ಸೋಮವಾರ, ಏಪ್ರಿಲ್ 6, 2026

ಶ್ರೀ ರಾಮಕಥೆಯಲ್ಲಿ ಪೌರಾಣಿಕ ಸ್ವಾರಸ್ಯಗಳು



ರಾಮಾಯಣ, ಮಹಾಭಾರತಗಳು ನಮ್ಮ ದೇಶದ ಅತ್ಯಂತ ಅಮೂಲ್ಯ ಕಾವ್ಯಗಳು.ಅವು ಇತಿಹಾಸಗಳೆಂದೂ ಪ್ರಸಿದ್ಧವಾಗಿವೆ.ಅವು ರಚಿತವಾಗಿ ಸಾವಿರಾರು ವರ್ಷಗಳೇ ಕಳೆದಿದ್ದರೂ ಜನರಲ್ಲಿ ಇನ್ನೂ ಅವುಗಳ ಬಗ್ಗೆ ಆಸಕ್ತಿ ಅಚ್ಚಳಿಯದೇ ಉಳಿದಿದೆ.ಸ್ವಾರಸ್ಯವೆಂದರೆ ಯಾರೇ ಆದರೂ ಇವನ್ನು ಓದದೆಯೂ ಸಂಕ್ಷಿಪ್ತವಾಗಿ ತಿಳಿದಿರುತ್ತಾರೆ.ಆದರೆ ಇವನ್ನು ಆಮೂಲಾಗ್ರವಾಗಿ ಓದಲು ತೊಡಗಿದರೆ, ಅನೇಕ ಸ್ವಾರಸ್ಯಗಳ ದೊಡ್ಡ ಗಣಿಗಳೇ ದೊರೆತಂತಾಗುತ್ತದೆ! ಅಲ್ಲದೇ, ಈ ಮಹಾಕಾವ್ಯಗಳ ಮೂಲಕಥೆಗಳು ಸ್ಥೂಲವಾಗಿ ತಿಳಿದಿದ್ದರೂ ಅವುಗಳನ್ನು ಓದುವಾಗ ನಡುನಡುವೆಯೇ ಅನೇಕ ಒಳಕಥೆಗಳೂ ಉಪಕಥೆಗಳೂ ದೊರೆಯುತ್ತಾ ನಮ್ಮನ್ನು ರಂಜಿಸುತ್ತಾ ಬೆರಗುಗೊಳಿಸುತ್ತವೆ! ಇವುಗಳೊಂದಿಗೆ ಇವುಗಳಿಗೆ ಸಂಬಂಧಿಸಿದ ಇತರ ಸ್ವಾರಸ್ಯಕರ ಕಥೆಗಳು ಇವುಗಳ ಪಾಠಾಂತರಗಳಲ್ಲೂ ಪುರಾಣಗಳಲ್ಲೂ ದೊರೆಯುತ್ತವೆ! 
      ಈ ಲೇಖನದಲ್ಲಿ, ರಾಮಕಥೆಯಲ್ಲಿ ಬರುವ ಕೆಲವು ಪೌರಾಣಿಕ ಸ್ವಾರಸ್ಯಗಳನ್ನು ನೋಡೋಣ.ಮೊದಲಿಗೆ ಕೆಲವು ಹೆಸರುಗಳ ಹಿಂದಿನ ಕಥೆಗಳನ್ನು ನೋಡೋಣ.ಶ್ರೀರಾಮನಿಗೆ ರಾಘವ, ರಘುಕುಲತಿಲಕ, ರಘುಕುಲೋತ್ತಮ, ಮೊದಲಾದ ಹೆಸರುಗಳಿದ್ದು, ಅವು ಅವನು ರಘು ಮಹಾರಾಜನ ವಂಶದವನೆಂದು ತೋರಿಸುತ್ತವೆ.ಅಂತೆಯೇ, ಅವನು ದಶರಥನ ಮಗನಾದ್ದರಿಂದ ಅವನಿಗೆ ದಾಶರಥಿ ಎಂಬ ಹೆಸರಿದೆ.ಸೀತೆಯ ಪತಿಯಾದ್ದರಿಂದ ಸೀತಾಪತಿಯೆಂಬ ಹೆಸರಿದೆ.ಅಂತೆಯೇ ರಾಮನಿಗೆ ಕಾಕುತ್ಸ್ಥ ಎಂಬ ಹೆಸರಿದೆ.ಇದರ ಹಿಂದೆ ಒಂದು ಸ್ವಾರಸ್ಯಕರ ಕಥೆಯಿದೆ.ರಾಮನು ಸೂರ್ಯಪುತ್ರ ವೈವಸ್ವತ ಮನುವಿನ ಮಗ ಇಕ್ಷ್ವಾಕು ವಂಶದವನು.ಇಕ್ಷ್ವಾಕುವಿಗೆ ವಿಕುಕ್ಷಿ ಎಂಬ ಮಗನಿದ್ದು, ಅವನಿಗೆ ಪುರಂಜಯ ಎಂಬ ಮಗನಿದ್ದನು.ಇವನು ಮಹಾವೀರನಾಗಿದ್ದು, ಒಮ್ಮೆ, ದೇವಾಸುರಯುದ್ಧವಾದಾಗ ದೇವತೆಗಳು ಇವನ ಸಹಾಯ ಯಾಚಿಸಿದರು.ಅದಕ್ಕೆ ಪುರಂಜಯನು ಇಂದ್ರನು ತನಗೆ ವಾಹನವಾಗುವುದಾದರೆ ತಾನು ಯುದ್ಧ ಮಾಡುವೆನೆಂದನು.ಇದಕ್ಕೆ ಒಪ್ಪಿದ ಇಂದ್ರನು ಒಂದು ಎತ್ತಿನ ರೂಪ ಧರಿಸಿ ಅವನಿಗೆ ವಾಹನನಾದನು.ಪುರಂಜಯನು ಎತ್ತಿನ ಹಿಳಲಿನ ಮೇಲೆ ಕುಳಿತು ಯುದ್ಧ ಮಾಡಿ ದೇವತೆಗಳಿಗೆ ಗೆಲುವು ತಂದುಕೊಟ್ಟನು.ಎತ್ತಿನ ಹಿಳಲಿಗೆ ಸಂಸ್ಕೃತದಲ್ಲಿ ಕಕುತ್ ಎನ್ನುತ್ತಾರೆ.ಅದರ ಮೇಲೆ ಕುಳಿತಿದ್ದರಿಂದ ಅವನಿಗೆ ಕಕುತ್ಸ್ಥ ಎಂಬ ಹೆಸರು ಬಂದಿತು.ಅವನ ವಂಶದಲ್ಲಿ ಹುಟ್ಟಿದ್ದರಿಂದ ರಾಮನಿಗೆ ಕಾಕುತ್ಸ್ಥ ಎಂಬ ಹೆಸರು ಬಂದಿತು.
     ಈಗ ಸೀತೆಯ ಹೆಸರುಗಳ ಸ್ವಾರಸ್ಯಗಳನ್ನು ನೋಡೋಣ.ಜನಕ ಮಹಾರಾಜನು ಒಂದು ಯಜ್ಞ ಮಾಡಲು ನೆಲವನ್ನು ನೇಗಿಲಿನಿಂದ ಉಳುತ್ತಿದ್ದಾಗ ಮೂಡಿದ ಗೆರೆ ಅಥವಾ ಹಳ್ಳದಲ್ಲಿ ಸಿಕ್ಕ ಪೆಟ್ಟಿಗೆಯಲ್ಲಿದ್ದ ಮಗುವೇ ಸೀತೆ.ನೇಗಿಲಿನಿಂದ ಮೂಡುವ ಗೆರೆ ಅಥವಾ ಸಣ್ಣ ಹಳ್ಳಕ್ಕೆ ಸೀತಾ ಎನ್ನುತ್ತಾರೆ.ಅದರಲ್ಲಿ ಸಿಕ್ಕಿದ್ದರಿಂದ ಸೀತೆಗೆ ಆ ಹೆಸರು ಇಡಲಾಯಿತು.ಅಂತೆಯೇ ವಿದೇಹ ದೇಶದ ರಾಜಕುಮಾರಿಯಾಗಿ ವೈದೇಹಿ, ಮಿಥಿಲಾ ನಗರಿಯ ರಾಜಕುಮಾರಿಯಾಗಿ ಮೈಥಿಲಿ, ಹಾಗೂ ಜನಕನ ಮಗಳಾದ್ದರಿಂದ ಜಾನಕಿ ಎಂಬ ಹೆಸರುಗಳೂ ಬಂದವು.
     ಹನುಮಂತನ ಹೆಸರಿನ ಹಿಂದೆ ಒಂದು ಸ್ವಾರಸ್ಯಕರ ಕಥೆಯಿದೆ.ಹನುಮಂತನು ವಾಯುವಿನ ಅಂಶದಿಂದ ಕೇಸರಿ ಎಂಬ ವಾನರನ ಪತ್ನಿ ಅಂಜನೆಯ ಗರ್ಭದಲ್ಲಿ ಹುಟ್ಟಿ ಆಂಜನೇಯ ಎನಿಸಿದನು.ಹುಟ್ಟಿದ ಕೂಡಲೇ ಆಗಸದಲ್ಲಿ ಉದಯಿಸುತ್ತಿದ್ದ ಕೆಂಪು ಸೂರ್ಯನನ್ನು ನೋಡಿ ಹೆಣ್ಣೆಂದು ಭ್ರಮಿಸಿ ಆಕಾಶಕ್ಕೆ ಜಿಗಿದನು! ಅಂದು ಸೂರ್ಯಗ್ರಹಣವಾಗಿದ್ದರಿಂದ ರಾಹುವೂ ಸೂರ್ಯನನ್ನು ಹಿಡಿಯಲು ಬರಲು, ಆಂಜನೇಯನು ಅವನನ್ನು ಹಿಡಿಯಲು ಹೋದನು! ಆಗ ರಾಹುವು ಇಂದ್ರನ ಬಳಿ ಹೋಗಿ ದೂರಲು, ಇಂದ್ರನು ಬಂದು ಆಂಜನೇಯನ ಮೇಲೆ ವಜ್ರಾಯುಧದಿಂದ ಪ್ರಹರಿಸಿದನು! ಆಂಜನೇಯನು ಕೆಳಗೆ ಬಿದ್ದು ತನ್ನ ಎಡದವಡೆಯನ್ನು ಮುರಿದುಕೊಂಡು ನಿಶ್ಚೇಷ್ಟಿತನಾದನು! ಇದರಿಂದ ವಾಯುವು ಕೋಪಗೊಂಡು ವಿಶ್ವದಿಂದಲೇ ಗಾಳಿಯನ್ನು ಹಿಂತೆಗೆದುಕೊಂಡನು! ಆಗ ಬ್ರಹ್ಮನು ಇಂದ್ರಾದಿ ದೇವತೆಗಳೊಂದಿಗೆ ಬಂದು ಆಂಜನೇಯನನ್ನು ಬದುಕಿಸಿದನು.ಎಲ್ಲಾ ದೇವತೆಗಳೂ ಆಂಜನೇಯನಿಗೆ ಹಲವಾರು ವರಗಳನ್ನು ಕೊಟ್ಟರು.ಆಗ ಇಂದ್ರನು, ಆಂಜನೇಯನ 'ಹನು' ಅಥವಾ ದವಡೆಗೆ ಏಟು ಬಿದ್ದುದರಿಂದ, ಅವನಿಗೆ ಹನುಮಾನ್ ಎಂದು ಹೆಸರಿಟ್ಟನು.ಹೀಗೆ ಆಂಜನೇಯನಿಗೆ ಹನುಮಂತ ಎಂದು ಹೆಸರಾಯಿತು.
    ರಾವಣ ಮತ್ತು ಅವನ ಮಗ ಇಂದ್ರಜಿತುವಿನ ಹೆಸರುಗಳ ಹಿಂದೆಯೂ ಸ್ವಾರಸ್ಯಕರ ಕಥೆಗಳಿವೆ.ರಾವಣ, ಹತ್ತು ತಲೆಗಳೊಂದಿಗೆ ಹುಟ್ಟಿದ್ದರಿಂದ ಅವನಿಗೆ ಅವನ ತಂದೆ ತಾಯಿಯರು ದಶಗ್ರೀವ, ಅಥವಾ ದಶಕಂಠ ಎಂದು ‌ಹೆಸರಿಟ್ಟರು.ಒಮ್ಮೆ ರಾವಣನು ಪುಷ್ಪಕ ವಿಮಾನ ಹತ್ತಿ ಸಂಚರಿಸುತ್ತಿದ್ದಾಗ ಕೈಲಾಸ ಪರ್ವತ ಎದುರಾಗಲು, ಪುಷ್ಪಕ ವಿಮಾನ ಅಂದರೆ ಮೇಲೆ ಹಾರಲಿಲ್ಲ.ಆಗ ರಾವಣನು ಆ ಕೈಲಾಸ ಪರ್ವತವನ್ನೇ ಕಿತ್ತೆಸೆದು ಮುಂದೆ ಹೋಗಲು ನಿರ್ಧರಿಸಿ, ಕೈಲಾಸ ಪರ್ವತವನ್ನೇ ಎತ್ತತೊಡಗಿದನು.ಆಗ ಅಂದರೆ ಮೇಲಿದ್ದ ಪಾರ್ವತಿಯೂ ಶಿವಗಣಗಳೂ ಹೆದರಿದರು! ಆಗ ಶಿವನು ತನ್ನ ಪಾದದ ಹೆಬ್ಬೆರಳನ್ನು ಪರ್ವತದ ಮೇಲೆ ಒತ್ತಲು, ಅದು ರಾವಣನ ಇಪ್ಪತ್ತು ಕೈಗಳ ಮೇಲೆ ಬಿದ್ದು ಜಜ್ಜಿಹಾಕಿತು! ಆ ನೋವಿಗೆ ಭಯಂಕರವಾಗಿ ಅರಚಿದ ದಶಗ್ರೀವನು ಅನಂತರ ಸಾಮಗಾನಗಳಿಂದ ಶಿವನನ್ನು ಸ್ತುತಿಸಿದನು.ಪ್ರಸನ್ನನಾದ ಶಿವನು ಪ್ರತ್ಯಕ್ಷನಾಗಿ ಅವನ ಗಾಯಗಳನ್ನು ವಾಸಿಮಾಡಿ ಚಂದ್ರಹಾಸವೆಂಬ ಅಮೋಘ ಖಡ್ಗವನ್ನು ನೀಡುತ್ತಾ ಅವನು ಜೋರಾಗಿ ಅರಚಿದ ಶಬ್ದ ಎಲ್ಲಾ ಪ್ರಾಣಿಗಳೂ ರಾವಿತವಾಗುವಂತೆ ಅಥವಾ ಹೆದರಿ ಕೂಗುವಂತೆ ಮಾಡಿದ್ದರಿಂದ ಅವನಿಗೆ ರಾವಣ ಎಂದು ಹೆಸರಿಸಿದನು.ಅಂದಿನಿಂದ ದಶಕಂಠನು ರಾವಣನೆಂದು ಹೆಸರಾದನು. ರಾವಣನು ಮಗ ಇಂದ್ರಜಿತುವು ಹುಟ್ಟಿದ ಕೂಡಲೇ ಮೇಘದಂತೆ ಗರ್ಜಿಸಿದ್ದರಿಂದ ಅವನಿಗೆ ಮೇಘನಾದ ಎಂದು ಹೆಸರಿಡಲಾಯಿತು.ರಾವಣನು ಇಂದ್ರನೊಂದಿಗೆ ಯುದ್ಧ ಮಾಡಿದಾಗ ದೇವತೆಗಳು ಅವನನ್ನು ಸುತ್ತುವರಿದು ಅವನು ಸೋಲುವುದರಲ್ಲಿದ್ದನು! ಆಗ ಮೇಘನಾದನು ಇಂದ್ರನೊಡನೆ ಹೋರಾಡಿ ಬಂಧಿಸಿ ತಂದೆಯನ್ನು ಬಿಡಿಸಿದನು.ಅನಂತರ, ಬ್ರಹ್ಮನ ಅಪ್ಪಣೆಯಂತೆ ಅವನು ಇಂದ್ರನನ್ನು ಮುಕ್ತಗೊಳಿಸಿದನು.ಹೀಗೆ ಅವನು ಇಂದ್ರನನ್ನು ಜಯಿಸಿದುದರಿಂದ ಅವನಿಗೆ ಇಂದ್ರಜಿತ್ ಎಂದು ಹೆಸರಾಯಿತು!
