ಗುರುವಾರ, ಮೇ 29, 2025

ಬ್ರಾಕೆಟ್ ಫಂಗಸ್

ಈ ಚಿತ್ರದಲ್ಲಿ ಮರದ ಕಾಂಡಕ್ಕೆ ಎರಡೂ ಕಡೆ ಅಂಟಿಕೊಂಡು ತಟ್ಟೆಗಳಂತೆ ಹೊರಚಾಚಿಕೊಂಡರುವ ಆಕೃತಿಗಳಿವೆಯಲ್ಲವೇ? ಇವುಗಳನ್ನು ಬ್ರಾಕೆಟ್ ಫಂಗಸ್ ಅಥವಾ ಶೆಲ್ಫ್ ಫಂಗಸ್ ಗಳೆನ್ನುತ್ತಾರೆ.ಸಾಮಾನ್ಯವಾಗಿ ಇವು ಕಾಡುಗಳಲ್ಲಿ ಅಥವಾ ದಟ್ಟ ಪ್ರಕೃತಿಯಿರುವ ಉದ್ಯಾನವನಗಳಲ್ಲಿ ಕಾಣಸಿಗುತ್ತವೆ.ನನಗೆ ಇವು ಕಂಡುಬಂದದ್ದು ನಮ್ಮ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಭಾಗವೇ ಆಗಿರುವ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಅವರ ಭದ್ರಾ ಅಭಯಾರಣ್ಯದ ರಿವರ್ ಟರ್ನ್ ಲಾಡ್ಜ್ ನಲ್ಲಿ. ಇವನ್ನು ವೈಜ್ಞಾನಿಕವಾಗಿ ಪಾಲಿಪೋರ್ ಗಳೆಂದು ಕರೆಯುತ್ತಾರೆ.ಇವು ಬೆಸಿಡಿಯೋಮೈಸೀಟ್ ಗಳೆಂಬ ಶಿಲೀಂಧ್ರ ಅಥವಾ ಅಣಬೆ ಜಾತಿಯ ಜೀವಿಗಳು.ಇವು ಕಾಂಕ್ ಗಳೆಂಬ ದೊಡ್ಡ ಫಲವತ್ತಾದ ಆಕೃತಿಗಳನ್ನು ರೂಪಿಸುತ್ತವೆ ಹಾಗೂ ಅವುಗಳ ತಳಭಾಗದಲ್ಲಿ ರಂಧ್ರಗಳು ಅಥವಾ ಕೊಳವೆಗಳಿರುತ್ತವೆ.ಕೆಲವು ವರ್ಷಕ್ಕೊಮ್ಮೆ ಹಾಗೂ ಕೆಲವು ವರ್ಷಪೂರ್ತಿ ಈ ಆಕೃತಿಗಳನ್ನು ರೂಪಿಸುತ್ತವೆ.ಈ ಆಕೃತಿಗಳು ಮರದಂತೆ ಗಟ್ಟಿಯಾಗಿ, ಬ್ರಾಕೆಟ್ ಅಥವಾ ಆವರಣದಂತೆ, ಇಲ್ಲವೇ ಶೆಲ್ಫ್ ಅಥವಾ ತಟ್ಟೆಯಂತೆ ಇಲ್ಲವೇ ದುಂಡಾದ ಆಕಾರ ಹೊಂದಿರುತ್ತವೆ.ಹಾಗಾಗಿಯೇ ಇವುಗಳಿಗೆ ಬ್ರಾಕೆಟ್ ಅಥವಾ ಶೆಲ್ಫ್ ಫಂಗಸ್ ಎಂಬ ಹೆಸರುಗಳು ಬಂದಿವೆ. ತಳಭಾಗದಲ್ಲಿರುವ ರಂಧ್ರಗಳಲ್ಲಿ ಬೆಸಿಡಿಯೋಸ್ಪೋರ್ ಗಳೆಂಬ ಬೀಜಗಳು ಉತ್ಪತ್ತಿಯಾಗುತ್ತವೆ.