ಸೋಮವಾರ, ಡಿಸೆಂಬರ್ 29, 2025

ಜಬಲ್ ಪುರದ ಚೌಷಟ್ ಯೋಗಿನೀ ದೇವಾಲಯ

   

ಭಾರತವು ದೇವಾಲಯಗಳ ನಾಡು. ಭಾರತೀಯರ ಧರ್ಮ, ಸಂಸ್ಕೃತಿಗಳ ಅಭಿವ್ಯಕ್ತತೆ ದೇವಾಲಯಗಳ ಮೂಲಕ ಆಗುತ್ತಾ ಬಂದಿದೆ. ಇವುಗಳೊಂದಿಗೆ, ದೇವಾಲಯಗಳ ಮೂಲಕ, ಕಲೆಯೂ ಸೊಗಸಾಗಿ ಬೆಳೆದುಬಂದಿದೆ. ಹಲವಾರು ಪಂಥಗಳು ತಮ್ಮ ವಿಭಿನ್ನ, ವಿಶಿಷ್ಟ, ತತ್ವ, ಸಂಸ್ಕೃತಿಗಳನ್ನು ದೇವಾಲಯಗಳ ಮೂಲಕ ವ್ಯಕ್ತಪಡಿಸಿವೆ. ಶಿವ, ವಿಷ್ಣು, ಗಣೇಶ, ಆಂಜನೇಯ, ದುರ್ಗೆ, ಲಕ್ಷ್ಮಿ, ಮೊದಲಾದ ದೇವಿ,ದೇವಿಯರ ದೇವಾಲಯಗಳಿರುವಂತೆಯೇ ಕೋಟಿ ಚೆನ್ನಯ, ಭೂತರಾಜ, ಅಣ್ಣಪ್ಪ, ಮೊದಲಾದ ಭೂತ ಅಥವಾ ದೈವಸ್ಥಾನಗಳೂ ಇವೆ. ಅಂತೆಯೇ ತಾಂತ್ರಿಕ ಪಂಥದವರ ದೇವಾಲಯಗಳೂ ಹಲವಾರಿವೆ. ಈ ಸಾಲಿಞಲ್ಲೇ ಯೋಗಿನೀ ದೇವಾಲಯಗಳೆಂಬ ವಿಶಿಷ್ಟ ದೇವಾಲಯಗಳೂ ಸೇರುತ್ತವೆ. ಇಂಥ ಒಂದು ಚೌಷಟ್ ಯೋಗಿನೀ ದೇವಾಲಯವನ್ನು ಮಧ್ಯಪ್ರದೇಶದ ಜಬಲ್ ಪುರದ ಪ್ರವಾಸದ ವೇಳೆ ನೋಡುವ ಅವಕಾಶ ನನಗಾಯಿತು.
ಜಬಲ್ ಪುರ್ ನಗರದಿಂದ ಸುಮಾರು ಇಪ್ಪತ್ತೆರಡು ಕಿ.ಮೀ. ದೂರದಲ್ಲಿರುವ ಭೇಡಾಘಾಟ್ ನ ಬಳಿ ಈ ದೇವಾಲಯವಿದೆ. ನರ್ಮದಾ ಮತ್ತು ಬಾಣಗಂಗಾ ನದಿಗಳ ಸಂಗಮಸ್ಥಾನವಾದ ಭೇಡಾಘಾಟ್ ಒಂದು ಅದ್ಭುತ ತಾಣ. ಮೈನವಿರೇಳಿಸುವ ಅಮೃತಶಿಲೆಯ ಬೃಹತ್ ಬಂಡೆಗಳ ಮಧ್ಯೆ ಹರಿಯುವ ನರ್ಮದಾ ನದಿ, ಹಾಗೂ ಇದು ನಿರ್ಮಿಸಿರುವ ಧುವಾಂಧರ್ ಜಲಪಾತ ನೋಡಲು ಅತ್ಯಂತ ರಮಣೀಯ! ಅನೇಕ ಶತಮಾನಗಳ ಕಾಲ, ಭೇಡಾಘಾಟ್ ಗ್ರಾಮ ಒಂದು ತಾಂತ್ರಿಕ ಪೀಠವಾಗಿದ್ದು, ಮೂಲತಃ ಇದರ ಹೆಸರು ಭೈರವ ಘಾಟ್ ಆಗಿತ್ತೆಂದು ಹೇಳುತ್ತಾರೆ. ಕೆಲವರು ಭೇಡಾ ಎಂದರೆ ಸಂಗಮವೆಂದೂ ಹೇಳುತ್ತಾರೆ. ಇಲ್ಲಿ ಶಿವನನ್ನು ಮೆಚ್ಚಿಸಲು ಭೃಗು ಮಹರ್ಷಿಗಳು ಆತ್ಮಾರ್ಪಣೆ ಮಾಡಿಕೊಂಡರೆಂದು ಹೇಳುತ್ತಾರೆ. ಜಬಲ್ ಪುರ್ ಎಂಬ ಹೆಸರು ಬರಲು ಒಂದು ಐತಿಹ್ಯವಿದೆ. ನರ್ಮದಾ ನದಿಯ ದಂಡೆಯ ಮೇಲೆ ತಪಸ್ಸು ಮಾಡಿದ ಜಾಬಾಲಿ ಮಹರ್ಷಿಗಳಿಂದ ಜಾಬಾಲಿಪುರವೆಂಬ ಹೆಸರು ಬಂದು, ಅನಂತರ ಅದು ಜಬಲ್ ಪುರ್ ಆಯಿತಂತೆ. ಹಾಗಾಗಿ ಜಬಲ್ ಪುರ್, ಋಷಿಮುನಿಗಳ ತಪೋಭೂಮಿ.
ಚೌಷಟ್ ಯೋಗಿನೀ ದೇವಾಲಯ, ಒಂದು ಬೆಟ್ಟದ ಮೇಲಿದ್ದು, ಪ್ರಕೃತಿ ಸೌಂದರ್ಯದ ಮಧ್ಯೆ ಮೆಟ್ಟಿಲುಗಳನ್ನು ಹತ್ತುತ್ತಾ ತಲುಪಬೇಕು. 


