ಬುಧವಾರ, ಸೆಪ್ಟೆಂಬರ್ 16, 2026

ಸಂಸ್ಕೃತ ಸ್ವಾರಸ್ಯಗಳು - ಗಣೇಶ ಸ್ತುತಿ

ಅಗಜಾನನಪದ್ಮಾರ್ಕಂ ಗಜಾನನಮಹರ್ನಿಶಂ ।
ಅನೇಕದಂತಂ ಭಕ್ತಾನಾಂ ಏಕದಂತಮುಪಾಸ್ಮಹೇ ।।

     ನಾವು ಗಣೇಶನ ಪೂಜೆಯ ಸಮಯದಲ್ಲಿ ಸಾಮಾನ್ಯವಾಗಿ ಈ ಶ್ಲೋಕವನ್ನು ಹೇಳಿಕೊಳ್ಳುತ್ತೇವೆ.‌ ಇದರ ಅರ್ಥವನ್ನು ನೇರವಾಗಿ ನೋಡಿದರೆ ವಿಚಿತ್ರವೂ ಅಸಂಬದ್ಧವೂ ಆಗಿದೆಯೆನಿಸುತ್ತದೆ. ಅದು ಹೀಗಾಗುತ್ತದೆ - ' ಅಗಜಾನನೂ, ಅಂದರೆ ಗಜಾನನನಲ್ಲದವನೂ ಸೂರ್ಯನನ್ನು ಕಂಡ ಕಮಲವೂ  ಆಗಿರುವ, ಅನೇಕದಂತಗಳನ್ನುಳ್ಳವನೂ ಏಕದಂತನೂ ಆಗಿರುವ‌ ಗಜಾನನನನ್ನು ಅಹರ್ನಿಶಿ, ಅಂದರೆ ಹಗಲೂ ರಾತ್ರಿಯೂ ಉಪಾಸಿಸುತ್ತೇವೆ!' 
     ಇದು ಹೇಗೆ ಸಾಧ್ಯ? ಗಜಾನನನಲ್ಲದವನೂ ಗಜಾನನನೂ ಎರಡೂ ಆಗಿರಲು ಹೇಗೆ ಸಾಧ್ಯ? ಅನೇಕ ದಂತಗಳನ್ನುಳ್ಳವನೂ ಏಕದಂತನೂ ಏಕಕಾಲದಲ್ಲಿ ಆಗಿರುವುದು ಹೇಗೆ ಸಾಧ್ಯ? ಹೀಗೆ ಇದು ಅಸಂಬದ್ಧವೆನಿಸುತ್ತದೆ.
    ಆದರೆ ಸೂಕ್ಷ್ಮವಾಗಿ ಈ ಶ್ಲೋಕವನ್ನು ಓದಿದಾಗ ಕವಿಯ ಚಮತ್ಕಾರ ತಿಳಿಯುತ್ತದೆ! ಶ್ಲೋಕದ ಪದಚ್ಛೇದವನ್ನು ಬೇರೆ ರೀತಿಯಲ್ಲಿ ಮಾಡಿದಾಗ ಸರಿಯಾದ ಅರ್ಥ ಬರುತ್ತದೆ! ಅದನ್ನು ನೋಡಿ -
ಅಗ- ನ ಗಚ್ಛತಿ ಇತಿ ಆಗ: , ಅಂದರೆ, ಗಮನ ಅಥವಾ ಚಲನೆಯಿಲ್ಲದುದು ಅಗ, ಅಂದರೆ ಪರ್ವತ, ಅಂದರೆ ಹಿಮವಂತ 
ಅಗಜಾ - ಅಗ ಅಥವಾ ಹಿಮವಂತನ ಮಗಳು, ಪಾರ್ವತಿ 
ಆನನ - ಮುಖ 
ಪದ್ಮಾರ್ಕಂ - ಸೂರ್ಯನನ್ನು ಕಂಡ ಪದ್ಮ ಅಥವಾ ಕಮಲಪುಷ್ಪ 
ಗಜಾನನಂ - ಗಜಾನನನನ್ನು 
ಅಹರ್ನಿಶಂ - ಹಗಲೂ ರಾತ್ರಿಯೂ 
ಅನೇಕ ದಂ - ಅನೇಕ ಅಭೀಷ್ಟಗಳನ್ನು ಕೊಡುವವನನ್ನು 
ತಂ - ಅವನನ್ನು 
ಭಕ್ತಾನಾಂ - ಭಕ್ತರಿಗೆ 
ಏಕದಂತನನ್ನು- ಏಕದಂತನನ್ನು 
ಉಪಾಸ್ಮಹೇ - ನಾವು ಉಪಾಸಿಸುತ್ತೇವೆ 
     ಈಗ ಈ ಶ್ಲೋಕದ ಅರ್ಥ ಹೀಗಾಗುತ್ತದೆ - ' ಯಾರನ್ನು ನೋಡಿದ ಕೂಡಲೇ ಮಾತೆ ಪಾರ್ವತಿಯ ಮುಖ, ಸೂರ್ಯನನ್ನು ಕಂಡ ಕಮಲದಂತೆ ಅರಳುವುದೋ, ಯಾರು ತನ್ನ ಭಕ್ತರಿಗೆ ಅನೇಕ ಅಭೀಷ್ಟಗಳನ್ನು ನೀಡುವನೋ,  ಏಕದಂತನಾದ ಆ ಗಜಾನನನನ್ನು ನಾವು ಹಗಲೂ ರಾತ್ರಿಯೂ ಉಪಾಸಿಸುತ್ತೇವೆ!' 
     ಸಂಸ್ಕೃತದಲ್ಲಿ ಇಂಥ ಅನೇಕ ಸ್ವಾರಸ್ಯಕರ ಚಮತ್ಕಾರ ಶ್ಲೋಕಗಳಿವೆ! 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