ಇವು ತೇವಾಂಶ ಹೆಚ್ಚಾಗಿರುವಾಗ ಬಿಡುಗಡೆಗೊಂಡು ಸೂಕ್ತ ಸ್ಥಳಗಳಲ್ಲಿ ಬಿದ್ದಾಗ ಹೊಸ ಫಂಗಸ್ ಗಳಾಗಿ ಮೊಳೆಯುತ್ತವೆ.ಫಂಗಸ್ ಗಳಾಗುತ್ತವೆ. ಈ ಬ್ರಾಕೆಟ್ ಫಂಗಸ್ ಬದುಕಿರುವ ಹಾಗೂ ಸತ್ತಿರುವ, ಎರಡೂ ಮರಗಳ ಕಾಂಡಗಳ ಮೇಲೆ ಬೆಳೆಯುತ್ತವೆ.ಇವು ಆ ಕಾಂಡಗಳ ಮೂಲಕ ಆ ಮರಗಳ ಪೋಷಕಾಂಶಗಳನ್ನು ತೆಗೆದುಕೊಂಡು ಅವು ಕೊಳೆಯುವಂತೆ ಮಾಡುತ್ತವೆ.ಸತ್ತಿರುವ ಮರಗಳು ಕೊಳೆಯುವುದರಿಂದ ಕೆಲವು ಪೋಷಕಾಂಶಗಳು ಪ್ರಕೃತಿಗೆ ಬಿಡುಗಡೆಯಾಗಿ ಅವುಗಳ ಪುನರಾವರ್ತನೆಯನ್ನು ನೋಡಿಕೊಳ್ಳುತ್ತವೆ.ಆದರೆ ಬದುಕಿರುವ ಮರಗಳು ಕೊಳೆಯುವುದರಿಂದ ಮರಗಳಿಗೆ ಹಾನಿಯಾಗುತ್ತದೆ.ಕೆಲವು ಬ್ರಾಕೆಟ್ ಫಂಗಸ್ ಗಳು ಮಣ್ಣಿನಲ್ಲಿ ಬೆಳೆದು, ತಮ್ಮ ಮೈಕೋರೈಜಾ ಎಂಬ ಬೇರುಗಳನ್ನು ಮರಗಳ ಬೇರುಗಳೊಂದಿಗೆ ಬೆಸೆಯುತ್ತವೆ.ಆಗ ಇವು ಮರಗಳಿಗೆ ನೀರು ಮತ್ತು ಖನಿಜಗಳನ್ನು ನೀಡಿ, ಅವುಗಳಿಂದ ಸಿದ್ಧವಾದ ಆಹಾರವನ್ನು ತೆಗೆದುಕೊಳ್ಳುತ್ತವೆ.ಹೀಗೆ ಕೂಡಿ ಬಾಳುತ್ತವೆ.ಇದುವರೆಗೂ ವಿಜ್ಞಾನಿಗಳಿಗೆ ಸುಮಾರು ಒಂದು ಸಾವಿರ ಪ್ರಭೇದಗಳ ಬ್ರಾಕೆಟ್ ಫಂಗಸ್ ಗಳು ಇರುವುದು ತಿಳಿದುಬಂದಿದೆ.ಆದರೆ ಇನ್ನೂ ಹಲವಾರು ಪ್ರಭೇದಗಳು ಇರಬಹುದೆಂದು ಹೇಳುತ್ತಾರೆ. ಈ ಬ್ರಾಕೆಟ್ ಫಂಗಸ್ ಗಳನ್ನು ಸಾಂಪ್ರದಾಯಿಕ ಚಿಕಿತ್ಸೆಗಳಲ್ಲಿ ಬಳಸಲಾಗುತ್ತದೆ.ಹಾಗಾಗಿ ಇವುಗಳ ಔಷಧೀಯ ಗುಣಗಳ ಬಗ್ಗೆ ಅಧ್ಯಯನ ನಡೆಯುತ್ತಿದೆ.
        ಕಾಡುಗಳಿಗೆ ಹೋದಾಗ ಈ ಬ್ರಾಕೆಟ್ ಫಂಗಸ್ ಗಳನ್ನು ನೋಡುವುದು ವಿಸ್ಮಯ ತರುತ್ತದೆ! 

