ಭಂಗಾಸ್ವನನ ಕಥೆ
ಸ್ತ್ರೀ ಪುರುಷರು ಸಮಾಗಮ ಮಾಡಿದಾಗ ಹೆಚ್ಚು ಸುಖ ಯಾರಿಗೆ ಸಿಗುತ್ತದೆ? ಈ ಪ್ರಶ್ನೆಯನ್ನು ಕೇಳಿದ್ದು ಯುಧಿಷ್ಠಿರ. ಪ್ರಶ್ನೆ ಕೇಳಿದ್ದು ಶರಶಯ್ಯೆಯಲ್ಲಿದ್ದ ಭೀಷ್ಮರನ್ನು. ಮರಣವನ್ನು ಎದುರುನೋಡುತ್ತಾ ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮರು ಹೋಗಿಬಿಟ್ಟರೆ ಅವರ ಅಪಾರ ಜ್ಞಾನರಾಶಿ ಅವರೊಂದಿಗೇ ಹೊರಟುಹೋಗುತ್ತದೆಯಲ್ಲಾ ಎಂದು ಯೋಚಿಸಿ ಶ್ರೀಕೃಷ್ಣನು ಅವರಿಂದ ಜ್ಞಾನೋಪದೇಶ ಪಡೆಯಲೆಂದು ಪಾಂಡವರನ್ನು ಅವರ ಬಳಿಗೆ ಕರೆದೊಯ್ಯುತ್ತಾನೆ. ಆಗ ಯುಧಿಷ್ಠಿರನು ಕೇಳಿದ ಹಲವಾರು ಪ್ರಶ್ನೆಗಳನ್ನು ಭೀಷ್ಮರು ಉತ್ತರಿಸುತ್ತಾರೆ. ಆಗ ರಾಜನೀತಿ, ಆಧ್ಯಾತ್ಮಿಕ ವಿಚಾರಗಳು, ತತ್ವ, ಭಕ್ತಿ, ದಾನದ ಮಹತ್ವ, ಮೊದಲಾದ ಹಲವಾರು ವಿಚಾರಗಳು ಬರುತ್ತವೆ. ಈ ವಿಷಯಗಳು ಶಾಂತಿಪರ್ವ ಮತ್ತು ಅನುಶಾಸನ ಪರ್ವಗಳಲ್ಲಿ ತುಂಬಿಕೊಂಡಿವೆ. ಶಾಂತಿಪರ್ವ ಇಂಥ ವಿಚಾರಗಳು ಹಾಗೂ ಹಲವಾರು ಕಥೆಗಳಿರುವ ಬಹು ದೊಡ್ಡ ಪರ್ವ. ಆದರೆ ಮಹಾಭಾರತದಂಥ ಗ್ರಂಥದಲ್ಲಿ ಮೇಲೆ ಹೇಳಿದ ವಿಷಯವೂ ಇದೆಯೆಂದು ಕೆಲವರಿಗೆ ಆಶ್ಚರ್ಯವಾಗಬಹುದು. ಆದರೆ ಮಹಾಭಾರತವು ಆರಂಭದಲ್ಲೇ ಹೇಳುತ್ತದೆ -
ಧರ್ಮೇ ಚಾರ್ಥೇ ಚ ಕಾಮೇ ಚ ಮೋಕ್ಷೇ ಚ ಭರತರ್ಷಭ /
ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ಕ್ವಚಿತ್ //
' ಎಲೈ ಭರತರ್ಷಭ! ಧರ್ಮ, ಅರ್ಥ, ಕಾಮ, ಮತ್ತು ಮೋಕ್ಷಗಳಲ್ಲಿ ಈ ಗ್ರಂಥದಲ್ಲಿರುವುದೇ ಇತರ ಕಡೆಗಳಲ್ಲಿದೆ. ಇಲ್ಲಿ ಇಲ್ಲದ್ದು ಇನ್ನೆಲ್ಲೂ ಇಲ್ಲ!'
