ಗುರುವಾರ, ಸೆಪ್ಟೆಂಬರ್ 3, 2026

ಸುಂದರೀಶತಕ -೮೭

ಸಂಸ್ಕೃತ ಮೂಲ 

ಪ್ರಾತ: ಪೃಚ್ಛತಿ ನಿಭೃತಂ ಸಖೀಜನೇ ರಜನಿಕೇಲಿವೃತ್ತಾಂತಮ್ ।
ಮಂದಸ್ಮಿತಾದಜಾಯತ ರಹಸ್ಯಭೇದ: ಸರೋಜಾಕ್ಷ್ಯಾ: ।।

ಕನ್ನಡ ಅನುವಾದ 

    'ಬೆಳಗಾಗಲು, ಸಖಿಯರು ಆ ಸರೋಜಾಕ್ಷಿಯನ್ನು ರಾತ್ರಿಯ ರತಿಕ್ರೀಡೆಯ ವೃತ್ತಾಂತವನ್ನು ಏಕಾಂತದಲ್ಲಿ ಕೇಳಲು, ಅವಳು ಮೆಲ್ಲನೆ ನಕ್ಕಳು! ಅವಳ ಆ ಮಂದಹಾಸದಿಂದ ಅವಳ ರಹಸ್ಯ ಪ್ರಕಟವಾಯಿತು!'
     ಕೆಲವೊಮ್ಮೆ ದೀರ್ಘ ವರ್ಣನೆಗಳಿಗಿಂತ ಒಂದು ಸಣ್ಣ ಕ್ರಿಯೆಯಿಂದ ಅಥವಾ ಚಿಹ್ನೆಯಿಂದ ಎಷ್ಟೋ ವಿಷಯಗಳನ್ನು ಹೇಳಿದಂತಾಗುತ್ತದೆ. ಇಲ್ಲಿ ಒಬ್ಬ ನವವಧು ಬೆಳಿಗ್ಗೆ ಆಗಷ್ಟೇ ನಿದ್ರೆಯಿಂದ ಎದ್ದಿದ್ದಾಳೆ. ಆಗ ಅವಳ ಸಖಿಯರು ಓಡಿಬಂದು ಏಕಾಂತದಲ್ಲಿ ರಾತ್ರಿ ಅವಳ ಪತಿಯೊಂದಿಗೆ ರತಿಕ್ರೀಡೆ ಹೇಗಿತ್ತೆಂದು ಕುತೂಹಲದಿಂದಲೂ ತುಂಟತನದಿಂದಲೂ ಕೇಳಿದ್ದಾರೆ. ಅವಳು ಹೇಗೆ ತಾನೇ ಹೇಳಿಯಾಳು? ಹಾಗಾಗಿ ನಾಚಿಕೊಂಡು ಮೆಲ್ಲನೆ ನಕ್ಕಿದ್ದಾಳೆ! ಅವಳ ಆ ಮೆಲುನಗೆಯೇ ಅವಳ ರಹಸ್ಯಸ್ಫೋಟ ಮಾಡಿದೆ! ಅಷ್ಟರಿಂದಲೇ ರಾತ್ರಿಯ ರತಿಕ್ರೀಡೆ ಹೇಗಿತ್ತೆಂದು ಅವರಿಗೆ ತಿಳಿದಿದೆ! ಕವಿಯು ಈ ಸೂಕ್ಷ್ಮ ವಿಚಾರವನ್ನು ಅದೆಷ್ಟು ಸೊಗಸಾಗಿ, ಶೃಂಗಾರಮಯವಾಗಿ ತೋರಿಸಿದ್ದಾನೆ! 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