ಭಾನುವಾರ, ನವೆಂಬರ್ 30, 2025

ಚರ್ಮದ ಬ್ಯಾಕ್ಟೀರಿಯಾ ಸೋಂಕುಗಳು

ಚರ್ಮದ ಹಲವಾರು ಕಾಯಿಲೆಗಳಲ್ಲಿ ಸೋಂಕು ರೋಗಗಳೂ ಒಂದು. ಸೋಂಕು ರೋಗಗಳು ರೋಗಾಣುಗಳೆಂಬ ಸಣ್ಣ ಸಣ್ಣ ಜೀವಿಗಳಿಂದ ಉಂಟಾಗುವುದರಿಂದ ಇವು ಒಬ್ಬರಿಂದೊಬ್ಬರಿಗೆ ಸ್ಪರ್ಶದ ಮೂಲಕ ಪ್ರಸಾರವಾಗಿ ರೋಗಗಳು ಹರಡುತ್ತವೆ. ಹಾಗಾಗಿ ಇವನ್ನು ಅಂಟುರೋಗಗಳೆಂದೂ ಕರೆಯುತ್ತಾರೆ. ಇತರ ಅಂಗಾಂಗಗಳಿಗೆ ಉಂಟಾಗುವಂತೆ, ಚರ್ಮಕ್ಕೂ ಬ್ಯಾಕ್ಟೀರಿಯಾ, ವೈರಸ್, ಫಂಗಸ್, ಮತ್ತು ಪ್ಯಾರಾಸೈಟ್ ಅಥವಾ ಪರಾವಲಂಬಿಗಳಿಂದ ಸೋಂಕು ರೋಗಗಳು ಉಂಟಾಗುತ್ತವೆ. ಈಗ ಚರ್ಮಕ್ಕೆ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಕೆಲವು ಸಾಮಾನ್ಯ ರೋಗಗಳ ಬಗ್ಗೆ ತಿಳಿದುಕೊಳ್ಳೋಣ.
      ಸಾಮಾನ್ಯವಾಗಿ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ರೋಗಗಳಿಗೆ ಪಯೋಡರ್ಮ( Pyoderma ) ಎನ್ನುತ್ತಾರೆ. ಗ್ರೀಕ್ ಪದಗಳಾದ ಪಯೋ ಎಂದರೆ ಪಸ್ ಅಥವಾ ಕೀವು ಮತ್ತು ಡರ್ಮ ಎಂದರೆ ಚರ್ಮ. ಬ್ಯಾಕ್ಟೀರಿಯಾ ರೋಗಗಳಲ್ಲಿ ಚರ್ಮದಲ್ಲಿ ಕೀವು ಉಂಟಾಗುವುದರಿಂದ ಈ ಹೆಸರು ಬಂದಿದೆ. ಬ್ಯಾಕ್ಟೀರಿಯಾಗಳು ದಾಳಿ ಮಾಡಿದಾಗ, ರಕ್ತದಲ್ಲಿನ ಬಿಳಿ ರಕ್ತಕಣಗಳು ಅವುಗಳನ್ನು ಕೊಂದು ತಾವೂ ಸಾಯುತ್ತವೆ. ಸತ್ತ ಬ್ಯಾಕ್ಟೀರಿಯಾಗಳು ಮತ್ತು ಬಿಳಿ ರಕ್ತಕಣಗಳ ಮಿಶ್ರಿತ ಗಟ್ಟಿಯಾದ ಹಳದಿ ದ್ರವವೇ ಕೀವು. ಈ ಪಯೋಡರ್ಮದಲ್ಲಿ ಪ್ರಾಥಮಿಕ ಪಯೋಡರ್ಮ ( Primary Pyoderma) ಮತ್ತು ದ್ವಿತೀಯ ಪಯೋಡರ್ಮ ( Secondary Pyoderma) ಎಂಬ ಎರಡು ಮುಖ್ಯ ವಿಧಗಳಿವೆ. ಪ್ರಾಥಮಿಕ ಪಯೋಡರ್ಮ, ಯಾವುದೇ ಪೂರ್ವ ಕಾರಣವಿಲ್ಲದೆ ಚರ್ಮದ ಮೇಲೆ ನೇರವಾಗಿ ಆಗುತ್ತದೆ. ಇದರಲ್ಲಿ ಅನೇಕ ರೋಗಿಗಳಿವೆ. 

೧. ಇಂಪೆಟಿಗೋ ( Impetigo) 
          ಇದು ಚಿಕ್ಕ ಮಕ್ಕಳಲ್ಲಿ ಬರುವ ಸಾಮಾನ್ಯ ತೊಂದರೆ. ಇದು ಹೆಚ್ಚಾಗಿ ಸಟಫೈಲೋಕಾಕಸ್ ಇಲ್ಲವೇ ಸ್ಟ್ರೆಪ್ಟೋಕಾಕಸ್ ಎಂಬ ಬ್ಯಾಕ್ಟೀರಿಯಾಗಳಿಂದ ಉಂಟಾಗುತ್ತದೆ. ಇದರಲ್ಲಿ ಬುಲ್ಲಸ್ ( Bullous) ಮತ್ತು ನಾನ್ ಬುಲ್ಲಸ್ ( Nonbullous) ಎಂಬ ಬಗೆಗಳಿವೆ. ಬುಲ್ಲಸ್ ಬಗೆಯಲ್ಲಿ ಬುಲ್ಲಗಳೆಂಬ ದೊಡ್ಡ ನೀರ್ಗುಳ್ಳೆಗಳಾಗುತ್ತವೆ ಹಾಗೂ ಅವು ಒಡೆದು ಚರ್ಮ ಕಿತ್ತು ಬರುತ್ತದೆ ಹಾಗೂ ನೋಯುತ್ತದೆ. ಇದು ಕಂಕುಳು, ತೊಡೆ ಸಂದಿ,ಬೆರಳುಗಳ ಮಧ್ಯೆ, ಸ್ತನಗಳ ಕೆಳಗೆ, ಹಾಗೂ ಪೃಷ್ಠಗಳಲ್ಲಾಗುತ್ತದೆ. ನವಜಾತ ಶಿಶುಗಳಲ್ಲಿ, ಪುಟ್ಟ ಮಕ್ಕಳಲ್ಲಿ, ಹಾಗೂ ರೋಗನಿರೋಧಕಶಕ್ತಿ ಬಹಳ ಕಡಿಮೆಯಿರುವ ಮತ್ತು ಮೂತ್ರಪಿಂಡ ವೈಫಲ್ಯವಿರುವ ವಯಸ್ಕರಲ್ಲಿ ಇದು ತೀವ್ರ ಸ್ವರೂಪ ಪಡೆದುಕೊಂಡರೆ ವಿಸ್ತಾರವಾದ ಚರ್ಮ ಪ್ರದೇಶಗಳು ಕಿತ್ತು ಬರುತ್ತವೆ. ಇದನ್ನು ಸ್ಟಫೈಲೋಕಾಕಲ್ ಸ್ಕಾಲ್ಡೆಡ್ ಸ್ಕಿನ್ ಸಿಂಡ್ರೋಮ್ ( Staphylococcal Scalded Skin Syndrome) ಎನ್ನುತ್ತಾರೆ. ಇದೂ ಸೇರಿದಂತೆ ಬುಲ್ಲಸ್ ಇಂಪೆಟಿಗೋ ಕಡಿಮೆ ಪ್ರಮಾಣದಲ್ಲಿ ಆಗುತ್ತದೆ.
      ನಾನ್ ಬುಲ್ಲಸ್ ಇಂಪೆಟಿಗೋ ಹೆಚ್ಚಿನ ಪ್ರಮಾಣದಲ್ಲಿ ಉಂಟಾಗುತ್ತದೆ. ಇದರಲ್ಲಿ ಮೊದಲು ಸಣ್ಣ ನೀರ್ಗುಳ್ಳೆಗಳೂ ಕೀವ್ಗುಳ್ಳೆಗಳೂ ಆಗಿ ಅವು ಬೇಗನೆ ಒಡೆದು ಹಳದಿ, ಜೇನು ಬಣ್ಣದ ಹೆಕ್ಕಳೆಗಳಾಗುತ್ತವೆ. ಇದು ಹೆಚ್ಚಾಗಿ ಮೂಗು ಮತ್ತು ಬಾಯ ಬಳಿ, ಹಾಗೂ ಕೈಕಾಲುಗಳಲ್ಲಿ ಉಂಟಾಗುತ್ತದೆ. ನೋವು ಮತ್ತು ತುರಿಕೆಗಳಿರುತ್ತವೆ. ಇದು ಬಹಳ ಬೇಗನೆ ಅಂಟುವ ರೋಗ.

ಫಾಲಿಕ್ಯುಲೈಟಿಸ್ ( Folliculitis) 
     ರೋಮಕೂಪದ ( Hair Follicle) ಮೇಲ್ಭಾಗದಲ್ಲಿ ಸ್ಟಫೈಲೋಕಾಕಸ್ ಬ್ಯಾಕ್ಟೀರಿಯಾ ಸೋಂಕಾದರೆ ಈ ತೊಂದರೆಯಾಗುತ್ತದೆ. ನೋಡಲು ಕೂದಲಿನ ಸಂಬಂಧದಲ್ಲಿ ಸಣ್ಣ ಸಣ್ಣ ಕೀವ್ಗುಳ್ಳೆಗಳಾಗುತ್ತವೆ ಮತ್ತು ನಾಯಿ, ಇವು ನೋಯುತ್ತವೆ. ಗಂಡಸರು ಗಡ್ಡ ಬೋಳಿಸುವಾಗ ರೋಮಕೂಪಗಳಿಗೆ ಗಾಯವಾಗಿ ಈ ಸೋಂಕಾಗಬಹುದು. ಮಧುಮೇಹ, ರೋಗನಿರೋಧಕ ಶಕ್ತಿಯ ಕುಂದುವಿಕೆ, ಮೊದಲಾದ ಕಾರಣಗಳಿಂದ ಇದು ದೀರ್ಘಾವಧಿಯವರೆಗೆ ಮತ್ತೆ ಮತ್ತೆ ಆಗುತ್ತಿರಬಹುದು.

ಫರಂಕಲ್ ( Furuncle)
    ಸಾಮಾನ್ಯವಾಗಿ ಬಾಯಿಲ್ ಅಥವಾ ಬಿಸಿಗುಳ್ಳೆ ಎಂದು ಕರೆಯಲಾಗುವ ಇದು, ರೋಮಕೂಪದ ಪೂರ್ಣ ಸೋಂಕಾಗಿರುತ್ತದೆ. ನೋಡಲು ಇದು ಕೂದಲ ಸಂಬಂಧದಲ್ಲಿ ಕೆಂಪು ಗುಳ್ಳೆಯಾಗಿ, ಕ್ರಮೇಣ ಕೀವಿನಿಂದ ತುಂಬಿ ದಪ್ಪವಾಗುತ್ತದೆ ಹಾಗೂ ಬಹಳ ನೋಯುತ್ತದೆ. ಅದು ಒಡೆದು ಕೀವು ಹೊರಸೂಸಬಹುದು. ಇದೂ ಕೂಡ ಮಧುಮೇಹ, ರೋಗನಿರೋಧಕ ಶಕ್ತಿಯ ಕುಂದುವಿಕೆಯಿದ್ದರೆ, ಊಟ,ನಿದ್ರೆಗಳು ಕಡಿಮೆಯಾದರೆ, ಒತ್ತಡ ಹೆಚ್ಚಾದರೆ ಮತ್ತೆ ಮತ್ತೆ ಆಗುತ್ತಿರಬಹುದು. 

ಕಾರ್ಬಂಕಲ್ ( Carbuncle)
     ಹಲವಾರು ರೋಮಕೂಪಗಳು ಒಟ್ಟಿಗೆ ಸೋಂಕಿಗೀಡಾದಾಗ ಈ ತೊಂದರೆಯಾಗುತ್ತದೆ. ಒಂದು ದೊಡ್ಡ ಊತ ಉಂಟಾಗಿ ಕೀವು ಸೂಸುವ ಹಲವಾರು ರಂಧ್ರಗಳಾಗುತ್ತವೆ. ಸಾಮಾನ್ಯವಾಗಿ ಈ ತೊಂದರೆಯು ಮಧುಮೇಹ, ಕ್ಯಾನ್ಸರ್, ಏಡ್ಸ್ ರೋಗಿಗಳಿಗೆ ಹಾಗೂ ಆಹಾರ ಕೊರತೆ, ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ ಆಗುತ್ತದೆ. ಮುಖ್ಯವಾಗಿ ರೋಗನಿರೋಧಕ ಶಕ್ತಿ ಬಹಳ ಕುಂದಿದವರಿಗೆ ಇದು ಆಗುತ್ತದೆ. ಇದು ಸಾಮಾನ್ಯವಾಗಿ ಕುತ್ತಿಗೆ,ಬೆನ್ನುಗಳಲ್ಲಿ ಕಂಡುಬರುತ್ತದೆ ಹಾಗೂ ನೋಡಲು ಕಲ್ಲಿದ್ದಲಿನಂತಿರುತ್ತದೆ. ಕಾರ್ಬಂಕಲ್ ಪದದ ಅರ್ಥ ಕಲ್ಲಿದ್ದಲು ಎಂದು. 

ಹೈಡ್ರಡಿನೈಟಿಸ್ ಸಪ್ಪುರಟಿವ ( Hydradenitis suppurativa)
      ಕೆಲವರಲ್ಲಿ, ಬೊಜ್ಜು, ಅನುವಂಶಿಕ ಕಾರಣಗಳು, ಹಾರ್ಮೋನ್ ವ್ಯತ್ಯಾಸಗಳು, ಮೊದಲಾದ ಕಾರಣಗಳಿಂದ ಕಂಕುಳು ಮೊದಲಾದ ಚರ್ಮ, ಚರ್ಮ ಸಂಯೋಗ ಪ್ರದೇಶಗಳಲ್ಲಿ ರೋಮಕೂಪಗಳು ನಿರೋಧಿಸಲ್ಪಟ್ಟು, ಕೀವು ಸೂಸುವ ಹಲವು ಗುಳ್ಳೃಗಳು ಮತ್ತೆ ಮತ್ತೆ ಆಗುತ್ತಾ ವಾಸಿಯಾದಂತೆ ಒರಟು ಕಲೆಗಳಾಗುತ್ತವೆ. ಇದನ್ನು ಹೈಡ್ರಡಿನೈಟಿಸ್ ಸಪ್ಪುರಟಿವ ಎನ್ನುತ್ತಾರೆ. ಇದು ಹೆಚ್ಚಾಗಿ ಬೊಜ್ಜುಳ್ಳ ಹೆಂಗಸರಲ್ಲಿ ಆಗುತ್ತದೆ. 

ಕುರ ಅಥವಾ ಆಬ್ಸೆಸ್ ( Abscess) 
     ಕೆಲವೊಮ್ಮೆ, ಮಧುಮೇಹ, ರೋಗನಿರೋಧಕ ಶಕ್ತಿ ಕುಂದುವಿಕೆ, ಕ್ಯಾನ್ಸರ್ ಚಿಕಿತ್ಸೆ, ಅಶುಚಿತ್ವ, ಮೊದಲಾದ ಕಾರಣಗಳಿಂದ ಬ್ಯಾಕ್ಟೀರಿಯಾ ಸೋಂಕು, ವಾಸಿಯಾಗದೇ ಕುರವಾಗಬಹುದು. ಕುರವೆಂದರೆ ಕೀವು ತುಂಬಿದ ಒಂದು ಊತ. ಇದಕ್ಕೆ ಸೂಜಿಯಿಂದ ಚುಚ್ಚಿ ಕೀವನ್ನು ತೆಗೆಯಬೇಕು. 
       
ಎರಿಸಿಪಿಲಸ್ ( Erysipelas) ಮತ್ತು ಸೆಲ್ಯುಲೈಟಿಸ್ ( Cellulitis)
       ಎರಿಸಿಪಿಲಸ್ ಚರ್ಮದ ಮೇಲ್ಪದರಗಳನ್ನು ಬಾಧಿಸುವ ಬ್ಯಾಕ್ಟೀರಿಯಾ ಸೋಂಕಾಗಿದ್ದು, ನಿರ್ದಿಷ್ಟ ಅಂಚುಗಳ ಕೆಂಪು ಊತ ಹಾಗೂ ನೋವುಂಟಾಗುತ್ತದೆ. ಸೆಲ್ಯುಲೃಟಿಸ್ ಚರ್ಮದ ಒಳಭಾಗ ಮತ್ತು ಅಡಿಭಾಗಗಳನ್ನು ಬಾಧಿಸುವ ಬ್ಯಾಕ್ಟೀರಿಯಾ ಸೋಂಕಾಗಿದ್ದು ಅನಿರ್ದಿಷ್ಟ ಅಂಚುಗಳ ನಸುಗೆಂಪು ಊತವಾಗಿ ನೋವಾಗುತ್ತದೆ. ಇದು ಚಿಕಿತ್ಸೆ ಮಾಡದಿದ್ದರೆ ಹರಡಿಕೊಂಡು ಹೋಗುತ್ತದೆ. 