ಈ ದೇವಾಲಯ ಒಂದು ರೀತಿಯ ಬಯಲು ದೇವಾಲಯವಾಗಿದ್ದು ಗೋಳಾಕೃತಿಯಲ್ಲಿದೆ, ಹಾಗೂ ಎಂಬತ್ತೊಂದು ಪ್ರತ್ಯೇಕ ಪ್ರತ್ಯೇಕ ಕೋಣೆಗಳನ್ನು ಹೊಂದಿದೆ. ಮುಖ್ಯವಾಗಿ ಒಂದು ಗೋಳಾಕೃತಿಯ ಗೋಡೆಯಿದ್ದು, ನಿಯಮಿತ ಅಂತರಗಳಲ್ಲಿ ಕಂಬಗಳನ್ನು ನಿರ್ಮಿಸಿ ಎಂಬತ್ತೊಂದು ಕೋಣೆಗಳನ್ನು ಕಟ್ಟಲಾಗಿದೆ. ಪ್ರತಿ ಕೋಣೆಯಲ್ಲೂ ಅತ್ಯಂತ ಸುಂದರವಾದ, ಕೆಂಪು ಮರಳುಗಲ್ಲಿನಲ್ಲಿ ಕೆತ್ತಿದ ದೇವಿಯರ ಮೂರ್ತಿಗಳಿವೆ. ಸುಂದರವಾದ ಅಂಗಸೌಷ್ಠವದಿಂದ ಕೂಡಿದ್ದು, ಆಭರಣಗಳಿಂದ ಭೂಷಿತವಾಗಿ ಕುಳಿತ ಭಂಗಿಯಲ್ಲಿರುವ ಈ ದೇವಿಯರ ವಿಗ್ರಹಗಳಲ್ಲಿ, ಅರವತ್ತು ನಾಲ್ಕು ಯೋಗಿನಿಯರದ್ದಾದರೆ, ಮಿಕ್ಕವು, ಸಪ್ತಮಾತೃಕೆಯರ ಹಾಗೂ ಇತರ ದೇವತೆಗಳದ್ದಾಗಿವೆ. ಒಂದು ಗಣೇಶನ ಮೂರ್ತಿಯೂ ಇದೆ. ಚೌಷಟ್ ಎಂದರೆ ಅರವತ್ತು ನಾಲ್ಕು ಎಂದು ಅರ್ಥ. ಆದರೆ ಇಲ್ಲಿ ಎಂಬತ್ತೊಂದು ವಿಗ್ರಹಗಳಿವೆ. ವಿಗ್ರಹಗಳ ಸುತ್ತಲಿನ ಅಲಂಕಾರ ಬಹಳ ಶ್ರೀಮಂತವಾಗಿದ್ದು ಅನೇಕ ತಾಂತ್ರಿಕ ಚಿಹ್ನೆಗಳಿಂದ ಕೂಡಿವೆ.‌ ಪೀಠಗಳಲ್ಲಿ ಪ್ರಾಣಿಗಳ ಕೆತ್ತನೆಗಳೂ ಇವೆ. ಕೆಲವು ವಿಗ್ರಹಗಳು ನರ್ತಿಸುವ ಭಂಗಿಯಲ್ಲೂ ಇವೆ. ಆದರೆ ದುರದೃಷ್ಟಕರ ವಿಚಾರವೆಂದರೆ, ಬಹುತೇಕ ವಿಗ್ರಹಗಳು ಮುಸ್ಲಿಂ ದಾಳಿಕೋರರಿಂದ ದಾಳಿಗೊಳಗಾಗಿ ಮುರಿದು ಹಾಳಾಗಿವೆ. ಈ ದೇವಾಲಯವನ್ನು ಹತ್ತನೆಯ ಶತಮಾನದಲ್ಲಿ ಕಳಚೂರಿಗಳ ರಾಜನಾದ ಮೊದಲನೆಯ ಯುವರಾಜದೇವನು ನಿರ್ಮಿಸಿದನೆಂದು ತಿಳಿದುಬಂದಿದೆ.‌ ಹಾಗಾಗಿ ಇದು ಕಳಚೂರಿಗಳ ಕಲೆಯನ್ನು ತೋರಿಸುತ್ತದೆ. ಈ ದೇವಾಲಯ ಗೋಳಾಕೃತಿಯಲ್ಲಿರುವುದರಿಂದ ಇದನ್ನು ಗೋಳಕೀಮಠವೆಂದು ಕರೆಯಲಾಗಿದೆ. ಇದು ಶೈವ ತಾಂತ್ರಿಕ ಪಂಥಕ್ಕೆ ಸೇರಿದ್ದು, ಶ್ರೀಚಕ್ರ ಪೂಜೆ, ಮೊದಲಾದ ತಾಂತ್ರಿಕ ಪೂಜೆಗಳನ್ನು ಇಲ್ಲಿ ಮಾಡಲಾಗುತ್ತಿತ್ತೆಂದು ಹೇಳಲಾಗಿದೆ.


 
ಈ ಚಕ್ರಾಕಾರದ ಮಂದಿರದ ಆವರಣದಲ್ಲಿ ಗೌರೀಶಂಕರ ದೇವಾಲಯವೆಂಬ ಇನ್ನೊಂದು ಕಲಾತ್ಮಕ ದೇವಾಲಯವಿದೆ. ಇದನ್ನು ಅಲ್ಹಣದೇವಿಯೆಂಬ ಕಳಚೂರಿ ರಾಣಿಯು ಕಟ್ಟಿಸಿದ್ದೆಂದೂ ಅನಂತರದ್ದೆಂದೂ ತಿಳಿದುಬಂದಿದೆ. ಈ ದೇವಾಲಯವು ನಾಗರಶೈಲಿಯ ಶಿಖರವನ್ನು ಹೊಂದಿದ್ದು, ಎತ್ತರದ ಪೀಠದ ಮೇಲೆ ಕಟ್ಟಲಾಗಿದೆ. ಗರ್ಭಗುಡಿಯ ಹೊರಗೆ ಬೇರೆ ಬೇರೆ ಗಾತ್ರದ ಶಿವಲಿಂಗಗಳೂ ಒಂದು ಗಂಟೆಯೂ ಇದೆ. ಗರ್ಭಗೃಹದಲ್ಲಿ ತ್ರಿಶೂಲಧಾರಿ ಶಿವ ಮತ್ತು ಕನ್ನಡಿ ಹಿಡಿದಿರುವ ಪಾರ್ವತಿ ನಂದಿಯ ಮೇಲೆ ಕುಳಿತಿರುವ ವಿಗ್ರಹಗಳಿವೆ. ಇವಲ್ಲದೆ, ಗಣೇಶ, ಷಣ್ಮುಖ, ಲಕ್ಷ್ಮೀನಾರಾಯಣರು ತಮ್ಮ ವಾಹನಗಳ ಮೇಲೆ ಕುಳಿತಿರುವ ವಿಗ್ರಹಗಳೂ ಇಲ್ಲಿವೆ. ಈ ದೇವಾಲಯ ನಾಶಗೊಂಡಿಲ್ಲ. ಹಾಗಾಗಿ ಇಲ್ಲಿ ಈಗಲೂ ಪೂಜೆಯಿದೆ. ಆದರೆ ಮುರಿದಿರುವ ಯೋಗಿನೀ ವಿಗ್ರಹಗಳಿಗೆ ಪೂಜೆಯಿಲ್ಲ.

