪ್ರಹ್ಲಾದನ ಭಕ್ತಿ, ನಂಬಿಕೆಗಳನ್ನು ಉಳಿಸಲು ವಿಷ್ಣುವು ನರಸಿಂಹಸ್ವಾಮಿಯಾಗಿ ಅವತರಿಸಿ, ಹಿರಣ್ಯಕಶಿಪುವನ್ನು ತನ್ನ ತೊಡೆಯ ಮೇಲೆ ಹಾಕಿಕೊಂಡು, ಅರಮನೆಯ ಹೊಸ್ತಿಲ ಮೇಲೆ ಕುಳಿತು, ತನ್ನ ನಖಗಳಿಂದಲೇ ಅವನ ಉದರವನ್ನು ಬಗೆದು ಕೊಂದು ಅವನ ಕರುಳುಗಳನ್ನು ಮಾಲೆ ಹಾಕಿಕೊಂಡನು. ಆಗ ಸಂಜೆಯ ವೇಳೆಯಾಗಿತ್ತು. ಹಿರಣ್ಯಕಶಿಪುವಿನ ವರದಂತೆಯೇ ಎಲ್ಲವೂ ನಡೆದಿತ್ತು. ಆಗ ಹಗಲೂ ಅಲ್ಲದೇ ರಾತ್ರಿಯೂ ಅಲ್ಲದೆ, ಸಂಜೆಯಾಗಿತ್ತು. ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಹಿರಣ್ಯಕಶಿಪು ಸಾಯದೆ, ಮಧ್ಯದಲ್ಲಿ ನರಸಿಂಹನ ತೊಡೆಯ ಮೇಲೆ ಸತ್ತಿದ್ದನು. ಮನುಷ್ಯ, ದೇವ, ದೈತ್ಯ, ಮೃಗ, ಪಕ್ಷಿ ಇದಾವುದೂ ಅಲ್ಲದೆ, ಬ್ರಹ್ಮ ಸೃಷ್ಟಿಯಲ್ಲಿಯೇ ಇರದ ಮನುಷ್ಯ ದೇಹ ಹಾಗೂ ಸಿಂಹದ ಮುಖ ಇರುವ ಬ್ರಹ್ಮ ಸೃಷ್ಟಿಗೂ ಮೇಲಿನ ವಿಷ್ಣುವಿನ ನರಸಿಂಹಾವತಾರದಿಂದ ಅವನು ಸತ್ತಿದ್ದನು. ಆಯುಧಗಳಿಂದ ಅವನು ಸಾಯದೆ, ನರಸಿಂಹನ ನಖಗಳಿಂದಲೇ ಸತ್ತಿದ್ದನು. ಹೀಗೆ ಬ್ರಹ್ಮನ ವರಗಳನ್ನು ಪೂರೈಸಿಯೇ ವಿಷ್ಣು ಅವನನ್ನು ವಧಿಸಿದ್ದನು! ಆಗ ಅನೇಕ ದೈತ್ಯರು ನರಸಿಂಹನನ್ನು ಆಕ್ರಮಿಸಲು, ನರಸಿಂಹನು ಅವರೆಲ್ಲರನ್ನೂ ಸಂಹರಿಸಿದನು! ಅನಂತರ, ದೇವತೆಗಳೂ ಲಕ್ಷ್ಮಿಯೂ ಬಂದರೂ ನರಸಿಂಹನ ಉಗ್ರ ಕೋಪ ಆರದಿರಲು, ಬ್ರಹ್ಮನ ಮಾತಿನಂತೆ ಪ್ರಹ್ಲಾದನು ನರಸಿಂಹನನ್ನು ಸ್ತುತಿಸಿ ಸಮಾಧಾನಗೊಳಿಸಿದನು. ಸಮಾಧಾನಗೊಂಡ ನರಸಿಂಹನು ವರಗಳನ್ನು ಬೇಡಲು ಹೇಳಲು, ಪ್ರಹ್ಲಾದನು, ತನಗೆ ಯಾವುದೇ ಕಾಮನೆಯು ಹುಟ್ಟದಿರುವಂಥ ವರವನ್ನು ಕೊಡುವಂತೆಯೂ ಹರಿದ್ವೇಷಿಯಾಗಿದ್ದ ತನ್ನ ತಂದೆ ಪಾಪಗಳನ್ನು ಕಳೆದು ಪರಿಶುದ್ಧನಾಗಲೆಂದೂ ವರ ಬೇಡಿದನು. ಅದಕ್ಕೆ ನರಸಿಂಹಸ್ವಾಮಿಯು, ತನ್ನ ಸ್ಪರ್ಶದಿಂದಲೇ ಹಿರಣ್ಯಕಶಿಪುವು ಪವಿತ್ರನಾಗಿರುವನೆಂದೂ, ಪ್ರಹ್ಲಾದನಂಥ ಭಕ್ತನು ಅವನ ಕುಟುಂಬದಲ್ಲಿ ಹುಟ್ಟಿರುವುದರಿಂದ ಅವನಿಗೆ ಮೊದಲು ಇಪ್ಪತ್ತೊಂದು ತಲೆಮಾರುಗಳಿದ್ದಿದ್ದರೆ ಅವರೆಲ್ಲರೂ ಮುಕ್ತರಾಗುತ್ತಿದ್ದರು ಎಂದು ಹೇಳುತ್ತಾ ಪ್ರಹ್ಲಾದನಿಗೆ ದೈತ್ಯ ಚಕ್ರವರ್ತಿಯ ಪಟ್ಟಗಟ್ಟಿ ಅಂತರ್ಧಾನನಾದನು. 
     ಇದು ಭಾಗವತದಲ್ಲಿನ ನರಸಿಂಹಾವತಾರದ ಸಂಕ್ಷಿಪ್ತ ಕಥೆ. ವಿಷ್ಣುಪುರಾಣದಲ್ಲೂ ಕಥೆ ಬಹುತೇಕ ಹೀಗೆಯೇ ಇದ್ದರೂ, ಕೊನೆಯಲ್ಲಿ ನರಸಿಂಹನು ಕಂಬದಿಂದ ಬಂದ ಕಥೆಯೇ ಇಲ್ಲದೇ ಒಮ್ಮೆ ವಿಷ್ಣುವು ನರಸಿಂಹಾವತಾರ ತಾಳಿ ಹಿರಣ್ಯಕಶಿಪುವನ್ನು ಸಂಹರಿಸಿದನೆಂದು ಒಂದೇ ವಾಕ್ಯದಲ್ಲಿ ಹೇಳಲಾಗಿದೆ! ಇನ್ನೊಂದು ಸ್ವಾರಸ್ಯವೆಂದರೆ, ಇಲ್ಲಿ ಪ್ರಹ್ಲಾದನು ವಿಷ್ಣುವನ್ನು ಧ್ಯಾನಿಸುತ್ತಾ ಪೂರ್ತಿ ಅವನಲ್ಲಿ ತನ್ಮಯನಾಗಿ ತಾನು ಅವನಿಂದ ಅಭಿನ್ನ ಎಂಬ ಅದ್ವೈತಾತ್ಮಕ ಭಾವವನ್ನು ತಾಳುತ್ತಾನೆ. ಹಿರಣ್ಯಕಶಿಪು ಅವನನ್ನು ಸಮುದ್ರಕ್ಕೆ ತಳ್ಳಿಸಿದಾಗ, ಹರಿಧ್ಯಾನದಲ್ಲಿ ಮೈಮರೆತ ಪ್ರಹ್ಲಾದನು ಏನು ಆಗದೆ ಪಾರಾಗಿ ಸ್ವಲ್ಪ ಹೊತ್ತು ತಾನು ಪ್ರಹ್ಲಾದನೆಂದೂ ಮರೆತು, ಅನಂತರ ತಾನು ಪ್ರಹ್ಲಾದನೆಂದು ಸ್ಮರಿಸಿ ಅರಮನೆಗೆ ಹಿಂದಿರುಗುತ್ತಾನೆ. ಅವನು ಆ ಮಟ್ಟಿಗೆ ಹರಿಯೊಂದಿಗೆ ತಾದಾತ್ಮ್ಯ ಹೊಂದಿರುತ್ತಾನೆ. ಆಗ ಅವನು ಹರಿಯನ್ನು ಸ್ತುತಿಸಲು, ವಿಷ್ಣುವು ಪ್ರತ್ಯಕ್ಷನಾಗಿ ವರಗಳನ್ನು ಬೇಡಲು ಹೇಳುತ್ತಾನೆ. ಆಗ ಪ್ರಹ್ಲಾದನು ತಾನು ಯಾವುದೇ ಜನ್ಮದಲ್ಲಿ ಹುಟ್ಟಿದರೂ ಸದಾ ತನಗೆ ಹರಿಭಕ್ತಿಯಿರಲಿ ಹಾಗೂ ತನ್ನ ತಂದೆ ಹರಿದ್ವೇಷ ಹಾಗೂ ತನ್ನ ದ್ವೇಷ ಮತ್ತು ಹಿಂಸಾಚಾರದಿಂದ ಪಡೆದ ಪಾಪಗಳಿಂದ ಮುಕ್ತನಾಗಲಿ ಎಂದು ವರಗಳನ್ನು ಬೇಡುತ್ತಾನೆ ಹಾಗೂ ವಿಷ್ಣುವು ಮೂರನೆಯ ವರವನ್ನು ಬೇಡು ಎನ್ನಲು, ಪ್ರಹ್ಲಾದನು, ಹರಿಭಕ್ತಿ ಇರುವಾಗ, ಧರ್ಮಾರ್ಥಕಾಮಗಳಿಂದೇನು, ಅವನಿಗೆ ಮುಕ್ತಿಯೇ ಕರಸ್ಥಿತವಾಗಿರುತ್ತದೆ ಎನ್ನಲು, ವಿಷ್ಣುವು ಅವನಿಗೆ ಖಂಡಿತವಾಗಿಯೂ ಮುಕ್ತಿ ಸಿಗುತ್ತದೆ ಎಂದು ಹೇಳಿ ಅಂತರ್ಧಾನನಾಗುತ್ತಾನೆ. ಭಾಗವತದಲ್ಲಿ ನರಸಿಂಹಾವತಾರಕ್ಕೆ ಮೊದಲು ಪ್ರಹ್ಲಾದನು ಹೀಗೆ ವಿಷ್ಣುವನ್ನು ನೇರವಾಗಿ ಕಂಡಿರುವುದಿಲ್ಲ ಹಾಗೂ ವರಗಳನ್ನು ಪಡೆದಿರುವುದಿಲ್ಲ. ಇನ್ನೊಂದು ಸ್ವಾರಸ್ಯವೆಂದರೆ, ಪ್ರಹ್ಲಾದನು ಹೀಗೆ ಬದುಕಿ ಬರಲು, ಹಿರಣ್ಯಕಶಿಪುವು ಆನಂದಗೊಂಡು ಅವನನ್ನು ಅಪ್ಪಿಕೊಳ್ಳುತ್ತಾನೆ ಹಾಗೂ ಪಶ್ಚಾತ್ತಾಪ ಪಡುತ್ತಾನೆ. ಅನಂತರ, ಪ್ರಹ್ಲಾದನು ತಂದೆ ಮತ್ತು ಗುರುಗಳ ಸೇವೆ ಮಾಡಿಕೊಂಡಿದ್ದ ಎಂದು ಕಥೆ ಮುಂದುವರಿದು, ಮುಂದೊಂದು ದಿನ ವಿಷ್ಣುವು ನರಸಿಂಹಾವತಾರದ ಮೂಲಕ ಹಿರಣ್ಯಕಶಿಪುವನ್ನು ಸಂಹರಿಸಲು, ಪ್ರಹ್ಲಾದನು ದೈತ್ಯರಾಜನಾದನು ಎಂದು ಹಠಾತ್ತನೆ ಮುಗಿಯುತ್ತದೆ! 
      ಹರಿವಂಶದಲ್ಲಿ ನರಸಿಂಹಾವತಾರದ ಕಥೆ ಬಹಳ ವಿಭಿನ್ನವಾಗಿದೆ. ಹರಿವಂಶವು ಮಹಾಭಾರತದ ಖಿಲಭಾಗವಾಗಿದೆ. ಮಹಾಭಾರತದ ಕಥೆಯನ್ನು ಕೇಳಿದ ನಂತರ, ಜನಮೇಜಯನು ವೈಶಂಪಾಯನರನ್ನು ಶ್ರೀಕೃಷ್ಣನ ವಂಶಾವಳಿಯ ಕಥೆ ಹೇಳಲು ಕೇಳಲು, ಅವರು ಅದನ್ನು ಹೇಳುತ್ತಾ ವಿಷ್ಣುವಿನ ವಿವಿಧ ಅವತಾರಗಳ ಕಥೆಗಳನ್ನೂ ಹೇಳುತ್ತಾರೆ. ಹಾಗಾಗಿ, ಹರಿವಂಶವನ್ನು ವಿದ್ವಾಂಸರು ಒಂದು ಪುರಾಣವೆಂದೂ ಪರಿಗಣಿಸುತ್ತಾರೆ. ಇಲ್ಲಿನ ಕಥೆಯಂತೆ, ಹಿರಣ್ಯಕಶಿಪುವು ಹನ್ನೊಂದು ಸಾವಿರದ ಐನೂರು ವರ್ಷಗಳ ಕಾಲ ನೀರಿನಲ್ಲಿ ಘೋರ ತಪಸ್ಸು ಮಾಡಲು, ಬ್ರಹ್ಮನು ಸುಪ್ರೀತನಾಗಿ ಪ್ರತ್ಯಕ್ಷನಾದನು. ಆಗ ಹಿರಣ್ಯಕಶಿಪು ಕೇಳಿದ ವರ ಬಹುತೇಕ ಭಾಗವತದಲ್ಲಿರುವಂತೆಯೇ ಇದ್ದರೂ ತನ್ನನ್ನು ಸಂಹರಿಸುವಶನು ಒಂದೇ ಕೈ ಏಟಿನಿಂದ ಹೊಡೆದು ಸಂಹರಿಸಲು ಸಮರ್ಥವಾಗಿರಬೇಕು ಎಂಬ ಅಧಿಕಾಂಶವನ್ನು ಕೇಳುತ್ತಾನೆ. ಅನಂತರ, ಅವನು ತಾನೇ ಸೂರ್ಯ, ಚಂದ್ರ, ವಾಯು, ಅಗ್ನಿ, ಜಲ, ಆಕಾಶ, ನಕ್ಷತ್ರ, ದಿಕ್ಕುಗಳು,  ಇಂದ್ರ, ಯಮ, ವರುಣ, ಕುಬೇರ, ಎಲ್ಲವೂ ಆಗಿರಬೇಕೆಂದೂ ( ತಾನೇ ಎಲ್ಲಕ್ಕೂ ಒಡೆಯನಾಗಿರಬೇಕೆಂದು ತಾತ್ಪರ್ಯ) ತಾನು ಶತ್ರುಗಳೊಂದಿಗೆ ಯುದ್ಧ ಮಾಡುವಾಗ ದಿವ್ಯಾಸ್ತ್ರಗಳು ತನ್ನ ಮುಂದೆ ಮೂರ್ತಿಮತ್ತಾಗಿ ಬಂದು ನಿಲ್ಲಬೇಕೆಂದೂ ವರ ಬೇಡಿದನು. ಬ್ರಹ್ಮನು ಈ ವರಗಳನ್ನು ನೀಡಿ ಹೊರಟಾಗ, ದೇವತೆಗಳು ಹಿರಣ್ಯಕಶಿಪುವಿನ ಮೃತ್ಯು ಹೇಗೆಂದು ಕೇಳಿದರು. ಅದಕ್ಕೆ ಬ್ರಹ್ಮನು, ಅವನ ತಪಸ್ಸಿನ ಫಲವೆಲ್ಲವೂ ಅನುಭವಿಸಿ ಮುಗಿದಾಗ, ವಿಷ್ಣುವು ಅವನನ್ನು ಸಂಹರಿಸುವನೆಂದು ಹೇಳಿದನು.