ದ್ವಿತೀಯ ಪಯೋಡರ್ಮ 
     ಚರ್ಮಕ್ಕೆ ಕಜ್ಜಿ, ಇಸುಬು, ಮೊದಲಾಗಿ ಬೇರೆ ಯಾವುದಾದರೂ ತೊಂದರೆಯಿದ್ದು ಅವುಗಳ ತುರಿಕೆಯಿಂದ ಗಾಯಗಳಾಗಿ ಇಲ್ಲವೇ ಏಟು ಬಿದ್ದು ಗಾಯಗಳಾಗಿ ಅವುಗಳಿಗೆ ಬ್ಯಾಕ್ಟೀರಿಯಾ ಸೋಂಕಾದರೆ ಅದನ್ನು ದ್ವಿತೀಯ ಪಯೋಡರ್ಮ ಎನ್ನುತ್ತಾರೆ. 

ಚಿಕಿತ್ಸೆ ಮತ್ತು ನಿವಾರಣೆ 
    ಚರ್ಮದ ಬ್ಯಾಕ್ಟೀರಿಯಾ ಸೋಂಕುಗಳಿಗೆ ಮುಖ್ಯ ಚಿಕಿತ್ಸೆ ಎಂದರೆ ಆಂಟಿಬಯೋಟಿಕ್ ಗಳು ಅಥವಾ ಜೀವನಿರೋಧಕ ಔಷಧಿಗಳು.‌ ಅಮಾಕ್ಸಿಸಿಲಿನ್, ಸೆಫಲೋಸ್ಪೋರಿನ್, ಮೊದಲಾದ ಇವು ಬಾಯಿಂದ ಸೇವಿಸುವ ಮಾತ್ರೆ, ಸಿರಪ್ ಗಳಾಗಿ ಹಾಗೂ ಚರ್ಮಕ್ಕೆ ಸವರುವ ಫ್ಯುಸಿಡಿಕ್ ಆಮ್ಲ, ಮ್ಯುಪಿರೋಸಿನ್ ಮೊದಲಾದ ಮುಲಾಮುಗಳ ರೂಪದಲ್ಲಿ ದೊರೆಯುತ್ತವೆ. ಇವನ್ನು ಚರ್ಮವೈದ್ಯರ ನಿರ್ದೇಶನದಲ್ಲಿ ಬಳಸಬೇಕು. ಜ್ವರವಿದ್ದರೆ ಪ್ಯಾರಾಸಿಟಮಾಲ್ ಹಾಗೂ ನೋವಿದ್ದರೆ ನೋವು ನಿವಾರಕ ಔಷಧಿಗಳನ್ನು ನೀಡಲಾಗುತ್ತದೆ. ಫರಂಕಲ್ ಗಳಿಗೆ ಬಿಸಿ ನೀರಿನಲ್ಲಿ ಅದ್ದಿದ ಬಟ್ಟೆಯ ಶಾಖ ಕೊಡಬಹುದು. ಕೆಲವೊಮ್ಮೆ ಫರಂಕಲ್ ಮತ್ತು ಕುರಗಳಲ್ಲಿ ಸೂಜಿಯಿಂದ ಸಣ್ಣ ಛೇದನ ಮಾಡಿ ಕೀವನ್ನು ಹರಿಬಿಟ್ಟು ಪಟ್ಟಿ ಹಾಕುವ ಶಸ್ತ್ರಚಿಕಿತ್ಸೆ ಬೇಕಾಗುತ್ತದೆ. ಅಂತೆಯೇ ಸೆಲ್ಯುಲೈಟಿಸ್ ಮತ್ತು ಹೈಡ್ರಡಿನೈಟಿಸ್ ಸಪ್ಪುರಟಿವ ಔಷಧಿಗಳಿಂದ ಗುಣವಾಗದಿದ್ದರೆ ಇದೇ ರೀತಿಯ ಶಸ್ತ್ರಚಿಕಿತ್ಸೆ ಬೇಕಾಗುತ್ತದೆ. ಫರಂಕಲ್ ಗಳು ಪದೇ ಪದೇ ಆಗುತ್ತಿದ್ದರೆ ರೋಗನಿರೋಧಕ ಶಕ್ತಿ ಹೆಚ್ಚಿಸಲು ಜೀವಸತ್ವಗಳ ಔಷಧಿಗಳು ಬೇಕಾಗುತ್ತವೆ. ಹೈಡ್ರಡಿನೈಟಿಸ್ ಸಪ್ಪುರಟಿವ ಪದೇ ಪದೇ ಆಗುತ್ತಿದ್ದರೆ ಹಾಗೂ ಗುಣವಾಗದೇ ತೀವ್ರವಾಗಿದ್ದರೆ, ದೋಷಿತ ಚರ್ಮವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆಯಲಾಗುತ್ತದೆ. ಇದಕ್ಕೆ ಕೀವ್ಗುಳ್ಳೆಗಳನ್ನು ಸುಡುವ ಹಾಗೂ ಕೂದಲುಗಳನ್ನು ನಾಶಮಾಡುವ ಲೇಸರ್ ಚಿಕಿತ್ಸೆಯೂ ಇದೆ.
      ಬ್ಯಾಕ್ಟೀರಿಯಾಗಳ ಸೋಂಕುಗಳನ್ನು ತಡೆಗಟ್ಟಲು ಶುಚಿತ್ವ ಬಹಳ ಮುಖ್ಯ. ನಿತ್ಯ ಸ್ನಾನ, ಹಾಗೂ ಒಗೆದ ಬಟ್ಟೆಗಳನ್ನು ಧರಿಸುವುದು ಮುಖ್ಯ. ಒಳ್ಳೆಯ ಆಹಾರ ಸೇವನೆ, ನಿದ್ರೆ, ಮತ್ತು ವ್ಯಾಯಾಮಗಳಿಂದ ರೋಗನಿರೋಧಕ ಶಕ್ತಿ ಚೆನ್ನಾಗಿದ್ದು ಇವು ಉಂಟಾಗುವುದಿಲ್ಲ, ಹಾಗೂ ಒಮ್ಮೊಮ್ಮೆ ಉಂಟಾದರೂ ಬೇಗನೆ ವಾಸಿಯಾಗುತ್ತವೆ. ಮಧುಮೇಹ ಇರುವವರು ಚರ್ಮದ ವಿಷಯದಲ್ಲಿ ಎಚ್ಚರವಾಗಿರಬೇಕು. ಗಾಯಗಳಾಗದಂತೆ ನೋಡಿಕೊಳ್ಳಬೇಕು. ಗಾಯಗಳಾದರೆ ಆಂಟಿಬಯೋಟಿಕ್ ಮುಲಾಮುಗಳನ್ನು ಅವುಗಳಿಗೆ ಸವರಬೇಕು. ಕಜ್ಜಿ, ಇಸುಬು, ಮೊದಲಾದ ತುರಿಕೆಯ ರೋಗಗಳನ್ನು ಬೇಗ ವಾಸಿಮಾಡಿಕೊಳ್ಳಬೇಕು. ಯಾರಿಗಾದರೂ ಈ ಸೋಂಕು ರೋಗಗಳಿದ್ದರೆ ಅವು ಅಂಟುವ ಕಾರಣದಿಂದ ಇತರರಿಗೆ ಹರಡುವುದನ್ನು ತಪ್ಪಿಸಲು ಬೇಗನೆ ಚಿಕಿತ್ಸೆ ಪಡೆಯಬೇಕು. ಹೀಗೆ ಚರ್ಮದ ಸೋಂಕು ರೋಗಗಳು ಬರದಂತೆ ನಿವಾರಿಸಬಹುದು.

ಜೀವಜಗತ್ತಿನ ವಿಸ್ಮಯ - ಪೇಪರ್ ಕಣಜದ ಗೂಡು

ಈ ಚಿತ್ರದಲ್ಲಿ ಕಾಣುತ್ತಿರುವ ಗೂಡು ಪೇಪರ್ ವ್ಯಾಸ್ಪ್ ಎಂಬ ಕಣಜದ ಗೂಡು. ಇದು ನೋಡಲು ಸಿಕ್ಕಿದ್ದು ನಮ್ಮ ಸರ್ಕಾರದ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಅಡಿಯಲ್ಲಿ ಬರುವ ದುಬಾರೆ ಆನೆ ಶಿಬಿರದಲ್ಲಿ. ಕಣಜಗಳು ಈ ಗೂಡನ್ನು ತೊರೆದು ಹೋಗಿ ಅದು ಕೆಳಗೆ ಬಿದ್ದಿರಲು, ಸಿಬ್ಬಂದಿಯವರು ಅದನ್ನು ತೆಗೆದು ಒಂದು ಮರದ ಕೊಂಬೆಗೆ ತೂಗಿಹಾಕಿದ್ದಾರೆ. ವಾಸ್ತವವಾಗಿ ಇಲ್ಲಿ ಖಾಲಿ ಕೋಶಗಳನ್ನುಳ್ಳ ಪದರಗಳಂತೆ ಕಾಣುವ ಆಕೃತಿಗಳು ಮರದ ಕೊಂಬೆಯ ತುದಿಯವರೆಗೂ ಹೋಗಿ ಇವುಗಳ ಮೇಲೆ ಪೇಪರ್ ಅಥವಾ ಕಾಗದದಂಥ ಪದರ ಆವರಿಸಿರುತ್ತದೆ. ಪೇಪರ್ ಕಣಜಗಳು ನಾರುಗಳನ್ನು ಸತ್ತ ಮರ ಅಥವಾ ಸಸ್ಯಗಳ ಕಾಂಡಗಳಿಂದ ಸಂಗ್ರಹಿಸಿ ತಮ್ಮ ಲಾಲಾರಸದೊಂದಿಗೆ ಬೆರೆಸಿ ಬೂದು ಅಥವಾ ಕಂದು ಬಣ್ಣದ ಕಾಗದದಂಥ ವಸ್ತುವನ್ನು ಮಾಡಿ ಅದರಿಂದ ಗೂಡು ಕಟ್ಟುತ್ತವೆ. ಗೂಡಿನಲ್ಲಿ ಹಲವಾರು ಕೋಶಗಳಿದ್ದು ಇವುಗಳಲ್ಲಿ ತಮ್ಮ ಮರಿಗಳನ್ನು ಬೆಳೆಸುತ್ತವೆ. ಈ ಗೂಡನ್ನು ಅವು ಪೆಟಿಯೋಲ್ ಎಂಬ ಸಣ್ಣ ತೊಟ್ಟಿನ ಮೂಲಕ ಮರದ ಕೊಂಬೆಗೆ ಸೇರಿಸಿರುತ್ತವೆ. ಕಣಜಗಳು ಒಂದು ಇರುವೆ ವಿರೋಧಕ ರಾಸಾಯನಿಕವನ್ನು ಉತ್ಪತ್ತಿ ಮಾಡಿ ಅದನ್ನು ಪೆಟಿಯೋಲ್ ನ ಬುಡದ ಸುತ್ತ ಸವರುತ್ತವೆ. ಇರುವೆಗಳಿಂದ ಮೊಟ್ಟೆಗಳನ್ನು ಹಾಗೂ ಮರಿಗಳನ್ನು ರಕ್ಷಿಸಲು ಅವು ಹೀಗೆ ಮಾಡುತ್ತವೆ. ಈ ಚಿತ್ರದಲ್ಲಿ ಕಾಣುತ್ತಿರುವುದು ಕೋಶಗಳಿರುವ ಗೂಡಿನ ಒಳಭಾಗ. ಇದರ ಮೇಲೆ ಕಾಗದದಂಥ ಆವರಣವಿರುತ್ತದೆ. ಈ ಪೇಪರ್ ಕಣಜಗಳಲ್ಲಿ ಸುಮಾರು ಮುನ್ನೂರು ಪ್ರಭೇದಗಳಿವೆ.
                                   
                                  

ಸೋಮವಾರ, ಅಕ್ಟೋಬರ್ 6, 2025

ಪ್ರಕೃತಿ ವಿಸ್ಮಯ - ಸುಂದರ ಹೂವಿನ ವಿಷಸಸ್ಯ


ದುಬಾರೆ ಕಾಡು ಪ್ರದೇಶದಲ್ಲಿ ಕಂಡ ಈ ಸುಂದರ ಹೂವಿನ ಗಿಡದ ಹೆಸರು ಗ್ಲೋರಿಯೋಸಾ ಸುಪರ್ಬ! ಇದನ್ನು ಗ್ಲೋರಿ ಲಿಲ್ಲಿ, ಫೈರ್ ಲಿಲ್ಲಿ , ಫ್ಲೇಮ್ ಲಿಲ್ಲಿ, ಗ್ಲೋರಿಯೋಸಾ ಲಿಲ್ಲಿ, ಟೈಗರ್ ಕ್ಲಾ, ಕ್ಲೈಂಬಿಂಗ್ ಲಿಲ್ಲಿ, ಮೊದಲಾದ ಹೆಸರುಗಳಿಂದಲೂ ಕರೆಯುತ್ತಾರೆ. ಬೆಂಕಿಯ ಜ್ವಾಲೆಗಳಂತೆ ಕೆಂಪು, ಹಳದಿ ಬಣ್ಣಗಳ ಅಲೆಗಳಂಥ ದಳಗಳನ್ನುಳ್ಳ ಇದರ ಹೂವು ನೋಡಲು ಬಹಳ ಆಕರ್ಷಕ! ಈ ಗಿಡ, ರೈಜೋಮ್ ಎಂಬ ಮಾರ್ಪಾಟಾದ ಮಾಂಸಲ ಕಾಂಡದಿಂದ ಬೆಳೆಯುವ ಒಂದು ಹತ್ತುವ ಬಳ್ಳಿ. ಇದರ ಎಲೆಗಳ ತುದಿಗಳಲ್ಲಿ ಟೆಂಡ್ರಿಲ್ ಗಳೆಂಬ ರಚನೆಗಳಿದ್ದು ಅವುಗಳ ಸಹಾಯದಿಂದ ಸನಿಹದ ಮರಗಳನ್ನು ಹತ್ತುತ್ತಾ ಬೆಳೆಯುತ್ತದೆ. ಇದರ ಹೂವು ನೋಡಲು ಎಷ್ಟು ಆಕರ್ಷಕವೋ ಇದು ಅಷ್ಟೇ ವಿಷಕಾರಿಯಾಗಿದೆ! ಈ ಗಿಡದ ಹೂವು, ಎಲೆ, ಬಳ್ಳಿ, ಮತ್ತು ಮುಖ್ಯವಾಗಿ ರೈಜೋಮ್, ಹೀಗೆ ಪ್ರತಿಯೊಂದು ಭಾಗವೂ ವಿಷಮಯ! ಕಾಲ್ಚಿಕೇಸೀ ಎಂಬ ಕುಟುಂಬಕ್ಕೆ ಸೇರುವ ಇದು ಕಾಲ್ಚಿಸೀನ್ ಎಂಬ ವಿಷಯುಕ್ತ ಆಲ್ಕಲಾಯ್ಡ್ ರಾಸಾಯನಿಕವನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಹೊಂದಿರುತ್ತದೆ. ಇದರೊಂದಿಗೆ ಗ್ಲೋರಿಯೋಸೀನ್ ಎಂಬ ಇನ್ನೊಂದು ಆಲ್ಕಲಾಯ್ಡ್ ಅನ್ನೂ ಹೊಂದಿರುತ್ತದೆ. ಇದನ್ನು ಸೇವಿಸಿದ ಮನುಷ್ಯರಿಗಾಗಲೀ ಪ್ರಾಣಿಗಳಿಗಾಗಲೀ ಇದು ಮಾರಣಾಂತಿಕವಾಗಬಹುದು! ಇದನ್ನು ಸೇವಿಸಿದ ಕೆಲವು ಗಂಟೆಗಳಲ್ಲಿ ಹೊಟ್ಟೆ ತೊಳಸುವಿಕೆ, ವಾಂತಿ, ಹೊಟ್ಟೆ ನೋವು, ರಕ್ತಭೇದಿ, ಗಂಟಲು ಉರಿ, ಬಾಯ ಸುತ್ತ ಮರಗಟ್ಟುವಿಕೆ, ಉಸಿರಾಟ ಕ್ಷೀಣಿಸುವಿಕೆ, ರಕ್ತದೊತ್ತಡ ಇಳಿಮುಖವಾಗುವುದು, ರಕ್ತ ಮೂತ್ರ, ಮಾನಸಿಕ ಅಸ್ವಸ್ಥತೆ, ಅಪಸ್ಮಾರ, ಕೋಮಾ, ಮೊದಲಾದ ಲಕ್ಷಣಗಳುಂಟಾಗುತ್ತವೆ! ಬದುಕುಳಿದವರಲ್ಲಿ ಕೂದಲುದುರುವಿಕೆ, ಚರ್ಮದ ಇಸುಬು, ಹಾಗೂ ಸ್ತ್ರೀಯರಲ್ಲಿ ದೀರ್ಘಕಾಲ ಮುಟ್ಟಿನಲ್ಲಿ ರಕ್ತಸ್ರಾವವಾಗುತ್ತವೆ! ಈ ಗಿಡದ ಭಾಗಗಳನ್ನು ಮುಟ್ಟಿದರೂ ಚರ್ಮದ ಉರಿ, ಮತ್ತು ಚರ್ಮದ ಕೀಳುವಿಕೆಗಳಾಗುತ್ತವೆ! ಕೆಲವು ದುಷ್ಕರ್ಮಿಗಳು ಇದನ್ನು ಮನುಷ್ಯರನ್ನು ಮತ್ತು ಪ್ರಾಣಿಗಳನ್ನು ಕೊಲ್ಲಲು ಬಳಸುತ್ತಾರೆ! ಕೆಲವರು ಆತ್ಮಹತ್ಯೆಗೂ ಬಳಸುವುದುಂಟು! ಕೆಲವೊಮ್ಮೆ ಇದರ ಮಾಂಸಲ ರೈಜೋಮ್ ಅನ್ನು ಸುವರ್ಣ ಗೆಡ್ಡೆ ಅಥವಾ ಸಿಹಿ ಗೆಣಸೆಂದು ತಪ್ಪು ತಿಳಿದು ತಿಂದು ವಿಷಪ್ರಾಶನಕ್ಕೊಳಗಾಗಬಹುದು! ನೈಜೀರಿಯಾದಲ್ಲಿ ಇದನ್ನು ಬಾಣದ ವಿಷವಾಗಿ ಬಳಸಲಾಗುತ್ತದೆ! ಇದು ಹೀಗೆ ವಿಷಕಾರಿಯಾದರೂ ಇದನ್ನು ಬಹಳ ಕಾಲದಿಂದ ಅನೇಕ ಸಂಸ್ಕೃತಿಗಳಲ್ಲಿ ಗೌಟ್ ಎಂಬ ಸಂಧಿವಾತ, ಮೂಲವ್ಯಾಧಿ, ಹಾವು ಕಚ್ಚುವಿಕೆ, ಕ್ಯಾನ್ಸರ್, ಗಾಯಗಳು, ಕುಷ್ಠರೋಗ, ಮೊದಲಾದ ಹಲವಾರು ಕಾಯಿಲೆ, ಸಮಸ್ಯೆಗಳಲ್ಲಿ ಔಷಧಿಯಾಗಿ ಬಳಸಲಾಗುತ್ತಿದೆ. ಇದರಿಂದ ಗೌಟ್ ಎಂಬ ಸಂಧಿವಾತಕ್ಕೆ ಔಷಧಿಯಾಗಿರುವ ಕಾಲ್ಚಿಸೀನ್ ರಾಸಾಯನಿಕವನ್ನು ತೆಗೆಯಲಾಗುತ್ತದೆ. ಹಾಗಾಗಿ ಇದು ಬಹಳ ಲಾಭದಾಯಕ ಗಿಡವಾಗಿದೆ. ಕೆಲವು ಸಂಸ್ಕೃತಿಗಳಲ್ಲಿ ಇದನ್ನು ಮಾಯಾಪುಷ್ಪವೆಂದು ಭಾವಿಸಲಾಗಿ ಧಾರ್ಮಿಕ ಕ್ರಿಯೆಗಳಲ್ಲಿ ಬಳಸಲಾಗುತ್ತದೆ! ಸ್ವಾರಸ್ಯವೆಂದರೆ ಇದು ಕಾರ್ತಿಕಮಾಸದಲ್ಲಿ ಬೆಳೆಯುವುದರಿಂದ ತಮಿಳುನಾಡಿನಲ್ಲಿ ಇದನ್ನು ಕಾರ್ತಿಗೈಪೂ ಎನ್ನುತ್ತಾರೆ ಹಾಗೂ ಅಲ್ಲಿ ಇದು ರಾಜ್ಯಪುಷ್ಪವಾಗಿದೆ! ಅಂತೆಯೇ ಇದು ಜಿಂಬಾಬ್ವೇನ ರಾಷ್ಟ್ರೀಯ ಪುಷ್ಪವಾಗಿದೆ! 

ಸೋಮವಾರ, ಸೆಪ್ಟೆಂಬರ್ 29, 2025

ಸ್ಟ್ರಾಬೆರಿ ಸೇವಿಸಿ ಮಹಾಬಲೇಶ್ವರ ದರ್ಶಿಸಿ

      ಪಶ್ಚಿಮ ಘಟ್ಟಗಳ ಸುಂದರವಾದ ಸಹ್ಯಾದ್ರಿ ಬೆಟ್ಟಗಳ ಸಾಲು, ಅವುಗಳ ಮಧ್ಯೆ ಒಂದು ನದಿಯ ಕಣಿವೆ, ಮೈಯನ್ನು ಮೆಲ್ಲನೆ ತೀಡುವ ತಂಗಾಳಿ, ಕೆಲವು ಪ್ರಾಚೀನ ದೇವಾಲಯಗಳು,  ಮಹಾನ್ ನದಿಯೊಂದರ ಉಗಮಸ್ಥಳ, ಸಂಜೆಯ ಹೊಂಬಣ್ಣದ ಸೂರ್ಯಾಸ್ತದ ವೈಭವ, ಇವೆಲ್ಲವುಗಳೊಂದಿಗೆ ಇಲ್ಲಿಗೆ ಹೋಗುವ ದಾರಿಯುದ್ದಕ್ಕೂ  ಕೆಂಪಾದ ರಸಭರಿತ ಸ್ಟ್ರಾಬೆರಿ ಹಣ್ಣುಗಳ ಸವಿ, ಇಂಥ ಪ್ರವಾಸ ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ನಮ್ಮ ಭಾರತದಲ್ಲಿ ಇಂಥ ಸ್ಥಳಗಳು ಹಲವಾರಿವೆ ನಿಜ! ಆದರೆ ಈಗ ನಾನು ಹೇಳಲು ಹೊರಟಿರುವ ಸ್ಥಳ,  ಸ್ಟ್ರಾಬೆರಿ ಹಣ್ಣುಗಳ ರಸಾಸ್ವಾದ ಇರುವ ಮಹಾರಾಷ್ಟ್ರದ ಮಹಾಬಲೇಶ್ವರ! ಮಹಾಬಲೇಶ್ವರ, ಮಹಾರಾಷ್ಟ್ರದ ನೋಡಲೇಬೇಕಾದ ಒಂದು ಸುಂದರ ಗಿರಿಧಾಮ! ಇಲ್ಲಿ ಕೃಷ್ಣಾ, ಕೊಯ್ನಾ, ವೇನ್ನಾ, ಸಾವಿತ್ರೀ, ಮತ್ತು ಗಾಯತ್ರೀ ಎಂಬ ಐದು ನದಿಗಳು ಉಗಮವಾಗುತ್ತವೆ! ಹಿಂದೂಗಳಾದ ನಮಗೆ ಇದೊಂದು ಯಾತ್ರಾ ಸ್ಥಳವಾದರೆ, ಬ್ರಿಟಿಷರು ಇದನ್ನು ಒಂದು ಗಿರಿಧಾಮವಾಗಿ ಅಭಿವೃದ್ಧಿಪಡಿಸಿ, ಬಾಂಬೆ ಪ್ರೆಸಿಡೆನ್ಸಿಯ ಬೇಸಿಗೆ ರಾಜಧಾನಿ ಮಾಡಿಕೊಂಡಿದ್ದರು. ಅದಕ್ಕೂ ಮೊದಲು ಇದು ಮರಾಠರ ವಶದಲ್ಲಿದ್ದು, ಶಿವಾಜಿ ಮಹಾರಾಜನು ಮಹಾಬಲೇಶ್ವರದ ಬಳಿಯ ಜಾವಳಿಯನ್ನು  ಆಳುತ್ತಿದ್ದ  ಆದಿಲ್ ಶಾಹಿ ಸುಲ್ತಾನರ ಸರದಾರ ಚಂದ್ರರಾವ್ ಮೋರೆಯನ್ನು  ಕೊಂದು ಪ್ರತಾಪಗಢ ಗಿರಿ ದುರ್ಗವನ್ನು ನಿರ್ಮಿಸಿದ್ದನು. ಹಾಗಾಗಿ ಮಹಾಬಲೇಶ್ವರ ಒಂದು ಮಹತ್ವದ ಸುಂದರ ಸ್ಥಳವಾಗಿದ್ದು ಎಂದಾದರೂ ಯಾವುದಾದರೂ ಕಾರಣಕ್ಕೆ ಪುಣೆಗೆ ಹೋದರೆ ಈ ಸ್ಥಳಕ್ಕೆ ಹೋಗದಿರಬಾರದು. 
      ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿರುವ ಮಹಾಬಲೇಶ್ವರ ಪುಣೆಯಿಂದ ಸುಮಾರು 120 ಕಿಮೀ. ದೂರದಲ್ಲಿದ್ದು ಸುಮಾರು ಎರಡು ಗಂಟೆಗಳ ಪ್ರಯಾಣ ಬೇಕಾಗುತ್ತದೆ.ಇಲ್ಲಿಗೆ ಹೋಗಲು ಬಸ್ ಇದ್ದರೂ ಸ್ವಂತ ಇಲ್ಲವೇ ಬಾಡಿಗೆ ಗಾಡಿಯಲ್ಲಿ ಹೋಗುವುದು ಒಳ್ಳೆಯದು.ಪುಣೆಯಿಂದ ಪಂಚಗಣಿ - ಮಹಾಬಲೇಶ್ವರ ರಸ್ತೆಯಲ್ಲಿ ಹೋದಾಗ, ಮಹಾಬಲೇಶ್ವರಕ್ಕೂ 20 ಕಿ.ಮೀ. ಮೊದಲು, ಪಂಚಗಣಿ ಎಂಬ ಸುಂದರ ಗಿರಿಧಾಮ ಸಿಗುತ್ತದೆ.ಒಂದು ದಿನದ ಪ್ರವಾಸದಲ್ಲಿ ಇಲ್ಲಿಗೆ ಹೋಗಿಯೇ ಮಹಾಬಲೇಶ್ವರಕ್ಕೆ ಹೋಗಬಹುದು. ಈ ಎರಡೂ ಸ್ಥಳಗಳಲ್ಲಿ ಸ್ಟ್ರಾಬೆರಿ ಹಣ್ಣುಗಳನ್ನು ಯಥೇಚ್ಛವಾಗಿ ಬೆಳೆಯುತ್ತಾರೆ.ಪಂಚಗಣಿಗೆ ಬರುತ್ತಿದ್ದಂತೆ ಎಲ್ಲೆಲ್ಲೂ ಸ್ಟ್ರಾಬೆರಿಗಳ ಮಾರಾಟ ಕಾಣುತ್ತದೆ. ಇಲ್ಲೊಂದು ಚಿಕ್ಕ, ಆಕರ್ಷಕವಾದ ಸ್ಟ್ರಾಬೆರಿ ಉದ್ಯಾನವನವೇ ಇದೆ! ಇದರ ಹೆಸರು ಮ್ಯಾಪ್ರೋ ಸ್ಟ್ರಾಬೆರಿ ಉದ್ಯಾನವನ. ಇಲ್ಲಿ ಎಲ್ಲವೂ ಸ್ಟ್ರಾಬೆರಿಮಯ! ಸ್ಟ್ರಾಬೆರಿ ಅಲಂಕೃತ ಕಾರು, ಸ್ಟ್ರಾಬೆರಿ ಹಣ್ಣು ಇರುವ ಗಾಡಿ, ಸ್ಟ್ರಾಬೆರಿ ದೇಹದ ಪಕ್ಷಿಗಳು, ಫೋಟೋ ತೆಗೆಸಿಕೊಳ್ಳಲು ಸ್ಟ್ರಾಬೆರಿ ಹಣ್ಣುಗಳ ಬೃಹತ್ ಆಕೃತಿಗಳು, ಹೀಗೆ ಆಕರ್ಷಣೆಗಳಿವೆ.ಬಗೆಬಗೆಯ ಸುಂದರ ಹೂಗಿಡಗಳು, ಪುಟ್ಟ ಜಲಪಾತ ಮತ್ತು ಕಮಲಗಳ ಹಾಗೂ ಬಣ್ಣದ ಮೀನುಗಳ ಕೊಳ, ಇವು ಸುಂದರ ನೋಟ ಒದಗಿಸುತ್ತವೆ! ಇಲ್ಲಿ ತಂಗಾಳಿ ಸವಿಯುತ್ತಾ ಉದ್ಯಾನವನ ನೋಡುತ್ತಾ ನಡೆಯುವುದು ಆಹ್ಲಾದಕರವಾಗಿರುತ್ತದೆ! ಅಂತೆಯೇ ಇಲ್ಲಿ ಕುಳಿತು ವಿಶ್ರಮಿಸಲು ಸೊಗಸಾದ ಪುಟ್ಟ ಮಂಟಪಗಳಿವೆ! ಇಲ್ಲಿನ ಅಂಗಡಿಗಳಲ್ಲಿ ಸ್ಟ್ರಾಬೆರಿ ಕ್ರಶ್, ಜ್ಯೂಸ್, ಜೆಲ್ಲಿ, ಐಸ್ಕ್ರೀಮ್, ಚಾಕೋಲೇಟ್, ಮೊದಲಾದ ತಿಂಡಿ ತಿನಿಸುಗಳೂ ಪಾನೀಯಗಳೂ ದೊರೆಯುತ್ತವೆ! ಅಲ್ಲದೇ ಸ್ಟ್ರಾಬೆರಿ ರೂಪದ ದಿಂಬುಗಳು, ಗೋಡೆಗೆ ನೇತುಹಾಕುವ ಆಕೃತಿಗಳು ಇವೆಲ್ಲವೂ ಸಿಗುತ್ತವೆ! ಈ ಉದ್ಯಾನವನದ ಎದುರಿಗೆ ಬೀದಿ ಮಾರುಕಟ್ಟೆಯಲ್ಲಿ ತಾಜಾ ಸ್ಟ್ರಾಬೆರಿ ಹಣ್ಣುಗಳು ದೊರೆಯುತ್ತವೆ! ಅಂತೆಯೇ ಸನಿಹದ ಹೊಟೇಲುಗಳಲ್ಲಿ ಸ್ಟ್ರಾಬೆರಿ ಹಣ್ಣಿನ ಜ್ಯೂಸ್, ಐಸ್ಕ್ರೀಮ್ ಮುಂತಾದವುಗಳು ಸಿಗುತ್ತವೆ.ಇಲ್ಲಿ  ಸನಿಹದಲ್ಲೇ ಭವಾನಿ ವ್ಯಾಕ್ಸ್ ಮ್ಯೂಸಿಯಂ ಎಂಬ ಒಂದು ಸೊಗಸಾದ ವ್ಯಾಕ್ಸ್ ಮ್ಯೂಸಿಯಂ ಕೂಡ ಇದೆ. ಜನಪ್ರಿಯ ವ್ಯಕ್ತಿಗಳ ಪ್ರತಿಕೃತಿಗಳನ್ನು ಮೇಣದಲ್ಲಿ ಮಾಡಿ ಇರಿಸಿರುವ ಸಂಗ್ರಹಾಲಯ ಇದು.
       ಮಹಾಬಲೇಶ್ವರದ ರಸ್ತೆಗಳಲ್ಲೂ ಎಲ್ಲೆಲ್ಲೂ ಸ್ಟ್ರಾಬೆರಿಗಳ ಅಂಗಡಿಗಳಿವೆ.ಹಾಗಾಗಿ ನಾವು ಯಥೇಚ್ಛವಾಗಿ ಸ್ಟ್ರಾಬೆರಿಗಳನ್ನೂ ಅವುಗಳ ಉತ್ಪನ್ನಗಳನ್ನೂ ಕೊಂಡು ಸೇವಿಸಬಹುದು! 
     ಮಹಾಬಲೇಶ್ವರದಲ್ಲಿ ನಾವು ಮುಖ್ಯವಾಗಿ ನೋಡಬೇಕಾಗಿರುವುದು ಮಹಾಬಲೇಶ್ವರ ಹಾಗೂ ಕೃಷ್ಣಾದೇವಿ ದೇವಾಲಯಗಳು ಮತ್ತು ಬೆಟ್ಟಗುಡ್ಡಗಳ ಸಾಲುಗಳಲ್ಲಿರುವ ಹಲವಾರು ಸೊಗಸಾದ ವ್ಯೂ ಪಾಯಿಂಟ್ ಅಥವಾ ವೀಕ್ಷಣಾ ಕೇಂದ್ರಗಳು.. 
   ಶ್ರೀ ಕ್ಷೇತ್ರ ಮಹಾಬಲೇಶ್ವರ ದೇವಾಲಯದಿಂದಲೇ ಈ ಗಿರಿಧಾಮಕ್ಕೆ ಮಹಾಬಲೇಶ್ವರ ಎಂದು ಹೆಸರು ಬಂದಿದೆ. ಇದು ನಗರದಿಂದ ಸುಮಾರು ಆರು ಕಿ.ಮೀ. ದೂರವಿದೆ. ಇದೊಂದು ಸುಂದರ ದೇವಾಲಯವಾಗಿದ್ದು, ಇಲ್ಲಿ ಪೂಜಿಸಲ್ಪಡುವ ದೇವರು ಮಹಾಬಲೇಶ್ವರನೆಂದು ಕರೆಯಲ್ಪಡುವ ತ್ರಿಮೂರ್ತ್ಯಾತ್ಮಕ ಉದ್ಭವ ಲಿಂಗವಾಗಿದೆ. ಈ ಶಿವಲಿಂಗವು ಒಂದು ರುದ್ರಾಕ್ಷಿ ಗಾತ್ರದಷ್ಟಿದೆ. ದೇವಾಲಯದ ಹೊರಗೆ ಇದರ ಸ್ಥಳಪುರಾಣ ಮತ್ತು ಐತಿಹ್ಯಗಳ ಫಲಕವನ್ನು ಹಾಕಿದ್ದಾರೆ. ಅದರಂತೆ, ಸ್ಕಂದ ಪುರಾಣದ ಸಹ್ಯಾದ್ರಿ ಖಂಡದಲ್ಲಿ ಇದರ ಕಥೆಯಿದೆ. ಪಾದ್ಮ ಕಲ್ಪದಲ್ಲಿ ಅತಿಬಲ ಮತ್ತು ಮಹಾಬಲ ಎಂಬ ಇಬ್ಬರು ದೈತ್ಯರು ಲೋಕಕಂಟಕರಾಗಿದ್ದರು. ಆಗ ಲೋಕವನ್ನು ರಕ್ಷಿಸಲು ವಿಷ್ಣುವು ಅತಿಬಲನನ್ನು ಕೊಂದನು. ಆದರೆ ಅವನಿಗೆ ಮಹಾಬಲನನ್ನು ಕೊಲ್ಲಲಾಗಲಿಲ್ಲ. ಏಕೆಂದರೆ ಮಹಾಬಲನು ತನ್ನ ಇಚ್ಛೆಯಿಂದಷ್ಟೇ ಸಾಯಬೇಕೆಂದು ವರ ಪಡೆದಿದ್ದನು. ಹಾಗಾಗಿ ದೇವತೆಗಳು ಆದಿಶಕ್ತಿಯ ಮೊರೆಹೊಕ್ಕರು. ಆದಿಶಕ್ತಿಯು ಮಹಾಬಲನನ್ನು ಆಕರ್ಷಿಸಿ ಅವನು ಯುದ್ಧವಿಮುಖನಾಗುವಂತೆ ಮಾಡಿದಳು. ಆಗ ದೇವತೆಗಳು ಅವನಿಗೆ ಶರಣಾಗಲು ಅವನು ದೇವತೆಗಳಿಗೆ ವರ ಕೊಡಲು ಮುಂದಾದನು. ಆಗ ದೇವತೆಗಳು ಅವನು ತಮ್ಮಿಂದ ಸಾಯಬೇಕೆಂದು ವರ ಬೇಡಿದರು. ಮಾತಿಗೆ ತಪ್ಪಲಾಗದ ಮಹಾಬಲನು ಒಪ್ಪಿ, ದೇವತೆಗಳು ಅವನೊಂದಿಗೆ ಸದಾ ಈ ಸ್ಥಳದಲ್ಲಿ ನೆಲೆಸಿರಬೇಕೆಂದು ನಿಬಂಧನೆ ಹಾಕಿದನು. ಹಾಗಾಗಿ, ಇಲ್ಲಿನ ಶಿವಲಿಂಗದಲ್ಲಿ ಶಿವನು ಮಹಾಬಲೇಶ್ವರನೆಂದೂ ವಿಷ್ಣುವು ಅತಿಬಲೇಶ್ವರನೆಂದೂ ಬ್ರಹ್ಮನು ಕೋಟೇಶ್ವರನೆಂದೂ ನೆಲೆಸಿದ್ದಾರೆ. ಫಲಕದ ಪ್ರಕಾರ ಈ ದೇವಾಲಯವನ್ನು ಎಂಟುನೂರು ವರ್ಷಗಳ ಹಿಂದೆ ನಿರ್ಮಿಸಲಾಯಿತೆಂದೂ ಲಿಂಗವು ಉದ್ಭವಲಿಂಗವೆಂದೂ ಹೇಳಲಾಗಿದೆ. ಛತ್ರಪತಿ ಶಿವಾಜಿ ಮಹಾರಾಜನು ಇಲ್ಲಿ ತನ್ನ ತಾಯಿಗೆ ಸುವರ್ಣ ತುಲಾಭಾರ ಮಾಡಿಸಿದ್ದನಂತೆ! 
