ಗುರುವಾರ, ಮಾರ್ಚ್ 26, 2026

ಶಿಲ್ಪ ಕಥೆ


ಶಿಲ್ಪ ಕಥೆ - ಶ್ರೀರಾಮನಿಂದ ಸಪ್ತತಾಳವೃಕ್ಷಗಳ ಛೇದನ 

     ಇದು ಅಮೃತಾಪುರದ ಅಮೃತೇಶ್ವರ ದೇವಾಲಯದ ಒಂದು ಶಿಲ್ಪ. ಚಿಕ್ಕಮಗಳೂರಿನ ಬಳಿಯ ತರಿಕೆರೆಯಲ್ಲಿರುವ ಈ ಅದ್ಭುತ ದೇವಾಲಯದಲ್ಲಿ ರಾಮಾಯಣ, ಮಹಾಭಾರತ, ಮತ್ತು ಭಾಗವತ ಮೂರೂ ಕಥೆಗಳ ಸುಂದರ ಶಿಲ್ಪಗಳಿವೆ. ಇದು ರಾಮಾಯಣದ ಒಂದು ಕಥಾಪ್ರಸಂಗದ ಒಂದು ಶಿಲ್ಪ. 
     ಶ್ರೀರಾಮನು ವಾನರರಾಜ ಸುಗ್ರೀವನ ಸಖ್ಯ ಬೆಳೆಸಿದ ಬಳಿಕ, ಅವನು ಸೀತೆಯನ್ನು ಹುಡುಕಲು ಸಹಾಯ ಮಾಡುವುದಾಗಿಯೂ ಅದಕ್ಕೆ ಪ್ರತಿಯಾಗಿ ರಾಮನು ತನ್ನನ್ನು ರಾಜ್ಯದಿಂದ ಓಡಿಸಿ ಹೆಂಡತಿ ರುಮೆಯನ್ನು ಅಪಹರಿಸಿರುವ ತನ್ನ ಅಣ್ಣ ವಾಲಿಯನ್ನು ಸಂಹರಿಸಬೇಕೆಂದೂ ಕೇಳುತ್ತಾನೆ. ಅದಕ್ಕೆ ರಾಮನು ಒಪ್ಪಲು, ಸುಗ್ರೀವನು ಅವನ ಬಾಹುಬಲವನ್ನು ಪರೀಕ್ಷಿಸಲು ಸಪ್ತತಾಳವೃಕ್ಷಗಳನ್ನು ಒಂದೇ ಬಾಣದಿಂದ ಛೇದಿಸಬೇಕೆಂದೂ ವಾಲಿಯು ಹಾಗೆ ಮಾಡುತ್ತಿದ್ದನೆಂದೂ ಹೇಳುತ್ತಾನೆ. ರಾಮನು ಅಂತೆಯೇ ಒಂದೇ ಬಾಣದಿಂದ ಸಪ್ತತಾಳವೃಕ್ಷಗಳನ್ನು ಭೇದಿಸಲು, ಅದು ಅವನ್ನು ಛೇದಿಸಿ ಪುನಃ ಅವನ ಬತ್ತಳಿಕೆಗೆ ಬಂದು ಬೀಳುತ್ತದೆ. ವಾಲ್ಮೀಕಿ ರಾಮಾಯಣದಲ್ಲಿರುವ ಕಥೆ ಇಷ್ಟೇ ಆದರೆ, ಇಲ್ಲಿ ಕಾಣುತ್ತಿರುವ ಶಿಲ್ಪದಲ್ಲಿ ಆ ಸಪ್ತತಾಳವೃಕ್ಷಗಳ ಕೆಳಗೆ ಒಂದು ಸರ್ಪವಿರುವುದನ್ನು ಕಾಣುತ್ತೇವೆ. ಇದೇ ರೀತಿಯ ಶಿಲ್ಪಗಳು ಇತರ ಹೊಯ್ಸಳ ದೇವಾಲಯಗಳಲ್ಲೂ ಕಂಡುಬರುತ್ತವೆ.
