ಶನಿವಾರ, ಆಗಸ್ಟ್ 29, 2026

ಸುಂದರೀಶತಕ -೮೪

ಸಂಸ್ಕೃತ ಮೂಲ 

ಪ್ರತಿಪಣಿತಮೇಕವಾರಂ ಪಾತುಂ ದ್ಯೂತೇ ಜಿತಂ ಪಿಬನ್ನಧರಮ್ ।
ಆವೃತ್ತಿದ್ವಯಭೀತ್ಯಾ ನಾಯಂ ನಿಶ್ಚೂಷತೇ ಧೂರ್ತ: ।।

ಕನ್ನಡ ಅನುವಾದ 

    ' ದ್ಯೂತಕ್ರೀಡೆಯಲ್ಲಿ ಒಂದು ಬಾರಿ ಅಧರಾಮೃತಪಾನ ಮಾಡುವ ಪಣವನ್ನು ಗೆದ್ದ ಧೂರ್ತ ಪ್ರಿಯತಮನು ಇನ್ನೊಂದು ಸುತ್ತಿನ ಆಟದಲ್ಲಿ ಸೋಲುವ ಭಯದಿಂದ ಪೂರ್ಣವಾಗಿ ಅಧರಾಮೃತಪಾನ ಮಾಡುವುದಿಲ್ಲ!' 
    ಪ್ರಾಚೀನ ಭಾರತದಲ್ಲಿ ದಂಪತಿಗಳು ಚದುರಂಗದಾಟ ಅಥವಾ ದ್ಯೂತಕ್ರೀಡೆಯಾಡುವುದು ಬಹಳ ಸಾಮಾನ್ಯವಾಗಿತ್ತು. ಶಿವ ಮತ್ತು ಪಾರ್ವತಿ, ಕೃಷ್ಣ ಮತ್ತು ರುಕ್ಮಿಣಿ, ಕೃಷ್ಣನ ಮೊಮ್ಮಗ ಅನಿರುದ್ಧ ಮತ್ತು ಉಷೆ, ಮೊದಲಾದ ದಂಪತಿಗಳು ದ್ಯೂತಕ್ರೀಡೆಯಾಡುವ ವರ್ಣನೆಗಳು ಪುರಾಣಗಳಲ್ಲಿ ಕಂಡುಬರುತ್ತವೆ. ಇಂಥ ವಿನೋದದ ದ್ಯೂತಕ್ರೀಡೆಗಳಲ್ಲಿ ಏನಾದರೂ ಪಣವಿಟ್ಟು ಆಡುತ್ತಿದ್ದರು. ದೀಪಾವಳಿಯ ರಾತ್ರಿ, ಶಿವ,ಪಾರ್ವತಿಯರು ದ್ಯೂತವಾಡಿದ್ದರಿಂದ ಅಂದು ರಾತ್ರಿ ಎಲ್ಲರೂ ದ್ಯೂತದಲ್ಲಿ ತೊಡಗಿ ಸಂತೋಷಪಡಬೇಕೆಂದು ಒಕ್ಕಣೆಯಿದೆ. ಅಂದು ದ್ಯೂತವಾಡಿದರೆ ಶಿವ, ಪಾರ್ವತಿಯರ ಆಶೀರ್ವಾದ ದೊರೆತು ಆ ವರ್ಷವೆಲ್ಲಾ ಸುಖ, ಸಮೃದ್ಧಿಗಳು ಉಂಟಾಗುತ್ತವೆ ಎನ್ನುತ್ತಾರೆ. ಹಾಗಾಗಿಯೇ ದೀಪಾವಳಿಯನ್ನು ಸುಖರಾತ್ರಿ, ಯಕ್ಷರಾತ್ರಿ, ಮೊದಲಾದ ಹೆಸರುಗಳಿಂದ ಕರೆಯುತ್ತಾರೆ. ಇದು ಪತಿ, ಪತ್ನಿಯರ, ಹಾಗೂ ಬಂಧು,ಮಿತ್ರರ ನಡುವೆ ಪ್ರೀತಿ, ಸ್ನೇಹಗಳನ್ನು ವರ್ಧಿಸುವ ಕ್ರಮವಾಗಿದೆ. ಇದು ಸನಾತನ ಧರ್ಮದ ಔದಾರ್ಯ. ಪ್ರಕೃತಿಸಹಜವಾದ ಜೀವನದ ಯಾವುದೇ ಅಂಶಗಳನ್ನು ನಿರಾಕರಿಸದೆ, ಜೀವನವನ್ನು ಸಂತೋಷದಿಂದ ಕಳೆಯುವ ವಿವಿಧ ಆಚರಣೆಗಳು ಸನಾತನ ಧರ್ಮದಲ್ಲಿವೆ. ಸ್ಕಂದಪುರಾಣದಲ್ಲಿ ಶಿವ, ಪಾರ್ವತಿಯರು ದ್ಯೂತವಾಡಲು, ಪಾರ್ವತಿಯು ಅವನ ಚಂದ್ರ, ಹಾವು, ಮೊದಲಾಗಿ ಎಲ್ಲವನ್ನೂ, ಕೊನೆಗೆ ಬಟ್ಟೆಯನ್ನೂ ಗೆದ್ದು ಕಿತ್ತುಕೊಂಡು ವಿರ್ವಸ್ತ್ರವಾಗಿ ಮಾಡುವ ಅದ್ಭುತ ಪ್ರೇಮಪ್ರಸಂಗವಿದೆ! ಹೀಗೆ ಸನಾತನ ಧರ್ಮದಲ್ಲಿ ದೇವರಲ್ಲೂ ಪ್ರೇಮ, ಕ್ರೀಡೆಗಳನ್ನು ನೋಡುವ ಅದ್ಭುತ ವಿಶೇಷವಿದೆ! ಆದರೆ ಕೌರವರು ಪಾಂಡವರನ್ನು ಮೋಸಗೊಳಿಸಲು ಈ ದ್ಯೂತವನ್ನು ಉಪಯೋಗಿಸಿದರೆಂಬುದು ದುರ್ದೈವ. ಆದರೆ ಹಾಗೆ ಮಾಡದೆ ಆನಂದಕ್ಕಾಗಿ ದ್ಯೂತವಾಡಿದರೆ ತಪ್ಪಿಲ್ಲ.
    ಈ ಶೃಂಗಾರ ಪದ್ಯದಲ್ಲಿ ಪತಿ, ಪತ್ನಿಯರು ಪಣವಿಟ್ಟು ದ್ಯೂತವಾಡಿದ್ದಾರೆ. ಒಂದು ಬಾರಿ ಅಧರಾಮೃತಪಾನ ಮಾಡುವುದೇ ಪಣ. ಪತಿಯು ಆಟದಲ್ಲಿ ಗೆದ್ದಿದ್ದಾನೆ. ಹಾಗಾಗಿ ಅವನು ಪತ್ನಿಯ ಅಧರಪಾನ ಮಾಡಬೇಕಾಗಿದೆ.‌ ಆದರೆ ಅವನು ಸುಮ್ಮನೆ ಅವಳ ಅಧರವನ್ನು ಮೆಲ್ಲನೆ ಚುಂಬಿಸುತ್ತಾನೆಯೇ ಹೊರತು ಸಂಪೂರ್ಣವಾಗಿ ಅಧರಾಮೃತಪಾನ ಮಾಡುವುದಿಲ್ಲ.‌ ಏಕೆಂದರೆ ಆಟದ ಮುಂದಿನ ಸುತ್ತಿನಲ್ಲಿ ಸೋತರೆ, ಪುನಃ ಈ ಅವಕಾಶ ಸಿಗುವುದಿಲ್ಲ ಎಂದು ಅಧರಪಾನವನ್ನು ಉಳಿಸಿಕೊಳ್ಳುತ್ತಾನೆ. ಇದನ್ನು ಹೇಳುತ್ತಾ ಎಂಥ ಧೂರ್ತ ಅವನು ಎನ್ನುತ್ತಾನೆ ಕವಿ! 