     ಈಗ ರಾಮಾಯಣದ ಕಥೆಯಲ್ಲಿ ನಡೆದ ಘಟನೆಗಳ ಹಿಂದಿನ ಪೌರಾಣಿಕ ಸ್ವಾರಸ್ಯಗಳನ್ನು ನೋಡೋಣ.ರಾಮಪಟ್ಟಾಭಿಷೇಕವಾಗುವಾಗ ಮಂಥರೆ ಎಂಬ ಗೂನು ಬೆನ್ನಿನ ದಾಸಿ ತನ್ನ ಒಡತಿ ಕೈಕೇಯಿಗೆ ದುರ್ಬೋಧೆ ಮಾಡಿ ರಾಮನನ್ನು ಕಾಡಿಗೆ ಕಳಿಸುವಂತೆ ಹಾಗೂ ಅವಳ ಮಗ ಭರತನನ್ನು ಪಟ್ಟಗಟ್ಟಬೇಕೆಂದು ದಶರಥನ ಬಳಿ ಹಳೆಯ ಎರಡು ವರಗಳನ್ನು ಕೇಳುವಂತೆ ಮಾಡಿದಳು.ವಾಲ್ಮೀಕಿ ರಾಮಾಯಣದ ಪ್ರಕಾರ, ಮಂಥರೆ ಇಂಥ ಅಸಮಾಧಾನದ ಸ್ವಭಾವದವಳೇ ಆಗಿರುತ್ತಾಳೆ.ಆದರೆ ಮಹಾಭಾರತದಲ್ಲಿ ಬರುವ ರಾಮೋಪಾಖ್ಯಾನದಲ್ಲಿ ಇದಕ್ಕೆ ಬೇರೆ ಕಾರಣವಿದೆ.ಅದರಂತೆ, ದೇವತೆಗಳು ವಿಷ್ಣುವಿನ ಬಳಿ ಹೋಗಿ ರಾವಣನ ಉಪಟಳದ ಬಗ್ಗೆ ಹೇಳಿ ಅದರಿಂದ ತಮ್ಮನ್ನು ಕಾಪಾಡುವಂತೆ ಬೇಡಿದಾಗ ವಿಷ್ಣುವು ರಾಮಾವತಾರ ಮಾಡಿ ರಾವಣನನ್ನು ವಧಿಸುತ್ತೇನೆಂದು ಹೇಳಿ ಅಭಯ ನೀಡಿದನು.ಆಗ ಬ್ರಹ್ಮನು ದೇವತೆಗಳಿಗೆ ತಮ್ಮ ತಮ್ಮ ಅಂಶಗಳಿಂದ ಕಪಿ, ಕರಡಿಗಳಲ್ಲಿ ಹುಟ್ಟಿ ರಾಮನಿಗೆ ಸಹಾಯಕರಾಗಬೇಕೆಂದು ಆದೇಶಿಸಿದ.ಆಗಲೇ ಅವನು ದುಂದುಭಿ ಎಂಬ ಗಂಧರ್ವ ಕನ್ಯೆಯನ್ನು ಗೂನು ಬೆನ್ನಿನ ದಾಸಿಯಂತೆ ಹುಟ್ಟಿ ರಾಮನ ಪಟ್ಟಾಭಿಷೇಕವನ್ನು ತಡೆಯಬೇಕೆಂದು ಆದೇಶಿಸಿದ.ಹಾಗಾಗಿ ಅವಳು ಮಂಥರೆಯಾಗಿ ಹುಟ್ಟಿ ಹೀಗೆ ಮಾಡಿದಳು.
      ರಾವಣನು ಸೀತೆಯನ್ನು ಅಪಹರಿಸಿದರೂ ಏಕೆ ಅವಳನ್ನು ಬಲಾತ್ಕರಿಸಲಿಲ್ಲ ಎಂದು ಅನೇಕ ಜನ ಕೇಳುತ್ತಾರೆ.ಇದನ್ನು ಕಾರಣವಾಗಿ ಕೊಟ್ಟು ರಾವಣನು ಒಳ್ಳೆಯವನೆಂದೂ ಕೆಲವರು ಸಾಧಿಸುತ್ತಾರೆ! ಆದರೆ ಉತ್ತರಕಾಂಡದಲ್ಲಿ ದೀರ್ಘವಾಗಿ ಬರುವ ರಾವಣನ ಕಥೆಯಲ್ಲಿ ರಾವಣನು ಎಂಥ ದುಷ್ಟ ಹಾಗೂ ಸ್ತ್ರೀದೌರ್ಬಲ್ಯವಿದ್ದವನೆಂದು ಹೇಳಲಾಗಿದೆ.ಅವನು ಎಷ್ಟೋ ಸ್ತ್ರೀಯರನ್ನು ಅಪಹರಿಸಿ ಬಲಾತ್ಕರಿಸಿದ್ದ! ಅವನು ಸತ್ತಾಗ ಅವನ ಪತ್ನಿ ಮಂದೋದರಿಯೂ ಈ ವಿಷಯವನ್ನು ಹೇಳಿ ಅಳುತ್ತಾಳೆ. ಒಮ್ಮೆ ರಾವಣನು ದಿಗ್ವಿಜಯಕ್ಕೆ ಹೋಗಿದ್ದಾಗ, ರಂಭೆ ಎಂಬ ಅಪ್ಸರೆ ಚೆನ್ನಾಗಿ ಅಲಂಕರಿಸಿಕೊಂಡು ತನ್ನ ಪ್ರಿಯತಮನಾದ ನಳಕೂಬರನ ಬಳಿ ಹೋಗುತ್ತಿದ್ದಳು.ಆಗ ರಾವಣನು ಅವಳನ್ನು ತಡೆದು ತನ್ನನ್ನು ತೃಪ್ತಿಪಡಿಸಲು ಹೇಳಿದನು.ಅವಳು ತನ್ನ ವಿಷಯ ಹೇಳಿದರೂ ಅವನು ಕೇಳದೇ ಅವಳನ್ನು ಬಲಾತ್ಕರಿಸಿದನು! ಅವಳು ಅಳುತ್ತಾ ಹೋಗಿ ಕುಬೇರನ ಮಗನಾದ ನಳಕೂಬರನ ಬಳಿ ಈ ವಿಷಯವನ್ನು ಹೇಳಿದಾಗ, ನಳಕೂಬರನು ಕೋಪದಿಂದ ರಾವಣನಿಗೆ ಅವನು ತನ್ನನ್ನು ಒಪ್ಪದ ಸ್ತ್ರೀಯನ್ನು ಬಲಾತ್ಕರಿಸಿದರೆ ಕೂಡಲೇ ಸಾಯಲಿ ಎಂದು ಶಪಿಸಿದನು! ಈ ಕಾರಣದಿಂದ ರಾವಣನು ಸೀತೆಯನ್ನು ಬಲಾತ್ಕರಿಸಲಿಲ್ಲ.
      ರಾಮನು ವಾಲಿಯನ್ನು ಮರದ ಹಿಂದೆ ನಿಂತು ಏಕೆ ಕೊಂದನು ಎಂದು ಅನೇಕರು ಕೇಳುತ್ತಾರೆ.ಇದನ್ನು ವಾಲ್ಮೀಕಿ ರಾಮಾಯಣದಲ್ಲಿ ಸ್ವಯಂ ವಾಲಿಯೇ ಕೇಳುತ್ತಾನೆ.ರಾಮನೂ ಇದಕ್ಕೆ ಉತ್ತರ ಕೊಟ್ಟಿದ್ದಾನೆ.ವಾಲಿಯು ಒಬ್ಬ ವಾನರನಾದ್ದರಿಂದ ಹಾಗೂ ಪ್ರಾಣಿವರ್ಗಕ್ಕೆ ಸೇರಿದ್ದರಿಂದ ಅವನನ್ನು ಹೇಗೆ ಬೇಕಾದರೂ ಬೇಟೆಯಾಡಬಹುದು ಎನ್ನುತ್ತಾನೆ ರಾಮ.ಎದುರು ನಿಂತು ಹೋರಾಡಿದಾಗ ಯಾರ ಕೈ ಮೇಲಾಗುತ್ತಿತ್ತೆಂದು ಹೇಳಲಾಗುತ್ತಿರಲಿಲ್ಲ. ವಾಲಿಯು ವಿಚಾರಿಸದೇ ಅವನ ತಮ್ಮ ಸುಗ್ರೀವನನ್ನು ರಾಜ್ಯದಿಂದ ಓಡಿಸಿದ್ದು ಹಾಗೂ ಅವನ ಹೆಂಡತಿ ರುಮೆಯನ್ನು ಬಲವಾಗಿ ಉಪಭೋಗಿಸಿದ್ದು ಅವನು ಮಾಡಿದ ಅಕ್ಷಮ್ಯ ಅಪರಾಧಗಳಾಗಿದ್ದು ಅವನನ್ನು ಕೊಲ್ಲಲೇಬೇಕಾಗಿತ್ತು! ಕಿಷ್ಕಿಂಧೆಯು ರಾಮನಿಗೆ ಸಂಬಂಧಿಸದ ಪ್ರದೇಶವೆಂದು ವಾಲಿಯು ಹೇಳಿದ್ದಕ್ಕೆ ರಾಮನು ತಾನು ಇಕ್ಷ್ವಾಕು ಸಾರ್ವಭೌಮನಾದ ಭರತನ ಪ್ರತಿನಿಧಿಯಾಗಿ ಯಾವ ಕ್ಷೇತ್ರದಲ್ಲಾದರೂ ನ್ಯಾಯ ಉಳಿಸಲು ಮಧ್ಯೆ ಪ್ರವೇಶಿಸಬಹುದೆಂದು ವಾದಿಸುತ್ತಾನೆ.ತತ್ತ್ವಸಂಗ್ರಹ ರಾಮಾಯಣ ಎಂಬ ರಾಮಾಯಣದಲ್ಲಿ ಇದಕ್ಕೆ ಇನ್ನೊಂದು ಸ್ವಾರಸ್ಯಕರ ಕಾರಣವಿದೆ.ಅದರಂತೆ, ವಾಲಿಯ ತಂದೆ ಇಂದ್ರನು ಅವನಿಗೆ ಒಂದು ವಿಶೇಷ ಹಾರವನ್ನು ಕೊಟ್ಟಿದ್ದನು.ವಾಲಿಯು ಅದನ್ನು ಧರಿಸಿ ಯುದ್ಧ ಮಾಡಿದಾಗ ಎದುರಾಳಿಯ ಅರ್ಧ ಶಕ್ತಿ ಇವನಿಗೆ ಬಂದುಬಿಡುತ್ತಿತ್ತು! ಆದ್ದರಿಂದಲೇ ರಾಮನು ಎದುರಿಗೆ ನಿಂತು ಹೋರಾಡದೇ ಮರದ ಹಿಂದೆ ನಿಂತು ವಾಲಿಯನ್ನು ಕೊಂದನು.
      ಶ್ರೀ ರಾಮನು ರಾವಣನನ್ನು ಕೊಂದ ಬಳಿಕ, ಸೀತೆಯ ಚಾರಿತ್ರ್ಯವನ್ನು ಸಂಶಯಿಸಿ ಅವಳು ಇಚ್ಛೆ ಬಂದಲ್ಲಿಗೆ ಹೋಗಬಹುದೆಂದು ಕಟುವಾಗಿ ಹೇಳುತ್ತಾನೆ.ಆಗ ಸೀತೆಯು ತನ್ನ ಪಾತಿವ್ರತ್ಯವನ್ನು ನಿರೂಪಿಸಲು ಅಗ್ನಿ ಪ್ರವೇಶ ಮಾಡುತ್ತಾಳೆ.ಆಗ ಅಗ್ನಿಯು ಅವಳನ್ನು ಸುಡದೇ ಅವಳು ಪವಿತ್ರಳೆಂದು ಹೇಳುತ್ತಾ ರಾಮನಿಗೆ ಹಿಂದಿರುಗಿಸುತ್ತಾನೆ.ಆಗ ಬ್ರಹ್ಮಾದಿ ದೇವತೆಗಳು ಸ್ವಯಂ ದಶರಥನೊಂದಿಗೆ ಪ್ರತ್ಯಕ್ಷವಾಗಿ ಸೀತೆಯು ಪವಿತ್ರಳೆಕದು ಸಾರುತ್ತಾರೆ! ಆಗ ರಾಮನೂ ತನಗಿದು ಗೊತ್ತಿತ್ತೆಂದೂ ಲೋಕಾಪವಾದ ಬರದಿರಲೆಂದು ಹೀಗೆ ಮಾಡಿದೆನೆಂದೂ ಹೇಳುತ್ತಾನೆ.ಈ ಘಟನೆಗೆ ಸ್ಕಂದ ಪುರಾಣದಲ್ಲಿ ಬೇರೊಂದು ಸ್ವಾರಸ್ಯಕರ ಕಾರಣವಿದೆ.ಅದರಂತೆ, ಕುಶಧ್ವಜನೆಂಬ ರಾಜನಿಗೆ ಲಕ್ಷ್ಮಯ ಅಂಶದಿಂದ ಹುಟ್ಟಿದ ವೇದವತಿಯೆಂಬ ಮಗಳಿದ್ದು, ಅವಳು ವಿಷ್ಣುವನ್ನೇ ಮದುವೆಯಾಗಬೇಕೆಂದು ತಪಸ್ಸು ಮಾಡುತ್ತಿದ್ದಳು.ಆಗ ಒಮ್ಮೆ ರಾವಣನು ಅವಳ ಬಳಿ ಬಂದು ತನ್ನನ್ನು ಮದುವೆಯಾಗಲು ಒತ್ತಾಯಿಸಿದನು.ಅವಳು ಒಪ್ಪದಿರಲು, ಅವನು ಅವಳ ಕೇಶವನ್ನು ಹಿಡಿದೆಳೆದನು! ಆಗ ವೇದವತಿಯು ತಪಸ್ಸಿನ ಬಲದಿಂದ ಕತ್ತಿಯಂತಾಗಿದ್ದ ತನ್ನ ಕೈಯಿಂದ ತನ್ನ ಕೇಶವನ್ನು ಕತ್ತರಿಸಿ ರಾವಣನ ವಧೆಗೆ ತಾನೇ ಬರುತ್ತೇನೆಂದು ಅವನಿಗೆ ಶಾಪ ಕೊಡುತ್ತಾ ಅಗ್ನಿ ಪ್ರವೇಶ ಮಾಡಿದಳು! ಆದರೆ ಅಗ್ನಿ ಅವಳನ್ನು ಸುಡದೇ ರಕ್ಷಿಸಿ, ರಾವಣನು ಸೀತೆಯನ್ನು ಅಪಹರಿಸುತ್ತಿದ್ದಾಗ ಕಾಣಿಸಿಕೊಂಡು, ತನ್ನ ಬಳಿಯಿದ್ದ ವೇದವತಿಯನ್ನು ತೋರಿಸುತ್ತಾ ಅವಳೇ ನಿಜವಾದ ಸೀತೆಯೆಂದೂ ಅವನ ಬಳಿಯಿದ್ದದ್ದು ಮಾಯಾಸೀತೆಯೆಂದೂ ಹೇಳಿದನು.ಇದನ್ನು ನಂಬಿ, ರಾವಣನು ಸೀತೆಯನ್ನು ಅಗ್ನಿಗೆ ಒಪ್ಪಿಸಿ ವೇದವತಿಯನ್ನು ಪಡೆದುಕೊಂಡನು.ಅವಳನ್ನೇ ಲಂಕೆಯಲ್ಲಿಟ್ಟನು.ಅವಳ ಶಾಪದಂತೆ ಅವಳೇ ರಾವಣನ ವಧೆಗೆ ಕಾರಣಳಾದಳು.ಅವಳು ಅಗ್ನಿ ಪ್ರವೇಶ ಮಾಡಿದಾಗ, ಅಗ್ನಿಯು ಇಬ್ಬರು ‌ಸೀತೆಯರೊಂದಿಗೆ ಬಂದು, ನಿಜವಾದ ಸೀತೆಯನ್ನು ರಾಮನಿಗೆ ಒಪ್ಪಿಸುತ್ತಾ ವೇದವತಿಯ ವಿಚಾರ ಹೇಳಿದನು.ಆಗ ಸೀತೆಯು ವೇದವತಿಯ ಕೋರಿಕೆಯನ್ನು ಹೇಳಲು, ರಾಮನು ತಾನು ಏಕಪತ್ನೀವ್ರತಸ್ಥನಾದುದರಿಂದ ಮುಂದಿನ ಇಪ್ಪತ್ತೆಂಟನೆಯ ಕಲಿಯುಗದಲ್ಲಿ ಅವಳನ್ನು ಮದುವೆಯಾಗುವೆನೆಂದು ವಚನವಿತ್ತನು.ಅಂತೆಯೇ ಆಗ ವೇದವತಿಯು ಪದ್ಮಾವತಿಯಾಗಿ ಜನಿಸಲು ವಿಷ್ಣುವು ಶ್ರೀನಿವಾಸನಾಗಿ ಅವಳನ್ನು ವರಿಸಿದನು.ಇದು ಎಲ್ಲರಿಗೂ ಗೊತ್ತಿರುವಂತೆ ತಿರುಪತಿಯ ಸ್ಥಳಪುರಾಣವಾದ ಶ್ರೀನಿವಾಸಕಲ್ಯಾಣದ ಕಥೆ.