     ವರಗರ್ವಿತನಾದ ಹಿರಣ್ಯಕಶಿಪುವು ಲೋಕಕಂಟಕನಾದನು ಹಾಗೂ ದೇವಲೋಕವನ್ನು ವಶಪಡಿಸಿಕೊಂಡನು! ಆಗ ದೇವತೆಗಳು ವಿಷ್ಣುವನ್ನು ಶರಣು ಹೊಂದಿ ಸ್ತುತಿಸಲು, ವಿಷ್ಣುವು ಹಿರಣ್ಯಕಶಿಪುವನ್ನು ಪರಿವಾರಸಹಿತವಾಗಿ ಸಂಹರಿಸುವೆನೆಂದು ಅಭಯವಿತ್ತು ಹಾಗೆಯೇ ಸಂಕಲ್ಪ ಮಾಡಿ ಹಿಮವತ್ಪರ್ವತದ ತಪ್ಪಲಿಗೆ ಬಂದನು. ಹಿರಣ್ಯಕಶಿಪುವನ್ನು ಸಂಹರಿಸಲು ಬೇಗನೆ ಕಾರ್ಯಸಿದ್ಧಿ ಮಾಡುವ ಯಾವ ರೂಪವನ್ನು ಧರಿಸಲೆಂದು ಯೋಚಿಸುತ್ತಾ ವಿಷ್ಣುವು ಹಿಂದೆಂದೂ ಹುಟ್ಟಿರದ ನರ ದೇಹ ಮತ್ತು ಸಿಂಹ ಮುಖದ, ದೈತ್ಯರಿಗೆ ಎದುರಿಸಲಾಗದ ನರಸಿಂಹ ರೂಪವನ್ನು ಧರಿಸಿ, ಓಂಕಾರವನ್ನು ಸಹಾಯಕ್ಕೆ ತೆಗೆದುಕೊಂಡು ( ಓಂಕಾರವನ್ನು ಧ್ಯಾನಿಸಿ ಶಕ್ತಿ, ಉತ್ಸಾಹ ಪಡೆದು) ಚಪ್ಪಾಳೆ ತಟ್ಟುತ್ತಾ ಹೊರಟನು. ಹಾಗೆ ಹೋಗಿ ನರಸಿಂಹನು ಹಿರಣ್ಯಕಶಿಪುವಿನ ಸಭಾಮಂದಿರವನ್ನು ಪ್ರವೇಶಿಸಿದನು. ಇಲ್ಲಿ ಹಿರಣ್ಯಕಶಿಪುವಿನ ಸಭಾಮಂದಿರದ ವಿಸ್ತೃತ ವರ್ಣನೆ ಬರುತ್ತದೆ. ಸ್ವರ್ಗದ ಪೃಷ್ಠಭಾಗದಲ್ಲಿದ್ದ ಆ ಸಭಾಮಂದಿರವು ನೂರೈವತ್ತು ಯೋಜನಗಳಷ್ಟು ಉದ್ದವೂ ನೂರು ಯೋಜನಗಳಷ್ಟು ಅಗಲವೂ ಐದು ಯೋಜನಗಳಷ್ಟು ಎತ್ತರವೂ ಇದ್ದು, ಅದು ಸದಾ ಆಕಾಶದಲ್ಲಿರುತ್ತಾ ಸಭಾಸದರ ಇಚ್ಛಾನುಸಾರ ಸಂಚರಿಸುತ್ತಿತ್ತು! ಅತ್ಯಂತ ರಮಣೀಯವಾಗಿದ್ದ ಆ ಸಭೆಯಲ್ಲಿದ್ದವರಿಗೆ ಹಸಿವು, ಬಾಯಾರಿಕೆ, ಮುಪ್ಪು, ಶೋಕ, ಆಯಾಸಗಳು ಆಗುತ್ತಿರಲಿಲ್ಲ! ಅಗ್ನಿಯ ತೇಜಸ್ಸಿನಂತೆ ಬೆಳಗುತ್ತಿದ್ದ ಆ ಸಭೆಯಲ್ಲಿ ಮಣಿಮಯವಾದ ಸ್ತಂಭಗಳೂ ಭವ್ಯವಾದ ಆಸನಗಳೂ ಇದ್ದವು! ಫಲಪುಷ್ಪಗಳಿಂದ ತುಂಬಿದ್ದ ಸುಂದರ ಲತಾವೃಕ್ಷಗಳು, ಎಲ್ಲೆಲ್ಲೂ ಸುಗಂಧ, ಸೊಗಸಾದ ಜಲಾಶಯ, ಕಮಲಪುಷ್ಷಗಳಿಂದಲೂ ಹಂಸಕಾರಂಡವ ಪಕ್ಷಿಗಳಿಂದಲೂ ಕೂಡಿದ್ದ ಸರೋವರಗಳು, ಇವೆಲ್ಲವೂ ಇದ್ದವು ಆ ಸಭೆಯಲ್ಲಿ! ಅಲ್ಲಿ ರಸವತ್ತಾದ ಭಕ್ಷ್ಯ ಭೋಜ್ಯಗಳೂ ಇದ್ದವು! ಇಂಥ ಸಭೆಯಲ್ಲಿ, ದೇವಗಂಧರ್ವಾಪ್ಸರೆಯರಿಂದಲೂ ದೈತ್ಯರಿಂದಲೂ ಸೇವಿಸಲ್ಪಡುತ್ತಾ ನಾಲ್ಕು ಮಾರುಗಳಷ್ಟು ದೊಡ್ಡದಾದ ಸಿಂಹಾಸನದಲ್ಲಿ ಹಿರಣ್ಯಕಶಿಪುವು ವಿರಾಜಮಾನನಾಗಿದ್ದನು! 
     ಆಗ ಸಾವಿರ ಚಂದ್ರರಿಗೆ ಸಮಾನವಾದ ಸೌಂದರ್ಯದಿಂದ ಕಂಗೊಳಿಸುತ್ತಿದ್ದ ನರಸಿಂಹನನ್ನು ನೋಡಿ ಹಿರಣ್ಯಕಶಿಪುವೂ ಇತರ ದೈತ್ಯರೂ ವಿಸ್ಮಿತರಾದರು! ಆದರೆ ಅವನ ಪುತ್ರನಾದ ಪ್ರಹ್ಲಾದನು ದಿವ್ಯದೃಷ್ಟಿಯಿಂದ ನರಸಿಂಹನನ್ನು ನೋಡಿ, ಅವನ ಶರೀರದಲ್ಲಿ ಸಮಸ್ತ ದೇವತೆಗಳು, ರಾಕ್ಷಸರು, ನದಿಸಮುದ್ರಗಳು, ಹಿಮಾಲಯವೇ ಮೊದಲಾದ ಪರ್ವತಗಳು, ಹೀಗೆ ಮೂರು ಲೋಕಗಳೊಂದಿಗೆ ಆ ಸಭೆಯನ್ನೂ ಕೊನೆಗೆ ತನ್ನನ್ನೂ ತಂದೆಯನ್ನೂ ಕಾಣುತ್ತಿರುವೆನೆಂದು ತಂದೆಗೆ ಹೇಳಿದನು. ಆಗ ಹಿರಣ್ಯಕಶಿಪುವು ಅಪೂರ್ವ ಶರೀರದ ಆ ಕಾಡಿನ ಸಿಂಹವನ್ನು ಹಿಡಿಯಬೇಕೆಂದೂ ಆಗ ಪ್ರಾಣಕ್ಕೆ ಆಪತ್ತು ಬಂದರೆ ಕೊಲ್ಲುವಂತೆಯೂ ದೈತ್ಯರಿಗೆ ಆಜ್ಞಾಪಿಸಿದನು. ಆಗ ದೈತ್ಯರು ನರಸಿಂಹನ ಮೇಲೆ ಹಲವಾರು ಅಸ್ತ್ರ ಶಸ್ತ್ರಗಳನ್ನು ಪ್ರಯೋಗಿಸುತ್ತಾ ಅವನನ್ನು ಪೀಡಿಸಿದರು! ಆಗ ನರಸಿಂಹನು ಸಿಂಹನಾದ ಮಾಡುತ್ತಾ ಆ ಸಭಾಭವನವನ್ನು ಧ್ವಂಸಮಾಡಿಬಿಟ್ಟನು! ಇದರಿಂದ ಹಿರಣ್ಯಕಶಿಪುವು ಕ್ರುದ್ಧನಾಗಿ ನರಸಿಂಹನ ಮೇಲೆ ವಿವಿಧ ಅಸ್ತ್ರಗಳನ್ನು ಪ್ರಯೋಗಿಸಿದನು! ಅಂತೆಯೇ ಇತರ ದೈತ್ಯರೂ ಅವನನ್ನು ಪೀಡಿಸುತ್ತಾ ಎಲ್ಲಾ ಕಡೆಗಳಿಂದಲೂ ಸುತ್ತುವರೆದರು! ಆದರೆ ಅವರಾರಿಗೂ ನರಸಿಂಹನ ಶರೀರದಲ್ಲಿ ಒಂದು ಗಾಯವನ್ನೂ ಮಾಡಲಾಗಲಿಲ್ಲ! ದೈತ್ಯರು ಪ್ರಯೋಗಿಸಿದ ಚಕ್ರಗಳನ್ನು ನರಸಿಂಹನು ನುಂಗಿಹಾಕಿದನು! ಹಿರಣ್ಯಕಶಿಪುವು ಪ್ರಯೋಗಿಸಿದ ಶಕ್ತ್ಯಾಯುಧವನ್ನು ಹುಂಕಾರದಿಂದಲೇ ತುಂಡರಿಸಿದನು! ಅನಂತರ, ದೈತ್ಯರು ಆಕಾಶಕ್ಕೇರಿ ಶಿಲಾವರ್ಷ, ಜಲವರ್ಷ, ಮತ್ತು ಅಗ್ನಿವರ್ಷಗಳನ್ನು ಮಾಡಿದರು! ಆದರೆ ಅವು ನರಸಿಂಹನನ್ನು ಸ್ಪರ್ಶಿಸಲೂ ಆಗಲಿಲ್ಲ! 
    ಹೀಗೆ ದೈತ್ಯರ ಮಾಯಾಯುದ್ಧ ವಿಫಲವಾಗಲು ಹಿರಣ್ಯಕಶಿಪುವು ಅತ್ಯಂತ ಕ್ರುದ್ಧನಾಗಿ ತನ್ನ ತೇಜಸ್ಸಿನಿಂದ ಭೂಮಿಯನ್ನೇ ದಹಿಸುವಂತೆ ಹೆಜ್ಜೆಯಿಡುತ್ತಾ ಭೂಮಿಯನ್ನೇ ಅಲ್ಲಾಡಿಸಿದನು! ನದಿ,ಸರೋವರ, ಸಮುದ್ರಗಳಲ್ಲಿ ಅಲ್ಲೋಲಕಲ್ಲೋಲವಾಯಿತು! ಪರ್ವತಗಳು ಚಲಿಸತೊಡಗಿದವು! ಜಗತ್ತೇ ಕತ್ತಲಿನಿಂದ ತುಂಬಿಹೋಯಿತು! ವಾಯುವು ಕ್ಷೋಭೆಗೊಂಡಿತು! ಪ್ರಳಯಕಾಲದಲ್ಲಿ ಕಾಣಿಸಿಕೊಳ್ಳುವ ಗ್ರಹಗಳು ಕಾಣಿಸಿಕೊಂಡು ಹರ್ಷದಿಂದ ಸಂಚರಿಸತೊಡಗಿದವು! ಉಲ್ಕಾಪಾತ, ಪ್ರಾಣಿಗಳ ಆರ್ತನಾದ, ಇಂಥ ಉತ್ಪಾತಗಳಾಗಲು, ಏಕೆ ಇವು ಆಗುತ್ತಿವೆ ಎಂದು ಹಿರಣ್ಯಕಶಿಪುವು ಗುರು ಶುಕ್ರಾಚಾರ್ಯರನ್ನು ಕೇಳಿದನು. ಅದಕ್ಕೆ ಅವರು,"ಯಾವ ರಾಜನ ರಾಜ್ಯದಲ್ಲಿ ಇಂಥ ಉತ್ಪಾತಗಳಾಗುವವೋ ಆ ರಾಜನ ರಾಜ್ಯವನ್ನು ಶತ್ರುಗಳು ಅಪಹರಿಸುತ್ತಾರೆ! ಹಾಗಾಗಿ ಬೇಗನೆ ಬುದ್ಧಿಯಿಂದ ಸಮಾಲೋಚಿಸಿ ಹಾಗಾಗದಂತೆ ಏನು ಮಾಡಬೇಕೋ ಮಾಡು!" ಎಂದು ಹೇಳಿ ತಮ್ಮ ಮನೆಗೆ ಹೊರಟುಹೋದರು! 
       ಆಗ ಹಿರಣ್ಯಕಶಿಪುವು ತನ್ನ ಗದೆಯನ್ನು ಹಿಡಿದು ಗರ್ಜಿಸುತ್ತಾ ನರಸಿಂಹನತ್ತ ಧಾವಿಸಿದನು! ಆಗ ಬ್ರಹ್ಮಾದಿ ದೇವತೆಗಳು ಹಿರಣ್ಯಕಶಿಪುವನ್ನು ಬೇಗನೆ ಸಂಹರಿಸುವಂತೆ ನರಸಿಂಹನನ್ನು ಸ್ತುತಿಸಿದರು. ಆಗ ನೃಸಿಂಹನು ಛಂಗನೆ ಹಾರಿ ಹಿರಣ್ಯಕಶಿಪುವಿನ ವಕ್ಷಸ್ಥಳವನ್ನು ತನ್ನ ಉಗುರುಗಳಿಂದ ಸೀಳಿ ಅವನನ್ನು ಸಂಹರಿಸಿದನು! ಇದರಿಂದ ಸಂತೋಷಗೊಂಡ ದೇವತೆಗಳು ಪುನಃ ನೃಸಿಂಹಸ್ವಾಮಿಯನ್ನು ಸ್ತುತಿಸಿ ತಮ್ಮ ಲೋಕಗಳಿಗೆ ತೆರಳಿದರು. ಅನಂತರ, ಅಪ್ಸರೆಯರು ನರ್ತಿಸುತ್ತಿದ್ದಂತೆ ನರಸಿಂಹದೇವನು ಕ್ಷೀರಸಮುದ್ರಕ್ಕೆ ತೆರಳಿ,‌ ಅದರ ತೀರದಲ್ಲಿ ನರಸಿಂಹರೂಪವನ್ನು ತ್ಯಜಿಸಿ, ಅದರ ಪ್ರತಿಮೆಯನ್ನು ಲೋಕದಲ್ಲಿ ಪ್ರತಿಷ್ಠಾಪಿಸಿ, ತನ್ನ ಚತುರ್ಭುಜ ರೂಪದಿಂದ ತನ್ನ ಪರಮಧಾಮಕ್ಕೆ ಹೋದನು.
     ಹೀಗೆ ಹರಿವಂಶದಲ್ಲಿ ಹಿರಣ್ಯಕಶಿಪುವು ಪ್ರಹ್ಲಾದನನ್ನು ಹಿಂಸಿಸುವುದು, ಕಂಬವನ್ನು ಒಡೆಯುವುದು, ಅದರಿಂದ ನರಸಿಂಹನು ಬರುವುದು ಇವೆಲ್ಲವೂ ಇಲ್ಲವೇ ಇಲ್ಲ! ಬದಲಿಗೆ ನರಸಿಂಹನು ಹಠಾತ್ತನೆ ಹಿರಣ್ಯಕಶಿಪುವಿನ ಸಭೆಗೆ ಬಂದು ಅವನನ್ನು ಸಂಹರಿಸುತ್ತಾನೆ! ಈ ಕಥಾಪಾಠ ಬಹಳ ವಿಭಿನ್ನವಾಗಿದೆ! 
       ಹೀಗೆ ನರಸಿಂಹಾವತಾರದ ಕಥೆ ಮೂರು ಗ್ರಂಥಗಳಲ್ಲಿ ವಿಭಿನ್ನವಾಗಿ ಚಿತ್ರಿಸಲ್ಪಟ್ಪು ಸ್ವಾರಸ್ಯಕರವಾಗಿದೆ. 

