ಸೋಮವಾರ, ಜನವರಿ 19, 2026

ಬಿಷ್ಣುಪುರದ ಅದ್ಭುತ ಕೃಷ್ಣ ಮಂದಿರಗಳು


ಭಾರತವು ಪುಣ್ಯಭೂಮಿ ಎಂದು ಹೆಸರಾಗಿದೆ. ಹಾಗಾಗಿಯೇ ಭಾರತದ ಪ್ರವಾಸೀ ತಾಣಗಳಲ್ಲಿ ದೇವಾಲಯಗಳು ಹಾಗೂ ಪುಣ್ಯಕ್ಷೇತ್ರಗಳು ಪ್ರಧಾನವಾಗಿವೆ. ಭಾರತದಲ್ಲಿ ಅನೇಕ ಭವ್ಯ ದೇವಾಲಯಗಳಿವೆ. ಅವುಗಳಲ್ಲಿ ಈಗ ನಾನು ಹೇಳಹೊರಟಿರುವ ಬಿಷ್ಣುಪುರದ ಅದ್ಭುತ ದೇವಾಲಯಗಳ ಗುಂಪೂ ಒಂದು.
     ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದಿಂದ ಸುಮಾರು 150 ಕಿ.ಮೀ.ಗಳಷ್ಟು ದೂರದಲ್ಲಿರುವ ಬಿಷ್ಣುಪುರ ( ವಿಷ್ಣುಪುರ) ಬಾಂಕುರ ಜಿಲ್ಲೆಯಲ್ಲಿನ ಪುಟ್ಟ ಊರಾಗಿದ್ದು, ಕಲಾತ್ಮಕವಾದ ಟೆರ್ರಕೋಟ ಅಥವಾ ಮಣ್ಣಿನ ದೇವಾಲಯಗಳಿಗೆ ಪ್ರಸಿದ್ಧವಾಗಿದೆ. ಇಂಥ ಅದ್ಭುತ ದೇವಾಲಯಗಳನ್ನು ಇನ್ನೆಲ್ಲೂ ಕಾಣಲಾಗದು! ಎತ್ತರವಾಗಿಯೂ ಭವ್ಯವಾಗಿಯೂ ಇರುವ ಈ ದೇವಾಲಯಗಳು ತಮ್ಮ ವಿಶಿಷ್ಟ ಕೆತ್ತನೆಗಳಿಂದ ನೋಡುಗರ ಹುಬ್ಬೇರಿಸುವಂತೆ ಮಾಡುತ್ತದೆ! ಕೋಲ್ಕತಾಗೆ ಹೋದಾಗ ಈ ಸ್ಥಳವನ್ನು ತಪ್ಪದೇ ನೋಡಬೇಕು. 
     ಈಗ ಒಂದು ಸಾಧಾರಣ ಹಳ್ಳಿಯಂತೆ ಕಾಣುವ ಬಿಷ್ಣುಪುರ, ಹಿಂದೆ, ಕ್ರಿ.ಶ. 997 ರ ಕಾಲದಲ್ಲಿ ಮಲ್ಲ ರಾಜರ ಸಾಮ್ರಾಜ್ಯವಾಗಿ ವಿಜೃಂಭಿಸಿತ್ತು! ಆದಿಮಲ್ಲನಿಂದ ಸ್ಥಾಪಿತವಾದ ಮಲ್ಲ ಸಾಮ್ರಾಜ್ಯದಲ್ಲಿ ಐವತ್ತಕ್ಕೂ ಹೆಚ್ಚು ರಾಜರು ಆಳಿದರು. ಮೊದಲಿಗೆ ಈ ಮಲ್ಲ ಸಾಮ್ರಾಜ್ಯಕ್ಕೆ ಪ್ರದ್ಯುಮ್ನಪುರ ಎಂಬ ಸ್ಥಳ ರಾಜಧಾನಿಯಾಗಿತ್ತು.‌ ಮುನ್ನೂರು ವರ್ಷಗಳ ನಂತರ ಆಳ್ವಿಕೆಗೆ ಬಂದ ಜಗತ್ ಮಲ್ಲನೆಂಬ ರಾಜನು ಇಲ್ಲಿನ ಕಾಡಿನಲ್ಲಿ ಬೇಟೆಯಾಡುವಾಗ, ತನ್ನ ಹದ್ದುವನ್ನು ಒಂದು ಕೊಕ್ಕರೆಯು ಸೋಲಿಸಿ ಓಡಿಸುವುದನ್ನು ಕಂಡು ವಿಸ್ಮಯಗೊಂಡು, ಈ ಸ್ಥಳದಲ್ಲಿ ಏನೋ ವಿಶೇಷ ಶಕ್ತಿಯಿರಬೇಕೆಂದು ಭಾವಿಸಿ ತನ್ನ ರಾಜಧಾನಿಯನ್ನು ಇಲ್ಲಿಗೆ ಸ್ಥಳಾಂತರಿಸಿದನು. ಆಗಲೇ ಆದಂಥ ಮೃಣ್ಮಯೀದೇವಿಯ ( ದುರ್ಗೆಯ) ಆಜ್ಞೆಯಂತೆ, ಮಣ್ಣಿನಲ್ಲಿ ಹುದುಗಿದ್ದ ಅವಳ ವಿಗ್ರಹವನ್ನು ಅಗೆದು ತೆಗೆಸಿ ಅದರೊಂದಿಗೆ ಅವಳ ದೇವಾಲಯವನ್ನು ನಿರ್ಮಿಸಿದನು ಎಂದು ಐತಿಹ್ಯಗಳು ಹೇಳುತ್ತವೆ. ಹೀಗೆ ಮೃಣ್ಮಯೀದೇವಿಯ ಭಕ್ತರಾಗಿದ್ದ ಮಲ್ಲರು, ಬೀರ್ ಹಂಬೀರ್ ರಾಜನಿಂದ ವೈಷ್ಣವರಾಗಿ ಸೊಗಸಾದ ಅನೇಕ ಕೃಷ್ಣ ಮಂದಿರಗಳನ್ನು ನಿರ್ಮಿಸಿದರು. ಇವನ ಕಾಲದಲ್ಲಿ ಮೊಘಲರಿಗೂ ಪಠಾಣರಿಗೂ ಯುದ್ಧವಾಗಿ, ಇವನು ಮೊಘಲರ ಪರವಾಗಿ ನಿಂತು ಪಠಾಣರ ನಾಯಕ ದಾವೂದ್ ಖಾನನನ್ನು ಸೋಲಿಸಲು, ಅಕ್ಬರನು ಇವನ ಶೌರ್ಯಕ್ಕೆ ಮೆಚ್ಚಿ ಇವನಿಗೆ ಬೀರ್ ( ವೀರ) ಎಂಬ ಬಿರುದನ್ನಿತ್ತನೆಂದು ಹೇಳುತ್ತಾರೆ. ದಾವೂದ್ ಖಾನನನ್ನು ಸೋಲಿಸಿದರೂ ಅವನನ್ನು ಕೊಲ್ಲದೇ ಬಿಟ್ಟುದಕ್ಕಾಗಿ ಅವನೇ ಇವನಿಗೆ ಈ ಬಿರುದು ಕೊಟ್ಟನೆಂದೂ ಹೇಳುತ್ತಾರೆ. ಇವನು ವೈಷ್ಣವನಾದುದಕ್ಕೆ ಒಂದು ಕಥೆಯಿದೆ. ಒಮ್ಮೆ, ಚೈತನ್ಯ ಪರಂಪರೆಯ ಜೀವಗೋಸ್ವಾಮಿಗಳು, ಹರಿಭಕ್ತಿವಿಲಾಸ, ಚೈತನ್ಯ ಚರಿತಾಮೃತ, ಉಜ್ವಲ ನೀಲಮಣಿ, ಭಕ್ತಿರಸಾಮೃತಸಿಂಧು, ಲಲಿತಮಾಧವ, ವಿದಗ್ಧ ಮಾಧವ, ಮೊದಲಾದ ಇಪ್ಪತ್ತೊಂದು ಅಪರೂಪದ ಭಕ್ತಿಸಾಹಿತ್ಯ ಕೃತಿಗಳನ್ನು ಗೌರಮಠಕ್ಕೆ ಶ್ರೀನಿವಾಸಾಚಾರ್ಯರ ಮೂಲಕ ಕಳಿಸಿದರು. ಅವರು ಅವನ್ನು ಪೆಟ್ಟಿಗೆಗಳ ಮೂಲಕ ಸಾಗಿಸುತ್ತಾ ರಾತ್ರಿ ಒಂದು ಕಡೆ ವಿಶ್ರಾಂತಿ ಪಡೆಯುತ್ತಿದ್ದಾಗ, ರಾಜನ ಸೈನಿಕರು ಅವನ್ನು ಹಣದ ಪೆಟ್ಟಿಗೆಗಳೆಂದು ತಪ್ಪು ತಿಳಿದು ವಶಪಡಿಸಿಕೊಂಡು ಹೋದರು! ರಾಜನು ಅವನ್ನು ತೆಗೆಸಿ, ಪುಸ್ತಕಗಳನ್ನು ಕಂಡು ಆಶ್ಚರ್ಯಗೊಂಡು ಪಂಡಿತರಿಂದ ಅವನ್ನು ಓದಿಸಿ ವಿವರಣೆ ಪಡೆಯತೊಡಗಿದನು. ಅಷ್ಟರಲ್ಲಿ ಅಲ್ಲಿಗೆ ಬಂದ ಶ್ರೀನಿವಾಸಾಚಾರ್ಯರು, ಆ ಪಂಡಿತರು ತಪ್ಪು ವಿವರಣೆ ಕೊಡುತ್ತಿದ್ದುದನ್ನು ಕೇಳಿ ದುಃಖಗೊಂಡು ಕಿವಿ ಮುಚ್ಚಿಕೊಂಡರು! ಆಗ ರಾಜನು ಅವರನ್ನು ವಿಚಾರಿಸಲು, ಅವರು ಸರಿಯಾದ ವಿವರಣೆಗಳನ್ನು ಕೊಟ್ಟರು. ಇದರಿಂದ ರಾಜನ ಮನ ಕರಗಿ ಅವನು ಕೂಡಲೇ ಶ್ರೀನಿವಾಸಾಚಾರ್ಯರ ಶಿಷ್ಯನಾಗಿ ವೈಷ್ಣವನಾದನು. ಅವರಿಗೆ ಅವನು ಮದುವೆಯನ್ನೂ ಮಾಡಿಸಿ ಅಲ್ಲಿಯೇ ವಸತಿಯನ್ನು ಕಲ್ಪಿಸಿಕೊಟ್ಟನು. ಅಲ್ಲಿಂದ ಮುಂದೆ ಬಿಷ್ಣುಪುರವು ಒಂದು ವೈಷ್ಣವಧಾಮವಾಯಿತು! ಮೃಣ್ಮಯೀದೇವಿಯ ಪೂಜೆ ಮುಂದುವರೆದರೂ ಅನೇಕ ಕೃಷ್ಣ ದೇಗುಲಗಳ ನಿರ್ಮಾಣವಾಯಿತು! ಬೀರ್ ಹಂಬೀರನು ರಾಸಮಂಚ ಎಂಬ ಮಂದಿರವನ್ನು ಶ್ರೀಕೃಷ್ಣನ ರಾಸಲೀಲೆಯನ್ನು ಆಚರಿಸಲೆಂದು ನಿರ್ಮಿಸಿ, ಶ್ಯಾಮಬಂಧ್, ಜಮುನಾಬಂಧ್, ರಾಧಾಕುಂಡ, ಕಾಲಿಂದೀ ಘಾಟ್, ಮೊದಲಾದ ಅನೇಕ ಕೆರೆಗಳನ್ನು ನಿರ್ಮಿಸಿದನು. ಅವನಿಗೆ ಒಬ್ಬ ನವಾಬನು ದೇವ್ ಎಂಬ ಬಿರುದನ್ನೂ ಕೊಟ್ಟನು. ಅವನ ನಂತರ ಬಂದ ಮಲ್ಲರಾಜರು ಅನೇಕ ಕೃಷ್ಣ ದೇಗುಲಗಳನ್ನು ನಿರ್ಮಿಸಿದರು. ಈಗ ಅಂಥ ಕೆಲವು ಸುಂದರ ದೇವಾಲಯಗಳ ಪರಿಚಯ ಮಾಡಿಕೊಳ್ಳೋಣ.

