ಮಂಗಳವಾರ, ಜೂನ್ 23, 2026

ಸುಂದರೀಶತಕ -೫೪

ಸಂಸ್ಕೃತ ಮೂಲ 

ಅವಧಿದಿವಸಪ್ರಯಾಣಾ: ಪ್ರಿಯತಮ ತಸ್ಯಾ ಮೃಗೀದೃಶ: ಪ್ರಾಣಾ: /
ತಿಷ್ಠಂತಿ ಕತಿಪಯಾಹಂ ಕೃತ್ವಾ ಪ್ರಸ್ಥಾನಮಧಿಕಂಠಮ್ //

ಕನ್ನಡ ಅನುವಾದ 

    ದೂತಿಯು ನಾಯಕನಿಗೆ ಹೇಳುತ್ತಾಳೆ, ' ಓ ಪ್ರಿಯತಮ! ನಿನ್ನ ಪ್ರಯಾಣದ ಅವಧಿಯ ವಿಯೋಗದ ದಿನಗಳು ಮುಗಿಯುತ್ತಾ ಬಂದಿವೆ! ಆ ಮೃಗನಯನಿಯ ಪ್ರಾಣಗಳು ಕಂಠದವರೆಗೂ ಬಂದು ನಿನ್ನ ಮಿಲನವಾಗಲೆಂದು ಇನ್ನು ಸ್ವಲ್ಪ ದಿನಗಳು ಉಳಿಯಲು ಪ್ರಯತ್ನ ಪಡುತ್ತಿವೆ!' 
    ಇಲ್ಲಿ ನಾಯಕನು ಪ್ರಯಾಣ ಹೋಗಿದ್ದಾನೆ. ಅವನ ಪ್ರಿಯತಮೆಯಾದ ನಾಯಿಕೆಯು ವಿರಹದಲ್ಲಿ ಬಳಲುತ್ತಿದ್ದಾಳೆ. ಅಂದಿನಿಂದಲೇ ಅವಳ ಪ್ರಾಣಗಳು ಹೋಗುವಂತಾಗಿವೆ. ಅವನ ಪ್ರಯಾಣದ ದಿನಗಳ ಅವಧಿ ಇನ್ನೇನು ಮುಗಿಯುತ್ತಾ ಬಂದಿದೆ. ಈ ಹೊತ್ತಿಗೆ ನಾಯಿಕೆಯ ಪ್ರಾಣಗಳು ಕಂಠದವರೆಗೂ ಬಂದಿವೆ ಹಾಗೂ ಇನ್ನೇನು ಹೋಗುವಂತಾಗಿವೆ!  ಅವನು ಬಂದರೆ, ಅವನ ಮಿಲನವಾಗುತ್ತಲೇ ಹೋಗಲೆಂದು ಇನ್ನು ಸ್ವಲ್ಪ ದಿನಗಳು ಉಳಿಯಲು ಪ್ರಯತ್ನ ಪಡುತ್ತಿವೆ. ಈ ವಿಷಯವನ್ನು ದೂತಿಯು ನಾಯಕನ ಬಳಿಗೆ ಹೋಗಿ ಹೇಳುತ್ತಿದ್ದಾಳೆ. ಇನ್ನು ಅವನು ಬಂದುಬಿಡಬೇಕೆಂದು ಅವಳ ಅಭಿಪ್ರಾಯ.
     ಇದು ಅತ್ಯಂತ ವಿರಹಾವಸ್ಥೆಯ ಒಂದು ಮನೋಜ್ಞ ಚಿತ್ರಣ. 
     