      
     






 

ಗುರುವಾರ, ಏಪ್ರಿಲ್ 23, 2026

ಸುಂದರೀಶತಕ -೨೮


ಸಂಸ್ಕೃತ ಮೂಲ 

ಕುಸುಮಶರನೃಪನಿದೇಶಾತ್ಸುತನೌ ಚಕಿತಂ ನವಂ ವಯೋ ವಿಶತಿ /
ನವಸೇವಕ ಇವ ಪಾರ್ಥಿವಸದ್ಮನಿ ದತ್ತಪ್ರವೇಶೋsಪಿ //

ಕನ್ನಡ ಅನುವಾದ 

     ' ಕಾಮದೇವರಾಜನ ಆಜ್ಞಾನುಸಾರ, ಈ ಸುಂದರಿಯ
 ಶರೀರದಲ್ಲಿ ಯೌವನವು ಭಯಗೊಂಡು ಹೇಗೆ ಪ್ರವೇಶಿಸುತ್ತಿದೆಯೆಂದರೆ, ರಾಜನ ಅರಮನೆಯೊಳಗೆ ಹೋಗಲು ಅನುಮತಿ ಸಿಕ್ಕರೂ ಹೊಸ ಸೇವಕನು ನಿಧಾನವಾಗಿ ಹೆದರುತ್ತಾ ಒಳಗೆ ಹೋಗುವ ಹಾಗೆ ಪ್ರವೇಶಿಸುತ್ತಿದೆ!'
    ಕವಿಯು ಹೆಣ್ಣಿನ ದೇಹದಲ್ಲಿ ಯೌವನದ ಆಗಮನವನ್ನು ಸ್ವಾರಸ್ಯಕರವಾಗಿ ವರ್ಣಿಸುತ್ತಿದ್ದಾನೆ! ಅದು ಮಹಾರಾಜ ಕಾಮದೇವನ ಆಜ್ಞೆಯಂತೆ ಅವಳ ದೇಹವನ್ನು ಪ್ರವೇಶಿಸುತ್ತಿದೆ. ಆದರೆ ಅದು ಹೇಗಿದೆಯೆಂದರೆ, ಒಬ್ಬ ಹೊಸ ಸೇವಕನಿಗೆ ರಾಜನ ಅರಮನೆಯೊಳಗೆ ಪ್ರವೇಶಿಸಲು ಅನುಮತಿ ಸಿಕ್ಕರೂ ಅರಮನೆಯ ವೈಭವವನ್ನು ನೋಡಿ, ಅವನು ನಿಧಾನವಾಗಿ ಹೆದರುತ್ತಾ ಬರುವಂತೆ, ಯೌವನವೂ ಭಯಗೊಂಡು ನಿಧಾನವಾಗಿ ಬರುತ್ತಿದೆ! ಈ ಸಮಯದಲ್ಲಿ ಹುಡುಗಿಗೆ ಆಗುವ ಸಂಕೋಚ, ನಾಚಿಕೆ, ಇತ್ಯಾದಿಗಳು ಇದನ್ನು ತೋರಿಸುತ್ತವೆ.' 

ಬುಧವಾರ, ಏಪ್ರಿಲ್ 22, 2026

ಸುಂದರೀಶತಕ -೨೭

ಸಂಸ್ಕೃತ ಮೂಲ 

ಯುವಜನಮಾರಣಶಾಲಾ ಸುಂದರಿ ವೇಣೀಕೃಪಾಣಿಕೋಪೇತಾ /
ತವ ಚರಮಮಂಗಮೇತತ್ಕವಯಿತ್ವಾ ಪಾತಕೀ ಕ: ಸ್ಯಾತ್ //

ಕನ್ನಡ ಅನುವಾದ 

     ' ಎಲೈ ಸುಂದರಿ! ನಿನ್ನ ಜಡೆಯೆಂಬ ಕಠಾರಿಯೊಂದಿಗೆ ನೀನು ನಿಜಕ್ಕೂ ಯುವಕರಿಗೆ ಮಾರಣಶಾಲೆಯೇ ಆಗಿರುವೆ! ನಿನ್ನ ಈ ಚರಮಾಂಗವನ್ನು ಕವಿತ್ವದಿಂದ ವರ್ಣಿಸಿ ಯಾರು ತಾನೇ ಪಾತಕಿಯಾಗುವನು?' 

    ಸುಂದರಿಯ ಜಡೆ ಅದೆಷ್ಟು ಸುಂದರವಾಗಿದೆಯೆಂದರೆ ಅದು ಯುವಜನರ ಮನಸ್ಸನ್ನು ವಶಪಡಿಸಿಕೊಳ್ಳುತ್ತಿದೆ! ಹಾಗಾಗಿ ಕವಿಯು ಆ ಜಡೆಯನ್ನು ಯುವಕರನ್ನು ಕೊಲ್ಲುವ ಕಠಾರಿಗೆ ಹೋಲಿಸುತ್ತಾನೆ! ಇಂಥ ಕಠಾರಿಯಂಥ ಕೇಶಪಾಶವನ್ನು ಹೊಂದಿರುವ ಅವಳು ಯುವಕರನ್ನು ಕೊಲ್ಲುವ ಮಾರಣಶಾಲೆಯೇ ಹೌದು ಎನ್ನುತ್ತಾನೆ! ಅವಳ ಈ ಚರಮಾಂಗವನ್ನು, ಅಂದರೆ ದುಷ್ಟ ಅಂಗವನ್ನು ( ಅಂತ್ಯವನ್ನು ತರುವ) ಅಥವಾ ಕೊನೆಯ ಅಂಗವನ್ನು ( ನಖಶಿಖಾಂತ ವರ್ಣನೆಯಲ್ಲಿ ಕೊನೆಯ ಅಂಗ) ವರ್ಣಿಸಿ ಪಾತಕಿಯಾಗುವ ಕವಿ ಯಾರು ತಾನೇ ಇದ್ದಾರೆ ಎಂದು ಕವಿಯೇ ಕೇಳುತ್ತಾನೆ! ಅಂದರೆ ಯುವಕರನ್ನು ಕೊಲ್ಲುತ್ತಿರುವ ಅವಳ ಕಠಾರಿಯಂಥ ಕೇಶಪಾಶವನ್ನು ವರ್ಣಿಸಿದರೆ ಕವಿಯು ಪಾಪಿಯಾಗುತ್ತಾನೆ ಎಂದು ವಿರೋಧಾತ್ಮಕವಾಗಿ ಅವಳ ಕೇಶ ಸೌಂದರ್ಯವನ್ನು ವರ್ಣಿಸುತ್ತಾನೆ.

ಸುಂದರೀಶತಕ - ೨೬

ಸಂಸ್ಕೃತ ಮೂಲ 

ಸೀಮಂತಿನಿ ತವ ಕುಟಿಲಸ್ನಿಗ್ಧಾಯತಮೇಚಕ: ಕಟಾಕ್ಷ ಇವ / ಹಾ ಹಂತ ಕೇಶಹಸ್ತೋ ಹೃದಯಂ ಹಸ್ತಾದ್ವಿಹಸ್ತಯತಿ //

ಕನ್ನಡ ಅನುವಾದ 

        ' ಸುಂದರ ಕೇಶದ ಸುಂದರಿ! ನಿನ್ನ ಕೇಶಹಸ್ತವು ( ಕೇಶಪಾಶ) ನಿನ್ನ ಕಡೆಗಣ್ಣ ಕುಡಿನೋಟದಂತೆ ಕುಟಿಲವೂ ಸ್ನಿಗ್ಧವೂ ಉದ್ದವಾಗಿಯೂ ಕಡುಕಪ್ಪಾಗಿಯೂ ಇದ್ದು, ಅಯ್ಯೋ! ನನ್ನ ಹೃದಯವನ್ನು ನನ್ನ ಹಸ್ತದಿಂದ ವಿಹಸ್ತಗೊಳಿಸುತ್ತಿದೆ!' 
      ಇಲ್ಲಿ ಕವಿಯು ಹೆಣ್ಣಿನ ಕೇಶಪಾಶವನ್ನು ಅವಳ ಕಟಾಕ್ಷ ಅಥವಾ ಕಡೆಗಣ್ಣ ಕುಡಿನೋಟಕ್ಕೆ ಹೋಲಿಸಿದ್ದಾನೆ. ಹಾಗಾಗಿ ಅವಳ ಕೇಶಪಾಶವು ಅವಳ ಕಟಾಕ್ಷದಂತೆ ಕುಟಿಲವೂ ( ವಕ್ರವೂ) ಸ್ನಿಗ್ಧವೂ ( ಕೋಮಲ ಹಾಗೂ ತೈಲಯುಕ್ತ ಹಾಗೂ ಸ್ನೇಹಯುಕ್ತ), ಉದ್ದವಾಗಿಯೂ ಕಡುಕಪ್ಪಾಗಿಯೂ ಇದೆ! ಇಂಥ ಸುಂದರ ಕೇಶಪಾಶವು ಹಸ್ತದಂತಿದ್ದು, ನನ್ನ ಹಸ್ತದಿಂದ ನನ್ನ ಹೃದಯವನ್ನು ಅಪಹರಿಸುತ್ತಾ ಅದನ್ನು ವಿಹಸ್ತಗೊಳಿಸುತ್ತಿದೆ ಎಂದು ಉತ್ಪ್ರೇಕ್ಷೆಯಿಂದ ಕವಿಯು ಅವಳ ಕೇಶವನ್ನು ವರ್ಣಿಸುತ್ತಾನೆ. 

