ಬುಧವಾರ, ಜುಲೈ 8, 2026

ಸುಂದರೀಶತಕ -೬೨

ಸಂಸ್ಕೃತ ಮೂಲ 

ಸುಂದರಿ ಸಮುದಿತಶಶಿಕರಧೌತತಮಾ ನೇಯಮಷ್ಟಮೀ ರಾತ್ರಿ: /
ವಿರಹಿಜನಮಸಿತಭುಜಂಗೀ ವಿದೃಶ್ಯ ಪರಿವರ್ತಿತೋತ್ತಾನಾ //

ಕನ್ನಡ ಅನುವಾದ 

   ' ಎಲೈ ಸುಂದರಿ! ಉದಿಸಿದ ಚಂದಿರನ ಕಿರಣಗಳಿಂದ ಅತ್ಯಂತ ಬೆಳ್ಳಗೆ ಉಜ್ವಲವಾಗಿರುವ ಈ ರಾತ್ರಿ ಅಷ್ಟಮಿಯ ಬೆಳದಿಂಗಳ ರಾತ್ರಿಯಲ್ಲ! ವಿರಹಿಗಳ ಪಾಲಿಗೆ ಇದು ಅವರನ್ನು ನೋಡಿ ಹೆಡೆಯೆತ್ತಿ ತಿರುಗಿಸಿದ ಮೈಯ ಕೃಷ್ಣಸರ್ಪವಾಗಿದೆ!' 
    ಇಲ್ಲಿ ಕವಿಯು ಸುಂದರವಾದ ಬೆಳದಿಂಗಳ ರಾತ್ರಿಯನ್ನು ಒಂದು ಕೃಷ್ಣಸರ್ಪಕ್ಕೆ ಹೋಲಿಸಿದ್ದಾನೆ.‌ ಬೆಳದಿಂಗಳ ರಾತ್ರಿ ಕತ್ತಲಿನ ಜೊತೆಗೆ ಚಂದ್ರನ ಬಿಳಿಯ ಕಿರಣಗಳಿಂದ ಹೊಳೆಯುವ ಸುಂದರ ರಾತ್ರಿಯಾಗಿರುತ್ತದೆ. ಇದು ಶೃಂಗಾರ ಭಾವನೆಗಳನ್ನು ಉದ್ದೀಪನಗೊಳಿಸುತ್ತದೆ. ಆದರೆ ವಿರಹಿಗಳ ಪಾಲಿಗೆ ಇದು ಬಾಧೆ ನೀಡುವ ರಾತ್ರಿಯಾಗಿರುತ್ತದೆ! ಇದು ಒಂದು ಕೃಷ್ಣಸರ್ಪದಂತೆ ಎನ್ನುತ್ತಾನೆ ಕವಿ. ವಿರಹಿಗಳನ್ನು ನೋಡಿದ ಕೂಡಲೇ ಹೆಡೆಯೆತ್ತಿ ಮೈ ತಿರುಗಿಸಿ ನಿಂತಿದೆ! ಅದರ ಮೈ ಕಪ್ಪಾಗಿದ್ದು ಅದರ ಒಳಭಾಗ ಬೆಳ್ಳಗಿದೆ.‌ ಹಾಗಾಗಿ ಅದು ಕಪ್ಪು, ಬಿಳುಪುಗಳಿಂದ ಬೆಳದಿಂಗಳ ರಾತ್ರಿಗೆ ಹೋಲಿಕೆಯಾಗಿದೆ! ಹೀಗೆ ಆ ಬೆಳದಿಂಗಳ ಅಷ್ಟಮಿ ರಾತ್ರಿ, ಅಷ್ಟಮಿ ರಾತ್ರಿಯಲ್ಲದೇ ಹೆಡೆಯೆತ್ತಿ ಮೈತಿರುಗಿಸಿದ, ಕಚ್ಚಿ ಬಾಧಿಸುವ ಕೃಷ್ಣಸರ್ಪವಾಗಿದೆ ಎನ್ನುತ್ತಾ ಕವಿಯು ವಿರಹಿಗಳ ಪಾಲಿಗೆ ಅಂಥ ರಾತ್ರಿಯು ಎಷ್ಟು ಬಾಧೆ ನೀಡುತ್ತದೆ ಎಂದು ಸೂಚಿಸಿದ್ದಾನೆ.