ಮಂಗಳವಾರ, ಏಪ್ರಿಲ್ 8, 2025

ಚಿತ್ರದುರ್ಗದ ಪ್ರಕೃತಿರತ್ನ ಜೋಗಿಮಟ್ಟಿ

ಚಿತ್ರದುರ್ಗವೆಂದರೆ ಬಿಸಿಲು,ಕೋಟಿ,ಬಂಡೆಗಲ್ಲುಗಳಷ್ಟೇ ಎಂದು ಅನೇಕರು ಭಾವಿಸಿರುತ್ತಾರೆ.ಆದರೆ ಇಲ್ಲಿ ತಂಪಾದ ಒಂದು ಪುಟ್ಟ ಕಾಡಿದೆ ಎಂದು ಇನ್ನೂ ಎಷ್ಟೋ ಜನಕ್ಕೆ ಗೊತ್ತಿಲ್ಲ.ಅದುವೇ ಜೋಗಿಮಟ್ಟಿ! ಜೋಗಿ ಶ್ರೀ ಸಿದ್ಧೇಶ್ವರ ಸ್ವಾಮಿಗಳು ಇಲ್ಲಿ ತಪಸ್ಸು ಮಾಡಿದ್ದರಿಂದ ಈ ಅರಣ್ಯಕ್ಕೆ ಜೋಗಿಮಟ್ಟಿ ಎಂಬ ಹೆಸರು ಬಂದಿದೆ.ಬಿಸಿಲಿನ ಝಳದಿಂದ ಆಯಾಸವಾಗಿದ್ದರೆ ಈ ಕಾಡಿಗೆ ಹೋದ ಕೂಡಲೇ ತಂಪಾಗಿ ಊಲ್ಲಾಸ ತುಂಬಿಕೊಂಡು ಆಯಾಸ ಪರಿಹಾರವಾಗುತ್ತದೆ! ಏಕೆಂದರೆ ಇದೊಂದು ಗಿರಿಧಾಮವೂ ಹೌದು! 
     ಜೋಗಿಮಟ್ಟಿ ಅಭಯಾರಣ್ಯವು ಸುಮಾರು 100.48 ಚದರ ಕಿ.ಮೀ.ವಿಸ್ತಾರದ ಅರಣ್ಪ್ರ ಪ್ರದೇಶವನ್ನು ಹೊಂದಿದ್ದು, ಮುಖ್ಯವಾಗಿ ಹುಲ್ಲುಗಾವಲು, ಒಣ ಎಲೆಯುದುರುವ ಮತ್ತು ಕುರುಚಲು ಪೊದೆ ಕಾಡುಗಳನ್ನು ಹೊಂದಿದೆ.ಇದು ಚಿತ್ರದುರ್ಗದ ಅತ್ಯಂತ ಎತ್ತರದ ಸ್ಥಳವಾಗಿದ್ದು, 3803 ಅಡಿಗಳಷ್ಟು ಎತ್ತರವಿದೆ.ಇದು ಚಿತ್ರದುರ್ಗದ ಅತ್ಯಂತ ತಂಪಾದ ತಾಣವಾಗಿದೆ.ಇದು ಚಿತ್ರದುರ್ಗ, ಹೊಳಲ್ಕೆರೆ, ಹಾಗೂ ಹಿರಿಯೂರುಗಳನ್ನು ಆವರಿಸಿಕೋಳ್ಳುತ್ತದೆ.ಬೆಟ್ಟಗುಡ್ಡಗಳಿಂದ ಕೂಡಿರುವ ಈ ಕಾಡಿನಲ್ಲಿ ಅನೇಕ ಗಿಡಮರಗಳಿದ್ದು, ಚಿರತೆ, ಗುಳ್ಳೆನರಿ, ತೋಳ, ಕರಡಿ, ಮುಳ್ಳುಹಂದಿ, ಮೊದಲಾದ ಪ್ರಾಣಿಗಳೂ ನವಿಲೂ ಸೇರಿದಂತೆ ಅನೇಕ ಬಗೆಯ ಪಕ್ಷಿಗಳೂ ಇವೆ.ಒಂದು ಕಾಲದಲ್ಲಿ ಇಲ್ಲಿ ಹುಲಿಗಳೂ ಸಂಚರಿಸುತ್ತಿದ್ದವು ಎಂದು ಹೇಳುತ್ತಾರೆ.