ಸೋಮವಾರ, ಏಪ್ರಿಲ್ 20, 2026

ಗೋಪೀನಾಥಂನಲ್ಲಿ ಒಂದು ದಿನ

ಗೋಪೀನಾಥಂ ಎಂದಕೂಡಲೇ ನಮಗೆ ನೆನಪಾಗುವುದು ವೀರಪ್ಪನ್! ಹೌದು, ಅದೇ ದಪ್ಪ ಮೀಸೆಯ, ಒಣಕಲು ಶರೀರದ, ಗಜಹಂತಕ, ದಂತಚೋರ, ನರಹಂತಕ, ಕ್ರೂರ ವೀರಪ್ಪನ್! ಅವನು ಹುಟ್ಟಿದ ಹಳ್ಳಿ, ಈ ಗೋಪೀನಾಥಂ! ಆ ಕಾರಣದಿಂದಲೇ ಯಾರೂ ಇತ್ತ ಮುಖ ಮಾಡುತ್ತಿರಲಿಲ್ಲ! ಆದರೆ ಒಂದು ಕರಾಳ ಅಧ್ಯಾಯ ಮುಗಿದ ನಂತರ ಹೊಸ ಅಧ್ಯಾಯ ತೆರೆದುಕೊಳ್ಳುವಂತೆ, ಕರಾಳ ಕತ್ತಲೆಯ ಛಾಯೆ, ಬೆಳಕಿನ ಪ್ರಕಾಶದಿಂದ ನಿವಾರಣೆಯಾಗುವಂತೆ, ಈಗ ವೀರಪ್ಪನ್ ಅಧ್ಯಾಯ ಮುಗಿದು, ಗೋಪೀನಾಥಂನ ಪ್ರಕೃತಿ ಸೌಂದರ್ಯದ ನಿಧಿ ಅನಾವರಣಗೊಳ್ಳುತ್ತಿದೆ!
    ಅಂಥದ್ದೇನಿದೆ ಈ ಗೋಪೀನಾಥಂನಲ್ಲಿ ಎಂದು ನೀವು ಕೇಳಬಹುದು. ಅದನ್ನು ಇಲ್ಲಿಗೆ ಬಂದು ಅನುಭವಿಸಿದರಷ್ಟೇ ತಿಳಿಯುತ್ತದೆ ಎನ್ನಬಹುದು! ಇಲ್ಲೊಂದು ಅಲೌಕಿಕ ಮತ್ತು ನಿಗೂಢವೆನಿಸುವ ಪ್ರಕೃತಿ ಸೌಂದರ್ಯವಿದೆ! ಮನಸ್ಸಿಗೆ ಮುದ ತಂದು ಮೈಮರೆಯುವಂತೆ ಮಾಡುವ ದಿವ್ಯಾನುಭವ ಸಿಗುತ್ತದೆ ಇಲ್ಲಿ! ಹಾಗಾಗಿಯೇ ಜಂಗಲ್ ಲಾಡ್ಜಸ್ ನವರು ಇಲ್ಲಿನ ಕ್ಯಾಂಪ್ ಗೆ ಗೋಪೀನಾಥಂ ಮಿಸ್ಟ್ರಿ ಟ್ರೇಲ್ಸ್ ಎಂದು ಹೆಸರಿಟ್ಟಿದ್ದಾರೆ. ಅಂದರೆ ಗೋಪೀನಾಥಂ ನ ನಿಗೂಢ ಪಥಗಳು ಎಂದರ್ಥ. 
     ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ನ ವಸತಿಯಲ್ಲಿ ಉಳಿದುಕೊಂಡು ಅದರ ಸಿಬ್ಬಂದಿಯ ಮಾರ್ಗದರ್ಶನದಲ್ಲಿ ಗೋಪೀನಾಥಂ ಅನ್ನು ನೋಡಿ, ಸುತ್ತಲಿನ ಕಾವೇರಿ ವನ್ಯಜೀವಿ ಅಭಯಾರಣ್ಯದ ಸೌಂದರ್ಯವನ್ನು ಅನುಭವಿಸಿದರೆ ನಮಗೆ ಆ ಸೌಂದರ್ಯಾನುಭವ ಚೆನ್ನಾಗಿ ಆಗುತ್ತದೆ. ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್, ನಮ್ಮ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ ಬರುವ ಸಂಸ್ಥೆಯಾಗಿದ್ದು, ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳೇ ಇದನ್ನು ನಡೆಸುತ್ತಾರೆ. ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಸಂಸ್ಥೆಯಡಿಯಲ್ಲಿ ಅರಣ್ಯಧಾಮಗಳ ಬಳಿಯೇ ಇರುವ ಹಲವಾರು ಕೇಂದ್ರಗಳಿದ್ದು ಇವು ನಮಗೆ ಅರಣ್ಯಗಳಲ್ಲಿ ಸಫಾರಿ ಮಾಡಿಸುವುದೇ ಮೊದಲಾಗಿ ಅನೇಕ ಶೈಕ್ಷಣಿಕ ಚಟುವಟಿಕೆಗಳನ್ನು ಮಾಡಿಸುತ್ತವೆ. ನಗರದ ಜಂಜಾಟದಿಂದ ದೂರವಾಗಿ ಪ್ರಕೃತಿಯ ಮಡಿಲಲ್ಲಿ ವನ್ಯಜೀವಿಗಳನ್ನು ನೋಡಿ ನಲಿದು, ಅವುಗಳ ಬಗ್ಗೆ ಕಲಿತು, ಸ್ವಾದಿಷ್ಟ ಭೋಜನ ಸವಿದು, ಮನಸ್ಸನ್ನು ಉಲ್ಲಾಸಗೊಳಿಸಲು ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಕೇಂದ್ರಗಳು ಬಹಳ ಅನುಕೂಲ ಮಾಡಿಕೊಡುತ್ತವೆ.‌ ಗೋಪೀನಾಥಂ ಮಿಸ್ಟ್ರಿ ಟ್ರೇಲ್ಸ್ ಕೂಡ ಇವುಗಳಲ್ಲಿ ಒಂದು. ಎಲ್ಲಾ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಕೇಂದ್ರಗಳಂತೆ ಇಲ್ಲಿಗೆ ಹೋಗಲು ಕೂಡ ಇವರ ಅಂತರ್ಜಾಲ ತಾಣದಲ್ಲಿ ನಮ್ಮ ಸ್ಥಳವನ್ನು ಮೊದಲೇ ಹಣ ಪಾವತಿಸಿ ಕಾಯ್ದಿರಿಸಿಕೊಂಡು ಹೋಗಬೇಕು.‌ ಇವರ ಅಂತರ್ಜಾಲ ತಾಣ, www.junglelodges.com ಆಗಿರುತ್ತದೆ. ಅದರಲ್ಲಿ ಗೋಪೀನಾಥಂ ಮಿಸ್ಟ್ರಿ ಟ್ರೇಲ್ಸ್ ವಿಷಯವನ್ನು ಹುಡುಕಿ ನಮ್ಮ ಸ್ಥಳವನ್ನು ಬೇಕಾದ ದಿನಾಂಕದಂದು ಕಾಯ್ದಿರಿಸಿಕೊಳ್ಳಬೇಕು. ನಿಗದಿತ ದಿನ, ಮಧ್ಯಾಹ್ನ ಹನ್ನೆರಡುವರೆ ಗಂಟೆಗೆ ಚೆಕ್ ಇನ್, ಅಂದರೆ ಪ್ರವೇಶವಿದ್ದರೆ, ಮರುದಿನ ಬೆಳಿಗ್ಗೆ ಹತ್ತುವರೆ ಗಂಟೆಯ ಹೊತ್ತಿಗೆ, ಉಪಾಹಾರದ ಬಳಿಕ ಚೆಕ್ ಔಟ್, ಅಂದರೆ ನಿರ್ಗಮನವಾಗಬೇಕು. ಇಲ್ಲಿಗೆ ಸ್ವಂತ ಇಲ್ಲವೇ ಖಾಸಗಿ ವಾಹನದಲ್ಲಿ ಹೋಗುವುದು ಒಳ್ಳೆಯದು. ಅಂತೆಯೇ ನಾನೂ ಖಾಸಗಿ ಕಾರ್ ನಲ್ಲಿ ಬೆಳಿಗ್ಗೆ ಆರುವರೆ ಗಂಟೆಗೆ ಹೊರಟೆ. ಕರ್ನಾಟಕ,ತಮಿಳುನಾಡುಗಳ ಅಂಚಿನಲ್ಲಿರುವ, ಚಾಮರಾಜನಗರ ಜಿಲ್ಲೆಯಲ್ಲಿರುವ ಈ ಪುಟ್ಟ ಹಳ್ಳಿಗೆ ಹೋಗಲು ಬೆಂಗಳೂರಿನಿಂದ ಸುಮಾರು 250 ಕಿ.ಮೀ. ದೂರವಾಗುತ್ತದೆ ಹಾಗೂ ಸುಮಾರು ಐದು ಗಂಟೆಗಳಾಗುತ್ತವೆ. ಮದ್ದೂರಿನ ಮೇಲೆ ಹೋಗುತ್ತಾ, ದಾರಿಯಲ್ಲಿ ಮದ್ದೂರು ಟಿಫಾನಿಸ್ ಉಪಾಹಾರ ಮಂದಿರದಲ್ಲಿ ಉಪಾಹಾರ ಮುಗಿಸಿಕೊಂಡು ಹೊರಟೆ. ಮುಂದೆ ಮಲೆಮಹದೇಶ್ವರ ಬೆಟ್ಟದ ಮೇಲೆ ಹೋಗಿ ಈ ಬೆಟ್ಟದ ಪ್ರಕೃತಿ ಸೌಂದರ್ಯವನ್ನು ಸವಿಯುವಂತಾಯಿತು. ಒಂದು ಸುಂದರ ವ್ಯೂ ಪಾಯಿಂಟ್ ನಲ್ಲಿ ನಿಲ್ಲಿಸಿ ತಂಗಾಳಿಯೊಂದಿಗಿನ ಸುತ್ತಮುತ್ತಲಿನ ಬೆಟ್ಟಗುಡ್ಡಗಳ ಹಾಗೂ ಹಸಿರು ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ ಸೊಗಸಾದ ಫೋಟೋಗಳನ್ನು ಕ್ಲಿಕ್ಕಿಸಿದೆ. ದೂರದಲ್ಲಿ ಮಲೆಮಹದೇಶ್ವರ ಸ್ವಾಮಿ ಹುಲಿಯ ಮೇಲೇರಿ ಬರುತ್ತಿರುವ ಸುಂದರ ವಿಗ್ರಹ ಕಾಣಿಸಿತು! ಮುಂದೆ ಹೋಗುತ್ತಿದ್ದಂತೆ ದಾರಿಯುದ್ದಕ್ಕೂ ಹಸಿರು ಪ್ರಕೃತಿಯ ಸೌಂದರ್ಯವನ್ನು ಕಣ್ಮನ ತುಂಬಿಕೊಳ್ಳಬಹುದು! ಅಷ್ಟು ಸೊಗಸಾಗಿದೆ ದಾರಿ! ಮಳೆಗಾಲ ಅಥವಾ ಮಳೆಗಾಲ ಕಳೆದ ಕೂಡಲೇ ಹೋದರೆ ಒಳ್ಳೆಯ ಅನುಭವವಾಗುತ್ತದೆ. 
     ಮುಂದೆ, ಗೋಪೀನಾಥಂ ವಲಯದ ಕಾವೇರಿ ವನ್ಯಜೀವಿ ಅಭಯಾರಣ್ಯದ ಚೆಕ್ ಪೋಸ್ಟ್ ತಲುಪಿ, ಶುಲ್ಕ ಕಟ್ಟಲು ಗಾಡಿ ನಿಲ್ಲಿಸಲಾಯಿತು. ಇಲ್ಲಿ ಕಾಡಿನ ಜುಂಯ್ ಗುಟ್ಟುವ ಶಬ್ದ, ಅಲ್ಲಲ್ಲಿ ನವಿಲಿನ ಶಬ್ದಗಳು, ಸುತ್ತಲಿನ ಹಸಿರು ವನರಾಜಿ, ತಂಪಾದ ಹವೆ, ಬಹಳ ಮುದ ತಂದವು! ಇಲ್ಲಿ ಹೊಗೇನಕಲ್ ಜಲಪಾತದ ಬಗ್ಗೆ ಒಂದು ಫಲಕ ಹಾಕಿದ್ದಾರೆ. ಹೊಗೇನಕಲ್ ಜಲಪಾತ ಗೋಪೀನಾಥಂನಿಂದ ಕೇವಲ ಹತ್ತು ಹನ್ನೆರಡು ಕಿ.ಮೀ. ದೂರವಿರೂವುದರಿಂದ, ಈ ಜಾಗ ನೋಡಿದ ಬಳಿಕ ಅಲ್ಲಿಗೆ ಹೋಗಬಹುದು.
    ಚೆಕ್ ಪೋಸ್ಟ್ ದಾಟಿ ಮುಂದೆ ಹೋಗುತ್ತಿದ್ದಂತೆ ದಾರಿಯಲ್ಲೇ ಚುಕ್ಕಿ ಜಿಂಕೆಗಳ ಒಂದು ಹಿಂಡು ಕಾಣಿಸಿತು! ಜಿಂಕೆಗಳ ಫೋಟೋ ಹಿಡಿದು ಮುಂದೆ ಹೋಗುತ್ತಿದ್ದಂತೆ, ಪಾಲಾರ್ ಹಳ್ಳಿ ಸಿಕ್ಕಿತು.‌ ದೂರದಲ್ಲಿ ಕಾವೇರಿ ನದಿ ಸಣ್ಣಗೆ ಹರಿಯುತ್ತಿದ್ದುದನ್ನು ನನ್ನ ಡ್ರೈವರ್ ತೋರಿಸಿದರು. ಇಲ್ಲಿನ ಪ್ರಕೃತಿ ಸೌಂದರ್ಯ ಅಮೋಘ! ಪಾಲಾರ್- ಗೋಪೀನಾಥಂ ರಸ್ತೆಯೆಂಬ ಈ ರಸ್ತೆಯಲ್ಲಿ ಹೋಗುತ್ತಾ ಎರಡೂ ಬದಿಗಳಲ್ಲಿನ ಬಂಡೆಗಲ್ಲು ಸಹಿತವಾದ ಹಸಿರು ಅರಣ್ಯದ ಸೊಬಗನ್ನು ಸವಿಯುತ್ತಾ ಸಾಗಿದೆ. ಇನ್ನು ಸುಮಾರು ಇಪ್ಪತ್ತು ಕಿ.ಮೀ.ಗಳಲ್ಲಿ ಗೋಪೀನಾಥಂ ತಲುಪುವವರಿದ್ದೆವು. ದಾರಿಯಲ್ಲಿ ನವಿಲುಗಳು ಓಡಾಡುತ್ತಿದ್ದುದನ್ನು ಕಂಡು ಆನಂದದಿಂದ ಫೋಟೋ ಕ್ಲಿಕ್ಕಿಸಿ ದೆ! ಅಂತೆಯೇ ಹದ್ದುವಿನಂಥ ಒಂದು ಪಕ್ಷಿ ಕುಳಿತದ್ದು ಕಾಣಿಸಿತು! ಕೂಡಲೇ ಫೋಟೋ ತೆಗೆದು ವಿಡಿಯೋ ಮಾಡಿದೆ.‌ಆಮೇಲೆ ಇದು ಶಿಕ್ರ ಎಂಬ ಪಕ್ಷಿ ಎಂದು ತಿಳಿಯಿತು.‌ ಇಂಥ ಪಕ್ಷಿಗಳನ್ನು ರಾಪ್ಟರ್ ಅಥವಾ ಬರ್ಡ್ ಆಫ್ ಪ್ರೇ ಎನ್ನುತ್ತಾರೆ.‌ ಅಂದರೆ ಇತರ ಪಕ್ಷಿಗಳನ್ನೂ ಪ್ರಾಣಿಗಳನ್ನೂ ಹಿಡಿದು ತಿನ್ನುವ ಪಕ್ಷಿಗಳು.‌