      ಈ ಹಾವೇಕೆ ಬಂತು? ವಾಲ್ಮೀಕಿ ರಾಮಾಯಣದಲ್ಲಿ ಹಾವಿನ ಪ್ರಸ್ತಾಪವಿಲ್ಲ. ಆದರೆ ಸಂಸ್ಕೃತದ್ದೇ ಇನ್ನೊಂದು ರಾಮಾಯಣವಾದ ಆನಂದರಾಮಾಯಣದಲ್ಲಿದೆ. ಇದನ್ನೂ ವಾಲ್ಮೀಕಿಗಳೇ ರಚಿಸಿದರೆಂದು ಪ್ರತೀತಿ. ಇದರ ಕಥೆಯ ಪ್ರಕಾರ, ರಾಮನು ಆ ಸಪ್ತತಾಳವೃಕ್ಷಗಳು ಚಕ್ರಾಕಾರವಾಗಿರುವುದನ್ನು ಗಮನಿಸುತ್ತಾನೆ. ಹಾಗಿರುವಾಗ ಒಂದೇ ಬಾಣದಿಂದ ಹೇಗೆ ಅವನ್ನು ಛೇದಿಸಲು ಸಾಧ್ಯ? ಅಲ್ಲದೇ ಅವು ಒಂದು ಸರ್ಪದ ಮೈಮೇಲೆ ಬೆಳೆದಿರುತ್ತವೆ. ಎಲ್ಲಾ ಸರ್ಪಗಳಲ್ಲೂ ಆದಿಶೇಷನ ಅಂಶವಿರುತ್ತದೆಯಲ್ಲವೇ? ಲಕ್ಷ್ಮಣ ಆದಿಶೇಷನ ಅವತಾರವೇ ಆಗಿರುತ್ತಾನೆ. ಹಾಗಾಗಿ ರಾಮನು ತನ್ನ ಅಂಗುಷ್ಠದಿಂದ ಲಕ್ಷ್ಮಣನ ಅಂಗುಷ್ಠವನ್ನು ಒತ್ತುತ್ತಾನೆ. ಆಗ ಆತ ಸರ್ಪಕ್ಕೆ ಒತ್ತಿದಂತಾಗಿ ಸುರುಳಿ ಸುತ್ತಿ ಮಲಗಿರುವ ಅದು ನೆಟ್ಟಗಾಗುತ್ತದೆ! ಆಗ ಅದರ ಮೇಲಿರುವ ಸಪ್ತತಾಳವೃಕ್ಷಗಳೂ ನೆಟ್ಟಗಾಗುತ್ತವೆ! ಆಗ ರಾಮನು ಒಂದೇ ಬಾಣದಿಂದ ಅವನ್ನು ಛೇದಿಸುತ್ತಾನೆ! 
     ಇಷ್ಟಕ್ಕೂ ಆ ಸಪ್ತತಾಳವೃಕ್ಷಗಳು ಏಕೆ ಆ ಸರ್ಪದ ಮೈಮೇಲೆ ಬೆಳೆದಿರುತ್ತವೆ? ಅದಕ್ಕೊಂದು ಕಥೆ ಇದೆ. ಒಮ್ಮೆ ವಾಲಿಯು ಕೆಲವು ತಾಳೆ ಹಣ್ಣುಗಳನ್ನು ಕಿತ್ತುಕೊಂಡು ತಿನ್ನಲೆಂದು ಒಂದು ಗುಹೆಗೆ ಹೋಗಿರುತ್ತಾನೆ. ಆಗ ನೋಡಿದರೆ ಏಳು ತಾಳೆ ಹಣ್ಣುಗಳು ಕಾಣೆಯಾಗಿರುತ್ತವೆ! ಯಾರು ಕದ್ದಿದ್ದು ಎಂದು ನೋಡಲು, ಒಂದು ಸರ್ಪವು ಕದ್ದಿರುತ್ತದೆ. ಆಗ ವಾಲಿಯು ಕೋಪಗೊಂಡು ಆ ಸರ್ಪಕ್ಕೆ," ನಿನ್ನ ಮೈಮೇಲೆ ಏಳು ತಾಳೆ ವೃಕ್ಷಗಳು ಬೆಳೆಯಲಿ!" ಎಂದು ಶಪಿಸಿರುತ್ತಾನೆ. ಅದಕ್ಕೆ ಆ ಸರ್ಪವೂ," ಯಾರು ಆ ಏಳು ತಾಳೆ ವೃಕ್ಷಗಳನ್ನು ಒಂದೇ ಬಾಣದಿಂದ ಛೇದಿಸುವನೋ ಅವನೇ ನಿನ್ನನ್ನು ಕೊಲ್ಲುತ್ತಾನೆ!" ಎಂದು ಮರುಶಾಪ ನೀಡಿರುತ್ತದೆ!
