ಭಾನುವಾರ, ಜನವರಿ 18, 2026

ನೆನಪಿಗೆ ಬಂದ ರಾಮಾಯಣಗಳು

ನೆನಪಿಗೆ ಬಂದ ರಾಮಾಯಣಗಳು,ರಾಮಕಥೆಗಳು

ವಾಲ್ಮೀಕಿ ರಾಮಾಯಣ(ಸಂಸ್ಕೃತ)
ಅದ್ಭುತ ರಾಮಾಯಣ(ಸಂಸ್ಕೃತ)
ಆನಂದ ರಾಮಾಯಣ(ಸಂಸ್ಕೃತ)
ಅಧ್ಯಾತ್ಮ ರಾಮಾಯಣ(ಸಂಸ್ಕೃತ)
ತತ್ವಸಂಗ್ರಹ ರಾಮಾಯಣ(ಸಂಸ್ಕೃತ)
ಕಾಳಿದಾಸನ ರಘುವಂಶ(ಸಂಸ್ಕೃತ)
ಕುಮಾರದಾಸನ ಜಾನಕೀರಹಣ(ಸಂಸ್ಕೃತ,ಶ್ರೀಲಂಕಾ)
ಭಾಸನ ಪ್ರತಿಮಾನಾಟಕ(ಸಂಸ್ಕೃತ ನಾಟಕ)
ಭಾಸನ ಅಭಿಷೇಕ ನಾಟಕ(ಸಂಸ್ಕೃತ ನಾಟಕ)
ಶಕ್ತಿಭದ್ರನ ಆಶ್ಚರ್ಯ ಚೂಡಾಮಣಿ(ಸಂಸ್ಕೃತ ನಾಟಕ)
ಭವಭೂತಿಯ ಮಹಾವೀರಚರಿತ(ಸಂಸ್ಕೃತ ನಾಟಕ)
ಭವಭೂತಿಯ ಉತ್ತರರಾಮಚರಿತ(ಸಂಸ್ಕೃತ ನಾಟಕ)
ಹನುಮಂತನ ಹನೂಮನ್ನಾಟಕ(ಸಂಸ್ಕೃತ ನಾಟಕ)
ಭಾಸ್ಕರಭಟ್ಟನ ಉನ್ಮತ್ತರಾಘವ(ಸಂಸ್ಕೃತ ನಾಟಕ)
ಜಯದೇವನ ಪ್ರಸನ್ನರಾಘವ(ಸಂಸ್ಕೃತ ನಾಟಕ)
ಮುರಾರಿಯ ಅನರ್ಘರಾಘವ(ಸಂಸ್ಕೃತ ನಾಟಕ)
ರಾಜಶೇಖರನ ಬಾಲರಾಮಾಯಣ(ಸಂಸ್ಕೃತ ನಾಟಕ)
ಮಾಯುರಾಜನ ಉದಾತ್ತರಾಘವ(ಸಂಸ್ಕೃತ ನಾಟಕ)
ರಾಮಭದ್ರದೀಕ್ಷಿತನ ಜಾನಕೀಪರಿಣಯ(ಸಂಸ್ಕೃತ ನಾಟಕ)
ಅದ್ಭುತದರ್ಪಣ(ಸಂಸ್ಕೃತ ನಾಟಕ)
ಕೃತ್ಯಾರಾವಣ(ಸಂಸ್ಕೃತ ನಾಟಕ)
ಸೇತುಬಂಧ(ಪ್ರಾಕೃತ)
ದಶರಥ ಜಾತಕ(ಪಾಲೀ ಬೌದ್ಧ ರಾಮಕಥೆ)
ವಿಮಲಸೂರಿಯ ಪಉಮಚರಿಯ ಅಥವಾ ಪದ್ಮಚರಿತ ಅಥವಾ ಪದ್ಮಪುರಾಣ(ಪ್ರಾಕೃತ ಜೈನರಾಮಾಯಣ)
ತುಳಸೀದಾಸರ ರಾಮಚರಿತಮಾನಸ(ಅವಧೀ-ಹಳೇಹಿಂದೀ)
ಕುಮಾರವಾಲ್ಮೀಕಿಯ ತೊರವೆ ರಾಮಾಯಣ(ಕನ್ನಡ)
ಬತ್ತಲೇಶ್ವರ ರಾಮಾಯಣ(ಕನ್ನಡ)
ಮುದ್ದಣನ ಅದ್ಭುತರಾಮಾಯಣ(ಕನ್ನಡ)
ಮುದ್ದಣನ ರಾಮಾಶ್ವಮೇಧ ನಾಟಕ(ಕನ್ನಡ)
ಕುವೆಂಪುರವರ ರಾಮಾಯಣದರ್ಶನಂ(ಕನ್ನಡ)
ನಾಗಚಂದ್ರಅಥವಾ ಅಭಿನವ ಪಂಪನ ರಾಮಚಂದ್ರಚರಿತಪುರಾಣ(ಕನ್ನಡ)
ಗಿರಿಧರ ರಾಮಾಯಣ(ಗುಜರಾತೀ)
ಮಾಧವಕಂದಲೀಯ ರಾಮಾಯಣ(ಅಸ್ಸಾಮೀ)
ಸರಳಾದಾಸ್ ರ ವಿಲಂಕರಾಮಾಯಣ(ಒಡಿಸ್ಸೀ)
ರಂಗನಾಥ ರಾಮಾಯಣ(ತೆಲುಗು)
ಭಾವಾರ್ಥ ರಾಮಾಯಣ(ಮರಾಠೀ)
ಕಂಬರಾಮಾಯಣ(ತಮಿಳು)
ಏಳುತಚ್ಚನ್ ನ ಅಧ್ಯಾತ್ಮರಾಮಾಯಣ(ಮಲಯಾಳಂ)
ಕೃತ್ತಿವಾಸ ರಾಮಾಯಣ(ಬಂಗಾಳಿ)
ರಾಮಾವತಾರಚರಿತ್ರ(ಕಾಶ್ಮೀರಿ)
ಗೋವಿಂದರಾಮಾಯಣ(ಪಂಜಾಬಿ)
ರಾಧೇಶ್ಯಾಂ ರಾಮಾಯಣ(ನೇಪಾಳೀ)
ರಾಮಕೀನ್(ಥೈಲ್ಯಾಂಡ್)
ಕಕವಿನ್ ರಾಮಾಯಣ(ಇಂಡೋನೇಷ್ಯಾ)
ಮಹಾರಾಡಿಯಾ ಲವಾನಾ(ಫಿಲಿಪೈನ್ಸ್)
ಫ್ರಾಲಂ ಫ್ರಾಲಕ್(ಲಾವೋಸ್)
ರೀಮ್ ಕೇರ್(ಕಾಂಬೋಡಿಯಾ)
ಹಿಕಾಯತ್ ಸೆರಿ ರಾಮಾಯಣ(ಮಲೇಶಿಯಾ)
ರಾಮ ವತ್ತು,ತಿರಿ ರಾಮ(ಬರ್ಮ)

