ನಿಬಿಡೀಕೃತೋರುಬಂಧಂ ವೇಲ್ಲಿತವದನೇಂದುನಿಹ್ರುತೋಚ್ಛ್ವಾಸಮ್ ।
ತಸ್ಯಾ: ಸ್ಮರಾಮಿ ಸುರತಂ ತತ್ಕರಭರರುದ್ಧಮನ್ನಾಭಿ ।।
ಕನ್ನಡ ಅನುವಾದ
ನಾಯಕನು ಹೇಳುತ್ತಾನೆ," ನಾವು ಗಾಢವಾಗಿ ತೊಡೆಗಳನ್ನು ಬಂಧಿಸಿರಲು, ನನ್ನ ಪ್ರಿಯತಮೆಯ ಮುಖಚಂದ್ರವು ನನ್ನ ಕಡೆಗೆ ತಿರುಗಿ, ನನ್ನ ಚುಂಬನದಿಂದ ಅವಳ ಶ್ವಾಸೋಚ್ಛ್ವಾಸವು ಬಂಧಿತವಾಗಿ, ನನ್ನ ನಾಭಿಯ ಮೇಲೆ ಅವಳು ತನ್ನ ಕೈಯನ್ನು ಒತ್ತಿ ಹಿಡಿದಿರಲು, ಅವಳೊಂದಿಗಿನ ಆ ಸುಂದರ ಸುರತಕ್ರೀಡೆಯನ್ನು ನಾನು ನೆನೆಯುತ್ತೇನೆ!"
ಕವಿಯು ಇಲ್ಲಿ ನಾಯಕನು ನಾಯಕಿಯೊಂದಿಗೆ ನಡೆಸಿದ ಸುರತಕ್ರೀಡೆಯನ್ನು ಕಣ್ಣಿಗೆ ಕಟ್ಟುವಂತೆ ಸೊಗಸಾಗಿ ವರ್ಣಿಸಿದ್ದಾನೆ. ಈ ವರ್ಣನೆಯಿಂದ ಅವರಿಬ್ಬರೂ ಗಾಢವಾಗಿ ಆಲಂಗಿಸಿದ್ದರೆಂಬುದು ತಿಳಿಯುತ್ತದೆ. ವಿಶೇಷವಾಗಿ ತೊಡೆಗಳನ್ನು ಬಂಧಿಸುವ ಆಲಿಂಗನವನ್ನು ವಾತ್ಸ್ಯಾಯನನು ಕಾಮಸೂತ್ರದಲ್ಲಿ ಊರೂಪಗೂಹನ ಎಂದು ವರ್ಣಿಸಿದ್ದಾನೆ. ಇಂಥ ಹಲವಾರು ಆಲಿಂಗನಗಳನ್ನು ಅವನು ವರ್ಣಿಸಿದ್ದಾನೆ. ನಮ್ಮ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯಲ್ಲಿ ಧರ್ಮಕ್ಕೆ ಎಷ್ಟು ಮಹತ್ವವಿದೆಯೋ ಕಾಮಕ್ಕೂ ಅಷ್ಟೇ ಮಹತ್ವವಿದೆ. ಧರ್ಮ, ಅರ್ಥ, ಕಾಮ, ಮೋಕ್ಷ, ಈ ನಾಲ್ಕೂ ಒಬ್ಬ ಮನುಷ್ಯನು ಸಾಧಿಸಬೇಕಾದ ಪುರುಷಾರ್ಥಗಳು. ಆದರೆ ಇವುಗಳನ್ನು ಧರ್ಮದ ಮೂಲಕ ಸಾಧಿಸಬೇಕು. ಆದ್ದರಿಂದ ಧರ್ಮ ಮೊದಲಿದೆ. ಹಾಗಾಗಿ ಧರ್ಮದಿಂದ ಕಾಮವನ್ನು ಯಥೇಚ್ಛವಾಗಿ ಹಾಗೂ ತೃಪ್ತಿಕರವಾಗಿ, ಸಂತೋಷದಿಂದ ಅನುಭವಿಸಿದರೆ ಅದರಲ್ಲಿ ಯಾವುದೇ ತಪ್ಪಿಲ್ಲ ಅಥವಾ ಹಿಂಜರಿಕೆ ಪಡಬೇಕಿಲ್ಲ. ಭಗವಾನ್ ಶ್ರೀಕೃಷ್ಣನೂ ಭಗವದ್ಗೀತೆಯಲ್ಲಿ, ' ಧರ್ಮಾವಿರುದ್ಧೋ ಭೂತೇಷು ಕಾಮೋऽಸ್ಮಿ ಭರತರ್ಷಭ ' ( ಜನರಲ್ಲಿ ನಾನು ಧರ್ಮಕ್ಕೆ ವಿರುದ್ಧವಲ್ಲದ ಕಾಮವಾಗಿದ್ದೇನೆ) ' ಎಂದಿದ್ದಾನೆ. ಹಾಗಾಗಿ, ಧರ್ಮದಿಂದ ಸಂತೋಷವಾಗಿ ಅನುಭವಿಸುವ ಕಾಮವು ಭಗವತ್ಸ್ವರೂಪವೇ ಆಗಿರುತ್ತದೆ. ಆದ್ದರಿಂದಲೇ ಕಾಮನನ್ನು ನಮ್ಮವರು ಒಬ್ಬ ದೇವತೆಯಾಗಿಯೇ ಕಂಡಿದ್ದಾರೆ. ಹಾಗಾಗಿಯೇ ಕವಿಗಳು ಇಂಥ ಸುರತವರ್ಣನೆಗಳನ್ನು ಯಾವುದೇ ಹಿಂಜರಿಕೆ, ಮುಜುಗರಗಳಿಲ್ಲದೆ ಮಾಡಿದ್ದಾರೆ. ಆದರೆ ವಿಕ್ಟೋರಿಯಾ ಯುಗದಿಂದ, ಅಂದರೆ ಬ್ರಿಟಿಷರ ಆಳ್ವಿಕೆಯ ಕಾಲದಿಂದ ನಮ್ಮಲ್ಲಿ ಕಾಮ, ಶೃಂಗಾರಗಳ ಬಗ್ಗೆ ಮುಜುಗರ, ಹಿಂಜರಿಕೆಗಳು ಹೆಚ್ಚಾದವು. ಈಗಲೂ ಎಷ್ಟೋ ದಂಪತಿಗಳು ಯಥೇಚ್ಛವಾಗಿ ಕಾಮ, ಶೃಂಗಾರಗಳ ಸುಖವನ್ನು ಅನುಭವಿಸಲು ಹಿಂಜರಿಯುತ್ತಾರೆ. ಹಾಗಾಗಿ ಸುಂದರೀಶತಕ, ಅಮರುಶತಕ, ಮೊದಲಾದ ಅನೇಕ ಶೃಂಗಾರ ಕಾವ್ಯಗಳನ್ನು ಓದಿ, ನಮ್ಮ ದೇವಾಲಯಗಳಲ್ಲಿನ ರತಿಶಿಲ್ಪಗಳನ್ನು ನೋಡಿ, ಶೃಂಗಾರಸುಖವನ್ನು ಆನಂದಿಸಿ ಅನುಭವಿಸಬೇಕು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