ಹಾಗಾಗಿ ಮಹಾಭಾರತದಲ್ಲಿ ಕಾಮದ ವಿಷಯವೂ ಚರ್ಚಿತವಾಗಿದೆ. ಭೀಷ್ಮರಂಥ ಆಜನ್ಮ ಬ್ರಹ್ಮಚಾರಿಗಳಿಗೆ ಇದೇನು ಗೊತ್ತಿರುತ್ತದೆ ಎಂದು ಕೇಳಬಹುದು. ಆದರೆ ಪ್ರಾಚೀನ ಭಾರತದಲ್ಲಿ ಒಂದು ವೃತ್ತಿ ಅಥವಾ ಒಂದು ಬದುಕಿನ ರೀತಿಯಲ್ಲಿ ಇರುವವರಿಗೆ ಇತರ ವಿಚಾರಗಳ ಬಗ್ಗೆ ತಿಳಿದಿರಬಾರದೆಂದೇನೂ ಇರಲಿಲ್ಲ. ಉದಾಹರಣೆಗೆ ಬ್ರಾಹ್ಮಣರಾದ ದ್ರೋಣಾಚಾರ್ಯರು ಕ್ಷಾತ್ರವಿದ್ಯೆಯನ್ನು ತಿಳಿದಿದ್ದರಲ್ಲದೇ ಅದನ್ನು ಪಾಂಡವ, ಕೌರವರಿಗೆ ಕಲಿಸಿದರು ಹಾಗೂ ಸ್ವಯಂ ಮಹಾವೀರರಾಗಿದ್ದರು ಮತ್ತು ಯುದ್ಧ ಮಾಡಿದರು ಕೂಡ! ಕಾಮಸೂತ್ರ ಬರೆದ ವಾತ್ಸ್ಯಾಯನ ಕೂಡ ತಾನು ಬ್ರಹ್ಮಚರ್ಯೆಯಲ್ಲಿರುವಾಗ ಈ ಗ್ರಂಥವನ್ನು ರಚಿಸಿದೆ ಎಂದು ಹೇಳಿಕೊಂಡಿದ್ದಾನೆ. ಪ್ರಹ್ಲಾದನು ಬಾಲ್ಯದಲ್ಲೇ ಮಹಾಭಕ್ತನೂ ಜ್ಞಾನಿಯೂ ಆಗಿದ್ದ! ಹೀಗೆ ಅನೇಕ ಉದಾಹರಣೆಗಳು ಸಿಗುತ್ತವೆ.
ಸ್ತ್ರೀ, ಪುರುಷರು ಸಂಭೋಗಿಸಿದಾಗ ಯಾರಿಗೆ ಹೆಚ್ಚು ಸುಖ ಸಿಗುತ್ತದೆ? ಇದೊಂದು ಚರ್ಚಾಸ್ಪದ ವಿಷಯ. ಇದನ್ನು ಭೀಷ್ಮರು ಒಂದು ಕಥೆಯ ಮೂಲಕ ಉತ್ತರಿಸುತ್ತಾರೆ. ಇದು ಮಹಾಭಾರತದ ಅನುಶಾಸನ ಪರ್ವದಲ್ಲಿ ಬರುತ್ತದೆ. ಈಗ ಈ ಸ್ವಾರಸ್ಯಕರ ಕಥೆಯನ್ನು ನೋಡೋಣ.
ಹಿಂದೆ, ಭಂಗಾಸ್ವನನೆಂಬ ರಾಜನಿದ್ದನು. ಪರಮಧಾರ್ಮಿಕನಾಗಿದ್ದ ಅವನಿಗೆ ಅನೇಕ ಪತ್ನಿಯರಿದ್ದರೂ ಮಕ್ಕಳಿರಲಿಲ್ಲ. ಹಾಗಾಗಿ ಅವನು ಪಂಡಿತರಲ್ಲಿ ಸಮಾಲೋಚಿಸಿ, ಪುತ್ರ ಪ್ರಾಪ್ತಿಗಾಗಿ ಅಗ್ನಿಷ್ಟುತವೆಂಬ ಯಜ್ಞವನ್ನು ಮಾಡಿದನು. ಅದರ ಪ್ರಭಾವದಿಂದ ಅವನಿಗೆ ನೂರು ಪುತ್ರರು ಜನಿಸಿದರು. ಆದರೆ ಈ ಯಜ್ಞದ ಒಂದು ವೈಶಿಷ್ಟ್ಯವೆಂದರೆ ಇದರಲ್ಲಿ ಇಂದ್ರನಿಗೆ ಆಹ್ವಾನವಿರಲಿಲ್ಲ! ಇದರಿಂದ ಇಂದ್ರನು ಈ ಯಜ್ಞವನ್ನು ದ್ವೇಷಿಸುತ್ತಿದ್ದನು. ತನಗೆ ಅಪ್ರಿಯವಾದ ಯಜ್ಞ ಮಾಡಿದ ಭಂಗಾಸ್ವನನ ಮೇಲೆ ಸೇಡು ತೀರಿಸಿಕೊಳ್ಳುವ ಯೋಚನೆ ಮಾಡಿದನು. ಅದಕ್ಕಾಗಿ ಅವನು ಭಂಗಾಸ್ವನನಲ್ಲಿ ಏನಾದರೂ ದೋಷವನ್ನು ಹುಡುಕಿದನು. ಆದರೆ ಅವನಿಗೆ ಯಾವ ದೋಷವೂ ಕಾಣಲಿಲ್ಲ.