ಗುರುವಾರ, ಜನವರಿ 15, 2026

ರಾಮಾಯಣದ ಉಪಕಥೆಗಳು

ಇತ್ತೀಚೆಗಷ್ಟೇ ರಾಮಾಯಣದ ಉಪಕಥೆಗಳು ಎಂಬ ನನ್ನ ಹೊಸ ಪುಸ್ತಕ, ಸಪ್ನ ಬುಕ್ ಹೌಸ್ ನಿಂದ ಬಿಡುಗಡೆಯಾಗಿದೆ. ಇದು ಸಪ್ನ ಬುಕ್ ಹೌಸ್ ನ ಎಲ್ಲಾ ಶಾಖೆಗಳಲ್ಲೂ, ಅಂತೆಯೇ ನವಕರ್ನಾಟಕ, ಅಂಕಿತ, ರಾಷ್ಟ್ರೋತ್ಥಾನ ಸಾಹಿತ್ಯ, ಹರಿವು ಬುಕ್ಸ್ ಮೊದಲಾದ ಸುಪ್ರಸಿದ್ಧ ಪುಸ್ತಕ ಮಳಿಗೆಗಳಲ್ಲೂ ದೊರೆಯುತ್ತದೆ. ಈ ಕಥಾಸಂಕಲನದಲ್ಲಿ ವಾಲ್ಮೀಕಿ ರಾಮಾಯಣದಲ್ಲಿ ಬರುವ ಎಲ್ಲಾ ಉಪಕಥೆಗಳನ್ನೂ ಸಂಗ್ರಹಿಸಿ ಸರಳ ಕನ್ನಡದಲ್ಲಿ ನಿರೂಪಿಸಿದ್ದೇನೆ. 
      ನಮ್ಮ ಆರ್ಷ ಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ, ಮುಖ್ಯವಾಗಿ ಶ್ರೀ ರಾಮನ ಕಥೆ ಹಾಗೂ ಕೌರವ, ಪಾಂಡವರ ಕಥೆಗಳನ್ನು ಹೇಳಿದರೂ ಇವುಗಳಲ್ಲಿ ಬಹಳಷ್ಟು ಉಪಕಥೆಗಳು ಬರುತ್ತವೆ. ಉಪಕಥೆ ಅಥವಾ ಉಪಾಖ್ಯಾನ ಎಂದರೆ, ಮುಖ್ಯಕಥೆಯ ಮಧ್ಯೆ ಬರುವ ಇತರ ಕಥೆಗಳು. ಈ ಕಥೆಗಳನ್ನು ಮುಖ್ಯ ಕಥೆಯ ಪಾತ್ರಗಳೇ ಸಂದರ್ಭೋಚಿತವಾಗಿ ಹೇಳುತ್ತವೆ. ರಾಮಾಯಣದಲ್ಲಿ, ವಿಶ್ವಾಮಿತ್ರರು ತಮ್ಮ ಯಜ್ಞ ಸಂರಕ್ಷಣೆಗಾಗಿ ರಾಮ, ಲಕ್ಷ್ಮಣರನ್ನು ಕರೆದೊಯ್ದಾಗ ದಾರಿಯಲ್ಲಿ ತಾಟಕಿ ಎಂಬ ರಾಕ್ಷಸಿ ಸಿಕ್ಕಾಗ ಅವಳ ಪೂರ್ವಕಥೆಯನ್ನು ಹೇಳುತ್ತಾರೆ. ಅನಂತರ, ಅವರು ಸಿದ್ಧಾಶ್ರಮ ಎಂಬ ಆಶ್ರಮದ ಬಳಿ ಬಂದಾಗ, ಆ ಆಶ್ರಮದಲ್ಲೇ ಮಹಾವಿಷ್ಣುವಿನ ವಾಮನಾವತಾರ ನಡೆದಿತ್ತೆಂದು ಹೇಳುತ್ತಾ ಆ ಕಥೆಯನ್ನು ಹೇಳುತ್ತಾರೆ. ಹೀಗೆಯೇ ಗಂಗಾನದಿಯ ಬಳಿ ಬಂದಾಗ, ಗಂಗಾನದಿ ಹೇಗೆ ಸ್ವರ್ಗದಿಂದ ಭೂಮಿಗೆ ಇಳಿದು ಬಂದಳು, ಅದಕ್ಕಾಗಿ ಭಗೀರಥನು ಎಷ್ಟು ಕಷ್ಟಪಟ್ಟ ಎಂಬ ಗಂಗಾವತರಣದ ದೀರ್ಘ ಕಥೆ ಹೇಳುತ್ತಾರೆ.ಈ ಸಂದರ್ಭದಲ್ಲೇ ಗಂಗೆಯ ಹಿರಿಯ ಸಹೋದರಿಯಾದ ಪಾರ್ವತಿಯನ್ನು ಶಿವನಿಗೆ ಕೊಟ್ಟು ಮದುವೆ ಮಾಡಲಾಯಿತು ಎನ್ನುತ್ತಾ ಅವರಿಗೆ ಕಾರ್ತಿಕೇಯನು ಹೇಗೆ ಹುಟ್ಟಿದ ಎಂಬ ಕಥೆ ಹೇಳುತ್ತಾರೆ. ಮುಂದೆ ಅವರು ವಿಶಾಲಾ ಎಂಬ ನಗರಿಗೆ ಬರಲು, ಆ ನಗರಿ ಇದ್ದ ಸ್ಥಳದಲ್ಲಿ ಹಿಂದೆ ಕಶ್ಯಪರ ಪತ್ನಿ ದಿತಿ ತಪಸ್ಸು ಮಾಡಿ ಮರುತ್ತರೆಂಬ ದೇವತೆಗಳನ್ನು ಮಕ್ಕಳಾಗಿ ಪಡೆದುಕೊಂಡ ಕಥೆ, ಅವಳು ಏಕೆ ತಪಸ್ಸು ಮಾಡಿದಳು ಎನ್ನುವುದಕ್ಕೆ ಪೂರ್ವಕಥೆಯಾಗಿ ಸಮುದ್ರಮಥನದ ಕಥೆ, ಇವನ್ನು ವಿಶ್ವಾಮಿತ್ರರು ಹೇಳುತ್ತಾರೆ. ಅನಂತರ ಗೌತಮರ ಆಶ್ರಮಕ್ಕೆ ಬರಲು, ಇಂದ್ರ ಮತ್ತು ಅಹಲ್ಯೆಯ ಕಥೆ ಹೇಳುತ್ತಾರೆ. ಮುಂದೆ ಅವರು ಮಿಥಿಲೆಗೆ ಹೋದಾಗ, ಅಲ್ಲಿ ಜನಕನ ಪುರೋಹಿತರಾಗಿದ್ದ ಗೌತಮರ ಪುತ್ರರಾದ ಶತಾನಂದರು ವಿಶ್ವಾಮಿತ್ರರ ಕಥೆಯನ್ನೇ ರಾಮ, ಲಕ್ಷ್ಮಣರಿಗೆ ಹೇಳುತ್ತಾರೆ. ರಾಜರಾಗಿದ್ದ ವಿಶ್ವಾಮಿತ್ರರು ಹೇಗೆ ಬ್ರಹ್ಮರ್ಷಿಗಳಾದರು ಎನ್ನುವುದು ಒಂದು ಸುದೀರ್ಘ ಹಾಗೂ ರೋಚಕ ಕಥಾನಕ. ಈ ದೊಡ್ಡ ಕಥೆಯ ಮಧ್ಯೆ, ತ್ರಿಶಂಕುವಿನ ಕಥೆ, ಮೇನಕೆಯ ಕಥೆ, ಶುನಶ್ಶೇಫನ ಕಥೆ, ಮೊದಲಾದ ಉಪೋಪಕಥೆಗಳೂ ಬರುತ್ತವೆ. ರಾಮಾಯಣದ ಕಥೆ ಮುಂದುವರೆದಂತೆ, ಜಟಾಯು, ಸಂಪಾತಿಗಳ ಕಥೆ, ವಾಲಿ, ಸುಗ್ರೀವರ ಪೂರ್ವಕಥೆಗಳು ಬರುತ್ತವೆ. ರಾಮಾಯಣದಲ್ಲಿ ಮುಖ್ಯವಾಗಿ ಉಪಕಥೆಗಳು ಇರುವುದು ಬಾಲಕಾಂಡದಲ್ಲಿ. ಅನಂತರ ನಮಗೆ ಉಪಕಥೆಗಳು ಹೆಚ್ಚಾಗಿ ಸಿಗುವುದು ಉತ್ತರಕಾಂಡದಲ್ಲಿ. ಶ್ರೀ ರಾಮನು ಅಯೋಧ್ಯೆಗೆ ಹಿಂದಿರುಗಿ ಸಿಂಹಾಸನಾರೂಢನಾದಾಗ, ಅಗಸ್ತ್ಯಾದಿ ಮುನಿಗಳು ಬಂದು ಮಹಾಪರಾಕ್ರಮಿಯೂ ಲೋಕಕಂಟಕನೂ ಆಗಿದ್ದ ರಾವಣನನ್ನು ಕೊಂದುದಕ್ಕಾಗಿ ಅವನನ್ನು ಅಭಿನಂದಿಸುತ್ತಾರೆ. ಆದರೆ ಅವನು ರಾವಣನನ್ನು ಕೊಂದುದಕ್ಕಿಂತಲೂ ಅವನ ತಮ್ಮ ಲಕ್ಷ್ಮಣನು ರಾವಣನ ಪುತ್ರ ಇಂದ್ರಜಿತುವನ್ನು ಕೊಂದುದು ದೊಡ್ಡ ವಿಷಯ ಎನ್ನಲು ಅಚ್ಚರಿಗೊಂಡ ರಾಮನು ಅದು ಹೇಗೆ ಎನ್ನಲು ಅಗಸ್ತ್ಯರು ಇಂದ್ರಜಿತುವಿನ ಕಥೆಯನ್ನು ಹೇಳುವ ಮೊದಲು ರಾವಣನ ಸಮಗ್ರ ಪೂರ್ವ ಕಥೆಗಳನ್ನು ಹೇಳುತ್ತಾರೆ. ಈ ಭಾಗವಂತೂ ಅತ್ಯಂತ ರೋಚಕವಾಗಿದೆ. ಸಾಮಾನ್ಯವಾಗಿ ಯಾರಾದರೂ ರಾಮಾಯಣದ ಸ್ಥೂಲ ಕಥೆಯನ್ನು ತಿಳಿದಿರುತ್ತಾರಾದರೂ ರಾವಣನ ಮೂಲ ಇತಿಹಾಸ, ಅವನು ಯಾರ ಮಗ, ಅವನೇಕೆ ಅಷ್ಟು ದುಷ್ಟನಾದ, ಅವನಿಗೆ ಬ್ರಹ್ಮನಿಂದ ಬಂದ ವರ, ಅವನ ದಿಗ್ವಿಜಯಗಳು, ಸಾಕ್ಷಾತ್ ಯಮನೊಂದಿಗೇ ಅವನು ಮಾಡಿದ ರೋಚಕ ಯುದ್ಧ, ಅವನ ಸ್ತ್ರೀ ವ್ಯಾಮೋಹ, ಲೋಕಕಂಟಕತೆ, ಅವನಿಗೆ ಬಂದ ಶಾಪಗಳು, ಕೊನೆಗೆ ಅಂಥ ಮಹಾಪರಾಕ್ರಮಿಯಾದ ಅವನಿಗೂ ಆದ ಕೆಲವು ಪರಾಭವಗಳು, ಇವೆಲ್ಲವೂ ಬಹುತೇಕರಿಗೆ ಗೊತ್ತಿರದ ವಿವರಗಳು. ಇಂದಿಗೂ ಎಷ್ಟೋ ಮುಗ್ಧ ಜನರು ರಾವಣನು ಸೀತಾಪಹರಣವನ್ನು ಬಿಟ್ಟರೆ ಬೇರೇನೂ ತಪ್ಪೇ ಮಾಡಿಲ್ಲವೆಂದೂ ಸೀತೆಯನ್ನೂ ಅವನು ಬಲಾತ್ಕರಿಸದೇ ತನ್ನ ತಂಗಿ ಶೂರ್ಪನಖಿಗೆ ರಾಮ, ಲಕ್ಷ್ಮಣರು ಮಾಡಿದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ಸೀತಾಪಹರಣ ಮಾಡಿದನೆಂದೂ ವಾದಿಸುತ್ತಾರೆ. ಆದರೆ ಸ್ವಾರಸ್ಯವೆಂದರೆ, ರಾವಣನು ತನ್ನ ಸ್ವಂತ ತಂಗಿ ಶೂರ್ಪನಖಿಯ ಗಂಡನನ್ನೇ ಕೊಂದ ದುಷ್ಟ ಎನ್ನುವುದು! ಸೀತೆಯನ್ನು ಬಲಾತ್ಕರಿಸದಿದ್ದುದರ ಕಾರಣ, ಅವನಿಗಿದ್ದ ಶಾಪದ ಭಯ! ಈ ಅದ್ಭುತ ವಿಚಾರಗಳು ಇಲ್ಲಿ ಸಿಗುತ್ತವೆ. ಆದರೂ ಕೆಲವರು ಉತ್ತರಕಾಂಡವು ವಾಲ್ಮೀಕಿಕೃತವಲ್ಲ, ಹಾಗಾಗಿ ರಾವಣನ ಕುರಿತಾದ ಈ ಕಥೆಗಳೆಲ್ಲಾ ಸುಳ್ಳು ಎಂದು ವಾದಿಸುತ್ತಾರೆ. ಆದರೆ ರಾವಣನು ಸತ್ತಾಗ ಅವನ ಪಟ್ಟದ ರಾಣಿ ಮಂದೋದರಿಯೇ ರೋದಿಸುತ್ತಾ ಅವನು ಮಾಡಿದ ಪಾಪಕಾರ್ಯಗಳನ್ನೆಲ್ಲ ಹೇಳುತ್ತಾಳೆ. ಅಲ್ಲದೇ ಕೆ.ಎಸ್.ನಾರಾಯಣಾಚಾರ್ಯರೇ ಮೊದಲಾದ ವಿದ್ವಾಂಸರು ಉತ್ತರಕಾಂಡವೂ ವಾಲ್ಮೀಕಿ ಕೃತವೆಂದೇ ತೋರಿಸಿದ್ದಾರೆ. ಇಷ್ಟು ಪರಾಕ್ರಮಿಯಾದರೂ ರಾವಣನು ಇಂದ್ರನಿಗೆ ಸಿಕ್ಕುಬಿದ್ದಾಗ ಅವನ ಮಗ ಮೇಘನಾದನು ಅವನನ್ನು ಬಿಡಿಸಿ ಇಂದ್ರಜಿತ್ ಎಂಬ ಹೆಸರು ಪಡೆಯುತ್ತಾನೆ. ಹೀಗಾಗಿ ಅವನು ರಾವಣನಿಗಿಂತ ಹೆಚ್ಚಿನ ಪರಾಕ್ರಮಿಯಾಗಿರುತ್ತಾನೆ. ಶ್ರೀ ರಾಮನು ರಾವಣ, ಇಂದ್ರಜಿತ್ ಇಬ್ಬರ ಕಥೆಗಳನ್ನೂ ಕೇಳಿ ಇವರಿಬ್ಬರಿಗಿಂತಲೂ ಹನುಮಂತನು ಹೆಚ್ಚಿನ ಪರಾಕ್ರಮಿಯೆಂದು ಅಭಿಪ್ರಾಯ ಪಡುತ್ತಾ ಇಷ್ಟಾದರೂ ವಾಲಿ, ಸುಗ್ರೀವರಿಗೆ ವಿರೋಧವಾದಾಗ ಅವನೇಕೆ ಸುಮ್ಮನಿದ್ದನು ಎಂದು ಕೇಳಲು, ಅಗಸ್ತ್ಯರು ಹನುಮಂತನ ಬಾಲ್ಯದ ಕಥೆಯನ್ನು ಹೇಳಿ ಅವನಿಗೆ ಬಂದ ಶಾಪದ ಬಗ್ಗೆ ಹೇಳುತ್ತಾರೆ. ಅನಂತರ, ದಂಡಕಾರಣ್ಯದ ಕಥೆ, ತನ್ನ ಹೆಣವನ್ನು ತಾನೇ ತಿನ್ನಬೇಕಾದ ಶ್ವೇತನೆಂಬ ರಾಜನ ವಿಚಿತ್ರ ಕಥೆ, ಗೋಸುಂಬೆಯಾಗಿ ಹುಟ್ಟುವ ನೃಗ ಮಹಾರಾಜನ ಕಥೆ, ಪುರುಷನಾಗಿದ್ದು ಸ್ತ್ರೀಯಾಗುವ ಇಲರಾಜನ ಕಥೆ, ವೃದ್ಧಾಪ್ಯದ ಶಾಪ ಪಡೆಯುವ ಯಯಾತಿಯ ಕಥೆ, ಹೀಗೆ ಹಲವಾರು ರೋಚಕ ಕಥೆಗಳು ಬರುತ್ತವೆ. ಕೆಲವು ಕಥೆಗಳನ್ನು ರಾಮ, ಲಕ್ಷ್ಮಣರು ಪರಸ್ಪರ ಹೇಳಿಕೊಳ್ಳುತ್ತಾರೆ. 
      ಕಥೆಗಳ ಬೃಹತ್ ಗಣಿಯಾದ ಮಹಾಭಾರತದಲ್ಲಿ ಬರುವಷ್ಟು ಉಪಕಥೆಗಳು ರಾಮಾಯಣದಲ್ಲಿ ಇಲ್ಲವಾದರೂ ಒಂದು ಒಳ್ಳೆಯ ಕಥಾಸಂಕಲನಕ್ಕೆ ಆಗುವಷ್ಟು ಉಪಕಥೆಗಳು ರಾಮಾಯಣದಲ್ಲಿ ಇವೆ. ಈ ಕಥೆಗಳನ್ನು ಸಂಗ್ರಹಿಸಿ ನಿರೂಪಿಸುವಾಗ, ಅವುಗಳನ್ನು ಯಾರು, ಯಾರಿಗೆ ಯಾವ ಸಂದರ್ಭದಲ್ಲಿ ಹೇಳಿದರು ಎಂಬುದನ್ನು ಸೂಚಿಸಿದ್ದೇನೆ. ಇದರಿಂದ, ರಾಮಾಯಣದ ಒಂದು ಪುಟ್ಟ ಪಯಣವನ್ನು ಮಾಡಿದಂತೆಯೂ ಆಗುತ್ತದೆ. 
      ಕಥೆಗಳು ಅಥವಾ ಪುಸ್ತಕಗಳು ಎಂದರೆ ಈಗ ಕೇವಲ ಸಾಮಾಜಿಕ ಕಥೆ ಕಾದಂಬರಿಗಳಷ್ಟೇ ಎಂಬ ಭಾವನೆ ಬಂದುಬಿಟ್ಟಿದೆ. ಇವು ಶ್ರೇಷ್ಠವೇ, ಇಲ್ಲವೆಂದೇನಿಲ್ಲ. ಆದರೆ ಯುರೋಪಿನ ಮೂಲದಿಂದ ಬಂದ ಈ ಸಾಹಿತ್ಯ ಪ್ರಕಾರ ಹೇಗೆ ಚೆನ್ನಾಗಿರುವುದೋ, ಹಾಗೆಯೇ ಭಾರತೀಯ ಮೂಲದ ಕಥಾಪರಂಪರೆಯನ್ನೂ ನಾವು ಗೌರವಿಸಬೇಕು ಹಾಗೂ ಆಸ್ವಾದಿಸಬೇಕು. ನಮ್ಮ ಕಥಾಪರಂಪರೆ ಬಹಳ ದೊಡ್ಡದು. ವೇದಗಳು, ಉಪನಿಷತ್ತುಗಳು, ರಾಮಾಯಣ, ಮಹಾಭಾರತ, ಹದಿನೆಂಟು ಪುರಾಣಗಳು, ಹದಿನೆಂಟು ಉಪಪುರಾಣಗಳು, ಸ್ಥಳಪುರಾಣಗಳು, ಬೃಹತ್ಕಥೆ ಆಧರಿತ ಕಥಾಸರಿತ್ಸಾಗರ, ಪಂಚತಂತ್ರ, ಹಿತೋಪದೇಶ, ಬೇತಾಳ ಪಂಚವಿಂಶತಿ, ಪುರುಷಪರೀಕ್ಷಾ, ಶುಕಸಪ್ತತಿ, ಬೌದ್ಧ ಜಾತಕ ಕಥೆಗಳು, ಬೌದ್ಧ ಅವದಾನ ಕಥೆಗಳು, ಬೃಹತ್ ಕಥಾಕೋಶ, ವಡ್ಡಾರಾಧನೆ, ಪುಣ್ಯಾಸ್ರವ, ಧರ್ಮಾಮೃತ, ಮೊದಲಾದ ಬಹಳಷ್ಟು ಜೈನ ಕಥಾ ಕೋಶಗಳು, ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ! ಈ ಎಲ್ಲಾ ಗ್ರಂಥಗಳಲ್ಲಿ ವಿಪುಲ ಕಥಾಸಾಮಗ್ರಿ ಇದೆ. ಇವನ್ನೆಲ್ಲಾ ಓದಿದರೆ, ಕಾಂತಾರ, ಬಾಹುಬಲಿಗಳಂಥ ಇನ್ನಷ್ಟು ಮತ್ತಷ್ಟು ಅದ್ಭುತ ಫ್ಯಾಂಟಸಿ ಚಿತ್ರಗಳನ್ನು ನಿರ್ಮಿಸಬಹುದು.
     ಇಂಥ ಕೆಲವು ಕಥಾಸಂಕಲನಗಳನ್ನು ನಾನು ಸಂಸ್ಕೃತದಿಂದ ಕನ್ನಡಕ್ಕೆ ತಂದಿದ್ದೇನೆ. ಇನ್ನೂ ತರುತ್ತಿದ್ದೇನೆ. ಇದೀಗ ರಾಮಾಯಣದ ಉಪಕಥೆಗಳು ಬಂದಿದೆ. ಮಹಾಭಾರತದ ಉಪಕಥೆಗಳು ಸಿದ್ಧವಾಗುತ್ತಿದೆ. ನನ್ನ ಈ ಪುಸ್ತಕಗಳನ್ನು ಖರೀದಿಸಿ ಓದುವುದರ ಮೂಲಕ ನನ್ನನ್ನು ಪ್ರೋತ್ಸಾಹಿಸಿ ಎಂದು ಕೋರುತ್ತೇನೆ.
      ಈ ಪುಸ್ತಕವನ್ನು ಸುವಿಖ್ಯಾತ ಪ್ರಕಾಶನ ಸಂಸ್ಥೆಯಾದ ಸಪ್ನ ಬುಕ್ ಹೌಸ್ ಅತ್ಯಂತ ಸೊಗಸಾಗಿ ಪ್ರಕಟಿಸಿದೆ. ಹಾಗೆಯೇ ಮುಖಪುಟದ ಚಿತ್ರ ಮತ್ತು ಒಳಪುಟಗಳ ಚಿತ್ರಗಳನ್ನು ಕಲಾವಿದರಾದ ಮೋನಪ್ಪ ಅವರು ಬಹಳ ಸೊಗಸಾಗಿ ಚಿತ್ರಿಸಿದ್ದಾರೆ. ಮುದ್ರಕರು ಸೊಗಸಾಗಿ ಮುದ್ರಿಸಿದ್ದಾರೆ. ಇದು ಕಿರಿಯರಿಗೆ, ಹಾಗೂ ಹಿರಿಯರಿಗೆ ಇಬ್ಬರಿಗೂ ಬಹಳ ಇಷ್ಟವಾಗುವುದರಲ್ಲಿ ಸಂದೇಹವೇ ಇಲ್ಲ. ಈ ನನ್ನ ಪ್ರಯತ್ನವನ್ನು ಪ್ರೋತ್ಸಾಹಿಸಿ ಪ್ರಕಟಿಸಿದ ಸಪ್ನ ಬುಕ್ ಹೌಸ್ ನ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ದೊಡ್ಡೆಗೌಡರಿಗೆ, ಪ್ರಧಾನ ಮುಖ್ಯಸ್ಥರಾದ ಶ್ರೀ ನಿತಿನ್ ಷಾ ಅವರಿಗೆ, ಕಲಾವಿದ ಮೋನಪ್ಪ ಅವರಿಗೆ, ದಿವ್ಯ ಪ್ರಿಂಟ್ರಾನಿಕ್ಸ್ ಡಿ ಟಿ ಪಿ ಆಪರೇಟರ್ ರಾಮಕೃಷ್ಣರಿಗೆ, ಇವರೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ.