ಸುಂದರೀಶತಕ -೮೩

ಸಂಸ್ಕೃತ ಮೂಲ 

ಸಸ್ಮಿತತಿರ್ಯಗ್ವೇಲ್ಲಿತಮುಖಪರ್ಯಂತಪ್ರಕೀರ್ಣಕಬರೀಕಮ್ । ಅತಿಭಾಗ್ಯವಾನ್ಭವತ್ಯಾ: ಸುಂದರಿ ಪುರುಷಾಯಿತಂ ಲಭತೇ ।।

ಕನ್ನಡ ಅನುವಾದ 

   ನಾಯಕನು ನಾಯಕಿಗೆ ಹೇಳುತ್ತಾನೆ," ಹೇ ಸುಂದರಿ! ನಗುವಿನಿಂದ ಕೂಡಿದ ತಿರುಗಿದ ನಿನ್ನ ಮುಖಮಂಡಲದ ಪರ್ಯಂತ ಕೇಶರಾಶಿಯನ್ನು ಹರಡಿಕೊಂಡು ನನ್ನ ಮೇಲೆ ಇರುವ ಈ ನಿನ್ನ ಪುರುಷಾಯಿತ ರತಿಭಂಗಿಯನ್ನು ಅತಿಭಾಗ್ಯವಂತನಾದವನು ಪಡೆಯುತ್ತಾನೆ!" 
   ಪುರುಷಾಯಿತವೆಂದರೆ ರತಿಕ್ರೀಡೆಯಾಡುವಾಗ ಹೆಣ್ಣು ಪುರುಷನಂತೆ ವರ್ತಿಸುವುದು. ಅಂದರೆ ಅವಳು ಪುರುಷನ ಮೇಲೆ ಬಂದು ಪ್ರಧಾನ ಪಾತ್ರವಹಿಸುತ್ತಾ ಅವನಂತೆ ವರ್ತಿಸುತ್ತಾಳೆ. ಇದನ್ನು ವಿಪರೀತ ರತಿ ಎಂದೂ ಕರೆಯುತ್ತಾರೆ. ಈ ಪುರುಷಾಯಿತವನ್ನು ವಾತ್ಸ್ಯಾಯನನು ಕಾಮಸೂತ್ರದಲ್ಲಿ ವರ್ಣಿಸಿ ಅದರಲ್ಲಿ ವಿವಿಧ ಬಗೆಗಳನ್ನೂ ವರ್ಣಿಸಿದ್ದಾನೆ.‌ ಸಂಸ್ಕೃತದಲ್ಲಿ ಪುರುಷಾಯಿತಭಂಗಿಯ ಅನೇಕ ಪದ್ಯಗಳಿವೆ. ರತಿಕಲೆಗಳಲ್ಲಿ ಇದೂ ಒಂದು. ನಮ್ಮ ದೇವಾಲಯಗಳ ರತಿಶಿಲ್ಪಗಳಲ್ಲಿ ಪುರುಷಾಯಿತವನ್ನೂ ತೋರಿಸಲಾಗಿದೆ. ಹಿಂದೆ ಪಾಶ್ಚಾತ್ಯರಲ್ಲಿ ಹೆಣ್ಣು ಗಂಡಿಗಿಂತ ಕಡಿಮೆ ಸ್ಥಾನಮಾನವುಳ್ಳವಳೆಂದು ಪರಿಗಣಿಸಲಾಗಿದ್ದು ಅವಳು ಕಾಮದಾಸೆಯನ್ನು ವ್ಯಕ್ತಪಡಿಸುವುದೂ ತಪ್ಪೆಂದು ಭಾವಿಸಲಾಗಿತ್ತು. ಆದರೆ ಪ್ರಾಚೀನ ಭಾರತದಲ್ಲಿ ಹೆಣ್ಣನ್ನೂ ಗಂಡಿಗೆ ಸಮಾನವಾಗಿ ಪರಿಗಣಿಸಿ ಅವಳು ಕಾಮದಾಸೆಯೇ ಮೊದಲಾಗಿ ಎಲ್ಲಾ ವಿಷಯಗಳಲ್ಲೂ ಪ್ರಧಾನ ಪಾತ್ರವಹಿಸುವಂತೆಯೇ ನೋಡಿದ್ದರು. ಅವಳಿಗೆ ಗಂಡಿಗಿಂತಲೂ ಕಾಮದಾಸೆ ಹೆಚ್ಚೆಂದೇ ಹೇಳಲಾಗಿದ್ದು ಅದನ್ನು ಸರಿಯಾಗಿ ಪೂರೈಸುವುದು ಗಂಡಿನ ಕರ್ತವ್ಯವೆಂದೂ ಹೇಳಲಾಗಿತ್ತು. ಚಾಣಕ್ಯನೀತಿಯಲ್ಲೂ ' ಸ್ತ್ರೀಣಾಮಷ್ಟಗುಣ: ಕಾಮ: ( ಸ್ತ್ರೀಯರಲ್ಲಿ ಕಾಮವು ಎಂಟು ಪಟ್ಟು ಹೆಚ್ಚಾಗಿರುತ್ತದೆ)' ಎಂದು ಹೇಳಿದೆ. ಹಾಗಾಗಿ ಪುರುಷಾಯಿತ ರತಿಭಂಗಿಗೂ ಮಹತ್ವವಿದೆ. ಇಲ್ಲಿ ಕವಿಯು ಪುರುಷಾಯಿತವನ್ನು ಕಣ್ಣಿಗೆ ಕಟ್ಟುವಂತೆ ಸೊಗಸಾಗಿ ವರ್ಣಿಸಿದ್ದಾನೆ ಹಾಗೂ ಆ ಭಂಗಿಯನ್ನು ಅನುಭವಿಸುವುದು ತನ್ನ ಪರಮ ಭಾಗ್ಯ ಎಂದು ನಾಯಕನಿಂದ ಹೇಳಿಸಿದ್ದಾನೆ. 
   

ಸುಂದರೀಶತಕ -೮೨

ಸಂಸ್ಕೃತ ಮೂಲ 

ನಿಬಿಡೀಕೃತೋರುಬಂಧಂ ವೇಲ್ಲಿತವದನೇಂದುನಿಹ್ರುತೋಚ್ಛ್ವಾಸಮ್ ।
ತಸ್ಯಾ: ಸ್ಮರಾಮಿ ಸುರತಂ ತತ್ಕರಭರರುದ್ಧಮನ್ನಾಭಿ ।।