     ಮಹಾಬಲೇಶ್ವರ ದೇವಾಲಯದ ಎದುರಿಗೆ  ಕೃಷ್ಣಾದೇವಿ ದೇವಾಲಯ ಎಂಬ ಒಂದು ಪ್ರಾಚೀನ ದೇವಾಲಯವಿದೆ. ಇಲ್ಲಿಗೆ ಒಂದು ಸಣ್ಣ ಸುಂದರ ಕಾಡುದಾರಿಯ ಮೂಲಕ ಹೋಗಬೇಕು. ಇಲ್ಲಿ ಕೃಷ್ಣಾ ನದಿಯ ಉಗಮವಾಗುತ್ತದೆ. ಉಗಮಸ್ಥಾನದಲ್ಲಿ ಒಂದು ಶಿವಲಿಂಗವನ್ನು ಸ್ಥಾಪಿಸಿ ದೇವಾಲಯವನ್ನು ನಿರ್ಮಿಸಲಾಗಿದೆ. ಅಲ್ಲಿಂದ ಹರಿದು ಬರುವ ನದಿ ಮುಂದೆ ಒಂದು ಕಲ್ಲಿನ ಗೋವಿನ ಮೂರ್ತಿಯ ಬಾಯಿಂದ ಬರುತ್ತಾ ಒಂದು ಕೊಳದಲ್ಲಿ ತುಂಬಿಕೊಳ್ಳುತ್ತದೆ. ಈ ನೀರು ಬಹಳ ತಂಪಾಗಿಯೂ ಸಿಹಿಯಾಗಿಯೂ ತಿಳಿಯಾಗಿಯೂ ಇದೆ! ಇದೊಂದು ಬಹಳ ಹಳೆಯ ಕಲ್ಲಿನ ಕಟ್ಟಡದ ದೇವಾಲಯವಾಗಿದ್ದು ನೋಡಲು ವಿಸ್ಮಯವಾಗುತ್ತದೆ! ದೇವಾಲಯದ ಎದುರಿಗೆ ಬೆಟ್ಟ ಗುಡ್ಡಗಳ ನಡುವಿನ ಕೃಷ್ಣಾ ನದಿ ಕಣಿವೆಯ ಮೈ ನವಿರೇಳಿಸುವ ಅದ್ಭುತ ದೃಶ್ಯ ಕಾಣುತ್ತದೆ! 
       ಕೃಷ್ಣಾ ದೇವಿ ದೇವಾಲಯದ ಬಳಿ ಒಂದು ಸ್ಟ್ರಾಬೆರಿ ಹಣ್ಣುಗಳ ತೋಟವಿದೆ. ಇಲ್ಲಿ ನಾವು ಸ್ಟ್ರಾಬೆರಿ ಗಿಡಗಳು, ಹಣ್ಣುಗಳ ವಿವಿಧ ಹಂತಗಳನ್ನು ನೋಡಿ ಸ್ಟ್ರಾಬೆರಿ ಹಣ್ಣುಗಳನ್ನು ಸವಿಯಬಹುದು.
     ಮಹಾಬಲೇಶ್ವರ ಗಿರಿಧಾಮದಲ್ಲಿ ಅನೇಕ ವ್ಯೂ ಪಾಯಿಂಟ್ ಗಳು ಅಥವಾ ವೀಕ್ಷಣಾ ಕೇಂದ್ರಗಳು ಇವೆ. ಈ ವ್ಯೂ ಪಾಯಿಂಟ್ ಗಳು ಮಾರುಕಟ್ಟೆಯಿಂದ ಸುಮಾರು ಹದಿನಾರು ಕಿ.ಮೀ. ದೂರದಲ್ಲಿದೆ. ಬೆಟ್ಟ ಗುಡ್ಡಗಳ ಅತ್ಯಂತ ರಮಣೀಯವಾದ ವಿಶಾಲವಾದ ಈ ಪ್ರದೇಶದಲ್ಲಿ, ಕೇಟ್ಸ್ ವ್ಯೂ ಪಾಯಿಂಟ್, ಇಕೋ ಪಾಯಿಂಟ್, ಎಲಿಫೆಂಟ್ ಹಾಗೂ ನೀಡಲ್ ಹೋಲ್ ವ್ಯೂ ಪಾಯಿಂಟ್, ಆರ್ಥರ್ ಸೀಟ್ ಕಾಂಪ್ಲೆಕ್ಸ್. ಮೊದಲಾದ ಅನೇಕ. ಸುಂದರ ವ್ಯೂ ಪಾಯಿಂಟ್ ಗಳಿವೆ. ಇಲ್ಲಿ ಹಲವಾರು ತಿಂಡಿ, ತಿನಿಸುಗಳೂ ಲಭ್ಯವಿದ್ದು, ಕುದುರೆ ಹಾಗೂ ಒಂಟಿ ಸವಾರಿಗಳೂ ಇವೆ.
     ಕೇಟ್ಸ್  ವ್ಯೂ ಪಾಯಿಂಟ್ ಗೆ ಬ್ರಿಟಿಷ್ ಗವರ್ನರ್ ಆಗಿದ್ದ ಜಾನ್ ಮಲ್ ಕಮ್ ನ ಮಗಳು ಕೇಟ್ ಳ ಹೆಸರಿಟ್ಟಿದ್ದಾರೆ. ಶಿವಾಜಿ ಮಹಾರಾಜರ ಕಾಲದಲ್ಲಿ ಇದಕ್ಕೆ ನಾಕೆ ಖಿಂಡ್ ಎಂದು ಕರೆಯಲಾಗುತ್ತಿತ್ತು. ಇಲ್ಲಿ ಒಂದು ಟೆಲಿಸ್ಕೋಪ್ ಮೂಲಕ ನಾವು ಕೃಷ್ಣಾ ನದಿ ಕಣಿವೆ, ಧೋಮ್ ಮತ್ತು ಬಾಲ್ಕವಾಡಿ ಅಣೆಕಟ್ಟುಗಳು, ವಿದ್ಯುದಾಗರಗಳು, ಟೆಂಟ್ ಗಳು, ಕಮಲ ಗಢ ಕೋಟಿ, ಒಂದು ದೇವಾಲಯ ಹಾಗೂ ಶಾಲೆ, ಇವೆಲ್ಲವನ್ನೂ ನೋಡಬಹುದು. ಈ ವ್ಯೂ ಪಾಯಿಂಟ್ ಗೆ ನೇರವಾಗಿ ಎಲಿಫೆಂಟ್ ಮತ್ತು ನೀಡಲ್ ಹೋಲ್ ಪಾಯಿಂಟ್ ಕಾಣುತ್ತದೆ. ಬೆಟ್ಟದ ಆಕೃತಿ ಆನೆಯ ತಲೆಯಂತಿರುವುದರಿದ ಹಾಗೂ ಅದರಲ್ಲಿ ಸೂಜಿಯ ಕಣ್ಣಿನಂಥ ರಂಧ್ರವಿರುವೂದರಿಂದ ಈ ಹೆಸರುಗಳನ್ನು ಇಡಲಾಗಿದೆ.ಈ ಪಾಯಿಂಟ್ ನ ಬಳಿ ಮಂಕಿ ಫಾಲ್ಸ್ ಎಂಬ ಪುಟ್ಟ ಜಲಪಾತ ಇದೆ. ಇದೊಂದು ನೀರಿನ ಬುಗ್ಗೆಯಂತಿರುವುದರಿಂದ ಇದನ್ನು ವಲ್ಚರ್ಸ್ ಸ್ಪ್ರಿಂಗ್ ಎಂದೂ ಕರೆಯುತ್ತಾರೆ.
       ಕೇಟ್ಸ್ ಪಾಯಿಂಟ್ ಬಳಿಯೇ ಒಂದು ಕಡೆ ಜೋರಾಗಿ ಕೂಗಿದರೆ ಪ್ರತಿಧ್ವನಿ ಬರುತ್ತದೆ. ಇದನ್ನು ಇಕೋ ಪಾಯಿಂಟ್ ಎನ್ನುತ್ತಾರೆ.
ಆರ್ಥರ್ ಸೀಟ್ ಕಾಂಪ್ಲೆಕ್ಸ್ ಹಲವು ವೀಕ್ಷಣಾ ಕೇಂದ್ರಗಳ ಸಂಕೀರ್ಣವಾಗಿದ್ದು ಇದನ್ನು ವ್ಯೂ ಪಾಯಿಂಟ್ ಗಳ ರಾಣಿ ಎಂದು ಕರೆಯುತ್ತಾರೆ! ಇದರಲ್ಲಿ ಇಕೋ ಪಾಯಿಂಟ್, ಮಲ್ ಕಮ್ ಪಾಯಿಂಟ್, ಟೈಗರ್ ಸ್ಪ್ರಿಂಗ್ ಪಾಯಿಂಟ್, ಹಾಗೂ ಆರ್ಥರ್ ಸೀಟ್ ಪಾಯಿಂಟ್ ಎಂಬ ನಾಲ್ಕು ವ್ಯೂ ಪಾಯಿಂಟ್ ಗಳಿವೆ. ಇಕೋ ಪಾಯಿಂಟ್ ನಲ್ಲಿ ಕೂಗಿದರೆ ಪ್ರತಿಧ್ವನಿ ಬರುತ್ತದೆ. ಮಲ್ ಕಮ್ ಪಾಯಿಂಟ್ ನಿಂದ ಆರ್ಥರ್ ಸೀಟ್ ಪಾಯಿಂಟ್, ತೋರಣಗಢ ಕೋಟಿ, ಪ್ರತಾಪಗಢ ಕೋಟಿ, ಸಾವಿತ್ರಿ ನದಿ ಕಣಿವೆ, ಇವುಗಳನ್ನು ನೋಡಬಹುದು. ಟೈಗರ್ ಸ್ಪ್ರಿಂಗ್ ಪಾಯಿಂಟ್ ನಲ್ಲಿ ಒಂದು ನೀರಿನ ಬುಗ್ಗೆಯಿದ್ದು ಇಲ್ಲಿ ನೀರು ಕುಡಿಯಲು ಹುಲಿ ಬರುತ್ತಿತ್ತಂತೆ! ಹಾಗಾಗಿ ಇದಕ್ಕೆ ಈ ಹೆಸರಿಟ್ಟಿದ್ದಾರೆ. ಕೊನೆಯದಾದ ಆರ್ಥರ್ ಸೀಟ್ ಪಾಯಿಂಟ್ ನಲ್ಲಿ ಆರ್ಥರ್ ಎಂಬ ಬ್ರಿಟಿಷರನು ಕುಳಿತುಕೊಂಡು ಸಾವಿತ್ರೀ ನದಿಯನ್ನು ನೋಡುತ್ತಿದ್ದನಂತೆ. ಹಿಂದೊಮ್ಮೆ ಅವನು ತನ್ನ ಪತ್ನಿ ಮತ್ತು ಮಗಳಿನೊಂದಿಗೆ ಸಾವಿತ್ರೀ ನದಿಯ ಮೇಲೆ ದೋಣಿಯಲ್ಲಿ ಮಹಾಬಲೇಶ್ವರಕ್ಕೆ ಬರುತ್ತಿದ್ದಾಗ, ಅವನ ಪತ್ನಿ ಮತ್ತು ಮಗಳು ನದಿಯಲ್ಲಿ ಮುಳುಗಿ ಸತ್ತುಹೋಗಿದ್ದರು! ಅದನ್ನೇ ನೆನೆಯುತ್ತಾ ಅವನು ಇಲ್ಲಿ ಕುಳಿತು ಸಾವಿತ್ರೀ ನದಿಯನ್ನು ನೋಡುತ್ತಿದ್ದುದರಿಂದ ಅವನ ಹೆಸರನ್ನಿಟ್ಟಿದ್ದಾರೆ. ಇಲ್ಲಿ ಸೂರ್ಯಾಸ್ತ ನೋಡಲು ಅದ್ಭುತವಾಗಿರುತ್ತದೆ! ಮುಳುಗುತ್ತಿರುವ ಸೂರ್ಯನ ಹೊಂಬಣ್ಣದ ಕಿರಣಗಳು ಬೆಟ್ಟಗುಡ್ಡಗಳ ಸಾಲಿನ ಮೇಲೆ ಬಿದ್ದಾಗ, ಅದು ಮರಗಳ ಕಪ್ಪು ಛಾಯೆಗಳ ತೋರಣಗಳೊಂದಿಗೆ ಕೂಡಿರುವ ಯಾವುದೋ ಅಲೌಕಿಕ ಲೋಕದಂತೆ ಕಾಣುತ್ತದೆ! 
       ವಿಶೇಷವೆಂದರೆ ಈ ಎಲ್ಲ ವ್ಯೂ ಪಾಯಿಂಟ್ ಗಳಲ್ಲೂ ಅವುಗಳ ಹೆಸರು ಮತ್ತು ವೈಶಿಷ್ಟ್ಯಗಳನ್ನುಳ್ಳ ಫಲಕಗಳನ್ನು ಹಾಕಿದ್ದಾರೆ. 
      ಮಹಾಬಲೇಶ್ವರದಲ್ಲಿ ನಾವು ಇವಲ್ಲದೇ ದೋಣಿವಿಹಾರವಿರುವ ವೇನ್ನಾ ಕೆರೆ, ಇಲ್ಲಿ ಉಗಮವಾಗುವ ಐದು ನದಿಗಳು ಸೇರುವ ಪಂಚಗಂಗಾ ದೇವಾಲಯ, ಶಿವಾಜಿ ಮಹಾರಾಜನು ನಿರ್ಮಿಸಿದ ಐತಿಹಾಸಿಕ ಪ್ರತಾಪ ಗಢ ಕೋಟಿ, ಅದ್ಭುತವಾದ ಲಿಂಗಮಾಲಾ ಜಲಪಾತ, ಮೊದಲಾದ ಇತರ ಸ್ಥಳಗಳನ್ನು ನೋಡಬಹುದು. ಮಹಾಬಲೇಶ್ವರಕ್ಕೆ ಎಲ್ಲಾ ಸಮಯದಲ್ಲೂ ಹೋಗಬಹುದಾದರೂ ನವೆಂಬರ್ ಇಂದ ಫೆಬ್ರವರಿ ವರೆಗಿನ ಚಳಿಗಾಲದ ಅವಧಿಯಲ್ಲಿ ಹೋದರೆ ಚೆನ್ನಾಗಿರುತ್ತದೆ. ಆಗ ಸ್ಟ್ರಾಬೆರಿ ಹಣ್ಣುಗಳ ಕಾಲವೂ ಆಗಿರುತ್ತದೆ.‌