ಸೋಮವಾರ, ಡಿಸೆಂಬರ್ 29, 2025

ಜಬಲ್ ಪುರದ ಚೌಷಟ್ ಯೋಗಿನೀ ದೇವಾಲಯ

   

ಭಾರತವು ದೇವಾಲಯಗಳ ನಾಡು. ಭಾರತೀಯರ ಧರ್ಮ, ಸಂಸ್ಕೃತಿಗಳ ಅಭಿವ್ಯಕ್ತತೆ ದೇವಾಲಯಗಳ ಮೂಲಕ ಆಗುತ್ತಾ ಬಂದಿದೆ. ಇವುಗಳೊಂದಿಗೆ, ದೇವಾಲಯಗಳ ಮೂಲಕ, ಕಲೆಯೂ ಸೊಗಸಾಗಿ ಬೆಳೆದುಬಂದಿದೆ. ಹಲವಾರು ಪಂಥಗಳು ತಮ್ಮ ವಿಭಿನ್ನ, ವಿಶಿಷ್ಟ, ತತ್ವ, ಸಂಸ್ಕೃತಿಗಳನ್ನು ದೇವಾಲಯಗಳ ಮೂಲಕ ವ್ಯಕ್ತಪಡಿಸಿವೆ. ಶಿವ, ವಿಷ್ಣು, ಗಣೇಶ, ಆಂಜನೇಯ, ದುರ್ಗೆ, ಲಕ್ಷ್ಮಿ, ಮೊದಲಾದ ದೇವಿ,ದೇವಿಯರ ದೇವಾಲಯಗಳಿರುವಂತೆಯೇ ಕೋಟಿ ಚೆನ್ನಯ, ಭೂತರಾಜ, ಅಣ್ಣಪ್ಪ, ಮೊದಲಾದ ಭೂತ ಅಥವಾ ದೈವಸ್ಥಾನಗಳೂ ಇವೆ. ಅಂತೆಯೇ ತಾಂತ್ರಿಕ ಪಂಥದವರ ದೇವಾಲಯಗಳೂ ಹಲವಾರಿವೆ. ಈ ಸಾಲಿಞಲ್ಲೇ ಯೋಗಿನೀ ದೇವಾಲಯಗಳೆಂಬ ವಿಶಿಷ್ಟ ದೇವಾಲಯಗಳೂ ಸೇರುತ್ತವೆ. ಇಂಥ ಒಂದು ಚೌಷಟ್ ಯೋಗಿನೀ ದೇವಾಲಯವನ್ನು ಮಧ್ಯಪ್ರದೇಶದ ಜಬಲ್ ಪುರದ ಪ್ರವಾಸದ ವೇಳೆ ನೋಡುವ ಅವಕಾಶ ನನಗಾಯಿತು.
ಜಬಲ್ ಪುರ್ ನಗರದಿಂದ ಸುಮಾರು ಇಪ್ಪತ್ತೆರಡು ಕಿ.ಮೀ. ದೂರದಲ್ಲಿರುವ ಭೇಡಾಘಾಟ್ ನ ಬಳಿ ಈ ದೇವಾಲಯವಿದೆ. ನರ್ಮದಾ ಮತ್ತು ಬಾಣಗಂಗಾ ನದಿಗಳ ಸಂಗಮಸ್ಥಾನವಾದ ಭೇಡಾಘಾಟ್ ಒಂದು ಅದ್ಭುತ ತಾಣ. ಮೈನವಿರೇಳಿಸುವ ಅಮೃತಶಿಲೆಯ ಬೃಹತ್ ಬಂಡೆಗಳ ಮಧ್ಯೆ ಹರಿಯುವ ನರ್ಮದಾ ನದಿ, ಹಾಗೂ ಇದು ನಿರ್ಮಿಸಿರುವ ಧುವಾಂಧರ್ ಜಲಪಾತ ನೋಡಲು ಅತ್ಯಂತ ರಮಣೀಯ! ಅನೇಕ ಶತಮಾನಗಳ ಕಾಲ, ಭೇಡಾಘಾಟ್ ಗ್ರಾಮ ಒಂದು ತಾಂತ್ರಿಕ ಪೀಠವಾಗಿದ್ದು, ಮೂಲತಃ ಇದರ ಹೆಸರು ಭೈರವ ಘಾಟ್ ಆಗಿತ್ತೆಂದು ಹೇಳುತ್ತಾರೆ. ಕೆಲವರು ಭೇಡಾ ಎಂದರೆ ಸಂಗಮವೆಂದೂ ಹೇಳುತ್ತಾರೆ. ಇಲ್ಲಿ ಶಿವನನ್ನು ಮೆಚ್ಚಿಸಲು ಭೃಗು ಮಹರ್ಷಿಗಳು ಆತ್ಮಾರ್ಪಣೆ ಮಾಡಿಕೊಂಡರೆಂದು ಹೇಳುತ್ತಾರೆ. ಜಬಲ್ ಪುರ್ ಎಂಬ ಹೆಸರು ಬರಲು ಒಂದು ಐತಿಹ್ಯವಿದೆ. ನರ್ಮದಾ ನದಿಯ ದಂಡೆಯ ಮೇಲೆ ತಪಸ್ಸು ಮಾಡಿದ ಜಾಬಾಲಿ ಮಹರ್ಷಿಗಳಿಂದ ಜಾಬಾಲಿಪುರವೆಂಬ ಹೆಸರು ಬಂದು, ಅನಂತರ ಅದು ಜಬಲ್ ಪುರ್ ಆಯಿತಂತೆ. ಹಾಗಾಗಿ ಜಬಲ್ ಪುರ್, ಋಷಿಮುನಿಗಳ ತಪೋಭೂಮಿ.
ಚೌಷಟ್ ಯೋಗಿನೀ ದೇವಾಲಯ, ಒಂದು ಬೆಟ್ಟದ ಮೇಲಿದ್ದು, ಪ್ರಕೃತಿ ಸೌಂದರ್ಯದ ಮಧ್ಯೆ ಮೆಟ್ಟಿಲುಗಳನ್ನು ಹತ್ತುತ್ತಾ ತಲುಪಬೇಕು. 


ಈ ದೇವಾಲಯ ಒಂದು ರೀತಿಯ ಬಯಲು ದೇವಾಲಯವಾಗಿದ್ದು ಗೋಳಾಕೃತಿಯಲ್ಲಿದೆ, ಹಾಗೂ ಎಂಬತ್ತೊಂದು ಪ್ರತ್ಯೇಕ ಪ್ರತ್ಯೇಕ ಕೋಣೆಗಳನ್ನು ಹೊಂದಿದೆ. ಮುಖ್ಯವಾಗಿ ಒಂದು ಗೋಳಾಕೃತಿಯ ಗೋಡೆಯಿದ್ದು, ನಿಯಮಿತ ಅಂತರಗಳಲ್ಲಿ ಕಂಬಗಳನ್ನು ನಿರ್ಮಿಸಿ ಎಂಬತ್ತೊಂದು ಕೋಣೆಗಳನ್ನು ಕಟ್ಟಲಾಗಿದೆ. ಪ್ರತಿ ಕೋಣೆಯಲ್ಲೂ ಅತ್ಯಂತ ಸುಂದರವಾದ, ಕೆಂಪು ಮರಳುಗಲ್ಲಿನಲ್ಲಿ ಕೆತ್ತಿದ ದೇವಿಯರ ಮೂರ್ತಿಗಳಿವೆ. ಸುಂದರವಾದ ಅಂಗಸೌಷ್ಠವದಿಂದ ಕೂಡಿದ್ದು, ಆಭರಣಗಳಿಂದ ಭೂಷಿತವಾಗಿ ಕುಳಿತ ಭಂಗಿಯಲ್ಲಿರುವ ಈ ದೇವಿಯರ ವಿಗ್ರಹಗಳಲ್ಲಿ, ಅರವತ್ತು ನಾಲ್ಕು ಯೋಗಿನಿಯರದ್ದಾದರೆ, ಮಿಕ್ಕವು, ಸಪ್ತಮಾತೃಕೆಯರ ಹಾಗೂ ಇತರ ದೇವತೆಗಳದ್ದಾಗಿವೆ. ಒಂದು ಗಣೇಶನ ಮೂರ್ತಿಯೂ ಇದೆ. ಚೌಷಟ್ ಎಂದರೆ ಅರವತ್ತು ನಾಲ್ಕು ಎಂದು ಅರ್ಥ. ಆದರೆ ಇಲ್ಲಿ ಎಂಬತ್ತೊಂದು ವಿಗ್ರಹಗಳಿವೆ. ವಿಗ್ರಹಗಳ ಸುತ್ತಲಿನ ಅಲಂಕಾರ ಬಹಳ ಶ್ರೀಮಂತವಾಗಿದ್ದು ಅನೇಕ ತಾಂತ್ರಿಕ ಚಿಹ್ನೆಗಳಿಂದ ಕೂಡಿವೆ.‌ ಪೀಠಗಳಲ್ಲಿ ಪ್ರಾಣಿಗಳ ಕೆತ್ತನೆಗಳೂ ಇವೆ. ಕೆಲವು ವಿಗ್ರಹಗಳು ನರ್ತಿಸುವ ಭಂಗಿಯಲ್ಲೂ ಇವೆ. ಆದರೆ ದುರದೃಷ್ಟಕರ ವಿಚಾರವೆಂದರೆ, ಬಹುತೇಕ ವಿಗ್ರಹಗಳು ಮುಸ್ಲಿಂ ದಾಳಿಕೋರರಿಂದ ದಾಳಿಗೊಳಗಾಗಿ ಮುರಿದು ಹಾಳಾಗಿವೆ. ಈ ದೇವಾಲಯವನ್ನು ಹತ್ತನೆಯ ಶತಮಾನದಲ್ಲಿ ಕಳಚೂರಿಗಳ ರಾಜನಾದ ಮೊದಲನೆಯ ಯುವರಾಜದೇವನು ನಿರ್ಮಿಸಿದನೆಂದು ತಿಳಿದುಬಂದಿದೆ.‌ ಹಾಗಾಗಿ ಇದು ಕಳಚೂರಿಗಳ ಕಲೆಯನ್ನು ತೋರಿಸುತ್ತದೆ. ಈ ದೇವಾಲಯ ಗೋಳಾಕೃತಿಯಲ್ಲಿರುವುದರಿಂದ ಇದನ್ನು ಗೋಳಕೀಮಠವೆಂದು ಕರೆಯಲಾಗಿದೆ. ಇದು ಶೈವ ತಾಂತ್ರಿಕ ಪಂಥಕ್ಕೆ ಸೇರಿದ್ದು, ಶ್ರೀಚಕ್ರ ಪೂಜೆ, ಮೊದಲಾದ ತಾಂತ್ರಿಕ ಪೂಜೆಗಳನ್ನು ಇಲ್ಲಿ ಮಾಡಲಾಗುತ್ತಿತ್ತೆಂದು ಹೇಳಲಾಗಿದೆ.


 
ಈ ಚಕ್ರಾಕಾರದ ಮಂದಿರದ ಆವರಣದಲ್ಲಿ ಗೌರೀಶಂಕರ ದೇವಾಲಯವೆಂಬ ಇನ್ನೊಂದು ಕಲಾತ್ಮಕ ದೇವಾಲಯವಿದೆ. ಇದನ್ನು ಅಲ್ಹಣದೇವಿಯೆಂಬ ಕಳಚೂರಿ ರಾಣಿಯು ಕಟ್ಟಿಸಿದ್ದೆಂದೂ ಅನಂತರದ್ದೆಂದೂ ತಿಳಿದುಬಂದಿದೆ. ಈ ದೇವಾಲಯವು ನಾಗರಶೈಲಿಯ ಶಿಖರವನ್ನು ಹೊಂದಿದ್ದು, ಎತ್ತರದ ಪೀಠದ ಮೇಲೆ ಕಟ್ಟಲಾಗಿದೆ. ಗರ್ಭಗುಡಿಯ ಹೊರಗೆ ಬೇರೆ ಬೇರೆ ಗಾತ್ರದ ಶಿವಲಿಂಗಗಳೂ ಒಂದು ಗಂಟೆಯೂ ಇದೆ. ಗರ್ಭಗೃಹದಲ್ಲಿ ತ್ರಿಶೂಲಧಾರಿ ಶಿವ ಮತ್ತು ಕನ್ನಡಿ ಹಿಡಿದಿರುವ ಪಾರ್ವತಿ ನಂದಿಯ ಮೇಲೆ ಕುಳಿತಿರುವ ವಿಗ್ರಹಗಳಿವೆ. ಇವಲ್ಲದೆ, ಗಣೇಶ, ಷಣ್ಮುಖ, ಲಕ್ಷ್ಮೀನಾರಾಯಣರು ತಮ್ಮ ವಾಹನಗಳ ಮೇಲೆ ಕುಳಿತಿರುವ ವಿಗ್ರಹಗಳೂ ಇಲ್ಲಿವೆ. ಈ ದೇವಾಲಯ ನಾಶಗೊಂಡಿಲ್ಲ. ಹಾಗಾಗಿ ಇಲ್ಲಿ ಈಗಲೂ ಪೂಜೆಯಿದೆ. ಆದರೆ ಮುರಿದಿರುವ ಯೋಗಿನೀ ವಿಗ್ರಹಗಳಿಗೆ ಪೂಜೆಯಿಲ್ಲ.

 
ದೇವಾಲಯಗಳಿರುವ ಬೆಟ್ಟದ ಮೇಲೆ ಬೀಸುವ ತಂಗಾಳಿ ಹಾಗೂ ಹಸಿರು ಪ್ರಕೃತಿ ಆಹ್ಲಾದವುಂಟುಮಾಡುತ್ತವೆ. ಅಂತೆಯೇ ಇಲ್ಲಿಂದ, ಅಮೃತಶಿಲೆಯ ಬಂಡೆಗಳ ಮಧ್ಯೆ ಹರಿಯುವ ನರ್ಮದಾ ನದಿಯ ನೋಟ ಮನೋಹರವಾಗಿ ರುತ್ತದೆ! ಇಲ್ಲಿ ಕುಳಿತುಕೊಂಡು ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಕಲ್ಲುಬೆಂಚುಗಳನ್ನೂ ಹಾಕಲಾಗಿದೆ.‌ಸ್ಥಳೀಯರು ಹೇಳುವಂತೆ, ಇಲ್ಲಿ ಒಂದು ಸುರಂಗಮಾರ್ಗವಿದ್ದು, ಅದು ಜಬಲ್ಪುರವನ್ನಾಳುತ್ತಿದ್ದ ಗೊಂಡರ ರಾಣಿ ದುರ್ಗಾವತಿಯ ಅರಮನೆಗೆ ಸೇರಿಕೊಳ್ಳುವುದಂತೆ! ಈಗ ಈ ಇಡೀ ತಾಣ, ಭಾರತೀಯ ಪುರಾತತ್ವ ಇಲಾಖೆಯ ರಕ್ಷಣೆಯಲ್ಲಿದೆ.

 

ಯೋಗಿನಿಯರು ಮತ್ತು ಯೋಗಿನೀ ದೇವಾಲಯಗಳು
ಯೋಗಿನಿಯರು ಒಟ್ಟು ಅರವತ್ತು ನಾಲ್ಕು ಇದ್ದು, ಇವರು ತಂತ್ರಕ್ಕೆ ಸಂಬಂಧಿಸಿದ ಸ್ತ್ರೀ ದೇವತೆಗಳು. ಇವರನ್ನು ಉಪಾಸಿಸುವ ತಂತ್ರ ಸಾಧಕರಿಗೆ ಇವರು ನೆರವಾಗುತ್ತಾರೆ ಎಂದು ಹೇಳಲಾಗುತ್ತದೆ. ಯೋಗಿನಿಯರ ಉಪಾಸನೆ ಮಾಡುವವರದು ಒಂದು ಪಂಥವಾಗಿದ್ದು, ಇದು, ಪ್ರಾಯಶಃ ತಂತ್ರ ಪದ್ಧತಿ ಎಲ್ಲೆಡೆ ಹರಡಿದ್ದಾಗ ನಾಥ ಸಂಪ್ರದಾಯದ ಯೋಗಿ ಮತ್ಸ್ಯೇಂದ್ರನಾಥರಿಂದ ಆರಂಭವಾಗಿರಬಹುದೆಂದು ಹೇಳಲಾಗಿದೆ. ಇದನ್ನು ಯೋಗಿನೀ ಕೌಲಸಂಪ್ರದಾಯವೆಂದು ಕರೆಯಲಾಗಿತ್ತು. ಮತ್ಸ್ಯೇಂದ್ರನಾಥರು ಈಗ ದೇವಾಲಯವಿರುವ ಸ್ಥಳದಲ್ಲಿ ಅರವತ್ತು ನಾಲ್ಕು ಯೋಗಿನಿಯರನ್ನು ಒಮ್ಮೆಲೇ ಆಹ್ವಾನಿಸಿದ್ದರೆಂಬ ಕಥೆಯಿದೆ. ಯೋಗಿನಿಯರ ವಿವರಣೆಗಳಿರುವ ಏಕೈಕ ಸಂಸ್ಕೃತ ಗ್ರಂಥವೆಂದರೆ ಮಹಾಕೌಲಜ್ಞಾನನಿರ್ಣಯ. ಕೆಲವು ಕಥೆಗಳ ಪ್ರಕಾರ, ಈ ಯೋಗಿನಿಯರು ದುರ್ಗಾದೇವಿಯ ವಿಸ್ತರಣೆಗಳು ಹಾಗೂ ಸಹಾಯಕರಾಗಿದ್ದು ರಾಕ್ಷಸರೊಂದಿಗಿನ ಅವಳ ಯುದ್ಧದಲ್ಲಿ ಸಹಾಯ ಮಾಡುತ್ತಾರೆ. ಅವರು ಯೋಗೇಶ್ವರಿಯು ಸೇರಿದಂತೆ ಅಷ್ಟಮಾತೃಕೆಯರ ವಿಸ್ತರಣೆಯರೆಂದೂ ಹೇಳುತ್ತಾರೆ. ಕೆಲವು ಯೋಗಿನಿಯರಿಗೆ ಸ್ತ್ರೀ ದೇಹ ಹಾಗೂ ಪ್ರಾಣಿಯ ಮುಖವೂ ಇರುತ್ತದೆ! ಭಾರತದಲ್ಲಿ ಒಡಿಶಾದ ಹೀರಾಪುರ, ರಾಣೀಪುರ, ಝರಿಯಲ್, ಮಧ್ಯಪ್ರದೇಶದ ಭೇಡಾಘಾಟ್, ಖಜುರಾಹೋ, ದುಧಾಯ್, ಮಿತಾವ್ಲಿ ಶಾಡೋಲ್, ಬಾದೋ, ನರೇಶಾರ್, ಲೋಖಾರಿ, ರಿಖಿಯಾರ್, ದೆಹಲಿಯ ಯೋಗಿನೀಪುರ, ಉತ್ತರ ಪ್ರದೇಶದ ವಾರಾಣಸೀ, ಅಸ್ಸಾಂನ ಗೌಹಾತಿ, ನೇಪಾಳದ ಕಠ್ಮಂಡು, ಮೊದಲಾದ ಹಲವೆಡೆಗಳಲ್ಲಿ ಈ ಯೋಗಿನೀ ದೇವಾಲಯಗಳು ಕಾಣಸಿಗುತ್ತವೆ. ಇವುಗಳಲ್ಲಿ ಕೆಲವು ಸುಸ್ಥಿತಿಯಲ್ಲಿದ್ದರೆ ಕೆಲವು ದುಸ್ಥಿತಿಯಲ್ಲಿವೆ. ಕೆಲವು ದೇವಾಲಯಗಳಲ್ಲಿ ಅರವತ್ತು ನಾಲ್ಕು ಯೋಗಿನಿಯರಿರದೇ, ನಲವತ್ತೆರಡು, ಅರವತ್ತೇಳು, ಅರವತ್ತೈದು, ಹಾಗೂ ಈಗ ನೋಡಿದಂತೆ ಎಂಬತ್ತೊಂದು ಯೋಗಿನಿಯರ ವಿಗ್ರಹಗಳಿವೆ.
ಯೋಗಿನಿಯರ ಹಾಗೂ ಯೋಗಿನೀ ದೇವಾಲಯಗಳ ಬಗ್ಗೆ ತಿಳಿಯಲು ನಿದ್ಯಾ ದೆಹೇಜಾ ಅವರ ' ಯೋಗಿನೀ ಕಲ್ಟ್ ಅಂಡ್ ಟೆಂಪಲ್ಸ್ ಹಾಗೂ ಸ್ಟೆಲ್ಲಾ ಡ್ಯುಪಿಸ್ ಅವರ ' ದಿ ಯೋಗಿನೀ ಟೆಂಪಲ್ಸ್ ಆಫ್ ಇಂಡಿಯಾ ' ಮೊದಲಾದ ಪುಸ್ತಕಗಳು ಸಹಾಯಕಾರಿ.
ಒಟ್ಟಿನಲ್ಲಿ ಜಬಲ್ ಪುರದ ಚೌಷಟ್ ಯೋಗಿನೀ ದೇವಾಲಯದ ಭೇಟಿ, ಯೋಗಿನಿಯರೆಂಬ ವಿಸ್ಮಯಕರ ದೇವತೆಗಳ ಹಾಗೂ ಅವರ ದೇವಾಲಯಗಳ ಬಗ್ಗೆ ಕುತೂಹಲ ಮೂಡಿಸುತ್ತದೆ. ಪ್ರವಾಸ ಮಾಡುವಾಗ ಇಂಥ ಅನೇಕ ವಿಚಾರಗಳು ತಿಳಿದುಬರುತ್ತವೆ.