ಭಾನುವಾರ, ಜೂನ್ 21, 2026

ಶ್ರೀರಾಮನ ಕುರಿತ ಪ್ರೊ.ಭಗವಾನರ ಆಕ್ಷೇಪಗಳಿಗೆ ಉತ್ತರಗಳು

ಇತ್ತೀಚೆಗೆ ಪ್ರೊ.ಭಗವಾನರು ಶ್ರೀರಾಮನ ಕುರಿತು ಮತ್ತೆ ಆಕ್ಷೇಪ ಮಾಡಿ ಅನೇಕ ರಾಮಭಕ್ತರ ಮತ್ತು ಸಜ್ಜನರ ದು:ಖಕ್ಕೆ ಕಾರಣರಾಗಿದ್ದಾರೆ. ಇದು ಮೊದಲ ಬಾರಿಯಲ್ಲದೇ ಈ ಮೊದಲೂ ಹಲವಾರು ಬಾರಿ ಅವರು ಹೀಗೆ ಆಕ್ಷೇಪಗಳನ್ನು ಮಾಡುತ್ತಲೇ ಬಂದಿದ್ದು ರಾಮಮಂದಿರ ಬೇಡ ಎಂಬ ಪುಸ್ತಕವನ್ನೂ ಬರೆದಿದ್ದಾರೆ. ನಿಜ ಹೇಳಬೇಕೆಂದರೆ ಇಂಥವರ ಆಕ್ಷೇಪಗಳಿಗೆ ಉತ್ತರ ಕೊಟ್ಟು ಅವರನ್ನು ಸಮಾಧಾನಪಡಿಸಲಾಗುವುದಿಲ್ಲ. ಏಕೆಂದರೆ ಅವರು ತಮ್ಮ ಮನಸ್ಸನ್ನು ಆಕ್ಷೇಪ ಮಾಡಬೇಕೆಂದೇ ಸಿದ್ಧಪಡಿಸಿಕೊಂಡು ಇತರೆಲ್ಲಾ ಉತ್ತರಗಳಿಗೆ ಕಿವಿ ಮುಚ್ಚಿಕೊಂಡಿರುತ್ತಾರೆ. ಆದರೂ ಜನರಿಗೆ ಈ ಆಕ್ಷೇಪಗಳಿಗೆ ಉತ್ತರ ಗೊತ್ತಿರಬೇಕು. ಇಲ್ಲವಾದರೆ ಭಗವಾನರಿಂದ ಜನರು ತಪ್ಪು ತಿಳಿದು ರಾಮನನ್ನು ದ್ವೇಷಿಸಬಹುದು ಹಾಗೂ ಭಾರತೀಯ ಸಂಸ್ಕೃತಿಯ ಬಗ್ಗೆ ತಾತ್ಸಾರ ಭಾವನೆ ತಾಳಬಹುದು. ಹಾಗಾಗಿ ಇಂಥ ಆಕ್ಷೇಪಗಳಿಗೆ ಉತ್ತರಿಸಬೇಕಾಗುತ್ತದೆ.
      ಭಗವಾನರು ತಾವು ವಾಲ್ಮೀಕಿ ರಾಮಾಯಣವನ್ನೇ ನೇರವಾಗಿ ಓದಿ ಆಕ್ಷೇಪ ಮಾಡಿದ್ದೇನೆ, ಸುಳ್ಳು ಹೇಳಿಲ್ಲ ಎನ್ನುತ್ತಾರೆ. ಹಾಗಿದ್ದ ಮೇಲೆ ಅವರು ವಾಲ್ಮೀಕಿ ರಾಮಾಯಣದ ಕೆಲವು ಅಂಶಗಳನ್ನು ಮಾತ್ರ ಒಪ್ಪಿ ಇನ್ನಷ್ಟು ವಿಷಯಗಳನ್ನು ಬಿಡುವುದು, ಅಥವಾ ಅವರಿಗೆ ಮಾತ್ರ ಬೇಕಾಗಿರುವ ಅಂಶಗಳನ್ನು ಹೇಳುವುದು ಕವಿಗೆ ಮಾಡುವ ದ್ರೋಹ ಎಂದು ಹೇಳಬೇಕಾಗುತ್ತದೆ. ಹಾಗೆಂದು ಇವರು ವೈಚಾರಿಕವಾಗಿಯೂ ಹೇಳುತ್ತಿಲ್ಲ. ಆಕ್ಷೇಪ ಮಾತ್ರ ಮಾಡುತ್ತಿದ್ದಾರೆ. ಮುಖ್ಯವಾಗಿ ಶ್ರೀರಾಮನು ದಶರಥನ ಮಗನಲ್ಲ, ಅವನು ಒಬ್ಬ ಮದ್ಯಪಾನಿ, ಮಾಂಸಭಕ್ಷಕ, ಶಂಬೂಕನಂಥವರನ್ನು ಕೊಂದ ಕೊಲೆಗಡುಕ, ತನ್ನ ಹೆಂಡತಿ ಸೀತೆಯನ್ನು ಕಾಡಿಗಟ್ಟಿದ ಕಟುಕ, ತಮ್ಮ ಲಕ್ಷ್ಮಣನನ್ನು ಕೊಂದ, ತಂದೆಯನ್ನು ನಿಂದಿಸಿದ, ಮೊದಲಾದ 
 ' ಸತ್ಯ'ಗಳನ್ನು ವಾಲ್ಮೀಕಿ ರಾಮಾಯಣದಿಂದ ಕಂಡುಕೊಳ್ಳುವ ಭಗವಾನರು ಶ್ರೀರಾಮನು ವಿಷ್ಣುವಿನ ಅವತಾರ, ಸಕಲ ಕಲ್ಯಾಣಗುಣಗಳಿರುವವನು, ವೀರ್ಯವಂತ, ಧರ್ಮಜ್ಞ, ಕೃಚಜ್ಞ, ಸತ್ಯಭಾಷಿ, ದೃಢವಾದ ವ್ರತನಿಷ್ಠೆಯುಳ್ಳವನು, ಕುಲಾಚಾರವನ್ನು ಉಲ್ಲಂಘಿಸದೇ ಅನೂಚಾನವಾಗಿ ಬಂದಿರುವ ಆಚಾರ ವ್ಯವಹಾರಗಳನ್ನು ತಪ್ಪದೇ ನಡೆಸಿಕೊಂಡು ಬರುವವನು, ಸಕಲ ಪ್ರಾಣಿಗಳಲ್ಲಿ ದಯಾಪರನು, ಚತುರ್ದಶವಿದ್ಯೆಗಳಲ್ಲೂ ಪಾರಂಗತನು, ಸಕಲಕಾರ್ಯಧುರಂಧರನು, ಸಕಲ ಕಾಲದಲ್ಲೂ ಸರ್ವರಿಗೂ ಮೋಹನರೂಪನಾಗಿರುವವನು, ಅತ್ಯಂತ ಧೈರ್ಯವಂತನು, ಕೋಪವನ್ನು ಜಯಿಸಿರುವವನು, ಎಣೆಯಿಲ್ಲದ ಕಾಂತಿಯಿಲ್ಲದವನು, ಅಸೂಯಾರಹಿತನು, ಯುದ್ಧದಲ್ಲಿ ದೇವತೆಗಳೂ ಹೆದರುವಂಥವನು, ಇಂಥ ಗುಣಗಳಿರುವವನು ಎಂದು ಅದೇ ವಾಲ್ಮೀಕಿ ರಾಮಾಯಣದ ಮಾತನ್ನು ಕಂಡುಕೊಳ್ಳದ ಮೂರ್ಖರು ಎಂದು ಹೇಳಬೇಕಾಗುತ್ತದೆ!
     ಇರಲಿ! ಚಂದ್ರನನ್ನು ಕಂಡಾಗ ಬೆಳದಿಂಗಳನ್ನು ನೋಡುವ ಬದಲು ಕಪ್ಪು ಚುಕ್ಕೆಯನ್ನು ಮಾತ್ರ ನೋಡುವವರಿಗೆ ಏನು ಹೇಳುವುದು? 
     ಅದೇನೇ ಆದರೂ ಇವರ ಆಕ್ಷೇಪಣೆಗಳಿಗೆ ಉತ್ತರ ನೋಡೋಣ.
    ದಶರಥನಿಗೆ ಮೂರು ಪತ್ನಿಯರು ಅಥವಾ ವಾಲ್ಮೀಕಿ ರಾಮಾಯಣದ ಪ್ರಕಾರವೇ ಹಲವಾರು ಪತ್ನಿಯರಿದ್ದರೂ ಸಂತಾನವಾಗಲಿಲ್ಲ. ಈಗ ಹಾಗಾದರೆ ನಾವು ವೈದ್ಯರ ಬಳಿ ಹೋಗಿ ಹಾರ್ಮೋನ್ ಚಿಕಿತ್ಸೆ ಮೊದಲಾದವುಗಳನ್ನು ತೆಗೆದುಕೊಂಡು ಸಂತಾನಾಭಿವೃದ್ಧಿ ಮಾಡಿಕೊಳ್ಳುವಂತೆ ಅಂದಿನ ದಿನಗಳಲ್ಲಿ ಪುತ್ರಕಾಮೇಷ್ಠಿ ಯಜ್ಞ ಮಾಡಿದಾಗ ದಿವ್ಯ ಪುರುಷನೊಬ್ಬ ಬಂದು ದಿವ್ಯ ಪಾಯಸವನ್ನು ಕೊಟ್ಟ ಹಾಗೂ ದಷರಥ ಅದನ್ನು ತನ್ನ ಮೂರು ಪ್ರಮುಖ ರಾಣಿಯರಿಗೆ ಹಂಚಲು ಅವರು ಅದನ್ನು ಸೇವಿಸಿ ಗರ್ಭವತಿಯರಾದರು ಎಂಬುದು ಸಣ್ಣ ಮಗುವಿಗೂ ಗೊತ್ತಿರುವ ವಿಷಯ. ಪಾಯಸ ಒಂದು ಔಷಧೀಯ ಚಿಕಿತ್ಸೆ ಏಕಾಗಿರಬಾರದು? ಅದನ್ನು ರಾಣಿಯರು ಸೇವಿಸಿ ಸಂತಾನ ಶಕ್ತಿ ಪಡೆದ ಬಳಿಕ ದಶರಥ ನಿಂದಲೇ ಗರ್ಭ ಧರಿಸಿದರಲ್ಲವೇ? ದಶರಥನ ಪುತ್ರನಾದುದರಿಂದಲೇ ರಾಮನಿಗೆ ದಾಶರಥಿ ಎಂದು ಹೆಸರು ಬುದಿತು. ಭಗವಾನರು ದಶರಥನು ತನ್ನ ರಾಣಿಯರನ್ನು ಪುರೋಹಿತರಿಗೆ ಒಪ್ಪಿಸಿದನು ಎಂದು ಹೇಳಿರುವುದು ವಾಲ್ಮೀಕಿ ರಾಮಾಯಣದಲ್ಲಿ ಇಲ್ಲ. ಆದರೆ ಈ ಇನ್ನೊಬ್ಬರಿಂದ ಮಕ್ಕಳು ಹುಟ್ಟುವುದು ಇರಲಿಲ್ಲವೆಂದಲ್ಲ. ಅದು ಮಹಾಭಾರತ ಮತ್ತು ಇತರ ಪೌರಾಣಿಕ ಕಥೆಗಳಲ್ಲಿ ಕಾಣುವ ನಿಯೋಗ ಪದ್ಧತಿ.‌ ಮಕ್ಕಳಾಗುವುದು ಬಹಳ ಮುಖ್ಯವಾಗಿದ್ದ ಕಾಲದಲ್ಲಿ ಒಬ್ಬ ಯೋಗ್ಯ, ಜಿತೇಂದ್ರಿಯ ವಿದ್ವಾಂಸನನ್ನು ಕರೆಸಿ ಅವನಿಂದ ಹೆಂಡತಿಯಲ್ಲಿ ಸಂಪರ್ಕ ಮಾಡಿಸಿ ಅವಳು ಗರ್ಭವತಿಯಾದ ನಂತರ ಅವಳಲ್ಲಿ ಯಾವುದೇ ಕಾಮವನ್ನು ವ್ಯಕ್ತಪಡಿಸದಿರುವ ಒಂದು ಪದ್ಧತಿ ನಿಯೋಗ ಪದ್ಧತಿ. ಇದಲ್ಲದೆ, ಮಹಾಭಾರತದಲ್ಲಿ ಪಾಂಡುವು ಕುಂತಿಗೆ, ಕನ್ಯೆಗೆ ಮದುವೆಗೆ ಮೊದಲೇ ಹುಟ್ಟಿರುವ ಕಾನೀನ ಪುತ್ರ, ದತ್ತು ತೆಗೆದುಕೊಳ್ಳುವ ದತ್ತು ಪುತ್ರ, ಮೊದಲಾದ ಹಲವು ರೀತಿಯ ಪುತ್ರರಿಗೆ ಅವಕಾಶ ಇದೆ ಎಂದು ವೈದಿಕ ಧರ್ಮದ ಔದಾರ್ಯವನ್ನು ಹೇಳುತ್ತಾನೆ. ಆದರೆ ರಾಮನು ಈ ಯಾವ ರೀತಿಯೂ ಹುಟ್ಟದೆ, ದಶರಥ ಮತ್ತು ಕೌಸಲ್ಯೆಯರಿಗೆ ದಿವ್ಯ ಪಾಯಸದಿಂದ ಹುಟ್ಟಿದವನಾಗಿದ್ದಾನೆ. ವಾಲ್ಮೀಕಿ ರಾಮಾಯಣವನ್ನೇ ಓದಿದ್ದೇನೆ ಎನ್ನುವ ಭಗವಾನರು ಅದರಲ್ಲಿರುವ ಅಲೌಕಿಕತೆಯನ್ನೂ ಒಪ್ಪಿಕೊಳ್ಳಬೇಕು.‌ 
     ರಾಮನು ಮದ್ಯಪಾನಿ ಹಾಗೂ ಮಾಂಸಾಹಾರಿ ಎನ್ನುವುದು ಇನ್ನೊಂದು ಆಕ್ಷೇಪ. ನಿಜವೇ, ಶ್ರೀರಾಮನು ಸೀತೆಯೊಂದಿಗೆ ಮಧುಮೈರೇಯ ಎಂಬ ಪಾನೀಯವನ್ನು ಕುಡಿಯುತ್ತಾ ಸೇವಕರು ತಂದುಕೊಡುತ್ತಿದ್ದ ಮಾಂಸಭಕ್ಷ್ಯಗಳನ್ನು ಸೇವಿಸುತ್ತಾ ಅಪ್ಸರೆಯರ ನರ್ತನವನ್ನು ನೋಡುತ್ತಾ ಸಂತೋಷಪಡುತ್ತಿದ್ದ ಎಂದು ಉತ್ತರಕಾಂಡದಲ್ಲಿ ಹೇಳಿದೆ. ಅಷ್ಟೇ ಅಲ್ಲದೆ ಕಾಡಿನಲ್ಲಿ ಲಕ್ಷ್ಮಣ ಒಂದು ಪರ್ಣಕುಟಿ ಕಟ್ಟಿದಾಗ ಎಲ್ಲರೂ ಒಂದು ಕಸ್ತೂರಿಮೃಗವನ್ನು ಅರ್ಪಿಸಿ ಸೇವಿಸುತ್ತಾರೆ ಹಾಗೂ ರಾಮನೇ ಸೀತೆಗೆ ಒಮ್ಮೆ ಜಿಂಕೆಯ ಮಾಂಸವನ್ನು ಬೇಯಿಸಿ ತಿನ್ನಿಸಿದ ಎಂದು ಅರಣ್ಯಕಾಂಡದಲ್ಲೀದೆ.‌ ರಾಮ ಒಬ್ಬ ರಾಜನಲ್ಲವೇ? ರಾಜರು ಕ್ಷತ್ರಿಯರು. ಕ್ಷತ್ರಿಯರಿಗೆ ಮದ್ಯಮಾಂಸಗಳು ಸಹಜವಲ್ಲವೇ? ರಾಮ, ಕೃಷ್ಣ, ಪಾಂಡವರು, ಕೌರವರು, ಇವರೆಲ್ಲರೂ ಮಾಂಸಾಹಾರಿಗಳೇ ಆಗಿದ್ದರು. ಅಷ್ಟೇಕೆ? ಬ್ರಾಹ್ಮಣರೂ ಯಜ್ಞ ಯಾಗಗಳಲ್ಲಿ ಮಾಂಸಭಕ್ಷಣೆ ಮಾಡುತ್ತಿದ್ದರು. ಆಯುರ್ವೇದ ಗ್ರಂಥಗಳಲ್ಲಿ ಅನೇಕ ಮಾಂಸಗಳ ಔಷಧೀಯ ಗುಣಗಳೂ ಹೇಳಲಾಗಿದೆ. ಹಾಗೆಂದು ಸುಮ್ಮನೆ ಪ್ರಾಣಿಗಳನ್ನು ಕೊಲ್ಲುವುದನ್ನು ಪ್ರೋತ್ಸಾಹಿಸಿಲ್ಲ. ಬೇಟೆ, ಮದ್ಯಪಾನ, ಸ್ತ್ರೀ ವ್ಯಾಮೋಹ, ಮತ್ತು ಜೂಜು, ಈ ನಾಲ್ಕನ್ನೂ ರಾಜರ ದೋಷಗಳೆಂದೇ ಹೇಳಿದ್ದಾರೆ.‌ ಆದರೆ ರಾಜರು ಇವನ್ನು ಸ್ವಲ್ಪವಾದರೂ ಮಾಡುತ್ತಿದ್ದರು. ಹಾಗಾಗಿಯೇ ಮನುಸ್ಮೃತಿ ಹೇಳುತ್ತದೆ 
  ನ ಮಾಂಸಭಕ್ಷಣೇ ದೋಷೋ ನ ಮದ್ಯೇ ನ ಚ ಮೈಥುನೇ /
  ಪ್ರವೃತ್ತಿರೇಷಾ ಭೂತಾನಾಂ ನಿವೃತ್ತಿಸ್ತು ಮಹಾಫಲಾ//
        ' ಮಾಂಸಭಕ್ಷಣೆ, ಮದ್ಯಪಾನ, ಹಾಗೂ ಮೈಥುನದಲ್ಲಿ ದೋಷವಿಲ್ಲ. ಇದು ಜೀವಿಗಳ ಪ್ರವೃತ್ತಿಯೇ ಆಗಿದೆ. ಆದರೆ ಇವುಗಳ ನಿವೃತ್ತಿಯಿಂದ ಮಹಾಫಲವುಂಟು.' 
     ಇನ್ನು ಮಧು ಮೈರೇಯ ಎಂಬುದು ಮಧು ಅಥವಾ ಜೇನು ಮತ್ತು ಕೆಲವು ಹಣ್ಣುಗಳಿಂದ ಹಾಗೂ ಸಂಭಾರ ಪದಾರ್ಥಗಳಿಂದ ಮಾಡಿದ ಒಂದು ಪೇಯ. ಹೀಗೆಯೇ ಆಸವ, ವಾರುಣಿ, ಮೊದಲಾದ ಅನೇಕ ಪೇಯಗಳಿದ್ದವು. ಕೌಟಿಲ್ಯನು ತನ್ನ ಅರ್ಥಶಾಸ್ತ್ರದಲ್ಲಿ ಇಂಥ ಕೆಲವು ಪೇಯಗಳ ಉದಾಹರಣೆ ಕೊಡುತ್ತಾನೆ. ಭಾಗವತದಲ್ಲಿ ಕರ್ದಮರ ಪತ್ನಿ ದೇವಹೂತಿಗೆ ಸಖಿಯರು ಆಸವವೆಂಬ ಪಾನೀಯವನ್ನು ಕುಡಿಸುತ್ತಾರೆ. ಹಾಗೆಯೇ ಬಲರಾಮನು ವಾರುಣಿ ಎಂಬ ಪಾನೀಯವನ್ನು ಕುಡಿದ ಉಲ್ಲೇಖವಿದೆ. ಇವೆಲ್ಲವೂ ಮತ್ತು ಬರಿಸುವ ಪಾನೀಯಗಳೇ ಆದರೂ ಹೆಂಡ, ಸಾರಾಯಿಗಳಂಥ ಕ್ಷುಲ್ಲಕ ಮದ್ಯಗಳಲ್ಲ. ಅಂದಿನ ದಿನಗಳಲ್ಲಿ ರಾಜರು ಹೀಗೆ ಕೆಲವು ಪೇಯಗಳನ್ನು ಕುಡಿದು ಆನಂದಿಸುತ್ತಿದ್ದರು. ಈಗ ನಾವು ಕಾಫಿ, ಚಹಾ ಕುಡಿಯುವುದಿಲ್ಲವೇ? ಅವೂ ಸ್ವಲ್ಪ ಮತ್ತು ಬರಿಸುತ್ತವೆ. ಅಷ್ಟೇಕೆ? ಗಸಗಸೆ ಪಾಯಸ ಕುಡಿದರೂ ಸ್ವಲ್ಪ ಮತ್ತು ಬರುತ್ತದೆ. ರಾಮನು ಎಂಥ ಪರಾಕ್ರಮಿಯಾಗಿದ್ದ, ರಾವಣನಂಥ ವಿಶ್ವವನ್ನೇ ಗೆದ್ದ ರಾಕ್ಷಸನನ್ನು ಕೊಂದ ಎಂದು ಗೊತ್ತಿದ್ದ ಪ್ರಜೆಗಳು ಯಾವುದೇ ಅಪರಾಧಗಳನ್ನು ಮಾಡದೇ ಶಾಂತ ಜೀವನ ನಡೆಸುತ್ತಿದ್ದರು. ಹಾಗಾಗಿ ರಾಮನಿಗೆ ಆಡಳಿತ ಕಷ್ಟವಾಗದೇ ನರ್ತನ ನೋಡುತ್ತಾ ಆನಂದಿಸಿದರೆ ತಪ್ಪೇನು?
     ಇನ್ನು ಶ್ರೀರಾಮನು ಶಂಬೂಕನನ್ನು ಕೊಂದ ಆಕ್ಷೇಪ. ಶಂಬೂಕ ಒಬ್ಬ ಶೂದ್ರ ತಪಸ್ವಿ ಎನ್ನುವುದಕ್ಕಿಂತ ಅವನು ಸಶರೀರವಾಗಿ ಸ್ವರ್ಗಕ್ಕೆ ಹೋಗಲು ತಪಸ್ಸು ಮಾಡುತ್ತಿದ್ದ ಕಾರಣಕ್ಕೆ ರಾಮನು ಅವನನ್ನು ಕೊಂದ. ಹಿಂದೆ ಹರಿಶ್ಚಂದ್ರನ ತಂದೆ ಸತ್ಯವ್ರತ ಅಥವಾ ತ್ರಿಶಂಕು ಸಶರೀರವಾಗಿ ಸ್ವರ್ಗಕ್ಕೆ ಹೋಗಲು ಪ್ರಯತ್ನಿಸಿದಾಗ ವಸಿಷ್ಠರ ಮಕ್ಕಳು ಅವನಿಗೆ ಚಾಂಡಾಲತ್ವದ ಶಾಪ ಕೊಡಲಿಲ್ಲವೇ? ಹಾಗೂ ವಿಶ್ವಾಮಿತ್ರರು ಅವನನ್ನು ಯಜ್ಞ ಮಾಡಿ ಸ್ವರ್ಗಕ್ಕೆ ಕಳಿಸಲು ಅವನನ್ನು ಸ್ವರ್ಗದಿಂದ ತಳ್ಳಲಾಯಿತು. ಆಗ ವಿಶ್ವಾಮಿತ್ರರು ಅವನನ್ನು ತಲೆಕೆಳಗಾಗಿ ಅವರದೇ ಸೃಷ್ಟಿಯ ಒಂದು ಸ್ವರ್ಗದಲ್ಲಿ ನಿಲ್ಲಿಸಿದರು. ಅಂತೆಯೇ ರಾಮನು ಶಂಬೂಕನ ತಪ್ಪು ರೀತಿಯ ತಪಸ್ಸಿಗೆ ದಂಡನೆ ನೀಡಿದನು. ಅಲ್ಲದೆ, ವಾಲ್ಮೀಕಿ ರಾಮಾಯಣದಲ್ಲೇ ಮತಂಗ ಜಾತಿಯ ಶೂದ್ರಳೇ ಆದ ಶಬರಿ, ಹಾಗೂ ಶ್ರವಣಕುಮಾರನ ವೈಶ್ಯ ಮತ್ತು ಶೂದ್ರ ತಂದೆ ತಾಯಿಯರು ತಪಸ್ಸು ಮಾಡಿದ ವಿಷಯ ಇದೆ. ಅಷ್ಟೇ ಅಲ್ಲದೆ ಶಂಬೂಕನ ವಧೆಯಾದ ಕೂಡಲೇ ಬ್ರಾಹ್ಮಣ ಬಾಲಕ ಬದುಕಿದ ಅಲೌಕಿಕ ವಿಷಯವನ್ನೂ ಒಪ್ಪಬೇಕು. ಅವನು ಬದುಕಿದ ಹಾಗೂ ದೇವತೆಗಳು ಪುಷ್ಪವೃಷ್ಟಿ ಮಾಡಿದರು ಎಂದರೆ ರಾಮ ಮಾಡಿದ್ದು ಸರಿ ಎಂದೇ ಆಯಿತಲ್ಲವೇ? ಇಲ್ಲ, ಇಂಥ ಅಲೌಕಿಕ ವಿಷಯವನ್ನು ಒಪ್ಪಲಾಗದು ಎಂದರೆ ಇಡೀ ಕಥೆಯನ್ನು ಕಾಲ್ಪನಿಕ ಎಂದು ಹೇಳಬೇಕಾಗುತ್ತದೆ. ಆಗಲೂ ರಾಮನದು ಯಾವುದೇ ತಪ್ಪಿರುವುದಿಲ್ಲ. ಹಾಗೆ ನೋಡಿದರೆ ಕೆಲವು ವಿದ್ವಾಂಸರು ಉತ್ತರಕಾಂಡ ವಾಲ್ಮೀಕಿ ಕೃತವಲ್ಲ ಎಂದೂ ಹೇಳುತ್ತಾರೆ. ಹೀಗೂ ತೆಗೆದುಕೊಳ್ಳಬಹುದು.