ಕನ್ನಡ ಅನುವಾದ 

   ನಾಯಕನು ಹೇಳುತ್ತಾನೆ," ನಾವು ಗಾಢವಾಗಿ ತೊಡೆಗಳನ್ನು ಬಂಧಿಸಿರಲು, ನನ್ನ ಪ್ರಿಯತಮೆಯ ಮುಖಚಂದ್ರವು ನನ್ನ ಕಡೆಗೆ ತಿರುಗಿ, ನನ್ನ ಚುಂಬನದಿಂದ ಅವಳ ಶ್ವಾಸೋಚ್ಛ್ವಾಸವು ಬಂಧಿತವಾಗಿ, ನನ್ನ ನಾಭಿಯ ಮೇಲೆ ಅವಳು ತನ್ನ ಕೈಯನ್ನು ಒತ್ತಿ ಹಿಡಿದಿರಲು, ಅವಳೊಂದಿಗಿನ ಆ ಸುಂದರ ಸುರತಕ್ರೀಡೆಯನ್ನು ನಾನು ನೆನೆಯುತ್ತೇನೆ!"
    ಕವಿಯು ಇಲ್ಲಿ ನಾಯಕನು ನಾಯಕಿಯೊಂದಿಗೆ ನಡೆಸಿದ ಸುರತಕ್ರೀಡೆಯನ್ನು ಕಣ್ಣಿಗೆ ಕಟ್ಟುವಂತೆ ಸೊಗಸಾಗಿ ವರ್ಣಿಸಿದ್ದಾನೆ. ಈ ವರ್ಣನೆಯಿಂದ ಅವರಿಬ್ಬರೂ ಗಾಢವಾಗಿ ಆಲಂಗಿಸಿದ್ದರೆಂಬುದು ತಿಳಿಯುತ್ತದೆ. ವಿಶೇಷವಾಗಿ ತೊಡೆಗಳನ್ನು ಬಂಧಿಸುವ ಆಲಿಂಗನವನ್ನು ವಾತ್ಸ್ಯಾಯನನು ಕಾಮಸೂತ್ರದಲ್ಲಿ ಊರೂಪಗೂಹನ ಎಂದು ವರ್ಣಿಸಿದ್ದಾನೆ. ಇಂಥ ಹಲವಾರು ಆಲಿಂಗನಗಳನ್ನು ಅವನು ವರ್ಣಿಸಿದ್ದಾನೆ. ನಮ್ಮ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯಲ್ಲಿ ಧರ್ಮಕ್ಕೆ ಎಷ್ಟು ಮಹತ್ವವಿದೆಯೋ ಕಾಮಕ್ಕೂ ಅಷ್ಟೇ ಮಹತ್ವವಿದೆ. ಧರ್ಮ, ಅರ್ಥ, ಕಾಮ, ಮೋಕ್ಷ, ಈ ನಾಲ್ಕೂ ಒಬ್ಬ ಮನುಷ್ಯನು ಸಾಧಿಸಬೇಕಾದ ಪುರುಷಾರ್ಥಗಳು. ಆದರೆ ಇವುಗಳನ್ನು ಧರ್ಮದ ಮೂಲಕ ಸಾಧಿಸಬೇಕು. ಆದ್ದರಿಂದ ಧರ್ಮ ಮೊದಲಿದೆ. ಹಾಗಾಗಿ ಧರ್ಮದಿಂದ ಕಾಮವನ್ನು ಯಥೇಚ್ಛವಾಗಿ ಹಾಗೂ ತೃಪ್ತಿಕರವಾಗಿ, ಸಂತೋಷದಿಂದ ಅನುಭವಿಸಿದರೆ ಅದರಲ್ಲಿ ಯಾವುದೇ ತಪ್ಪಿಲ್ಲ ಅಥವಾ ಹಿಂಜರಿಕೆ ಪಡಬೇಕಿಲ್ಲ. ಭಗವಾನ್ ಶ್ರೀಕೃಷ್ಣನೂ ಭಗವದ್ಗೀತೆಯಲ್ಲಿ, ' ಧರ್ಮಾವಿರುದ್ಧೋ ಭೂತೇಷು ಕಾಮೋऽಸ್ಮಿ ಭರತರ್ಷಭ ' ( ಜನರಲ್ಲಿ ನಾನು ಧರ್ಮಕ್ಕೆ ವಿರುದ್ಧವಲ್ಲದ ಕಾಮವಾಗಿದ್ದೇನೆ) ' ಎಂದಿದ್ದಾನೆ. ಹಾಗಾಗಿ, ಧರ್ಮದಿಂದ ಸಂತೋಷವಾಗಿ ಅನುಭವಿಸುವ ಕಾಮವು ಭಗವತ್ಸ್ವರೂಪವೇ ಆಗಿರುತ್ತದೆ. ಆದ್ದರಿಂದಲೇ ಕಾಮನನ್ನು ನಮ್ಮವರು ಒಬ್ಬ ದೇವತೆಯಾಗಿಯೇ ಕಂಡಿದ್ದಾರೆ. ಹಾಗಾಗಿಯೇ ಕವಿಗಳು ಇಂಥ ಸುರತವರ್ಣನೆಗಳನ್ನು ಯಾವುದೇ ಹಿಂಜರಿಕೆ, ಮುಜುಗರಗಳಿಲ್ಲದೆ ಮಾಡಿದ್ದಾರೆ. ಆದರೆ ವಿಕ್ಟೋರಿಯಾ ಯುಗದಿಂದ, ಅಂದರೆ ಬ್ರಿಟಿಷರ ಆಳ್ವಿಕೆಯ ಕಾಲದಿಂದ ನಮ್ಮಲ್ಲಿ ಕಾಮ, ಶೃಂಗಾರಗಳ ಬಗ್ಗೆ ಮುಜುಗರ, ಹಿಂಜರಿಕೆಗಳು ಹೆಚ್ಚಾದವು. ಈಗಲೂ ಎಷ್ಟೋ ದಂಪತಿಗಳು ಯಥೇಚ್ಛವಾಗಿ ಕಾಮ, ಶೃಂಗಾರಗಳ ಸುಖವನ್ನು ಅನುಭವಿಸಲು ಹಿಂಜರಿಯುತ್ತಾರೆ. ಹಾಗಾಗಿ ಸುಂದರೀಶತಕ, ಅಮರುಶತಕ, ಮೊದಲಾದ ಅನೇಕ ಶೃಂಗಾರ ಕಾವ್ಯಗಳನ್ನು ಓದಿ, ನಮ್ಮ ದೇವಾಲಯಗಳಲ್ಲಿನ ರತಿಶಿಲ್ಪಗಳನ್ನು ನೋಡಿ, ಶೃಂಗಾರಸುಖವನ್ನು ಆನಂದಿಸಿ ಅನುಭವಿಸಬೇಕು. 

