ಮಂಗಳವಾರ, ಏಪ್ರಿಲ್ 8, 2025

ಚಿತ್ರದುರ್ಗದ ಪ್ರಕೃತಿರತ್ನ ಜೋಗಿಮಟ್ಟಿ

ಚಿತ್ರದುರ್ಗವೆಂದರೆ ಬಿಸಿಲು,ಕೋಟಿ,ಬಂಡೆಗಲ್ಲುಗಳಷ್ಟೇ ಎಂದು ಅನೇಕರು ಭಾವಿಸಿರುತ್ತಾರೆ.ಆದರೆ ಇಲ್ಲಿ ತಂಪಾದ ಒಂದು ಪುಟ್ಟ ಕಾಡಿದೆ ಎಂದು ಇನ್ನೂ ಎಷ್ಟೋ ಜನಕ್ಕೆ ಗೊತ್ತಿಲ್ಲ.ಅದುವೇ ಜೋಗಿಮಟ್ಟಿ! ಜೋಗಿ ಶ್ರೀ ಸಿದ್ಧೇಶ್ವರ ಸ್ವಾಮಿಗಳು ಇಲ್ಲಿ ತಪಸ್ಸು ಮಾಡಿದ್ದರಿಂದ ಈ ಅರಣ್ಯಕ್ಕೆ ಜೋಗಿಮಟ್ಟಿ ಎಂಬ ಹೆಸರು ಬಂದಿದೆ.ಬಿಸಿಲಿನ ಝಳದಿಂದ ಆಯಾಸವಾಗಿದ್ದರೆ ಈ ಕಾಡಿಗೆ ಹೋದ ಕೂಡಲೇ ತಂಪಾಗಿ ಊಲ್ಲಾಸ ತುಂಬಿಕೊಂಡು ಆಯಾಸ ಪರಿಹಾರವಾಗುತ್ತದೆ! ಏಕೆಂದರೆ ಇದೊಂದು ಗಿರಿಧಾಮವೂ ಹೌದು! 
     ಜೋಗಿಮಟ್ಟಿ ಅಭಯಾರಣ್ಯವು ಸುಮಾರು 100.48 ಚದರ ಕಿ.ಮೀ.ವಿಸ್ತಾರದ ಅರಣ್ಪ್ರ ಪ್ರದೇಶವನ್ನು ಹೊಂದಿದ್ದು, ಮುಖ್ಯವಾಗಿ ಹುಲ್ಲುಗಾವಲು, ಒಣ ಎಲೆಯುದುರುವ ಮತ್ತು ಕುರುಚಲು ಪೊದೆ ಕಾಡುಗಳನ್ನು ಹೊಂದಿದೆ.ಇದು ಚಿತ್ರದುರ್ಗದ ಅತ್ಯಂತ ಎತ್ತರದ ಸ್ಥಳವಾಗಿದ್ದು, 3803 ಅಡಿಗಳಷ್ಟು ಎತ್ತರವಿದೆ.ಇದು ಚಿತ್ರದುರ್ಗದ ಅತ್ಯಂತ ತಂಪಾದ ತಾಣವಾಗಿದೆ.ಇದು ಚಿತ್ರದುರ್ಗ, ಹೊಳಲ್ಕೆರೆ, ಹಾಗೂ ಹಿರಿಯೂರುಗಳನ್ನು ಆವರಿಸಿಕೋಳ್ಳುತ್ತದೆ.ಬೆಟ್ಟಗುಡ್ಡಗಳಿಂದ ಕೂಡಿರುವ ಈ ಕಾಡಿನಲ್ಲಿ ಅನೇಕ ಗಿಡಮರಗಳಿದ್ದು, ಚಿರತೆ, ಗುಳ್ಳೆನರಿ, ತೋಳ, ಕರಡಿ, ಮುಳ್ಳುಹಂದಿ, ಮೊದಲಾದ ಪ್ರಾಣಿಗಳೂ ನವಿಲೂ ಸೇರಿದಂತೆ ಅನೇಕ ಬಗೆಯ ಪಕ್ಷಿಗಳೂ ಇವೆ.ಒಂದು ಕಾಲದಲ್ಲಿ ಇಲ್ಲಿ ಹುಲಿಗಳೂ ಸಂಚರಿಸುತ್ತಿದ್ದವು ಎಂದು ಹೇಳುತ್ತಾರೆ.