ರಾಸಮಂಚ 
   ಈ ಮಂದಿರವನ್ನು ನೋಡುವುದರೊಂದಿಗೆ ಬಿಷ್ಣುಪುರದ ಪ್ರವಾಸವನ್ನು ಆರಂಭಿಸುವುದು ಒಳ್ಳೆಯದು. ಏಕೆಂದರೆ ಎಲ್ಲಾ ದೇವಾಲಯಗಳನ್ನು ನೋಡಲು ನಮಗೆ ಪ್ರವೇಶ ಚೀಟಿ ದೊರೆಯುವುದು ಇಲ್ಲಿಯೇ. ಹಾಗೆಯೇ ಇಲ್ಲಿ ಮಾರ್ಗದರ್ಶಿಗಳು ಅಥವಾ ಗೈಡ್ ಗಳು ಸಿಗುತ್ತಾರೆ. ದೇವಾಲಯಗಳ ವಿವರಣೆ ಪಡೆಯಲು ನಮಗೆ ಮಾರ್ಗದರ್ಶಿ ಅತ್ಯವಶ್ಯಕ. ಒಂದೊಂದು ದೇವಾಲಯವೂ ದೂರವಿರುವುದರಿಂದ, ಮಾರ್ಗದರ್ಶಿಯನ್ನೂ ನಮ್ಮ ಖಾಸಗಿ ವಾಹನದಲ್ಲಿ ಜೊತೆಗೆ ಕರೆದೊಯ್ಯುವುದು ಒಳ್ಳೆಯದು. 
     ಮಲ್ಲ ಸಾಮ್ರಾಜ್ಯದ ಕೀರ್ತಿ, ವೈಭವಗಳನ್ನು ಸಾರಿ ಹೇಳುವ ರಾಸಮಂಚ ಎಂಬ ಈ ಬೃಹತ್ ಮಂದಿರವನ್ನು ಬೀರ್ ಹಂಬೀರನು ಕ್ರಿ.ಶ.1587 ರಲ್ಲಿ ನಿರ್ಮಿಸಿದನು.

 ಮೂರು ಅಂಗಣಗಳನ್ನುಳ್ಳ ಚೌಕಾಕಾರದ ಮಂದಿರ, ಅದರ ಮೇಲೆ ಮೊಘಲ್ ಶೈಲಿಯ ಕಮಾನುಗಳು, ಮತ್ತು ಅವುಗಳ ಮೇಲೆ ತ್ರಿಕೋಣಾಕೃತಿಯ ಗೋಪುರ, ಹೀಗೆ ಮೂರು ಅಂತಸ್ತುಗಳ ವಿಶಿಷ್ಟ ರಚನೆಯ ಈ ಕಟ್ಟಡ, ಲ್ಯಾಟರೈಟ್ ( ಕೆಂಪು ಜೇಡಿಮಣ್ಣಿನ) ತಳದ ಮೇಲೆ ನಿಂತಿದ್ದು, ಒಂದೊಂದು ಬದಿಯಲ್ಲೂ ಹತ್ತು ದ್ವಾರಗಳನ್ನು ಹೊಂದಿದೆ. ಇವು ಬಂಗಾಳಿ ಶೈಲಿಯ ಛಾವಣಿಗಳನ್ನೂ ಸೊಗಸಾದ ಭಾರವಾದ ಕಂಬಗಳನ್ನೂ ಹೊಂದಿವೆ. ಈ ರಾಸಮಂಚವು ರಾಸೋತ್ಸವವನ್ನು ಆಚರಿಸುವ ಮಂದಿರವಾಗಿದ್ದು, ಆ ಉತ್ಸವದ ಸಮಯದಲ್ಲಿ ಇತರ ಎಲ್ಲಾ ದೇವಾಲಯಗಳ ವಿಗ್ರಹಗಳನ್ನು ತಂದು ಇಲ್ಲಿರಿಸುತ್ತಿದ್ದರು. 

ಶ್ಯಾಮರಾಯ್ ಮಂದಿರ 
        ಅತ್ಯಂತ ಸೊಗಸಾದ ಟೆರ್ರಕೋಟ ಶಿಲ್ಪಕಲೆಯನ್ನು ಹೊಂದಿರುವ ಈ ಬೃಹತ್ ಮಂದಿರವನ್ನು ಕ್ರಿ.ಶ. 1643 ರಲ್ಲಿ ಮಲ್ಲರಾಜ ರಘುನಾಥ ಸಿಂಘನು ನಿರ್ಮಿಸಿದನು. ಬಂಗಾಳೀ ಶೈಲಿಯ ಕಮಾನಿನ ಛಾವಣಿ ಮತ್ತು ಮೇಲೆ ಐದು ಶಿಖರಗಳನ್ನು ಹೊಂದಿರುವ ಈ ದೇವಾಲಯ, ಪಂಚರತ್ನ ಮಾದರಿಯ ದೇವಾಲಯಗಳಿಗೆ ಅತ್ಯುತ್ತಮ ಉದಾಹರಣೆ. ಈ ಮಂದಿರದ ಗೋಡೆಗಳ ಮೇಲೆ ರಾಮಾಯಣ, ಮಹಾಭಾರತ, ಮತ್ತು ಕೃಷ್ಣಲೀಲೆಗಳಿಗೆ ಸಂಬಂಧಿಸಿದ ಸುಂದರ ಕೆತ್ತನೆಗಳಿವೆ. ಅಂತೆಯೇ ಜಿಂಕೆ, ಆನೆ, ಗಂಡಭೇರುಂಡ,ಮೊದಲಾದ ಪ್ರಾಣಿಪಕ್ಷಿಗಳ ಹಾಗೂ ಸುಂದರ ವಿನ್ಯಾಸಗಳ ಕೆತ್ತನೆಗಳಿವೆ. ಆದರೆ ಮಂದಿರದಲ್ಲಿ ವಿಗ್ರಹವಿಲ್ಲದಿರುವುದರಿಂದ ಪೂಜೆಯಿಲ್ಲ.