     ಶ್ರೀ ರಾಮನು ಸೀತೆಯನ್ನು ಕಾಡಿಗೆ ಕಳುಹಿಸಿದ ಕಾರಣ ಅಗಸನ ಮಾತೆಂದು ತಿಳಿದಿರುವಂತೆ ವಾಲ್ಮೀಕಿ ರಾಮಾಯಣದಲ್ಲಿ ಇಲ್ಲ. ಅಲ್ಲಿರುವಂತೆ ಇಡೀ ಅಯೋಧ್ಯೆಯ ಜನರು ಸೀತೆಯ ಚಾರಿತ್ರ್ಯದ ಬಗ್ಗೆ ತಪ್ಪಾಗಿ ಮಾತನಾಡುತ್ತಿದ್ದರು ಹಾಗೂ ರಾಮನು ಅವಳನ್ನು ಪುನಃ ಕರೆದುಕೊಂಡಿದ್ದು ಸರಿಯಲ್ಲ ಎಂದು ಉದ್ಯಾನವನಗಳಲ್ಲಿ, ಬೀದಿಬೀದಿಗಳಲ್ಲಿ, ಎಲ್ಲೆಲ್ಲೂ ಮಾತನಾಡುತ್ತಿದ್ದರು ಎಂದು ಭದ್ರ ಎಂಬ ಗುಪ್ತಚರ ರಾಮನಿಗೆ ಹೇಳಿದಾಗ ರಾಮನು ಜನರ ಸಮಾಧಾನಕ್ಕಾಗಿ ಹಾಗೂ ತನಗೆ ಲೋಕಾಪವಾದ ಬರಬಾರದು ಎಂದು ಸೀತೆಯನ್ನು ಕಾಡಿಗೆ ಕಳಿಸಲೇಬೇಕಾಯಿತು. ಆದರೆ ಇಲ್ಲಿ ರಾಮನು ಸೊಗಸಾದ ಉಪಾಯ ಮಾಡಿದ್ದನ್ನು ಭಗವಾನರು ಗಮನಿಸಿಲ್ಲ. ಗರ್ಭವತಿಯಾಗಿದ್ದ ಸೀತೆಯು ಕಾಡಿನಲ್ಲಿ ಕಳೆದಂತೆ ಋಷಿಗಳ ಆಶ್ರಮದಲ್ಲಿ ಕಾಲ ಕಳೆಯಬೇಕೆಂದು ಆಸೆಯಾಗುತ್ತಿದೆ ಎಂದು ರಾಮನಿಗೆ ಹೇಳಿದ್ದಳು. ಇದೇ ನೆಪದಿಂದ ಅವನು ಲಕ್ಷ್ಮಣನಿಗೆ ಸೀತೆಯನ್ನು ವಾಲ್ಮೀಕಿ ಆಶ್ರಮದ ಬಳಿ ಬಿಟ್ಟು ಬರಲು ಹೇಳುತ್ತಾನೆ. ಇದರಿಂದ ಅವಳ ಆಸೆಯೂ ನೆರವೇರಿ, ಜನರ ಸಮಸ್ಯಯೂ ಪರಿಹಾರವಾಗುತ್ತದೆ ಎಂದು ಅವನು ಯೋಚಿಸಿದ್ದು ಹಾಗೂ ಈ ಸಮಸ್ಯೆ ಸರಿಹೋದ ಬಳಿಕ ಅವಳನ್ನು ಪುನಃ ಹೇಗೋ ಪಡೆದುಕೊಳ್ಳುವ ಯೋಚನೆ ಇದ್ದುದು ಸ್ಪಷ್ಟವಾಗಿ ಕಾಣುತ್ತದೆ. ಇದರೊಂದಿಗೆ ರಾಮನೂ ಬಹಳ ನೊಂದುಕೊಂಡ. ಸೀತೆಯ ಮೇಲೆ ಅವನಿಗೆಷ್ಟು ಪ್ರೀತಿಯಿತ್ತು ಎಂದು ಅರಣ್ಯಕಾಂಡದಲ್ಲಿ ಅವನ ವಿಲಾಪದಿಂದಲೇ ಗೊತ್ತಾಗುತ್ತದೆ. ಅಲ್ಲದೆ ಅವನು ಅವಳನ್ನು ಮರಳಿ ಪಡೆಯಲು ವಾನರರೊಂದಿಗೆ ಲಂಕೆಗೆ ಹೋಗಿ ರಾವಣನನ್ನು ಕೊಂದು ಎಷ್ಟು ಕಷ್ಟ ಪಟ್ಟ ಎಂದು ಗೊತ್ತಾಗುತ್ತದೆ. ಜನರಿಗೆ ಅವಳ ಪಾವಿತ್ರ್ಯತೆ ತಿಳಿಯಲೆಂದು ಅವನು ಅವಳನ್ನು ನಿರಾಕರಿಸುವ ನಾಟಕ ಆಡಿದ. ಪುನಃ ವಾಲ್ಮೀಕಿ ರಾಮಾಯಣ ಮೊದಲಾದ ಗ್ರಂಥಗಳಲ್ಲಿ ಅಗ್ನಿಪರೀಕ್ಷೆಯಂಥ ಅಲೌಕಿಕ ಘಟನೆಗಳನ್ನು ಒಪ್ಪಬೇಕು. ಇಲ್ಲವೇ ಎಲ್ಲಾ ಹಿರಿಯರು ರಾಮನಿಗೆ ಉಪದೇಶ ಮಾಡಿ ಅವನು ಸೀತೆಯನ್ನು ಸ್ವೀಕರಿಸಿದ ಎಂದು ಐತಿಹಾಸಿಕವಾಗಿಯೂ ತೆಗೆದುಕೊಳ್ಳಬಹುದು. ಸೀತೆಯ ಬಗ್ಗೆ ಅಯೋಧ್ಯೆಯಲ್ಲಿ ಅಪವಾದ ಬಂದಾಗ, ರಾಮನು ಹೀಗಾಗಬಾರದೆಂದು ಲಂಕೆಯಲ್ಲೇ ತೋರಿಸಿದೆನಲ್ಲ ಎಂದು ಕೊರಗುತ್ತಾನೆ. ಹೀಗೆ ಒಬ್ಬ ರಾಜನಾಗಿ ಪ್ರಜೆಗಳಿಗಾಗಿ ಸೀತಾಪರಿತ್ಯಾಗ ಮಾಡಿದ ಶ್ರೀರಾಮ ಮಹಾತ್ಯಾಗಿ.
    ರಾಮನು ತಂದೆಯನ್ನು ನಿಂದಿಸಿದ ಎನ್ನುವ ಆಕ್ಷೇಪ. ಕಾಡಿನಲ್ಲಿ ಒಂದೇ ಒಂದು ಬಾರಿ ಲಕ್ಷ್ಮಣನ ಬಳಿ, ತಾನು ಇಷ್ಟು ವಿಧೇಯ ಪುತ್ರನಾಗಿದ್ದರೂ ತನ್ನ ತಂದೆ ದಶರಥ ಕಾಮವಶನಾಗಿ ತನ್ನನ್ನು ಕಾಡಿಗೆ ಕಳಿಸಿದನಲ್ಲ ಎಂದು ಮನುಷ್ಯಸಹಜವಾಗಿ ನೊಂದುಕೊಳ್ಳುತ್ತಾನೆ. ಹಾಗೆಂದು ಅವನು ತಂದೆಯನ್ನು ನಿಂದಿಸಿಲ್ಲ. ತಂದೆಯು ಹೇಳಿದ ಕೂಡಲೇ ಕಾಡಿಗೆ ಹೋದ ಹಾಗೂ ಅವನ ಮದುವೆಯ ಸಮಯದಲ್ಲೂ ತಂದೆ ಬರಲಿ ಎಂದು ಹೇಳುತ್ತಾನೆ. ಅಂತೆಯೇ ಶ್ರದ್ಧೆಯಿಂದ ತಂದೆಯ ಶ್ರಾದ್ಧವನ್ನು ಮಾಡುತ್ತಾನೆ.
      ಲಕ್ಷ್ಮಣನನ್ನು ಕೊಂದ ಎಂಬ ಆರೋಪ. ರಾಮಾವತಾರದ ಕೊನೆಯಲ್ಲಿ ಕಾಲಪುರುಷ ಅವನಿಗೆ ನೆನಪಿಸಲು ಬಂದಾಗ ರಾಮನು ಲಕ್ಷ್ಮಣನನ್ನು ಕಾವಲಿಟ್ಟು ಯಾರನ್ನೂ ಒಳಗೆ ಬಿಡಬಾರದೆಂದಾಗ ಹಾಗೂ ದುರ್ವಾಸರು ಬಂದು ಒಳಗೆ ಬಿಡದಿದ್ದರೆ ಅಯೋಧ್ಯೆಗೆ ಶಾಪ ಕೊಡುತ್ತೇನೆ ಎಂದಾಗ ಲಕ್ಷ್ಮಣನು ಅವರನ್ನು ಒಳಗೆ ಬಿಡಲೇಬೇಕಾಯಿತು. ಆ ತಪ್ಪಿಗೆ ರಾಮನು ಅವನನ್ನು ದಂಡಿಸದಿದ್ದರೂ ಅವನೇ ರಾಜ್ಯತ್ಯಾಗ ಮಾಡಿ ಸರಯೂ ನದಿಯಲ್ಲಿ ಮುಳುಗಿ ಯೋಗಸಮಾಧಿಯಿಂದ ಪ್ರಾಣತ್ಯಾಗ ಮಾಡಿದ. ಅನಂತರ ದು:ಖಿತನಾದ ರಾಮನೂ ಹಾಗೆಯೇ ಸರಯೂ ನದಿಯಲ್ಲಿ ಮುಳುಗಿ ತನ್ನ ಅವತಾರ ಮುಗಿಸಿದ. ಇದನ್ನು ಭಗವಾನರು ಆತ್ಮಹತ್ಯೆ ಎಂದು ಬಿಂಬಿಸುತ್ತಾರೆ. ಆದರೆ ಸ್ವ ಇಚ್ಛೆಯಿಂದ ಹೀಗೆ ದೇಹತ್ಯಾಗ ಮಾಡುವ ಯೋಗದ ಕ್ರಮವನ್ನು ಭಾಗವತದಲ್ಲಿ ವಿಷ್ಣುವಿನ ಅವತಾರವಾದ ಕಪಿಲ ಮಹರ್ಷಿಗಳು ವಿವರಿಸಿದ್ದಾರೆ. ಹಾಗಾಗಿ ಇದು ಆತ್ಮಹತ್ಯೆ ಅಲ್ಲ. ಅಲ್ಲದೆ ರಾಮನು ಹನ್ನೊಂದು ಸಾವಿರ ವರ್ಷಗಳ ಸುದೀರ್ಘ ಕಾಲ ಆಳಿ ತನ್ನ ಕರ್ತವ್ಯಗಳನ್ನು ಮುಗಿಸಿ ದೇಹತ್ಯಾಗ ಮಾಡಿದ ಕಾರಣ ಅದು ತಪ್ಪಲ್ಲ. 
    ರಾಮನು ಹನ್ನೊಂದು ಸಾವಿರ ವರ್ಷಗಳ ಕಾಲ ಆಳಿದ್ದು ಸುಳ್ಳು ಎನ್ನುತ್ತಾರೆ ಭಗವಾನರು. ವಾಲ್ಮೀಕಿ ರಾಮಾಯಣದಲ್ಲಿ ಇರುವುದನ್ನೇ ಹೇಳುವೆ ಎನ್ನುವ ಅವರು ಪುನಃ ಅದರಿಲ್ಲುರುವುದನ್ನು ಒಪ್ಪುವುದಿಲ್ಲ. ಆದರೂ ಇಷ್ಟೊಂದು ಕಾಲ ಹೇಗೆ ಬದುಕಿರಲು, ಆಳಲು ಸಾಧ್ಯ ಎಂದು ಕೇಳಬಹುದು. ಇದಕ್ಕೆ ಪರಿಹಾರ ಇದೆ.‌ ವಿದ್ವಾಂಸರು ಹೇಳುವುದೇನೆಂದರೆ ಸಂಸ್ಕೃತದಲ್ಲಿ ಸಂಖ್ಯಾವಾಚಕ ಎಂಬ ಒಂದು ವಿಚಾರವಿದೆ. ಅದರಂತೆ ಇಂಥ ದೊಡ್ಡ ಸಂಖ್ಯೆಗಳನ್ನು ಯಥಾವತ್ತಾಗಿ ತೆಗೆದುಕೊಳ್ಳಬಾರದು. ಶ್ರೀಕೃಷ್ಣನ ಹದಿನಾರು ಸಾವಿರ ಪತ್ನಿಯರು, ಶ್ರೀ ರಾಮನ ಹನ್ನೊಂದು ಸಾವಿರ ವರ್ಷಗಳು, ಇವೆಲ್ಲವೂ ಹೀಗೆ ಸಂಖ್ಯಾವಾಚಕಗಳು. 
      ಇಷ್ಟೆಲ್ಲಾ ಹೇಳಿದರೂ ಶ್ರೀ ರಾಮನ ಕಾರ್ಯಗಳು ಆಕ್ಷೇಪಣೀಯ ಎನಿಸಿದರೆ ಅದಕ್ಕೆ ಕಾರಣ ಅವನು ಮಾನವನಾಗಿ ನಡೆದುಕೊಳ್ಳಬೇಕಾಗಿದ್ದ ಪರಿಸ್ಥಿತಿ. ರಾವಣನು ತಾನು ಮಾನವನನ್ನು ಹೊರತುಪಡಿಸಿ ಇನ್ನಾವ ಜೀವಿಯಿಂದಲೂ ಸಾಯಬಾರದೆಂದು ಬ್ರಹ್ಮನಿಂದ ವರ ಪಡೆದಿದ್ದನು.‌ ಮಾನವರನ್ನು ಅವನು ಲೆಕ್ಕಿಸಲಿಲ್ಲ. ಹಾಗಾಗಿ ವಿಷ್ಣುವು ಮನುಷ್ಯನ ರೂಪದಲ್ಲಿ ಅವತರಿಸಿ ಅವನನ್ನು ಕೊಂದನು. ಎಂದೆಂದೂ ಅವನು ತಾನೇ ವಿಷ್ಣು ಎಂದು ಕೃಷ್ಣನಂತೆ ಬಹಿರಂಗಪಡಿಸಲಿಲ್ಲ. ಅವನು ಸುದರ್ಶನ ಚಕ್ರ, ಶಾರ್ಙ್ಗ ಧನುಸ್ಸು, ಗರುಡ ವಾಹನ, ಮೊದಲಾದ ವಿಷ್ಣುವಿನ ಯಾವ ಲಾಂಛನಗಳನ್ನೂ ಬಳಸಲಿಲ್ಲ. ಸೀತೆಯ ಅಗ್ನಿಪರೀಕ್ಷೆಯಾದಾಗ ಬ್ರಹ್ಮಾದಿದೇವತೆಗಳೊಂದಿಗೆ ಸ್ವಯಂ ದಶರಥನೇ ಆಕಾಶದಲ್ಲಿ ಪ್ರತ್ಯಕ್ಷನಾಗಿ ರಾಮನನ್ನು ಸಾಕ್ಷಾತ್ ವಿಷ್ಣುವೆಂದು ಹೇಳಿದಾಗ ಅವನು ಈ ವಿಷಯ ತನಗೆ ತಿಳಿಯದೆನ್ನುತ್ತಾನೆ. ಅವನು ಹೇಳುತ್ತಾನೆ - ಆತ್ಮಾನಂ ಮಾನುಷಂ ಮನ್ಯೇ ರಾಮಂ ದಶರಥಾತ್ಮಜಮ್ ( ನಾನು ನನ್ನನ್ನು ಒಬ್ಬ ಮನುಷ್ಯ, ದಶರಥನ ಪುತ್ರನಾದ ರಾಮ ಎಂದು ಭಾವಿಸುತ್ತೇನೆ.). ಹೀಗೆ ಮನುಷ್ಯನ ರೀತಿ ಇರಬೇಕೆಂದಾಗ ಕೆಲವು ಮಾನವದೌರ್ಬಲ್ಯಗಳು ಇದ್ದೇ ಇರುತ್ತವೆ. ಆದರೆ ಇವುಗಳೊಂದಿಗೆ ರಾಮನು ತಾನು ಆದರ್ಶ ಪುರುಷ, ಮರ್ಯಾದಾ ಪುರುಷೋತ್ತಮ ಎಂದು ತೋರಿಸಿದ.
    ಇನ್ನು ಪೌರಾಣಿಕವಾಗಿ ನೋಡುವುದಾದರೆ, ರಾಮನು ಸೀತೆ ಮತ್ತು ಲಕ್ಷ್ಮಣರ ತ್ಯಾಗ ಮಾಡುವುದಕ್ಕೆ ಒಂದು ಸ್ವಾರಸ್ಯಕರ ಕಥೆಯಿದೆ. ಇದೂ ವಾಲ್ಮೀಕಿ ರಾಮಾಯಣದಲ್ಲೇ ಇದೆ. ವಸಿಷ್ಠರು ಇದನ್ನು ದಶರಥನಿಗೆ ಮೊದಲೇ ಹೇಳಿದ್ದರು.‌ ಅದನ್ನು ಕೇಳಿದ ಸುಮಂತ್ರನು ಲಕ್ಷ್ಮಣನಿಗೆ ಹೇಳಿದನು. ಆ ಕಥೆಯಂತೆ, ಹಿಂದೆ ದೇವಾಸುರರ ಯುದ್ಧವಾದಾಗ, ಸೋಲುತ್ತಿದ್ದ ರಾಕ್ಷಸರು, ತಮ್ಮ ಗುರು ಶುಕ್ರಾಚಾರ್ಯರು ತಪಸ್ಸಿಗೆ ಹೋಗಿದ್ದು ಅಲ್ಲಿ ಇರಲಿಲ್ಲದ ಕಾರಣ, ಅವರ ತಂದೆ ಭೃಗು ಮಹರ್ಷಿಗಳ ಆಶ್ರಮಕ್ಕೆ ಓಡಿದರು. ಅವರೂ ಇಲ್ಲದೆ, ಅವರ ಪತ್ನಿ ಖ್ಯಾತಿ ರಾಕ್ಷಸರಿಗೆ ಆಶ್ರಯ ಕೊಟ್ಟಳು. ಆಗ ವಿಷ್ಣುವು ಅವಳನ್ನು ರಾಕ್ಷಸರನ್ನು ಒಪ್ಪಿಸುವಂತೆ ಹೇಳಲು ಅವಳು ಒಪ್ಪದಿದ್ದಾಗ, ಅವನು ತನ್ನ ಚಕ್ರದಿಂದ ಅವಳ ಶಿರಚ್ಛೇದನ ಮಾಡಿ ಕೊಂದನು! ದೇವತೆಗಳು ರಾಕ್ಷಸರನ್ನು ಸೋಲಿಸಿದರು.‌ ಅನಂತರ ಭೃಗು ಮಹರ್ಷಿಗಳು ತಮ್ಮ ಪತ್ನಿಯ ಸಾವಿನಿಂದ ದುಃಖಗೊಂಡು ತಮ್ಮ ದಿವ್ಯ ದೃಷ್ಟಿಯಿಂದ ಇದು ವಿಷ್ಣುವಿನ ಕಾರ್ಯ ಎಂದು ತಿಳಿದು ಅವನಿಗೆ ತಮ್ಮಂತೆಯೇ ಪತ್ನೀವಿಯೋಗ ಅನುಭವಿಸುವಂತೆ ಶಾಪ ಕೊಟ್ಟರು. ಅನಂತರ ತಮ್ಮ ತಪಶ್ಶಕ್ತಿಯಿಂದ ತಮ್ಮ ಪತ್ನಿಯನ್ನು ಬದುಕಿಸಿ, ವಿಷ್ಣುವನ್ನು ಶಪಿಸಿದ್ದಕ್ಕಾಗಿ ಪಶ್ಚಾತ್ತಾಪ ಪಟ್ಟರು. ಆಗ ವಿಷ್ಣುವು ಪ್ರತ್ಯಕ್ಷನಾಗಿ ರಾಮಾವತಾರದಲ್ಲಿ ಅವರ ಶಾಪವನ್ನು ಸ್ವೀಕರಿಸುವೆನೆಂದು ಹೇಳಿ ಅವರನ್ನು ಸಮಾಧಾನಪಡಿಸಿದರು. ಈ ಕಾರಣದಿಂದ ವಿಷ್ಣುವಿನ ಅವತಾರವಾದ ರಾಮನು ಸೀತೆಯ ವಿಯೋಗವನ್ನು ಮತ್ತೆ ಮತ್ತೆ ಅನುಭವಿಸಬೇಕಾಯಿತು. 
    ಇಷ್ಟೆಲ್ಲಾ ಆದರೂ ರಾಮನನ್ನು ದೇವರೆಂದು ಒಪ್ಪುವುದಿಲ್ಲ ಎನ್ನಬಹುದು. ಆದರೆ ರಾಮಾಯಣ ಪರಂಪರೆ ಬಹಳ ದೊಡ್ಡದಿದೆ. ಶ್ರೀ ರಾಮ ಒಬ್ಬ ಆದರ್ಶ ಪುರುಷ. ಅವನು ನಿಜವಾಗಿಯೂ ಆಕಾಶದಲ್ಲಿ ಇರುವ ದೇವರಲ್ಲ ಅಥವಾ ದೇವರೇ ಇಲ್ಲ ಎಂದರೂ ನಮ್ಮ ಭಾರತೀಯ ಸಂಸ್ಕೃತಿಯ ಭಾಗವಾಗಿದ್ದಾನೆ. ಹೌದು, ಇಂದು ಮಾನವನೂ ಒಂದು ಪ್ರಾಣಿ, ಮಂಗ ಜಾತಿಯ ಪ್ರಾಣಿಯಿಂದ ವಿಕಾಸ ಹೊಂದಿದ್ದಾನೆ ಎನ್ನುವುದಕ್ಕೆ ಸಾಕಷ್ಟು ಸಾಕ್ಷಿಗಳು ಇವೆ. ಅಂದಮಾತ್ರಕ್ಕೆ ಮಾನವನು ಪ್ರಾಣಿಯಂತೆ ಬದುಕಬೇಕೇ? ಮಾನವನು ಇತರ ಪ್ರಾಣಿಗಳಿಗಿಂತ ವಿಭಿನ್ನವಾಗಿರುವುದು ಕಲ್ಪನೆ ಎಂಬ ವಿಶೇಷ ಶಕ್ತಿಯಿಂದ. ಸೆಪಿಯನ್ಸ್ ಗ್ರಂಥದಲ್ಲಿ ಆಧುನಿಕ ಇಸ್ರೇಲ್ ಚಿಂತಕ ಯುವಾಲ್ ನೋಹ್ ಹರಾರಿ ಇದನ್ನೇ ಹೇಳುತ್ತಾನೆ. ಪ್ರಾಣಿಗಳು ಕೇವಲ ಪ್ರಕೃತಿಯಲ್ಲಿ ಇರುವುದಷ್ಟನ್ನೇ ಕಾಣುತ್ತವೆ ಹಾಗೂ ಅರಿಯುತ್ತವೆ. ಆದರೆ ಮನುಷ್ಯ ಪ್ರಕೃತಿಯನ್ನು ಮೀರಿ ಕಲ್ಪನೆ ಮಾಡುತ್ತಾನೆ ಹಾಗೂ ಆ ಕಲ್ಪನೆಯ ದೆಸೆಯಿಂದ ಹಲವಾರು ಇತರ ಮನುಷ್ಯರೊಂದಿಗೆ ಸಹಕಾರಿಯಾಗಿ ಸಮಾಜ ಕಟ್ಟುತ್ತಾನೆ. ಹಾಗಾಗಿಯೇ ಸಭ್ಯತೆಗಳು ( civilizations) ಬಂದಿವೆ. ನಮ್ಮ ಭಾಷೆ, ಬಟ್ಟೆ, ಕಥೆ, ಪುರಾಣ, ಕೊನೆಗೆ ದೇವರು ಎಲ್ಲವೂ ಮನುಷ್ಯನ ಕಲ್ಪನೆಗಳೇ ನಿಜ! ಇವುಗಳಲ್ಲಿ ಒಳ್ಳೆಯ ಕಲ್ಪನೆಗಳು ಉಳಿಯಬೇಕು. ಸಭ್ಯತೆಗಳ ಪೈಕಿ ಅತ್ಯಂತ ಹಳೆಯ ಮತ್ತು ಇನ್ನೂ ಉಳಿದಿರುವ ಸಭ್ಯತೆ ನಮ್ಮ ಭಾರತೀಯ ಸಭ್ಯತೆ ಅಥವಾ ಸಂಸ್ಕೃತಿ. ಇಂಥ ಸಂಸ್ಕೃತಿಯ ಭಾಗವಾದ ಶ್ರೀ ರಾಮನಿಗೆ ದೇವಾಲಯ ಬೇಡವೇ? ಅದೂ ಹಿಂದೆ ಇದ್ದು ಮುಸಲ್ಮಾನ ದಾಳಿಕೋರ ಬಾಬರನಿಂದ ನಾಶವಾದ ದೇವಾಲಯದ ಪುನರ್ನಿರ್ಮಾಣ ಬೇಡವೇ? ಈ ದೇವಾಲಯದಿಂದ ನಮ್ಮ ಭಾರತೀಯ ಸಂಸ್ಕೃತಿಯ ಉಳಿವಿದೆ ಅಲ್ಲವೇ? ಹಾಗಾಗಿ ರಾಮಮಂದಿರ ಬೇಕೇ ಬೇಕು.
     

ಶನಿವಾರ, ಜೂನ್ 20, 2026

ಸುಂದರೀಶತಕ -೫೩

ಸಂಸ್ಕೃತ ಮೂಲ 

ಸಹಚರ ಕುಶಲಂ ತಸ್ಯಾ: ಕುಶಲವತೀ ಕಥಯ ಕಿಮಪಿ ಸಂದಿಷ್ಟಮ್ /
ಕಂ ಸಂದಿಶತು ಕೃಶಾಂಗೀ ನ ತತ್ರ ಮರುತೋsಪಿ ಯದ್ಗಮನಮ್ //

ಕನ್ನಡ ಅನುವಾದ 

    ಇಬ್ಬರು ಪ್ರಯಾಣಿಕರ ನಡುವಿನ ಒಂದು ಸಂವಾದ 
ಮೊದಲನೆಯ ಪ್ರಯಾಣಿಕ: ಅಯ್ಯ ಸಹಚರ! ಅವಳು ಕುಶಲವೇ?
ಎರಡನೆಯ ಪ್ರಯಾಣಿಕ: ಹಾ......ಕುಶಲವಾಗಿದ್ದಾಳೆ.
ಮೊದಲನೆಯ ಪ್ರಯಾಣಿಕ: ಹೇಳು! ಏನಾದರೂ ಸಂದೇಶ ಕಳಿಸಿದ್ದಾಳೆಯೇ? 
ಎರಡನೆಯ ಪ್ರಯಾಣಿಕ: ಯಾರಿಗೆ ಸಂದೇಶ ಕಳಿಸಿಯಾಳು ಆ ಕೃಶಾಂಗಿ? ಅಲ್ಲಿ ಗಾಳಿಯೂ ಹೋಗಲಾರದು! 
      ಇಲ್ಲಿ ಕವಿಯು ಇನ್ನೊಂದು ವಿರಹ ಚಿತ್ರಣವನ್ನು ಅದ್ಭುತವಾಗಿ ನಿರೂಪಿಸಿದ್ದಾನೆ. ಇಲ್ಲಿ ಇಬ್ಬರು ಪ್ರಯಾಣಿಕರು ಭೇಟಿಯಾಗಿದ್ದಾರೆ. ಮೊದಲನೆಯ ಪ್ರಯಾಣಿಕನಿಗೆ ಎರಡನೆಯ ಪ್ರಯಾಣಿಕ ತನ್ನ ಊರಿನವನೇ ಎಂದು ಗೊತ್ತಾಗಿದೆ. ತಾನು ಊರು ಬಿಟ್ಟು ಪ್ರಯಾಣ ಹೊರಟು ಎಷ್ಟೋ ದಿನಗಳಾಗಿವೆಯೆಂದು ಯೋಚಿಸಿ ತನ್ನ ಹೆಂಡತಿ ಹೇಗಿರುವಳೋ ಎಂಬ ಚಿಂತೆ ಅವನನ್ನು ಕಾಡಿದೆ. ಹಾಗಾಗಿ, ತನ್ನ ಸಹಚರ ತನ್ನ ಊರಿನವನೇ ಆಗಿರುವುದರಿಂದ ಅವನನ್ನು ತನ್ನ ಹೆಂಡತಿಯ ಕುಶಲದ ಬಗ್ಗೆ ವಿಚಾರಿಸಿದ್ದಾನೆ. ಅದಕ್ಕೆ ಅವನು ಅವಳು ಕುಶಲವಾಗಿದ್ದಾಳೆ ಎಂದಿದ್ದಾನೆ. ಆಗ ಮೊದಲ ಪ್ರಯಾಣಿಕ, ಎರಡನೆಯವನು ಪ್ರಯಾಣ ಹೊರಟಾಗ ತನ್ನ ಹೆಂಡತಿ ಅವನ ಮೂಲಕ ತನಗೇನಾದರೂ ಸಂದೇಶ ಕಳಿಸಿರಬಹುದು ಎಂದು ಯೋಚಿಸಿ," ಹೇಳು! ಏನಾದರೂ ಸಂದೇಶ ಕಳಿಸಿರುವಳೇ?" ಎಂದು ಕೇಳಿದ್ದಾನೆ. ಅದಕ್ಕೆ ಅವನು," ಆ ಕೃಶಾಂಗಿ ಯಾರಿಗೆ ಸಂದೇಶ ಕಳಿಸಿಯಾಳು? ಅಲ್ಲಿ ಗಾಳಿಯೂ ಹೋಗಲಾಗುತ್ತಿಲ್ಲ!" ಎಂದಿದ್ದಾನೆ! ಅಂದರೆ, ಅವಳು ಎಷ್ಟು ವಿರಹತಪ್ತಳಾಗಿದ್ದಾಳೆಂದರೆ ಮನೆಯಲ್ಲಿ ಬಾಗಿಲು ಹಾಕಿಕೊಂಡು ಯಾರನ್ನೂ ಒಳಗೆ ಬಿಡದೇ ಒಬ್ಬಳೇ ದು:ಖದಿಂದ ಸೊರಗುತ್ತಿದ್ದಾಳೆ! 
    ಇಲ್ಲಿ ಸಹಚರನು ಅವಳಿಗೆ ಕೃಶಾಂಗಿ ಎಂಬ ಪದವನ್ನು ಬಳಸುವುದರ ಮೂಲಕ ಅವಳು ಊಟ, ನಿದ್ರೆಗಳಿಲ್ಲದೆ ಸೊರಗಿ ಸೊರಗಿ ಅವಳ ಅಂಗಾಂಗಗಳು ಬಹಳ ಕೃಶವಾಗಿವೆ ಎಂದು ಸೂಚಿಸುತ್ತಿದ್ದಾನೆ. ಅವಳ ಮನೆಯೊಳಗೆ ಗಾಳಿಯೂ ಹೋಗಲಾರದು ಎನ್ನುವುದು ಉತ್ಪ್ರೇಕ್ಷೆಯೆನಿಸಿದರೂ ಅವಳು ಯಾರನ್ನೂ ಒಳಗೆ ಬಿಡದೆ ಒಂಟಿಯಾಗಿರುವಷ್ಟು ವಿರಹತಪ್ತಳಾಗಿದ್ದಾಳೆ ಎಂದು ತೋರಿಸುತ್ತದೆ.
    ಸಂಸ್ಕೃತ ಸಾಹಿತ್ಯವನ್ನು ಓದುತ್ತಿದ್ದರೆ ಒಂದು ವಿಷಯವನ್ನು ಹೇಳಲು ಇರುವ ಅನಂತ ಸಾಧ್ಯತೆಗಳ ಪರಿಚಯವಾಗುತ್ತದೆ.

ಬುಧವಾರ, ಜೂನ್ 17, 2026

ಸುಂದರೀಶತಕ -೫೨

ಸಂಸ್ಕೃತ ಮೂಲ 

ತವ ವಿರಹಾನಲತಪ್ತಂ ಸ್ನೇಹಕಟಾಹಂ ಮದಂತರಾತ್ಮಾನಮ್ /
ಸುಂದರಿ ಚಂದನಶಾಖೇ ಶೀತಲಯ ಸ್ಪರ್ಶಮಾತ್ರೇಣ //

ಕನ್ನಡ ಅನುವಾದ 

    ' ಎಲೈ ಸುಂದರಿ! ನಿನ್ನ ವಿರಹಾಗ್ನಿಯಿಂದ ಬೆಂದುಹೋಗಿರುವ, ನಿನ್ನ ಪ್ರೇಮದ ಪಾತ್ರೆಯಾಗಿರುವ ನನ್ನ ಅಂತರಾತ್ಮವನ್ನು ಚಂದನಶಾಖೆಯಾಗಿರುವ ನೀನು ಕೇವಲ ನಿನ್ನ ಸ್ಪರ್ಶಮಾತ್ರದಿಂದ ತಂಪಾಗಿಸು!'
    ಕವಿಯು ಇಲ್ಲಿ ಸುಂದರವಾದ ವಿರಹ ಚಿತ್ರಣವನ್ನು ಕೊಟ್ಟಿದ್ದಾನೆ.‌ ನಾಯಕನು ತನ್ನ ಪ್ರಿಯೆಯ ವಿರಹಾಗ್ನಿಯಿಂದ ಪ್ರೇಮಪಾತ್ರೆಯಂತಿರುವ ಅವನ ಅಂತರಾತ್ಮವು ಬೆಂದುಹೋಗಿದೆ ಎನ್ನುತ್ತಾನೆ. ಸೊಗಸಾದ ಉಪಮೆಗಳು! ವಿರಹಬಾಧೆಯು ಅಗ್ನಿಯಂತೆ ಸುಡುತ್ತಿದೆ! ಅವನ ಅಂತರಾತ್ಮವು ಪ್ರೇಮದ ಪಾತ್ರೆಯಂತಾಗಿ ಆ ಅಗ್ನಿಯಿಂದ ಸುಡುತ್ತಿದೆ! ಹಾಗಾಗಿ ಅವನು ತನ್ನ ಪ್ರಿಯತಮೆಯನ್ನು ಚಂದನಶಾಖೆಗೆ ಹೋಲಿಸಿ ಕೇವಲ ತನ್ನನ್ನು ಸ್ಪರ್ಶಿಸಲು ಕೇಳಿಕೊಳ್ಳುತ್ತಿದ್ದಾನೆ. ಅವಳನ್ನು ಅವಳ ಸ್ಪರ್ಶಮಾತ್ರದಿಂದ ತನ್ನ ಅಂತರಾತ್ಮವನ್ನು ತಂಪಾಗಿಸಲು ಬೇಡಿಕೊಳ್ಳುತ್ತಿದ್ದಾನೆ! 
     ಶೃಂಗಾರ ರಸದಲ್ಲಿ ಎರಡು ವಿಧಗಳಿವೆ.‌ ಒಂದು, ಸಂಭೋಗ ಶೃಂಗಾರ ಹಾಗೂ ಇನ್ನೊಂದು, ವಿಪ್ರಲಂಭ ಶೃಂಗಾರ. ಸಂಭೋಗ ಶೃಂಗಾರ, ಪ್ರೇಮಿಗಳು ಒಟ್ಟಿಗಿದ್ದು ಅನುಭವಿಸುವುದಾದರೆ, ವಿಪ್ರಲಂಭ ಶೃಂಗಾರ, ಪ್ರೇಮಿಗಳು ದೂರವಾಗಿದ್ದು ವಿರಹವನ್ನು ಅನುಭವಿಸುವುದಾಗಿರುತ್ತದೆ. ರಾಧಾಕೃಷ್ಣರ ಶೃಂಗಾರ ಲೀಲೆಗಳು ಸಂಭೋಗ ಶೃಂಗಾರಕ್ಕೆ ಒಳ್ಳೆಯ ಉದಾಹರಣೆಯಾದರೆ, ರಾಧೆಯು ಶ್ರೀಕೃಷ್ಣನ ವಿರಹವನ್ನು ಅನುಭವಿಸುವುದು, ಹಾಗೂ ಶ್ರೀರಾಮನು ಸೀತೆಯ ವಿರಹವನ್ನು ಅನುಭವಿಸುವುದು, ವಿಪ್ರಲಂಭ ಶೃಂಗಾರಕ್ಕೆ ಒಳ್ಳೆಯ ಉದಾಹರಣೆಗಳಾಗಿವೆ. 
      ಈ ಶ್ಲೋಕದ ಸ್ವಾರಸ್ಯವೆಂದರೆ, ಇದು ವಿಪ್ರಲಂಭ ಶೃಂಗಾರವಾದರೂ ಇಲ್ಲಿ ಪ್ರಿಯತಮೆಯು ನಾಯಕನ ಬಳಿ ಇದ್ದಾಳೆ. ಆದರೆ ಅವನಿನ್ನೂ ವಿರಹದಲ್ಲಿದ್ದು ಅವಳ ಸ್ಪರ್ಶಕ್ಕಾಗಿ, ಜೊತೆಗೂಡುವಿಕೆಗಾಗಿ ಬೇಡುತ್ತಿದ್ದಾನೆ. ಅವನ ವಿರಹದ ಸ್ಥಿತಿಯನ್ನು ಪ್ರಾಯಶಃ ಅವನ ಸಖನಿಂದ ತಿಳಿದು ಹಾಗೂ ನೋಡಿ, ನಾಯಿಕೆಯ ಸಖಿಯು ನಾಯಿಕೆಗೆ ಹೇಳಿ ಅವಳನ್ನು ಕರೆತಂದಿದ್ದಾಳೆ. ಆಗ ನಾಯಕನು ಅವಳನ್ನು ಹೀಗೆ ಬೇಡುತ್ತಿದ್ದಾನೆ.

ಭಾನುವಾರ, ಜೂನ್ 14, 2026

ಸುಂದರೀಶತಕ -೫೧

ಸಂಸ್ಕೃತ ಮೂಲ 

ಪ್ರೇಮಾಸವೋನ್ಮದಿಷ್ಣೋ: ಪ್ರಣಯತನೀಯಾಂಸಿ ತಾನಿ ವಚನಾನಿ /
ಕರಣೀಯಾನಿ ನ ಹೃದಯೇ ದಯಿತೇ ಯದಯಂ ದಯಾವಸರ: // 

ಕನ್ನಡ ಅನುವಾದ 

      ' ಪ್ರಿಯೇ! ಪ್ರೇಮವೆಂಬ ಮದಿರೆಯನ್ನು ಕುಡಿದು ಮತ್ತನಾದ ನಾನು ಪ್ರೇಮೋನ್ಮಾದದಲ್ಲಿ ಆಡಿದ ಹಗುರವಾದ ಮಾತುಗಳನ್ನು ಹೃದಯದಲ್ಲಿ ಇಟ್ಟುಕೊಳ್ಳಬೇಡ! ದಯೆ ತೋರಿಸಲು ಇದೇ ಸರಿಯಾದ ಸಮಯ!' 
    ಇಲ್ಲಿ ನಾಯಕನು ತನ್ನ ಪ್ರಿಯತಮೆಯ ಪ್ರೇಮವೆಂಬ ಮದಿರೆಯನ್ನು ಕುಡಿದು ಮತ್ತನಾಗಿ ಅವಳ ಬಳಿ ಏನೋ ಹಗುರವಾದ ಮಾತುಗಳನ್ನಾಡಿದ್ದಾನೆ ಹಾಗೂ ಕೀಟಲೆ ಮಾಡಿದ್ದಾನೆ. ಅಂದರೆ ಪ್ರೇಮದ ಸಲಿಗೆಯಲ್ಲಿ ಅವಳನ್ನು ಅಣಕಿಸಿದ್ದಾನೆ. ಕುಡಿದ ಮತ್ತಿನಲ್ಲಿ ಹಗುರವಾಗಿ ಮಾತನಾಡುವಂತೆ ಪ್ರೇಮಮದ್ಯವನ್ನು ಕುಡಿದ ಮತ್ತಿನಲ್ಲಿ ಇವನು ಅವಳನ್ನು ಅಣಕಿಸಿದ್ದಾನೆ. ಇದರಿಂದ ಅವಳು ಕೋಪಗೊಂಡಿದ್ದಾಳೆ! ಆಗ ಇವನಿಗೆ ತನ್ನ ತಪ್ಪು ಅರಿವಾಗಿ ತಾನು ಪ್ರೇಮಮದಿರೆಯ ಮತ್ತಿನಲ್ಲಿ ಆಡಿದ ಹಗುರವಾದ ಮಾತುಗಳನ್ನು ಹೃದಯದಲ್ಲಿ ಇಟ್ಟುಕೊಳ್ಳಬಾರದು, ಅವು ಮೈಮರೆತು ಹೇಳಿದ ಮಾತುಗಳು, ಹಾಗಾಗಿ ಗಣನೆಗೆ ತೆಗೆದುಕೊಳ್ಳಬಾರದು, ಎಂದು ಬೇಡಿಕೊಳ್ಳುತ್ತಾ ದಯೆ ತೋರಿಸಲು ಇದೇ ಸರಿಯಾದ ಸಮಯ ಎನ್ನುತ್ತಿದ್ದಾನೆ. ತಪ್ಪು ಮಾಡದಿದ್ದಾಗ ದಯೆ ತೋರಿದರೆ ಏನು ಪ್ರಯೋಜನ, ತಪ್ಪು ಮಾಡಿದಾಗ ದಯೆ ತೋರಿದರೆ ಅದು ಹೆಚ್ಚಿನದು ಎಂದು ಅವನ ಅಭಿಪ್ರಾಯ. ಹೀಗೆ ಪ್ರೇಮಿಗಳ ನಡುವೆ ಆಗಾಗ ಪ್ರಮಯಕಲಹ ಇದ್ದರೆ ಚೆನ್ನ.

