ಗುರುವಾರ, ಜನವರಿ 15, 2026

ರಾಮಾಯಣದ ಉಪಕಥೆಗಳು

ಇತ್ತೀಚೆಗಷ್ಟೇ ರಾಮಾಯಣದ ಉಪಕಥೆಗಳು ಎಂಬ ನನ್ನ ಹೊಸ ಪುಸ್ತಕ, ಸಪ್ನ ಬುಕ್ ಹೌಸ್ ನಿಂದ ಬಿಡುಗಡೆಯಾಗಿದೆ. ಇದು ಸಪ್ನ ಬುಕ್ ಹೌಸ್ ನ ಎಲ್ಲಾ ಶಾಖೆಗಳಲ್ಲೂ, ಅಂತೆಯೇ ನವಕರ್ನಾಟಕ, ಅಂಕಿತ, ರಾಷ್ಟ್ರೋತ್ಥಾನ ಸಾಹಿತ್ಯ, ಹರಿವು ಬುಕ್ಸ್ ಮೊದಲಾದ ಸುಪ್ರಸಿದ್ಧ ಪುಸ್ತಕ ಮಳಿಗೆಗಳಲ್ಲೂ ದೊರೆಯುತ್ತದೆ. ಈ ಕಥಾಸಂಕಲನದಲ್ಲಿ ವಾಲ್ಮೀಕಿ ರಾಮಾಯಣದಲ್ಲಿ ಬರುವ ಎಲ್ಲಾ ಉಪಕಥೆಗಳನ್ನೂ ಸಂಗ್ರಹಿಸಿ ಸರಳ ಕನ್ನಡದಲ್ಲಿ ನಿರೂಪಿಸಿದ್ದೇನೆ. 
      ನಮ್ಮ ಆರ್ಷ ಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ, ಮುಖ್ಯವಾಗಿ ಶ್ರೀ ರಾಮನ ಕಥೆ ಹಾಗೂ ಕೌರವ, ಪಾಂಡವರ ಕಥೆಗಳನ್ನು ಹೇಳಿದರೂ ಇವುಗಳಲ್ಲಿ ಬಹಳಷ್ಟು ಉಪಕಥೆಗಳು ಬರುತ್ತವೆ. ಉಪಕಥೆ ಅಥವಾ ಉಪಾಖ್ಯಾನ ಎಂದರೆ, ಮುಖ್ಯಕಥೆಯ ಮಧ್ಯೆ ಬರುವ ಇತರ ಕಥೆಗಳು. ಈ ಕಥೆಗಳನ್ನು ಮುಖ್ಯ ಕಥೆಯ ಪಾತ್ರಗಳೇ ಸಂದರ್ಭೋಚಿತವಾಗಿ ಹೇಳುತ್ತವೆ. ರಾಮಾಯಣದಲ್ಲಿ, ವಿಶ್ವಾಮಿತ್ರರು ತಮ್ಮ ಯಜ್ಞ ಸಂರಕ್ಷಣೆಗಾಗಿ ರಾಮ, ಲಕ್ಷ್ಮಣರನ್ನು ಕರೆದೊಯ್ದಾಗ ದಾರಿಯಲ್ಲಿ ತಾಟಕಿ ಎಂಬ ರಾಕ್ಷಸಿ ಸಿಕ್ಕಾಗ ಅವಳ ಪೂರ್ವಕಥೆಯನ್ನು ಹೇಳುತ್ತಾರೆ. ಅನಂತರ, ಅವರು ಸಿದ್ಧಾಶ್ರಮ ಎಂಬ ಆಶ್ರಮದ ಬಳಿ ಬಂದಾಗ, ಆ ಆಶ್ರಮದಲ್ಲೇ ಮಹಾವಿಷ್ಣುವಿನ ವಾಮನಾವತಾರ ನಡೆದಿತ್ತೆಂದು ಹೇಳುತ್ತಾ ಆ ಕಥೆಯನ್ನು ಹೇಳುತ್ತಾರೆ. ಹೀಗೆಯೇ ಗಂಗಾನದಿಯ ಬಳಿ ಬಂದಾಗ, ಗಂಗಾನದಿ ಹೇಗೆ ಸ್ವರ್ಗದಿಂದ ಭೂಮಿಗೆ ಇಳಿದು ಬಂದಳು, ಅದಕ್ಕಾಗಿ ಭಗೀರಥನು ಎಷ್ಟು ಕಷ್ಟಪಟ್ಟ ಎಂಬ ಗಂಗಾವತರಣದ ದೀರ್ಘ ಕಥೆ ಹೇಳುತ್ತಾರೆ.