ಶನಿವಾರ, ಆಗಸ್ಟ್ 22, 2026

ಸುಂದರೀಶತಕ -೮೧

ಸಂಸ್ಕೃತ ಮೂಲ 

ಸ್ಮೇರಾನನೇ ಮುಖಂ ತವ ಸುಧಾನಿಧೇರ್ಮಂಡಲೇನ ತುಲಯಂತಮ್ ।
ಏನಂ ನಿಜಾಧರಸುಧಾದಾನೇನ ನ ಕಿಂ ವಿಲಕ್ಷಯಸಿ ।।

ಕನ್ನಡ ಅನುವಾದ 

   ನಾಯಕನು ನಾಯಕಿಗೆ ಹೇಳುತ್ತಾನೆ," ಎಲೈ ನಗುಮುಖದ ಸುಂದರಿ! ನಿನ್ನ ಮುಖವನ್ನು ಸುಧಾನಿಧಿಯಾದ ಚಂದ್ರಮಂಡಲದೊಂದಿಗೆ ಹೋಲಿಸುತ್ತಿರುವ ಈ ನಿನ್ನ ಪ್ರಿಯತಮನಿಗೆ ನಿನ್ನ ನಿಜವಾದ ಅಧರಸುಧೆಯನ್ನು ನೀಡಿ ಏಕೆ ಇವನನ್ನು ಲಜ್ಜೆಗೊಳಿಸುವುದಿಲ್ಲ?" 
    ಬಹಳ ಸೊಗಸಾದ ಈ ಶೃಂಗಾರ ಪದ್ಯದಲ್ಲಿ ನಾಯಕನು ತನ್ನ ಪ್ರಿಯತಮೆಯ ಮುಖವನ್ನು ಚಂದ್ರನಿಗೆ ಹೋಲಿಸುತ್ತಾ ಚಂದ್ರನನ್ನು ಸುಧಾನಿಧಿ ಅಥವಾ ಸುಧಾಕರ ಎನ್ನುತ್ತಿದ್ದಾನೆ. ಚಂದ್ರನು ಸುಧೆಯಂಥ ತಂಪಾದ ಬೆಳಕನ್ನು ಬೀರುವುದರಿಂದ ಅವನನ್ನು ಸುಧಾನಿಧಿ ಹಾಗೂ ಸುಧಾಕರ ಎನ್ನುತ್ತಾರೆ. ಆದರೆ ನಾಯಕನು ನಾಯಕಿಗೆ ಅವಳ ನಿಜವಾದ ಅಧರಸುಧೆಯನ್ನು ನೀಡಲು ಪ್ರಾರ್ಥಿಸುತ್ತಾ ತನ್ನನ್ನು ಲಜ್ಜೆಗೊಳಿಸುವಂತೆ ಹೇಳುತ್ತಿದ್ದಾನೆ. ಅಂದರೆ ಅವಳ ಅಧರಸುಧೆ ಚಂದ್ರನ ಸುಧೆಗಿಂತ ಚೆನ್ನಾಗಿರುವುದರಿಂದ ಅದನ್ನು ತನಗೆ ನೀಡಿ, ಅವಳ ಮುಖವನ್ನು ಚಂದ್ರನಿಗೆ ಹೋಲಿಸುತ್ತಿರುವ ತನ್ನನ್ನು ಲಜ್ಜೆಗೊಳಿಸುವಂತೆ ಹೇಳುತ್ತಿದ್ದಾನೆ. ಅವಳ ಮುಖ ಚಂದ್ರನಿಗಿಂತ ಚೆನ್ನಾಗಿದೆ ಎಂದು ತಾತ್ಪರ್ಯ. ಇಲ್ಲಿ ಹೋಲಿಕೆಗೊಳಗಾಗುತ್ತಿರುವ ಸಾಮಾನ್ಯ ವಸ್ತು ಹೆಣ್ಣಿನ ಮುಖ.‌ ಹಾಗಾಗಿ ಅದು ಉಪಮೇಯ. ಅದನ್ನು ಪ್ರಸಿದ್ಧ ವಸ್ತುವಾದ ಚಂದ್ರನಿಗೆ ಹೋಲಿಸಲಾಗುತ್ತಿದೆ. ಹಾಗಾಗಿ ಚಂದ್ರ ಉಪಮಾನ. ಸಾಮಾನ್ಯವಾಗಿ ಮುಖವು ಚಂದ್ರನಂತಿದೆ ಎಂದರೆ ಅದು ಉಪಮಾಲಂಕಾರ. ಆದರೆ ಇಲ್ಲಿ ಉಪಮೇಯವಾದ ಮುಖ, ಅಧರಸುಧೆಯ ಕಾರಣದಿಂದ ಉಪಮಾನವಾದ ಚಂದ್ರನಿಗಿಂತ ಚೆನ್ನಾಗಿದೆ ಎಂದು ಹೇಳಿರುವುದರಿಂದ ವ್ಯತಿರೇಕ ಅಲಂಕಾರವಿದೆ. ಈ ರೀತಿಯ ವಿಭಿನ್ನ ಅಲಂಕಾರದಿಂದ ಪದ್ಯದ ಸೌಂದರ್ಯ ಅಧಿಕವಾಗುತ್ತದೆ.

ಸುಂದರೀಶತಕ -೮೦

ಸಂಸ್ಕೃತ ಮೂಲ 

ಅರ್ಚಿತಚಂಡೀಚರಣಪ್ರಸಾದಫಲಮನ್ಯದುರ್ಲಭಂ ತರುಣ: ।
ಸುಂದರಿ ಹಸಿತಕರಂಬಿತಮಖಂಡಪುಣ್ಯೇನ ಖಂಡಯತ್ಯಧರಮ್ ।।