    ಹೀಗೆ ವಾಲಿಯ ಶಾಪದಿಂದ ಆ ಸರ್ಪದ ಮೈಮೇಲೆ ಏಳು ತಾಳೆ ವೃಕ್ಷಗಳು ಬೆಳೆದಿರುತ್ತವೆ. ರಾಮನು ಅವನ್ನು ಛೇದಿಸಿದ ಬಳಿಕ, ಸರ್ಪಕ್ಕೆ ಶಾಪ ವಿಮುಕ್ತಿಯಾಗುತ್ತದೆ. ಆಗ ಸುಗ್ರೀವನು ವಾಲಿಗೆ ಅವನ ತಂದೆ ಇಂದ್ರನು ಒಂದು ಅಲೌಕಿಕ ಹಾರವನ್ನು ಕೊಟ್ಟಿರುವನೆಂದೂ ಅದನ್ನು ಅವನು ಧರಿಸಿದ್ದಾಗ ಯಾರು ಅದನ್ನು ನೋಡುವರೋ ಅವರ ಅರ್ಧ ಶಕ್ತಿ ವಾಲಿಗೇ ಹೋಗುವುದೆಂದೂ ಹೇಳುತ್ತಾನೆ. ಆಗ ರಾಮನ ಆಜ್ಞೆಯಂತೆ ಆ ಸರ್ಪವು ವಾಲಿಯ ಆ ಹಾರವನ್ನು ಉಪಾಯವಾಗಿ ತೆಗೆದುಕೊಂಡು ಇಂದ್ರನಿಗೆ ಕೊಡುತ್ತದೆ.
     ಇದಿಷ್ಟೂ ಆನಂದ ರಾಮಾಯಣದ ಕಥೆ. ಆದರೆ ಈ ಶಿಲ್ಪದಲ್ಲಿ ರಾಮನು ಏಳು ಮರಗಳನ್ನು ಛೇದಿಸುವುದರೊಂದಿಗೆ ಸರ್ಪವನ್ನೂ ಬಾಣದಿಂದ ಹೊಡೆದಿದ್ದಾನೆ. ಅದು ಸರ್ಪದ ಶಾಪ ವಿಮುಕ್ತಿಗಾಗಿ ಇರಬಹುದು. 
     ಇದಕ್ಕೆ ಕಾರಣ ಇನ್ನೊಂದು ಕಥೆಯಾಗಿದ್ದು, ಅದು ತಮಿಳಿನ ಕಂಬರಾಮಾಯಣ ಹಾಗೂ ಒಡಿಯಾದ ಬಲರಾಮದಾಸನ ಜಗಮೋಹನ ರಾಮಾಯಣ ಮತ್ತು ಉಪೇಂದ್ರ ಭಂಜನ ವೈದೇಹಿಸ ವಿಲಾಸದಲ್ಲಿದೆ. ಈ ಕಥೆಯ ಪ್ರಕಾರ, ಮಣಿಭದ್ರ ಎಂಬ ಯಕ್ಷನಿಗೆ ಕವಿಕಾ ಎಂಬ ಪತ್ನಿಯಿಂದ ಅನೇಕ ಮಕ್ಕಳಿರುತ್ತಾರೆ. ಅವರಲ್ಲಿ ಏಳು ಪುತ್ರರು ಮಯಾಸುರನಿಂದ ಮಾಯಾವಿದ್ಯೆ ಕಲಿತು, ಒಂದು ದೊಡ್ಡ ಸರ್ಪವನ್ನು ಸೃಷ್ಟಿಸಿ ಅದರ ಮೇಲೆ ಕುಳಿತು ಲೋಕಪರ್ಯಟನೆ ಮಾಡುತ್ತಿರುತ್ತಾರೆ. ಒಮ್ಮೆ ಅಗಸ್ತ್ಯ ಮುನಿಗಳು ಬರುತ್ತಿದ್ದಾಗ ಅವರನ್ನು ಅಪಹಾಸ್ಯ ಮಾಡಲು ಅವರು ಆ ಸರ್ಪವನ್ನು ಭೂಮಿಯ ಅಡಿಯಲ್ಲಿ ಹೋಗಿಸಿ ಅದರ ಮೇಲೆ ಸಪ್ತ ತಾಳೆ ವೃಕ್ಷಗಳ ರೂಪ ತಾಳಿ ಚಕ್ರಾಕಾರವಾಗಿ ನಿಂತು ಅವರ ದಾರಿಗೆ ಅಡ್ಡವಾಗುತ್ತಾರೆ. ಆಗ ಅವರು," ಇನ್ನು ಮುಂದೆ ಹೀಗೆಯೇ ನಿಂತಿರಿ!" ಎಂದು ಶಪಿಸುತ್ತಾರೆ! ಆಗ ಅವರು ಪಶ್ಚಾತ್ತಾಪ ಪಟ್ಟು ಕ್ಷಮೆಯಾಚಿಸಲು, ಅಗಸ್ತ್ಯರು, ಅನೇಕ ವರ್ಷಗಳ ಬಳಿಕ ವಿಷ್ಣುವಿನ ಅವತಾರವಾದ ಶ್ರೀ ರಾಮನಿಂದ ಅವರಿಗೆ ಮುಕ್ತಿ ಸಿಗುತ್ತದೆ ಎಂದು ಉಶ್ಶಾಪ ನೀಡುತ್ತಾರೆ. ರಾಮನು ಆ ಏಳು ತಾಳೆ ವೃಕ್ಷಗಳನ್ನು ಛೇದಿಸಬೇಕಾದಾಗ ಒಂದು ಕಲ್ಲನ್ನು ತನ್ನ ಪಾದದಿಂದ ಒತ್ತುತ್ತಾನೆ. ಆಗ ಕಲ್ಲಿನ ಕೆಳಗೆ ಆ ಸರ್ಪದ ತಲೆ ( ಕೆಲವು ಕಥೆಗಳಲ್ಲಿ ಬಾಲ) ಇರಲು, ಅದು ಒತ್ತಲ್ಪಟ್ಟು ಅದಕ್ಕೆ ಪ್ರಚೋದನೆಯಾಗಿ ಸುರುಳಿಯಾಗಿ ಮಲಗಿರುವ ಅದು ನೆಟ್ಟಗಾಗುತ್ತದೆ. ಆಗ ಚಕ್ರಾಕಾರವಾಗಿರೂವ ಮರಗಳು ನೆಟ್ಟಗಾಗಲು, ರಾಮನು ಒಂದೇ ಬಾಣದಿಂದ ಮರಗಳನ್ನೂ ಹಾವನ್ನೂ ಭೇದಿಸುತ್ತಾನೆ ಹಾಗೂ ಆ ಬಾಣ ಅವನ ಬತ್ತಳಿಕೆಗೆ ಹಿಕದಿರುಗುತ್ತದೆ. ಆಗ ಆ ಸಪ್ತ ಕುಮಾರರಿಗೆ ಶಾಪವಿಮುಕ್ತಿಯಾಗುತ್ತದೆ.
    ಒಡಿಯಾ ರಾಮಾಯಣಗಳ ಪ್ರಕಾರ, ಈ ಏಳು ತಾಳವೃಕ್ಷಗಳಲ್ಲಿ ವಾಲಿಯ ಭಾಗಶಃ ಬಲವಿರುತ್ತದೆ. ಹಾಗಾಗಿ ಅವನ್ನು ರಾಮನು ನಾಶ ಮಾಡಬೇಕಾಗಿರುತ್ತದೆ. ಕಂಬ ರಾಮಾಯಣ ಹಾಗೂ ಆನಂದ ರಾಮಾಯಣದಲ್ಲಿ ಹಾಗೇನಿಲ್ಲ. 
    ಹನುಮಂತನು ರಚಿಸಿದನೆನ್ನಲಾದ ಸಂಸ್ಕೃತದ ಹನುಮನ್ನಾಟಕ ಅಥವಾ ಮಹಾನಾಟಕ ಎಂಬ ನಾಟಕದಲ್ಲೂ ಈ ಹಾವಿನ ಮೇಲೆ ಸಪ್ತತಾಳವೃಕ್ಷಗಳಿರುವ ವಿಷಯ ಇದೆ. ಅಲ್ಲಿ ವಾಲಿಯು ರಾಮನು ತನ್ನನ್ನು ಕೊಲ್ಲುವನೆಂದು ಮಾಡಿರುವ ಪ್ರತಿಜ್ಞೆಯನ್ನು ಕೇಳಿ ವಕ್ರವಾಗಿರುವ ಏಳು ತಾಳವೃಕ್ಷಗಳನ್ನು ತಾನೇ ಯುದ್ಧಕ್ಕೆ ಕಳಿಸುತ್ತಾನೆ. ಆಗ ಲಕ್ಷ್ಮಣನು ಅವುಗಳ ಕೆಳಗಿರುವ ಹಾವನ್ನು ತನ್ನ ಪಾದದಿಂದ ಒತ್ತಿ ನೆಟ್ಟಗೆ ಮಾಡಿ, ಮರಗಳು ನೆಟ್ಟಗೆ ನಿಲ್ಲುವಂತೆ ಮಾಡುತ್ತಾ ರಾಮನಿಗೆ ಬಾಣ ಹೊಡೆಯಲು ಸಹಾಯ ಮಾಡುತ್ತಾನೆ.
    ಹೀಗೆ ಈ ಸಪ್ತತಾಳವೃಕ್ಷಗಳೊಂದಿಗೆ ಸರ್ಪದ ಸಂಬಂಧ ಇರುವ ಕಥೆಗಳು ವಾಲ್ಮೀಕಿ ರಾಮಾಯಣದಲ್ಲಿ ಇರದಿದ್ದರೂ ಹಲವು ರಾಮಾಯಣಗಳಲ್ಲಿವೆ. ಅವು ಬಾಯ್ಮಾತಿನಿಂದ ಹರಡಿ ಶಿಲ್ಪಿಗೆ ಈ ರೀತಿಯ ಶಿಲ್ಪ ರಚಿಸಲು ಪ್ರೇರಣೆ ಮಾಡಿರಬಹುದು.

#ಶಿಲ್ಪ_ಕಥೆ #ಶಿಲ್ಪ_ಸ್ವಾರಸ್ಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