        ಚಿತ್ರದುರ್ಗ ನಗರದ ದಕ್ಷಿಣಕ್ಕೆ ಕೇವಲ ಹತ್ತು ಕಿ.ಮೀ. ದೂರದಲ್ಲಿರುವ ಈ ಸುಂದರ ಕಾಡನ್ನು ಒಣಪ್ರದೇಶದ ಊಟಿ ಎಂದೂ ಕರೆಯುತ್ತಾರೆ! ಪ್ರವಾಸಿಗರಿಗೆ ಬೆಳಿಗ್ಗೆ 6:30 ಗೆ ಈ ಗಿರಿಧಾಮದ ದ್ವಾರವನ್ನು ತೆರೆದು ಮಧ್ಯಾಹ್ನ ಹನ್ನೆರಡು ಗಂಟೆಗೆ ಮುಚ್ಚಲಾಗುತ್ತದೆ. ಸ್ವಂತ ವಾಹನದಲ್ಲಿ ಹೋಗುವುದು ಒಳ್ಳೆಯದು.ಚೆಕ್ ಪೋಸ್ಟ್ ನಲ್ಲಿ ಅನುಮತಿ ಪಡೆದು ಕಾಡಿನಲ್ಲಿ ಪಯಣಿಸುತ್ತಾ ಸ್ವಲ್ಪ ಮುಂದೆ ಹೋದರೆ ನೂರೈವತ್ತೈದು ಮೆಟ್ಟಿಲುಗಳಿರುವ ಒಂದು ಬೆಟ್ಟ ಸಿಗುತ್ತದೆ.ಈ ಮೆಟ್ಟಿಲುಗಳನ್ನು ಹತ್ತಿ ಮೇಲೆ ಹೋದರೆ ಇಲ್ಲಿ ತಪಸ್ಸು ಮಾಡಿದ ಜೋಗಿ ಶ್ರೀ ಸಿದ್ಧೇಶ್ವರ ಸ್ವಾಮಿಗಳ ಗದ್ದುಗೆಯ ಮಂದಿರ ಸಿಗುತ್ತದೆ.ಮಂದಿರದ ಹೊರಗೆ ಅವರ ಪಾದಗಳ ಆಕೃತಿಯದೆ ಹಾಗೂ ಒಳಗೆ ಅವರ ವಿಗ್ರಹವಿದೆ.ಈ ಮಂದಿರದ ಎದುರಿಗೆ ಒಂದು ವೀಕ್ಷಣಾಗೋಪುರವಿದ್ದು, ಅದನ್ನೇರಿ ಮೇಲೆ ಹೋದರೆ ಮೈ ನವಿರೇಳಿಸುವ ಪ್ರಕೃತಿ ಸೌಂದರ್ಯದ ದೃಶ್ಯಾವಳಿ ಕಾಣುತ್ತದೆ! ಬೆಳಿಗ್ಗೆ ಬೇಗನೆ ಹೋದರೆ ಇಲ್ಲಿ ಮಂಜು ಕವಿದಿದ್ದು ಬಹಳ ತಂಪಾಗಿರುತ್ತದೆ! ಈ ಪ್ರಕೃತಿ ಸೌಂದರ್ಯವನ್ನು ನೋಡುತ್ತಿದ್ದರೆ ಆಹ್ಲಾದವಾಗುತ್ತದೆ! ಬೆಟ್ಟದ ಮೆಟ್ಟಿಲುಗಳನ್ನು ಹತ್ತಿ ಇಳಿಯುವಾಗ ಅಕ್ಕಪಕ್ಕಗಳಲ್ಲಿ ಒಳ್ಳೆಯ ಸುಭಾಷಿತ ವಾಕ್ಯಗಳ ಫಲಕಗಳನ್ನು ಹಾಕಿರುವುದನ್ನು ನೋಡಬಹುದು! ಚಿರತೆ,ಕರಡಿ, ಮುಂತಾದ ಪ್ರಾಣಿಗಳಿದ್ದರೂ ಅವು ಸುಲಭವಾಗಿ ಕಾಣಸಿಗುವುದಿಲ್ಲ.ನನ್ನ ಅದೃಷ್ಟಕ್ಕೆ ಕಾರಿನಲ್ಲಿ ಹೋಗುತ್ತಿದ್ದಾಗ ದಾರಿಯಲ್ಲಿ ಒಂದು ನವಿಲು ನಡೆದು ಹೋಗುತ್ತಿರುವುದು ಕಾಣಿಸಿತು! ಅಂತೆಯೇ ರೆಡ್ ವೆಂಟೆಡ್ ಬುಲ್ ಬುಲ್ ಪಕ್ಷಿ, ಬಗೆ ಬಗೆಯ ಬಣ್ಹದ ಚಿಟ್ಟೆಗಳು, ಹಾಗೂ ಕಿತ್ತಳೆ ಚಿಪ್ಪಿನ ಬಸವನಹುಳು ನೋಡಲು ಸಿಕ್ಕಿದವು! 