ಮಂಗಳವಾರ, ಜುಲೈ 7, 2026

ಸುಂದರೀಶತಕ -೬೧

ಸಂಸ್ಕೃತ ಮೂಲ 

ಸುಂದರಿ ವಸಂತಪಥಿಕಾನ್ ರಜನಿಭುಜಂಗೀ ಯಥಾ ಯಥಾ ದಶತಿ /
ತದ್ವಿಷಸಂಕ್ರಾಂತಿವಶಾತ್ತಥಾ ತಥಾ ಕ್ಷೀಯತೇ ದೈರ್ವ್ಯಾತ್ //

ಕನ್ನಡ ಅನುವಾದ 

    ' ಎಲೈ ಸುಂದರಿ! ವಸಂತಕಾಲದ ಪ್ರಯಾಣಿಕರನ್ನು ರಾತ್ರಿಯೆಂಬ ಸರ್ಪಿಣಿ ಹೇಗೆ ಹೇಗೆ ಕಚ್ಚುವುದೋ, ಅದರ ವಿಷವು ಅವರ ಮೈಯಲ್ಲಿ ಹರಡಿ ಅವರು ಅದರ ವಶವಾದಂತೆಲ್ಲಾ ದೈವವಶಾತ್ ಅವರು ಕ್ಷೀಣಿಸುತ್ತಾರೆ!' 
    ಇದೊಂದು ಸೊಗಸಾದ ಮತ್ತು ಉತ್ಪ್ರೇಕ್ಷಿತವಾದ ವಿರಹ ಪದ್ಯ. ವಸಂತಕಾಲವೆಂದರೆ ಯಾರಿಗಾದರೂ ಶೃಂಗಾರದ ಬಯಕೆ ಹೆಚ್ಚಾಗುತ್ತದೆ.‌ ಅಂಥ ಸುಂದರ ಕಾಲದಲ್ಲಿ ಯಾರಿಗಾದರೂ ತಮ್ಮ ಪ್ರಿಯರು ಜೊತೆಗಿರಬೇಕೆನಿಸುತ್ತದೆ. ಅಂಥ ಸುಂದರ ಋತುವಿನ ರಾತ್ರಿ, ಶೃಂಗಾರದ ಬಯಕೆಗಳನ್ನು ಚೆನ್ನಾಗಿ ಉದ್ದೀಪನಗೊಳಿಸುತ್ತದೆ. ಆದರೆ ಅಂಥ ಸಂದರ್ಭದಲ್ಲಿ ಪ್ರಿಯತಮೆಯಿಂದ ದೂರಾಗಿ ಪ್ರಯಾಣ ಮಾಡುತ್ತಿದ್ದರೆ ಹೇಗಾಗುತ್ತದೆ? ಆ ಸುಂದರ ರಾತ್ರಿಯೇ ಹಿಂಸೆ ಕೊಡುವ ಕಾಳರಾತ್ರಿಯಂತಾಗುತ್ತದೆ! ಇಲ್ಲಿ ಕವಿಯು ಅಂಥ ರಾತ್ರಿಯನ್ನು ಒಂದು ಸರ್ಪಿಣಿಗೆ ಹೋಲಿಸುತ್ತಾನೆ. ಅದು ಉಂಟುಮಾಡುವ ವಿರಹಬಾಧೆಯನ್ನು ಆ ಸರ್ಪಿಣಿಯ ಕಚ್ಚುವಿಕೆಗೆ ಹೋಲಿಸುತ್ತಾನೆ! ಅದು ಕಚ್ಚಿದಂತೆಲ್ಲಾ ಹಾಗೂ ಅದರ ವಿಷ ಈ ವಸಂತಕಾಲದ ಪ್ರಯಾಣಿಕರ ದೇಹದೆಲ್ಲೆಡೆ ಹರಡಿದಂತೆಲ್ಲಾ ಅವರು ಕ್ಷೀಣಿಸುತ್ತಾರೆ ಎಂದು ವಸಂತ ಕಾಲದ ಪ್ರಯಾಣಿಕರ ರಾತ್ರಿಯ ವಿರಹಬಾಧೆಯನ್ನು ಕವಿಯು ಉತ್ಪ್ರೇಕ್ಷೆಯಿಂದ ವರ್ಣಿಸುತ್ತಾನೆ. 