ಜೋರ್ ಬಂಗ್ಲ ಮಂದಿರ 
      ಕ್ರಿ.ಶ. 1655 ರಲ್ಲಿ ರಘುನಾಥ ಸಿಂಘ ರಾಜನು ನಿರ್ಮಿಸಿದ ಈ ಅದ್ಭುತ ಮಂದಿರವು ಎರಡು ಬಂಗಾಳೀ ಗುಡಿಸಲುಗಳ ಮಾದರಿಯಲ್ಲಿದ್ದು, ಅವುಗಳ ಜಾರುವ ಛಾವಣಿಗಳನ್ನು ಒಟ್ಟಿಗೆ ಸೇರಿಸಿ, ಮೇಲೆ ಒಂದು ಶಿಖರವಿರುವಂತೆ ನಿರ್ಮಿಸಲಾಗಿದೆ! ಗೋಡೆಗಳ ಮೇಲಿನ ಶ್ರೀಕೃಷ್ಣನ ರಾಸಲೀಲೆ ಹಾಗೂ ದಶಾವತಾರ, ರಾಮಾಯಣ, ಮಹಾಭಾರತಗಳ ಅದ್ಭುತ ಕೆತ್ತನೆಗಳು ಮನಸೆಳೆಯುತ್ತವೆ! ಇಲ್ಲಿಯೂ ವಿಗ್ರಹ ಮತ್ತು ಪೂಜೆಗಳಿಲ್ಲ.

ರಾಧಾಶ್ಯಾಮ ಮಂದಿರ 
     ಕ್ರಿ.ಶ. 1758 ರಲ್ಲಿ ರಾಜಾ ಚೈತನ್ಯ ಸಿಂಘನು ನಿರ್ಮಿಸಿದ ಈ ಲ್ಯಾಟರೈಟ್ ( ಕೆಂಪು ಜೇಡಿಮಣ್ಣು); ಮಂದಿರವು, ಒಂದು ಏಕರತ್ನ, ಅಂದರೆ ಒಂದೇ ಶಿಖರವುಳ್ಳ ಮಂದಿರವಾಗಿದ್ದು, ಎತ್ತರದ ಗೋಡೆಗಳುಳ್ಳ ವಿಶಾಲ ಆವರಣದಲ್ಲಿದೆ. ರಾಜಾ ಚೈತನ್ಯ ಸಿಂಘನ ಕಾಲದಲ್ಲಿ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯ ಆಡಳಿತವು ಅವನ ಮೇಲೆ ಆರ್ಥಿಕ ಒತ್ತಡವನ್ನು ತಂದಿತ್ತು! ಆದರೂ ಅವನು ಮನೆತನದ ಸಂಪ್ರದಾಯವಾದ ದೇವಾಲಯ ನಿರ್ಮಾಣವನ್ನು ಬಿಡಲಿಲ್ಲ. ಅವನ ಅಚ್ಚಳಿಯದ ಪ್ರಯತ್ನದ ಫಲವೇ ಈ ಅದ್ಭುತ ಮಂದಿರ! ಇಲ್ಲಿನ ಕೃಷ್ಣಲೀಲೆಯ ಸುಂದರ ಭಿತ್ತಿ ಕೆತ್ತನೆಗಳೊಂದಿಗೆ ಗರ್ಭಗುಡಿಯಲ್ಲಿ ಶ್ರೀ ರಾಧಾಕೃಷ್ಣರ ಸುಂದರ ವಿಗ್ರಹಗಳಿದ್ದು ನಿತ್ಯ ಪೂಜೆ ನಡೆಯುತ್ತದೆ.

ಮದನಮೋಹನ ಮಂದಿರ 
      ಕ್ರಿ.ಶ. 1694 ರಲ್ಲಿ ದುರ್ಜನ ಸಿಂಘ್ ರಾಜನು ನಿರ್ಮಿಸಿದ ಈ ಮಂದಿರ, ಕಮಾನಿನ ಆಕೃತಿಯ ಬಾಂಗ್ಲಾ ಛಾವಣಿಯ ಮೇಲೆ ಒಂದೇ ಶಿಖರವನ್ನು ಹೊಂದಿದ್ದು, ಇಟ್ಟಿಗೆ ಮತ್ತು ಮಣ್ಣಿನಿಂದ ಕಟ್ಟಲಾಗಿರುವ, ಈ ಮಾದರಿಯ ಅತ್ಯದ್ಭುತ ಮಂದಿರವಾಗಿದೆ. ಗೋಡೆಗಳ ಮೇಲೆ ಕೃಷ್ಣಲೀಲೆ, ದಶಾವತಾರ, ಮೊದಲಾದ ಸುಂದರ ಕೆತ್ತನೆಗಳಿದ್ದು, ಗರ್ಭಗುಡಿಯಲ್ಲಿ ಶ್ರೀ ರಾಧಾಮನೋಹರರ ಸುಂದರ ವಿಗ್ರಹಗಳಿವೆ. ಈಗಲೂ ಇಲ್ಲಿ ನಿತ್ಯ ಪೂಜೆ ನಡೆಯುವುದಾಗಿದ್ದು, ರಾಸೋತ್ಸವ, ಮತ್ತು ದೋಲಾಯಾತ್ರೆ ( ಹೋಳಿ) ಗಳು ಇಲ್ಲಿ ನಡೆಯುವ ಆಕರ್ಷಕ ಉತ್ಸವಗಳಾಗಿವೆ! ಇಲ್ಲಿನ ಅರ್ಚಾವಿಗ್ರಹವಾದ ಮದನಮೋಹನನ ಬಗ್ಗೆ ಒಂದು ಕಥೆ ಹೇಳುತ್ತಾರೆ. ಗೋಪಾಲಸಿಂಘನೆಂಬ ರಾಜನು ಬಿಷ್ಣುಪುರವನ್ನು ಆಳುತ್ತಿದ್ದಾಗ, ಮರಾಠಾ ಲೂಟಿಕೋರರು ದಾಳಿ ಮಾಡಲು, ಅವನು ಎದುರಿಸಲಾಗದೇ ಮದನಮೋಹನ ದೇವರಿಗೆ ಶರಣಾದನಂತೆ. ಆಗ ಮದನಮೋಹನನು ನೀಲಿ ವಸ್ತ್ರವನ್ನು ಧರಿಸಿದ ಒಬ್ಬ ಯುವಕನ ರೂಪದಲ್ಲಿ ಬಂದು, ದಲ್ ಮದಲ್ ಎಂಬ ಫಿರಂಗಿಯನ್ನು ಸಿಡಿಸಿ ಅನೇಕ ಲೂಟಿಕೋರರನ್ನು ಕೊಂದು ಬಿಷ್ಣುಪುರವನ್ನು ರಕ್ಷಿಸಿದುದನ್ನು ಅನೇಕರು ನೋಡಿದರಂತೆ! 
      ಈ ದೇವಾಲಯ, ದೊಡ್ಡ ಗೋಡೆಗಳ ವಿಶಾಲ ಆವರಣದಲ್ಲಿದ್ದು, ಇಲ್ಲಿ ದೇವಾಲಯಕ್ಕೆ ಸಂಬಂಧಿಸಿದ ಪಾಕಶಾಲಾ ಕಟ್ಟಡವೂ ಇದೆ.