ಶುಕ್ರವಾರ, ಜೂನ್ 12, 2026

ಸುಂದರೀಶತಕ -೫೦

ಸಂಸ್ಕೃತ ಮೂಲ 

ಜ್ಞಾತಾಸಿ ಗೃಹಜನೈರಿತಿ ಕಥಿತೇ ಸಂಭ್ರಾಂತತಾರಕಂ ದೂತ್ಯಾ /
ಅರುಣಮಪಿ ಮಾನವತ್ಯಾ: ಸ್ಮರಾಮಿ ಪಾಂಡೂಭವದ್ವದನಮ್ //

ಕನ್ನಡ ಅನುವಾದ 

      ' ನಿನ್ನ ರಹಸ್ಯ ಪ್ರೇಮದ ವಿಷಯ ಮನೆಯವರಿಗೆಲ್ಲಾ ಗೊತ್ತಾಗಿದೆ ಎಂದು ದೂತಿಯು ನನ್ನ ಪ್ರಿಯತಮೆಗೆ ಹೇಳಲು, ಅವಳ ಕಣ್ಣುಗಳ ಪಾಪೆಗಳು ಸಂಭ್ರಾಂತಗೊಂಡವು ಹಾಗೂ ಕೋಪಗೊಂಡಿದ್ದ ಅವಳ ಮುಖ ಕೆಂಪಾಗಿದ್ದರೂ ಬಿಳುಚಿಕೊಂಡಿದ್ದನ್ನು ನಾನು ಈಗಲೂ ಸ್ಮರಿಸುತ್ತೇನೆ!' 
    ಇಲ್ಲಿ ನಾಯಿಕೆಯು ನಾಯಕನಲ್ಲಿ ಕುಪಿತಗೊಂಡು ಕುಳಿತಿದ್ದಾಳೆ. ಆಗ ಅವಳ ದೂತಿಯು ಬಂದು ಅವಳ ರಹಸ್ಯ ಪ್ರೇಮದ ವಿಷಯ ಮನೆಯವರಿಗೆಲ್ಲಾ ಗೊತ್ತಾಗಿದೆ ಎಂದು ಹೇಳಿದ್ದಾಳೆ.‌ ಇದರಿಂದ ಅವಳು ಗಾಬರಿಗೊಳ್ಳಲು ಅವಳ ಕಣ್ಣುಗಳ ಪಾಪೆಗಳು ಸಂಭ್ರಾಂತಗೊಂಡಿವೆ! ಕೋಪದಿಂದ ಕೆಂಪಾಗಿದ್ದ ಅವಳ ಮುಖವು ಕೂಡಲೇ ಭಯದಿಂದ ಬಿಳುಚಿಕೊಂಡಿದೆ! ಕೋಪವು ಭಯಕ್ಕೆ ತಿರುಗುವ ಹಾಗೂ ಕೆಂಪಾದ ಮುಖ ಬಿಳುಚಿಕೊಳ್ಳುವ ಈ ಸುಂದರ ಮುಖಭಾವವನ್ನು ಈಗಲೂ ಸ್ಮರಿಸುತ್ತೇನೆ ಎಂದು ನಾಯಕನು ಹೇಳುತ್ತಿದ್ದಾನೆ. 

ಗುರುವಾರ, ಜೂನ್ 11, 2026

ಸುಂದರೀಶತಕ -೪೯

ಸಂಸ್ಕೃತ ಮೂಲ 

ಸಸ್ಮಿತಮರುಣಕಪೋಲಂ ರಚಿತಭ್ರೂಭಂಗಮಂಚಿತವ್ರೀಡಮ್ /
ಸಂಪೃಕ್ತಭಾವರುಚಿರಂ ವದನಂ ತಸ್ಯಾ: ಸ್ಮರಾಮಿ ಸಖೇ //

ಕನ್ನಡ ಅನುವಾದ 

    ' ಹೇ ಸಖ!  ನಗುವಿನೊಂದಿಗೆ ಕೆಂಪಾದ ಅವಳ ಕೆನ್ನೆಗಳು, ಕೋಪದಿಂದ ಗಂಟಿಕ್ಕಿದ ಹುಬ್ಬುಗಳು, ನಾಚಿಕೆಯಿಂದ ಬಾಗಿದ ಮುಖ, ಈ ಮಿಶ್ರ ಭಾವಗಳಿಂದ ಸುಂದರವಾದ ಆ  ನನ್ನ ಪ್ರಿಯತಮೆಯ ಮುಖವನ್ನು ಈಗಲೂ ಸ್ಮರಿಸುತ್ತೇನೆ!'
     ಇಲ್ಲಿ ಪ್ರಾಯಶಃ ನಾಯಕನು ಕೋಪಗೊಂಡ ತನ್ನ ನಾಯಕಿಯನ್ನು ಸಮಾಧಾನ ಮಾಡಿದಾಗ ಮೂಡಿದ ಚಿತ್ರಣವನ್ನು ತನ್ನ ಸಖನಿಗೆ ವರ್ಣಿಸುತ್ತಿದ್ದಾನೆ. ಅವನು ಅವಳನ್ನು ಸಮಾಧಾನಗೊಳಿಸುತ್ತಾ ಪ್ರಾಯಶಃ ಚುಂಬಿಸಿದ್ದಾನೆ.  ಆಗ ಅವಳು ಕೋಪವನ್ನು ಬಿಟ್ಟರೂ ಇನ್ನೂ ಅವಳ ಹುಬ್ಬುಗಳು ಗಂಟಿಕ್ಕಿಕೊಂಡಿವೆ. ಆದರೆ ಅವನ ಪ್ರೀತಿಗೆ ಕರಗಿ ಅವನ ಚುಂಬನದಿಂದ ಕಿರುನಗೆ ಮೂಡಿಸಿದ್ದಾಳೆ ಹಾಗೂ ಅವಳ ಕೆನ್ನೆಗಳು ಕೆಂಪಾಗಿವೆ. ಜೊತೆಗೆ ನಾಚಿ ತಲೆ ತಗ್ಗಿಸಿದ್ದಾಳೆ. ಈ ಎಲ್ಲ ಮಿಶ್ರಿತ ಭಾವಗಳ ಅವಳ ಮುಖ ಬಹಳ ಸುಂದರವಾಗಿ ಕಾಣುತ್ತಿದ್ದು ಈಗಲೂ ಅದನ್ನು ಸ್ಮರಿಸುತ್ತೇನೆ ಎಂದು ಅವನು ತನ್ನ ಸಖನಿಗೆ ಹೇಳುತ್ತಿದ್ದಾನೆ. 

ಸೋಮವಾರ, ಜೂನ್ 8, 2026

ಸುಂದರೀಶತಕ -೪೮

ಸಂಸ್ಕೃತ ಮೂಲ 

ಸಾಗಸಿ ಮಯಿ ಮಂದಪದಂ ಪಶ್ಚಾದೇತ್ಯ ಸ್ಥಿತೇ ಸರೋಜದೃಶಮ್ /
ಮುಕುರಂ ಪ್ರದರ್ಶಯಿತ್ವಾ ತತ್ಸಖ್ಯಾ ಕಿಮಿವ ನೋಪಕೃತಮ್ //

ಕನ್ನಡ ಅನುವಾದ 

     ' ಪ್ರಿಯತಮೆಯ ವಿಷಯದಲ್ಲಿ ಅಪರಾಧ ಮಾಡಿದ್ದ ನಾನು ಮೆಲ್ಲ ಮೆಲ್ಲನೆ ಹೆಜ್ಜೆಯಿಟ್ಟು ಆ ಕಮಲನಯನೆಯ ಹಿಂದೆ ಹೋಗಿ ನಿಂತೆ! ಆಗ ಅವಳ ಸಖಿಯು ಅವಳಿಗೆ ಒಂದು ಕನ್ನಡಿ ತೋರಿಸಿ ಯಾವ ಉಪಕಾರ ತಾನೇ ಮಾಡಲಿಲ್ಲ?'
      ಪ್ರಿಯತಮೆಯ ವಿಷಯದಲ್ಲಿ ಏನೋ ತಪ್ಪು ಮಾಡಿದ್ದ ನಾಯಕನು ಅವಳು ಕೋಪಿಸಿಕೊಂಡು ಕುಳಿತಿದ್ದಾಗ ಮೆಲ್ಲ ಮೆಲ್ಲನೆ ಹೆಜ್ಜೆಯಿಡುತ್ತಾ ಅವಳ ಹಿಂದೆ ಹೋಗಿ ಕ್ಷಮೆಯಾಚಿಸಲು ನಿಂತಿದ್ದಾನೆ. ಆದರೆ ಅವಳು ಮುಖ ತಿರುಗಿಸಿ ನೋಡುತ್ತಲೇ ಇಲ್ಲ! ಅವನಿಗೂ ಮಾತನಾಡಲು ಧೈರ್ಯ ಸಾಲದೇ ಸುಮ್ಮನೆ ನಿಂತಿದ್ದಾನೆ. ಇದನ್ನು ಗಮನಿಸಿದ ನಾಯಕಿಯ ಸಖಿಯೊಬ್ಬಳು ಒಂದು ಕನ್ನಡಿಯನ್ನು ತಂದು ಅವಳಿಗೆ ತೋರಿಸಿದ್ದಾಳೆ. ಆಗ ಅವಳಿಗೆ ತನ್ನ ಹಿಂದೆ ನಿಂತಿರುವ ತನ್ನ ಪತಿ ಕಾಣಿಸಿದ್ದಾನೆ. ಆಗ ಅವನ ಪಶ್ಚಾತ್ತಾಪದ ಮುಖ ಕಾಣಿಸಿ ಅವನನ್ನು ಕ್ಷಮಿಸಿದ್ದಾಳೆ. ಹೀಗೆ ಕನ್ನಡಿ ತೋರಿಸಿ ಸಖಿಯು ಯಾವ ಉಪಕಾರ ತಾನೇ ಮಾಡಲಿಲ್ಲ ಎಂದು ನಾಯಕನು ಸ್ಮರಿಸಿಕೊಂಡು ಹೇಳುತ್ತಿದ್ದಾನೆ. 

ಭಾನುವಾರ, ಜೂನ್ 7, 2026

ಸುಂದರೀಶತಕ -೪೭

ಸಂಸ್ಕೃತ ಮೂಲ 

ಅರವಿಂದದ್ಯುತಿಶೋಣಂ ಲೋಚನಕೋಣಂ ಸರೋಜಾಕ್ಷ್ಯಾ: /
ಪ್ರಣಮತಿ ಮಯ್ಯಥ ಸದಯಂ ಹರಿಹರಿ ಹೃದಯಂ ನ ವಿಸ್ಮರತಿ //

ಕನ್ನಡ ಅನುವಾದ 

     ' ಆ ಸರೋಜಾಕ್ಷಿಯ ಕೋಪವನ್ನು ತಣಿಸಲು ನಾನು ಅವಳ ಕಾಲಿಗೆ ಬಿದ್ದಾಗ, ಕಮಲದ ಕಾಂತಿಯಂತೆ ಕೆಂಪಾಗಿದ್ದ ಅವಳ ಕಣ್ಣುಗಳ ಅಂಚುಗಳಲ್ಲಿ ದಯೆಯು ಕಾಣಿಸಿತು! ಹರಿ ಹರಿ! ಇದನ್ನು ನನ್ನ ಹೃದಯವು ಮರೆಯುವುದಿಲ್ಲ!' 
    ಇಲ್ಲಿ ಪತಿಯು ತನ್ನ ಪ್ರಿಯ ಪತ್ನಿಯ ವಿಷಯದಲ್ಲಿ ಏನೋ ತಪ್ಪು ಮಾಡಿದ್ದಾನೆ. ಅದರಿಂದ ಅವಳು ಕೋಪಗೊಂಡಿದ್ದಾಳೆ.‌ ಆದರೆ ಅವಳು ಅವನು ಎಷ್ಟೇ ಸಮಾಧಾನಪಡಿಸಿದರೂ ಕೋಪ ಬಿಡುತ್ತಿಲ್ಲ.‌ ಕೊನೆಗೆ ಅವನು ಅವಳ ಕಾಲಿಗೆ ಬಿದ್ದಾಗ ಅವಳ ಕೋಪ ಕರಗಿ ಕಮಲದಂತೆ ಕೆಂಪಾದ ಅವಳ ಕಣ್ತುದಿಯಲ್ಲಿ ದಯೆಯು ಮೂಡಿದೆ! ಇದನ್ನು ಕವಿ ಅಥವಾ ಆ ಪತಿಯು ನೆನಪಿಸಿಕೊಂಡು ಎಂದಿಗೂ ಮರೆಯಲಾರೆ ಎನ್ನುತ್ತಿದ್ದಾನೆ! ಹೆಂಡತಿಯು ಗಂಡನ ಕಾಲಿಗೆ ಬೀಳುವುದು ಸಾಮಾನ್ಯ. ಆದರೆ ಪ್ರಾಚೀನ ಸಂಸ್ಕೃತ ಶೃಂಗಾರ ಕಾವ್ಯಗಳಲ್ಲಿ ತಪ್ಪು ಮಾಡಿದಾಗ ಗಂಡನೂ ಹೆಂಡತಿಯನ್ನು ಸಮಾಧಾನಗೊಳಿಸಲು ಅವಳ ಕಾಲಿಗೆ ಬೀಳುವುದನ್ನು ಕಾಣುತ್ತೇವೆ! ಕೃಷ್ಣನೂ ಕೋಪಗೊಂಡ ಸತ್ಯಭಾಮೆಯ ಪಾದಗಳಿಗೆ ನಮಸ್ಕಾರ ಮಾಡಿ ಅವನ್ನು ಒತ್ತುವುದನ್ನು ಕಾಣುತ್ತೇವೆ! ಗಂಡನು ಏಷ್ಟೇ ಅನುನಯಗೊಳಿಸಿದರೂ ಸಮಾಧಾನಗೊಳ್ಳದ ಹೆಂಡತಿ, ಅವನು ಅವಳ ಕಾಲಿಗೆ ಬಿದ್ದಾಗ ಥಟ್ಟನೆ ಸಮಾಧಾನಗೊಳ್ಳುತ್ತಾಳೆ! ಅವಳಿಗಿಂತ ದೊಡ್ಡವನಾದ ಅವನು ತನ್ನ ಅಭಿಮಾನ ಬಿಟ್ಟು ಅವಳ ಕಾಲಿಗೆ ಬೀಳುವುದು ಸುಲಭದ ಮಾತಲ್ಲ ಅಲ್ಲವೇ? ಆದರೆ ಅವನು ಪ್ರೇಮಕ್ಕಾಗಿ ಹಾಗೆ ಮಾಡಿದಾಗ ಅವಳು ಕರಗಿಹೋಗುತ್ತಾಳೆ! ಅಂಥ ಒಂದು ಸುಂದರ ಸನ್ನಿವೇಶವನ್ನು ಕವಿ ಇಲ್ಲಿ ಚಿತ್ರಿಸಿದ್ದಾನೆ.

ಬುಧವಾರ, ಜೂನ್ 3, 2026

ಸುಂದರೀಶತಕ -೪೬

ಸಂಸ್ಕೃತ ಮೂಲ 

ಸಂಸದಿ ಸಖೀಜನಾನಾಂ ಗೋಷ್ಠೀಂ ಕರ್ತುಂ ಪುರ: ಪ್ರವೃತ್ತಾಯಾ: /
ಗೋತ್ರಸ್ಖಲನವಿಲಕ್ಷಂ ಸುಂದರಿ ಮುಖಮೀಕ್ಷಣೀಯಂ ತೇ //

ಕನ್ನಡ ಅನುವಾದ 

     ' ಎಲೈ ಸುಂದರಿ! ಸಖಿಯರ ಸಮಕ್ಷಮದಲ್ಲಿ ನೀನು ಮಾತುಕತೆಯಾಡಲು ಆರಂಭಿಸಿದಾಗ, ನಿನ್ನ ಪತಿಯು ಗೋತ್ರಸ್ಖಲನವಾಗಿ ನಿನ್ನ ಹೆಸರನ್ನು ಕರೆಯುವ ಬದಲಿಗೆ ಬೇರೊಬ್ಬ ಪ್ರೇಯಸಿಯ ಹೆಸರನ್ನು ಕರೆದಾಗ, ನಿನ್ನ ಮುಖದಲ್ಲಾದ ವ್ಯಾಕುಲತೆ, ಕೋಪ, ಆಶ್ಚರ್ಯ, ಮತ್ತು ಲಜ್ಜೆಗಳ ವಿಲಕ್ಷಣ ಭಾವ ನೋಡಲು ಸುಂದರವಾಗಿತ್ತು!' 
     ಹೆಣ್ಣಿನ ವಿವಿಧ ಭಾವಗಳನ್ನು ಕವಿಯು ಚಿತ್ರಿಸುತ್ತಿದ್ದಾನೆ. ಹೆಣ್ಣು, ಕೋಪ, ಲಜ್ಜೆ, ಸಂಕೋಚ, ಆಶ್ಚರ್ಯ , ವ್ಯಾಕುಲತೆ, ಮೊದಲಾದ ಮುಖಭಾವಗಳಲ್ಲಿ ಬಹಳ ಸುಂದರವಾಗಿ, ಮುದ್ದಾಗಿ ಕಾಣುತ್ತಾಳೆ! ಇಲ್ಲಿ ಕವಿಯು ಅಂಥ ಒಂದು ಸಂದರ್ಭವನ್ನು ಚಿತ್ರಿಸಿದ್ದಾನೆ. ಸುಂದರ ಹೆಣ್ಣೊಬ್ಬಳು ತನ್ನ ಸಖಿಯರೊಂದಿಗೆ ಒಂದು ಮಾತುಕತೆಯ ಗೋಷ್ಠಿಯನ್ನು ಆರಂಭಿಸುತ್ತಿದ್ದಾಳೆ. ಅವಳ ಪತಿ ಅಥವಾ ಪ್ರಿಯತಮನೂ ಅಲ್ಲಿದ್ದಾನೆ.‌ ಆದರೆ ಅವನು ಬಾಯಿತಪ್ಪಿ ಅವಳ ಹೆಸರನ್ನು ಕರೆಯುವ ಬದಲಿಗೆ ಬೇರೊಬ್ಬ ಪ್ರೇಯಸಿಯ ಹೆಸರನ್ನು ಕರೆದಿದ್ದಾನೆ! ಇದಕ್ಕೆ ಗೋತ್ರಸ್ಖಲನವೆಂದು ಹೆಸರು. ಗೋತ್ರಸ್ಖಲನದ ವಿಷಯವು ಸಂಸ್ಕೃತದ ಶೃಂಗಾರ ಸಾಹಿತ್ಯದಲ್ಲಿ ಪ್ರಮುಖ ಸ್ಥಾನ ವಹಿಸುತ್ತದೆ.‌ ಗೋತ್ರಸ್ಖಲನವೆಂದರೆ ನಾಯಕನು ತನ್ನ ಪ್ರಿಯತಮೆಯ ಹೆಸರನ್ನು ಕರೆಯುವ ಬದಲಿಗೆ ಬೇರೊಬ್ಬ ಪ್ರೇಯಸಿಯ ಹೆಸರನ್ನು ಕರೆಯುವುದು. ಆಗ ನಾಯಕಿಗೆ ಆಗುವ ಸಂಕೋಚ, ಲಜ್ಜೆ, ವ್ಯಾಕುಲತೆ, ಆಶ್ಚರ್ಯ, ಕೋಪ, ಮೊದಲಾದ ಮಿಶ್ರ ವಿಲಕ್ಷಣ ಭಾವಗಳು ಒಂದು ಮೆರುಗು ನೀಡುತ್ತವೆ. ಅದೂ ಸಖಿಯರ ಮುಂದೆ ಅವಳ ಪತಿ ಬೇರೊಬ್ಬಳ ಹೆಸರನ್ನು ಕರೆದರೆ ಅವಳಿಗೆ ಹೇಗಾಗಬೇಡ? ಅವಳ ಆ ಮಿಶ್ರ ವಿಲಕ್ಷಣ ಮುಖಭಾವ ಸುಂದರವಾಗಿದೆ ಎಂದು ಹೇಳುತ್ತಾನೆ ಕವಿ.

