ಭಾನುವಾರ, ಮಾರ್ಚ್ 8, 2026

ಹೋಳಿ ಹಬ್ಬದ ಕಥೆಗಳು

ನಮ್ಮ ಪ್ರತಿಯೊಂದು ಹಬ್ಬದ ಹಿಂದೆಯೂ ಸ್ವಾರಸ್ಯಕರ ಪೌರಾಣಿಕ, ಹಾಗೂ ಜಾನಪದ ಕಥೆಗಳಿವೆ. ಅಂತೆಯೇ ಹೋಳಿ ಹಬ್ಬದ ವಿಷಯದಲ್ಲೂ ಅನೇಕ ಕಥೆಗಳಿವೆ ಈಗ ಹೋಳಿ ಹಬ್ಬದ ಕಥೆಗಳನ್ನು ನೋಡೋಣ.
      ಹೋಳಿ, ಹೋಲಾಕಾ, ಹೋಲಿಕಾ, ಹೂಲಿ, ಮೊದಲಾದ ಹೆಸರುಗಳಿಂದ ಕರೆಯಲ್ಪಡುವ ಈ ಹಬ್ಬವು, ಸಂಭ್ರಮದಿಂದ ಜನರು ಮಾಡುವ ಹಾ ಹಾ ಹೂ ಹೂ ಹೋ ಹೋ ಎಂಬೆಲ್ಲಾ ಉದ್ಗಾರಗಳಿಂದ ಈ ಪದಗಳು ಬಂದಿವೆಯೆಂದು ಹೇಳುತ್ತಾರೆ. 
        ಭವಿಷ್ಯೋತ್ತರ ಪುರಾಣದ ಕಥೆಯೊಂದರ ಪ್ರಕಾರ, ಮಾಲಿ ಎಂಬ ರಾಕ್ಷಸನಿಗೆ ಢೋಂಡಾ ಅಥವಾ ಢೂಂಡಾ ಎಂಬ ಮಗಳಿದ್ದಳು. ಅವಳು ಶಿವನನ್ನು ಕುರಿತು ತಪಸ್ಸು ಮಾಡಿ ತಾನು ಮನುಷ್ಯರಿಂದಲೂ ರಾಕ್ಷಸರಿಂದಲೂ ದೇವತೆಗಳಿಂದಲೂ ಯಾವುದೇ ಆಯುಧಗಳಿಂದಲೂ ಯಾವುದೇ ಋತುವಿನಲ್ಲೂ ಹಗಲು ಅಥವಾ ರಾತ್ರಿಯಲ್ಲೂ ಮನೆಯ ಒಳಗೂ ಅಥವಾ ಹೊರಗೂ ಸಾಯಬಾರದೆಂದು ವರ ಪಡೆದಳು. ಶಿವನು ಅವಳಿಗೆ ಆ ವರವನ್ನು ನೀಡಿ ಒಂದು ಎಚ್ಚರಿಕೆ ಕೊಟ್ಟನು. ಅದೇನೆಂದರೆ, ಜನರು ಸಂಭ್ರಮದಿಂದ ಅವಳಿಗೆ ಕೆಟ್ಟ, ಅಶ್ಲೀಲ ಮಾತುಗಳನ್ನು ಆಡಿ ನಿಂದಿಸಿದರೆ ಅವಳು ಕುಗ್ಗಿ ಸತ್ತುಹೋಗುವಳೆಂಬುದು! 