ಇತರ ಮಂದಿರಗಳು ಮತ್ತು ಪ್ರೇಕ್ಷಣೀಯ ಸ್ಥಳಗಳು 
      ಬಿಷ್ಣುಪುರದಲ್ಲಿ ಈ ಮಂದಿರಗಳಲ್ಲದೇ, ಲಾಲ್ ಜಿ ಮಂದಿರ, ಮದನಗೋಪಾಲ ಮಂದಿರ, ನಂದಲಾಲ್ ಮಂದಿರ, ಕೃಷ್ಣ ಬಲರಾಮ ಮಂದಿರ, ಮೃಣ್ಮಯೀದೇವಿಯ ಮಂದಿರ, ಛಿನ್ನಮಸ್ತಾದೇವಿಯ ಮಂದಿರ, ಮೊದಲಾದ ಅನೇಕ ಮಂದಿರಗಳಿವೆ. ಇವಲ್ಲದೇ, ದಲ್ ಮದಲ್ ಫಿರಂಗಿ, ಕೋಟೆಯ ಹೆಬ್ಬಾಗಿಲು, ಗುಮ್ ಗಢ ಎಂಬ ಅಪರಾಧಿಗಳ ಶಿಕ್ಷಾಸ್ಥಾನ, ಕಲ್ಲಿನ ರಥ, ವಸ್ತುಸಂಗ್ರಹಾಲಯ, ರಘುನಾಥ ಸಿಂಘನು ನಿರ್ಮಿಸಿದ ಲಾಲ್ ಬಂಧ್ ಕೆರೆ, ಮೊದಲಾದ ಅನೇಕ ಪ್ರೇಕ್ಷಣೀಯ ತಾಣಗಳಿವೆ ಇಲ್ಲಿ. ಇಲ್ಲಿ ಲಾಲ್ ಬಂಧ್ ಕೆರೆಯ ಬಗೆಗಿನ ಒಂದು ಕಥೆಯನ್ನು ಹೇಳಲೇ ಬೇಕು. ರಘುನಾಥ ಸಿಂಘನು ದೆಹಲಿಯಿಂದ ಬಹಾದುರ್ ಖಾನ್ ಎಂಬ ಸಂಗೀತಗಾರನನ್ನು ಇಲ್ಲಿಗೆ ಕರೆತಂದು ಹಿಂದೂಸ್ತಾನಿ ಘರಾನಾ ಸಂಗೀತವನ್ನು ಇಲ್ಲಿ ಪರಿಚಯಿಸಿದಾಗ, ಅವನೊಂದಿಗೆ ಬಂದ ಪರ್ಷಿಯಾ ನರ್ತಕಿ ಲಾಲ್ ಬಾಯಿಗೂ ಇವನಿಗೂ ಪ್ರೇಮವಾಗಿ, ಅವಳಿಗಾಗಿ ಲಾಲ್ ಬಂಧ್ ಕೆರೆಯನ್ನು ಇವನು ನಿರ್ಮಿಸಿದನೆಂದು ಹೇಳುತ್ತಾರೆ. ಆದರೆ ಅವರ ಪ್ರೇಮವನ್ನು ಸಹಿಸದ ಅವನ ರಾಣಿ ಚಂದ್ರಪ್ರಭೆಯು ಅವನನ್ನೂ ಲಾಲ್ ಬಾಯಿಯನ್ನೂ ಈ ಕೆರೆಯಲ್ಲಿ ದೋಣಿವಿಹಾರ ಮಾಡಿಸುತ್ತಾ ಕೆರೆಯಲ್ಲಿ ಮುಳುಗಿಸಿ ಕೊಂದು, ಅನಂತರ ತಾನೂ ಸಹಗಮನ ಮಾಡಿದಳೆಂಬ ಒಂದು ರೋಚಕ ಕಥೆಯಿದೆ. ಇನ್ನೊಂದು ಕಥೆಯ ಪ್ರಕಾರ, ಜನರು ಲಾಲ್ ಬಾಯಿ ಮತ್ತು ಅವಳಿಗೆ ರಾಜನಿಂದ ಹುಟ್ಟಿದ ಮಗುವನ್ನು ದೋಣಿಗೆ ಕಟ್ಟಿ ಮುಳುಗಿಸಿದರೆಂದು ಹೇಳುತ್ತಾರೆ. ಈ ಕೆರೆ ಭೂತಾವೇಶಿತವಾಗಿದೆಯೆಂದೂ ಅಮಾವಾಸ್ಯೆಯ ರಾತ್ರಿ ಇಲ್ಲಿ ಬಂದರೆ ಒಂದು ಹೆಣ್ಣಿನ ಆರ್ತನಾದ ಕೇಳುವುದೆಂದೂ ಇಲ್ಲಿನ ಜನರು ಹೇಳುತ್ತಾರೆ. 
      ಬಿಷ್ಣುಪುರ ಘರಾನಾ ಇಂದಿಗೂ ಪ್ರಸಿದ್ಧವಾಗಿದೆ.

ಇತರ ಆಕರ್ಷಣೆಗಳು 
        ಬಿಷ್ಣುಪುರವು ಹಲವಾರು ಕರಕುಶಲ ಕಲೆಗಳಿಗೆ ಪ್ರಸಿದ್ಧವಾಗಿದೆ. ಕೃಷ್ಣಲೀಲೆ ಹಾಗೂ ಪೌರಾಣಿಕ ಚಿತ್ರಗಳ ಅಂಚುಗಳಿರುವ ಬಾಲುಚಾರಿ ಎಂಬ ಬಗೆಯ ಸೀರೆ ಇಲ್ಲಿನ ಒಂದು ಮುಖ್ಯ ಕೊಡುಗೆಯಾಗಿದೆ. ಅಂತೆಯೇ ಇದು ಟೆರ್ರಕೋಟಾ ತಾಣವಾಗಿದ್ದು, ಅದ್ಭುತವಾದ ಟೆರ್ರಕೋಟ ಕಲಾತ್ಮಕ ವಸ್ತುಗಳು ಇಲ್ಲಿ ಸುಲಭ ಬೆಲೆಗೆ ದೊರೆಯುತ್ತವೆ. ಟೆರ್ರಕೋಟ ಶಂಖಗಳೂ ಇಲ್ಲಿನ ಒಂದು ಆಕರ್ಷಣೆ. ಹಿತ್ತಾಳೆಯ ಪಾತ್ರೆಗಳೂ ಕಲಾತ್ಮಕ ವಸ್ತುಗಳೂ ಇಲ್ಲಿನ ಇನ್ನೊಂದು ಆಕರ್ಷಣೆ. ಅಂತೆಯೇ ದಶಾವತಾರ ಕಾರ್ಡ್ ಗಳು ಹಾಗೂ ಒಡಿಶಾದ ಪಟಚಿತ್ರಗಳು ಇಲ್ಲಿನ ಇನ್ನಿತರ ಪ್ರಮುಖ ಆಕರ್ಷಣೆಗಳು. ಪರ್ಷಿಯಾ ಮೂಲದ ಗಂಜೀಫಾ ಚಿತ್ರಕಲೆಯ ಕಾರ್ಡ್ ಗಳ ಕ್ರೀಡೆ ಭಾರತದ ಹಲವೆಡೆಗಳಲ್ಲಿ ಬೆಳೆದು ಪ್ರಸಿದ್ಧವಾಗಿದ್ದು, ಚಿತ್ರಕಲೆಗೂ ಕ್ರೀಡೆಗೂ ತನ್ನದೇ ಆದ ಕಾಣ್ಕೆ ಕೊಟ್ಟಿದೆ. ಬಿಷ್ಣುಪುರದಲ್ಲೂ ಮಲ್ಲರಾಜರು ದಶಾವತಾರದ ಕಾರ್ಡ್ ಗಳ ಆಟ ಆಡುತ್ತಿದ್ದು ಈಗಲೂ ಇದು ಉಳಿದುಬಂದಿದೆ. ಫೌಜ್ ದಾರ್ ವಂಶದವರು ಪರಂಪರೆಯಿಂದ ಈ ಗಂಜೀಫಾ ಕಾರ್ಡ್ ಗಳನ್ನು ರಚಿಸುತ್ತಿದ್ದು, ಈಗ ಶೀತಲ್ ಫೌಜ್ ದಾರ್ ಎಂಬ ಕಲಾವಿದರು ಇದನ್ನು ಮಾಡುತ್ತಿದ್ದಾರೆ. ಮಾರ್ಗದರ್ಶಿಯೊಂದಿಗೆ ನಾನು ಅವರ ಕಫೇರಿಗೆ ಹೋಗಿ ಅವರನ್ನು ಮಾತನಾಡಿಸಿ ದಶಾವತಾರ ಕಾರ್ಡ್ ಗಳನ್ನು ಖರೀದಿಸಿದೆ. ವಿಷ್ಣುವಿನ ದಶಾವತಾರದ ಚಿತ್ರಗಳಿರುವ ಈ ಕಾರ್ಡ್ ಗಳನ್ನು ಬಟ್ಟೆಯನ್ನು ಬೇಲದ ಹಣ್ಣಿನ ರಸದಿಂದ ಗಟ್ಟಿಗೊಳಿಸಿ, ಸಸ್ಯವರ್ಣಗಳಿಂದ ಚಿತ್ರಗಳನ್ನು ರಚಿಸಿ ಮಾಡಲಾಗುತ್ತದೆ. ಇವನ್ನು ನಾವು ಕ್ರೀಡೆ ಇಲ್ಲವೇ ಸಂಗ್ರಹಕ್ಕಾಗಿ ಖರೀದಿಸಬಹುದು. ಇಲ್ಲಿ ನಾವು ನಮ್ಮಲ್ಲೂ ಇರುವ ಗಂಜೀಫಾ ರಘುಪತಿ ಭಟ್ ಎಂಬ ಗಂಜೀಫಾ ಕಲಾವಿದರನ್ನು ಸ್ಮರಿಸಬಹುದು. ಅವರ ಬಗ್ಗೆ ನಾನು ಶೀತಲ್ ಫೌಜ್ ದಾರ್ ಅವರ ಬಳಿ ಹೇಳಿದಾಗ ಅವರು ತಮಗೆ ಗೊತ್ತೆಂದರು. 
       ಬಿಷ್ಣುಪುರದಲ್ಲಿ ಉಳಿದುಕೊಳ್ಳಲು ಕೆಲವು ಹೋಟೆಲ್ ಗಳಿದ್ದು, ಹೆಚ್ಚಿನ ಅಧ್ಯಯನಕ್ಕಾಗಿ ಒಂದೆರಡು ದಿನಗಳು ಇಲ್ಲಿರಬಹುದು, ಇಲ್ಲವೇ ಕೋಲ್ಕತಾದಿಂದ ಖಾಸಗಿ ವಾಹನದಲ್ಲಿ ಬೆಳಿಗ್ಗೆ ಬೇಗನೆ ಹೊರಟು, ಸಾಕಷ್ಟು ನೋಡಿ, ರಾತ್ರಿಯ‌ ಹೊತ್ತಿಗೆ ಹಿಂದಿರುಗಬಹುದು. ಬಿಷ್ಣುಪುರಕ್ಕೆ ಹೋಗುವ ದಾರಿಯಲ್ಲೇ ಶ್ರೀ ರಾಮಕೃಷ್ಣ ಪರಮಹಂಸರ ಮತ್ತು ಶಾರದಾದೇವಿಯರ ಜನ್ಮಸ್ಥಳಗಳಾದ ಕಾಮಾರ್ಪುಕೂರ್, ಜಯರಾಂಬಾಟಿಗಳನ್ನೂ ನೋಡಬಹುದು. ಊಟ, ತಿಂಡಿಗಳು ಅಷ್ಟಾಗಿ ದೊರೆಯದಿರುವುದರಿಂದ, ಕೋಲ್ಕತಾದಿಂದಲೇ ಏನಾದರೂ ತಿಂಡಿತಿನಿಸುಗಳನ್ನು ತೆಗೆದುಕೊಂಡು ಹೋಗುವುದು ಒಳ್ಳೆಯದು.