      ಬೆಟ್ಟವನ್ನು ಇಳಿದು ಸ್ವಲ್ಪ ಮುಂದೆ ಹೋದರೆ, ಅಲ್ಲಿ ನೂರು ವರ್ಷಗಳಷ್ಟು ಹಳೆಯದಾದ ಒಂದು ಬ್ರಿಟಿಷ್ ಕಾಲದ ಪರಿವೀಕ್ಷಣಾ ಮಂದಿರವಿದೆ ಇಲ್ಲಿನ ವಾತಾವರಣ ಬಹಳ ಸುಂದರವಾಗಿ, ತಂಪಾಗಿದೆ.ಇಲ್ಲಿ ಸುಂದರ ಹೂಗಳ ಗಿಡಮರಗಳಿದ್ದು, ಅವುಗಳ ಮೇಲೆ ಅವುಗಳ ಹೆಸರುಗಳ ಫಲಕಗಳನ್ನು ಹಾಕಿದ್ದಾರೆ. ಇದರಿಂದ ನಮ್ಮ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳಬಹುದು.
      ಜೋಗಿಮಟ್ಟಿಯಲ್ಲಿ ಹಿಮವತ್ಕೇದಾರ ಎಂಬ ಸುಂದರ ಜಲಪಾತವೂ ಇದ್ದು, ಅದು ಬಂಡೆಯಲ್ಲಿ ಒಂದು ಗುಹೆಯನ್ನು ಕೊರೆದಿದೆ.ಈ ಗುಹೆಯಲ್ಲಿ ಶಿವಲಿಂಗವೇ ಮೊದಲಾದ ವಿಗ್ರಹಗಳಿವೆ.
       ಜೋಗಿಮಟ್ಟಿ ಅರಣ್ಯಪ್ರದೇಶದಲ್ಲೇ ಆಡುಮಲ್ಲೇಶ್ವರ ಮೃಗಾಲಯವೆಂಬ ಒಂದು ಪುಟ್ಟ ಮೃಗಾಲಯವಿದೆ.ಇಲ್ಲಿ ಮೃಗಾಲಯಕ್ಕೆ ಹೋಗುವ ದಾರಿಯನ್ನು ಸೂಚಿಸಲಾಗಿದೆ.ಗಿಢಮರಗಳ ಸುಂದರ ಉದ್ಯಾನವನದೊಂದಿಗೆ ಕೂಡಿರುವ ಈ ಮೃಗಾಲಯದಲ್ಲಿ ನವಿಲು, ಗುಳ್ಳೆನರಿ, ಸಿಲ್ವರ್ ಫೆಸೆಂಟ್ ಮೊದಲಾದ ಆಕರ್ಷಕ ಪಕ್ಷಿಗಳು, ಹೆಬ್ಬಾವು, ಮೊಸಳೆ, ಕರಡಿ,ಚಿರತೆ, ಹುಲಿ, ಚುಕ್ಕಿ ಜಿಂಕೆ,ಕೃಷ್ಣಮೃಗ,ನೀಲಗಾಯ್, ಮೊದಲಾದ ಪ್ರಾಣಿಗಳಿವೆ.ಇಲ್ಲಿ ಗಾಜಿನ ಮನೆಯಲ್ಲಿರಿಸಲಾಗಿರುವ ಹುಲಿ ತನ್ನ ಗಂಭೀರ ನಡಿಗೆಯಿಂದ ನಮ್ಮ ಹತ್ತಿರಕ್ಕೇ ಬರುತ್ತಾ ಆಕರ್ಷಿಸುತ್ತದೆ! 
       ಹೀಗೆ ಜೋಗಿಮಟ್ಟಿ, ಚಿತ್ರದುರ್ಗದ ಒಂದು ಸುಂದರ ಗಿರಿಧಾಮ ಹಾಗೂ ಅಭಯಾರಣ್ಯವಾಗಿದ್ದು, ಪ್ರಕೃತಿಯ ಒಂದು ಪುಟ್ಟ ರತ್ನದಂತೆ ಹೆಚ್ಚು ಜನರಿಗೆ ತಿಳಿದಿಲ್ಲದ ತಾಣವಾಗಿದೆ.ಚಿತ್ರದುರ್ಗಕ್ಕೆ ಬಂದಾಗ ಇದು ನೋಡಲೇ ಬೇಕಾದ ತಾಣವಾಗಿದೆ.