     ಶಿವನ ವರದಿಂದ ಕೊಬ್ಬಿದ ಆ ರಾಕ್ಷಸಿಯು ಜನರನ್ನು, ಮುಖ್ಯವಾಗಿ ಮಕ್ಕಳನ್ನೂ ಯುವಕರನ್ನೂ ಪೀಡಿಸತೊಡಗಿದಳು! ಅವಳು ' ಅಡಾಡಾ ' ಎಂದು ಕಿರುಚುತ್ತಾ ಜನರ ಮೇಲೆ ದಾಳಿ ಮಾಡುತ್ತಿದ್ದಳು! ಆ ಸಮಯದಲ್ಲಿ ರಘು ಎಂಬ ರಾಜನು ಆಳುತ್ತಿದ್ದನು.‌ಅವನು ಅವಳನ್ನು ಆಯುಧಗಳಿಂದಾಗಲೀ ಮಂತ್ರಗಳಿಂದಾಗಲೀ ಯಾರಿಂದಲೂ ಕೊಲ್ಲಲಾಗದೆಂದು ಮನಗಂಡು ಇದಕ್ಕೆ ಪರಿಹಾರವೇನೆಂದು ಕುಲಗುರುಗಳಾದ ವಸಿಷ್ಠರನ್ನು ಕೇಳಿದನು. ಆಗ ವಸಿಷ್ಠರು ಅವಳ ರಹಸ್ಯವನ್ನು ಬಿಚ್ಚಿಟ್ಟು ," ಫಾಲ್ಗುಣ ಮಾಸದ ಶುಕ್ಲಪಕ್ಷದ ಪೂರ್ಣಿಮೆಯ ದಿನದಂದು ಒಣಗಿದ ಕಟ್ಟಿಗೆಗಳನ್ನೂ ಒಣ ಹುಲ್ಲನ್ನೂ ಪೇರಿಸಿ ಬೆಂಕಿ ಹಾಕಿ, ಎಲ್ಲಾ ಕಿರಿಯರೂ ಯುವಕರೂ ಸೇರಿ ರಕ್ಷೋಘ್ನ ಮಂತ್ರಗಳನ್ನು ಪಠಿಸಿ ಆ ಅಗ್ನಿಯನ್ನು ಸುತ್ತುತ್ತಾ ನಗುತ್ತಾ ಚಪ್ಪಾಳೆ ತಟ್ಟುತ್ತಾ ಗ್ರಾಮ್ಯ ಭಾಷೆಯಲ್ಲಿ ಅಶ್ಲೀಲ ಹಾಡುಗಳನ್ನು ಹಾಡಬೇಕು! ಅದರಿಂದ ಆ ರಾಕ್ಷಸಿ ದುರ್ಬಲಗೊಂಡು ಸಾಯುತ್ತಾಳೆ!" ಎಂದರು.
       ಜನರು ಅದರಂತೆ ಮಾಡಲು ಆ ರಾಕ್ಷಸಿ ದುರ್ಬಲಗೊಂಡು ಸತ್ತಳು! 
     ಇದನ್ನು ನೆನಪಿಸಿಕೊಳ್ಳಲು ಹುಣ್ಣಿಮೆಯ ರಾತ್ರಿ ಬೆಂಕಿ ಹಾಕಿ ಹಾಡಿ, ಕುಣಿದು, ಮರುದಿನ ಬಣ್ಣದ ಓಕುಳಿಯಾಡುತ್ತಾರೆ. ಹೋಳಿಯ ಹಬ್ಬದಂದು ಅತಿಶೃಂಗಾರದ, ಅಶ್ಲೀಲವೂ ಆಗಿರುವ ಗೀತೆಗಳನ್ನು ಹಾಡಲು ಇದೇ ಕಾರಣ. ಇಡೀ ವರ್ಷ ಸಂಯಮದಿಂದ ಇದ್ದುದಕ್ಕಾಗಿ ಇದೊಂದು ಮನಸ್ಸನ್ನು ಹಗುರಗೊಳಿಸುವ ಆಚರಣೆ. ನಮ್ಮ ಎಲ್ಲಾ ಹಬ್ಬಗಳಲ್ಲೂ ಈ ರೀತಿಯ ಆಚರಣೆಗಳು ಕಾಣುತ್ತವೆ. ಉದಾಹರಣೆಗೆ ದೀಪಾವಳಿಯ ರಾತ್ರಿ ಜೂಜಾಡಬೇಕೆಂಬ ಪದ್ಧತಿಯಿದೆ. ಹಾಗೆಯೇ ಎಲ್ಲಾ ಹಬ್ಬಗಳಲ್ಲೂ ಸಿಹಿತಿಂಡಿಗಳನ್ನು ಸೇವಿಸುವ ಪರಿಪಾಠ ಇದೆ. ಹೀಗೆ ಯಾವುದನ್ನು ಸದಾ ಮಾಡಿದರೆ ತೊಂದರೆಯೋ ಅದಕ್ಕೂ ಒಂದು ದಿನ ಅವಕಾಶವಿತ್ತರೆ ಅದು ಮನಸ್ಸಿನಿಂದ ಹೋಗಿ ಅನಂತರ ಸಂಯಮದಿಂದ ಇರಬಹುದೆಂಬುದು ನಮ್ಮ ಹಿರಿಯರ ಆಲೋಚನೆಯಾಗಿತ್ತು. ಅಲ್ಲದೇ ಇವನ್ನು ಹಬ್ಬದ ಸಂದರ್ಭದಲ್ಲಿ ಮಾಡುವುದರಿಂದ ಇತಿ ಮಿತಿಯಲ್ಲಿರುತ್ತದೆ ಹಾಗೂ ವಿನೋದಕ್ಕಾಗಿ ಮತ್ತು ಸ್ನೇಹವರ್ಧನೆಗಾಗಿ ಇರುತ್ತದೆಯೇ ಹೊರತು ದುರುದ್ದೇಶಪೂರಿತವಾಗಿರುವುದಿಲ್ಲ. ದೀಪಾವಳಿಯ ಸಂದರ್ಭದಲ್ಲಿ ಇತಿಮಿತಿಯಲ್ಲಿ ವಿನೋದಕ್ಕಾಗಿ ಜೂಜಾಡುವುದರಿಂದ, ಹಾಗೂ ಹೋಳಿ ಹಬ್ಬದಲ್ಲಿ ಗೆಳೆಯ, ಗೆಳತಿಯರು, ಸ್ತ್ರೀ, ಪುರುಷರು ಒಟ್ಟಿಗೆ ಸ್ವಲ್ಪ ಹೊತ್ತು ಬಣ್ಣ ಎರಚಿಕೊಂಡು, ಹಾಡಿ,ಕುಣಿಯುವುದರಿಂದ ಸ್ನೇಹ, ಬಾಂಧವ್ಯಗಳು ಹೆಚ್ಚುತ್ತವೆ. 
     ಹೋಳಿ ಹಬ್ಬ ವಸಂತಕಾಲದ ಆಗಮನವನ್ನೂ ಸೂಚಿಸುತ್ತದೆ. ಹುಣ್ಣಿಮೆಯ ಮರುದಿನದಂದು ಕಾಮನ ಪೂಜೆಯನ್ನೂ ಮಾಡುವುದರಿಂದ ಪ್ರೇಮ, ಸಂತಾನ, ಸೃಷ್ಟಿಗಳ ಸಂಭ್ರಮಾಚರಣೆಯೂ ಇರುತ್ತದೆ. ಒಬ್ಬರ ಮೇಲೆ ಒಬ್ಬರು ಬಣ್ಣವನ್ನು ಎರಚುವುದು ಮರಗಳಲ್ಲಿ ಹೊಸ ಪುಷ್ಪಗಳು ಅರಳಿರುವುದನ್ನು ಸೂಚಿಸುತ್ತದೆ.