ಈ ಸಂದರ್ಭದಲ್ಲೇ ಗಂಗೆಯ ಹಿರಿಯ ಸಹೋದರಿಯಾದ ಪಾರ್ವತಿಯನ್ನು ಶಿವನಿಗೆ ಕೊಟ್ಟು ಮದುವೆ ಮಾಡಲಾಯಿತು ಎನ್ನುತ್ತಾ ಅವರಿಗೆ ಕಾರ್ತಿಕೇಯನು ಹೇಗೆ ಹುಟ್ಟಿದ ಎಂಬ ಕಥೆ ಹೇಳುತ್ತಾರೆ. ಮುಂದೆ ಅವರು ವಿಶಾಲಾ ಎಂಬ ನಗರಿಗೆ ಬರಲು, ಆ ನಗರಿ ಇದ್ದ ಸ್ಥಳದಲ್ಲಿ ಹಿಂದೆ ಕಶ್ಯಪರ ಪತ್ನಿ ದಿತಿ ತಪಸ್ಸು ಮಾಡಿ ಮರುತ್ತರೆಂಬ ದೇವತೆಗಳನ್ನು ಮಕ್ಕಳಾಗಿ ಪಡೆದುಕೊಂಡ ಕಥೆ, ಅವಳು ಏಕೆ ತಪಸ್ಸು ಮಾಡಿದಳು ಎನ್ನುವುದಕ್ಕೆ ಪೂರ್ವಕಥೆಯಾಗಿ ಸಮುದ್ರಮಥನದ ಕಥೆ, ಇವನ್ನು ವಿಶ್ವಾಮಿತ್ರರು ಹೇಳುತ್ತಾರೆ. ಅನಂತರ ಗೌತಮರ ಆಶ್ರಮಕ್ಕೆ ಬರಲು, ಇಂದ್ರ ಮತ್ತು ಅಹಲ್ಯೆಯ ಕಥೆ ಹೇಳುತ್ತಾರೆ. ಮುಂದೆ ಅವರು ಮಿಥಿಲೆಗೆ ಹೋದಾಗ, ಅಲ್ಲಿ ಜನಕನ ಪುರೋಹಿತರಾಗಿದ್ದ ಗೌತಮರ ಪುತ್ರರಾದ ಶತಾನಂದರು ವಿಶ್ವಾಮಿತ್ರರ ಕಥೆಯನ್ನೇ ರಾಮ, ಲಕ್ಷ್ಮಣರಿಗೆ ಹೇಳುತ್ತಾರೆ. ರಾಜರಾಗಿದ್ದ ವಿಶ್ವಾಮಿತ್ರರು ಹೇಗೆ ಬ್ರಹ್ಮರ್ಷಿಗಳಾದರು ಎನ್ನುವುದು ಒಂದು ಸುದೀರ್ಘ ಹಾಗೂ ರೋಚಕ ಕಥಾನಕ. ಈ ದೊಡ್ಡ ಕಥೆಯ ಮಧ್ಯೆ, ತ್ರಿಶಂಕುವಿನ ಕಥೆ, ಮೇನಕೆಯ ಕಥೆ, ಶುನಶ್ಶೇಫನ ಕಥೆ, ಮೊದಲಾದ ಉಪೋಪಕಥೆಗಳೂ ಬರುತ್ತವೆ. ರಾಮಾಯಣದ ಕಥೆ ಮುಂದುವರೆದಂತೆ, ಜಟಾಯು, ಸಂಪಾತಿಗಳ ಕಥೆ, ವಾಲಿ, ಸುಗ್ರೀವರ ಪೂರ್ವಕಥೆಗಳು ಬರುತ್ತವೆ. ರಾಮಾಯಣದಲ್ಲಿ ಮುಖ್ಯವಾಗಿ ಉಪಕಥೆಗಳು ಇರುವುದು ಬಾಲಕಾಂಡದಲ್ಲಿ. ಅನಂತರ ನಮಗೆ ಉಪಕಥೆಗಳು ಹೆಚ್ಚಾಗಿ ಸಿಗುವುದು ಉತ್ತರಕಾಂಡದಲ್ಲಿ. ಶ್ರೀ ರಾಮನು ಅಯೋಧ್ಯೆಗೆ ಹಿಂದಿರುಗಿ ಸಿಂಹಾಸನಾರೂಢನಾದಾಗ, ಅಗಸ್ತ್ಯಾದಿ ಮುನಿಗಳು ಬಂದು ಮಹಾಪರಾಕ್ರಮಿಯೂ ಲೋಕಕಂಟಕನೂ ಆಗಿದ್ದ ರಾವಣನನ್ನು ಕೊಂದುದಕ್ಕಾಗಿ ಅವನನ್ನು ಅಭಿನಂದಿಸುತ್ತಾರೆ. ಆದರೆ ಅವನು ರಾವಣನನ್ನು ಕೊಂದುದಕ್ಕಿಂತಲೂ ಅವನ ತಮ್ಮ ಲಕ್ಷ್ಮಣನು ರಾವಣನ ಪುತ್ರ ಇಂದ್ರಜಿತುವನ್ನು ಕೊಂದುದು ದೊಡ್ಡ ವಿಷಯ ಎನ್ನಲು ಅಚ್ಚರಿಗೊಂಡ ರಾಮನು ಅದು ಹೇಗೆ ಎನ್ನಲು ಅಗಸ್ತ್ಯರು ಇಂದ್ರಜಿತುವಿನ ಕಥೆಯನ್ನು ಹೇಳುವ ಮೊದಲು ರಾವಣನ ಸಮಗ್ರ ಪೂರ್ವ ಕಥೆಗಳನ್ನು ಹೇಳುತ್ತಾರೆ. ಈ ಭಾಗವಂತೂ ಅತ್ಯಂತ ರೋಚಕವಾಗಿದೆ. ಸಾಮಾನ್ಯವಾಗಿ ಯಾರಾದರೂ ರಾಮಾಯಣದ ಸ್ಥೂಲ ಕಥೆಯನ್ನು ತಿಳಿದಿರುತ್ತಾರಾದರೂ ರಾವಣನ ಮೂಲ ಇತಿಹಾಸ, ಅವನು ಯಾರ ಮಗ, ಅವನೇಕೆ ಅಷ್ಟು ದುಷ್ಟನಾದ, ಅವನಿಗೆ ಬ್ರಹ್ಮನಿಂದ ಬಂದ ವರ, ಅವನ ದಿಗ್ವಿಜಯಗಳು, ಸಾಕ್ಷಾತ್ ಯಮನೊಂದಿಗೇ ಅವನು ಮಾಡಿದ ರೋಚಕ ಯುದ್ಧ, ಅವನ ಸ್ತ್ರೀ ವ್ಯಾಮೋಹ, ಲೋಕಕಂಟಕತೆ, ಅವನಿಗೆ ಬಂದ ಶಾಪಗಳು, ಕೊನೆಗೆ ಅಂಥ ಮಹಾಪರಾಕ್ರಮಿಯಾದ ಅವನಿಗೂ ಆದ ಕೆಲವು ಪರಾಭವಗಳು, ಇವೆಲ್ಲವೂ ಬಹುತೇಕರಿಗೆ ಗೊತ್ತಿರದ ವಿವರಗಳು. ಇಂದಿಗೂ ಎಷ್ಟೋ ಮುಗ್ಧ ಜನರು ರಾವಣನು ಸೀತಾಪಹರಣವನ್ನು ಬಿಟ್ಟರೆ ಬೇರೇನೂ ತಪ್ಪೇ ಮಾಡಿಲ್ಲವೆಂದೂ ಸೀತೆಯನ್ನೂ ಅವನು ಬಲಾತ್ಕರಿಸದೇ ತನ್ನ ತಂಗಿ ಶೂರ್ಪನಖಿಗೆ ರಾಮ, ಲಕ್ಷ್ಮಣರು ಮಾಡಿದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ಸೀತಾಪಹರಣ ಮಾಡಿದನೆಂದೂ ವಾದಿಸುತ್ತಾರೆ. ಆದರೆ ಸ್ವಾರಸ್ಯವೆಂದರೆ, ರಾವಣನು ತನ್ನ ಸ್ವಂತ ತಂಗಿ ಶೂರ್ಪನಖಿಯ ಗಂಡನನ್ನೇ ಕೊಂದ ದುಷ್ಟ ಎನ್ನುವುದು! ಸೀತೆಯನ್ನು ಬಲಾತ್ಕರಿಸದಿದ್ದುದರ ಕಾರಣ, ಅವನಿಗಿದ್ದ ಶಾಪದ ಭಯ! ಈ ಅದ್ಭುತ ವಿಚಾರಗಳು ಇಲ್ಲಿ ಸಿಗುತ್ತವೆ. ಆದರೂ ಕೆಲವರು ಉತ್ತರಕಾಂಡವು ವಾಲ್ಮೀಕಿಕೃತವಲ್ಲ, ಹಾಗಾಗಿ ರಾವಣನ ಕುರಿತಾದ ಈ ಕಥೆಗಳೆಲ್ಲಾ ಸುಳ್ಳು ಎಂದು ವಾದಿಸುತ್ತಾರೆ. ಆದರೆ ರಾವಣನು ಸತ್ತಾಗ ಅವನ ಪಟ್ಟದ ರಾಣಿ ಮಂದೋದರಿಯೇ ರೋದಿಸುತ್ತಾ ಅವನು ಮಾಡಿದ ಪಾಪಕಾರ್ಯಗಳನ್ನೆಲ್ಲ ಹೇಳುತ್ತಾಳೆ. ಅಲ್ಲದೇ ಕೆ.ಎಸ್.ನಾರಾಯಣಾಚಾರ್ಯರೇ ಮೊದಲಾದ ವಿದ್ವಾಂಸರು ಉತ್ತರಕಾಂಡವೂ ವಾಲ್ಮೀಕಿ ಕೃತವೆಂದೇ ತೋರಿಸಿದ್ದಾರೆ. ಇಷ್ಟು ಪರಾಕ್ರಮಿಯಾದರೂ ರಾವಣನು ಇಂದ್ರನಿಗೆ ಸಿಕ್ಕುಬಿದ್ದಾಗ ಅವನ ಮಗ ಮೇಘನಾದನು ಅವನನ್ನು ಬಿಡಿಸಿ ಇಂದ್ರಜಿತ್ ಎಂಬ ಹೆಸರು ಪಡೆಯುತ್ತಾನೆ. ಹೀಗಾಗಿ ಅವನು ರಾವಣನಿಗಿಂತ ಹೆಚ್ಚಿನ ಪರಾಕ್ರಮಿಯಾಗಿರುತ್ತಾನೆ. ಶ್ರೀ ರಾಮನು ರಾವಣ, ಇಂದ್ರಜಿತ್ ಇಬ್ಬರ ಕಥೆಗಳನ್ನೂ ಕೇಳಿ ಇವರಿಬ್ಬರಿಗಿಂತಲೂ ಹನುಮಂತನು ಹೆಚ್ಚಿನ ಪರಾಕ್ರಮಿಯೆಂದು ಅಭಿಪ್ರಾಯ ಪಡುತ್ತಾ ಇಷ್ಟಾದರೂ ವಾಲಿ, ಸುಗ್ರೀವರಿಗೆ ವಿರೋಧವಾದಾಗ ಅವನೇಕೆ ಸುಮ್ಮನಿದ್ದನು ಎಂದು ಕೇಳಲು, ಅಗಸ್ತ್ಯರು ಹನುಮಂತನ ಬಾಲ್ಯದ ಕಥೆಯನ್ನು ಹೇಳಿ ಅವನಿಗೆ ಬಂದ ಶಾಪದ ಬಗ್ಗೆ ಹೇಳುತ್ತಾರೆ. ಅನಂತರ, ದಂಡಕಾರಣ್ಯದ ಕಥೆ, ತನ್ನ ಹೆಣವನ್ನು ತಾನೇ ತಿನ್ನಬೇಕಾದ ಶ್ವೇತನೆಂಬ ರಾಜನ ವಿಚಿತ್ರ ಕಥೆ, ಗೋಸುಂಬೆಯಾಗಿ ಹುಟ್ಟುವ ನೃಗ ಮಹಾರಾಜನ ಕಥೆ, ಪುರುಷನಾಗಿದ್ದು ಸ್ತ್ರೀಯಾಗುವ ಇಲರಾಜನ ಕಥೆ, ವೃದ್ಧಾಪ್ಯದ ಶಾಪ ಪಡೆಯುವ ಯಯಾತಿಯ ಕಥೆ, ಹೀಗೆ ಹಲವಾರು ರೋಚಕ ಕಥೆಗಳು ಬರುತ್ತವೆ. ಕೆಲವು ಕಥೆಗಳನ್ನು ರಾಮ, ಲಕ್ಷ್ಮಣರು ಪರಸ್ಪರ ಹೇಳಿಕೊಳ್ಳುತ್ತಾರೆ. 