 
ದೇವಾಲಯಗಳಿರುವ ಬೆಟ್ಟದ ಮೇಲೆ ಬೀಸುವ ತಂಗಾಳಿ ಹಾಗೂ ಹಸಿರು ಪ್ರಕೃತಿ ಆಹ್ಲಾದವುಂಟುಮಾಡುತ್ತವೆ. ಅಂತೆಯೇ ಇಲ್ಲಿಂದ, ಅಮೃತಶಿಲೆಯ ಬಂಡೆಗಳ ಮಧ್ಯೆ ಹರಿಯುವ ನರ್ಮದಾ ನದಿಯ ನೋಟ ಮನೋಹರವಾಗಿ ರುತ್ತದೆ! ಇಲ್ಲಿ ಕುಳಿತುಕೊಂಡು ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಕಲ್ಲುಬೆಂಚುಗಳನ್ನೂ ಹಾಕಲಾಗಿದೆ.‌ಸ್ಥಳೀಯರು ಹೇಳುವಂತೆ, ಇಲ್ಲಿ ಒಂದು ಸುರಂಗಮಾರ್ಗವಿದ್ದು, ಅದು ಜಬಲ್ಪುರವನ್ನಾಳುತ್ತಿದ್ದ ಗೊಂಡರ ರಾಣಿ ದುರ್ಗಾವತಿಯ ಅರಮನೆಗೆ ಸೇರಿಕೊಳ್ಳುವುದಂತೆ! ಈಗ ಈ ಇಡೀ ತಾಣ, ಭಾರತೀಯ ಪುರಾತತ್ವ ಇಲಾಖೆಯ ರಕ್ಷಣೆಯಲ್ಲಿದೆ.

 