ಕನ್ನಡ ಅನುವಾದ 

   'ಎಲೈ ಸುಂದರಿ! ಅನ್ಯರಿಗೆ ದುರ್ಲಭವಾದ ದುರ್ಗಾದೇವಿಯ ಚರಣಾನುಗ್ರಹದಿಂದ ದೊರೆತ ಅಖಂಡ ಪುಣ್ಯದಿಂದ, ನಿನ್ನ ನಗುವಿನಿಂದ ಕೂಡಿದ ಅಧರವನ್ನು ಈ ತರುಣನು ಚುಂಬಿಸುತ್ತಾನೆ!' 
    ಯುವದಂಪತಿಗಳ ನಡುವಿನ ಒಂದು ಸುಂದರ ಶೃಂಗಾರಮಯ ಚಿತ್ರಣವಿದು. ತನ್ನ ಪ್ರಿಯತಮೆಯ ಅಧರವನ್ನು ಚುಂಬಿಸುತ್ತಿರುವ ತರುಣನು ತನ್ನನ್ನು ತಾನು ಬಹಳ ಭಾಗ್ಯಶಾಲಿ ಎಂದು ಹೇಳಿಕೊಳ್ಳುತ್ತಿದ್ದಾನೆ. ಇನ್ನೊಬ್ಬರಿಗೆ ದುರ್ಲಭವಾದ ದುರ್ಗಾದೇವಿಯ ಚರಣಾನುಗ್ರಹದಿಂದ ದೊರೆತ ಅಖಂಡ ಪುಣ್ಯದಿಂದಷ್ಟೇ ಹೀಗೆ ಚುಂಬಿಸಲು ತನಗೆ ಸಾಧ್ಯವಾಗುತ್ತಿದೆ ಎಂದು ಹೇಳುತ್ತಿದ್ದಾನೆ. ಖಂಡಯತಿ ಎಂದರೆ ಖಂಡಿಸುತ್ತಾನೆ, ಅಂದರೆ ಕಚ್ಚುತ್ತಾನೆ ಎಂದು ಅರ್ಥ. ದಂತಕ್ಷತವೆನ್ನುವ ಈ ಕಾಮಕ್ರೀಡೆಯಲ್ಲಿ ತುಟಿಗಳನ್ನು ಚುಂಬಿಸುತ್ತಾ ಮೃದುವಾಗಿ ಕಚ್ಚುವುದುಂಟು. ಅಂದರೆ ಅವನು ಅಷ್ಟು ಆಳವಾಗಿ ಚುಂಬಿಸುತ್ತಿದ್ದಾನೆ. ಹೀಗೆ ಪ್ರೀತಿಯಿಂದ, ನಗುವಿನಿಂದ ಕೂಡಿರುವ ಸುಂದರಿಯ ಅಧರವನ್ನು ಚುಂಬಿಸುವುದು ನಿಜಕ್ಕೂ ಪುಣ್ಯವೇ! 