ಸುಂದರೀಶತಕ -೬೦

ಸಂಸ್ಕೃತ ಮೂಲ 

ಸುಂದರಿ ರಹಸ್ಯಮಾಲಿಷು ಕಲ್ಯಾಣೀ ಸ್ಫೂರ್ತಿರೇವ ತವ ವೇದ /
ಗೋತ್ರಸ್ಖಲನಭಯೇನ ತ್ಯಕ್ತಾ ಯದ್ಗೌರವೀ ಸಂಸದ್ //

ಕನ್ನಡ ಅನುವಾದ 

   ' ಎಲೈ ಸುಂದರಿ! ಈ ರಹಸ್ಯ ಕೂಟಗಳಲ್ಲಿ ನಿನ್ನ ಶೋಭಾಯಮಾನವಾದ ಸ್ಫೂರ್ತಿಯೇ ನಿನ್ನ ವಿಷಯವನ್ನು ಹೇಳುತ್ತದೆ! ನೀನು ಎಲ್ಲಿ ನಿನ್ನ ಪ್ರಿಯತಮನ ಹೆಸರನ್ನು ಬಾಯಿ ತಪ್ಪಿ ಹೇಳಿಬಿಡುವೆಯೋ ಎಂಬ ಭಯದಿಂದ ನೀನು ಹಿರಿಯರ ಸಮಕ್ಷಮವನ್ನು ತೊರೆದಿರುವೆ!' 
   ಇದೊಂದು ಸ್ವಾರಸ್ಯಕರ ಶೃಂಗಾರ ಪದ್ಯ.‌ ಇಲ್ಲಿ ನಾಯಿಕೆಯು ರಹಸ್ಯವಾಗಿ ಒಬ್ಬ ನಾಯಕನನ್ನು ಪ್ರೀತಿಸುತ್ತಿದ್ದಾಳೆ. ಅದು ಅವಳು ಹೇಳದಿದ್ದರೂ ಅವಳು ಸಖಿಯರೊಂದಿಗೆ ಗುಟ್ಟಾಗಿ ಸೇರುವ ರಹಸ್ಯ ಕೂಟಗಳಲ್ಲಿ ಮೊದಲಿಗಿಂತ ಹೆಚ್ಚಾಗಿರುವ ಅವಳ ಲವಲವಿಕೆ, ಸ್ಫೂರ್ತಿಗಳಿಂದಲೇ ಗೊತ್ತಾಗುತ್ತದೆ! ಪ್ರೀತಿಯಲ್ಲಿ ಬಿದ್ದಿರುವ ಅವಳು ಅದೊಂದು ರೀತಿಯ ಶೋಭೆಯ ಸ್ಫೂರ್ತಿ ತೋರುತ್ತಿದ್ದಾಳೆ! ಆದರೆ ಅದು ಅವಳ ಹಿರಿಯರಾರಿಗೂ  ಗೊತ್ತಿಲ್ಲ. ಹಿರಿಯರ ಜೊತೆ ಕುಳಿತರೆ ಎಲ್ಲಿ ಅವಳು ತನ್ನ ಪ್ರಿಯತಮನ ಹೆಸರನ್ನು ಹೇಳಿಬಿಡುವಳೋ ಎಂಬ ಭಯದಿಂದ ಅವಳು ಹಿರಿಯರೊಂದಿಗೆ ಕೂರುತ್ತಲೇ ಇಲ್ಲ! ಅವರ ಸಮಕ್ಷಮವನ್ನು ತೊರೆದು ಸದಾ ಸಖಿಯರೊಂದಿಗೆ ರಹಸ್ಯ ಕೂಟಗಳಲ್ಲಿ ಸೇರುತ್ತಿದ್ದಾಳೆ! ಇದನ್ನು ಇಂದಿನ ಹರೆಯದವರಲ್ಲೂ ಕಾಣಬಹುದು! ಹರೆಯಕ್ಕೆ ಬಂದ ತರುಣಿಯರು ತಮ್ಮ ಹಿರಿಯರೊಂದಿಗೆ ಕುಳಿತುಕೊಳ್ಳಲು ಇಷ್ಟಪಡದೆ ತಮ್ಮ ಗೆಳತಿಯರೊಂದಿಗೆ ಗುಟ್ಟಾಗಿ ಸಂಭಾಷಣೆ ಮಾಡುವುದರಲ್ಲಿ ತೊಡಗುತ್ತಾರೆ. ಇದನ್ನು ಕವಿಯು ಅಂದಿನ ದಿನಗಳಲ್ಲೇ ಗಮನಿಸಿ ಈ ಪದ್ಯದಲ್ಲಿ ಸೂಕ್ಷ್ಮವಾಗಿ ಸೊಗಸಾಗಿ ಚಿತ್ರಿಸಿದ್ದಾನೆ! ಜೀವನದ ಘಟನಾವಳಿಗಳು ಸಾಹಿತ್ಯದಲ್ಲಿ ರಸರೂಪಿಯಾಗಿ ವ್ಯಕ್ತವಾದಾಗ ಅವು ಸೊಗಸಾಗಿರುತ್ತವೆ! ಅದನ್ನು ಕವಿಯು ತನ್ನ ಕಾವ್ಯದ ಮೂಲಕ ಮಾಡುತ್ತಾನೆ.