ಚಿತ್ರಲೇಖನ: ಡಾ.ಬಿ.ಆರ್.ಸುಹಾಸ್
ಬೆಂಗಳೂರು 

ಶನಿವಾರ, ಡಿಸೆಂಬರ್ 13, 2025

ಜೀವಜಗತ್ತಿನ ವಿಸ್ಮಯ - ದ್ವಿವರ್ಣ ಮಲಬಾರ್ ಕಪ್ಪೆ


ಇತ್ತೀಚೆಗೆ ನಮ್ಮ ಸರ್ಕಾರದ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಅಡಿಯಲ್ಲಿ ಬರುವ ದುಬಾರೆ ಆನೆ ಶಿಬಿರಕ್ಕೆ ಹೋಗಿದ್ದಾಗ, ಸಂಜೆ ಭೋಜನ ಗೃಹವಾದ ಗೋಲ್ಘರ್ ನಲ್ಲಿ ಉಪಾಹಾರ ಸೇವಿಸಿ ಹೊರಬಂದಾಗ ಕಾಲಿಗೆ ಏನೋ ತಾಗಿದಂತಾಗಿ ಮುಂದೆ ಜಿಗಿದಂತಾಯಿತು! ಅದೇನೆಂದು ಸ್ವಲ್ಪ ಹುಡುಕಿ ನೋಡಿದಾಗ, ಒಂದು ವಿಭಿನ್ನ ಕಪ್ಪೆ ಕಾಣಿಸಿತು! ಕೂಡಲೇ ಅದರ ಫೋಟೋ ಹಿಡಿದು ಅನಂತರ ಅಲ್ಲಿನ ಪರಿಸರವಾದಿಗೆ ತೋರಿಸಿದಾಗ ಅವರು ಅದು ಬೈಕಲರ್ಡ್ ಮಲಬಾರ್ ಫ್ರಾಗ್, ಅಂದರೆ ದ್ವಿವರ್ಣ ಮಲಬಾರ್ ಕಪ್ಪೆ ಎಂದರು. ಹೆಸರೇ ಹೇಳುವಂತೆ, ಇದು ಎರಡು ಬಣ್ಣಗಳ ಛಾಯೆಗಳುಳ್ಳ ಕಪ್ಪೆ. ದೇಹದ ಮೇಲಿನ ಅಥವಾ ಬೆನ್ನಿನ ಭಾಗ ತಿಳಿ ಬೂದು, ಹಳದಿ, ಅಥವಾ ಕಂದು ಬಣ್ಣವಿದ್ದರೆ, ಕೆಳಭಾಗ, ಕಡು ಕಂದು ಅಥವಾ ಕಪ್ಪು ಬಣ್ಣವಿರುತ್ತದೆ. ಬೆನ್ನಿನ ಮೇಲೆ ಕಪ್ಪು ಚುಕ್ಕೆಗಳಿದ್ದು, ಎಲೆಗಳ ಬಣ್ಣದೊಂದಿಗೆ ಹೊಂದಿಕೊಂಡು ಅದು ಇರುವುದನ್ನು ಮರೆಮಾಚುತ್ತದೆ. ಬದಿಗಳಲ್ಲಿ ಕೆಂಪು ಪಟ್ಟಿಗಳಿದ್ದು , ಅದು ವಿಷಕಾರಿ ಕಪ್ಪೆ ಎಂದು ಬೇಟೆಗಾರ ಪ್ರಾಣಿಗಳಿಗೆ ಎಚ್ಚರಿಸುತ್ತದೆ! ಈ ಎರಡು ಬಣ್ಣಗಳ ಛಾಯೆಗಳು ಒಂದಕ್ಕೊಂದು ಬಹಳ ವ್ಯತಿರಿಕ್ತವಾಗಿರುವುದರಿಂದ ಇದನ್ನು ದ್ವಿವರ್ಣ ಕಪ್ಪೆ ಎನ್ನುತ್ತಾರೆ. ಇದು ಪಶ್ಚಿಮ ಘಟ್ಟಗಳಿಗೆ ಸೀಮಿತವಾದ ಕಪ್ಪೆಯಾಗಿದೆ. ಹೆಣ್ಣು ಕಪ್ಪೆ ಸಾವಿರಾರು ಮೊಟ್ಟೆಗಳನ್ನಿಡುತ್ತದೆ ಹಾಗೂ ಅವುಗಳನ್ನು ಕಾಪಾಡಲು ಗಂಡು ಕಪ್ಪೆ ನೊರೆಯ ಗೂಡನ್ನು ಕಟ್ಟುತ್ತದೆ. ಮರಿಗಳಾದ ಟ್ಯಾಡ್ಪೋಲ್ ಅಥವಾ ಗೊದಮೊಟ್ಟೆಗಳು ದೊಡ್ಡ ಆಕಾರ ಹೊಂದಿದ್ದು, ಆಲಿವ್ ಹಸಿರು ಬಣ್ಣ ಹೊಂದಿರುತ್ತವೆ. ಇವು ದೊಡ್ಡ ಗುಂಪುಗಳಲ್ಲಿ ನಿಧಾನವಾಗಿ ಹರಿಯುವ ನದಿಯಲ್ಲಿ ಚಲಿಸುತ್ತವೆ. ವಿಶೇಷವೆಂದರೆ ಅವು ವಯಸ್ಕ ಹಂತ ತಲುಪಿ ನೀರಿನಿಂದ ಹೊರಬರುತ್ತಿದ್ದಂತೆ ಗುಂಪು ಗುಂಪಾಗಿ ಬೇರೆಡೆಗೆ ವಲಸೆ ಹೋಗುತ್ತವೆ! ಇದು, ದೊಡ್ಡ ಕಪ್ಪೆಗಳು ತಮ್ಮನ್ನು ತಿನ್ನುವುದರಿಂದ ತಪ್ಪಿಸಿಕೊಳ್ಳಲು, ಹಾಗೂ ಹೊಸ ನೆಲದ ಪ್ರದೇಶ ಮತ್ತು ಆಹಾರ ಹುಡುಕಿಕೊಂಡು ಬೆಳೆಯಲು ಮಾಡುವ ಕಾರ್ಯವಾಗಿರುತ್ತದೆ. ಈ ಕಪ್ಪೆಗಳ ಇನ್ನೊಂದು ವೈಶಿಷ್ಟ್ಯವೆಂದರೆ, ಬೇಟೆಗಾರ ಪ್ರಾಣಿಗಳು ಇವನ್ನು ಆಕ್ರಮಿಸಿದರೆ ಇವು ಅವುಗಳಿಂದ ತಪ್ಪಿಸಿಕೊಳ್ಳಲು ಸತ್ತಂತೆ ನಟಿಸುತ್ತವೆ.

ಸೋಮವಾರ, ಡಿಸೆಂಬರ್ 1, 2025

ಜೀವಜಗತ್ತಿನ ವಿಸ್ಮಯ - ನಪುಂಸಕನಾಗುವ ಸಂನ್ಯಾಸಿ ಮಲಬಾರ್ ಜೇಡ

   ಇತ್ತೀಚೆಗೆ ನಮ್ಮ ಸರ್ಕಾರದ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಅಡಿಯಲ್ಲಿ ಬರುವ ದುಬಾರೆ ಆನೆ ಶಿಬಿರಕ್ಕೆ ಹೋಗಿದ್ದೆ. ಅಲ್ಲಿ ಆನೆಗಳಿಗೆ ಸ್ನಾನ ಮಾಡಿಸುವುದು, ಅವುಗಳಿಗೆ ಆಹಾರ ಉಣಿಸುವುದು, ಅವುಗಳನ್ನು ಮುಟ್ಟಿ ಅವುಗಳ ದೊಡ್ಡ ದಂತಗಳನ್ನು ಹಿಡಿದುಕೊಳ್ಳುವುದು, ಮೊದಲಾದ ಗಜಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದಲ್ಲದೇ ಸುತ್ತಲಿನ ಕಾಡಿನಲ್ಲಿ ಸಫಾರಿ ಹೋಗುವುದು, ಹಾಗೂ ನಮ್ಮ ವಸತಿಯಲ್ಲಿನ ಉಪವನದಲ್ಲಿನ ಪ್ರಾಕೃತಿಕ ಸೌಂದರ್ಯ ಮತ್ತು ವಿಸ್ಮಯಗಳನ್ನು ಆನಂದಿಸುವುದೂ ಶಿಬಿರದ ಚಟುವಟಿಕೆಗಳಾಗಿರುತ್ತವೆ. ವಿಶೇಷವಾಗಿ ಬೆಳಗಿನ ನಡಿಗೆಯ ಸಮಯದಲ್ಲಿ ಪ್ರಕೃತಿಯ ಅನೇಕ ವೈಶಿಷ್ಟ್ಯಗಳನ್ನು ನೋಡುತ್ತಿದ್ದಂತೆ ಅಲ್ಲಿನ ಸಿಬ್ಬಂದಿ ಹಾಗೂ ಪರಿಸರವಾದಿ ಅವುಗಳ ಪರಿಚಯ, ವಿವರಣೆ ಕೊಡುತ್ತಿದ್ದರು. ಅನಂತರ, ಭೋಜನಗೃಹವಾದ ಗೋಲ್ಘರ್ ನಲ್ಲಿ ಬೆಳಗಿನ ಉಪಾಹಾರ ಮುಗಿಸಿ ಹೊರಬರುತ್ತಿದ್ದಂತೆ, ಹೊರಗೆ ಬಲೆ ಹೆಣೆದಿದ್ದ ಒಂದು ದೊಡ್ಡ ಜೇಡ ನನ್ನನ್ನು ಆಕರ್ಷಿಸಿತು! ಅದು ಯಾವ ಜೇಡವೆಂದು ಸಿಬ್ಬಂದಿಯನ್ನು ಕೇಳಿದಾಗ ಅವರು ಅದು ಮಲಬಾರ್ ಜೇಡ ಎಂದು ಹೇಳುತ್ತಾ ಅದು ಹೆಣ್ಣು ಜೇಡವೆಂದೂ ಸ್ವಲ್ಪ ದೂರದಲ್ಲೇ ಇದ್ದ ಗಂಡು ಜೇಡವನ್ನೂ ತೋರಿಸಿದರು. ನನ್ನ ಕ್ಯಾಮೆರಾ ಜೂಮ್ ಮಾಡಿ ಬಹಳ ಕಷ್ಟದಿಂದ ಫೋಕಸ್ ಮಾಡಿ ಎರಡನ್ನೂ ಫೋಟೋಗಳಲ್ಲಿ ಸೆರೆಹಿಡಿದೆ. ಫೋಟೋಗಳಲ್ಲಿ ಅವುಗಳ ದೈಹಿಕ ವಿವರಗಳನ್ನು ನೋಡಿದಾಗ ಆಶ್ಚರ್ಯ, ಸಂತೋಷಗಳಾದವು!
        ಮಲಬಾರ್ ಜೇಡದ ವೈಜ್ಞಾನಿಕ ಹೆಸರು ನೆಫಿಲೆಂಗಿಸ್ ಮಲಬಾರೆನ್ಸಿಸ್ ( Nephilengys malabarensis). ನೆಫಿಲಿಡೇ ಕುಟುಂಬಕ್ಕೆ ಸೇರಿರುವ, ನೆಫಿಲೆಂಗಿಸ್ ಕುಲದ ಒಂದು ಪ್ರಭೇದವಿದು. ದಕ್ಷಿಣ ಭಾರತದ ಮಲಬಾರ್ ಕರಾವಳಿ ತೀರದಲ್ಲಿ ಮೊದಲ ಬಾರಿ ಇದನ್ನು ಪತ್ತೆ ಮಾಡಿದ್ದರಿಂದ ಇದಕ್ಕೆ ಮಲಬಾರೆನ್ಸಿಸ್ ಎಂದು ಹೆಸರಿಸಲಾಯಿತು. ಹಾಗಾಗಿ ಇದನ್ನು ಮಲಬಾರ್ ಜೇಡ ಎಂದು ಕರೆಯುತ್ತಾರೆ. ಇದೊಂದು ದೊಡ್ಡ ಆರ್ಬ್ ವೀವರ್ ಜೇಡ, ಅಂದರೆ ಚಕ್ರಾಕಾರದ ದೊಡ್ಡ ಬಲೆ ಹೆಣೆಯುವ ಜೇಡವಾಗಿದೆ. ಎಲ್ಲಾ ಜೇಡಗಳಂತೆ ಇವುಗಳಲ್ಲೂ ಹೆಣ್ಣು ಗಂಡಿಗಿಂತ ಬಹಳ ದೊಡ್ಡದಾಗಿರುತ್ತದೆ. ಹೆಣ್ಣು ಜೇಡ, ಸುಮಾರು 10.4 ರಿಂದ 18.6 ಮಿ.ಮೀ. ಗಳಷ್ಟು ಉದ್ದವಿದ್ದರೆ ಗಂಡು ಜೇಡ ಕೇವಲ 5 ರಿಂದ 5.9 ಮಿ.ಮೀ. ಗಳಷ್ಟು ಉದ್ದವಿರುತ್ತದೆ. ಹೆಣ್ಣಿನ ದೇಹದ ಮೇಲ್ಭಾಗ ಅಥವಾ ಸೆಫಲೋಥೊರಾಕ್ಸ್ ( ತಲೆ ಮತ್ತು ಎದೆಯ ಸಂಯುಕ್ತ ಭಾಗ) ಕಡು ಕೆಂಪು, ಕಂದು ಬಣ್ಣಗಳಿಂದ ಕೂಡಿದ್ದರೆ ಇದರ ತಳಭಾಗ ಅಥವಾ ಸ್ಟೆರ್ನಂ, ಕಿತ್ತಳೆ ಬಣ್ಣದಿಂದ ಕೂಡಿರುತ್ತದೆ. ಹೊಟ್ಟೆಯ ಭಾಗ ಬಿಳಿಯಾಗಿದ್ದು ಕಂದು ಚುಕ್ಕೆಗಳಿಂದ ಕೂಡಿದ್ದು, ಇದರ ತಳಭಾಗ, ಕಂದು ಬಣ್ಣವಿದ್ದು ದೊಡ್ಡ ಕಿತ್ತಳೆ ಮಚ್ಚೆಗಳಿರುತ್ಚವೆ. ಹೊಟ್ಟೆಯ ಬಣ್ಣ, ಬೂದು,ಕಪ್ಪು, ಮೊದಲಾದ ಛಾಯೆಗಳಿಂದಲೂ ಕೂಡಿರುತ್ತದೆ. ಇದರ ಕಾಲುಗಳು ಹಳದಿ ಮತ್ತು ಕಪ್ಪು ಪಟ್ಟಿಗಳಿಂದ ಕೂಡಿರುತ್ತದೆ. ಗಂಡು ಜೇಡದ ಮೇಲ್ಭಾಗ ಕಿತ್ತಳೆ ಬಣ್ಣದಿಂದಲೂ ಹೊಟ್ಟೆಯ ಭಾಗ ಕಂದು ಬಣ್ಣದಿಂದಲೂ ಕೂಡಿದ್ದು, ಇದರ ಮೇಲೆ ತಿಳಿ ಮಚ್ಚೆಗಳೂ ತಳದಲ್ಲಿ ಹಳದಿ ಮಚ್ಚೆಗಳೂ ಇರುತ್ತವೆ.ಕಾಲುಗಳು ಬೂದು, ಮತ್ತು ಕಪ್ಪು ಪಟ್ಟಿಗಳಿಂದ ಕೂಡಿರುತ್ತದೆ. ಆಗಲೇ ಹೇಳಿದಂತೆ ಗಂಡು ಹೆಣ್ಣಿಗಿಂತ ಬಹಳ ಚಿಕ್ಕದಾಗಿರುತ್ತದೆ. 
       ಮಲಬಾರ್ ಜೇಡವು ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ, ಹಾಗೂ ಪೂರ್ವ ಏಷ್ಯಾಗಳಲ್ಲಿ ಕಂಡುಬರುವುದಾಗಿದ್ದು, ನಮ್ಮ ದೇಶದಲ್ಲಿ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡುಗಳಲ್ಲಿ ಕಂಡುಬರುತ್ತದೆ. ಮುಖ್ಯವಾಗಿ ಇದು ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಕಂಡುಬರುತ್ತದೆ. ಆದರೆ ಇದು ಮಳೆಕಾಡುಗಳಲ್ಲಿ ಕಡಿಮೆಯಿದ್ದು, ಮಾನವ ವಸತಿಗಳ ಬಳಿ ಹೆಚ್ಚಾಗಿ ಕಂಡುಬರುತ್ತದೆ.
       ಈ ಮಲಬಾರ್ ಜೇಡಗಳು ಮುಖ್ಯವಾಗಿ ಪತಂಗ , ನೊಣ, ಜೀರುಂಡೆ, ಮೊದಲಾದ ಕೀಟಗಳನ್ನೂ ಅವುಗಳ ಮರಿಗಳನ್ನೂ ತಿನ್ನುತ್ತವೆ. ಕೆಲವೊಮ್ಮೆ ಹಲ್ಲಿಯಂಥ ದೊಡ್ಡ ಪ್ರಾಣಿಗಳನ್ನೂ ತಿನ್ನುತ್ತವೆ. ವಿಚಿತ್ರವೆಂದರೆ ಕೆಲವೊಮ್ಮೆ ಈ ಜೇಡಗಳು ಮರಿಗಳಾಗಿರುವಾಗ ತಮಗಿಂತ ಸಣ್ಣ ಒಡಹುಟ್ಟಿದವರನ್ನೇ ತಿಂದುಬಿಡುತ್ತವೆ! ಎಲ್ಲಾ ಜೇಡಗಳಂತೆ ಇವು ಬೇಟೆಗೆ ವಿಷವನ್ನು ಚುಚ್ಚಿ ಲಕ್ವವಾಗುವಂತೆ ಮಾಡಿ, ಅನಂತರ ಜೀರ್ಣಗೊಳಿಸುವ ರಸಗಳನ್ನು ಸುರಿದು ಬೇಟೆಯ ಒಳಭಾಗಗಳನ್ನು ಒಂದು ರಸವನ್ನಾಗಿಸಿ ಅದನ್ನು ಹೀರುತ್ತವೆ. ಏಕೆಂದರೆ ಜೇಡಗಳಿಗೆ ಅಗಿಯಲಾಗುವುದಿಲ್ಲ.
    ಒಂದು ಸ್ವಾರಸ್ಯವೆಂದರೆ, ಈ ಮಲಬಾರ್ ಜೇಡವು ನಿಶಾಚರಿಯಾಗಿದ್ದು, ಹಗಲಿನಲ್ಲಿ ತನ್ನ ಬಲೆಯಲ್ಲೇ ನಾಳದ ಆಕಾರದ ಒಂದು ಭಾಗ ಮಾಡಿ ಅದರಲ್ಲಿ ಅಡಗಿಕೊಳ್ಳುತ್ತದೆ. ಇದರಿಂದ ಅದು ಬೇಟೆಗಾರ ಪ್ರಾಣಿಗಳಿಂದ ತಪ್ಪಿಸಿಕೊಳ್ಳುತ್ತದೆ. ಹೀಗೆ ಮಾಡುವುದರಿಂದ ಇದನ್ನು ಏಷ್ಯಾದ ಸಂನ್ಯಾಸಿ ಜೇಡ ( Asian hermit spider) ಎಂದು ಕರೆಯುತ್ತಾರೆ. ಗಂಡು ಜೇಡ ಬಲೆ ಹೆಣೆಯದೇ ಹೆಣ್ಣಿನ ಬಲೆಯಲ್ಲೇ ವಾಸ ಮಾಡುತ್ತದೆ. ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ಗಂಡುಗಳು ಒಂದು ಹೆಣ್ಣಿನ ಬಲೆಯಲ್ಲಿರಬಹುದು. 
     ಎಲ್ಲಾ ಜೇಡಗಳಲ್ಲಿರುವಂತೆ, ಸಂತಾನೋತ್ಪತ್ತಿಯ ಕಾಲದಲ್ಲಿ ಗಂಡು, ಹೆಣ್ಣುಗಳ ಸಂಭೋಗದ ಸಮಯದಲ್ಲಿ ಅಥವಾ ಸಂಭೋಗದ ನಂತರ, ಮಲಬಾರ್ ಜೇಡಗಳಲ್ಲೂ ಹೆಣ್ಣು ಜೇಡ ಗಂಡನ್ನು ಭಕ್ಷಿಸಿಬಿಡುತ್ತದೆ! ಇದು ತನಗೆ ಬೇಕಾದ ಪುಷ್ಟಿ ಮತ್ತು ಶಕ್ತಿಗಾಗಿ ಹೀಗೆ ಮಾಡುತ್ತದೆ. ಹೆಣ್ಣಿನ ಈ ಕ್ರೂರ ವರ್ತನೆಯಿಂದ ತಪ್ಪಿಸಿಕೊಳ್ಳಲು ಗಂಡು ಒಂದು ಉಪಾಯ ಮಾಡುತ್ತದೆ. ಗಂಡು ಜೇಡಗಳಲ್ಲಿ ಬಾಯ ಬಳಿಯಿರುವ ಪಾಲ್ಪ್ ಗಳೆಂಬ ಕಾಲಿನ ಆಕೃತಿಗಳ ತುದಿಗಳಲ್ಲಿ ಪಾಲ್ಟಲ್ ಬಲ್ಬ್ ( Palpal bulbs ) ಗಳೆಂಬ ದುಂಡಾದ ಆಕೃತಿಗಳಿರುತ್ತವೆ. ಇವೇ ಗಂಡಿನ ಜನನಾಂಗಗಳು. ಹೆಣ್ಣಿನ ಹೊಟ್ಟೆಯ ತಳಭಾಗದಲ್ಲಿರುವ ಎಪಿಗೈನಂ ಎಂಬ ಗಟ್ಟಿಯಾದ ಅಂಗವೇ ಅದರ ಹೊರ ಜನನಾಂಗ. ಈಗ ಗಂಡು ಮಾಡುವ ಉಪಾಯವೇನೆಂದರೆ, ಅದು ಹೆಣ್ಣಿನೊಂದಿಗೆ ಸಂಭೋಗಿಸುವಾಗ, ತನ್ನ ಬಾಯಿಯ ಬಳಿಯಿರುವ ಆ ಪಾಲ್ಪಲ್ ಬಲ್ಬ್ ( Palpal bulbs) ಗಳೆಂಬ ಜನನಾಂಗಗಳನ್ನು ಕತ್ತರಿಸಿಕೊಂಡು ಹೆಣ್ಣಿನ ಹೊರ ಜನನಾಂಗದ ದ್ವಾರದಲ್ಲೇ ಬಿಟ್ಟು ತಪ್ಪಿಸಿಕೊಳ್ಳುತ್ತದೆ! ಸ್ವಾರಸ್ಯವೆಂದರೆ, ಹಾಗೆ ಕತ್ತರಿಸಿದ ಬಳಿಕವೂ ಗಂಡಿನ ಆ ಜನನಾಂಗಗಳು ಹೆಣ್ಣಿನ ಜನನಾಂಗದಲ್ಲಿ ವೀರ್ಯಾಣುಗಳನ್ನು ನೀಡುತ್ತಿರುತ್ತದೆ! ಆ ವೀರ್ಯಾಣುಗಳನ್ನು ಹೆಣ್ಣು ತನ್ನ ಒಳಗಿನ ಜನನಾಂಗ ಭಾಗಗಳಾದ ಸ್ಪರ್ಮಥೀಕಾಗಳಲ್ಲಿ ಸಂಗ್ರಹಿಸಿಕೊಳ್ಳುತ್ತದೆ! ಇನ್ನೊಂದು ಸ್ವಾರಸ್ಯವೆಂದರೆ, ಗಂಡಿನ ಜನನಾಂಗಗಳಾದ ಆ ಪಾಲ್ಪಲ್ ಬಲ್ಬ್ ಗಳು ಹೆಣ್ಣಿನ ಜನನಾಂಗದ ದ್ವಾರದಲ್ಲಿ ತಡೆಯುವ ಗೂಟಗಳಂತಾಗಿ ಇತರ ಗಂಡು ಜೇಡಗಳು ಸಂಭೋಗಿಸುವುದನ್ನು ತಪ್ಪಿಸುತ್ತದೆ! ಹೀಗೆ ಮಾಡುವುದರಿಂದ ತನ್ನದೇ ವಂಶವಾಹಿಗಳು ಉಳಿಯಬೇಕೆಂಬ ಪ್ರಾಕೃತಿಕ ಸ್ವಾರ್ಥವನ್ನು ನಡೆಸುತ್ತದೆ! 
     ಹೀಗೆ ಗಂಡು ಮಲಬಾರ್ ಜೇಡ ತನ್ನ ಜನನಾಂಗಗಳನ್ನು ತ್ಯಾಗ ಮಾಡುವ ವಿಶಿಷ್ಟ ವರ್ತನೆ ತೋರುವುದರಿಂದ ಇದನ್ನು ನಪುಂಸಕ ಜೇಡ ( Eunuch spider) ಎಂದು ಕರೆಯುತ್ತಾರೆ. ಇನ್ನೊಂದು ಸ್ವಾರಸ್ಯವೆಂದರೆ, ಈ ರೀತಿ ಜನನಾಂಗಗಳನ್ನು ತ್ಯಜಿಸಿದ ಬಳಿಕ, ಗಂಡು ಜೇಡಗಳು ತೂಕ ಕಳೆದುಕೊಂಡು, ಹೆಚ್ಚು ವೇಗಶಾಲಿಗಳೂ ಆಕ್ರಮಣಶಾಲಿಗಳೂ ಆಗುತ್ತವೆ. ಆಗ ಅವು ಇತರ ಗಂಡು ಜೇಡಗಳೊಂದಿಗೆ ಸಮರ್ಥವಾಗಿ ಯುದ್ಧ ಮಾಡಿ ತನ್ನದೇ ಆದ ಪಿತೃತ್ವವನ್ನು ಸ್ಥಾಪಿಸಿಕೊಳ್ಳುತ್ತದೆ! 
      ಹೀಗೆ ಮಲಬಾರ್ ಜೇಡ, ವಿಸ್ಮಯಗಳ ಆಗರವಾಗಿದೆ! ನಾವು ಪ್ರಕೃತಿಯಲ್ಲಿ ನೋಡುವ ಸಣ್ಣ ಸಣ್ಣ ವಿಷಯಗಳಲ್ಲೂ ಅದೆಷ್ಟು ಕೌತುಕಗಳು ತುಂಬಿರುತ್ತವೆಯೆಂದು ತಿಳಿದಾಗ ಆಶ್ಚರ್ಯವಾಗುತ್ತದೆ! 
                                   