ಹೀಗಿರಲು, ಒಂದು ದಿನ ಭಂಗಾಸ್ವನನು ಬೇಟೆಯಾಡಲು ಕಾಡಿಗೆ ಹೋದನು. ಆಗ ಇಂದ್ರನು ಸೇಡು ತೀರಿಸಿಕೊಳ್ಳಲು ಇದೇ ಸರಿಯಾದ ಸಮಯವೆಂದು ರಾಜನ ಮನಸ್ಸಿಗೆ ಭ್ರಮೆಯಾವರಿಸಿದನು! ಭ್ರಮೆಗೊಳಗಾದ ರಾಜನು ಕುದುರೆಯ ಮೇಲೆ ದೌಡಾಯಿಸುತ್ತಾ ತನ್ನ ಪರಿವಾರದಿಂದ ಬೇರೆಯಾಗಿ ಎಲ್ಲೆಲ್ಲೋ ಸುತ್ತಿ ದಟ್ಟ ಅರಣ್ಯದ ಮಧ್ಯೆ ಸಿಲುಕಿಕೊಂಡನು! ಅವನೂ ಅವನ ಕುದುರೆಯೂ ಹಸಿವು, ಬಾಯಾರಿಕೆಗಳಿಂದ ಬಳಲಿದರು! ಆಗ ಇಂದ್ರನು ಸ್ವಲ್ಪ ದೂರದಲ್ಲೇ ಒಂದು ಮಾಯಾ ಸರೋವರವನ್ನು ನಿರ್ಮಿಸಿದನು! ಭಂಗಾಸ್ವನನು ಸುತ್ತಲೂ ಕಣ್ಣಾಡಿಸುತ್ತಾ ಆ ಸರೋವರವನ್ನು ನೋಡಿ ಸಂತೋಷಗೊಂಡನು! ಕೂಡಲೇ ಆ ಸರೋವರದ ಬಳಿಗೆ ಹೋಗಿ ಸ್ವಲ್ಪ ನೀರು ಕುಡಿದು ಕುದುರೆಗೂ ಕುಡಿಸಿ ಅದರ ಮೈ ತೊಳೆದು ಅದನ್ನು ಒಂದು ಮರಕ್ಕೆ ಕಟ್ಟಿ ತಾನು ಆ ಸರೋವರದಲ್ಲಿ ಮುಳುಗಿದನು. ಆದರೆ ಅವನು ಮೇಲೆದ್ದಾಗ ಅವನಿಗೆ ಒಂದು ದೊಡ್ಡ ಆಶ್ಚರ್ಯ ಕಾದಿತ್ತು! ಇದ್ದಕ್ಕಿದ್ದಂತೆ ಅವನು ಹೆಣ್ಣಾಗಿಬಿಟ್ಟಿದ್ದನು!
ಆಶ್ಚರ್ಯ, ದು:ಖಗಳಿಗೊಳಗಾದ ರಾಜನು," ಅಯ್ಯೋ! ಇದೇನು ನನ್ನ ದುರವಸ್ಥೆ! ನಾನೇಕೆ ಹೀಗೆ ಸ್ತ್ರೀಯಾದೆ? ಈಗ ಈ ಕುದುರೆಯನ್ನು ಹೇಗೆ ಹತ್ತಲಿ? ಮೃದುತ್ವ, ಕೃಶತ್ವ, ವ್ಯಾಕುಲತೆಗಳು ಹೆಣ್ಣಿನ ಗುಣಗಳೆಂದೂ ಕಾಠಿಣ್ಯ, ಪರಾಕ್ರಮಗಳು ಗಂಡಿನ ಗುಣಗಳೆಂದೂ ಶಾಸ್ತ್ರಜ್ಞರು ಹೇಳುತ್ತಾರೆ! ಹೀಗಿರುವಾಗ, ಪುರುಷತ್ವವನ್ನೇ ಕಳೆದುಕೊಂಡಿರುವ ನಾನು ರಾಜ್ಯವನ್ನು ಹೇಗೆ ಆಳಲಿ? ನಾನಿನ್ನು ರಾಜ್ಯವನ್ನು ಆಳಲಾರೆ ಎಂದು ಎಲ್ಲರಿಗೂ ಹೇಳಿ ಕಾಡಿಗೆ ಹಿಂದಿರುಗಿ ತಪಸ್ಸು ಮಾಡುತ್ತೇನೆ!" ಎಂದು ಯೋಚಿಸಿ ಕಷ್ಟಪಟ್ಟು ಕುದುರೆ ಹತ್ತಿ ತನ್ನ ರಾಜ್ಯಕ್ಕೆ ಹೋದನು. ತನ್ನ ಪತ್ನೀಪುತ್ರರಿಗೂ ಮಂತ್ರಿಗಳಿಗೂ ತಾನು ಭಂಗಾಸ್ವನ ರಾಜನೆಂದು ಹೇಳಿದರೂ ಅವರಾರೂ ನಂಬಲಿಲ್ಲ. ಆಗ ಅವನು ತನ್ನ ಕುಲ,ಗೋತ್ರಾದಿ ಗುರುತುಗಳನ್ನು ನಿಖರವಾಗಿ ಹೇಳಲು ಅವರು ನಂಬಿ ಅವನ ದು:ಸ್ಥಿತಿಗಾಗಿ ಮರುಗಿದರು. ಆಗ ಅವನು ತನ್ನ ನೂರು ಪುತ್ರರಿಗೆ ರಾಜ್ಯವನ್ನೊಪ್ಪಿಸಿ, ಪ್ರೀತಿ,ಸೌಹಾರ್ದತೆಗಳಿಂದ ಸುಖವಾಗಿ ಬಾಳಲು ಹೇಳಿ ಕಾಡಿಗೆ ಹೊರಟುಹೋದನು.