ಯೋಗಿನಿಯರು ಮತ್ತು ಯೋಗಿನೀ ದೇವಾಲಯಗಳು
ಯೋಗಿನಿಯರು ಒಟ್ಟು ಅರವತ್ತು ನಾಲ್ಕು ಇದ್ದು, ಇವರು ತಂತ್ರಕ್ಕೆ ಸಂಬಂಧಿಸಿದ ಸ್ತ್ರೀ ದೇವತೆಗಳು. ಇವರನ್ನು ಉಪಾಸಿಸುವ ತಂತ್ರ ಸಾಧಕರಿಗೆ ಇವರು ನೆರವಾಗುತ್ತಾರೆ ಎಂದು ಹೇಳಲಾಗುತ್ತದೆ. ಯೋಗಿನಿಯರ ಉಪಾಸನೆ ಮಾಡುವವರದು ಒಂದು ಪಂಥವಾಗಿದ್ದು, ಇದು, ಪ್ರಾಯಶಃ ತಂತ್ರ ಪದ್ಧತಿ ಎಲ್ಲೆಡೆ ಹರಡಿದ್ದಾಗ ನಾಥ ಸಂಪ್ರದಾಯದ ಯೋಗಿ ಮತ್ಸ್ಯೇಂದ್ರನಾಥರಿಂದ ಆರಂಭವಾಗಿರಬಹುದೆಂದು ಹೇಳಲಾಗಿದೆ. ಇದನ್ನು ಯೋಗಿನೀ ಕೌಲಸಂಪ್ರದಾಯವೆಂದು ಕರೆಯಲಾಗಿತ್ತು. ಮತ್ಸ್ಯೇಂದ್ರನಾಥರು ಈಗ ದೇವಾಲಯವಿರುವ ಸ್ಥಳದಲ್ಲಿ ಅರವತ್ತು ನಾಲ್ಕು ಯೋಗಿನಿಯರನ್ನು ಒಮ್ಮೆಲೇ ಆಹ್ವಾನಿಸಿದ್ದರೆಂಬ ಕಥೆಯಿದೆ. ಯೋಗಿನಿಯರ ವಿವರಣೆಗಳಿರುವ ಏಕೈಕ ಸಂಸ್ಕೃತ ಗ್ರಂಥವೆಂದರೆ ಮಹಾಕೌಲಜ್ಞಾನನಿರ್ಣಯ. ಕೆಲವು ಕಥೆಗಳ ಪ್ರಕಾರ, ಈ ಯೋಗಿನಿಯರು ದುರ್ಗಾದೇವಿಯ ವಿಸ್ತರಣೆಗಳು ಹಾಗೂ ಸಹಾಯಕರಾಗಿದ್ದು ರಾಕ್ಷಸರೊಂದಿಗಿನ ಅವಳ ಯುದ್ಧದಲ್ಲಿ ಸಹಾಯ ಮಾಡುತ್ತಾರೆ. ಅವರು ಯೋಗೇಶ್ವರಿಯು ಸೇರಿದಂತೆ ಅಷ್ಟಮಾತೃಕೆಯರ ವಿಸ್ತರಣೆಯರೆಂದೂ ಹೇಳುತ್ತಾರೆ. ಕೆಲವು ಯೋಗಿನಿಯರಿಗೆ ಸ್ತ್ರೀ ದೇಹ ಹಾಗೂ ಪ್ರಾಣಿಯ ಮುಖವೂ ಇರುತ್ತದೆ! ಭಾರತದಲ್ಲಿ ಒಡಿಶಾದ ಹೀರಾಪುರ, ರಾಣೀಪುರ, ಝರಿಯಲ್, ಮಧ್ಯಪ್ರದೇಶದ ಭೇಡಾಘಾಟ್, ಖಜುರಾಹೋ, ದುಧಾಯ್, ಮಿತಾವ್ಲಿ ಶಾಡೋಲ್, ಬಾದೋ, ನರೇಶಾರ್, ಲೋಖಾರಿ, ರಿಖಿಯಾರ್, ದೆಹಲಿಯ ಯೋಗಿನೀಪುರ, ಉತ್ತರ ಪ್ರದೇಶದ ವಾರಾಣಸೀ, ಅಸ್ಸಾಂನ ಗೌಹಾತಿ, ನೇಪಾಳದ ಕಠ್ಮಂಡು, ಮೊದಲಾದ ಹಲವೆಡೆಗಳಲ್ಲಿ ಈ ಯೋಗಿನೀ ದೇವಾಲಯಗಳು ಕಾಣಸಿಗುತ್ತವೆ. ಇವುಗಳಲ್ಲಿ ಕೆಲವು ಸುಸ್ಥಿತಿಯಲ್ಲಿದ್ದರೆ ಕೆಲವು ದುಸ್ಥಿತಿಯಲ್ಲಿವೆ. ಕೆಲವು ದೇವಾಲಯಗಳಲ್ಲಿ ಅರವತ್ತು ನಾಲ್ಕು ಯೋಗಿನಿಯರಿರದೇ, ನಲವತ್ತೆರಡು, ಅರವತ್ತೇಳು, ಅರವತ್ತೈದು, ಹಾಗೂ ಈಗ ನೋಡಿದಂತೆ ಎಂಬತ್ತೊಂದು ಯೋಗಿನಿಯರ ವಿಗ್ರಹಗಳಿವೆ.
ಯೋಗಿನಿಯರ ಹಾಗೂ ಯೋಗಿನೀ ದೇವಾಲಯಗಳ ಬಗ್ಗೆ ತಿಳಿಯಲು ನಿದ್ಯಾ ದೆಹೇಜಾ ಅವರ ' ಯೋಗಿನೀ ಕಲ್ಟ್ ಅಂಡ್ ಟೆಂಪಲ್ಸ್ ಹಾಗೂ ಸ್ಟೆಲ್ಲಾ ಡ್ಯುಪಿಸ್ ಅವರ ' ದಿ ಯೋಗಿನೀ ಟೆಂಪಲ್ಸ್ ಆಫ್ ಇಂಡಿಯಾ ' ಮೊದಲಾದ ಪುಸ್ತಕಗಳು ಸಹಾಯಕಾರಿ.
ಒಟ್ಟಿನಲ್ಲಿ ಜಬಲ್ ಪುರದ ಚೌಷಟ್ ಯೋಗಿನೀ ದೇವಾಲಯದ ಭೇಟಿ, ಯೋಗಿನಿಯರೆಂಬ ವಿಸ್ಮಯಕರ ದೇವತೆಗಳ ಹಾಗೂ ಅವರ ದೇವಾಲಯಗಳ ಬಗ್ಗೆ ಕುತೂಹಲ ಮೂಡಿಸುತ್ತದೆ. ಪ್ರವಾಸ ಮಾಡುವಾಗ ಇಂಥ ಅನೇಕ ವಿಚಾರಗಳು ತಿಳಿದುಬರುತ್ತವೆ.