        ಚಿತ್ರದುರ್ಗ ನಗರದ ದಕ್ಷಿಣಕ್ಕೆ ಕೇವಲ ಹತ್ತು ಕಿ.ಮೀ. ದೂರದಲ್ಲಿರುವ ಈ ಸುಂದರ ಕಾಡನ್ನು ಒಣಪ್ರದೇಶದ ಊಟಿ ಎಂದೂ ಕರೆಯುತ್ತಾರೆ! ಪ್ರವಾಸಿಗರಿಗೆ ಬೆಳಿಗ್ಗೆ 6:30 ಗೆ ಈ ಗಿರಿಧಾಮದ ದ್ವಾರವನ್ನು ತೆರೆದು ಮಧ್ಯಾಹ್ನ ಹನ್ನೆರಡು ಗಂಟೆಗೆ ಮುಚ್ಚಲಾಗುತ್ತದೆ. ಸ್ವಂತ ವಾಹನದಲ್ಲಿ ಹೋಗುವುದು ಒಳ್ಳೆಯದು.ಚೆಕ್ ಪೋಸ್ಟ್ ನಲ್ಲಿ ಅನುಮತಿ ಪಡೆದು ಕಾಡಿನಲ್ಲಿ ಪಯಣಿಸುತ್ತಾ ಸ್ವಲ್ಪ ಮುಂದೆ ಹೋದರೆ ನೂರೈವತ್ತೈದು ಮೆಟ್ಟಿಲುಗಳಿರುವ ಒಂದು ಬೆಟ್ಟ ಸಿಗುತ್ತದೆ.ಈ ಮೆಟ್ಟಿಲುಗಳನ್ನು ಹತ್ತಿ ಮೇಲೆ ಹೋದರೆ ಇಲ್ಲಿ ತಪಸ್ಸು ಮಾಡಿದ ಜೋಗಿ ಶ್ರೀ ಸಿದ್ಧೇಶ್ವರ ಸ್ವಾಮಿಗಳ ಗದ್ದುಗೆಯ ಮಂದಿರ ಸಿಗುತ್ತದೆ.ಮಂದಿರದ ಹೊರಗೆ ಅವರ ಪಾದಗಳ ಆಕೃತಿಯದೆ ಹಾಗೂ ಒಳಗೆ ಅವರ ವಿಗ್ರಹವಿದೆ.ಈ ಮಂದಿರದ ಎದುರಿಗೆ ಒಂದು ವೀಕ್ಷಣಾಗೋಪುರವಿದ್ದು, ಅದನ್ನೇರಿ ಮೇಲೆ ಹೋದರೆ ಮೈ ನವಿರೇಳಿಸುವ ಪ್ರಕೃತಿ ಸೌಂದರ್ಯದ ದೃಶ್ಯಾವಳಿ ಕಾಣುತ್ತದೆ! ಬೆಳಿಗ್ಗೆ ಬೇಗನೆ ಹೋದರೆ ಇಲ್ಲಿ ಮಂಜು ಕವಿದಿದ್ದು ಬಹಳ ತಂಪಾಗಿರುತ್ತದೆ! ಈ ಪ್ರಕೃತಿ ಸೌಂದರ್ಯವನ್ನು ನೋಡುತ್ತಿದ್ದರೆ ಆಹ್ಲಾದವಾಗುತ್ತದೆ! ಬೆಟ್ಟದ ಮೆಟ್ಟಿಲುಗಳನ್ನು ಹತ್ತಿ ಇಳಿಯುವಾಗ ಅಕ್ಕಪಕ್ಕಗಳಲ್ಲಿ ಒಳ್ಳೆಯ ಸುಭಾಷಿತ ವಾಕ್ಯಗಳ ಫಲಕಗಳನ್ನು ಹಾಕಿರುವುದನ್ನು ನೋಡಬಹುದು! ಚಿರತೆ,ಕರಡಿ, ಮುಂತಾದ ಪ್ರಾಣಿಗಳಿದ್ದರೂ ಅವು ಸುಲಭವಾಗಿ ಕಾಣಸಿಗುವುದಿಲ್ಲ.ನನ್ನ ಅದೃಷ್ಟಕ್ಕೆ ಕಾರಿನಲ್ಲಿ ಹೋಗುತ್ತಿದ್ದಾಗ ದಾರಿಯಲ್ಲಿ ಒಂದು ನವಿಲು ನಡೆದು ಹೋಗುತ್ತಿರುವುದು ಕಾಣಿಸಿತು! ಅಂತೆಯೇ ರೆಡ್ ವೆಂಟೆಡ್ ಬುಲ್ ಬುಲ್ ಪಕ್ಷಿ, ಬಗೆ ಬಗೆಯ ಬಣ್ಹದ ಚಿಟ್ಟೆಗಳು, ಹಾಗೂ ಕಿತ್ತಳೆ ಚಿಪ್ಪಿನ ಬಸವನಹುಳು ನೋಡಲು ಸಿಕ್ಕಿದವು! 
      ಬೆಟ್ಟವನ್ನು ಇಳಿದು ಸ್ವಲ್ಪ ಮುಂದೆ ಹೋದರೆ, ಅಲ್ಲಿ ನೂರು ವರ್ಷಗಳಷ್ಟು ಹಳೆಯದಾದ ಒಂದು ಬ್ರಿಟಿಷ್ ಕಾಲದ ಪರಿವೀಕ್ಷಣಾ ಮಂದಿರವಿದೆ ಇಲ್ಲಿನ ವಾತಾವರಣ ಬಹಳ ಸುಂದರವಾಗಿ, ತಂಪಾಗಿದೆ.ಇಲ್ಲಿ ಸುಂದರ ಹೂಗಳ ಗಿಡಮರಗಳಿದ್ದು, ಅವುಗಳ ಮೇಲೆ ಅವುಗಳ ಹೆಸರುಗಳ ಫಲಕಗಳನ್ನು ಹಾಕಿದ್ದಾರೆ. ಇದರಿಂದ ನಮ್ಮ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳಬಹುದು.
      ಜೋಗಿಮಟ್ಟಿಯಲ್ಲಿ ಹಿಮವತ್ಕೇದಾರ ಎಂಬ ಸುಂದರ ಜಲಪಾತವೂ ಇದ್ದು, ಅದು ಬಂಡೆಯಲ್ಲಿ ಒಂದು ಗುಹೆಯನ್ನು ಕೊರೆದಿದೆ.ಈ ಗುಹೆಯಲ್ಲಿ ಶಿವಲಿಂಗವೇ ಮೊದಲಾದ ವಿಗ್ರಹಗಳಿವೆ.
