ಗುರುವಾರ, ಸೆಪ್ಟೆಂಬರ್ 3, 2026

ಸುಂದರೀಶತಕ -೮೬

ಸಂಸ್ಕೃತ ಮೂಲ 

ಸಂಸ್ಪೃಷ್ಟಪದ್ಮಿನೀಕೋ ಯಥಾ ಯಥಾರ್ಕ: ಕರಾನ್ಪ್ರಸಾರಯತಿ ।
ಸುಂದರಿ ಮಾನವತೀಯಂ ಸಂಕುಚತಿ ತಥಾ ತಥಾ ಛಾಯಾ ।।

ಕನ್ನಡ ಅನುವಾದ 

    ಕವಿಯು ಇಲ್ಲಿ ಒಂದು ಸುಂದರ ಶೃಂಗಾರ ಪ್ರಸಂಗವನ್ನು ಶ್ಲೇಷದ ಮೂಲಕ ಎರಡು ರೀತಿಗಳಲ್ಲಿ ನಾಯಕನಿಂದ ಹೇಳಿಸುತ್ತಿದ್ದಾನೆ -
   ಕಮಲದ ಪಕ್ಷದಲ್ಲಿ," ಎಲೈ ಸುಂದರಿ! ಸೂರ್ಯನು ಹೇಗೆ ಹೇಗೆ ತನ್ನ ಕರಕಿರಣಗಳನ್ನು ಚಾಚಿ ಕಮಲವನ್ನು ಸ್ಪರ್ಶಿಸುವನೋ, ಹಾಗೆ ಹಾಗೆ ಆ ಕಮಲದ ನೆರಳು ಸಂಕುಚಿತಗೊಳ್ಳುತ್ತದೆ ( ಚಿಕ್ಕದಾಗುತ್ತದೆ)!" 
   ನಾಯಕಿಯ ಪಕ್ಷದಲ್ಲಿ," ಎಲೈ ಸುಂದರಿ! ಈ ಪ್ರಿಯತಮನು ಹೇಗೆ ಹೇಗೆ ತನ್ನ ಕರಗಳಿಂದ ತನ್ನ ಪ್ರಿಯೆಯನ್ನು ಸ್ಪರ್ಶಿಸುವನೋ, ಕೋಪಗೊಂಡಿದ್ದ ಅವಳ ಕೋಪ ಹಾಗೆ ಹಾಗೆ ಕರಗುತ್ತದೆ!" 
    ಇಲ್ಲಿ ನಾಯಕಿಯು ಯಾವುದೋ ಕಾರಣಕ್ಕೆ ಕೋಪಗೊಂಡಿದ್ದಾಳೆ. ನಾಯಕನು ಅವಳನ್ನು ಸಮಾಧಾನ ಮಾಡುವಂತೆ ಮೆಲ್ಲನೆ ಸ್ಪರ್ಶಿಸಿದಂತೆಲ್ಲಾ ಅವಳ ಕೋಪ ಕರಗುತ್ತದೆ. ಅದನ್ನು ಅವನು ಸೂರ್ಯ ಮತ್ತು ಕಮಲದ ದೃಷ್ಟಾಂತದಿಂದ ಅವಳಿಗೆ ಹೇಳುತ್ತಾನೆ. ಅದು ಮೇಲ್ನೋಟಕ್ಕೆ ಸೂರ್ಯ ಮತ್ತು ಕಮಲಗಳ ಪದ್ಯದಂತೆ ಕಂಡರೂ ಶ್ಲೇಷ ಅಥವಾ ಇನ್ನೊಂದು ಅರ್ಥದಲ್ಲಿ ತನ್ನ ಮತ್ತು ನಾಯಕಿಯ ಶೃಂಗಾರ ಪ್ರಸಂಗವನ್ನು ಹೇಳುತ್ತದೆ. ಸೂರ್ಯನು ಕಮಲವನ್ನು ಹೇಗೆ ಹೇಗೆ ತನ್ನ ಕರಕಿರಣಗಳನ್ನು ಚಾಚಿ ಕಮಲವನ್ನು ಸ್ಪರ್ಶಿಸುವನೋ ಹಾಗೆ ಹಾಗೆ ಅದರ ನೆರಳು ಸಂಕೋಚಗೊಳ್ಳುತ್ತದೆ. ಅಂದರೆ ಸೂರ್ಯನು ಆಕಾಶದ ಮಧ್ಯಕ್ಕೆ ಬರುತ್ತಾ ಅವನ ಕಿರಣಗಳು ಕಮಲವನ್ನು ಹೇಗೆ ಸ್ವರ್ಷಿಸುವವೋ ಹಾಗೆಯೇ ಕಮಲದ ನೆರಳು ಚಿಕ್ಕದಾಗುತ್ತದೆ. ನಾಯಕಿಯ ಪಕ್ಷದಲ್ಲಿ, ನಾಯಕನೇ ಸೂರ್ಯ. ಮಾನಿನಿ ಅಥವಾ ಕುಪಿತಳಾಗಿದ್ದ ತನ್ನ ಪ್ರಿಯತಮೆಯೇ ಕಮಲ. ಅವನು ತನ್ನ ಕರಗಳಿಂದ ( ಕಿರಣಗಳು) ಅವಳನ್ನು ಸ್ಪರ್ಶಿಸಿದಂತೆ ಅವಳ ಛಾಯೆ, ಅಂದರೆ ಕೋಪ, ಸಂಕೋಚಗೊಳ್ಳುತ್ತದೆ, ಅಂದರೆ ಕರಗುತ್ತದೆ. ಅವಳು ನಿಧಾನವಾಗಿ ಕೋಪದಿಂದ ಪ್ರೀತಿಯ ಭಾವಕ್ಕೆ ತಿರುಗುತ್ತಾಳೆ. ಇದನ್ನು ಹೇ ಸುಂದರಿ ಎನ್ನುತ್ತಾ ಅವನೇ ಅವಳಿಗೆ ಸೂರ್ಯ,ಕಮಲಗಳ ಘಟನೆಯಂತೆ ಹೇಳುತ್ತಾನೆ. ಹೀಗೆ ಶ್ಲೇಷ ಅಥವಾ ಎರಡು ಅರ್ಥಗಳು ಬರುವ ಪದ್ಯವಾದುದರಿಂದ ಇಲ್ಲಿ ಶ್ಲೇಷಾಲಂಕಾರವಿದೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