ಈಗ ಭಂಗಾಸ್ವನಿಯು ಕಾಡಿನಲ್ಲಿ ತಪಸ್ಸು ಮಾಡಲು ಪ್ರಯತ್ನಿಸಿದಳು. ಆದರೆ ಸ್ತ್ರೀಯಾದ ಅವಳ ಅಂತ:ಕರಣ ಬದಲಾಗಿದ್ದು ಅವಳಿಗೆ ಆಗಲಿಲ್ಲ.
ಹೀಗಿರಲು, ಅವಳು ಒಂದು ಆಶ್ರಮವನ್ನು ಕಂಡು ಅಲ್ಲೊಬ್ಬ ಋಷಿಯನ್ನು ನೋಡಿದಳು. ಅವನಿಗೆ ತನ್ನ ಪೂರ್ವ ಕಥೆಯನ್ನು ಹೇಳಿ ಅವನ ಸೇವೆ ಮಾಡಲು ಅನುಮತಿ ಬೇಡಿದಳು. ಅದಕ್ಕೆ ಅವನು ಒಪ್ಪಲು, ಅವನ ಸೇವೆ ಮಾಡುತ್ತಾ ಅವಳು ತಾನೂ ಅವನೊಂದಿಗೆ ತಪಸ್ಸು ಮಾಡತೊಡಗಿದಳು. ಕ್ರಮೇಣ ಅವರಿಬ್ಬರಿಗೂ ಪ್ರೀತಿ ಬೆಳೆದು ಅವರು ಸಮಾಗಮ ಮಾಡಿದರು! ಇದರಿಂದ ಅವಳು ಗರ್ಭಿಣಿಯಾಗಿ ನೂರು ಪುತ್ರರಿಗೆ ಜನ್ಮವಿತ್ತಳು!
ಭಂಗಾಸ್ವನಿಯ ಮಕ್ಕಳು ದೊಡ್ಡವರಾಗಲು ಅವಳು ಅವರನ್ನು ತನ್ನ ಹಿಂದಿನ ರಾಜ್ಯಕ್ಕೆ ಕರೆದೊಯ್ದು ತನ್ನ ಹಿಂದಿನ ಮಕ್ಕಳಿಗೆ ಪರಿಚಯಿಸುತ್ತಾ," ಮಕ್ಕಳೇ! ಇವರೆಲ್ಲರೂ ನನ್ನ ಸ್ತ್ರೀತ್ವದಲ್ಲಿ ಹುಟ್ಟಿದ ಮಕ್ಕಳು! ಹಾಗಾಗಿ ನಿಮ್ಮ ತಮ್ಮಂದಿರಾಗುತ್ತಾರೆ! ನೀವು ಇವರೊಂದಿಗೆ ರಾಜ್ಯವನ್ನು ಹಂಚಿಕೊಂಡು ಶಾಂತಿ, ಸೌಹಾರ್ದತೆಗಳಿಂದ ಸುಖವಾಗಿ ಬಾಳಿ!" ಎಂದು ಹೇಳಿ ಹೊರಟಳು.ಅದಕ್ಕೆ ಆ ಮೊದಲಿನ ಮಕ್ಕಳು ಒಪ್ಪಿ ತಮ್ಮ ತಮ್ಮಂದಿರೊಡನೆ ರಾಜ್ಯವನ್ನು ಹಂಚಿಕೊಂಡು ಸುಖವಾಗಿರತೊಡಗಿದರು.
ಇದರಿಂದ ಇಂದ್ರನಿಗೆ ಕಸಿವಿಸಿಯಾಯಿತು! ಅವನು ಯೋಚಿಸಿದನು," ನಾನು ಈ ಭಂಗಾಸ್ವನನ ಮೇಲೆ ಸೇಡು ತೀರಿಸಿಕೊಳ್ಳಲು ಅವನನ್ನು ಸ್ತ್ರೀಯಾಗಿ ಪರಿವರ್ತಿಸಿದರೆ ಅದು ಅವನಿಗೆ ಅನುಕೂಲವೇ ಆಯಿತು! ಅವನಿಗೆ ಇನ್ನೂ ನೂರು ಮಕ್ಕಳಾದರು! ಈಗ ಅವನಿಗೆ ದುಃಖವಾಗುವ ಹಾಗೆ ಏನಾದರೂ ಕಾರ್ಯ ಮಾಡಬೇಕು!"