       ಜೋಗಿಮಟ್ಟಿ ಅರಣ್ಯಪ್ರದೇಶದಲ್ಲೇ ಆಡುಮಲ್ಲೇಶ್ವರ ಮೃಗಾಲಯವೆಂಬ ಒಂದು ಪುಟ್ಟ ಮೃಗಾಲಯವಿದೆ.ಇಲ್ಲಿ ಮೃಗಾಲಯಕ್ಕೆ ಹೋಗುವ ದಾರಿಯನ್ನು ಸೂಚಿಸಲಾಗಿದೆ.ಗಿಢಮರಗಳ ಸುಂದರ ಉದ್ಯಾನವನದೊಂದಿಗೆ ಕೂಡಿರುವ ಈ ಮೃಗಾಲಯದಲ್ಲಿ ನವಿಲು, ಗುಳ್ಳೆನರಿ, ಸಿಲ್ವರ್ ಫೆಸೆಂಟ್ ಮೊದಲಾದ ಆಕರ್ಷಕ ಪಕ್ಷಿಗಳು, ಹೆಬ್ಬಾವು, ಮೊಸಳೆ, ಕರಡಿ,ಚಿರತೆ, ಹುಲಿ, ಚುಕ್ಕಿ ಜಿಂಕೆ,ಕೃಷ್ಣಮೃಗ,ನೀಲಗಾಯ್, ಮೊದಲಾದ ಪ್ರಾಣಿಗಳಿವೆ.ಇಲ್ಲಿ ಗಾಜಿನ ಮನೆಯಲ್ಲಿರಿಸಲಾಗಿರುವ ಹುಲಿ ತನ್ನ ಗಂಭೀರ ನಡಿಗೆಯಿಂದ ನಮ್ಮ ಹತ್ತಿರಕ್ಕೇ ಬರುತ್ತಾ ಆಕರ್ಷಿಸುತ್ತದೆ! 
       ಹೀಗೆ ಜೋಗಿಮಟ್ಟಿ, ಚಿತ್ರದುರ್ಗದ ಒಂದು ಸುಂದರ ಗಿರಿಧಾಮ ಹಾಗೂ ಅಭಯಾರಣ್ಯವಾಗಿದ್ದು, ಪ್ರಕೃತಿಯ ಒಂದು ಪುಟ್ಟ ರತ್ನದಂತೆ ಹೆಚ್ಚು ಜನರಿಗೆ ತಿಳಿದಿಲ್ಲದ ತಾಣವಾಗಿದೆ.ಚಿತ್ರದುರ್ಗಕ್ಕೆ ಬಂದಾಗ ಇದು ನೋಡಲೇ ಬೇಕಾದ ತಾಣವಾಗಿದೆ.

ಶನಿವಾರ, ಮಾರ್ಚ್ 1, 2025

ಚಳಿಗಾಲದ ಚರ್ಮ ಸಮಸ್ಯೆಗಳು

ನಿಮಗೆ ಕಜ್ಜಿಯಾಗಿದೆ ಎಂದು ಚರ್ಮವೈದ್ಯರು ಹೇಳಿದ ಕೂಡಲೇ ಅನೇಕ ರೋಗಿಗಳು ಹೌಹಾರುತ್ತಾರೆ! ಅಯ್ಯೋ! ಅಂಥ ಭಯಂಕರ ರೋಗ ನನಗಾಗಿಲ್ಲ ಡಾಕ್ಟ್ರೇ! ಏನೋ ಸುಮ್ಮನೆ ಕೆರೆತ ಅಷ್ಟೇ! ಸರಿಯಾಗಿ ನೋಡಿ ಡಾಕ್ಟ್ರೇ! ಎಂದು ಅಲವತ್ತುಕೊಳ್ಳುತ್ತಾರೆ! ಇದಕ್ಕೆ ಕಾರಣವೆಂದರೆ ಕಜ್ಜಿಯನ್ನು ನಾಯಿಯೊಂದಿಗೆ ತಳುಕು ಹಾಕಿಕೊಂಡಿರುವುದು! ನಿಜ! ನಾಯಿಗೆ ಕಜ್ಜಿ ಬಂದರೆ ಅದರ ಮೈಯ ರೋಮಗಳೆಲ್ಲಾ  ಉದುರಿ ಗಟ್ಟಿಯಾದ ಮಚ್ಚೆಗಳಾಗಿ ವಿಕಾರವಾಗಿ ಕಾಣುವುದು! ಆದರೆ ಮನುಷ್ಯರಿಗೆ ಕಜ್ಜಿ ಬಂದರೆ ಹಾಗೆ ಕಾಣುವುದಿಲ್ಲ.