ಮಂಗಳವಾರ, ಆಗಸ್ಟ್ 18, 2026

ಸುಂದರೀಶತಕ -೭೯

ಸಂಸ್ಕೃತ ಮೂಲ 

ಮಧುಧೌತಮಧುರಮಧುರಂ ಧೃತಧಮ್ಮಿಲ್ಲಂ ಧವೇ ಧಯತಿ ।
ಕವಲಯತಿ ಕಿಮಪಿ ಕಂಪಿತಕಾಂತಾಕರಕಂಕಣಕ್ವಣಿತಮ್ ।।

ಕನ್ನಡ ಅನುವಾದ 

   ಪತಿಯು ತನ್ನ ಪ್ರಿಯ ಕಾಂತೆಯ ಅಲಂಕೃತ ತುರುಬನ್ನು ಹಿಡಿದು ಜೇನಿನಿಂದ ತೊಳೆದಂತೆ ಅತಿ ಮಧುರವಾಗಿರುವ ಅವಳ ಅಧರಾಮೃತವನ್ನು ಹೀರುತ್ತಾ ಅವಳ ಕಂಪನದಿಂದುಂಟಾದ ಕರಕಂಕಣಗಳ ಕಿಣಿ ಕಿಣಿ ಶಬ್ದವನ್ನು ಹೇಗೋ ನುಂಗಿಬಿಡುತ್ತಾನೆ!'
    ಕವಿಯು ಇಲ್ಲಿ ಪತಿ, ಪತ್ನಿಯರ ರತಿಕ್ರೀಡೆಯ ಅತ್ಯಂತ ಮಧುರವಾದ ಸನ್ನಿವೇಶವನ್ನು ರಸವತ್ತಾಗಿ ವರ್ಣಿಸಿದ್ದಾನೆ. ಪತಿಯು ತನ್ನ ಪ್ರಿಯ ಪತ್ನಿಯ ಅಲಂಕೃತ ತುರುಬನ್ನು ಹಿಡಿದು ಅವಳ ತುಟಿಗಳನ್ನು ಚುಂಬಿಸುತ್ತಾ ಅಧರಾಮೃತವನ್ನು ಹೀರುತ್ತಿದ್ದಾನೆ.‌ ಆ ತುಟಿಗಳು ಜೇನಿನಿಂದ ತೊಳೆದಂತಿವೆ ಎನ್ನುತ್ತಾ ಮಧುರಮಧುರಂ ಎಂದು ಎರಡು ಬಾರಿ ಹೇಳುತ್ತಾ ಅತಿಮಧುರವಾಗಿವೆ ಎನ್ನುತ್ತಾನೆ. ಆದರೆ ಎಲ್ಲಾ ನವವಿವಾಹಿತ ಸ್ತ್ರೀಯರಿಗಿರುವಂತೆ, ಇಲ್ಲೂ ನಾಯಕಿಗೆ ಸಂಭೋಗವೆಂದರೆ ಸ್ವಲ್ಪ ಭಯವಾಗಿ ನಡುಗುತ್ತಿದ್ದಾಳೆ. ಅವಳ ಆ ಕಂಪನದಿಂದ ಕೈಬಳೆಗಳು ಕಿಣಿ ಕಿಣಿ ಶಬ್ದವನ್ನು ಮಾಡುತ್ತಿವೆ. ಆದರೆ ಪತಿಯು ಅವಳ ಅದರಾಮೃತಪಾನ ಮಾಡುತ್ತಾ ಆ ಬಳೆಗಳ ಶಬ್ದವನ್ನೂ ಹೇಗೋ ನುಂಗಿಬಿಡುತ್ತಾನೆ ಎನ್ನುತ್ತಾನೆ ಕವಿ! ಕವಲಯತಿ ಎಂದರೆ ನುಂಗಿಬಿಡುತ್ತಾನೆ ಎಂದು ಅರ್ಥ. ಅಂದರೆ ಆ ಶಬ್ದವನ್ನೇ ಅಡಗಿಸಿಬಿಡುತ್ತಾನೆ! ಅದು ಗೊತ್ತಾಗದಂತೆ ಮಾಡುತ್ತಾನೆ! ಅಂದರೆ ಅವನು ಅದೆಷ್ಟು ಪ್ರೀತಿಯಿಂದ, ರಸಿಕತೆಯಿಂದ ಅವಳ ಅಧರವನ್ನು ಚುಂಬಿಸಿ ಹೀರುತ್ತಿದ್ದಾನೆಂದರೆ ಅವಳ ಭಯ, ನಡುಕ, ಮತ್ತು ಬಳೆಗಳ ಕಿಣಿಕಿಣಿ ಶಬ್ದಗಳೆಲ್ಲವನ್ನೂ ಹೋಗಲಾಡಿಸಿ ಅವಳು ಅವನ ಪ್ರೇಮದಲ್ಲಿ ಒಂದಾಗುವಂತೆ, ಮೈಮರೆಯುವಂತೆ ಮಾಡುತ್ತಿದ್ದಾನೆ! ಇದರಲ್ಲಿ ಒಂದು ವೈಜ್ಞಾನಿಕ ಸತ್ಯವೂ ಇದೆ. ಪತಿಯು ತನ್ನ ಹೆದರಿದ ಪತ್ನಿಯನ್ನು ಪ್ರೀತಿಯಿಂದ ಮುದ್ದಿಸುತ್ತಾ ನಿಧಾನವಾಗಿ ರಸಿಕತೆಯಿಂದ ಸಂಭೋಗಿಸುತ್ತಾ ಅವಳ ಭಯ, ಕಂಪನಗಳನ್ನು ಹೋಗಲಾಡಿಸಿ ಅವಳನ್ನು ತನ್ನ ಪ್ರೇಮದಲ್ಲಿ ಒಂದಾಗಿಸಿಕೊಳ್ಳಬೇಕೇ ಹೊರತು, ಆತುರ, ಬಲಾತ್ಕಾರಗಳಿಂದ ಭಯವನ್ನು ಹೆಚ್ಚಿಸುವಂತೆ ಸಂಭೋಗಿಸಬಾರದು. ಪ್ರೀತಿಯ, ರಸಿಕತೆಯ ಮಿಲನವಾದರೆ ಅದು ಮತ್ತೆ ಮತ್ತೆ ಬೇಕೆನಿಸುತ್ತದೆ ಹಾಗೂ ಅಂಥ ಸವಿಯಾದ ಶೃಂಗಾರಾನುಭವ ಸಿಕ್ಕ ಪತ್ನಿಯು ತನ್ನ ಪತಿಯನ್ನು ಮನಸಾರೆ ಪ್ರೀತಿಸುತ್ತಾಳೆ.