      ಮುಂದೆ ಹೋದಂತೆ, ಆನೆಯ ಚಿಹ್ನೆಯಿರುವ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಅವರ ಫಲಕ ಕಾಣಿಸಿತು. ಅದು ಗೋಪೀನಾಥಂ ಶಿಬಿರಕ್ಕೆ ದಾರಿ ತೋರಿಸುತ್ತಿತ್ತು. ಆ ದಾರಿಯಲ್ಲಿ ಹೋದಂತೆ ನಾವು ಗೋಪೀನಾಥಂ ಶಿಬಿರವನ್ನು ತಲುಪಿದೆವು. ಗೋಪೀನಾಥಂ ಮಿಸ್ಟ್ರಿ ಟ್ರೇಲ್ಸ್ ಎಂಬ ದೊಡ್ಡ ಫಲಕ ನಮ್ಮನ್ನು ಸ್ವಾಗತಿಸಿತು! ಗೇಟಿನೊಳಗಿಂದ ಮುಂದೆ ಹೋಗಿ ಶಿಬಿರದ ಕಛೇರಿಗೆ ಬಂದೆವು. ಕಛೇರಿ ಹಾಗೂ ಸಭಾಂಗಣ ಒಟ್ಟಿಗಿದ್ದು ಇದಕ್ಕೆ ಸುಪ್ರಸಿದ್ಧ ಅರಣ್ಯಾಧಿಕಾರಿಗಳಾಗಿದ್ದ ದಿ.ಪಿ.ಶ್ರೀನಿವಾಸ್ ಅವರ ಹೆಸರನ್ನಿಟ್ಟಿದ್ದಾರೆ. ವೀರಪ್ಪನ್ ನಿಂದ ದುರ್ಮರಣಕ್ಕೀಡಾದ ಇವರು ಗೋಪೀನಾಥಂ ಗ್ರಾಮಕ್ಕೆ ಬಹಳ ಅನುಕೂಲಗಳನ್ನು ಮಾಡಿಕೊಟ್ಟಿದ್ದರು. ಕಛೇರಿಯ ಎದುರಿಗೇ ಇವರ ಒಂದು ಪುತ್ಥಳಿಯನ್ನು ಇರಿಸಲಾಗಿದೆ. ಕಛೇರಿಯ ಗೋಡೆಗಳ ಮೇಲೆ ಇಲ್ಲಿನ ಕಾಡಿನಲ್ಲೇ ಸಿಕ್ಕ ಚಿರತೆಗಳೇ ಮೊದಲಾದ ಪ್ರಾಣಿಗಳ ಸುಂದರವಾದ ಛಿಯಾಚಿತ್ರಗಳನ್ನು ಹಾಕಿದ್ದಾರೆ. ಕಛೇರಿಯಲ್ಲಿ ನಾವು ಮೊದಲು ನಮ್ಮ ಹೆಸರು, ವಿಳಾಸ, ಮೊದಲಾದ ವಿವರಗಳನ್ನು ಒಂದು ಪುಸ್ತಕದಲ್ಲಿ ಬರೆದು, ಆಧಾರ್ ಕಾರ್ಡ್ ಅಥವಾ ಯಾವುದಾದರೂ ಗುರುತಿನ ಚೀಟಿಯನ್ನು ಸಿಬ್ಬಂದಿಯವರಿಗೆ ತೋರಿಸಬೇಕು. ಇವೆಲ್ಲವನ್ನೂ ನಾನು ಮಾಡಿದ ಬಳಿಕ, ಇಲ್ಲಿನ ಸಿಬ್ಬಂದಿಯವರು ಸ್ವಾಗತ ಪಾನೀಯವಾಗಿ ( ವೆಲ್ಕಂ ಡ್ರಿಂಕ್) ನಿಂಬೆಹಣ್ಣಿನ ರಸವನ್ನು ನೀಡಿ, ಒಂದು ಕಾಟೇಜ್ ಅನ್ನು ನನಗೆ ನಿಗದಿಪಡಿಸಿದರು. ಅನಂತರ, ಆ ದಿನದ ಹಾಗೂ ಮರುದಿನದ ಚಟುವಟಿಕೆಗಳ ವಿವರಗಳನ್ನು ಹೇಳಿದರು. ಡ್ರೈವರ್ ಗೆ ಪ್ರತ್ಯೇಕ ಊಟ ಹಾಗೂ ಮಲಗಲು ಡಾರ್ಮಿಟರಿ ಕೊಡುವುದಾಗಿ ಹೇಳಿದರು. ನಾನು ಕಂಡಂತೆ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ನ ಎಲ್ಲಾ ಕೇಂದ್ರಗಳಲ್ಲೂ ಸಿಬ್ಬಂದಿಯವರು ಬಹಳ ಸ್ನೇಹದಿಂದ ವರ್ತಿಸುತ್ತಾರೆ. ಅವರಲ್ಲೊಬ್ಬರು ನನ್ನ ಲಗೇಜನ್ನು ತೆಗೆದುಕೊಂಡು ಕಾಟೇಜ್ ಗೆ ಕರೆದೊಯ್ದರು. ವೀರಪ್ಪನ್ ಒಬ್ಬ ದುಷ್ಟನಾದರೂ ಗೋಪೀನಾಥಂ ಗ್ರಾಮಕ್ಕೆ ಅನುಕೂಲಗಳನ್ನು ಮಾಡಿಕೊಟ್ಟುದರಿಂದ ಇಲ್ಲಿನ ಜನರು ಅವನನ್ನು ಆದರಿಸುತ್ತಾರೆಂದು ಸಿಬ್ಬಂದಿಯವರು ಹೇಳಿದಾಗ ನನಗೆ ಆಶ್ಚರ್ಯವಾಯಿತು!
     ಇಲ್ಲಿನ ಕಾಟೇಜ್ ಗಳು ಬಹಳ ಅಂದವಾಗಿವೆ! ಮುದ್ದಾದ ಪುಟ್ಟ ಗುಡಿಸಲಿನ ಆಕಾರದಲ್ಲಿರುವ ಇವು, ವಾಸ್ತವವಾಗಿ ಟೆಂಟ್ ಕಾಟೇಜ್ ಗಳು. ಹುಲ್ಲಿನ ಮೇಲ್ಛಾವಣಿ ಹೊಂದಿದ್ದು, ಗೋಡೆಗಳೆಲ್ಲವೂ ಟಾರ್ಪಾಲಿನಿಂದ ಮಾಡಲಾಗಿದ್ದು, ಶೌಚಾಲಯದ ಗೋಡೆ ಹಾಗೂ ಕಾಟೇಜ್ ನಿಂತಿರುವ ಎತ್ತರದ ತಳಹದಿ ಮಾತ್ರ ಇಟ್ಟಿಗೆಯದ್ದಾಗಿವೆ. ಇದಕ್ಕೆ ಮರದ ಬಾಗಿಲು, ಒಳಗೆ ಚಿಲಕ ಹಾಗೂ ಹೊರಗೆ ಬೀಗ ಇವೆ. ಕಾಟೇಜ್ ನ ಒಳಗೆ ಶೌಚಾಲಯ ಸೇರಿದಂತೆ ಎಲ್ಲವೂ ಸ್ವಚವಾಗಿವೆ. ಎರಡು ಶುಭ್ರ ಹಾಸಿಗೆಗಳು, ಮರದ ಕುರ್ಚಿಗಳು ಮತ್ತು ಒಂದು ಸ್ಟ್ಯಾಂಡ್, ಒಂದು ನೀರಿನ ಜಗ್, ಒಂದು ಕಾಫಿ ಮೇಕರ್, ಲೋಟಗಳು, ಚಾರ್ಜ್ ಮಾಡಲು ಪ್ಲಗ್ ಪಾಯಿಂಟ್ ಹಾಗೂ ವಿದ್ಯುತ್ ದೀಪಗಳು, ಫ್ಯಾನ್, ಹಾಗೂ ಏರ್ ಕೂಲರ್ ಇವೆಲ್ಲವೂ ಇವೆ ಇಲ್ಲಿ. ಒಟ್ಟು ಹತ್ತು ಕಾಟೇಜ್ ಗಳಿದ್ದು ಇವುಗಳ ಸುತ್ತಲೂ ಬಂಡೆ ಕಲ್ಲುಗಳ ಸೊಗಸಾದ ದಿಬ್ಬವಿದೆ. ಕಾಟೇಜ್ ನ ತಳಹದಿಯ ಮೇಲೆ ನಡೆಯುತ್ತಾ ಒಂದು ಸುತ್ತು ಹಾಕಲು ಬಹಳ ಹಿತವಾಗಿರುತ್ತದೆ. ಸುತ್ತಲೂ ಮರಗಿಡಗಳ ಹಸಿರು ಪ್ರಕೃತಿಯ ಸೊಬಗು, ತಂಪಾಗಿ ಬೀಸುವ ಗಾಳಿ, ಸ್ವಚ್ಛ ವಾತಾವರಣ, ನಮಗೆ ಆಹ್ಲಾದ ನೀಡುತ್ತವೆ! ಕ್ಯಾಂಪಸ್ ನ ಎದುರಿಗೇ ಇರುವ ಗೋಪೀನಾಥಂ ಕೆರೆ ಎಂಬ ದೊಡ್ಡ ಕೆರೆ ಹಾಗೂ ಅದರ ಸುತ್ತಲೂ ಇರುವ ದೊಡ್ಡ ಬೆಟ್ಟ ಈ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ! ಇವುಗಳೊಂದಿಗೆ ಕಾಡಿನ ಜುಂಯ್ ಗುಟ್ಟುವ ಶಬ್ದ, ಇವೆಲ್ಲವೂ ಸೇರಿ ನಮಗೆ ಯಾವುದೋ ಲೋಕಕ್ಕೆ ಬಂದ ಅನುಭವ ನೀಡುತ್ತವೆ! 
      ಮುಖ ತೊಳೆದು ದಣಿವಾರಿಸಿಕೊಂಡು ಕ್ಯಾಂಪಸ್ ನಲ್ಲಿ ಒಂದು ಸಣ್ಣ ಸುತ್ತು ಹಾಕುವ ಹೊತ್ತಿಗೆ ಮಧ್ಯಾಹ್ನ ಒಂದುವರೆ ಗಂಟೆಯಾಗಿ ಭೋಜನದ ಹೊತ್ತಾಯಿತು.‌ ಎಲ್ಲಾ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಕೇಂದ್ರಗಳಂತೆ ಭೋಜನ ಮಾಡುವ ತಾಣ, ಗೋಲ್ ಘರ್ ಎಂಬ ಮಂದಿರ. ಗೋಳಾಕಾರದಲ್ಲಿರುವುದರಿಂದ ಇದನ್ನು ಗೋಲ್ ಘರ್ ಎನ್ನುತ್ತಾರೆ. ಸೊಗಸಾದ, ರುಚಿಯಾದ, ಶುಚಿಯಾದ, ತಾಜಾ ಊಟಕ್ಕೆ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಹೆಸರುವಾಸಿ! ಮುಖ್ಯವಾಗಿ ಸಸ್ಯಾಹಾರದ ಖಾದ್ಯಗಳಿದ್ದರೂ ಒಂದೆರಡು ಮಾಂಸಾಹಾರದ ಖಾದ್ಯಗಳೂ ಇರುತ್ತವೆ. ಅಂದು, ತರಕಾರಿ ಸಲಾಡ್, ಚಪಾತಿ, ಪಲ್ಯ, ಸಾಗು, ಪಲಾವ್, ಬಿಳಿ ಅನ್ನ, ಸಾಂಬಾರ್, ರಸಂ, ಪಾಯಸ, ಮೊಸರು, ಉಪ್ಪಿನಕಾಯಿ, ನಾನ್ ವೆಜ್ ಖಾದ್ಯಗಳು, ಕೊನೆಗೆ ಬಾಳೆಹಣ್ಣು, ಇವಿಷ್ಟೂ ಇದ್ದವು. ಗೋಲ್ ಘರ್ ಅರೆತೆರೆದ ಮಂದಿರವಾದ್ದರಿಂದ ಪ್ರಕೃತಿಯ ಮಧ್ಯೆ ಕುಳಿತು ಊಟ ಮಾಡುವ ಅನುಭವ ಸೊಗಸಾಗಿರುತ್ತದೆ. ಜೊತೆಗೆ ಕುಶನ್ ಸಹಿತವಾದ ಮರದ ಕುರ್ಚಿಗಳು, ಮರದ ಮೇಜು, ಬಿಸಿಲಿನ ಝಳ ಬರದಿರಲೆಂದು ಹಾಕಿರುವ ರಂಧ್ರಗಳ ಕರ್ಟನ್ ಗಳು, ಇವುಗಳಿಂದ ಒಂದು ರೀತಿಯ ಗ್ರಾಮೀಣ ಸೊಗಡಿನ ವಾತಾವರಣ ಮೂಡಿ ಹಿತವೆನಿಸುತ್ತದೆ.
      ಮುಂದಿನ ಚಟುವಟಿಕೆ, ವನ್ಯಜೀವಿ ಸಫಾರಿ. ಅಂದರೆ ತೆರೆದ ಜೀಪಿನಲ್ಲಿ ಕಾಡಿನೊಳಗೆ ಕರೆದೊಯ್ಯುವುದು. ಇದಕ್ಕೆ ನಾವು ಹೊರಡುವಾಗ ಪ್ರತ್ಯೇಕವಾಗಿ ಹಣ ಕೊಡಬೇಕಿತ್ತು. ಜಂಗಲ್ ಲಾಡ್ಜಸ್ ನ ಬಂಡೀಪುರ , ನಾಗರಹೊಳೆ, ಮೊದಲಾದ ಕೆಲವು ಕೇಂದ್ರಗಳಲ್ಲಿ ಸಫಾರಿಯೂ ಪ್ಯಾಕೇಜ್ ನಲ್ಲಿ ಸೇರಿರುತ್ತದೆ. ಗೋಪೀನಾಥಂನಂಥ ಕೆಲವು ಕೇಂದ್ರಗಳಲ್ಲಿ ಸಫಾರಿಗೆ ಪ್ರತ್ಯೇಕ ಹಣ ಕೊಡಬೇಕಾಗುತ್ತದೆ. ಸಫಾರಿ ಇದ್ದದ್ದು ನಾಲ್ಕು ಗಂಟೆಗಾದ್ದರಿಂದ ಸಾಕಷ್ಟು ಸಮಯವಿತ್ತು. ಪುಷ್ಕಳ ಭೋಜನದ ನಂತರ ಕೆಲವರು ಕಾಟೇಜ್ ನಲ್ಲಿ ವಿಶ್ರಾಂತಿ ಪಡೆಯಲು ಹೋದರೆ ಕೆಲವರು ಮಕ್ಕಳಿಗೆ ಆಡಿಸಲು ಆಟದ ಮೈದಾನಕ್ಕೆ ಹೋದರು. ಇಲ್ಲಿ ಮಕ್ಕಳು ಆಡಲು ಹಲವು ಆಟದ ಚಟುವಟಿಕೆಗಳಿರುವ ಸೊಗಸಾದ ಮೈದಾನವಿದೆ. ಅಂತೆಯೇ ಇಲ್ಲಿ ಅನೇಕ ಸಾಹಸ ಕ್ರೀಡೆಗಳಿವೆ. ಹಾಗೆಯೇ ಇಲ್ಲಿ ಕಂಬಗಳಿಗೆ ಕಟ್ಟಿರುವ ಹ್ಯಮೋಕ್ ಅಥವಾ ತೂಗುಯ್ಯಲೆ ಇದ್ದು ಅದರ ಮೇಲೆ ಮಲಗಿ ಸುಖವಾಗಿ ವಿಶ್ರಾಂತಿ ಪಡೆಯಬಹುದು.ನಾನು ಪ್ರಕೃತಿ ಸೌಂದರ್ಯದ ಅನ್ವೇಷಣೆ ಮಾಡತೊಡಗಿದೆ.‌ ಇಲ್ಲಿ ಹಲವಾರು ಹೂಗಿಡಗಳೂ ಬಣ್ಣಬಣ್ಣದ ಚಿಟ್ಟೆಗಳೂ ಪಕ್ಷಿಗಳೂ ಇವೆ.‌ ಅವುಗಳನ್ನು ಹುಡುಕುತ್ತಾ ಫೋಟೋ ಹಿಡಿಯತೊಡಗಿದೆ. ಮುಖ್ಯವಾಗಿ, ಕಾಮನ್ ಮಾರ್ಮಾನ್ ಚಿಟ್ಟೆ, ಪ್ಲೇನ್ ಟೈಗರ್ ಚಿಟ್ಟೆ, ಆರೆಂಜ್ ಟಿಪ್ ಚಿಟ್ಟೆ, ಮೊದಲಾದ ಸುಂದರ ಚಿಟ್ಟೆಗಳು ನನ್ನ ಕ್ಯಾಮೆರಾದಲ್ಲಿ ಸೆರೆಯಾದವು! ಅಂತೆಯೇ ಥ್ರೆಡ್ ವೇಯ್ಸ್ಟೆಡ್ ವ್ಯಾಸ್ಪ್ ( ದಾರದ ಸೊಂಟದ ಕಣಜ) ಎಂಬ ಮಣ್ಣಿನ ಕಣಜ, ಸ್ಪ್ಲೆಂಡರ್ ಸ್ಕಿಮ್ಮರ್ ಡ್ರ್ಯಾಗನ್ ಫ್ಲೈ ಎಂಬ ಸುಂದರವಾದ ಡ್ರ್ಯಾಗನ್ ಫ್ಲೈ ಅಥವಾ ಕೊಡತಿ ಕೀಟ ಕೂಡ ನೋಡಲು ಸಿಕ್ಕಿದವು. ಇಲ್ಲಿನ ಸಿಬ್ಬಂದಿಯವರು ಮರವೊಂದರ ಮೇಲೆ ಇಲ್ಲಿಯೇ ನೆಲೆಸಿದ್ದ ಚುಕ್ಕಿ ಗೂಬೆ ದಂಪತಿಗಳನ್ನು ತೋರಿಸಿದರು. ಮೈತುಂಬಾ ಚುಕ್ಕಿಗಳನ್ನು ಹೊಂದಿರುವ ಪುಟ್ಟ ಗೂಬೆಗಳಿವು. ಇವನ್ನು ಸ್ಪಾಟೆಡ್ ಔಲೆಟ್ ಗಳೆನ್ನುತ್ತಾರೆ. ನಾವು ಇವನ್ನೇ ಹಾಲಕ್ಕಿಗಳೆಂದು ಕರೆಯುವುದು. ಇವುಗಳ ಕೂಗು ಶಕುನ ಹೇಳುವುದೆಂದೂ ಅದನ್ನು ಬುಡುಬುಡಿಕೆಯವರು ಬಿಡಿಸಿ ಹೇಳುವರೆಂದೂ ನಂಬಿಕೆಯಿದೆ. ದೂರದಲ್ಲಿ ಕುಳಿತಿದ್ದ ಇವುಗಳ ಫೋಟೋಗಳನ್ನು ಕಷ್ಟಪಟ್ಟು ತೆಗೆದೆ. ಇಲ್ಲಿ ಅನೇಕ ಮರಗಳಿವೆ ಹಾಗೂ ಅವುಗಳ ಮೇಲೆ ಅವುಗಳ ಹೆಸರುಗಳ ಫಲಕಗಳನ್ನು ಹಾಕಿದ್ದಾರೆ. ಇಂಡಿಯನ್ ಬೀಚ್ (ಹೊಂಗೆ ಮರ), ಆಲದ ಮರ, ಬೋಗನ್ ವಿಲ್ಲ ಮರ, ಗುಲ್ ಮೊಹರು ( ಕತ್ತಿ ಕಾಯಿ ಮರ), ಅರಳಿ ಮರ, ಮೊದಲಾದ ಅನೇಕ ಮರಗಳಿವೆ ಇಲ್ಲಿ. ಹೀಗೆ ಕ್ಯಾಂಪಸ್ ನಲ್ಲಿ ಸುತ್ತಾಡುತ್ತಾ ಪ್ರಕೃತಿಯ ಹಲವಾರು ಜೀವಿಗಳನ್ನೂ ವೈಶಿಷ್ಟ್ಯಗಳನ್ನೂ ಇಲ್ಲಿ ನೋಡಬಹುದು! ಇಲ್ಲಿನ ಪರಿಸರವಾದಿಗಳನ್ನು ಕೇಳಿದರೆ ಅವರು ಅನೇಕ ವಿಚಾರಗಳನ್ನು ತಿಳಿಸಿಕೊಡುತ್ತಾರೆ. ಹಾಗೆಯೇ ನಡೆಯುತ್ತಾ ಗೋಪೀನಾಥಂ ಕೆರೆಯವರೆಗೂ ಹೋಗಬಹುದು. ಇಲ್ಲಿ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ ನಡೆಯುವುದು ಆಹ್ಲಾದಕರ ಹಾಗೂ ಆರೋಗ್ಯಕರವಾಗಿರುತ್ತದೆ. ಇಲ್ಲೊಂದು ಶಿಬಿರದ ಧ್ಯೇಯ ವಾಕ್ಯವನ್ನು ಹಾಕಿದ್ದಾರೆ.