ಗುರುವಾರ, ಸೆಪ್ಟೆಂಬರ್ 25, 2025

ನನ್ನಿಷ್ಟದ ಭೈರಪ್ಪ


ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪನವರ ನಿರ್ಗಮನ ದು:ಖ ತಂದಿದೆ. ಕರ್ನಾಟಕದ ಜನರೆಲ್ಲರಿಗೂ ಇದು ದು:ಖದ ಸಂದರ್ಭ. ಆದರೆ ಇದು ಅನಿವಾರ್ಯ. ಎಲ್ಲರ ಜೀವನದಲ್ಲೂ ಇಂಥ ಒಂದು ದಿನ ಬಂದೇ ಬರುತ್ತದೆ! ಯಾರೂ ತಪ್ಪಿಸಲಿಕ್ಕಾಗುವುದಿಲ್ಲ. ಆದರೆ ಹುಟ್ಟಿದಾರಭ್ಯ ಸಾಯುವವರೆಗಿನ ಜೀವನ ನಮಗೆ ಕೊಟ್ಟ ಒಂದು ದೊಡ್ಡ ಬಹುಮಾನವೇ ಆಗಿರುತ್ತದೆ. ಅದರಲ್ಲೂ ಎಲ್ಲವನ್ನೂ ಅರ್ಥ ಮಾಡಿಕೊಳ್ಳಲು ಸಾಧ್ಯವಿರುವ, ಅರಿವಿನೊಂದಿಗೆ ಎಲ್ಲವನ್ನೂ ಅನುಭವಿಸಲು ಸಾಧ್ಯವಿರುವ, ನಮ್ಮ ಛಾಪನ್ನು ಜನಸೇವೆ, ಪರೋಪಕಾರ, ವಿಶೇಷ ಕೊಡುಗೆಗಳ ಮೂಲಕ ಉಳಿಸಲು ಸಾಧ್ಯವಿರುವ ಮಾನವ ಜನ್ಮ ಸಿಕ್ಕಿದಾಗ ಅದನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ಭೈರಪ್ಪನವರು ಹಾಗೆ ಬದುಕಿದವರು. ಅವರ ಜೀವನ ಸುಲಭವಾಗಿರಲಿಲ್ಲ. ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ, ಸಾಕಷ್ಟು ಓದಿ, ಜೀವನಾಸಕ್ತಿ ಬೆಳೆಸಿಕೊಂಡು, ಸಾಹಿತ್ಯ, ಸಂಗೀತ, ಪ್ರವಾಸಗಳಲ್ಲಿ ಜೀವನವನ್ನು ಚೆನ್ನಾಗಿ ಅನುಭವಿಸಿದರು! ತುಂಬು ಜೀವನ ನಡೆಸಿ ನಿರ್ಗಮಿಸಿದರು. ಭೈರಪ್ಪನವರ ಹಾಗೆ ಬದುಕಬೇಕು ಎಂದು ಹೇಳುವಂಥ ಮಾದರಿ ವ್ಯಕ್ತಿಯಾದರು. ಅವರಿಗೆ ನಮನಗಳು.
      ನಾನು ಓದುವುದರಲ್ಲಿ ಬಹಳ ಆಸಕ್ತನಾದರೂ ಕಾದಂಬರಿಗಳನ್ನು, ಅದರಲ್ಲೂ ಸಾಮಾಜಿಕ ಕಾದಂಬರಿಗಳನ್ನು ಓದುವುದು ಬಹಳ ಕಡಿಮೆ. ಸಂಸ್ಕೃತ ಸಾಹಿತ್ಯ, ಪುರಾಣ, ಅಧ್ಯಾತ್ಮ, ವಿಜ್ಞಾನ, ಪ್ರಾಣಿ ಪ್ರಪಂಚ , ವೈದ್ಯಕೀಯ, ಪ್ರವಾಸ ಸಾಹಿತ್ಯ, ಐತಿಹಾಸಿಕ ಸಾಹಿತ್ಯ, ಜಾನಪದ ಕಥೆಗಳು, ಇವೇ ನನ್ನ ಬಹುತೇಕ ಇಷ್ಟದ ವಿಷಯಗಳು. ಆದರೆ ಭೈರಪ್ಪನವರ ಒಂದಷ್ಟು ಕಾದಂಬರಿಗಳನ್ನು ಓದಿ ಇಷ್ಟಪಟ್ಟಿದ್ದೇನೆ. ಮುಖ್ಯವಾಗಿ ನನ್ನನ್ನು ಬಹಳವಾಗಿ ಸೆಳೆದದ್ದು ಅವರ ಆವರಣ ಕಾದಂಬರಿ. ಅದರಿಂದಲೇ ನನಗೆ ಅವರ ಮೇಲಿನ ಅಭಿಮಾನ ಹೆಚ್ಚಾಯಿತು. ಅದಕ್ಕೆ ಮೊದಲು ತಬ್ಬಲಿ ನೀನಾದೆ ಮಗನೆ ಓದಿದ್ದೆ, ಹಾಗೂ ಆ ಚಲನಚಿತ್ರವನ್ನೂ ನೋಡಿದ್ದೆ. ಅದು ಬಹಳ ಚೆನ್ನಾಗಿ ಓದಿಸಿಕೊಂಡು ಹೋಗಿತತಲ್ಲದೇ ಗೋವುಗಳನ್ನು ಕೇವಲ ಹಾಲು ಕೊಡುವ ಯಂತ್ರಗಳಂತೆ ಬಳಸಿಕೋಳ್ಳುವ ಇಂದಿನ ಜನರ ಬಗ್ಗೆ ಆಶ್ಚರ್ಯ, ದು:ಖಗಳಾಗಿದ್ದವು. ಭೈರಪ್ಪನವರ ಕಾದಂಬರಿಗಳಲ್ಲಿ ಈ ಒಂದು ಸಂಘರ್ಷ ಇರುತ್ತದೆ.‌ ಹಿಂದೆ ಜನರು ಇದ್ದ ರೀತಿ ಮತ್ತು ಆ ರೀತಿ ಬದಲಾದಾಗ ಆಗುವ ಸಂಘರ್ಷ. ಇದನ್ನು ಅವರು ರಸವತ್ತಾಗಿ ನಿರೂಪಿಸುತ್ತಾರೆ. ಉದಾಹರಣೆಗೆ ವಂಶವೃಕ್ಷದಲ್ಲಿ ವಿಧವೆಯರು ಪುನಃ ಮದುವೆಯಾಗದ ಹಿಂದಿನ ಕಾಲದ ರೀತಿ ಮತ್ತು ಮರುಮದುವೆಯಾಗುವ ಇಂದಿನ ಕಾಲಘಟ್ಟದಲ್ಲಿ ಆಗುವ ಸಂಘರ್ಷ, ಅಂತೆಯೇ ಯಾನದಲ್ಲಿ ವಿವಾಹಿತ ಕಾಮ ಮತ್ತು ಸ್ವಚ್ಛಂದ ಕಾಮದ ನಡುವಿನ ಸಂಘರ್ಷ, ಈ ರೀತಿಯ ಚಿತ್ರಣಗಳು ಕಾಣುತ್ತವೆ. ತಬ್ಬಲಿ ನೀನಾದೆ ಮಗನೆ ಕಾದಂಬರಿಯಲ್ಲೂ ಗೋವನ್ನು ದೇವರೆಂದು ನೋಡುವ ಹಿಂದಿನ ರೀತಿ ಮತ್ತು ಅದು ಕೇವಲ ಮಾಂಸ, ಹಾಲುಗಳನ್ನು ಕೊಡುವ ಒಂದು ಪ್ರಾಣಿಯಂತೆ ಕಾಣುವ ಇಂದಿನ ರೀತಿ, ಹೀಗೆ.‌
      ದಿನಪತ್ರಿಕೆಯಲ್ಲಿ ಆವರಣ ಕಾದಂಬರಿಯ ವಿಮರ್ಶೆ ನೋಡಿ ಅದನ್ನು ಓದಬೇಕೆನಿಸಿತು. ಐತಿಹಾಸಿಕ ವಿಷಯವಾದ್ದರಿಂದ ಅದನ್ನು ಓದಲೇಬೇಕೆಂದು ತೆಗೆದುಕೊಂಡೆ. ಇದರಲ್ಲಿ ಔರಂಗಜೇಬನ ಕ್ರೌರ್ಯ ಆಡಳಿತ, ಹಿಂದೂ ದೇವಾಲಯಗಳ ನಾಶ, ಅವನ ಹಿಂದೂ ಅಸಹಿಷ್ಣುತೆ, ಇವೆಲ್ಲವೂ ಒಂದು ಕಡೆ ಇದ್ದರೆ ಇವನ್ನು ಅನ್ವೇಷಿಸಿ ಕಾದಂಬರಿ ಬರೆಯುವ ಲಕ್ಷಿಯ ಪಾತ್ರ ಇನ್ನೊಂದು ಕಡೆ ಇದೆ. ಈ ಲಕ್ಷ್ಮಿ ಒಬ್ಬ ಮುಸ್ಲಿಂ ಹುಡುಗನನ್ನು ಪ್ರೀತಿಸಿ ಮದುವೆಯಾದಾಗ ಅವಳ ತಂದೆ ಬೇಡ, ಆ ಮತ ಇಂದಿಗೂ ಬದಲಾಗಿಲ್ಲ ಎಂದು ಹೇಳುವುದು ಅವಳಿಗೆ ತಟ್ಟುವುದಿಲ್ಲ. ಅವಳು ಮದುವೆಯಾಗಿ ಇಸ್ಲಾಂ ಗೆ ಪರಿವರ್ತನೆ ಹೊಂದಿ ರಜಿಯಾ ಎಂದು ಹೆಸರು ಬದಲಿಸಿಕೊಳ್ಳುತ್ತಾಳೆ. ಆಮೇಲೆ ಅವಳ ಗಂಡನೊಂದಿಗೆ ಹಂಪೆಯ ನಾಶದ ಬಗ್ಗೆ ಚಿತ್ರ ಮಾಡಲು ಹೊರಟಾಗ ಅವನು ನೈಜ ಇತಿಹಾಸವನ್ನು ತಿರುಚಿ ಶೈವ, ವೈಷ್ಣವ ಕಾದಾಟದಿಂದ ಹಂಪೆ ನಾಶವಾಯಿತು ಎಂದು ಹೇಳಿದಾಗ ಅವಳಿಗೆ ಅದು ಇಷ್ಟವಾಗುವುದಿಲ್ಲ. ಎಲ್ಲಾ ದಾಖಲೆಗಳು ಮುಸ್ಲಿಂ ದಾಳಿಕೋರರೇ ಹಂಪೆಯನ್ನು ನಾಶಮಾಡಿದರೆಂದು ತೋರಿಸುವ ಸತ್ಯವನ್ನು ಬಲಿಕೊಡಲು ಅವಳು ಒಪ್ಪುವುದಿಲ್ಲ. ಒಂದು ಕೃತಿಯನ್ನು, ಅದರಲ್ಲೂ ಐತಿಹಾಸಿಕ ಕೃತಿಯನ್ನು ಬರೆಯುವಾಗ, ಕೃತಿಕಾರನ ನಿಷ್ಠೆ ಸೌಂದರ್ಯಕ್ಕೋ ಸತ್ಯಕ್ಕೋ ಎಂಬ ಸಂಘರ್ಷ ಎದುರಾದಾಗ ಸತ್ಯಕ್ಕೇ ಎಂಬ ತಮ್ಮ ನಿಲುವನ್ನು ಭೈರಪ್ಪನವರು ಲಕ್ಷ್ಮಿಯ ಪಾತ್ರದ ಮೂಲಕ ತೋರಿಸುತ್ತಾರೆ. ಅನಂತರ, ತಂದೆಯ ಶ್ರಾದ್ಧಕ್ಕೆ ಬಂದ ಲಕ್ಷ್ಮಿ, ಅವರ ಗ್ರಂಥ ಭಂಡಾರವನ್ನು ಅವಲೋಕಿಸುತ್ತಾ ಅಲ್ಲಿರುವ ಬಹುತೇಕ ಇತಿಹಾಸದ ಪುಸ್ತಕಗಳಲ್ಲಿ ಮುಳುಗಿ ಹೋಗಿ ತಂದೆಯು ಏಕೆ ಇಸ್ಲಾಂ ಇಂದಿಗೂ ಬದಲಾಗಿಲ್ಲ ಎನ್ನುತ್ತಿದ್ದರು ಎಂದು ಅರಿಯುತ್ತಾಳೆ. ಅವುಗಳ ಆಧಾರದಲ್ಲಿ ತಾನೇ ಒಂದು ಕಾದಂಬರಿಯನ್ನು ಬರೆಯುತ್ತಾಳೆ. ಔರಂಗಜೇಬನ ಆಡಳಿತ, ಅವನು ತನ್ನ ಅಣ್ಣಂದಿರಾದ ದಾರ,ಶೂಜ, ಮುರಾದರನ್ನು ಕೊಂದು ತಂದೆ ಷಾಜಹಾನನನ್ನು ಸೆರೆಯಲ್ಲಿಟ್ಟು ತಾನೇ ಮೊಗಲ್ ಸಿಂಹಾಸನ ಏರಿದ್ದು, ಕಾಶಿ ವಿಶ್ವನಾಥ ದೇವಾಲಯ ಮೊದಲಾದ ದೇವಾಲಯಗಳನ್ನು ನಾಶ ಮಾಡಿದ್ದು, ಮತ್ತು ಅಂದಿನ ದಿನಗಳಲ್ಲಿ ಸೆರೆಸಿಕ್ಕ ರಜಪೂತ ಯುವಕರ ಜನನೇಂದ್ರಿಯ ಛೇದ ಮಾಡಿ ಅವರನ್ನು ಹಿಜಿಡಾಗಳನ್ನಾಗಿಸುತ್ತಿದ್ದ ವಿಷಯದ ಆಧಾರದಲ್ಲಿ ಒಬ್ಬ ಕಾಲ್ಪನಿಕ ರಜಪೂತ ರಾಜಕುಮಾರನಿಗೆ ಹಾಗಾಗುವಂತೆಯೂ ಅವನಿಗೆ ಹಾಜಿ ಹಮ್ದುಲ್ಲ ಎಂಬುವರು ಔರಂಗಜೇಬನ ಇಸ್ಲಾಂ ಧೋರಣೆ, ದೇವಾಲಯ ನಾಶ ಇತ್ಯಾದಿಗಳ ಇತಿಹಾಸವನ್ನು ಹೇಳುವಂತೆಯೂ ಚಿತ್ರಿಸುತ್ತಾಳೆ.  ಅಲ್ಲಿಯೇ ಲೈಂಗಿಕ ಗುಲಾಮಿಯಾಗಿರುವ ತನ್ನ ಹೆಂಡತಿಯನ್ನೂ ಕಂಡು ಆ ರಜಪೂತ ದು:ಖಗೊಂಡು ಕೊನೆಗೆ ಶಿವಾಜಿ ಮಹಾರಾಜ ಮೊಗಲರ ವಿರುದ್ಧ ಹೋರಾಡುತ್ತಿರುವ ವಿಷಯ ಬಂದು, ಅವನು ತನ್ನ ಹೆಂಡತಿಯೊಂದಿಗೆ ಹೇಗೋ ಬಿಡುಗಡೆ ಹೊಂದುತ್ತಾನೆ. ಈ ಪುಸ್ತಕ ಬರೆದಾಗ ಪ್ರೊ.ಶಾಸ್ತ್ರಿ ಎಂಬ ಅವಳ ಗುರುವೇ ಅದನ್ನು ಬ್ಯಾನ್ ಮಾಡಿಸುತ್ತಾನೆ! ಕೊನೆಗೆ ಅವಳ ಮುಸ್ಲಿಂ ಗಂಡನೇ ಅವಳ ಸಹಾಯಕ್ಕೆ ಬಂದು ಅವಳು ಬರೆಯಲು ಬಳಸಿರುವ ಮೂಲ ಕೃತಿಗಳ ಪಟ್ಟಿ ತಯಾರಿಸಲು ಹೇಳುತ್ತಾನೆ. ನನ್ನ ಕೃತಿಯನ್ನು ಮುಟ್ಟುಗೋಲು ಹಾಕಿದರೂ ಮೂಲ ಕೃತಿಗಳನ್ನು ಮುಟ್ಟುಗೋಲು ಹಾಕಲು ಸಾಧ್ಯವೇ ಎಂದು ನ್ಯಾಯಾಲಯದಲ್ಲಿ ಪ್ರಶ್ನಿಸಬೇಕೆಂದು ಅವಳು ಆಗ ಪಟ್ಟಿಯನ್ನು ತಯಾರಿಸುವುದರೊಂದಿಗೆ ಕಾದಂಬರಿ ಮುಗಿಯುತ್ತದೆ. ಆ ಪಟ್ಟಿ ಎಂಬತ್ತೈದು ಕೃತಿಗಳ ಒಂದು ದೊಡ್ಡ ಪಟ್ಟಿ! 
     ಈ ಕಾದಂಬರಿಯ ಸ್ವಾರಸ್ಯವೆಂದರೆ ಕಾದಂಬರಿಯೊಳಗೆ ಒಂದು ಕಾದಂಬರಿಯಿರುವುದು. ಅಂತೆಯೇ ಭೈರಪ್ಪನವರು ಅಂದಿನ ಇಸ್ಲಾಂ ರಾಜರ ಆಡಳಿತದ ಘೋರ ಸತ್ಯಗಳನ್ನು ನಿರ್ಭಯವಾಗಿ ಹೇಳಿದ್ದಾರೆ. ಮೂಲ ಇಸ್ಲಾಂ ಚರಿತ್ರಕಾರರೇ ಯಾವುದೇ ಮುಲಾಜಿಲ್ಲದೆ ಅವರ ಸತ್ಯಗಳನ್ನು ಹೇಳಿರುವಾಗ, ಸ್ವತಂತ್ರ ಭಾರತದ ಇತಿಹಾಸಕಾರರು ಆ ಸತ್ಯಗಳನ್ನು ಮುಚ್ಚಿಹಾಕುತ್ತಿದ್ದಾರೆ! ಕೆಲವೊಮ್ಮೆ ಇತಿಹಾಸಕಾರರಿಗೇ ಇದು ನಿಜವೇ ಎಂಬ ಭ್ರಮೆಯಾವರಿಸುತ್ತದೆ! ಸತ್ಯವನ್ನು ಹಾಗೆಯೇ ಹೇಳಿದರೆ ಎಲ್ಲಿ ಸಮಾಜದ ಸ್ವಾಸ್ಥ್ಯ ಕೆಡುತ್ತದೋ ಎಂದು ತಿರುಚುತ್ತಿದ್ದಾರೆ! ಇದೇ ಆವರಣ ಅಥವಾ ಮರೆಮಾಚುವುದು! ಇದನ್ನು ಶಾಸ್ತ್ರಿ ಅವರ ಪಾತ್ರದ ಮೂಲಕ ಭೈರಪ್ಪನವರು ಬಹಳ ಚೆನ್ನಾಗಿ ತೋರಿಸಿದ್ದಾರೆ! ಭೈರಪ್ಪನವರೇ ಎನ್ ಸಿ ಈ ಆರ್ ಟಿ ಯಲ್ಲಿದ್ದಾಗ ಇಂದಿರಾಗಾಂಧಿ ಅವರ ಕಾಲದಲ್ಲಿ ಒಂದು ಸಮಿತಿ ಮಾಡಿ ಇತಿಹಾಸದ ಈ ಸತ್ಯಗಳನ್ನು ಪಠ್ಯಪುಸ್ತಕಗಳಿಂದ ತೆಗೆದುಹಾಕಬೇಕು ಎಂದು ಹೊರಟಾಗ ಭೈರಪ್ಪನವರು ವಿರೋಧಿಸಿ ಈಗ ತೆಗೆದರೂ ಮುಂದೆ ಜನರಿಗೆ ಗೊತ್ತಾಗಿ ಇನ್ನೂ ತೊಂದರೆಯಾಗುತ್ತದೆ, ಹಾಗಾಗಿ ಸತ್ಯವನ್ನು ಮುಚ್ಚಿಡದೇ ಯಾವ ರೀತಿ ಆಡಳಿತ ಇದ್ದರೆ ಅವನತಿ, ಯಾವ ರೀತಿ ಇದ್ದರೆ ಉದ್ಧಾರ ಎಂದು ಹೇಳುವ ಮೂಲಕ ಇತಿಹಾಸವನ್ನು ತೆಗೆದುಕೊಳ್ಳಬೇಕು ಎಂದು ಹೇಳಲು, ಅವರನ್ನು ಆ ಸಮಿತಿಯಿಂದ ತೆಗೆದು ಒಬ್ಬ ಮಾರ್ಕ್ಸ್ ವಾದಿಯನ್ನು ಹಾಕಿಕೊಂಡರು. ಪರಿಣಾಮವಾಗಿ ನಮ್ಮ ಪಠ್ಯಪುಸ್ತಕಗಳ ಇತಿಹಾಸ ಬದಲಾಗಿ ಮೊಗಲರು ಮಹಾನ್ ರಾಜರೆಂದು ತೋರಿಸಿದರು.ಭೈರಪ್ಪನವರು ತಮ್ಮ ಅನುಭವಗಳನ್ನೇ ಐತಿಹಾಸಿಕ ವಿಷಯದೊಂದಿಗೆ ಸೇರಿಸಿ ಆವರಣ ಕಾದಂಬರಿಯಾಗಿ ಬರೆದರು.
      ಇತಿಹಾಸದ ಉದ್ದೇಶವೇನು ಎಂಬುದು ಇಂದಿಗೂ ಎಷ್ಟೋ ಜನರಿಗೆ ಗೊತ್ತಿಲ್ಲ. ಹಿಂದೆಂದೋ ನಡೆದಿರುವುದನ್ನು ಈಗೇಕೆ ಪುನರ್ವಾಚಿಸುವುದು ಎಂದೇ ಬಹುತೇಕರ ನಿಲುವು.‌ ಭೈರಪ್ಪನವರು ಇತಿಹಾಸದ ಉದ್ದೇಶವನ್ನು ಬಹಳ ಚೆನ್ನಾಗಿ ಹೇಳುತ್ತಾರೆ.‌ ಇತಿಹಾಸದಿಂದ ತೆಗೆದುಕೊಳ್ಳುವುದು ಹಾಗೂ ಸ್ಫೂರ್ತಿ ಪಡೆಯುವುದು ಹೇಗೋ ಹಾಗೆಯೇ ಬಿಡಿಸಿಕೊಳ್ಳಲೂ ಬೇಕು, ಅದೇ ಇತಿಹಾಸದ ಉದ್ದೇಶ ಎಂದು ಅವರು ಹೇಳುತ್ತಾರೆ.  ಇತಿಹಾಸದ ವ್ಯಕ್ತಿಗಳು ಮಾಡಿರುವ ಒಳ್ಳೆಯ ಅಥವಾ ಕೆಟ್ಟ ಕಾರ್ಯಗಳಿಗೆ ಇಂದಿನ ಜನರು ಜವಾಬ್ದಾರರಲ್ಲ.ಹಾಗಾಗಿ ಇತಿಹಾಸದ ಅಧ್ಯಯನದಿಂದ ಇಂದಿನ ಮುಸ್ಲಿಮರನ್ನು ದ್ವೇಷಿಸಬಾರದು ಹಾಗೂ ಹಿಂದೂ ರಾಜರು ಮಾಡಿರುವ ಉನ್ನತ ಕಾರ್ಯಗಳಿಂದ ನಾವೇ ಅವರ ವಾರಸುದಾರರೆಂದು ಬೀಗಲೂಬಾರದು. ಆದರೆ ಅವರು ಮಾಡಿರುವ ಒಳ್ಳೆಯ ಕೆಲಸಗಳಿಂದ ಸ್ಫೂರ್ತಿ ಪಡೆಯಬೇಕು ಹಾಗೂ ಅವರು ಮಾಡಿರುವ ಕೆಟ್ಟ ಕೆಲಸಗಳಿಂದ ಬಿಡಿಸಿಕೊಳ್ಳಬೇಕು. ಇಲ್ಲವಾದರೆ ಅವು ಮತ್ತೆ ಮತ್ತೆ ಮರುಕಳಿಸುತ್ತವೆ. ಇಸ್ಲಾಂ ಆಡಳಿತದ ವಿಚಾರಕ್ಕೆ ಬಂದರೆ, ಅದರ ಮತಾಂಧತೆಯಿಂದ ಬಿಡಿಸಿಕೊಳ್ಳಬೇಕು. ಇಲ್ಲವಾದರೆ ಕೇರಳದ ಮೋಪ್ಲಾ ದಂಗೆ, ಕಾಶ್ಮೀರದ ಪಂಡಿತರ ಕಗ್ಗೊಲೆ, ಮೊದಲಾದ ಮತಾಂಧ ಘಟನೆಗಳು ಈಗಾಗಲೇ ನಡೆದಿರುವಂತೆ ಮತ್ತೆ ಮತ್ತೆ ಮರುಕಳಿಸುತ್ತವೆ! 
      ಇನ್ನೊಂದು ವಿಷಯವೆಂದರೆ, ಮುಸ್ಲಿಂ ರಾಜರು ಇಷ್ಟೊಂದು ದೇವಾಲಯಗಳನ್ನು ನಾಶ ಮಾಡಿದ್ದು, ಪುರುಷರನ್ನೂ ಸ್ತ್ರೀಯರನ್ನೂ ಅಪಹರಿಸಿ ಗುಲಾಮರನ್ನಾಗಿಸಿದ್ದು ಇವೆಲ್ಲವನ್ನೂ ಹೇಳಿದಾಗ, ಎಷ್ಟೋ ಜನರು, ಅಷ್ಟೇ ಏಕೆ ವಿದ್ವಾಂಸರು, ಪಂಡಿತರು, ಕೊನೆಗೆ ಇತಿಹಾಸಕಾರರೂ ಕೇಳುವ ಪ್ರಶ್ನೆ, " ಹಿಂದೂಗಳು ಹಾಗೆಲ್ಲಾ ಮಾಡಲಿಲ್ಲವೇ?" ಎಂಬುದು! ಹಿಂದೂಗಳು ಹಾಗೆಲ್ಲಾ ಮಾಡಿದ್ದಾರೆಂಬುದಕ್ಕೆ ಎಲ್ಲೂ ಉಲ್ಲೇಖಗಳು ಸಿಗುವುದಿಲ್ಲ. ಎಲ್ಲೋ ಒಂದಿಷ್ಟು ಶೈವ, ವೈಷ್ಣವ ಕಲಹ, ವೈದಿಕ, ಜೈನ, ಬೌದ್ಧರ ಕಲಹಗಳ‌ ಉಲ್ಲೇಖಗಳು ಬಹಳ ಕಡಿಮೆ ಸಿಗುತ್ತವೆ. ಹಾಗಾಗಿ ಇತಿಹಾಸದ ವಿಷಯಗಳನ್ನು ಸುಮ್ಮನೆ ಹಾರಿಕೆಯ ಮಾತುಗಳಾಗಿ ಹೇಳಬಾರದು. ವಸ್ತುನಿಷ್ಠವಾಗಿ ಅಧ್ಯಯನ ಮಾಡಿ ಹೇಳಬೇಕು. ಇದು ಭೈರಪ್ಪನವರಿಂದ ಕಲಿಯುವ ಒಂದು ದೊಡ್ಡ ಪಾಠ. ಅವರು ನಮ್ಮಲ್ಲಿ ಇದ್ದ ಇನ್ನೊಂದು ಸೊಗಸಾದ ವಿಷಯವನ್ನು ಹೇಳುತ್ತಾರೆ. ಯುದ್ಧ ಮಾಡುವವರಲ್ಲಿ ಮೂರು ರೀತಿಯವರನ್ನು ಕಾಳಿದಾಸನು ರಘುವಂಶದಲ್ಲಿ ಗುರುತಿಸುತ್ತಾನೆ. ಅವರೆಂದರೆ, ಧರ್ಮವಿಜಯಿ, ಲೋಭವಿಜಯಿ, ಮತ್ತು ಅಸುರವಿಜಯಿ. ಧರ್ಮವಿಜಯಿಯಾದವನು ಇನ್ನೊಬ್ಬ ರಾಜನ ಮೇಲೆ ಯುದ್ದ ಸಾರಿದರೂ ಅದು ತನ್ನ ಸಾಮ್ರಾಜ್ಯ ವಿಸ್ತರಣೆಗಾಗಿ ಮಾಡಿ, ಆ ಯುದ್ಧದಲ್ಲಿ ಸೋತ ಇನ್ನೊಬ್ಬ ರಾಜನನ್ನೇ ಅವನ ಸಿಂಹಾಸನದ ಮೇಲೆ ಪುನಃ ಪ್ರತಿಷ್ಠಾಪಿಸಿ, ಅವನಿಂದ ಕೇವಲ ಕಪ್ಪ ಕಾಣಿಕೆಗಳನ್ನು ಪಡೆಯುತ್ತಾ ತನ್ನ ಸಾಮಂತನನ್ನಾಗಿ ಮಾಡಿಕೊಳ್ಳುತ್ತಾನೆ. ಲೋಭವಿಜಯಿ ಸೋತ ರಾಜನ ಬೊಕ್ಕಸವನ್ನು ಲೂಟಿ ಮಾಡಿ ಆ ರಾಜನನ್ನು ಮಾತ್ರ ಉಳಿಸುತ್ತಾನೆ. ಇನ್ನು ಅಸುರವಿಜಯಿ ಆ ಸೋತ ರಾಜನನ್ನೂ ಕೊಂದು, ಅವನ ಬೊಕ್ಕಸವನ್ನು ಲೂಟಿ ಮಾಡಿ, ಸ್ತ್ರೀಯರನ್ನು ಅಪಹರಿಸಿ, ಆ ರಾಜ್ಯದ ದೇವಾಲಯ ಇತ್ಯಾದಿಗಳನ್ನು ನಾಶಮಾಡಿ, ಅವನ ರಾಜ್ಯದಲ್ಲಿ ತನ್ನ ಒಬ್ಬ ವ್ಯಕ್ತಿಯನ್ನು ಕೂರಿಸಿ ತನ್ನ ಮತ, ಭಾಷೆ, ಎಲ್ಲವನ್ನೂ ಹೇರುತ್ತಾನೆ! ಇಸ್ಲಾಂ ದಾಳಿಕೋರರು ಈ ರೀತಿಯ ಅಸುರವಿಜಯಿಗಳಾಗಿದ್ದರು. ಇದನ್ನು ನಮ್ಮ ಶಾಸ್ತ್ರಗಳು ಎಂದೂ ಬೆಂಬಲಿಸಿರಲಿಲ್ಲ. ನಮ್ಮ ಯುದ್ಧಗಳಲ್ಲಿ ಅನೇಕ ನೀತಿ, ನಿಯಮಗಳಿದ್ದವು. ಹಾಗಾಗಿ ಹಿಂದೂ ರಾಜರು ಒಬ್ಬರ ಮೇಲೊಬ್ಬರು ಯುದ್ಧ ಮಾಡಿದರೂ ಆತ ಯುದ್ಧಗಳು ಜನಸಾಮಾನ್ಯರ ಮೇಲೆ ಯಾವುದೇ ದುಷ್ಪರಿಣಾಮ ಉಂಟು ಮಾಡಿರಲಿಲ್ಲ ಹಾಗೂ ನಮ್ಮ ಸಂಸ್ಕೃತಿಯ‌ ಭಾಗಗಳಾದ ದೇವಾಲಯ, ಮೊದಲಾದ ಸ್ಮಾರಕಗಳ ನಾಶವೂ ಆಗಿರಲಿಲ್ಲ. ಹಾಗೆ ನೋಡಿದರೆ ಹಿಂದೂಗಳು ಇಸ್ಲಾಂ ಗೆ ಸಂಬಂಧಿಸಿದ ಯಾವುದೇ ಸ್ಮಾರಕಗಳನ್ನು ನಾಶ ಮಾಡಿಲ್ಲ. 
     ಈ ಅನೇಕ ವಿಚಾರಗಳು ಆವರಣ ಕಾದಂಬರಿಯಿಂದ ಸ್ಪಷ್ಟವಾಗಿ ಈ ದಾರಿಯಲ್ಲಿ ಇತರ ಐತಿಹಾಸಿಕ ಘಟ್ಟಗಳನ್ನು ಅಧ್ಯಯನ ಮಾಡಲು ಅನುಕೂಲವಾಗುತ್ತದೆ. ಒಂದು ಕೃತಿಯನ್ನು ರಚಿಸುವಾಗ ಅದನ್ನು ಸುಂದರಗೊಳಿಸಲು ಸತ್ಯವನ್ನು ಕೈಬಿಡಬಾರದೆಂಬ ಭೈರಪ್ಪನವರ ನಿಲುವು ಬಹಳ ಇಷ್ಟವಾಗುತ್ತದೆ.