ಚಿತ್ರಲೇಖನ: ಡಾ.ಬಿ.ಆರ್.ಸುಹಾಸ್
ಬೆಂಗಳೂರು 

ಶನಿವಾರ, ಡಿಸೆಂಬರ್ 13, 2025

ಜೀವಜಗತ್ತಿನ ವಿಸ್ಮಯ - ದ್ವಿವರ್ಣ ಮಲಬಾರ್ ಕಪ್ಪೆ


ಇತ್ತೀಚೆಗೆ ನಮ್ಮ ಸರ್ಕಾರದ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಅಡಿಯಲ್ಲಿ ಬರುವ ದುಬಾರೆ ಆನೆ ಶಿಬಿರಕ್ಕೆ ಹೋಗಿದ್ದಾಗ, ಸಂಜೆ ಭೋಜನ ಗೃಹವಾದ ಗೋಲ್ಘರ್ ನಲ್ಲಿ ಉಪಾಹಾರ ಸೇವಿಸಿ ಹೊರಬಂದಾಗ ಕಾಲಿಗೆ ಏನೋ ತಾಗಿದಂತಾಗಿ ಮುಂದೆ ಜಿಗಿದಂತಾಯಿತು! ಅದೇನೆಂದು ಸ್ವಲ್ಪ ಹುಡುಕಿ ನೋಡಿದಾಗ, ಒಂದು ವಿಭಿನ್ನ ಕಪ್ಪೆ ಕಾಣಿಸಿತು! ಕೂಡಲೇ ಅದರ ಫೋಟೋ ಹಿಡಿದು ಅನಂತರ ಅಲ್ಲಿನ ಪರಿಸರವಾದಿಗೆ ತೋರಿಸಿದಾಗ ಅವರು ಅದು ಬೈಕಲರ್ಡ್ ಮಲಬಾರ್ ಫ್ರಾಗ್, ಅಂದರೆ ದ್ವಿವರ್ಣ ಮಲಬಾರ್ ಕಪ್ಪೆ ಎಂದರು. ಹೆಸರೇ ಹೇಳುವಂತೆ, ಇದು ಎರಡು ಬಣ್ಣಗಳ ಛಾಯೆಗಳುಳ್ಳ ಕಪ್ಪೆ. ದೇಹದ ಮೇಲಿನ ಅಥವಾ ಬೆನ್ನಿನ ಭಾಗ ತಿಳಿ ಬೂದು, ಹಳದಿ, ಅಥವಾ ಕಂದು ಬಣ್ಣವಿದ್ದರೆ, ಕೆಳಭಾಗ, ಕಡು ಕಂದು ಅಥವಾ ಕಪ್ಪು ಬಣ್ಣವಿರುತ್ತದೆ. ಬೆನ್ನಿನ ಮೇಲೆ ಕಪ್ಪು ಚುಕ್ಕೆಗಳಿದ್ದು, ಎಲೆಗಳ ಬಣ್ಣದೊಂದಿಗೆ ಹೊಂದಿಕೊಂಡು ಅದು ಇರುವುದನ್ನು ಮರೆಮಾಚುತ್ತದೆ. ಬದಿಗಳಲ್ಲಿ ಕೆಂಪು ಪಟ್ಟಿಗಳಿದ್ದು , ಅದು ವಿಷಕಾರಿ ಕಪ್ಪೆ ಎಂದು ಬೇಟೆಗಾರ ಪ್ರಾಣಿಗಳಿಗೆ ಎಚ್ಚರಿಸುತ್ತದೆ! ಈ ಎರಡು ಬಣ್ಣಗಳ ಛಾಯೆಗಳು ಒಂದಕ್ಕೊಂದು ಬಹಳ ವ್ಯತಿರಿಕ್ತವಾಗಿರುವುದರಿಂದ ಇದನ್ನು ದ್ವಿವರ್ಣ ಕಪ್ಪೆ ಎನ್ನುತ್ತಾರೆ. ಇದು ಪಶ್ಚಿಮ ಘಟ್ಟಗಳಿಗೆ ಸೀಮಿತವಾದ ಕಪ್ಪೆಯಾಗಿದೆ. ಹೆಣ್ಣು ಕಪ್ಪೆ ಸಾವಿರಾರು ಮೊಟ್ಟೆಗಳನ್ನಿಡುತ್ತದೆ ಹಾಗೂ ಅವುಗಳನ್ನು ಕಾಪಾಡಲು ಗಂಡು ಕಪ್ಪೆ ನೊರೆಯ ಗೂಡನ್ನು ಕಟ್ಟುತ್ತದೆ. ಮರಿಗಳಾದ ಟ್ಯಾಡ್ಪೋಲ್ ಅಥವಾ ಗೊದಮೊಟ್ಟೆಗಳು ದೊಡ್ಡ ಆಕಾರ ಹೊಂದಿದ್ದು, ಆಲಿವ್ ಹಸಿರು ಬಣ್ಣ ಹೊಂದಿರುತ್ತವೆ. ಇವು ದೊಡ್ಡ ಗುಂಪುಗಳಲ್ಲಿ ನಿಧಾನವಾಗಿ ಹರಿಯುವ ನದಿಯಲ್ಲಿ ಚಲಿಸುತ್ತವೆ. ವಿಶೇಷವೆಂದರೆ ಅವು ವಯಸ್ಕ ಹಂತ ತಲುಪಿ ನೀರಿನಿಂದ ಹೊರಬರುತ್ತಿದ್ದಂತೆ ಗುಂಪು ಗುಂಪಾಗಿ ಬೇರೆಡೆಗೆ ವಲಸೆ ಹೋಗುತ್ತವೆ! ಇದು, ದೊಡ್ಡ ಕಪ್ಪೆಗಳು ತಮ್ಮನ್ನು ತಿನ್ನುವುದರಿಂದ ತಪ್ಪಿಸಿಕೊಳ್ಳಲು, ಹಾಗೂ ಹೊಸ ನೆಲದ ಪ್ರದೇಶ ಮತ್ತು ಆಹಾರ ಹುಡುಕಿಕೊಂಡು ಬೆಳೆಯಲು ಮಾಡುವ ಕಾರ್ಯವಾಗಿರುತ್ತದೆ. ಈ ಕಪ್ಪೆಗಳ ಇನ್ನೊಂದು ವೈಶಿಷ್ಟ್ಯವೆಂದರೆ, ಬೇಟೆಗಾರ ಪ್ರಾಣಿಗಳು ಇವನ್ನು ಆಕ್ರಮಿಸಿದರೆ ಇವು ಅವುಗಳಿಂದ ತಪ್ಪಿಸಿಕೊಳ್ಳಲು ಸತ್ತಂತೆ ನಟಿಸುತ್ತವೆ.