‌ ಅದೇನೆಂದರೆ, ಕ್ಯಾಂಪಿಂಗ್ ಮತ್ತು ಟ್ರೇಲ್ಸ್ ಸೌಲಭ್ಯಗಳ ಮುಖೇನ ನಿಸರ್ಗದೊಂದಿಗೆ ಸಂಬಂಧ ಬೆಸೆಯುವ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ಉತ್ತೇಜಿಸುವುದು. ಹೌದಲ್ಲವೇ? ಇಂಥ ಕ್ಯಾಂಪ್ ಗಳಿಂದ ನಮಗೆ ನಿಸರ್ಗದೊಂದಿಗೆ ಸಂಬಂಧ ಹೆಚ್ಚುತ್ತದೆ, ನಿಸರ್ಗದ ಮಹತ್ವ ತಿಳಿಯುತ್ತದೆ, ಹಾಗೂ ಅದರ ಮೇಲಿನ ಪ್ರೀತಿ ಹೆಚ್ಚಾಗಿ ವನ್ಯಜೀವಿ ಸಂರಕ್ಷಣೆಗೆ ನಾವೂ ಕೈಜೋಡಿಸುತ್ತೇವೆ. ಹಾಗಾಗಿ ಎಲ್ಲರೂ ಇಂಥ ಪ್ರಕೃತಿ ಶಿಬಿರಗಳಿಗೆ ಬರಬೇಕು.
      ಸಂಜೆ ನಾಲ್ಕು ಗಂಟೆಗೆ ಜೀಪ್ ಸಫಾರಿ ಆರಂಭವಾಯಿತು. ಜೀಪ್ ಗೋಪೀನಾಥಂ ಕೆರೆಯ ಸನಿಹದಿಂದ ಹೋಗುವಾಗ ದೃಶ್ಯ ಬಹಳ ಸೊಗಸಾಗಿ ಕಾಣುತ್ತದೆ. ಕಾವೇರಿ ವನ್ಯಜೀವಿ ಅಭಯಾರಣ್ಯದೊಳಗೆ ಹೋದಂತೆ ನಮಗೆ ಮೊದಲಿಗೆ, ಮರದ ಒಂದು ಕೊಂಬೆಯ ಮೇಲೆ ಕುಳಿತಿದ್ದ ಹಸಿರು ಇಂಪೀರಿಯಲ್ ಪಾರಿವಾಳ ಎಂಬ ಪಕ್ಷಿ ನೋಡಲು ಸಿಕ್ಕಿತು. ಇದು ನೀಲಿ ಹಸಿರು ಬಣ್ಣದ ಒಂದು ಪಾರಿವಾಳ. ಅದರ ಸನಿಹದಲ್ಲೇ ಚುಕ್ಕಿ ಪಾರಿವಾಳ ( ಸ್ಪಾಟೆಡ್ ಡವ್) ಕುಳಿತಿತ್ತು. ಇದು ಚುಕ್ಕಿಗಳಿರುವ ಒಂದು ಬಗೆಯ ಪಾರಿವಾಳ. ಮುಂದೆ ಹೋದಂತೆ ನವಿಲು ಗರಿಬಿಚ್ಚಿ ನರ್ತಿಸುತ್ತಿದ್ದುದು ಕಂಡಿತು! ಕಾಡಿನಲ್ಲಿ ಈ ದೃಶ್ಯ ನೋಡಿ ಆನಂದವಾಯಿತು! ಮುಂದೆ ನಮಗೆ ಮರಕ್ಕೆ ಒತ್ತಿಕೊಂಡಿದ್ದ ಮಾನೀಟರ್ ಲಿಜರ್ಡ್ ಅಥವಾ ಉಡ ಎಂದು ಕನ್ನಡದಲ್ಲಿ ಹೇಳಲಾಗುವ ಒಂದು ದೊಡ್ಡ ಹಲ್ಲಿ ನೋಡಲು ಸಿಕ್ಕಿತು! ಮರದ ಬಣ್ಣವೇ ಅದಕ್ಕೂ ಇದ್ದುದರಿಂದ ಪರಿಸರವಾದಿಗಳು ತೋರಿಸುವವರೆಗೂ ನಮಗೆ ಅದನ್ನು ಗುರುತಿಸಲೇ ಆಗಲಿಲ್ಲ. ಅದನ್ನು ಫೋಕಸ್ ಮಾಡಿ ಫೋಟೋ ತೆಗೆಯುವುದೂ ಕಷ್ಟವಾಯಿತು! ಕಾವೇರಿ ವನ್ಯಜೀವಿಧಾಮ, ಬಂಡೆಗಲ್ಲಗಳು, ಚಿಕ್ಕ ಪುಟ್ಟ ಹೊಂಡಗಳು, ಹಸಿರು ಗಿಡಮರಗಳಿಂದ ಅತ್ಯಂತ ಸೊಗಸಾಗಿ ಕಂಗೊಳಿಸುತ್ತಿತ್ತು! ಮುಂದೆ ಹೋದಂತೆ ರೆಡ್ ವ್ಯಾಟಲ್ಡ್ ಲ್ಯಾಪ್ ವಿಂಗ್ ಎಂಬ, ಕನ್ನಡದಲ್ಲಿ ಟಿಟ್ಟಿಭ ಎಂದು ಕರೆಯಲಾಗುವ ಸುಂದರವಾದ ಪಕ್ಷಿ ನೆಲದ ಮೇಲೆಯೇ ನೋಡಲು ಸಿಕ್ಕಿತು! ಕಂದು, ಬಿಳಿ, ಕಪ್ಪು ಬಣ್ಣಗಳ, ಹಳದಿ ಕಾಲುಗಳ ಈ ಪಕ್ಷಿಯ ಕಣ್ಣುಗಳ‌ಮುಂದೆ ಮಾಂಸಲವಾದ ಕೆಂಪು ಚರ್ಮದ ಮಡಿಕೆಯಿರುತ್ತದೆ. ಅದೇ ರೆಡ್ ವ್ಯಾಟಲ್. ಇದನ್ನು ಗಂಡು, ಹೆಣ್ಣುಗಳೆರಡೂ ಪರಸ್ಪರ ಆಕರ್ಷಿಸಲು ಬಳಸುತ್ತವೆ. ನಾವು ನೋಡಿದಾಗ ಆ ಒಂದು ಪಕ್ಷಿ ಕೂಗುತ್ತಿತ್ತು. ಅದರ ಸಂಗಾತಿ ಇನ್ನೊಂದು ಕಡೆಯಿಂದ ಕೂಗಿ ಉತ್ತರಿಸುತ್ತಿತ್ತು. ಪ್ರಾಣಿ ಪಕ್ಷಿಗಳಲ್ಲಿನ ಈ ಸಂವೇದನೆ ನೋಡಿ ನಮಗೆ ಆಶ್ಚರ್ಯವಾಯಿತು! ಮುಂದೆ ಹೋದಂತೆ ಕಠಿಣವಾದ ಕಲ್ಲುಗಳ ದಾರಿಯಲ್ಲಿ ನಮ್ಮನ್ನು ಕರೆದೊಯ್ಯಲು, ತುಳುಕಾಡುವ ಜೀಪ್ ನಲ್ಲಿ ಹೋಗುತ್ತಾ ನಮಗೆ ಆಯಾಸವಾಗುತ್ತಿತ್ತು! ಆದರೆ ಸುತ್ತಲಿನ ಪ್ರಕೃತಿಯನ್ನು ನೋಡುತ್ತಾ ಆಹ್ಲಾದವೂ ಆಗುತ್ತಿತ್ತು! ಹೀಗೆ ಹೋದಂತೆ ನಮಗೆ ಒಂದು ಗೌರ್ ಅಥವಾ ಇಂಡಿಯನ್ ಬೈಸನ್ ಎಂದು ಕರೆಯಲ್ಪಡುವ ಪ್ರಾಣಿ ನೋಡಲು ಸಿಕ್ಕಿತು! ನೋಡಲು ಬೈಸನ್ ನಂತಿದ್ದರೂ ಇದು ಬೈಸನ್ ಅಲ್ಲ. ಇದು ಕಾಡಿನ ಹಸು ಜಾತಿಗೆ ಸೇರಿದ ಪ್ರಾಣಿಯಾಗಿದ್ದು ಇದನ್ನು ಕಾಟಿ ಎಂದೂ ಕರೆಯುತ್ತಾರೆ. ಮುಂದೆ, ಚುಕ್ಕಿ ಜಿಂಕೆಗಳ ಒಂದು ಹಿಂಡು ಸಿಕ್ಕಿತು. ಬಿಳಿಯ ಚುಕ್ಕಿಗಳಿರುವ ಕಂದು ಬಣ್ಣದ ಈ ಜಿಂಕೆಗಳನ್ನು ಸ್ಪಾಟೆಡ್ ಡೀರ್ ಅಥವಾ ಚೀತಲ್ ಎಂದು ಕರೆಯುತ್ತಾರೆ. ಕಾಡುಗಳಲ್ಲಿ ಇವು ಸಾಮಾನ್ಯವಾಗಿ ನೋಡಲು ಸಿಗುತ್ತವೆ.‌ ಮುಂದೆ ಹೋದಂತೆ, ಸೂರ್ಯಾಸ್ತದ ಸಮಯ ಹತ್ತಿರವಾಗುತ್ತಾ, ಪ್ರಕೃತಿಯ ವಿವಿಧ ಬಣ್ಣಗಳು ಕಾಡಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸತೊಡಗಿದವು!
      ಮುಂದೆ ಹೋದಂತೆ ನಾವು ಹೂಪೋ ಎಂಬ ಪಕ್ಷಿ ಮಣ್ಣಿನ ಸ್ನಾನ ಮಾಡುತ್ತಿದ್ದುದನ್ನು ಕಂಡೆವು.‌ಕಂದು ಬಣ್ಣದ ದೇಹ, ಕಪ್ಪು ಮತ್ತು ಬಿಳಿಯ ಪಟ್ಟೆಗಳುಳ್ಳ ರೆಕ್ಕೆಗಳು, ಉದ್ದವಾದ ಕೊಕ್ಕು, ಹಾಗೂ ತಲೆಯ ಮೇಲೊಂದು ಕಿರೀಟ ಹೊಂದಿರುವ ಇದನ್ನು ಕನ್ನಡದಲ್ಲಿ ಚಂದ್ರಮುಕುಟ ಪಕ್ಷಿ ಎಂದು ಕರೆಯುತ್ತಾರೆ. ಮುಂದೆ, ಫ್ರಾಂಕೋಲಿನ್ ಎಂಬ ಕೋಳಿಯಂಥ ಪಕ್ಷಿಗಳು ನೋಡಲು ಸಿಕ್ಕಿದವು.‌ ಹೆಚ್ಚಾಗಿ ಹಾರದೇ ನೆಲದ ಮೇಲೆಯೇ ಓಡಾಡುವ , ಕಂದು ಬಣ್ಣದ, ಬಿಳಿ ಪಟ್ಟಿಗಳಿರುವ ಪಕ್ಷಿಗಳಿವು. ಕಾಡಿನಲ್ಲಿ ಚಿರತೆಗಳೋ ಆನೆಗಳೋ ಬರಬಹುದೆಂದು ಅಲ್ಲಲ್ಲಿ ನಿಲ್ಲಿಸಿ ಕಾದೆವು. ಬುಲ್ ಬುಲ್ ಪಕ್ಷಿಗಳ ಕೂಗುಗಳು ಕೇಳುತ್ತಿದ್ದವು.ಆದರೆ ಕಾಣುತ್ತಿರಲಿಲ್ಲ 
      ಸಫಾರಿಯಿಂದ ಹಿಂದಿರುಗುತ್ತಾ, ದಿ. ಪಿ.ಶ್ರೀನಿವಾಸ್ ಅವರ ಸ್ಮಾರಕವನ್ನು ನೋಡಲೆಂದು ನಿಲ್ಲಿಸಲಾಯಿತು.ಇಲ್ಲಿ ಮೆಟ್ಟಿಲಿಳಿದು ಕೆಳಗೆ ಹೋದೆವು. ಇಲ್ಲಿ ದಿ. ಪಿ.ಶ್ರೀನಿವಾಸ್ ಅವರ ಸ್ಮಾರಕವನ ಮತ್ತು ಸ್ಮಾರಕವಿದೆ. ಇಲ್ಲಿಂದ ಪುನಃ ಕೆಳಗಿಳಿದು ಹೋದರೆ ಅವರು ಹುತಾತ್ಮರಾದ ಸ್ಥಳದಲ್ಲಿ ಇನ್ನೊಂದು ಸ್ಮಾರಕ ಇರುವುದನ್ನು ಕಾಣಬಹುದು. ಇಂಡಿಯನ್ ಫಾರೆಸ್ಟ್ ಸರ್ವಿಸ್ ನಲ್ಲಿ ಇದ್ದ ಪಿ. ಶ್ರೀನಿವಾಸ್ ಅವರು ಡಿ.ಸಿ.ಎಫ್.( ಡೆಪ್ಯೂಟಿ ಕನ್ಸರ್ವೇಟರ್ ಆಫ್ ಫಾರೆಸ್ಟ್) ಆಗಿದ್ದರು ಹಾಗೂ ವೀರಪ್ಪನ್ ನನ್ನು ಹಿಡಿಯಲು ಸ್ಪೆಷಲ್ ಟಾಸ್ಕ್ ಫೋರ್ಸ್ ನಲ್ಲೂ ಇದ್ದರು. ಇವರು ಗೋಪೀನಾಥಂನ ಜನರಿಗೆ ಮಾರಿಯಮ್ಮನ ದೇವಸ್ಥಾನ ಕಟ್ಟಿಸಿಕೊಟ್ಟು, ಸಂಚಾರಿ ಔಷಧಾಲಯವನ್ನು ಮಾಡಿಕೊಟ್ಟಿದ್ದರು ಹಾಗೂ ಅನೇಕ ಜನರಿಗೆ ಮನೆಗಳನ್ನೂ ಕಟ್ಟಿಸಿಕೊಟ್ಟಿದ್ದರು. ಹಿಂದೊಮ್ಮೆ ಇವರು ವೀರಪ್ಪನ್ ನನ್ನು ಹಿಡಿದಾಗ ಅವನು ತಪ್ಪಿಸಿಕೊಂಡಿದ್ದ. ಇವರಿಗೆ 1991ರಲ್ಲಿ ನಿರಾಯುಧರಾಗಿ ಬಂದರೆ ಶರಣಾಗುವೆನೆಂಬ ಸಂದೇಶವನ್ನು ವೀರಪ್ಪನ್ ಕಳಿಸಲು ಇವರು ಅದನ್ನು ನಂಬಿ ಈ ಜಾಗಕ್ಕೆ ಅವನ ತಮ್ಮ ಅರ್ಜುನನೊಂದಿಗೆ ಬಂದಾಗ ವೀರಪ್ಪನ್ ನಿಂದ ದುರ್ಮರಣಕ್ಕೀಡಾದರು! ಇವರ ಸೇವೆಯನ್ನು ಮೆಚ್ಚಿ ನಮ್ಮ ಕರ್ನಾಟಕ ಸರ್ಕಾರ ಇವರಿಗೆ ಕೀರ್ತಿಚಕ್ರ ಎಂಬ ಬಿರುದು ನೀಡಿ ಇಲ್ಲಿ ಎರಡು ಸ್ಮಾರಕಗಳನ್ನು ನಿರ್ಮಿಸಿದೆ. ಇಲ್ಲಿ ಅವರು ಯಾವ ತೊರೆಯನ್ನು ದಾಟಿ ಹೋಗುವಾಗ ವೀರಪ್ಪನ್ ನ ಗುಂಡಿಗೆ ಬಲಿಯಾದರೋ ಆ ತೊರೆಯನ್ನೇ ನೋಡಬಹುದು. ಇದನ್ನು ಎರ್ಕಾಯಂ ಹಳ್ಳ ಎನ್ನುತ್ತಾರೆ.‌ ಇಲ್ಲಿ ಅವರು ಹುತಾತ್ಮರಾದರೆಂದು ಬರೆದಿರುವ ಎರಡನೆಯ ಸ್ಮಾರಕವನ್ನು ನೋಡಬಹುದು. ಈ ಸ್ಥಳ, ಗೋಪೀನಾಥಂನಿಂದ ಕೇವಲ ಆರು ಕಿ.ಮೀ. ದೂರದಲ್ಲಿದೆ. ಇಲ್ಲಿನ ಪ್ರಕೃತಿ ಸೌಂದರ್ಯ ಅವರ್ಣನೀಯ! ಇಂಥ ಸುಂದರ ಸ್ಥಳದಲ್ಲಿ ಇಂಥ ದಾರುಣ ಹತ್ಯೆ ನಡೆದಿದೆಯೆಂದರೆ ನಂಬುವುದು ಕಷ್ಟ! 