ಶನಿವಾರ, ಜುಲೈ 4, 2026

ಭೋಜರಾಜನ ಸಮಸ್ಯೆ

ಭೋಜರಾಜ ಮತ್ತು ಕಾಳಿದಾಸರ ಕಥಾಪ್ರಸಂಗಗಳು ಜನಪ್ರಿಯವಾಗಿವೆ. ಇಂಥ ಕಥಾಪ್ರಸಂಗಗಳನ್ಧು ಬಲ್ಲಾಳಸೇನನೆಂಬ ಕವಿ ತನ್ನ ಭೋಜಪ್ರಬಂಧವೆಂಬ ಸ್ವಾರಸ್ಯಕರ ಸಂಸ್ಕೃತ ಗ್ರಂಥದಲ್ಲಿ ಸಂಕಲಿಸಿದ್ದಾನೆ.‌ ಅಲ್ಲಿ ನಾವು ನೋಡುವಂತೆ, ಹೊರಗಿನಿಂದ ಬಂದ ಇತರ ಪಂಡಿತರು, ವಿದ್ವಾಂಸರಷ್ಟೇ ಅಲ್ಲದೇ ಸ್ವಯಂ ಭೋಜರಾಜನೇ ಅನೇಕ ಬಾರಿ ತನ್ನ ಆಸ್ಥಾನದ ಕವಿಗಳಿಗೆ ಒಗಟುಗಳನ್ನು, ಸಮಸ್ಯೆಗಳನ್ನು ಕೊಟ್ಟು ಪೂರೈಸಲು ಹೇಳುತ್ತಿದ್ದ. ಹೀಗೆಯೇ ಒಮ್ಮೆ ತನ್ನದೇ ಅನುಭವದಿಂದ ಒಂದು ಸಮಸ್ಯೆಯನ್ನು ಸಭೆಯಲ್ಲಿ ಹೇಳಿ ಕಾಳಿದಾಸನಿಗೆ ಅದನ್ನು ಪೂರೈಸಲು ಹೇಳಿದ. ಸಮಸ್ಯೆ ಹೀಗಿತ್ತು-
ಟಟಂಟಟಂಟಂಟಟಟಂಟಟಂಟಂ 
ಇದು ಒಂದು ಸಂಸ್ಕೃತ ಶ್ಲೋಕದ ಒಂದು ಪಾದವಾಗಿ ಇರುವಂತೆ ಇತರ ಮೂರು ಪಾದಗಳನ್ನು ರಚಿಸಿ ಸಮಸ್ಯೆಯನ್ನು ಪೂರೈಸಬೇಕಿತ್ತು. 
ಸಭಿಕರಿಗೆ ಹಾಗೂ ಇತರ ಕವಿಗಳಿಗೆ ದಿಗ್ಭ್ರಮೆಯಾಯಿತು! ಇದೆಂಥ ಸಮಸ್ಯೆ? ಇದನ್ನು ಹೇಗೆ ಪೂರೈಸಲು ಸಾಧ್ಯ? ಕಾಳಿದಾಸನಾದರೋ ಹೇಗೆ ಪೂರೈಸುತ್ತಾನೆ? ಇಂದಿಗೆ ಮುಗಿಯಿತು ಕಾಳಿದಾಸನ ಕಥೆ ಎನಿಸಿತು ಎಲ್ಲರಿಗೂ! 
    ಭೋಜರಾಜನು ತನ್ನ ಸ್ವಂತ ಅನುಭವದಿಂದಲೇ ಈ ಸಮಸ್ಯೆಯನ್ನು ಕೊಟ್ಟಿದ್ದ. ಅಂದು ಬೆಳಿಗ್ಗೆ ಅವನು ಒಂದು ಸರೋವರದಲ್ಲಿ ಸ್ನಾನ ಮಾಡುತ್ತಿದ್ದ. ಆಗ ಮೆಟ್ಟಿಲುಗಳ ಮೇಲೆ ನಿಂತು ನೋಡುತ್ತಿದ್ದ ಒಬ್ಬ ಮದಿರಾಕ್ಷಿ ಯುವತಿ, ಅವನ ರೂಪದಿಂದ ಮದನಪರವಶಳಾದಳು. ಅವಳು ನೀರು ತರಲು ಒಂದು ಚಿನ್ನದ ಬಿಂದಿಗೆ ತಂದಿದ್ದಳು. ರಾಜನನ್ನು ನೋಡುತ್ತಾ ಮೈಮರೆತ ಅವಳು ತಿಳಿಯದೆ ತನ್ನ ಕೈಯಿಂದ ಆ ಚಿನ್ನದ ಬಿಂದಿಗೆಯನ್ನು ಜಾರಿಬೀಳಿಸಿಕೊಂಡಳು! ಆಗ ಅದು ಮೆಟ್ಟಿಲುಗಳಿಂದ ಇಳಿಯುತ್ತಾ ಮಾಡಿದ ಶಬ್ದವೇ ಈ ಟಟಂ ಟಟಂ........
     ಆ ಶಬ್ದವನ್ನೇ ಸಮಸ್ಯೆಯಾಗಿ ಕೊಟ್ಟಿದ್ದ ಭೋಜರಾಜ! ಆದರೆ ಇದನ್ನು ಕಾಳಿದಾಸನು ಹೇಗೆ ಪೂರೈಸಿಯಾನು? ಮಹಾಕವಿಯಲ್ಲವೇ? ಕೂಡಲೇ ಪೂರೈಸಿದ -
     ರಾಜಾಭಿಷೇಕೇ ಮದವಿಹ್ವಲಾಯಾ 
     ಹಸ್ತಾಚ್ಚ್ಯುತೋ ಹೇಮಘಟೋ ಯುವತ್ಯಾ:  /
     ಸೋಪಾನಮಾರ್ಗೇಷು ಕರೋತಿ ಶಬ್ದಂ 
     ಟಟಂಟಟಂಟಂಟಟಟಂಟಟಂಟಮ್ //
     ' ರಾಜನು ಅಭಿಷೇಕ ( ಸ್ನಾನ) ಮಾಡಿಕೊಳ್ಳುತ್ತಿರಲು, ಯೌವನದ ಮದದಿಂದ ವಿಹ್ವಲಳಾದ ಯುವತಿ ನಿಂತು ನೋಡುತ್ತಿರಲು, ಅವಳ ಕೈಯಿಂದ ಜಾರಿ ಬಿದ್ದ ಬಂಗಾರದ ಬಿಂದಿಗೆ ಸೋಪಾನಮಾರ್ಗದಲ್ಲಿ ಇಳಿಯುತ್ತಾ ಮಾಡಿತು ಶಬ್ದ -ಟಟಂಟಟಂಟಂಟಟಟಂಟಟಂಟಂ' 
      ಕಾಳಿದಾಸನು ಘಟನೆಯನ್ನು ನೋಡದೆಯೂ ತನ್ನ ಮನಸ್ಸಿನಲ್ಲಿದ್ದುದನ್ನು ಊಹಿಸಿ ಸಮಸ್ಯೆಯನ್ನು ಪೂರೈಸಿದುದನ್ನು ನೋಡಿ ಭೋಜರಾಜನು ಸುಪ್ರೀತನಾಗಿ ಅವನಿಗೆ ಒಂದೊಂದು ಅಕ್ಷರಕ್ಕೂ ಒಂದೊಂದು ಲಕ್ಷ ಹಣ ಕೊಟ್ಟು ಸನ್ಮಾನಿಸಿದನು.
      ಭೋಜಪ್ರಬಂಧದಲ್ಲಿ ಇಂಥ ಹಲವಾರು ಸ್ವಾರಸ್ಯಕರ ಪ್ರಸಂಗಗಳಿವೆ.