ಸುಂದರೀಶತಕ -೪೫

ಸಂಸ್ಕೃತ ಮೂಲ 

ಕಾತರನಯನನಿವೇದಿತನಿರ್ದಯಕಂದರ್ಪವೇದನಾತಿಶಯಮ್/
ದೃಷ್ಟಂ ನಿಖಾತಮಂತ: ಪ್ರಿಯಯಾ ಪ್ರಸ್ಥಾನವೇಲಾಯಾಮ್//

ಕನ್ನಡ ಅನುವಾದ 

    ' ನಾನು ಪ್ರಯಾಣ ಹೊರಡುವ ಸಮಯದಲ್ಲಿ ನನ್ನ ಪ್ರಿಯತಮೆಯ ಕಾತರ ನಯನಗಳು ನಿವೇದಿಸಿದ ನಿರ್ದಯ ಕಾಮವೇದನೆಯ ಅತಿಶಯದ ನೋಟ ನನ್ನ ಹೃದಯಾಂತರಾಳದಲ್ಲಿ ಹೊಕ್ಕಿ ನೆಲೆಸಿದೆ!'
     ಪ್ರಿಯನು ಕಾರಣಾಂತರದಿಂದ ಪ್ರಯಾಣ ಹೊರಟಾಗ ಅವನ ಪ್ರಿಯತಮೆಗೆ ಆಗುವ ವಿರಹವೇದನೆ ಅಷ್ಟಿಷ್ಟಲ್ಲ! ಕಾಮದೇವನು ನಿರ್ದಯವಾಗಿ ಅವಳನ್ನು ಬಾಧಿಸುತ್ತಾನೆ! ಆದರೆ ಅವಳು ಅದನ್ನು ಯಾವ ಮಾತಿನಿಂದಲೂ ವ್ಯಕ್ತಪಡಿಸುವುದಿಲ್ಲ! ಕೇವಲ ತನ್ನ ಕಣ್ಣ ನೋಟದಿಂದಲೇ ತೋರಿಸುತ್ತಾಳೆ! ಅದು ಅವಳ ಪ್ರಿಯನ ಹೃದಯವನ್ನು ಬಾಣದಂತೆ ಹೊಕ್ಕು ಅಂತರಂಗದಲ್ಲಿ ನೆಲೆಸುತ್ತದೆ! ಅದನ್ನು ಅವನು ಮರೆಯಲು ಸಾಧ್ಯವೇ ಇಲ್ಲ! ಹಾಗಾಗಿ ಅವನು ಅನಂತರ ಅದನ್ನು ನೆನೆಯುತ್ತಿದ್ದಾನೆ. 

ಭಾನುವಾರ, ಮೇ 31, 2026

ಸುಂದರೀಶತಕ -೪೪

ಸಂಸ್ಕೃತ ಮೂಲ 

ಚಕ್ಷುರಪಾಂಗಮಪಾಂಗ: ಕರ್ಣಂ ಕರ್ಣೋsಪಿ ದೂತಿಕಾವಚನಮ್ /
ಅವಧತ್ತೇ ಮಮ ತಪಸಾಮುದಾರಸಾರ: ಕ್ರಮ: ಸೋsಯಮ್ //

ಕನ್ನಡ ಅನುವಾದ 

     ' ಆ ಸುಂದರಿಯ ಕಣ್ಣು ( ದೃಷ್ಟಿ) ಅವಳ ಕಣ್ಣಿನ ತುದಿಗೆ ಹೋಯಿತು! ಅವಳ ಕಣ್ಣಿನ ತುದಿಯು ಅವಳ ಕಿವಿಯ ಕಡೆಗೆ ಹೋಯಿತು! ಅವಳ ಕಿವಿಯು ದೂತಿಯ ಮಾತನ್ನು ಕೇಳಿತು! ಆಹಾ! ಈ ಪ್ರೇಮದ ಕ್ರಮವು ನನ್ನ ತಪಸ್ಸಿನ ಉದಾರ ಫಲ!' 
     ಇಲ್ಲಿ ಒಬ್ಬ ಪ್ರೇಮಿಯು ತನ್ನ ಪ್ರೇಮದ ಕ್ರಮ ಕ್ರಮವಾದ ಬೆಳವಣಿಗೆಯನ್ನು ಸುಂದರವಾಗಿ ವರ್ಣಿಸಿದ್ದಾನೆ. ಮೊದಲಿಗೆ ಅವನ ಪ್ರಿಯತಮೆಯ ಕಣ್ಣೋಟ ಅವಳ ಕಣ್ಣಿನ ತುದಿಗೆ ಬಂದು ಅವಳ ಕಿವಿಯವರೆಗೆ ಹೋಗುವುದು. ಇದರಿಂದ ಅವಳು ಅವನನ್ನು ತನ್ನ ಕಡೆಗಣ್ಣಿನಿಂದ ನೋಡಿದಳು. ಆಗ ತನ್ನ ಪ್ರೇಮವನ್ನು ವ್ಯಕ್ತಪಡಿಸಲು ಅವನು ಅವಳ ಬಳಿಗೆ ಒಬ್ಬ ದೂತಿಯನ್ನು ಕಳಿಸುವನು. ಆಗ ಅವನ ಪ್ರಿಯತಮೆಯ ಕಿವಿ, ಆ ದೂತಿಯ ಮಾತನ್ನು ಕೇಳುವುದು. ಹೀಗೆ ಅವಳ ದೃಷ್ಟಿಯು ಕಣ್ಣಿನ ತುದಿಗೆ ಬರುವುದು, ಕಣ್ಣಿನ ತುದಿಯ ನೋಟ ಕಿವಿಯವರೆಗೆ ಬರುವುದು, ಹಾಗೂ ಕಿವಿಯು ದೂತಿಯ ಮಾತನ್ನು ಕೇಳುವುದು, ಈ ಪ್ರೇಮದ ಕ್ರಮವು, ತನ್ನ ತಪಸ್ಸಿನ ಉದಾರ ಫಲವೆಂದು ಅವಳ ಪ್ರೇಮಿಯು ಸಂತೋಷದಿಂದ ಹೇಳಿಕೊಳ್ಳುತ್ತಿದ್ದಾನೆ! 

ಶುಕ್ರವಾರ, ಮೇ 29, 2026

ಸುಂದರೀಶತಕ -೪೩

ಸಂಸ್ಕೃತ ಮೂಲ 

ಕಿಂಚಿದುದಂಚಯ ಚಂಚಲಮಂಚಲಮಚಿರೇಣ ಲೋಚನಾಂಶುಕಯೋ: /
ಸುಂದರಿ ಕರ್ಣಾವತಂಸ: ಕೈರವಮಿಂದೀವರಂ ಭವತು //

ಕನ್ನಡ ಅನುವಾದ 

     ' ಎಲೈ ಸುಂದರಿ! ನಿನ್ನ ಕಂಗಳನ್ನು ಆವರಿಸಿ ಚಂಚಲವಾಗಿ ಹಾರಾಡುತ್ತಿರುವ ಸೆರಗಿನ ಅಂಚನ್ನು ಬೇಗನೆ ಸ್ವಲ್ಪ ಮೇಲೆತ್ತು! ನಿನ್ನ ನೀಲ ದೃಷ್ಟಿಯಿಂದ ನಿನ್ನ ಕಿವಿಯ ಮೇಲಿರುವ ಕೈರವ ಅಥವಾ ಬಿಳಿ ಕಮಲದ ಆಭರಣ, ಇಂದೀವರ ಅಥವಾ ನೀಲಕಮಲವಾಗಲಿ!' 
     ಸುಂದರಿಯ ಕಂಗಳು ನೀಲವರ್ಣದಿಂದ ಕೂಡಿ ಬಹು ಸುಂದರವಾಗಿವೆ! ಹಾಗಾಗಿ ಕವಿ ಅಥವಾ ಅವಳ ಪ್ರಿಯತಮನು ಅವಳಿಗೆ ಅವಳ ಕಂಗಳ ಮೇಲೆ ಹಾರಾಡುತ್ತಿರುವ ಅವಳ ಸೆರಗಿನ ಅಂಚನ್ನು ಸ್ವಲ್ಪ ಮೇಲೆತ್ತಲು ಹೇಳುತ್ತಿದ್ದಾನೆ. ಅವಳು ಹಾಗೆ ತನ್ನ ಕಂಗಳನ್ನು ಆವರಿಸಿರುವ ಸೆರಗಿನ ಅಂಚನ್ನು ಮೇಲೆತ್ತಿದಾಗ ಅವಳ ಕಂಗಳ ನೀಲದೃಷ್ಟಿ ಅವಳು ಧರಿಸಿರುವ ಕೈರವ ಅಥವಾ ಬಿಳಿಕಮಲದ ಕರ್ಣಾಭರಣದ ಮೇಲೆ ಬಿದ್ದು ಅದು ನೀಲಕಮಲ ಅಥವಾ ನೀಲೋತ್ಪಲ ಅಥವಾ ಇಂದೀವರವಾಗಲಿ ಎಂದು ಅವನ ಆಶಯವಾಗಿದೆ. ಹೀಗೆ ಅವಳ ಕಣ್ಣ ದೃಷ್ಟಿಯಿಂದ ಅವಳ ಕರ್ಣಾಭರಣದ ಬಣ್ಣವೇ ಬದಲಾಗುವುದೆಂದು ಹೇಳುವ ಮೂಲಕ, ಅವಳ ಕಂಗಳು ಎಷ್ಟು ಸುಂದರವಾಗಿವೆ ಎಂದು ಹೇಳುತ್ತಿದ್ದಾನೆ.

ಸುಂದರೀಶತಕ -೪೨

ಸಂಸ್ಕೃತ ಮೂಲ 

ತವ ನಯನಪುಂಡರೀಕಾತ್ಪ್ರಿಯೇ ಕಟಾಕ್ಷಕ್ರಮಾ ವಿರಾಜತೇ /
ವಿಕಸಿತವಿಚಕಿಲಕುಸುಮಾತ್ಕುಸುಮಾನೀವಾವತೀರ್ಣಾನಿ //

ಕನ್ನಡ ಅನುವಾದ 

   ' ಪ್ರಿಯೆ! ನಿನ್ನ ನಯನಕಮಲದಿಂದ ಹೊರಡುತ್ತಿರುವ ಕುಡಿನೋಟಗಳು, ಅರಳಿದ ಮಲ್ಲಿಗೆ ಹೂವಿನಿಂದ ದಳಗಳು ಉದುರುವಂತೆ ವಿರಾಜಿಸುತ್ತಿವೆ! '
    ಇಲ್ಲಿ ಕವಿಯು ಹೆಣ್ಣಿನ ಕಣ್ಣನ್ನು ಕಮಲ ಪುಷ್ಪಕ್ಕೆ ಹೋಲಿಸಿದರೆ, ಅವಳ ಕುಡಿನೋಟಗಳನ್ನು ಮಲ್ಲಿಗೆ ಹೂವಿನಿಂದ ಉದುರುತ್ತಿರುವ ದಳಗಳಿಗೆ ಹೋಲಿಸಿದ್ದಾನೆ! ನಯನಪುಂಡರೀಕ ಎನ್ನುವಲ್ಲಿ ಕಣ್ಣೇ ಕಮಲ ಎಂದು ರೂಪಕಾಲಂಕಾರ ಬಳಸಿದ್ದರೆ, ಅವಳ ಕುಡಿನೋಟಗಳು ಮಲ್ಲಿಗೆ ಹೂವಿನಿಂದ ಉದುರುತ್ತಿರುವ ದಳಗಳಂತಿವೆ ಎನ್ನುವಲ್ಲಿ ಉಪಮಾಲಂಕಾರ ಬಳಸಿದ್ದಾನೆ. ಹೆಣ್ಣಿನ ಕಡೆಗಣ್ಣಿನ ಕುಡಿನೋಟಗಳು ಅದೆಷ್ಟು ಆಕರ್ಷಕ ಎಂದರೆ ಕವಿಗೆ ಅವನ್ನು ಎಷ್ಟು ಹೊಗಳಿದರೂ ಸಾಲದು! ಬೇರೆ ಬೇರೆ ರೀತಿಯ ಹೋಲಿಕೆಗಳನ್ನು ಬಳಸುತ್ತಾ ಹೆಣ್ಣಿನ ಕಡೆಗಣ್ಣಿನ ಕುಡಿನೋಟಗಳನ್ನು ಮತ್ತೆ ಮತ್ತೆ ವರ್ಣಿಸುತ್ತಿದ್ದಾನೆ. ಇಲ್ಲಿ ಹೆಣ್ಣಿನ ಪ್ರಿಯತಮನ ಮೂಲಕ ಅವಳಿಗೆ ಪ್ರಶಂಸೆ ಹೇಳಿಸಿದ್ದಾನೆ.

ಸುಂದರೀಶತಕ -೪೧

ಸಂಸ್ಕೃತ ಮೂಲ 

ನಿಷ್ಠುರಪಂಜರಕೋಷೇ ನವಸಂಯಮಿತಸ್ಯ ಖಂಜನಸ್ಯೇವ /
ಗುರುಜನಸಮಕ್ಷಮಕ್ಷಿವ್ಯಾಪಾರೋ ಜಯತಿ ಮುಗ್ಧಾಕ್ಷ್ಯಾ: //

ಕನ್ನಡ ಅನುವಾದ 

ಆ ಮುಗ್ಧನಯನೆಯು ಹಿರಿಯರ ಸಮಕ್ಷಮದಲ್ಲಿ ತನ್ನ ಪ್ರಿಯತಮನೊಂದಿಗೆ ನಡೆಸುವ ಕಣ್ಣೋಟದ ವ್ಯಾಪಾರ (ಚಲನವಲನಗಳು), ಗಟ್ಟಿಯಾದ ಪಂಜರದಲ್ಲಿ ಹೊಸದಾಗಿ ಬಂಧಿಸಿರುವ ಖಂಜನ ಪಕ್ಷಿಯ ತೀಕ್ಷ್ಣ ಕಣ್ಣೋಟದ ಚಲನವಲನಗಳಂತೆ ವಿಜಯಶಾಲಿಯಾಗುತ್ತದೆ!' 
    ಇದೊಂದು ಸುಂದರವಾದ, ರಮ್ಯವಾದ ಚಿತ್ರಣ. ಮನೆಗೆ ಹಿರಿಯರು ಬಂದಿದ್ದಾರೆ. ನವವಿವಾಹಿತೆಯಾದ ಮುಗ್ಧ ಕಣ್ಣುಗಳ ಹೆಣ್ಣೊಬ್ಬಳು ತನ್ನ ಪ್ರಿಯಪತಿಯನ್ನು ಅರೆಕ್ಷಣವೂ ಬಿಟ್ಟಿರಲಾರಳು. ಹಿರಿಯರ ನಡುವೆ ಅವಳ ಗಂಡನೂ ಕುಳಿತಿದ್ದಾನೆ. ಅವರು ಅವನೊಂದಿಗೆ ಏನೋ ಮಾತುಕತೆ ನಡೆಸುತ್ತಿದ್ದಾರೆ. ಇವಳು ಸಿಹಿತಿಂಡಿಗಳು, ಪಾನೀಯಗಳು ಇತ್ಯಾದಿಗಳನ್ನು ತಂದುಕೊಡುತ್ತಿದ್ದಾಳೆ ಹಾಗೂ ಅಲ್ಲೇ ಇದ್ದಾಳೆ. ಅವಳಿಗೆ ಅವನನ್ನು ನೋಡಬೇಕೆಂಬ ಆಸೆ. ಆದರೆ ಅವರೆಲ್ಲರೂ ಇರುವಾಗ ಧೈರ್ಯವಾಗಿ ಮುಕ್ತವಾಗಿ ನೋಡಲಾರಳು. ಹಾಗಾಗಿ ತಲೆತಗ್ಗಿಸಿ ವೇಗವಾಗಿ ಅವನ ಕಡೆ ನೋಡುತ್ತಾಳೆ ಮತ್ತು ಹೆದರಿ ಪುನಃ ಬೇಗನೆ ಹಿರಿಯರ ಕಡೆ ನೋಡುತ್ತಾಳೆ. ಅವಳ ಕಣ್ಣೋಟದ ಈ ಚಲನವಲನಗಳು, ಗಟ್ಟಿಯಾದ ಪಂಜರದಲ್ಲಿ ಹೊಸದಾಗಿ ಬಂಧಿಸಲಾಗಿರುವ ಖಂಜನ ಪಕ್ಷಿಯ ತೀಕ್ಷ್ಣ ನೋಟಗಳಂತಿವೆ ಎಂದು ಕವಿಯು ಹೋಲಿಸುತ್ತಾನೆ. ಖಂಜನ ಪಕ್ಷಿ ಅಥವಾ ಕದಂಬ ಪಕ್ಷಿಯನ್ನು ಹೊಸದಾಗಿ ಪಂಜರದಲ್ಲಿ ಬಂಧಿಸಿದಾಗ ಅದು ಚಡಪಡಿಸುತ್ತಾ ಅತ್ತಿತ್ತ ಚುರುಕಾಗಿ ಕಣ್ಣುಗಳನ್ನು ಆಡಿಸುತ್ತಿರುತ್ತದೆ. ಅದೇ ರೀತಿ ಈಗ ಮುಗ್ಧೆಯಾದ ಈ ಹೆಣ್ಣೂ ಹಿರಿಯರ ಪಂಜರದಲ್ಲಿ ಸಿಕ್ಕಿಕೊಂಡು ತನ್ನ ಪ್ರಿಯತಮನನ್ನು ಕದ್ದು ನೋಡುತ್ತಾ ಮರುಕ್ಷಣವೇ ಅವರನ್ನೂ ನೋಡುತ್ತಾ ಒಂದು ಆಕರ್ಷಕ ಚಿತ್ರಣವುಂಟುಮಾಡಿದ್ದಾಳೆ! ಇಂಥ ಅವಳ ಕಣ್ಣೋಟ ಅತ್ಯಂತ ಸೊಗಸಾಗಿದ್ದು ಅದು ವಿಜಯಶಾಲಿಯಾಗುತ್ತದೆ ಎನ್ನುತ್ತಾನೆ ಕವಿ! 