     ಇನ್ನೊಂದು ಕಥೆಯ ಪ್ರಕಾರ, ಹಿರಣ್ಯಕಶಿಪುವಿನ ತಂಗಿಯಾದ ಹೋಲಿಕಾ ಎಂಬ ರಾಕ್ಷಸಿಯಿದ್ದಳು. ಅವಳು ಅಗ್ನಿಯಿಂದ ಸುಡಬಾರದೆಂದು ಅವನಿಂದಲೇ ವರ ಪಡೆದಿದ್ದಳು. ಹಿರಣ್ಯಕಶಿಪುವು ಹರಿದ್ವೇಷಿಯಾಗಿದ್ದರೆ, ಅವನ ಮಗ ಪ್ರಹ್ಲಾದನು ಹರಿಭಕ್ತನಾಗಿದ್ದನು. ಇದರಿಂದ ಕುಪಿತಗೊಂಡ ಹಿರಣ್ಯಕಶಿಪುವು ಪ್ರಹ್ಲಾದನನ್ನು ಕೊಲ್ಲಿಸಲು ಬಹಳ ಪ್ರಯತ್ನಪಟ್ಟನು. ಆದರೆ ಶ್ರೀನ್ನಾರಾಯಣನ ದಯೆಯಿಂದ ಅದು ಸಾಧ್ಯವಾಗಲಿಲ್ಲ. ಕೊನೆಗೆ ಹಿರಣ್ಯಕಶಿಪುವು ತನ್ನ ತಂಗಿ ಹೋಲಿಕಾಳಿಗೆ ಪ್ರಹ್ಲಾದನನ್ನು ಬೆಂಕಿಯಲ್ಲಿ ಕೂರಿಸಿಕೊಂಡು ಅವನನ್ನು ಸುಡಿಸಲು ಹೇಳಿದನು. ಅವಳು ಅದರಂತೆ ಬಾಲಕ ಪ್ರಹ್ಲಾದನನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಚಿತೆಯೇರಿದಳು. ಆದರೆ ಪುನಃ ವಿಷ್ಣುವಿನ ಕೃಪೆಯಿಂದ ಪ್ರಹ್ಲಾದನು ಕೂದಲೂ ಕೊಂಕದೇ ಪಾರಾದರೆ, ಹೋಲಿಕಾಳೇ ಅಗ್ನಿಯಲ್ಲಿ ಸುಟ್ಟುಹೋದಳು! ಅವಳ ವರ ಅವಳಿಗೇ ತಿರುಗಿಬಿತ್ತು! ಇದರದೇ ಇನ್ನೊಂದು ಕಥೆಯ ಪ್ರಕಾರ, ಹೋಲಿಕಾ ಒಂದು ಮಾಯಾ ಹೊದಿಕೆಯನ್ನು ಹೊದ್ದುಕೊಂಡಿದ್ದಳು. ಅದು ಅವಳನ್ನು ಬೆಂಕಿಯು ಸುಡದಂತೆ ರಕ್ಷಿಸುತ್ತಿತ್ತು. ಆಗ ಗಾಳಿಯು ಬೀಸಿ, ಅವಳ ಹೊದಿಕೆ ಹಾರಿ ಪ್ರಹ್ಲಾದನ ಮೇಲೆ ಬಿದ್ದಿತು. ಅದರಿಂದ ಅವನು ಸುಡದೇ ಅವಳೇ ಸುಟ್ಟುಹೋದಳು! ಈ ಘಟನೆಯನ್ನು ನೆನಪಿಸಿಕೊಳ್ಳಲು ಹೋಲಿಕಾದಹನ ಎಂಬ ಆಚರಣೆಯಲ್ಲಿ ಹಳೆಯ ಕಟ್ಟಿಗೆ, ಎಲೆಗಳು ಇತ್ಯಾದಿಗಳನ್ನು ಹಾಕಿ ಬೆಂಕಿ ಹಾಕುತ್ತಾರೆ. ಕೆಲವು ಸಂಪ್ರದಾಯಗಳಲ್ಲಿ ಹೋಲಿಕಾಳ ಬೊಂಬೆ ಮಾಡಿ ದಹಿಸುತ್ತಾರೆ ಮತ್ತು ಅನಂತರ, ಹೋಲಿಕಾಳನ್ನು ಪೂಜಿಸುತ್ತಾರೆ ಕೂಡ. ಇದಕ್ಕೆ ಕಾರಣವೆಂದರೆ,  ದುಷ್ಟರು ಸಾಧುಗಳ ಸಂಪರ್ಕಕ್ಕೆ ಬಂದಮೇಲೆ ಅವರೂ ಸಾಧುಗಳಾಗುತ್ತಾರೆ. ಹೋಲಿಕಾಳು ಪ್ರಹ್ಲಾದನ ಸಂಪರ್ಕಕ್ಕೆ ಬಂದು ಸುಟ್ಟು ಸತ್ತ ಬಳಿಕ, ಅವಳಿಗೂ ಮುಕ್ತಿ ಸಿಕ್ಕಿತು. ಹಾಗಾಗಿ ಅವಳನ್ನು ಸುಟ್ಟು ಪುನಃ ಪೂಜಿಸುವ ಅರ್ಥ, ದುಷ್ಟತನ ದಮನವಾಗಿ ಒಳ್ಳೆಯದು ಉಳಿಯಲಿ ಎಂಬುದು.ಅಂತೆಯೇ ಇದು, ಹಳೆಯ, ಜೀರ್ಣವಾದುದೆಲ್ಲಾ ಹೋಗಿ ಹೊಸದು ಬರಲಿ ಎಂಬ ಸೃಷ್ಟಿ, ಸ್ಥಿತಿ, ಲಯಗಳ ತತ್ವವೇ ಆಗಿರುತ್ತದೆ.
     ಈ ದಿನವೇ ಶಿವನು ಕಾಮದೇವನನ್ನು ತನ್ನ ಮೂರನೆಯ ಕಣ್ಣಿನಿಂದ ಸುಟ್ಟನೆಂಬ ಕಥೆಯಿದೆ. ಶಿವನ ಪುತ್ರನಿಂದಲೇ ತನಗೆ ಮರಣ ಬರಬೇಕೆಂದು ತಾರಕಾಸುರನೆಂಬ ರಾಕ್ಷಸನು ಬ್ರಹ್ಮನಿಂದ ವರ ಪಡೆದು ಲೋಕಕಂಟಕನಾಗಿದ್ದನು. ಶಿವನ ಪತ್ನಿ ಸತಿಯು ತನ್ನ ತಂದೆ ದಕ್ಷನಿಂದ ಶಿವನಿಗೆ ಅವಮಾನವಾಯಿತೆಂದು ಯೋಗಾಗ್ನಿಯಿಂದ ಭಸ್ಮಗೊಂಡಿದ್ದಳು. ಹೆಂಡತಿಯಿಲ್ಲದೇ ಮಗನು ಹೇಗೆ ಹುಟ್ಟುವನೆಂಬ ತರ್ಕದಿಂದ ತಾರಕಾಸುರನು ಶಿವನ ಮಗನಿಂದಲೇ ಮರಣ ಬರಲೆಂದು ವರ ಪಡೆದಿದ್ದನು. ಇದರಿಂದ ತನಗೆ ಮರಣವೇ ಇಲ್ಲವೆಂದು ಅವನು ಬಗೆದಿದ್ದನು. ಈಗ ಸತಿಯು ಹಿಮವಂತನ ಮಗಳು ಪಾರ್ವತಿಯಾಗಿ ಹುಟ್ಟಿ ಅವನ ಮೇಲಿನ ಪ್ರೇಮದಿಂದ ಅವನ ಸೇವೆಯಲ್ಲಿ ನಿರತಳಾಗಿದ್ದಳು. ಶಿವನಾದರೋ ಪ್ರೀತಿ, ಪ್ರೇಮಗಳಿಂದ ದೂರವಾಗಿ ತಪಸ್ಸಿನಲ್ಲಿ ಮುಳುಗಿದ್ದನು. ಹಾಗಾಗಿ ಅವನನ್ನು ತಪೋವಿಮುಖನನ್ನಾಗಿಸಿ ಪಾರ್ವತಿಯಲ್ಲಿ ಪ್ರೇಮವುಂಟಾಗಿ ಅವಳನ್ನು ವರಿಸಿದರೆ, ಅವನಿಗೆ ಮಗನು ಹುಟ್ಟಿ ಅವನು ತಾರಕಾಸುರನನ್ನು ಸಂಹರಿಸುತ್ತಾನೆಂದು ದೇವತೆಗಳು ಬ್ರಹ್ಮನೊಂದಿಗೆ ಸಮಾಲೋಚಿಸಿ, ಅವನ ಆಣತಿಯಂತೆ ಶಿವನನ್ನು ತಪೋವಿಮುಖನನ್ನಾಗಿಸಲು ಕಾಮದೇವನನ್ನು ಕಳಿಸಿದರು. ದೇವಕಾರ್ಯಕ್ಕಾಗಿ ಕಾಮದೇವನು ಹೋಗಿ ಶಿವನ ಮೇಲೆ ಹೂಬಾಣ ಬಿಡಲು, ಒಂದು ಕ್ಷಣ ವಿಚಲಿತನಾದ ಶಿವನು ಕಾಮದೇವನ ಮೇಲೆ ಕುಪಿತಗೊಂಡು ತನ್ನ ಮೂರನೆಯ ಕಣ್ಣಿನ ಅಗ್ನಿಯಿಂದ ಕಾಮನನ್ನು ಸುಟ್ಟು ಹೊರಟುಹೋದನು! ಆಗ ಕಾಮನ ಪತ್ನಿ ರತಿಯು ಸಾಯಲೆಂದು ಹೊರಡಲು, ಶಿವನು ಪಾರ್ವತಿಯನ್ನು ವರಿಸಿದಾಗ ಕಾಮನು ಪುನಃ ಜೀವಂತನಾಗುತ್ತಾನೆ ಎಂಬ ಅಶರೀರವಾಣಿಯಾಯಿತು! ಅನಂತರ, ಪಾರ್ವತಿಯು ತಪಸ್ಸು ಮಾಡಿ ಶಿವನನ್ನು ಮೆಚ್ಚಿಸಿ ವರಿಸಲು, ಕಾಮನು ಶಿವನ ದಯೆಯಿಂದ ಜೀವಂತಗೊಂಡನು. ಆದರೆ ಅವನು ದೇಹವಿಲ್ಲದೇ ಅನಂಗನೆನಿಸಿದನು ಹಾಗೂ ರತಿಯು ಬಯಸಿದಾಗ ಅವಳಿಗೆ ಮಾತ್ರ ಕಾಣುವಂತಾದನು. ಇದರ ಒಂದು ಸಂದೇಶವೇನೆಂದರೆ, ಕಾಮವು ಆಂತರ್ಯದಲ್ಲಿರಬೇಕು, ನಮ್ಮ ಬಯಕೆ ಅಥವಾ ರತಿಯನ್ನು ತೀರಿಸುವಂತಿದ್ದರೆ ಸಾಕು, ಎಲ್ಲರಿಗೂ ಕಾಣಬೇಕಿಲ್ಲ ಎಂಬುದು. ಎಲ್ಲರಿಗೂ ಕಾಮವು ಕಾಣಬೇಕೆಂದಾಗ ಅದು ಕಲೆಯಾಗಿರಬೇಕು. ಈ ಕಥೆಯನ್ನು ನೆನಪಿಸಿಕೊಳ್ಳಲು ಹೋಳಿ ಹುಣ್ಣಿಮೆಯಂದು ಕಾಮದಹನ ಮಾಡುತ್ತಾರೆ, ಹಾಗೂ ಮರುದಿನ, ಕಾಮನ ಪೂಜೆ ಮಾಡುತ್ತಾರೆ. ಇದರ ತಾತ್ಪರ್ಯವೆಂದರೆ, ಕೆಟ್ಟ ಆಸೆಗಳೆಲ್ಲವೂ ಹೋಗಿ ಒಳ್ಳೆಯ ಆಸೆಗಳು ಉಳಿಯಲಿ ಎಂಬುದು.