      ಕಥೆಗಳ ಬೃಹತ್ ಗಣಿಯಾದ ಮಹಾಭಾರತದಲ್ಲಿ ಬರುವಷ್ಟು ಉಪಕಥೆಗಳು ರಾಮಾಯಣದಲ್ಲಿ ಇಲ್ಲವಾದರೂ ಒಂದು ಒಳ್ಳೆಯ ಕಥಾಸಂಕಲನಕ್ಕೆ ಆಗುವಷ್ಟು ಉಪಕಥೆಗಳು ರಾಮಾಯಣದಲ್ಲಿ ಇವೆ. ಈ ಕಥೆಗಳನ್ನು ಸಂಗ್ರಹಿಸಿ ನಿರೂಪಿಸುವಾಗ, ಅವುಗಳನ್ನು ಯಾರು, ಯಾರಿಗೆ ಯಾವ ಸಂದರ್ಭದಲ್ಲಿ ಹೇಳಿದರು ಎಂಬುದನ್ನು ಸೂಚಿಸಿದ್ದೇನೆ. ಇದರಿಂದ, ರಾಮಾಯಣದ ಒಂದು ಪುಟ್ಟ ಪಯಣವನ್ನು ಮಾಡಿದಂತೆಯೂ ಆಗುತ್ತದೆ. 
      ಕಥೆಗಳು ಅಥವಾ ಪುಸ್ತಕಗಳು ಎಂದರೆ ಈಗ ಕೇವಲ ಸಾಮಾಜಿಕ ಕಥೆ ಕಾದಂಬರಿಗಳಷ್ಟೇ ಎಂಬ ಭಾವನೆ ಬಂದುಬಿಟ್ಟಿದೆ. ಇವು ಶ್ರೇಷ್ಠವೇ, ಇಲ್ಲವೆಂದೇನಿಲ್ಲ. ಆದರೆ ಯುರೋಪಿನ ಮೂಲದಿಂದ ಬಂದ ಈ ಸಾಹಿತ್ಯ ಪ್ರಕಾರ ಹೇಗೆ ಚೆನ್ನಾಗಿರುವುದೋ, ಹಾಗೆಯೇ ಭಾರತೀಯ ಮೂಲದ ಕಥಾಪರಂಪರೆಯನ್ನೂ ನಾವು ಗೌರವಿಸಬೇಕು ಹಾಗೂ ಆಸ್ವಾದಿಸಬೇಕು. ನಮ್ಮ ಕಥಾಪರಂಪರೆ ಬಹಳ ದೊಡ್ಡದು. ವೇದಗಳು, ಉಪನಿಷತ್ತುಗಳು, ರಾಮಾಯಣ, ಮಹಾಭಾರತ, ಹದಿನೆಂಟು ಪುರಾಣಗಳು, ಹದಿನೆಂಟು ಉಪಪುರಾಣಗಳು, ಸ್ಥಳಪುರಾಣಗಳು, ಬೃಹತ್ಕಥೆ ಆಧರಿತ ಕಥಾಸರಿತ್ಸಾಗರ, ಪಂಚತಂತ್ರ, ಹಿತೋಪದೇಶ, ಬೇತಾಳ ಪಂಚವಿಂಶತಿ, ಪುರುಷಪರೀಕ್ಷಾ, ಶುಕಸಪ್ತತಿ, ಬೌದ್ಧ ಜಾತಕ ಕಥೆಗಳು, ಬೌದ್ಧ ಅವದಾನ ಕಥೆಗಳು, ಬೃಹತ್ ಕಥಾಕೋಶ, ವಡ್ಡಾರಾಧನೆ, ಪುಣ್ಯಾಸ್ರವ, ಧರ್ಮಾಮೃತ, ಮೊದಲಾದ ಬಹಳಷ್ಟು ಜೈನ ಕಥಾ ಕೋಶಗಳು, ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ! ಈ ಎಲ್ಲಾ ಗ್ರಂಥಗಳಲ್ಲಿ ವಿಪುಲ ಕಥಾಸಾಮಗ್ರಿ ಇದೆ. ಇವನ್ನೆಲ್ಲಾ ಓದಿದರೆ, ಕಾಂತಾರ, ಬಾಹುಬಲಿಗಳಂಥ ಇನ್ನಷ್ಟು ಮತ್ತಷ್ಟು ಅದ್ಭುತ ಫ್ಯಾಂಟಸಿ ಚಿತ್ರಗಳನ್ನು ನಿರ್ಮಿಸಬಹುದು.