ಹೀಗೆ ಯೋಚಿಸಿ ಇಂದ್ರನು ಬ್ರಾಹ್ಮಣ ವೇಷದಲ್ಲಿ ಭಂಗಾಸ್ವನನ ಮೊದಲ ನೂರು ಮಕ್ಕಳ ಬಳಿಗೆ ಹೋಗಿ ಹೇಳಿದ," ರಾಜಪುತ್ರರೇ! ನೀವು ಭಂಗಾಸ್ವನ ರಾಜನ ಮಕ್ಕಳು! ಆದರೆ ಆ ಇನ್ನೊಂದು ಗುಂಪಿನ ನೂರು ಯಾರೋ ತಪಸ್ವಿಯ ಪುತ್ರರು! ಒಬ್ಬನೇ ಕಶ್ಯಪನ ಮಕ್ಕಳಾದರೂ ದೇವತೆಗಳೂ ರಾಕ್ಷಸರೂ ಸದಾ ಸ್ವರ್ಗಕ್ಕಾಗಿ ಕಾದಾಡುತ್ತಲೇ ಇರುತ್ತಾರೆ! ಇನ್ನು ನೀವೇಕೆ ಪಿತೃಸಂಬಂಧವಾದ ಈ ರಾಜ್ಯವನ್ನು ಆ ಇತರರೊಂದಿಗೆ ಹಂಚಿಕೊಳ್ಳಬೇಕು? ನಾಳೆ ಅವರು ಈ ರಾಜ್ಯಕ್ಕೆ ತಾವೇ ವಾರಸುದಾರರೆಂದು ನಿಮ್ಮನ್ನು ಹೊರಗಟ್ಟಿದರೆ? ಅದಕ್ಕೆ ಮೊದಲು ನೀವೇ ಅವರನ್ನು ಹೊರಗಟ್ಟಿ!"
ಇಂದ್ರನ ದುರ್ಬೋಧೆ ಅವರ ಮನಸ್ಸಿಗೆ ನಾಟಿತು! ಅವರು ತಮ್ಮ ತಮ್ಮಂದಿರೊಡನೆ ಯುದ್ಧ ಮಾಡಲು ಎರಡೂ ಗುಂಪುಗಳು ಪರಸ್ಪರ ಕಾದಾಡಿ ನಾಶಗೊಂಡವು!
ಈ ವಿಷಯ ಭಂಗಾಸ್ವನಿಗೆ ದೂತನೊಬ್ಬನಿಂದ ತಿಳಿದು ಅವಳು ದು:ಖಿತಳಾಗಿ ಅತ್ತು ಗೋಳಾಡತೊಡಗಿದಳು! ಆಗ ಇಂದ್ರನು ಸಮಾಧಾನಗೊಂಡು ಪುನಃ ಬ್ರಾಹ್ಮಣ ವೇಷದಲ್ಲಿ ಬಂದು ಅವಳನ್ನು ಏಕೆ ಗೋಳಾಡುತ್ತಿರುವೆಯೆಂದು ಕೇಳಿದನು. ಆಗ ಅವಳು ತನ್ನ ಕಥೆಯನ್ನು ಹೇಳಿಕೊಂಡಳು. ಆಗ ಇಂದ್ರನು ತನ್ನ ನಿಜರೂಪಿನಲ್ಲಿ ಕಾಣಿಸಿಕೊಂಡು ನಗುತ್ತಾ," ಭದ್ರೆ! ಈ ನಿನ್ನ ಶೋಕಕ್ಕೆ ನಾನೇ ಕಾರಣ! ಮೂರ್ಖ ರಾಜನೇ! ಹಿಂದೆ ನೀನು ಇಂದ್ರನಿಗೆ ಪ್ರಾಧಾನ್ಯವಿಲ್ಲದ ಒಂದು ಯಜ್ಞ ಮಾಡಿ ಅವನಿಗೆ ಅಸಮಾಧಾನವುಂಟುಮಾಡಿದೆ! ಆ ಇಂದ್ರನು ನಾನೇ ಆಗಿದ್ದೇನೆ! ನನಗೆ ಅಪ್ರಿಯವಾದ ಯಜ್ಞ ಮಾಡಿದ ಕಾರಣ ನಿನ್ನ ಮೇಲಿನ ದ್ವೇಷದಿಂದ ನಿನಗೆ ಇಂಥ ದುರವಸ್ಥೆ ತಂದೆ!"