ಭಾನುವಾರ, ಜನವರಿ 18, 2026

ನೆನಪಿಗೆ ಬಂದ ರಾಮಾಯಣಗಳು

ನೆನಪಿಗೆ ಬಂದ ರಾಮಾಯಣಗಳು,ರಾಮಕಥೆಗಳು

ವಾಲ್ಮೀಕಿ ರಾಮಾಯಣ(ಸಂಸ್ಕೃತ)
ಅದ್ಭುತ ರಾಮಾಯಣ(ಸಂಸ್ಕೃತ)
ಆನಂದ ರಾಮಾಯಣ(ಸಂಸ್ಕೃತ)
ಅಧ್ಯಾತ್ಮ ರಾಮಾಯಣ(ಸಂಸ್ಕೃತ)
ತತ್ವಸಂಗ್ರಹ ರಾಮಾಯಣ(ಸಂಸ್ಕೃತ)
ಕಾಳಿದಾಸನ ರಘುವಂಶ(ಸಂಸ್ಕೃತ)
ಕುಮಾರದಾಸನ ಜಾನಕೀರಹಣ(ಸಂಸ್ಕೃತ,ಶ್ರೀಲಂಕಾ)
ಭಾಸನ ಪ್ರತಿಮಾನಾಟಕ(ಸಂಸ್ಕೃತ ನಾಟಕ)
ಭಾಸನ ಅಭಿಷೇಕ ನಾಟಕ(ಸಂಸ್ಕೃತ ನಾಟಕ)
ಶಕ್ತಿಭದ್ರನ ಆಶ್ಚರ್ಯ ಚೂಡಾಮಣಿ(ಸಂಸ್ಕೃತ ನಾಟಕ)
ಭವಭೂತಿಯ ಮಹಾವೀರಚರಿತ(ಸಂಸ್ಕೃತ ನಾಟಕ)
ಭವಭೂತಿಯ ಉತ್ತರರಾಮಚರಿತ(ಸಂಸ್ಕೃತ ನಾಟಕ)
ಹನುಮಂತನ ಹನೂಮನ್ನಾಟಕ(ಸಂಸ್ಕೃತ ನಾಟಕ)
ಭಾಸ್ಕರಭಟ್ಟನ ಉನ್ಮತ್ತರಾಘವ(ಸಂಸ್ಕೃತ ನಾಟಕ)
ಜಯದೇವನ ಪ್ರಸನ್ನರಾಘವ(ಸಂಸ್ಕೃತ ನಾಟಕ)
ಮುರಾರಿಯ ಅನರ್ಘರಾಘವ(ಸಂಸ್ಕೃತ ನಾಟಕ)
ರಾಜಶೇಖರನ ಬಾಲರಾಮಾಯಣ(ಸಂಸ್ಕೃತ ನಾಟಕ)
ಮಾಯುರಾಜನ ಉದಾತ್ತರಾಘವ(ಸಂಸ್ಕೃತ ನಾಟಕ)
ರಾಮಭದ್ರದೀಕ್ಷಿತನ ಜಾನಕೀಪರಿಣಯ(ಸಂಸ್ಕೃತ ನಾಟಕ)
ಅದ್ಭುತದರ್ಪಣ(ಸಂಸ್ಕೃತ ನಾಟಕ)
ಕೃತ್ಯಾರಾವಣ(ಸಂಸ್ಕೃತ ನಾಟಕ)
ಸೇತುಬಂಧ(ಪ್ರಾಕೃತ)
ದಶರಥ ಜಾತಕ(ಪಾಲೀ ಬೌದ್ಧ ರಾಮಕಥೆ)
ವಿಮಲಸೂರಿಯ ಪಉಮಚರಿಯ ಅಥವಾ ಪದ್ಮಚರಿತ ಅಥವಾ ಪದ್ಮಪುರಾಣ(ಪ್ರಾಕೃತ ಜೈನರಾಮಾಯಣ)
ತುಳಸೀದಾಸರ ರಾಮಚರಿತಮಾನಸ(ಅವಧೀ-ಹಳೇಹಿಂದೀ)
ಕುಮಾರವಾಲ್ಮೀಕಿಯ ತೊರವೆ ರಾಮಾಯಣ(ಕನ್ನಡ)
ಬತ್ತಲೇಶ್ವರ ರಾಮಾಯಣ(ಕನ್ನಡ)
ಮುದ್ದಣನ ಅದ್ಭುತರಾಮಾಯಣ(ಕನ್ನಡ)
ಮುದ್ದಣನ ರಾಮಾಶ್ವಮೇಧ ನಾಟಕ(ಕನ್ನಡ)
ಕುವೆಂಪುರವರ ರಾಮಾಯಣದರ್ಶನಂ(ಕನ್ನಡ)
ನಾಗಚಂದ್ರಅಥವಾ ಅಭಿನವ ಪಂಪನ ರಾಮಚಂದ್ರಚರಿತಪುರಾಣ(ಕನ್ನಡ)
ಗಿರಿಧರ ರಾಮಾಯಣ(ಗುಜರಾತೀ)
ಮಾಧವಕಂದಲೀಯ ರಾಮಾಯಣ(ಅಸ್ಸಾಮೀ)
ಸರಳಾದಾಸ್ ರ ವಿಲಂಕರಾಮಾಯಣ(ಒಡಿಸ್ಸೀ)
ರಂಗನಾಥ ರಾಮಾಯಣ(ತೆಲುಗು)
ಭಾವಾರ್ಥ ರಾಮಾಯಣ(ಮರಾಠೀ)
ಕಂಬರಾಮಾಯಣ(ತಮಿಳು)
ಏಳುತಚ್ಚನ್ ನ ಅಧ್ಯಾತ್ಮರಾಮಾಯಣ(ಮಲಯಾಳಂ)
ಕೃತ್ತಿವಾಸ ರಾಮಾಯಣ(ಬಂಗಾಳಿ)
ರಾಮಾವತಾರಚರಿತ್ರ(ಕಾಶ್ಮೀರಿ)
ಗೋವಿಂದರಾಮಾಯಣ(ಪಂಜಾಬಿ)
ರಾಧೇಶ್ಯಾಂ ರಾಮಾಯಣ(ನೇಪಾಳೀ)
ರಾಮಕೀನ್(ಥೈಲ್ಯಾಂಡ್)
ಕಕವಿನ್ ರಾಮಾಯಣ(ಇಂಡೋನೇಷ್ಯಾ)
ಮಹಾರಾಡಿಯಾ ಲವಾನಾ(ಫಿಲಿಪೈನ್ಸ್)
ಫ್ರಾಲಂ ಫ್ರಾಲಕ್(ಲಾವೋಸ್)
ರೀಮ್ ಕೇರ್(ಕಾಂಬೋಡಿಯಾ)
ಹಿಕಾಯತ್ ಸೆರಿ ರಾಮಾಯಣ(ಮಲೇಶಿಯಾ)
ರಾಮ ವತ್ತು,ತಿರಿ ರಾಮ(ಬರ್ಮ)