   ನಾವು ನಮ್ಮ ಶಿಬಿರಕ್ಕೆ ಬರುವ ಹೊತ್ತಿಗೆ ಸೂರ್ಯಾಸ್ತ ಪೂರ್ತಿಯಾಗಿದ್ದು, ಗೋಪೀನಾಥಂ ಕೆರೆ, ಕಡುನೀಲಿ ಬಣ್ಣದಲ್ಲೂ ಆಕಾಶದಲ್ಲಿ ಹೊಂಬಣ್ಣದ ಛಾಯೆಯೊಂದಿಗೂ ಕೂಡಿದ್ದು ಯಾವುದೋ ಅಲೌಕಿಕ ಚಿತ್ರ ನೋಡಿದಂತಾಯಿತು! 
     ಸಫಾರಿಯಿಂದ ಬರುವುದು ತಡವಾದುದರಿಂದ ಮುಂದಿನ ಚಟುವಟಿಕೆಯಾದ ಕೊರಕಲ್ ರೈಡ್ ಅಥವಾ ತೆಪ್ಪದ ವಿಹಾರ ಮಾಡಲಾಗಲಿಲ್ಲ. ಹಾಗಾಗಿ ನಾವು ನೇರವಾಗಿ ಗೋಲ್ ಘರ್ ಗೆ ಬಂದೆವು. ಅಲ್ಲಿ ನಮಗೆ ಬಿಸಿಬಿಸಿಯಾದ ಮಂಗಳೂರು ಬೋಂಡಗಳು ಹಾಗೂ ಚಹಾ, ಕಾಫಿಗಳು ಕಾದಿದ್ದವು.‌ ನಾವು ಅವುಗಳನ್ನು ಸೇವಿಸಿ ದಣಿವಾರಿಸಿಕೊಂಡೆವು. ಅನಂತರ, ಏಳುವರೆ ಗಂಟೆಗೆ ಕಾವೇರಿ ವನ್ಯಜೀವಿ ಅಭಯಾರಣ್ಯವನ್ನು ಕುರಿತ ಒಂದು ಸಾಕ್ಷ್ಯಚಿತ್ರವನ್ನು ಸಭಾಂಗಣದಲ್ಲಿ ಪ್ರದರ್ಶಿಸಲಾಯಿತು. ಇಂಥ ಶಿಬಿರದಲ್ಲಿ ವನ್ಯಜೀವಿ ಸಾಕ್ಷ್ಯಚಿತ್ರ ನೋಡುವುದೂ ಸೊಗಸಾಗಿತ್ತು. ಅನಂತರ, ರಾತ್ರಿ ಎಂಟುವರೆ ಗಂಟೆಗೆ ಗೋಲ್ ಘರ್ ನಲ್ಲಿ ಪುಷ್ಕಳವಾದ ಭೋಜನವಿತ್ತು. ಪುನಃ ಬೆಳಗಿನ ಭೋಜನದಂತೆಯೇ ವಿಧವಿಧವಾದ ತಿನಿಸುಗಳೊಂದಿಗೆ ಸೂಪ್ ಕೂಡ ಇತ್ತು. ಭೋಜನದ ನಂತರ, ಕಾಟೇಜ್ ಗೆ ಹಿಂದಿರುಗಿ ನಿದ್ರೆ ಮಾಡುವುದರೊಂದಿಗೆ ಅಂದಿನ ಚಟುವಟಿಕೆಗಳ ಮುಕ್ತಾಯ ಹಾಡಬೇಕಾಗಿತ್ತು. ಇಲ್ಲಿ ರಾತ್ರಿ ಪೂರ್ತಿ ಕತ್ತಲಿದ್ದು ಕಾಡಿನ ವಾತಾವರಣವೇ ಇರಲೆಂದು ಪುಟ್ಟ ದೀಪಗಳನ್ನು ಮಾತ್ರ ಹಾಕಿರುತ್ತಾರೆ. ನಮಗೆ ದಾರಿಯಲ್ಲಿ ನಡೆಯಲು ತೊಂದರೆಯಾಗದಿದ್ದರೂ ಕತ್ತಲು ಮತ್ತು ಜೀರುಂಡೆಗಳ ಶಬ್ದಗಳು ಮಾತ್ರ ಕೇಳುತ್ತಾ ರೋಚಕತೆಯ ಅನುಭವವಾಯಿತು! ಕಾಟೇಜ್ ನಲ್ಲಿ ಹಾಸಿಗೆಯ ಮೇಲೆ ಉರುಳಿದಾಗ, ಸಫಾರಿಯ ಆಯಾಸದ ಕಾರಣ, ಒಳ್ಳೆಯ ನಿದ್ರೆ ಹತ್ತಿತು.
     ಮರುದಿನ ಬೆಳಿಗ್ಗೆ ಐದು ಗಂಟೆಗೆ ಗುಕ್ ಗುಕ್ ಗುಕ್ ಎಂಬ ಸೊಗಸಾದ ಪಕ್ಷಿಯ ಧ್ವನಿ ನನ್ನನ್ನು ಎಚ್ಚರಿಸಿತು! ಅದು ಗ್ರೇಟರ್ ಕೂಕಾಲ್ ಅಥವಾ ಕೆಂಬೂತದ ಧ್ವನಿಯೆಂದು ಗೊತ್ತಾಯಿತು! ಇನ್ನೂ ಹಲವಾರು ಪಕ್ಷಿಗಳ ಧ್ವನಿಗಳು ಕೇಳುತ್ತಾ ಮನಸ್ಸಿಗೆ ಉಲ್ಲಾಸ ತರುತ್ತಿದ್ದವು! ಕೂಡಲೇ ಮುಖ ತೊಳೆದು ಕ್ಯಾಮೆರಾದೊಂದಿಗೆ ಅವುಗಳ ಸೆರೆಹಿಡಿಯಲು ಹೊರಗೆ ಹೋದೆ. ಆದರೆ ಇನ್ನೂ ಮಬ್ಬುಗತ್ತಲಿತ್ತು! ಪಕ್ಷಿಗಳು ಅಷ್ಟು ಸುಲಭವಾಗಿ ಕಾಣಲಿಲ್ಲ! ಸರಿ, ಸ್ನಾನ ಮಾಡಿ ಆರು ಗಂಟೆಗೆ ಕೊರೆಕಲ್ ಸವಾರಿ ಅಥವಾ ತೆಪ್ಪದ ವಿಹಾರಕ್ಕೆ ಹೊರಟೆ. ಸಿಬ್ಬಂದಿಯವರು ಲೈಫ್ ಜಾಕೆಟ್ ಧರಿಸಲು ಕೊಟ್ಟು, ತೆಪ್ಪದಲ್ಲಿ ಕೂರಲು ಸಹಾಯ ಮಾಡಿ, ಗೋಪೀನಾಥಂ ಕೆರೆಯ ಮೇಲೆ ತೆಪ್ಪ ನಡೆಸುತ್ತಾ ತೆಪ್ಪದ ವಿಹಾರ ಮಾಡಿಸಿದರು. ತಣ್ಣನೆಯ ನೀರಿನ ಮೇಲೆ, ಬೆಳಗಿನ ಹಿತವಾದ ತಂಗಾಳಿಯನ್ನು ಸವಿಯುತ್ತಾ, ಆಗಷ್ಟೇ ಆಗುತ್ತಿದ್ದ ಸೂರ್ಯೋದಯದೊಂದಿಗೆ ಸುತ್ತಮುತ್ತಲಿನ ಬೆಟ್ಟಗುಡ್ಡಗಳ, ಹಸಿರು ಮರಗಿಡಗಳ, ಹೊಂಬಣ್ಣದ ನೀರಿನ ಸೌಂದರ್ಯ ಸವಿಯುತ್ತಾ, ಫೋಟೋ, ವಿಡಿಯೋಗಳನ್ನು ತೆಗೆಯುತ್ತಾ ಮಾಡಿದ ತೆಪ್ಪದ ವಿಹಾರ ಅತ್ಯಂತ ಸೊಗಸಾಗಿತ್ತು! ದೂರದಲ್ಲಿ ನವಿಲುಗಳ ಮತ್ತಿತರ ಪಕ್ಷಿಗಳ ಶಬ್ದಗಳು ಕೇಳುತ್ತಿದ್ದವು! ಸ್ಪಾಟ್ ಬಿಲ್ಡ್ ಡಕ್ ಗಳು ( ಚುಕ್ಕೆ ಕೊಕ್ಕಿನ ಬಾತುಗಳು) ಹಾಗೂ ಚಿಕ್ಕ ಎಗ್ರೆಟ್ ಅಥವಾ ಬೆಳ್ಳಕ್ಕಿಗಳು ಕಂಡವು! 
     ತೆಪ್ಪದ ವಿಹಾರದ ಬಳಿಕ, ನಾನು, ಸಿಬ್ಬಂದಿಯವರ ಮಾರ್ಗದರ್ಶನದಲ್ಲಿ ವೀರಪ್ಪನ್ ಪೂಜಿಸುತ್ತಿದ್ದ ಮುನೀಶ್ವರ ಸ್ವಾಮಿಯ ವಿಗ್ರಹದವರೆಗೂ ಒಬ್ಬನೇ ನಡೆದು ಹೋದೆ. ಇತರರು ಪರಿಸರವಾದಿಗಳೊಂದಿಗೆ ಪುನಃ ಬೆಳಗಿನ ಸಫಾರಿಗೆ ಹೋಗಿದ್ದರು. ಆ ವಿಗ್ರಹ ಒಂದು ಪುಟ್ಟ ದಿಬ್ಬದ ಮೇಲಿತ್ತು. ಹಳ್ಳಿಯ ಸುಂದರ ವಾತಾವರಣವನ್ನು ಆಸ್ವಾದಿಸುತ್ತಾ ಹೊರಟೆ. ದಾರಿಯಲ್ಲಿ, ಇಂಡಿಯನ್ ರಾಬಿನ್, ಗ್ರೀನ್ ಬೀ ಈಟರ್ ( ಹಸಿರು ಕಳ್ಳಿ ಪೀರ), ಸಾಮಾನ್ಯ ಮೈನಾ, ಡ್ರೋಂಗೋ ( ಕಾಜಾಣ), ಮೊದಲಾದ ಪಕ್ಷಿಗಳೂ ಪ್ಲೇನ್ ಟೈಗರ್, ಆರೆಂಜ್ ಟಿಪ್, ಡನಾಯ್ಡ್ ಎಗ್ ಫ್ಲೈ ಮೊದಲಾದ ಚಿಟ್ಟೆಗಳೂ ಕಾಣಸಿಕ್ಕವು! ದಾರಿಯುದ್ದಕ್ಕೂ ಕಾಮನ್ ಹಾವ್ಕ್ ಕುಕ್ಕೂ ಅಥವಾ ಬ್ರೈನ್ ಫೀವರ್ ಪಕ್ಷಿಯ ವಿಶಿಷ್ಟ ಕೂಗು ಕೇಳಿಸುತ್ತಿತ್ತು! ಅದೊಂದು ರೀತಿ ದೈನ್ಯದಿಂದ ಕೂಗುತ್ತದೆ! ಆ ಕೂಗು ಬ್ರೈನ್ ಫೀವರ್ ಎಂದು ಕೂಗಿದಂತೆ ಇರುವುದಂತೆ! ಅದಕ್ಕೇ ಈ ವಿಚಿತ್ರ ಹೆಸರು! ಹಿಂದಿಯಲ್ಲಿ ಇದನ್ನು ಪಪಿಹ ಎನ್ನುತ್ತಾರೆ. 
      ಕಲ್ಲುಗಳಿಂದಾದ ಉಂಟಾದ ಮೆಟ್ಟಿಲುಗಳನ್ನು ಹತ್ತಿ ದಿಬ್ಬವೇರಿ ಕುದುರೆಯೊಂದಿಗಿನ ಮುನೀಶ್ವರ ಸ್ವಾಮಿಯ ಭವ್ಯ ವಿಗ್ರಹವನ್ನು ನೋಡಿದೆ ಹಾಗೂ ಫೋಟೋಗಳನ್ನು ತೆಗೆದೆ! ಇಲ್ಲಿಂದ ಸುತ್ತಲಿನ ಬೆಟ್ಟಗುಡ್ಡಗಳ ಹಾಗೂ ಗೋಪೀನಾಥಂ ಕೆರೆಯ ಸೌಂದರ್ಯ ಅತ್ಯದ್ಭುತವಾಗಿ ಕಾಣುತ್ತಿತ್ತು! ಇಲ್ಲಿ ಎಲೆಗಳನ್ನು ಮೆಲ್ಲುತ್ತಿದ್ದ ಬ್ಲಿಸ್ಟರ್ ಬೀಟಲ್ ಎಂಬ ಆಕರ್ಷಕ ಜೀರುಂಡೆಯನ್ನು ನೋಡಿ ಚಿತ್ರೀಕರಿಸಿದೆ! ಕೆಂಪು ಮತ್ತು ಕಪ್ಪು ಪಟ್ಟಿಗಳ ಈ ಜೀರುಂಡೆಯನ್ನು ಕೆಣಕಿದರೆ ಕ್ಯಾಂಥರಡಿನ್ ಎಂಬ ರಾಸಾಯನಿಕವನ್ನು ಸ್ರವಿಸಿ ಅಪಾರ ನೋವಿನ ಬೊಬ್ಬೆಗಳನ್ನುಂಟುಮಾಡುತ್ತದೆ! ಹಾಗಾಗಿ ಇದಕ್ಕೆ ಬ್ಲಿಸ್ಟರ್ ಬೀಟಲ್ ಎಂಬ ಹೆಸರು ಬಂದಿದೆ!
     ಬೆಳಗಿನ ನಡಿಗೆಯಿಂದ ರೆಸಾರ್ಟ್ ಗೆ ಹಿಂದಿರುಗಿದಾಗ ಗೋಲ್ ಘರ್ ನಲ್ಲಿ ಬಿಸಿ ಬಿಸಿ ಉಪಾಹಾರ ತಯಾರಾಗಿತ್ತು! ಕೇಸರೀಬಾತ್, ಬ್ರೆಡ್ , ಜ್ಯಾಂ, ಪಲಾವ್, ಅವಲಕ್ಕಿ, ದೋಸೆ, ಆಲೂಗಡ್ಡೆ ಪಲ್ಯ, ಸಾಂಬಾರ್, ಚಟ್ನಿ, ಪಪ್ಪಾಯಿ ಹಣ್ಣಿನ ತೊಳೆಗಳು, ಎಗ್ ಆಮ್ಲೆಟ್, ಮೊದಲಾದ ವಿವಿಧ ತಿನಿಸುಗಳೊಂದಿಗೆ ಚಹಾ, ಕಾಫೀ ಕೂಡ ಇದ್ದವು! ಸೊಗಸಾದ ಉಪಾಹಾರ ಮುಗಿಸಿ ಸ್ವಲ್ಪ ಹೊತ್ತು ಸಿಬ್ಬಂದಿಯವರೊಂದಿಗೆ ಸ್ನೇಹದಿಂದ ನನ್ನ ಅನುಭವಗಳನ್ನು ಹಂಚಿಕೊಳ್ಳುವ ಹೊತ್ತಿಗೆ ಹತ್ತುವರೆ ಗಂಟೆಯಾಯಿತು. ಚೆಕ್ ಔಟ್ ನ ಸಮಯವಾಗಿತ್ತು. ಹಾಗಾಗಿ ನಾನು ಚೆಕ್ ಔಟ್ ಆಗಿ, ಸಫಾರಿಯ ಹೆಚ್ಚುವರಿ ಶುಲ್ಕವನ್ನು ನೀಡಿ, ಸಿಬ್ಬಂದಿಯವರಿಗೆ ನನ್ನ ಧನ್ಯವಾದಗಳನ್ನು ಅರ್ಪಿಸುತ್ತಾ ಹತ್ತಿರದಲ್ಲೇ ಇದ್ದ ಹೊಗೇನಕಲ್ ಜಲಪಾತದ ದಾರಿ ವಿಚಾರಿಸಿದೆ. ಸಾಕಷ್ಟು ಸಮಯವಿದ್ದುದರಿಂದ ಹೊಗೇನಕಲ್ ಜಲಪಾತದ ಕಡೆ ಹೊರಟೆ. ಅದು ಇನ್ನೊಂದು ರೋಚಕ ಅನುಭವ! 
      ಗೆಳೆಯರೇ, ಈ ಗೋಪೀನಾಥಂ ಮಿಸ್ಟ್ರಿ ಟ್ರೇಲ್ಸ್ ನನಗೆ ಒಳ್ಳೆಯ, ಅದ್ಭುತ ಅನುಭವ ನೀಡಿತು! ನಿಸರ್ಗಕ್ಕೆ ಬಹಳ ಹತ್ತಿರವಿದ್ದಂತಾಯಿತು! ಅಪರೂಪದ ಪ್ರಾಣಿಪಕ್ಷಿಗಳು, ಕೀಟಗಳು, ಮರಗಿಡಗಳು, ಮೊದಲಾದವುಗಳನ್ನು ಕಂಡು ಬೆಕ್ಕಸ ಬೆರಗಾಗುವಂತಾಯಿತು! ಪ್ರಕೃತಿ ಸೌಂದರ್ಯ ಕಣ್ಮನಗಳನ್ನು ಸೂರೆಗೊಂಡಿತು! ನೀವೂ ಈ ಸುಂದರ ತಾಣಕ್ಕೆ ಭೇಟಿ ನೀಡಿ! ನಿಮ್ಮ ಅನುಭವಗಳನ್ನೂ ಹಂಚಿಕೊಳ್ಳಿ! 
                                     ಡಾ.ಬಿ.ಆರ್.ಸುಹಾಸ್
                                     ಬೆಂಗಳೂರು 
    