ಬುಧವಾರ, ಸೆಪ್ಟೆಂಬರ್ 24, 2025

ಜೀವಜಗತ್ತು: ಸ್ಲಗ್ - ಸಿಂಬಳದ ಹುಳು


     ಈ ಚಿತ್ರದಲ್ಲಿ ಕಾಣುತ್ತಿರುವ ಹುಳುವನ್ನು ಸ್ಲಗ್ ಎಂದು ಕರೆಯುತ್ತಾರೆ. ಇದು ನನಗೆ ಕಂಡುಬಂದದ್ದು ದುಬಾರೆ ಕಾಡಿನ ಜಂಗಲ್ ಲಾಡ್ಜಸ್ ಮತ್ತು ರಿಸಾರ್ಟ್ಸ್ ಆವರಣದಲ್ಲಿ.  ಕನ್ಡಡದಲ್ಲಿ ಇದನ್ನು ಸಿಂಬಳದ ಹುಳು, ಗೊಂಡೆ ಹುಳು, ಮೊದಲಾದ ಹೆಸರುಗಳಿಂದ ಕರೆಯುತ್ತಾರೆ. ಇದು ನೆಲದ ಸ್ಲಗ್. ಇದರಂತೆಯೇ ಸಮುದ್ರದ ಸ್ಲಗ್ ಗಳೂ ಇವೆ. ಇದು ಮೊಲಸ್ಕ ಅಥವಾ ಮೃದ್ವಂಗಿಗಳು ಎಂಬ ಪ್ರಾಣಿ ವರ್ಗಕ್ಕೆ ಹಾಗೂ ಅದರಲ್ಲಿನ ಗ್ಯಾಸ್ಟ್ರೋಪೋಡ ಎಂಬ ಉಪವರ್ಗಕ್ಕೆ ಸೇರುತ್ತದೆ. ಬಸವನ ಹುಳು ಅಥವಾ ಸ್ನೈಲ್  ಕೂಡ ಈ ವರ್ಗಕ್ಕೆ ಸೇರುತ್ತದೆ. ಮೃದುವಾದ ಅಂಗ ಅಥವಾ ದೇಹವನ್ನು ಹೊಂದಿರುವುದರಿಂದ ಇವನ್ನು ಮೊಲಸ್ಕ್ ಅಥವಾ ಮೃದ್ವಂಗಿಗಳು ಎನ್ನುತ್ತಾರೆ. ಇವುಗಳ ದೇಹದ ಅಥವಾ ಹೊಟ್ಟೆಯ ತಳಭಾಗದಲ್ಲಿ ಮಾಂಸಯುಕ್ತವಾದ, ತೆಳುವಾದ ಒಂದು ಪದರ ಇವುಗಳಿಗೆ ಪಾದವಾಗಿ ಕೆಲಸ ಮಾಡಿ ಮಾಂಸಖಂಡಗಳ ಸಂಕೋಚನೆಯಿಂದ ಚಲನವಾಗುವುದರಿಂದ ಇವನ್ನು ಗ್ಯಾಸ್ಟ್ರೋಪೋಡ ಎಂಬ ಉಪವರ್ಗಕ್ಕೆ ಸೇರಿಸಲಾಗಿದೆ. ಬಸವನ ಹುಳುವೇ ಮೊದಲಾದ ಮೃದ್ವಂಗಿಗಳಿಗೆ ಒಂದು ಹೊರಚಿಪ್ಪಿರುತ್ತದೆ. ಆದರೆ ಈ ಸ್ಲಗ್ ಗಳಿಗೆ ಇಂಥ ಚಿಪ್ಪಿರುವುದಿಲ್ಲ ಅಥವಾ ಬಹಳ ಸಣ್ಣ ಚಿಪ್ಪಿರುತ್ತದೆ. ಕೆಲವು ಪ್ರಭೇದಗಳಲ್ಲಿ, ವಿಶೇಷವಾಗಿ ಸಮುದ್ರ ಸ್ಲಗ್ ಗಳಲ್ಲಿ ಹಾಗೂ ಸೆಮಿ ಸ್ಲಗ್ ( ಸಿಂಬಳದ ಹುಳು ಮತ್ತು ಬಸವನ ಹುಳುಗಳ ಸಂಯೋಗದಿಂದ ಹುಟ್ಟಿರುವ ಅರೆ ಸಿಂಬಳದ ಹುಳು) ಗಳಿಗೆ ದೇಹದ ಒಳಗೆ ಸಣ್ಣ ಚಿಪ್ಪಿರುತ್ತದೆ. ಸ್ಲಗ್ ಗಳು ಬಹಳ ನಿಧಾನವಾಗಿ ಚಲಿಸುವುದಾಗಿದ್ದು ಅವು ಚಲಿಸಿದಂತೆ ಅವುಗಳ ಪಾದವು ಸಿಂಬಳವನ್ನು ಉತ್ಪತ್ತಿ ಮಾಡುತ್ತಾ ಸಿಂಬಳದ ದಾರಿ ಬಿಡುತ್ತದೆ. ಇದು ಇವುಗಳ ದೇಹ ಒಣಗುವುದನ್ನು ತಪ್ಪಿಸುತ್ತದೆ. ಸಿಂಬಳದ ದಾರಿ ಇತರ ಸ್ಲಗ್ ಗಳಿಗೆ ಸಂಗಾತಿಯನ್ನು ಹುಡುಕಲು ಸಹಾಯವಾಗುತ್ತದೆ. ಇವು ಉತ್ಪತ್ತಿ ಮಾಡುವ ಸಿಂಬಳ ತೆಳುವಾಗಿ ಇಲ್ಲವೇ ಗಟ್ಟಿಯಾಗಿ ಇರಬಹುದು. ಗಟ್ಟಿಯಾದ ಸಿಂಬಳ, ಇವು ನೇರವಾದ ಸ್ಥಳಗಳಿಗೆ ಅಂಟಿಕೊಂಡು ಜಾರಿ ಬೀಳದಂತೆ ತಡೆಯುತ್ತದೆ. ಅಂತೆಯೇ ಇದು ಇವನ್ನು ಬಹಳ ಅಂಟುವ ಹುಳುವಾಗಿಸಿ ಪಕ್ಷಿಗಳೋ ಇತರ ಬೇಟೆಗಾರ ಪ್ರಾಣಿಗಳೋ ಇವನ್ನು ಹಿಡಿದು ತಿನ್ನದಂತೆ ಮಾಡುತ್ತದೆ. ಜೊತೆಗೆ ಸಿಂಬಳವೂ ಅಸಹ್ಯ ರುಚಿ ಹೊಂದಿರುವುದರಿಂದ ಇತರ ಪ್ರಾಣಿ, ಪಕ್ಷಿಗಳು ಇವನ್ನು ತಿನ್ನದಂತೆ ಮಾಡುತ್ತದೆ. ಕೆಲವೊಮ್ಮೆ ಇವನ್ನು ದಾಳಿ ಮಾಡಿದಾಗ ಇವು ಉಂಡೆಯಂತೆ ಮುದುಡಿಕೊಂಡು ಇತರ ಪ್ರಾಣಿಪಕ್ಷಿಗಳು ಎತ್ತಿಕೊಳ್ಳದಂತಾಗುತ್ತವೆ ಇಲ್ಲವೇ ಬಾಲ ಕತ್ತರಿಸಿಕೋಳ್ಳುತ್ತವೆ! ಇಷ್ಟಾದರೂ ಇವನ್ನು ಮೀನುಗಳು, ಹಾವುಗಳು, ಹಲ್ಲಿಗಳು, ಕಪ್ಪೆಗಳು, ಮತ್ತು ಪಕ್ಷಿಗಳು ತಿನ್ನುತ್ತವೆ. ಸ್ಲಗ್ ಗಳು ದ್ವಿಲಿಂಗಿಗಳಾಗಿದ್ದು ಸಂತಾನೋತ್ಪತ್ತಿಯ ಕಾಲದಲ್ಲಿ ಸಂಗಾತಿಗಳು ಪರಸ್ಪರ ಸುತ್ತಿಕೊಂಡು ವೀರ್ಯ ಪ್ರದಾನ ಮಾಡುತ್ತವೆ. ಕೆಲವು ಪ್ರಭೇದಗಳು ಸಿಂಬಳದ ದಾರಗಳನ್ನು ಮಾಡಿ ಅವುಗಳಿಂದ ಇವು ನೇತಾಡಿಕೊಂಡು ಸುತ್ತಿಕೊಳ್ಳುತ್ತವೆ! ಸ್ಲಗ್ ಗಳ ತಲೆಯ ಮುಂದೆ ಎರಡು ಜೊತೆ ಮೀಸೆಯಂಥ ಆಕೃತಿಗಳು ಕಾಣುತ್ತವೆ. ಇವನ್ನು ಟೆಂಟಕಲ್ಸ್ ಅಥವಾ ಫೀಲರ್ಸ್ ಎನ್ನುತ್ತಾರೆ. ಇವುಗಳನ್ನು ಸ್ಲಗ್ ಗಳು ಹಿಂದಕ್ಕೆ ಎಳೆದುಕೊಳ್ಳಬಲ್ಲವು. ಮೇಲ್ಜೊತೆಯ ತುದಿಗಳಲ್ಲಿ ಕಣ್ಣಿನ ಬಿಂದುಗಳಿದ್ದರೆ ಕೆಳ ಜೊತೆಯು ವಾಸನೆಯನ್ನು ಗ್ರಹಿಸುತ್ತದೆ. ತಲೆಯ ಹಿಂದೆ ಒಂದು ಕುದುರೆ ಜೀನಿನಂಥ ಆಕೃತಿಯಿದ್ದು ಅದನ್ನು ಮ್ಯಾಂಟಲ್ ಎನ್ನುತ್ತಾರೆ. ಈ ಮ್ಯಾಂಟಲ್ ನ ಬಲಭಾಗದಲ್ಲಿ ಶ್ವಾಸದ ರಂಧ್ರವೂ ಜನನಾಂಗ ದ್ವಾರವೂ ಗುದದ್ವಾರವೂ ಇರುತ್ತವೆ. ಕೆಲವು ಪ್ರಭೇದಗಳಲ್ಲಿ ಗುದದ್ವಾರ ಹಿಂಬದಿಯಲ್ಲಿರುತ್ತದೆ. ಮ್ಯಾಂಟಲ್ ನ ಹಿಂದಿನ ಭಾಗವೇ ಇದರ ಬಾಲ. ಸ್ಲಗ್ ಗಳು ಸಾಮಾನ್ಯವಾಗಿ ರಾತ್ರಿಯ ಹೊತ್ತಿನಲ್ಲಿ ಸಂಚರಿಸುವವಾಗಿದ್ದು ಹಗಲಿನ ಸಮಯದಲ್ಲಿ ಮರದ ತೊಗಟೆ, ದಿಮ್ಮಿಗಳು, ಎಲೆಗಳು, ಬಂಡೆಗಳಲ್ಲಿ ಅಡಗಿರುತ್ತವೆ. ಮಳೆ ಬಂದಾಗ ತೇವಾಂಶ ಹೆಚ್ಚಿರುವುದರಿಂದ ಇವು ಹೆಚ್ಚು ಕ್ರಿಯಾಶೀಲವಾಗುತ್ತವೆ. ಇವು ಎಲ್ಲಾ ಸಸ್ಯ, ತರಕಾರಿ, ಹಣ್ಣುಗಳು, ಅಣಬೆಗಳು, ಶಿಲೀಂಧ್ರಗಳನ್ನು ಸೇವೀಸುತ್ತವೆಯಲ್ಲದೇ ಕೆಲವು, ಇತರ ಸ್ಲಗ್ ಗಳು, ಬಸವನ ಹುಳುಗಳು ಮತ್ತು ಎರೆಹುಳುಗಳನ್ನೂ ತಿನ್ನುತ್ತವೆ. ಸ್ಲಗ್ ಗಳು ಮನುಷ್ಯನಿಗೆ ಯಾವುದೇ ತೊಂದರೆ ಕೊಡದಿದ್ದರೂ ಬೆಳೆಯನ್ನು ತಿಂದು ನಾಶ ಮಾಡಬಹುದು. ಸಿಂಬಳದ ಹುಳುಗಳೂ ಬಸವನ ಹುಳುಗಳೂ ಸೇರಿ ಗ್ಯಾಸ್ಟ್ರೋಪೋಡ್ ಗಳಲ್ಲಿ ಸುಮಾರು ಎಂಬತ್ತು ಸಾವಿರ ಪ್ರಭೇದಗಳಿವೆ ಎಂದು ಹೇಳುತ್ತಾರೆ! 

ಶನಿವಾರ, ಸೆಪ್ಟೆಂಬರ್ 20, 2025

ನಿಸರ್ಗವನ್ನು ಆಸ್ವಾದಿಸಿ ಪಕ್ಷಿಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಿ

ಮಳೆಗಾಲ ಕಳೆಯುತ್ತಿದೆ.ಪ್ರವಾಸ ಮಾಡಲು ಈಗ ಸೂಕ್ತ ಸಮಯ.ಬಿಸಿಲಿನ ಬೇಗೆ ಇಲ್ಲದೇ, ಧಾರಾಕಾರ ಮಳೆಯೂ ಇಲ್ಲದೇ, ತಿಳಿಯಾದ ತಂಪಾದ ಈ ವಾತಾವರಣದಲ್ಲಿ ಮಳೆಯ ಪ್ರಭಾವದಿಂದ ಎಲ್ಲೆಲ್ಲೂ ಹಚ್ಚ ಹಸುರಿನ ರಮ್ಯ ಪ್ರಕೃತಿ ಕೈಬೀಸಿ ಕರೆಯುತ್ತಿದೆ. ಇಂಥ ವಾತಾವರಣದಲ್ಲಿ ಪ್ರಕೃತಿ ರಮ್ಯ ತಾಣಗಳಿಗೆ ಭೇಟಿ ಇತ್ತರೆ ಮನಸ್ಸು ಮೈಗಳಿಗೆ ಹಿತವೂ ಆಹ್ಲಾದವೂ ಉಂಟಾಗುತ್ತದೆ.
     ನಡೆದು ನೋಡು ಕೊಡಗಿನ ಸೊಬಗು ಎನ್ನುತ್ತಾರೆ. ಏಕೆಂದರೆ ಕೊಡಗಿನಲ್ಲಿ ಎಲ್ಲೆಲ್ಲೂ ಪ್ರಕೃತಿ ಸೌಂದರ್ಯವೇ ತುಂಬಿರುತ್ತದೆ! ಹಾಗಾಗಿ ಇಲ್ಲಿ ಎಲ್ಲಿಗೆ ಹೋದರೂ ಕಣ್ಮನಗಳಿಗೆ ಹಸಿರು ವನರಾಜಿ, ಬೆಳಗಿನ ಚುಮು ಚುಮು ಮಂಜಿನ ತಂಪು, ಸಂಜೆಯ ಚಳಿ, ನಮಗೆ ಮುದವುಂಟುಮಾಡುತ್ತದೆ! ಕೊಡಗಿನ ಹಲವಾರು ಪ್ರೇಕ್ಷಣೀಯ ತಾಣಗಳಲ್ಲಿ ಕಾವೇರಿ ನಿಸರ್ಗಧಾಮವೂ ಒಂದು. ಕೊಡಗಿನ ಮುಖ್ಯ ನಗರವಾದ ಮಡಿಕೇರಿಯಿಂದ ಇಪ್ಪತ್ತೆಂಟು ಕಿ.ಮೀ. ದೂರವಿರುವ ಈ ತಾಣ, ಮೈಸೂರಿನಿಂದ ತೊಂಬತ್ತೈದು ಕಿ.ಮೀ. ದೂರವಿದೆ. ಕುಶಾಲನಗರದ ಸಮೀಪವಿರುವ ಇದು, ಅಲ್ಲಿಂದ ಕೇವಲ ಎರಡು ಕಿ.ಮೀ. ದೂರದಲ್ಲಿದೆ.
      ಕಾವೇರಿ ನಿಸರ್ಗಧಾಮ, ಕಾವೇರಿ ನದಿಯಲ್ಲಿನ ಒಂದು ಪುಟ್ಟ ದ್ವೀಪ. ಒಂದು ತೂಗು ಸೇತುವೆಯನ್ನು ದಾಟಿ ಈ ದ್ವೀಪವನ್ನು ತಲುಪಬೇಕು. ಒಂದು ಪುಟ್ಟ ಪ್ರವೇಶ ಶುಲ್ಕದೊಂದಿಗೆ ನಾವು ಕಾವೇರಿ ನಿಸರ್ಗಧಾಮವನ್ನ ಪ್ರವೇಶಿಸಿ ತೂಗು ಸೇತುವೆಯ‌ ಮೂಲಕ ಈ ದ್ವೀಪವನ್ನು ಸೇರಬೇಕು. ಕಾವೇರಿ ನದಿಯ ಮೇಲಿನ ಈ ತೂಗು ಸೇತುವೆಯನ್ನು ದಾಟುವುದೇ ಒಂದು ರೋಮಾಂಚನ ನೀಡುತ್ತದೆ! ತೂಗುಸೇತುವೆಯ ಮೇಲೆ ನಿಂತು ಫೋಟೋ, ಸೆಲ್ಫಿ ತೆಗೆದುಕೊಳ್ಳುವುದು ಎಲ್ಲರಿಗೂ ಬಹಳ ಪ್ರಿಯ! ಕಾವೇರಿ ನಿಸರ್ಗಧಾಮಕ್ಕೆ ಬಂದ ಕೂಡಲೇ ಒಂದು ಸುಂದರವಾದ ಕಾವೇರಿ ಮಾತೆಯ ವಿಗ್ರಹವನ್ನು ಕಾಣುತ್ತೇವೆ. ಎದುರಿಗೆ ಕಲಾಧಾಮ ಎಂಬ ಕೊಡಗಿನ ಕರಕುಶಲ ವಸ್ತುಗಳ ಮಾರಾಟ ಮಳಿಗೆಯಿದೆ.‌ ಇಲ್ಲಿ ನಮಗೆ ಇಷ್ಟವಾದ ಕರಕುಶಲ ವಸ್ತುಗಳನ್ನು ಕೊಳ್ಳಬಹುದು. ಕಾವೇರಿ ಮಾತೆಗೆ ನಮಿಸಿ ನಾವು ಮುಂದೆ ನಡೆದರೆ, ಒಣ ಹಣ್ಣುಗಳು, ಗೃಹನಿರ್ಮಿತ ಚಾಕೋಲೇಟ್ ಗಳು, ಕೊಡಗಿನ ಕಾಫಿ ಪುಡಿ, ಜೇನುತುಪ್ಪ, ಮಸಾಲೆ ಪದಾರ್ಥಗಳು ದೊರೆಯುವ ದೊಡ್ಡ ಬೆಟ್ಟಗೇರಿ ಗ್ರಾಮ ಅರಣ್ಯ ಸಮಿತಿಯ ಸೊಗಸಾದ ಅಂಗಡಿಯಿದೆ. ಇಲ್ಲಿಯೂ ಸಾಕಷ್ಟು ಖರೀದಿ ಮಾಡಬಹುದು. ಅಂತೆಯೇ ಇಲ್ಲೊಂದು ಉಪಾಹಾರ ಮಂದಿರವೂ ಇದೆ. ದೋಣಿ ವಿಹಾರಕ್ಕೆ ದಾರಿ ತೋರುವ ಫಲಕ ಕೂಡ ಕಾಣುತ್ತದೆ. ಆದರೆ ಈಗ ನೀರಿನ ಮಟ್ಟ ಹೆಚ್ಚಳವಾಗಿರುವುದರಿಂದ ದೋಣಿ ವಿಹಾರ ನಿಲ್ಲಿಸಲಾಗಿದೆ.
      ಮುಂದೆ ಹೋದಂತೆ ನಮಗೆ ಎಲ್ಲೆಲ್ಲೂ ಹಸಿರು ಹುಲ್ಲು, ಬಿದಿರು ಮೆಳೆಗಳು, ತೇಗ ಮತ್ತು ಶ್ರೀಗಂಧದ ವೃಕ್ಷಗಳಿಂದ ಕೂಡಿರುವ ಸುಂದರ ಉಪವನ ಸ್ವಾಗತಿಸುತ್ತದೆ! ನಡೆಯಲು ನಮಗೆ ಸೊಗಸಾದ ಕಲ್ಲುದಾರಿಯಿದೆ. ಅಲ್ಲಲ್ಲಿ ಮರಗಳ ಕಾಂಡಗಳ  ಮೇಲೆ ಮಾಡಿರುವ ಹುಲಿ, ಮೊಸಳೆ, ಹಾವು, ಮೊದಲಾದ ಬಣ್ಣದ ಚಿತ್ರಕಲಾಕೃತಿಗಳು ಮನಸೆಳೆಯುತ್ತವೆ! ಮುಂದೆ ಹೋದಂತೆ, ಇಲ್ಲಿ ನಾವು ಮುಖ್ಯವಾಗಿ ನೋಡಬೇಕಿರುವ ಪಕ್ಷಿಧಾಮ, ಜಿಂಕೆವನ, ಮತ್ತು ನದಿಗೆ ದಾರಿ ತೋರುವ ಫಲಕ ಕಾಣುತ್ತದೆ. ಈ ದಾರಿಯಲ್ಲಿ ಒಂದಷ್ಟು ದೂರ ನಡೆಯಬೇಕು. ಸುಂದರವಾದ ಅಲಂಕೃತ ದ್ವಾರವೂ ಜಿಂಕೆಯ ಮುಖಗಳಿರುವ ದ್ವಾರವೂ ನಮ್ಮನ್ನು ಮುಂದೆ ಸ್ವಾಗತಿಸುತ್ತವೆ! ಮುಂದೆ ಕೊಡಗಿನ ಬುಡಕಟ್ಟು ಜನರ  ಜೀವನಶೈಲಿಯನ್ನು ತೋರಿಸುವ ಅನೇಕ ಶಿಲ್ಪಾಕೃತಿಗಳ ಒಂದು ಸುಂದರ ಚಿತ್ರಣ ಇದೆ. ಅಂತೆಯೇ ಉಮ್ಮತ್ - ಆಟ್ ಎಂಬ ಕೊಡಗಿನ ಮಹಿಳೆಯರ ಸಾಂಪ್ರದಾಯಿಕ ನೃತ್ಯದ ಸುಂದರ ಚಿತ್ರಣವಿದೆ. ನಸುಗೆಂಪು ಬಣ್ಣದ ಸೀರೆಗಳನ್ನು ಕೊಡಗಿನ ಶೈಲಿಯಲ್ಲಿ ಉಟ್ಟು ನರ್ತಿಸುತ್ತಿರುವ ಸುಂದರ ಸ್ತ್ರೀ ಪ್ರತಿಮೆಗಳ ಒಕ್ಕೂಟ ಬಹಳವಾಗಿ ಮನಸೆಳೆಯುತ್ತದೆ! ಇನ್ನೊಂದು ಸ್ವಾರಸ್ಯಕರ ಶಿಲ್ಪ ಚಿತ್ರಣವೆಂದರೆ, ಕೊಡಗಿನ ಗೌಡ ಜನಾಂಗದವರ ಸಾಂಪ್ರದಾಯಿಕ ನೃತ್ಯವಾದ ಕೋಲಾಟ! ಕೊಡಗಿನ ಶೈಲಿಯ ವಸ್ತ್ರಗಳನ್ನು ಧರಿಸಿ ಕೋಲಾಟವಾಡುತ್ತಿರುವ ಪುರುಷರ ಬೊಂಬೆಗಳ ಒಕ್ಕೂಟ ಮನಸೆಳೆಯುತ್ತದೆ! 
      ಎಲ್ಲೆಲ್ಲೂ ಸಿಕಾಡ ಕೀಟಗಳ ಜುಂಯ್ ಜುಂಯ್ ಶಬ್ದಗಳೂ ಪಕ್ಷಿಗಳ ಇಂಪಾದ ಕಲರವಗಳೂ ಕಿವಿತುಂಬುತ್ತವೆ! ಇದು ನಮಗೆ ಅರಣ್ಯ ಪರಿಸರದ ಭಾವ ತರುತ್ತದೆ! ನೆಮ್ಮದಿಯಿಂದ ಕುಳಿತುಕೊಂಡು ಪ್ರಕೃತಿಯನ್ನು ಆಸ್ವಾದಿಸಲು ಇಲ್ಲಿ ಚಿತ್ತಾರವಾದ ಅನೇಕ ಸುಂದರ ಮಂಟಪಗಳಿವೆ! ಅಂತೆಯೇ ಇಲ್ಲಿ ಎತ್ತರ ಹತ್ತಲು ಮರದ ಮೇಲಿನ ಮನೆಗಳೂ ಇವೆ! ಮರದ ಮೆಟ್ಟಿಲುಗಳನ್ನು ಹತ್ತಿ ಈ ಟ್ರೀ ಟಾಪ್ ಮನೆಗೆ ಹೋಗಿ ಫೋಟೋ ತೆಗೆಸಿಕೊಳ್ಳಲು ಎಲ್ಲರೂ ಇಷ್ಟಪಡುತ್ತಾರೆ! ಪ್ರೇಮಿಗಳಿಗೆ ಮತ್ತು ಪ್ರಕೃತಿ ಪ್ರಿಯರಿಗೆ ಈ ತಾಣ ಅಮಿತಾನಂದ ಕೊಡುತ್ತದೆ! 
         ಮುಂದೆ ಹೋದಂತೆ ನಮಗೆ ಪಕ್ಷಿಧಾಮ ಅಥವಾ ಬರ್ಡ್ ಪಾರ್ಕ್ ಸಿಗುತ್ತದೆ. ಇದು ಕಾವೇರಿ ನಿಸರ್ಗಧಾಮದ ಒಂದು ಮುಖ್ಯ ಆಕರ್ಷಣೆ. ಒಂದು ಪುಟ್ಟ ಶುಲ್ಕದೊಂದಿಗೆ ಗುಹಾದ್ವಾರದಂಥ ದ್ವಾರವನ್ನು ಪ್ರವೇಶಿಸಿ ಈ ಪಕ್ಷಿಧಾಮದೊಳಗೆ ಬಂದರೆ ಬಣ್ಣ ಬಣ್ಣದ ವಿದೇಶಿ ಪಕ್ಷಿಗಳ ಕಲರವಗಳು ನಮ್ಮನ್ನು ಸ್ವಾಗತಿಸುತ್ತವೆ! ಇಲ್ಲಿ ಉದ್ದ ಬಾಲದ ಅಮೇರಿಕಾದ ನೀಲಿ, ಹಳದಿ, ಕೆಂಪು ಬಣ್ಣಗಳ ಸುಂದರ ಮಕಾವ್ ಗಿಣಿಗಳು, ಹಸಿರು ಅಮೆಜಾನ್ ಗಿಣಿ, ಹಳದಿ ಕೆಂಪು ಬಣ್ಣಗಳ ಸನ್ ಕಾನ್ಯೂರ್ ಗಳೆಂಬ ಗಿಣಿ ಜಾತಿಯ ಸುಂದರ ಪಕ್ಷಿಗಳು, ಲಾರಿಕೀಟ್ ಗಳೆಂಬ ಬಣ್ಣದ ಗಿಣಿ ಜಾತಿಯ ಪಕ್ಷಿಗಳು,  ಉಷ್ಟ್ರಪಕ್ಷಿಗಳು, ಟರ್ಕಿ ಪಕ್ಷಿಗಳು, ಗೋಲ್ಡನ್ ಫೆಸೆಂಟ್, ಸಿಲ್ವರ್ ಫೆಸೆಂಟ್, ಮೊದಲಾದ ಕೋಳಿ ಜಾತಿಯ ಸುಂದರ ಪಕ್ಷಿಗಳು ಇಲ್ಲಿವೆ! ಅಂತೆಯೇ ಇಲ್ಲಿ ಇಗ್ವಾನ ಎಂಬ ಒಂದು ದೈತ್ಯ ಹಲ್ಲಿಯೂ ಇದೆ! ವಿವಿಧ ಪುಟ್ಟ ಶುಲ್ಕಗಳೊಂದಿಗೆ ನಾವು ಮಕಾವ್ ಗಿಣಿಗಳನ್ನು ಕೈಮೇಲೆ, ಹೆಗಲ ಮೇಲೆ ಕೂರಿಸಿಕೊಂಡು ಫೋಟೋ, ವಿಡಿಯೋ ತೆಗೆಸಿಕೊಳ್ಳಬಹುದು! ಕೈಗಳಲ್ಲಿ ಕಾಳುಗಳನ್ನು ಹಾಕಿಸಿಕೊಂಡು ನಿಂತರೆ, ಅನೇಕ ಸನ್ ಕಾನ್ಯೂರ್ ಪಕ್ಷಿಗಳು ಒಟ್ಟಾಗಿ ಬಂದು ನಮ್ಮ ಕೈಗಳ ಮೇಲೆ ಕುಳಿತು ಕಾಳು ತಿನ್ನುತ್ತವೆ! ಇದು ರೋಮಾಂಚನ ನೀಡುತ್ತದೆ! ಉದ್ದ ಹಿಡಿಯ ಬಟ್ಟಲಿನಲ್ಲಿ ಉಷ್ಟ್ರಪಕ್ಷಿಗಳಿಗೆ ತಿನಿಸು ನೀಡಿದಾಗ ಅವು ಜೋರಾಗಿ ಕುಟ್ಟಿ ಕುಟ್ಟಿ ತಿನ್ನುವುದು ಭಯಮಿಶ್ರಿತ ರೋಮಾಂಚನವುಂಟುಮಾಡುತ್ತದೆ! ಇಗ್ವಾನ ದೈತ್ಯ ಹಲ್ಲಿಯನ್ನು ಕೈಗಳಲ್ಲಿ ಹಿಡಿದುಕೊಳ್ಳುವುದು ಒಂದು ವಿಶೇಷ ಅನುಭವ! 
      ಮುಂದೆ ನಮಗೆ ಸಿಗುವುದು ಜಿಂಕೆವನ. ಇಲ್ಲಿ ಅನೇಕ ಚುಕ್ಕಿ ಜಿಂಕೆಗಳು ಅಥವಾ ಸ್ಪಾಟೆಡ್ ಡೀರ್ ಗಳಿವೆ. ಇವನ್ನು ಚೀತಲ್ ಗಳೆಂದು ಕರೆಯುತ್ತಾರೆ. ಕಂದು ಬಣ್ಣದ ಮೈಮೇಲೆ ಚುಕ್ಕೆಗಳಿದ್ದು ಇವು ಬಹಳ ಸುಂದರವಾಗಿರುತ್ತವೆ! ಸಂತಾನೋತ್ಪತ್ತಿಯ ಕಾಲದಲ್ಲಿ ಗಂಡು ಜಿಂಕೆಗಳಿಗೆ ಕೊಂಬುಗಳು ಮೂಡಿ ಅವು ಇನ್ನೂ ಸುಂದರವಾಗಿ ಕಾಣುತ್ತವೆ! ಈ ಕೊಂಬುಗಳಿಂದ ಎರಡು ಗಂಡು ಜಿಂಕೆಗಳು ಹೆಣ್ಣಿಗಾಗಿ ಯುದ್ಧ ಮಾಡುತ್ತವೆ! ಇಲ್ಲಿ ನಾವು ಕೊಂಬುಗಳುಳ್ಳ ಗಂಡು ಜಿಂಕೆಗಳು, ಹೆಣ್ಣು ಜಿಂಕೆಗಳು ಮರಿಗಳು, ಎಲ್ಲವನ್ನೂ ನೋಡಿ ಅವುಗಳ ವರ್ತನೆಯಿಂದ ಆನಂದಿಸಬಹುದು! 
         ಇಲ್ಲಿ ತಾತ್ಕಾಲಿಕವಾಗಿ ದೋಣಿ ವಿಹಾರ ನಿಲ್ಲಿಸಿರುವಂತೆ, ಜಿಪ್ ಲೈನ್, ರೋಪ್ ವೇ, ಮೊದಲಾದ ಸಾಹಸ ಕ್ರೀಡೆಗಳೂ ಇದ್ದು , ಅವನ್ನು ಕಾರಣಾಂತರಗಳಿಂದ ನಿಲ್ಲಿಸಲಾಗಿದೆ. 
       ಕಾವೇರಿ ನಿಸರ್ಗಧಾಮ ಬೆಳಿಗ್ಗೆ ಒಂಬತ್ತರಿಂದ ಸಂಜೆ ಐದು ವರೆ ಗಂಟೆಯವರೆಗೆ ಎಲ್ಲಾ ದಿನಗಳಲ್ಲೂ ತೆರೆದಿರುತ್ತದೆ.‌ ಇಲ್ಲಿ ಉಳಿದುಕೊಳ್ಳಲು ಸುಂದರವಾದ ಕೊಠಡಿಗಳೂ ಇವೆ. ಇವುಗಳಿಗೆ ಅರಣ್ಯ ಇಲಾಖೆಯ ಮೂಲಕ ಮೊದಲೇ ನಿಗದಿಪಡಿಸಿಕೊಳ್ಳಬೇಕು. ನಿಸರ್ಗಧಾಮದ ಹೊರಗೆ ಗಾಡಿ ನಿಲುಗಡೆಯ ವ್ಯವಸ್ಥೆ ಇದೆ. ಅಂತೆಯೇ ಅನೇಕ ತಿಂಡಿ ತಿನಿಸುಗಳ ಅಂಗಡಿಗಳೂ ಹೋಟೆಲ್ ಗಳೂ ಇವೆ.‌ ಒಂದು ತಂಪಾದ ಸಂಜೆಯನ್ನು ಕಳೆಯಲು ಇದೊಂದು ಸೊಗಸಾದ ತಾಣ.ಇಲ್ಲಿಗೆ ಹೋದಾಗ ಹತ್ತಿರದಲ್ಲೇ ಇರುವ ದುಬಾರೆ ಆನೆ ಶಿಬಿರ ಹಾಗೂ ಸುಂದರವಾದ ಟಿಬೆಟ್  ಬೌದ್ಧ ಸ್ವರ್ಣ ದೇವಾಲಯವನ್ನು ವೀಕ್ಷಿಸಬಹುದು.
                                        ಡಾ.ಬಿ.ಆರ್.ಸುಹಾಸ್
                                         ಬೆಂಗಳೂರು