ನಮ್ಮಲ್ಲಿ , ವಿಶಿಷ್ಟವಾಗಿ ಬೆರಳುಸಂದುಗಳು,ಮಣಕೈಯ ಒಳಭಾಗ, ತೋಳು, ಕಂಕುಳು, ಸ್ತನಗಳ ಕೆಳಗೆ, ನಾಭಿಯ ಸುತ್ತ,ತೊಡೆಸಂದು, ಗುಪ್ತಾಂಗಗಳು, ಹಾಗೂ ಪೃಷ್ಠದ ಮೇಲೆ  ಗುಳ್ಳೆಗಳು,ನೀರ್ಗುಳ್ಳೆಗಳು,ಕೆರೆದ ಗುರುತುಗಳು, ಮತ್ತು ಕೆಲವೊಮ್ಮೆ ಗಂಟಿನಂಥ ದಪ್ಪ ಗುಳ್ಳೆಗಳು ಆಗುತ್ತವೆ! ಈ ಪ್ರದೇಶಗಳನ್ನು ಒಂದು ಕಾಲ್ಪನಿಕ ಚಕ್ರಾಕಾರವಾಗಿ ಸೇರಿಸಬಹುದು.ಅದನ್ನು ಹೆಬ್ರಾನ ಚಕ್ರ ( Circle of Hebra) ಎನ್ನುತ್ತಾರೆ.ಮೈಯೆಲ್ಲಾ ತುರಿಸುತ್ತಿದ್ದು ಇದು ರಾತ್ರಿಯ ವೇಳೆ ಹೆಚ್ಚುತ್ತದೆ.ಕಜ್ಜಿಯ ಅತ್ಯಂತ ವಿಶಿಷ್ಟ ಗುರುತೆಂದರೆ ಬರ್ರೋ ಅಥವಾ ಬಿಲ.ಇದು ಒಂದು ಅಲೆಯಾಕಾರದ ದಾರದಂಥ ಬಿಳಿ ಗುರುತಾಗಿದ್ದು,ಅದರ ತೆರೆದ ತುದಿಯಲ್ಲಿ ಒಂದು ಗುಳ್ಳೆಯಿರುತ್ತದೆ.ಇದು ಶಿಶ್ನ ಇಲ್ಲವೇ ಬೆರಳುಸಂದುಗಳಲ್ಲಿ ಕಂಡುಬರುತ್ತದೆ.ಆದರೆ ಇದು ಸುಲಭವಾಗಿ ಕಾಣಸಿಗುವುದಿಲ್ಲ.
      ಕಜ್ಜಿ ಅಥವಾ ಸ್ಕೇಬೀಸ್ ಕಾಯಿಲೆ ಬರುವುದು ನುಸಿ ಅಥವಾ ಮೈಟ್ ಎಂಬ ಕೀಟದಿಂದ.ವೈಜ್ಞಾನಿಕವಾಗಿ ಇದನ್ನು ಸಾರ್ಕೋಪ್ಟೆಸ್ ಸ್ಕೇಬೀ ( Sarcoptes scabie) ಎನ್ನುತ್ತಾರೆ.ಇದೊಂದು ರಕ್ತ ಹೀರುವ ಪರಾವಲಂಬಿ ಕೀಟವಾಗಿದ್ದು ಚರ್ಮವನ್ನು ಬಿಲ ಕೊರೆದು ಪ್ರವೇಶಿಸಿ ಅದರ ಮೇಲ್ಮೈಯಲ್ಲಿ ನೆಲೆಸುತ್ತದೆ.ಹೆಣ್ಣು ನುಸಿ ತನ್ನ ಜೀವನ ಚಕ್ರದಲ್ಲಿ ನಲವತ್ತರಿಂದ ಐವತ್ತು ಮೊಟ್ಟೆಗಳನ್ನಿರಿಸಿ ಅವುಗಳಿಂದ ಬರುವ ಮರಿಗಳು ಮೈಯೆಲ್ಲಾ ಹರಡುತ್ತವೆ.