ಸೋಮವಾರ, ಡಿಸೆಂಬರ್ 1, 2025

ಜೀವಜಗತ್ತಿನ ವಿಸ್ಮಯ - ನಪುಂಸಕನಾಗುವ ಸಂನ್ಯಾಸಿ ಮಲಬಾರ್ ಜೇಡ

   ಇತ್ತೀಚೆಗೆ ನಮ್ಮ ಸರ್ಕಾರದ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಅಡಿಯಲ್ಲಿ ಬರುವ ದುಬಾರೆ ಆನೆ ಶಿಬಿರಕ್ಕೆ ಹೋಗಿದ್ದೆ. ಅಲ್ಲಿ ಆನೆಗಳಿಗೆ ಸ್ನಾನ ಮಾಡಿಸುವುದು, ಅವುಗಳಿಗೆ ಆಹಾರ ಉಣಿಸುವುದು, ಅವುಗಳನ್ನು ಮುಟ್ಟಿ ಅವುಗಳ ದೊಡ್ಡ ದಂತಗಳನ್ನು ಹಿಡಿದುಕೊಳ್ಳುವುದು, ಮೊದಲಾದ ಗಜಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದಲ್ಲದೇ ಸುತ್ತಲಿನ ಕಾಡಿನಲ್ಲಿ ಸಫಾರಿ ಹೋಗುವುದು, ಹಾಗೂ ನಮ್ಮ ವಸತಿಯಲ್ಲಿನ ಉಪವನದಲ್ಲಿನ ಪ್ರಾಕೃತಿಕ ಸೌಂದರ್ಯ ಮತ್ತು ವಿಸ್ಮಯಗಳನ್ನು ಆನಂದಿಸುವುದೂ ಶಿಬಿರದ ಚಟುವಟಿಕೆಗಳಾಗಿರುತ್ತವೆ. ವಿಶೇಷವಾಗಿ ಬೆಳಗಿನ ನಡಿಗೆಯ ಸಮಯದಲ್ಲಿ ಪ್ರಕೃತಿಯ ಅನೇಕ ವೈಶಿಷ್ಟ್ಯಗಳನ್ನು ನೋಡುತ್ತಿದ್ದಂತೆ ಅಲ್ಲಿನ ಸಿಬ್ಬಂದಿ ಹಾಗೂ ಪರಿಸರವಾದಿ ಅವುಗಳ ಪರಿಚಯ, ವಿವರಣೆ ಕೊಡುತ್ತಿದ್ದರು. ಅನಂತರ, ಭೋಜನಗೃಹವಾದ ಗೋಲ್ಘರ್ ನಲ್ಲಿ ಬೆಳಗಿನ ಉಪಾಹಾರ ಮುಗಿಸಿ ಹೊರಬರುತ್ತಿದ್ದಂತೆ, ಹೊರಗೆ ಬಲೆ ಹೆಣೆದಿದ್ದ ಒಂದು ದೊಡ್ಡ ಜೇಡ ನನ್ನನ್ನು ಆಕರ್ಷಿಸಿತು! ಅದು ಯಾವ ಜೇಡವೆಂದು ಸಿಬ್ಬಂದಿಯನ್ನು ಕೇಳಿದಾಗ ಅವರು ಅದು ಮಲಬಾರ್ ಜೇಡ ಎಂದು ಹೇಳುತ್ತಾ ಅದು ಹೆಣ್ಣು ಜೇಡವೆಂದೂ ಸ್ವಲ್ಪ ದೂರದಲ್ಲೇ ಇದ್ದ ಗಂಡು ಜೇಡವನ್ನೂ ತೋರಿಸಿದರು. ನನ್ನ ಕ್ಯಾಮೆರಾ ಜೂಮ್ ಮಾಡಿ ಬಹಳ ಕಷ್ಟದಿಂದ ಫೋಕಸ್ ಮಾಡಿ ಎರಡನ್ನೂ ಫೋಟೋಗಳಲ್ಲಿ ಸೆರೆಹಿಡಿದೆ. ಫೋಟೋಗಳಲ್ಲಿ ಅವುಗಳ ದೈಹಿಕ ವಿವರಗಳನ್ನು ನೋಡಿದಾಗ ಆಶ್ಚರ್ಯ, ಸಂತೋಷಗಳಾದವು!
        ಮಲಬಾರ್ ಜೇಡದ ವೈಜ್ಞಾನಿಕ ಹೆಸರು ನೆಫಿಲೆಂಗಿಸ್ ಮಲಬಾರೆನ್ಸಿಸ್ ( Nephilengys malabarensis). ನೆಫಿಲಿಡೇ ಕುಟುಂಬಕ್ಕೆ ಸೇರಿರುವ, ನೆಫಿಲೆಂಗಿಸ್ ಕುಲದ ಒಂದು ಪ್ರಭೇದವಿದು. ದಕ್ಷಿಣ ಭಾರತದ ಮಲಬಾರ್ ಕರಾವಳಿ ತೀರದಲ್ಲಿ ಮೊದಲ ಬಾರಿ ಇದನ್ನು ಪತ್ತೆ ಮಾಡಿದ್ದರಿಂದ ಇದಕ್ಕೆ ಮಲಬಾರೆನ್ಸಿಸ್ ಎಂದು ಹೆಸರಿಸಲಾಯಿತು. ಹಾಗಾಗಿ ಇದನ್ನು ಮಲಬಾರ್ ಜೇಡ ಎಂದು ಕರೆಯುತ್ತಾರೆ. ಇದೊಂದು ದೊಡ್ಡ ಆರ್ಬ್ ವೀವರ್ ಜೇಡ, ಅಂದರೆ ಚಕ್ರಾಕಾರದ ದೊಡ್ಡ ಬಲೆ ಹೆಣೆಯುವ ಜೇಡವಾಗಿದೆ. ಎಲ್ಲಾ ಜೇಡಗಳಂತೆ ಇವುಗಳಲ್ಲೂ ಹೆಣ್ಣು ಗಂಡಿಗಿಂತ ಬಹಳ ದೊಡ್ಡದಾಗಿರುತ್ತದೆ. ಹೆಣ್ಣು ಜೇಡ, ಸುಮಾರು 10.4 ರಿಂದ 18.6 ಮಿ.ಮೀ. ಗಳಷ್ಟು ಉದ್ದವಿದ್ದರೆ ಗಂಡು ಜೇಡ ಕೇವಲ 5 ರಿಂದ 5.9 ಮಿ.