                                   

ಭಾನುವಾರ, ನವೆಂಬರ್ 30, 2025

ಚರ್ಮದ ಬ್ಯಾಕ್ಟೀರಿಯಾ ಸೋಂಕುಗಳು

ಚರ್ಮದ ಹಲವಾರು ಕಾಯಿಲೆಗಳಲ್ಲಿ ಸೋಂಕು ರೋಗಗಳೂ ಒಂದು. ಸೋಂಕು ರೋಗಗಳು ರೋಗಾಣುಗಳೆಂಬ ಸಣ್ಣ ಸಣ್ಣ ಜೀವಿಗಳಿಂದ ಉಂಟಾಗುವುದರಿಂದ ಇವು ಒಬ್ಬರಿಂದೊಬ್ಬರಿಗೆ ಸ್ಪರ್ಶದ ಮೂಲಕ ಪ್ರಸಾರವಾಗಿ ರೋಗಗಳು ಹರಡುತ್ತವೆ. ಹಾಗಾಗಿ ಇವನ್ನು ಅಂಟುರೋಗಗಳೆಂದೂ ಕರೆಯುತ್ತಾರೆ. ಇತರ ಅಂಗಾಂಗಗಳಿಗೆ ಉಂಟಾಗುವಂತೆ, ಚರ್ಮಕ್ಕೂ ಬ್ಯಾಕ್ಟೀರಿಯಾ, ವೈರಸ್, ಫಂಗಸ್, ಮತ್ತು ಪ್ಯಾರಾಸೈಟ್ ಅಥವಾ ಪರಾವಲಂಬಿಗಳಿಂದ ಸೋಂಕು ರೋಗಗಳು ಉಂಟಾಗುತ್ತವೆ. ಈಗ ಚರ್ಮಕ್ಕೆ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಕೆಲವು ಸಾಮಾನ್ಯ ರೋಗಗಳ ಬಗ್ಗೆ ತಿಳಿದುಕೊಳ್ಳೋಣ.
      ಸಾಮಾನ್ಯವಾಗಿ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ರೋಗಗಳಿಗೆ ಪಯೋಡರ್ಮ( Pyoderma ) ಎನ್ನುತ್ತಾರೆ. ಗ್ರೀಕ್ ಪದಗಳಾದ ಪಯೋ ಎಂದರೆ ಪಸ್ ಅಥವಾ ಕೀವು ಮತ್ತು ಡರ್ಮ ಎಂದರೆ ಚರ್ಮ. ಬ್ಯಾಕ್ಟೀರಿಯಾ ರೋಗಗಳಲ್ಲಿ ಚರ್ಮದಲ್ಲಿ ಕೀವು ಉಂಟಾಗುವುದರಿಂದ ಈ ಹೆಸರು ಬಂದಿದೆ. ಬ್ಯಾಕ್ಟೀರಿಯಾಗಳು ದಾಳಿ ಮಾಡಿದಾಗ, ರಕ್ತದಲ್ಲಿನ ಬಿಳಿ ರಕ್ತಕಣಗಳು ಅವುಗಳನ್ನು ಕೊಂದು ತಾವೂ ಸಾಯುತ್ತವೆ. ಸತ್ತ ಬ್ಯಾಕ್ಟೀರಿಯಾಗಳು ಮತ್ತು ಬಿಳಿ ರಕ್ತಕಣಗಳ ಮಿಶ್ರಿತ ಗಟ್ಟಿಯಾದ ಹಳದಿ ದ್ರವವೇ ಕೀವು. ಈ ಪಯೋಡರ್ಮದಲ್ಲಿ ಪ್ರಾಥಮಿಕ ಪಯೋಡರ್ಮ ( Primary Pyoderma) ಮತ್ತು ದ್ವಿತೀಯ ಪಯೋಡರ್ಮ ( Secondary Pyoderma) ಎಂಬ ಎರಡು ಮುಖ್ಯ ವಿಧಗಳಿವೆ. ಪ್ರಾಥಮಿಕ ಪಯೋಡರ್ಮ, ಯಾವುದೇ ಪೂರ್ವ ಕಾರಣವಿಲ್ಲದೆ ಚರ್ಮದ ಮೇಲೆ ನೇರವಾಗಿ ಆಗುತ್ತದೆ. ಇದರಲ್ಲಿ ಅನೇಕ ರೋಗಿಗಳಿವೆ. 

೧. ಇಂಪೆಟಿಗೋ ( Impetigo) 
          ಇದು ಚಿಕ್ಕ ಮಕ್ಕಳಲ್ಲಿ ಬರುವ ಸಾಮಾನ್ಯ ತೊಂದರೆ. ಇದು ಹೆಚ್ಚಾಗಿ ಸಟಫೈಲೋಕಾಕಸ್ ಇಲ್ಲವೇ ಸ್ಟ್ರೆಪ್ಟೋಕಾಕಸ್ ಎಂಬ ಬ್ಯಾಕ್ಟೀರಿಯಾಗಳಿಂದ ಉಂಟಾಗುತ್ತದೆ. ಇದರಲ್ಲಿ ಬುಲ್ಲಸ್ ( Bullous) ಮತ್ತು ನಾನ್ ಬುಲ್ಲಸ್ ( Nonbullous) ಎಂಬ ಬಗೆಗಳಿವೆ. ಬುಲ್ಲಸ್ ಬಗೆಯಲ್ಲಿ ಬುಲ್ಲಗಳೆಂಬ ದೊಡ್ಡ ನೀರ್ಗುಳ್ಳೆಗಳಾಗುತ್ತವೆ ಹಾಗೂ ಅವು ಒಡೆದು ಚರ್ಮ ಕಿತ್ತು ಬರುತ್ತದೆ ಹಾಗೂ ನೋಯುತ್ತದೆ. ಇದು ಕಂಕುಳು, ತೊಡೆ ಸಂದಿ,ಬೆರಳುಗಳ ಮಧ್ಯೆ, ಸ್ತನಗಳ ಕೆಳಗೆ, ಹಾಗೂ ಪೃಷ್ಠಗಳಲ್ಲಾಗುತ್ತದೆ. ನವಜಾತ ಶಿಶುಗಳಲ್ಲಿ, ಪುಟ್ಟ ಮಕ್ಕಳಲ್ಲಿ, ಹಾಗೂ ರೋಗನಿರೋಧಕಶಕ್ತಿ ಬಹಳ ಕಡಿಮೆಯಿರುವ ಮತ್ತು ಮೂತ್ರಪಿಂಡ ವೈಫಲ್ಯವಿರುವ ವಯಸ್ಕರಲ್ಲಿ ಇದು ತೀವ್ರ ಸ್ವರೂಪ ಪಡೆದುಕೊಂಡರೆ ವಿಸ್ತಾರವಾದ ಚರ್ಮ ಪ್ರದೇಶಗಳು ಕಿತ್ತು ಬರುತ್ತವೆ. ಇದನ್ನು ಸ್ಟಫೈಲೋಕಾಕಲ್ ಸ್ಕಾಲ್ಡೆಡ್ ಸ್ಕಿನ್ ಸಿಂಡ್ರೋಮ್ ( Staphylococcal Scalded Skin Syndrome) ಎನ್ನುತ್ತಾರೆ. ಇದೂ ಸೇರಿದಂತೆ ಬುಲ್ಲಸ್ ಇಂಪೆಟಿಗೋ ಕಡಿಮೆ ಪ್ರಮಾಣದಲ್ಲಿ ಆಗುತ್ತದೆ.
      ನಾನ್ ಬುಲ್ಲಸ್ ಇಂಪೆಟಿಗೋ ಹೆಚ್ಚಿನ ಪ್ರಮಾಣದಲ್ಲಿ ಉಂಟಾಗುತ್ತದೆ. ಇದರಲ್ಲಿ ಮೊದಲು ಸಣ್ಣ ನೀರ್ಗುಳ್ಳೆಗಳೂ ಕೀವ್ಗುಳ್ಳೆಗಳೂ ಆಗಿ ಅವು ಬೇಗನೆ ಒಡೆದು ಹಳದಿ, ಜೇನು ಬಣ್ಣದ ಹೆಕ್ಕಳೆಗಳಾಗುತ್ತವೆ. ಇದು ಹೆಚ್ಚಾಗಿ ಮೂಗು ಮತ್ತು ಬಾಯ ಬಳಿ, ಹಾಗೂ ಕೈಕಾಲುಗಳಲ್ಲಿ ಉಂಟಾಗುತ್ತದೆ. ನೋವು ಮತ್ತು ತುರಿಕೆಗಳಿರುತ್ತವೆ. ಇದು ಬಹಳ ಬೇಗನೆ ಅಂಟುವ ರೋಗ.

ಫಾಲಿಕ್ಯುಲೈಟಿಸ್ ( Folliculitis) 
     ರೋಮಕೂಪದ ( Hair Follicle) ಮೇಲ್ಭಾಗದಲ್ಲಿ ಸ್ಟಫೈಲೋಕಾಕಸ್ ಬ್ಯಾಕ್ಟೀರಿಯಾ ಸೋಂಕಾದರೆ ಈ ತೊಂದರೆಯಾಗುತ್ತದೆ. ನೋಡಲು ಕೂದಲಿನ ಸಂಬಂಧದಲ್ಲಿ ಸಣ್ಣ ಸಣ್ಣ ಕೀವ್ಗುಳ್ಳೆಗಳಾಗುತ್ತವೆ ಮತ್ತು ನಾಯಿ, ಇವು ನೋಯುತ್ತವೆ. ಗಂಡಸರು ಗಡ್ಡ ಬೋಳಿಸುವಾಗ ರೋಮಕೂಪಗಳಿಗೆ ಗಾಯವಾಗಿ ಈ ಸೋಂಕಾಗಬಹುದು. ಮಧುಮೇಹ, ರೋಗನಿರೋಧಕ ಶಕ್ತಿಯ ಕುಂದುವಿಕೆ, ಮೊದಲಾದ ಕಾರಣಗಳಿಂದ ಇದು ದೀರ್ಘಾವಧಿಯವರೆಗೆ ಮತ್ತೆ ಮತ್ತೆ ಆಗುತ್ತಿರಬಹುದು.

ಫರಂಕಲ್ ( Furuncle)
    ಸಾಮಾನ್ಯವಾಗಿ ಬಾಯಿಲ್ ಅಥವಾ ಬಿಸಿಗುಳ್ಳೆ ಎಂದು ಕರೆಯಲಾಗುವ ಇದು, ರೋಮಕೂಪದ ಪೂರ್ಣ ಸೋಂಕಾಗಿರುತ್ತದೆ. ನೋಡಲು ಇದು ಕೂದಲ ಸಂಬಂಧದಲ್ಲಿ ಕೆಂಪು ಗುಳ್ಳೆಯಾಗಿ, ಕ್ರಮೇಣ ಕೀವಿನಿಂದ ತುಂಬಿ ದಪ್ಪವಾಗುತ್ತದೆ ಹಾಗೂ ಬಹಳ ನೋಯುತ್ತದೆ. ಅದು ಒಡೆದು ಕೀವು ಹೊರಸೂಸಬಹುದು. ಇದೂ ಕೂಡ ಮಧುಮೇಹ, ರೋಗನಿರೋಧಕ ಶಕ್ತಿಯ ಕುಂದುವಿಕೆಯಿದ್ದರೆ, ಊಟ,ನಿದ್ರೆಗಳು ಕಡಿಮೆಯಾದರೆ, ಒತ್ತಡ ಹೆಚ್ಚಾದರೆ ಮತ್ತೆ ಮತ್ತೆ ಆಗುತ್ತಿರಬಹುದು. 

ಕಾರ್ಬಂಕಲ್ ( Carbuncle)
     ಹಲವಾರು ರೋಮಕೂಪಗಳು ಒಟ್ಟಿಗೆ ಸೋಂಕಿಗೀಡಾದಾಗ ಈ ತೊಂದರೆಯಾಗುತ್ತದೆ. ಒಂದು ದೊಡ್ಡ ಊತ ಉಂಟಾಗಿ ಕೀವು ಸೂಸುವ ಹಲವಾರು ರಂಧ್ರಗಳಾಗುತ್ತವೆ. ಸಾಮಾನ್ಯವಾಗಿ ಈ ತೊಂದರೆಯು ಮಧುಮೇಹ, ಕ್ಯಾನ್ಸರ್, ಏಡ್ಸ್ ರೋಗಿಗಳಿಗೆ ಹಾಗೂ ಆಹಾರ ಕೊರತೆ, ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ ಆಗುತ್ತದೆ. ಮುಖ್ಯವಾಗಿ ರೋಗನಿರೋಧಕ ಶಕ್ತಿ ಬಹಳ ಕುಂದಿದವರಿಗೆ ಇದು ಆಗುತ್ತದೆ. ಇದು ಸಾಮಾನ್ಯವಾಗಿ ಕುತ್ತಿಗೆ,ಬೆನ್ನುಗಳಲ್ಲಿ ಕಂಡುಬರುತ್ತದೆ ಹಾಗೂ ನೋಡಲು ಕಲ್ಲಿದ್ದಲಿನಂತಿರುತ್ತದೆ. ಕಾರ್ಬಂಕಲ್ ಪದದ ಅರ್ಥ ಕಲ್ಲಿದ್ದಲು ಎಂದು. 

ಹೈಡ್ರಡಿನೈಟಿಸ್ ಸಪ್ಪುರಟಿವ ( Hydradenitis suppurativa)
      ಕೆಲವರಲ್ಲಿ, ಬೊಜ್ಜು, ಅನುವಂಶಿಕ ಕಾರಣಗಳು, ಹಾರ್ಮೋನ್ ವ್ಯತ್ಯಾಸಗಳು, ಮೊದಲಾದ ಕಾರಣಗಳಿಂದ ಕಂಕುಳು ಮೊದಲಾದ ಚರ್ಮ, ಚರ್ಮ ಸಂಯೋಗ ಪ್ರದೇಶಗಳಲ್ಲಿ ರೋಮಕೂಪಗಳು ನಿರೋಧಿಸಲ್ಪಟ್ಟು, ಕೀವು ಸೂಸುವ ಹಲವು ಗುಳ್ಳೃಗಳು ಮತ್ತೆ ಮತ್ತೆ ಆಗುತ್ತಾ ವಾಸಿಯಾದಂತೆ ಒರಟು ಕಲೆಗಳಾಗುತ್ತವೆ. ಇದನ್ನು ಹೈಡ್ರಡಿನೈಟಿಸ್ ಸಪ್ಪುರಟಿವ ಎನ್ನುತ್ತಾರೆ. ಇದು ಹೆಚ್ಚಾಗಿ ಬೊಜ್ಜುಳ್ಳ ಹೆಂಗಸರಲ್ಲಿ ಆಗುತ್ತದೆ. 

ಕುರ ಅಥವಾ ಆಬ್ಸೆಸ್ ( Abscess) 
     ಕೆಲವೊಮ್ಮೆ, ಮಧುಮೇಹ, ರೋಗನಿರೋಧಕ ಶಕ್ತಿ ಕುಂದುವಿಕೆ, ಕ್ಯಾನ್ಸರ್ ಚಿಕಿತ್ಸೆ, ಅಶುಚಿತ್ವ, ಮೊದಲಾದ ಕಾರಣಗಳಿಂದ ಬ್ಯಾಕ್ಟೀರಿಯಾ ಸೋಂಕು, ವಾಸಿಯಾಗದೇ ಕುರವಾಗಬಹುದು. ಕುರವೆಂದರೆ ಕೀವು ತುಂಬಿದ ಒಂದು ಊತ. ಇದಕ್ಕೆ ಸೂಜಿಯಿಂದ ಚುಚ್ಚಿ ಕೀವನ್ನು ತೆಗೆಯಬೇಕು. 
       