        ಕಜ್ಜಿಯು  ಒಬ್ಬರಿಂದೊಬ್ಬರಿಗೆ ಸುಲಭವಾಗಿ ಅಂಟುತ್ತದೆ.ಸ್ನಾನ ಮೊದಲಾಗಿ ಶುದ್ಧತೆಯಿಲ್ಲದಿರುವುದು, ಅತಿಯಾದ ಜನಸಂದಣಿಯಲ್ಲಿ ಓಡಾಡುವುದು, ಗಾಳಿಬೆಳಕುಗಳಿಲ್ಲದ ಹೆಚ್ಚು ಜನರಿರುವ ಮನೆಗಳಲ್ಲಿ ವಾಸಿಸುವುದು, ಕಜ್ಜಿ ಹರಡಲು ಪ್ರೋತ್ಸಾಹಿಸುತ್ತದೆ.ಮಕ್ಕಳಲ್ಲಿ ಇದು ಹೆಚ್ಚು. ರೋಗನಿರೋಧಕ ಶಕ್ತಿ ಕಡಿಮೆಯಿರುವವರಲ್ಲಿ ಕಜ್ಜಿ ತೀವ್ರವಾಗಿ ಆಗುತ್ತದೆ.
   ಕಜ್ಜಿಯಲ್ಲಿ ಮುಖ್ಯವಾಗಿ ತುರಿಕೆಯಿರುವುದರಿಂದ ಕೆರೆದು ಗಾಯಗಳಾಗಿ ಅವುಗಳಿಗೆ ಬ್ಯಾಕ್ಟೀರಿಯಾ ಅಂಟಿ ಎರಡನೆಯ ಸೋಂಕಾಗಬಹುದು.ಆಗ ಕೀವ್ಗುಳ್ಳೆಗಳು, ಕುರದಂಥ ಊತಗಳು ಉಂಟಾಗಿ ನೋವು ತರುತ್ತವೆ.
     ಕಜ್ಜಿಯ ಚಿಕಿತ್ಸೆ ಬಹಳ ಸುಲಭ.ಪರ್ಮೆಥ್ರಿನ್ ಎಂಬ ಮುಲಾಮು ಇದಕ್ಕೆ ರಾಮಬಾಣದಂತೆ ಕೆಲಸ ಮಾಡುತ್ತದೆ.ಕಜ್ಜಿ ಕೀಟವನ್ನು ಕೊಲ್ಲುವ ಇದು ನಮಗೇನೂ ತೊಂದರೆ ಮಾಡುವುದಿಲ್ಲ.ಇದನ್ನು ವೈದ್ಯರ ನಿರ್ದೇಶಾನುಸಾರ ರಾತ್ರಿ ಗಲ್ಲದಿಂದ ಕೆಳಗೆ ಮೈಪೂರಾ ಸವರಿ ಹನ್ನೆರಡು ಗಂಟೆಗಳ ಬಳಿಕ, ಅಂದರೆ ಬೆಳಗ್ಗೆ ಅದೇ ಸಮಯಕ್ಕೆ ಸ್ನಾನ ಮಾಡಿ ತೊಳೆಯಬೇಕು.ಮುಲಾಮು ಕೀಟದ ಮೊಟ್ಟೆಗಳ ಮೇಲೆ ಪ್ರಭಾವ ಬೀರದುದರಿಂದ ಹಾಗೂ ಒಂದು ವಾರದಲ್ಲಿ ಮರಿಗಳು ಬರುವುದರಿಂದ ಒಂದು ವಾರದ ನಂತರ ಇದನ್ನು ಪುನಃ ಬಳಸಬೇಕಾಗುತ್ತದೆ.ಹೀಗೆ ಈ ಮುಲಾಮನ್ನು ಎರಡು ಬಾರಿ ಬಳಸಿದರೆ ಕಜ್ಜಿ ಗುಣವಾಗುತ್ತದೆ.ಆದರೆ ನವೆ ಮತ್ತು ಗುಳ್ಳೆಗಳು ದೇಹದ ಪ್ರತಿಕ್ರಿಯೆಯಾದ್ದರಿಂದ ಇವುಗಳಿಗೆ ಬೇರೆ ಮುಲಾಮು ಮತ್ತು ಔಷಧಿಗಳು ಬೇಕಾಗುತ್ತವೆ.