     ಈಗ ಶ್ರೀ ರಾಮನು ಸೀತಾಪರಿತ್ಯಾಗವನ್ನೇಕೆ ಮಾಡಿದನೆಂದು ನೋಡೋಣ.ಸಾಮಾನ್ಯವಾಗಿ ಅನೇಕರು ಭಾವಿಸಿರುವಂತೆ, ಒಬ್ಬ ಅಗಸನು ತನ್ನ ಹೆಂಡತಿಯ ನಡತೆಯ ಬಗ್ಗೆ ನಿಂದಿಸಿದುದನ್ನು ಕೇಳಿ ರಾಮನು ಹಾಗೆ ಮಾಡಲಿಲ್ಲ.ಮೂಲ ವಾಲ್ಮೀಕಿ ರಾಮಾಯಣದಲ್ಲಿ ಇರುವಂತೆ, ಅಯೋಧ್ಯಾ ನಗರಿಯಲ್ಲಿ ಎಲ್ಲೆಲ್ಲೂ ರಾಮನು ಸೀತೆಯನ್ನು ಹಿಂದಕ್ಕೆ ಕರೆತಂದುದು ಸರಿಯಿರಲಿಲ್ಲವೆಂದು ಮಾತನಾಡಿಕೊಳ್ಳುತ್ತಿದ್ದರು.ಅವನು ರಾವಣನನ್ನು ಕೊಂದು ತನ್ನ ಪೌರುಷ ತೋರಿಸಿದ್ದೇನೋ ಸರಿ, ಆದರೆ ಪ್ರದೇಶದಲ್ಲಿ ಬಹಳ ಕಾಲ ಇದ್ದ ಸೀತೆಯನ್ನು ಪುನಃ ಕರೆತಂದುದು ಸರಿಯಲ್ಲ ಎಂದು ಬೀದಿ ಬೀದಿಗಳಲ್ಲಿ, ಉದ್ಯಾನವನಗಳಲ್ಲಿ, ಮೊದಲಾದ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಜನರು ಮಾತನಾಡಿಕೊಳ್ಳುತ್ತಿದ್ದರೆಂದು ಭದ್ರನೆಂಬ ಗೂಢಚಾರಿ ರಾಮನಿಗೆ ಹೇಳುತ್ತಾನೆ.ಇದನ್ನು ಕೇಳಿ ರಾಮನು, ಹೀಗಾಗಬಹುದೆಂದೇ ತಾನು ಲಂಕೆಯಲ್ಲೇ ಇದನ್ನು ಪರಿಹರಿಸಿದ್ದೆನಾದರೂ ಈ ಅಪವಾದ ಬಂತೆಂದು ಸೋದರರ ಬಳಿ ದುಃಖಿಸುತ್ತಾ ಕೂಡಲೇ ಲಕ್ಷ್ಮಣನಿಗೆ ಸೀತೆಯನ್ನು ವಾಲ್ಮೀಕಿ ಋಷಿಗಳ ಆಶ್ರಮದ ಬಳಿ ಬಿಟ್ಟು ಬರಲು ಆಜ್ಞಾಪಿಸುತ್ತಾನೆ.ಹೀಗೆ ಅವನು ಸೀತಾಪರಿತ್ಯಾಗ ಮಾಡುತ್ತಾನೆ.ಅಲ್ಲದೇ ಗರ್ಭಿಣಿಯಾಗಿದ್ದ ಸೀತೆಯೂ ತಾನು ಋಷ್ಯಾಶ್ರಮದಲ್ಲಿ ಕಾಲ ಕಳೆಯಬೇಕೆಂದು ರಾಮನನ್ನು ಕೇಳಿಕೊಂಡಿರುತ್ತಾಳೆ.ಇದನ್ನು ಯೋಚಿಸಿಯೇ ರಾಮನು ಅವಳನ್ನು ವಾಲ್ಮೀಕಿ ಮಹರ್ಷಿಗಳ ಆಶ್ರಮದ ಬಳಿ ಬಿಡಲು ಹೇಳುತ್ತಾನೆ.ರಾಮಾಯಣದ ಉತ್ತರಕಾಂಡದಲ್ಲಿ ಇದಕ್ಕೆ ಒಂದು ಪೌರಾಣಿಕ ಕಾರಣವನ್ನು ಕೊಡಲಾಗಿದೆ.ಲಕ್ಷ್ಮಣನು ರಾಮನ ಸೀತಾಪರಿತ್ಯಾಗದಿಂದ ದುಃಖಿತನಾಗಿ ಮಂತ್ರಿಯೂ ಸಾರಥಿಯೂ ಆದ ಸುಮಂತ್ರನ ಬಳಿ ಹೇಳಿಕೊಂಡಾಗ, ಸುಮಂತ್ರನು ಇದಕ್ಕೆ ಕಾರಣವಾಗಿ ಹಿಂದೆ ದುರ್ವಾಸ ಮಹರ್ಷಿಗಳು ದಶರಥನಿಗೆ ಹೇಳಿದ್ದ ಒಂದು ರಹಸ್ಯ ವಿಚಾರವನ್ನು ಹೇಳುತ್ತಾನೆ.ಅದರಂತೆ, ಹಿಂದೆ ದೇವಾಸುರರ ಯುದ್ಧವಾದಾಗ, ಆಸುರರು ಭೃಗು ಮಹರ್ಷಿಗಳ ಪತ್ನಿಯ ಮೊರೆಹೊಕ್ಕರು.ಅವಳು ಅವರಿಗೆ ಆಶ್ರಯ ನೀಡಲು, ಕ್ರುದ್ಧನಾದ ಮಹಾವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಅವಳ ಶಿರವನ್ನು ಕತ್ತರಿಸಿಬಿಟ್ಟನು! ಇದರಿಂದ ದುಃಖ,ಕೋಪಗಳಿಗೊಳಗಾದ ಭೃಗು ಮಹರ್ಷಿಗಳು ವಿಷ್ಣುವಿಗೆ,"ನೀನು ಮನುಷ್ಯಲೋಕದಲ್ಲಿ ಜನ್ಮವೆತ್ತು! ದೀರ್ಘ ಕಾಲ ಪತ್ನೀವಿಯೋಗವನ್ನು ಅನುಭವಿಸು!" ಎಂದು ಶಪಿಸಿದರು! ಅನಂತರ ಅವರು ಪಶ್ಚಾತ್ತಾಪಪಟ್ಟು ವಿಷ್ಣುವನ್ನು ಪ್ರಾರ್ಥೀಸಲು, ವಿಷ್ಣುವು ಲೋಕಕಲ್ಯಾಣಕ್ಕಾಗಿ ಈ ಶಾಪವನ್ನು ಅಂಗೀಕರೀಸುವೆನೆಂದನು.ಈ ಕಾರಣದಿಂದ ವಿಷ್ಣುವು ರಾಮನಾಗಿ ಹುಟ್ಟಿ ಸೀತಾಪರಿತ್ಯಾಗದಿಂದ ಪತ್ನೀವಿಯೋಗವನ್ನು ಅನುಭವಿಸಿದನು.ಈ ಕಥೆ ದೇವೀಭಾಗವತ ಪುರಾಣದಲ್ಲೂ ಇದ್ದು, ವಿಷ್ಣುವು ಮತ್ತೆ ಮತ್ತೆ ಅವತಾರಗಳನ್ನೆತ್ತಲು ಈ ಶಾಪವೇ ಕಾರಣವೆಂದು ಅಲ್ಲಿ ಹೇಳಲಾಗಿದೆ.ಸೀತಾಪರಿತ್ಯಾಗಕ್ಕೆ ಇನ್ನೊಂದು ಸ್ವಾರಸ್ಯಕರ ಕಾರಣಕಥೆಯನ್ನು ಪದ್ಮಪುರಾಣ ಹೇಳುತ್ತದೆ.ಅದರಂತೆ, ಒಮ್ಮೆ ಸೀತೆಯ ಉದ್ಯಾನವನದಲ್ಲಿ ಗಿಳಿದಂಪತಿಯೊಂದು ವಾಲ್ಮೀಕಿ ಮಹರ್ಷಿಗಳ ಆಶ್ರಮದಿಂದ ಬಂದಿದ್ದು ರಾಮಾಯಣದ ಕಥೆಯನ್ನು ಹೇಳುತ್ತಿರುತ್ತವೆ.ಸೀತೆಯು ಅವನ್ನು ಹಿಡಿಸಿ, ಮುಂದಿನ ಕಥೆ ಹೇಳಬೇಕೆಂದು ಕೇಳುತ್ತಾಳೆ.ಆದರೆ ಅವು ತಮಗೆ ಮುಂದಿನ ಭಾಗ ಗೊತ್ತಿಲ್ಲವೆಂದೂ ಹೆಣ್ಣು ಗಿಳಿ ಗರ್ಭಿಣಿಯಾಗಿರುವುದರಿಂದ ಬಿಡಬೇಕೆಂದೂ ಬೇಡಿಕೊಳ್ಳುತ್ತವೆ.ಆಗ ಸೀತೆಯು ಹೆಣ್ಣು ಗಿಳಿಯನ್ನು ರಾಮನು ತನ್ನನ್ನು ಮದುವೆಯಾಗಲು ಬರುವವರೆಗೂ ತನ್ನ ಬಳಿಯೇ ಇರಿಸಿಕೊಳ್ಳುವೆನೆಂದು ಗಂಡು ಗಿಳಿಯನ್ನು ಮಾತ್ರ ಬಿಡುತ್ತಾಳೆ.ಇದರಿಂದ ದುಃಖಗೊಂಡ ಹೆಣ್ಣು ಗಿಳಿ ಸೀತೆಗೆ,"ನನಗೆ ಗರ್ಭಿಣಿಯಾಗಿರುವಾಗ ಪತಿವಿಯೋಗವುಂಟುಮಾಡಿದ ಕಾರಣ, ನೀನೂ ಗರ್ಭಿಣಿಯಾಗಿದ್ದಾಗ ಪತಿವಿಯೋಗ ಹೊಂದುವೆ!" ಎಂದು ಶಾಪವಿತ್ತು ಸಾಯುತ್ತದೆ! ಇದರಿಂದ ದುಃಖಗೊಂಡ ಗಂಡು ಗಿಳಿ ತಾನೇ ಸೀತೆಗೆ ಪತಿವಿಯೋಗವುಂಟುಮಾಡುವೆನೆಂದು ಶಪಥಗೈದು ಗಂಗೆಯಲ್ಲಿ ಮುಳುಗಿ ಸತ್ತು, ಅನಂತರ ಅಗಸನಾಗಿ ಹುಟ್ಟಿ ರಾಮನ ವಿಷಯದಲ್ಲಿ ದುರ್ಭಾಷೆಯನ್ನಾಡಿ ಸೀತಾಪರಿತ್ಯಾಗಕ್ಕೆ ಕಾರಣವಾಗುತ್ತದೆ.
       ಸಂಸ್ಕೃತದಲ್ಲೇ ಇರುವ, ವಾಲ್ಮೀಕಿ ಮಹರ್ಷಿಗಳ ರಚನೆಗಳೆಂದೇ ಪ್ರತೀತಿ ಇರುವ ಅದ್ಭುತ, ಅಧ್ಯಾತ್ಮ, ಮತ್ತು ಆನಂದರಾಮಾಯಣಗಳೆಂಬ ರಾಮಾಯಣಗಳಲ್ಲಿ ವಾಲ್ಮೀಕಿ ರಾಮಾಯಣಕ್ಕಿಂತ ವಿಭಿನ್ನವಾದ ಹಲವಾರು ಕಥೆಗಳಿವೆ.ಅದ್ಭುತ ರಾಮಾಯಣದಲ್ಲಿ ವಿಷ್ಣುವು ರಾಮಾವತಾರ ಎತ್ತಲು ನಾರದ ಮತ್ತು ಪರ್ವತ ಋಷಿಗಳ ಶಾಪವೇ ಕಾರಣವೆಂದು ಹೇಳಲಾಗಿದೆ.ನಾರದ ಮತ್ತು ಪರ್ವತ ಋಷಿಗಳಿಬ್ಬರೂ ಒಮ್ಮೆ ಅಯೋಧ್ಯೆಯ ರಾಜನಾದ ಅಂಬರೀಷನ ಮಗಳು ಶ್ರೀಮತಿಯನ್ನು ನೋಡಿ ಅವಳನ್ನು ಮದುವೆಯಾಗಬೇಕೆಂದು ಆಸೆಪಟ್ಟರು.ಇಬ್ಬರೂ ಅಂಬರೀಷನನ್ನು ಅವಳನ್ನು ತಮಗೇ ಕೊಟ್ಟು ಮದುವೆ ಮಾಡಲು ಕೇಳಿದಾಗ ಅವನು ಇಬ್ಬರಿಗೂ ಹೇಗೆ ಕೊಡುವುದೆಂದು ಗಾಬರಿಯಾಗಿ ಅವಳು ಅವರಿಬ್ಬರಲ್ಲಿ ಯಾರನ್ನು ಆರಿಸಿಕೊಳ್ಳುವಳೋ ಅವರಿಗೆ ಅವಳನ್ನು ಕೊಡುವೆನೆಂದು ಹೇಳಿದನು.ಅವರಿಬ್ಬರೂ ಮರುದಿನ ಬರುವೆನೆಂದು ಹೇಳಿ ಹೊರಟು, ಪ್ರತ್ಯೇಕ ಪ್ರತ್ಯೇಕವಾಗಿ ವಿಷ್ಣುವಿನ ಬಳಿ ಹೋಗಿ ಇನ್ನೊಬ್ಬರ ಮುಖ ಶ್ರೀಮತಿಗೆ ಮಾತ್ರ ಕಪಿಯಂತೆ ಕಾಣಬೇಕೆಂದು ವಾರ ಪಡೆದರು! ಅಂತೆಯೇ ಮರುದಿನ ಅವರು ಅಂಬರೀಷನ ಅರಮನೆಗೆ ಹೋಗಿ ಕುಳಿತುಕೊಳ್ಳಲು, ವಿಷ್ಣುವೂ ಎರಡು ಕೈಗಳ ಸುಂದರ ಮನುಷ್ಯನಂತೆ, ಶ್ರೀಮತಿಗೆ ಮಾತ್ರ ಕಾಣುವಂತೆ ಅವರ ಮಧ್ಯೆ ಕುಳಿತನು.ಋಷಿಗಳಿಬ್ಬರ ಮುಖಗಳು ಕಪಿಗಳಂತೆ ಕಾಣುತ್ತಾ, ಸುಂದರಾಕಾರನಾದ ಇನ್ನೊಬ್ಬ ಪುರುಷನು ಅಲ್ಲಿರಲು, ಶ್ರೀಮತಿಯು ಅವನಿಗೆ ಮಾಲೆ ಹಾಕಿದಳು! ಇದನ್ನು ತಿಳಿದ ನಾರದ, ಪರ್ವತರಿಬ್ಬರೂ ವಿಷ್ಣುವಿನ ಮೇಲೆ ಕುಪಿತರಾಗಿ ಅವನು ಧರಿಸಿದ್ದ ರೂಪದಲ್ಲೇ ಭೂಮಿಯಲ್ಲಿ ಮನುಷ್ಯನಾಗಿ ಅದೇ ಅಂಬರೀಷನ ಕುಲದಲ್ಲೇ ಹುಟ್ಟಬೇಕೆಂದೂ ಶ್ರೀಮತಿಯು ಭೂಮಿಯ ಮಗಳಾಗಿ ಹುಟ್ಟಿ ಅವನನ್ನು ವಿವಾಹವಾಗುವಳೆಂದೂ ರಾಕ್ಷಸನೊಬ್ಬನು ಅವಳನ್ನು ಅಪಹರಿಸಲು, ತಾವಿಬ್ಬರೂ ಹೇಗೆ ಸ್ತ್ರೀ ವಿರಹ ಅನುಭವಿಸಿಧರೋ ಹಾಗೆಯೇ ಅವನೂ ಅವಳ ವಿರಹವನ್ನು ಅನುಭವಿಸಿ ಗೋಳಾಡುವನೆಂದೂ ಶಾಪವಿತ್ತರು! ವಿಷ್ಣುವು ಅದನ್ನು ಸ್ವೀಕರಿಸಿ ರಾಮಾವತಾರವನ್ನೆತ್ತಿದನು.ಇದೇ ರೀತಿಯ ಕಥೆ ಶಿವಪುರಾಣದಲ್ಲೂ ಬರುತ್ತದೆ.
      ಇದೇ ರೀತಿ ಅದ್ಭುತ ರಾಮಾಯಣದಲ್ಲೇ ನಾರದರಿಂದ ಬಂದ ಶಾಪದಿಂದ ಲಕ್ಷ್ಮಿಯು ಸೀತೆಯಾಗಿ ಹುಟ್ಟಿದಳೆಂಬ ಕಥೆಯಿದೆ.ಒಮ್ಮೆ ವಿಷ್ಣುವು ವೈಕುಂಠದಲ್ಲಿ ತನ್ನ ಭಕ್ತನಾದ ಕೌಶಿಕನೆಂಬುವನಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಿದನು.ಆಗ ತುಂಬುರು ಎಂಬ ಗಂಧರ್ವನ ಸಂಗೀತವಿತ್ತು.ಅಲ್ಲಿ ದೇವತೆಗಳ ದೊಡ್ಡ ಗುಂಪು ನೆರೆಯಲು ಲಕ್ಷ್ಮಿಯ ಸೇವಕಿಯರು ಅವರನ್ನು ಓಡಿಸಿ ದೂರ ಕೂರಿಸಿದರು! ಆಗ ತುಂಬುರುವಿಗೆ ಹೆಚ್ಚಿನ ಗೌರವಾದರಗಳು ದೊರೆಯಲು, ಅದನ್ನು ತಾಳಲಾರದೇ ನಾರದರು ಲಕ್ಷ್ಮಿಗೆ ರಾಕ್ಷಸಿಯೊಬ್ಬಳ ಮಗಳಾಗಿ ಜನಿಸುವಂತೆಯೂ ಅವಳ ಸೇವಕಿಯರು ತನ್ನನ್ನು ದೂರ ತಳ್ಳಿದಂತೆ ಅವಳೂ ತೊರೆಯಲ್ಪಡಲೆಂದೂ ಶಪಿಸಿದರು! ಇದರಿಂದ ಲಕ್ಷ್ಮಿಯು ಸೀತೆಯಾಗಿ ಜನಿಸಿದಳು.ಇಲ್ಲಿಯೇ ಅವಳು ರಾವಣನ ಮಗಳಾಗಿ ಹುಟ್ಟಿದಳೆಂಬ ಸ್ವಾರಸ್ಯಕರ ಕಥೆಯಿದೆ.ಅದರಂತೆ, ಒಮ್ಮೆ ದಿಗ್ವಿಜಯ ಮಾಡುತ್ತಾ ರಾವಣನು ದಂಡಕಾರಣ್ಯಕ್ಕೆ ಬರಲು, ಅಲ್ಲಿ ಅಗ್ನಿಯಂತೆ ದೇದೀಪ್ಯಮಾನರಾಗಿದ್ದ ಋಷಿಗಳನ್ನು ಕಂಡು, ಅವರನ್ನು ಕೊಲ್ಲದೇ ಜಯಿಸಬೇಕೆಂದು ಯೋಚಿಸಿದನು.ಅದಕ್ಕಾಗಿ ಅವನು ಬಾಣದ ತುದಿಯಿಂದ ಅವರ ದೇಹಗಳನ್ನು ಚುಚ್ಚಿ ರಕ್ತವನ್ನು ಸುರಿಸಿ ಒಂದು ಮಡಕೆಯಲ್ಲಿ ಸಂಗ್ರಹಿಸಿದನು! ಆ ಮಡಕೆಯಲ್ಲಿ ಹೆಣ್ಣು ಮಗುವೊಂದನ್ನು ಬಯಸಿದ್ದ ನೂರು ಪುತ್ರರ ತಂದೆಯಾದ ಗೃತ್ಸಮದನೆಂಬ ಋಷಿಯು ಲಕ್ಷ್ಮಯೇ ತನಗೆ ಮಗಳಾಗಿ ಹುಟ್ಟಲೆಂದು ಹೆಂಡತಿಯೊಂದಿಗೆ ಪ್ರಾರ್ಥಿಸಿ, ಕುಶಾಗ್ರದಿಂದ ಸ್ವಲ್ಪ ಹಾಲನ್ನು ಮಂತ್ರಿಸಿಟ್ಟು ಸ್ನಾನಕ್ಕೆ ಹೋಗಿದ್ದನು.