      ಸಾಮಾನ್ಯವಾಗಿ ಕೃಷ್ಣನು ರಾಧೆ ಮತ್ತು ಇತರ ಗೋಪಿಕಾಸ್ತ್ರೀಯರೊಂದಿಗೆ ಓಕುಳಿಯಾಡುವ ಚಿತ್ರಗಳನ್ನು ನೋಡುತ್ತೇವೆ. ಈ ವಿಷಯದಲ್ಲಿ ಒಂದು ಸ್ವಾರಸ್ಯಕರ ಕಥೆ ಮತ್ತು ಆಚರಣೆಯಿದೆ. ಕೃಷ್ಣನು ನಂದಗಾಂವ್ ಅಥವಾ ವೃಂದಾವನದಲ್ಲಿ ವಾಸಿಸುತ್ತಿದ್ದನು. ರಾಧೆಯು ನಂದಗಾಂವ್ ಗೆ ಸನಿಹವೇ ಇರುವ ಬರ್ಸಾನಾ ಎಂಬ ಹಳ್ಳಿಯಲ್ಲಿದ್ದಳು.‌ ಕೃಷ್ಣನು ಹೋಳಿಯ ದಿನ, ಬರ್ಸಾನಾಗೆ ಹೋಗಿ ರಾಧೆ ಮತ್ತು ಅವಳ ಸಖಿಯರ ಮೇಲೆ ಬಣ್ಣ ಎರಚಿ ತುಂಟಾಟವಾಡಲು, ಅವಳೂ ಅವಳ ಸಖಿಯರೂ ಅವನಿಗೆ ಕೋಲುಗಳಲ್ಲಿ ಹೊಡೆದು ಅವನನ್ನು ಓಡಿಸುತ್ತಿದ್ದರು! ಇದನ್ನು ಲಾಠ್ ಮಾರ್ ಹೋಲಿ ಎಂದು ಈಗಲೂ ಆಚರಿಸುತ್ತಾರೆ. ನಂದಗಾಂವ್ ನ ಹುಡುಗರು ಕೃಷ್ಣನಂತೆ ಬರ್ಸಾನಾಗೆ ಹೋಗಿ ಅಲ್ಲಿನ ಹುಡುಗಿಯರೊಂದಿಗೆ ಓಕುಳಿಯಡುತ್ತಾರೆ. ಆ ಹುಡುಗಿಯರು, ರಾಧೆ ಮತ್ತು ಅವಳ ಸಖಿಯರಂತೆ ಅವರನ್ನು ಕೋಲುಗಳಿಂದ ಹೊಡೆಯುತ್ತಾರೆ. ಆ ಹುಡುಗರು ತಮ್ಮನ್ನು ರಕ್ಷಿಸಿಕೊಳ್ಳಲು ಗುರಾಣಿಗಳನ್ನು ಒಡ್ಡುತ್ತಾರೆ. ಹೀಗೆ ಇದೊಂದು ವಿನೋದೋತ್ಸವ. 