     ಮೇಲೆ ವಿವರಿಸಿದ ಕಜ್ಜಿಯು ಸಾಮಾನ್ಯ ಬಗೆಯದ್ದಾಗಿದ್ದು, ಈ ರೀತಿ ಉಂಟಾದಾಗ ಮೈಮೇಲೆ ಹತ್ತರಿಂದ ಹದಿನೈದು ನುಸಿಗಳಿರುತ್ತವೆ.ಆದರೆ ದೇಹದ ರೋಗನಿರೋಧಕ ಶಕ್ತಿ ಬಹಳ ಕಡಿಮೆಯಿದ್ದರೆ, ಗಟ್ಟಿಯಾದ ಪದರಗಳಿರುವ ಮಚ್ಚೆಗಳಾಗುವ ತೀವ್ರ ಬಗೆಯ ಕಜ್ಜಿಯಾಗುತ್ತದೆ.ಇದನ್ನು ನಾರ್ವೇಜಿಯನ್ ಕಜ್ಜಿ ( Norwegian Scabies) ಅಥವಾ ಕ್ರಸ್ಟೆಡ್ ಸ್ಕೇಬೀಸ್ ( Crusted Scabies)ಎನ್ನುತ್ತಾರೆ.ಈ ಬಗೆಯ ಕಜ್ಜಿಯಲ್ಲಿ ಮೈಮೇಲೆ ಸಾವಿರಾರು ನುಸಿಗಳಿರುತ್ತವೆ.ಇದಕ್ಕೆ ತೀವ್ರ ಚಿಕಿತ್ಸೆ ಬೇಕಾಗುತ್ತದೆ.ಮುಲಾಮಿನ ಜೊತೆಗೆ ಮಾತ್ರೆಗಳೂ ಬೇಕಾಗುತ್ತವೆ.
     ಕಜ್ಜಿಯು ಪ್ರಾಣಿಗಳಿಂದಲೂ ನಮಗೆ ಅಂಟಬಹುದು.ಮುಖ್ಯವಾಗಿ ಕಜ್ಜಿ ನಾಯಿಗಳಿಂದ ಅಂಟುತ್ತದೆ.ಆದ್ದರಿಂದ ನಾಯಿಯೊಂದಿಗೆ ಒಡನಾಡುವವರು ಎಚ್ಚರವಾಗಿರಬೇಕು ಹಾಗೂ ಅದಕ್ಕೆ ಕಜ್ಜಿ ಬಂದಿದೆ ಎಂದು ಸಂಶಯವಾದರೆ ಪಶುವೈದ್ಯರಿಗೆ ತೋರಿಸಬೇಕು.