ಗುರುವಾರ, ಜುಲೈ 2, 2026

ಸುಂದರೀಶತಕ -೫೯

ಸಂಸ್ಕೃತ ಮೂಲ 

ವಿರಹಾರ್ತಿದಲನಮೌಷಧಮೇಕಂ ಚೇಷ್ಟಾಸು ತಾಸು ತಾದಾತ್ಮ್ಯಮ್ /
ಸುಂದರಿ ಯಸ್ಮಿಞ್ಜಾತೇ ಬ್ರಹ್ಮಾನಂದೋsಪಿ ನಾಕಾಂಕ್ಷ್ಯ: //

ಕನ್ನಡ ಅನುವಾದ 

    ' ಎಲೈ ಸುಂದರಿ! ವಿರಹದ ಬಾಧೆಯನ್ನು ನಾಶಮಾಡಲು ಇರುವ ಏಕೈಕ ಔಷಧವೆಂದರೆ ಪ್ರಿಯತಮನ ಪ್ರಣಯಕಲಾಪಗಳಲ್ಲಿ ತಾದಾತ್ಮ್ಯ ಹೊಂದುವುದು! ಅವನು ಪ್ರಕಟವಾದರೆ ಬ್ರಹ್ಮಾನಂದವೂ ಬೇಕಾಗುವುದಿಲ್ಲ!'
    ಇದು ಸಖಿಯು ರಾಧೆಗೆ ಹೇಳುತ್ತಿರುವಂತಿದೆ. ಶ್ಲೋಕದ ಚಿತ್ರಣ ಹಾಗಿದೆ. ರಾಧೆಯ ಪ್ರಿಯತಮ ಶ್ರೀಕೃಷ್ಣನು ಅವಳನ್ನು ಬಿಟ್ಟು ಹೋಗಿದ್ದಾನೆ ಹಾಗೂ ಅವಳಿಗೆ ವಿರಹಬಾಧೆ ಕಾಡುತ್ತಿದೆ. ಆಗ ಅವಳ ಸಖಿ ಅವಳಿಗೆ ಈ ಮಾತನ್ನು ಹೇಳುತ್ತಿರುವಂತಿದೆ. ಅವಳು ಹೇಳುವಂತೆ ವಿರಹಬಾಧೆಯನ್ನು ಹೋಗಲಾಡಿಸಲು ಇರುವುದು ಒಂದೇ ಔಷಧಿ. ಅದೇನೆಂದರೆ ಪ್ರಿಯತಮನ ಪ್ರಣಯಚೇಷ್ಟೆಗಳನ್ನು, ಪ್ರಣಯಲೀಲೆಗಳನ್ನು ಸ್ಮರಿಸಿಕೊಳ್ಳುತ್ತಾ ಅವುಗಳಲ್ಲೇ ತಾದಾತ್ಮ್ಯ ಹೊಂದುವುದು. ಆಗ ಅವನೇ ಪ್ರಕಟವಾದಂತಾಗುತ್ತದೆ! ಅವನು ಪ್ರಕಟವಾದರೆ ಬ್ರಹ್ಮಾನಂದವೂ ಬೇಕಾಗುವುದಿಲ್ಲ.‌ ಹೌದಲ್ಲವೇ? ಶ್ರೀಕೃಷ್ಣನು ಸಾಕಾರ ಪರಬ್ರಹ್ಮನೇ ಆಗಿದ್ದಾನೆ. ಅವನ ಸಾಕಾರ ಶೃಂಗಾರ ಪ್ರೇಮದ ಆನಂದದ ಮುಂದೆ ನಿರಾಕಾರ ಬ್ರಹ್ಮಾನಂದ ರುಚಿಸುವುದೇ ಇಲ್ಲ! 

