ಗುರುವಾರ, ಸೆಪ್ಟೆಂಬರ್ 3, 2026

ಸುಂದರೀಶತಕ -೮೮

ಸಂಸ್ಕೃತ ಮೂಲ 

ದೋರಾಂದೋಲನಸುಭಗಂ ನಿತಂಬಭರಮಂಥರಾಂಘ್ರಿವಿನ್ಯಾಸಮ್ ।
ತವ ಗಜಗಾಮಿನಿ ಗಮನಂ ಕುರುತೇ ಯತಿಚಿತ್ತಸಂಯಮನಮ್ ।।

ಕನ್ನಡ ಅನುವಾದ 

    'ಎಲೈ ಗಜಗಾಮಿನಿ! ಸೊಗಸಾಗಿ ಆಡುವ ನಿನ್ನ ತೋಳುಗಳು, ಭಾರವಾದ ನಿನ್ನ ನಿತಂಬಗಳಿಂದ ನಿಧಾನವಾದ ನಿನ್ನ ಹೆಜ್ಜೆಗಳ ವಿನ್ಯಾಸ, ಇವುಗಳಿಂದ ಕೂಡಿದ ನಿನ್ನ ನಡಿಗೆ, ಯತಿಗಳ ಚಿತ್ತದಲ್ಲೂ ಸಂಯಮವನ್ನುಂಟುಮಾಡುತ್ತದೆ ( ವ್ಯಂಗ್ಯಾರ್ಥದಲ್ಲಿ ಸಂಯಮವನ್ನು ಶಿಥಿಲಗೊಳಿಸುತ್ತದೆ)!' 
    ಇಲ್ಲಿ ಕವಿಯು ಹೆಣ್ಣಿನ ನಿಧಾನವಾದ ನಡಿಗೆಯನ್ನು ವರ್ಣಿಸುತ್ತಾ ಅದನ್ನು ಆನೆಯ ನಡಿಗೆಗೆ ಹೋಲಿಸುತ್ತಾ ಅವಳನ್ನು ಗಜಗಾಮಿನಿ ಎಂದು ಕರೆದಿದ್ದಾನೆ! ಸುಂದರವಾಗಿ ಆಡುವ ತೋಳುಗಳು, ಭಾರವಾದ ನಿತಂಬಗಳಿಂದ ನಿಧಾನವಾದ ಅವಳ ಹೆಜ್ಜೆಗಳ ವಿನ್ಯಾಸ, ಅವಳ ನಡಿಗೆಯನ್ನು ಸುಂದರಗೊಳಿಸುವೆ! ಅದು ಯತಿಗಳ ಚಿತ್ತದ ಸಂಯಮವನ್ನೂ ಶಿಥಿಲಗೊಳಿಸುತ್ತದೆ! ಇಲ್ಲಿ 'ಕುರುತೇ ಯತಿಚಿತ್ತಸಂಯಮನಂ' ಎಂದಿದೆ.‌ ಅಂದರೆ ಯತಿಚಿತ್ತದಲ್ಲಿ ಸಂಯಮವುಂಟುಮಾಡುತ್ತದೆ ಎಂದು ಅರ್ಥ ಬರುತ್ತದೆ. ಆದರೆ ಅದು ವ್ಯಂಗ್ಯಾರ್ಥದಲ್ಲಿ ಹೇಳಲಾಗಿದೆ. ಅಥವಾ ಹೆಣ್ಣಿನ ವಿಷಯದಲ್ಲಿ ಮನಸ್ಸನ್ನು ಮುಳುಗಿಸಿ ಅವಳಲ್ಲಿ ಚಲಿಸದಂತೆ ಸಂಯಮವುಂಟುಮಾಡುತ್ತದೆ ಎಂದು ತೆಗೆದುಕೊಳ್ಳಬಹುದು.‌ ಅಂದರೆ ಅವರ ಆಧ್ಯಾತ್ಮಿಕ ಭಾವ ಹಾಗೂ ತಪಸ್ಸು ಶಿಥಿಲಗೊಳ್ಳುತ್ತದೆ. ಹೆಣ್ಣಿನ ಸೌಂದರ್ಯ, ಸುಂದರವಾಗಿರುವುದರಲ್ಲೆಲ್ಲಾ ಅತ್ಯಂತ ಸುಂದರವಾದುದೆಂಬುದರಲ್ಲಿ ಯಾವ ಸಂದೇಹವೂ ಇಲ್ಲ! ಅದು ಯತಿಗಳ ಮನಸ್ಸನ್ನೂ ಸೆಳೆಯುತ್ತದೆ! ಪುರಾಣಗಳಲ್ಲಿ ನಾವು ನೋಡುವಂತೆ ವಿಶ್ವಾಮಿತ್ರರು ಬ್ರಹ್ಮರ್ಷಿಯಾಗಲು ತಪಸ್ಸು ಮಾಡುತ್ತಿರಲು, ಅದು ತನ್ನ ಪದವಿಗಾಗಿ ಎಂದು ತಿಳಿದ ಇಂದ್ರನು ಅವರ ತಪಸ್ಸನ್ನು ಕೆಡಿಸಲು ಮೇನಕೆಯೆಂಬ ಅಪ್ಸರೆಯನ್ನು ಕಳಿಸಲು, ಅವಳ ಸೌಂದರ್ಯಕ್ಕೆ ಮನಸೋತ ವಿಶ್ವಾಮಿತ್ರರು ಅವಳೊಂದಿಗೆ ಹತ್ತು ವರ್ಷಗಳ ಕಾಲ ಪ್ರೇಮದಲ್ಲಿ ಕಳೆದು ಶಕುಂತಲೆಯ ಜನ್ಮಕ್ಕೆ ಕಾರಣರಾದರು. ಅಂತೆಯೇ ತಪಸ್ಸು ಮಾಡುತ್ತಿದ್ದ ಕಂಡು ಮಹರ್ಷಿಗಳು, ಇಂದ್ರನು ಕಳಿಸಿದ ಪ್ರಮ್ಲೋಚೆಯೆಂಬ ಅಪ್ಸರೆಯೊಂದಿಗೆ ಅನೇಕ ವರ್ಷಗಳನ್ನು ಒಂದೇ ದಿನವೆಂಬಂತೆ ಕಳೆದು ಮಾರಿಷೆ ಎಂಬ ಕನ್ಯೆಯ ಜನ್ಮಕ್ಕೆ ಕಾರಣರಾದರು! ಹಾಗೆಯೇ ಪರಾಶರರು ಬೆಸ್ತರ ಕನ್ಯೆ ಸತ್ಯವತಿಯೊಂದಿಗೆ ಸೇರಿ ವೇದವ್ಯಾಸರ ಜನ್ಮಕ್ಕೆ ಕಾರಣರಾದರು! ವೇದವ್ಯಾಸರೂ ಘೃತಾಚಿಯೆಂಬ ಅಪ್ಸರೆಗೆ ಮನಸೋತು ಶುಕ ಮಹರ್ಷಿಗಳ ಜನ್ಮಕ್ಕೆ ಕಾರಣರಾದರು! ಹೀಗೆ ಹೆಣ್ಣಿನ ಮೋಹ, ಋಷಿಮುನಿಗಳನ್ನೂ ಬಿಟ್ಟಿಲ್ಲ! ಅದನ್ನು ಹೇಳುತ್ತಾ ಕವಿಯು ಇಲ್ಲಿ ಹೆಣ್ಣಿನ ಸುಂದರ ನಡಿಗೆಯನ್ನು ಬಣ್ಣಿಸಿದ್ದಾನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