      ಶ್ರೀ ಕೃಷ್ಣನ ಮಹಾಭಕ್ತರಾದ ಚೈತನ್ಯ ಮಹಾಪ್ರಭುಗಳು ಜನಿಸಿದ್ದು ಹೋಳಿ ಹುಣ್ಣಿಮೆಯಂದು. ಬಂಗಾರ ವರ್ಣದಿಂದ ಕೂಡಿದ್ದ ಚೈತನ್ಯರನ್ನು ಗೌರಾಂಗ ಎಂದೂ ಕರೆಯುತ್ತಾರೆ. ಹಾಗಾಗಿ ಹೋಳಿ ಹುಣ್ಣಿಮೆಯಂದು ಗೌರಪೂರ್ಣಿಮಾ ಎಂದೂ ಕರೆಯುತ್ತಾರೆ. ಬಂಗಾಳದಲ್ಲಿ ಹರಿನಾಮ ಸಂಕೀರ್ತನೆಯನ್ನು ಪ್ರಚುರಗೊಳಿಸಿದ ಚೈತನ್ಯರನ್ನು ರಾಧಾ, ಕೃಷ್ಣ ತತ್ವಗಳೆರಡೂ ಸೇರಿ ಆಗಿರುವ ಅವತಾರ ಎಂದು ಬಂಗಾಳಿಗರು ಪರಿಗಣಿಸುತ್ತಾರೆ. 
      ಅಂತೆಯೇ, ಹೋಳಿ ಹಬ್ಬದಂದು, ರಾಧಾ ಕೃಷ್ಣರ ದಿವ್ಯ ಪ್ರೇಮವನ್ನು ಆಚರಿಸಲು ಅವರಿಬ್ಬರ ವಿಗ್ರಹಗಳನ್ನು ಸುಂದರವಾದ ಉಯ್ಯಾಲೆಯಲ್ಲಿ ಇರಿಸಿ ತೂಗುತ್ತಾರೆ. ಇದನ್ನು ಡೋಲೋತ್ಸವ ಎಂದು ಕರೆಯುತ್ತಾರೆ, ಹಾಗೂ ಇದು ಬಂಗಾಳ, ಅಸ್ಸಾಂ, ಒಡಿಶಾ, ಮೊದಲಾದ ರಾಜ್ಯಗಳಲ್ಲಿ, ವೈಷ್ಣವ ಸಂಪ್ರದಾಯಗಳಲ್ಲಿ ಪ್ರಚಲಿತವಿದೆ.
       ಹಿಂದೆ, ಪ್ರಾಚೀನ ಭಾರತದಲ್ಲಿ ವಸಂತಕಾಲದ ಆಗಮನವನ್ನು ಸಂಭ್ರಮಿಸಲು, ವಸಂತೋತ್ಸವ ಎಂದು ಅನೇಕ ದಿನಗಳ ಕಾಲ, ಸಾಹಿತ್ಯ, ಸಂಗೀತ, ನಾಟಕ, ಮೊದಲಾದ ಅನೇಕ ಕಲೆಗಳನ್ನುಳ್ಳ, ತಿಂಡಿತಿನಿಸುಗಳು, ಪ್ರೀತಿ ಪ್ರೇಮಗಳ ವೈಭವೀಕರಣಗಳನ್ನುಳ್ಳ  ಹಲವಾರು ಸ್ವಾರಸ್ಯಕರ ಹಬ್ಬ, ಆಚರಣೆಗಳನ್ನು ಮಾಡುತ್ತಿದ್ದರು. ಇವುಗಳಲ್ಲಿ ಈಗ ಹೋಳಿಯೊಂದೇ ಉಳಿದಿದೆ.
      ಹೀಗೆ ಹೋಳಿಯ ವಿಷಯದಲ್ಲಿ ಅನೇಕ ಸ್ವಾರಸ್ಯಕರ ಕಥೆಗಳಿವೆ, ಹಾಗೂ ವಿವಿಧ ಆಚರಣೆಗಳು ಬೆಸೆದುಕೊಂಡಿವೆ. ನಮ್ಮ ಎಲ್ಲಾ ಹಬ್ಬಗಳಲ್ಲೂ ಈ ರೀತಿ ಅನೇಕ ವೈವಿಧ್ಯಮಯ ಕಥೆಗಳನ್ನೂ ಆಚರಣೆಗಳನ್ನೂ ನೋಡಬಹುದು.
     


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