ಶನಿವಾರ, ಮಾರ್ಚ್ 21, 2026

ಸಂಸ್ಕೃತ ಪ್ರಹೇಳಿಕೆಗಳು

ಸಂಸ್ಕೃತದಲ್ಲಿ ಪ್ರಹೇಲಿಕಾ ಎಂದರೆ ಒಗಟು. ಈ ಸಂಸ್ಕೃತ ಪದದಿಂದಲೇ ಹಿಂದಿಯ ಪಹೇಲಿ ಎಂಬ ಪದ ಬಂದಿರಬಹುದು. ಮೇಲ್ನೋಟಕ್ಕೆ ಬೇರೇನೋ ಹೇಳುವ, ಒಳಗೆ ಬೇರೆಯೇ ಗೂಢಾರ್ಥವಿರುವ ವಾಕ್ಯಗಳು ಅಥವಾ ಪ್ರಶ್ನೆಗಳೇ ಒಗಟುಗಳು. ಪ್ರಾಚೀನ ಕಾಲದಿಂದಲೂ ಜನರಲ್ಲಿ ಒಗಟು ಕೇಳುವ, ಅದನ್ನು ಬಿಡಿಸುವ ವಿನೋದದ ಆಟ ಜನರಲ್ಲಿ ನಡೆದು ಬಂದಿದೆ. ವಾತ್ಸ್ಯಾಯನನು ತನ್ನ ಕಾಮಸೂತ್ರದಲ್ಲಿ ಕೊಡುವ ಅರವತ್ತು ನಾಲ್ಕು ಕಲೆಗಳ ಪಟ್ಟಿಯಲ್ಲಿ ಪ್ರಹೇಲಿಕಾ ಕೂಡ ಸೇರಿದೆ. ಕನ್ನಡದಲ್ಲೂ ಅನೇಕ ಒಗಟುಗಳಿವೆ. ಈಗ ಸಂಸ್ಕೃತದ ಒಂದು ಜನಪ್ರಿಯ ಪ್ರಹೇಳಿಕೆಯನ್ನು ನೋಡೋಣ.

   ತರುಣ್ಯಾಲಿಂಗಿತ: ಕಂಠೇ ನಿತಂಬಸ್ಥಲಮಾಶ್ರಿತ: /
   ಗುರೂಣಾಂ ಸನ್ನಿಧಾನೇsಪಿ ಕ: ಕೂಜತಿ ಮುಹುರ್ಮುಹು: //

       ' ತರುಣಿಯಿಂದ ಕಂಠವು ಆಲಂಗಿಸಲ್ಪಟ್ಟು, ಅವಳ ನಿತಂಬ ಸ್ಥಳವನ್ನು ಆಶ್ರಯಿಸಿ, ಹಿರಿಯರ ಮುಂದೆಯೂ ಯಾರು ಮತ್ತೆ ಮತ್ತೆ ಕೂಗುತ್ತಾರೆ?'

      ಈ ಒಗಟನ್ನು ಕೇಳಿದರೆ ಮೇಲ್ನೋಟಕ್ಕೆ ರತಿಕ್ರೀಡೆಯ ವರ್ಣನೆಯಂತಿದೆ. ರತಿಕ್ರೀಡೆಯಾಡುವವನು ಹಿರಿಯರ ಮುಂದೆಯೂ ಮತ್ತೆ ಮತ್ತೆ ಕೂಗುವುದು ಎಂದರೆ ಅದು ಅಸಂಬದ್ಧವಲ್ಲವೇ? ಹಾಗಾಗಿ ಬೇರೆ ಏನೋ ಉತ್ತರವಿರಬೇಕೆಂದು ಅನಿಸುತ್ತದೆ.
    ಉತ್ತರ ಏನು ಗೊತ್ತೇ? ಅದು ಕೊಡ ಅಥವಾ ಬಿಂದಿಗೆ! ತರುಣಿಯೊಬ್ಬಳು ನೀರು ತುಂಬಿದ ಕೊಡ ಹೊತ್ತು ಬರುವ ಸನ್ನಿವೇಶವನ್ನು ಚಿತ್ರಿಸಿಕೊಳ್ಳಿ! ಅವಳು ಆ ಬಿಂದಿಗೆಯ ಕಂಠವನ್ನು ಆಲಂಗಿಸಿರುತ್ತಾಳೆ ಹಾಗೂ ಅದು ಅವಳ ಸೊಂಟವನ್ನು ಆಶ್ರಯಿಸಿರುತ್ತದೆ. ಮತ್ತೆ ಮತ್ತೆ ನೀರು ತುಳುಕುವುದೇ ಅದು ಕೂಗುವ ಶಬ್ದ! ತರುಣಿಯು ಹಿರಿಯರ ಮುಂದೆ ಹೋದಾಗಲೂ ಅದು ಹಾಗೆ ಕೂಗುವುದಲ್ಲವೇ?
     ಅಲ್ಲಿಗೆ ಕೊಡ ಅಥವಾ ಬಿಂದಿಗೆ ಎಂಬ ಉತ್ತರ ಸರಿಯಾಯಿತು!


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