ರಾವಣನು ಈ ಮಡಕೆಯನ್ನು ತೆಗೆದುಕೊಂಡು ಹೋಗಿ ತನ್ನ ಪತ್ನಿ ಮಂದೋದರಿಗೆ ಕೊಡುತ್ತಾ ಇದು ಭಯಂಕರ ವಿಷವೆಂದೂ ಜೋಪಾನವಾಗಿಡಬೇಕೆಂದೂ ಹೇಳಿದನು. ಒಮ್ಮೆ ರಾವಣನು ಇಲ್ಲದಿದ್ದಾಗ ಅವನ ದುರಾಚಾರಗಳಿಂದ ಬೇಸತ್ತ ಮಂದೋದರಿಯು ಆತ್ಮಹತ್ಯೆ ಮಾಡಿಕೊಳ್ಳಲೆಂದು ಆ ಮಡಿಕೆಯಲ್ಲಿದ್ದ ಹಾಲು ಸಹಿತವಾದ ರಕ್ತವನ್ನು ಕುಡಿದುಬಿಟ್ಟಳು! ಆದರೆ ಅವಳು ಸಾಯದೇ ಗರ್ಭಿಣಿಯಾದಳು! ಇದರಿಂದ ಗಾಬರಿಗೊಂಡ ಅವಳು ಪುಷ್ಪಕ ವಿಮಾನದಲ್ಲಿ ಕುರುಕ್ಷೇತ್ರಕ್ಕೆ ಹೋಗಿ ತನ್ನ ಗರ್ಭವನ್ನು ವಿಸರ್ಜಿಸಿ ಭೂಮಿಯಲ್ಲಿ ಹೂತುಬಿಟ್ಟಳು! ಮುಂದೆ ಜನಕ ಮಹಾರಾಜನು ಯಜ್ಞಕ್ಕಾಗಿ ಅಲ್ಲಿ ನೆಲ ಉಳುತ್ತಿದ್ದಾಗ ಮಗುವಾಗಿದ್ದ ಆ ಗರ್ಭವು ಸಿಕ್ಕಿತು.ಆ ಮಗುವಿಗೆ ಸೀತೆಯೆಂದು ಹೆಸರಿಟ್ಟು ಸಾಕಿ ಬೆಳೆಸಿದನು.ಹೀಗೆ ಲಕ್ಷ್ಮಿಯ ಅವತಾರವಾದ ಸೀತೆಯು ರಾವಣನ ಮಗಳಾದಳು.ಅದ್ಭುತ ರಾಮಾಯಣದ ಪ್ರಕಾರ ರಾವಣನು ಯಾವಾಗ ತನ್ನ ಮಗಳನ್ನೇ ಕಾಮಿಸುವನೋ ಆಗ ತನಗೆ ಸಾವು ಬರಲೆಂದು ಬ್ರಹ್ಮನ ಬಳಿ ವರ ಪಡೆದಿದ್ದನು.ಹಾಗಾಗಿ ಅವನು ಸೀತೆಯನ್ನು ಕಾಮಿಸಿದಾಗ ಸತ್ತನು.
     ಆನಂದರಾಮಾಯಣದಲ್ಲಿ ಕೂಡ ಸೀತೆಯು ರಾವಣನ ಮಗಳೆಂಬಂತೆ ಚಿತ್ರಿತವಾಗಿದೆ.ಪದ್ಮಾಕ್ಷನೆಂಬ ರಾಜನಿಗೆ ವಿಷ್ಣುವಿನ ಕೃಪೆಯಿಂದ ಲಕ್ಷ್ಮಿಯು ಪದ್ಮಾ ಎಂಬ ಮಗಳಾಗಿ ಹುಟ್ಟಿದ್ದಳು.ಅವಳ ಸ್ವಯಂವರ ಏರ್ಪಡಿಸಿದಾಗ, ಅವಳಿಗಾಗಿ ದೇವತೆಗಳಿಗೂ ರಾಕ್ಷಸರಿಗೂ ಯುಧ್ಧವಾಗಿ ಆ ಯುದ್ಧದಲ್ಲಿ ಪದ್ಮಾಕ್ಷನೇ ಸತ್ತುಹೋದ! ಆಗ ಪದ್ಮೆಯು ಅಗ್ನಿಪ್ರವೇಶ ಮಾಡಿದಳು! ಆಗ ಅತ್ತ ಸುಳಿದ ರಾವಣ ಅಗ್ನಿಯನ್ನು ನೀರಿನಿಂದ ಆರಿಸಿ ಅವಳನ್ನು ಹಿಡಿಯಲು ಹೋದನು! ಆದರೆ ಅವಳಿದ್ದ ಜಾಗದಲ್ಲಿ ಐದು ರತ್ನಗಳಿದ್ದವು! ಅವುಗಳನ್ನು ಒಂದು ಪೆಟ್ಟಿಗೆಯಲ್ಲಿ ಹಾಕಿಕೊಂಡು ರಾವಣನು ಲಂಕೆಗೆ ಹೋಗಿ ಒಂದು ದೇವಾಲಯದಲ್ಲಿರಿಸಿ, ಮನೆಗೆ ಹೋದ ಬಳಿಕ, ಮಂದೋದರಿಗೆ ಅದನ್ನು ತರಲು ಕಳಿಸಿದ.ಅವಳು ಅಲ್ಲಿ ಹೋಗಿ ಆ ಪೆಟ್ಟಿಗೆ ತೆರೆದು ನೋಡಲು, ಅಲ್ಲಿ ರತ್ನಗಳ ಬದಲಿಗೆ ಒಂದು ಹೆಣ್ಣು ಮಗುವಿತ್ತು! ಅದನ್ನು ಅವಳು ಮನೆಗೆ ತಂದು ರಾವಣನಿಗೆ ತೋರಿಸಲು, ಅವನು ಪದ್ಮೆಯ ಕಥೆ ಹೇಳಿದನು.ಆಗ ಮಂದೋದರಿಯು ಆ ಮಗುವಿನಿಂದ ತಮ್ಮ ಕುಲವೇ ನಾಶವಾಗುವುದೆಂದು ಅದನ್ನು ಒಂದು ಕಾಡಿನಲ್ಲಿ ಬಿಟ್ಟು ಬರಲು ಸೇವಕರಿಗೆ ಹೇಳಿದಳು.ರಾವಣನ ಸಭಾಸದರೂ ಹಾಗೆಯೇ ಅಭಿಪ್ರಾಯಪಟ್ಟರು.ಅವರು ಹೊರಡುವಷ್ಟರಲ್ಲಿ ಆ ಮಗುವು ತಾನು ಪುನಃ ಬಂದು ರಾವಣನ ವಧೆಗೆ ಕಾರಣಳಗುತ್ತೇನೆಂದಳು! ಆಗ ರಾವಣನು ಮಗುವನ್ನು ಕೊಲ್ಲಲು ಹೊರಡಲು ಮಂದೋದರಿಯು ತಡೆದು ಸೇವಕರನ್ನು ಕಳಿಸಿದಳು.ಅವರು ಮಿಥಿಲೆಯ ಕಾಡಿಗೆ ಹೋಗಿ ಅಲ್ಲಿ ಆ ಮಗುವನ್ನು ಪೆಟ್ಟಿಗೆಯ ಸಮೇತ ಹೂತುಬಿಟ್ಟರು! ಅದು ಜನಕನಿಗೆ ಸಿಕ್ಕಿ ಮಗುವನ್ನು ಸೀತೆಯೆಂಬ ಹೆಸರಿನಿಂದ ಬೆಳೆಸಿದನು.
      ವಾಲ್ಮೀಕಿ ರಾಮಾಯಣದಲ್ಲೂ ಸೀತೆಯು ರಾವಣನ ಮಗಳೆಂಬಂತೆಯೇ ಚಿತ್ರಿತವಾಗಿದೆ.ಆಗಲೇ ಹೇಳಿದ ವೇದವತಿಯ ಕಥೆ ವಾಲ್ಮೀಕಿ ರಾಮಾಯಣದ ಉತ್ತರಕಾಂಡದಲ್ಲಿ ಬಂದಿದೆ.ಆದರೆ ಅಲ್ಲಿ ವೇದವತಿಯು ನಿಜಕ್ಕೂ ಅಗ್ನಿಪ್ರವೇಶ ಮಾಡಿ ಮುಂದಿನ ಜನ್ಮದಲ್ಲಿ ಸೀತೆಯಾಗಿ ಹುಟ್ಟುತ್ತಾಳೆ.ಆಗ ಅವಳು ಒಂದು ಕಮಲಪುಷ್ಪದಲ್ಲಿ ಲಂಕೆಯ ಒಂದು ಸರೋವರದಲ್ಲೇ ಆವಿರ್ಭವಿಸುತ್ತಾಳೆ.ಆಗ ರಾವಣನೇ ಆ ಮಗುವನ್ನು ಮೊದಲು ನೋಡಿ ಎತ್ತಿಕೊಂಡು ಮನೆಗೆ ತರುತ್ತಾನೆ.ಆಗ ಅವನು ಜ್ಯೋತಿಷಿಗಳೊಂದಿಗೆ ಸಮಾಲೋಚಿಸಲು, ಅವರ ಆ ಮಗುವು ಅವನ ವಿನಾಶಕ್ಕೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ.ಆಗ ರಾವಣನು ಕೂಡಲೇ ಆ ಮಗುವನ್ನು ಸಮುದ್ರಕ್ಕೆ ಎಸೆದುಬಿಡುತ್ತಾನೆ.ಅದು ಹೋಗಿ ಮಿಥಿಲೆಯ ಭೂಮಿಯಲ್ಲಿ ಜನಕನಿಗೆ ಸಿಗುತ್ತದೆ.
     ಸೀತಾಪರಿತ್ಯಾಗದ ಕಥೆಯೂ ಆನಂದ ರಾಮಾಯಣದಲ್ಲಿ ವಿಭಿನ್ನವಾಗಿದೆ.ಇಲ್ಲಿ ಶ್ರೀರಾಮನು ಮೊದಲೇ ಸೀತಗೂ ಅವಳ ತಂದೆ ಜನಕನಿಗೂ ತಾನು ಅವಳನ್ನು ಪರಿತ್ಯಾಗ ಮಾಡುವೆನೆಂದು ಹೇಳುತ್ತಾನೆ.ಅದಕ್ಕೆ ಅವನು ಕೊಡುವ ಕಾರಣವೆಂದರೆ, ಅವನು ಸೀತೆಯೊಂದಿಗೆ ರತಿಸುಖವಿಲ್ಲದೇ ಇರಲಾರೆನೆಂದೂ ಅವಳು ಗರ್ಭಿಣಿಯಾಗಿರುವುದರಿಂದ ಅವಳ ಸಂಗ ಮಾಡಬಾರದೆಂದೂ ಆ ಕಾರಣಕ್ಕಾಗಿ ಲೋಕಾಪವಾದದ ನೆಪ ಮಾಡಿಕೊಂಡು ಅವಳನ್ನು ಸ್ವಲ್ಪ ಕಾಲ ವಾಲ್ಮೀಕಿ ಮಹರ್ಷಿಗಳ ಆಶ್ರಮಕ್ಕೆ ಕಳಿಸುವೆನೆಂದೂ ಹೇಳುತ್ತಾನೆ.ಆಗ ಜನಕನು ಒಪ್ಪಿ ಸೀತೆಯ ಅನುಕೂಲಕ್ಕಾಗಿ ವಾಲ್ಮೀಕಿ ಮಹರ್ಷಿಗಳ ಆಶ್ರಮದಲ್ಲಿ ಒಂದು ದೊಡ್ಡ ಮನೆಯನ್ನು ನಿರ್ಮಿಸುತ್ತಾನೆ.ಅನಂತರ, ರಾಮನಿಗೆ ಗೂಢಚಾರಿಯ ಮೂಲಕ ಜನರು, ಅದರಲ್ಲೂ ಒಬ್ಬ ಅಗಸ ತಾನು ಸೀತೆಯನ್ನು ಕರೆತಂದುದರ ಬಗ್ಗೆ ತಪ್ಪಾಗಿ ಮಾತನಾಡಿಕೊಳ್ಳುತ್ತಿದ್ದರೆಂದು ಕೇಳುತ್ತಾನೆ.ಅದೇ ಸಮಯದಲ್ಲಿ ಕೈಕೇಯಿ ಸೀತೆಗೆ ರಾವಣನ ಚಿತ್ರವನ್ನು ಗೋಡೆಯ ಮೇಲೆ ರಚಿಸುವಂತೆ ಹೇಳುತ್ತಾಳೆ.ಆದರೆ ಸೀತೆಯು ತಾನು ರಾವಣನನ್ನು ನೋಡಿಯೇ ಇಲ್ಲವೆಂದೂ ಕೇವಲ ಅವನ ಕಾಲಿನ ಹೆಬ್ಬೆರಳನ್ನು ಮಾತ್ರ ನೋಡಿರುವೆನೆಂದೂ ಹೇಳುತ್ತಾಳೆ.ಅದನ್ನೇ ಚಿತ್ರಿಸುವಂತೆ ಕೈಕೇಯಿ ಹೇಳಲು, ಸೀತೆಯು ಅದನ್ನು ಚಿತ್ರಿಸುತ್ತಾಳೆ.ಅವಳು ಹೋದ ಬಳಿಕ, ಕೈಕೇಯಿ ಆದರಿಂದ ರಾವಣನ ಸಂಪೂರ್ಣ ಚಿತ್ರವನ್ನು ರಚಿಸಿ, ರಾಮನು ಅಲ್ಲಿ ಬಂದಾಗ, ಸೀತೆಯೇ ಆ ಚಿತ್ರವನ್ನು ರಚಿಸಿದಳೆಂದೂ ಅವಳ‌ ಮನಸ್ಸಿನಲ್ಲಿ ರಾವಣನೇ ಇರುವನೆಂದೂ ಹೇಳುತ್ತಾಳೆ.ಇದನ್ನೇ ನೆಪ ಮಾಡಿಕೊಂಡು ರಾಮನು ಲಕ್ಷ್ಮಣನಿಗೆ ಸೀತೆಯನ್ನು ಕಾಡಿನಲ್ಲಿ ಬಿಟ್ಟು ಬರಲು ಹೇಳುತ್ತಾನೆ.ಅಂತೆಯೇ ಲಕ್ಷ್ಮಣನು ಅವಳನ್ನು ವಾಲ್ಮೀಕಿ ಮಹರ್ಷಿಗಳ ಆಶ್ರಮದ ಬಳಿ ಬಿಟ್ಟು ಬರುತ್ತಾನೆ.ಸೀತೆಯು ವಾಲ್ಮೀಕಿ ಮಹರ್ಷಿಗಳ ಆರೈಕೆಯಲ್ಲಿ ಲವ,ಕುಶರೆಂಬ ಮಕ್ಕಳಿಗೆ ಜನ್ಮ ಕೊಟ್ಟು ಅವರೊಂದಿಗೆ ಮುಂದೆ ರಾಮನು ಅಶ್ವಮೇಧ ಯಜ್ಞಕ್ಕೆ ಬಂದಾಗ, ರಾಮನು ಸೀತೆಗೆ ಜನರ ಮುಂದೆ ತನ್ನ ಪಾತಿವ್ರತ್ಯದ ವಿಷಯವಾಗಿ ಪ್ರತಿಜ್ಞೆ ಮಾಡಲು ಹೇಳುತ್ತಾನೆ.ಸೀತೆಯು ತಾನು ರಾಮನನ್ನು ಬಿಟ್ಟು ಬೇರಾರನ್ನೂ ಮನಸ್ಸಿನಲ್ಲಿ ನೆನೆಸದಿದ್ದರೆ ಭೂಮಿಯು ಬಿರಿದು ತನ್ನನ್ನು ಕರೆದೊಯ್ಯಲು ಹೇಳುತ್ತಾಳೆ.ಆಗ ಭೂಮಿಯು ಬಿರಿದು, ಭೂದೇವಿಯು ಒಂದು ಸಿಂಹಾಸನದಲ್ಲಿ ಸೀತೆಯನ್ನು ಕೂರಿಸಿಕೊಂಡು ಹೋಗುತ್ತಾಳೆ.ಆಗ ರಾಮನು ಸೀತೆಯನ್ನು ಹಿಂದಿರುಗಿಸಲು ಪ್ರಾರ್ಥಿಸುತ್ತಾನೆ.ಆದರೆ ಭೂದೇವಿಯು ಒಪ್ಪದಿರಲು ರಾಮನು ಅವಳನ್ನು ಆಗ್ರಹಿಸಿ, ಅವಳನ್ನು ಕೊಲ್ಲಲು ಧನುರ್ಬಾಣಗಳನ್ನು ತರಲು ಲಕ್ಷ್ಮಣನಿಗೆ ಹೇಳುತ್ತಾನೆ.ಆಗ ಭೂದೇವಿಯು ಸೀತೆಯನ್ನು ರಾಮನಿಗೆ ಒಪ್ಪಿಸುತ್ತಾಳೆ.ಹೀಗೆ ಇಲ್ಲಿ ರಾಮನು ಸೀತೆಯನ್ನು ಪುನಃ ಸ್ವೀಕರಿಸಿ ಅನೇಕ ವರ್ಷಗಳ ಕಾಲ ಅವಳೊಂದಿಗೆ ಸುಖವಾಗಿ ಬಾಳುತ್ತಾನೆ.
      ಹೀಗೆ ರಾಮಕಥೆಯನ್ನು ಆಳವಾಗಿ ಓದುತ್ತಾ ಇತರ ರಾಮಾಯಣಗಳನ್ನೂ ಪುರಾಣಗಳನ್ನೂ ಓದುತ್ತಾ ಹೋದರೆ ನಮಗೆ ಅನೇಕ ಪೌರಾಣಿಕ ಸ್ವಾರಸ್ಯಗಳು ಸಿಗುತ್ತವೆ.