ಬುಧವಾರ, ಮೇ 27, 2026

ಮಹಾಭಾರತದ ಸ್ವಾರಸ್ಯಗಳು - ಜಿಂಕೆಗಳ ಕನಸು

                ನಾವು ಪ್ರಾಣಿ ಪ್ರಪಂಚದ ಇತಿಹಾಸವನ್ನು ಅವಲೋಕಿಸುತ್ತಾ ಹೋದರೆ ಮಾನವರು ಅದೆಷ್ಟೋ ಪ್ರಾಣಿ, ಪಕ್ಷಿಗಳನ್ನು ನಿರ್ದಯವಾಗಿ ಬೇಟೆಯಾಡಿ ನಿರ್ನಾಮ ಮಾಡಿರುವುದು ಕಾಣುತ್ತದೆ. ಅದರಲ್ಲೂ ಯುರೋಪಿಯನ್ನರು ಕ್ರೌರ್ಯದಲ್ಲಿ ಹೆಸರೆತ್ತಿದವರು. ಅವರು ಹೋದಲ್ಲೆಲ್ಲಾ ನೆಲೆಗಳನ್ನು ವಶಪಡಿಸಿಕೊಂಡು, ಮೂಲನಿವಾಸಿಗಳನ್ನು ಬಗ್ಗುಬಡಿದು ಇಲ್ಲವೇ ದಾಸ್ಯಕ್ಕೊಳಪಡಿಸಿ ಶೋಷಿಸಿದ್ದಷ್ಟೇ ಅಲ್ಲದೆ, ಅಲ್ಲಿನ ಪ್ರಾಣಿ ಪಕ್ಷಿಗಳನ್ನೂ ಅನಗತ್ಯವಾಗಿ ಬೇಟೆಯಾಡಿದರು. ಹಾಗಾಗಿಯೇ ಡೋಡೋ, ಪ್ಯಾಸೆಂಜರ್ ಪಿಜನ್, ಕ್ವಗ್ಗ ( ಜೀಬ್ರಾದಂಥ ಒಂದು ಪ್ರಾಣಿ) ಇನ್ನೆಂದೂ ಕಾಣದಂತೆ ನಾಮಾವಶೇಷವಾದವು! ಈಗಲೂ ಆಫ್ರಿಕಾದಲ್ಲಿ ಅರಣ್ಯ ಸಂರಕ್ಷಣೆಗೆ ಧನಸಹಾಯ ಮಾಡುವವರಿಗೆ ಬೇಟೆಯಾಡಲು ಅವಕಾಶ ಕೊಡುವುದು ಒಂದು ದೊಡ್ಡ ವಿಡಂಬನೆಯ ವಿಷಯವಾಗಿದೆ! 
    ಈ ರೀತಿ ಬೇಟೆಯಾಡುವ ಪ್ರವೃತ್ತಿ ಭಾರತದಲ್ಲೂ ಇತ್ತೇ ಎಂದು ಕೇಳಿದರೆ ಹೌದು ಎಂದೇ ಹೇಳಬೇಕಾಗುತ್ತದೆ. ಆದಿಮಾನವ ತನ್ನ ಆಹಾರಕ್ಕಾಗಿ ಬೇಟೆಯಾಡುತ್ತಿದ್ದ ನಿಜ. ಅಂತೆಯೇ ಅಂದಿನಿಂದ ಇಂದಿನವರೆಗೂ ಬಹುತೇಕ ಮಾನವರಲ್ಲಿ ಮಾಂಸಾಹಾರ ಸಹಜವಾದ ಒಂದು ಪ್ರವೃತ್ತಿಯೇ ಆಗಿದೆ. ಈ ಮಾಂಸ ಸಿಗಲು ಪ್ರಾಣಿಗಳನ್ನು ಬೇಟೆಯಾಡಬೇಕಾದುದರಿಂದ ಅದೊಂದು ಕ್ರೀಡೆಯೇ ಆಯಿತು! ಓಡುತ್ತಿರುವ, ಹಾರುತ್ತಿರುವ ಅಥವಾ ದೂರದಲ್ಲಿ ಮೇಯುತ್ತಿರುವ ಇಲ್ಲವೇ ವಿಶ್ರಮಿಸುತ್ತಿರುವ ಪ್ರಾಣಿ ಪಕ್ಷಿಗಳನ್ನು ಗುರಿಯಿಟ್ಟು ಹೊಡೆದು ಕೊಂದರೆ ಅದೇನೋ ಸಾಧನೆ ಮಾಡಿದ ಆನಂದ ಅನೇಕ ರಾಜರುಗಳಿಗಿತ್ತು! ಯುದ್ಧಗಳಲ್ಲಿ ತೊಡಗುವ ಬಹುತೇಕ ರಾಜರು ಕ್ಷತ್ರಿಯರಾಗಿದ್ದು ಮಾಂಸಾಹಾರ ಅವರಿಗೆ ಸಹಜವಾಗಿತ್ತು. ಅಂತೆಯೇ ಶೂದ್ರರು, ಶ್ರಮಜೀವಿಗಳಿಗೂ ಮಾಂಸಾಹಾರವಿಲ್ಲದೇ ಆಗುತ್ತಿರಲಿಲ್ಲ. ಆದರೆ ಅಷ್ಟೇ ಅಲ್ಲದೇ ಬ್ರಾಹ್ಮಣರು ಕೂಡ ಯಜ್ಞ ಯಾಗಗಳನ್ನು ಮಾಡಿದಾಗ ಬಲಿಪಶುವಿನ ಮಾಂಸಾಹಾರ ಸೇವಿಸುತ್ತಿದ್ದರು. ಇವುಗಳಿಗೆ ಅನೇಕ ದಾಖಲೆಗಳು ಪ್ರಾಚೀನ ಗ್ರಂಥಗಳಲ್ಲಿ ಇವೆ. ಆದರೆ ಮಾಂಸಾಹಾರಕ್ಕಲ್ಲದೇ ಸುಖಾಸುಮ್ಮನೆ ಬೇಟೆಯಾಡಿ ಪ್ರಾಣಿಗಳನ್ನು ಕೊಲ್ಲುವುದೆಂದರೇನು? ಆದರೆ ಅದೂ ತೀರಾ ಇತ್ತೀಚಿನವರೆಗೂ ಇತ್ತು. ಮೈಸೂರು ಮಹಾರಾಜರೇ ಮೊದಲಾಗಿ ಅನೇಕ ಮಹಾರಾಜರು ಕಾಡುಗಳನ್ನು ಬೇಟೆಗೆಂದೇ ಬೆಳೆಸಿದ್ದಲ್ಲದೇ ಕಾಡುಗಳಲ್ಲಿ ಬೇಟೆಯಾಡಲು ಉಳಿದುಕೊಳ್ಳಲು ಸುಂದರ ಗೃಹಗಳನ್ನು ನಿರ್ಮಿಸಿದರು. ಬ್ರಿಟಿಷರು ಬಂದಮೇಲೆ ಅವರ ಜೊತೆ ನಮ್ಮ ರಾಜರೂ ಸೇರಿಕೊಂಡು ಈ ಕ್ರೀಡೆಯನ್ನು ಆನಂದಿಸುತ್ತಿದ್ದರು! 
      ಆದರೆ ಪ್ರಾಚೀನ ಭಾರತದಲ್ಲಿ ಬೇಟೆಯಾಡುವ ಪ್ರವೃತ್ತಿ ಇದ್ದರೂ ಅದನ್ನು ನಿಯಂತ್ರಿಸಲು ಪ್ರಯತ್ನಿಸಿದ್ದುದು ಕಾಣುತ್ತದೆ. ಉದಾಹರಣೆಗೆ ಶ್ರೀಕೃಷ್ಣನು ಮಹಾಭಾರತದಲ್ಲಿ ರಾಜರಿಗೆ ಬೇಟೆ, ಮದ್ಯಪಾನ, ಜೂಜು, ಮತ್ತು ಸ್ತ್ರೀ ವ್ಯಾಮೋಹ, ಇವು ನಾಲ್ಕೂ ವ್ಯಸನಗಳು ಎಂದು ಹೇಳುತ್ತಾನೆ. ಜೂಜಿನಿಂದ ಯುಧಿಷ್ಠಿರ, ನಳ ಮಹಾರಾಜ, ಮೊದಲಾದವರು ತೊಂದರೆಗೊಳಗಾದರೆ, ಬೇಟೆಯಿಂದ ಪಾಂಡು ಮಹಾರಾಜನು  ನಾಶವಾದ. ಬೇಟೆಯ ವ್ಯಾಮೋಹದಿಂದ ಅವನು ಜಿಂಕೆಗಳ ರೂಪದಲ್ಲಿ ರತಿಕ್ರೀಡೆಯಾಡುತ್ತಿದ್ದ ಕಿಂದಮ ಋಷಿದಂಪತಿಗಳನ್ನು ಕೊಂದು ಸ್ತ್ರೀಯನ್ನು ಸಂಭೋಗಿಸಿದರೆ ಸಾಯುವಂತೆ ಅವರಿಂದ ಶಾಪಗ್ರಸ್ತನಾದ. ವಿಚಿತ್ರವೀರ್ಯನು ಅತಿಯಾದ ಸ್ತ್ರೀ ಸಂಭೋಗದಿಂದ ಯಕ್ಷ್ಮ ಕ್ಷಯರೋಗವೆಂಬ ಕ್ಷೀಣಿಸುವ  ರೋಗಕ್ಕೊಳಗಾಗಿ ಸತ್ತ. ಇಂಥ ಉದಾಹರಣೆಗಳಿಂದ ಬೇಟೆ ಮತ್ತು ಪ್ರಾಣಿಗಳನ್ನು ಕೊಲ್ಲುವುದನ್ನು ನಿಯಂತ್ರಿಸಲಾಗಿದೆ. ಮುಂದೆ ಬೌದ್ಧ, ಜೈನ ಧರ್ಮಗಳಲ್ಲಂತೂ ಇದು ಬೇಡವೇ ಬೇಡ ಎಂದು ಒತ್ತು ಕೊಡಲಾಗಿದೆ. ಬೌದ್ಧ ಜಾತಕ ಕಥೆಗಳಲ್ಲಿ ಬೇಟೆಯನ್ನು ವಿರೋಧಿಸುವ ಚಿನ್ನದ ಜಿಂಕೆಯ ಕಥೆಯಿದೆ. ಬುದ್ಧನು ಮೊದಲ ಪ್ರವಚನ ನೀಡಿದ ಸಾರನಾಥದ ಮಿಗದಾಯ ( ಮೃಗದಾವ) ಜಿಂಕೆಗಳನ್ನು ಸಂರಕ್ಷಿಸಿದ ಉಪವನವಾಗಿತ್ತು.
     ಪ್ರಾಣಿಗಳ, ಮುಖ್ಯವಾಗಿ ಜಿಂಕೆಗಳ ಸಂರಕ್ಷಣೆ ಹಾಗೂ ಅನಗತ್ಯ ಬೇಟೆಯನ್ನು ನಿಯಂತ್ರಿಸುವ ಸ್ವಾರಸ್ಯಕರ ಪ್ರಸಂಗವೊಂದು ಮಹಾಭಾರತದಲ್ಲಿದೆ. ಅದು ವನಪರ್ವದ ಮೃಗಸವಪ್ನೋದ್ಭವಪರ್ವವೆಂಬ ಚಿಕ್ಕ ಉಪಪರ್ವದಲ್ಲಿದೆ.‌ ಅದನ್ನು ಈಗ ನೋಡೋಣ.
  ಪಾಂಡವರು ಆಗ ದ್ವೈತವನದಲ್ಲಿ ವಾಸಿಸುತ್ತಿದ್ದರು.  ಒಮ್ಮೆ ಯುಧಿಷ್ಠಿರನು ಆಶ್ರಮದಲ್ಲಿ ಮಲಗಿ ನಿದ್ರಿಸುತ್ತಿದ್ದಾಗ ಅವನಿಗೆ ಒಂದು ವಿಚಿತ್ರ ಕನಸು ಬಿತ್ತು.‌ ಅದರಲ್ಲಿ ಕೆಲವು ಜಿಂಕೆಗಳು ಮುಂಗಾಲುಗಳನ್ನು ಜೋಡಿಸಿಕೊಂಡು ಕಣ್ಣೀರು ಸುರಿಸುತ್ತಾ ಗದ್ಗದ ಸ್ವರದಿಂದ ಅಳುತ್ತಿದ್ದವು. ಅದನ್ನು ನೋಡಿ ಯುಧಿಷ್ಠಿರನು ಕೇಳಿದನು," ಮೃಗಶ್ರೇಷ್ಖರೇ! ಯಾರು ನೀವು? ನಿಮ್ಮ ಇಚ್ಛೆ ಏನು? ಅದೇನು ಹೇಳಬೇಕೆಂದಿರುವಿರೋ ನಿರ್ಭಯವಾಗಿ ಹೇಳಿ!" 
    ಅದಕ್ಕೆ ಆ ಜಿಂಕೆಗಳು ಹೇಳಿದವು," ನೀವುಗಳು ಆಹಾರಕ್ಕಾಗಿ ನಮ್ಮನ್ನು ಬೇಟೆಯಾಡುವಾಗ ನಿಮ್ಮ ಬಾಣಾಘಾತಕ್ಕೆ ಸಿಕ್ಕದೇ ತಪ್ಪಿಸಿಕೊಂಡು ಉಳಿದ ಬಡಪಾಯಿ ಜಿಂಕೆಗಳು ನಾವು! ಆದರೆ ಇನ್ನು ಕೆಲವೇ ದಿನಗಳಲ್ಲಿ ನಾವೂ ನಿಮ್ಮ ಆಹಾರವಾಗಿ ಪರಿವರ್ತನೆ ಹೊಂದುವುದು ಖಚಿತ! ಮಹಾರಾಜ! ನಿನ್ನ ತಮ್ಮಂದಿರು ಮಹಾಶೂರರು! ಬಿಲ್ವಿದ್ಯೆಯಲ್ಲಿ ಅಸಮಾನರು! ನಮ್ಮ ಉಚ್ಛ್ವಾಸ, ನಿ:ಶ್ವಾಸಗಳನ್ನು ಕೇಳಿಯೇ ಗುರಿಯಿಟ್ಟು ಬಾಣ ಬಿಡಬಲ್ಲರು! ಹೀಗಾಗಿ ದ್ವೈತವನದಲ್ಲಿ ನಮ್ಮ ವಂಶವೇ ಕ್ಷೀಣಿಸಿಹೋಗುತ್ತಿದೆ! ಅಲ್ಪಸಂಖ್ಯಾತರಾಗಿರುವ ನಾವಿಂದು ನಮ್ಮ ವಂಶಕ್ಕೆ ಬೀಜಪ್ರಾಯರಾಗಿರುವೆವು! ನಿನ್ನ ಅನುಗ್ರಹದಿಂದ ಮಾತ್ರ ನಮ್ಮ ವಂಶವು ಪುನಃ ಅಭಿವೃದ್ಧಿ ಹೊಂದಬಹುದು. ಹಾಗಾಗಿ ದಯವಿಟ್ಟು ನೀವು ಈ ಅರಣ್ಯ ಬಿಟ್ಟು ಬೇರೆ ಅರಣ್ಯಕ್ಕೆ ಪ್ರಯಾಣ ಮಾಡಿ! " 
    ಗಡಗಡನೆ ನಡುಗುತ್ತಾ ಕಣ್ಣೀರು ಸುರಿಸುತ್ತಾ ಹೇಳಿದ ಜಿಂಕೆಗಳ ಮಾತುಗಳನ್ನು ಕೇಳಿ ಯುಧಿಷ್ಠಿರನಿಗೆ ಬಹಳ ದು:ಖವಾಯಿತು. ಅವನು ಸಕಲಪ್ರಾಣಿಗಳ ಯೋಗಕ್ಷೇಮದಲ್ಲೂ ಆಸಕ್ತಿ ಹೊಂದಿದ್ದನು. ಹಾಗಾಗಿ ಅವನು," ತಥಾಸ್ತು! ನೀವು ಹೇಳಿದಂತೆಯೇ ಮಾಡುತ್ತೇನೆ!" ಎಂದು ಅಭಯವಿತ್ತನು.
   ಇದಿಷ್ಟು ಕನಸು ಮುಗಿದ ಬಳಿಕ ಯುಧಿಷ್ಠಿರನಿಗೆ ನಿದ್ರೆ ಕಳೆದು ಎಚ್ಚರವಾಯಿತು.‌ ಅವನಿಗೆ ಆಗ ಕನಸಿನ ವಿಷಯ ಕಾಡತೊಡಗಿತು. ಪ್ರಾತರ್ವಿಧಿಗಳು ಮುಗಿದ ಬಳಿಕ ತನ್ನ ತಮ್ಮಂದಿರ ಮಧ್ಯೆ ಕುಳಿತುಕೊಂಡು ತನಗಾದ ಕನಸಿನ ಅನುಭವವನ್ನು ಹೇಳಿ," ತಮ್ಮಂದಿರೇ! ಆ ಜಿಂಕೆಗಳ ಮಾತು ಸತ್ಯ! ನಾವು ಈ ಕಾಡಿನ ಪ್ರಾಣಿಗಳ ಮೇಲೆ ಈಗಲಾದರೂ ದಯೆ ತೋರಬೇಕು. ನಾವಿಲ್ಲಿಗೆ ಬಂದು ಒಂದು ವರ್ಷ ಎಂಟು ತಿಂಗಳುಗಳು ಕಳೆದುಹೋಗಿವೆ! ನಾವು ಈ ಪ್ರಾಣಿಗಳಿಂದಲೇ ಜೀವಿಸುತ್ತಿದ್ದೇವೆ! ಆದ್ದರಿಂದ ನಾವೀಗ ಬೇರೆ ಕಾಡಿಗೆ ಹೋಗಬೇಕು. ಅನೇಕಾನೇಕ ಮೃಗಗಳಿಂದಲೂ ಲತಾವೃಕ್ಷಗಳಿಂಜಲೂ ಸಮೃದ್ಧವಾಗಿರುವ, ತೃಣಬಿಂದು ಸರೋವರದ ದಡದಲ್ಲಿರುವ ಕಾಮ್ಯಕವನಕ್ಕೆ ಹೋಗೋಣ!" 
   ಯುಧಿಷ್ಠಿರನು ಹೀಗೆ ಹೇಳಲು, ಎಲ್ಲರೂ ಒಪ್ಪಿದರು. ಅದರಂತೆ ಅವರೆಲ್ಲರೂ ಕಾಮ್ಯಕವನಕ್ಕೆ ಹೋದರು.‌
     ಹೀಗೆ ಪ್ರಾಚೀನ ಭಾರತದಲ್ಲಿ ಬೇಟೆಯಾಡುವುದು ಹಾಗೂ ಮಾಂಸಾಹಾರ ಕಂಡುಬಂದರೂ ಅವುಗಳ ನಿಯಂತ್ರಣವೂ ಕಂಡುಬರುತ್ತದೆ. ಮನುಸ್ಮೃತಿಯ ಒಂದು ಮಾತು ಇಲ್ಲಿ ಮನನೀಯ:
    ನ ಮಾಂಸಭಕ್ಷಣೇ ದೋಷೋ ನಾ ಮದ್ಯೇ ನ ಚ ಮೈಥುನೇ /
ಪ್ರವೃತ್ತಿರೇಷಾ ಭೂತಾನಾಂ ನಿವೃತ್ತಿಸ್ತು ಮಹಾಫಲಾ //
    ' ಮಾಂಸಭಕ್ಷಣೆಯಲ್ಲಿ, ಮದ್ಯಪಾನದಲ್ಲಿ ಹಾಗೂ ಮೈಥುನದಲ್ಲಿ ದೋಷವಿಲ್ಲ. ಏಕೆಂದರೆ ಇದು ಮನುಷ್ಯರಿಗೆ ಸಹಜವಾದ ಪ್ರವೃತ್ತಿ. ಆದರೆ ಇದರ ನಿವೃತ್ತಿಯಿಂದ ಮಹಾಫಲವುಂಟಾಗುತ್ತದೆ.' 
   ಹೀಗೆ ಕೆಲವರಿಗೆ ಮಾಂಸಾಹಾರ ಬೇಕಾಗುತ್ತದೆ. ಅದು ತಪ್ಪಲ್ಲ. ಆದರೆ ಅದನ್ನು ಬಿಟ್ಟರೆ ಅಥವಾ ಕಡಿಮೆ ಮಾಡಿದರೆ ಒಳ್ಳೆಯದು. ಹೀಗೆ ನಾವು ಪ್ರಾಚೀನ ಭಾರತದ ಗ್ರಂಥಗಳಲ್ಲಿ, ಸಂದರ್ಭಗಳಲ್ಲಿ ಪ್ರಾಣಿಗಳ ಸಂರಕ್ಷಣೆಯ ವಿಚಾರವನ್ನು ನೋಡಬಹುದು.