ಸುಂದರೀಶತಕ -೫೮

ಸಂಸ್ಕೃತ ಮೂಲ 

ಅಗ್ನಿಶ್ಚಂದನಲೇಪೋ ವಿಷಮಮೃತಂ ಮರಣಮೇವ ಜೀವಾತು: /
ಸುಂದರಿ ವಿರಹಿಜನಾನಾಂ ಕಾಚನ ಲೋಕೋತ್ತರಾ ರೀತಿ: //

ಕನ್ನಡ ಅನುವಾದ 

   ಚಂದನದ ಲೇಪನವು ಅಗ್ನಿಯಂತೆ ಸುಡುತ್ತದೆ! ಅಮೃತವು ವಿಷದಂತೆ ಭಾಸವಾಗುತ್ತದೆ! ಜೀವಿಕೆಯು ಮರಣವೇ ಆಗಿದೆ! ಎಲೈ ಸುಂದರಿ! ವಿರಹಿಗಳ ರೀತಿ ಸ್ವಲ್ಪ ಲೋಕೋತ್ತರವಾಗಿರುತ್ತದೆ!' 
    ವಿರಹಿಗಳ ಚಿತ್ರಣವನ್ನು ಕವಿಯು ಮುಂದುವರೆಸುತ್ತಿದ್ದಾನೆ.‌ ಅವರ ರೀತಿಗಳು ಲೋಕೋತ್ತರವಾಗಿರುತ್ತವೆ ಎನ್ನುತ್ತಾನೆ. ಇಲ್ಲಿ ಲೋಕೋತ್ತರ ಎಂದರೆ ವಿಲಕ್ಷಣ ಎಂದು ಅರ್ಥ. ಲೋಕದ ರೀತಿಗೆ ವಿರುದ್ಧ. ಸಾಮಾನ್ಯವಾಗಿ ಚಂದನದ ಲೇಪನವು ತಂಪಾಗಿದ್ದರೆ ವಿರಹಿಗಳಿಗೆ ಅದು ಅಗ್ನಿಯಂತೆ ಸುಡುತ್ತದೆ! ಅಮೃತವು ಜೀವವರ್ಧನೆ ಮಾಡುವ ಬದಲು ವಿಷದಂತೆ ಭಾಸವಾಗುತ್ತದೆ. ಜೀವಿಕೆಯು ಮರಣವೇ ಎನಿಸುತ್ತದೆ! ಇದನ್ನು ವಿರಹಿಣಿಯ ಸಖಿಯೇ ಅವಳಿಗೆ ಹೇಳುತ್ತಿರುವಂತಿದೆ. ಅಥವಾ ಕವಿಯೇ ಸುಂದರಿಗೆ ಹೇಳುತ್ತಿದ್ದಾನೆ.