ಸುಂದರೀಶತಕ -೧೭

ಸಂಸ್ಕೃತ ಮೂಲ 

ಕರನಖಲಲಿತಭುಜಾಯಾ: ಪಲ್ಲವಕುಸುಮಾಭಿರಾಮಲತಿಕಾಯಾ: / 
ಅನಯೋರ್ವಿಶೇಷದರ್ಶೀ ಸುಂದರಿ ಕುಸುಮೇಷುರೇವೈಕ: //

ಕನ್ನಡ ಅನುವಾದ 

    ' ಎಲೈ ಸುಂದರಿ! ನಿನ್ನ ಕೈಗಳು ಹಾಗೂ ನಖಗಳುಳ್ಳ ಲಲಿತ ಭುಜಗಳ ಹಾಗೂ ಎಳೆ ಚಿಗುರುಗಳು ಹಾಗೂ ಪುಷ್ಪಗಳುಳ್ಳ ಮನೋಹರ ಲತೆಗಳ ನಡುವೆ ಇರುವ ವ್ಯತ್ಯಾಸವನ್ನು ಪುಷ್ಪಬಾಣನಾದ ಕಾಮದೇವನೊಬ್ಬನೇ ನೋಡಬಲ್ಲನು!' 
    ಸುಂದರಿಯ ಸುಂದರ ಕರನಖಗಳುಳ್ಳ ಲಲಿತಭುಜಗಳು ಹಾಗೂ ಪಲ್ಲವಪುಷ್ಪಗಳುಳ್ಳ ಮನೋಹರ ಲತೆಗಳು ಬಹಳಷ್ಟು ಸಾಮ್ಯತೆಗಳನ್ನು ಹೊಂದಿವೆ! ಇವುಗಳ ನಡುವಿನ ವಿಶೇಷ ಅಥವಾ ವ್ಯತ್ಯಾಸವನ್ನು ಕಾಮದೇವನೊಬ್ಬನೇ ಗಮನಿಸಬಲ್ಲ ಎಂದು ಕವಿಯು ಸುಂದರಿಯ ಸುಂದರ ತೋಳುಗಳನ್ನು ವರ್ಣಿಸುತ್ತಾನೆ.

ಭಾನುವಾರ, ಏಪ್ರಿಲ್ 5, 2026

ಪೌರಾಣಿಕ ಸ್ವಾರಸ್ಯಗಳು-- ಭಗವಂತನೊಡನೆ ಹೋರಾಡಿದ ಭಕ್ತ

ಪ್ರಹ್ಲಾದನ ಹೆಸರು ಕೇಳಿದ ಕೂಡಲೇ ನಮಗೆ ಆ ಬಾಲ ಭಾಗವತೋತ್ತಮನ ಮುಖ ಮನಸ್ಸಿನಲ್ಲಿ ಮೂಡುತ್ತದೆ! ತಂದೆ ಹಿರಣ್ಯಕಶಿಪು ಹರಿದ್ವೇಷಿಯಾಗಿದ್ದರೆ ಮಗ ಪ್ರಹ್ಲಾದ ಮಹಾನ್ ಹರಿಭಕ್ತ! ಇದನ್ನು ಸಹಿಸದೆ, ತಂದೆ ಹಿರಣ್ಯಕಶಿಪುವು ಅವನನ್ನು ಕೊಲ್ಲಿಸಲು ವಿಷಪ್ರಾಶನವೂ ಸೇರಿದಂತೆ ಹಲವಾರು ಪ್ರಯತ್ನಗಳನ್ನು ಮಾಡಿದರೂ ಭಗವಂತನ ಮೇಲಿನ ದೃಢ ಭಕ್ತಿಯಿಂದ ಅವನ ಕೃಪೆಗೊಳಗಾಗಿ ಪ್ರಹ್ಲಾದನು ಆ ಎಲ್ಲ ದಂಡನೆಗಳಿಂದಲೂ ಪಾರಾಗುತ್ತಾನೆ. ಕೊನೆಗೆ ಬಾಲಭಕ್ತನಿಗೊಲಿದು, ಹರಿಯು ಎಲ್ಲಿರುವನೆಂಬ ತಂದೆಯ ಪ್ರಶ್ನೆಗೆ, ಅವನು ಎಲ್ಲೆಲ್ಲೂ ಇರುವನೆಂಬ ಆ ಬಾಲಕನ ದೃಢ ವಿಶ್ವಾಸವನ್ನು ನಿರೂಪಿಸಲು, ತಂದೆಯು ಒಂದು ಕಂಬದಲ್ಲಿರುವನೇ ಎಂದು ಅದನ್ನು ಒಡೆದಾಗ, ಆ ಕಂಬದಲ್ಲೇ ನರಸಿಂಹಾವತಾರಿಯಾಗಿ ಬಂದು ಹರಿಯು ಹಿರಣ್ಯಕಶಿಪುವನ್ನು ಸಂಹರಿಸಿ ಪ್ರಹ್ಲಾದನಿಗೆ ದಾನವರಾಜ್ಯದ ಪಟ್ಟಗಟ್ಟಿ ಹರಸುತ್ತಾನೆ! ಇದು ಎಲ್ಲರಿಗೂ ಗೊತ್ತಿರುವ ಅತ್ಯಂತ ಜನಪ್ರಿಯ ಕಥೆ. ಇಂಥ ಪ್ರಹ್ಲಾದನು, ತನ್ನ ಆರಾಧ್ಯ ದೈವ ಶ್ರೀಹರಿಯೊಂದಿಗೇ ಹೋರಾಡಿದನೆಂದರೆ ಆಶ್ಚರ್ಯವಾಗುವುದಲ್ಲವೇ? ಆದರೆ ಅದು ನಿಜ! ಪ್ರಹ್ಲಾದನು ಒಮ್ಮೆ ತಿಳಿಯದೆಯೇ ಹರಿಯೊಂದಿಗೇ ಸೆಣೆಸಿದ! ತಂದೆ -ಮಗ, ಅಣ್ಣ -ತಮ್ಮ, ಭಕ್ತ -ಭಗವಂತ, ಇಂಥವರ ನಡುವೆ ತಿಳಿದೋ ತಿಳಿಯದೆಯೋ ನಡೆಯುವ ಸ್ನೇಹ ಕಲಹಗಳು ಸ್ವಾರಸ್ಯಕರವಾಗಿರುತ್ತವೆ! ಇವು ಚಲನಚಿತ್ರ ಕಥೆಗಳಲ್ಲಷ್ಟೇ ಅಲ್ಲದೇ ಪುರಾಣ ಕಥೆಗಳಲ್ಲೂ ಬಹಳಷ್ಟಿವೆ! ಭಗವಂತನೂ ತನ್ನ ಭಕ್ತರ ದರ್ಪಾಹಂಕಾರಗಳನ್ನು ಮಣಿಸಲು ಅವರೊಂದಿಗೆ ಹೋರಾಡಲು ಬಯಸುವನೋ ಏನೋ! ಪ್ರಹ್ಲಾದನ ಈ ವಿಭಿನ್ನ ಕಥೆ ವಾಮನ ಪುರಾಣ ಮತ್ತು ದೇವೀಭಾಗವತ ಪುರಾಣಗಳಲ್ಲಿ ಬಂದಿದೆ. ಆ ಕಥೆಯನ್ನೀಗ ನೋಡೋಣ.
     ಒಮ್ಮೆ, ಚ್ಯವನ ಮಹರ್ಷಿಗಳು ನಕುಲೀಶ್ವರವೆಂಬ ತೀರ್ಥಕ್ಷೇತ್ರದಲ್ಲಿ , ನರ್ಮದಾ ನದಿಯಲ್ಲಿ ಸ್ನಾನ ಮಾಡಲು ಹೋದರು. ಅಲ್ಲಿ, ಶಿವನ ದರ್ಶನ ಮಾಡಿ ನದಿಯಲ್ಲಿ ಸ್ನಾನ ಮಾಡಲು ಕಾಲಿಡುತ್ತಿದ್ದಂತೆ, ಕೇಕರಲೋಹಿತವೆಂಬ ಸರ್ಪವು ಅವರ ಕಾಲನ್ನು ಹಿಡಿಯಿತು! ಆಗ ಚ್ಯವನರು ಶ್ರೀಹರಿಯನ್ನು ಸ್ಮರಿಸಿದರು.‌ ಅದರಿಂದ ಆ ಸರ್ಪವು ವಿಷರಹಿತವಾಯಿತು! ಆದರೆ ಅದು ಅವರನ್ನು ರಸಾತಳ ಲೋಕಕ್ಕೆ ಸೆಳೆದೊಯ್ಯಿತು! ಅನಂತರ ಅದು ಅವರನ್ನು ಬಿಟ್ಟು ಹೊರಟುಹೋಯಿತು! 
      ಭಾರ್ಗವೋತ್ತಮರಾದ ಚ್ಯವನರು ರಸಾತಳದಲ್ಲಿ ಸಂಚರಿಸುತ್ತಿದ್ದಂತೆ ನಾಗಸ್ತ್ರೀಯರು ಅವರನ್ನು ಸ್ವಾಗತಿಸಿ ನಮಸ್ಕರಿಸಿದರು! ಅವರು ಹಾಗೆಯೇ ಹೋಗುತ್ತಾ  ದಾನವ ರಾಜ್ಯವನ್ನು ಪ್ರವೇಶಿಸಲು, ದಾನವ ಪ್ರಮುಖರಿಂದ ಸೇವಿಸಲ್ಪಡುತ್ತಿದ್ದ ದಾನವ ಚಕ್ರವರ್ತಿ ಪ್ರಹ್ಲಾದನು ಅವರನ್ನು ನೋಡಿ ಸ್ವಾಗತಿಸಿ ಆಸನವನ್ನರ್ಪಿಸಿ ಕುಶಲವನ್ನು ವಿಚಾರಿಸಿದನು. ಆಗ ಅವರು ತಾವು ಅಲ್ಲಿಗೆ ಬಂದ ಬಗೆಯನ್ನು ವಿವರಿಸಿದರು. ಅದನ್ನು ಕೇಳಿ ಪ್ರಹ್ಲಾದನು ಭೂಮಿ, ಅಂತರಿಕ್ಷ ಹಾಗೂ ರಸಾತಳಗಳಲ್ಲಿರುವ ಶ್ರೇಷ್ಠ ತೀರ್ಥಕ್ಷೇತ್ರಗಳಾವುವೆಂದು ಕೇಳಿದನು. ಅದಕ್ಕೆ ಚ್ಯವನರು,' ಭೂಮಿಯಲ್ಲಿ ನೈಮಿಷಾರಣ್ಯವೂ ಅಂತರಿಕ್ಷದಲ್ಲಿ ಪುಷ್ಕರ ಕ್ಷೇತ್ರವೂ ರಸಾತಳದಲ್ಲಿ ಚಕ್ರತೀರ್ಥವೂ ಪ್ರಸಿದ್ಧವಾಗಿವೆ!" ಎಂದು ಹೇಳಿದರು.ಇದನ್ನು ಕೇಳಿ ಪ್ರಹ್ಲಾದನಿಗೆ ನೈಮಿಷಾರಣ್ಯವನ್ನು ಸಂದರ್ಶಿಸಿ ಶ್ರೀಹರಿಯ ದರ್ಶನ ಪಡೆಯಬೇಕೆಂದು ಆಸೆಯಾಯಿತು. ಅಂತೆಯೇ ಅವನು ತನ್ನ ದೈತ್ಯ ಪರಿವಾರದೊಂದಿಗೆ ನೈಮಿಷಾರಣ್ಯಕ್ಕೆ ಹೊರಟನು. 
        ಪ್ರಹ್ಲಾದನು ನೈಮಿಷಾರಣ್ಯದಲ್ಲಿ ಪುಣ್ಯಸ್ನಾನ ಮಾಡಿ ಅನಂತರ ಬೇಟೆಗೆ ಹೋದನು. ಆಗ ಅವನು ಸರಸ್ವತೀ ನದಿಯಿಂದ ಸ್ವಲ್ಪವೇ ದೂರದಲ್ಲಿ ಒಂದು ಸಾಲವೃಕ್ಷವನ್ನು ಕಂಡನು. ವಿಶೇಷವೆಂದರೆ ಆ ಸಾಲವೃಕ್ಷದ ಕಾಂಡ ಮತ್ತು ರೆಂಬೆ ಕೊಂಬೆಗಳು ಬಾಣಗಳಿಂದ ತುಂಬಿದ್ದವು! ಕೆಲವು ಬಾಣಗಳು ಪರಸ್ಪರ ಅಂಟಿಕೊಂಡು ಸರ್ಪಗಳಂತೆ ಸುರುಳಿ ಸುತ್ತಿಕೊಂಡಿದ್ದವು! ಇದನ್ನು ನೋಡಿ ಕೋಪಗೊಂಡು ಪ್ರಹ್ಲಾದನು ಮುಂದೆ ಬಂದಾಗ ಇಬ್ಬರು ತಪಸ್ವಿಗಳು ಜಟೆಗಟ್ಟಿದ ಕೇಶದಿಂದ ಕೂಡಿದ್ದು ಮೃಗಚರ್ಮ ಧರಿಸಿ ತಪಸ್ಸು ಮಾಡುತ್ತಿದ್ದುದನ್ನು ಕಂಡನು. ಅವರ ಬಳಿ ಮಂಗಳಕರ ಚಿಹ್ನೆಗಳಿಂದ ಕೂಡಿದ್ದ ಶಾರ್ಙ್ಗ ಮತ್ತು ಅಜಗವ ಎಂಬ ಎರಡು ದಿವ್ಯ ಧನುಸ್ಸುಗಳೂ ಅಕ್ಷಯ ಬತ್ತಳಿಕೆಗಳೂ ಇದ್ದವು! 
     ಅವರಿಬ್ಬರನ್ನೂ ನೋಡಿ ಪ್ರಹ್ಲಾದನು ಅವರನ್ನು ಡಾಂಭಿಕರೆಂದು ಭಾವಿಸಿ ಹೇಳಿದನು," ಧರ್ಮವನ್ನು ನಾಶಮಾಡುವ ಇಂಥ ದಂಭಾಚಾರವನ್ನೇಕೆ ಮಾಡುತ್ತಿರುವಿರಿ? ಎಲ್ಲಿಯ ಜಟೆಗಟ್ಟಿದ ತಲೆ? ಎಲ್ಲಿಯ ಈ ದೊಡ್ಡ ಆಯುಧಗಳು? ಒಂದಕ್ಕೊಂದು ಸಂಬಂಧವೇ ಇಲ್ಲ!" 
    ಆ ಇಬ್ಬರೂ ಮಹಾವಿಷ್ಣುವಿನ ಅವತಾರಗಳಾದ ನರ, ನಾರಾಯಣರಾಗಿದ್ದರು! ಧರ್ಮ ಪ್ರಜಾಪತಿ ಮತ್ತು ಅವನ ಪತ್ನಿ ರುಚಿಗೆ ಹುಟ್ಟಿ ಲೋಕಕಲ್ಯಾಣಕ್ಕಾಗಿ ತಪಶ್ಚರ್ಯೆಯಲ್ಲಿ ತೊಡಗಿದ್ದರು. ಅವರಲ್ಲಿ ನರನು ಹೇಳಿದನು," ಎಲೈ ದೈತ್ಯರಾಜ! ಈ ವಿಷಯ ನಿನಗೇಕೆ? ಸಾಮರ್ಥ್ಯವಿರುವವನು ಯಾವ ಕಾರ್ಯವನ್ನಾದರೂ ಮಾಡುತ್ತಾನೆ!" 
    ಅದಕ್ಕೆ ಪ್ರಹ್ಲಾದನು," ದೈತ್ಯರಾಜನಾದ ನಾನು ಧರ್ಮಸೇತುವೆಯ ಪ್ರವರ್ತಕನಾಗಿ ಇಲ್ಲಿರುವಾಗ ನಿಮಗೆ ಯಾವ ಸಾಮರ್ಥ್ಯವಿದೆ?" ಎಂದನು.
   ಆಗ ನರನು," ನಮಗೆ ಆ ಸಾಮರ್ಥ್ಯವಿದೆ! ಈ ನರ, ನಾರಾಯಣರನ್ನು ಯುದ್ಧದಲ್ಲಿ ಯಾರೂ ಗೆಲ್ಲಲಾರರು!" 
    ಇದರಿಂದ ಕುಪಿತಗೊಂಡ ಪ್ರಹ್ಲಾದನು ಒಂದು ಪ್ರತಿಜ್ಞೆ ಮಾಡಿದನು," ಹೇಗಾದರೂ ಈ ನರ,ನಾರಾಯಣರನ್ನು ನಾನು ಯುದ್ಧದಲ್ಲಿ ಗೆಲ್ಲುವೆ!" 
     ಹೀಗೆ ಹೇಳಿ ಅವನು ತನ್ನ ಸೈನ್ಯವನ್ನು ನೈಮಿಷಾರಣ್ಯದ ಹೊರಗೆ ನಿಲ್ಲಿಸಿ ನರ, ನಾರಾಯಣರೊಂದಿಗೆ ದ್ವಂದ್ವ ಯುದ್ಧಕ್ಕೆ ಸಿದ್ಧನಾದನು. ಅವನು ತನ್ನ ಧನುಸ್ಸನ್ನು ಬಾಗಿಸಿ ಶಿಂಜಿನಿಯನ್ನು ಎಳೆದು ದೊಡ್ಡ ಠೇಂಕಾರ ಶಬ್ದ ಮಾಡಿದನು! ಆಗ ನರನು ತನ್ನ ಅಜಗವ ಧನುಸ್ಸನ್ನು ಬಾಗಿಸಿ ಅನೇಕ ಬಾಣಗಳನ್ನು ಪ್ರಯೋಗಿಸಿದನು! ಪ್ರಹ್ಲಾದನು ಅವೆಲ್ಲವನ್ನೂ ತನ್ನ ಬಂಗಾರದ ಗರಿಗಳ ಅಸಮಾನ ಬಾಣಗಳಿಂದ ತುಂಡರಿಸಿದನು! ನರನು ಒಂದು ಬಾಣ ಬಿಟ್ಟರೆ ಪ್ರಹ್ಲಾದನು ಎರಡು ಬಾಣಗಳನ್ನು ಬಿಟ್ಟನು! ನರನು ಮೂರನ್ನು ಬಿಟ್ಟರೆ ಪ್ರಹ್ಲಾದನು ನಾಲ್ಕನ್ನು ಬಿಟ್ಟನು! ಹೀಗೆ ಯುದ್ಧ ಮಾಡುತ್ತಾ ಇಬ್ಬರೂ ಅಸಂಖ್ಯ ಬಾಣಗಳನ್ನು ಬಿಟ್ಟರು! ನರನು ಬಾಣಗಳಿಂದ ಇಡೀ ಭೂಮಿಯನ್ನೂ ದಿಕ್ಕುಗಳನ್ನೂ ಆಕಾಶವನ್ನೂ ಮುಚ್ಚಿದರೆ, ಪ್ರಹ್ಲಾದನು ತನ್ನ ಬಾಣಗಳ ರಾಶಿಯಿಂದ ಅವನ್ನು ಭೇದಿಸಿದನು! ಅನಂತರ ಪ್ರಹ್ಲಾದನು ನರನ ಮೇಲೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದನು! ಆಗ ನರನು ಅದನ್ನು ಮಹೇಂದ್ರಾಸ್ತ್ರದಿಂದ ಭೇದಿಸಿ ವಿಫಲಗೊಳಿಸಿದನು! ಆಗ ಪ್ರಹ್ಲಾದನು ತನ್ನ ಗದೆಯನ್ನು ಎತ್ತಿಕೊಂಡು ರಥದಿಂದ ಧುಮುಕಿ ನರನ ಕಡೆಗೆ ಓಡಿ ಬರಲು, ನಾರಾಯಣನು ಶಾರ್ಙ್ಗ ಧನುಸ್ಸನ್ನು ಹಿಡಿದು ಯುದ್ಧ ಮಾಡಲು ಮುಂದೆ ಬಂದು ನರನನ್ನು ತಡೆದನು. ಪ್ರಹ್ಲಾದನು ತನ್ನ ಗದೆಯನ್ನು ಬಲವಾಗಿ ಬೀಸಿ ನಾರಾಯಣನ ತಲೆಗೆ ಬಡಿಯಲು, ನಾರಾಯಣನ ಕಂಗಳಿಂದ ಬೆಂಕಿಯ ಮಳೆಯಂತೆ ನೀರು ಸುರಿಯಿತು! ಆದರೆ ಪ್ರಹ್ಲಾದನ ಗದೆಯು ಅವನ ತಲೆಯ ಮೇಲೆ ಪರ್ವತ ಶಿಖರದ ಮೇಲೆ ಸಿಡಿಲು ಬಡಿಯುವಂತೆ ಬಡಿದು ಚೂರು ಚೂರಾಯತು! 