ಸೋಮವಾರ, ಮೇ 18, 2026

ಸುಂದರೀಶತಕ -೪೦

ಸಂಸ್ಕೃತ ಮೂಲ 

ಕುಂಚನ್ಮೃದುಕರಶಾಖಾಕೃಷ್ಟಾಂಚಲಕೋಣತಿರ್ಯಗುಲ್ಲಸಿತ: /
ಲಕ್ಷೀಕರೋತಿ ಧನ್ಯಂ ಸುಂದರಿ ದೀರ್ಘ: ಕಟಾಕ್ಷಸ್ತೇ //

ಕನ್ನಡ ಅನುವಾದ 

       ' ಎಲೈ ಸುಂದರಿ! ಬಾಗಿದ ನಿನ್ನ ಮೃದುವಾದ ಕರಶಾಖೆಗಳಿಂದ ( ಬೆರಳುಗಳಿಂದ) ನಿನ್ನ ಸೆರಗಿನ ಅಂಚನ್ನು ಎಳೆಯುತ್ತಾ ಕಣ್ಣಿನ ಕೋನದಿಂದ ಓರೆಯಾದ ದೀರ್ಘ ಕಟಾಕ್ಷದ ಹೊಳೆಯುವ ನೋಟ ಬೀರುತ್ತಾ ಧನ್ಯನಾದ ಪುರುಷನೊಬ್ಬನನ್ನು ನಿನ್ನ ಲಕ್ಷ್ಯಕ್ಕೆ ತರುತ್ತಿರುವೆ!' 
     ಹೆಣ್ಣು ಓರೆ ನೋಟ ಬೀರಿ ನೋಡುವ ಸೌಂದರ್ಯವನ್ನು ಎಷ್ಟು ಹೊಗಳದರೂ ಕವಿಗೆ ತೃಪ್ತಿಯಿಲ್ಲ! ಮತ್ತೆ ಮತ್ತೆ ಬೇರೆ ಬೇರೆ ರೀತಿಯಲ್ಲಿ ಅವನು ಅದೇ ವಿಷಯವನ್ನು ಹೊಗಳುತ್ತಿದ್ದಾನೆ! ಅಂಥ ನೋಟಕ್ಕೆ ಗುರಿಯಾಗಿರುವ ಪುರುಷ ನಿಜಕ್ಕೂ ಧನ್ಯ ಎಂದು ಹೇಳುತ್ತಿದ್ದಾನೆ! ಇಲ್ಲಿ ಸುಂದರಿಯ ಮೃದುವಾದ ಕೈಬೆರಳುಗಳನ್ನು ಕೋಮಲವಾದ ಎಳೆ ಶಾಖೆಗಳಿಗೆ ಹೋಲಿಸಿರುವುದು ರಮ್ಯವಾಗಿದೆ! ಹೆಣ್ಣಿನ ಎಲ್ಲಾ ಅಂಗಗಳೂ ಅತ್ಯಂತ ಕೋಮಲ! ಅಷ್ಟೇ ಅಲ್ಲದೆ ಅವಳ ಮಾತು, ನಗೆ, ನೋಟ, ಎಲ್ಲವೂ ಕೋಮಲ ಹಾಗೂ ರಮ್ಯ! ಇಂಥ ಸುಂದರ ಹೆಣ್ಣಿನ ಕಣ್ಣೋಟ ಬಿದ್ದರೂ ಪುರುಷ ಧನ್ಯನಲ್ಲವೇ? 

ಸುಂದರೀಶತಕ -೩೯

ಸಂಸ್ಕೃತ ಮೂಲ 

ಸುಂದರಿ ವಿವೃತ್ಯ ದೃಷ್ಟ: ಕಷ್ಟಮಪಾಂಗೇನ ಭುಜಗೇನ /
ಅಧರಾಮೃತೇನ ಜೀವತಿ ಸೋsಯಮುಪಾಯಾಂತರಾಸಾಧ್ಯ: //

ಕನ್ನಡ ಅನುವಾದ 

     ' ಎಲೈ ಸುಂದರಿ! ನೀನು ಹಿಂದೆ ತಿರುಗಿ ನಿನ್ನ ಸರ್ಪವೆಂಬ ಕಡೆಗಣ್ಣ ಕುಡಿನೋಟ ಬೀರಿ ಇವನಿಗೆ ( ನಿನ್ನ ಪ್ರೇಮಿಗೆ) ಕಷ್ಟ ತಂದಿರುವೆ! ಈಗ ಇವನು ನಿನ್ನ ಅಧರಾಮೃತದಿಂದಷ್ಟೇ ಜೀವಿಸುತ್ತಾನೆ! ಬೇರಾವ ಉಪಾಯದಿಂದಲೂ ಸಾಧ್ಯವಿಲ್ಲ!'
       ಇಲ್ಲಿ ಕವಿಯು ಹೆಣ್ಣಿನ ಕಡೆಗಣ್ಣ ಕುಡಿನೋಟವನ್ನು ಸರ್ಪಕ್ಕೆ ಹೋಲಿಸಿದ್ದಾನೆ! ಅದು ಸರ್ಪವೇ ಎಂದು ಹೇಳಿರುವುದರಿಂದ ಇಲ್ಲಿ ರೂಪಕಾಲಂಕಾರವಿದೆ. ಆ ನೋಟ ಅವಳ ಪ್ರೇಮಿಗೆ ಸರ್ಪ ಕಚ್ಚಿದಂತಾಗಿ ಮೈಯೆಲ್ಲಾ ಪ್ರೇಮದ ವಿಷವೇರಿದೆ! ಈಗ ಅವನನ್ನು ಬದುಕಿಸುವುದು ಹೇಗೆ? ಅದಕ್ಕೆ ಇರುವ ಒಂದೇ ಉಪಾಯವೆಂದರೆ ಅವಳ ಅಧರಾಮೃತಪಾನ! ಬೇರಾವ ಉಪಾಯದಿಂದಲೂ ಸಾಧ್ಯವಿಲ್ಲ ಎನ್ನುತ್ತಾನೆ ಕವಿ! ಹೌದಲ್ಲವೇ?

ಸುಂದರೀಶತಕ -೩೮

ಸಂಸ್ಕೃತ ಮೂಲ 

ತವ ಸುಂದರಿ ಮಧುರಸ್ಮಿತಮೇದುರಮಚ್ಚಕ್ಷುರಭಿಮುಖಂ ಚಕ್ಷು: /
ಶರದಿಂದುಕಿರಣತುಂದಿಲಕುಮುದೋನ್ಮುಖಮಧುಪಮನುಹರತೇ //

ಕನ್ನಡ ಅನುವಾದ 

    ' ಎಲೈ ಸುಂದರಿ! ಮಧುರವಾದ ನಗುವಿನಿಂದ ಕೂಡಿರುವ ನಿನ್ನ ಕಣ್ಣು ನನ್ನ ಕಣ್ಣಿನ ಮುಂದಿರಲು, ಶರತ್ಕಾಲದ ಚಂದಿರನ ಕಿರಣಗಳಿಂದ ಅರಳಿದ ಕುಮುದ ಪುಷ್ಪದ ಮುಂದೆ ಇರುವ ಭ್ರಮರದಂತಿದೆ! ' 
       ಪ್ರೇಮಿಗಳು ಒಬ್ಬರನ್ನೊಬ್ಬರು ನೋಡುತ್ತಾ ಕುಳಿತರೆ ಜಗತ್ತನ್ನೇ ಮರೆಯುವರು! ಹಾಗೆಯೇ ಇಲ್ಲಿ ಇಬ್ಬರು ಪ್ರೇಮಿಗಳು ಪರಸ್ಪರ ನೋಡುತ್ತಾ ಕುಳಿತಿದ್ದಾರೆ.‌ ನಗುವಿನಿಂದ ಕೂಡಿರುವ ಸುಂದರಿಯ ಕಣ್ಣು ಪ್ರಿಯತಮನ ಕಣ್ಣಿನ ಮುಂದಿದ್ದರೆ, ಪ್ರಿಯತಮನ ಮುಖ, ಶರತ್ಕಾಲದ ಚಂದ್ರಮನ ಕಿರಣಗಳಿಂದ ಅರಳಿದ ಕುಮುದ ಪುಷ್ಪದಂತೆ ಅರಳಿದೆ. ಅದನ್ನು ನೋಡುತ್ತಿರುವ ಪ್ರಿಯತಮೆಯ ಕಣ್ಣು, ಭ್ರಮರದಂತೆ ಆಉರ್ಷಿತವಾಗಿದೆ! ಹೀಗೆ ಕವಿಯು ಪ್ರಿಯತಮನ ಮುಖವನ್ನು ಅರಳಿದ ಕುಮುದ ಪುಷ್ಪಕ್ಕೂ ಪ್ರಿಯತಮೆಯ ಕಣ್ಣನ್ನು ಭ್ರಮರಕ್ಕೂ ಹೋಲಿಸಿ ಅವನ ಬಾಯಲ್ಲೇ ಹೇಳಿಸಿದ್ದಾನೆ. ಇಲ್ಲಿ ಉಪಮಾಲಂಕಾರವಿದೆ. ಕಮಲ ಪುಷ್ಪಗಳು ಸೂರ್ಯನ ಕಿರಣಗಳಿಗೆ ಅರಳಿದರೆ ಕುಮುದ ಪುಷ್ಪಗಳು ಅಥವಾ ಬಿಳಿ ನೈದಿಲೆಗಳು ಚಂದ್ರಕಿರಣಗಳಿಗೆ ಅರಳುತ್ತವೆ.

ಬುಧವಾರ, ಮೇ 13, 2026

ಸುಂದರೀಶತಕ -೩೭

ಸಂಸ್ಕೃತ ಮೂಲ 

ಪಶ್ಯತ್ಯಸಮ್ಮುಖಂ ಮಾಂ ಮಯಿ ಪಶ್ಯತಿ ಸಾಥ ಸಮ್ಮುಖೀಭವತಿ /
ಸ್ಮರಮೇಕತೋsವರೋಹೈ: ಶ್ರಮಯತಿ ಕೋಟಿದ್ವಯೇ ಮೌರ್ವೀ //

ಕನ್ನಡ ಅನುವಾದ 

     ' ನಾನು ಅವಳ ಕಡೆ ನೋಡುವಾಗ ಅವಳು ಬೇರೆ ಕಡೆ ನೋಡುತ್ತಾಳೆ! ನಾನು ಬೇರೆ ಕಡೆ ನೋಡುವಾಗ ಅವಳು ನನ್ನ ಕಡೆ ನೋಡುತ್ತಾಳೆ! ಹೀಗೆ ನಾನು ಅವಳತ್ತ ನೋಡಿದಾಗ ತನ್ನ ಕಂಗಳನ್ನು ಕೆಳಗೆ ಮಾಡುತ್ತಾ ಮತ್ತು ಬೇರೆ ಕಡೆ ನೋಡಿದಾಗ ಮೇಲೆ ಮಾಡುತ್ತಾ ಅವಳು ಕಾಮದೇವನ ಬಿಲ್ಲಿನ ಎರಡೂ ತುದಿಗಳಲ್ಲಿ ಅದರ ಶಿಂಜಿನಿಗೆ ಶ್ರಮವುಂಟುಮಾಡುತ್ತಾಳೆ!' 
     ಹೆಣ್ಣಿಗೆ ತನ್ನ ನಲ್ಲನನ್ನು ನೋಡುವ ಆಸೆ. ಆದರೆ ನಾಚಿಕೆ ಅಡ್ಡ ಬರುತ್ತಿದೆ. ಹಾಗಾಗಿ ಅವನು ಅವಳತ್ತ ನೋಡಿದಾಗ ಅವಳು ಬೇರೆ ಕಡೆ ನೋಡುತ್ತಾಳೆ! ಆದರೆ ಅವನು ಬೇರೆ ಕಡೆ ನೋಡಿದಾಗ ಅವಳು ಅವನತ್ತ ನೋಡುತ್ತಾಳೆ. ತಾನು ನೋಡಿದ್ದು ಅವನಿಗೆ ತಿಳಿಯಬಾರದೆಂದು ಕದ್ದು ಕದ್ದು ನೋಡುತ್ತಾಳೆ! ಹುಡುಗಿಯರ ಈ ನಾಚಿಕೆಯ ಸ್ವಭಾವ ಬಹಳ ಸ್ವಾರಸ್ಯಕರವಾಗಿರುತ್ತದೆ ಹಾಗೂ ಆನಂದ ಕೊಡುತ್ತದೆ. ಹೆಣ್ಣಿಗೆ ಸಹಜವಾಗಿರುವ ನಾಚಿಕೆಯ ಸ್ವಭಾವ ಒಂದು ಕಲಾತ್ಮಕ ಸ್ಥಿತಿ ತರುತ್ತದೆ ಕೂಡ! ಅದನ್ನು ಕವಿಯು ಗಮನಿಸಿ ಸೊಗಸಾಗಿ ಚಿತ್ರಿಸಿದ್ದಾನೆ. ಅದು ಮನ್ಮಥನು ತನ್ನ ಬಿಲ್ಲಿನ ಶಿಂಜಿನಿಯನ್ನು ಹಿಂದೆ ಮುಂದೆ ಎಳೆಯುವಂತಿದೆ ಹಾಗೂ ಆ ಬಿಲ್ಲಿನ ಎರಡೂ ತುದಿಗಳಲ್ಲಿ ಶಿಂಜಿನಿಗೆ ಶ್ರಮವುಂಟುಮಾಡುವಂತಿದೆ ಎಂದು ಹೇಳುತ್ತಾನೆ ಕವಿ. ಇಲ್ಲಿ ಕವಿಯು ಅವಳ ಡೊಂಕಾದ ಹುಬ್ಬುಗಳನ್ನು ಬಿಲ್ಲಿಗೆ ಹೋಲಿಸಿ ಹಾಗೂ ಅವಳ ನೋಟಗಳನ್ನು ಶಿಂಜಿನಿಗೆ ಹೋಲಿಸಿ, ಅವಳು ಕಂಗಳನ್ನು ಮೇಲೆ ಕೆಳಗೆ ಮಾಡುವುದು ಆ ಶಿಂಜಿನಿಯನ್ನು ಹಿಂದೆ ಮುಂದೆ ಎಳೆಯುವಂತೆ ಹಾಗೂ ಬಿಲ್ಲಿನ ಎರಡೂ ತುದಿಗಳಲ್ಲಿ ಅದಕ್ಕೆ ಶ್ರಮವುಂಟುಮಾಡುವಂತಿದೆ ಎಂದು ಹೇಳುತ್ತಾನೆ.