ಮೀ. ಗಳಷ್ಟು ಉದ್ದವಿರುತ್ತದೆ. ಹೆಣ್ಣಿನ ದೇಹದ ಮೇಲ್ಭಾಗ ಅಥವಾ ಸೆಫಲೋಥೊರಾಕ್ಸ್ ( ತಲೆ ಮತ್ತು ಎದೆಯ ಸಂಯುಕ್ತ ಭಾಗ) ಕಡು ಕೆಂಪು, ಕಂದು ಬಣ್ಣಗಳಿಂದ ಕೂಡಿದ್ದರೆ ಇದರ ತಳಭಾಗ ಅಥವಾ ಸ್ಟೆರ್ನಂ, ಕಿತ್ತಳೆ ಬಣ್ಣದಿಂದ ಕೂಡಿರುತ್ತದೆ. ಹೊಟ್ಟೆಯ ಭಾಗ ಬಿಳಿಯಾಗಿದ್ದು ಕಂದು ಚುಕ್ಕೆಗಳಿಂದ ಕೂಡಿದ್ದು, ಇದರ ತಳಭಾಗ, ಕಂದು ಬಣ್ಣವಿದ್ದು ದೊಡ್ಡ ಕಿತ್ತಳೆ ಮಚ್ಚೆಗಳಿರುತ್ಚವೆ. ಹೊಟ್ಟೆಯ ಬಣ್ಣ, ಬೂದು,ಕಪ್ಪು, ಮೊದಲಾದ ಛಾಯೆಗಳಿಂದಲೂ ಕೂಡಿರುತ್ತದೆ. ಇದರ ಕಾಲುಗಳು ಹಳದಿ ಮತ್ತು ಕಪ್ಪು ಪಟ್ಟಿಗಳಿಂದ ಕೂಡಿರುತ್ತದೆ. ಗಂಡು ಜೇಡದ ಮೇಲ್ಭಾಗ ಕಿತ್ತಳೆ ಬಣ್ಣದಿಂದಲೂ ಹೊಟ್ಟೆಯ ಭಾಗ ಕಂದು ಬಣ್ಣದಿಂದಲೂ ಕೂಡಿದ್ದು, ಇದರ ಮೇಲೆ ತಿಳಿ ಮಚ್ಚೆಗಳೂ ತಳದಲ್ಲಿ ಹಳದಿ ಮಚ್ಚೆಗಳೂ ಇರುತ್ತವೆ.ಕಾಲುಗಳು ಬೂದು, ಮತ್ತು ಕಪ್ಪು ಪಟ್ಟಿಗಳಿಂದ ಕೂಡಿರುತ್ತದೆ. ಆಗಲೇ ಹೇಳಿದಂತೆ ಗಂಡು ಹೆಣ್ಣಿಗಿಂತ ಬಹಳ ಚಿಕ್ಕದಾಗಿರುತ್ತದೆ. 
       ಮಲಬಾರ್ ಜೇಡವು ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ, ಹಾಗೂ ಪೂರ್ವ ಏಷ್ಯಾಗಳಲ್ಲಿ ಕಂಡುಬರುವುದಾಗಿದ್ದು, ನಮ್ಮ ದೇಶದಲ್ಲಿ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡುಗಳಲ್ಲಿ ಕಂಡುಬರುತ್ತದೆ. ಮುಖ್ಯವಾಗಿ ಇದು ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಕಂಡುಬರುತ್ತದೆ. ಆದರೆ ಇದು ಮಳೆಕಾಡುಗಳಲ್ಲಿ ಕಡಿಮೆಯಿದ್ದು, ಮಾನವ ವಸತಿಗಳ ಬಳಿ ಹೆಚ್ಚಾಗಿ ಕಂಡುಬರುತ್ತದೆ.
       ಈ ಮಲಬಾರ್ ಜೇಡಗಳು ಮುಖ್ಯವಾಗಿ ಪತಂಗ , ನೊಣ, ಜೀರುಂಡೆ, ಮೊದಲಾದ ಕೀಟಗಳನ್ನೂ ಅವುಗಳ ಮರಿಗಳನ್ನೂ ತಿನ್ನುತ್ತವೆ. ಕೆಲವೊಮ್ಮೆ ಹಲ್ಲಿಯಂಥ ದೊಡ್ಡ ಪ್ರಾಣಿಗಳನ್ನೂ ತಿನ್ನುತ್ತವೆ. ವಿಚಿತ್ರವೆಂದರೆ ಕೆಲವೊಮ್ಮೆ ಈ ಜೇಡಗಳು ಮರಿಗಳಾಗಿರುವಾಗ ತಮಗಿಂತ ಸಣ್ಣ ಒಡಹುಟ್ಟಿದವರನ್ನೇ ತಿಂದುಬಿಡುತ್ತವೆ! ಎಲ್ಲಾ ಜೇಡಗಳಂತೆ ಇವು ಬೇಟೆಗೆ ವಿಷವನ್ನು ಚುಚ್ಚಿ ಲಕ್ವವಾಗುವಂತೆ ಮಾಡಿ, ಅನಂತರ ಜೀರ್ಣಗೊಳಿಸುವ ರಸಗಳನ್ನು ಸುರಿದು ಬೇಟೆಯ ಒಳಭಾಗಗಳನ್ನು ಒಂದು ರಸವನ್ನಾಗಿಸಿ ಅದನ್ನು ಹೀರುತ್ತವೆ. ಏಕೆಂದರೆ ಜೇಡಗಳಿಗೆ ಅಗಿಯಲಾಗುವುದಿಲ್ಲ.
    ಒಂದು ಸ್ವಾರಸ್ಯವೆಂದರೆ, ಈ ಮಲಬಾರ್ ಜೇಡವು ನಿಶಾಚರಿಯಾಗಿದ್ದು, ಹಗಲಿನಲ್ಲಿ ತನ್ನ ಬಲೆಯಲ್ಲೇ ನಾಳದ ಆಕಾರದ ಒಂದು ಭಾಗ ಮಾಡಿ ಅದರಲ್ಲಿ ಅಡಗಿಕೊಳ್ಳುತ್ತದೆ. ಇದರಿಂದ ಅದು ಬೇಟೆಗಾರ ಪ್ರಾಣಿಗಳಿಂದ ತಪ್ಪಿಸಿಕೊಳ್ಳುತ್ತದೆ. ಹೀಗೆ ಮಾಡುವುದರಿಂದ ಇದನ್ನು ಏಷ್ಯಾದ ಸಂನ್ಯಾಸಿ ಜೇಡ ( Asian hermit spider) ಎಂದು ಕರೆಯುತ್ತಾರೆ. ಗಂಡು ಜೇಡ ಬಲೆ ಹೆಣೆಯದೇ ಹೆಣ್ಣಿನ ಬಲೆಯಲ್ಲೇ ವಾಸ ಮಾಡುತ್ತದೆ. ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ಗಂಡುಗಳು ಒಂದು ಹೆಣ್ಣಿನ ಬಲೆಯಲ್ಲಿರಬಹುದು. 