    ಆಗ ಪ್ರಹ್ಲಾದನು ಪುನಃ ತನ್ನ ರಥಕ್ಕೆ ಹಿಂದಿರುಗಿ ನಾರಾಯಣನೊಂದಿಗೆ ಧನುರ್ಯುದ್ಧ ಮಾಡತೊಡಗಿದನು! ಇಬ್ಬರೂ ವೀರರು ಭಯಂಕರವಾಗಿ ಹೋರಾಡುತ್ತಾ ದಿಕ್ಕುಗಳನ್ನು ಬಾಣಗಳಿಂದ ಮುಚ್ಚಿ ಪರಸ್ಪರರ ಮರ್ಮಸ್ಥಾನಗಳನ್ನು ಪೀಡಿಸಿದರು! ದೇವತೆಗಳು ಈ ಭಯಂಕರ ಯುದ್ಧವನ್ನು ವೀಕ್ಷಿಸಲು ಆಕಾಶದಲ್ಲಿ ನೆರೆದು ಇಬ್ಬರ ಮೇಲೂ ಪುಷ್ಪವೃಷ್ಟಿ ಮಾಡಿದರು! ನಾರಾಯಣನು ತನ್ನ ಬಾಣಗಳಿಂದ ಪ್ರಹ್ಲಾದನ ಬಿಲ್ಲುಗಳನ್ನು ಒಂದೊಂದಾಗಿ ಮುರಿದನು! ಆಗ ಪ್ರಹ್ಲಾದನು ಸರ್ವಲೋಹಮಯವಾದ ಪರಿಘಾಯುಧವನ್ನು ತೆಗೆದುಕೊಂಡು ತಿರುಗಿಸತೊಡಗಿದನು! ನಾರಾಯಣನು ಅದನ್ನೂ ತನ್ನ ಬಾಣದಿಂದ ತುಂಡರಿಸಿದನು! ಅನಂತರ, ಪ್ರಹ್ಲಾದನು ತೆಗೆದುಕೊಂಡ ಗದೆ, ಪಾಶ, ಶಕ್ತ್ಯಾಯುಧ, ಮೊದಲಾದ ಆಯುಧಗಳನ್ನು ನಾರಾಯಣನು ತುಂಡರಿಸಿದನು! ಆಗ ಪ್ರಹ್ಲಾದನು ಪುನಃ ಒಂದು ಬಿಲ್ಲನ್ನು ತೆಗೆದುಕೊಂಡು ಬಾಣಗಳ ರಾಶಿಯನ್ನು ಹರಡಿದನು! ಆಗ ನಾರಾಯಣನು ದೈತ್ಯರಾಜನ ಎದೆಗೆ ಒಂದು ಬಾಣದಿಂದ ಹೊಡೆಯಲು, ಅವನು ರಥದಲ್ಲೇ ಕುಸಿದನು! ಆಗ ಪ್ರಹ್ಲಾದನ ಸಾರಥಿಯು ರಥವನ್ನು ಬೇರೆಡೆಗೆ ಓಡಿಸಿದನು. ಬೇಗನೆ ಪ್ರಹ್ಲಾದನಿಗೆ ಪ್ರಜ್ಞೆ ಮರುಕಳಿಸಲು, ಅವನು ಬಲವಾದ ಬಿಲ್ಲನ್ನೆತ್ತಿಕೊಂಡು ಪುನಃ ಯುದ್ಧಕ್ಕೆ ಬಂದನು. ಆಗ ನಾರಾಯಣನು, " ಈಗ ನೀನು ಹೋಗಿ ಆಹ್ನಿಕವನ್ನು ಪೂರೈಸು! ಯುದ್ಧವನ್ನು ನಾಳೆ ಮುಂದುವರೆಸೋಣ!" ಎಂದನು.
  ಅದರಂತೆ ಪ್ರಹ್ಲಾದನು ಯುದ್ಧದಿಂದ ವಿರಮಿಸಿ ಆಹ್ನಿಕವನ್ನಾಚರಿಸಿದನು.‌ ಆ ರಾತ್ರಿ ಅವನು ನಾರಾಯಣನು ಯುದ್ಧ ಮಾಡಿದ ರೀತಿಯನ್ನು ನೆನೆಸಿಕೊಂಡು  ಈ ಡಾಂಭಿಕನನ್ನು ಯುದ್ಧದಲ್ಲಿ ಹೇಗೆ ಗೆಲ್ಲುವುದೆಂದು ಚಿಂತಿಸಿದನು. ಅನಂತರ ಮರುದಿನ ಯುದ್ಧ ಮುಂದುವರೆಯಿತು. ಹೀಗೆಯೇ ಒಂದು ಸಾವಿರ ವರ್ಷಗಳ ಕಾಲ ಯುದ್ಧ ಮುಂದುವರೆಯಿತು. ಆದರೂ ಪ್ರಹ್ಲಾದನಿಗೆ ನಾರಾಯಣನನ್ನು ಗೆಲ್ಲಲಾಗಲಿಲ್ಲ. ಆಗ ಅವನು ಮಹಾವಿಷ್ಣುವನ್ನು ಧ್ಯಾನಿಸಿದನು. ಭಗವಾನ್ ವಿಷ್ಣುವು ಪ್ರತ್ಯಕ್ಷನಾಗಲು, ಪ್ರಹ್ಲಾದನು," ಓ ದೇವದೇವೇಶ! ನಾನು ಈ ನಾರಾಯಣನನ್ನು ಯುದ್ಧದಲ್ಲಿ ಗೆಲ್ಲಲಾಗುತ್ತಿಲ್ಲ! ದಯವಿಟ್ಟು ಏಕೆಂದು ಹೇಳು!" ಎಂದು ಕೇಳಿಕೊಂಡನು.
    ಆಗ ಮಹಾವಿಷ್ಣುವು ಹೇಳಿದನು," ಪ್ರಹ್ಲಾದ! ಧರ್ಮ ಪ್ರಜಾಪತಿಯ ಪುತ್ರನಾದ ನಾರಾಯಣನು ಬ್ರಾಹ್ಮಣೋತ್ತಮನೂ ಮಹಾಜ್ಞಾನಿಯೂ ಮಹಾಪರಾಕ್ರಮಿಯೂ ಆಗಿರುವನು! ಅವನನ್ನು ದೇವತೆಗಳಾಗಲೀ ಅಸುರರಾಗಲೀ ಯುದ್ಧದಲ್ಲಿ ಗೆಲ್ಲಲು ಸಾಧ್ಯವಿಲ್ಲ!" 
     " ಅವನನ್ನು ಯುದ್ಧದಲ್ಲಿ ಗೆಲ್ಲಲಾಗದಿದ್ದರೆ ಇನ್ನು ಹೇಗೆ ಗೆಲ್ಲುವುದು? ಅವನನ್ನು ಗೆಲ್ಲುವೆನೆಂದು ನಾನು ಪ್ರತಿಜ್ಞೆ ಮಾಡಿದ್ದೇನೆ! ಪ್ರತಿಜ್ಞಾಭಂಗ ಮಾಡಿ ನನ್ನಂಥವರು ಬದುಕುವುದಾದರೂ ಹೇಗೆ? ಆದ್ದರಿಂದ ನಾನು ನಿನ್ನೆದುರೇ ನನ್ನ ದೇಹವನ್ನು ಶೋಷಿಸಿಬಿಡುತ್ತೇನೆ!" " ಪ್ರಹ್ಲಾದನು ಹೇಳಿ, ಕೂಡಲೇ ಶಿರಸ್ನಾನ ಮಾಡಿ ವೇದಮಂತ್ರಗಳನ್ನು ಪಠಿಸುತ್ತಾ ನಿಂತುಬಿಟ್ಟನು!
   ಆಗ ವಿಷ್ಣುವು," ಪ್ರಹ್ಲಾದ! ಅವನನ್ನು ಭಕ್ತಿಯಿಂದಷ್ಟೇ ಗೆಲ್ಲಬಲ್ಲೆ! ಯುದ್ಧದಿಂದಲ್ಲ!" ಎಂದನು 
     " ಓ ಪ್ರಭು! ಅವನು ಮೂರು ಲೋಕಗಳಲ್ಲೂ ಅಜೇಯನಾದರೂ ನಿನ್ನ ಕೃಪೆಯಿಂದ ನನ್ನ ಮುಂದೆ ನಿಲ್ಲುವಂತಾಗಬಾರದಲ್ಲವೇ? ನಿನ್ನ ಕೃಪೆಯಿಂದ ಇಂದ್ರನನ್ನೂ ಗೆದ್ದಿರುವ ನನಗೆ ಈ ಧರ್ಮಪುತ್ರನು ಯಾವ ಮಾತು?" ಪ್ರಹ್ಲಾದನು ಹೇಳಿದನು.
   " ಎಲೈ ದಾನವಶಾರ್ದೂಲ! ಅವನು ನಾನೇ ಆಗಿದ್ದೇನೆ! ನರ,ನಾರಾಯಣರಿಬ್ಬರೂ ನನ್ನ ಅವತಾರಗಳೇ ಆಗಿದ್ದಾರೆ! ಲೋಕಕಲ್ಯಾಣಕ್ಕಾಗಿ ನಾನು ಈ ಅವತಾರಗಳನ್ನೆತ್ತಿ ತಪಶ್ಚರ್ಯೆಯಲ್ಲಿ ತೊಡಗಿದ್ದೇನೆ! ಆದ್ದರಿಂದ ಹೋಗು! ನಿನಗೆ ಜಯವು ಬೇಕೆಂದರೆ ನಾರಾಯಣನನ್ನು ಭಕ್ತಿಯಿಂದ ಆರಾಧಿಸು!" ವಿಷ್ಣುವು ಹೀಗೆ ಹೇಳಿ ಅಂತರ್ಧಾನನಾದನು.
    ನರ, ನಾರಾಯಣರು ತನ್ನ ಆರಾಧ್ಯದೈವವಾದ ಮಹಾವಿಷ್ಣುವಿನ ಅವತಾರಗಳೇ ಎಂದು ಕೇಳಿದಾಗ ಪ್ರಹ್ಲಾದನಿಗೆ ಸಮಾಧಾನವಾಯಿತು. ಅವನು ಕೂಡಲೇ ಹಿರಣ್ಯಾಕ್ಷನ ಪುತ್ರನಾದ ಅಂಧಕಾಸುರನನ್ನು ಕರೆದು ಅವನಿಗೆ ರಾಜ್ಯವನ್ನೊಪ್ಪಿಸಿ ನರ,ನಾರಾಯಣರ ಬಳಿಗೆ ತೆರಳಿದನು. ಅವನು ಅವರಿಗೆ ಕೈಮುಗಿದುಕೊಂಡು ಅವರ ಪಾದಾಭಿವಂದನೆ ಮಾಡಿದನು. ಆಗ ನಾರಾಯಣನು," ಎಲೈ ಮಹಾಸುರನೇ! ಏಕೆ ನನ್ನನ್ನು ಜಯಿಸದೇ ನನಗೆ ನಮಸ್ಕರಿಸುತ್ತಿರುವೆ?" ಎಂದು ಕೇಳಿದನು.
    ಅದಕ್ಕೆ ಪ್ರಹ್ಲಾದನು ಹೇಳಿದನು," ಪ್ರಭು! ನಿನ್ನನ್ನು ಜಯಿಸಲು ಯಾರು ಶಕ್ತರು? ನಿನಗಿಂತ ಅಧಿಕರಾದವರು ಯಾರು? ನೀನು ಅನಂತನಾದ ನಾರಾಯಣನು! ಪೀತಾಂಬರಧಾರಿಯಾದ ಜನಾರ್ದನನು! ಶಾರ್ಙ್ಗ ಧನುಸ್ಸನ್ನು ಹಿಡಿದಿರುವ ಮಹಾವಿಷ್ಣು! ದೇವದೇವನಾದ ಪುಂಡರೀಕಾಕ್ಷ! ನೀನು ಅವ್ಯಯನೂ ಮಹೇಶನೂ ಶಾಶ್ವತನೂ ಪುರುಷೋತ್ತಮನೂ ಆಗಿರುವೆ! ಯೋಗಿಗಳು ನಿನ್ನನ್ನು ಧ್ಯಾನಿಸುತ್ತಾರೆ! ಜ್ಞಾನಿಗಳು ನಿನ್ನನ್ನು ಅರ್ಚಿಸುತ್ತಾರೆ! ನೀನು ಮಹಾಮತ್ಸ್ಯನೂ ಹಯಗ್ರೀವನೂ ಮಹಾಕೂರ್ಮನೂ ಹಿರಣ್ಯಾಕ್ಷನನ್ನು ಸಂಹರಿಸಿದ ವರಾಹದೇವನೂ ನನ್ನ ತಂದೆ ಹಿರಣ್ಯಕಶಿಪುವುವನ್ನು ಸಂಹರಿಸಿದ ನರಸಿಂಹನೂ ಆಗಿರುವೆ! ನೀನೇ ಬ್ರಹ್ಮ, ಇಂದ್ರ,ಶಿವ,ಯಮ,ವರುಣ, ಸೂರ್ಯ, ಚಂದ್ರ, ಮೊದಲಾದ ದೇವತೆಗಳಾಗಿರುವೆ! ನೀನೇ ಈ ಪೃಥ್ವಿ, ಜಲ, ಜ್ಯೋತಿ,ಆಕಾಶ, ಎಲ್ಲವೂ ಆಗಿದ್ದು ಇಡೀ ಜಗತ್ತನ್ನು ವ್ಯಾಪಿಸಿರುವೆ! ನಿನ್ನನ್ನು ಯಾರು ತಾನೇ ಜಯಿಸಬಲ್ಲರು? ಭಕ್ತಿಯಿಂದಷ್ಟೇ ನಿನ್ನನ್ನು ಜಯಿಸಲು ಸಾಧ್ಯ! ಅನ್ಯಥಾ ಅಲ್ಲ!" 
      ಆಗ ಭಗವಂತನು ಹೇಳಿದನು," ಎಲೈ ದೈತ್ಯರಾಜ! ಸುವ್ರತ! ನಿನ್ನ ಸ್ತುತಿಯಿಂದ ಸಂತುಷ್ಟನಾಗಿರುವೆನು! ನಿನ್ನ ಭಕ್ತಿಯಿಂದ ನಾನು ಪರಾಜಿತನಾಗಿದ್ದೇನೆ! ಪರಾಜಿತನಾದವನು ದಂಡವನ್ನು ತೆರುತ್ತಾನೆ! ಆ ದಂಡವಾಗಿ ನಾನು ನಿನಗೊಂದು ವರವನ್ನು ನೀಡುತ್ತೇನೆ! ನಿನಗೆ ಬೇಕಾದ ವರವನ್ನು ಬೇಡು!"
     ಪ್ರಹ್ಲಾದನು ಹೇಳಿದನು," ನಾರಾಯಣ! ನೀನು ನನಗೆ ವರವನ್ನು ನೀಡುವುದಾದರೆ ನಿನ್ನೊಂದಿಗೂ ನರನೊಂದಿಗೆ ಹೋರಾಡಿದುದರಿಂದ ನನಗೆ ಉಂಟಾದ ಶಾರೀರಿಕ, ಮಾನಸಿಕ, ಹಾಗೂ ವಾಚಿಕವಾದ ಪಾಪಗಳೆಲ್ಲವೂ ನಾಶವಾಗಲೆಂಬ ವರವನ್ನು ನೀಡು ಜಗನ್ನಾಥ!"
    " ಹಾಗೆಯೇ ಆಗಲಿ ಪ್ರಹ್ಲಾದ! ನಿನ್ನ ಪಾಪಗಳೆಲ್ಲವೂ ನಾಶವಾಗಲಿ! ಇನ್ನೊಂದು ವರವನ್ನು ಬೇಡು!" ನಾರಾಯಣನು ಹೇಳಿದ.
    ಪ್ರಹ್ಲಾದನು ಹೇಳಿದನು," ಪ್ರಭು! ನನ್ನ ಬುದ್ಧಿಯು ಎಲ್ಲೆಲ್ಲಿ ಹೋದರೂ ಅದು ನಿನ್ನನ್ನೇ ಆಶ್ರಯಿಸಲಿ! ಸದಾ ನಿನ್ನ ಭಕ್ತಿಯಲ್ಲೇ ಮುಳುಗಲಿ!"
   " ಹಾಗೆಯೇ ಆಗಲಿ! ಇನ್ನೂ ಒಂದು ವರವನ್ನು ಬೇಡು!" ನಾರಾಯಣನು ಹೇಳಿದನು.
   " ಅಧೋಕ್ಷಜ! " ಪ್ರಹ್ಲಾದನು ಹೇಳಿದನು," ನಿನ್ನ ಕೃಪೆಯಿಂದ ನನಗೆ ಎಲ್ಲವೂ ದೊರಕಿದೆ! ನಿನ್ನ ಪಾದಪಂಕಜಗಳಲ್ಲಿನ ಭಕ್ತಿಯಿಂದ ನನ್ನ ಖ್ಯಾತಿಯಿರಲಿ!" 
    " ಹಾಗೆಯೇ ಆಗಲಿ!" ನಾರಾಯಣನು ಹೇಳಿದನು," ನನ್ನ ಅನುಗ್ರಹದಿಂದ ನೀನು ನಿತ್ಯನೂ ಅವ್ಯಯನೂ ಅಕ್ಷಯನೂ ಅಜರಾಮರನೂ ಆಗುವೆ! ಇನ್ನು ನಿನ್ನ ರಾಜ್ಯಕ್ಕೆ ಹಿಂದಿರುಗಿ ಕರ್ತವ್ಯವನ್ನು ಪಾಲಿಸು! ನಿನಗೆ ಕರ್ಮಬಂಧನವಾಗುವುದಿಲ್ಲ! ಜನತೆಗೆ ಸೂಕ್ತವಾದ ಧರ್ಮವನ್ನು ಆಚರಿಸು!"
   " ಪ್ರಭು! ತ್ಯಜಿಸಿದ ರಾಜ್ಯವನ್ನು ಪುನಃ ಹೇಗೆ ಸ್ವೀಕರಿಸಲಿ?" ಪ್ರಹ್ಲಾದನು ಹೇಳಿದನು.
   " ಪ್ರಹ್ಲಾದ! ನಿನ್ನ ನಿವಾಸಕ್ಕೆ ತೆರಳಿ ದಾನವರಿಗೆ ಹಿತೋಪದೇಶಕನಾಗು!" ನಾರಾಯಣನು ಹೇಳಿದನು.
    ಆಗ ಪ್ರಹ್ಲಾದನು ನರ,ನಾರಾಯಣರಿಗೆ ನಮಸ್ಕರಿಸಿ ಸಂತುಷ್ಟನಾಗಿ ತನ್ನ ರಾಜ್ಯಕ್ಕೆ ಹಿಂದಿರುಗಿದನು. ದೈತ್ಯರು ಅವನನ್ನು ಸ್ವಾಗತಿಸಲು, ಅಂಧಕಾಸುರನು ಅವನನ್ನು ಪುನಃ ರಾಜ್ಯವನ್ನು ಸ್ವೀಕರಿಸಲು ಕೇಳಿಕೊಂಡನು. ಆದರೆ ಪ್ರಹ್ಲಾದನು ಒಪ್ಪದೇ ಅಂಧಕಾಸುರನಿಗೆ ಪಟ್ಟಗಟ್ಟಿ ದೈತ್ಯರನ್ನು ಸತ್ಪಥದಲ್ಲಿ ನಡೆಸುತ್ತಾ ಶ್ರೀಹರಿಯನ್ನು ಸ್ಮರಿಸುತ್ತಾ ಯೋಗರತನಾಗಿದ್ದನು.
     ಪ್ರಹ್ಲಾದನು ಧರ್ಮಾತ್ಮನೂ ಅತ್ಯುತ್ತಮ ರಾಜನೂ ಆಗಿದ್ದರೂ ತಾನೊಬ್ಬನೇ ಧರ್ಮವನ್ನುಳಿಸುವ ವ್ಯಕ್ತಿ ಎಂಬ ಸಣ್ಣ ಅಹಂಕಾರ ಅವನಲ್ಲಿತ್ತು. ಅದು ಮಣಿಯಲೆಂದು ಅವನಿಗೆ ಶ್ರೀ ಹರಿಯೊಂದಿಗೇ ಯುದ್ಧವಾಗಿ ಸೋಲಾಯಿತು! ಬಹಳ ಒಳ್ಳೆಯವನಾದಾಗ ಆ ಒಳ್ಳೆಯತನದ ಬಗ್ಗೆಯೂ ಅಹಂಕಾರವಿರಬಾರದಲ್ಲವೇ? ಹಾಗಾದಾಗ ಭಗವಂತನು ಅದನ್ನು ಮೊಟಕುಗೊಳಿಸುತ್ತಾನೆ.
     