     ಇಂಥ ಕೆಲವು ಕಥಾಸಂಕಲನಗಳನ್ನು ನಾನು ಸಂಸ್ಕೃತದಿಂದ ಕನ್ನಡಕ್ಕೆ ತಂದಿದ್ದೇನೆ. ಇನ್ನೂ ತರುತ್ತಿದ್ದೇನೆ. ಇದೀಗ ರಾಮಾಯಣದ ಉಪಕಥೆಗಳು ಬಂದಿದೆ. ಮಹಾಭಾರತದ ಉಪಕಥೆಗಳು ಸಿದ್ಧವಾಗುತ್ತಿದೆ. ನನ್ನ ಈ ಪುಸ್ತಕಗಳನ್ನು ಖರೀದಿಸಿ ಓದುವುದರ ಮೂಲಕ ನನ್ನನ್ನು ಪ್ರೋತ್ಸಾಹಿಸಿ ಎಂದು ಕೋರುತ್ತೇನೆ.
      ಈ ಪುಸ್ತಕವನ್ನು ಸುವಿಖ್ಯಾತ ಪ್ರಕಾಶನ ಸಂಸ್ಥೆಯಾದ ಸಪ್ನ ಬುಕ್ ಹೌಸ್ ಅತ್ಯಂತ ಸೊಗಸಾಗಿ ಪ್ರಕಟಿಸಿದೆ. ಹಾಗೆಯೇ ಮುಖಪುಟದ ಚಿತ್ರ ಮತ್ತು ಒಳಪುಟಗಳ ಚಿತ್ರಗಳನ್ನು ಕಲಾವಿದರಾದ ಮೋನಪ್ಪ ಅವರು ಬಹಳ ಸೊಗಸಾಗಿ ಚಿತ್ರಿಸಿದ್ದಾರೆ. ಮುದ್ರಕರು ಸೊಗಸಾಗಿ ಮುದ್ರಿಸಿದ್ದಾರೆ. ಇದು ಕಿರಿಯರಿಗೆ, ಹಾಗೂ ಹಿರಿಯರಿಗೆ ಇಬ್ಬರಿಗೂ ಬಹಳ ಇಷ್ಟವಾಗುವುದರಲ್ಲಿ ಸಂದೇಹವೇ ಇಲ್ಲ. ಈ ನನ್ನ ಪ್ರಯತ್ನವನ್ನು ಪ್ರೋತ್ಸಾಹಿಸಿ ಪ್ರಕಟಿಸಿದ ಸಪ್ನ ಬುಕ್ ಹೌಸ್ ನ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ದೊಡ್ಡೆಗೌಡರಿಗೆ, ಪ್ರಧಾನ ಮುಖ್ಯಸ್ಥರಾದ ಶ್ರೀ ನಿತಿನ್ ಷಾ ಅವರಿಗೆ, ಕಲಾವಿದ ಮೋನಪ್ಪ ಅವರಿಗೆ, ದಿವ್ಯ ಪ್ರಿಂಟ್ರಾನಿಕ್ಸ್ ಡಿ ಟಿ ಪಿ ಆಪರೇಟರ್ ರಾಮಕೃಷ್ಣರಿಗೆ, ಇವರೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