     ಕಜ್ಜಿಯು ಒಬ್ಬರಿಂದೊಬ್ಬರಿಗೆ ಅಂಟುವುದರಿಂದ, ಕೆಲವೊಮ್ಮೆ ಒಬ್ಬರಿಗೆ ಚಿಕಿತ್ಸೆ ಮಾಡಿದರೂ ಅವರಿಂದ ಅವರ ಸಮೀಪವರ್ತಿಗಳಿಗೆ ಅಂಟಿ ರೋಗಲಕ್ಷಣಗಳು ಕಾಣಿಸಿಕೊಳ್ಳದೇ ಅವರಿಂದ ಪುನಃ ಇವರಿಗೇ ಅಂಟಬಹುದು.ಹೀಗಾದಾಗ ಅದಕ್ಕೆ ಪಿಂಗ್ ಪಾಂಗ್ ಪರಿಣಾಮ ( Ping pong effect) ಎನ್ನುತ್ತಾರೆ.ಇದನ್ನು ತಪ್ಪಿಸಲು, ರೋಗಿಯ ಸಮೀಪವರ್ತಿಗಳಿಗೂ ಚಿಕಿತ್ಸೆ ಮಾಡಬೇಕಾಗುತ್ತದೆ.ಸಾಮಾನ್ಯವಾಗಿ ಹಾಸ್ಟೆಲ್,ಶಾಲೆ, ಜೈಲುಗಳಲ್ಲಿ ಹಾಗೂ  ಮನೆಗಳಲ್ಲಿ ಸಮೀಪವರ್ತಿಗಳಿಗೆ ಹೀಗೆ ಮಾಡಬೇಕಾಗುತ್ತದೆ.
       ಕೆಲವೊಮ್ಮೆ ಶುಭ್ರವಾಗಿರುವವರಲ್ಲಿ ಕಜ್ಜಿಯಾದಾಗ ಅದರ ಲಕ್ಷಣಗಳು ಬಹಳ ಕಡಿಮೆಯಿರುತ್ತವೆ.ಇದನ್ನು ಅಡಗಿದ ಕಜ್ಜಿ ( Hidden Scabies) ಎನ್ನುತ್ತಾರೆ.ಅಂತೆಯೇ ಸ್ಟಿರಾಯ್ಡ್ ಮುಲಾಮು ಬಳಸಿ, ಇಲ್ಲವೇ ತಪ್ಪಾದ ಸ್ವಯಂ ಚಿಕಿತ್ಸೆ  ಮಾಡಿಕೊಂಡರೆ ರೋಗ ಲಕ್ಷಣಗಳು ಸ್ಪಷ್ಟವಾಗಿರದೇ ಬೇರೆಯೇ ರೀತಿ ಇರುತ್ತವೆ.ಇದನ್ನು ಛದ್ಮ ಕಜ್ಜಿ  ( Scabies incognito) ಎನ್ನುತ್ತಾರೆ.ಹಾಗಾಗಿ ಮೈಯೆಲ್ಲಾ ಕೆರೆತವಾದರೆ, ಅದರಲ್ಲೂ ರಾತ್ರಿಯಲ್ಲಿ ಹೆಚ್ಚಾಗಿದ್ದರೆ, ಚರ್ಮವೈದ್ಯರಿಗೆ ತೋರಿಸಬೇಕು.ಕಜ್ಜಿಯು ಅಂಟುರೋಗವಾಗಿರುವುದರಿಂದ ಶುಭ್ರವಾಗಿರುವವರಲ್ಲೂ ಬರಬಹುದು.
       ಹೀಗೆ, ಕಜ್ಜಿ ಒಂದು ಸಾಮಾನ್ಯವಾದ ಸೌಮ್ಯ ಚರ್ಮರೋಗ.ಇದಕ್ಕೆ ಹೆದರದೇ ಬೇಗನೆ ಸೂಕ್ತ ಚಿಕಿತ್ಸೆ ಮಾಡಿಸಿಕೊಳ್ಳಬೇಕು.ಇಲ್ಲವಾದರೆ ಇದು ಇತರರಿಗೂ ಹರಡಿ, ಕೆರೆತದಿಂದ ಇತರ ಸಮಸ್ಯೆಗಳೂ ಉಂಟಾಗುತ್ತವೆ.