ತನ್ನ ಮುಂದೆ ನಿಂತಿರುವವನು ಇಂದ್ರನೆಂದು ತಿಳಿಯುತ್ತಲೇ ಭಂಗಾಸ್ವನಿಯು ಅವನ ಕಾಲಿಗೆ ಬಿದ್ದು ಹೇಳಿದಳು," ದೇವೇಂದ್ರ! ಆ ಯಜ್ಞವು ನಿನಗೆ ಅಪ್ರಿಯವಾದುದೆಂದು ನನಗೆ ತಿಳಿದಿರಲಿಲ್ಲ! ನಾನು ಪುತ್ರಾಪೇಕ್ಷೆಯಿಂದಷ್ಟೇ ಯಜ್ಞ ಮಾಡಿದೆ. ಆ ಯಜ್ಞದ ನಿಯಮಾನುಸಾರವಾಗಿ ಅದರಲ್ಲಿ ನಿನಗೆ ಆಹ್ವಾನವಿರಲಿಲ್ಲ ಅಷ್ಟೇ! ಆದ್ದರಿಂದ ದಯವಿಟ್ಟು ಪ್ರಸನ್ನನಾಗು! ಇದರಲ್ಲಿ ನನ್ನ ತಪ್ಪೇನೂ ಇಲ್ಲ! ತಪ್ಪೆನಿಸಿದರೆ ಮನ್ನಿಸು!"
ಇದನ್ನು ಕೇಳಿ ಇಂದ್ರನಿಗೆ ಕನಿಕರವುಂಟಾಯಿತು. ಆಗ ಅವನು ಹೇಳಿದನು," ಸರಿ! ಒಪ್ಪಿದೆ! ಒಂದು ವರವನ್ನು ನೀಡುತ್ತೇನೆ! ನಿನ್ನ ಒಂದು ನೂರು ಮಕ್ಕಳನ್ನು ಬದುಕಿಸುತ್ತೇನೆ! ನೀನು ಪುರುಷನಾಗಿದ್ದಾಗ ಹುಟ್ಟಿದ ಮಕ್ಕಳನ್ನು ಬದುಕಿಸಲೋ ಇಲ್ಲವೇ ಸ್ತ್ರೀಯಾದಾಗ ಹುಟ್ಟಿದ ಮಕ್ಕಳನ್ನು ಬದುಕಿಸಲೋ? ಹೇಳು!"
ಅದಕ್ಕೆ ಭಂಗಾಸ್ವನಿಯು ಹೇಳಿದಳು," ನಾನು ಸ್ತ್ರೀಯಾದಾಗ ಹುಟ್ಟಿದ ಮಕ್ಕಳೇ ಬದುಕಲಿ!"
"ಅದೇಕೆ?" ವಿಸ್ಮಯದಿಂದ ಕೇಳಿದ ಇಂದ್ರ.
ಭಂಗಾಸ್ವನಿಯು ಹೇಳಿದಳು," ಸ್ತ್ರೀಯರಿಗೆ ಸಹಜವಾಗಿಯೇ ಮಕ್ಕಳೆಂದರೆ ಪ್ರೀತಿಯಿರುತ್ತದೆ! ಅದು ಅವರ ಮಕ್ಕಳೇ ಆಗಿರಬೇಕೆಂದಿಲ್ಲ! ಆದರೆ ಪುರುಷರಿಗೆ ಮಕ್ಕಳೆಂದರೆ ಅಷ್ಟು ಗಾಢ ಪ್ರೀತಿಯಿರುವುದಿಲ್ಲ! ಹೀಗಿರುವಾಗ ತಮ್ಮ ಮಕ್ಕಳೇ ಆದರೆ ಸ್ತ್ರೀಯರಿಗೆ ಇನ್ನೆಷ್ಟು ಪ್ರೀತಿಯಿರಬೇಡ? ತಾಯ್ತನದ ಸವಿಯನ್ನುಂಡಿರುವ ನನಗೆ ಅದು ಗೊತ್ತು! ಹಾಗಾಗಿ ನನಗೆ ಸ್ತ್ರೀತ್ವದಲ್ಲಿ ಹುಟ್ಟಿದ ಮಕ್ಕಳೇ ಬದುಕಲಿ!"
ಇಂದ್ರನು ಅವಳ ಉತ್ತರದಿಂದ ಸಂತುಷ್ಟನಾಗಿ ಹೇಳಿದ," ಭದ್ರೆ! ಸತ್ಯವನ್ನೇ ಹೇಳಿದೆ! ನಿನ್ನ ಎಲ್ಲಾ ಮಕ್ಕಳನ್ನೂ ಬದುಕಿಸುತ್ತೇನೆ! ಈಗ ಇನ್ನೊಂದು ವರವನ್ನು ನೀಡುತ್ತೇನೆ! ನೀನು ಪುನಃ ಪುರುಷನಾಗಲು ಬಯಸುವೆಯಾ? ಅಥವಾ ಹೆಣ್ಣಾಗಿಯೇ ಇರಲು ಬಯಸುವೆಯಾ? ಹೇಳು!"