     ಎಲ್ಲಾ ಜೇಡಗಳಲ್ಲಿರುವಂತೆ, ಸಂತಾನೋತ್ಪತ್ತಿಯ ಕಾಲದಲ್ಲಿ ಗಂಡು, ಹೆಣ್ಣುಗಳ ಸಂಭೋಗದ ಸಮಯದಲ್ಲಿ ಅಥವಾ ಸಂಭೋಗದ ನಂತರ, ಮಲಬಾರ್ ಜೇಡಗಳಲ್ಲೂ ಹೆಣ್ಣು ಜೇಡ ಗಂಡನ್ನು ಭಕ್ಷಿಸಿಬಿಡುತ್ತದೆ! ಇದು ತನಗೆ ಬೇಕಾದ ಪುಷ್ಟಿ ಮತ್ತು ಶಕ್ತಿಗಾಗಿ ಹೀಗೆ ಮಾಡುತ್ತದೆ. ಹೆಣ್ಣಿನ ಈ ಕ್ರೂರ ವರ್ತನೆಯಿಂದ ತಪ್ಪಿಸಿಕೊಳ್ಳಲು ಗಂಡು ಒಂದು ಉಪಾಯ ಮಾಡುತ್ತದೆ. ಗಂಡು ಜೇಡಗಳಲ್ಲಿ ಬಾಯ ಬಳಿಯಿರುವ ಪಾಲ್ಪ್ ಗಳೆಂಬ ಕಾಲಿನ ಆಕೃತಿಗಳ ತುದಿಗಳಲ್ಲಿ ಪಾಲ್ಟಲ್ ಬಲ್ಬ್ ( Palpal bulbs ) ಗಳೆಂಬ ದುಂಡಾದ ಆಕೃತಿಗಳಿರುತ್ತವೆ. ಇವೇ ಗಂಡಿನ ಜನನಾಂಗಗಳು. ಹೆಣ್ಣಿನ ಹೊಟ್ಟೆಯ ತಳಭಾಗದಲ್ಲಿರುವ ಎಪಿಗೈನಂ ಎಂಬ ಗಟ್ಟಿಯಾದ ಅಂಗವೇ ಅದರ ಹೊರ ಜನನಾಂಗ. ಈಗ ಗಂಡು ಮಾಡುವ ಉಪಾಯವೇನೆಂದರೆ, ಅದು ಹೆಣ್ಣಿನೊಂದಿಗೆ ಸಂಭೋಗಿಸುವಾಗ, ತನ್ನ ಬಾಯಿಯ ಬಳಿಯಿರುವ ಆ ಪಾಲ್ಪಲ್ ಬಲ್ಬ್ ( Palpal bulbs) ಗಳೆಂಬ ಜನನಾಂಗಗಳನ್ನು ಕತ್ತರಿಸಿಕೊಂಡು ಹೆಣ್ಣಿನ ಹೊರ ಜನನಾಂಗದ ದ್ವಾರದಲ್ಲೇ ಬಿಟ್ಟು ತಪ್ಪಿಸಿಕೊಳ್ಳುತ್ತದೆ! ಸ್ವಾರಸ್ಯವೆಂದರೆ, ಹಾಗೆ ಕತ್ತರಿಸಿದ ಬಳಿಕವೂ ಗಂಡಿನ ಆ ಜನನಾಂಗಗಳು ಹೆಣ್ಣಿನ ಜನನಾಂಗದಲ್ಲಿ ವೀರ್ಯಾಣುಗಳನ್ನು ನೀಡುತ್ತಿರುತ್ತದೆ! ಆ ವೀರ್ಯಾಣುಗಳನ್ನು ಹೆಣ್ಣು ತನ್ನ ಒಳಗಿನ ಜನನಾಂಗ ಭಾಗಗಳಾದ ಸ್ಪರ್ಮಥೀಕಾಗಳಲ್ಲಿ ಸಂಗ್ರಹಿಸಿಕೊಳ್ಳುತ್ತದೆ! ಇನ್ನೊಂದು ಸ್ವಾರಸ್ಯವೆಂದರೆ, ಗಂಡಿನ ಜನನಾಂಗಗಳಾದ ಆ ಪಾಲ್ಪಲ್ ಬಲ್ಬ್ ಗಳು ಹೆಣ್ಣಿನ ಜನನಾಂಗದ ದ್ವಾರದಲ್ಲಿ ತಡೆಯುವ ಗೂಟಗಳಂತಾಗಿ ಇತರ ಗಂಡು ಜೇಡಗಳು ಸಂಭೋಗಿಸುವುದನ್ನು ತಪ್ಪಿಸುತ್ತದೆ! ಹೀಗೆ ಮಾಡುವುದರಿಂದ ತನ್ನದೇ ವಂಶವಾಹಿಗಳು ಉಳಿಯಬೇಕೆಂಬ ಪ್ರಾಕೃತಿಕ ಸ್ವಾರ್ಥವನ್ನು ನಡೆಸುತ್ತದೆ! 
     ಹೀಗೆ ಗಂಡು ಮಲಬಾರ್ ಜೇಡ ತನ್ನ ಜನನಾಂಗಗಳನ್ನು ತ್ಯಾಗ ಮಾಡುವ ವಿಶಿಷ್ಟ ವರ್ತನೆ ತೋರುವುದರಿಂದ ಇದನ್ನು ನಪುಂಸಕ ಜೇಡ ( Eunuch spider) ಎಂದು ಕರೆಯುತ್ತಾರೆ. ಇನ್ನೊಂದು ಸ್ವಾರಸ್ಯವೆಂದರೆ, ಈ ರೀತಿ ಜನನಾಂಗಗಳನ್ನು ತ್ಯಜಿಸಿದ ಬಳಿಕ, ಗಂಡು ಜೇಡಗಳು ತೂಕ ಕಳೆದುಕೊಂಡು, ಹೆಚ್ಚು ವೇಗಶಾಲಿಗಳೂ ಆಕ್ರಮಣಶಾಲಿಗಳೂ ಆಗುತ್ತವೆ. ಆಗ ಅವು ಇತರ ಗಂಡು ಜೇಡಗಳೊಂದಿಗೆ ಸಮರ್ಥವಾಗಿ ಯುದ್ಧ ಮಾಡಿ ತನ್ನದೇ ಆದ ಪಿತೃತ್ವವನ್ನು ಸ್ಥಾಪಿಸಿಕೊಳ್ಳುತ್ತದೆ! 
      ಹೀಗೆ ಮಲಬಾರ್ ಜೇಡ, ವಿಸ್ಮಯಗಳ ಆಗರವಾಗಿದೆ! ನಾವು ಪ್ರಕೃತಿಯಲ್ಲಿ ನೋಡುವ ಸಣ್ಣ ಸಣ್ಣ ವಿಷಯಗಳಲ್ಲೂ ಅದೆಷ್ಟು ಕೌತುಕಗಳು ತುಂಬಿರುತ್ತವೆಯೆಂದು ತಿಳಿದಾಗ ಆಶ್ಚರ್ಯವಾಗುತ್ತದೆ!