        
     
    

ಶುಕ್ರವಾರ, ಏಪ್ರಿಲ್ 17, 2026

ಸುಂದರೀಶತಕ -೨೫

ಸಂಸ್ಕೃತ ಮೂಲ 

ತವ ನಿರ್ಮಲೌ ಕಪೋಲೌ ಸೌಂದರ್ಯಸಾರಸುಂದರಾಭೋಗೌ /
ಕಿಂ ವರ್ಣಯಾಮಿ ಸುಂದರಿ ಚುಂಬನಯೋಗ್ಯಾಕೃತೀ ಕೃತಿನ: //

ಕನ್ನಡ ಅನುವಾದ 

     ' ಎಲೈ ಸುಂದರಿ! ನಿನ್ನ ನಿರ್ಮಲ ಕಪೋಲಗಳು ಸೌಂದರ್ಯಸಾರದಿಂದ ಸುಂದರವಾಗಿ ಪರಿಪೂರ್ಣವಾಗಿವೆ! ನಾನೇನು ವರ್ಣಿಸಲಿ? ಅವು ಭಾಗ್ಯಶಾಲಿಯೊಬ್ಬನ ಚುಂಬನಕ್ಕೆ ಯೋಗ್ಯವಾದ ಆಕೃತಿಯುಳ್ಳ ಕೆನ್ನೆಗಳಾಗಿವೆ!' 
      ಸುಂದರಿಯ ಕಪೋಲಗಳು ಎಷ್ಟು ಸುಂದರವಾಗಿವೆಯೆಂದರೆ ಕವಿಗೆ ಅವನ್ನು ವರ್ಣಿಸಲು ಪದಗಳೇ ಸಿಗುತ್ತಿಲ್ಲ! ಇಂಥ ವರ್ಣನಾತೀತವಾದ ಕೆನ್ನೆಗಳಿಗೆ ಭಾಗ್ಯಶಾಲಿಯೊಬ್ಬನ ಚುಂಬನದ ಬಹುಮಾನವೇ ಸರಿ ಎನ್ನುತ್ತಾನೆ! 

ಗುರುವಾರ, ಏಪ್ರಿಲ್ 16, 2026

ಸುಂದರೀಶತಕ -೨೪

ಸಂಸ್ಕೃತ ಮೂಲ 

ತವ ನಯನವಾರಿರುಹಯೋ: ಸಂಕೋಚೋ ಭಾಲಚಂದ್ರಮುದ್ವೀಕ್ಷ್ಯ /
ಮಾ ಭೂದಿತಿ ಕಮಲಭುವಾ ಭ್ರೂಲೇಖಾ ವ್ಯರಚಿ ಕಿಂ ಮಧ್ಯೇ //

ಕನ್ನಡ ಅನುವಾದ 

     ' ಎಲೈ ಸುಂದರಿ! ನಿನ್ನ ನಯನಕಮಲಗಳು ನಿನ್ನ ಹಣೆಯೆಂಬ ಚಂದ್ರನನ್ನು ನೋಡಿ ಸಂಕೋಚನಗೊಳ್ಳದಿರಲೆಂದು ಬ್ರಹ್ಮನು ಇವೆರಡರ ನಡುವೆ ಹುಬ್ಬೆಂಬ ಗೆರೆಯನ್ನು ರಚಿಸಿದನೇ?'
     ಸೂರ್ಯನನ್ನು ನೋಡಿದಾಗ ಕಮಲಗಳು ಅರಳುವಂತೆ, ಚಂದ್ರನನ್ನು ನೋಡಿದಾಗ ಸಂಕೋಚನಗೊಳ್ಳುತ್ತವೆ. ಇಲ್ಲಿ ಕವಿಯು ಹಿಂದಿನ ಶ್ಲೋಕದಂತೆಯೇ ಹೆಣ್ಣಿನ ಕಂಗಳನ್ನು ಕಮಲಗಳಿಗೂ ಅವಳ ಹಣೆಯನ್ನು ಚಂದ್ರನಿಗೂ ಹೋಲಿಸಿದ್ದಾನೆ! ಹಣೆಯೆಂಬ ಚಂದ್ರನನ್ನು ನೋಡಿದಾಗ ಕಂಗಳೆಂಬ ಕಮಲಗಳು ಸಂಕೋಚನಗೊಳ್ಳದಿರಲಿ ಎಂದು ಬ್ರಹ್ಮನು ಇವೆರಡರ ನಡುವೆ ಹುಬ್ಬು ಎಂಬ ಗೆರೆಯನ್ನು ರಚಿಸಿದನೇ ಎಂದು ಕವಿಯು ಉತ್ಪ್ರೇಕ್ಷೆಯಿಂದ ಕೇಳುತ್ತಾ ಸುಂದರಿಯ ಹುಬ್ಬನ್ನು ವರ್ಣಿಸುತ್ತಾನೆ.