    
    

ಗುರುವಾರ, ಏಪ್ರಿಲ್ 2, 2026

ಸುಂದರೀಶತಕ -೧೫

ಸಂಸ್ಕೃತ ಮೂಲ 

ವಯಸಾ ಕುಂಭಕೃತಾಸ್ಯಾ: ಪರಿಭ್ರಮತ್ಕಾಂತಿಮಂಡಲಚ್ಛಲತ: /
ಅಭ್ರಮಿ ಕಿಮುರಸಿ ಚಕ್ರಂ ಕುಚಕುಂಭಂ ಕರ್ತುಕಾಮೇನ //

ಕನ್ನಡ ಅನುವಾದ 

    ' ಈ ಸುಂದರಿಯ ಯೌವನವೆಂಬ ಕುಂಬಾರನು ಕುಚಗಳೆಂಬ ಕುಂಭಗಳನ್ನು ನಿರ್ಮಿಸಲು ಇವಳ ವಕ್ಷಸ್ಥಳದಲ್ಲಿ ಪರಿಭ್ರಮಿಸುವ ಕಾಂತಿಮಂಡಲವೆಂಬ ನೆಪದಲ್ಲಿ ಚಕ್ರವನ್ನು ತಿರುಗಿಸಿದನೇ?'
     ಇಲ್ಲಿ ಕವಿಯು ಸುಂದರಿಯ ಯೌವನವನ್ನು ಕುಂಬಾರನಿಗೆ ಹೋಲಿಸಿದ್ದಾನೆ! ಅವಳ ದುಂಡುಕುಚಗಳನ್ನು ಅವನು ನಿರ್ಮಿಸುವ ಕುಂಭಗಳಿಗೆ ಹೋಲಿಸಿದ್ದಾನೆ! ಈ ಕುಚಕುಂಭಗಳನ್ನು ನಿರ್ಮಿಸಲು ಚಕ್ರವನ್ನು ತಿರುಗಿಸಬೇಕಲ್ಲವೇ? ಆ ಚಕ್ರವೇ ಅವಳ ವಕ್ಷಸ್ಥಳದಲ್ಲಿ ರಾರಾಜಿಸುತ್ತಿರುವ ಕಾಂತಿಮಂಡಲ! ಹೀಗೆ ಯೌವನವೆಂಬ ಕುಂಬಾರನು ಕುಚಗಳೆಂಬ ಕುಂಭಗಳನ್ನು ನಿರ್ಮಿಸುವ ಆಸೆಯಿಂದ ಅವಳ ವಕ್ಷಸ್ಥಳದಲ್ಲಿ ಕಾಂತಿಮಂಡಲವೆಂಬ ಚಕ್ರವನ್ನು ತಿರುಗಿಸಿದನೇ ಎನ್ನುತ್ತಾ ಕವಿಯು, ಯೌವನದಲ್ಲಿ ಹೆಣ್ಣಿನಲ್ಲಿ ಉದಯಿಸುತ್ತಿರುವ ಸುಂದರ ಕುಚಕುಂಭಗಳನ್ನು ವರ್ಣಿಸುತ್ತಾನೆ.

ಸುಂದರೀಶತಕ -೧೪

ಸಂಸ್ಕೃತ ಮೂಲ 

ವಕ್ಷಸಿ ಸುಮುಖಿ ಭವತ್ಯಾ ಮನೋಹರಂ ಕಾಂತಿಮಂಡಲಂ ಜಯತಿ /
ಭ್ರಾಮಿತಮಭಿನವವಯಸಾ ಕಾಭನೃಪಾದೇಶಚಕ್ರಮಿವ //

ಕನ್ನಡ ಅನುವಾದ 
      ' ಎಲೈ ಸುಮುಖಿ! ನಿನ್ನ ವಕ್ಷಸ್ಥಳದಲ್ಲಿ ಮನೋಹರವಾದ ಕಾಂತಿಮಂಡಲವು ವಿಜಯಶಾಲಿಯಾಗುತ್ತದೆ! ಅದು, ಕಾಮದೇವನೆಂಬ ರಾಜನು ತನ್ನ ಯೌವನಾವಸ್ಥೆಯಲ್ಲಿ ಮಾಡಿದ ಆಜ್ಞಾಚಕ್ರದಂತಿದೆ!' 
     ಹೆಣ್ಣಿನ ಸೌಂದರ್ಯಕ್ಕೆ ಬಹು ಮುಖ್ಯವಾದ ಅಂಗಗಳೆಂದರೆ ಕುಚಗಳು! ಆ ತುಂಬುಕುಚಗಳ ಕಾರಣದಿಂದ ವಕ್ಷಸ್ಥಳದಲ್ಲಿ ಉಂಟಾಗಿರುವ ಮನೋಹರವಾದ ಕಾಂತಿಮಂಡಲವು ಕಾಮದೇವನೆಂಬ ರಾಜನು ತನ್ನ ಯೌವನಾವಸ್ಥೆಯಲ್ಲಿ ಮಾಡಿದ ಆಜ್ಞಾಚಕ್ರದಂತಿದೆ ಎಂದು ಕವಿಯು ಹೆಣ್ಣಿನ ವಕ್ಷಸ್ಥಳವನ್ನು ಉತ್ಪ್ರೇಕ್ಷಿಸುತ್ತಾ ವರ್ಣಿಸುತ್ತಾನೆ.

ಸುಂದರೀಶಚಕ -೧೩

ಸಂಸ್ಕೃತ ಮೂಲ 

ಸುತನೋರಿಯತ್ಪ್ರದೇಶೇ ತಿಷ್ಠತು ನವರೋಮರಾಜಿಭುಜಗೀತೀ /
ತ್ರಿವಲಿಸತ್ಯರೇಖಾ ವಯ:ಫಣಿಗ್ರಾಹಿಣಾಕಾರಿ //

ಕನ್ನಡ ಅನುವಾದ 
     ' ಈ ಸುಂದರಿಯ ನವರೋಮರಾಜಿ ಎಂಬ ಸರ್ಪಿಣಿಯು ಇಲ್ಲೇ ಇರಲಿ ಎಂದು ಯೌವನವೆಂಬ ಹಾವಾಡಿಗನು ತ್ರಿವಳಿಗಳೆಂಬ ಮೂರು ಸತ್ಯರೇಖೆಗಳನ್ನು ಗೀಚಿದ್ದಾನೆ!'
     ಇಲ್ಲಿ ಕವಿಯು ಸುಂದರ ಹೆಣ್ಣಿನ ನವರೋಮರಾಜಿಯನ್ನು ( ರೋಮಾವಲಿ ಅಥವಾ ರೋಮರಾಜಿ, ಹೆಣ್ಣಿನ ನಾಭಿಯ ಮೇಲಿನ ತೆಳುಗೂದಲಿನ ಸಾಲು) ಒಂದು ಸರ್ಪಿಣಿಗೆ ಹೋಲಿಸಿದ್ದಾನೆ. ಹಾವಾಡಿಗನು ಹೇಗೆ ಸರ್ಪವು ಎಲ್ಲೂ ಹೋಗದಂತೆ ಅದನ್ನು ಮಂತ್ರಗಳಿಂದ ಬಂಧಿಸುವನೋ, ಹಾಗೆಯೇ ಅವಳ ಯೌವನವೆಂಬ ಹಾವಾಡಿಗನು, ಅವಳ ಹೊಟ್ಟೆಯ ಮೇಲೆ ತ್ರಿವಳಿಗಳೆಂಬ ಮೂರು ಸತ್ಯಗೆರೆಗಳನ್ನು ( ಎಲ್ಲೂ ಹೋಗದಂತೆ ಮಾಡುವ ಗೆರೆಗಳು) ರೋಮಾವಲಿಯೆಂಬ ಸರ್ಪಿಣಿಯು ಎಲ್ಲೂ ಹೋಗದಂತೆ ಎಳೆದಿದ್ದಾನೆ ಎಂದು ಉತ್ಪ್ರೇಕ್ಷಿಸುತ್ತಾ ಸುಂದರಿಯ ರೋಮಾವಲಿ, ತ್ರಿವಳಿಗಳು ಹಾಗೂ ಯೌವನವನ್ನು ಪ್ರಶಂಶಿಸಿದ್ದಾನೆ.

ಬುಧವಾರ, ಏಪ್ರಿಲ್ 1, 2026

ಸುಂದರೀಶತಕ -೧೨

ಸಂಸ್ಕೃತ ಮೂಲ 

ಸ್ಮರರವಿಪುರ:ಸರೀಕೃತಯೌವನಮಾಯಾತಮಭಿಮುಖಂ ಸುತನೋ: /
ಆಲಕ್ಷ್ಯತೇ ಯಥೇಷಾ ರೋಮಾಲಿಚ್ಛದ್ಮತಶ್ಛಾಯಾ //

ಕನ್ನಡ ಅನುವಾದ 
     ' ಈ ಸುಂದರ ತನುವಿನ ಸುಂದರಿಯ ಶರೀರಕ್ಕೆ ಸ್ಮರನೆಂಬ ಸೂರ್ಯನನ್ನು ಮುಂದಿಟ್ಟುಕೊಂಡು ಯೌವನವು ಆಗಮಿಸಲು, ಅದರ ನೆರಳೇ ರೋಮಾವಲಿಯ ರೂಪದಲ್ಲಿ ಕಾಣುತ್ತಿದೆ!' 
    ಕವಿಯು ಇಲ್ಲಿ ಹೆಣ್ಣಿನ ರೋಮಾವಲಿಯನ್ನು ಕುರಿತು ಇನ್ನೊಂದು ಪದ್ಯವನ್ನು ರಚಿಸಿದ್ದಾನೆ. ಸುಂದರಿಯ ರೋಮಾವಲಿ, ಅವಳ ಯೌವನದ ನೆರಳು ಎಂದು ಸ್ವಾರಸ್ಯವಾಗಿ ಹೇಳುತ್ತಾನೆ. ಹಾಗೆ ನೆರಳು ಬೀಳಬೇಕಾದರೆ ಸೂರ್ಯನಿರಬೇಕಲ್ಲವೇ? ಆ ಸೂರ್ಯನೇ ಸ್ಮರ ಅಥವಾ ಮನ್ಮಥ! ಸೂರ್ಯನೆಂಬ ಮನ್ಮಥನನ್ನು ಮುಂದಿಟ್ಟುಕೊಂಡು ಯೌವನವು ಆಗಮಿಸಲು, ಆ ಯೌವನದ ನೆರಳು ಬಿದ್ದು ರೋಮಾವಲಿಯಂತೆ ಕಾಣುತ್ತಿದೆ ಎನ್ನುತ್ತಾನೆ ಕವಿ!