ಮಂಗಳವಾರ, ಜೂನ್ 30, 2026

ಸುಂದರೀಶತಕ -೫೭

ಸಂಸ್ಕೃತ ಮೂಲ 

ಕಿಂ ವಾ ಕೃತೈ: ಪ್ರಯತ್ನೈರೇತೈಸ್ತುಹಿನೋಪಚಾರಸಮವೇತೈ: /
ಉಷ್ಣೀಭವತಿ ಯದಸ್ಯಾ: ಪರಿತ: ಶೀತೋsಪಿ ಸಂಚರನ್ಪವನ: //

ಕನ್ನಡ ಅನುವಾದ 

    ' ಈ ವಿರಹಿಣಿಯ ವಿರಹತಾಪವನ್ನು ಹೋಗಲಾಡಿಸಲು ಅವಳಿಗೆ ಈ ಶೀತೋಪತಚಾರಗಳನ್ನು ಮಾಡಿ ಏನು ಪ್ರಯೋಜನ? ಅವಳ ನಾಲ್ಕೂ ಕಡೆಗಳಲ್ಲಿ ಚಲಿಸುತ್ತಿರುವ ಶೀತಲ ಗಾಳಿಯೂ ಬಿಸಿಯಾಗುತ್ತಿದೆ!' 
    ಕವಿಯು ಪುನಃ ಒಂದು ಅತಿ ವಿರಹದ ಚಿತ್ರಣವನ್ನು ನೀಡಿದ್ದಾನೆ. ಇಲ್ಲಿ ನಾಯಿಕೆಯು ತನ್ನ ಪ್ರಿಯತಮನಿಂದ ದೂರವಾಗಿ ವಿರಹಿಣಿಯಾಗಿದ್ದಾಳೆ. ಅವಳು ವಿರಹತಾಪದಿಂದ ಬೆಂದುಹೋಗುತ್ತಿದ್ದಾಳೆ! ಅವಳ ವಿರಹತಾಪವನ್ನು ಹೋಗಲಾಡಿಸಲು ಅವಳ ಸಖಿಯರು ಕಮಲಪತ್ರಗಳನ್ನು ಹಾಸಿಗೆಯ ಮೇಲೆ ಹಾಸಿ ಅವುಗಳ ಮೇಲೆ ಅವಳನ್ನು ಮಲಗಿಸುವುದು, ಕಮಲಪತ್ರಗಳ ಬೀಸಣಿಕೆಯಿಂದ ಗಾಳಿ ಬೀಸುವುದು, ಕಮಲಪುಷ್ಪಗಳಿಂದ ಅವಳನ್ನು ಮೆಲ್ಲನೆ ತೀಡುವುದು, ಅವಳ ಮೈಗೆ ಚಂದನವನ್ನು ಪೂಸುವುದು, ಮೊದಲಾದ ಶೀತೋಪಚಾರಗಳನ್ನು ಮಾಡುತ್ತಿದ್ದಾರೆ. ಆದರೆ ಅವಳ ವಿರಹತಾಪ ಹೋಗುತ್ತಿಲ್ಲ. ಅವಳ ವಿರಹತಾಪ ಎಷ್ಟಿದೆಯೆಂದರೆ, ಅದರಿಂದ ಅವಳ ಸುತ್ತಲೂ ಬೀಸುತ್ತಿರುವ ಶೀತಲ ಗಾಳಿಯೂ ಬಿಸಿಯಾಗುತ್ತಿದೆ! ಹಾಗಾಗಿ ಇಂಥ ಶೀತೋಪಚಾರಗಳಿಂದ ಪ್ರಯೋಜನವೇನು ಎನ್ನುತ್ತಿದ್ದಾನೆ ಕವಿ.