" ನಾನು ಹೆಣ್ಣಾಗಿಯೇ ಇರಲು ಬಯಸುತ್ತೇನೆ!" ಭಂಗಾಸ್ವನಿಯು ಹೇಳಿದಳು.
" ಅದೇಕೆ?" ಆಶ್ಚರ್ಯದಿಂದ ಕೇಳಿದ ಇಂದ್ರ.
ಅದಕ್ಕೆ ಭಂಗಾಸ್ವನಿಯು ಹೇಳಿದಳು," ನಾನು ಪುರುಷನಾಗಿದ್ದಾಗ ಹಾಗೂ ಸ್ತ್ರೀಯಾಗಿದ್ದಾಗ, ಈ ಎರಡೂ ಸಂದರ್ಭಗಳಲ್ಲಿ ರತಿಸುಖವನ್ನು ಅನುಭವಿಸಿದ್ದೇನೆ! ಈ ಎರಡು ಅನುಭವಗಳಲ್ಲಿ ಸ್ತ್ರೀಯಾದಾಗ ಪಡೆದ ಅನುಭವವೇ ಹೆಚ್ಚು ಸುಖದಾಯಕವೆಂದು ಅರಿವಾಗಿದೆ! ಹಾಗಾಗಿ ನಾನು ಸ್ತ್ರೀಯಾಗಿಯೇ ಇರಲು ಇಚ್ಛಿಸುತ್ತೇನೆ!"
"ಭಲೆ! ಪುನಃ ನೀನು ಸತ್ಯವನ್ನೇ ಹೇಳಿರುವೆ! ಹಾಗೆಯೇ ಆಗಲಿ! ನಾನಿನ್ನು ಬರುತ್ತೇನೆ!" ಇಂದ್ರನು ಹೇಳಿ ಅದೃಶ್ಯನಾದನು.
ಭೀಷ್ಮರು ಹೀಗೆ ಕಥೆ ಹೇಳಿ," ಹೀಗೆ ಸ್ತ್ರೀ ಪುರುಷರ ಸಮಾಗಮದಲ್ಲಿ ಸ್ತ್ರೀಗೇ ಹೆಚ್ಚಿನ ಸುಖ ಪ್ರಾಪ್ತಿಯಾಗುತ್ತದೆ ಎಂದು ವಿದ್ವಾಂಸರು ಹೇಳುತ್ತಾರೆ!" ಎಂದರು.
ಹೀಗೆ ಸ್ತ್ರೀಪುರುಷರ ಸಮಾಗಮದಲ್ಲಿ ಪುರುಷರಿಗಿಂತ ಸ್ತ್ರೀಯರಿಗೇ ಹೆಚ್ಚು ಸುಖಪ್ರಾಪ್ತಿಯಾಗುತ್ತದೆಯೆಂಬುದು ಮಹಾಭಾರತದ ಅಂಬೋಣ. ಚಾಣಕ್ಯ ನೀತಿಯ ಒಂದು ಶ್ಲೋಕ ಹೀಗಿದೆ -
ಆಹಾರೋ ದ್ವಿಗುಣಸ್ತ್ರೀಣಾಂ ಬುದ್ಧಿಸ್ತಾಸಾಂ ಚತುರ್ಗುಣಾ /
ಷಡ್ಗುಣೋ ವ್ಯವಸಾಯಶ್ಚ ಕಾಮಶ್ಚಾಷ್ಟಗುಣ: ಸ್ಮೃತ: //
' ಸ್ತ್ರೀಯರಿಗೆ ಪುರುಷರಿಗಿಂತ ಎರಡು ಪಟ್ಟು ಆಹಾರ ಸೇವನೆ ಹೆಚ್ಚು! ಅವರ ಬುದ್ಧಿ, ಪುರುಷರಿಗಿಂತ ನಾಲ್ಕು ಪಟ್ಟು ಹೆಚ್ಚು! ಅವರ ಸಾಹಸ ಅಥವಾ ಕಾರ್ಯಕುಶಲತೆ ಆರು ಪಟ್ಟು ಹೆಚ್ಚು! ಅವರ ಕಾಮ ಎಂಟು ಪಟ್ಟು ಹೆಚ್ಚು!"