ಭಾನುವಾರ, ಆಗಸ್ಟ್ 16, 2026

ಎರಡು ತಲೆಗಳ ಹಕ್ಕಿ -ಪಂಐತಂತ್ರದ ಅಪರೂಪದ ಕಥೆ

ಇದು ಹಂಚಿಕೊಂಡು ಬದುಕಬೇಕೆಂದು ಬೋಧಿಸುವ ಪಂಚತಂತ್ರದ ಒಂದು ಕಥೆ.
   ಒಂದಾನೊಂದು ಕಾಲದಲ್ಲಿ ಭಾರುಂಡ ( ಗಂಡಭೇರುಂಡ) ಎಂಬ ಒಂದು ವಿಚಿತ್ರ ಪಕ್ಷಿಯಿತ್ತು. ಅದಕ್ಕೆ ದೇಹ ಒಂದೇ ಇದ್ದರೂ ತಲೆಗಳು ಎರಡಿದ್ದವು.‌ ಒಮ್ಮೆ ಒಂದು ತಲೆಗೆ ಒಂದು ಸಿಹಿಯಾದ ಹಣ್ಣು ಸಿಕ್ಕಿತು. ಅದು ಆ ಹಣ್ಣನ್ನು ಚಪ್ಪರಿಸಿಕೊಂಡು ತಿನ್ನುತ್ತಾ," ಅಬ್ಬ! ಇಂಥ ರುಚಿಯಾದ ಹಣ್ಣನ್ನು ನಾನೆಂದೂ ತಿಂದಿಲ್ಲ!" ಎಂದಿತು. ಆಗ ಇನ್ನೊಂದು ತಲೆ," ನನಗೂ ಸ್ವಲ್ಪ ಕೊಡು! ನಾನೂ ರುಚಿ ನೋಡುತ್ತೇನೆ!" ಎಂದಿತು. ಅದಕ್ಕೆ ಮೊದಲನೆಯ ತಲೆ," ನಮ್ಮಿಬ್ಬರಿಗೂ ಒಂದೇ ಹೊಟ್ಟೆಯಿದೆ! ಹಾಗಾಗಿ ನಾನೊಬ್ಬನೇ ತಿಂದರೂ ಸಾಕು! ನಮ್ಮ ಹೊಟ್ಟೆಗೆ ತೃಪ್ತಿಯಾಗುತ್ತದೆ! ಉಳಿದದ್ದನ್ನು ನಮ್ಮ ಹೆಂಡತಿಗೆ ಕೊಡೋಣ!" ಎಂದಿತು. ಪಾಪ, ಈ ಎರಡನೆಯ ತಲೆಗೆ ಏನೂ ಹೇಳಲಾಗಲಿಲ್ಲ.
    ಮೊದಲ ತಲೆ ಆ ಹಣ್ಣನ್ನು ಅರ್ಧ ತಿಂದ ಬಳಿಕ ಉಳಿದರ್ಧವನ್ನು ಹೆಂಡತಿಗೆ ಕೊಟ್ಟಿತು. ಅದು ಆ ಹಣ್ಣನ್ನು ತಿಂದು ಬಹಳ ಸಂತೋಷಗೊಂಡು ದಿನವಿಡೀ ಆ ತಲೆಯನ್ನು ಆಲಂಗಿಸಿ ಚುಂಬಿಸಿತು! ಇದರಿಂದ ಎರಡನೆಯ ತಲೆಗೆ ಅನಾದರ ತೋರಿದಂತಾಗಿ ದುಃಖವಾಯಿತು. ಅಂತೆಯೇ ಮೊದಲನೆಯ ತಲೆಯ ಮೇಲೆ ಅದಕ್ಕೆ ಕ್ರಮೇಣ ದ್ವೇಷ ಬೆಳೆಯಿತು! ಹೇಗಾದರೂ ಮಾಡಿ ಅದರ ಮೇಲೆ ಸೇಡು ತೀರಿಸಿಕೊಳ್ಳಲು ಕಾಯತೊಡಗಿತು.
   ಒಂದು ದಿನ, ಎರಡನೆಯ ತಲೆಗೆ ಒಂದು ವಿಷಪೂರಿತ ಹಣ್ಣು ಸಿಕ್ಕಿತು! ಅದು ಆ ಹಣ್ಣನ್ನು ತೆಗೆದುಕೊಂಡು ಮೊದಲನೆಯ ತಲೆಗೆ ಹೇಳಿತು," ಇತರರನ್ನು ನಿರ್ಲಕ್ಷಿಸುವೆಯಲ್ಲವೇ? ಈಗ ಈ ವಿಷದ ಹಣ್ಣನ್ನು ತಿನ್ನುತ್ತೇನೆ ನೋಡು!" 
   ಆಗ ಎರಡನೆಯ ತಲೆ," ಅಯ್ಯೋ ಮೂರ್ಖ! ಅದನ್ನು ತಿನ್ನಬೇಡ! ನೀನು ತಿಂದರೆ ನಾವಿಬ್ಬರೂ ಸಾಯುತ್ತೇವೆ! "
   ಆದರೆ ಎರಡನೆಯ ತಲೆ ಅದರ ಮಾತು ಕೇಳದೆ ವಿಷದ ಹಣ್ಣನ್ನು ತಿಂದುಬಿಟ್ಟಿತು! ಆಗ ಎರಡೂ ಸತ್ತವು!
    ನಾವು ಸಂಸಾರದಲ್ಲೇ ಆಗಲಿ, ಕೆಲಸದ ಕಚೇರಿಯಲ್ಲೇ ಆಗಲಿ, ಒಂದು ಸಾಂಘಿಕ ಕಾರ್ಯದಿಂದ ನಡೆಯುವ 
ಸಂಸ್ಥೆಯಲ್ಲಿಯೇ ಆಗಲಿ, ಒಟ್ಟಿಗಿರುವಾಗ, ಯಾರನ್ನೂ ಉಪೇಕ್ಷಿಸಬಾರದು.‌ ಎಲ್ಲರಿಗೂ ಸಮಾನವಾದ ಗೌರವ, ಮರ್ಯಾದೆಗಳನ್ನು ನೀಡಬೇಕು. ಒಬ್ಬ ಕೆಲಸದವನನ್ನೂ ನಿರ್ಲಕ್ಷಿಸಬಾರದು. ಹಾಗೆ ನಿರ್ಲಕ್ಷಿಸಿದರೆ ಆ ವ್ಯಕ್ತಿಗಳಲ್ಲಿ ದ್ವೇಷವುಂಟಾಗಬಹುದು. ಆಗ ಅವರು ಇತರರಿಗೆ ಅಥವಾ ಸಂಸಾರ, ಅಥವಾ ಮೂಲ ಕಚೇರಿ ಅಥವಾ ಸಂಸ್ಥೆಗೆ ತೊಂದರೆ ಮಾಡಲು ಹೋದರೆ ಆ‌ ಇತರರಿಗೆ, ಸಂಸಾರಕ್ಕೆ, ಕಚೇರಿಗೆ ಅಥವಾ ಸಂಸ್ಥೆಗೆ ಇವರೂ ಸಂಬಂಧಪಟ್ಟಿರುವುದರಿಂದ, ಅವರೊಂದಿಗೆ ಇವರಿಗೂ ತೊಂದರೆಯಾಗುತ್ತದೆ! ಹೀಗೆ ಈ ಪುಟ್ಟ ಕಥೆಯಲ್ಲಿ ಎರಡು ನೀತಿಗಳನ್ನು ನೋಡಬಹುದು.