ಗುರುವಾರ, ಜನವರಿ 15, 2026

ರಾಮಾಯಣದ ಉಪಕಥೆಗಳು

ಇತ್ತೀಚೆಗಷ್ಟೇ ರಾಮಾಯಣದ ಉಪಕಥೆಗಳು ಎಂಬ ನನ್ನ ಹೊಸ ಪುಸ್ತಕ, ಸಪ್ನ ಬುಕ್ ಹೌಸ್ ನಿಂದ ಬಿಡುಗಡೆಯಾಗಿದೆ. ಇದು ಸಪ್ನ ಬುಕ್ ಹೌಸ್ ನ ಎಲ್ಲಾ ಶಾಖೆಗಳಲ್ಲೂ, ಅಂತೆಯೇ ನವಕರ್ನಾಟಕ, ಅಂಕಿತ, ರಾಷ್ಟ್ರೋತ್ಥಾನ ಸಾಹಿತ್ಯ, ಹರಿವು ಬುಕ್ಸ್ ಮೊದಲಾದ ಸುಪ್ರಸಿದ್ಧ ಪುಸ್ತಕ ಮಳಿಗೆಗಳಲ್ಲೂ ದೊರೆಯುತ್ತದೆ. ಈ ಕಥಾಸಂಕಲನದಲ್ಲಿ ವಾಲ್ಮೀಕಿ ರಾಮಾಯಣದಲ್ಲಿ ಬರುವ ಎಲ್ಲಾ ಉಪಕಥೆಗಳನ್ನೂ ಸಂಗ್ರಹಿಸಿ ಸರಳ ಕನ್ನಡದಲ್ಲಿ ನಿರೂಪಿಸಿದ್ದೇನೆ. 
      ನಮ್ಮ ಆರ್ಷ ಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ, ಮುಖ್ಯವಾಗಿ ಶ್ರೀ ರಾಮನ ಕಥೆ ಹಾಗೂ ಕೌರವ, ಪಾಂಡವರ ಕಥೆಗಳನ್ನು ಹೇಳಿದರೂ ಇವುಗಳಲ್ಲಿ ಬಹಳಷ್ಟು ಉಪಕಥೆಗಳು ಬರುತ್ತವೆ. ಉಪಕಥೆ ಅಥವಾ ಉಪಾಖ್ಯಾನ ಎಂದರೆ, ಮುಖ್ಯಕಥೆಯ ಮಧ್ಯೆ ಬರುವ ಇತರ ಕಥೆಗಳು. ಈ ಕಥೆಗಳನ್ನು ಮುಖ್ಯ ಕಥೆಯ ಪಾತ್ರಗಳೇ ಸಂದರ್ಭೋಚಿತವಾಗಿ ಹೇಳುತ್ತವೆ. ರಾಮಾಯಣದಲ್ಲಿ, ವಿಶ್ವಾಮಿತ್ರರು ತಮ್ಮ ಯಜ್ಞ ಸಂರಕ್ಷಣೆಗಾಗಿ ರಾಮ, ಲಕ್ಷ್ಮಣರನ್ನು ಕರೆದೊಯ್ದಾಗ ದಾರಿಯಲ್ಲಿ ತಾಟಕಿ ಎಂಬ ರಾಕ್ಷಸಿ ಸಿಕ್ಕಾಗ ಅವಳ ಪೂರ್ವಕಥೆಯನ್ನು ಹೇಳುತ್ತಾರೆ. ಅನಂತರ, ಅವರು ಸಿದ್ಧಾಶ್ರಮ ಎಂಬ ಆಶ್ರಮದ ಬಳಿ ಬಂದಾಗ, ಆ ಆಶ್ರಮದಲ್ಲೇ ಮಹಾವಿಷ್ಣುವಿನ ವಾಮನಾವತಾರ ನಡೆದಿತ್ತೆಂದು ಹೇಳುತ್ತಾ ಆ ಕಥೆಯನ್ನು ಹೇಳುತ್ತಾರೆ. ಹೀಗೆಯೇ ಗಂಗಾನದಿಯ ಬಳಿ ಬಂದಾಗ, ಗಂಗಾನದಿ ಹೇಗೆ ಸ್ವರ್ಗದಿಂದ ಭೂಮಿಗೆ ಇಳಿದು ಬಂದಳು, ಅದಕ್ಕಾಗಿ ಭಗೀರಥನು ಎಷ್ಟು ಕಷ್ಟಪಟ್ಟ ಎಂಬ ಗಂಗಾವತರಣದ ದೀರ್ಘ ಕಥೆ ಹೇಳುತ್ತಾರೆ.ಈ ಸಂದರ್ಭದಲ್ಲೇ ಗಂಗೆಯ ಹಿರಿಯ ಸಹೋದರಿಯಾದ ಪಾರ್ವತಿಯನ್ನು ಶಿವನಿಗೆ ಕೊಟ್ಟು ಮದುವೆ ಮಾಡಲಾಯಿತು ಎನ್ನುತ್ತಾ ಅವರಿಗೆ ಕಾರ್ತಿಕೇಯನು ಹೇಗೆ ಹುಟ್ಟಿದ ಎಂಬ ಕಥೆ ಹೇಳುತ್ತಾರೆ. ಮುಂದೆ ಅವರು ವಿಶಾಲಾ ಎಂಬ ನಗರಿಗೆ ಬರಲು, ಆ ನಗರಿ ಇದ್ದ ಸ್ಥಳದಲ್ಲಿ ಹಿಂದೆ ಕಶ್ಯಪರ ಪತ್ನಿ ದಿತಿ ತಪಸ್ಸು ಮಾಡಿ ಮರುತ್ತರೆಂಬ ದೇವತೆಗಳನ್ನು ಮಕ್ಕಳಾಗಿ ಪಡೆದುಕೊಂಡ ಕಥೆ, ಅವಳು ಏಕೆ ತಪಸ್ಸು ಮಾಡಿದಳು ಎನ್ನುವುದಕ್ಕೆ ಪೂರ್ವಕಥೆಯಾಗಿ ಸಮುದ್ರಮಥನದ ಕಥೆ, ಇವನ್ನು ವಿಶ್ವಾಮಿತ್ರರು ಹೇಳುತ್ತಾರೆ. ಅನಂತರ ಗೌತಮರ ಆಶ್ರಮಕ್ಕೆ ಬರಲು, ಇಂದ್ರ ಮತ್ತು ಅಹಲ್ಯೆಯ ಕಥೆ ಹೇಳುತ್ತಾರೆ. ಮುಂದೆ ಅವರು ಮಿಥಿಲೆಗೆ ಹೋದಾಗ, ಅಲ್ಲಿ ಜನಕನ ಪುರೋಹಿತರಾಗಿದ್ದ ಗೌತಮರ ಪುತ್ರರಾದ ಶತಾನಂದರು ವಿಶ್ವಾಮಿತ್ರರ ಕಥೆಯನ್ನೇ ರಾಮ, ಲಕ್ಷ್ಮಣರಿಗೆ ಹೇಳುತ್ತಾರೆ. ರಾಜರಾಗಿದ್ದ ವಿಶ್ವಾಮಿತ್ರರು ಹೇಗೆ ಬ್ರಹ್ಮರ್ಷಿಗಳಾದರು ಎನ್ನುವುದು ಒಂದು ಸುದೀರ್ಘ ಹಾಗೂ ರೋಚಕ ಕಥಾನಕ. ಈ ದೊಡ್ಡ ಕಥೆಯ ಮಧ್ಯೆ, ತ್ರಿಶಂಕುವಿನ ಕಥೆ, ಮೇನಕೆಯ ಕಥೆ, ಶುನಶ್ಶೇಫನ ಕಥೆ, ಮೊದಲಾದ ಉಪೋಪಕಥೆಗಳೂ ಬರುತ್ತವೆ. ರಾಮಾಯಣದ ಕಥೆ ಮುಂದುವರೆದಂತೆ, ಜಟಾಯು, ಸಂಪಾತಿಗಳ ಕಥೆ, ವಾಲಿ, ಸುಗ್ರೀವರ ಪೂರ್ವಕಥೆಗಳು ಬರುತ್ತವೆ. ರಾಮಾಯಣದಲ್ಲಿ ಮುಖ್ಯವಾಗಿ ಉಪಕಥೆಗಳು ಇರುವುದು ಬಾಲಕಾಂಡದಲ್ಲಿ. ಅನಂತರ ನಮಗೆ ಉಪಕಥೆಗಳು ಹೆಚ್ಚಾಗಿ ಸಿಗುವುದು ಉತ್ತರಕಾಂಡದಲ್ಲಿ. ಶ್ರೀ ರಾಮನು ಅಯೋಧ್ಯೆಗೆ ಹಿಂದಿರುಗಿ ಸಿಂಹಾಸನಾರೂಢನಾದಾಗ, ಅಗಸ್ತ್ಯಾದಿ ಮುನಿಗಳು ಬಂದು ಮಹಾಪರಾಕ್ರಮಿಯೂ ಲೋಕಕಂಟಕನೂ ಆಗಿದ್ದ ರಾವಣನನ್ನು ಕೊಂದುದಕ್ಕಾಗಿ ಅವನನ್ನು ಅಭಿನಂದಿಸುತ್ತಾರೆ. ಆದರೆ ಅವನು ರಾವಣನನ್ನು ಕೊಂದುದಕ್ಕಿಂತಲೂ ಅವನ ತಮ್ಮ ಲಕ್ಷ್ಮಣನು ರಾವಣನ ಪುತ್ರ ಇಂದ್ರಜಿತುವನ್ನು ಕೊಂದುದು ದೊಡ್ಡ ವಿಷಯ ಎನ್ನಲು ಅಚ್ಚರಿಗೊಂಡ ರಾಮನು ಅದು ಹೇಗೆ ಎನ್ನಲು ಅಗಸ್ತ್ಯರು ಇಂದ್ರಜಿತುವಿನ ಕಥೆಯನ್ನು ಹೇಳುವ ಮೊದಲು ರಾವಣನ ಸಮಗ್ರ ಪೂರ್ವ ಕಥೆಗಳನ್ನು ಹೇಳುತ್ತಾರೆ. ಈ ಭಾಗವಂತೂ ಅತ್ಯಂತ ರೋಚಕವಾಗಿದೆ. ಸಾಮಾನ್ಯವಾಗಿ ಯಾರಾದರೂ ರಾಮಾಯಣದ ಸ್ಥೂಲ ಕಥೆಯನ್ನು ತಿಳಿದಿರುತ್ತಾರಾದರೂ ರಾವಣನ ಮೂಲ ಇತಿಹಾಸ, ಅವನು ಯಾರ ಮಗ, ಅವನೇಕೆ ಅಷ್ಟು ದುಷ್ಟನಾದ, ಅವನಿಗೆ ಬ್ರಹ್ಮನಿಂದ ಬಂದ ವರ, ಅವನ ದಿಗ್ವಿಜಯಗಳು, ಸಾಕ್ಷಾತ್ ಯಮನೊಂದಿಗೇ ಅವನು ಮಾಡಿದ ರೋಚಕ ಯುದ್ಧ, ಅವನ ಸ್ತ್ರೀ ವ್ಯಾಮೋಹ, ಲೋಕಕಂಟಕತೆ, ಅವನಿಗೆ ಬಂದ ಶಾಪಗಳು, ಕೊನೆಗೆ ಅಂಥ ಮಹಾಪರಾಕ್ರಮಿಯಾದ ಅವನಿಗೂ ಆದ ಕೆಲವು ಪರಾಭವಗಳು, ಇವೆಲ್ಲವೂ ಬಹುತೇಕರಿಗೆ ಗೊತ್ತಿರದ ವಿವರಗಳು. ಇಂದಿಗೂ ಎಷ್ಟೋ ಮುಗ್ಧ ಜನರು ರಾವಣನು ಸೀತಾಪಹರಣವನ್ನು ಬಿಟ್ಟರೆ ಬೇರೇನೂ ತಪ್ಪೇ ಮಾಡಿಲ್ಲವೆಂದೂ ಸೀತೆಯನ್ನೂ ಅವನು ಬಲಾತ್ಕರಿಸದೇ ತನ್ನ ತಂಗಿ ಶೂರ್ಪನಖಿಗೆ ರಾಮ, ಲಕ್ಷ್ಮಣರು ಮಾಡಿದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ಸೀತಾಪಹರಣ ಮಾಡಿದನೆಂದೂ ವಾದಿಸುತ್ತಾರೆ. ಆದರೆ ಸ್ವಾರಸ್ಯವೆಂದರೆ, ರಾವಣನು ತನ್ನ ಸ್ವಂತ ತಂಗಿ ಶೂರ್ಪನಖಿಯ ಗಂಡನನ್ನೇ ಕೊಂದ ದುಷ್ಟ ಎನ್ನುವುದು! ಸೀತೆಯನ್ನು ಬಲಾತ್ಕರಿಸದಿದ್ದುದರ ಕಾರಣ, ಅವನಿಗಿದ್ದ ಶಾಪದ ಭಯ! ಈ ಅದ್ಭುತ ವಿಚಾರಗಳು ಇಲ್ಲಿ ಸಿಗುತ್ತವೆ. ಆದರೂ ಕೆಲವರು ಉತ್ತರಕಾಂಡವು ವಾಲ್ಮೀಕಿಕೃತವಲ್ಲ, ಹಾಗಾಗಿ ರಾವಣನ ಕುರಿತಾದ ಈ ಕಥೆಗಳೆಲ್ಲಾ ಸುಳ್ಳು ಎಂದು ವಾದಿಸುತ್ತಾರೆ. ಆದರೆ ರಾವಣನು ಸತ್ತಾಗ ಅವನ ಪಟ್ಟದ ರಾಣಿ ಮಂದೋದರಿಯೇ ರೋದಿಸುತ್ತಾ ಅವನು ಮಾಡಿದ ಪಾಪಕಾರ್ಯಗಳನ್ನೆಲ್ಲ ಹೇಳುತ್ತಾಳೆ. ಅಲ್ಲದೇ ಕೆ.ಎಸ್.ನಾರಾಯಣಾಚಾರ್ಯರೇ ಮೊದಲಾದ ವಿದ್ವಾಂಸರು ಉತ್ತರಕಾಂಡವೂ ವಾಲ್ಮೀಕಿ ಕೃತವೆಂದೇ ತೋರಿಸಿದ್ದಾರೆ. ಇಷ್ಟು ಪರಾಕ್ರಮಿಯಾದರೂ ರಾವಣನು ಇಂದ್ರನಿಗೆ ಸಿಕ್ಕುಬಿದ್ದಾಗ ಅವನ ಮಗ ಮೇಘನಾದನು ಅವನನ್ನು ಬಿಡಿಸಿ ಇಂದ್ರಜಿತ್ ಎಂಬ ಹೆಸರು ಪಡೆಯುತ್ತಾನೆ. ಹೀಗಾಗಿ ಅವನು ರಾವಣನಿಗಿಂತ ಹೆಚ್ಚಿನ ಪರಾಕ್ರಮಿಯಾಗಿರುತ್ತಾನೆ. ಶ್ರೀ ರಾಮನು ರಾವಣ, ಇಂದ್ರಜಿತ್ ಇಬ್ಬರ ಕಥೆಗಳನ್ನೂ ಕೇಳಿ ಇವರಿಬ್ಬರಿಗಿಂತಲೂ ಹನುಮಂತನು ಹೆಚ್ಚಿನ ಪರಾಕ್ರಮಿಯೆಂದು ಅಭಿಪ್ರಾಯ ಪಡುತ್ತಾ ಇಷ್ಟಾದರೂ ವಾಲಿ, ಸುಗ್ರೀವರಿಗೆ ವಿರೋಧವಾದಾಗ ಅವನೇಕೆ ಸುಮ್ಮನಿದ್ದನು ಎಂದು ಕೇಳಲು, ಅಗಸ್ತ್ಯರು ಹನುಮಂತನ ಬಾಲ್ಯದ ಕಥೆಯನ್ನು ಹೇಳಿ ಅವನಿಗೆ ಬಂದ ಶಾಪದ ಬಗ್ಗೆ ಹೇಳುತ್ತಾರೆ. ಅನಂತರ, ದಂಡಕಾರಣ್ಯದ ಕಥೆ, ತನ್ನ ಹೆಣವನ್ನು ತಾನೇ ತಿನ್ನಬೇಕಾದ ಶ್ವೇತನೆಂಬ ರಾಜನ ವಿಚಿತ್ರ ಕಥೆ, ಗೋಸುಂಬೆಯಾಗಿ ಹುಟ್ಟುವ ನೃಗ ಮಹಾರಾಜನ ಕಥೆ, ಪುರುಷನಾಗಿದ್ದು ಸ್ತ್ರೀಯಾಗುವ ಇಲರಾಜನ ಕಥೆ, ವೃದ್ಧಾಪ್ಯದ ಶಾಪ ಪಡೆಯುವ ಯಯಾತಿಯ ಕಥೆ, ಹೀಗೆ ಹಲವಾರು ರೋಚಕ ಕಥೆಗಳು ಬರುತ್ತವೆ. ಕೆಲವು ಕಥೆಗಳನ್ನು ರಾಮ, ಲಕ್ಷ್ಮಣರು ಪರಸ್ಪರ ಹೇಳಿಕೊಳ್ಳುತ್ತಾರೆ. 