ಎರಿಸಿಪಿಲಸ್ ( Erysipelas) ಮತ್ತು ಸೆಲ್ಯುಲೈಟಿಸ್ ( Cellulitis)
       ಎರಿಸಿಪಿಲಸ್ ಚರ್ಮದ ಮೇಲ್ಪದರಗಳನ್ನು ಬಾಧಿಸುವ ಬ್ಯಾಕ್ಟೀರಿಯಾ ಸೋಂಕಾಗಿದ್ದು, ನಿರ್ದಿಷ್ಟ ಅಂಚುಗಳ ಕೆಂಪು ಊತ ಹಾಗೂ ನೋವುಂಟಾಗುತ್ತದೆ. ಸೆಲ್ಯುಲೃಟಿಸ್ ಚರ್ಮದ ಒಳಭಾಗ ಮತ್ತು ಅಡಿಭಾಗಗಳನ್ನು ಬಾಧಿಸುವ ಬ್ಯಾಕ್ಟೀರಿಯಾ ಸೋಂಕಾಗಿದ್ದು ಅನಿರ್ದಿಷ್ಟ ಅಂಚುಗಳ ನಸುಗೆಂಪು ಊತವಾಗಿ ನೋವಾಗುತ್ತದೆ. ಇದು ಚಿಕಿತ್ಸೆ ಮಾಡದಿದ್ದರೆ ಹರಡಿಕೊಂಡು ಹೋಗುತ್ತದೆ. 

ದ್ವಿತೀಯ ಪಯೋಡರ್ಮ 
     ಚರ್ಮಕ್ಕೆ ಕಜ್ಜಿ, ಇಸುಬು, ಮೊದಲಾಗಿ ಬೇರೆ ಯಾವುದಾದರೂ ತೊಂದರೆಯಿದ್ದು ಅವುಗಳ ತುರಿಕೆಯಿಂದ ಗಾಯಗಳಾಗಿ ಇಲ್ಲವೇ ಏಟು ಬಿದ್ದು ಗಾಯಗಳಾಗಿ ಅವುಗಳಿಗೆ ಬ್ಯಾಕ್ಟೀರಿಯಾ ಸೋಂಕಾದರೆ ಅದನ್ನು ದ್ವಿತೀಯ ಪಯೋಡರ್ಮ ಎನ್ನುತ್ತಾರೆ. 

ಚಿಕಿತ್ಸೆ ಮತ್ತು ನಿವಾರಣೆ 
    ಚರ್ಮದ ಬ್ಯಾಕ್ಟೀರಿಯಾ ಸೋಂಕುಗಳಿಗೆ ಮುಖ್ಯ ಚಿಕಿತ್ಸೆ ಎಂದರೆ ಆಂಟಿಬಯೋಟಿಕ್ ಗಳು ಅಥವಾ ಜೀವನಿರೋಧಕ ಔಷಧಿಗಳು.‌ ಅಮಾಕ್ಸಿಸಿಲಿನ್, ಸೆಫಲೋಸ್ಪೋರಿನ್, ಮೊದಲಾದ ಇವು ಬಾಯಿಂದ ಸೇವಿಸುವ ಮಾತ್ರೆ, ಸಿರಪ್ ಗಳಾಗಿ ಹಾಗೂ ಚರ್ಮಕ್ಕೆ ಸವರುವ ಫ್ಯುಸಿಡಿಕ್ ಆಮ್ಲ, ಮ್ಯುಪಿರೋಸಿನ್ ಮೊದಲಾದ ಮುಲಾಮುಗಳ ರೂಪದಲ್ಲಿ ದೊರೆಯುತ್ತವೆ. ಇವನ್ನು ಚರ್ಮವೈದ್ಯರ ನಿರ್ದೇಶನದಲ್ಲಿ ಬಳಸಬೇಕು. ಜ್ವರವಿದ್ದರೆ ಪ್ಯಾರಾಸಿಟಮಾಲ್ ಹಾಗೂ ನೋವಿದ್ದರೆ ನೋವು ನಿವಾರಕ ಔಷಧಿಗಳನ್ನು ನೀಡಲಾಗುತ್ತದೆ. ಫರಂಕಲ್ ಗಳಿಗೆ ಬಿಸಿ ನೀರಿನಲ್ಲಿ ಅದ್ದಿದ ಬಟ್ಟೆಯ ಶಾಖ ಕೊಡಬಹುದು. ಕೆಲವೊಮ್ಮೆ ಫರಂಕಲ್ ಮತ್ತು ಕುರಗಳಲ್ಲಿ ಸೂಜಿಯಿಂದ ಸಣ್ಣ ಛೇದನ ಮಾಡಿ ಕೀವನ್ನು ಹರಿಬಿಟ್ಟು ಪಟ್ಟಿ ಹಾಕುವ ಶಸ್ತ್ರಚಿಕಿತ್ಸೆ ಬೇಕಾಗುತ್ತದೆ. ಅಂತೆಯೇ ಸೆಲ್ಯುಲೈಟಿಸ್ ಮತ್ತು ಹೈಡ್ರಡಿನೈಟಿಸ್ ಸಪ್ಪುರಟಿವ ಔಷಧಿಗಳಿಂದ ಗುಣವಾಗದಿದ್ದರೆ ಇದೇ ರೀತಿಯ ಶಸ್ತ್ರಚಿಕಿತ್ಸೆ ಬೇಕಾಗುತ್ತದೆ. ಫರಂಕಲ್ ಗಳು ಪದೇ ಪದೇ ಆಗುತ್ತಿದ್ದರೆ ರೋಗನಿರೋಧಕ ಶಕ್ತಿ ಹೆಚ್ಚಿಸಲು ಜೀವಸತ್ವಗಳ ಔಷಧಿಗಳು ಬೇಕಾಗುತ್ತವೆ. ಹೈಡ್ರಡಿನೈಟಿಸ್ ಸಪ್ಪುರಟಿವ ಪದೇ ಪದೇ ಆಗುತ್ತಿದ್ದರೆ ಹಾಗೂ ಗುಣವಾಗದೇ ತೀವ್ರವಾಗಿದ್ದರೆ, ದೋಷಿತ ಚರ್ಮವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆಯಲಾಗುತ್ತದೆ. ಇದಕ್ಕೆ ಕೀವ್ಗುಳ್ಳೆಗಳನ್ನು ಸುಡುವ ಹಾಗೂ ಕೂದಲುಗಳನ್ನು ನಾಶಮಾಡುವ ಲೇಸರ್ ಚಿಕಿತ್ಸೆಯೂ ಇದೆ.
      ಬ್ಯಾಕ್ಟೀರಿಯಾಗಳ ಸೋಂಕುಗಳನ್ನು ತಡೆಗಟ್ಟಲು ಶುಚಿತ್ವ ಬಹಳ ಮುಖ್ಯ. ನಿತ್ಯ ಸ್ನಾನ, ಹಾಗೂ ಒಗೆದ ಬಟ್ಟೆಗಳನ್ನು ಧರಿಸುವುದು ಮುಖ್ಯ. ಒಳ್ಳೆಯ ಆಹಾರ ಸೇವನೆ, ನಿದ್ರೆ, ಮತ್ತು ವ್ಯಾಯಾಮಗಳಿಂದ ರೋಗನಿರೋಧಕ ಶಕ್ತಿ ಚೆನ್ನಾಗಿದ್ದು ಇವು ಉಂಟಾಗುವುದಿಲ್ಲ, ಹಾಗೂ ಒಮ್ಮೊಮ್ಮೆ ಉಂಟಾದರೂ ಬೇಗನೆ ವಾಸಿಯಾಗುತ್ತವೆ. ಮಧುಮೇಹ ಇರುವವರು ಚರ್ಮದ ವಿಷಯದಲ್ಲಿ ಎಚ್ಚರವಾಗಿರಬೇಕು. ಗಾಯಗಳಾಗದಂತೆ ನೋಡಿಕೊಳ್ಳಬೇಕು. ಗಾಯಗಳಾದರೆ ಆಂಟಿಬಯೋಟಿಕ್ ಮುಲಾಮುಗಳನ್ನು ಅವುಗಳಿಗೆ ಸವರಬೇಕು. ಕಜ್ಜಿ, ಇಸುಬು, ಮೊದಲಾದ ತುರಿಕೆಯ ರೋಗಗಳನ್ನು ಬೇಗ ವಾಸಿಮಾಡಿಕೊಳ್ಳಬೇಕು. ಯಾರಿಗಾದರೂ ಈ ಸೋಂಕು ರೋಗಗಳಿದ್ದರೆ ಅವು ಅಂಟುವ ಕಾರಣದಿಂದ ಇತರರಿಗೆ ಹರಡುವುದನ್ನು ತಪ್ಪಿಸಲು ಬೇಗನೆ ಚಿಕಿತ್ಸೆ ಪಡೆಯಬೇಕು. ಹೀಗೆ ಚರ್ಮದ ಸೋಂಕು ರೋಗಗಳು ಬರದಂತೆ ನಿವಾರಿಸಬಹುದು.

ಜೀವಜಗತ್ತಿನ ವಿಸ್ಮಯ - ಪೇಪರ್ ಕಣಜದ ಗೂಡು

ಈ ಚಿತ್ರದಲ್ಲಿ ಕಾಣುತ್ತಿರುವ ಗೂಡು ಪೇಪರ್ ವ್ಯಾಸ್ಪ್ ಎಂಬ ಕಣಜದ ಗೂಡು. ಇದು ನೋಡಲು ಸಿಕ್ಕಿದ್ದು ನಮ್ಮ ಸರ್ಕಾರದ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಅಡಿಯಲ್ಲಿ ಬರುವ ದುಬಾರೆ ಆನೆ ಶಿಬಿರದಲ್ಲಿ. ಕಣಜಗಳು ಈ ಗೂಡನ್ನು ತೊರೆದು ಹೋಗಿ ಅದು ಕೆಳಗೆ ಬಿದ್ದಿರಲು, ಸಿಬ್ಬಂದಿಯವರು ಅದನ್ನು ತೆಗೆದು ಒಂದು ಮರದ ಕೊಂಬೆಗೆ ತೂಗಿಹಾಕಿದ್ದಾರೆ. ವಾಸ್ತವವಾಗಿ ಇಲ್ಲಿ ಖಾಲಿ ಕೋಶಗಳನ್ನುಳ್ಳ ಪದರಗಳಂತೆ ಕಾಣುವ ಆಕೃತಿಗಳು ಮರದ ಕೊಂಬೆಯ ತುದಿಯವರೆಗೂ ಹೋಗಿ ಇವುಗಳ ಮೇಲೆ ಪೇಪರ್ ಅಥವಾ ಕಾಗದದಂಥ ಪದರ ಆವರಿಸಿರುತ್ತದೆ. ಪೇಪರ್ ಕಣಜಗಳು ನಾರುಗಳನ್ನು ಸತ್ತ ಮರ ಅಥವಾ ಸಸ್ಯಗಳ ಕಾಂಡಗಳಿಂದ ಸಂಗ್ರಹಿಸಿ ತಮ್ಮ ಲಾಲಾರಸದೊಂದಿಗೆ ಬೆರೆಸಿ ಬೂದು ಅಥವಾ ಕಂದು ಬಣ್ಣದ ಕಾಗದದಂಥ ವಸ್ತುವನ್ನು ಮಾಡಿ ಅದರಿಂದ ಗೂಡು ಕಟ್ಟುತ್ತವೆ. ಗೂಡಿನಲ್ಲಿ ಹಲವಾರು ಕೋಶಗಳಿದ್ದು ಇವುಗಳಲ್ಲಿ ತಮ್ಮ ಮರಿಗಳನ್ನು ಬೆಳೆಸುತ್ತವೆ. ಈ ಗೂಡನ್ನು ಅವು ಪೆಟಿಯೋಲ್ ಎಂಬ ಸಣ್ಣ ತೊಟ್ಟಿನ ಮೂಲಕ ಮರದ ಕೊಂಬೆಗೆ ಸೇರಿಸಿರುತ್ತವೆ. ಕಣಜಗಳು ಒಂದು ಇರುವೆ ವಿರೋಧಕ ರಾಸಾಯನಿಕವನ್ನು ಉತ್ಪತ್ತಿ ಮಾಡಿ ಅದನ್ನು ಪೆಟಿಯೋಲ್ ನ ಬುಡದ ಸುತ್ತ ಸವರುತ್ತವೆ. ಇರುವೆಗಳಿಂದ ಮೊಟ್ಟೆಗಳನ್ನು ಹಾಗೂ ಮರಿಗಳನ್ನು ರಕ್ಷಿಸಲು ಅವು ಹೀಗೆ ಮಾಡುತ್ತವೆ. ಈ ಚಿತ್ರದಲ್ಲಿ ಕಾಣುತ್ತಿರುವುದು ಕೋಶಗಳಿರುವ ಗೂಡಿನ ಒಳಭಾಗ. ಇದರ ಮೇಲೆ ಕಾಗದದಂಥ ಆವರಣವಿರುತ್ತದೆ. ಈ ಪೇಪರ್ ಕಣಜಗಳಲ್ಲಿ ಸುಮಾರು ಮುನ್ನೂರು ಪ್ರಭೇದಗಳಿವೆ.