ಇದು ಸ್ವಲ್ಪ ಮಟ್ಟಿಗೆ ನಿಜವೆಂದು ಹೇಳಬಹುದು. ಹೆಚ್ಚು ಕೆಲಸ ಮಾಡುವುದರಿಂದ ಹಾಗೂ ಗರ್ಭಧಾರಣೆಯ ಸಮಯದಲ್ಲಿ ಹಾಗೂ ಮಕ್ಕಳಿಗೆ ಹಾಲೂಡಿಸುವ ಸಮಯದಲ್ಲಿ ಹಾಗೂ ನಿತ್ಯ ಜೀವನದಲ್ಲೂ ರಜಸ್ವಲೆಯಾದಾಗ ರಕ್ತದ ಮೂಲಕ ಹೆಚ್ಚು ಕಬ್ಬಿಣದ ಅಂಶ ಕಳೆದುಕೊಳ್ಳುವುದರಿಂದ ಸ್ತ್ರೀಯರಿಗೆ ಹೆಚ್ಚಿನ ಆಹಾರ ಸೇವನೆ ಬೇಕಾಗುತ್ತದೆ. ಪುರುಷರು ದೈಹಿಕವಾಗಿ ಹೆಚ್ಚು ಬಲಶಾಲಿಗಳಾದರೆ ಸ್ತ್ರೀಯರು ಮಾನಸಿಕವಾಗಿ ತಾಳ್ಮೆ, ಸಹನೆಗಳಿಂದ ಬಲಶಾಲಿಗಳು ಹಾಗೂ ಬುದ್ಧಿ, ಚಾತುರ್ಯಗಳನ್ನು ಹೆಚ್ಚಾಗಿ ಉಳ್ಳವರು. ಸಾಹಸ ಕಾರ್ಯಗಳಲ್ಲಿ ಹಾಗೂ ನಾಜೂಕಾಗಿ ಕೌಶಲ್ಯದಿಂದ ಕೆಲಸ ಮಾಡುವುದರಲ್ಲಿ ಸ್ತ್ರೀಯರು ಹೆಚ್ಚೇ! ಇನ್ನು ಕಾಮ, ಬಯಕೆಗಳೂ ಅವರಿಗೆ ಹೆಚ್ಚು. ಪುರುಷರಿಗಿಂತ ಚೆನ್ನಾಗಿ ಜೀವನವನ್ನು ಕಲಾತ್ಮಕವಾಗಿ ಅನುಭವಿಸಲು ಅವರಿಗೆ ಬರುತ್ತದೆ. ವೈಜ್ಞಾನಿಕವಾಗಿ ಪುರುಷರಿಗೆ ಬೇಗನೆ ಕಾಮಪ್ರಚೋದನೆಯಾಗಿ ಬೇಗನೆ ಮುಗಿದುಹೋದರೆ ಸ್ತ್ರೀಯರಿಗೆ ಅದು ನಿಧಾನವಾಗಿ ಆಗುತ್ತದೆ ಹಾಗೂ ಹೆಚ್ಚಿನ ಹೊತ್ತು ಇರುತ್ತದೆ. ಪುರುಷರಿಗಿಂತ ಸ್ತ್ರೀಯರಿಗೆ ಮಿಲನದ ಸಮಯದಲ್ಲಿ ಹೆಚ್ಚು ಬಾರಿ ಭಾವಪ್ರಾಪ್ತಿಯಾಗುತ್ತದೆ. ಹಾಗಾಗಿ ಪುರುಷರು ಸ್ತ್ರೀಯರನ್ನು ತಾಳ್ಮೆಯಿಂದ, ಪ್ರೀತಿಯಿಂದ ರಮಿಸುತ್ತಾ ನಿಧಾನವಾಗಿ ಸಂಭೋಗಿಸಿದರೆ ಆಗ ಸ್ತ್ರೀಯರಿಗೆ ಹೆಚ್ಚಿನ ಸುಖ ಪ್ರಾಪ್ತಿಯಾಗುತ್ತದೆ ಎಂಬುದು ನಿಜ. ಸ್ತ್ರೀಯರೊಂದಿಗೆ ಕೋಮಲವಾಗಿ ಶೃಂಗಾರಾತ್ಮಕವಾಗಿ ರತಿಕಲಾಪಗಳನ್ನು ನಡೆಸಿ ಅವರನ್ನು ಸುಖಗೊಳಿಸಲು ಪುರುಷರು ಪ್ರಯತ್ನಿಸಿ ಆ ಸುಖದಿಂದ ಪುರುಷರೂ ಸುಖಿಸಬೇಕು. ಅಂಥ ಪುರುಷರನ್ನು ಸ್ತ್ರೀಯರು ಮನಸಾರೆ ಪ್ರೀತಿಸುತ್ತಾರೆ. ಇದನ್ನು ವಾತ್ಸ್ಯಾಯನನು ತನ್ನ ಕಾಮಸೂತ್ರದಲ್ಲಿ ವಿಶದವಾಗಿ ವಿವರಿಸಿದ್ದಾನೆ. ಹೀಗೆ ನಮ್ಮ ಪ್ರಾಚೀನ ಗ್ರಂಥಗಳಿಂದ ಇಂದಿನ ಜೀವನಕ್ಕೆ ಬಹಳಷ್ಟು ಪ್ರೇರಣೆ ಪಡೆಯಬಹುದು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