      ಕಥೆಗಳ ಬೃಹತ್ ಗಣಿಯಾದ ಮಹಾಭಾರತದಲ್ಲಿ ಬರುವಷ್ಟು ಉಪಕಥೆಗಳು ರಾಮಾಯಣದಲ್ಲಿ ಇಲ್ಲವಾದರೂ ಒಂದು ಒಳ್ಳೆಯ ಕಥಾಸಂಕಲನಕ್ಕೆ ಆಗುವಷ್ಟು ಉಪಕಥೆಗಳು ರಾಮಾಯಣದಲ್ಲಿ ಇವೆ. ಈ ಕಥೆಗಳನ್ನು ಸಂಗ್ರಹಿಸಿ ನಿರೂಪಿಸುವಾಗ, ಅವುಗಳನ್ನು ಯಾರು, ಯಾರಿಗೆ ಯಾವ ಸಂದರ್ಭದಲ್ಲಿ ಹೇಳಿದರು ಎಂಬುದನ್ನು ಸೂಚಿಸಿದ್ದೇನೆ. ಇದರಿಂದ, ರಾಮಾಯಣದ ಒಂದು ಪುಟ್ಟ ಪಯಣವನ್ನು ಮಾಡಿದಂತೆಯೂ ಆಗುತ್ತದೆ. 
      ಕಥೆಗಳು ಅಥವಾ ಪುಸ್ತಕಗಳು ಎಂದರೆ ಈಗ ಕೇವಲ ಸಾಮಾಜಿಕ ಕಥೆ ಕಾದಂಬರಿಗಳಷ್ಟೇ ಎಂಬ ಭಾವನೆ ಬಂದುಬಿಟ್ಟಿದೆ. ಇವು ಶ್ರೇಷ್ಠವೇ, ಇಲ್ಲವೆಂದೇನಿಲ್ಲ. ಆದರೆ ಯುರೋಪಿನ ಮೂಲದಿಂದ ಬಂದ ಈ ಸಾಹಿತ್ಯ ಪ್ರಕಾರ ಹೇಗೆ ಚೆನ್ನಾಗಿರುವುದೋ, ಹಾಗೆಯೇ ಭಾರತೀಯ ಮೂಲದ ಕಥಾಪರಂಪರೆಯನ್ನೂ ನಾವು ಗೌರವಿಸಬೇಕು ಹಾಗೂ ಆಸ್ವಾದಿಸಬೇಕು. ನಮ್ಮ ಕಥಾಪರಂಪರೆ ಬಹಳ ದೊಡ್ಡದು. ವೇದಗಳು, ಉಪನಿಷತ್ತುಗಳು, ರಾಮಾಯಣ, ಮಹಾಭಾರತ, ಹದಿನೆಂಟು ಪುರಾಣಗಳು, ಹದಿನೆಂಟು ಉಪಪುರಾಣಗಳು, ಸ್ಥಳಪುರಾಣಗಳು, ಬೃಹತ್ಕಥೆ ಆಧರಿತ ಕಥಾಸರಿತ್ಸಾಗರ, ಪಂಚತಂತ್ರ, ಹಿತೋಪದೇಶ, ಬೇತಾಳ ಪಂಚವಿಂಶತಿ, ಪುರುಷಪರೀಕ್ಷಾ, ಶುಕಸಪ್ತತಿ, ಬೌದ್ಧ ಜಾತಕ ಕಥೆಗಳು, ಬೌದ್ಧ ಅವದಾನ ಕಥೆಗಳು, ಬೃಹತ್ ಕಥಾಕೋಶ, ವಡ್ಡಾರಾಧನೆ, ಪುಣ್ಯಾಸ್ರವ, ಧರ್ಮಾಮೃತ, ಮೊದಲಾದ ಬಹಳಷ್ಟು ಜೈನ ಕಥಾ ಕೋಶಗಳು, ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ! ಈ ಎಲ್ಲಾ ಗ್ರಂಥಗಳಲ್ಲಿ ವಿಪುಲ ಕಥಾಸಾಮಗ್ರಿ ಇದೆ. ಇವನ್ನೆಲ್ಲಾ ಓದಿದರೆ, ಕಾಂತಾರ, ಬಾಹುಬಲಿಗಳಂಥ ಇನ್ನಷ್ಟು ಮತ್ತಷ್ಟು ಅದ್ಭುತ ಫ್ಯಾಂಟಸಿ ಚಿತ್ರಗಳನ್ನು ನಿರ್ಮಿಸಬಹುದು.
     ಇಂಥ ಕೆಲವು ಕಥಾಸಂಕಲನಗಳನ್ನು ನಾನು ಸಂಸ್ಕೃತದಿಂದ ಕನ್ನಡಕ್ಕೆ ತಂದಿದ್ದೇನೆ. ಇನ್ನೂ ತರುತ್ತಿದ್ದೇನೆ. ಇದೀಗ ರಾಮಾಯಣದ ಉಪಕಥೆಗಳು ಬಂದಿದೆ. ಮಹಾಭಾರತದ ಉಪಕಥೆಗಳು ಸಿದ್ಧವಾಗುತ್ತಿದೆ. ನನ್ನ ಈ ಪುಸ್ತಕಗಳನ್ನು ಖರೀದಿಸಿ ಓದುವುದರ ಮೂಲಕ ನನ್ನನ್ನು ಪ್ರೋತ್ಸಾಹಿಸಿ ಎಂದು ಕೋರುತ್ತೇನೆ.
      ಈ ಪುಸ್ತಕವನ್ನು ಸುವಿಖ್ಯಾತ ಪ್ರಕಾಶನ ಸಂಸ್ಥೆಯಾದ ಸಪ್ನ ಬುಕ್ ಹೌಸ್ ಅತ್ಯಂತ ಸೊಗಸಾಗಿ ಪ್ರಕಟಿಸಿದೆ. ಹಾಗೆಯೇ ಮುಖಪುಟದ ಚಿತ್ರ ಮತ್ತು ಒಳಪುಟಗಳ ಚಿತ್ರಗಳನ್ನು ಕಲಾವಿದರಾದ ಮೋನಪ್ಪ ಅವರು ಬಹಳ ಸೊಗಸಾಗಿ ಚಿತ್ರಿಸಿದ್ದಾರೆ. ಮುದ್ರಕರು ಸೊಗಸಾಗಿ ಮುದ್ರಿಸಿದ್ದಾರೆ. ಇದು ಕಿರಿಯರಿಗೆ, ಹಾಗೂ ಹಿರಿಯರಿಗೆ ಇಬ್ಬರಿಗೂ ಬಹಳ ಇಷ್ಟವಾಗುವುದರಲ್ಲಿ ಸಂದೇಹವೇ ಇಲ್ಲ. ಈ ನನ್ನ ಪ್ರಯತ್ನವನ್ನು ಪ್ರೋತ್ಸಾಹಿಸಿ ಪ್ರಕಟಿಸಿದ ಸಪ್ನ ಬುಕ್ ಹೌಸ್ ನ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ದೊಡ್ಡೆಗೌಡರಿಗೆ, ಪ್ರಧಾನ ಮುಖ್ಯಸ್ಥರಾದ ಶ್ರೀ ನಿತಿನ್ ಷಾ ಅವರಿಗೆ, ಕಲಾವಿದ ಮೋನಪ್ಪ ಅವರಿಗೆ, ದಿವ್ಯ ಪ್ರಿಂಟ್ರಾನಿಕ್ಸ್ ಡಿ ಟಿ ಪಿ ಆಪರೇಟರ್ ರಾಮಕೃಷ್ಣರಿಗೆ, ಇವರೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ.